Friday, December 18, 2009
ಕಲ್ಲು.... ಬೆಂಚು...
ನನ್ನನ್ನು ನೋಡಿದವರೆಲ್ಲ ನನ್ನ ಕಣ್ಣುಗಳು ತುಂಬಾ ಚೆನ್ನಾಗಿವೆ ಅನ್ನುತ್ತಾರೆ....
ಅದನ್ನು ಕೇಳಲು ನನಗೂ ಇಷ್ಟ..
ನಾನು ಭಾವ ಜೀವಿ..
ಯಾವಾಗಲೂ ಕಲ್ಪನಾಲೋಕದಲ್ಲೇ ಇರುತ್ತೇನೆ.
ಸಣ್ಣ ಸಣ್ಣ ವಿಷಯಗಳಿಗೆ ಸಂಭ್ರಮಿಸುತ್ತೇನೆ.. ಖುಷಿಪಡುತ್ತೇನೆ..
ಹಾಗೆಯೇ ಕೋಪ ಕೂಡ ಬಲುಬೇಗ ಬರುತ್ತದೆ...
ತೀರಾ ಸಣ್ಣದೆನಿಸುವ ವಿಷಯಗಳಿಗೆ ಬೇಸರ ಪಟ್ಟುಕೊಂಡು ಕಣ್ಣೀರು ಹಾಕುತ್ತೇನೆ..
ಬಹಳ ಭಾವುಕ ವ್ಯಕ್ತಿ ನಾನು..
ಆದರೆ...
ನನ್ನ ಗಂಡ ಹಾಗಲ್ಲ.
ಬಹಳ ಪ್ರ್ಯಾಕ್ಟಿಕಲ್ ಮನುಷ್ಯ. ಬಹಳ ದೊಡ್ಡ ಬಿಸಿನೆಸ್ ಮನುಷ್ಯ.
ಬಹಳ ಹಣ ಗಳಿಸಿದ್ದಾನೆ. ಮನೆಯಲ್ಲಿ ನಾಲ್ಕಾರು ಕಾರುಗಳಿವೆ..
ಇನ್ನೇನು..?
ಎಲ್ಲವೂ ಚೆನ್ನಾಗಿದೆಯಲ್ಲ..! ಎಲ್ಲವೂ ಸ್ವರ್ಗ ಅಂತೀರಾ..?
ಹಾಗಲ್ಲ.
ನನ್ನ ಗಂಡ ನನ್ನ ಬಳಿ ಮಾತನಾಡಿದ್ದೇ ಇಲ್ಲ.
ಯಾವಾಗಲೂ ಅವರಾಯಿತು.., ಅವರ ವ್ಯವಹಾರವಾಯಿತು..
ನನ್ನ ಬಳಿ ನಕ್ಕು ನಾಲ್ಕು ಮಾತಾಡಿದ್ದಂತೂ ಇಲ್ಲವೇ ಇಲ್ಲ.!
ನಮ್ಮ ಮದುವೆಗಾಗಿ ಅವರು ನನ್ನನ್ನು ನೋಡಲು ಬರಲೇ ಇಲ್ಲ.
ಹಿರಿಯರೆಲ್ಲ ಸೇರಿ ನಿರ್ಧಾರ ಮಾಡಿದ್ದು.
ಆ ದಿನಗಳಲ್ಲಿ ನನಗೆ ಬಹಳ ಕನಸಿತ್ತು..
ನನ್ನವ ನೋಡಲು ಚೆನ್ನಾಗಿರ ಬೇಕು. ಸುಂದರನಿರಬೇಕು.
ಸರಸದ ಮಾತುಗಳನ್ನಾಡ ಬೇಕು.
ಹಾಡಲಾಗದಿದ್ದರೂ...
ಒಳ್ಳೋಳ್ಳೆ ಹಾಡುಗಳನ್ನು ಕೇಳುವವನಾಗಿರ ಬೇಕು.
ನಿಜಕ್ಕೂ ನನ್ನ ಗಂಡ ಸ್ಪುರದ್ರೂಪಿ...!
ಬೆಟ್ಟದಷ್ಟು ಆಸೆ, ಕನಸುಗಳನ್ನು ಹೊತ್ತು ಮದುವೆ ಮಂಟಪಕ್ಕೆ ಬಂದೆ...
ಬಹಳ ಸಂಭ್ರಮದಿಂದ , ಚಂದವಾಗಿ ತಯಾರಾಗಿ ಬಂದಿದ್ದೆ...
ನನಗೆ ಗೊತ್ತು ನಾನು ಚಂದವಾಗಿದ್ದೆನೆಂದು..
ನಾನು ಎಲ್ಲಿ ಹೋದರೂ ಮೆಚ್ಚುವ ನೋಟಗಳು ನನಗೆ ಸಿಗುತ್ತವೆ.
ಆದರೆ ನನ್ನವ ನನ್ನ ಬಳಿ ಮಾತನಾಡಲೇ ಇಲ್ಲ...
ನನ್ನನ್ನು ಕಣ್ಣೆತ್ತಿ ನೋಡಲೂ ಇಲ್ಲ...!
ನಾನು ಚಂದ ನೋಡಿ ಮೆಚ್ಚಿದ ಗಂಡು ಒಮ್ಮೆಯೂ ನನ್ನ ಅಂದವನ್ನು ನೋಡಲೇ ಇಲ್ಲ...
ನನ್ನವನ ನಲ್ಮೆಯ ಮಾತುಗಳು..
ಮತ್ತೇರಿಸುವ ಇಷ್ಟದ ನೋಟವನ್ನು ನಾನು ಹಂಬಲಿಸಿದ್ದೆ..
ಇಲ್ಲಸಲ್ಲದ ಕನಸು ಕಂಡಿದ್ದೆ...
ಬಹಳ ನಿರಾಸೆ ಆಯಿತು...
ಇದ್ದರೆ ಇರ ಬೇಕು ಸಣ್ಣದಾದ ಕೊರತೆ..
ಹೆಚ್ಚುವದು ಪ್ರೇಮದ ಒರತೆ...
ಎಲ್ಲವೂ ನಾವು ಬಯಸಿದಂತೆ ಸಿಗುವದಿಲ್ಲವಲ್ಲ..
ಹಾಗಾದರೆ ಅರಸಿಕನೋ...?
ಆ ಶಬ್ಧಗಳ ಅರ್ಥ ನನಗೆ ಆಗಲೇ ಇಲ್ಲ...
ಆ ದಿನದ ರಾತ್ರಿಯೂ ಹಾಗೆ ಆಯಿತು...
ಎಲ್ಲವೂ ಯಾಂತ್ರಿಕ...
ರೋಚಕತೆ.. ರೋಮಾಂಚನೆಯ ಕ್ಷಣಗಳು..
ತಣ್ಣಗೆ...
ಸಂಭ್ರಮವಿಲ್ಲದೆ...
ಉದ್ವೇಗವಿಲ್ಲದೆ ನಡೆದು ಹೋಯಿತು... ಸಹಜವೆಂಬಂತೆ...
ನನ್ನ ಜೀವಜೀವದ ಕನಸಿನ ಕ್ಷಣಗಳಲ್ಲಿ ನಾನಿರಲಿಲ್ಲ...
ಅವರು ವ್ಯವಹಾರಸ್ಥರು..
ತಮಗೆಷ್ಟು ಬೇಕೊ ಅಷ್ಟು ತೆಗೆದು ಕೊಂಡರು..
ಜೀವ ಭಾವಗಳು ಎಂದಿಗೂ ಒಂದಾಗಲೇ ಇಲ್ಲ....
ಇಂದಿಗೂ ನನ್ನವನನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದೇನೆ...
ನಾನು ಮದುವೆಯಾಗಿ ಹೊಸತರದಲ್ಲಿ ಹೊಸ ಮನೆ ಕಟ್ಟಲು ಶುರು ಮಾಡಿದ್ದ ನನ್ನ ಗಂಡ.
ಎಲ್ಲವೂ.... ಅವನ ಬೇಕು, ಬೇಡಗಳು...!
ಅವನಿಷ್ಟದಂತೆ ಕಟ್ಟಿಸಿದ..
ನಾನು ಬಹಳ ಸಂಕೋಚದಿಂದ, ಸ್ವಲ್ಪ ಹೆದರಿಕೆಯಿಂದ ನನ್ನದೊಂದು ಆಸೆ ಹೇಳಿದೆ...
"ಮನೆಯ ಮುಂದಿನ ಕೈತೋಟದಲ್ಲಿ ಮರದ ಕೆಳಗೆ..
ಒಂದು ಗ್ರನೈಟ್ ಕಲ್ಲು ಬೇಂಚು ಹಾಕಿಸಿ..
ದಯವಿಟ್ಟು..."
ನನ್ನಗಂಡ ಬಲು ವಿಚಿತ್ರವಾಗಿ ನೋಡಿದ.
ಇದರಿಂದ ಏನು ಲಾಭ ಅಂತ ವಿಚಾರ ಮಾಡಿರ ಬಹುದಾ?
ಮಾತನಾಡಲಿಲ್ಲ.
ಆದರೆ ..
ಬಹಳ ಸುಂದರ ಕಲ್ಲು ಬೇಂಚು ಹಾಕಿಸಿದ...!
ಅದು ಎಷ್ಟು ಅಂದವಾಗಿತ್ತೆಂದರೆ.. ನನ್ನ ಕಲ್ಪನೆಗಿಂತಲೂ ಚಂದವಾಗಿತ್ತು...
ಅಂದಿನಿಂದ ನನಗೊಂದು ಕನಸಿದೆ...
ಸೂರ್ಯ ಮುಳುಗುವ ಸಮಯದಲ್ಲಿ ನನ್ನ ಗಂಡನ ಸಂಗಡ ಅಲ್ಲಿ ಕುಳಿತು..
ಹಾಡು ಕೇಳುತ್ತ ಒಂದು ಸುಂದರ ಸಂಜೆಯನ್ನು ಕಳೆಯ ಬೇಕು....
ಎಲ್ಲದಕ್ಕೂ ಕಾರಣವಿರುತ್ತದೆ..
ನನ್ನ ಗಂಡನ ಈ ಸ್ವಭಾವಕ್ಕೂ ಕಾರಣವಿದೆ..
ನನ್ನ ಗಂಡ ಒಬ್ಬ ಅನಾಥ.. ಬಹಳ ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬಂದಿದ್ದಾನೆ..
ಶ್ರಮ ಜೀವಿ. ಅವನ ಜೀವನವೇ ಒಂದು ಹೋರಾಟ..
ಒಂದೊಂದು ತುತ್ತಿಗೂ ಕಷ್ಟಪಟ್ಟಿದ್ದಾನೆ.
ಅವನು ಬೆಲೆ ಕೊಡುವದು ಎರಡಕ್ಕೆ ಮಾತ್ರ...
ಸಮಯ ಮತ್ತು ಹಣ...
ಮದುವೆಯಾಗಿ ಹದಿನೆಂಟು ವರ್ಷಗಳು ಉರುಳಿಹೋಯಿತು...
ಮಗನೊಬ್ಬ ಹುಟ್ಟಿದ...
ಥೇಟ್ ಅಪ್ಪನ ಹಾಗೆಯೇ...!
ನನ್ನ ಜೀವ ಹಂಚಿಕೊಂಡು ಹುಟ್ಟಿದ ಮಗುವಿಗೆ ನನ್ನ ಭಾವನೆಗಳು ಹಾಸ್ಯವಾಗಿ ಕಾಣುತ್ತಿದ್ದವು....
ನನ್ನ ರಕ್ತಮಾಂಸಗಳಲ್ಲಿ ಹರಿಯುವ ಸ್ವಭಾವ ಅವನಿಗೆ ಬರಲಿಲ್ಲ...
ವಾಸ್ತವವಾದಿಗಳ ಜಗತ್ತಿನಲ್ಲಿ ನನಗೆಲ್ಲಿ ಬೆಲೆಯಿದೆ?
ಜಗತ್ತಿನ ಎಲ್ಲ ಸುಖಗಳು ಹಣದ ಥೈಲಿಯಲ್ಲಿರುತ್ತವೆ....
ಮನೆಕೆಲಸಕ್ಕೆ.. ಅಡಿಗೆ ಮಾಡಲಿಕ್ಕೆ...
ನೆನಪಾದಾಗ ಹಾಸಿಗೆಗೆ..
ಅಸ್ತಿತ್ವವವೇ ಇಲ್ಲದ ಸ್ಥಿತಿ ನನ್ನದು...
ಇದ್ದ ಒಬ್ಬ ಮಗನೂ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಹೊರಟು ಹೋದ...
ಈಗ ಮತ್ತೂ ಒಂಟಿಯಾದೆ...
ಯಾರೂ ಇಲ್ಲದಿದ್ದರೂ ನನಗೊಬ್ಬ ಸ್ನೇಹಿತನಿದ್ದಾನೆ..
ಅದು ನನ್ನ ಏಕಾಂತ...
ನನ್ನ ಒಂಟಿತನ..
ನನ್ನ ಏಕಾಂತವನ್ನು..
ನನ್ನ ಒಂಟಿತನವನ್ನು ನಾನು ಬಹಳ ಪ್ರೀತಿಸುತ್ತೇನೆ.
ನನ್ನ ಆಸೆಗಳನ್ನು, ಕನಸುಗಳನ್ನು ಅಲ್ಲಿ ಕಾಣುತ್ತೇನೆ..
ನೋಡುತ್ತೇನೆ... ಅಲ್ಲೇ ಖುಷಿಪಡುತ್ತೇನೆ....
ಬದುಕಿನ ಅನಿವಾರ್ಯತೆಗೆ ಹೊಂದಿಕೊಳ್ಳಲೇ ಬೇಕಿತ್ತು...
ಎಂದಿನಂತೆ ಇಂದೂ ಕೂಡ ಬೆಳಗಾಯಿತು...
ದಿನಾಲೂ ಆರುಗಂಟೆಗೆ ಎದ್ದು ಟಿ ಗಾಗಿ ಕಾಯುವ ಗಂಡ ಏಳಲಿಲ್ಲ..
ನಾನು ರೂಮಿಗೆ ಹೋದೆ...
ಎದ್ದುಕುಳಿತಿದ್ದ..
" ಚಿನ್ನು.... ಯಾಕೋ.. ಬೇಸರ ಕಣೆ...
ನೋಡೆ.. ಇವತ್ತು ನಾನು ಎಲ್ಲಿಗೂ ಹೋಗಲ್ಲ..
ಮನೆಯಲ್ಲೇ ಇರುತ್ತೇನೆ.. ನಿನ್ನ ಜೊತೆಯಲ್ಲೇ..!!"
ನನಗೆ ಆಶ್ಚರ್ಯವಾಯಿತು...!
ಕಳೆದ ಹದಿನೆಂಟು ವರ್ಷದಲ್ಲಿ ಈ ಥರಹ ಆಗಲೇ ಇಲ್ಲ...!
ಸಂತೋಷದಿಂದ ಮೂಕಳಾದೆ...
ಸಂಭ್ರಮಕ್ಕೆ ಮೇರೆಯೇ ಇಲ್ಲವಾಯಿತು...
ಸಡಗರದಿಂದ ಟೀ ಕೊಟ್ಟು ಬಂದೆ...
"ಚಿನ್ನು ಪುಟ್ಟಾ...
ಈ ವ್ಯವಹಾರದ ಒತ್ತಡದಲ್ಲಿ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದು ಕೊಂಡು ಬಿಟ್ಟೆ ಕಣೆ..
ನಿನ್ನನ್ನೂ ಗಮನಿಸಲಿಲ್ಲ ನೋಡು.. ಬೇಸರಪಟ್ಟುಕೊಳ್ಳ ಬೇಡ..."
ಏನಾಯಿತು ನನ್ನ ಗಂಡನಿಗೆ?
ಇನ್ನು ಯಾವಾಗಲೂ ಹೀಗೆಯೇ ಇರಬಹುದಾ...?
ದಿನಾಲೂ ನಾನು ದೀಪ ಹಚ್ಚುವ ದೇವರಿಗೆ ಮನಸಾರೆ ಕೈಮುಗಿದೆ...!
ಬೆಳಗಿನ ತಿಂಡಿಯೂ ಆಯಿತು...
ನಾನು ಮಧ್ಯಾಹ್ನದ ಊಟದ ತಯಾರಿ ನಡೆಸಿದೆ..
ನನ್ನವ.. ನನ್ನ ಗಂಡ ಮನೆಯಲ್ಲೇ ಇರುತ್ತಾನೆ..!
ಅವನ ಇಷ್ಟದ ಮಜ್ಜಿಗೆ ಹುಳಿ, ಬೆಂಡೆಕಾಯಿ, ದಪ್ಪಮೆಣಸಿನಕಾಯಿಯ ಪಲ್ಯ...
ಶಾವಿಗೆ ಖೀರು ಮಾಡಿದೆ...
ಊಟಕ್ಕೆ ಕರೆದೆ.....
ನಾನು ಬಡಿಸಲು ತೊಡಗಿದೆ...
ಈತ ಊಟ ಶುರು ಮಾಡಿದ...
ನಾನು ಮನದಣಿಯೇ ನೋಡಿದೆ.. ನನ್ನವನನ್ನು..
ಇಳಿವಯಸ್ಸಿನಲ್ಲೂ ಬಹಳ ಸುಂದರ ನನ್ನ ಗಂಡ..!
ಬಿಳಿ ಮೀಸೆ.. ಅರ್ಧ ಉದುರಿದ ತಲೆ...
ಒಮ್ಮೆ ಆತನ ತಲೆಯನ್ನು ನನ್ನ ಹೊಟ್ಟೆಗೆ ತಬ್ಬಿಕೊಂಡು ಪ್ರೀತಿಸೋಣ ಅನಿಸಿತು...
ಅಪರೂಪಕ್ಕೆ ನಗುವವರ ನಗು ಬಲು ಚಂದ.....!
" ಚಿನ್ನು...ನೀನೂ ಬಾ...
ಕೂತ್ಗೊ.. ಬಾ.."
ಅನ್ನುತ್ತ ನನ್ನ ಕೈ ಹಿಡಿದ...
ನನಗೆ ಹೇಗೋ .. ಹೇಗೋ ಆಯಿತು...!
ಇದು ನಿಜವಾ...?
ಒಮ್ಮೆ ಮೈಯನ್ನು ಅಲ್ಲೇ ಚಿಗುಟಿ ನೋಡಿಕೊಂಡೆ...
ಊಟವಾಯಿತು..
" ಚಿನ್ನು ಮರಿ...
ಮತ್ತೆ ಪಾತ್ರೆಗಳನ್ನು ತೊಳೆಯುತ್ತ ಕುಳಿತುಕೊಳ್ಳಬೇಡ.. ಸ್ವಲ್ಪ ಹೊತ್ತು ಮಲಗೋಣ ಬಾ...
ಏನಾಗುತ್ತಿದೆ ಇವತ್ತು...? ಇದೆಲ್ಲ ನಿಜವಾ...?
ಅಂತೂ ನನ್ನ ದೇವರು ತಡವಾಗಿಯಾದರೂ ಕಣ್ಣುಬಿಟ್ಟಿದ್ದಾನೆ....!
ನನಗೆ ಏನನ್ನೋ ಕೇಳಬೇಕಿತ್ತು ಅವನ ಬಳಿ...
ಧೈರ್ಯಸಾಲಲಿಲ್ಲ..
ಅದು ಅವನಿಗೆ ಅರ್ಥವಾಯಿತು ಅಂತ ಕಾಣುತ್ತದೆ...
"ಏನಾದರೂ ಮಾತನಾಡ ಬೇಕಿತ್ತಾ...ಚಿನ್ನು..?"
ಬಹಳ ಅಪ್ಯಾಯಮಾನವಾಗಿತ್ತು ಆ ಧ್ವನಿ...!
ನಾನು ಧೈರ್ಯ ಮಾಡಿಯೇ ಬಿಟ್ಟೆ...
"ನನಗೆ ಒಂದು ಆಸೆ ಇದೆ... ನಮ್ಮ ಮದುವೆ ಆಗಿದ್ದಾಗಲಿನಿಂದ.."
"ಏನದು..?"
"ಮತ್ತೇನಿಲ್ಲ..
ಮನೆಯ ಮುಂದಿನ ಕಲ್ಲು ಬೇಂಚಿನ ಮೇಲೆ... ಸಂಜೆ ಸೂರ್ಯಾಸ್ತದ ಸಮಯದಲ್ಲಿ..
ನಾವಿಬ್ಬರೂ ಅಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕು.."
"ಇಷ್ಟೇನಾ..?
ಇದೆಂಥಹ ಆಸೆ.. ಚಿನ್ನು ಪುಟ್ಟಾ ? ಏನಾಗುತ್ತದೆ ಆಗ..?"
"ಏನೂ ಇಲ್ಲ...
ಆ ಸಮಯದಲ್ಲಿ ನಿಮ್ಮೊಡನೆ ನಾನು ಅಲ್ಲಿ ಕುಳಿತುಕೊಳ್ಳ ಬೇಕು...
ಇದು ನನ್ನ ಬಹಳ ದಿನಗಳ ಆಸೆ...."
"ಓಕೆ... ಹಾಗೆಯೇ ಮಾಡೋಣ.. ಅದಕ್ಕೇನು ಹಣ ಕೊಡಬೇಕಾ..?
ನಾನು ಈಗ ಮಲಗುತ್ತೇನೆ.. ಆ ಸಮಯಕ್ಕೆ ನನ್ನನ್ನು ಎಬ್ಬಿಸಿಬಿಡು"
ನನ್ನ ಸಂತೋಷಕ್ಕೆ.. ಸಂಭ್ರಮಕ್ಕೆ ಮೇರೆಯೇ ಇಲ್ಲವಾಯಿತು..!!!
ಕೈಕಾಲು ಆಡದಂತಾಯಿತು ..!
ಬೆಡ್ ರೂಮಿಗೆ ಓಡಿದೆ... ಹೊಸ ಸೀರೆ ಉಟ್ಟುಕೊಳ್ಳಬೇಕಿತ್ತು...
ಮ್ಯಾಚಿಂಗ್ ಬ್ಲೌಸ್...
ಕಿವಿಗೆ ಚಂದದ ಓಲೆ ಹಾಕಿಕೊಳ್ಳ ಬೇಕು...
ಕೈ ಬಳೆಗಳನ್ನು ಬದಲಿಸ ಬೇಕಿತ್ತು..
ಮುಖಕ್ಕೆ ತೆಳುವಾಗಿ ಕ್ರೀಮ್ ಹಚ್ಚಿ ಪೌಡರ್....
ಅಲಂಕಾರ ಮಾಡಿಕೊಳ್ಳಲೇ ಬೇಕಿತ್ತು...
ಅರೆವಸ್ಸಿನಲ್ಲೂ ನನ್ನ ಗಂಡನ ಮೆಚ್ಚುಗೆಯ ನೋಟ ನನಗೆ ಬೇಕಿತ್ತು...
ಈ ಕ್ಷಣಗಳಿಗಾಗಿ ಎಷ್ಟು ದಿನಗಳಿಂದ ಹಂಬಲಿಸಿದ್ದೆ...??
ಇದರಲ್ಲೇ ಬದುಕಿನ ಸಾರ್ಥಕತೆ...
ಐದು ಗಂಟೆಯಾಯಿತು... ಗಂಡ ಹಾಲಿನಲ್ಲಿ ಕುಳಿತು ಪೇಪರ್ ಓದುತ್ತಿದ್ದ...
"ಬನ್ನಿ... ಬನ್ನಿ ಸೂರ್ಯಾಸ್ತ ಆಗ್ತಾ ಇದೆ .. ಅಲ್ಲಿ ಕುಳಿತುಕೊಳ್ಳೋಣ..."
ನನ್ನ ಸಡಗರ ಅವನಿಗೆ ಆಶ್ಚರ್ಯ ಉಂಟುಮಾಡಿರಬೇಕು...!
ಎದ್ದು ಬಂದ...
ಕಲ್ಲು ಬೇಂಚಿನ ಒಂದು ಪಕ್ಕದಲ್ಲಿ ಕುಳಿತ.. ನಾನು ಮತ್ತೊಂದು ಪಕ್ಕದಲ್ಲಿ ಕುಳಿತೆ...!
"ಯಾಕೆ ದೂರ ಕುಳಿತಿದ್ದೀಯಾ.. ಚಿನ್ನು.. ಹತ್ತಿರ ಬಾ..."
ಎನ್ನುತ್ತ ಹತ್ತಿರ ಎಳೆದುಕೊಂಡ...
ಸಾವಕಾಶವಾಗಿ ನನ್ನ ಹೆಗಲಿನ ಮೇಲೆ ಕೈ ಹಾಕಿದ...
ಎಂಥಹ ಕ್ಷಣಗಳು ಅವು...!!
ಅಬ್ಭಾ...!!
ನನಗೆ ರೋಮಾಂಚನವಾಯಿತು..!!
ಸೂರ್ಯ ಕೆಂಪು ಬಣ್ಣವಾಗುತ್ತಿದ್ದ...
ಸಣ್ಣ ಸಣ್ಣ ಮೋಡಗಳು ಪಕ್ಕದಲ್ಲಿ ಸರೋವರದಂತೆ ಕಾಣುತ್ತಿದ್ದವು...
ಹದಿನೆಂಟು ವರುಷಗಳ ಆಸೆ ಈಡೇರುತ್ತಿದೆ...!!
ಐದು ನಿಮಿಷ ಆಯಿತು....
"ಕುಳಿತದ್ದು ಆಯ್ತಲ್ಲ...ಚಿನ್ನು..!
ಇನ್ನೇನು..?..?? "
"ರೀ.. ನನಗೆ ಇನ್ನೂ ಒಂದು ಆಸೆ ಇದೆ..."
" ಏನದು..?.."
"ಈ...ಸಂಜೆಯಲ್ಲಿ ನಿಮ್ಮೊಡನೆ ಕುಳಿತು ಒಂದು ಹಾಡು ಕೇಳಬೇಕು....!!."
"ಅದಕ್ಕೇನು..?
ಟೇಪ್ ರೆಕಾರ್ಡರ್ ತಗೊಂಡು ಬಾ.."
ನಾನು ಸಂಭ್ರಮದಿಂದ ಒಳಗೆ ಓಡಿದೆ..!!
ಹದಿಹರೆಯದ ಹುಡುಗಿಯಂತೆ...!!
ನನ್ನ ಮೆಚ್ಚಿನ ಯೇಸುದಾಸನ ಹಾಡಿನ ಸಿಡಿ ಹಾಕಿ ತೆಗೆದು ಕೊಂಡು ಬಂದೆ...
ಹಾಡು ಹಾಕಿದೆ...
" ಜಬ್.. ದೀಪ್.. ಜಲೆ... ಆನಾ...
ಜಬ್ ಶಾಮ್.. ಢಲೆ ..ಆನಾ......"
ಬಹಳ ಸುಂದರವಾದ ಹಾಡು....
ಹಾಡೂ ಮುಗಿಯಿತು....
"ಇನ್ನೇನು... ಎಲ್ಲ ಆಯಿತಲ್ಲ..!!..?.."
"ಇಲ್ಲಾರಿ..
ಇನ್ನೂ ಸ್ವಲ್ಪ ಹೊತ್ತು ಕುಳಿತು ಕೊಳ್ಳೋಣ..
ಹೀಗೆಯೇ ಕುಳಿತು ಕೊಳ್ಳೋಣ...
ಆ ಸೂರ್ಯ ಮುಳುಗುವದನ್ನೇ ನೋಡುತ್ತಿರೋಣ...
ಏನಾದರೂ ಮಾತಾಡೋಣ...
ನೀವೂ ಮಾತಾಡಿ..!
ನಾವಿಬ್ಬರೂ ಮಾತನಾಡುತ್ತಲೇ ಇರೋಣ..!!.."
"ಆಯ್ತು.. ಕಣೆ.. ಚಿನ್ನು.."
ನಾನು ಅವನ ಕಣ್ಣುಗಳನ್ನೇ... ದಿಟ್ಟಿಸುವ ಪ್ರಯತ್ನ ಮಾಡಿದೆ...
ಆ ನೋಟದಿಂದ ಅವನ ಹೃದಯದ ಆಳಕ್ಕೆ ಹೋಗ ಬಹುದಾ...?
ನನಗೆ ಸಂತೋಷದಿಂದ ಕಣ್ಣೀರು ಬರುವಂತಾಯಿತು..
ಬೇಡ.. ಬೇಡ ವೆಂದರೂ ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರಿದವು....
ನನ್ನ ಗಂಡ.. ನನ್ನವ... ನನ್ನನ್ನು ಪ್ರೀತಿಸುತ್ತಾನೆ...!
ಇದಕ್ಕಿಂತ ಏನು ಬೇಕು...
ನಿಶ್ಚಿಂತೆಯಿಂದ ಸಾಯಬಹುದಾದ ಕ್ಷಣಗಳು ಅವು...!!
ಸಾವಕಾಶವಾಗಿ ಅವನ ತೋಳುಗಳನ್ನು ಹಿಡಿದು ಕೊಂಡು ಅವನ ಭುಜಕ್ಕೆ ಒರಗಿದೆ...
" ಚಿನ್ನು ಪುಟ್ಟಾ...
ನನಗೂ ನಿನ್ನ ಬಳಿ ಮಾತನಾಡ ಬೇಕಿತ್ತು ಕಣೆ...
ಬಹಳ ದಿನಗಳಿಂದ ವಿಚಾರ ಮಾಡುತ್ತಿದ್ದೆ...
ಆದರೆ ಹೇಗೆ ಮಾತನಾಡುವದು..?..."
" ನನ್ನ ಬಳಿ ಮಾತನಾಡ ಬೇಕಾ...?
ಅದಕ್ಕೇನು...?
ಏನು ಬೇಕಾದರೂ ಮಾತನಾಡಿ.."
ನನ್ನ ಸಂತೋಷಕ್ಕೆ ಮಿತಿಯೇ ಇಲ್ಲವಾಯಿತು..
ಅವನ ತೋಳುಗಳನ್ನು ಇನ್ನೂ ಗಟ್ಟಿಯಾಗಿ ಹಿಡಿದುಕೊಂಡು ಕಣ್ಣು ಮುಚ್ಚಿಕೊಂಡೆ...
ಕಣ್ಣು ಮುಚ್ಚಿಕೊಂಡರೂ ಕಣ್ಣಿರು ಬರುತ್ತಿತ್ತು.... ಸಂತೋಷದಿಂದ...
"ಏನೂ ಇಲ್ಲ ಕಣೆ..
ನನ್ನ ಬಿಸಿನೆಸ್ ಸ್ವಲ್ಪ ನಷ್ಟದಲ್ಲಿದೆ..
ನಿನ್ನ ತವರಿನಲ್ಲಿ ಕೊಟ್ಟ ಬಂಗಾರದ ಒಡವೆ..
ಹಾಗೂ ನಮ್ಮನೆ ಒಡವೆಗಳನ್ನು ಕೊಟ್ಟರೆ ಚೆನ್ನಾಗಿತ್ತು..
ಬ್ಯಾಂಕಿನಲ್ಲಿಟ್ಟು ಹಣ ತೆಗೆದು ಕೊಳ್ಳುತ್ತಿದ್ದೆ..."
ಕತ್ತಲೆಯಾಗುತ್ತಿತ್ತು...
ಮುಖಗಳು ಕಾಣುತ್ತಿಲ್ಲವಾಗಿತ್ತು....
( ಇದು ಮೊದಲ ಕಥೆಯಂತೂ ಅಲ್ಲ...
ಬ್ಲಾಗ್ ಶುರುಮಾಡಿದ ಮೇಲೆ ಮೊದಲ ಪ್ರಯತ್ನ...
ಇದು ಹೇಗಿದೆ...?
ನಿಮ್ಮ ಅನಿಸಿಕೆ.. ನಿಮ್ಮ ಪ್ರೋತ್ಸಾಹ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...
ನಿಮ್ಮೆಲ್ಲರ ಬ್ಲಾಗುಗಳಿಗೆ ಬರಲಾಗಲಿಲ್ಲ...
ದಯವಿಟ್ಟು ಕ್ಷಮಿಸಿ... ಇನ್ನು ಬರುತ್ತೇನೆ..)
Thursday, December 10, 2009
ತೆರೆದು ಮುಚ್ಚುವ ಕಣ್ಣಿಗೆ ಎದುರಿನ ಮನಸ್ಸು ಗೊತ್ತಾಗುವದಿಲ್ಲ..
ಕಾಚಶ್ರಿ ಕೊಟ್ಟ ತರೆಬೇತಿಯ ಫಲಿತಾಂಶ ಹೊರಬರುವದರಲ್ಲಿತ್ತು..
ಲೈನ್ ಹೊಡೆಯುವದು ಹೇಗೆ?
ಯಾರಿಗೆ...?
ಇತ್ತ ರಾಜಿ ಬರುವದು ಕಾಣಿಸುತ್ತಿತ್ತು...!
ಅವಳು ಉಪ್ಪು,ಹುಳಿ ಸೇರಿಸಿದ ಹದವಾದ ಖಾರದ ಮೆಣಸಿನಕಾಯಿ...!!
"ಈ ಕಡೆ ನೋಡ್ರೊ.. ಬಂಗಾರಿ ಬರ್ತಿದ್ದಾಳೆ..
ನನಗೆ ದೂರದ ಸಂಬಂಧ.."
ಪೆಟ್ಟಿಗೆ ಗಪ್ಪತಿ ಹೇಳಿದ...
ಕಾಚಶ್ರೀಗೆ ಕೋಪ ಬಂದಿತು...
"ಈ ಸಂಬಂಧಿಕರ ಹತ್ರ ಇದೆಲ್ಲ ಇಟ್ಕೋ ಬಾರ್ದು..
ಅವರು ಬಹಳ ಡೇಂಜರ್ಸು.. ನನ್ನ ಅನುಭವದಿಂದ ಹೇಳ್ತಿದ್ದೀನಿ ಸ್ವಲ್ಪ ಕೇಳ್ರೋ.."
ಆದರೆ ಪೆಟ್ಟಿಗೆ ಗಪ್ಪತಿ, ಸೀತಾಪತಿ ಕೇಳೋ ಮೂಡಿನಲ್ಲಿರಲಿಲ್ಲ..
ಹೊರಟೇ ಬಿಟ್ಟರು...
ಬಂಗಾರಿ ಹತ್ತಿರ ಬಂದಳು..!
ಸೀತಾಪತಿ ಇನ್ನೂ ಹತ್ತಿರ ಹೋದ...!!
ಒಂದು ಕಣ್ಣು ಮುಚ್ಚಿ ಕಣ್ಣು ಹೊಡೆಯಲು ಹೋದ...
ಆಗಲಿಲ್ಲ..!
ಎರಡೂ ಕಣ್ಣು ಮುಚ್ಚಿ ಹೋಯಿತು...!!
ಮತ್ತೊಮ್ಮೆ ಪ್ರಯತ್ನಿಸಿದ..!
ಅಗಲೂ ಎರಡು ಕಣ್ಣು ಮುಚ್ಚಿ ತೆರೆಯಿತು...!!
ಬಂಗಾರಿ ಪರಿಚಯದ ನಗು ನಕ್ಕಳು..!
ಹತ್ತಿರ ಬಂದಳು...
"ಸೀತಣ್ಣ ಮನೆಯಲ್ಲಿ ಎಲ್ಲ ಆರಾಮಾ...?"
ಅರೇ... ಸೀತಣ್ಣ... ಕಣ್ಣಿಗೆ ಎಂತಾ ಆಯ್ತು..???
ಕಸ ಬಿದ್ದೋಯ್ತಾ? ಬಾ ಕಣ್ಣಿಗೆ ಬಾಯಿಂದ ಊದಿ ಕಸ ತೆಕ್ಕೊಡ್ತಿನಿ...!"
ಸೀತಾಪತಿ ಪೆಪ್ಪೆ..ಪ್ಪೆ.. ಅಂದ....!!!
ಏನೂ ಹೇಳಲೂ ಮಾತೇ ಹೊರಡಲಿಲ್ಲ..!
ಅಷ್ಟರಲ್ಲಿ ಪೆಟ್ಟಿಗೆ ಗಪ್ಪತಿ ಸ್ವಲ್ಪ ಬುದ್ಧಿವಂತಿಕೆ ತೋರಿಸಿದ..
ಬಲಗೈಯಿಂದ ಒಂದು ಕಣ್ಣು ಮುಚ್ಚಿಕೊಂಡ..
ಕಣ್ಣು ಮುಚ್ಚಿ ತೆರೆದ...!!!!
ಈಗ ಕಣ್ಣು ಹೊಡೆಯುವದಕ್ಕೆ ಸರಿ ಆಯ್ತು...
ಬಂಗಾರಿಗೆ ಆಶ್ಚರ್ಯವಾಯಿತು...!!
"ಗಪ್ಪತಿ ಅಣ್ಣ ಇದೇನಿದು..?
ಏನಾಯ್ತು...?
ಒಂಥರಾ ಆಡ್ತಿದೀಯಲ್ಲ... ಮೈ ಹುಷಾರಿಲ್ವಾ...?"
ಅಷ್ಟರಲ್ಲಿ ದೂರದಿಂದ ಇದನ್ನೆಲ್ಲ ಗಮನಿಸುತ್ತಿದ್ದ ರಾಜಿ ಹತ್ತಿರ ಬಂದಳು..
" ನಿಮಗೆಲ್ಲ ಮಾಡ್ಲಿಕ್ಕೆ ಬೇರೆ ಕೆಲ್ಸ ಇಲ್ವೇನ್ರೋ...?
ಲೈನ್ ಹೊಡಿಲಿಕ್ಕೆ ಬಂದಿದ್ದೀರಲ್ಲ...!
ನೀವೆಲ್ಲ ಓದಲಿಕ್ಕೆ ಬರ್ತೀರೋ ? ಲೈನ್ ಹೊಡಿಯಲಿಕ್ಕೊ..?
ನಿಮ್ಮ ಅಪ್ಪ, ಅಮ್ಮ ಇದಕ್ಕೆ ಅಂತ ಕಾಲೇಜಿಗೆ ಕಳಿಸ್ತಾರೇನ್ರೋ..? ನಿಮಗೇನು ನಾಚಿಕೆ ಮರ್ಯಾದಿ ಏನೂ ಇಲ್ವಾ?"
ರಾಜಿಯನ್ನು ನೋಡಿ ಇಬ್ಬರೂ ಕಂಗಾಲಾದರು..
ಅವರ ಧೈರ್ಯಕ್ಕೆ ನಾಗು ಹತ್ತಿರ ಹೋದ...
ರಾಜಿಯನ್ನು ನೇರವಾಗಿ ಕೇಳಿದ...
"ಏನಾಯ್ತು...? ನಿಮಗೆ ಏನಾದ್ರೂ ತೊಂದ್ರೆ ಆಯ್ತಾ...?"
"ನೀವೆಲ್ಲ ಮಾಡೋ ಕೆಲ್ಸ ನಂಗೆ ಗೊತ್ತಾಗಲ್ವಾ?
ಯಾಕೆ ಲೈನ್ ಹೋಡಿದ್ದೀರಾ?"
"ಯಾರು ಲೈನ್ ಹೊಡೆದದ್ದು..? ಅದು ಹೇಗೆ?"
"ಬುದ್ಧಿವಂತಿಕೆ ಬೇಡ..
ಕಣ್ಣು ಮುಚ್ಚಿಹೊಡೆದದ್ದನ್ನು ನಾನೇ ನೋಡಿದೆ...
ನಿಮಗೆನು ಮಾಡ್ಲಿಕ್ಕೆ ಬೇರೆ ಕೆಲ್ಸ ಇಲ್ವಾ?
ನೀವೆಲ್ಲ ಯಾಕೆ ಕಾಲೇಜಿಗೆ ಬರ್ತೀರಾ?"
ರಾಜಿ ದಬಾಯ್ಸಿ ಜೋರಾಗಿ ಕೇಳಿದಳು...
" ಓದ್ಲಿಕ್ಕೆ .. ಅಂತ.... "
"ಓದಲಿಕ್ಕೆ ಬರೋವರು ಮಾಡೋ ಕೆಲ್ಸಾನಾ ಇದು??
ತೀರಾ ಚೀಪಾಗಿ ಲೈನ್ ಹೋಡೀತಿರಲ್ಲ...!!
ಛೇ..!! "
"ರಾಜಿಯವರೇ... ನೀವು ಯಾಕೆ ಕಾಲೇಜಿಗೆ ಬರ್ತಿರೋದು...?"
" ಓದಲಿಕ್ಕೆ"
" ಓದಲಿಕ್ಕೆ ಬರೊವ್ರು ಇಂಥಾ ಡ್ರೆಸ್ಸಾ ಹಾಕೋದು...?
ಗಂಡು ಮಕ್ಕಳಿಗೆ ಕೆರಳಿಸಲಿಕ್ಕೆ ಅಲ್ವಾ?
ತೊಡೆ ತೋರಿಸುವಂಥ ಇಂಥಹ ಡ್ರೆಸ್ಸು ಓದಲಿಕ್ಕೆ ಯಾಕೆ..?"
"ನಿಮ್ಮ ಕಣ್ಣು ಸರಿ ಇಲ್ಲ..
ಮನಸ್ಸು ಸರಿ ಇಲ್ಲ ಅಂದಮೇಲೆ ಯಾವ ಡ್ರೆಸ್ಸು ಹಾಕಿದ್ರೂ ಅಷ್ಟೇನೆ..
ದೇವಸ್ಥಾನದಲ್ಲಿ ಶಿಲಾಬಾಲಿಕೆ ಇದ್ರೂ ಯಾರಾದ್ರೂ ಅಪಾರ್ಥ ಮಾಡಿಕೊಳ್ತಾರಾ..?"
"ದೇವಸ್ಥಾನದಲ್ಲಿ ಭಕ್ತಿಭಾವ ಇಟ್ಕೊಂಡು, ಕೈ ಮುಗಿಲಿಕ್ಕೆ ಅಂತಾನೆ ಹೋಗಿರ್ತಾರೆ...
ದೇವ್ರ ಹತ್ರ ಕಷ್ಟ ಹೇಳಿಕೊಳ್ಳಿಕ್ಕೇ ಹೋಗಿರ್ತಾರೆ..
ಆಗ ಕಷ್ಟಬಿಟ್ಟು ಮತ್ತೇನೂ ಕಾಣುವದಿಲ್ಲ...
ಅಷ್ಟಲ್ಲದೆ ಅದು ಕಲ್ಲಿನ ಮೂರ್ತಿ...
ಮನಸ್ಸು ಕೆರಳುವಂಥಹ ದೃಶ್ಯ ನೋಡಿದ್ರೆ....
ದೇವರ ಬಗ್ಗೆ ತಪಸ್ಸಿಗೆ ಕುಳಿತ ವಿಶ್ವಾಮಿತ್ರನ ಕಥೆ ಆಗ್ತದೆ.."
"ಇದೇ ವಿಶ್ವಾಮಿತ್ರ ಎರಡನೇ ಬಾರಿ ಏನು ಮಾಡಿದ?
ಯಾವ ಅಪ್ಸರೆಯೂ ಕುಣಿದರೂ ಏನೂ ಮಾಡ್ಲಿಲ್ಲ..
ದೇವರನ್ನ ಒಲಿಸಿಕೊಂಡ...
ನಿಮಗೆ ನಿಮ್ಮ ಕಣ್ಣು ಮನಸ್ಸು ಸರಿ ಇಲ್ಲ...
ನನಗೆ ಚಂದ ಕಾಣಬೇಕು ಅಂತ ಇದೆ..
ಚಂದದ ಡ್ರೆಸ್ಸು ಹಾಕಿಕೊಂಡಿದ್ದೇನೆ.."
"ಈ ಚಂದ ಬೇರೆಯವರು ನೋಡ್ಬೇಕು ಅಂತ ತಾನೆ ನಿಮ್ಮ ಮನಸ್ಸಿಲ್ಲಿರೋದು?
ನೋಡಿದವರು... ಪ್ರಶಂಸೆ ಮಾಡ್ಲಿ ಅಂತ ತಾನೆ ಮನಸಿನಲ್ಲಿರೋದು?
ಸಣ್ಣದಾಗಿ ಚುಡಾಯ್ಸಿದ್ರೆ ತಪ್ಪೇನಿದೆ?
ನಿಮಗೇನೂ ಅವಮಾನ ಮಾಡಿಲ್ವಲ್ಲ..?"
"ನೋಡಿ ಮಿಸ್ಟರ್ ನಾಗು..
ನಾನು ಮಾತಾಡ್ತಿರೋದು ಇವರಿಬ್ಬರ ಬಳಿ.
ನಿಮ್ಮ ಹತ್ರ ಅಲ್ಲ...
ನಿಮಗೂ ಇದಕ್ಕೂ ಸಂಬಂಧ ಇಲ್ಲ"
"ನೋಡಿ ರಾಜಿಯವರೆ...
ಇವರಿಬ್ಬರೂ ಮಾತಾಡ್ತಿರೋದು ಬಂಗಾರಿ ಹತ್ರ...
ನಿಮಗೂ ಇದಕ್ಕೂ ಸಂಬಂಧ ಇಲ್ಲ..
ಇಷ್ಟಕ್ಕೂ ನೀವು ಯಾಕೆ ಕೋಪ ಮಾಡ್ಕೋತಿರಿ...?
ನಿಮಗೇನೂ ಮಾಡ್ಲಿಲ್ವಲ್ಲ..
ನಿಮಗೆ ಲೈನ್ ಹೊಡೆದಿಲ್ವಲ್ಲಾ ಅಂತ ಬೇಜಾರಿದ್ರೆ ಹೇಳಿ..."
"ನನಗೇನಾದ್ರೂ.. ಲೈನ್ ಹೊಡೆದರೆ..
ಕಾಲಲ್ಲಿದ್ದ ಚಪ್ಪಲ್ಲು ಕೈಗೆ ಬರ್ತದೆ...".
ನಮಗೆ ಟೆನ್ಶನ್ ಶುರುವಾಯ್ತು..
ಪರಿಸ್ಥಿತಿ ನಮ್ಮ ಕೈ ಮಿರ್ತಾ ಇದೆ ಅನಿಸಿತು...
"ಓಹೊ...ಹೀಗೋ...!
ಕಣ್ಣು ಮುಚ್ಚಿ ತೆಗೆದರೆ ಲೈನ್ ಹೊಡೆದ ಹಾಗಾ?
ನೋಡಿ ನಿಮಗೆ ಕಣ್ಣು ನಾನು ಹೊಡಿತೇನೆ...
ಇಷ್ಟ ಆದ್ರೆ ಇಟ್ಕೊಳ್ಳಿ.. ಕಷ್ಟ ಆದ್ರೆ ಬಿಟ್ಟು ಹೋಗಿ"
ನೋಡು ನೋಡುತ್ತಿದ್ದ ಹಾಗೆ ನಾಗು ಕಣ್ಣು ಹೊಡೆದೇ ಬಿಟ್ಟ..!!.
ರಾಜಿಗೆ ಕೋಪ ಬಂತು..
"ನನಗೆ ಲೈನ್ ಹೊಡಿತಿದ್ದಿರಾ...!!.???...?
ಸ್ವಲ್ಪ ಹತ್ತಿರ ಬನ್ನಿ.."
ನಾಗುವಿಗೆ ಮೊಂಡು ಧೈರ್ಯ...!!
ಹತ್ತಿರ ಹೋದ...
"ನಿಮಗೆ ಗಂಡುಮಕ್ಕಳಿಗೇನು?
ಒಂದು ಕಣ್ಣು ಮುಚ್ಚಿ ತೆರೆದರೆ ಆಯಿತು...
ಒಂಥರಾ ವಿಲಕ್ಷಣ ಆತ್ಮ ಸಂತ್ರಪ್ತಿ...!
ನಿಮ್ಮ ಮುಚ್ಚಿದ ಕಣ್ಣಿಗೆ..ತೆರೆದ ಕಣ್ಣಿಗೆ
ನಮ್ಮ ಭಾವನೆಗಳು ಗೊತ್ತಾಗುವದಿಲ್ಲ...
ನಮಗೂ ಒಂದು ಮನಸ್ಸು ಅಂತ ಇರ್ತದೆ... ಹೃದಯ ಇರ್ತದೆ...
ನಿಮಗೆ ಯಾಕೆ ಈ ಕೀಚಕನ ಮನಸ್ಸು..?
ನಿಮಗೆ ಯಾಕೆ ಇಂಥಹ ಭಾವನೆಗಳು ಬರ್ತದೆ?
ಚಂದ ನೋಡುವ ಮನಸ್ಸಿಗೆ ನಮ್ಮ ಭಾವನೆಗಳು..
ಯಾಕೆ ಅರ್ಥ ಆಗೋದಿಲ್ಲ??
ನಮ್ಮ ಭಾವನೆಗಳು ನಿಮಗೆ ಯಾಕೆ ಮುಖ್ಯ ಅನಿಸೋದಿಲ್ಲ?"
ನಾಗು ಇದನ್ನು ನಿರೀಕ್ಷಿಸಲಿಲ್ಲ..!!
ಗರ ಬಡಿದವನಂತೆ ನಿಂತಿದ್ದ...!!
"ನೋಡ್ರೋ.. ಪ್ರಿನ್ಸಿಪಾಲ್ರು ಬಂದ್ರು.. ಕ್ಲಾಸಿಗೆ ಹೋಗೋಣ್ರೊ.."
ಪೆಟ್ಟಿಗೆ ಗಪ್ಪತಿ ಜೋರಾಗಿ ಹೇಳಿದ...!
ಪ್ರಿನ್ಸಿಪಾಲರು ಬರುತ್ತಿದ್ದರು....!!.
(ಬಹಳ ಕೆಲಸದ ಒತ್ತಡದಿಂದಾಗಿ ಇನ್ನೂ ಕೆಲವು ಓದುಗರಿಗೆ "ಹೆಸರೇ.. ಬೇಡ" ಪುಸ್ತಕ ಕಳಿಸಲಾಗಲಿಲ್ಲ.
ದಯವಿಟ್ಟು ಬೇಸರಿಸದಿರಿ. ಒಂದೆರಡು ದಿನಗಳಲ್ಲಿ ಕಳುಹಿಸಿಕೊಡುವೆ... ಪ್ರೋತ್ಸಾಹ ಹೀಗೆಯೇ ಇರಲಿ...
ಪ್ರಕಾಶಣ್ಣ)
Subscribe to:
Posts (Atom)