Monday, December 24, 2012

" ನನ್ನ ಹತ್ಯೆಯನ್ನು... ನಾನು ಮಾಡಿಕೊಳ್ಳೋದಿಲ್ಲ....! "


ಆಗ ತಾನೇ ಹೊಸ ಮನೆ ಕಟ್ಟುವ ಕೆಲಸ ಶುರುಮಾಡಿದ್ದೆ....

ಬಿಸಿಲು ಜೋರಾಗಿತ್ತು...


ಸ್ವಲ್ಪ ದೂರದಲ್ಲಿ ಒಂದು ಬೇಕರಿ ಇತ್ತು...  ಏನಾದರೂ ಕುಡಿದು ಬರೋಣ ಅಂತ ಹೊರಟೆ...


ಅಲ್ಲಿ ಒಂದು ತಿರುವು...

ಒಬ್ಬಳು ಭಿಕ್ಷೆ ಬೇಡುವ ಮುದುಕಿ ಕುಳಿತಿದ್ದಳು...

ನಾನು ಫೋನಿನಲ್ಲಿ ಮಾತನಾಡುತ್ತ ಮುಂದೆ ಹೋಗುತ್ತಿದ್ದೆ...


"ಲೇ... ಬಾರೋ ಇಲ್ಲಿ....."


ಆಶ್ಚರ್ಯವಾಯಿತು...

ಆ ಮುದುಕಿ ನನಗೆ  ಜೋರಾಗಿ ಆವಾಜು ಹಾಕಿದ್ದಳು..

ಹತ್ತಿರ ಹೋದೆ..


"ಬೆಳಗಿನಿಂದ ಏನೂ ತಿಂದಿಲ್ಲ... ಕಾಸು ಕೊಡು...."


ಧ್ವನಿಯಲ್ಲಿ ಅಧಿಕಾರದ ದರ್ಪು ಇತ್ತು...


ಹಣ್ಣು ಹಣ್ಣು ಮುದುಕಿ...

ಹರಿದ ಸೀರೆ... ಮಣ್ಣು ಮಣ್ಣಾದ  ಕುಪ್ಪುಸ...

ಹಸಿವೆಯ ನಿಸ್ತೇಜ  ಕಣ್ಣುಗಳು..


ಕಿಸೆಗೆ ಕೈ ಹಾಕಿ ಐದು ರೂಪಾಯಿ ಕೊಟ್ಟೆ...


"ಐದು ರೂಪಾಯಿಗೆ ಏನೂ ಬರೋದಿಲ್ಲ ... 

ಇನ್ನೂ ಐದು ಕೊಡು..."

ನಾನು ಹತ್ತು ರೂಪಾಯಿ ಕೊಟ್ಟೆ...


"ನೀನು ಮುದುಕನಾದಾಗ ...

ನಿನ್ನನ್ನು ...
ನೋಡಿಕೊಳ್ಳುವವರು ಪ್ರೀತಿಯಿಂದ ನೋಡಿಕೊಳ್ಳಲಪ್ಪಾ..."

ನಾನು ಮಾತನಾಡದೆ ಸುಮ್ಮನೆ ಬಂದೆ....


ಮರುದಿನವೂ ಆ ಮುದುಕಿ ನನ್ನನ್ನು ಕರೆದು ಕಾಸು ಹಾಕಿಸಿಕೊಂಡಳು...


ಮೇಸ್ತ್ರಿ ಕೇಳಿದ...


"ಅಣ್ಣಾ...

ಆ ಮುದುಕಿಗೆ ತುಂಬಾ ಸೊಕ್ಕು ಆಲ್ವಾ? 
ಧಿಮಾಕಿನ ಮಾತನಾಡುತ್ತಾಳೆ .."

"ನಿನ್ನ ಬಳಿಯೂ ಹಣ ತೆಗೆದು ಕೊಂಡ್ಳಾ?...?"


"ಇಲ್ಲ ಅಣ್ಣಾ...

ತುಂಬಾ ವಿಚಿತ್ರ 
ಅವಳಿಗೆ ಅವಶ್ಯಕತೆ ಇದ್ದಾಗ ಮಾತ್ರ ಕೇಳುತ್ತಾಳೆ...

ಭಿಕ್ಷೆಯನ್ನು ...

ಇಷ್ಟು ಧಿಮಾಕಿನಿಂದ ಬೇಡುವದನ್ನು ಮೊದಲಬಾರಿಗೆ  ನೋಡ್ತಾ ಇದ್ದೇನೆ ಅಣ್ಣಾ..."

ನಾನೂ ತಲೆ ಹಾಕಿದೆ...


ಮರುದಿನ ಮೇಸ್ತ್ರಿ ಇನ್ನೊಂದು ವಿಷಯ ತಂದ...


"ಅಣ್ಣಾ..

ಆ ಮುದುಕಿಗೆ ಇಬ್ಬರು ಗಂಡು ಮಕ್ಕಳಂತೆ...
ಸೊಸೆಯರೊಡನೆ ಹೊಂದಿಕೊಳ್ಳಲು ಆಗಲಿಲ್ಲವಂತೆ...
ನಿತ್ಯ ಜಗಳ...

ಮಕ್ಕಳು ಮುದುಕಿಯನ್ನು ಮನೆಯಿಂದ ಹೊರಗೆ ಹಾಕಿದ್ದಾರಂತೆ..."


"ಈ ವಿಷಯ ಯಾರು ಹೇಳಿದ್ದು...?"


"ಬೇಕರಿಯವನು...

ಆ ಮಕ್ಕಳು ಇಲ್ಲೇ ಹತ್ತಿರದಲ್ಲಿ ಇರ್ತಾರಂತೆ...."

"ರಾತ್ರಿ ಎಲ್ಲಿ ಮಲಗುತ್ತಾಳೆ...?"


"ಅಲ್ಲೇ ರಸ್ತೆ ಬದಿಯಲ್ಲಿ ಮಲಗುತ್ತಾಳೆ...

ಮನೆಯಲ್ಲಿ ಹಳೆ ಹಾಸಿಗೆ ಇತ್ತು... ಕೊಟ್ಟು ಬಂದಿದ್ದೇನೆ..."

ಮನಸ್ಸು ಭಾರವಾಯಿತು...

ಯಾರು ಸರಿ...?
ಯಾರು ತಪ್ಪು ..?

ನಮ್ಮ ಮನೆಯ ಹತ್ತಿರ ಒಂದು ವೃದ್ಧಾಶ್ರಮವಿದೆ... 

ಅಲ್ಲಿ ಸೇರಿಸಿದರೆ ಹೇಗೆ....?
ನಮ್ಮ ವಾಚಮೆನ್ ಷೆಡ್ಡಿನಲ್ಲೇ ಇರಬಹುದಲ್ಲಾ..

ಮೇಸ್ತ್ರಿಯ ಬಳಿ ಹೇಳಿದೆ...


ಮೇಸ್ತ್ರಿ ಹೋಗಿ ಮುದುಕಿಯ ಬಳಿ ಮಾತನಾಡಿ ಬಂದ...


"ಅಣ್ಣಾ...

ಆ ಮುದುಕಿಗೆ ತುಂಬಾ ಸೊಕ್ಕು... 
ಅವಳು ಎಲ್ಲಿಯೂ ಹೋಗಲ್ಲಂತೆ..."

"ಹೋಗಲಿ ಬಿಡು ... 

ಇದಕ್ಕಿಂತ ಜಾಸ್ತಿ ನಾವೂ ಸಹ ಏನೂ ಮಾಡುವಂತಿಲ್ಲ..."

ಆದರೆ ..

ದಿನಾಲು ನಾನು ಆ  ಕಡೆ ಹೋದಾಗ  ನನ್ನ ಕರೆದು ಕಾಸು ಹಾಕಿಸಿಕೊಳ್ಳುತ್ತಿದ್ದಳು...

ನಾನು ಬರದ ದಿವಸ ಮೇಸ್ತ್ರಿಯ ಬಳಿ  ಕಾಸು ಹಾಕಿಸಿಕೊಳ್ಳುತ್ತಿದ್ದಳಂತೆ...


"ನಾಳೆ ನಿನ್ನ ಇಂಜನಿಯರ್ ಬರ್ತಾನಲ್ಲ...

ಅವನ ಬಳಿ ಈ ಹಣ ತೆಗೆದುಕೋ" 

ಅಂತ ಆಜ್ಞೆ  ಮಾಡುತ್ತಿದ್ದಳಂತೆ....

ದಿನ ಕಳೆದಂತೆ ...

ಮುದುಕಿಯೊಡನೆ ಸಲುಗೆ ಜಾಸ್ತಿಯಾಯಿತು....
ಕಾಸು ಕೊಟ್ಟು ಏನಾದರೂ ಮಾತನಾಡಿಸಿ  ಬರ್ತಿದ್ದೆ....

ಕೆಲವೊಮ್ಮೆ ಕಾಸು ತೆಗೆದುಕೊಳ್ಳುತ್ತಿದ್ದಳು...

ಕೆಲವೊಮ್ಮೆ ಬೇಡ ಎನ್ನುತ್ತಿದ್ದಳು....

ಅವಳು ಅಧಿಕಾರಯುತವಾಗಿ ಮಾತನಾಡುವ ರೀತಿ... ನನಗೆ ಇಷ್ಟವಾಗುತ್ತಿತ್ತು....


ದಿನಾಲೂ ...

ಏನಾದರೂ ತನ್ನ ಬದುಕಿನ ಅನುಭವ ...
ಏನಾದರೂ ಘಟನೆ ಹೇಳಿಕೊಳ್ಳುತ್ತಿದ್ದಳು..

ಅವಳದ್ದೊಂದು ಸಣ್ಣ ತರಕಾರಿ ಅಂಗಡಿ ಇತ್ತಂತೆ....

ಅದರಲ್ಲಿ ಸಂಸಾರ ತೂಗಿಸಿ...
ಮಕ್ಕಳನ್ನು ಓದಿಸಿದ್ದಳಂತೆ.....

ಆದರೆ ಎಂದೂ ತನ್ನ ಕಷ್ಟಗಳನ್ನು ಹೇಳುತ್ತಿರಲಿಲ್ಲ....

ಮಕ್ಕಳನ್ನು..
ಸೊಸೆಯಿಂದಿರನ್ನು ಬಯ್ಯುತ್ತಿರಲಿಲ್ಲ...

ಒಂದು ದಿನ  ಕುತೂಹಲದಿಂದ   ಕೇಳಿದೆ...


"ನೋಡಜ್ಜಿ...

ನಿನ್ನ 
ಮನೆ  .... ಮಕ್ಕಳು... ಮೊಮ್ಮಕ್ಕಳು... 
ಕುಟುಂಬ.. 
ಯಾರೂ ನಿನ್ನ ಹತ್ತಿರ ಇಲ್ಲ... !

ನಿನಗೆ ಒಂದು ತುತ್ತು ಅನ್ನ  ಹಾಕುವವರು ಇಲ್ಲ...!


ಸಾಯ್ತಾ ಇದ್ದೀನಿ ಅಂದರೆ ..

ಬಾಯಿಗೆ ನೀರೂ ಹಾಕುವವರಿಲ್ಲ...

ಯಾವ ಪ್ರೀತಿಯೂ ಸಿಗದ ..

ಈ ವಯಸ್ಸಿನಲ್ಲಿ  ..
ಸಾಯಬೇಕು ಅಂತ ಅನ್ನಿಸೋದಿಲ್ವಾ  ?..

ಆತ್ಮ ಹತ್ಯೆಯ ವಿಚಾರ ಬರ್ತಾ ಇಲ್ವಾ ?."


ನಾನು ಕೇಳಬಾರದ ಪ್ರಶ್ನೆ ಕೇಳಿಬಿಟ್ಟಿದ್ದೆ...


ಮುದುಕಿ ಸ್ವಲ್ಪ ಹೊತ್ತು ಸುಮ್ಮನಾದಳು....


"ಈ ಹುಟ್ಟು ನಂದಾ?..."


"ಅಲ್ಲ..."


"ನನಗೆ ಬೇಕು  ಅಂತ ಹುಟ್ಟಿ ಬಂದ್ನಾ? "


"ಇಲ್ಲ"


"ಈ ಬದುಕು ನಾನು ಬಯಸಿದ್ದಾ?..."


"ಅಲ್ಲ ... "


" ನಾನು ಬೆಳೆಸಿದ ಮಕ್ಕಳಿಂದ ..

"ಛೀ... ಥೂ..." ಅನ್ನಿಸಿಕೊಂಡು ...
ಮನೆಯಿಂದ ಹೊರಗೆ ಹಾಕಿಸಿಕೊಂಡೆನಲ್ಲಾ... 

ಇದು ನಾನು ಬಯಸಿದ್ದಾ?..." 


"ಇಲ್ಲಮ್ಮ..."


'ಈ ....

ಹುಟ್ಟು ನಂದಲ್ಲ ..
ಈ ಬದುಕೂ  ನಂದಲ್ಲ....

ಸಾವು ಕೂಡ ನನ್ನದಾಗಿರಲಿಕ್ಕೆ ಸಾಧ್ಯವಿಲ್ಲ....


ಆ ಸಾವು ಕೂಡ "ಅವನೇ" ಕೊಡಲಿ.... 


ನನ್ನ ಹತ್ಯೆಯನ್ನು  ನಾನು ಮಾಡಿಕೊಳ್ಳೋದಿಲ್ಲ....!


ಎಷ್ಟು ನರಳುತ್ತಾ ಸಾಯ್ತೆನೋ  ಸಾಯಲಿ..... !

ಹಾಗೇ ಸಾಯ್ತೇನೆ...

ಎಷ್ಟು ನೋವು ಬೇಕಾದರೂ ಬರಲಿ....


ನನ್ನ ಮಕ್ಕಳು ಕೊಟ್ಟ ನೋವಿನಷ್ಟು ..

ಆ ನೋವು ..
ಇರೋದಿಲ್ಲ ಬಿಡು...."

ನನಗೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ...


ಮುದುಕಿಯ ಮುಖ ನೋಡಬೇಕು ಅಂತ ಅಂದುಕೊಂಡೆ....

ಧೈರ್ಯ ಸಾಲಲಿಲ್ಲ... 

ಮನಸ್ಸು ಭಾರವಾಯಿತು.....


ಕೆಲವು ವರ್ಷಗಳ ಹಿಂದೆ....

ಒಬ್ಬ ಮಹನಿಯ....
ನನ್ನ ಬಳಿ ಮನೆ ಕಟ್ಟಿಸಿಕೊಂಡು ಕಾಸುಕೊಡದೆ ... 
ಮೋಸ ಮಾಡಿದಾಗ ..
ಸಾಯುವ ಮನಸ್ಸು ಮಾಡಿದ್ದೆ....

ಆಗ..

ನನ್ನ ಓದು... 
ತಿಳುವಳಿಕೆ ನನಗೆ ಧೈರ್ಯ ಕೊಡಲಿಲ್ಲ....

ಮಕ್ಕಳ ಮೇಲಿನ ಛಲವೋ...

ಹಠವೋ ... 
ಕಷ್ಟ.. ನೋವು ಇದ್ದರೂ ...
ಸಾಯಲು ಬಯಸದ ಮುದುಕಿಯ ಮೇಲೆ ಗೌರವ ಮೂಡಿತು...

ಹುಟ್ಟು.... ಸಾವಿನ ನಡುವಿನ...


ಬದುಕಿನ..
ನೋವು... ನಲಿವು.... 
ಸುಖ.. ಸಂತೋಷ..
ಎಲ್ಲವನ್ನೂ ಅನುಭವಿಸುತ್ತೇವೆ....

ಸಾವನ್ನು ಕೂಡ  ಅನುಭವಿಸಿಯೇ ಸಾಯಬೇಕು.......


ಆದರೂ...


ಆ ..

ಅಸಹಾಯಕ..ಅಸಹನೀಯ ...
ವೃದ್ಯಾಪ್ಯದ 
ದೀನ ಬದುಕು ನಮ್ಮ ವೈರಿಗೂ ಬಾರದೆ ಇರಲಿ ಆಲ್ವಾ?....




Tuesday, December 18, 2012

ಚಾಚಿಕೊ... ಬಾಚಿಕೋ.... ಅಪ್ಪಿಕೋ... !! !


ಯಾಕೊ ಗೊತ್ತಿಲ್ಲ....

ಇತ್ತೀಚೆಗೆ ದಿನಗಳು ಬಹಳ ಬೋರ್ ಎನ್ನಿಸುತ್ತಿದೆ....

ಅಂಥಹ ಸಮಸ್ಯೆಗಳು...

ಒತ್ತಡಗಳು ಏನೂ ಇಲ್ಲ...

ಆದರೂ ಬದುಕು ಒಂಥರಾ ಬೋರ್... !


ನಮ್ಮನೆಗೆ ಗೆಳೆಯ ಸತ್ಯ ಬಂದಿದ್ದ..


ಅವನದ್ದೂ ಅದೇ ಕಥೆ... !


"ಜನವರಿ ಹದಿನೈದರತನಕ ...

ಹೊಸ ಪ್ರಾಜೆಕ್ಟ್ ಶುರು ಮಾಡೊ ಹಾಗಿಲ್ಲ...
ಅದೇನೋ ಸಮಯ ಸರಿ ಇಲ್ವಂತೆ 
ಎಲ್ಲಾದ್ರೂ ಹೋಗೋಣ ಅಂದ್ರೆ ಮಕ್ಕಳಿಗೆ ಕಾಲೇಜು... ಇದೆ....

ತುಂಬಾ  ಬೋರ್ ಕಣೊ..."


ಡಿಸೆಂಬರ್ ಇಪ್ಪತ್ತೊಂದಕ್ಕೆ ....

ಶಿರಸಿಯ ಪ್ರಸಿದ್ದ ಅಡಿಕೆ ವ್ಯಾಪಾರಿಗಳಾದ ಜಿಟಿ ಅಣ್ಣನ ...
(ಗಣಪತಿ ಅಣ್ಣ ಊರುತೋಟ)ಮಗನ ಮದುವೆ...
ಅವರು ಆತ್ಮೀಯರು...
ಸ್ವತಃ ಮದುವೆಗೆ ಕರೆದು ಹೋಗಿದ್ದರು...

ಸತ್ಯ ಕೇಳಿದ..


"ಪ್ರಕಾಶು ...

ಮಕ್ಕಳು ಬರುವ ಹಾಗಿಲ್ಲ...
ಮಕ್ಕಳನ್ನು ನೋಡಿಕೊಂಡು ...
ನಮ್ಮ ...
ನಮ್ಮ ಶ್ರೀಯುತ ಶ್ರೀಮತಿಗಳು ಮನೆಯಲ್ಲಿ ಇರ್ತಾರೆ...

ನಾವಿಬ್ಬರು ಮದುವೆಗೆ ಹೋಗಿ ಬರೋಣ...


ಏನಂತಿಯಾ?"


ನಾನು ತಲೆ ಹಾಕುವವನಿದ್ದೆ...


ಅಷ್ಟರಲ್ಲಿ ...

ಆಕಾಶ.. ಭೂಮಿಗಳು  ಒಡೆದು ಹೋಗುವಂಥಹ  ಮಾತು ..!
ಅಡಿಗೆ ಮನೆಯಿಂದ ಬಂತು.... !

"ಸತ್ಯಾ...

ನೀನು ಬೇಕಾದರೆ ಹೋಗು...
ನಮ್ಮವರು ಬರೊಲ್ಲ..."

ಮಾತು ಹೇಗಿತ್ತು ಅಂದರೆ ಕತ್ತಿಯ ಮೊನೆಯ ಕಚ್ಚಿನಂತಿತ್ತು....


ಸತ್ಯ ಪ್ರಶ್ನಾರ್ಥಕವಾಗಿ ನೋಡಿದ..


ನನ್ನಾಕೆ ಇನ್ನೂ ಜೋರಾಗಿ ಹೇಳಿದಳು..


"ಸತ್ಯಾ...

ಇಪ್ಪತ್ತೊಂದಕ್ಕೆ ಪ್ರಳಯ...

ನಾನು ..

ನನ್ನ ಗಂಡನನ್ನು  ಕಳಿಸುವದಿಲ್ಲ...!

ಇಷ್ಟು ದಿನ ಇಬ್ಬರು ಒಟ್ಟಿಗೆ ಇದ್ದೇವೆ...


ಪ್ರಳಯ ಆಗುತ್ತೊ.. ಬಿಡುತ್ತೊ ಗೊತ್ತಿಲ್ಲ...


ಅವತ್ತೊಂದು ದಿನ ಅವರು ನನ್ನೊಂದಿಗೆ ಇರಲೇ ಬೇಕು...."


ಸತ್ಯ ನೆಗೆಯಾಡಿದ...


" ಮಾರಾಯ್ತಿ.....

ಪ್ರಳಯದ ಬಗೆಗೆ ನನಗೂ  ಗೊತ್ತಿಲ್ಲ..!

ನಿಮ್ಮನೆಯಲ್ಲಿ 

"ಪ್ರೀತಿ..
ಪ್ರೇಮ.. ಪ್ರಣಯವಂತೂ " ....  ಆಗುತ್ತದೆ ಕಣೆ... ! "

ಎಲ್ಲರೂ ನಕ್ಕೆವು...


ನನ್ನಾಕೆ ...

ಓಡಿ ಬಂದು ನನ್ನನ್ನು ತಬ್ಬಿಕೊಂಡಳು...

ಆಕೆಯ  ಕಣ್ಣಲ್ಲಿ ನೀರ ಹನಿ ಇಣುಕಿತ್ತು...


ಈ ಹುಚ್ಚು ಪ್ರೀತಿ ಬಿಟ್ಟು ಒಬ್ಬನೇ  ಹೇಗೆ ಹೋಗಲಿ...?


ಆ ..ದೇವರು...

ಇಷ್ಟು ಚಂದದ ನಮ್ಮ ... 
ನಮ್ಮ ಜಗತ್ತುಗಳನ್ನು ..
ಹಾಳು ಮಾಡುವಷ್ಟು ಕ್ರೂರಿ ಇರಲಿಕ್ಕಿಲ್ಲ ಅಲ್ವಾ... ?

.....  ..................  ............ .....


............  .................. ..... 



ಶಾರಿ ಬಳಿ ಮಾತನಾಡದೆ ತುಂಬಾ ದಿನಗಳಾಗಿ ಬಿಟ್ಟಿತ್ತು...


ನಮ್ಮ ಮನೆಯಲ್ಲಿ ...

ಶಾರಿಗೆ ಫೋನ್ ಮಾಡಿದರೆ ಸ್ಪೀಕರ್ ಫೋನ್ ಚಾಲು ಮಾಡಿಯೇ ಮಾತನಾಡುತ್ತೇವೆ...

ನನ್ನ ಮಾತು ಕೇಳಿ ಶಾರಿಗೆ ಬಹಳ ಖುಷಿಯಾಗಿತ್ತು...


"ಏನೋ .... ಗೊಮಟೇಶ್ವರಾ...?


ಯಾವಾಗ ಬರ್ತಿಯೋ ಊರಿನ ಕಡೆ...

ಬಾರೊ.. ಬಹಳ ಬೇಜಾರು ಬಂದಿದೆ..."

"ಶಾರಿ...

ಪ್ರಳಯ ಮುಗಿದ ಮೇಲೆ ಬರ್ತಿನೆ..."

"ಅಯ್ಯೊ ... ಮಾರಾಯಾ..

ಈ ಪ್ರಳಯ ಆಗೋದಿಲ್ಲ ಕಣೊ... ! "

"ಹೇಗೆ ಹೇಳ್ತೀಯಾ?"


"ಮೊದಲು ನಮ್ಮ ರಾಜ್ಯದ ವಿಷಯ ...


ಎಷ್ಟೆಲ್ಲ ರಾಜಕಾರಣಿಗಳಿಗೆ ...

" ಮುಖ್ಯ ಮಂತ್ರಿ " ಆಗುವ ಆಸೆ ಇದೆ ನೋಡು...

ಕುಮಾರ ಸ್ವಾಮಿ..

ಯಡಿಯೂರಪ್ಪ... ಈಶ್ವರಪ್ಪ...
ಕಾಂಗ್ರೆಸ್ಸಿನಲ್ಲಿ ಲೆಕ್ಕವಿಲ್ಲದಷ್ಟು..
ಇನ್ನೂ ಬಾಲ ಉದ್ದವಿದೆ ಕಣೊ..

ನಮ್ಮ ಹಾಗೆ ಅಲ್ಲ  ಇವರೆಲ್ಲ...


 ಭಯಂಕರ ದೈವ ಭಕ್ತರು.... !


ಹೋಮ ...

ಹವನ... ಯಜ್ಞ  ಎಲ್ಲ ಮಾಡಿಸ್ತಾ ಇರ್ತಾರೆ.. !

ದೇವಸ್ಥಾನಗಳಿಗೆ ಹೋಗ್ತಾಇರ್ತಾರೆ..

ಹರಕೆ ಮಾಡಿಕೊಳ್ತಾರೆ....

ದೇವರು ...

ಅವರ ಆಸೆ ನೆರವೇರಿಸುವ ತನಕ ಪ್ರಳಯ ಮಾಡೊಲ್ಲ ಕಣೊ...!

ನಮ್ಮ ದೇವರು ...

ನಮ್ಮಂಥಹ ಸಾಮಾನ್ಯರ ಪ್ರಾರ್ಥನೆಗಳನ್ನು ಕೇಳುವದಿಲ್ಲ ಕಣೊ..."

"ಶಾರಿ...

ಅವರ ಸಂಖ್ಯೆ ಕಡಿಮೆ ಇದೆ ಕಣೆ...
ನಮ್ಮಂಥವರ ಸಂಖ್ಯೆ ಜಾಸ್ತಿ ಇದೆ..."

"ಡುಮ್ಮಣ್ಣ...

ನಮ್ ಜನಕ್ಕೆ ಏನೇ ಆದ್ರೂ ಸಮಸ್ಯೆ ಇಲ್ಲ...

ಸರ್ಕಾರಗಳು ..

ತ್ರಿ ಜಿ... ಕಲ್ಲಿದ್ದಲು  ಅಂತೆಲ್ಲ ...
ಹಗರಣಗಳ ಮೇಲೆ ಹಗರಣ ಮಾಡುತ್ತ...
ಕೋಟಿ ಗಟ್ಟಲೆ ಗುಳುಮ್ ಮಾಡುತ್ತಿದ್ದರೂ ನಿಶ್ಚಿಂತೆಯಿಂದ ಇರ್ತಾವೆ...

ಕೇಂದ್ರ  ಸರ್ಕಾರದ ಹಗರಣಗಳೊ... !

ರಾಮ ರಾಮಾ.... !

ಎಲ್ಲ ಪಕ್ಷಗಳು ..

ಹಗರಣಗಳನ್ನು ವಿರೋಧಿಸಿದರೂ...
ಸರ್ಕಾರ ಮಾತ್ರ ತನ್ನ ಅವಧಿಯನ್ನು ಪೂರೈಸುತ್ತದೆ...!


ಎಲ್ಲವೂ ದೊಡ್ಡವರ ...
ಕೊಡು..
ತೆಗೆದುಕೊಳ್ಳುವ ವಿಚಾರಗಳು...!

ಮುಂದೆಯೂ .. ಇಂಥಾದ್ದೇ  ಸರ್ಕಾರ ...ಬರುತ್ತದೆ...!

ಚುನಾವಣೆಯಲ್ಲಿ ಯಾರು ಆರಿಸಿ ಬಂದರೆ ಏನು ...?


ಮಹಿಷಾಸುರ ಹೋದರೆ....

ಭಸ್ಮಾಸುರ ಬರ್ತಾನೆ...!

ಎಲ್ಲರೂ ..

ತಮ್ಮ ಯಕ್ಷಗಾನ ಕುಣಿತ ತೋರಿಸಿ ಹೋಗ್ತಾರೆ.. !

ನಾವು ..

ನಮ್ಮ ಬೆವರು ಸುರಿಸಿದ ಹಣ ಕೊಟ್ಟು ...
ಇವರ ಯಕ್ಷಗಾನ ಕುಣಿತ ನೋಡಬೇಕು.... !

ಇದು ನಮ್ಮ ಕರ್ಮ... !


ನಿನಗೆ ಇದೆಲ್ಲ  ಅರ್ಥವಾಗುವದಿಲ್ಲ ಬಿಡು...


ದೇಹದ ಜೊತೆಗೆ ಸ್ವಲ್ಪ ಬುದ್ಧಿನೂ ಬೆಳೆಸಬೇಕಿತ್ತು ಕಣೊ..."


ನನಗೆ ಸಣ್ಣ ಕೋಪ ಬಂತು..


"ಶಾರಿ..

ನಿನಗೇನೆ ಮಹಾ ಅರ್ಥವಾಗುವದು...?"

"ನೋಡೊ...

ಹಾವೇರಿ ಸಮಾವೇಶ ಆಯ್ತು...

ಅಲ್ಲಿಗೆ  ...

ಶಾಸಕರು... ಮಂತ್ರಿಗಳು ಹೋಗಿದ್ದೂ ಆಯ್ತು...

ಬಿಜೇಪಿ ಸರ್ಕಾರದ ವಿರುದ್ಧವಾಗಿ ...

ಜನರ ಉದ್ಧಾರಕ್ಕಾಗಿ ಹೊಸ ಪಕ್ಷದ ಉದಯ ಆಯ್ತು... !

ಏನಾಯ್ತು...?


ಸರ್ಕಾರ ಬಿದ್ದು ಹೋಯ್ತಾ ?..."


"ಇಲ್ಲವಲ್ಲೆ... !! "


"ಅದೇ ಹೇಳಿದ್ದು...

ನಿನ್ ಹೊಟ್ಟೆ ಸೈಜಿಗೆ  ತಲೆ ಇರಬೇಕಾಗಿತ್ತು ಅಂತ...!

ದಿನಾ ಬೆಳಗಾದರೆ...

"ಕೆಟ್ಟ ಸರ್ಕಾರ ...
ಹಾಗೆ ಹೀಗೆ... "  ಎಂದು ಬಯ್ಯುವ ಪಕ್ಷಗಳು ..
ಶಾಸಕರು ...
ಮನಸ್ಸು ಮಾಡಿದರೆ ಬೀಳಿಸ ಬಹುದಲ್ಲವೆ?

ಕಾಂಗ್ರೆಸ್ಸು...

ಜೇಡಿಯೆಸ್ಸು.. ಕೇಜೆಪಿ....
ಯಾರೂ ಸರ್ಕಾರ ಬೀಳಿಸುವದಿಲ್ಲ ಕಣೊ... !

ಇಲ್ಲಿ ಅಂತ ಅಲ್ಲ...

ನಮ್ ದೇಶದಲ್ಲಿ 
ಎಲ್ಲ ಪಕ್ಷಗಳ ಉದ್ದೇಶ ಒಂದೇ ಕಣೊ...

ಅವರವರದ್ದು ಅವರವರಿಗೆ...

ಸಿಕ್ಕಿದಷ್ಟು "ಚಾಚಿಕೊ... ಬಾಚಿಕೋ.... ಅಪ್ಪಿಕೋ... !!

ನಾವು ಮೂರ್ಖರು... "


ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ..


"ಪ್ರಕಾಶು....

ನಮ್ಮ ಮಾಧ್ಯಮದವರು ಇನ್ನೂ ಎಚ್ಚರವಾಗಿರಬೇಕು...

ಇವರನ್ನು ...

 ಸರಿ ದಾರಿಗೆ ತರುವದಿದ್ದರೆ...
ಪ್ರಜಾಪ್ರಭುತ್ವ ಸರಿಯಾಗಿ ಇರಬೇಕೆಂದರೆ  ...
"ಎಚ್ಚೆತ್ತ ಮಾಧ್ಯಮಗಳಿಂದ ಮಾತ್ರ ಸಾಧ್ಯ....."

"ಸಾಕು ಮಾರಾಯ್ತಿ...

ಬಹಳ ಕೊರಿತಾ ಇದ್ದೀಯಾ...

ಹೇಗಿದ್ದರೂ ಪ್ರಳಯ ಆಗ್ತ ಇದೆಯಲ್ಲೆ...

ಎಲ್ಲ ಸರಿ ಆಗ್ತದೆ ಬಿಡು...."

"ಪ್ರಕಾಶು..

ಒಂದು ಮಾತು ಹೇಳ್ತೀನಿ...

ಪ್ರಳಯ ಆಗಬೇಕು ಕಣೊ... !


ಹುಟ್ಟಿದ ನಾವೆಲ್ಲ ಒಂದು ದಿನ ಸಾಯಲೇ ... ಬೇಕು...

ಸಾಯ್ತಿವಿ...
ಸಾಯುವಾಗ  ನಾವೆಲ್ಲ ಒಂಟಿಯಾಗಿ ಸಾಯ್ತಿವಿ...

 ನಾವು ಸಾಯುವಾಗ ..

ನಮ್ಮ ಹತ್ತಿರದವರೆಲ್ಲ ನಿಂತು ಅಳುತ್ತ ಇರ್ತಾರೆ...

ನಮಗೆ ಇವರನ್ನೆಲ್ಲ ಬಿಟ್ಟು ಹೋಗುವ ಸಂಕಟವೂ ಇರುತ್ತದೆ...



ಇಂಥಾದ್ದೊಂದು ಪ್ರಳಯ ಆದರೆ ಮಜಾ ಕಣೊ... !
ಎಲ್ಲರೂ ಒಟ್ಟಿಗೆ ಸಾಯುತ್ತೇವೆ.. 

ದಿನಾ ಬೆಳಗಾದರೆ ..
ತಮ್ಮನೇ ಕಸವನ್ನು ನಮ್ಮನೆಗೆ ಎಸೆದು ...
ಜಗಳ ಮಾಡುವ ಪಕ್ಕದ ಮನೆ ಪರಮಣ್ಣ .. , 
ಯಾವಾಗಲೂ ಜಗಳ ಕಾಯುವ ಅವನ ಹೆಂಡತಿ  ವೆಂಕತ್ತೆ......

ಎಲ್ಲರೂ  ಒಟ್ಟಿಗೆ ಸಾಯ್ತೆವಲ್ಲೋ... !

"ಶಾರಿ...
ನಿನ್ನ ತಲೆ ಅದ್ಭುತ ಮಾರಾಯ್ತಿ...!"

"ಅಷ್ಟೇ ಅಲ್ವೋ...

ಯಾವಾಗಲೂ ಜಗಳ ಮಾಡುತ್ತ...
ಪ್ರೀತಿ ಮಾಡೊ ನನ್ನ ಗಂಡ...
ಮಕ್ಕಳು..
ನಮ್ ಗೆಳೆಯರು... ಎಲ್ಲರೂ ಒಟ್ಟಿಗೆ ಹೋಗ್ತಿವಲ್ಲೋ...!

ನಮ್ಮ ನಮ್ಮ ಆತ್ಮೀಯರನ್ನು ...

ಜೀವದ ಗೆಳೆಯರನ್ನು ...
ತಬ್ಬಿ ಹಿಡಿದುಕೊಂಡು ಸಾಯುವದು ಎಷ್ಟು ಮಜಾ ಅಲ್ವೇನೋ...!

"ಪ್ರಳಯದ ಶುಭಾಶಯಗಳು " ಅಂತ ಹೇಳಿ ಸಾಯಬಹುದಲ್ಲೋ...!


ಒಂಥರಾ ಥ್ರಿಲ್ಲು ಕಣೊ... ರೋಮಾಂಚನ ಆಗ್ತಿದೆ... !


ಇಡಿ ಜಗತ್ತಿನ ಜನ ...

ಒಂದು ದಿನ ಕಾದು ಕುಳಿತು...
ತಮ್ಮ....
ತಮ್ಮ ಅನಿವಾರ್ಯವಾದ ಸಾವನ್ನು ಕಾಣುವದು.... 
ಮಜಾ ಅಲ್ವೇನೋ... !! .."

ನನಗೂ ಮಜಾ ಅನ್ನಿಸಿತು... ವಾಹ್.... !


"ಲೇ...ಡುಮ್ಮಣ್ಣ...


ನೀನು ..

ನಿನ್ನ ಹೆಂಡ್ತಿ... ಮಗನ ಸಂಗಡ ಅಲ್ಲಿರಬೇಡ... !

ಸುಡುಗಾಡು ...

ಗಲೀಜು ಬೆಂಗಳೂರಲ್ಲಿ ಸಾಯಬೇಡ... !

ಮೊದಲೇ ಸ್ಮಶಾನದ ತರಹದ ಇದೆ.. ನಿಮ್ " ಮೆಟ್ರೊ" ಬೆಂಗಳೂರು  !


ಎಲ್ಲರೂ "ಪ್ರಳಯಕ್ಕಾಗಿ... "  ನಮ್ಮನೆಗೆ ಬನ್ನಿ...


ಒಟ್ಟಿಗೆ ಸಾಯೋಣ...

ಮಜಾ ಮಾಡೋಣ... ಏನಂತೀಯಾ...?... !!... 

ಡುಮ್ಮಣ್ಣ..

ಹ್ಯಾಪಿ ಪ್ರಳಯ ಇನ್ ಅಡ್ವಾನ್ಸ್... !..."

ನಾನು ತಲೆ ಕೆರೆದು ಕೊಂಡೆ ....


"ಹ್ಯಾಪಿ  ಪ್ರಳಯಾ... ! "   ಅಂತ  ಹೇಳಲಾ? ಬೇಡವಾ ಅಂತ.....




( ದಯವಿಟ್ಟು ಶಾರಿಯ ಮಾತುಗಳನ್ನು ಹಾಸ್ಯವಾಗಿ ಪರಿಗಣಿಸಿ ...)

Thursday, November 22, 2012

ಭಾವನೆ ...............


ನಿಮಗೆ ನನ್ನ ಸಮಸ್ಯೆ ಅರ್ಥವಾಗೋದಿಲ್ಲ ಬಿಡಿ....

ನನ್ನಷ್ಟಕ್ಕೆ ನಾನು ಆರಾಮಾಗಿದ್ದೆ...


ನನ್ನಪ್ಪ ಬಿಡಬೇಕಲ್ಲ...


"ಮಗನೆ ಮದುವೆ ವಯಸ್ಸಾಯ್ತು.. ಮದುವೆ ಮಾಡಿಕೊ" 


ಅಂತ ತಾನೆ ಒಂದು ಹುಡುಗಿ ಹುಡುಕಿ ನಿಶ್ಚಯಿಸಿಬಿಟ್ಟ..


ಹೆಣ್ಣು ನೋಡಲು ನಾನು ಹೋಗಿದ್ದೆ..


ಹುಡುಗಿ ...

ಹೆಣ್ಣು ಎನ್ನುವದನ್ನು ಬಿಟ್ಟರೆ "ಅಂದ ಚಂದ" ಎನ್ನುವ ಶಬ್ಧ ಅಕ್ಕಪಕ್ಕದಲ್ಲಿಯೂ ಇರಲಿಲ್ಲ...

"ಮಗನೆ...

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸಿಗುವದಿಲ್ಲ...

ಸಿಕ್ಕರೂ "ಸಾಪ್ಟವೇರ್.. ಅಮೇರಿಕಾ ಅಂತ.. 

ಅಂಥವರನ್ನೇ ಹುಡುಕಿಕೊಳ್ತಾರೆ...

ನಿನ್ನಂಥಹ ಮಾಮೂಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರು ...
"ಚಂದದ ಹೆಣ್ಣಿನ ಕನಸನ್ನು ಕಾಣಬಾರದು"...

"ಅಪ್ಪಾ...

ಬದುಕು ಪೂರ್ತಿ ಬಾಳಬೇಕಲ್ಲಪ್ಪಾ...!

ಈ ಮುಖ ನೋಡಿ ಹೇಗೆ ಸಾಧ್ಯ...?

ನನಗೂ ಮಕ್ಕಳ ಆಸೆ ಇದೆ..."

"ಮಗನೆ...

ದೇಹದ ಹಸಿವಿಗೆ ಅಂದ ಬೇಕಿಲ್ಲ...

ರಾತ್ರಿ ಕತ್ತಲೆಯಲ್ಲಿ..

ದೀಪವಾರಿಸಿದ ಮೇಲೆ ....ಯಾವ ಅಂದವೂ ಕಾಣುವದಿಲ್ಲ...!

ದಾಂಪತ್ಯಕ್ಕೆ ಚಂದ ಬೇಕಿಲ್ಲ ಮಗನೆ...........


ನೀ... ಸುಮ್ಮನಿರು..


ನಿನಗಿಂತ ಹೆಚ್ಚಿನ ಬದುಕನ್ನು ನಾನು ನೋಡಿದ್ದೇನೆ...


ನಿನ್ನ ಮಾವ ಪೋಲಿಸು..

ಚೆನ್ನಾಗಿ ಹಣ ಇದೆ..
ಒಬ್ಬಳೇ ಮಗಳು...ಮಾವ ನಿನ್ನನ್ನು  ನೋಡಿಕೊಳ್ತಾನೆ ...

ನಿನ್ನ ಬದುಕು ಚಂದವಾಗಿರುತ್ತದೆ..."


ಅಪ್ಪನ ನನ್ನ ಮದುವೆ ಮಾಡಿ ಮುಗಿಸಿದ...


ನಿಮಗೆಲ್ಲ ನನ್ನ ಮಾವನ ಬಗೆಗೆ ಹೇಳಬೇಕು...


ನನ್ನ ಮಾವ ಪೋಲಿಸ್...


"ಪೇದೆ"  ಎಂದರೆ ಗೌರವ ಕಡಿಮೆ ಆಗಬಹುದು ಅಂತ..

ಆ ಶಬ್ಧ ತಪ್ಪಿಯೂ ಉಪಯೋಗಿಸೋದಿಲ್ಲ  ಬಿಡಿ...

ಬಹಳ ದರ್ಪು...

ಸೊಕ್ಕಿನ ಮೀಸೆ... ಕೆಂಪು ಕಣ್ಣುಗಳು ....

ಬಹುಷಃ ಹುಟ್ಟಾ ಪೋಲಿಸ್ ನನ್ನ ಮಾವ...


ಒಂದು ದಿನ ಕುತೂಹಲ ತಡೆಯಲಾಗದೆ ಕೇಳಿದ್ದೆ...


"ನಮ್ಮ ಜಗತ್ತಿನಲ್ಲಿ ...

ಶಾಂತಿಯಿಂದ ಇರಲಿಕ್ಕೆ ಎಲ್ಲವೂ ಇದೆ...

ಅತ್ಯಂತ ಪವಿತ್ರವಾದ ಧರ್ಮಗಳಿವೆ.....

ಧರ್ಮ ಗ್ರಂಥಗಳಿವೆ ....

ಕಣ್ಣಿಗೆ ಕಾಣದೆ ..

ಇದೆಯೆನ್ನುವ ....
ಕಲ್ಪಿಸಿಕೊಳ್ಳುವ ....
ಬಗೆ ಬಗೆಯ ದೇವರುಗಳಿದ್ದಾರೆ..!

ಮಂದಿರ... ಚರ್ಚು... ಮಸೀದೆ ...

ಮಠಗಳು... ಎಲ್ಲವೂ ಇವೆ....

ಪಾಪ ಪುಣ್ಯಗಳ ಬಗೆಗೆ ತಿಳಿಸಿ ಹೇಳಿ..

ಹೆದರಿಸುವ ...
ಧರ್ಮ ಗುರುಗಳಿದ್ದಾರೆ..

ಶಾಲೆಗಳಿವೆ... ಶಿಕ್ಷಣ ಸಂಸ್ಥೆಗಳಿವೆ ..


ಪ್ರತಿ ಮನೆಯಲ್ಲಿ ...

ಒಳ್ಳೆಯ ದಾರಿ ತೋರಿಸುವ ಅಪ್ಪ ಅಮ್ಮರಿಂದಾರೆ..
ಸರಿ.. ತಪ್ಪುಗಳನ್ನು ತಿಳಿಸಿ ಹೇಳುವ  ಅಜ್ಜ ಅಜ್ಜಿಯರಿದ್ದಾರೆ...

ಮತ್ಯಾಕೆ ಈ ಪೋಲಿಸು..?

ಸೈನಿಕರು...?

ಯಾಕ  ಬೇಕು ಸ್ಟೆನ್  ಗನ್ನುಗಳು..?


ಪರಮಾಣು ಬಾಂಬುಗಳು...?


ಕಾಯಿದೆ ಕಾನೂನು..? ....?.. ಫಾಸಿ  ಶಿಕ್ಷೆಗಳು ...? .."


ನನ್ನ ಮಾವ ...

ಠೀವಿಯಿಂದ ಮೀಸೆಯ ಮೇಲೆ ಕೈಯ್ಯಾಡಿಸಿದ...

"ಅಳಿಮಯ್ಯಾ...


ಈ ಮನುಷ್ಯ ಇದ್ದಾನಲ್ಲ ...

ಈತನೂ ಒಂದು ಪ್ರಾಣಿ...
ಹಿಂಸೆ ಇವನ ಮೂಲ ಪ್ರವೃರ್ತಿ...

ಮೊದಲು ಕಾಡಿನಲ್ಲಿದ್ದ...
ಈಗ ನಾಡಿನಲ್ಲಿದ್ದಾನೆ... ಜಾಸ್ತಿ ವ್ಯತ್ಯಾಸ ಇಲ್ಲ...

ಈತ ಹೊಟ್ಟೆ ತುಂಬಿಸಿಕೊಳ್ಳುವದಕ್ಕೂ   ಸಹ ಸಸ್ಯವನ್ನೋ..

ಪ್ರಾಣಿಯನ್ನೋ ಸಾಯಿಸುತ್ತಾನೆ...

ಹಿಂಸೆ... 

ಇವನಿಗೆ ಅತ್ಯಂತ ಸಹಜ .....!

ಸುಮ್ಮನೆ ಇದ್ದ ಪಕ್ಕದಲ್ಲಿದ್ದವರಿಗೆ ಚಿವುಟಿದರೆನೇ ಇವನಿಗೆ ಖುಷಿ... !

ಮನುಷ್ಯ ಪ್ರಾಣಿಯನ್ನು ...

ಹದ್ದು ಬಸ್ತಿನಲ್ಲಿಡಲು ಧರ್ಮಗಳಿಂದ ...
ದೇವರುಗಳಿಂದ ಆಗುವದಿಲ್ಲ...

ಹೆದರಿಕೆ... ಭಯ ಇವನಿಗೆ ಬೇಕು...

ಅದಕ್ಕಾಗಿ ಪೋಲಿಸರ ಲಾಠಿ ಬೇಕೇ ಬೇಕು....

ಇಲ್ಲಿ ..

ಶಾಂತಿಗಾಗಿಯೇ ಘನ ಘೋರ ಯುದ್ಧಗಳಾಗುತ್ತವೆ..!
ಸಾವಿರಾರು ಜನರು ಸಾಯ್ತಾರೆ...!

ನಿನಗ್ಯಾಕೆ ಇದೆಲ್ಲ... ?


ನೀನು ..

ನಿನ್ನ ಕೆಲಸ..
ಹಾಗು ನನ್ನ ಮಗಳನ್ನು ನೋಡಿಕೊ ಸಾಕು..."

ನನ್ನ ಮಾವ ದಡ್ಡ ಅಂತ ನನಗೆ ತಪ್ಪು ಕಲ್ಪನೆಯಿತ್ತು...

ಆದರೆ ...
ಮಹಾ ಬುದ್ಧಿವಂತ ಅಂತ  ಮದುವೆಯಾದ ಮೇಲೆ ಗೊತ್ತಾಗಿದ್ದು...

ತನ್ನ ಮಗಳಿಗೆ ಯೋಗ್ಯವಾದವರ ನನ್ನನ್ನು ಅಂತ ಆಯ್ಕೆ ಮಾಡಿದ್ದು..


ನಾನು ..

ಸ್ವಲ್ಪ ಪಾಪ ಪುಣ್ಯ ಎನ್ನುವ ವಾತಾವರಣದಲ್ಲಿ ಬೆಳೆದವ...

ಸುಮ್ ಸುಮ್ನೆ ಗಲಾಟೆ... ಜಗಳ  ಕೂಗುವದು ನನಗೆ ಆಗುವದಿಲ್ಲ...


ನನ್ನ ಮಡದಿ ಮಾತ್ರ ನನ್ನ ಸ್ವಭಾವಕ್ಕೆ ತದ್ವಿರುದ್ಧ....


ದಿನಾಲೂ ಗಲಾಟೆ... ಜಗಳ.... !

ಸಮಾಧಾನ... ಶಾಂತಿ ಎನ್ನುವದೇ ಇಲ್ಲ...

ನಾನು ದೇವರ ಬಳಿ ನನ್ನ ಬಗೆಗೆ ಏನೂ ಕೇಳುವದಿಲ್ಲ...


"ದೇವರೆ..

ನನ್ನ ಪಕ್ಕದ ಮನೆಯಲ್ಲಿ ...
ಯಾವುದೇ ಹೊಸ ವಸ್ತುಗಳನ್ನು ತರದೇ ಇರಲಿ..."

ಆ ದೇವರಿಗೂ ನನ್ನ ಹಂಗಿಸುವ ಆಸೆ..!


ನಾನು ದಣಿದು ಮನೆ ಸೇರುತ್ತಲೇ ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ....!


ಆ ಶಬ್ಧಗಳ ಸಭ್ಯತೆಯ ಆಧಾರದ ಮೇಲೆ ...

ಪಕ್ಕದ ಮನೆಯಲ್ಲಿ ಯಾವ ವಸ್ತು ತಂದಿರ ಬಹುದು ಅಂತ ಲೆಕ್ಕಾಚಾರ ಹಾಕುತ್ತಿದ್ದೆ.....

ನಾನು ಹೇಳಿ ಕೇಳಿ ಸಾಮಾನ್ಯ ಕಾರ್ಖಾನೆಯಲ್ಲಿ  ನೌಕರ...


"ನೋಡು..

ನನಗೆ ಎಷ್ಟು ಸಂಬಳ ಅಂತ ಮದುವೆಗೆ ಮುಂಚಿತವಾಗಿ ನಿನಗೆ...
ನಿನ್ನ ಅಪ್ಪನಿಗೂ ಗೊತ್ತಿತ್ತು...

ನಿನ್ನ ಆಸೆಗಳನ್ನು ಪೂರೈಸಲು ನನ್ನಿಂದ ಆಗದ ಕೆಲಸ...


ಹೊಂದಿಕೊಂಡು ಹೋಗೋಣ...

ಪ್ರೀತಿಯಿಂದ ಇರೋಣ..."

"ನಾನು ಹತ್ತು ಹಲವಾರು ಕನಸು ಹೊತ್ತು ಬಂದವಳು....

ನನ್ನ ಗೆಳತಿಯರೆಲ್ಲ ಸಾಫ್ಟವೇರ್ ಇಂಜೀನೀಯರನ್ನು ಮದುವೆಯಾಗಿ ಝುಂ ಅಂತ ಕಾರಲ್ಲಿ ತಿರುಗುತ್ತಿದ್ದಾರೆ...

ನಾನು ನಿಮ್ಮ ಡಕೂಟ ಸ್ಕೂಟಿಯಲ್ಲಿ ತಿರುಗ ಬೇಕಾಗಿದೆ....!


ಇವತ್ತು ನೋಡಿ...

ನಿಮ್ಮ ಸಂಗಡವೇ ಕೆಲಸ ಮಾಡುವ ..
ಪಕ್ಕದ ಮನೆಯವ ಮನೆಗೆ ವಾಷಿಂಗ್ ಮಷಿನ್ ತಂದಿದ್ದಾನೆ...!

ನಾಳೆ ಆ ಹೆಂಗಸಿನ ಡೌಲು...

ದೌಲತ್ತಿನ ಮಾತುಗಳನ್ನು ಕೇಳಿಸಿಕೊಳ್ಳುವವಳು ನಾನು...!

ನಿಮಗೇನು ಗೊತ್ತು ನನ್ನ ಕಷ್ಟ...?  ನನ್ನ ಸಂಕಟ...? ..."


ಮೊದ ಮೊದಲು ಸೌಮ್ಯವಾಗಿ ಚರ್ಚೆ ಆಗುತ್ತಿತ್ತು...

ಕೊನೆಗೆ ಅಕ್ಕ ಪಕ್ಕದ ಮನೆಯವರಿಗೆ ಕೇಳಿಸ ತೊಡಗಿತು...

ಇತ್ತೀಚೆಗಂತೂ ಮಧ್ಯ ರಸ್ತೆಯಲ್ಲಿ ನಿಂತು ಕೂಗತೊಡಗಿದ್ದಾಳೆ....


ಏನು ಮಾಡಲಿ ..?


ಮೊದಲು ನನ್ನ ಅಪ್ಪನಿಗೆ ಹೇಳಿದೆ...


"ಮಗನೆ..

ಇದೆಲ್ಲ ಎಲ್ಲ ಸಂಸಾರದಲ್ಲೂ ಇದ್ದದ್ದೆ...

ಸ್ವಲ್ಪ ಪ್ರೀತಿ ತೋರಿಸು..

ಪ್ರೀತಿಯ ಸಂಗದ ಶಕ್ತಿನೂ ತೋರಿಸು....!

ಎಲ್ಲ ಹೆಣ್ಣು ಮಕ್ಕಳು ಕರಗಿ ಹೋಗುತ್ತಾರೆ...!


ಅದನ್ನೂ ನಾನು ಹೇಳಿಕೊಡಬೇಕಾ... !!... ?...."


ಅಂತ ಅರ್ಥ ಗರ್ಭಿತವಾಗಿ ನಕ್ಕರು.....


ಆದರೆ ಈ ಪ್ರೀತಿ..

ಪ್ರಣಯಕ್ಕೆ ನನ್ನ ಮಡದಿ ಜಗ್ಗಲಿಲ್ಲ.....

ಪ್ರೀತಿ ಮಾಡಿದ ಅದಷ್ಟೇ ಹೊತ್ತು....!


ಮತ್ತೆ ಯಥಾ ಪ್ರಕಾರ.... ಜಗಳ...!


ಯಾರೋ ಹೇಳಿದರು...


"ನಿಮ್ಮ ಮನೆ ವಾಸ್ತು ಸರಿ ಇಲ್ಲ...


ಬೆಡ್ ರೂಮಿನ ನೈರುತ್ಯ ಜಾಗದಲ್ಲಿ ಬಾಗಿಲು ಇದೆ...

ಹಾಗೆ ಇದ್ದಲ್ಲಿ "ಹೆಂಡತಿ ಉಗ್ರ ಪ್ರತಾಪ"  ತೋರಿಸುತ್ತಾಳೆ..."

ಸರಿ..


ನೈರುತ್ಯ ದಿಕ್ಕಿನಲ್ಲಿ ಬಾಗಿಲು ಇಲ್ಲದಿರುವ ಬೆಡ್ ರೂಮ್ ಹುಡುಕಿದೆ...


ಅಲ್ಲಿಯೂ ಅಷ್ಟೇ...! ಯಥಾಪ್ರಕಾರ ಜಗಳ... ಗಲಾಟೆ....!


ಈ ಪಕ್ಕದ ಮನೆಯವರು ಯಾರೂ ಇರದ ಮನೆಯನ್ನೂ ನೋಡಿದೆ....


ಎಲ್ಲ ಕಡೆಯಲ್ಲಿಯೂ ನನ್ನ ಮರ್ಯಾದೆ ಬೀದಿಗೆ ಬರುತ್ತಿತ್ತು...


ನನ್ನ ಮಾವ ಶ್ರೀಮಂತನಾಗಿದ್ದ...


ಆದರೆ ಯಾವುದೋ ಲಂಚದ ಹಗರಣದಲ್ಲಿ ಸಿಕ್ಕಿಕೊಂಡು ..

ನನಗೆ ಸಹಾಯ ಮಾಡಲಾಗದ ಸ್ಥಿತಿಯಲ್ಲಿದ್ದ....

"ಮಾವಯ್ಯಾ...

ನಮ್ಮಿಬ್ಬರ ಹೊಂದಾಣಿಕೆ ಅಸಾಧ್ಯ....

ಒಟ್ಟಿಗೆ ಇರಲು ಆಗ್ತಾ ಇಲ್ಲ....

ನಿಮ್ಮ ಮಗಳಿಗೆ ವಿಚ್ಛೇಧನ  ಕೊಡುತ್ತೇನೆ...."

" ಅಳಿಯಮಯ್ಯಾ...

ನಾನು ಕೆಲಸದಿಂದ ಸಸ್ಪೆಂಡ್ ಆದರೂ ನಾನಿನ್ನೂ ಪೋಲಿಸು....

ಠಾಣೆಯಲ್ಲಿ ನಿನ್ನನ್ನು ಅರೆದು ...

ನೀರು ಇಳಿಸಿಬಿಡ್ತೇನೆ.....!

ಸುಮ್ಮನೆ ಅವಳೊಂದಿಗೆ ಹೊಂದಿಕೊಂಡು ಹೋಗು...."


ಎಂಥಹ ಚಕ್ರವ್ಯೂಹದಲ್ಲಿ  ಸಿಕ್ಕಿಬಿದ್ದುಬಿಟ್ಟಿದ್ದೇನೆ ನಾನು !!


"ಹೇಗೆ ಹೊಂದಿಕೊಳ್ಳಲಿ ಮಾವಯ್ಯಾ...?


ನನ್ನನ್ನು ಅರ್ಥ ಮಾಡಿಕೊಳ್ತಾನೆ ಇಲ್ಲ.... ನಿಮ್ಮ ಮಗಳು..!.. "


"ಅವಳು ..

ಮೊದಲಿನಿಂದಲೂ ಸ್ವಲ್ಪ ಕೋಪಿಷ್ಠೆ...

ನಿನ್ನ ಶಾಂತ ಸ್ವಭಾವ ನೋಡಿಯೇ ..

ನಾನು ಮದುವೆ ಮಾಡಿದ್ದು....
ನೀನು ಅನುಸರಿಸಿಕೊಂಡು ಹೋಗು...

ಪ್ರೀತಿ...
ಮತ್ತು ದಾಂಪತ್ಯದ ಪ್ರೀತಿ ಅನ್ನೋದು ಬೇರೆ ಬೇರೆ ಕಣಪ್ಪಾ....

ಈ ದಾಂಪತ್ಯದ ಪ್ರೀತಿ ಅನ್ನೋದು ...

ಎಲ್ಲರಿಗೂ ಒಂದೇ ರೀತಿಯಲ್ಲಿ  ಅರ್ಥವಾಗೋದಿಲ್ಲ...

ಕೆಲವರಿಗೆ ಈ  ಪ್ರೀತಿ ..

ಪ್ರೀತಿಯಲ್ಲೇ ಅರ್ಥವಾಗಿ ಬಿಡುತ್ತದೆ...

ಕೆಲವರಿಗೆ ಹೊಗಳಬೇಕು....

ಹೆಣ್ಣು ಮಕ್ಕಳನ್ನು ಸ್ವಲ್ಪ ಹೊಗಳಬೇಕು....
ಪೂಸಿಹೊಡೆಯ ಬೇಕು....

ಅದೆಲ್ಲ ನೀನೇ ಸಂದರ್ಭಕ್ಕೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಪ್ಪ.... "


ನನ್ನಾಕೆಗೆ ಎಲ್ಲ ಪ್ರಯೋಗ ಮಾಡಿದೆ....

ಯಾವುದೂ ಪ್ರಯೋಜನವಾಗಲಿಲ್ಲ.....

ನನ್ನಾಕೆಯ ಮುಖ ನೋಡಿಕೂಡಲೇ ...

ಅವಳು ..
ನನ್ನೊಡನೆ ಆಡಿದ ಮಾತುಗಳು..
ಜಗಳಗಳು ನೆನಪಾಗುತ್ತಿತ್ತು....

ನನ್ನನ್ನು ಕುರಿತು ಬೀದಿಯಲ್ಲಿ ನಿಂತು ಕೂಗಾಡಿ ಮರ್ಯಾದೆ ಮೂರುಕಾಸು ಮಾಡಿದ್ದು ಎಲ್ಲ ನೆನಪಾಗುತ್ತಿತ್ತು.....


ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ...

ಮನೆಯ ಚಿಂತೆ....
ಕೆಲಸದ ಒತ್ತಡ...!

ಒಂದು ದಿನ ಕಾರ್ಖಾನೆಯಲ್ಲಿ ಎಚ್ಚರ ತಪ್ಪಿ ಬಿದ್ದುಹೋದೆ...


ವೈದ್ಯರು ಬಂದರು..

ನನ್ನನ್ನು ತಪಾಸಣೆ ಮಾಡಿದರು...

"ನೋಡಿ...

ನಿಮ್ಮ ಬೀಪಿ ಹೆಚ್ಚಿದೆ...
ಸಕ್ಕರೆ ಕೂಡ ಇದೆ...

ನಿಮಗೆ ಮಾನಸಿಕ ಶಾಂತಿ ಅತ್ಯಗತ್ಯ....


ನಾನು ಎಷ್ಟೇ ಮಾತ್ರೆಗಳನ್ನು ಕೊಟ್ಟರೂ...

ನಿಮ್ಮ ಮಾನಸಿಕ ಸಮತೋಲನವನ್ನು ನೀವೇ ನೋಡಿಕೊಳ್ಳಬೇಕು..."

"ಮಾನಸಿಕ ಶಾಂತಿಗಾಗಿ ಏನು ಮಾಡಬೇಕು...?"


"ನೋಡಪ್ಪಾ...

ಇಲ್ಲಿ ಹತ್ತಿರದಲ್ಲಿ ಯೋಗ ಗುರೂಜಿ ಇದ್ದಾರೆ...
ಅಲ್ಲಿ ಹೋಗು...
ನಾನು ಅಲ್ಲಿ ಹೋಗಿ ಶಾಂತಿಯನ್ನು ಪಡೆದಿರುವೆ...."

ಮರುದಿನ ಬೆಳಿಗ್ಗೆ ಅಲ್ಲಿಗೆ ಹೋದೆ...


"ನಮ್ಮಲ್ಲಿ ...

ಹದಿನೈದು  ಸಾವಿರದ   ಒಂದು ಕೋರ್ಸ್ ಮಾಡಿದರೆ ನಿಮಗೆ ಶಾಂತಿ ಸಿಗುತ್ತದೆ..."

ಗುರುಜಿಯವರು ಬಹಳ ಶ್ರೀಮಂತರಾಗಿದ್ದರು.....

ನೂರು ಎಕರೆ ಜಾಗದಲ್ಲಿ ಆಶ್ರಮ ಇತ್ತು....

ಈ ಶಾಂತಿ ಬಹಳ ದುಬಾರಿ ಎನಿಸಿತು....


ನನ್ನ ಮಾವ ಸ್ವಲ್ಪ ಸಹಾಯ ಮಾಡಿದ... ನಾನು ಸೇರಿಕೊಂಡೆ...


"ಉಸಿರಾಟ ಹೇಗೆ ಮಾಡಬೇಕು...?

ಪ್ರಾಣಾಯಾಮ ಹೇಗೆ ಮಾಡಬೇಕು...

ಮನದಲ್ಲಿ ..

ಯಾವಾಗಲೂ ಆಧ್ಯಾತ್ಮದ ಉನ್ನತ ವಿಚಾರಗಳನ್ನು ಇಟ್ಟುಕೊಳ್ಳಬೇಕು...

ಎಲ್ಲರನ್ನೂ... ಪ್ರೀತಿಸ ಬೇಕು...


ನಾವು ಮಗುವಿನಂತೆ ಇರಬೇಕು... 

ಮುಗ್ಧವಾಗಿ...ಶಾಂತವಾಗಿ...."

ಎಂದೆಲ್ಲ ಹೇಳಿ... 

ಹತ್ತು ದಿನ  ಮೂರು ಹೊತ್ತು ಹಸಿತರಕಾರಿ ತಿನ್ನಿಸಿ...

ಕೊನೆಗೆ ಬಿಸಿ ಉಪ್ಪುನೀರು ಕುಡಿಸಿ...


ಒಂಥರಾ ಪ್ರೆಷ್ ಮಾಡಿಕಳುಹಿಸಿದರು....


ಮನೆಗೆ ಬಂದೆ...


ಅವತ್ತು ನನ್ನ ತಂಗಿಯ ಪತ್ರ ಬಂದಿತ್ತು....


"ಅಣ್ಣಾ...

ನನ್ನ ಗಂಡ ಎರಡೆಳೆ ಚಿನ್ನದ ಸರ ಮಾಡಿಸಿದ್ದಾರೆ..."

ಅಡಿಗೆ ಮನೆಯಲ್ಲಿ ಯಥಾ ಪ್ರಕಾರ ಶಬ್ಧಗಳು...!


ಎಷ್ಟೇ ಪ್ರಾಣಾಯಾಮ ಮಾಡಿದರೂ ನನ್ನ ಬಿಪಿ ಜಾಸ್ತಿಯಾಗುತ್ತಿತ್ತು....


"ನಿಮ್ಮ ತಂಗಿ ಗಂಡನ ಯೋಗ್ಯತೆ .. ನಿಮಗಿಲ್ಲವಲ್ರೀ... !


ಥೂ ನಿಮ್ಮ.... !



ಯಾವ ಕಣ್ಣಿಂದ...
ನಿಮ್ಮ ತಂಗಿ ದೌಲತ್ತು ನೋಡ ಬೇಕ್ರಿ .?..."

ನನ್ನ ಮೈ ಕಂಪಿಸತೊಡಗಿತು...


ಗುರುಜಿ ಹೇಳಿಕೊಟ್ಟ ಮಂತ್ರ ಮನದಲ್ಲೇ ಪಟಿಸಿದೆ...

ಉಸಿರಾಟದ ಕಡೆ ಗಮನಕೊಟ್ಟೆ...

"ಯಾವ ಜನ್ಮದಲ್ಲಿ ...

ಎಷ್ಟು ಪಾಪ ಮಾಡಿದ್ನೋ...
ನೀವು ಗಂಡ ಆಗಿ ಸಿಕ್ಕಿದ್ದಿರಲ್ರಿ... !

ನೀವು ಗಂಡಸೇ ಅಲ್ಲವೇನ್ರೀ...?


ನಿಮಗೆ ಏನೂ ಅನ್ನಿಸೋದೇ ಇಲ್ವಾ...?


ಥೂ ನಿಮ್ಮ ಜನ್ಮಕ್ಕೆ... !!..."


ನನ್ನ ಮೈ ಉರಿಯತೊಡಗಿತು.....


ಏನು ಮಾಡ್ತಾ ಇದ್ದೇನೆ ಅಂತ ನನಗೆ ಗೊತ್ತಾಗಲಿಲ್ಲ....


ಪಕ್ಕದಲ್ಲಿ ಇದ್ದ ಕಬ್ಬಿಣದ ರಾಡನ್ನು  ತೆಗೆದು ಮೂಲೆಗೆ ಜೋರಾಗಿ ಎಸೆದೆ...!


ಮರದ  ಖುರ್ಚಿ ಮೇಲೆ ಎತ್ತಿ ಎಸೆದೆ..!


ಸ್ವಲ್ಪದರಲ್ಲಿ ನನ್ನಾಕೆ ತಪ್ಪಿಸಿಕೊಂಡಳು....


ಅಡಿಗೆ ಮನೆಯೊಳಗೆ ಓಡಿ  ಹೋದಳು....


ನಾನು ಅಲ್ಲೆ ಮಂಚದ ಮೇಲೆ ಕುಳಿತುಕೊಂಡೆ....


ಮೈಯೆಲ್ಲ ಬೆವರುತ್ತಿತ್ತು...


ಮನೆಯಲ್ಲಿ ನೀರವ ಮೌನ....


"ಛೇ...

ತಪ್ಪು ಮಾಡಿಬಿಟ್ಟೆ...."

ಅಪರಾಧಿ ಮನೋಭಾವನೆ ಕಾಡತೊಡಗಿತು....

ಬೇಸರವೆನಿಸಿತು ....

ಗುರೂಜಿ ಹೇಳಿಕೊಟ್ಟಂತೆ ಪ್ರಾಣಾಯಾಮ ಶುರುಮಾಡಿದೆ....


ಕಣ್ಮುಚ್ಚಿದೆ...


ಸುಮಾರು ಹೊತ್ತಿನ ಮೇಲೆ...ಯಾರೋ ಪಕ್ಕದಲ್ಲಿ ಬಂದಂತಾಯಿತು...


"ರೀ...

ಬೇಸರಪಟ್ಕೊಳ್ಳಬೇಡಿ....
ನನ್ನಿಂದ ತಪ್ಪಾಯ್ತು...ಕ್ಷಮಿಸಿ ...
ಇನ್ನು ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುವೆ...."

ಅವಳ  ಧ್ವನಿ ನಡುಗುತ್ತಿತ್ತು....!

ಆತಂಕ... 
ಹೆದರಿಕೆಯಿಂದ ಅವಳು  ಅಳುತ್ತಿದ್ದಳು....!



(ಇದು ಕಥೆ..)

ಪ್ರತಿಕ್ರಿಯೆಗಳು ತುಂಬಾ ಚೆನ್ನಾಗಿವೆ...
ದಯವಿಟ್ಟು ಓದಿ...


Sunday, October 14, 2012

........... ತೀವ್ರತೆ .............


ಮತ್ತೊಮ್ಮೆ ನೋಡಿದೆ...

"ಹೌದು... 

ಅದೇ ಹುಡುಗಿ... !!...
ನನ್ನ   ಮೌನದಲ್ಲಿ ಮಾತನಾಡುವ ಹುಡುಗಿ...!.."

ಅನಿರೀಕ್ಷಿತವಾಗಿ ಎದೆಯ ಬಡಿತ ಜಾಸ್ತಿಯಾಗತೊಡಗಿತು...


ಪಕ್ಕದಲ್ಲಿ ಇದ್ದವ ಬಹುಷಃ ಗಂಡನಿರಬೇಕು...

ಅವಳ ಕೈಯನ್ನು ಹಿಡಿದುಕೊಂಡು ಮಗು ಬರುತ್ತಿತ್ತು....!

ನೇರವಾಗಿ ರಿಸೆಪ್ಷನ್   ಕಡೆಗೇ ಬರುತ್ತಿದ್ದರು...


ಕೆಲವು ಸಂದರ್ಭಗಳನ್ನು ..

ನಾವೇ ತಪ್ಪಿಸಿಕೊಳ್ಳುತ್ತೇವೆ.. 

ಅದಕ್ಕೆಲ್ಲ ಉತ್ತರ ಇರುವದಿಲ್ಲ..


ನಾನು ತರಾತುರಿಯಲ್ಲಿ ರಿಸೆಪ್ಷನಿಷ್ಟಿಗೆ ಹೇಳಿದೆ...


"ನೋಡಿ..

ಅಲ್ಲಿ ಬರುತ್ತಿರುವ ದಂಪತಿಗಳಿಗೆ ಒಳ್ಳೆಯ ರೂಮನ್ನು ಕೊಡಿ...
ಅವರು ನನಗೆ ಬೇಕಾದವರು...

ನಮ್ಮ ಹೊಟೆಲ್ಲಿನ ಸ್ಪೆಷಲ್ ರಿಯಾಯತಿಯನ್ನು ಕೊಡಿ..."


ನಾನು ಮರೆಯಾದೆ..


ನೀವೀಗ ಅಂದುಕೊಂಡಿದ್ದು ಸರಿಯಾಗಿದೆ... 

"ನಾನು ಈ ಹೊಟೆಲ್ಲಿನ ಮಾಲಿಕ"..

ಈ ಹುಡುಗಿ ಯಾರು ಗೊತ್ತಾ?


ನಾನು ಕಾಲೇಜಿಗೆ ಹೋಗುವಾಗ ಪಕ್ಕದ ಮನೆಯಲ್ಲಿದ್ದವಳು...


ಮೊದಲ ಬಾರಿಗೆ ನೋಡಿದಾಗ ..

ಅವಳ ತುಂಬು ಕೆನ್ನೆಗಳ ಆರಾಧಕನಾಗಿ ಹೋದೆ... !

ಆ ಕೆನ್ನೆಯ ಉಬ್ಬುತಗ್ಗುಗಳು,...

ನುಣುಪು ಗಲ್ಲ... ! ವಾಹ್  ....

ಪ್ರೇಮ ಪತ್ರ ಅಲ್ಲೇ ..ಕೆನ್ನೆಯ ಮೇಲೆ ಬರೆಯಬಹುದು ನೋಡಿ....!

ನನ್ನನ್ನು ಹುಚ್ಚ ಅಂದು ಕೊಂಡು ಬಿಟ್ಟೀರಾ....!

ನಾನು ಸರಿಯಾಗಿಯೇ ಇದ್ದೆ...

ಆದರೆ.. ಈ  ಪ್ರೀತಿ ಹುಚ್ಚು.... ಕಣ್ರೀ..!!

ಒಂದು ದಿನ ಹುಡುಗಿಗೆ ಧೈರ್ಯ ಮಾಡಿ ಹೇಳಿದೆ...


ಹುಡುಗಿ ಬಾಯಲ್ಲಿ "ಇಷ್ಟವಿಲ್ಲ" ಅಂದರೂ...

ಕಣ್ಣುಗಳು ಓಕೆ ಅಂದಿದ್ದವು... 

ಕೊನೆಗೆ ಒಂದು ದಿನ ಒಪ್ಪಿದಳು ಅನ್ನಿ...!


ಈ ಬಯಕೆ..

ಆಸೆಗಳು   ..
ಯಾಕೆ ಇಷ್ಟು ರಭಸವಾಗಿರುತ್ತವೆ  ? ...

ಗೊತ್ತಿಲ್ಲ...


"ಹುಡುಗಿ...


ನನ್ನ ಕನಸಲ್ಲೆಲ್ಲ ನೀನೇ ಬರ್ತಿಯಾ....


ಒಮ್ಮೆ ತಬ್ಬಿಕೊಳ್ಳಬೇಕು ಅನ್ನಿಸುತ್ತಿದೆ...

ದಯವಿಟ್ಟು ಇಲ್ಲವೆನ್ನ ಬೇಡ ಕಣೆ..."

"ಸರಿ...

ಎಷ್ಟು ಹೊತ್ತು ...?"

"ಅಯ್ಯೋ..

ಹಾಗೆ ಇದ್ದುಬಿಡೋಣ ಅನ್ನಿಸುತ್ತದೆ...
ಊಟ
ತಿಂಡಿ... 
ಈ ಪ್ರಪಂಚ ಏನೂ ಬೇಡ ಕಣೆ...

" ಮತ್ತೆ....  ! ...!!.."


ಅವಳ ಕಣ್ಣುಗಳಲ್ಲಿನ ಆಸೆ ಅರಳಿದಂತೆ ಅನ್ನಿಸಿತು...

ನನ್ನಲ್ಲಿನ 
ತೀವೃತೆಗೆ ಅವಳು ಹೂಂ ಅಂದಂತಿತ್ತು...

" ಅಷ್ಟು ಹತ್ತಿರವಿದ್ದಾಗ ..

ನಿನ್ನ ಕೆನ್ನೆ ಸಿಕ್ಕರೆ ಸಾಕು..
ಮತ್ತೇನೂ ಬೇಕಿಲ್ಲ...
ಇಷ್ಟೇ ಕಣೆ... 
ದಯವಿಟ್ಟು ಇಲ್ಲವೆನ್ನ ಬೇಡ..."

ಹುಡುಗಿ ಗಂಭೀರವಾದಳು...


"ಹುಡುಗಾ....


ಈಗ ನೀನು ಮಾತನಾಡುತ್ತಿಲ್ಲ...

ನಿನ್ನ ಬಣ್ಣದ ಹರೆಯ ಮಾತನಾಡುತ್ತಿದೆ...

ಕೆಲವು ಆಸೆಗಳನ್ನು  ಬೇಕಾಬಿಟ್ಟಿ ಹರಿಯಬಿಡಬಾರದು...


ಅದಕ್ಕಾಗಿ ಕಾಯಬೇಕು...


ತಡೆಗೊಡೆ ನಾವೇ ಹಾಕಿಕೊಳ್ಳಬೇಕು...

ಅದಕ್ಕೆಲ್ಲ ಈಗ ಸಂದರ್ಭ ಅಲ್ಲ...

ಚೆನ್ನಾಗಿ ಓದೋಣ...

ನನ್ನನ್ನು ಮದುವೆಯಾಗು...

ಆಗ ನೀನು ಹೇಳಿದ ಹಾಗೆ ಎಲ್ಲವೂ..."


ಹುಡುಗಿ ಕಣ್ಣಿನಲ್ಲಿ ಪ್ರೀತಿಯಿತ್ತು...


ಆ ಪ್ರೀತಿಯಲ್ಲಿ ..

ನಮ್ಮಿಬ್ಬರ ಮಧ್ಯದ  "ಬೇಲಿಯೂ" ಇತ್ತು..

ಬೆಟ್ಟದಷ್ಟು ಆಸೆ ಇದ್ದರೂ ಅದು ಹೇಗೆ ಸುಮ್ಮನಿರ್ತಾರಪ್ಪ...!


ಅವಳು ನನ್ನಾಸೆಗೆ ಬೇಡವೆಂದರೂ... 

ನಮ್ಮಿಬ್ಬರ ಪ್ರೀತಿಗೆ...
ಪತ್ರಗಳಿಗೆ... ಮಾತುಕತೆ..
ಭೇಟಿಗೆ ಏನೂ ತೊಂದರೆ ಆಗಲಿಲ್ಲ...

ಆ ದೂರದಲ್ಲೂ ಹಿತವಿತ್ತು... ಆಕರ್ಷಣೆ ಇತ್ತು...


ಆಗ ..

ಅಂತಿಮ ವರ್ಷದ ಪರೀಕ್ಷೆ ಓದು ನಡೆಯುತ್ತಿತ್ತು...
ಒಂದು ದಿನ ಸಾಯಂಕಾಲ ಹುಡುಗಿ ಓಡೋಡಿ ಬಂದಳು..

ನನ್ನನ್ನು ಗಟ್ಟಿಯಾಗಿ...

ಬಲವಾಗಿ ತಬ್ಬಿಕೊಂಡಳು....!

ಅವಳ ತೀವ್ರತೆ ತುಂಬಾ ಖುಷಿಕೊಟ್ಟಿತು...


ನಾನು ಅವಳ ಸುತ್ತ ನನ್ನ ಕೈಗಳನ್ನು ಬಳಸುವವನಿದ್ದೆ...


"ಹುಡುಗಾ...

ನನ್ನಪ್ಪ ನನಗೆ ಗಂಡು ನೋಡಿದ್ದಾರೆ..
"ಈ ಪರೀಕ್ಷೆ ಓದು ಎಲ್ಲ ಸಾಕು ಮದುವೆಯಾಗು" ಅಂತಿದ್ದಾರೆ...
ನಾಳೆ ನಿಶ್ಚಿತಾರ್ಥವಂತೆ...

ನನಗೆ ಈ ಮದುವೆ ಬೇಡ..

ನಿನ್ನ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ...

ನನ್ನಪ್ಪ ನಮ್ಮ ಮದುವೆಗೆ ಖಂಡಿತ ಒಪ್ಪಿಗೆ ಕೊಡುವದಿಲ್ಲ...


ಎಲ್ಲಾದರೂ ಓಡಿ ಹೋಗೋಣ...

ನಮ್ಮದೇ ಸಂಸಾರ ಕಟ್ಟೋಣ..."

ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ...


ಅಷ್ಟರಲ್ಲಿ ನನ್ನಪ್ಪ ನನ್ನ ರೂಮಿಗೆ ಬಂದ...


ಹುಡುಗಿ ತನ್ನ ಅಪ್ಪುಗೆ ಸಡಿಲಿಸಿದಳು...


ಅವನಿಗೆ ವಿಷಯ ಗೊತ್ತಾಯಿತು..

ನನ್ನಪ್ಪ ಬಹಳ ಸಮಧಾನಿ...

"ಈ ಪ್ರೀತಿ.. 

ಪ್ರೇಮ .... ಹೃದಯ..
ಏನೇ ಅಂದರೂ..

ಬದುಕಲಿಕ್ಕೆ ಎರಡು ಹೊತ್ತು ಊಟ ಬೇಕು...

ಧರಿಸಲಿಕ್ಕೆ ಬಟ್ಟೆ ಬೇಕು...

ಸಿನೇಮಾ...  ಹೊಟೆಲ್ಲು ..

ಕಾರು..
ದೊಡ್ಡ ಅಪಾರ್ಟಮೆಂಟು ಅಗತ್ಯವಾಗಿ ಬೇಕು..

ಈಗ..

ಈ  ಪ್ರೀತಿ.. 
ಪ್ರೇಮಬದುಕು ತುಂಬಾ ದುಬಾರಿಯಾಗಿಬಿಟ್ಟಿದೆ ..
ಕೋಟಿಗಟ್ಟಲೆ ಹಣ ಬೇಕು...

ನಿಮ್ಮ ಅರ್ಧ ಓದು ಅದನ್ನೆಲ್ಲ ಪೂರ್ತಿಗೊಳಿಸಲಾರದು...


ನಾನು ಶ್ರೀಮಂತನಲ್ಲ...

ನಿಮ್ಮಿಬ್ಬರ ಬದುಕನ್ನು ನೀವೇ ನೋಡಿಕೊಳ್ಳಬೇಕು...

ಜೊತೆಗೆ ನಮ್ಮ "ಮುಪ್ಪನ್ನೂ " ನೋಡಿಕೊಳ್ಳಬೇಕು...


ಓಡಿ ಹೋಗಿ ..

ಬದುಕು ಕಂಡುಕೊಳ್ಳುವದು ಮೂರ್ಖತನ....

ಈಗ ನಿಮ್ಮ ಮದುವೆಗೆ ನನ್ನ ಒಪ್ಪಿಗೆ ಖಂಡಿತ ಇಲ್ಲ...."


ಅಪ್ಪ ಅಷ್ಟು ಹೇಳಿ ಹೊರಟು ಹೋದ...


ಏನು ಮಾಡಲಿ...?


ಆ ಚಂದದ ಹುಡುಗಿಯ ಕೆನ್ನೆಯಲ್ಲಿ ಕಣ್ಣೀರಿತ್ತು...


ಕಣ್ಣುಗಳಲ್ಲಿ ದೈನ್ಯತೆ ಇತ್ತು...

ನನಗಾಗಿ ಎಲ್ಲವನ್ನೂ ಬಿಟ್ಟು ಬರುವ ಪ್ರೀತಿಯಿತ್ತು....

ಎದುರಿಗೆ ..

ಬದುಕಿನ ಸವಾಲುಗಳ ಪ್ರಶ್ನೆ ಇರುವಾಗ ..
ಹುಡುಗಿ...
ಆಕರ್ಷಣೆಗಳು ಕಡಿಮೆಯಾಗುತ್ತವಾ?

ನಾನು ಭವಿಷ್ಯಕ್ಕೆ ಹೆದರಿದೆನಾ  ?


ನನ್ನ ಅಸಹಾಯಕ ನಿರುತ್ತರ...

ಅಸಹನೀಯ ಕ್ಷಣಗಳು...

ಇಷ್ಟೆಲ್ಲ ಆರಾಧಿಸಿದ ನನ್ನ ಪ್ರೇಮ ಸುಳ್ಳಾ?

ಈ ಪ್ರೀತಿಗಾಗಿ ಏನನ್ನೂ ಮಾಡಲಾರದೆ ಹೋದೆ...

ಹುಡುಗಿ ನನ್ನ ರೂಮಿನಿಂದ ಅತ್ತೂ.. ಅತ್ತೂ ಹೋದಳು..


ಹೋಗುವಾಗ ..

ಅವಳ ದೈನ್ಯ ಕಣ್ಣಿನ ನೋಟ ನನ್ನೋಳಗೆ ಬಿಟ್ಟು ಹೋದಳು..

ನಾನು ಈಗ ಶ್ರೀಮಂತನಾದರೂ..

ಕೈಗೆ ಸಿಗದ ಅವಳ ಪ್ರೀತಿಗಾಗಿ ಇನ್ನೂ ಮನಸ್ಸು ಕಾತರಿಸುತ್ತಿತ್ತು...

ಅವಳು ಬೇಕು ಎನ್ನುವ ತೀವೃತೆ ಇನ್ನೂ ಜಾಸ್ತಿಯಾಗಿತ್ತು....


ಈಗ ...

ಅನಿರೀಕ್ಷಿತವಾಗಿ ಮತ್ತೆ ನನ್ನೆದುರಿಗೆ ಬಂದಿದ್ದಾಳೆ...

ನನ್ನ ಸಹಾಯಕರಿಗೆ ಹೇಳಿ ಅವರಿಗೆ ಸ್ಪೆಷಲ್ ಊಟ ಕಳುಹಿಸಿದೆ...


"ನಮ್ಮ ಹೊಟೆಲ್ಲಿನ ಇಂದಿನ ಅದೃಷ್ಟದ ಅತಿಥಿಗಳು ನೀವು" ಅಂತ


ನಮ್ಮ ಪ್ರೀತಿಯವರು ....

ಪ್ರೀತಿಯಿಂದ ಊಟ ಮಾಡಿದರೆ ಎಷ್ಟು ಖುಷಿ ಅಲ್ವಾ ..?

ಈ ಹುಡುಗಿಯನ್ನು ಭೇಟಿ ಆಗಬೇಕಲ್ಲಾ?

ಹೇಗೆ...?

ಗಂಡ ಇರಬಾರದು....


ಮಗು...  ?

ಮಗು ಓಕೆ.. ಅದು ಪುಟ್ಟ ಮಗು...

ಈ ಹುಡುಗಿಯೊಡನೆ ಮಾತನಾಡಬೇಕು..


"ಅವಳಿಗಾಗಿ ಇಷ್ಟು ವರ್ಷ ಹಂಬಲಿಸಿ..

ಹಂಬಲಿಸಿ ..
ಇನ್ನೂ ಮದುವೆಯಾಗದೆ ಉಳಿದ ನನ್ನ ಕಥೆಯನ್ನು ಹೇಳಬೇಕು....

ಅವಳ ಕ್ಷಮೆ ಕೇಳಬೇಕು...."


ಎಷ್ಟೆಲ್ಲ ಚಂದದ ಹುಡುಗಿಯರು  ನನ್ನ ಪ್ರೀತಿ ಹಂಬಲಿಸಿ ಬಂದಿದ್ದರೂ..


ಇವಳ "ದೈನ್ಯ ಕಣ್ಣಿನ  ನೋಟ..

ಅಪರಾಧಿ ಮನೋಭಾವನೆ" ನನ್ನನ್ನು ಸದಾ ಇರಿಯುತ್ತಿತ್ತು...

ನಾನು ಅವಳ ಪ್ರೀತಿಗೆ ಮೋಸ ಮಾಡಬಾರದಿತ್ತು....


"ಸಮಯ" ಅನ್ನೋದು ಇದೆಯಲ್ಲ...

ಎಲ್ಲ ಪ್ರಶ್ನೆಗಳಿಗೆ...ಉತ್ತರ ಕೊಡುತ್ತದೆ..

ನಾನು ಅವರ ಚಲನವಲನ  ಗಮನಿಸುತ್ತಿದ್ದೆ..


ಈ ದಿನ ಬೆಳಿಗ್ಗೆ ...

ಅವಳ ಗಂಡ ಹೊಟೆಲ್ಲಿನಿಂದ ಆಚೆಗೆ ಹೋದ...
ಸಾಯಂಕಾಲದವರೆಗೆ ಬಾಡಿಗೆ  ಕಾರು ಬೇಕು ಅಂತ ಹೇಳಿದ್ದ...!

ನನ್ನ ಅದೃಷ್ಟಕ್ಕೆ ಮನಸಾರೆ ವಂದಿಸಿದೆ...


ಅವರಿದ್ದ ರೂಮಿನ ಕರೆಗಂಟೆ ಒತ್ತಿದೆ...


ಎದೆಯಲ್ಲಿ ಏನೋ ನಡುಕ.... !


ಆಕೆ ಬಂದು ಬಾಗಿಲನ್ನು ತೆಗೆದಳು...

ಅಶ್ಚರ್ಯವಾಗಿದ್ದರೂ ...
ತೋರ್ಪಡಿಸದ ಮುಖಭಾವ ನನ್ನನ್ನು ಸ್ವಾಗತಿಸಿತು...

ಒಳಗೆ ಬಾ ಅನ್ನಲಿಲ್ಲ...


ನಾನು ಅವಳನ್ನು ಹಿಂಬಾಲಿಸಿದೆ...


ಆ ಮೌನದಲ್ಲಿ ..

ನನ್ನೆದೆಯ ಢವ ಢವದ ಶಬ್ಧ ಜಾಸ್ತಿಯಾಗತೊಡಗಿತು...

ನನ್ನೊಳಗಿನ ತೀವ್ರತೆಗೆ  ನನಗೆ ನಾಚಿಕೆ ಆಯಿತು...


"ಪುಟ್ಟಿ  ಸ್ನಾನಕ್ಕೆ ಹೋಗಿದ್ದಾಳೆ... ಏನು ವಿಷಯ...?"


ಅವಳ ಕಣ್ಣುಗಳನ್ನು ನೋಡಿದೆ..

ನಿರ್ವಿಕಾರ ಭಾವನೆ ಬಲವಂತವಾಗಿ ಮಾಡಿಕೊಂಡಂತಿತ್ತು ...

"ಹುಡುಗಿ...

ನಾನು ಈ ಹೊಟೆಲ್ ಮಾಲಿಕ ಈಗ....
ನನ್ನ ಬಳಿ ಸಾಕಷ್ಟು ಹಣವಿದೆ...."

ಅದಕ್ಕೇನು ? ..

ಎನ್ನುವಂತಿತ್ತು ಅವಳ ಕಣ್ಣು..........

" ಅಂದು..

ನಿನ್ನ ಪ್ರೀತಿಯನ್ನು ನಿರಾಕರಿಸಿದ್ದು ನನ್ನ ಬದುಕಿನ ಬಲು ದೊಡ್ಡ ತಪ್ಪು...

ಅಪರಾಧಿ ಮನೋಭಾವನೆಯಿಂದ ...

ದಿನಾಲೂ..
ಪ್ರತಿಕ್ಷಣ ಹಿಂಸೆಯಿಂದ ಸಾಯುತ್ತಿರುವೆ..."

ಹುಡುಗಿಯ ಕಣ್ಣು ನೋಡಿದೆ...

ಅಲ್ಲಿ ಪ್ರೀತಿ ಹುಡುಕುವ ಆಸೆ ಆಯ್ತು...

ಅವಳ ಭಾವರಹಿತ ನೋಟ ನೋಡಲಾರದೆ ತಲೆ ತಗ್ಗಿಸಿದೆ....


"ಹುಡುಗಿ...

ನಮ್ಮ ಪ್ರೀತಿಗೆ ಒಂದು ಅವಕಾಶ ಕೊಡೋಣ...
ನಿನ್ನನ್ನು ಈಗಲೂ ಸ್ವೀಕರಿಸುತ್ತೇನೆ...

ನಿನ್ನ ಮಗುವನ್ನೂ ಸಹ ಪ್ರೀತಿಸುತ್ತೇನೆ..

ನೀನಿಲ್ಲದ ಬದುಕು ನನ್ನಿಂದ ಆಗದು...

ದಯವಿಟ್ಟು... ದಯವಿಟ್ಟು.. ಬಾ...


ಈಗ ನನ್ನ ಬಣ್ಣದ ಹರೆಯ ಮಾತಾಡುತ್ತಿಲ್ಲ...

ಹಣಗಳಿಸುತ್ತಿರುವ .....
ಪ್ರಬುದ್ಧತೆಯಿಂದ ಮಾತನಾಡುತ್ತಿರುವೆ...

ನಿನ್ನನ್ನು ಹೂವಿನಂತೆ ನೋಡಿಕೊಳ್ಳಬಲ್ಲೆ....


ಪ್ರೀತಿಯ ಜೊತೆಗೆ ..

ಕಾರು..
ಬಂಗ್ಲೆ... ಹಣ ಸೌಕರ್ಯದ ಸುಖ ಕೊಡಬಲ್ಲೆ..."

ನಾನು ತಲೆ ತಗ್ಗಿಸಿಯೇ ಇದ್ದೆ...


ಹುಡುಗಿಯ ಗಡಸು ಧ್ವನಿ ನನ್ನನ್ನು ಎಚ್ಚರಿಸಿತು..


"ಏಳು...

ಗೆಟ್ ಔಟ್... !!
ಮೊದಲು ಇಲ್ಲಿಂದ ಹೊರಡು... 
ರೂಮಿನ ಬಾಗಿಲು ತೆರೆದಿದೆ...."

ನಾನು ಅವಕ್ಕಾದೆ....


"ನನ್ನ ಗಂಡನ ಪ್ರೀತಿಗೆ ಮೋಸದ ಕಲ್ಪನೆಯನ್ನೂ ಮಾಡಲಾರೆ...


ನೀನು ನನ್ನ ನೆನಪು ಅಷ್ಟೆ..


ನನ್ನ ಇಂದಿನ ಬದುಕು ನನ್ನ ಗಂಡ...


ನಮ್ಮಿಬ್ಬರ ಪ್ರೀತಿಯ ವಿಷಯ ಗೊತ್ತಿದ್ದರೂ..

ಒಂದು ದಿನವೂ ..
ಹಂಗಿಸಿ.. 
ಅಣಕಿಸದ ದೊಡ್ಡ ಮನುಷ್ಯ ಆತ..

ಅವನ ಪ್ರೀತಿ ಬಲು ದೊಡ್ಡದು...


ಇಷ್ಟು ಮಾತನಾಡುವ ಅಗತ್ಯ ನನಗಿಲ್ಲ...


ಮತ್ತೆ  ಎಲ್ಲಿಯೂ ನಿನ್ನ ಹ್ಯಾಪು ಮೋರೆಯನ್ನು ನನ್ನ ಕಣ್ಣಿಗೆ ಕಾಣಿಸಬೇಡ... ಹೊರಡು... 

ಗೆಟ್ ಔಟ್.. !!..."

ಬಹಳ ತೀಕ್ಷ್ಣವಾಗಿತ್ತು ಧ್ವನಿ...


ಅತ್ಯಂತ ಅಪಮಾನಕರ ಕ್ಷಣಗಳು........ !


ನಾನು ಅಲ್ಲಿಂದ ಹೊರಟೆ..

ಮಗು ಸ್ನಾನದ ರೂಮಿಂದ ಹೊರಗೆ ಬಂತು...

"ಇವರು ಯಾರಮ್ಮಾ?"


"ಗೊತ್ತಿಲ್ಲ...

ಅವರಿಗೆ ಬೇರೆ ಕಡೆ ಹೋಗಬೇಕಿತ್ತಮ್ಮ..
ವಿಳಾಸ ತಪ್ಪಿ ಬಂದಿದ್ದಾರೆ..."

"ಅವರ ಬಳಿ ಅಡ್ರೆಸ್ ಇಲ್ಲವಾ?"


"
ಅವರ ಬಳಿ ...
ಬಹುಷಃ ಹಳೆ ವಿಳಾಸವಿದ್ದಿರಬಹುದು...
ವಿಳಾಸಗಳು ಬದಲಾಗುತ್ತ ಇರುತ್ತಮ್ಮಾ...

ವಿಳಾಸ..
ಸರಿ ಇದ್ದರೂ ...
ಸಮಯದಲ್ಲಿ ವ್ಯಕ್ತಿಗಳು ಬದಲಾಗುತ್ತಾರಮ್ಮ...

ಕೆಲವೊಮ್ಮೆ ..

ವಿಳಾಸ... ವ್ಯಕ್ತಿಗಳು ಎರಡೂ ಬದಲಾಗಿಬಿಡುತ್ತದಮ್ಮಾ..."..

ನಾನು ಹಿಂತಿರುಗಿ ನೋಡಲಿಲ್ಲ....






(ಚಂದದ ಪ್ರತಿಕ್ರಿಯೆಗಳಿವೆ .... ದಯವಿಟ್ಟು ಓದಿ....)