Friday, March 26, 2010

ಹುಚ್ಚು .. ಬಿಟ್ಟಂತೂ.. ಮದುವೆ ಆಗೋದಿಲ್ಲ...!!

ಸುಡು ಬಿಸಿಲು...
ಕೆಟ್ಟ ಟ್ರಾಫಿಕ್ಕಿನಲ್ಲಿ ಕಾರು ಓಡಿಸಿಕೊಂಡು...
 ಸಹಕಾರ ನಗರ ತಲುಪಿದಾಗ ಹನ್ನೊಂದು ಗಂಟೆ...

ನನ್ನ ಸಂಗಡ ಸತ್ಯ ಮತ್ತು ನಾಗು ಕೂಡ ಇದ್ದರು...
ಅಲ್ಲಿ ಬಂದು ನೋಡಿದರೆ ಯಾರೂ ಕೆಲಸಗಾರರೇ ಇಲ್ಲ...
ನನಗೆ ಪಿತ್ತ ನೆತ್ತಿಗೇರಿತು...


ಅಲ್ಲಿಯೇ ಇದ್ದ ಮೇಸ್ತ್ರಿ ಶಿಖಾಮಣಿಗೆ ಕೇಳಿದೆ..
"ಏನಪ್ಪಾ ಇದು ??
ಸೋಮವಾರ ರೂಫ್ ಕಾಂಕ್ರೀಟು... ಇನ್ನೂ ಏನೂ ತಯಾರಾಗಿಲ್ಲ.
ಎಲ್ಲ ಎಲ್ಲಿ ಹೋಗಿದ್ದಾರೆ ?"


"ಸಾರ್ ...
ಇಲೆಕ್ಷನ್ ಅಲ್ವಾ ? ಅದಕ್ಕೆ ಯಾರೂ ಇಲ್ಲ..."


"ಏನ್ರೀ ಇದು ?
 ಬಿಬಿಎಂಪಿ ಚುನಾವಣೆಗೂ ನಮ್ಮ ಕೆಲಸಕ್ಕೂ ಏನ್ರೀ ಸಂಬಂಧ ?"


"ಸಾರ್..
ಎಲ್ಲಾ ಚುನಾವಣೆ ಪ್ರಚಾರಕ್ಕೆ..ಹೋಗಿದಾರೆ..

ಒಬ್ಬಬ್ಬರಿಗೆ .. ಒಂದು ದಿನಕ್ಕೆ
ಐದು ನೂರು ಕೊಡ್ತಾರೆ..
ಬೆಳಿಗ್ಗೆ ನಾಷ್ಟಾ... ಮಧ್ಯಾಹ್ನ ಬಿರ್ಯಾನಿ ಊಟ...
ಮಧ್ಯದಲ್ಲಿ ಕುಡಿಲಿಕ್ಕೆ ಪೆಪ್ಸಿ... ಕೋಲಾ...
ರಾತ್ರಿ ಮತ್ತೆ ಬಿರ್ಯಾನಿ ಊಟ...
ಮತ್ತೆ ಎಣ್ಣೆ...!!
 ಅದು ಬೇಕಾದಷ್ಟು...!!... !.."

"ಎಣ್ಣೆ..... ??.. !!.."

"ಅದೇ... ಸಾ...! ಸರಾಯಿ... ಹೆಂಡ...!
ನಾವು ಗಾರೆ ಮೇಸ್ತ್ರಿಗೆ ಕೊಡೋದು ಮುನ್ನುರೈವತ್ತು...
ಯಾರು ಬರ್ತಾರೆ ಈ ಕೆಲಸಕ್ಕೆ?
ಇನ್ನು ಕೆಲಸ ಏನೇ ಇದ್ರೂ ಒಂದುವಾರದ  ನಂತರ...
ಅದೂ ರಾಜಕೀಯದವರು ಕೊಟ್ಟ...
ಹಣ, ಹೆಂಡ ಖರ್ಚಾಗಿದ್ದರೆ ಮಾತ್ರ !! "
ನನಗೆ ಬೇಸರವಾಯಿತು...



"ನೀನು... ಒಬ್ಬ ಇಲ್ಲಿ ಯಾಕೆ ಇದ್ದೀಯಾ...?
ನೀನು ಯಾವುದಾದರೂ ಪಕ್ಷದ ಜೊತೆ ಹೋಗು ...!"


"ನನಗೆ ಎಲ್ಲಾ ರಾಜಕೀಯ ಪಕ್ಷನೂ ಒಂದೇ ಸಾರ್..!
ಒಂದೊಂದು ದಿನ ಒಂದೋಂದು ಪಕ್ಷದ  ಪ್ರಚಾರಕ್ಕೆ  ಹೋಗ್ತೀನಿ.....!"

"ಹೌದಾ... ?"
"ಹೌದು ಸಾ...!!. ಇಲ್ನೋಡಿ...
ಇದು ಎಲ್ಲಾ ಪಕ್ಷಕ್ಕೂ ಆಗುವಂಥಹ ಶಾಲು..!!.! "

ನಾನು ನೋಡಿದೆ...
ನಮ್ಮ ದೇಶದ ಧ್ವಜದ ಬಣ್ಣದ ಶಾಲು...!
ಕೇಸರಿ, ಬಿಳಿ, ಹಸಿರು ಬಣ್ಣದ್ದು...
ನನಗೆ ಅರ್ಥವಾಗಲಿಲ್ಲ...


"ಇದು ಎಲ್ಲ ಪಕ್ಷಕ್ಕೂ... ಹೇಗೆ ಸರಿ ಹೋಗ್ತದೆ ...?"


"ಇದು.. ತುಂಬಾ ಸಿಂಪಲ್ಲು ಸಾ...
ಸೋನಿಯಾಗಾಂಧಿಯವರದ್ದು... ಚರ್ಚು.. ಬಿಳಿ ಬಣ್ಣ...!
ಕಾಂಗ್ರೆಸ್ಸಿಗೆ... ಬಿಳಿ ಬಣ್ಣ...
ಇದಕ್ಕೆ ಸ್ವಲ್ಪ ಕೇಸರಿ, ಹಸಿರು..  ಕಂಡರೂ ಅಡ್ಡಿಯಿಲ್ಲ  ಸಾ...!"

"ಏನಪ್ಪಾ  ಇದು...?"


ಇಲ್ನೋಡಿ  ಸಾ...
ಬಿಜೇಪಿದು  ದೇವಸ್ಥಾನ... !
ಕೇಸರಿ ಬಣ್ಣ...
ಇವರಿಗೆ  ಉಳಿದ ಎರಡು ಬಣ್ಣ ಸ್ವಲ್ಪ, ಸ್ವಲ್ಪ ಕಂಡರೆ  ಪರವಾಗಿಲ್ಲ  ಸಾ..."
ಇನ್ನು..
ದಳಕ್ಕೆ  ...ಮಸೀದೆ..ಕಂಡರೆ  ಪ್ರೀತಿ...!
ಮತ್ತೆ... ರೈತರ ಬಣ್ಣ ಹಸಿರು...!
ಇವರಿಗೂ ಅಷ್ಟೇ... ಆ  ಕಡೆ.. ಈಕಡೆ....ಬಣ್ಣ..
 ಸ್ವಲ್ಪ  ಸ್ವಲ್ಪ ಕಂಡರೆ ಪರವಾಗಿಲ್ಲ  ಸಾ...
ನಾನು...
ಯಾವ ಪಕ್ಷಕ್ಕೆ ಹೋಗ್ತೀನೊ...
 ಅವತ್ತು ಶಾಲು ಮಡಚಿ ...
ಅವರ  ಬಣ್ಣ ಎದುರಿಗೆ ಕಾಣುವ ಹಾಗೆ ಹಾಕೋತೀನಿ..."
ತುಂಬಾ ಸಿಂಪಲ್ಲು ಸಾ..."

"ನೀನು ಬುದ್ಧಿವಂತ ಕಣಪ್ಪಾ,,,!"
 "ಇನ್ನೊಂದು  ವಿಷ್ಯ ಗೊತ್ತಾ  ಸಾ...?
ಇವರ ಎಲ್ಲಾರ ಬಣ್ಣಾನೂ  ಅಸಲಿಗೆ  ಒಂದೆ  ಸಾರ್...!! "

"ಇದೆಲ್ಲಾ ಸರಿ... ವೋಟ್  ಯಾರಿಗೆ  ಹಾಕ್ತಿಯಾ...?"
"ಸಾ...
ಎಣ್ಣೆ  ಮೇಲೆ ಆಣೆ ಮಾಡಿ ಹೇಳ್ತೀನಿ...

ಯಾರಿಗೂ  ಮೋಸ ಮಾಡೋದಿಲ್ಲ  ಸಾ...
ಎಲ್ಲರಿಗೂ ವೋಟ್  ಹಾಕ್ತೀನಿ...
ಇಲ್ಲಾ ಅಂದ್ರೆ ...
 ಅವತ್ತು  ವೋಟ್ ಹಾಕ್ಲಿಕ್ಕೇ... ಹೋಗೋದಿಲ್ಲ...
ನನ್ನ ಒಬ್ಬನ ವೋಟಿಂದ   ಏನೂ ಆಗೋದಿಲ್ಲ  ಸಾರ್..!!
ಗೆಲ್ಲವರು  ಗೆಲ್ತಾರೆ... ಸೋಲುವವರು..  ಸೋಲ್ತಾರೆ...!! "

ಅಲ್ಲಿಯೇ ಇದ್ದ ಸತ್ಯ ನನ್ನ ಭುಜದ ಮೇಲೆ ಕೈ ಹಾಕಿದ...


" ನಮ್ಮ ದೇಶದಲ್ಲೇ ಅಲ್ಲವಾ...
 ಲಾಲ್ ಬಹಾದೂರ್ ಶಾಸ್ತ್ರಿ..
ಗಾಂಧಿ ತಾತ,
ಗುರ್ಜಾರಿಲಾಲ್ ನಂದ ಹುಟ್ಟಿರೋದು...?"


ನನಗೆ ಮುಂದೆ ಮಾತನಾಡುವ ಉತ್ಸಾಹ ಇರಲಿಲ್ಲ...
ಸತ್ಯ ನಮಗೆಲ್ಲ ಉತ್ಸಾಹ ತುಂಬಲು ಮತ್ತೆ ಅವನೇ ಹೇಳಿದ...


"ನೋಡ್ರೋ...
ಯಾವುದು ಯಾವಾಗ ಆಗಬೇಕೋ...
 ಅದು ಆವಾಗಲೇ ಆಗುತ್ತದೆ..!
ಈಗ ಬೇಸರ ಯಾಕೆ ?
ಇನ್ನು ಒಂದು ವಾರ ರಜೆ..
ನಾಳೆ ಐಪಿಎಲ್ ಪಂದ್ಯ ಇದೆ..
ನಾನು ಟಿಕೆಟ್ ಬುಕ್ ಮಾಡ್ತೀನಿ ...
ಎಲ್ಲರೂ ಹೋಗಿ ಬರೋಣ...!! "


ಅಲ್ಲಿಯೇ ಇದ್ದ ನಾಗು ಸುಮ್ಮನಿರಲಾಗಲಿಲ್ಲ...


"ಈ ...ಐಪಿಎಲ್ ಒಂಥರಾ...
 ರಾಮ ರಾವಣರ ಯುಧ್ಧದ ಹಾಗೆ ಕಣ್ರೋ..!!..."

"ರಾಮಾಯಣದ ಯುದ್ಧದ ಹಾಗಾ.!!.?"


"ನೋಡ್ರೋ...
 ರಾಮ, ರಾವಣರ ಯುದ್ಧದಲ್ಲಿ... ಸತ್ತವರು  ಯಾರು  ?
 ಚಂದವಾಗಿ ಬೆಟ್ಟದಲ್ಲಿ.. ಹಾಯಾಗಿದ್ದ ಕಪಿಗಳು ..!
ವಿನಾಕಾರಣ ಸತ್ರು...!
ಈ.. ರಾವಣ...
 ರಾಮನ ಹೆಂಡತಿ ಎತ್ತುಕೊಂಡು ಹೋಗಿದ್ರೆ...
 ಈ ಮರದಿಂದ ಮರಕ್ಕೆ ಹಾರೋ ಕಪಿಗಳಿಗೆ ಏನಾಗ ಬೇಕಿತ್ತೊ.  !!  ??...."


"ಏನೂ ಇಲ್ಲ..!!.."


"ಇದೂ ಕೂಡ ಹಾಗೆ...!
ಬೆಂಗಳೂರು ಟೀಮು ಅಂತಾರೆ..!
 ಇಲ್ಲಿಯವರು ಮೂರು ಜನ ಇರ್ತಾರೆ..!
 ಉಳಿದವರು ಯಾರೋ...? ಏನೋ..!
ನಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲ...
ಹುಚ್ಚರ ಹಾಗೆ...
 ಟೈಮ್ ವೇಸ್ಟ್ ಮಾಡಿಕೊಂಡು ಟಿವಿ ಮುಂದೆ ಕುಳಿತಿರ್ತೀವಿ.....
ನಾವೆಲ್ಲಾ ರಾಮಾಯಣದ  ಕಪಿಗಳು  ಕಣ್ರೋ...! "


"ಅದಕ್ಕೆನಿಗ..?.."

ನಾವು ಹುಚ್ಚರು ಕಣ್ರೋ...
ನಮ್ಮ ಬೆಂಗಳೂರು ಟೀಮು ಅಂತ ಕುಣಿತಿವಿ...
ಅರಚ್ತಿವಿ...
ಎಷ್ಟು ಜನ ಕರ್ನಾಟಕದ ಆಟಗಾರರು ಇದ್ದಾರೆ ಅಲ್ಲಿ?
ಹುಚ್ಚರ ಮದುವೆಯಲ್ಲಿ ಉಂಡವನೇ..ನೇ ಜಾಣನಂತೆ...



"ಲೋ...
ನಾಗು ಹಾಗಲ್ವೋ..!
ಇಂಥಹ ಈವಂಟ್ ಗಳಿಂದ ಹಣ ಮಾರ್ಕೆಟ್ಟಿನಲ್ಲಿ ಓಡಾಡ್ತದೆ.. "


"ನೋಡ್ರೋ...
ಈ ಐಪಿಎಲ್ ನಿಂದ...
ಮಲ್ಯನ ಹೆಂಡ ಖರ್ಚಾಗ್ತದೆ...!
ಪೆಪ್ಸಿ, ಕೋಕಾಕೋಲದಂಥಹ ಪಾನೀಯ ಮಾರಾಟ ಆಗ್ತದೆ...!.
ಅಲ್ಲಿ ಬರುವ ಜಾಹಿರಾತುಗಳು...
ಆ ಆಟದ ಪ್ರಾಯೋಜಕರು  ಎಲ್ಲವು  "ವಿದೇಶಿ" ಕಂಪನಿಗಳು...!
ಒಂದಷ್ಟು ಮಕ್ಕಳು ಪರೀಕ್ಷೆಯಲ್ಲಿ ಸರಿಯಾಗಿ ಓದದೆ ಕಡಿಮೆ ಮಾರ್ಕ್ಸ್ ತಗೋತಾರೆ....
ಒಂದಷ್ಟು ಅಪ್ಪಂದಿರು  ಮಕ್ಕಳಿಗೆ  ಕ್ರಿಕೆಟ್ ಬ್ಯಾಟು ಕೊಡಸ್ತಾರೆ...
ಕ್ರಿಕೆಟ್ ಕೊಚಿಂಗಿಗೆ   ಕಳಸ್ತಾರೆ...
ಬಿಸಿಸಿಐ ನವರು,
ಟಿವಿಯವರು ಕೊಳೆಯುವಷ್ಟು ಹಣ ಮಾಡ್ಕೋತಾರೆ.."


"ಇದಕ್ಕೆ ಪರಿಹಾರ ??"

"ನಾವು ಬದಲಾಗ ಬೇಕು...
ಇದು ಸಧ್ಯಕ್ಕೆ..ಸಾಧ್ಯವಾಗದ ಮಾತು...
ಒಂದು ಮಜಾ  ವಿಷಯ ಹೇಳ್ತೀನಿ  ಕೇಳಿ...

ಒಬ್ಬನಿಗೆ ಹುಚ್ಚು ಇತ್ತು..
ಹಾಗಾಗಿ ಮದುವೆ ಆಗಲಿಲ್ಲ...
 ಆ ಊರಿನ ಡಾಕ್ಟರ್ ಹೇಳಿದ್ರು
"ಇವನಿಗೆ ಮದುವೆ ಹುಚ್ಚು ಇದೆ..
ಹುಚ್ಚು ಬಿಡಲಿಕ್ಕೆ ಮದುವೆ  ಆಗಬೇಕು..."
ಆದರೆ ಆ ಹುಚ್ಚನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರ್ಲಿಲ್ಲ..."


"ಅಂದ್ರೆ...??"


"ಹುಚ್ಚು ಬಿಟ್ಟಂತೂ ಮದುವೆ ಆಗೋದಿಲ್ಲ...
ಮದುವೆ ಆದಂತೂ ಹುಚ್ಚು ಬಿಡೋದಿಲ್ಲ...
ನಮ್ಮ  ಕಥೇನೂ.. ಅದೇ... ಕಣ್ರೋ...!
ನಾವೂ ಬದಲಾಗೋದಿಲ್ಲ..
ನಮ್ಮ ರಾಜಕಿಯದವರೂ ಬದಲಾಗೋದಿಲ್ಲ..!



ಅಷ್ಟರಲ್ಲಿ ಒಂದಷ್ಟು ನೂರು ಜನರ ಗುಂಪು ಬಂದಿತು...
" .... ..  ಪಕ್ಷಕ್ಕೇ ಜಯವಾಗಲಿ...
ನಮ್ಮ ಪಕ್ಷ ಬಡವರ ಪಕ್ಷ...
ನಮ್ಮದು..ರೈತರ ಪಕ್ಷ...
ಅಭಿವೃದ್ಧಿಯ ಪಕ್ಷ..
ಬೆಂಗಳೂರಿನ ಅಭಿವೃಧ್ಧಿಗೆ ನಮಗೆ ಮತ ನೀಡಿ..."


ಮೈಕಿನಲ್ಲಿ ಒಬ್ಬ ಜೋರಾಗಿ  ಕೂಗುತ್ತಿದ್ದ...


ಹಿಂದೆ ಇರುವ ಜನರೆಲ್ಲ ಜೈಕಾರ ಹಾಕುತ್ತಿದ್ದರು.....

ನಾನು ಸತ್ಯ...
ನಾಗು... ನಿಂತು ಸುಮ್ಮನೇ ನೋಡುತ್ತಿದ್ದೆವು...





( ಇಲ್ಲಿ ಬರೆದದ್ದು  ಶಿಖಾಮಣಿಯ ಮುಗ್ಧ ಮಾತುಗಳು...
ದಯವಿಟ್ಟು ಎಲ್ಲರೂ..
 ಇದ್ದಿದ್ದುದರಲ್ಲೇ ಯೋಗ್ಯರಾದವರಿಗೆ  ಮತ ಹಾಕಿ...)

Wednesday, March 17, 2010

ಇಷ್ಟಾರ್ಥ.......

ನಿಮಗೊಂದು ವಿಷಯ ಹೇಳಿ  ಬಿಡಬೇಕು...


ನಾನು ಆಸ್ತಿಕನಲ್ಲ...


ದೇವರು ಇದ್ದಾನೆಯೆ...?


ಇಲ್ಲವೆ...?


ಎರಡಕ್ಕೂ ಉತ್ತರ ಪ್ರಶ್ನಾರ್ಥಕ ಚಿಹ್ನೆಗಳೇ....!



ದೇವರ ಬಗ್ಗೆ ಏನೂ ಗೊತ್ತಿಲ್ಲ...



ಹಾಗಾಗಿ ನಾನು  ದೇವರನ್ನು ಪೂಜಿಸುವದಿಲ್ಲ...


ಪ್ರಾರ್ಥಿಸುವದಿಲ್ಲ...


ಕಳೆದ ವರ್ಷ ನನ್ನ ಕಾರ್ ಅಪಘಾತದಲ್ಲಿ ಸಾಯುತ್ತ.. ಸಾಯುತ್ತ ಬದುಕಿದೆ...


ಆಗಲೂ ಸಹ  ನಾನು ದೇವರನ್ನು ಪ್ರಾರ್ಥಿಸಿಲ್ಲ...


ನನ್ನ ಇಲ್ಲಿಯವರೆಗಿನ ಬದುಕಲ್ಲಿ ಎಷ್ಟೇ ಕಷ್ಟ, ನೋವು ಬಂದರೂ...
ನನಗೆ ದೇವರನ್ನು ಬೇಡಿಕೊಳ್ಳಬೇಕು ಅಂತ ನನಗೆ ಅನ್ನಿಸಿಯೇ ಇಲ್ಲ...


ಅಪರಾಧಿ ಮನೋಭಾವನೆ ದೈವ ಭಕ್ತಿಗೆ ಕಾರಣ ಅನ್ನುವದು ನನ್ನ ಬಲವಾದ ನಂಬಿಕೆ..


ನಾವು ನಮ್ಮ ಮನಸಾಕ್ಷಿಗೆ, ತಕ್ಕಂತೆ..
ಯಾರಿಗೂ ಅನ್ಯಾಯ.., ತೊಂದರೆ ಮಾಡದೇ ಬದುಕಿದ್ದಲ್ಲಿ...
ದೇವರ ಅವಶ್ಯಕತೆ ಇಲ್ಲವೆನ್ನುವದು ನನ್ನ ಸ್ಪಷ್ಟವಾದ  ಅಭಿಪ್ರಾಯ..


ಆದರೆ ನನ್ನ ಹೆಂಡತಿ ಬಹಳ ದೈವ ಭಕ್ತೆ....


ಹರಕೆ, ಉಪವಾಸ, ಭಜನೆ ಎಲ್ಲವನ್ನೂ ಮಾಡುತ್ತಾಳೆ...


ಸಿಹಿ ತಿಂಡಿಗಳನ್ನು ರುಚಿಕಟ್ಟಾಗಿ ಮಾಡಿ..
ನೈವೇದ್ಯ ಮಾಡಿ.. ನನಗೂ ಬಡಿಸುತ್ತಾಳೆ...


ಇದಕ್ಕೆಲ್ಲ ನನ್ನ ಅಭ್ಯಂತರ ಏನೂ ಇಲ್ಲ...


ಇಂದೂ ಸಹ ಬೆಳಿಗ್ಗೆ ದೇವರ ಪೂಜೆ ಮಾಡಿಯೇ ನಾಷ್ಟಾಕ್ಕೆ ತಯಾರಿ ಮಾಡುತ್ತಿದ್ದಳು..


ನನಗೆ ತಡವಾಗುತ್ತಿತ್ತು...
ಕೋಪ, ಸಿಟ್ಟು, ಟೆನ್ಷನ್    ......!


ಆದರೆ ನಾನು ನನ್ನ ಹೆಂಡತಿಗೆ ಬಯ್ಯುವದಿಲ್ಲ...
ನನ್ನಾಕೆಗೆ ಬಯ್ಯಲು, ಕೂಗಲು ನನ್ನಿಂದ ಆಗುವದಿಲ್ಲ..


ಯಾಕೆ ಅಂತ ಕೇಳ ಬೇಡಿ.. ಅದು ನನ್ನ ದೌರ್ಬಲ್ಯ...


ಅಷ್ಟರಲ್ಲಿ ಫೋನ್ ರಿಂಗಾಯಿತು...


"ಹಲ್ಲೋ..."


ನನ್ನ ತಂಗಿ ಅಳುತ್ತಿದ್ದಳು...


"ನಾನು ಅಣ್ಣಾ... ...
ಅಮ್ಮನಿಗೆ ಹಾರ್ಟ್ ಎಟಾಕ್ ಆಗಿದೆ.. ಜಲ್ದಿ ಬಾ ಅಣ್ಣಾ..
ಅಮ್ಮ ನಿನ್ನ ಹೆಸರು ಹೇಳ್ತಿದ್ದಾಳೆ...
ಅಪರೇಷನ್ ನಡಿತಾ ಇದೆ...
ಡಾಕ್ಟ್ರೂ... ಭರವಸೆ ಕೊಡುತ್ತಿಲ್ಲ...
ಬೇಗ...ಬಾ ಅಣ್ಣ..."


" ಅಯ್ಯೋ ..!!
ಇದೇನಮ್ಮ...!!
ಧೈರ್ಯವಾಗಿರಮ್ಮ..
ಅಮ್ಮನಿಗೆ ಏನೂ ಆಗುವದಿಲ್ಲ.. ನಾನು ಈಗಲೇ ಹೊರಟೆ..."


ನಾನು ಕಂಗಾಲಾದೆ...


ದುಃಖವಾಗುತ್ತಿತ್ತು...
ಮುಂದೆ ಏನು ಮಾಡ ಬೇಕೆಂದು ಸೂಚಿಸುತ್ತಿಲ್ಲ..
ಹೆಂಡತಿಗೆ ಹೇಳಿದೆ....


"ಅಮ್ಮನಿಗೆ ಹಾರ್ಟ್ ಎಟಾಕ್ ಆಗಿದೆ... ಆಸ್ಪತ್ರೆಯಲ್ಲಿದ್ದಾಳೆ..
ಅಪರೇಷನ್ ನಡಿತಾ ಇದೆಯಂತೆ....
ನಾವೆಲ್ಲ ಬೇಗ... ಹೊರಡೋಣ..."


" ನಾನು, ಪಾಪು ಯಾಕೆ ಬರಬೇಕು..?
ಪಾಪುಗೆ ಪರಿಕ್ಷೆ  ಬೇರೆ..ಹತ್ತಿರ ಬರ್ತಾ ಇದೆ. ...
ಅತ್ತೆಗೆ ಏನೂ ಆಗುವದಿಲ್ಲ..ಬಿಡ್ರಿ...


ನೀವೂ, ನಿಮ್ಮ ತಂಗಿಯೂ ....ಒಂದೇ ಥರಹದವರು...
ಇಲಿ ಹೋಯ್ತು ಅಂದ್ರೆ ಹುಲಿ ಹೋಯ್ತು ಅನ್ನುತ್ತೀರಿ..


ನಾನು ಪಾಪು ಬರುವದಿಲ್ಲ..
ನೀವು ಅಲ್ಲಿಗೆ ಹೋಗಿ ಫೋನ್ ಮಾಡಿ.
ಅವಶ್ಯಕತೆ ಇದ್ದಲ್ಲಿ ನಾವು ಬರ್ತೇವೆ.."


ಇಲ್ಲಿ ಅವಶ್ಯಕತೆ ಅಂದರೆ ಅಮ್ಮನ ಸಾವು ಅಂತ ಅರ್ಥ ಇರಬಹುದಾ...?


ಯಾಕೋ ಇದರ ಬಗೆಗೆ ಹೆಚ್ಚು ಮಾತಾನಾದಬೇಕೆಂದು ಅನ್ನಿಸಲಿಲ್ಲ...


ನಾನು ಬೇಗ ಬೇಗನೆ ತಿಂಡಿ ತಿಂದ.. ಶಾಸ್ತ್ರ ಮಾಡಿಕೊಂಡು ಹೊರಟೆ...


ಸ್ವಲ್ಪ ದಿನಗಳ ಹಿಂದೆ... ನನ್ನಮ್ಮ ನನ್ನ ಮನೆಯಲ್ಲಿಯೇ ಇದ್ದಳು...


ಕಳೆದವಾರ ನಾನೇ ....ನನ್ನ ತಂಗಿಯ ಮನೆಗೆ ಬಿಟ್ಟು ಬಂದೆ...


ತಂಗಿಯ ಮನೆಗೆ ಹೋಗುವ ಅನಿವಾರ್ಯತೆ ಎದುರಾದದ್ದು ನನ್ನ ಘನತೆಗೆ ತಕ್ಕುದುದಲ್ಲ...


ಅಂದು ರಾತ್ರಿ....ನಡೆದದ್ದು  ಇಷ್ಟೆ...


ನಾವೆಲ್ಲ ಊಟ ಮಾಡುವಾಗ ಪಾಪು ಬಂದು ...
ನಮ್ಮ ಹತ್ತಿರ ತನಗೂ ಬೇಕು ಅಂತ ಹಠ ಮಾಡುತ್ತಿದ್ದ..


ನನ್ನಮ್ಮ ಅವನಿಗೆ ಒಂದು ಕೈ ತುತ್ತು ತಿನ್ನಿಸಿ ಬಿಟ್ಟಳು..


ನನ್ನಾಕೆಗೆ ಇದೆಲ್ಲ ಈಷ್ಟವಾಗುವದಿಲ್ಲ...


"ಒಬ್ಬರ ಎಂಜಲು ಮತ್ತೊಬ್ಬರು ತಿನ್ನ ಬಾರದು..!
ಅದರಿಂದ ರೋಗ ಬರುತ್ತದೆ..!
ಇಷ್ಟು ಗೊತ್ತಾಗೋದಿಲ್ವಾ...
ಛೇ...
ಇದೆಲ್ಲಾ ....ಅನಾಗರಿಕತೆ...!! ..."


ಅಗತ್ಯಕ್ಕಿಂತ ಖಾರವಾಗಿ ನನ್ನಮ್ಮನ ಮೇಲೆ ಸಿಡುಕಿದಳು...


"ಅಯ್ಯೊ....
ನನ್ನ ಮಗ ಸಣ್ಣವನಿದ್ದಾಗ ...
ಮನೆಯಲ್ಲಿ ಎಲ್ಲರೂ ಇವನಿಗೆ ಕೈ ತುತ್ತು ತಿನ್ನಿಸಿದವರೇ...
ಏನಾಗಿದೆ ಇವನಿಗೆ....?
ಚೆನ್ನಾಗಿಯೇ ಇದ್ದಾನಲ್ಲ...
ಕೈ ತುತ್ತಿನಲ್ಲಿರೋ ಪ್ರೀತಿಯೇ  ಬೇರೆ...."


ಎನ್ನುತ್ತ ಅಮ್ಮ ನನ್ನ ಮುಖ ನೋಡಿದಳು..


"ಅಮ್ಮಾ...
ಆಗಿನ ಕಾಲದಂತೆ ಈಗಿನ ಕಾಲವಿಲ್ಲ...
ಮತ್ತೆ ಹಾಗೆ ತಿನ್ನಿಸ ಬೇಡಮ್ಮ... ಪ್ಲೀಸ್...."


ಅಮ್ಮನಿಗೆ ಬೇಸರವಾಯಿತು ಅನ್ನಿಸುತ್ತದೆ...
ಅರ್ಧ ಊಟಮಾಡಿ ಎದ್ದು ತನ್ನ ರೂಮಿಗೆ ಹೋದಳು..


ಪಾಪು ಮತ್ತೆ ಗಲಾಟೆ ಶುರು ಮಾಡಿದ...


" ನಾನು ಅಜ್ಜಿ   ಹತ್ತಿರ ಮಲಗ್ತೀನಿ...
ನಂಗೆ ಅಜ್ಜಿಯ ಕಥೆ ಬೇಕು..."


ನನ್ನಾಕೆಗೆ ರೇಗಿ ಹೋಯಿತು...


"ನಿಮ್ಮ ಅಮ್ಮ ಹೇಳುವ ಅಡುಗೂಲಜ್ಜಿ ಕಥೆಗೆ....
ಕಾಲಿಲ್ಲ.. ಕೈಯಿಲ್ಲ...


ಎಲ್ಲವೂ ದೇವರ ಕಥೆ...!
ಮನುಷ್ಯ ಪ್ರಯತ್ನ ಮಾಡಬೇಕು ಎಂದೆಲ್ಲ ಇರುವದೇ ಇಲ್ಲ...!


ಎಲ್ಲವನ್ನೂ ದೇವರು ಬಂದು ಮಾಡಿಕೊಡುತ್ತಾನೆ...!


ನನ್ನ ಮಗ ಹಳ್ಳಿ ಹುಡುಗನಾಗಿ ಬಿಡುತ್ತಾನೆ...!
ದಡ್ದನಾಗಿ...
ಗಮಾರನಾಗಿ... ಬಿಡುತ್ತಾನೆ...!!.."


ಈಗ ನನಗೆ ಕೋಪ ಬಂತು...


"ಯಾಕೆ ಹೀಗೆಲ್ಲ ಅಂತೀಯಾ..?? ...
ನಾನೂ ಹಳ್ಳಿಯವನೆ...


ನಾನೂ ಸಹ ನನ್ನಮ್ಮನ ಕಥೆ ಬೆಳೆದು ದೊಡ್ಡವನಾಗಿಲ್ಲವಾ...?


ಅಂಥಹ ಕುಗ್ರಾಮದಿಂದ ಬಂದು ...
ಈ ಬೆಂಗಳೂರಲ್ಲಿ ನೆಲೆ ಕಂಡು ಕೊಳ್ಳಲಿಲ್ಲವಾ...?


ದೇಶ , ವಿದೇಶ ಸುತ್ತಲಿಲ್ಲವಾ...?


ಎಂಥಹ ಮಾತು ಅಂತ ಆಡ್ತೀಯಾ...?
ಸ್ವಲ್ಪ ಸುಮ್ಮನಿರು.."


"ನಿಮ್ಮ ಸಾಧನೆ ನಾನು ಕಂಡಿಲ್ಲವಾ..?.?


ಈ ಬೆಂಗಳೂರಲ್ಲಿ ಒಂದು ಮನೆ ಮಾಡಲಿಕ್ಕಾಯ್ತಾ.. ನಿಮ್ಮ ಹತ್ತಿರ...?


ನಮ್ಮ ಪಾಪುಗೆ ಡೆಲ್ಲಿ ಪಬ್ಲಿಕ್ ಸ್ಕೂಲಲಲ್ಲಿ ...
ಒಂದು ಸೀಟು ತಗೊಳ್ಳಿಕ್ಕೆ ಆಯ್ತಾ ನಿಮ್ಮ ಹತ್ತಿರ..?.?


ನನ್ನ ಅಪ್ಪನ ಹತ್ತಿರ ಹಣ ತಂದು ನನ್ನ ಮಗನಿಗೆ ಸ್ಕೂಲ್ ಸೇರ್ಸಿದ್ದೇನೆ.!!.


ಈಗ ತೆಗೆದು ಕೊಂಡಿರೋ.. ಸೈಟು..
ನನ್ನ ಅಪ್ಪನ ಹಣದಿಂದ ..!!...


ನನ್ನ ಮಗ ನಿಮ್ಮಂತೆ ಆಗುವದು ಬೇಡ.."


ಎನ್ನುತ್ತ ಪಾಪುವನ್ನು ಎತ್ತಿಕೊಂಡು ರೂಮಿಗೆ ಹೋಗಿ ದಢಾರನೆ ಬಾಗಿಲು ಹಾಕಿಕೊಂಡಳು...


ಹೆಂಗಸರ ಮಾತು ಬಾಣದಂತೆ ಇರಿದು ಬಿಡುತ್ತವೆ....
ಹರಿತವಾಗಿ...
ಕ್ರೂರವಾಗಿ..
ನಿರ್ದಯವಾಗಿ....!


ಇಂಥಹ ಕ್ಷಣಗಳು ಯಾಕಾದರೂ ಬರುತ್ತದೆ..?
ತುಂಬಾ.. ಅಸಹ್ಯವಾದ.. ಅಸಹನೀಯ ಕ್ಷಣಗಳು...!.


ನನ್ನಮ್ಮನೂ .. ಹಠ ಹಿಡಿದಳು...


"ನಾನು ಮಗಳ ಮನೆಗೆ ಹೋಗುತ್ತೆನೆ..
ಇಲ್ಲಿ ನನ್ನ ಅಗತ್ಯ ಯಾರಿಗೂ ಇಲ್ಲ..
ಇಲ್ಲಿ ನನಗೆ ಇರಲು ಆಗುವದಿಲ್ಲ..."


ದೇವರೆ...!
ಯಾಕಾದರೂ ಇಂಥಹ ಸ್ಥಿತಿ ತಂದಿಡುತ್ತೀಯಾ...?


ಇತ್ತ ಅಮ್ಮ...!
ಅತ್ತ ಹೆಂಡತಿ...!...
ಮಧ್ಯದಲ್ಲಿ ಏನೂ ಮಾಡಲಾಗದ ನನ್ನ ಅಸಾಹಯಕತೆ....!!


ಕೊನೆಗೂ.. ಅಮ್ಮನ ಹಠವೇ ಗೆದ್ದಿತು...
ಮರುದಿನ ಬೆಳಿಗ್ಗೆಯೇ.. ಅಮ್ಮನನ್ನು ತಂಗಿಯ  ಬಿಟ್ಟು ಬಿಟ್ಟು ಬಂದೆ......

ಅದು ನನ್ನ ಅಸಹಾಯಕತೆ.. ದೌರ್ಬಲ್ಯದ  ಪರಮಾವಧಿ.....!


ಈಗ.. ಎಲ್ಲ ನೆನಪಾಗುತ್ತಿದೆ...


ನನಗೆ ದಿಕ್ಕು ತೋಚದಂತಾಯಿತು..


ನನ್ನ  ಅಮ್ಮ ಸತ್ತು ಹೋಗಿ ಬಿಡುತ್ತಾಳಾ...?


ಬಹಳ ಕಷ್ಟ ಪಟ್ಟು.. ನಮ್ಮನ್ನು ಬೆಳೆಸಿದ್ದಳು..


ಅವಳ ಬದುಕಿನ ಕೊನೆಯ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳ ಬೇಕಿತ್ತು...!
ಒಂದು ನೆಮ್ಮದಿಯ...
ಸಂತೃಪ್ತಿಯ ಸಾವು ಬರಬೇಕಿತ್ತು...!


ನನ್ನ ಬಗೆಗೆ ನನಗೇ... ಅಸಹ್ಯವೆನಿಸ ತೊಡಗಿತು....


ಹನಮಂತ ನಗರದ ಬಳಿ ಬಂದಿದ್ದೆ...


ಎದುರಿನ ತಿರುವಿನಲ್ಲಿ ಗಣಪತಿ ದೇವಸ್ಥಾನವಿದೆ...


ಯಾಕೊ... ಡ್ರೈವಿಂಗ್ ಮಾಡಲಾರೆ ಅನ್ನಿಸಿತು...


ಸ್ವಲ್ಪ ಹೊತ್ತು ಕಾರನ್ನು ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿಕೊಂಡೆ...


ಅಂದು ....
ತಂಗಿಯ ಮನೆಗೆ ಬಿಡಲು ಹೋದಾಗ ಅಮ್ಮ ಈ ದೇವಸ್ಥಾನಕ್ಕೆ ಹೋಗ ಬೇಕು ಎಂದಿದ್ದಳು..


"ನೋಡು ಪುಟ್ಟಾ..
ಈ ದೇವರು ತುಂಬಾ ಶಕ್ತಿ ದೇವರಂತೆ ..


ಇಲ್ಲಿ "ಇಷ್ಟಾರ್ಥ ಸಿದ್ಧಿ ಪೂಜೆ" ಅಂತ ಇದೆ..
ಆ ಪೂಜೆ ಮಾಡಿಸಿದರೆ ನಮ್ಮ ಆಸೆ ಎಲ್ಲವೂ ನೆರವೇರುತ್ತದಂತೆ...!
ಒಂದು ಸಾರಿ ಹೋಗಿ ಬರ್ತಿನೋ..."


"ಬೇಡಮ್ಮ..
ಇನ್ನೊಮ್ಮೆ ಹೋಗ ಬಹುದು..
ಈಗ ನನಗೆ ಆಫೀಸಿಗೆ ತಡವಾಗುತ್ತದಮ್ಮ...


ಅಮ್ಮಾ... ಒಂದು  ವಿಷಯ....."


" ಏನಪಾ ಪುಟ್ಟಾ...? "


"ನಮ್ಮನೆಯಲ್ಲಿ ನಡೇದ ಜಗಳ...
 ಅವಾಂತರದ ಬಗ್ಗೆ...
 ತಂಗಿಯ ಬಳಿ ಹೇಳ ಬೇಡಮ್ಮಾ... ಪ್ಲೀಸ್..."


"ಆಯ್ತು ಕಣಪ್ಪಾ...
ನಾನು ಯಾಕೆ ಹೇಳ್ಳೋ.. ಹೇಳುವದಿಲ್ಲ ಬಿಡು..."


ಅಮ್ಮ ಸುಮ್ಮನಾಗಿದ್ದರು...


ಮತ್ತೆ ತಂಗಿಯ ಫೋನ್...


" ಅಣ್ಣಾ...
ಅಣ್ಣಾ.. ಎಲ್ಲಿದ್ದೀಯಾ...?"

" ಹನುಮಂತ ನಗರದ ದೇವಸ್ಥಾನದ ಬಳಿ...
ಏನಾಯ್ತು...??..!!..?.."


" ಅಪರೇಷನ್ ನಡಿತಾ ಇದೆ...!
ನಮ್ಮವರು ಒಳ್ಳೆಯ ಸರ್ಜನ್ ಕರೆಸಿದ್ದಾರೆ....!
ಅಮ್ಮ ಬದುಕ ಬಹುದಂತೆ...!!!


"ಹೌದೇನೆ...?..!!.."

" ಹೌದು..ಅಣ್ಣಾ...
ಅಮ್ಮನಿಗೆ ಒಂದು ಆಸೆ ಇತ್ತು..
ನನ್ನ ಹತ್ತಿರ ಹೇಳಿಕೊಂಡಿದ್ದಾಳೆ..

"..ಏನು...?".

ನೀನು ಬರುವಾಗ...
ಇಷ್ಟಾರ್ಥ ಗಣಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸ್ಕೊಂಡು ಬಾ...
ಅವಳ ಆಸೆಯಂತೆ.. ಪ್ರಸಾದ ಸಿಕ್ಕಿದರೆ  ಸಂತೋಷ ಪಡುತ್ತಾಳೆ...
ಅಣ್ಣಾ...
ಇಲ್ಲ ಅನ್ನಬೇಡ..
ಅಮ್ಮನ ನಂಬಿಕೆಗೆ..
ನಮ್ಮ ಅಮ್ಮನ ಬದುಕಿಗಾದರೂ ಪೂಜೆ ಮಾಡಿಸ್ಕೊಂಡು ಬಾ...


ಅಮ್ಮನಿಗೊಸ್ಕರ ಪ್ರಸಾದ ತೆಗೆದು ಕೊಂಡು ಬಾ... ಪ್ಲೀಸ್.."



ನಾನು...
ನನ್ನ ತಿಳುವಳಿಕೆ ಬಂದಾಗಿನಿಂದ ದೇವಸ್ಥಾನಕ್ಕೆ ಹೋಗಿಲ್ಲ..


ತಂಗಿಯ ಆಗ್ರಹಕ್ಕೆ..
ಅಮ್ಮನ ನಂಬಿಕೆಗಾದರೂ ಹೋಗಲೇ.. ಬೇಕಿತ್ತು...

ನನ್ನ ಇಲ್ಲಿಯವರೆಗಿನ ನಂಬಿಕೆ...
ಜೀವನ ತತ್ವಗಳು...?


ಯೋಚಿಸಲು ಹೆಚ್ಚು ಸಮಯವಿಲ್ಲ..


ದೇವಸ್ಥಾನದ ಒಳಗೆ ಅಡಿಯಿಟ್ಟೆ...


ಮತ್ತೆ ಅಳುಕು...


ನಾನು ಸೋತು ಹೋಗುತ್ತಿರುವೆ ಎನ್ನುವ ಭಾವ...!


ಅಲ್ಲಿ ಗಲ್ಲ ಪೆಟ್ಟಿಗೆಯ ಪಕ್ಕದಲ್ಲಿ ಒಬ್ಬ ಕುಳಿತ್ತಿದ್ದ...


ಅವನ ದೊಡ್ಡ ಹೊಟ್ಟೆ ನೋಡಿ ನನಗೆ ಅಸಹ್ಯವಾಯಿತು...


ಎಷ್ಟು ಹಣ ನುಂಗಿರ ಬಹುದು ಈತ...?


ಇವೆಲ್ಲವೂ ಸುಳ್ಳು... ಬೂಟಾಟಿಕೆ...


ಈ ದೇವಸ್ಥಾನಗಳು ಸೋಮಾರಿಗಳನ್ನು ಸೃಷ್ಟಿಸುತ್ತದೆ..
ಒಳಗೂ...
ಹೊರಗೂ....


"ಇಷ್ಟಾರ್ಥ ಸಿದ್ದಿ ಪೂಜೆ ...ಮಾಡಿಸ ಬೇಕಿತ್ತು..."


"ಐವತ್ತು ರುಪಾಯಿ ಕೊಡಿ..."


ನಾನು ಕೊಟ್ಟೆ..


ಆತ ಒಂದು ಪಾವತಿ ಚೀಟಿ ಕೊಟ್ಟ..
ಗರ್ಭಗುಡಿಯ ಮುಂದೆ ಬಂದೆ.. ಆರತಿ ಬಟ್ಟಲು ಹಿಡುದು ಒಬ್ಬ ಪೂಜಾರಿ ಬಂದ..


ನಾನು ಚೀಟಿ ಕೊಟ್ಟೆ...


ಈ ದೇವರ ಬಗೆಗೆ...
ಜೀವನದಲ್ಲಿ ಮೊದಲ ಬಾರಿಗೆ ನನ್ನ ಮನಸಾಕ್ಷಿಗೆ ವಿರುದ್ಧವಾಗಿ ನಡೆದು ಕೊಳ್ಳುತ್ತಿದ್ದೆ....


ಏನೋ ಮಂತ್ರ ಹೇಳಿ..
ಗಂಟೆ ತೂಗಿ.. ಆರತಿ ತಟ್ಟೆ ನನ್ನೆದುರಿಗೆ ಹಿಡಿದ...


ಕೈಯಲ್ಲಿ ಹೂವು ಕೊಟ್ಟು..


" ನೋಡಿ ...
ನಿಮ್ಮ ಮನಸ್ಸಲ್ಲಿ ಏನಿದೆಯೊ...
 ಅದನ್ನು ಪ್ರಾರ್ಥಿಸಿ ಈ ಹೂವನ್ನು ದೇವರ ಪೀಠಕ್ಕೆ ಹಾಕಿ...
ನಿಮ್ಮ  ಮನಸ್ಸಿನ ಆಶಯ ನೆರವೇರುತ್ತದೆ..."


ನಾನು ಹೂವನ್ನು ಕೈಗೆ ತೆಗೆದು ಕೊಂಡೆ...


ನನ್ನ ಇಲ್ಲಿಯವರೆಗಿನ  ಬದುಕಲ್ಲಿ...
ನನ್ನಮ್ಮನಿಗೆ  ಮಾತ್ರ  ಕೈ ಮುಗಿದಿದ್ದೆ..


ಮತ್ತೆ  ಯಾರಿಗೂ  ಇಲ್ಲಿಯವರೆಗೆ ಕೈ ಮುಗಿದಿಲ್ಲ...


ಅಮ್ಮನ ಪ್ರೀತಿ..


ಅವಳ ನಗು...


ಅವಳ ಮಡಿಲು..


ಮಮತೆ... ವಾತ್ಸ್ಯಲ್ಯ... ಎಲ್ಲ ನೆನಪಾಯಿತು...


ನನ್ನಮ್ಮ ಇನ್ನೂ... ಬದುಕ ಬೇಕು...!


ನನ್ನಾಕೆಯೂ ನೆನಪಾದಳು...


ಮನೆಯ ಅಸಹ್ಯವಾತಾವರಣ ಬೇಡವೆಂದರೂ ನೆನಪಾಯಿತು...


ನಾನು ಕಣ್ಮುಚ್ಚಿದೆ...


ಕೈಯಲ್ಲಿ ಹೂವಿತ್ತು...


ಕೈ ಮುಗಿದೆ...


" ದೇವರೆ...


ನೀನು ಇದ್ದೀಯಾ...?


ಇದ್ದಿಯಾ ಎಂದರೆ...


ನನ್ನಮ್ಮನ ಇಲ್ಲಿಯವರೆಗಿನ  ವೃತ.... ಉಪವಾಸ..


ಅವಳ ಮುಗ್ಧ  ಪೂಜೆ...ಪುನಸ್ಕಾರ....


ಅವಳ ಅಗಾಧವಾದ ನಂಬಿಕೆ..


ಇದಕ್ಕಾದರೂ ಬೆಲೆ ಕೊಟ್ಟು...


ನನ್ನದೂ ಒಂದು ಪ್ರಾರ್ಥನೆ....


ನನ್ನಮ್ಮನನ್ನು ಬದುಕಿಸ ಬೇಡಪ್ಪಾ.....


ಈಗಲೇ..


ಹೀಗೆಯೇ...


ಅವಳನ್ನು ಕರೆದುಕೊಂಡು ಹೋಗಿಬಿಡು..!!!."


ನಾನು
ಕಣ್ಮುಚ್ಚಿಯೇ... ನಿಂತಿದ್ದೆ...


ಬೇಡವೆಂದರೂ...


ಕಣ್ಣಲ್ಲಿ ನೀರು ಬರುತ್ತಿತ್ತು...






ಅಷ್ಟರಲ್ಲಿ ಫೋನ್ ರಿಂಗಾಯಿತು...


ಅದು ತಂಗಿಯ ಫೋನ್......!





(ಇದು  ಕಥೆ....)
 
 

Monday, March 15, 2010

ನವ ಚೈತ್ರದ..ಚಿತ್ರದ..ಕನಸು..!


ಹಳೆ
ಹಣ್ಣೆಲೆ
ಉದುರಿ..
ಎಳೆ..
ಹಸಿರೆಲೆ
ಚಿಗುರಿ..
ಚಿಗಿಯುವ ....


ಸೃಷ್ಟಿ..
ಪ್ರಕೃತಿಯಲಿ...


ಕಳೆ..
ಕಳೆದ..
ವ್ಯರ್ಥ ದಿನಗಳ...
ಮರೆತು
ಹೊಸ
ಭರವಸೆಯ
ಹಾಸು..
ನವ ಚೈತ್ರದ..
ಚಿತ್ರದ..
ಕನಸು..
ನನಸಾಗಿ...


ಉಗಾದಿಯಾಗಲಿ.......


ಸರ್ವರಿಗೂ...


ಆತ್ಮೀಯ.
ಓದುಗರಿಗೆ... 
 ಯುಗಾದಿಹಬ್ಬದ  ಶುಭಾಶಯಗಳು....

Wednesday, March 10, 2010

ಬ್ಲಾಗ್ ಲೋಕದ "ಪರಿಣಯ..."!!

ಆತ...
ತುಂಬಾ ಒಳ್ಳೆಯ ಹುಡುಗ...
ಸ್ವಲ್ಪ ತುಂಟ...


ಆದರೆ ಸಭ್ಯ...


ಅವನದೂ ಒಂದು ಬ್ಲಾಗ್ ಇದೆ...

ಅವಳೂ...
 ತುಂಬಾ ಒಳ್ಳೆಯ ಹುಡುಗಿ...


ತುಂಬಾ ಚೆನ್ನಾಗಿ ಬರೆಯುತ್ತಾಳೆ...
ಅವಳ ಬರವಣಿಗೆಗೆ ಎಲ್ಲರೂ ತಲೆದೂಗುತ್ತಾರೆ...


ತುಂಬಾ ಜನಪ್ರಿಯ ಬ್ಲಾಗ್... ಇಬ್ಬರದ್ದೂ...

ಇನ್ನೇನು...?

ಪ್ರತಿಕ್ರಿಯೆ ಕೊಡುತ್ತ...  ಕೊಡುತ್ತ...

ಪರಿಚಯವಾಯಿತು...


ಪರಿಚಯದಿಂದ ಪ್ರೇಮ...!


ಈಗ ಮದುವೆಯೂ ಆಯಿತು...!
 ಮೊನ್ನೆ ಧರ್ಮಸ್ಥಳದಲ್ಲಿ...

ಇದೊಂದು ಬ್ಲಾಗ್ ಲೋಕದ "ಪರಿಣಯ..."!!

ಇಬ್ಬರೂ ತುಂಬಾ ಆತ್ಮೀಯತೆಯಿಂದ...
ಪ್ರೀತಿಯಿಂದ...
ನಮ್ಮನೆಗೆ ಬಂದು ಆಮಂತ್ರಣ ಕೊಟ್ಟಿದ್ದರು...
ಹೋಗಲಾಗಲಿಲ್ಲ...
ಇಂದಿನ  ಔತಣಕೂಟಕ್ಕೂ ಹೋಗಲಾಗುವದಿಲ್ಲ...


ಆ ಚಂದದ ಜೋಡಿಗೆ ಇಲ್ಲಿಂದಲೇ ಶುಭ ಹಾರೈಸೋಣ !


ಚಂದದ ಜೋಡಿ..
ಸಂತೋಷ್  ಚಿದಂಬರ್ ಹಾಗೂ.. ಚಿತ್ರಾ ಕರ್ಕೇರಾ....
ಇವರ ವೈವಾಹಿಕ  ಜೀವನ ಸಂತೋಷ, ಸುಖಮಯವಾಗಿರಲಿ.....

ಚಿತ್ರಾ...   ಬಿಡಿಸಿದ ಸಂತೋಷ ನ ಚಿತ್ರ.

ಅಂದು ನಮ್ಮನೆಗೆ 
ಹಾಸ್ಯ ನಾಟಕಗಳ ಸರದಾರ ..
"ಯಶವಂತ್ ಸರದೇಶಪಾಂಡೆ"  ಕೂಡ ಬಂದಿದ್ದರು..!
ಈ ಪ್ರೇಮಿ ಹಕ್ಕಿಗಳಿಗೆ ಅದು  ಆಶ್ಚರ್ಯದ "ಆಘಾತ"!!
ಅವರ ನಾಚಿಕೆ  ನೋಡಿ  ನಾವೆಲ್ಲರೂ    ನಕ್ಕಿದ್ದೆ.. ನಕ್ಕಿದ್ದು ...  !!!

                       ಸಂತೋಷನ ಹೃದಯದ ಚಿತ್ರಾ...!!
 
 
 
ಓದುಗರೇ...
ಇದು  ಬಹುಶಃ  ಬ್ಲಾಗ್ ಲೋಕದ ಮೊದಲ ಮದುವೆ...!
ಇಲ್ಲಿ ಜಾತಿ ಭೇದಗಳಿಲ್ಲ...
ಗುಂಪು, ಪಂಗಡಗಳಿಲ್ಲ .. ಅನ್ನುವದನ್ನು  
ಈ  ....
ಪುಟ್ಟ ಪ್ರೇಮಿ ಹಕ್ಕಿಗಳು ಸಾಬಿತು ಪಡಿಸಿದ್ದಾರೆ...!
 
ಈ ಜೋಡಿ..
ನೂರು ವರುಷ...
ಹರುಷದಿಂದ ಬಾಳಲಿ....
 
ನಮ್ಮೆಲ್ಲರ ಶುಭ ಹಾರೈಕೆಗಳು