Tuesday, March 31, 2009

" ಈ.... ಜಗತ್ತು ಸುಧಾರಣೆ ಆದರೂ .. ನೀವು.. ಮಾತ್ರ ಆಗಲ್ಲಾ..!!



ಬೆಂಗಳೂರಿನಲ್ಲಿ ನೌಕರಿ ಸಿಕ್ಕಿತ್ತು..
ಹೇಳಲಿಕ್ಕೆ "ಅಸಿಸ್ಟಂಟ್ ಇಂಜನೀಯರ್" ಹುದ್ದೆ..

ಹಗಲಿರುಳು ಕೆಲಸ..!
ಸಂಬಳ "ಏಳುನೂರು ಐವತ್ತು ".....!


ವಿಧ್ಯಾರ್ಥಿ ಜೀವನದಲ್ಲಿ ಸಹಾಯ ಮಾಡಿದವರಿಗೂ...
"ಮಾಡಿದ್ದು ವ್ಯರ್ಥವಾಗಲಿಲ್ಲವಲ್ಲ...
ಈ ಪ್ರಕಾಶ ... ಜೀವನದಲ್ಲಿ "ಸೆಟಲ್" ಆದನಲ್ಲ.."
ಎನ್ನುವ ಭಾವನೆ...


ನನ್ನ ಜೀವನದ ಕಷ್ಟದಲ್ಲಿ, ಸುಖದಲ್ಲಿ, ಬಂಡೆಗಲ್ಲಿನಂತೆ ಇದ್ದ ನನ್ನ ಬಾವ...

ನನ್ನನ್ನು ನೋಡಿ ಬರಲು ಬೆಂಗಳೂರಿಗೆ ಬಂದೇ ಬಿಟ್ಟರು...!

ಸಣ್ಣ ವಯಸ್ಸು.., ಕೈಗೆ ಸಂಬಳ ಸಿಗ್ತಾ ಇದೆ....
ಹುಡುಗ ಚಟಕ್ಕೆ ಬಿದ್ದು ಹಾಳಾದರೆ..?
ಎನ್ನುವ ಕಾರಣವೂ ಇದ್ದೀತು....

ನಾನು ಸಂಭ್ರಮದಿಂದ ಮೆಜೆಷ್ಟಿಕ್ ಹೋಗಿ..
ಕರೆದು ಕೊಂಡು ಬಂದೆ...

ನಮ್ಮ ರೂಮ್ ನೋಡಿ ಬಾವನಿಗೂ ಖುಷಿಯಾಯ್ತು...

ರೂಮಿನಲ್ಲಿ ನಾನು ಮತ್ತು ಸ್ನೇಹಿತ "ಪುಟ್ಟಸ್ವಾಮಿ" ಇದ್ದೆವು...

" ಬಾವ .. ನೀನು ರೂಮಿನಲ್ಲೇ ಇರು..
ಬೇಸರವಾದರೆ ಇಲ್ಲೇ ಹತ್ತಿರ ಅಡ್ಡಾಡಿ ಬಾ...
ನಾನು ಸಾಯಂಕಾಲ ಐದು ಗಂಟೆಗೆ ಬರ್ತೇನೆ.. "

ಎಂದು ಹೇಳಿ ನಾನು ಹೊರಟೆ...

ಬಾವ ರೂಮಿನಲ್ಲೇ ಉಳಿದರು...

ನಾನು ನನ್ನ ಸೀನಿಯರ್ ಇಂಜನೀಯರ ಬಳಿ ಅನುಮತಿ ಪಡೆದು..
ಮಧ್ಯಾಹ್ನವೇ ಮನೆಗೆ ಬಂದು ಬಿಟ್ಟೆ...


ಬಾಗಿಲು ತೆಗೆದರು ಬಾವ...

ಮುಖನೋಡಿದೆ...

ಕೆಂಡಾಮಂಡಲ.. ಕೋಪ ಬಂದಿದೆ...!

ಕಣ್ಣೆಲ್ಲ ಕೆಂಪಾಗಿ ಧುಮು ಧುಮು ಗುಡುತ್ತಿದ್ದರು...!

ನನ್ನನ್ನು ಕಂಡವರೇ... ಜೋರು ಮಾಡಿ.. ಹೇಳಿದರು...

"ಜಗತ್ತು ಸುಧಾರಣೆ ಆದರೂ ..
ನೀವು ಮಾತ್ರ ಸುಧಾರಣೆ ಆಗಲ್ಲ ಬಿಡಿ..."


..ಅಯ್ಯೋ ದೇವರೇ ..!

ಪುಟ್ಟಸ್ವಾಮಿಯ "ವಿಸ್ಕಿ, ಬಿಯರ್ ಬಾಟಲ್. " ನೋಡಿ ಬಿಟ್ಟರಾ..?

ನನಗೋ.. ಹೆದರಿಕೆ... !
ಸಣ್ಣ ಧ್ವನಿಯಲ್ಲೇ ಕೇಳಿದೆ...

" ಏನಾಯ್ತು.. ಬಾವ..?"

" ಅಲ್ಲಾ... ಇದೆಂಥಾ ಪತ್ರನೋ...?"

".. ಯಾವದು..? "....

" ಇದೇ...! ಇದು.... !" ಅಂತ ಅಣ್ಣ ಬರೆದ ಪತ್ರ ತೋರಿಸಿದರು..

" ಇದು ಅಣ್ಣ ಬರೆದದ್ದು..ಮೊನ್ನೆ ಬಂದಿದೆ.."

" ಅದು ನನಗೂ ಗೊತ್ತಾಗ್ತಾ ಇದೆ...
ಏನು ಬರೆದಿದ್ದಾನೆ..ನೋಡು ತಲೆ ಹರಟೆ..?,.."


ಮೊನ್ನೆಯೇ ಓದಿದ್ದರೂ ಮತ್ತೊಮ್ಮೆ ಓದಿದೆ...
ಬಹಳ ಸಣ್ಣ ಪತ್ರ...


" ಪ್ರಕಾಶು..

ನಾವೆಲ್ಲಾ ಆರಾಮು... ನೀನು ಕ್ಷೇಮನಾ..?

ಇಲ್ಲಿ ಮತ್ತೇನೂ ವಿಶೇಷವಿಲ್ಲ...

ಹಾಂ.. ನೆನಪಾಯಿತು..!

ನಮ್ಮೂರ ತಮ್ಮಣ್ಣನ ಹೆಂಡತಿಗೆ ಹಾವು ಕಚ್ಚಿತ್ತು...
ಡಾಕ್ಟರ್ ಬಂದಿದ್ರು.. ಹೆದರಿಕೆ ಏನೂ ಇಲ್ಲ...
ಎಲ್ಲಾ ಸರಿ ಆಗುತ್ತದೆ...
ಐದು ತಿಂಗಳು ಬೇಕು ಅಂದರು..."

ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಇರಲಿ..

ಆಯಿ ಚೆನ್ನಾಗಿದ್ದಾಳೆ.."

ನಾನು "ಇದರಲ್ಲಿ ಕೋಪ ಬರುವಂಥದ್ದು ಏನಿದೆ..?"...
ತಲೆ ಕೆರೆದು ಕೊಂಡೆ...


ಮತ್ತೊಮ್ಮೆ ಓದಿದರೂ ಅಂಥಹ ವಿಷಯ ಕಾಣಲಿಲ್ಲ...

"ಅಲ್ಲಾ... ನೀವೆಲ್ಲಾ ಯಾವಾಗ ಸುಧಾರಣೇ ಆಗ್ತೀರಪ್ಪಾ..?"

ಮತ್ತೆ ಕೋಪ ತಡೇಯಲಾಗದೆ ಅಬ್ಬರಿಸಿದರು ಬಾವ...

"ಏನಾಯಿತು ಬಾವ.. ?
ಅಂತಹ ವಿಷಯ ಇದರಲ್ಲಿ ಏನಿದೆ..?.. "


ಬಾವನಿಗೆ ಕೋಪ , ಅಸಮಧಾನ.. ಜಾಸ್ತಿಯಾಗತೊಡಗಿತು...

" ಈ ಪತ್ರ ಓದಿಕೊಂಡು...
ಆ..ತಮ್ಮಣ್ಣನ ಅಪ್ಪನಿಗೆ ಫೋನ್ ಮಾಡಿದೆ..!!..."


ತಮ್ಮಣ್ಣನ ತಂದೆ ಊರಲ್ಲಿ ಪ್ರತಿಷ್ಠಿತ ವ್ಯಕ್ತಿ..ಹಿರಿಯರು..!

ಇಡೀ ಊರೇ ಗೌರವ ಕೊಡುತ್ತದೆ...!

ಬಾವನಿಗೂ ಅವರಿಗೂ ಗೌರವದ ಸಂಬಂಧವಿದೆ...!

ನಮ್ಮ ಬಾವನೂ ಸುತ್ತಮುತ್ತಲಿನ ಊರುಗಳಲ್ಲಿ ಗೌರವದ ವ್ಯಕ್ತಿ..!

"ಬ್ಯಾಂಕಿನ ಮ್ಯಾನೇಜರ್"...


ಎಲ್ಲರಿಗೂ ನನ್ನ ಬಾವನೆಂದರೆ ಆದರ.. ಗೌರವ..

ನನಗೆ ಅರ್ಥವಾಗ ಹತ್ತಿತು.. ..

" ಅಣ್ಣ... ಹೀಗೆ "ತಮಾಷೆಗೆ " ಬರೆದದ್ದು....
ನೀವು ಫೋನ್ ಯಾಕೆ ಮಾಡ್ಲಿಕ್ಕೆ ಹೋದ್ರಿ ಬಾವಾ..?..."


" ತಮ್ಮಣ್ಣನ ಮನೆಯವರು ನಮಗೆಲ್ಲ ಆಪ್ತರು...
ಟೆನ್ಷನ್ ಆಗಲ್ವೇನೋ..? ಅದಕ್ಕೇ ಫೋನ್ ಮಾಡಿದೆ.."

"ಆಮೇಲೆ..?"

" ಆಮೇಲೆ ಏನು ? ಮಣ್ಣು ಬದನೆಕಾಯಿ..!..! "

ಬಾವ ನಶೀಕಾಂತ ನಡುಗುತ್ತಿದ್ದರು.. ಕೋಪದಿಂದ...

" .." ಹಾವು" ಕಚ್ಚಿದೆಯಂತಲ್ಲಾ...?
ಯಾವ
" ಹಾವು" ..? ಹೇಗಿತ್ತು..?
ಯಾವಾಗ..?
"ವಿಷ" ತುಂಬಾ ಏರಿಬಿಟ್ಟಿದೆಯಾ..? ಅಂತೆಲ್ಲಾ ಕೇಳಿದೆ..!!..."

ನನಗೆ ಏನು ಹೇಳ ಬೇಕೆಂದು ತೋಚಲಿಲ್ಲ...
ಏನೂ ಹೇಳಲಾಗದೆ ಚಡಪಡಿಸಿದೆ...

ಬಾವ ಮತ್ತೆ ಶುರು ಹಚ್ಚಿಕೊಂಡರು...

"ಅವರು ಹೇಳಿದರು " ಇಲ್ಲಿ ಯಾರಿಗೂ ಹಾವು ಕಚ್ಚಿಲ್ಲ.. ..!

ನಿಮಗೆ ತಪ್ಪು ಮಾಹಿತಿ ಆಗಿದೆ... " ಮ್ಯಾನೆಜರ್ರೆ..."..!!

ನಮ್ಮೂರಲ್ಲಿ ಯಾರಿಗೂ ಹಾವು ಕಚ್ಚಿಲ್ಲಾ"... ಎಂದರು.."


ನಾನು ಸುಮ್ಮನಿದ್ದೆ..ಬಾವನೇ ಮುಂದುವರೆಸಿದರು...


"ಅಲ್ಲಾ... ನೋಡಿ...ಇವರೆ...
ನಾನು ಬೆಂಗಳೂರಲ್ಲಿದ್ದೇನೆ "ಪ್ರಕಾಶನ ಮನೆಯಲ್ಲಿ"
ನಾಗೇಶ ಊರಿಂದ ಪತ್ರ ಬರೆದಿದ್ದಾನೆ....
ನಿಮ್ಮ ಸೊಸೆಗೆ ಹಾವು ಕಚ್ಚಿದೆಯಂತೆ.. !!
ಹೇಗಿದ್ದಾಳೆ ಈಗ..? ..!!..."..


ಈಗ ನಾನು ಕೇಳ ಬಾರದ ಪ್ರಶ್ನೆ ಕೇಳಿದೆ......

" ಬಾವಾ... ಅವರು.. ಏನಂದರು..?"

ಬಾವನಿಗೆ ಮತ್ತೂ ಕೋಪ ಜಾಸ್ತಿಯಾಯಿತು..
ಸಿಟ್ಟು ತಡೆಯಲಾರದೆ ಕೂಗತೊಡಗಿದರು....

ಜಮದಗ್ನಿ ಅವತಾರ...!

"ನೀವು ಅಣ್ಣ , ತಮ್ಮ ಇಬ್ರೂ ಸೇರಿ ..
ನನ್ನ ಗೌರವ ಎಲ್ಲ ಮಣ್ಣುಪಾಲು ಮಾಡಿಬಿಡ್ತೀರಿ..!!...

ನೀನೋ.. !.. ಅಣ್ಣನೋ... !!
ಏನು ಭಾಷೇನೋ ನಿಮ್ಮದು...?

ಅಲ್ಲಾ... . ಯಾವಾಗಾ ನೀವೆಲ್ಲ ಸುಧಾರಣೆ ಆಗೋದು..?

ಅವರ ಸೊಸೆ "ಬಸಿರಾಗಿದ್ದಾಳಂತೆ" ..!!

ಅದನ್ನ ಯಾವರೀತಿ ಬರೆಯೋದು...?

ಹಾವು ಕಚ್ಚಿದೆ ಅಂತಾನಾ..?

ಕನ್ನಡ ಕೊಲೆ ಮಾಡಿ ಬಿಡ್ತೀರಿ ನೀವುಗಳು...!
ಅಹಾ..! ಏನು ಕನ್ನಡಾನೋ ನಿಮ್ಮದು...?

ಏನು ಉಪಮೆ...!!..?... ಏನು ಛಂದಸ್ಸು..?
ಯಾವುದಕ್ಕೆ ಏನು ಹೋಲಿಕೆ...?


ಅಹಹಾ...!! ಜನ್ಮ ಸಾರ್ಥಕವಾಯಿತು...!
ನಿಮ್ಮ ಭಾಷೆ ಕೇಳಿ...!
..ಛೇ.."

"ಅಲ್ಲಾ.. ಬಾವ...
ನೀವ್ಯಾಕೆ... ಅಣ್ಣನ ಪತ್ರ ಓದಲಿಕ್ಕೆ ಹೋದ್ರಿ..?

ಫೋನ್ ಮಾಡೊಕ್ಕಿಂತ ಮೊದ್ಲು ..
ನಂಗೊಂದು ಮಾತು ಕೇಳ್ಬಾರದಿತ್ತಾ..?... "


" ನೀನು ಮಾತಾಡ ಬೇಡ...! ಸುಮ್ನಿರು..!

ನಿಮ್ಮ ಎಡವಟ್ಟು ಕೆಲಸದಿಂದ ನಾನು ಹೇಗೆ ಮುಖ ತೋರಿಸ್ಲೋ..?

ಅವರ ವಯಸ್ಸೇನು..? ನನ್ನ ವಯಸ್ಸೇನು.?.

ನನ್ನ ಮರ್ಯಾದಿ ಎಲ್ಲ ತೊಳೆದು ..
ಸರ್ವ ನಾಶ ಮಾಡಿ ಬಿಟ್ರಿ...!..."


ಬಹಳ ಪೇಚಾಡಿಕೊಂಡರು ನನ್ನ ಬಾವ.....

ಐದು ತಿಂಗಳ ನಂತರ ಅಣ್ಣನ ಪತ್ರ ಮತ್ತೆ ಬಂತು..!

"ಪ್ರಕಾಶು...

ನಾವೆಲ್ಲ ಆರಾಮು..

ತಮ್ಮಣ್ಣನಿಗೆ.. "ಗಂಡು ಕರು"..!

"ತಾಯಿ ಮತ್ತು ಕರು" ಚೆನ್ನಾಗಿದ್ದಾರೆ...!.."


ಅಂದಿನಿಂದ....

ಅಣ್ಣನ ಪತ್ರ ಯಾರಿಗೂ ಸಿಗದ ಹಾಗೆ ಇಡ್ತಾ ಇದ್ದೇನೆ...

Friday, March 27, 2009

ಯುಗಾದಿ ಹಬ್ಬದ ಶುಭಾಶಯಗಳು.....!

ಈ ಮರ ನಮ್ಮೂರ ಬೆಟ್ಟದಲ್ಲಿದೆ...
ನಾನು ಚಿಕ್ಕವನಿದ್ದಾಗಲಿಂದಲೂ ನೋಡುತ್ತಿದ್ದೇನೆ....

ಇದು ಒಂದು ಸೋಜಿಗ......! ವಿಸ್ಮಯ....!

ಪ್ರತಿ ವರ್ಷ ಮಳೆಗಾಲದಲ್ಲಿ ಇದರ ರೆಂಭೆಗಳನ್ನು ಕಡಿಯುತ್ತಾರೆ..
ಛಲ ಬಿಡದೆ ಇದು ಚಿಗುರುತ್ತಿತ್ತು..!

ಮತ್ತೆ .. ಮತ್ತೆ ಚಿಗುರುತ್ತಲಿದೆ.....!

ವಸಂತಾಗಮನಕ್ಕೆ....
ಹಳೆ ಎಲೆಗಳೆಲ್ಲ್ಲ ಉದುರಿ..
ಹೊಸ ಚಿಗುರೆಲೆಗಳೊಂದಿಗೆ...

ಅದೂ.......

ಹ್ರದಯಾಕಾರದಲ್ಲಿ...!!

ಪ್ರೀತಿ.. ಪ್ರೇಮದ ಸಂಕೇತವಾಗಿ....

ಈ ಪ್ರಕ್ರತಿಯೇ ನಮಗೆ ಶುಭ ಕೋರುತ್ತಿದೆ...!

ನಿಮಗೆಲ್ಲರಿಗೂ "ಉಗಾದಿ ಹಬ್ಬದ " ಶುಭಾಶಯಗಳು.....

ನಿಮ್ಮೆಲ್ಲ ಆಸೆ ಕನಸುಗಳು ಈಡೇರಲಿ...
ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ....



Tuesday, March 24, 2009

ನನ್ನಾಕೆಯ ಗುದ್ದು... ಮತ್ತು ಪ್ರೀತಿ..!

ನಡೆದದ್ದು ಇಷ್ಟು...

ಬಹುದಿನಗಳಿಂದ ನಮ್ಮ ಪರಿಚಯದವರೊಬ್ಬರು ಮನೆಗೆ ಬರುತ್ತೇನೆಂದು ಹೇಳಿದ್ದರು.

ನಾನು ಆಯಿತೆಂದು ಹೇಳಿದ್ದೆ..
ನನ್ನ ಗ್ರಹಚಾರಕ್ಕೆ ...
ಇಂದು ಬಂದೇ ಬಿಟ್ಟಿದ್ದರು....!!

ನನ್ನಾಕೆಗೆ ಹೇಳಲು ಮರೆತು ಹೋಗಿತ್ತು....!

ನನ್ನಾಕೆ ಗಡಿಬಿಡಿ ಬಿದ್ದು ..
ಸ್ವೀಟು , ಊಟ ಬಡಿಸಿ,
ನಗು ನಗುತ್ತ ಉಪಚಾರದ ಮಾತು ಹೇಳಿ ಕಳಿಸಿದಳು...


ನಂತರ ಶುರುವಾದದ್ದು...
ಗುಡುಗು ಸಿಡಿಲು...ಆಗಾಗ ಮಿಂಚು....!

ಇದಕ್ಕೆಲ್ಲಾ ಮಳೆ ಬರುವದಿಲ್ಲ ಬಿಡಿ..

"ಅವರು ಮೊದಲೇ ನಮ್ಮನ್ನು ನೋಡಿ ನಗುವವರು,
ನಾವು ಬಾಡಿಗೆ ಮನೆಯಲ್ಲಿದ್ದಾಗ ನಮ್ಮನ್ನು ಮಾತಾಡಿಸುತ್ತಲೂ ಇರಲಿಲ್ಲ..
ಈಗ ನಿಮ್ಮ ಕಾರು, ಮನೆ ನೋಡಿ ಮನೆಗೆ ಬಂದಿದ್ದಾರೆ..
ಅವರು ಬಂದಾಗ ಮನೆ ಕ್ಲೀನ್ ಇರಬೇಕಿತ್ತು..
ಅಡಿಗೆ ಮನಗೆ ಬಂದು ಕೆಲಸ ಮಾಡಿ ನೋಡಿ ಗೊತ್ತಾಗುತ್ತದೆ..
ಎಷ್ಟು ಕಷ್ಟ ಅಂತ...!!


ನೀವು ಮೊದಲೇ ಯಾಕೆ ಹೇಳಲಿಲ್ಲ..? "


ನನ್ನಾಕೆ ಹೇಳುವದು ಸರಿ ಇತ್ತು..

"ಸಾರಿ ಕಣೆ ಚಿನ್ನಾ..
ಮರೆತು ಹೋಯಿತು .. ನನ್ನ ರಾಜ..!"


" ನಿಮಗೆ ನಿಮ್ಮ ಕೆಲಸ..
ಬ್ಲಾಗು ಬಿಟ್ರೆ ಏನು ನೆನಪಿರುತ್ತದೆ..?
ನಿಮಗೆ ನನ್ನ ಬೆಲೆ ಗೊತ್ತಿಲ್ಲ,
ನೀಮಗೂ , ನಿಮ್ಮ ಪುತ್ರ ರತ್ನನಿಗೂ ...
ನಾನು ಹಾಸ್ಯವಾಗಿ ಹೋಗಿದ್ದೇನೆ,

ನಿಮಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ..!.
ನೀವು ನನ್ನನ್ನು ಮೊದಲಿನ ಹಾಗೆ ಪ್ರಿತಿಸುತ್ತಿಲ್ಲ...!.. "


ಹಳೆಯ ಎಲ್ಲ ಘಟನೆ ಎಲ್ಲ ತೆಗೆದು, ಝಾಡಿಸ ತೊಡಗಿದಳು..
ಸಮರ್ಥನೆಗೆ ಪುರಾವೆಗಳೂ ಬರತೊಡಗಿದವು...

ಮಂಗಳಾರತಿ, ಮಂತ್ರಾಕ್ಷತೆ ಸಿಗತೊಡಗಿತು...

ಎಲ್ಲದರಲ್ಲೂ ನಾನು ಅಪರಾಧಿಯೇ...ನನ್ನ ತಪ್ಪಿತ್ತು.... !

ಅಷ್ಟರಲ್ಲಿ...ಬಾಗಿಲು ಬಡಿದ ಸದ್ದು.
ನಾನು ಎದ್ದು ಬಾಗಿಲು ತೆಗೆದು ನೋಡಿದೆ...

ಭರತ್, ಅರುಣ ನಿಂತಿದ್ದರು...
ನಮ್ಮ ಅಪಾರ್ಟಮೆಂಟಿನ ಕೆಳಗಡೆ ಇದ್ದವರು...
ಅವರ ತಂದೆಯವರನ್ನು "ಹಾರ್ಟ್ ಎಟಾಕ್ " ಆಗಿ ಆಸ್ಪತ್ರೆಗೆ ಸೇರಿಸಿದ್ದರು...

ಭರತನ ಕಣ್ಣುಗಳು ಕೆಂಪಗಾಗಿದ್ದವು..

ಅರುಣನ ಕಣ್ಣು ತುಂಬ ನೀರಿತ್ತು ..

ಅವನ ಸಂಕಟ , ವೇದನೆ ಹತಿಕ್ಕಲ್ಲಾರದೆ ಹನಿಹನಿಯಾಗಿ ಬೀಳುತ್ತಿದ್ದವು..
ಎಷ್ಟೆಂದರು ಸಣ್ಣವಯಸ್ಸಲ್ಲವೆ..?

"ಪ್ರಕಾಶಣ್ಣ .. ಅಪ್ಪನ ಬೀಪಿ ಕಡಿಮೆಯಾಗುತ್ತಿದೆಯಂತೆ...
ಆಸ್ಪತ್ರೆಯಿಂದ ಅಮ್ಮನ ಫೋನ್ ಬಂದಿತ್ತು.."

ನನಗೆ ನಿಧಾನವಾಗಿ ವಿಷಯ ಅರ್ಥ ಆಗತೊಡಗಿತು...

ಹೌದಾ..? ಮಧ್ಯಾಹ್ನದವರೆಗೂ ಆರಾಮಿದ್ದರಲ್ಲ...?
ಬನ್ನಿ... ಒಳಗೆ ಬನ್ನಿ.."

" ಇಲ್ಲ ಪ್ರಕಾಶಣ್ಣ...
ವರದಳ್ಳಿ ತೀರ್ಥ ಇದೆಯಾ..?

ಅಮ್ಮ ತರಲಿಕ್ಕೆ ಹೇಳಿದ್ದಾರೆ..."

ನಂಬುಗೆ, ವಿಶ್ವಾಸ ಯಾವಾಗಲೂ ಇರಬೇಕು...
ಪುಣ್ಯ ತೀರ್ಥವನ್ನು ಹಾಕಿದರೆ ವಾಸಿಯಾಗ ಬಹುದೇನೋ..

ಆ ತಾಯಿಯ ಆಸೆ....!
ಹೇಗಾದರೂ ಬದುಕಿಬಿಡಲಿ...ಅನ್ನುವದು..!


ಆಸೆ, ಕನಸುಗಳು ಇದ್ದರೆ.. ಬದುಕು...!

ನನ್ನಾಕೆ ಲಗುಬಗೆಯಿಂದ ದೇವರ ಮನೆಗೆ ಹೋಗಿ ತೀರ್ಥದ ಬಾಟಲಿ ತಂದು ಕೊಟ್ಟಳು..

"ಪ್ರಕಾಶಣ್ಣ ನಾವು ಬರ್ತೇವೆ... ಏನಾಯಿತು ಅಂತ ಫೋನ್ ಮಾಡ್ತೇವೆ.."

" ಈಗ ನೀವು ಡ್ರೈವ್ ಮಾಡಿ ಹೋಗುವದು ಬೇಡ .. ನಾನು ಬರ್ತೇನೆ.."

ಮನಸ್ಸು ಬೇಜಾರಿನಲ್ಲಿರುವಾಗ ಡ್ರೈವಿಂಗ್ ಮಾಡುವದು ಕಷ್ಟ.....

"ಇಲ್ಲ ಪ್ರಕಾಶಣ್ಣ ನಾವು ಬರ್ತೇವೆ...
ಏನಾದರೂ ಸಹಾಯ ಬೇಕಿದ್ದರೆ ಕೇಳ್ತೇವೆ..

ನಿನ್ನ ಬಳಿ ಸಂಕೋಚವಿಲ್ಲ.."

ಮೆಟ್ಟಲಿಳಿದು ಹೋದರು...

ನನ್ನಾಕೆ ಬಹಳ ಬೇಸರ ಮಾಡಿಕೊಂಡಳು.....

"ಛೇ ಎಂತಹ ಅನ್ಯಾಯರೀ..
ಇದು ಇಂದು ಮಧಾಹ್ನ ನಮ್ಮನೆಗೆ ಬಂದು ಕಷಾಯ ಕುಡಿದು ಹೋಗಿದ್ದಾರಲ್ಲ..!

ಬೀಪಿ ಕಡಿಮೆಯಾದರೆ ಪ್ರಾಣಕ್ಕೇನೂ ಅಪಾಯವಿಲ್ಲತಾನೇ..?"

" ಭರತ, ಅರುಣರ ಮುಖನೋಡಿದರೆ ..
ಅಪಾಯವಿರಬಹುದೇನೋ ಅನ್ನಿಸುತ್ತದೆ...

ಅವರ ಕಣ್ಣುಗಳು ಅತ್ತು ಅತ್ತು ಕೆಂಪಗಾಗಿದ್ದವು..."

ನನಗೂ ಆಘಾತವಾಗಿತ್ತು..

ನನ್ನಾಕೆಗೂ ಸಹ "ಕಹಿ ಸತ್ಯ" ಅರಗಿಸಿ ಕೊಳ್ಳಲಾಗಲಿಲ್ಲ...

ಮಧ್ಯಾಹ್ನ ನಮ್ಮನೆಗೆ ಬಂದು..
" ಕಾಫೀ ಬೇಡಾ..," ಕಷಾಯ " ಮಾಡು.. ಆಶಾ "

ಅಂತ
ಹೇಳಿ .., ಮಾಡಿಸಿ ಕುಡಿದು ಹೋಗಿದ್ದರು ....!

ಉತ್ಸಾಹದ ಬದುಕು... !

"ಸಾಗರದಲ್ಲಿ ಜಮೀನು ತಗೊ.. ಪ್ರಕಾಶ..
ನಾನು ಕೊಡಸ್ತೇನೆ..! "

ಬಹಳ ಆತ್ಮವಿಶ್ವಾಸದಿಂದ ಹೇಳಿದ್ದರು...!

"ರೀ... ಎದೆ ನೋವು ತುಂಬಾ ಬಂದಿರ ಬಹುದಾ..?
ಹಾರ್ಟ್ ಎಟಾಕ್ ಅಂದರೆ ನೋವು ಜಾಸ್ತಿ ಇರುತ್ತದಾ.?"

ನಿಜ... ಹ್ರದಯಾಘಾತದ ನೋವಿನ ಸಾವು..
ಅತ್ಯಂತ ನೋವಿನ ಸಾವಂತೆ...


ಹೆಂಗಸರ ಡೆಲಿವರಿ ನೋವಿಗಿಂತಲೂ ಜಾಸ್ತಿ ಇರುತ್ತದಂತೆ..

"ಛೇ.. ಏನು ಅನ್ಯಾಯ ಇದು...?
ಒಬ್ಬರಿಗೂ ಅನ್ಯಾಯ, ಕೆಟ್ಟ ಮಾತು ಹೇಳಿದವರಲ್ಲ..
ಅವರಾಯಿತು ಅವರ ದುಡಿಮೆಯಾಯಿತು ಅಂತಿದ್ದವರು..
ಅವರಿಗೇಕೆ ಈ ನೋವಿನ ಸಾವು..?"

ಅವರಿಗೆ ಸಾಯುವಂಥ ವಯಸ್ಸೇನೂ ಅಲ್ಲ..
ಐವತ್ತೈದರ ಅಂಚಿನಲ್ಲಿದ್ದರು....
ಮತ್ತೊಬ್ಬ ಮಗನ ಮದುವೆ ಮಾಡಬೇಕಿತ್ತು..

ಆಗತಾನೆ ಹುಟ್ಟಿದ ಮೊಮ್ಮಗನ ಸಂಗಡ ಆಡುವ ವಯಸ್ಸು....

ಈಗಲೇ ಕರೆ ಬಂದಿತೇ..?


"ಏನು ಮಾಡೋಣ .. ಹುಟ್ಟು ಸಾವು ನಮ್ಮ ಕೈಲಿ ಇಲ್ಲವಲ್ಲ.."

"ಅಲ್ಲಾರೀ.. ಅವರ ತಾಯಿ ನೋಡಿ..
ಎಷ್ಟು ಲಕ್ಷಣವಾಗಿ.. ಹಣೆ ತುಂಬಾ ದೊಡ್ಡ ಕುಂಕುಮ ಇಟ್ಟು ಚಂದವಾಗಿದ್ದರು..
ಅವರನ್ನು ನೋಡಿದರೆ ಕೈಮುಗಿದು ಬಿಡೋಣ ಅನಿಸುತ್ತದೆ ಅಲ್ಲವೇ?

ಅದು ನಿಜ...

ಅವರಲ್ಲಿ ನಾನು ನನ್ನಮ್ಮನ್ನು ನೋಡುತ್ತಿದ್ದೆ..
ಅಮ್ಮ ಊರಲ್ಲಿದ್ದಾಗ ಏನಾದರೂ ನೆಪ ಮಾಡಿ ಅವರ ಮನೆಗೆ ಹೋಗಿ..
ಕಣ್ಣತುಂಬ ನೋಡಿ ಬರುತ್ತಿದ್ದೆ...

ನೆಪ ಸಿಕ್ಕಿದಾಗ ಕಾಲು ಮುಟ್ಟಿ ನಮಸ್ಕಾರ ಮಾಡಿ ಬರುತ್ತಿದ್ದೆ....

ಮತ್ತೆ ಆಶಾಳೇ ಹೇಳಿದಳು..

ಭರತ, ಅರುಣರನ್ನು ನೋಡಿದರೆ... ಪಾಪ..ಅನಿಸುತ್ತದೆ...

ಇಲ್ಲಿಯವರೆಗೆ ಹೆಜ್ಜೆಹೆಜ್ಜೆಗೂ ಇದ್ದ ಅಪ್ಪ... !
ಮಾನಸಿಕವಾಗಿ, ಭೌತಿಕವಾಗಿ ಧೈರ್ಯ ತುಂಬುವ..
ಜೀವಕ್ಕಿಂತ ಪ್ರೀತಿ ಮಾಡುವ ಅಪ್ಪ ಇನ್ನು ಇರುವದಿಲ್ಲ ಅಂದರೆ...!

ಹೇಗಾಗಿರ ಬೇಡ..?
ಛೇ.. ಒಳ್ಳೆಯವರಿಗೇ ದೇವರು ಯಾಕೆ ಹೀಗೆ ಮಾಡುತ್ತಾನೆ...?...


ದೇವರು ಎಷ್ಟು ನಿರ್ದಯಿ ಅಲ್ಲವಾ...?"


" ಇಲ್ಲಿ ನೋಡು... ಪ್ರತಿಯೊಬ್ಬರೂ ಭರತ, ಅರುಣರ ಸ್ಥಾನದ ಅನುಭವ ಅನುಭವಿಸಲೇ ಬೇಕು..

ಪ್ರತಿಯೊಬ್ಬರ ಅಪ್ಪ, ಅಮ್ಮರೂ ಸಾಯುತ್ತಾರೆ...

ನಿನ್ನ ಅಪ್ಪ, ಅಮ್ಮರೂ ಒಂದು ದಿನ ಹೋಗೇ ಹೋಗುತ್ತಾರೆ...ಇದು ಸಹ ಸತ್ಯ.."

"ಛೇ ಹಾಗಲ್ಲ ಅನ್ನ ಬೇಡಿ.. ಛೇ...!"

ನೋಡು ಆಶಿ...
ಪ್ರತಿಯೊಬ್ಬರೂ ಭರತನ ತಂದೆಯ ದಿನ ನೋಡಲೇ ಬೇಕು..

ಸಾವನ್ನು ಎದುರಿಸಲೇ ಬೇಕು...

ಪ್ರತಿಯೊಬ್ಬರಿಗೂ ಸಾವು ಇದ್ದೇ ಇದೆ...!

ನನ್ನಮ್ಮನೂ ಒಂದು ದಿನ ಬಿಟ್ಟು ಹೋಗಿಬಿಡುತ್ತಾಳೆ...!

ನಿನ್ನಪ್ಪ, ಅಮ್ಮನೂ ಸಹ..!

ನಾನೂ ಸಾಯುತ್ತೇನೆ.. ನೀನೂ ಸಹ.. ಸಾಯಲೇ ಬೇಕು....!

ನಮ್ಮ ಸಾವನ್ನು " ನಮ್ಮ ಮಗನೂ" ನೋಡಲೇ ಬೇಕು....

ನಾವಿರುವಷ್ಟು ದಿನ ನಮ್ಮ ಸಂಗಡ ಇದ್ದಾರಲ್ಲ...
ಅವರೊಡನೆ ಪ್ರೀತಿಯಿಂದ ಇದ್ದು ಬಿಡಬೇಕು...!

ಎಷ್ಟು ಪ್ರೀತಿ ಮಾಡ ಬೇಕೋ ಮಾಡಬೇಕು..

ನಾಳೆ ನೋಡಿಲ್ಲವಲ್ಲ...!

ನೀನೂ ಸಹ ಸಾಯುತ್ತೀಯಾ... ನಾನೂ ಸಾಯುತ್ತೀನಿ ...

ನಿನ್ನ ಸಾವನ್ನು ನಾನು ನೋಡ್ತಿನೋ.....

ನನ್ನ ಸಾವನ್ನು ನೀನು ನೋಡ್ತಿಯೋ.. ...ಗೊತ್ತಿಲ್ಲ...!

ನಾನು ಸತ್ತ ಮೇಲೆ ಅಳುವದಕ್ಕಿಂತ ..

ಈಗ ನನ್ನನ್ನು ಪ್ರೀತಿ ಮಾಡೇ ಪ್ಲೀಸ್.....

ಎಷ್ಟು ಪ್ರೀತಿ ಬೇಕಾದರೂ ಮಾಡು... ನಾನೂ ಮಾಡ್ತೇನೆ..


ನಮ್ಮಿಬ್ಬರ ನಡುವೆ ಜಗಳ ಎಲ್ಲ ಯಾಕೆ.. ಬೇಕು..?

ಈಗ ನಿನ್ನ ಕಣ್ಣಮುಂದೆ ಇದ್ದೀನಲ್ಲ......

ಎಷ್ಟು ಬೇಕಾದರೂ ಪ್ರೀತಿ ಮಾಡು ...

ಮಾಡ್ತೀಯಾ..?"


"ಛೇ .. ಎಷ್ಟು ಕ್ರೂರವಾಗಿ ಮಾತಾಡ್ತಿರಿ ..ನೀವು..

ಮನಸ್ಸಾದರೂ ಹೇಗೆ ಬರುತ್ತದೆ...?

ಇರಿ..ನಿಮಗೆ ಮಾಡಿಸ್ತೇನೆ.."

ಅಂತ....

ಆಶಾ... ನನ್ನ ಬೆನ್ನಿಗೆ ಬಲವಾಗಿ..
ಜೋರಾಗಿ..ತಾಕತ್ತೆಲ್ಲಾ ಹಾಕಿ ಗುದ್ದಿದಳು...

ಹಿಂದಿನಿಂದ ಬಿಗಿದಪ್ಪಿದಳು...

ಅವಳ... ಆ.. ಗುದ್ದಿನಲ್ಲಿ ..
ಆ ಅಪ್ಪುಗೆಯಲ್ಲಿ...

ಅವಳ "ಪ್ರೀತಿ ಪ್ರೇಮವೆಲ್ಲ" ... ಇತ್ತು...


ನನ್ನಾಕೆಯ ಪ್ರೀತಿ ಕೆಲವು ಸಾರಿ...

ನನಗೆ ಚೆನ್ನಾಗಿ ಅರ್ಥ ಅಗುತ್ತದೆ.....



( ಇದೀಗ.. ಮಡದಿಯನ್ನು ಗೋಕರ್ಣದ ಬಸ್ಸಿಗೆ ಕಳುಹಿಸಿ ಬಂದಾಗ..
ಮನೆಯಲ್ಲ ಬಿಕೋ ಅನಿಸ ತೊಡಗಿತು..
ಅವಳಿಲ್ಲದೆ.. ಬೇಜಾರಾಗ ತೊಡಗಿತು..
ಹೀಗೊಂದು ನೆನಪು.. ಅವಳಿಗಾಗಿ..)

Sunday, March 22, 2009

ಪೆಟ್ಟಿಗೆ... "ಗಪ್ಪತಿ " .. ಅನ್ನುವ....."ಅಡಪೊಟ್ರು "...!!

ಪೆಟ್ಟಿಗೆ ಗಪ್ಪತಿ....

ತುಂಬಾ ಸಾಧು ಮನುಷ್ಯ... ನಿಧಾನ ಗತಿಯ ಸ್ವಭಾವ......
ಬರೆಯುವದು.. ಓದುವದು...

ನಡೆಯುವದು...

ವಿಚಾರ ಮಾಡುವದು... ... ಮಾತನಾಡುವದು...

ಎಲ್ಲದರಲ್ಲೂ...ನಿಧಾನ....

ತುಂಬಾ... ತುಂಬಾ ಸಮಾಧಾನ...!


ಅವನ ತೋರು ಬೆರಳಿಗೆ ಉಂಗುರವೊಂದಿತ್ತು....!

ಉಂಗುರ ಒಳಗೆ ಹೋದಮೇಲೆ ....

ಬೆರಳಿನ ಗಂಟು ಒಂದುಥರ ದಪ್ಪವಾಗಿ ..

ಹೊರಗೆ ತೆಗೆಯಲು ಬಾರದ ಸ್ಥಿತಿಯಲ್ಲಿತ್ತು...


" ಇದು ಹೇಗಾಯಿತು.... ಗಪ್ಪತಿ...? "

" ಇದಾ.....ಅಂದು ಭಾನುವಾರ ..ನಾನು ಆರು ಗಂಟೆಗೆ ಎದ್ದು ತೋಟಕ್ಕೆ ..

ಅಡಿಕೆ ಆರಿಸಿಕೊಂಡು ಬರಲು ಹೋಗಿದ್ದೆ...


ಅಲ್ಲಿ ತುದಿ ಮನೆಯ ಮನೆಯ ವೆಂಕಪ್ಪಣ್ಣ ಸಿಕ್ಕಿದ..


ಅವನು ಯಾವಾಗಲೂ ನಮ್ಮನೆ ತೋಟದಿಂದ ಬಾಳೆ ಎಲೆ ಕೊಯ್ಯುವದು..

ಅಂದು ನಾನು ಎದುರಿಗೆ ಸಿಕ್ಕಿ ಬಿಟ್ಟೇನಲ್ಲ ಹಾಗಾಗಿ.. ಸಪ್ಪೆ ಮುಖದಿಂದ ಬಾರದ ನಗು ನಕ್ಕ...

ಅವನ ಸಂಗಡ ಪಕ್ಕದ ಮನೆ ಮಂಜಪ್ಪಣ್ಣನೂ ಇದ್ದ...

ನಾನು ಮನೆಗೆ ಬಂದು.. ಮುಖತೊಳೆದು..ಹಲ್ಲು ತಿಕ್ಕಿ ...

ತಿಂಡಿ ತಯ್ಯಾರಾಗಿದೆಯಾ..? .. ಎಂದು ಅಡಿಗೆ ಮನೆ ಇಣುಕಿದೆ...

ಅಮ್ಮ ದೋಸೆಗೆ ರೆಡಿ ಮಾಡುತ್ತಿದ್ದಳು...

ನಮ್ಮ ಮನೆಯಲ್ಲಿ ಯಾವಾಗಲೂ "ಮೊಗೆಕಾಯಿ ದೋಸೆ ತೆಳ್ಳೇವು " ಮಾಡ್ತಾರೆ.."


" ಹೊಯ್... ಗಪ್ಪತಿ.... ನಿಂಗೆ ಬೆರಳು ಹೀಗೇಕೇಕಾಯಿತು..? ಅದು ಹೇಳು ...

ನಿಮ್ಮನೆ.. ಮೊಗೆಕಾಯಿ ದೋಸೆ ಕಟ್ಟಿಕೊಂಡು ನಂಗೇನು..?

ಎಲ್ಲೆಲ್ಲೋ ಹೋಗ್ಬೇಡಾ...."


" ಅದನ್ನೇ ಹೇಳ್ತಾ ಇದ್ದಿನಪ್ಪಾ..ಸ್ವಲ್ಪ ಇರು...

ಹಾಗೆ... ದೋಸೆ ತಿಂದು ಹೊರಗೆ ಬಂದೆ...

ಹೊರಗೆ ಬಂದರೆ ನಮ್ಮನೆ ನಾಯಿ ಒಂದೇ ಸಮನೇ ಕೂಗುತ್ತಿತ್ತು...

ನೋಡ್ತೀನಿ.. ಪಕ್ಕದ ಮನೆ ಮಂಜಪ್ಪಣ್ಣ.. ಹೋಗ್ತಾ ಇದ್ದ...

ನಾನು ಅದಕ್ಕೆ ಗದರಿಸಿದೆ...

ಆ ನಾಯಿ ನನ್ನ ಅಜ್ಜನ ಮನೆಯದು...

ನಾವು ಎರಡು ವರ್ಷದ ಹಿಂದೆ.. ಅಜ್ಜನ ಮನೆಗೆ ಹೋದಾಗ...


" ಹೋಯ್... ಪುಣ್ಯಾತ್ಮಾ... ! ನಿಂಗೆ ಈ ಬೆರಳು ಯಾಕೆ ಹೀಗಾಯ್ತು ಅದನ್ನ ಹೇಳು ...?

ಏನೇನೋ ಹೇಳ್ತೀಯಲ್ಲ.. ಮಾರಾಯಾ..!."


" ಅದನ್ನೇ ಹೇಳ್ತಾ ಇದ್ದೀನಪ್ಪ... ಇರು ..

ನನ್ನ ಅಜ್ಜನ ಮನೆಯಲ್ಲಿ ಒಂದು ಹೆಣ್ಣು ನಾಯಿ....

ಅದಕ್ಕೆ ಎರಡು ಮರಿಗಳು.....

ಅದು ಯಾವಾಗಲೂ ಹೆಣ್ಣು ಮರಿ ಹಾಕುವದು ...

ಆದರೆ ಆ ಬಾರಿ ಎರಡೂ ಗಂಡು ಮರಿ ಹಾಕಿತ್ತು....!

ನನ್ನ ಮಾವ "ಒಂದು ಮರಿ ನೀನು ಬೇಕಾದರೆ ತಗೊ ಮಾರಾಯ" ಅಂದ..

ನಾನು ಬಹಳ ವಿಚಾರ ಮಾಡಿ..ಒಂದು ಮರಿ ತೆಗೆದು ಕೊಂಡೆ...."


" ಲೇ... ಮಾರಾಯಾ...! ...! ನಿನ್ನ ಬೆರಳಿಗೆ ಉಂಗುರ...

ಸಿಕ್ಕಿ ಹಾಕಿ ಕೊಂಡಿದ್ದು ಹೇಗೆ ಮಾರಾಯಾ..?


ನಾಯಿಯಂತೆ... ಹೆಣ್ಮರಿಯಂತೆ.. ಅದನ್ನೆಲ್ಲ ಯಾಕೆ ಕೊರಿತೀಯಾ..? .."



" ಅದನ್ನೇ ಹೇಳ್ತಾ ಇದೀನಪ್ಪಾ... ಸ್ವಲ್ಪ ಇರು...

ಆ ನಾಯಿ ಹಗಲು ಹೊತ್ತು ಪಕ್ಕದ ಮನೆಯವರನ್ನು ನೋಡಿದರೆ ಮಾತ್ರ ಕೂಗ್ತದೆ

ರಾತ್ರಿ ಹೊತ್ತು ಯಾರು ಬಂದರೂ ಕೂಗುತ್ತದೆ..

ಹಗಲು ಹೊತ್ತಿನಲ್ಲಿ ಬೇರೆ ಯಾರೇ ಬಂದರೂ ಬಾಲ ಅಲ್ಲಾಡಿಸಿ ನಗ್ತದೆ..."


ನನಗೆ ವಿಚಿತ್ರ ಎನಿಸಿತು..

"ಹೌದಾ...! ಯಾಕೆ ಹಾಗೆ..?


" ಅದು ದೊಡ್ಡ ಕಥೆ... ಆ ನಾಯಿ ಮರಿ ಸಣ್ಣ ಇದ್ದಾಗ... ಪಕ್ಕದ ಮನೆಯ ಮಂಜಪ್ಪಣ್ಣ...

ಈ ನಾಯಿ ಮರಿಗೆ ಹೊಡೆದು ಬಿಟ್ಟಿದ್ದ...

ಅಲ್ಲಿವರೆಗೂ ಪ್ರೀತಿಯಿಂದ ಇದ್ದ ಎರಡೂ ಮನೆಯವರು....

ದೊಡ್ಡ ಜಗಳ ಆಗಿ..... ವೈರತ್ವ, ಹಗೆ ಎಲ್ಲ ಶುರುವಾಗಿ..

ಬದ್ಧ ವೈರಿಗಳಾಗಿಬಿಟ್ಟೆವು...!

ಭಾರತ , ಪಾಕಿಸ್ತಾನ ಆಗಿಬಿಟ್ಟೇವು..

ಈಗ " ಕೇಸು" ಕೋರ್ಟಿನಲ್ಲಿದೆ... ಮಾರಾಯಾ...!!


" ಅಯ್ಯೊ.. ರಾಮಾ...! ನಾಯಿಗೆ ಹೊಡೆದದ್ದು..

ಕೋರ್ಟಿನಲ್ಲಿ ಕೇಸಾಯಿತಾ...?
ಏನಪ್ಪಾ ಇದು..??


" ಛೇ.. ಛೇ.. ಅಲ್ಲೋ ಮಾರಾಯಾ...!

ಅದು ಆಗಿದ್ದು ನಮ್ಮನೆ ತೆಂಗಿನ ಮರದಿಂದ..

ನಮ್ಮನೆ ಅವರ ಮನೆ ಮಧ್ಯ .. ನನ್ನಜ್ಜ ನೆಟ್ಟ ತೆಂಗಿನ ಮರ ಇದೆ...

ತೆಂಗಿನ ಕಾಯಿ ಮನೆ ಮೆಲೆ ಬಿದ್ದು ಹಂಚು ಒಡೆಯುತ್ತಿತ್ತು..

ಒಂದು ದಿವಸ ಪಕ್ಕದ ಮನೆ ಮಂಜಪ್ಪಣ್ಣನ..

ಭುಜದ ಮೇಲೆ
ತೆಂಗಿನ ಕಾಯಿ ... ಬಿತ್ತು...

ಅವನ ಮೇಲೆ ಬಿದ್ದಾಗ ಅಂವ ನೋವಿನಿಂದ ಕೂಗಿದ..

ಆಗ ... ಈ ನಾಯಿ..

ಅವನನ್ನು ನೋಡಿ ಕೂಗಿ ಬಿಟ್ಟಿತ್ತು...

ಮಂಜಪ್ಪಣ್ಣನಿಗೆ ಅಸಾಧ್ಯ ಕೋಪ ಬಂದು....

ನಾಯಿಗೆ ಹೊಡೆದಿದ್ದ....

ನಮ್ಮನೆ ನಾಯಿಗೆ ಹೊಡೆಯಲು ಇಂವ ಯಾರು...?

ಹಾಲು., ಅನ್ನ ಹಾಕಿ ಮುದ್ದಿನಿಂದ ನಾವು ಸಾಕಿದ್ದೇವೆ...!!...

ಅಲ್ಲ.. ನಾಯಿ ನೋವು ಬೇರೆ ನಮ್ಮ ನೋವು ಬೇರೇನಾ... ?..

ನೀನೇ ಹೇಳು.... ಇದು ನ್ಯಾಯಾ ನಾ...?... "


ತಥ್... ಇವನಾ...!

ಇದು ಎಲ್ಲಿಂದ ಎಲ್ಲೋ ಹೋಗ್ತಾ ಇದೆಯಲ್ಲ...!!

ನನಗೆ ತಲೆ ಬ್ಲಾಸ್ಟ್ ಆಗಿ ಒಡೆದು ಹೋಗುತ್ತೇನೋ ಅನಿಸಿತು...!


" ಅದೆಲ್ಲ ಬೇಡ... ಗಪ್ಪತಿ...!! ಪಾಯಂಟು ... ಪಾಯಂಟು... ಮಾತಾಡು..

ಕೆಲಸಕ್ಕೆ ಬಾರದ ವಿಷ್ಯ ಬೇಡ...

ಈ ಬೆರಳು ಹೇಗೆ...ಯಾಕೆ.. ಹೀಗಾಯ್ತು..?

ಏನಾಯ್ತು...? ಅದನ್ನು ಹೇಳು..."


" ಅದನ್ನೇ ಹೇಳ್ತಾ ಇದ್ದೀನಪ್ಪ ಸ್ವಲ್ಪ ಇರು..

ಈ.. ನಾಯಿ ಸಾಮಾನ್ಯ ನಾಯಿಯಲ್ಲ...!

ಸ್ವತಹ ಸೋನಿಯಾ ಗಾಂಧಿಯವರೆ ಅಪ್ಪಿ ಮುದ್ದಾಡಿದ್ದಾರೆ...!!


" ಲೋ.... ಬುರುಡೆ ಬಿಡಬೇಡಪ್ಪಾ... ಎಲ್ಲಿಯ ಸೋನಿಯಾ ಗಾಂಧಿ..??

ಎಲ್ಲಿ ನಿಮ್ಮನೆ ಹಡಬೆ.. ಬೀದಿ ನಾಯಿ ..?? ಸುಮ್ನಿರಪ್ಪ...!

ಸುಮ್ನೇ ಕುಯ್ಯಿಬೇಡಾ.. ! "


" ನೋಡು ತುದಿಮನೆ ವೆಂಕಪ್ಪಣ್ಣ ಗೊತ್ತಲ್ಲ.....

ಅವನ ಮಗ ಸೋನಿಯಾ ಗಾಂಧಿಯ ಸೆಕ್ರೇಟರಿ ಬಳಿ ಕೆಲಸ ಮಾಡುವದು..

ದೆಹಲಿಯಲ್ಲಿ...

ನಮ್ಮನೆ ನಾಯಿಗೂ ಅವರಮನೆ ನಾಯಿಗೂ ದೋಸ್ತಿಯಾಗಿ.. ಮರಿ ಹುಟ್ಟಿದ್ದವು ..

ಆಮರಿಗಳೆಲ್ಲ ನಮ್ಮನೆ ನಾಯಿಯ ಹಾಗೆ ಇದ್ದವು...

ಒಂದು ಮರಿಯನ್ನು ಕಷ್ಟಪಟ್ಟು ದೆಲ್ಲಿಗೆ ಒಯ್ದಿದ್ದ.....

ಅಲ್ಲಿ ಸೋನಿಯಾ ಗಾಂಧಿ ನೋಡಿದ್ದರಂತೆ...!!.."..


ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ...


ಅಷ್ಟರಲ್ಲಿ ನಾಗು ಮತ್ತು ಗೆಳೆಯರು ಬಂದರು..

"ಏನ್ರಪಾ..? ಏನು ಮಾತು ಕಥೆ..?

ಲೇ ಪೆಟ್ಟಿಗೆ ಏನು ಕಥೆಯೋ..?.."

ಕೇಳಿದ ಎಂದಿನಂತೆ ಹಾಸ್ಯವಾಗಿ..


" ಅದೇ ಬೆರಳಿನ ಉಂಗುರದ ಕಥೆನೋ..!

ಈ ಪ್ರಕಾಶಾ ಹೇಳ್ಳಿಕ್ಕೇ ಬಿಡಲ್ಲಪ್ಪಾ ..!

ಕೆಲಸಕ್ಕೆ ಬಾರದ ಪ್ರಶ್ನೆ ಕೇಳ್ತಾನೆ..""



" ಲೇ ಪ್ರಕಾಶು ನಿನ್ನ ಕಥೆ... ದೇವ್ರೇ ಕಾಪಾಡಬೇಕು..!

ಎಲ್ಲಿವರೆಗೆ ಬಂದಿದ್ದಾನೆ...?

ಒಬಾಮಾ...? ಅಮೇರಿಕಾದ ಚುನಾವಣೆ ಎಲ್ಲ ಆಯ್ತಾ..?

ಕೋಫಿ ಅಣ್ಣನ್ .., ವಿಶ್ವಸಂಸ್ಥೆ... ಎಲ್ಲಾ ಆಯ್ತಾ..? "


ಅದಕ್ಕೆ ಗಪ್ಪತಿನೇ ಹೇಳಿದ...


" ಇಲ್ಲೋ.. ಮಾರಾಯಾ ..!...

ಇನ್ನೂ "ಸೋನಿಯಾ ಗಾಂಧಿ" ಬಳಿ ಇದ್ದೀನಪ್ಪಾ..!

.. ಮಧ್ಯದಲ್ಲಿ ಕೆಲಸಕ್ಕೆ ಬಾರದ ಪ್ರಶ್ನೆ ಹಾಕ್ತಾನೆ..

ಹೇಗೆ ಹೇಳುವದು..? "


ನಾಗುಗೆ ಕೋಪ ಬಂತು ..ನನ್ನ ಸ್ಥಿತಿ ನೋಡಿ ಕನಕರನೂ ಬಂದಿರ ಬೇಕು..

" ಸೀತಾರಾಮ.. ಉಮಾಪತಿ ಹಿಡ್ಕೊಳ್ರೋ.. ಈ.. ಪೆಟ್ಟಿಗೇನಾ..

ನಾನು ಹೇಳ್ತೀನಿ ಇದು ಹೇಗಾಯ್ತು ..ಅಂತ...! "

ಉಮಾಪತಿ... ಸೀತಾರಾಮ...ಇಬ್ಬರೂ..

ಗಪ್ಪತಿಯನ್ನು ಬಾಯಿ ಮುಚ್ಚಿ ಬಲವಾಗಿ ಹಿಡಿದು ಕೊಂಡರು


ನಾಗು ಹೇಳಿದ.....


" ಇಂವ ... ಬಾಳೆ .. ಎಲೆ ಕೊಯ್ಯಲು ಹೋದಾಗ..

ಕತ್ತಿ ತಾಗಿ ಕೈ ಬೆರಳು.. ಪೆಟ್ಟಾಯ್ತು..

ಬ್ಯಾಂಡೇಜು ಹಾಕಿದ್ರು..

ಗಡಿಬಿಡಿಯಲ್ಲಿ ಉಂಗುರ ಅಲ್ಲೇ ಇದ್ದು ಹೋಗಿತ್ತು ..


ವಾಸಿಯಾದಮೇಲೆ ಉಂಗುರದ ಮುಂದೆ ಗಡ್ಡೆಯಾಗಿ ...

ತೆಗಿಯಲಿಕ್ಕೆ ಬಾರದ ಸ್ಥಿತಿಯಾಗಿತ್ತು... !!..".


ಗಪ್ಪತಿ ಕೊಸರಾಡೀಕೊಂಡು ಬಿಡಿಸಿಕೊಂಡು ಕೂಗಿದ.....


"ಸ್ವಲ್ಪ ಹೊತ್ತು ಸುಮ್ನೇ ಕೇಳಿದ್ದರೆ ನಾನೇ ಹೇಳ್ತಿದ್ದೆ ಚಂದವಾಗಿ ...

ರಸ ಭಂಗ ಮಾಡಿ ಬಿಟ್ಯಲ್ಲೋ..?... "



" ಅಬ್ಬಬ್ಬ...! ಪುಣ್ಯಾತ್ಮಾ...!

ಸುಮ್ನೀರು ಮಾರಾಯಾ.. ಸಾಕೋ ಸಾಕು..!


... ಈ.. ಜನ್ಮಕ್ಕೆ ಸಾಕಾಗುವಷ್ಟು ಕೊರೆದು ಬಿಟ್ಯಲ್ಲೋ..!!"


ಅಯ್ಯೋ... ಶಿವನೇ...!!

ಎಂದು ನಾನು ಬೆವರು ಒರೆಸಿ ಕೊಂಡೆ...


ತಲೆ ಆಡಿಸಿ....

ಜೋರಾಗಿ.. ಕೊಡವಿ ಕೊಂಡೆ..!

ಅಬ್ಬಾ... !... ಅಬ್ಬಬ್ಬಾ...!!



ಈ ಪೆಟ್ಟಿಗೆ ಗಪ್ಪತಿ...

" ನಯನಾ "... ಅನ್ನೋ ಹುಡುಗಿ ಲವ್ ಮಾಡಿ

ಅಡಪೋಟ್ರು ಆದದ್ದು ದೊಡ್ಡ ಕಥೆ....

Saturday, March 14, 2009

ನಾನೂ...ಒಂಥರಾ.. " ಅಡಪೊಟ್ರು " ಸಾಹೇಬ್ರೆ...!!...!!


ನನ್ನ ದೇಹದ ಭಾಗಗಳೆಲ್ಲವೂ ಮಾತಾಡುತ್ತಿದ್ದವು...

ನಿಧಾನವಾಗಿ ಕಾಲೆಳೆಯುತ್ತ ಸತ್ಯನೆಡೆಗೆ ಬಂದೆ..

ಅಂಗಾತ ಮಲಗಿ ಶವಾಸನ ಹಾಕಿ ಮಲಗಿ ಬಿಟ್ಟಿದ್ದ...!

'ಸತ್ಯ ಏನಾಯ್ತೊ..? ಏಳೊ.."

ಎಬ್ಬಿಸುವ ಪ್ರಯತ್ನ ಮಾಡಿದೆ..

ಮೆಲ್ಲಗೆ ಕಣ್ಣು ತೆರೆದ..
ಪ್ರಲಾಪ ಶುರು ಮಾಡಿದ...

" ಇಡೀ " ಬ್ರಹ್ಮಾಂಡ " ನನ್ನ ಮೇಲೆ ಬಿದ್ದಂತಾಯಿತು ಕಣೊ...!"...

ಎಲ್ಲಿಯ " ನಲವತ್ತೈದು " ಕೇಜಿ..?

ಎಲ್ಲಿಯ " ಕ್ವಿಂಟಾಲು.".?

ಬಂಡೆಗಲ್ಲಿನ ಹಾಗೆ ನನ್ನ ಮೇಲೆ ಬಿದ್ದು " ಇಸ್ತ್ರೀ" ಹೊಡೆದು ಬಿಟ್ಯಲ್ಲೋ ..!"


" ನಂಗೂ ನೋವಾಗಿದೆ ಮಾರಾಯಾ.. ಏಳು.. ವೈದ್ಯರನ್ನು ಭೇಟಿ ಮಾಡಿ ಬಾ.."
ಎಬ್ಬಿಸಿದೆ..

ಸಾವಕಾಶವಾಗಿ ಎದ್ದು ವೈದ್ಯರನ್ನು ಭೇಟಿ ಮಾಡಲು ಹೋದ...

ನಾನು ಅಲ್ಲೇ ಕುಳಿತೆ...

ಆಟೋದವ ಅದೂ ಇದು ಮಾತಾಡಲು ಶುರು ಮಾಡಿದ...
ಆಟೊದವನಿಗೆ ಅಪರಾಧಿ ಮನೋಭಾವನೆ ಕಾಡಿರಬೇಕು..

" ಬೇಜಾರಗ್ಬೇಡ್ರಿ.. ಸಾಹೇಬರ...
ದಿನವಿಡಿ ದುಡಿತೀನ್ರೀ.. ರಾತ್ರಿ ಆಟೋ ಓಡುಸ್ತೀನ್ರೀ..
ಬದುಕು ಕಷ್ಟ ಸಾಹೆಬರೆ.. ಹಣ ಸಾಲದು.."

"ಯಾಕೆ ಸಾಲೋದಿಲ್ರೀ..?"

" ಮನೆ ತುಂಬಾ ಮಕ್ಕಳ್ರೀ..

ಅವರಿಗೆ ಬಟ್ಟೆ ಬರೆ.. ಊಟ ತಿಂಡಿ.. ಬದುಕು.. ಕಷ್ಟಾರೀ..

ಇಪ್ಪತ್ತು ವರ್ಷದಿಂದ ಆಟೋ ನಡಸ್ತಾ ಇದ್ದೀನ್ರಿ..

ಯಾವ ರಾಜಕಿಯದವ್ರು ಬಂದ್ರೂ...

ಬದುಕು ಹಾಗೇ ಇದೇರಿ..""


" ಯಾಕೇ ಅಷ್ಟೆಲ್ಲ ಮಕ್ಕಳು ಮಾಡ್ಕೊಂಡ್ರಿ..?
ಕುಟುಂಬ ಯೋಜನಾ ಮಾಡ್ಕೋಬೇಕಿತ್ತು...."

" ಸಾಹೇಬ್ರೆ " ಅದು " ಬೇರೆ...

ಇದೇ... ಬೇರೆ...!

ಮನೆಯಲ್ಲಿ " ಶಾಂತಿ " ಇರ ಬೇಕೆಂದ್ರ....

ಮನೆ ತುಂಬಾ ಮಕ್ಕಳಿರಬೇಕ್ರಿ..!!"


" ಮಕ್ಕಳಿದ್ರೆ ಗಲಾಟೆ ಅಲ್ವೇನಪ್ಪಾ..?"


" ಅದೇ ಗುಟ್ಟು ಸಾಹೇಬ್ರೆ,..

ಮಕ್ಕಳ ಗಲಾಟೆ ಇರ್ತದರಿ...

ಮನೆಯಲ್ಲಿ ಹೆಂಗಸ್ರು ಸುಮ್ನೆ ಶಾಂತಿಯಿಂದ ಇರಬೇಕು ಅಂದ್ರ..

ಮನೆ ತುಂಬಾ.. ಮಕ್ಕಳಿರಬೇಕ್ರಿ..

ಮಕ್ಕಳ ಕೆಲಸಾದಾಗ...

ನಮ್ಮ"ಹೆಂಗಸ್ರು" ನಮ್ಮ ಹತ್ರ....

ಜಗಳ ಮಾಡೋದಿಲ್ರೀ...

ನಾವು ಮನೆಗೆ ಹೋದಾಗ ಶಾಂತಿಯಿಂದ ಇರ್ತಾರ್ರೀ..

ಏನ್ ಹೇಳ್ತಿರಿ ಸಾಹೇಬ್ರ..?"


" ನಿಮ್ಮನೆಯಲ್ಲಿ " ಶಾಂತಿ " ಇದೆಯೇನಪ್ಪಾ..? "


" ಇದೇ ಸಾಹೇಬ್ರ..

ಮಕ್ಕಳ ಗಲಾಟೆ ಏನೂ ಅನಿಸೋದಿಲ್ರಿ..

ದೊಡ್ಡ ಮೀಸೆ.., ಕೆಂಪು ಕಣ್ಣು ಬಿಟ್ರೆ.. ಮಕ್ಕಳು ಸುಮ್ನೆ ಇರ್ತಾರ್ರೀ...

ನನ್ನ ಹೆಂಡ್ತಿ "ಶಾಂತಿ" ನೂ ಶಾಂತವಾಗಿರ್ತಾರ್ರಿ...!"


" ಮತ್ತೆ ಖರ್ಚು...?"

" ಖರ್ಚಿಗೆ ಕಷ್ಟ ಆಗ್ತದ ..

ಒಂದು ಮಗ ಇದ್ದಾಗ ನೂರು ರುಪಾಯಿ ಅಂಗಿ ತಗೊತಿದ್ದೆ..

ನಾಲ್ಕು ಮಕ್ಕಳು ಇದಾರೆ..

ಇಪ್ಪತ್ತೈದು ರೂಪಾಯಿದು "ನಾಲ್ಕು " ಅಂಗಿ ತಗೋತಾ ಇದ್ದಿನ್ರಿ...!

ಸಾಹೇಬ್ರೆ ಇನ್ನೊಂದು ವಿಷಯ.. ನಿಮಗೆ ಎಷ್ಟು ಮಕ್ಕಳಿದಾರ್ರೀ.."


" ಒಬ್ನೇ ಕಣಪ್ಪಾ...."


" ಛೇ.. ಛೇ.. ಪ್ಯಾಟಿ.. ಮ್ಯಾಲಿನೋವ್ರು...

ಇದೆ ತಪ್ಪು ಮಾಡ್ತಾರ್ರಿ...

ಜಾಸ್ತಿ ಮಕ್ಕಳಿದ್ರೆ .. ಒಬ್ಬನಾದರೂ..

ಕೊನೆ ಕಾಲದಾಗ .. ನೋಡ್ಕೊತಾನ್ರಿ....

ಒಂದೆ ಮಗ ಇದ್ದು..

ಹೆಂಡ್ತಿ ಬಂದಮೆಲೆ ತಲೆ ಕೆಟ್ಟು ಹೋದ್ರೆ.. ?

ಏನು ಮಾಡ್ತಿರ್ರಿ.. ಸಾಹೇಬ್ರ...!..?? "....."

ಇನ್ನೂ ಏನೇನೋ ಹೇಳ್ತಾ ಇದ್ದ..

ಹಿಂದಿನಿಂದ ಬಂದ ಸತ್ಯನಿಗೆ ತಡೆಯಲಾಗಲಿಲ್ಲ...

" ನೋವು ಕೊಟ್ಟಿದ್ದಲ್ಲದೇ...
ಪುಕ್ಕಟೆ ಉಪದೇಶಾ ಮಾಡ್ತಿಯಲ್ಲೋ..

ಸಾಕಪ್ಪ ಉಪದೇಶ.. ಮಾರಾಯಾ..!
ಎಲ್ಲಾ ಕೆಲಸ " ಆಯಿತು..
ಈಗ ಹೋಗೋದು ಹೇಗೆ..?"


" ನಾನಿದ್ದೀನಲ್ಲ ಸಾಹೇಬ್ರೆ..!"
...

" ಬೆಳಗಿನ ತನಕ ಸೊಳ್ಳೆ ಹತ್ರ ಕಡಿಸಿಕೊಂಡು..

" ಸತ್ತು." .. ಹೋದ್ರೂ ಪರವಾಗಿಲ್ಲಾ.. ನಿನ್ನ ಆಟೋ ಬೇಡಪ್ಪಾ.."

ಆದರೆ ಏನು ಮಾಡುವದು..?

ಕೊನೆಗೆ ನಾನೂ, ಸತ್ಯ ಇಬ್ಬರೂ ಸೇರಿ..
ಒಂದು ಉಪಾಯ ಮಾಡಿದೆವು..

"ನೋಡಪ್ಪಾ.. ನೀನು ಗಾಡಿಯನ್ನ..

ಎರಡು ನಿಮಿಷ " ಚಾಲು " ಮಾಡಬೇಕು.......

ನಂತ್ರ " ಆಫ್ " ಮಾಡ್ಬೇಕು..

ಹೊಟೆಲ್ ಹೋಗು ತನಕ.. ಹೀಗೆ ಹೋಗ ಬೇಕು..

ನಿಧಾನ ಬಿಡಬೇಕು..

ಹಾಗಾದ್ರೆ ಬರ್ತೀವಿ.."


ಇದಕ್ಕೆ ಅವನೂ ಒಪ್ಪಿಕೊಂಡ...

ನಾವು ಆಟೋದ ಮೇಲೆ ಕುಳಿತು ....
" ಆಫ್ ಮಾಡು.."
" ಆನ್ ಮಾಡು".... ಅನ್ನುತ್ತ ಹೊಟೆಲ್ ಗೆ ಬಂದೆವು...


ಅಲ್ಲೇ ಮೆಡಿಕಲ್ ಅಂಗಡಿಯಲ್ಲಿ ಮಾತ್ರೆ ತೆಗೆದು ಕೊಂಡು..
ರೂಮಿನಲ್ಲಿ ಮಲಗಿದ್ದಷ್ಟೇ ಗೊತ್ತು...

ಬೆಳಿಗ್ಗೆ ಎದ್ದಾಗ ಮೈಕೈ ನೋವು ಇನ್ನೂ ಇತ್ತು..
ಅಲ್ಲೇ ಗೊಬ್ಬರದಂತಹ "ನಾಷ್ಟಾ" ಮಾಡಿ ರೂಮನ್ನು ಖಾಲಿ ಮಾಡಲು ರೆಸೆಪ್ಷನ್ ಬಳಿ ಬಂದರೆ...!!

ಸಣ್ಣ ಬ್ಯಾಗು ಎಲ್ಲೂ... ಕಾಣ್ತಾನೇ ಇಲ್ಲ...!

ಅದರಲ್ಲಿ "ಹದಿನೈದು ಸಾವಿರ" ರೂಪಾಯಿ ಕ್ಯಾಶ್ ಇತ್ತು...!

ಅಯ್ಯೋ ದೇವರೆ..ಏನಪ್ಪಾ ಇದು...?? !!

ಮುಂದೇನು ಮಾಡಬಹುದು ಅನ್ನುತ್ತಾ...ಇರುವಾಗ...

ತನ್ನ ಕಪ್ಪನೆಯ.. ಹಲ್ಲು .. ತೋರಿಸುತ್ತ..
ನಗುತ್ತ ಆಟೋದವ ನಿಂತಿದ್ದ...!


"ಸಾಹೇಬ್ರೆ .. ನಿನ್ನೆ ನಿಮ್ಮ ಬ್ಯಾಗು ಆಟೋದಲ್ಲೇ ಇದ್ದಿತ್ರಿ..!

ಹಣ ಇದ್ರೆ ಎಣಿಸ್ಕೊ ಬಿಡ್ರಿ.."

ಅನ್ನುತ್ತಾ ಬ್ಯಾಗು ಕೊಟ್ಟ...!

ಲಗುಬಗೆಯಿಂದ ಎಣಿಸಿದೆ...
ಎಲ್ಲವೂ ಸರಿಯಾಗಿತ್ತು... ಹೋದ ಜೀವ ಬಂದಂತಾಗಿತ್ತು...!

ಒಂದು ರೀತಿಯ ಕ್ರತಜ್ಞತಾ ಭಾವ ಬಂದಿತು.....

ಸತ್ಯ ಅವನಿಗೆ ಐನೂರು ಕೊಡಲು ಹೋದ....

ಅವನಿಗೆ ಪ್ರಾಮಾಣಿಕರನ್ನು ಕಂಡರೆ ಹ್ರದಯ ಕರಗಿ ಹೋಗುತ್ತದೆ...

"ಇದೆಲ್ಲಾ ಬ್ಯಾಡ್ರೀ ಸಾಹೇಬ್ರೆ..

ನೂರು ರುಪಾಯಿ ಸಾಕ್ರಿ.."


ನಾವು ಎಷ್ಟೇ ಹೇಳಿದರೂ ನೂರು ರುಪಾಯಿ ತೆಗೆದು ಕೊಂಡ..

"ಯಾಕಪ್ಪಾ.. ನಾವು ಖುಷಿಯಿಂದಲೇ ಕೊಡ್ತಾ ಇದ್ದೇವೆ ತಗೋ..."


" ಬ್ಯಾಡ್ರೀ ಸಾಹೇಬ್ರೆ....

ನಾನು ಅಷ್ಟೇಲ್ಲಾ ಒಳ್ಳೆ ಮನುಷ್ಯ ಆಲ್ರೀ..

ನನ್ನ ಥರ ಆಟೋ ಇಲ್ಲಿ ಎಲ್ಲೂ.. ಇಲ್ರೀ..

ನೀವು ಪೋಲಿಸ್ ಕಂಪ್ಲೇಂಟು ಕೊಟ್ರೆ ...

ನಂಗೇ ಒಳಗೆ ಹ್ಹಾಕಿ...

ಒದ್ದು ವಸೂಲಿ ಮ್ಮಾಡ್ತಾರೀ..

ನಂಗೆ ಇಷ್ಟೇ ಸಾಕ್ರಿ....

ನನ್ನ " ಆಟೋ ".. ಥರ....

ನಾನೂ...ಒಂಥರಾ "ಅಡಪೋಟ್ರು.. " ಸಾಹೇಬ್ರಾ..! ಬರ್ತಿನ್ರಿ..."


ಅನ್ನುತ್ತ ಆಟೋ ಹತ್ತಿ ಸ್ಟಾರ್ಟ್ ಮಾಡಿದ..

ಆಟೋ ನೋಡಿದೆ..

ಬ್ರೇಕು.., ಲೈಟು..., ಹಾರ್ನು..,
ಏನೂ ಇಲ್ಲದ .. ಆಟೋಕ್ಕೆ..


ಮೇಲಿನ " ಹೊದಿಕೆಯೂ " ಅದಕ್ಕೆ ಇಲ್ಲವಾಗಿತ್ತು...!


(ಇದರ ಹಿಂದಿನ "ಪೋಸ್ಟ್" ಓದಿ...)
( ಈ ಲೇಖನಕ್ಕೆ ಓದುಗರ ಉತ್ತಮ ಪ್ರತಿಕ್ರಿಯೇಗಳಿವೆ ಓದಿ..)

Sunday, March 8, 2009

ತಪ್ಪಿಂದಾಗಿ... ಮಿಷ್ಟೇಕು.. ಆಗೋಯ್ತು.. !.!.!..

ಸತ್ಯನಿಗೆ ಯಾವಾಗಲೂ ಹಾಗೇಯೇ..

ತಲೆಗೆ ಒಂದು ವಿಚಾರ ಹೊಕ್ಕಿತೆಂದರೆ ಬಿಡುವದೇ ಇಲ್ಲ..
ನನ್ನನ್ನೂ ಸಹ..

ಎರಡು ಸಾರಿ ಕೆಮ್ಮಿದ್ದಕ್ಕೆ "ಅಸ್ತಮಾ.. ಅಲರ್ಜಿ " ಬಂದಿರಬಹುದೆಂಬ ..
ಗುಮಾನಿಯ ಹುಳ ತಲೆ ಹೊಕ್ಕಿಬಿಟ್ಟಿತ್ತು..


"ಹಾವೇರಿ ಹತ್ತಿರ ಲಕ್ಷ್ಮೇಶ್ವರದಲ್ಲಿ ಒಬ್ಬರು ಔಷಧ ಕೊಡುತ್ತಾರಂತೆ..
ಹೋಗಿಬರೋಣ ಏಳು.."


ಹೊರಡಿಸಿಯೇ ಬಿಟ್ಟ..

ಹ್ಯುಂಡೈ "ವರ್ಣಾ" ಹೊಸಕಾರು..


ನಾನೇ ಡ್ರೈವ್. ಮಾಡಿದೆ...

ಹಾವೇರಿಮೂಲಕ ಲಕ್ಶ್ಮೇಶ್ವರ ಬರುವಷ್ಟರಲ್ಲಿ ಏಳು ಗಂಟೆ..

ಔಷಧ ಕೊಡುವದು ಬೆಳಗಿನ ಜಾವ "ರೋಹಿಣಿ" ನಕ್ಷತ್ರದಲ್ಲಿ...

ಅಲ್ಲಿಯೇ ಹತ್ತಿರವಿದ್ದ ಹೊಟೆಲ್ಲಿನಲ್ಲಿ "ಗೊಬ್ಬರದಂತಹ " ಊಟವನ್ನೂ ಮುಗಿಸಿ..

ಕಾರನ್ನೂ ಅಲ್ಲಿಯೇ ಬಿಟ್ಟು "ಆಟೋ" ದಲ್ಲಿ ಹೊರಡೋಣವೆಂದು ನಿರ್ಣಯ ಮಾಡಿದೇವು..

ಲಕ್ಷ್ಮೇಶ್ವರ .. ಒಂದು ಚಿಕ್ಕ ಪಟ್ಟಣ......
ರೋಡುಗಳಂತೂ ಅಧ್ವಾನ ಆಗಿಬಿಟ್ಟಿದ್ದವು..

ಬಯಲು ಸೀಮೆ.. ಅಂದು ಸಂತೆ ಬೇರೆ ಆಗಿತ್ತು..

ಜನಜಂಗುಳಿಯೂ ಇತ್ತು..

ಬೀದಿ ದೀಪ ಅಲ್ಲೊಂದು .. ಇಲ್ಲೊಂದು....ಇತ್ತು..

ಟ್ಯೂಬ್ ಲೈಟ್ ಬೆಳಕು " ಪಿಣುಕು.. ಪಿಣುಕು " ಆಗ್ತಿತ್ತು..

ಬೆಳಕು.. "ಹೋಗಿ.. ಬಂದು.. ಹೋಗಿ ಬಂದು.." ಆಗುತ್ತಿತ್ತು..

ಎಲ್ಲಪ್ಪಾ ಆಟೊ ಅಂತ ಹುಡುಕುತ್ತಿರುವಾಗ ಸಾವಕಾಶವಾಗಿ ಸದ್ದಿಲ್ಲದೇ ಒಂದು ಆಟೋ ಬಂದು ನಿಂತಿತು...

ಬಂದವನೆ ...ಅತಿ ವಿನಯದಿಂದ ಕೈ ಕಟ್ಟಿ ಕೊಂಡು...

"ಸಾಹೇಬ್ರ ಯಾವ ಕಡೆ ಹೋಗಬೇಕ್ರಿ..?" ಅಂತ ಕೇಳಿದ..

"ನೋಡ್ರಿ ಇಲ್ಲೊಬ್ಬರು ಆಯುರ್ವೇದ ಔಷಧ ಕೊಡ್ತಾರೆ..
ಅಸ್ತಮಾ..ಅಲರ್ಜೀ ಬಗ್ಗೆ..ಅಲ್ಲಿ ಹೋಗಬೇಕು.."

" ಓಹೋ ಅಲ್ಲಿಗಾ... ಅಯ್ತು.. ಬಿಡ್ರಿ..... ಕುತ್ಗೊಳ್ರಿ...
ಸಾಹೇಬರೇ.. .. ಇಪ್ಪತ್ತು ರುಪಾಯಿ.. ಅಷ್ಟೆ.. ." ಅಂತ ಹೇಳಿದ.....

ಇಪ್ಪತ್ತು ರೂಪಾಯಿ ತಾನೆ.. ಎಂದು ಆಟೊ ಹತ್ತಿದೆವು...

ಹಳೆ ಆಟೊ.. ಕತ್ತಲಾಗಿದ್ದರಿಂದ ಸರಿಯಾಗಿ ನೋಡಲಾಗಲಿಲ್ಲ...

ಒಳಗೆ ಕುಳಿತು ಕೊಂಡರೆ ..
ಕಲ್ಲು ಬೇಂಚಿನಮೇಲೆ ಕುಳಿತ ಹಾಗೇ ಇತ್ತು.....
ತೆಂಗಿನ ನಾರಿನ ಸೀಟು..
ಅಲ್ಲಲ್ಲಿ ಚುಚ್ಚಿದ ಅನುಭವ..

"ಏನ್ರಿ ಸೀಟು ಸರಿ ಇಲ್ವಲ್ರಿ...?"

" ಸಾಹೇಬ್ರೆ.....ನಾನು ರಾತ್ರಿ ಮಾತ್ರ ಆಟೋ ಓಡಿಸೋದು ..
ಹಗಲಲ್ಲಿ ಹೊಲದಲ್ಲಿ ಕೆಲ್ಸ ಮಾಡ್ತಿನ್ರಿ...
ರಿಪೇರಿ ಮಾಡ್ಸಕ್ಕೆ ಆಗ್ಲಿಲ್ರಿ..
ಕ್ಷಮಾ ಮಾಡ್ರಿ... ನೀವು ಕುತ್ಗೊಳ್ರಿ..

" ಆಟೊ ಬಿದ್ರೂ ನೀವು ಬೀಳ ಬಾರದು ನೋಡ್ರಿ.."
ಹಾಂಗ "
ಭದ್ರವಾಗಿ ಗಟ್ಟಿಯಾಗಿ" ಹಿಡ್ಕೊಳ್ರಿ.. ಮತ್ತ.... "

" ಆಯ್ತಪಾ.. ನೀನು ಸ್ಟಾರ್ಟ್ ಮಾಡಪಾ.."

ಕೆಳಗಿಂದ ಕೈ ಹೊಡೆದು.. ಹೊಡೆದು..ಹೊಡೆದೂ..

ಅಂತೂ "ಸ್ಟಾರ್ಟ " ಆಯ್ತು...

ಮುಂದೆ ನೋಡಿದರೆ..


ಆಟೋ ಡ್ರೈವರ್ ಕುಳಿತು ಕೊಳ್ಳುವದೇ ಇಲ್ಲ...!

ಅವನ ಮುಂದಿನ ಗ್ಲಾಸೇ ಇಲ್ಲ...!

ಒಂದು ಕೈಯಲ್ಲಿ ಬ್ಯಾಟರಿ "ಟಾರ್ಚ್.." ಹಿಡಿದು..
ತಲೆ ಹೊರಗೆ ಹಾಕಿ...

" ಪಕ್ಕಕ್ಕೆ.. ಹೋಗ್ರಲೇ...
ಪಕ್ಕಕ್ಕೆ.. ಹೋಗ್ರಲೇ.."..
ಅಂತಾನೆ...!


ನಮಗೆ ಆಶ್ಚರ್ಯ...!

"ಹಾರ್ನ್ ಮಾಡಪಾ..... ಯಾಕೆ ಬ್ಯಾಟ್ರಿ ತೋರಸಿ.. ಕೂಗ್ತೀಯಾ.....?.."

" ಸಾಹೇಬ್ರ.. ಹಾರ್ನ್ " ಸೌಂಡೇ ".. ಆಗೋದಿಲ್ರೀ...!...

ಹಂಗೇ " ಹೆಡ್ ಲೈಟೂ " ..ಇಲ್ರೀ..!

ನೀವು ಭದ್ರವಾಗಿ ಹಿಡ್ಕೊಳ್ರೀ.. ಮತ್ತ..

ಏಯ್.. ಕಿವಿ ಕೇಳಾಂಗ್ ಇಲ್ಲೇನು..??

ಪಕ್ಕ ಹೋಗ್ರಲೇ..!
ಪಕ್ಕಕ್ಕೆ ಹೋಗ್ರಲೇ...."
ಮತ್ತೆ ಕೋಗಿದ...


ಗಾಡಿ ಸ್ಪೀಡ್ ಜಾಸ್ತಿ ಆಯಿತು..!

ಸಿಕ್ಕಾಪಟ್ಟೆ ಕಲ್ಲು... ಹೊಂಡ.. ಧಡಕಿ..!!

ಸತ್ಯ ಆಚೆಗೆ ಈಚೆಗೆ ಹಾರತೊಡಗಿದ..

ಅವನ ಎಲುಬುಗಳು ನನ್ನ ಮೈಗೆ ಇರಿಯುತ್ತಿತ್ತು..

ನಾನು ಭಾರಜಾಸ್ತಿಯಾಗಿದ್ದರೂ ..
ನನ್ನನ್ನೂ ಎತ್ತಿ ಎತ್ತಿ ಹಾರಿಸುತ್ತಿತ್ತು.. ಆ ಆಟೋ...!


"ಯಪ್ಪಾ .. ಗಾಡಿ ನಿಲ್ಸಪ್ಪಾ..ನಮ್ಮಿಂದ ಇಲ್ಲಿ ಕೂತ್ಗೊಳ್ಳಿಕ್ಕೆ ಆಗ್ತಾ ಇಲ್ಲಪ್ಪಾ..!

ನಿಲ್ಸು.. ನಿಲ್ಸೋ ಮಾರಾಯಾ.. !.. "

" ಸಾಹೇಬ್ರೇ.. ಈ ಗಾಡೀಗೆ.." ಬ್ರೇಕು " ಇಲ್ರಿ...
ಇದು ಅಲ್ಲಿ ಹೋಗಿಯೇ ನಿಲ್ ಬೇಕ್ರಿ...
ನೀವು ಭದ್ರ ಕುತ್ಗೊಳ್ರಿ.. ಹೆದರಿಕೆ ಆದ್ರೆ ದೇವರ ನೆನಪು ಮಾಡ್ರೀ...

ಏಯ್ ಪಕ್ಕ ಹೋಗ್ರಪ್ಪೋ... !!
ಪಕ್ಕಕ್ಕೇ ಹೋಗ್ರಪೋ..."


ಮತ್ತೇ ಜೋರಾಗಿ ಕೋಗಿದ...

ಗಾಡಿ ನಿಲ್ಲಲೇ ಇಲ್ಲ...!


ನಾನೂ ಸಹ ಎದ್ದೆದ್ದು ಹಾರ ತೊಡಗಿದೆ.. !

ನನಗೆ ಹಿಡಿತ ಸಿಗದೇ..
ಸತ್ಯನ ಮೇಲೆ ಧೊಪ್ಪೆಂದು.... ಬಿದ್ದೆ..

"ಆಯ್ಯೊಯ್ಯೋ.. ಸತ್ತನಪ್ಪೋ..

ದೊಡ್ಡ.. ಬಂಡೆ ಕಲ್ಲು ಬಿದ್ದಾಂಗೆ ಬೀಳ್ತಿಯಲ್ಲೋ..

ನನ್ನ ಚಟ್ನಿ.. ಮಾಡಿದ್ಯೆಲ್ಲೋ.. ಮಾರಾಯಾ..!! "
ಸತ್ಯ ಅರಚಿ ಕೂಗಿದ..


ನಾನು ಸ್ವಲ್ಪ ತಾಕತ್ತು ಹಾಕಿ ಅವನ ಮೇಲಿಂದ ಎದ್ದೆ..

" ಅಯ್ಯಯ್ಯೋ.. ಅಯ್ಯೋ.. ಗಾಡಿ ನಿಲ್ಸಲೇ ಪುಣ್ಯಾತ್ಮಾ.. !

ನಿಂಗೆ ಕೈ ಮುಗಿತಿವೋ ಮಾರಾಯಾ.. ! ಗಾಡಿ ನಿಲ್ಸು.."

ಈಗ ಸತ್ಯ ನನ್ನ ಮೇಲೆ ಬಿದ್ದ..

ಸತ್ಯ ಬಿದ್ದ ಹೊಡೆತಕ್ಕೆ ನನ್ನ ಜೀವ ಹಾರಿ ಹೋದಂತಾಯಿತು...

ಇದೇನಪ್ಪ..! ಒಣ ಕಟ್ಟಿಗೆ ತೆಗೆದು ಕೊಂಡು ಹೊಡೆದು.. ಬಾರಿಸಿದ ಹಾಗೆ ಇದೆ....!!

ನನಗೆ ನೋವು ತಡೆದು ಕೋಳ್ಳಲಾಗಲಿಲ್ಲ...

ಅರಚಿದೆ.. ಕೂಗಿದೆ... ಕೂಗಿದೆ..!

ಸಂಗಡ ಸತ್ಯ ಕೂಡ ಒಂದೇ ಸವನೆ ಕೂಗ್ತಿದ್ದ." ಅಯ್ಯಯ್ಯೋ,, ಅಯ್ಯಯ್ಯೋ,,,"

"ಇರ್ರೀ ಸಾಹೇಬ್ರ.. ಇರ್ರಿ... !..
ಇಲ್ಲೇ ಬಂತು ನೋಡ್ರೆಲಾ.."
ಅಂದ ಡ್ರೈವರ್...


ಏನಾಗ್ತಿದೆ ಅನ್ನುವಷ್ಟರಲ್ಲಿ ಆಟೊ ಇಂಜಿನ್ ಆಫ್ ಆಯಿತು..

ಒಂದು ಮರಕ್ಕೆ ಢಿಕ್ಕಿ ಹೊಡೆಯಿತು... ಧಡ.. ಭಡ.. ಅಲುಗಾಡಿತು..

ಇಲ್ಲಿ ನನಗೂ ಸತ್ಯನಿಗೂ ಢಿಕ್ಕಿ ಆಯಿತು..

ತಲೆಗೆ ತಲೆ " ಡಬ್" ಎಂದು ಹೊಡೆಯಿತು..

ಗಾಡಿ ನಿಂತಿತು...

"ಸಾಹೇಬ್ರ.. ಇದೇ ಜಾಗ ನೋಡ್ರಿ.. ಸಾವಕಾಶ.. ಇಳಿರಿ.. ಮತ್ತ.."

ನಾವು ಮಾತಾಡೋ ಸ್ಥಿತಿಯಲ್ಲಿ ಇರಲಿಲ್ಲ..

ದೇಹದ ಎಲ್ಲ ಪಾರ್ಟು ಮಾತನಾಡುತ್ತಿತ್ತು..
ತಲೆಗೂ ಪೆಟ್ಟು ಬಿದ್ದು... ಧಿಮ್ ಎನ್ನುತ್ತಿತ್ತು...

ಅಸಾಧ್ಯ ನೋವು... ಅಯ್ಯೋ... ಅಯ್ಯಪ್ಪಾ..!

ಕಾಲನ್ನು ಎರಡು ಕೈಯಿಂದ ಎತ್ತಿ ಹೊರಗೆ ಹಾಕಿ ಇಳಿದೆ...
ಹೇಗೊ ಹೇಗೋ ಮಾಡಿ... ನಿಂತು ಕೊಂಡೆವು...


" ಎಂತಾ "ಅಡಪೋಟ್ರು " ಆಟೋ ಇದು...?

ಎಂತಾ ಮನುಷ್ಯನೋ ನೀನು.. ?

ಪೋಲಿಸ್ ಕಂಪ್ಲೇಂಟ್ ಕೋಡ್ತೀವಿ ನೋಡು.. "

ಅಂತ ಸಿಟ್ಟಿನಿಂದ.. ನೋವಿನಿಂದ.. ಕೂಗಿದೆ..

"ಸಾಹೇಬ್ರ.. ಹೆದರ ಬೇಡಿ..
ನನ್ನ ಗಾಡಿಯಿಂದ ಇವತ್ತಿನವರೆಗೆ.. ಯಾರೂ ಸತ್ತಿಲ್ರೀ..

ಯಾವಾಗ್ಲೂ ದೂರದಲ್ಲೇ ಇಂಜಿನ್ನು ಆಫ್ ಮಾಡಿ..
ಢಿಕ್ಕಿ ಮಾಡಿ ಗಾಡಿ ನಿಲ್ಲಸ್ತಿನ್ರಿ...
ಇವತ್ತು " ತಪ್ಪಿಂದಾಗಿ...... ಮಿಷ್ಟೇಕ್ " ಆಗಿ ಹೋತ್ರಿ.....!
ಇವತ್ತು ಹತ್ತಿರದಿಂದ ಢಿಕ್ಕಿ ಹೊಡೆದು ನಿಂತು ಹೋಯ್ತು ನೋಡ್ರಿ... !."
ಕ್ಷಮಾ ಮಾಡ್ರಿ.. ಬಡವ . ನಾನು...
ಪೆಟ್ಟು ಜಾಸ್ತಿ ಆಯಿತೆನ್ರಿ..?.."

ಛೇ.. !

ಇವನ ಬಳಿ ಏನು ಮಾತನಾಡುವದು.. ?
ಅಂತ ಇಪ್ಪತ್ತು ರುಪಾಯಿ ತೆಗೆದು ಕೊಟ್ಟೆ...


ಈ ಸ್ಥಿತಿಯಲ್ಲಿ ಆಯುರ್ವೇದದ ವೈದ್ಯರನ್ನು ಭೇಟಿ ಮಾಡುವದು ಹೇಗೆ..?

ಇಲ್ಲಿಂದ ವಾಪಸ್ಸು ಹೋಗುವದು ಹೇಗೆ...?

ಆ ಕತ್ತಲು ರಾತ್ರಿಯ ಅಪರಿಚಿತ ಜಾಗದಲ್ಲಿ ಸಾವಿರ ಪ್ರಶ್ನೆಗಳು ಶುರುವಾದವು.....

ಆಟೋದವ ಮತ್ತೆ ಎದುರಿಗೆ ಬಂದ..

" ಸಾಹೇಬ್ರೆ..ನಿಮಗೆ ವಾಪಸ್ಸು ಹೋಗಬೇಕಂದ್ರ..
ಇಲ್ಲಿ ಮತ್ತೆ ಯಾವ ಗಾಡೀನೂ ಸಿಗೋದಿಲ್ರೀ... .
ನೀವು ನಿಮ್ಮ ಕೆಲಸ.. ಮುಗ್ಸಿ ಬರ್ರೀ....
ನಾನು ಆ ಸಣ್ಣ ಸಾಹೇಬರ ಸಂಗಡ ಪಕ್ಕ ನಿದ್ದೆ ಮಾಡ್ತಾ ಇರ್ತೆನ್ರಿ..
ನೀವು ಎಬ್ಬಿಸ್ರಿ...!!!.. "

ಆರೇ.. ಹೌದಲ್ಲ !!!

ಈ ಸತ್ಯ ಎಲ್ಲಿ..?...

ಸತ್ಯ...

ಅಲ್ಲಿಯೇ ಇರುವ ಮರದ ಕೆಳಗೆ "ಅಂಗಾತ " ಮಲಗಿ ಬಿಟ್ಟಿದ್ದ...!

ನನಗೆ ಗಾಭರಿ ಆಯಿತು...!

ನಾವು ಅಲ್ಲಿಂದ ತಿರುಗಿ ಹೋಗಿದ್ದೂ.....

ಕೂಡ ಒಂದು... ದೊಡ್ಡ ಕಥೆ...!


ನಲ್ಮೆಯ ಓದುಗರೇ...

ಬರಹಗಾರನಲ್ಲದ ...
ನನ್ನ ಬರಹಗಳನ್ನು ಮೆಚ್ಚಿ ...,
ಅಭಿಮಾನದಿಂದ ಪ್ರೋತ್ಸಾಹದಿಂದ..
ಬೆನ್ನು ತಟ್ಟುತಿದ್ದೀರಿ...

ಈಗ ನನ್ನ ಬ್ಲಾಗನ್ನು ಅನುಸರಿಸುವವರ ಸಂಖ್ಯೆ..
ಅರ್ಧ ಶತಕ ಆಗಿದೆ...

ಅನುಸರಿಸರಿಸದೆ.. ಪ್ರೋತ್ಸಾಹಿಸುವವರ ಸಂಖ್ಯೆ...
ಇದಕ್ಕಿಂತ ಜಾಸ್ತಿ ಇದೆ...

ನಿಮ್ಮ ಪ್ರೋತ್ಸಾಹ ನನಗೆ ಬರೆಯಲು ಟಾನಿಕ್...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ....

ನಿಮ್ಮೆಲ್ಲರ...
ಅಭಿಮಾನಕ್ಕೆ.., ಪ್ರೋತ್ಸಾಹಕ್ಕೆ..

ಧನ್ಯ...

ಧನ್ಯ ವಾದಗಳು...

ಪ್ರೀತಿಯಿಂದ...

ಪ್ರಕಾಶಣ್ಣ...

Sunday, March 1, 2009

ಏಲಕ್ಕಿ ಬೆಳೆಗಾರರು...


ಮತ್ತದೇ... ಕಾನಸೂರು ಹೈಸ್ಕೂಲ್..
ಗೋವಿಂದ ಭಟ್ಟರ ಪಾಠ..

ತರ್ಲೆ ನಾಗು, ನಾನು ಹಿಂದಿನ ಬೇಂಚಿನ ಸರದಾರರು...

ನಾಗು ಮೂಗಿನಲ್ಲಿ ಬೆರಳು ತೂರಿಸುತ್ತ...
ಭಾವನಾ ಲೋಕಲ್ಲಿ.. ಕಳೆದು ಹೋಗಿದ್ದ...


ಭಟ್ಟರು ಇವನನ್ನು ನೋಡಿ... ತುಸು ಕೋಪದಿಂದ...

"ಏನಪ್ಪಾ " ಏಲಕ್ಕಿ ಬೆಳೆಗಾರ.".. ಕ್ಲಾಸಿನಲ್ಲಿ ಗಮನ ಇಲ್ಲವಾ..?.

ನಾಗು ಒಳ್ಳೆಯ ಮಾತುಗಾರ..

"ಸರ್... ನಾನು ಅಡಿಕೆ ಬೆಳೆಗಾರ...ನಮ್ಮನೆಯಲ್ಲಿ.. ಅಡಿಕೆ ಬೆಳೆಯುತ್ತಾರೆ..! "

"ನೀನು ಮೂಗಿಗೆ ಬೆರಳು ಹಾಕಿ ಏನು ತೆಗೆಯುತ್ತಿದ್ದೆ..?"

"ಮೂಗಿನ ಕಿಟ್ಟ ಸಾರ್.."

"ಅದೇ ಏಲಕ್ಕಿ...ಅಲ್ಲವೇನೋ..?

ಅದಕ್ಕೆ ನೀನು " ಏಲಕ್ಕಿ ಬೆಳೆಗಾರ..!"


ನಮಗೆಲ್ಲ ಏನೇನೋ ಹೆಸರಿಡುತ್ತಿದ್ದ ನಾಗು...

ಅಂದಿನಿಂದ ನಮಗೆಲ್ಲ "ಏಲಕ್ಕಿ ಬೆಳೆಗಾರ" ನಾದ...


ಇತ್ತೀಚೆಗೆ..
ಹಾಲೆಂಡ್ ದೇಶದಿಂದ ನನ್ನ ಗೆಳೆಯರೊಬ್ಬರು ಬಂದಿದ್ದರು..

ನಮ್ಮ ಸ್ನೇಹ ೧೫ ವರ್ಷ.. ಹಳೆಯದು..

ಭಾರತದ ಬಗೆಗೆ ಬಹಳ ಅಭಿಮಾನವಿದ್ದವರು..

ಎಲ್ಲ.. ಸುತ್ತಾಡಿ ಬಂದಮೇಲೆ ನಾನು ಸಹಜ ಕುತೂಹಲದಿಂದ ಕೇಳಿದೆ...

"ಸ್ಲಾಂಗನ್... ಭಾರತ ನಿನಗೆ ಏನನ್ನಿಸಿತು..?
ಏನು ವಿಶೇಷ ಕಂಡೆ.. ಇಲ್ಲಿ..?"

"ಬಡತನವಿದ್ದರೂ ಚಂದದ ದೇಶ ನಿಮ್ಮದು..
ಭವ್ಯ ಪರಂಪರೆ, ಸಂಸ್ಕ್ರತಿ ಬಹಳ ಚೆನ್ನಾಗಿದೆ...

ಆದರೆ..."

"ಆದರೆ..ಏನು..?

" ಈ ಭಾರತೀಯರು ಹೀಗೇಕೆ.. ಮಾಡ್ತಾರೆ.... .?
ಮಾರಾಯಾ..!
..ಮೂಗೆಂದರೆ ಅಷ್ಟು ಪ್ರೀತಿ...?..?

ಯಾವಗಲೂ ಮೂಗಿನಲ್ಲಿ ಬೆರಳು ತೂರಿಸಿ...

ಏನು ಮಾಡ್ತಾರಪ್ಪಾ ಅದರಲ್ಲಿ.?..!

ಏನು ಇರುತ್ತಪ್ಪಾ ಆ ಮೂಗಿನಲ್ಲಿ..! ?.."


ನಾನು ಅವಕ್ಕಾದೆ..." ಹೌದಲ್ಲಾ...!

ಎಂಥಹ ಸತ್ಯ..!!


ನಾವೆಲ್ಲ "ಏಲಕ್ಕಿ ಬೆಳೆಗಾರರು..!"

ನಮ್ಮ ಬೆರಳು ಹೆಚ್ಚಿನ ಸಮಯ ಮೂಗಿನ ಮೇಲೇ ಇರುತ್ತದೆ...!

ಮೂಗಿನ ಒಳಗೋ ಅಥವಾ ಹೊರಗೋ ತಿಕ್ಕುತ್ತಲೇ ಇರುತ್ತೇವೆ..!

ಪ್ರತಿ ಐದು ನಿಮಿಷಕ್ಕೊಮ್ಮೆ ನಮ್ಮ ಕೈ ಮುಗಿನಲ್ಲಿರುತ್ತದೆ...!

ಗುರುತ್ವಾಕರ್ಷಣೆ " ಶಕ್ತಿ " ಇದೆಯಾ ಅಲ್ಲಿ...?

ಈ ಮೂಗಿಗೆ ಏನಾದರೂ ಮರು ಜನ್ಮ ಅಂತಿದ್ದರೆ..
ಭಾರತ ಮಾತ್ರ ಬೇಡಪ್ಪಾ ಅನ್ನಬಹುದೇನೋ...!

ನಮ್ಮ ದೇಶದಲ್ಲೇ "ಏಲಕ್ಕಿ ಬೆಳೆ " ಯಾಕೆ ಜಾಸ್ತಿ..?

ಇಲ್ಲಿನ ಧೂಳು. ! . ಹೊಗೆ... !
ಅತಿಯಾದ.. ಕೆಟ್ಟ ವಾತಾವರಣ....!!!

ಇಷ್ಟೇನಾ...?

ಬಿಚ್ಚುತ್ತಾ ಹೋದಂತೆ ಬಹಳಷ್ಟು ವಿಷಯಗಳು ಹೊರಬಿದ್ದವು...

ವೈದ್ಯಕೀಯ ಕಾರಣಗಳು..
ವೈಜ್ಞಾನಿಕ ಕಾರಣಗಳು..
ಮಾನಸಿಕ ಕಾರಣಗಳು..

ಏನೂ ಕಾರಣವಿಲ್ಲದೇ

"ವಿನಾಕಾರಾಣಗಳು "..!

ಇವುಗಳನ್ನು ವಿವರವಾಗಿ ಮುಂದಿನ ಬರಹಗಳಲ್ಲಿ ಚರ್ಚಿಸೋಣ...

"ಏಲಕ್ಕಿ ಬೆಳೆ" ಅಲ್ಲಿ ಇಲ್ಲಿ ಎಂದೇನೂ ಇಲ್ಲ..
ಎಲ್ಲಕಡೆ ಬೆಳೆಯುತ್ತದೆ..
ಬಡವ . ಶ್ರೀಮಂತ..,
ಜಾತಿ, ಮತ ಧರ್ಮ.. ಮೀರಿ ಇದು ಇದೆ...

ಆತಂಕವಾದಿಗಳು..
ಸೈನಿಕರು..
ರಾಜಕಾರಣಿಗಳು..
ಅಧಿಕಾರಿಗಳು..
ಕೂಲಿಕಾರ್ಮಿಕರು..
ಹೆಂಗಸರು.. ಗಂಡಸರು...!

ಎಲ್ಲಿ ಬೇಕಾದರೂ...

ಯಾವುದೇ ಭೇದವಿಲ್ಲದೇ...
ಏಲಕ್ಕಿ ಬೆಳೆಯನ್ನು ಹುಲುಸಾಗಿ " ಕಾಣ " ಬಹುದು...


" ಏಲಕ್ಕಿ ಬೆಳೆಯೇ" ಮಾನವ ಧರ್ಮ...

ಮೇಲುಕೀಳಿಲ್ಲದ...

ಮಾನವತೆಯ ಧರ್ಮ...


ಈ ಲೇಖನ..
ಫೋಟೊ ನೋಡಿ ಮುಗಿಯುವಷ್ಟರಲ್ಲಿ..

ನೀವು.. ಎಷ್ಟು ಬಾರಿ ..
ಏಲಕ್ಕಿ ಬೆಳೆ ..
ತೆಗೆದಿದ್ದೀರಿ.....?


" ಏಲಕ್ಕಿ ಬೆಳೆ " ತೆಗೆದ ಮೇಲೆ ಮುಂದೇನು...?

ಇನ್ನೂ ವಿಷಯಗಳಿವೆ... ಮುಂದಿನ ಬಾರಿ....!


ಏನೀ... ಮಹಾನಂದವೇ...?



ವರ್ಣಿಸಲಾಗದು... ಬಣ್ಣಿಸಲಾಗದು... ಪರಮಾನಂದ...! ಅಹಾ...!



ಏನೋ... ಗಹನವಾದ ಚಿಂತೆಯಲ್ಲೂ... ಇದು "ಸಂಗಾತಿ..!'



ಅಲ್ಲಾ.. ಸ್ವಾಮಿ... " ಹುಡುಗಿಯರ ಫೋಟೋ ಕ್ಕೂ
"ಏಲಕ್ಕಿ ಬೆಳೆಗೂ
." ಸಂಬಂಧ ಇರಬಹುದಾ....?.!??





ಹೆಂಗಸರನ್ನೂ ಕಾಡದೇ ಬಿಟ್ಟಿಲ್ಲ ಈ... "ಏಲಕ್ಕಿ ಬೆಳೆ..!"