Thursday, January 24, 2013

...... ಮೌನ .......


ನನ್ನ ಮೌನ ನನಗಿಷ್ಟ...

ಮೌನ ನನಗೆ ಅನಿವಾರ್ಯ ಕೂಡ...


ನನ್ನ ಅಪ್ಪ.. ಅಮ್ಮ ..

ಹಿರಿಯರೂ ಇದನ್ನೇ ಹೇಳಿದರು....

"ನೋಡಮ್ಮ...

ನೀನು ಪ್ರಕೃತಿ .. ಹೆಣ್ಣು...

ಮೌನ ...ನಿನಗೆ ಭೂಷಣ..


ಮೌನ .... ನಿನಗೆ ಚಂದ..."


ನನಗೆ ಗೊತ್ತು...

ನಾನು ನೋಡಲಿಕ್ಕೂ ಸುಂದರಿ....

ಈ ಚಂದ ..

ಸೌಂದರ್ಯ ಎನ್ನುವದು ಸಂತೋಷ ಕೊಡುತ್ತದೆ..

ನಿಜ..

ಚಂದದ ಆತಂಕಗಳೇನು ಎನ್ನುವದನ್ನು ಚಂದವಿದ್ದವರನ್ನು ಕೇಳಬೇಕು...

ಬೇರೆಯವರೆಲ್ಲ ಯಾಕೆ...?

ನಾನೇ ಹೇಳುತ್ತೇನೆ ಕೇಳಿ..

ಒಹ್.. !!

ನಾನು ಯಾರೆಂದು ನಿಮಗೆ ಹೇಳಲೇ ಇಲ್ಲವಲ್ಲ... !

ನಾನು ತುಳಸಿ...

ಧರ್ಮಧ್ವಜ... ಮಹಾರಾಜನ ಮಗಳು....

ಮಹಾವಿಷ್ಣುವಿನ ಪರಮ ಭಕ್ತೆ...


ನನ್ನ..

ಮೌನಕ್ಕೆ  ಭಾವನೆಗಳಿವೆ.... ಮಾತುಗಳಿವೆ...

ನನ್ನ..

ಮೌನದೊಡನೆ ಮಾತನಾಡುವಷ್ಟು ವ್ಯವಧಾನ ಯಾರಿಗಿದೆ ಹೇಳಿ....?

ನನ್ನ ಅಪ್ಪ ಬಾಡಿದ ಮುಖ ಮಾಡಿಕೊಂಡು ನನ್ನ ಬಳಿ ಬಂದಿದ್ದ..

ದುಗುಡ... ಆತಂಕ ಎದ್ದು ಕಾಣುತ್ತಿತ್ತು...

"ಮಗಳೆ..

ಇದೊಂದು ಇಕ್ಕಟ್ಟಿನ ಪರಿಸ್ಥಿತಿ..
ರಾಕ್ಷಸ ದೊರೆ..
" ಶಂಖಚೂಡ "  ನಿನ್ನನ್ನು  ಮದುವೆಯಾಗ ಬಯಸಿದ್ದಾನೆ...

ನಾನು ಒಪ್ಪಿಗೆ ಕೊಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ..."


ನಾನು ಸುಮ್ಮನಿದ್ದೆ..


"ಮಗಳೆ...

ನಿನಗೆ ಗೊತ್ತಲ್ಲ...
ನಾನು ನಿನ್ನನ್ನು ಕೊಡುವದಿಲ್ಲ ಅಂತ ಹೇಳಿದರೆ ..
ನಮ್ಮ ರಾಜ್ಯವನ್ನು ಆತ ಸರ್ವ ನಾಶ ಮಾಡಿಬಿಡುತ್ತಾನೆ..

ಈ ರಾಜ್ಯದ ರಾಜನಾಗಿ ..

ನಾನು ಆತಂಕದಲ್ಲಿದ್ದೇನೆ ಮಗಳೆ.."

ರಾಜ್ಯದ ಹಿತಾಸಕ್ತಿಯೋ ..

ಅಧಿಕಾರದ ಆಸೆಯೋ ನಾನು ರಾಕ್ಷಸನನ್ನು ಮದುವೆಯಾಗಬೇಕಿತ್ತು..
ನನ್ನಾಸೆಗಳನ್ನು ಬದಿಗಿಟ್ಟು...

"ಅಪ್ಪಾ...

ಆತ ರಾಕ್ಷಸ.. ಕೆಟ್ಟವ ಅಂತ ಹೇಳಿದವರ್ಯಾರು...?"

"ಇನ್ಯಾರಮ್ಮ...

ನಮ್ಮಂಥ ಮಾನವರು.. ದೇವತೆಗಳು.... "

"ಅಪ್ಪಯ್ಯ..

ಹುಲಿ.. ಸಿಂಹಗಳು  ಕ್ರೂರಿಗಳೆಂದು   ಹೇಳುವರ್ಯಾರು..?

ನಮ್ಮಂಥವರು ತಾನೆ..?


ಹುಲಿ ಜಿಂಕೆಯನ್ನು ಕೊಲ್ಲುತ್ತದೆ .. ..

ನಮ್ಮನ್ನೂ ತಿಂದುಬಿಡುತ್ತದೆ ಅಂತ..?.. "

"ಅಂದರೆ...?...... "


" ನಮ್ಮ ಹಿತಾಸಕ್ತಿಗಳಿಗೆ ಯಾರಾದರೂ ವಿರೋಧ ಮಾಡಿದರೆ ..

ಅವರು ಕೆಟ್ಟವರಾಗುತ್ತಾರೆ...
ರಾಕ್ಷಸರಾಗುತ್ತಾರೆ.. !..."

ದೇವತೆಗಳಿಗೂ... ರಾಕ್ಷಸರಿಗೂ ಎಷ್ಟೆಲ್ಲ ವರ್ಷಗಳಿಂದ ಯುದ್ಧ ನಡೆಯುತ್ತಿದೆಯಲ್ಲ...

ರಾಕ್ಷಸರೂ ಕಡಿಮೆಯೇನಿಲ್ಲ.."

"ಸ್ವಲ್ಪ ಬಿಡಿಸಿ ಹೇಳಮ್ಮ..."


"ಅಪ್ಪಯ್ಯಾ..

ಈ ದೇವತೆಗಳಿಗೆ ರಾಕ್ಷಸರು ಕೆಟ್ಟವರು  !...

ಮನುಷ್ಯರು..

ಮಾನವೀಯತೆ...
ಈ ದೇವತೆಗಳು ..
ಎಲ್ಲರೂ  ಸೇರಿಕೊಂಡು ಈ ಜಗತ್ತಿಗೆ ಇಷ್ಟೆಲ್ಲ ವರ್ಷಗಳಿಂದ ಏನು ಮಾಡಿದ್ದಾರೆ...?

ಈ ಒಳ್ಳೆಯವರೆಲ್ಲ ಸೇರಿ ...

ಇಲ್ಲಿತನಕ ಮಾಡಿದ್ದು ಜಗತ್ತಿನ..
ಈ ಭೂಮಿಯ ವಿನಾಶ ತಾನೆ?

ಒಂದು ವ್ಯವಸ್ಥಿತ ಅತ್ಯಾಚಾರ ತಾನೆ?...?.." 


ಅಪ್ಪ ಸುಮ್ಮನಿದ್ದ...


"ಪಾಪ..

ಪುಣ್ಯಗಳು  .. ತಪ್ಪು.. ಒಪ್ಪುಗಳು  ..
ಎಲ್ಲವೂ ..
ಅವರವರ ಮೂಗಿನ ನೇರಕ್ಕೆ ಅಪ್ಪಯ್ಯಾ..."

ನನಗೆ ..

ವೈಯಕ್ತಿವಾಗಿ  ನೋವಾದರೆ ಅದು ಅತ್ಯಾಚಾರ...
ಸಂತೋಷವಾದರೆ ಅದು ಸದಾಚಾರ..."

"ಮಗಳೆ..

ಈ ಮದುವೆಗೆ ನಿನ್ನ ಒಪ್ಪಿಗೆ ಇದೆಯಾ ? ... "

" ಅಪ್ಪಯ್ಯಾ..

ನನಗೆ ..
ನನ್ನ ಮೌನಕ್ಕೆ ಆಯ್ಕೆಯ ಸ್ವಾತಂತ್ರ್ಯವೆಲ್ಲಿದೆ...?

ರಾಕ್ಷಸರೋ... ಅಥವಾ ದೇವತೆಗಳೋ..
ಒಳ್ಳೆಯವರೋ... ಕೆಟ್ಟವರೋ...

ಎಲ್ಲರಿಗೂ ಬೇಕಾಗಿದ್ದು ನನ್ನ ಸೌಂದರ್ಯ ತಾನೆ...?


ನನ್ನ ಈ ಚಂದ ..

ಭೋಗಿಸಲ್ಪಡುವದಕ್ಕಾಗಿಯೇ.. ಇದ್ದದ್ದು...
ಉಪಯೋಗಿಸುವದಕ್ಕಾಗಿಯೇ .. ಇದ್ದದ್ದು..

ನನ್ನನ್ನು ಮದುವೆಯಾಗುವವ ..

ನನ್ನ ..
ಅಂದವನ್ನು ಆರಾಧಿಸುತ್ತಾನೋ...
ಭೋಗಿಸುತ್ತಾನೋ... ಗೊತ್ತಿಲ್ಲ...

ಪರಿಣಾಮ ನನ್ನ ದೇಹದ ಮೇಲೆ ತಾನೆ ?..


ಅಪ್ಪ ನನಗೂ ಈ ಭೂಮಿಗೂ ವ್ಯತ್ಯಾಸವೇನಿದೆ...?..


ಭಾಷೆ.. 

ಶಬ್ಧಗಳು ಏನೇ ಇದ್ದರೂ...
ಯಾವಾಗಲೂ "ಸೌಂದರ್ಯದ"  ಮೇಲೆ ನಡೆಯುವದು ..
ಅತ್ಯಾಚಾರವೇ ಅಲ್ಲವೇ ..?

ಅಪ್ಪಾ...
ಮೌನವೆಂದರೆ  "ಹೊಂದಾಣಿಕೆ"  ಅಲ್ವೇನಪ್ಪಾ.?

ನಾನು ಎಷ್ಟೆಂದರೂ  ಪ್ರಕೃತಿ... ಹೆಣ್ಣು...

ಪರಿಸ್ಥಿತಿಗೆ ಹೊಂದಿಕೊಂಡು ಹೋಗುವದೊಂದೆ ಉಳಿದಿರುವ ದಾರಿ...."

ಅಪ್ಪ ತಲೆ ತಗ್ಗಿಸಿದ...

ಅಪ್ಪನ ಅಸಹಾಯಕತೆಗೆ ಇನ್ನಷ್ಟು ಉಪದೇಶ ಕೊಡುವ ಮನಸ್ಸಾಗಲಿಲ್ಲ...

ನಮ್ಮ ಮದುವೆ ಬಲು ವಿಜ್ರಂಭಣೆಯಿಂದ ನಡೆಯಿತು...


ನನ್ನ ಗಂಡ..

ಮೊದಲ ರಾತ್ರಿಯಲ್ಲಿಯೇ..  ನನ್ನ  ಮನ ಗೆದ್ದ...

"ನೋಡು...

ಲೋಕದ ಕಣ್ಣಿಗೆ ನಾನು ರಾಕ್ಷಸ...

ನನಗೆ ಬೇಕಾಗಿದ್ದನ್ನು  "ಬೇಡಿ "ಅಭ್ಯಾಸವಿಲ್ಲ...


ಬೇಕಿದ್ದನ್ನು ..

ಯಾವ ಮುಲಾಜಿಲ್ಲದೆ ಪಡೆದು ..
ಅನುಭವಿಸುವದು ನನ್ನ ಸ್ವಭಾವ.."

ನನ್ನ ಬದುಕಿನಲ್ಲಿ..

ಮೊದಲ ಬಾರಿಗೆ ..
ನನ್ನ ಬಳಿ ಒಬ್ಬರು ಮುಖವಾಡವಿಲ್ಲದೆ ಮಾತನಾಡಿದ್ದರು... !

ನನಗೆ ಹೆದರಿಕೆ ಆಗಲೇ ಇಲ್ಲ...


ಬಲು ರಸಿಕ ಈ ಶಂಖಚೂಡ ...!


ಮಲಗುವ ಕೋಣೆಯ ಸೊಗಸಾದ ವಿನ್ಯಾಸ..

ಮೃದು ಹಾಸಿಗೆ...
ಉಣ್ಣೆಯ ಹೊದಿಕೆಗಳು...!

ಮೊದಲ ರಾತ್ರಿಯಲ್ಲಿ ಪ್ರೀತಿಯ ಮಳೆಗರೆದ...
ತನ್ನ
ಪೌರುಷ ಶಕ್ತಿಯಲಿ ನನ್ನನ್ನು ತೇಲಿಸಿದ...
ಭೋರ್ಗರೆದ....

ಭೋರ್ಗರೆವ ರಭಸದಲ್ಲೂ ಹಿತವಿತ್ತು....


ಪ್ರೇಮವೋ..

ಕಾಮವೋ....
ದೇಹಕ್ಕೂ  ಅದು ಬೇಕಿತ್ತು....

ನನ್ನನ್ನು ಅರ್ಪಿಸಿಕೊಂಡ ಧನ್ಯತಾ ಭಾವನೆಯನ್ನು ಆತ ಮೂಡಿಸಿದ...


ಶಂಖಚೂಡ...ನನಗೆ ಇಷ್ಟವಾದ...

ಮನಸಾರೆ ಪ್ರೀತಿಸಿದೆ...

ಒಳಗಿನ ಹುಳುಕು..

ಕೆಟ್ಟತನವನ್ನು ಮುಚ್ಚಿ ...
ಹೊರಗೆ ಸಭ್ಯತೆಯ ಸೋಗಲಾಡಿತನ ಅವನಲ್ಲಿರಲಿಲ್ಲ....

ನನ್ನ ...

ಅಂತಃಪುರದಲ್ಲಿ ದೊಡ್ಡ ದೊಡ್ಡ ಕಿಡಕಿಗಳಿದ್ದವು...
ದೊಡ್ಡ ದೊಡ್ಡ ಪರದೆಗಳು ಇದ್ದವು..

ಶಂಖಚೂಡ  ನನ್ನ ಗಂಡ...

ನನ್ನನ್ನು ಪ್ರೀತಿಸುತ್ತಾನೆ... 
ಇಷ್ಟು ಸಾಕಿತ್ತು ನನ್ನ ಅಂತಃಪುರದ ರಾಣಿಯ ಪರದೆಯ ಬದುಕಿಗೆ....

ಹೊರಗಿನ ಪ್ರಪಂಚ ಏನು ಹೇಳುತ್ತದೆ..

ಅಲ್ಲಿ ಏನಾಯ್ತು...? ನನಗೆ ಅದೆಲ್ಲ ಬೇಕಿರಲಿಲ್ಲ..

ಒಂದು ದಿನ ನನ್ನ ಅಪ್ಪ ಬಂದ..

ಮತ್ತೆ ಅದೇ ಆತಂಕದ ಮುಖವಿತ್ತು...

"ಮಗಳೆ....

ನಿನಗೊಂದು ಕೆಟ್ಟ ಸುದ್ಧಿ..."

"ಏನು...?"


"ನಿನ್ನ ಗಂಡನನ್ನು ಸಾಯಿಸಲಿಕ್ಕೆ ...

ದೇವತೆಗಳಲ್ಲಿ ಸಭೆ ನಡೆಯಿತಂತೆ..."

ನನ್ನ ಗಂಡ ದಿನ ನಿತ್ಯ ಯುದ್ಧ ಮಾಡುತ್ತಿದ್ದ....

ಅದು ನನಗೆ ಗೊತ್ತಿತ್ತು...

ನಾನು ಏನ ಮಾತನಾಡಲಿ ಅಂತ ಗೊಂದಲದಲ್ಲಿದ್ದೆ...


ಮೌನವೆಂದರೆ ..

ದ್ವಂದ್ವ .... ಗೊಂದಲ... !

ನಾನು ಮಾತನಾಡಲೇಬೇಕಿತ್ತು...


"ಅಪ್ಪ...

ನನ್ನ ಗಂಡ ರಾಜ....
ಅದರಲ್ಲೂ ಆತ ಲೋಕದ ಕಣ್ಣಿಗೆ  ರಾಕ್ಷಸ...
ಯುದ್ಧ ಅವನಿಗೆ ಅನಿವಾರ್ಯ...
ಯುದ್ಧವೆಂದಮೇಲೆ ನೋವಿನ  ನಿರೀಕ್ಷೆಯನ್ನೂ ಇಟ್ಟುಕೊಳ್ಳಬೇಕು...."

"ಅದಲ್ಲ ಮಗಳೆ...

ಶಂಖಚೂಡ  ಎಷ್ಟೇ ಯುದ್ಧ ಮಾಡಿದರೂ ಅವನಿಗೆ ಸಾವಿಲ್ಲ...!

ನಿನ್ನ ಪಾತಿವೃತ್ಯ ಅವನನ್ನು ಕಾಪಾಡುತ್ತದೆ...

ಕಾಪಾಡುತ್ತಿದೆ...!

ಆತ ಲೋಕ ಕಂಟಕನಾಗಿದ್ದಾನೆ...

ಮಾನವರ.. 
ಮಾನವೀಯತೆಯ ಹತ್ಯೆ ಮಾಡುತ್ತಿದ್ದಾನೆ...

ದೇವತೆಗಳನ್ನು ಯುದ್ಧದಲ್ಲಿ ಸೋಲಿಸುತ್ತಿದ್ದಾನೆ...."


ನನ್ನ ಅಪ್ಪ ...

ನನ್ನ ಬಳಿ ಯಾವಾಗಲೂ ನೇರವಾಗಿ ಮಾತನಾಡಿಮಾತನಾಡಿದ್ದೇ ಇಲ್ಲ...

ನಾನೇ ..

ಅವನ ಮಾತಿನ ಅರ್ಥವನ್ನು ಮಾಡಿಕೊಳ್ಳಬೇಕಿತ್ತು....

ನಾನು ನನ್ನ ಅಪ್ಪನ ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿದೆ...


"ಅಪ್ಪಯ್ಯಾ...

ನಾನೀಗ ನಿಮ್ಮ ಮಗಳಿಗಿಂತ ..
ನಾನವನ ಧರ್ಮ ಪತ್ನಿ..

ನನ್ನ  ಮದುವೆಯ..

ಬಾಳಿನ ಪ್ರಶ್ನೆ ಇರುವಾಗ 
ನಿನ್ನ..
ರಾಜ್ಯದ ಹಿತಾಸಕ್ತಿಗಾಗಿ  ಇವನೊಡನೆ ನನ್ನ ಮದುವೆ ಮಾಡಿದೆ...

ನಾನಿಲ್ಲಿ ಸುಖವಾಗಿರುವೆ...


ಲೋಕದಲ್ಲಿ ಏನೇ ನಡೆದರೂ ..

ನನಗೂ ಅದಕ್ಕೂ  ಏನೂ ಸಂಬಂಧವಿಲ್ಲ...
ನನಗೆ ಅದರ ಅಗತ್ಯವೂ ಇಲ್ಲ..

ನನ್ನಗಂಡ...

ನನ್ನ ಸಂಸಾರ... ನನ್ನ ಗಂಡನ ಸುಖವಷ್ಟೇ ನನಗೆ ಮುಖ್ಯ...."

ಅಪ್ಪ ಹೆಚ್ಚಿಗೆ ಮಾತನಾಡದೆ ಹೊರಟು ಹೋದ...


ಕೊನೆಗೆ ಗೊತ್ತಾಗಿದ್ದು..

ನನ್ನಪ್ಪ ತಾನಾಗಿಯೇ ನನ್ನನ್ನು ನೋಡಲು ಬಂದಿಲ್ಲ...
ದೇವತೆಗಳು ನನ್ನನ್ನು ಮಾತನಾಡಿಸಲು ಕಳಿಸಿದ್ದರಂತೆ....

ನನ್ನ ಪಾತಿವೃತ್ಯದ ಬಗೆಗೆ ವಿಷಯದ ಬಗೆಗೆ ಮಾತನಾಡಲಿಕ್ಕೆ...


ನನ್ನ ಗಂಡ ..

ತನ್ನ ಯುದ್ಧ ಕವಚವನ್ನು ಎಲ್ಲಿಯವರೆಗೆ ಕಳಚುವದಿಲ್ಲವೋ....
ನಾನು ಎಲ್ಲಿಯವರೆಗೆ ಪತಿವೃತೆಯಾಗಿರುತ್ತೇನೆಯೋ..
ಅಲ್ಲಿಯತನಕ ನನ್ನ ಗಂಡನಿಗೆ ಸಾವಿಲ್ಲ.... 

ಇದು ಸತ್ಯ...


ನನ್ನ ಅಪ್ಪನಿಗೆ ನನ್ನ ಪಾತಿವೃತ್ಯ ಬೇಕಿಲ್ಲವಾಗಿತ್ತಾ... !


ದೇವತೆಗಳಲ್ಲಿ 

ಈ ವಿಷ್ಣು ಮಹಾ  ಬುದ್ಧಿವಂತ..
ಆತನೇ ಏನಾದರೂ ಉಪಾಯ ಮಾಡಬಹುದೆ?

ನಾನು ಎಷ್ಟೆಂದರೂ ವಿಷ್ಣುವಿನ ಪರಮ ಭಕ್ತೆ...

ನಾನು ಪೂಜಿಸುವ ದೇವರು ನನಗೆ ಅನ್ಯಾಯ ಮಾಡುವದಿಲ್ಲವೆಂಬದು ನನ್ನ ನಂಬಿಕೆ...

ಇಂದು...

ನನ್ನ ಗಂಡ ಯುದ್ಧಕ್ಕೆ ಹೊರಡುವ ಮುನ್ನ ನನ್ನ ಎಡಗಣ್ಣು  ಅದುರಿತು...!

ನನಗೆ ಆತಂಕವಾಯಿತು..

ತಕ್ಷಣ ದೇವರಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿದೆ....

ನನ್ನ ಪತಿದೇವ ಯುದ್ಧಕ್ಕೆ ಹೋಗಿ ಸ್ವಲ್ಪದರಲ್ಲೇ ತಿರುಗಿ ಬಂದ....


ನಾನು ಸ್ನಾನ ಮಾಡಿ...

ಪೂಜೆಗೆ ಅಣಿಯಾಗುತ್ತಿದ್ದೆ.... ತಲೆ ಕೂದಲು ಒದ್ದೆಯಿತ್ತು..
ಮುಡಿ ಕಟ್ಟಿಕೊಳ್ಳುತ್ತಿದ್ದೆ...

ಎಂದಿನಂತೆ 

ಮೌನವಾಗಿ ನಗು ಮುಖದಿಂದ ಸ್ವಾಗತಿಸಿದೆ...

ಆತ  ನನ್ನನ್ನು ತಬ್ಬಿಕೊಂಡ...

ನಮ್ಮ ಮಲಗುವ ಕೋಣೆಯವರೆಗೆ   ತಬ್ಬಿಕೊಂಡೇ.. ಬಂದ....!

ಒಮ್ಮೆ "ಬೇಕು" ಅಂತಾದರೆ ...

ಈ ಗಂಡಸರಿಗೆ ತಾಳ್ಮೆಯೇ ಇರುವದಿಲ್ಲ....

ಪ್ರಕೃತಿಯಲ್ಲವೇ ...?

ನನ್ನ ಬೇಕು ಬೇಡಗಳನ್ನು ಕೇಳುವವರ್ಯಾರು..?

ಮೌನವೆಂದರೆ  ಒಪ್ಪಿಗೆ......

ಸಮ್ಮತಿ.... !

ನನ್ನನ್ನು ರಮಿಸಿದ...

ಉನ್ಮಾದಿಸಿದ....ಉದ್ರೇಕಿಸಿದ...
ಮಧಿಸಿದ....

ನನ್ನೊಳಗಿನ ಉತ್ಕಟ ಬಯಕೆಗಳನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ...!


ಆತನ ಕ್ರೀಡೆಗಳಿಂದ ..

ನಾನು ಯಾವಾಗಲೂ ಮೈಮರೆತುಬಿಡುತ್ತಿದ್ದೆ...

ಜೊತೆಯಲ್ಲೇ ...

ಜೊತೆಯಾಗಿ ಕೊನೆಯ ಹಂತ ಸೇರಿಸುವ ಆತನ ಪರಿಗೆ ಆತನೇ ಸಾಟಿ... !

ಇಂದು  ಯಾಕೋ ಹಾಗೆ ಆಗುತ್ತಿಲ್ಲ....!


ಮುಖ ನೋಡಿದೆ... !


ಹೌದು.. !

ನನ್ನ ಪತಿಯೇ ಹೌದು....

ಕಸಿವಿಸಿ ತಡೆಯಲಾಗಲಿಲ್ಲ....


"ನಿಜ ಹೇಳಿ... ಯಾರು ನೀವು...?"


ಆತ ನಸು ನಕ್ಕ.... ನಿಜ ರೂಪ  ತೋರಿಸಿದ....!


ನನಗೆ  ದಿಗ್ಭ್ರಮೆ ... !


ನಾನು ದಿನವೂ ಪೂಜಿಸುವ...

ಆರಾಧಿಸುವ ನನ್ನ ದೇವರು... ! ಮಹಾವಿಷ್ಣು... !!

ಛೇ.... !!


ಇವನೆದುರು ಬೆತ್ತಲಾದೇನೆ? 


ಅಸಹ್ಯ... ಜಿಗುಪ್ಸೆ....

ಅಸಹಾಯಕತೆ...
ದುಃಖ... ಕೋಪ.... ನನಗೆ ಏನು ಮಾಡಬೇಕೆಂದು ತೋಚಲಿಲ್ಲ... !

ಮೌನ ..

ಅಸಹಾಯಕತೆ !!

ವಿಷ್ಣುವೇ ಮಾತನಾಡಿದ...


"ನಿನ್ನ ಗಂಡ ರಾಕ್ಷಸ...

ಲೋಕ ಕಂಟಕ....

ಅಲ್ಲಿ ಯುದ್ಧದಲ್ಲಿ ಶಿವ ನಿನ್ನ ಗಂಡನನ್ನು ವಧಿಸಿಯಾಗಿದೆ.....


ಬೇಸರಿಸದಿರು... 

ಇದೆಲ್ಲವೂ ಲೋಕ ಕಲ್ಯಾಣಕ್ಕಾಗಿ..."

ನಾನು ಪೂಜಿಸುವ.. 

ಆರಾಧಿಸುವ ದೇವರ ಬಾಯಲ್ಲಿ ಇಂಥಹ ಮಾತು !!

"ವಿಷ್ಣು....

ನಿನಗೂ ನನ್ನ ಚಂದವೇ ಬೇಕಾಯಿತೆ...?

ನನ್ನ ಮನಸ್ಸು..

ನನ್ನ ಭಾವಗಳಿಗೆ ಬೆಲೆಯೇ ಇಲ್ಲವಾಯಿತೆ...?..

ಇದು ಯಾವ ನ್ಯಾಯ...? ಇದು ಅತ್ಯಾಚಾರವಲ್ಲವೆ?


ನನಗೇಕೆ ಈ ಶಿಕ್ಷೆ.. ?.. "


ವಿಷ್ಣು ಮುಗುಳ್ನಕ್ಕ...


" ತುಳಸಿ...

ನನ್ನಲ್ಲೂ  ನಿನಗೆ ಪ್ರಶ್ನೆಯೆ...?... "

"ಪೂಜೆ ಮಾಡುತ್ತೇವೆ ಎಂದಾಕ್ಷಣ ಪ್ರಶ್ನಿಸ ಬಾರದೆ...?


ಲೋಕ ಕಲ್ಯಾಣಕ್ಕಾಗಿ ..

ಹತ್ತಾರು ಅವತಾರಗಳನ್ನು ಎತ್ತುವವನು ನೀನು...!

ನನ್ನಂಥಹ ಹುಲು ಮಾನವಳ  ..

ಪಾತಿವೃತ್ಯ ಹರಣಕ್ಕೆ ನೀನೇ ಬರಬೇಕಾಯಿತೆ...?

ಮನ್ಮಥನನ್ನು ಕಳಿಸಿ ..

ನನ್ನ ಮನಸ್ಸನ್ನು ಚಂಚಲಗೊಳಿಸ ಬಹುದಿತ್ತಲ್ಲವೆ...?

ವಿಷ್ಣು...

ನಿನ್ನ ಪರಮ ಭಕ್ತೆಯಾದ ನನ್ನಲ್ಲೂ ಕೆಟ್ಟ ಕಾಮದಾಸೆಯೇ...? 
ಛೀ...!"

ಕೋಪದಿಂದ ನನ್ನ ಮೈ ಅದುರುತ್ತಿತ್ತು....


ದೇವರಿಂದಲೇ ...

ಸೃಷ್ಟಿಯಿಂದಲೇ..... ಪ್ರಕೃತಿಯ ಮೇಲೆ ಅತ್ಯಾಚಾರವೇ...?...

ಆತ  ಮುಗುಳ್ನಕ್ಕ....


"ಬೇಸರಿಸದಿರು ..

ತುಳಸಿ..
ಲೋಕಕಲ್ಯಾಣಕ್ಕಾಗಿ ಇದೆಲ್ಲ...!

ನಿನಗೊಂದು ವರವ ಕೊಡುವೆ....


ನನ್ನ ..

ನಿತ್ಯದ ಪೂಜೆ  ತುಳಸಿ ದಳದ ಸಂಗಡ ಪೂಜಿಸಲಿ...

ಅದು ನನಗೆ  ಶ್ರೇಷ್ಠ ಪೂಜೆಯಾಗಲಿ...""


ನನಗೆ ಮತ್ತೂ ಕೋಪ ಉಕ್ಕಿತು...


"ವಿಷ್ಣು...

ಇದು ಅತ್ಯಾಚಾರ...!

ನನ್ನ ಮನಸ್ಸಿನ ಮೇಲಿನ ಬಲಾತ್ಕಾರ.... !


ಅತ್ಯಾಚಾರಕ್ಕೆ ಯಾವ ಬಣ್ಣಕೊಟ್ಟರೇನು...?..


ಅಧಿಕಾರದವರು...

ದೊಡ್ಡವರು ಮಾಡಿದರೆ... ಅದು ಸದಾಚಾರವೆ..?

ವರಗಳ .. ಪರಿಹಾರಗಳ .... ಆಸೆ ತೋರಿಸುತ್ತೀಯಾ.. ?


ನಿನಗೆ ನನ್ನ ಧಿಕ್ಕಾರವಿದೆ ..... !! "


ನಾನು ಧಿಕ್ಕರಿಸಿದೆ....


ವಿಷ್ಣು ನನ್ನನ್ನು ರಮಿಸಿದ...

ತಿಳಿಸಿ ಹೇಳಿದ...

ಬುದ್ಧಿವಂತರ ನಡೆಯೇ ಹಾಗೆ....!


ಅವರ ಎಲ್ಲ ಕಾರ್ಯಗಳಿಗೂ...

ಅವರಲ್ಲಿ...
ಎಲ್ಲಕ್ಕೂ ಉತ್ತರ... ಪರಿಹಾರವಿರುತ್ತದೆ....

ಆತನ ವಾದ ಸರಣಿಗೆ  ನಾನು ಮೌನವಾಗಬೇಕಾಯಿತು ..


ಲೋಕದ ಹಿತಕ್ಕಾಗಿ..

ನನ್ನ ಮೇಲಿನ ಅತ್ಯಾಚಾರವನ್ನೂ ಸಹಿಸಬೇಕಾಯಿತು....

"ವಿಷ್ಣು...

ನಿನ್ನ ವರವನ್ನು ಒಪ್ಪುವೆ...

ಉಳ್ಳವರ..

ಬುದ್ಧಿವಂತರ  ಮುಂದೆ ನನ್ನದು ಯಾವ ಆಟ..?

ಸಮಸ್ತ ಜಗತ್ತಿನ ...

ಅಸಹಾಯಕ ..
"ಮೌನ ಪ್ರಕೃತಿಯ"  ಮೇಲಿನ ಅತ್ಯಾಚಾರಕ್ಕೆ.. ಪ್ರತಿಭಟನೆಯಾಗಿ..
ಅನಿವಾರ್ಯವಾಗಿ..

ನಿನ್ನ ವರವನ್ನು ಒಪ್ಪುವೆ...."


ವಿಷ್ಣು ಮುಗುಳ್ನಕ್ಕ....

ನನ್ನ ಹಿಂದಿನ ಜನ್ಮಗಳ ಕಥೆ ಹೇಳಿದ.....

ನಾನು ಮತ್ತೆ ಮೌನವಾದೆ ಎಂದಿನಂತೆ......


ಈ ..

ಮೌನ ...
ಒಂದು ಪ್ರತಿಭಟನೆ....

ಅಂತರಂಗದಲಿ ನಡೆಯುವ ಯುದ್ಧ.. !


ಕುದಿಯುವ  ಜ್ವಾಲಾಮುಖಿಯಂತೆ ....

ಭೂಕಂಪದಂತೆ....

ಪ್ರಳಯದಂತೆ....




( ಪುರಾಣದ ತುಳಸಿ ಕಥೆಯ ..
ಎಳೆ ಎಳೆಯ ಜೋತೆಗೆ..
ನನ್ನ ಒಂದಿಷ್ಟು ಕಲ್ಪನೆ... ಈ ಕಥೆ...

ಆಸ್ತಿಕ  ಮನಗಳ ಕ್ಷಮೆ ಕೋರಿ....)

ಚಂದದ ಪ್ರತಿಕ್ರಿಯೆಗಳಿವೆ ದಯವಿಟ್ಟು ನೋಡಿ....

.

Saturday, January 5, 2013

......... ಪರೀಧಿ .........


ನನ್ನ ಗೆಳತಿಯರೆಲ್ಲ ನನ್ನ ಬಳಿ ಮಾತನಾಡುವದನ್ನು ಬಿಟ್ಟು ಬಿಟ್ಟಿದ್ದಾರೆ..


ಅದಕ್ಕೆ ಕಾರಣ ನನ್ನ ಗಂಡ...


ನಿಮಗೂ ಆಶ್ಚರ್ಯವಾಗಬಹುದು...

ನಾನು ನನ್ನ ಗಂಡನನ್ನು ಹುಚ್ಚಿ ಥರಹ ಪ್ರೀತಿಸ್ತಿನಿ...

ಆತನ ಹುಚ್ಚಾಟಗಳು..

ಐಲುತನಗಳು... !
ಮುಗ್ಧ ಮಗುವಿನ ಹಾಗೆ ನನ್ನ ಹಿಂದೇನೆ ಇರೋದು... !
ಎಲ್ಲವೂ ಇಷ್ಟ..

ನಾನು ಕೋಪಿಷ್ಟೆ...

ಮುಂಗೋಪಿ..
ಸಿಟ್ಟು ಬಂದ್ರೆ ಸಿಕ್ಕಾಪಟ್ಟೆ ರೇಗಾಡಿಬಿಡ್ತಿನಿ...ಕೂಗಾಡ್ತಿನಿ..

ನನ್ನ ಗಂಡ ಎಷ್ಟು ರೇಗಾಡಿಸ್ತಾನೆ ಅಂದ್ರೆ ನನಗೆ ತಡೆದುಕೊಳ್ಳಲಿಕ್ಕಾಗುವದಿಲ್ಲ...

ಕೆಲವೊಮ್ಮೆ ಗುದ್ದು ಕೂಡ ಹಾಕಿಬಿಡ್ತಿನಿ..

ಆತನೋ...

ಗೌತಮ ಬುದ್ಧನ ಥರಹದ ಪೋಸು ಕೊಟ್ಟು ಮುಗುಳ್ನಕ್ಕು ಬಿಡುತ್ತಾನೆ..

ನನ್ನ ಅಂದವನ್ನು....

ನನಗೆ ಗೊತ್ತಿಲ್ಲದ ಹಾಗೆ ಹೀರುತ್ತಾನೆ...
ಆನಂದಿಸುತ್ತಾನೆ...

ಪೋಲಿಯಂತೆ ನನಗೇ ... ಲೈನು ಹೊಡೆಯುತ್ತಾನೆ.... !



ನನಗೆ ಪ್ರೀತಿಯಿಂದ ಪುಚ್ಚಿ ಅಂತ ಕರಿತಾನೆ...
"ಪುಚ್ಚಿ... ಪುಚ್ಚಿ.. " ಅಂತ ನನ್ನ ಬೆನ್ನ ಹಿಂದೇನೇ ಇರ್ತಾನೆ....!


ನನ್ನ ಕೋಪವನ್ನು ಆನಂದಿಸುತ್ತಾನೆ...
ಛೇಡಿಸುತ್ತಾನೆ...
ನನ್ನ ಹೆಣ್ತನವನ್ನು ಗುರುತಿಸುತ್ತಾನೆ...
ಅದರಲ್ಲಿ ಖುಷಿ ಪಡುತ್ತಾನೆ...!

ಒಂದು ಹೆಣ್ಣಾಗಿ ನನಗೆ ಇದಕ್ಕಿಂತ ಇನ್ನೇನು ಬೇಕು....?


ಅವನಿಗಾಗಿ ಊಟಕ್ಕಾಗಿ ಕಾಯುವದು...

ಅವನ ಮೆಚ್ಚಿನ ತಿಂಡಿಗಳನ್ನು ಮಾಡಿ..
ಆತ " ಡರ್ರ್  .... "ಅಂತ ತೇಗುವಾಗ ನನಗೂ ಸಂತೋಷ.....

ಪ್ರೀತಿಯ ಸವಿಯನ್ನು ಅನುಭವಿಸಬೇಕು...

ಅನುಭವಿಸುತ್ತಾ ಇದ್ದೇನೆ...

ಅವನಿಗೆ ನನ್ನ ಪ್ರೀತಿಯನ್ನು ಧಾರೆ ಎರೆಯುವದರ ಸಂತೋಷ ಹೇಳಲಾಗದು..


ಆ ದಿನ ...

ನನಗಿನ್ನೂ ನೆನಪಿದೆ...

ನಮ್ಮದು ಹಿರಿಯರು ನಿಶ್ಚಯಿಸಿದ ಮದುವೆ..

ನಮ್ಮ ಮದುವೆಯ ದಿನ ಪೂಜೆಯೆಲ್ಲ ಮುಗಿದು ಇಬ್ಬರೇ ಒಂದು ಸ್ವಲ್ಪ ಹೊತ್ತು ಇರುವ ಸಮಯ ಸಿಕ್ಕಿತ್ತು...

"ನಾವು ಪೂಜಿಸುವ ದೇವರಿಗೆ ..

ಸ್ವಲ್ಪವೂ ತಲೆಯಿಲ್ಲ ಕಣೆ...! "

ನನಗೆ ಆಶ್ಚರ್ಯವಾಯಿತು...!


"ಯಾಕೆ...ಹಾಗೆ ಹೇಳ್ತೀರಾ?.. "


"ಏನಿಲ್ಲ...

ನನಗೆ ಸಂಕೋಚದ ಸಮಸ್ಯೆ ಇಲ್ಲ...
ನಿನಗೆ ಏನಾದರೂ ನಾಚಿಕೆ ಆದರೆ ಅಂತ... ಹೇಳ್ತಾ ಇಲ್ಲ..."

"ಹೇಳಿ.. ಪರವಾಗಿಲ್ಲ...

ನಾವು ಇಂದಿನಿಂದ ಬಾಳ ಸಂಗಾತಿಗಳಾಗಿದ್ದೇವೆ..."

"ಸರಿ...

ಇಷ್ಟು  ಅನುಮತಿ ಸಿಕ್ಕರೆ ಸಾಕು...

ನೀ ಏನೇ ಹೇಳು ..

ಆ ದೇವರಿಗೆ ತಲೆ ಇಲ್ಲಾ ಕಣೆ...! "

"ಹೇಗೆ ಹೇಳ್ತೀರಿ...?"


"ಗಂಡು ಹೆಣ್ಣಿನ ಮಿಲನ ...

ಎಷ್ಟು ಕೆಟ್ಟದಾಗಿ ಮಾಡಿಟ್ಟಿದ್ದಾನೆ ನೋಡು...!

ಒಬ್ಬರೆದುರಿಗೆ ಒಬ್ಬರು ಬಟ್ಟೆ ಬಿಚ್ಚಿ..

ಬೆತ್ತಲಾಗಿ...
ಮಲಗಿ...

ನಿನಗೂ ನಾಚಿಕೆ... !

ನನಗೂ ಸಂಕೋಚ...!

ಯಾಕೆ ಇಷ್ಟೆಲ್ಲ ಕಸರತ್ತು... ಕಸಿವಿಸಿ ... ?


ಯಾಕೆ ಇಷ್ಟೇಲ್ಲ ತಲೆಹರಟೆ  ಅನುಭವಿಸ ಬೇಕು ಅಲ್ವಾ?...


ಇವೆಲ್ಲವನ್ನೂ...

ಸ್ವಲ್ಪ ಸುಲಭವಾಗಿ ....
ಸರಳ ವಿಧಾನ ಇಡಬಹುದಿತ್ತು.... ಅಲ್ವಾ? "

ಎಂಥಹ ಮನುಷ್ಯ ಈತ.... !!


ನಾನು ನಾಚಿ ನೀರಾದೆ...!


ಮದುವೆಯ ಮೊದಲ ದಿನ...

ಆ ಹಸಿ ...
ಬಿಸಿ ವಾತಾವರಣ...
ನಾನು ತಗ್ಗಿಸಿದ ತಲೆ ಎತ್ತಲಾಗಲಿಲ್ಲ...!

ಅವನು ಯಾವಾಗಲೂ ಹೀಗೆಯೇ...

ಸೀದಾ... ಸೀದ...
ತುಂಬಾ ನೇರ... ನೇರ ಮಾತುಗಳು...
ಕದ್ದು ಮುಚ್ಚಿ ಏನೂ ಇಲ್ಲ....

ಅವನ ಈ ಥರಹದ ..

ಹುಚ್ಚು ಮಾತುಗಳು..
ತುಂಟತನಕ್ಕೆ ನಾನು ಮರುಳಾಗಿ ಹೋದೆ...!

ನನಗೆ ...

ಇಂಥಹುದೇ ಹುಚ್ಚ ಸಂಗಾತಿ ಬೇಕಿತ್ತು...
ಆತ ಈಗಲೂ ಹಾಗೆನೇ... 
ಮದುವೆಯಾಗಿ ಇಷ್ಟು ವರ್ಷವಾದರೂ  ಬದಲಾಗಲಿಲ್ಲ...

ಅವನ ತುಂಟತನ...  ಇನ್ನೂ ಹಾಗೆ ಇದೆ...


ಯಾವಾಗ ಗಂಭೀರವಾಗಿರ್ತಾನೆ...?

ಯಾವಾಗ ಜೋಕ್ ಮಾಡ್ತಾನೆ ... ?
ಗೊತ್ತೇ .. ಆಗುವದಿಲ್ಲ..!

ಯಾವಾಗಲೂ ಅವನ ತಲೆಯಲ್ಲಿ ...

ನಾನು ಇರ್ತೀನಿ ಎನ್ನುವದು ಬಹಳ ಸಂತೋಷ ಕೊಡುತ್ತದೆ..
ಹೆಮ್ಮೆಯೂ ಆಗುತ್ತದೆ..

ಮನೆಯಿಂದ ಹೊರಗೆ ಹೋದಾಗಲೂ ...

ತಾಸಿಗೊಮ್ಮೆ ಫೋನ್ ಮಾಡ್ತಾ ಇರ್ತಾನೆ...

ಫೋನ್ ರಿಂಗ್ ಆಗ್ತ ಇದೆ...


"ಹಲ್ಲೊ..

ಪುಚ್ಚಿ....
ಒಂದು ಬೇಸರದ ಸುದ್ಧಿ...
ನಮ್ ಪಕ್ಕದ್ಮನೆ  ಗೆಳೆಯನ ಹೆಂಡತಿಗೆ ಅಪಘಾತವಾಗಿದೆ...!
ಆಸ್ಪತ್ರೆಗೆ ಸೇರ್ಸಿದ್ದೇನೆ......

ಮನೆಗೆ ಬರ್ತಾ  ಇದ್ದೇನೆ...


ಗಾಭರಿ ಪಡುವಂಥಾದ್ದು ಏನೂ ಇಲ್ಲ...


ನೀನು ಬೇಗ ರೆಡಿ ಆಗು...


ಮಕ್ಕಳನ್ನು ನೋಡಿಕೊಳ್ಳಲಿಕ್ಕೆ ನಿನ್ನ್ ಅಮ್ಮ ಬರ್ತಾರೆ..

ಅವರ ಹತ್ತಿರ ಮಾತಾಡಿದ್ದೇನೆ...
ಪಕ್ಕದ ಮನೆಯವರ ಮಕ್ಕಳೂ ನಮ್ಮನೆಯಲ್ಲೇ ಇರಲಿ...

ಹತ್ತು ನಿಮಿಷದಲ್ಲಿ ಅಲ್ಲಿರ್ತೇನೆ..... ರೆಡಿ ಆಗು..."


ನನಗೆ ಮಾತಾಡಲು ಅವಕಾಶ ಕೊಡದೆ ಫೋನ್ ಕಟ್ ಮಾಡಿದ...


ಅವನ ಕೆಲಸಗಳೇ ಹೀಗೆ...

ಚಕಾ ಚಕ್ ನಿರ್ಣಯಗಳು..
ದಕ್ಷತೆ... ಜವಾಬ್ದಾರಿತನ... ಇಷ್ಟವಾಗಿಬಿಡುತ್ತದೆ...

ನಾನು ಲಗುಬಗೆಯಿಂದ ತಯಾರಾದೆ...

ಪಕ್ಕದ ಮನೆಯ ಮಕ್ಕಳಿಗೆ ನಮ್ಮನೆಗೆ ಬಂದು ಇರಲು ಹೇಳಿದೆ..
ನನ್ನ ಮಕ್ಕಳಿಗೂ ವಿಷಯ ಹೇಳಿದೆ..

ಕೆಲವೊಮ್ಮೆ ಸಂದರ್ಭಗಳು ತಂತಾನೆ ಗಂಭೀರವಾಗಿಬಿಡುತ್ತವೆ...


ಅಮ್ಮನೂ ಬಂದಳು..


ಅಷ್ಟರಲ್ಲಿ ನನ್ನವನೂ ಬಂದ...


"ಗಾಭರಿಯಾಗುವದೂ ಏನೂ ಇಲ್ಲ...

ಮಾಮೂಲಿ ಅಪಘಾತ...
ನಾವು ಆಸ್ಪತ್ರೆಗೆ ಹೋಗಿ ಬರುತ್ತೇವೆ..."

ನಾನು ಅವನ ಜೊತೆ ಹೊರಟೆ.....


"ಪುಚ್ಚಿ...

ಅವಳಿಗೆ ಅಪಘಾತವಾದ ಸ್ಥಳದಿಂದ  ...
ನನ್ನ ಆಫೀಸು ತುಂಬಾ ಹತ್ತಿರ...

ನನಗೆ ಗೊತ್ತಾದ ಕೂಡಲೇ ಓಡಿ ಹೋದೆ...

ತಲೆಗೆ ಜೋರಾಗಿ ಏಟು ಬಿದ್ದಿದೆ...
ಪ್ರಜ್ಞೆ ಇಲ್ಲ... !

ಗಾಭರಿಯಾಗುವಂಥಾದೂ ಏನು ಇಲ್ಲ ಅಂತ ಡಾಕ್ಟರ್ ಹೇಳಿದ್ದಾರೆ..."


ಒಂದೊಂದೇ ವಿಷಯ ಅನಾವರಣ ಆಗ್ತಾ ಇದೆ....!


"ನಿಮ್ಮ ಗೆಳೆಯನಿಗೆ ಹೇಳಿದ್ರಾ?"


"ಅವನೂ ಬರ್ತಾ ಇದ್ದಾನೆ..."


ನನಗೆ ಅಳು ಒತ್ತರಿಸಿ ಬಂತು...


ನಮ್ಮ ಎರಡು ಕುಟುಂಬಗಳದ್ದು ಬಹಳ ಚಂದದ ಗೆಳೆತನ...


ಯಾವುದೋ ಜನ್ಮದಲ್ಲಿ ..

ನನ್ನವ ಮತ್ತು ಆತಅಣ್ಣ  ತಮ್ಮಂದಿರಾಗಿದ್ದರೇನೋ...
ಬಹಳ ಅನ್ಯೋನ್ಯತೆ.. ಆತ್ಮೀಯತೆ...

ನಾವು ಮನೆ ಕಟ್ಟಿಸುವಾಗ ..

ಅವರೂ ನಮ್ಮ ಪಕ್ಕದಲ್ಲಿಯೇ ಮನೆ ಕಟ್ಟಿಸಿಕೊಂಡರು...

ಅವರದ್ದೂ ...

ಎರಡು ಮಕ್ಕಳ ಸುಂದರ ಸಂಸಾರ.
ಗಂಡ ಹೆಂಡತಿ ಇಬ್ಬರೂ ನೌಕರಿ ಮಾಡುತ್ತಾರೆ...
ಮಕ್ಕಳಿಬ್ಬರೂ ನನ್ನ ಬಳಿಯೇ ದೊಡ್ದವರಾಗುತ್ತಿದ್ದಾರೆ...

ನನಗೆ ದುಃಖ ಉಮ್ಮಳಿಸಿ ಬರ್ತಿತ್ತು...


"ಸುಮ್ಮನಿರು ಪುಚ್ಚೀ...

ಈಗ ನಾವು ಅವರ ಜೊತೆ ಇದ್ದು ಧೈರ್ಯ ತುಂಬ ಬೇಕು...
ಅಳಬೇಡ...
ಕಣ್ಣು ಒರೆಸಿಕೊ..."

ನನ್ನವನ ಈ ಧೈರ್ಯ ತುಂಬುವ ಸ್ವಭಾವ ...

ನನಗೆ ಯಾವಾಗಲೂ ಇಷ್ಟ...
ಆತ ಯಾವಾಗಲೂ ನನ್ನ ಆತ್ಮ ವಿಶ್ವಾಸದ ಪ್ರತೀಕ...

ಆಸ್ಪತ್ರೆ ಬಂತು...


ಆಕೆಯನ್ನು ಐಸಿಯೂ ದಲ್ಲಿಟ್ಟಿದ್ದರು...


ಸ್ವಲ್ಪ ಹೊತ್ತಿನಲ್ಲಿ ಅವಳ ಗಂಡ ಬಂದ...


 ಬರುತ್ತಲೆ ಅಳತೊಡಗಿದ...


ನನ್ನವ ಆತನನ್ನು  ತಬ್ಬಿ ಹಿಡಿದುಕೊಂಡ...


"ಅಳಬೇಡ್ವೊ..

ಏನೂ ಆಗೋದಿಲ್ಲ ಅಂತ ಡಾಕ್ಟ್ರು ಹೇಳಿದ್ದಾರೆ.."

ಅಷ್ಟರಲ್ಲಿ ಡಾಕ್ಟರ್ ಬಂದರು...


"ನೋಡಿ ...

ಅರ್ಜಂಟಾಗಿ ಶಸ್ತ್ರಕ್ರಿಯೆ ಮಾಡಬೇಕು...
ದಯವಿಟ್ಟು ಕೌಂಟರಿನಲ್ಲಿ ಹಣಕಟ್ಟಿ...
ತಡಮಾಡಬೇಡಿ..."

ನನ್ನವ ತಟಕ್ಕನೆ ಎದ್ದ...

ಆತನ ಗೆಳೆಯ ಆತನ ಕೈಹಿಡಿದ...

"ನೋಡು..

ನೀನು ಸಮಾಧಾನ ಮಾಡಿಕೊ...
ನಾನು ಹಣ ಕಟ್ಟಿ ಬರುವೆ..
ನಮ್ಮ ಲೆಕ್ಕಾಚಾರ ಎಲ್ಲ ಆಮೇಲೆ ನೋಡೋಣ.."

ಆತನನ್ನು ಅಲ್ಲೇ ಕುಳ್ಳಿರಿಸಿ ನನ್ನವ ಹಣ ಕಟ್ಟಿ ಬಂದ...


ಅಷ್ಟರಲ್ಲಿ ನರ್ಸ್ ಬಂದು .... 

"ರಕ್ತದ ವ್ಯವಸ್ಥೆ ಮಾಡಿ..
ನಮ್ಮಲ್ಲಿ ರಕ್ತ ಇದೆ...
ಆದರೆ ಬದಲಿಗೆ ನಿಮ್ಮಲ್ಲಿ ಯಾವುದಾದರೂ ರಕ್ತ ಕೊಡಿ..."

ನನ್ನವ ನನ್ನನ್ನೂ ಎಬ್ಬಿಸಿಕೊಂಡು ಹೋದ...


ನಾನು .. ನನ್ನವ ರಕ್ತ ಕೊಟ್ಟೆವು...


"ದೇವರೇ... 

ಅವಳಿಗೆ ಏನೂ ಆಗದೇ ಇರಲಿ...
ಗುಣಾಮುಖವಾಗಿ ವಾಪಸ್ಸು ಬರ್ಲಿ..."

ಪರಿಸ್ಥಿತಿ ಕೈ ಮೀರಿದಾಗ...

ಪ್ರಾರ್ಥನೆ ಮಾಡುವದಷ್ಟೆ ನಮ್ಮ ಕೆಲಸ....

ಸಮಯ ಓಡುತ್ತಲೇ ಇಲ್ಲ...

ಏನನ್ನೂ ಮಾತಡಲೂ ಆಗುತ್ತಿಲ್ಲ...
ಸುಮ್ಮನೆ ಕುಳಿತುಕೊಳ್ಳಲೂ ಆಗದ ಸ್ಥಿತಿ.... !

ನಮ್ಮ ಎರಡು ಕುಟುಂಬಗಳು ಹತ್ತಿರವಾಗಲು ಮಕ್ಕಳೂ ಸಹ ಕಾರಣ...

ಅವರ ಮಕ್ಕಳೂ..
ನಮ್ಮ ಮಕ್ಕಳೂ ಒಳ್ಳೆಯ ಸ್ನೇಹಿತರು...
ಒಟ್ಟಿಗೆ ಒಂದೇ ಶಾಲೆಗೆ ಹೋಗುತ್ತಾರೆ...
ಆಡುತ್ತಾರೆ... ಒಟ್ಟಿಗೆ ಓದುತ್ತಾರೆ..

ಅವರಿಬ್ಬರೂ ನೌಕರಿ ಮಾಡುತ್ತಿರುವದರಿಂದ.. 

ಮಕ್ಕಳು ಯಾವಾಗಲೂ ನಮ್ಮ ಮನೆಯಲ್ಲೇ ಇರುತ್ತಾರೆ...

ಹಾಗಾಗಿ ನನಗೆ ನಾಲ್ಕು ಮಕ್ಕಳು...


ಅಷ್ಟರಲ್ಲಿ ಡಾಕ್ಟರ್ ಬಂದರು...


"ಶಸ್ತ್ರಕ್ರಿಯೆ ಯಶಸ್ವಿಯಾಗಿದೆ....

ಅವರು ಕೋಮಾ ಸ್ಥಿತಿಯಲ್ಲಿದ್ದಾರೆ...
ಇನ್ನು ಎಂಟು ತಾಸು ಏನೂ ಹೇಳಲಾಗುವದಿಲ್ಲ...

ಒಳ್ಳೆಯದಾಗಲಿ ಎಂದು ಆಶಿಸೋಣ.. ಧೈರ್ಯವಾಗಿರಿ.."


ಮಕ್ಕಳ ಮುಖ ಕಣ್ಣ ಮುಂದೆ ಬಂದಿತು...


ತುಂಬಾ ಒಳ್ಳೆಯ ಮಕ್ಕಳು...

ನನಗೆ ಅಮ್ಮಾ  "ಸಣ್ಣಮ್ಮ"  ಕರೆಯುತ್ತಾರೆ...

ನಾವೆಲ್ಲ ಎಲ್ಲಿಗೆ ಹೋಗುವದಿದ್ದರೂ ಒಟ್ಟಿಗೆ ಹೋಗುವದು...

ಸಿನೇಮಾ..
ಟ್ರಿಪ್ಪು... ಪ್ರವಾಸ...

ಮೊನ್ನೆ ತಾನೆ ದಕ್ಷಿಣ ಭಾರತ ಪ್ರವಾಸ ಹೋಗಿ ಬಂದೆವು...


ಎಲ್ಲವೂ ಸೊಗಸಾಗಿತ್ತು...

ಎಷ್ಟುಂದು  ನಗು... ಹರಟೆ...!

ಹಾಡು... ಡ್ಯಾನ್ಸ್... ವಾಹ್ !!


ಎಲ್ಲವೂ ಚೆನ್ನಾಗಿರುವಾಗ ಯಾಕೆ ಹೀಗಾಗಿಬಿಡುತ್ತದೋ... !


ನನ್ನ ಕಣ್ಣಲ್ಲಿ ...

ದಳ ದಳನೆ ಕಣ್ಣೀರು ಇಳಿಯುತ್ತಿತ್ತು...

ನನ್ನವ ನನ್ನನ್ನು ತನ್ನೆದೆಯಲ್ಲಿ ಹುದುಗಿಸಿಕೊಂಡ..


"ಪುಚ್ಚೀ......

ಧೈರ್ಯ ತಂದುಕೋ....."

ಮನಸ್ಸಿಗೆ ಸಾಂತ್ವನ ಬೇಕಿತ್ತು...

ಆದರೆ ಕಣ್ಣೀರು ನಿಲ್ಲಲಿಲ್ಲ...

ಐಸಿಯು ದಿಂದ ಹೊರಗೆ ಬಂದ ನರ್ಸ್ ...

ಡಾಕ್ಟರ್ ಕರೆದುಕೊಂಡು ಒಳಗೆ ಹೋದಳು...

ನಮಗೆಲ್ಲ ಆತಂಕ... 


"ಏನೂ ಕೆಟ್ಟದಾಗದಿರಲಿ... ದೇವರೆ..."


ಡಾಕ್ಟರ್ ಹೊರಗೆ ಬಂದವರು ನಿರಾಸೆಯ ನೋಟ ಬೀರಿದರು...

"ಅವರು ಇನ್ನಿಲ್ಲ.... ! ... "


ಗೆಳೆಯನ ದುಃಖ ತಡೆಯಲಾಗಲಿಲ್ಲ...


ನನ್ನವ ಓಡಿ ಹೋಗಿ ಆತನನ್ನು ಹಿಡಿದುಕೊಂಡ..


"ಸಮಾಧಾನ ಮಾಡ್ಕೊ...

ಇದು ನಮ್ಮ ಕೈಮೀರಿದ್ದು...
ಒಳ್ಳೆಯವರು ಯಾವಾಗಲೂ ದೇವರಿಗೆ ಪ್ರಿಯರಾಗಿರುತ್ತಾರೆ..

ನೀನು ಧೈರ್ಯಗುಂದಬೇಡ...

ಮಕ್ಕಳನ್ನು ನೋಡಿ ಸಮಾಧಾನ ಮಾಡಿಕೊ...

ನಾವೆಲ್ಲ ಇದ್ದೇವೆ ... ಧೈರ್ಯವಾಗಿರು..."


ಎಷ್ಟೇ ದುಃಖವಾಗಿದ್ದರೂ ...

ಮುಂದಿನ ಕೆಲಸ ಕಾರ್ಯ ಮಾಡಲೇ ಬೇಕಲ್ಲವೆ...?

ನನ್ನವ ಮುಂದೆ ನಿಂತು  ಎಲ್ಲವನ್ನೂ ಮಾಡಿದ...


ಸ್ಮಶಾನಕ್ಕೆಕ್ಕೆ ಫೋನ್ ಮಾಡಿದ..

ಪೋಸ್ಟಮಾರ್ಟಮ್ ವರದಿ ತೆಗೆದುಕೊಂಡ..

ಮುಂದಿನ ಕ್ರಿಯಾ ಕರ್ಮಗಳ ವ್ಯವಸ್ಥೆ ಮಾಡಿದ...


ತನ್ನ ಗೆಳೆಯನ ಜೊತೆಗೇ ಇದ್ದ...


ನನ್ನಮ್ಮ ಆ ದುಃಖದ ಸನ್ನಿವೇಶದಲ್ಲೂ ಅಳಿಯನನ್ನು ಹೊಗಳಿದರು..


"ನನ್ನ ಅಳಿಯ..

ಅವನ ಸ್ನೇಹಿತನ ಪ್ರೀತಿ ಮೆಚ್ಚುವಂಥಾದ್ದು...

ಕಷ್ಟಕಾಲದಲ್ಲೇ ಅಲ್ಲವೆ ಸಂಬಂಧಗಳ ಪರಿಚಯವಾಗುವದು...


ನಿನ್ನ ಗಂಡ ಬಹಳ ದೊಡ್ಡ ಮನುಷ್ಯ ಕಣೆ.."


ನನಗೂ ನನ್ನವನ ಮೇಲೆ ಪ್ರೀತಿ..ಮತ್ತೂ ಹೆಚ್ಚಾಯಿತು...


ಬೆಳಿಗ್ಗೆ ...

ನಗು ನಗುತ್ತ ಇದ್ದ ಜೀವ ಸಾಯಂಕಾಲ ಬೂದಿಯಾಯಿತು...

ನೆನಪುಗಳು....

ಬಾಂಧವ್ಯಗಳು ಬೂದಿಯಾಗುವದಿಲ್ಲವಲ್ಲ...

ನಮ್ಮೆಲ್ಲರಿಗೂ ಶೂನ್ಯ ಆವರಿಸಿತು...



ಸಮಯ ...
ಮತ್ತು ಹಸಿವೆ ... ನಮಗಾಗಿ ಕಾಯುವದಿಲ್ಲವಲ್ಲ...

ಅವು ನಿರ್ದಯವಾಗಿ ತಮ್ಮ ಕೆಲಸ ಮಾಡುತ್ತಿರುತ್ತವೆ....



ರಾತ್ರಿ ನಿದ್ದೆ ಬರಲಿಲ್ಲ..

ಬೆಳಿಗ್ಗೆ ನಮ್ಮ ಮನೆಯಲ್ಲೆ ತಿಂಡಿಗೆ ವ್ಯವಸ್ಥೆ ಮಾಡಿದೆ...


ಮಕ್ಕಳಿಗೂ...  

ಅವರ ಅಪ್ಪನಿಗೂ ನಾವೆಲ್ಲ ಸಮಾಧಾನ ಮಾಡಿ ...
ತಿಂಡಿ ಒತ್ತಾಯ ಮಾಡಿ ತಿನ್ನಿಸಿದೆವು...

ನನಗೆ ಗೊತ್ತಿಲ್ಲದಂತೆ  ಆ ಮಕ್ಕಳಿಗೆ ನಾನು ತಾಯಿಯಾಗಿಬಿಟ್ಟಿದ್ದೆ...


ನನ್ನವ ರೆಡಿಯಾಗಿ ಎಲ್ಲಿಗೋ ಹೊರಟಿದ್ದ..


"ಇಲ್ಲೇ ...

ಬ್ಯಾಂಕಿಗೆ ಹೋಗಿ ಬರ್ತಿನಿ...
ಬರುವಾಗ ಪುರೋಹಿತರನ್ನೂ ಭೇಟಿಯಾಗಿ ಬರ್ತಿನಿ ಕಣೊ...

ನೀನು ಸ್ವಲ್ಪ ಸಮಾಧಾನ ಮಾಡ್ಕೊ..."


ಎಂದು ಹೊರಗೆ ಹೋದ...


ಅಮ್ಮ ಮಕ್ಕಳನ್ನು ಆಡಿಸುತ್ತ ಹೊರಗೆ ಇದ್ದರು...


ಹೆಂಡತಿಯನ್ನು ಕಳೆದುಕೊಂಡ ಅವನ ದುಃಖ ನನಗೂ ನೋಡಲಾಗುತ್ತಿಲ್ಲ...


"ಭಾವಾ..

ಸಮಾಧಾನ ಮಾಡಿಕೊ...
ಹೋದವರು ಹೋಗಿಬಿಟ್ಟರು...

ಮಕ್ಕಳ ಭವಿಷ್ಯ ... 

ಅವರ ಜವಾಬ್ದಾರಿ ಬಗೆಗೆ ವಿಚಾರ ಮಾಡು...

ಸಮಾಧಾನ ಮಾಡಿಕೊ..."


ಆತನಿಗೆ ದುಃಖ ಉಮ್ಮಳಿಸಿ ಬಂತು...


ಅಳುತ್ತಿದ್ದ...


ಅವನ ಹತ್ತಿರ ಹೋಗಬೇಕು ...

ಸಾಂತ್ವನ ಮಾಡಬೇಕು ಅಂತ ಅಂದುಕೊಂಡೆ...

ಅಷ್ಟರಲ್ಲಿ ನನ್ನವ ವಾಪಸ್ ಬಂದ...


"ನನಗೆ ಮರೆತು ಹೋಗಿತ್ತು... ಇವತ್ತು ಬ್ಯಾಂಕ್ ರಜೆ.."


ಮನೆಯಲ್ಲಿ ಮೌನ ಆವರಿಸಿತು...

ಮಾತು ಯಾರಿಗೂ ಬೇಡವಾಗಿತ್ತು...

ನನ್ನವ ಗಂಭೀರವಾಗಿದ್ದ....


ಮೌನ ಅಸಹನೀಯವಾಗಿತ್ತು....


ಆತನಿಗೂ ...

ಏನು ಮಾಡಬೇಕೆಂದು ತೋಚಲಿಲ್ಲ...

ಸ್ವಲ್ಪ ಹೊತ್ತು ಬಿಟ್ಟು ..

ಕಣ್ಣೊರಿಸಿಕೊಳ್ಳುತ್ತ ತನ್ನ ಮನೆಗೆ ಎದ್ದು ಹೋದ...

 ನನ್ನವನ ಮೌನ ಇನ್ನೂ ಮುಂದು ವರೆದಿತ್ತು...


"ರೀ...

ಎಷ್ಟು ಕಷ್ಟ ಅಲ್ಲವಾ ಈ ದುಃಖಗಳು...?"

"ಪುಚ್ಚಿ......

ನಾವು ಶೀಘ್ರದಲ್ಲಿ ಮನೆ ಬದಲಿಸಿಬಿಡೋಣ .. ...."

ನನಗೆ ಆಶ್ಚರ್ಯವಾಯಿತು..!!....


" ಯಾಕ್ರೀ...?

ಇಂಥಹ ಸಂದರ್ಭದಲ್ಲಿ ...
ನಾವು ಅವರ ಜೊತೆಯಲ್ಲಿ ಇರಬೇಕು.. 
ಹತ್ತಿರ ಇರಬೇಕಾದ ನಾವೇ..ಹೀಗೆ ಮಾಡಿದರೆ ಹೇಗೆ...? "

"ನೋಡು ಪುಚ್ಚಿ......


ನನಗೆ ನನ್ನ ಪ್ರೀತಿ...

ನನ್ನ ಹೆಂಡತಿ... 
ಮಕ್ಕಳು..
ನನ್ನ ಸಂಸಾರ ಮೊದಲು...

ನನ್ನ ಕುಟುಂಬಕ್ಕೆ ಮೊದಲ ಆದ್ಯತೆ......"


ಇಲ್ಲಿವರೆಗೆ ಒಳ್ಳೆಯವನಂತಿದ್ದ ...

ನನ್ನವ ನನಗೆ ಪ್ರಶ್ನೆಯಾಗತೊಡಗಿದ...

ಅರ್ಥವಾಗದೆ ಆತನನ್ನು ನೋಡಿದೆ...


ಆತ ನನ್ನನ್ನು ..

ತನ್ನೆದೆಗೆ ಎಳೆದುಕೊಂಡ...

"ಪುಚ್ಚೀ....

ಪ್ರಪಂಚದ ವೈಯಕ್ತಿಕ ದುರಂತಗಳಿಗೆ ನಾವು ಜವಾಬ್ದಾರರಲ್ಲ ...
ಪುಚ್ಚಿ......
ಅವರವರದ್ದು ಅವರವರಿಗೆ...

ನಮ್ಮದು  ... ನಮಗೆ...


ನೀನು ನನ್ನ ಪ್ರೀತಿಯ ಪುಚ್ಚಿ...."


ಆತನ ಅಪ್ಪುಗೆ ಬಿಗಿಯಾಗಿತ್ತು...


ನನಗೆ ಕಸಿವಿಸಿಯಾದರೂ ಹಿತವಾಗಿತ್ತು...




(ಉತ್ತಮ ಪ್ರತಿಕ್ರಿಯೆಗಳಿವೆ....   ದಯವಿಟ್ಟು  ಓದಿ.....  )