Friday, October 10, 2008

ವಾಸ್ತು ಮತ್ತು ಅವಾಸ್ತವ?

ಹತ್ತು ವರ್ಷಗಳ ಹಿಂದೆ ಬಹಳ ಚೆನ್ನಾಗಿತ್ತು.
ಮನೆ ಕಟ್ಟುವಾಗ
ಜಾಗವನ್ನು ವೇಸ್ಟ್ ಮಾಡದೆ ಒಳ್ಳೆಯ ಪ್ಲಾನ್ ಮಾಡಬಹುದಿತ್ತು.

ವಾಸ್ತು ಎನ್ನುವ ಭೂತ ಬಂದು ಎಲ್ಲಾ ಅಡಪೊಟ್ರು ಆಯಿತು.....

ವಾಸ್ತು ಸರಿನಾ?.... ತಪ್ಪಾ? ...

ಗೊತ್ತಿಲ್ಲದ ವಿಷಯದ ಬಗ್ಗೆ ಅನಗತ್ಯ ಮಾತು ಬೇಡ.
ಅದರ ಬಗೆಗೆ ಇನ್ನೂ ಆಳವಾದ ಅಭ್ಯಾಸ, ಸಂಶೊಧನೆ ನಡೆಯಬೇಕಿದೆ.

ಆಗ ಕೆಂಗೇರಿಯಲ್ಲಿ ಒಂದು ಮನೆ ಕಟ್ಟುತಿದ್ದೆ.
ಮಾಲಿಕರು ಬಹಳ ಸಭ್ಯರು.
ಮನೆ ವಾಸ್ತು ಪ್ರಕಾರವಾಗಿರ ಬೇಕೆಂದು ಹೇಳಿದ್ದರು.
ಆಗ ತಾನೆ ವಾಸ್ತು ಎಂಬ ಭ್ರಮೆ ಬೆಂಗಳೂರನ್ನು ಹೊಕ್ಕಿತ್ತು.
ನಾನು ಪುಸ್ತಕದ ಅಂಗಡಿಗಳಿಗೆ ಹೋಗಿ ವಾಸ್ತು ಪುಸ್ತಕಗಳನ್ನು ತಂದು ಅಭ್ಯಾಸ ಮಾಡಿ ಪ್ಲಾನ್ ತಯಾರಿಸಿದೆ.

ಒಬ್ಬರು ಬರೆದ ಪುಸ್ತಕಕ್ಕೂ ಮತ್ತೊಬ್ಬರು ಬರೆದುದಕ್ಕೂ ಬಹಳ ವ್ಯತ್ಯಾಸ....!!
ಎಲ್ಲಾ ಉಲ್ಟಾ ಪಲ್ಟಾ....!!

ಆಗ ನನ್ನ ಬಿಸಿನೆಸ್ ಪಾಲುದಾರ ಸತ್ಯ ಹೇಳಿದ....
"ಪ್ರಕಾಶು.... ತಿರುಪತಿ ರೆಡ್ಡಿ ಅಂತ ಬರೆದ ಪುಸ್ತಕ ಬಹಳ ಪ್ರಸಿದ್ದ ವಾಗಿದೆ...
ಅದನ್ನು ಓದಿ ಪ್ಲ್ಯಾನು ಮಾಡು"

ನಾನು ಸತ್ಯನ ಮಾತಿಗೆ ಮತ್ತೆ ಎದುರು ಮಾತಾಡುವದಿಲ್ಲ...
ಅವನು ಮಾತಾಡುವದು ಬಹಳ ಕಡಿಮೆ...

ಆಡಿದ ಮಾತುಗಳು ತೂಕದ ಮಾತುಗಳು....

ನಾನು ಹಾಗೆ ಮಾಡಿದೆ....
ಅವರಿಗೂ ಪುಸ್ತಕಗಳನ್ನು ಕೊಟ್ಟಿದ್ದೆ.
ಅದೆ ರೀತಿ ಮನೆ ಕೂಡ ತಯಾರಾಯಿತು.
ಮಾಲೀಕರು ತುಂಬಾ ಖುಷಿಯಲ್ಲಿದ್ದರು...

ಮನೆಕಟ್ಟಿಸುವವರ ಖುಷಿಗಾಗಿ ನಾವು ಕಾತುರದಿಂದ ಕಾಯುತ್ತೇವೆ....

ಗ್ರಹಪ್ರವೇಶದ ದಿನ ಬಂದ ನೆಂಟರು ಸುಮ್ಮನೆ ಇರಬೇಕೆ?

ಖರೇ ಹೇಳಬೇಕೆಂದರೆ ನೆಂಟರೆಂದರೆ ನನಗೆ ಹೆದರಿಕೆ.

ಅವರಿಗೆ ಮನೆ ನೋಡಿ....
ಹೊಟ್ಟೆಕಿಚ್ಚೋ, ಸಂತೋಷಾನೊ ಗೊತ್ತಾಗಲಿಲ್ಲ. !!
ಅಥವಾ ತಮ್ಮ ಮನೆ ತರಹ ಆಗಲಿಲ್ಲವಲ್ಲಾ ಅನ್ನುವ ಬೇಜಾರೋ...!

ಗೊತ್ತಾಗುವದಿಲ್ಲ....

ನನ್ನಕಡೆ ಒಂಥರಾ ನೋಡಿ... ನನ್ನನ್ನು ನೋಡುತ್ತಾ ಗುಂಪು ಕಟ್ಟಿ ಮಾತಾಡುತ್ತಿದ್ದರು....

ಹೊಗುವಾಗ ಮಾಲಿಕರನ್ನು ಕರೆದರು...

ನಾನು ಪಕ್ಕದಲ್ಲೇ ಇದ್ದೆ....

"
ಮನೆ ಚೆನ್ನಗಿದೆ ಕಣಯ್ಯಾ...
ಆದರೆ ..
ದೇವರ ಮನೆಮೇಲೆ ಅಟ್ಟ ಯಾರದ್ರೂ ಮಾಡಸ್ತಾರೇನಯ್ಯ?
ಬಂಗಾರದಂಥಹ ಮನೆಕತ್ತಿಸಿ ದೇವರ ತಲೆ ಮೇಲೆ ಭಾರ ಇಟ್ಟು ಬಿಟ್ಟಿದ್ದೇಯಲ್ಲ.....!!
ನಿನಗಂತೂ ಬುದ್ಧಿ ಇಲ್ಲ. .... ಮುಗ್ಧ.....!!
ಇಂಜನೀಯರಗೂ ತಲೆ ಇಲ್ವೆ...?
ದೇವರ ಮೇಲೆ ಭಾರ ಇಡಬಾರದು. ಮೊದ್ಲು ಅಟ್ಟ .... ತೆಗೆಸು...."

ಎಂದು ಅಪ್ಪಣೆ ಕೊಡಿಸಿದ್ರು.
ನನ್ನ ಕಡೆ ನೋಡದೆ ಗಂಭೀರ ವದನರಾಗಿ ಜಾಗ ಖಾಲಿ ಮಾಡಿದರು.....

ಗ್ರಹಪ್ರವೇಷದ ಮರು ದಿವಸವೇ ಅಟ್ಟ ಒಡೆಸಲಾಯಿತು.

ಅದೆ ಸಮಯದಲ್ಲಿ ಗಿರಿನಗರದ ಭುವನಗಿರಿ ಅನಂತಶರ್ಮರ ಮನೆಯನ್ನೂ ಕಟ್ಟುತ್ತಿದ್ದೆ.

ಅವರು ಸಂಸ್ಕ್ರತ ಪಂಡಿತರು, ಬಹಳ ಓದಿದವರು,
ವೇದಾಧ್ಯಯನ ಮಾಡಿದವರು.
ಅವರ ಮನೆ ದೇವರ ಮನೆ ಕಟ್ಟುವಾಗ ಅಟ್ಟ ಬೇಕೆ? ಬೇಡವೆ?
ಸಂಶಯ ಅವರ ಬಳಿಯೇ ಕೇಳಿದೆ........


ಹಾಗೆ ಕೆಂಗೆರಿ ಅನುಭವನೂ ಹೇಳಿದೆ.

ಅವರು .. ಹೆಚ್ಚಿಗೆ ತಲೆ ಕೆಡಿಸಿ ಕೊಲ್ಲಲಿಲ್ಲ....

"
ನೋಡು ತಮ್ಮಾ..
ನಾವು ಏನೂ ತಲೆಗೆ ತಗೋ ಬಾರದು,
ಎಲ್ಲ ಭಾರಾನೂ ದೇವರ ಮೇಲೇ ಹಾಕಬೇಕು.
ನೀನು ದೇವರನ್ನು ಪ್ರಾರ್ತಿಸೋದು ಯಾಕೆ...?
ನೀನು ದೇವರ ಮನೆ ಮೇಲೆ ಅಟ್ಟ ಹಾಕು..
ಭಾರ ಎಲ್ಲ ದೇವರ ಮೇಲೇ ಹಾಕಬೇಕು!!!
ಅವನೇ ಹೊರ ಬೇಕು...!!"


ಅಂದರು.

ನನಗು ಹೌದೆನಿಸಿತು........!!


7 comments:

ಹಿತ್ತಲಮನೆ said...

ಸಂಸ್ಕೃತ ಪಂಡಿತರ ಪ್ರಬುಧ್ಧತೆ ಇಷ್ಟವಾಯಿತು... ಅವರ ಜೊತೆ ಮಾತನಾಡದಿದ್ದರೂ ಹತ್ತಿರದಿಂದ ಒಂದೆರಡು ಬಾರಿ ನೋಡಿದ್ದೇನೆ...ಇಷ್ಟವಾಗುವ ವ್ಯಕ್ತಿತ್ವ...

Blog is coming out very well...may be because you are writing the actual incidents happened...

ಪಲ್ಲವಿ ಎಸ್‌. said...

ಪ್ರಕಾಶ ಹೆಗಡೆ ಅವರೇ,

ನಿಮ್ಮ ಬ್ಲಾಗ್‌ನ ಹೆಸರು ಕುತೂಹಲಕಾರಿಯಾಗಿದೆ. ನಿಮ್ಮ ಪ್ರೊಫೈಲ್‌ ನೋಡಿದಾಗ, ಅದು ಸರಿಯಾಗಿಯೇ ಇದೆ ಅನಿಸಿತು.

ಒಂದು ಸಣ್ಣ ಸೂಚನೆ: ನಿಮ್ಮ ಬ್ಲಾಗ್‌ನಲ್ಲಿ ಬರುವ ಹೆಸರು ಇಟ್ಟಗೆ ಅಂತಿದೆ. ಅದು ಇಟ್ಟಿಗೆ ಆಗಬೇಕಲ್ಲವೆ?

ವಾಸ್ತು ಮಹಿಮೆ ಓದಿ ನನಗೂ ನಗು ಬಂತು. ನಮ್ಮ ಕಡೆ ಒಂದು ಗಾದೆ ಮಾತಿದೆ: ’ನೀರು ಹೆಚ್ಚಾದರೆ ಮಡಿ ಹೆಚ್ಚು, ಊಟ ಹೆಚ್ಚಾದರೆ ಚೆಲ್ಲಾಟ ಹೆಚ್ಚು’ ಅಂತ. ವಾಸ್ತು ಕೂಡ ಹಾಗೇ. ಇಲ್ಲದವರು ಹೇಗೋ ಮನೆ ಅಂತ ಒಂದು ಕಟ್ಟಿಕೊಂಡು ನೆಮ್ಮದಿಯಿಂದ ಇರುತ್ತಾರೆ. ಒಂಚೂರು ಅನುಕೂಲ ಜಾಸ್ತಿಯಾದರೆ ಮುಗೀತು, ವಾಸ್ತು ಗೀಸ್ತು ಅಂತ ಶುರುವಾಗುತ್ತದೆ. ಅಲ್ಲವೆ?

- ಪಲ್ಲವಿ ಎಸ್‌.

Santhosh Rao said...

ಒಡೆದು ಹಾಕಿದ ಅಟ್ಟ ಮತ್ತೆ ಕಟ್ಟಿಸಿದರೂ ಇಲ್ವೋ ಅಂತ ಗೊತ್ತಾಗ್ಲಿಲ್ಲ

ಚಂದ್ರಕಾಂತ ಎಸ್ said...

ಲೇಖನ ಚಿಕ್ಕದಾಗಿ ಚೊಕ್ಕವಾಗಿದೆ. ದೇವರ ತಲೆ ಮೇಲೆ ಅಟ್ಟ ಎಂಬ ಪ್ರಯೋಗ ನೋಡಿಯೇ ನಗು ಬಂತು!!

Ittigecement said...

ಹಿತ್ತಲ ಮನೆಯವರೆ, ನಾನು ಅವರಿಗೆ ಬಹಳ ಗೌರವ ಕೊಡುತ್ತೇನೆ, ಸಾತ್ವಿಕರು.

ಪಲ್ಲವಿಯವರೆ.. ನೀವು ಹೇಳಿದ ಹಾಗೆ ಅದು ಇಟ್ಟಿಗೆ ಆಗಬೇಕಿತ್ತು. ಮುಂದೆ ಅದನ್ನು ಸರಿಪಡಿಸುವೆ. ವಾಸ್ತು ಬಗ್ಗೆ ಅಧ್ಯಯನ ಆಗಬೇಕಿದೆ. ಅದು ಮಾನಸಿಕ ತೊಂದರೆ ಅಗಿದ್ದೆ ಹೆಚ್ಚು.

ಸಂತೊಷ್... ಅದನ್ನು ಒಡೆದ ಮೇಲೆ ಮತ್ತೆ ಕಟ್ಟಲಿಲ್ಲ.

ಚಂದ್ರಕಾಂತರವರೆ.. ಭುವನಗಿರಿ ಅನಂತ ಶರ್ಮರವರು ತುಂಬಿದ ಕೊಡ. ಧಾರ್ಮಿಕ ಅನುಮಾನಗಳನ್ನು ಸುಲಭವಾಗಿ ಪರಿಹರಿಸುತ್ತಾರೆ

ಪ್ರತಿಕ್ರಿಯೆ ನೀಡಿದ, ಎಸ್. ಎಮ್ ಎಸ್. ಮೂಲಕ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು...

ಚಂದ್ರಕಾಂತ ಎಸ್ said...

ಭುವನಗಿರಿ ಅನಂತಶರ್ಮ ಅವರ ಬಗ್ಗೆ ನನಗೂ ತುಂಬಾ ಗೌರವವಿದೆ. ನಿಮ್ಮ ಬರವಣಿಗೆಯಲ್ಲಿ ಮೂಡಿದ ತಿಳಿಹಾಸ್ಯ ನೋಡಿ ನಗು ಬಂದಿತಷ್ಟೆ.

Radhika Nadahalli said...

ಒಳ್ಳೆಯ ವಿಷಯದ ಬಗ್ಗೆ, ಬಹಳ ಚೆನ್ನಾಗಿ ಬರೆದಿದ್ದೀರಿ...