Wednesday, November 25, 2009

ಬಡತನ, ಕುರೂಪ ಪ್ರೀತಿ, ಪ್ರೇಮದಿಂದ ದೂರ ಇರ್ತವೆ ಅಲ್ವಾ...?


ಪೆಟ್ಟಿಗೆ ಗಪ್ಪತಿಗೆ ಒಮ್ಮೆ ತಲೆಯಲ್ಲಿ ಒಂದು ವಿಚಾರ ಹೊಕ್ಕಿತು...

ಅದನ್ನ ಕಪನೀಪತಿಯ ತಲೆಗೂ ಹಾಕಿದ..
ಸೀತಾಪತಿಯೂ ಅವರ ಸಂಗಡ ಜೊತೆಗೂಡಿದ...

ಇಂಥಹ ಸಂದರ್ಭಗಳಲ್ಲಿ ಕೊನೆಯ ನಿರ್ಧಾರ ತೆಗೆದುಕೊಳ್ಳುವದು ನಾಗುವಿನ ಸಲಹೆಯ ನಂತರವೇ....

ಏನದು...?

"ಏನೂ ಇಲ್ಲ.. ನಾಗು ಕಾಲೇಜಿನ ಮೊದಲ ವರ್ಷ ಮುಗಿತಾ ಬಂದಿದೆ..
ಹೀಗೆಯೇ ಇದ್ದರೆ ಕಾಲೇಜು ಜೀವನವೇ ಮುಗಿದು ಹೋಗಬಹುದು...
ಏನಾದರೂ ಮಾಡಬೇಕು... ಆ ಅನುಭವವನ್ನೂ ಪಡೆದುಕೊಳ್ಳಬೇಕು ನೋಡು..."

ಏನದು...?

"ಅಲ್ಲಾ... ನಾಗು ನಮ್ಮ ಕ್ಲಾಸಿನ ಹೆಚ್ಚಿನ ಗಂಡು ಮಕ್ಕಳನ್ನು ನೋಡು..
ಅವರೆಲ್ಲರೂ ಹೆಣ್ಣು ಮಕ್ಕಳಿಗೆ ಲೈನ್ ಹೊಡಿತಾರೆ..
ನಮಗೆ ಮಾತ್ರ ಆಗ್ತಾ ಇಲ್ಲ ಕಣೊ..
ಒಂದು ಸಾರಿ ನಾವೂ ಒಮ್ಮೆ ಲೈನ್ ಹೊಡಿಬೇಕು ನೋಡು..
ಏನಾಗ್ತದೆ ಅಂತ ನೋಡಿ ಬಿಡಬೇಕು...!!"

"ಹೋಗ್ರೊ... ಪಕ್ಕಾ ಪೋಲಿ ಅಂತಾರೆ..
ಇದಕ್ಕೆಲ್ಲ ನಾನು ಸಹಾಯ ಮಾಡೊಲ್ಲ..
ಯಾರಾದ್ರೂ .. ಪೋಲಿ ಹುಡುಗರ ಸಹಾಯ ತಗೊಳ್ಳಿ..
ಹಾಗೆ ನನ್ನ ದೋಸ್ತಿನೂ ಮರೆತು ಬಿಡಿ"

ನಾಗು ಖಡಾ ಖಂಡಿತವಾಗಿ ಹೇಳಿ ಬಿಟ್ಟ...

"ಅಲ್ವೊ ನಾಗು ತೀರಾ ಎಡವಟ್ಟುಗಳ ಹಾಗೆ ಲೈನ್ ಹೋಡೆಯೋದು ಬೇಡ್ವೊ..
ಸ್ವಲ್ಪ ಡೀಸೆಂಟಾಗಿ ಹೋಡಿಯೋಣ್ವೊ..
ಸ್ವಲ್ಪ ಡೀಸೆಂಟಾಗಿ ಲೈನ್ ಹೊಡೆಸಿಕೊಳ್ಳೋದು ಹೆಣ್ಣುಮಕ್ಕಳಿಗೂ ಇಷ್ಟವಂತೆ..."

"ಮಾಡೋದೆ ಪೋಲಿ ಕೆಲ್ಸ..!!
ಅದರಲ್ಲಿ ಡೀಸೆಂಟ್ ಅಂತ ಬೇರೆ ಇದೆಯಾ...? ಮಾಡೋಕೆ ಬೇರೆ ಕೆಲ್ಸ ಇಲ್ವಾ...?
ಹೋಗ್ರೋ.. ಓದ್ಕೊಳಿ ಹೋಗಿ..."

"ಇಲ್ವೊ ನಾಗು ಹೀಗೆಲ್ಲ ಹೇಳಿ ನಿರಾಸೆ ಮಾಡಬೇಡ್ವೊ..
ನಿನ್ನ ಎಲ್ಲ ಬೇಡಿಕೆ ಈಡೇರ್ಸ್ತೇವೆ ಕಣೊ..
ಎಂಥಹ ಕಂಡೀಷನ್ ಬೇಕಾದ್ರೂ ಹಾಕು. ಮಾಡ್ತೇವೆ..."

ನಾಗು ಸ್ವಲ್ಪ ಹೊತ್ತು ವಿಚಾರ ಮಾಡಿದ...

"ಓಕೆ... ಎರಡು ಕಂಡಿಷನ್ ಇದೆ...
ಮೊದಲನೆಯದುಮಸಾಲೆ ದೋಸೆ, ಸಿನೇಮಾ ಎಲ್ಲಾ ಇರಬೇಕು...
ಎರಡನೇ ಕಂಡೀಷನ್ ನಿಮ್ಮ ಕೆಲ್ಸ ಆದಮೇಲೆ ಕೇಳ್ತೀನಿ..."

ಸರಿ ಆಯ್ತು ಎಂದರು...

ಅವತ್ತಿನಿಂದ ಕಾಲೇಜು ಬಿಟ್ಟ ಮೇಲೆ ಭಟ್ಟರ ಮನೆಯ ಹಿಂದಿನ ಬೆಟ್ಟದ ಮೇಲೆ ಟ್ರೇನಿಂಗ್ ಶುರುವಾಯಿತು....

ತರಬೇತಿ ಒಂದುವಾರ ನಡೆಯಿತು....

ತರಬೇತಿಗಾಗಿ ಆರ್ಟ್ಸ್ ವಿದ್ಯಾರ್ಥಿ "ಕಾಚಶ್ರೀ" ವಿಶೇಷ ತರಬೇತಿ ಕೊಡಲು ಬಂದಿದ್ದ..

ಕಾಚಶ್ರೀ ಅಂದರೆ ಕಾನೂರು ಚನ್ನಪ್ಪನ್ನ ಮಗ ಶ್ರೀಪಾದ ಅಂತ...

ಇಂಥಹ ಕೆಲಸಗಳಲ್ಲಿ ಆತ ಬಲು ಪ್ರಸಿದ್ಧಿ...

ಹೇಗೆ ನಿಲ್ಲ ಬೇಕು..?
ಹೇಗೆ ಸ್ಟೈಲ್ ಮಾಡ ಬೇಕು...
ತಲೆಕೂದಲನ್ನು ಹೇಗೆ ಒಪ್ಪವಾಗಿ ಸರಿಸಿಕೊಳ್ಳ ಬೇಕು...?
ಅನ್ನುವದೆಲ್ಲ ಹೇಳಿಕೊಡಲಾಯಿತು....

ಕಪನೀಪತಿಗೆ ಒಂದು ಸಂಶಯ ತಲೆಹೊಕ್ಕಿತು...

"ಇಷ್ಟು ಚೆನ್ನಾಗಿ ಲೈನ್ ಹೊಡೆದರೆ ಲವ್ವು ಶುರುವಾಗಿ ಬಿಟ್ಟರೆ..?"

"ಶುರುವಾದರೆ... ಏನು..? ಮಾಡಿಬಿಡು.."

"ಛೇ.. ಚೇ.. ಅದೆಲ್ಲ ಆಗೋದಿಲ್ಲಪ್ಪ...
ಆಮೇಲೆ ಓದಲಿಕ್ಕೆ ಅಗಲ್ಲಪ್ಪ... ಎಕ್ಸಾಮ್ ಹೇಗೆ ಬರೆಯೋದು...?"

"ಅದೆಲ್ಲ ಸಮಸ್ಯೆ ಅಲ್ರೋ... ಯಾರಿಗೆ ಲೈನ್ ಹೊಡೆಯ ಬೇಕು ಅನ್ನುವದು.. ಬಲು ಮುಖ್ಯ ಆಗ್ತದೆ.."
ಕಾಚಶ್ರೀ ತನ್ನ ಅನುಭವದ ಪ್ರವಚನ ಶುರು ಮಾಡಿದ..

"ಹುಡುಗಿ ತೀರಾ ಹಳ್ಳಿಯ ಸಂಪ್ರದಾಯಸ್ಥರ ಮನೆಯಿಂದ ಬಂದಿದ್ದರೆ ಅದಕ್ಕೆ ಬೇರೆ ಥರಹ ಇದೆ..
ಪಟ್ಟಣದಲ್ಲಿ ಬೆಳೆದಿದ್ದರೆ ಬೇರೆ ಥರಹ ವ್ಯವಹಾರ ಮಾಡಬೇಕಾಗುತ್ತದೆ..."

ಕಪನೀಪತಿ ತಲೆಕೆರೆದು ಕೊಂಡ...

" ನೀನೇ ಹೇಳಪ್ಪಾ...! ಅನುಭವಸ್ಥ... ನಮಗೇನು ಗೊತ್ತಾಗ್ತದೆ...?"

"ನಿಮಗೆ ಯಾರು ಇಷ್ಟ ಅದನ್ನು ಹೇಳಿ.. ಅವರಿಗೆ ತಕ್ಕಂತೆ ಟ್ರೇನಿಂಗ್ ಕೊಡ್ತೇನೆ..."

ಸೀತಾಪತಿ ಗಾಭರಿ ಬಿದ್ದ..

"ಹಾಗೆಲ್ಲ ಮಾಡಬೇಡಪ್ಪಾ... ಇಷ್ಟವಾದವರಿಗೆ ಇದೆಲ್ಲ ಮಾಡೋದು ಬೇಡ..
ಆಮೇಲೆ ಬೇಸರ ಮಾಡಿಕೊಂಡು ಬಿಟ್ಟಾರು..
ಯಾರಾದ್ರು ಬೇರೆ ಕ್ಲಾಸಿನ ಹುಡುಗಿಯರಿಗೆ... ಸ್ವಲ್ಪ ಚಂದ ಇದ್ದವರಿಗೆ.. ಓಕೆ..."

ಈಗ ನಾಗು ತಲೆ ಹಾಕಿದ...

"ಈ ಪ್ರೀತಿ, ಪ್ರೇಮಕ್ಕೆ ಚಂದಕ್ಕೆ, ಶ್ರೀಮಂತಿಕೆಗೆ ಎಷ್ಟು ನಂಟಿದೆ ನೋಡಿ...
ಲೈನ್ ಹೊಡಿಲಿಕ್ಕೂ ಚಂದ ಬೇಕು ಅಂತಾಯಿತು...

ಬಡತನ, ಕುರೂಪ ಪ್ರೀತಿ, ಪ್ರೇಮದಿಂದ ದೂರ ಇರ್ತವೆ ಅಲ್ವಾ...?

ಹುಡುಗಿ ಶ್ರೀಮಂತಳಿರ ಬೇಕೆನ್ರಪ್ಪಾ...?

ಯಾವುದಾದ್ರೂ ಚಂದ ಇಲ್ದಿರೊವ್ರಿಗೆ ಹೊಡೆಯಿರಿ...
ಅವಳೂ ಖುಷಿಯಾಗ್ತಾಳೆ.."

ಕಾಚಶ್ರೀ ತನ್ನ ಅನುಭವವನ್ನೂ ಹೇಳಿದ...

"ಚಂದ ಇರೋವ್ರಿಗೆ ಧಿಮಾಕು ಜಾಸ್ತಿ... ಕಣ್ರೋ...
ನಾಳೆ ಬೆಳಿಗ್ಗೆ ಕಾಲೇಜಿನ ಮುಂದುಗಡೆ ಸಿರ್ಸಿ ರೋಡಿಗೆ ಎಲ್ರೂ ಬರ್ರೋ...
ನಾನೇ ನಿಮಗೆ ಹೇಳಿಕೊಡ್ತೀನಿ..."

ಅಂದಿನ ಶಿಬಿರ ಮುಕ್ತಾಯವಾಯಿತು....

ಮರುದಿನ ಬೆಳಿಗ್ಗೆ ಕಾಲೇಜು ಶುರುವಾಗುವ ಸಮಯಕ್ಕೆ ಮೊದಲೇ ಎಲ್ಲರೂ ಅಲ್ಲಿ ಸೇರಿದ್ದೆವು...

ಕಾಚಶ್ರೀ ಅಲ್ಲಿ ತಮಿಳು ಸಿನೇಮಾದ ಹೀರೋ ಹಾಗೆ ತಯಾರಾಗಿ ಬಂದಿದ್ದ...

" ನಿಮ್ಮದೆಲ್ಲ ಎಂಥಾ ಡ್ರೆಸ್ಸೋ ಇದು...
ಇದಕ್ಕೆಲ್ಲ ಈ ಥರಹದ ಡೀಸೆಂಟ್ ಇದ್ರೆ ಆಗಲ್ರಪ್ಪಾ...
ಸ್ವಲ್ಪ ಕೆಂಪು.. ಕಪ್ಪು ಹಳದಿ ಬಣ್ಣದ ಡ್ರೆಸ್ಸ್ ಇರಬೇಕು.. ಛೇ..!!"

ಕಪನೀಪತಿಯ ಕಣ್ಣು ರೋಡಿನ ಮೇಲಿತ್ತು....

"ಅಲ್ಲಿ ನೋಡ್ರೋ ರಾಜಿ ಬರ್ತಾ ಇದ್ದಾಳೆ...
ಅದೂ ಒಬ್ಬಳೆ ಬರ್ತಾ ಇದ್ದಾಳೆ... ಎಲ್ಲಾ ರೆಡಿ ಆಗ್ರೋ..."

ಗಡಬಡಿಸಿದ....!
ಎಲ್ಲರೂ ತಡಬಡಿಸಿ ಮಾನಸಿಕವಾಗಿ ತಯಾರಗತೊಡಗಿದರು...!!

ನಾನು ನಾಗು ಮುಖ ನೋಡಿದೆ....




Tuesday, November 17, 2009

ಸಂತಸ ಅರಳಿದ ಸಮಯಾ...ಸಂಭ್ರಮ ಹಾಸ್ಯದ ರಸ ಗಾನ...!!

ಮೋಹನರೆಂದರೆ.....ದಿಗ್ಗಜರು....
ಮೋಹಕ ಮಾತಿನಿಂದ ಮೋಡಿ ಮಾಡುವವರು ಅಂತ ಅರ್ಥ ..!!


" ಓಂಕಾರ ರೂಪನಂತೆ..." ಸ್ವಾಗತ ಗೀತೆ ಹಾಡಿದ ....
ಅಪ್ಪಟ ಹಳ್ಳಿ ಪ್ರತಿಭೆ...
ನನ್ನ ಬಾಲ್ಯದಲ್ಲಿ ಆತ್ಮವಿಶ್ವಾಸ ತುಂಬಿದ ನನ್ನ ಚಿಕ್ಕಮ್ಮ...

ಎಂಬತ್ತು ವರ್ಷದ ಹಿರಿಯಜ್ಜನ ಆಗಮನ....ಇದು ಆಶೀರ್ವಾದ...!


ಆತ್ಮೀಯ ಗೆಳೆಯ "ಗಿರಿ ಕಾಮತ್" ದಂಪತಿಗಳು ನಮ್ಮ ಸಂಭ್ರಮದಲ್ಲಿ ....!!



ಇದೊಂದು ಬ್ಲಾಗ್ ಗೆಳೆಯರ ಕೂಟ...!


ವಸುಧೇಂದ್ರ ಅಂದ್ರೆ ನಂಗಿಷ್ಟ...!!
ಅವರ ಸರಳತೆ ಎಲ್ಲರಿಗೂ ಆದರ್ಶ...!


ಸಾಹಿತ್ಯ ಲೋಕದ ದಿಗ್ಗಜರು ನಮ್ಮ ಸಂಭ್ರಮದಲ್ಲಿ ಭಾಗವಹಿಸಿದ್ದು ಹೀಗೆ...!


ಎಂಥಾ ನಗೆ ಹಬ್ಬ ಮಾರಾಯ್ರೆ...!
ತಡೆದು ಕೊಳ್ಲಿಕ್ಕೆ.. ಆಗ್ತಿಲ್ಲ...ಮಾರಾಯ್ರೇ....!!
ಹಾಸ್ಯ ರಸಾಯನ...!


ನಾಟಕ ಲೋಕದ ಸಾಮ್ರಾಟನ ಸುಂದರ ಮಾತುಗಳು... ಮನಮೋಹಕವಾಗಿತ್ತು...!


ಇವರು ಆರ್.ಟೀ. ಕುಲಕರ್ಣಿಯವರು..
ಒಳಗಡೆ ಜಾಗ ಕಡಿಮೆ ಇತ್ತು.....!

ನೋಡಿ ಸ್ವಾಮಿ ನಾವು ನಗೋದು ಹೀಗೆ...!


ಟೀ,ವಿ. ನೈನ್ ರಿಂದ ಸಣ್ಣ ಸಂದರ್ಶನ..
ನನ್ನ ಆಕಾರವನ್ನು ಟಿವಿಯಲ್ಲಿ ಹಿಡಿದಿಡುವ ಪ್ರಯತ್ನ...!!.


ಸಾಹಿತ್ಯ ಲೋಕದ ದಿಗ್ಗಜರಿಂದ ನನ್ನನ್ನು ಬೆಳೆಸಿದ ಚಿಕ್ಕಪ್ಪನಿಗೆ ಸನ್ಮಾನ....

ಸಂಕೋಚ , ಸೌಜನ್ಯದ ಮೂರ್ತಿ .. ಅಪರೂಪದ ಅಪಾರ ಪ್ರತಿಭೆ "ರಘು ಅಪಾರ"

ನಮ್ಮ ಕರೆಗೆ ಓ ಗೊಟ್ಟು ಬಂದ ನಿಮಗೆಲ್ಲ ನನ್ನ ವಂದನೆ... ಅಭಿವಂದನೆ....!

ಸ್ವಾಗತ ಗೀತೆಯಿಂದ ಕೊನೆಯ ಮಾತಿನವರೆಗೆ ...
ಭಾಷಣ ಕಾರರ ಮಾತಿನ ಮೋಡಿಗೆ ಒಳಗಾದ ಜನ ಸಮೂಹ...!

ಕಾತುರ... ಸಂಭ್ರಮ... !!

ಸಂತಸ.... ಅರಳುವ ಸಮಯಾ....!!


ದಿವಾಕರನ ಮಾತಿನ ಮೋಡಿ...
ಅದ್ಭುತ ಪ್ರತಿಭೆಯ.. ಮಾತುಗಾರ...!


ನಾಗೇಶ ಹೆಗಡೆಯವರೆಂದರೆ ಎಲ್ಲರಿಗೂ ಗೌರವ ...ಆದರ....!


ಸರಳತೆಯ , ಹಿರಿತನದ ಉದಾಹರಣೆ...!
ವಸುಧೇಂದ್ರ... ಮಂಗಳತ್ತೆ...ಗಿರಿ ದಂಪತಿಗಳು.. ಮತ್ತು ಇತರರು...!
ಇವರೆಲ್ಲ ಯಾರೆಂದು ಹೇಳ ಬೇಕಿಲ್ಲ ತಾನೆ...?

(ನಮ್ಮೆಲ್ಲರ ಮೆಚ್ಚಿನ ನಟಿ ಮಂಗಳತ್ತೆ ... ಜಯಲಕ್ಷ್ಮಿ ಪಾಟಿಲ್..!! ಯಾರೆಂದು ಗೊತ್ತಾಯಿತಲ್ಲ...?)

ಅಕ್ಷರ ಮಣಿಯಿಂದ ...
ಮುತ್ತಿನ ಹಾರದ ಶಬ್ಧಗಳಿಂದ ಮೋಡಿ ಮಾಡುವ ನನ್ನ ಮೆಚ್ಚಿನ "ಮಣಿಕಾಂತ"


( ಇನ್ನೂ ಹೆಚ್ಚಿನ ಫೋಟೋಗಳಿಗೆ...
ಪುಸ್ತಕ ಬಿಡುಗಡೆಯ ವಿವರಗಳಿಗೆ... ಸ್ನೇಹಿತ ಶಿವೂ ಅವರ ಬ್ಲಾಗ್ ನೋಡಿ....
ಹುಡುಕಾಟದ "ಮಲ್ಲಿಕಾರ್ಜುನ್"

Thursday, November 12, 2009

ಹೇಗಿದ್ದರೂ... ನಗಬಹುದು....!




ನನ್ನ ಆತ್ಮೀಯ ಗೆಳೆಯ ನಾಗು ಫೋನ್ ಮಾಡಿದ್ದ...
ಈ ಕೆಲಸಗಳ ಒತ್ತಡ.. 
ಬೆಂಗಳೂರು ಟ್ರಾಫಿಕ್ಕು...
ನನಗೂ ಸಾಕು ಸಾಕಾಗಿತ್ತು..
ಮೈತುಂಬಾ ಕೆಲಸವಿದ್ದರೂ ಸೀದಾ ನಾಗುವಿನ ಮನೆಗೆ ನಡೆದೆ...

ನಾಗು ನೋಡಿ ನನಗೂ ಖುಷಿಯಾಯಿತು..
ಕೆಲವು ದಿನಗಳ ಹಿಂದೆ ಅವನಿಗೆ ಶಸ್ತ್ರ ಚಿಕಿತ್ಸೆ ಆಗಿತ್ತು...


ಈಗ ಎದ್ದು ಓಡಾಡುತ್ತಿದ್ದ...
ಮುಖದಲ್ಲಿ ಅಶಕ್ತತೆ ಇದ್ದರೂ ನಗುವಿತ್ತು..

"ಏನಪ್ಪಾ ನಾಗು ಚೆನ್ನಾಗಿದ್ದೀಯಾ..? 
ಹೇಗಿದ್ದೀಯಾ ಈಗ..?"

"ಈಗ ಚೆನ್ನಾಗಿದ್ದೀನಿ..ಯಾಕೋ ಗೊತ್ತಿಲ್ಲ
ನನ್ನ ಜೀವ, ಜೀವನ, ಪ್ರಾಣ ಎಲ್ಲ ಭಾರ ಆಗಿದೆ ಕಣೋ..!!..."
ನನಗೆ ಗಾಭರಿ, ಆತಂಕ ಆಯಿತು...

"ಯಾಕೊ.. ಹಾಗಂತೀಯಾ..?
ತೊಂದ್ರೆ ಇದ್ರೆ ಹೇಳೊ.. ಮಾರಾಯಾ.. ನಾನಿದ್ದೀನಿ.."

"ಅಯ್ಯೊ..!
 ಆ ಭಾರ ಎಲ್ಲ ನಾನೇ ಹೊರಬೇಕಪ್ಪಾ...!
ಎಷ್ಟೆಂದರೂ... ಅದು ನನ್ನ ಜೀವನ ...
ನನ್ನ ಪ್ರಾಣ... !
ಹೇಗೆ ಈ ಭಾರ ಹೊರಬೇಕು ಅಂತ ಚಿಂತೆ ಆಗ್ತಿದೆ ಕಣೋ...."

ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ ಕೇಳಿಸಿತು...
ಸ್ವಲ್ಪ ಜೋರಾಗಿಯೇ ಇತ್ತು...!

ನಾಗು ನೋಡಿದೆ.. 
ಸೊರಗಿ ಹೋಗಿದ್ದ...
ಆಘಾತದಿಂದ ಇನ್ನೂ ಪೂರ್ತಿ ಚೇತರಿಸಿಕೊಂಡಿಲ್ಲ ಅನಿಸಿತು...
ಅವನನ್ನು ನೋಡಿ ಕನಿಕರ ಮೂಡಿತು....

"ನಾಗು.. 
ಹೀಗೆಲ್ಲ ಹೇಳಬೇಡ್ವೊ... ಯಾಕೊ ಏನಾಯ್ತು..?..
ಹಣಕಾಸಿನ ತೊಂದರೆ ಇದೆಯೇನೋ...? "

ಅಷ್ಟರಲ್ಲಿ ನಾಗುವಿನ ಹೆಂಡತಿ ಧುಮು.. ಧುಮು ಅನ್ನುತ್ತ..ನಮ್ಮ ಬಳಿ ಬಂದಳು..
ಸಿಕ್ಕಾಪಟ್ಟೆ ಕೊಪದಲ್ಲಿದ್ದಳು...

"ಪ್ರಕಾಶಾ...
ಇದು ನನ್ನ ಬಗ್ಗೆ ಹೇಳಿದ್ದು ಕಣೊ...
ಇವರು ನನ್ನ ಬಳಿ ಯಾವಗಲೂ ...."ನೀನೇ ನನ್ನ ಪ್ರಾಣ...!!
ನೀನೇ ನನ್ನ ಜೀವಾ...!
ನೀನೇ ನನ್ನ ಜೀವನಾ..! ಅನ್ನುತ್ತಾರೆ...!
ಅವರಿಗೆ ಬದುಕು ಭಾರ ಆಗಿಲ್ಲ... !
ಈಗ ನನ್ನ ತೂಕ ಜಾಸ್ತಿ ಆಯ್ತು ಅಂತ ಹೀಗೆ ಹೇಳ್ತಿದ್ದಾರೆ..!!"

ನಾಗು ನಗುತ್ತಿದ್ದ..

ದೇಹಕ್ಕೆ.. ಮನಸ್ಸಿಗೆ ನೋವಿದ್ದರೂ ನಗುತ್ತಿದ್ದಾನಲ್ಲ...!
ಸಾವಿನ ದವಡೆಯವರೆಗೆ ಹೋಗಿ ಬಂದಿದ್ದಾನೆ...!
ಶಸ್ತ್ರ ಚಿಕಿತ್ಸೆಯ ನೋವು ಇನ್ನೂ ಇದೆ !!
ಸಾಯುವ ಯಮಯಾತನೆ ಅನುಭವಿಸಿದ ನೋವು ಮುಖದಲ್ಲಿ ಕಾಣುತ್ತಿಲ್ಲ...!

ನಾಗು ನಗುತ್ತಿದ್ದಾನೆ....!!

ನಗುವ ಮನಸ್ಸಿದ್ದರೆ ಹೇಗಿದ್ದರೂ...ನಗಬಹುದು...!

ಅವನ ಹೆಂಡತಿಯನ್ನು ನೋಡಿದೆ...
ನಿಜ ಅವನ ಜೀವನ ಭಾರವಾಗಿದ್ದು ಎದ್ದು ಕಾಣುತ್ತಿತ್ತು !!

"ಪ್ರಕಾಶು... 
ನನಗೆ ವೀಕ್‍ನೆಸ್ಸು ಕಣೊ.. 
ಇನ್ನು ಮುಂದೆ..ಹೇಗೆ ಹೊರಲೊ ಈ ಜೀವನ ಭಾರಾನಾ...?
ನನ್ನ ಜೀವನಾ..! ಪ್ರಾಣಾ..! ಎಲ್ಲಾ ಭಾರ ಆಗಿದೆ...!
ನಿನ್ನ ಮನೆಗೆ ಬರ್ಲಿಕ್ಕೆ ಟ್ಯಾಕ್ಸಿಗೆ ಹೇಳಿದ್ದೀನಿ ಕಣೊ..
ಮೊದಲಿನ ಹಾಗೆ ಬೈಕಲ್ಲಿ ಆಗಲ್ಲ..
ನನ್ನ  ಜೀವನ  ಭಾರ ಆಗಿದೆ ಕಣಪ್ಪಾ..."

ನನಗೆ ನಗು ತಡಿಯಲಿಕ್ಕೆ ಆಗ್ಲಿಲ್ಲ...
ಜೋರಾಗಿ ನಕ್ಕೆ...
ನನ್ನ ಹೊಟ್ಟೆಯೂ "ಗಲ.. ಗಲ..".... ಅಂದಿತು ... !!

ನನ್ನಾಕೆಯ ನೆನಪಾಯಿತು..
ತಕ್ಷಣ ಫೋನಾಯಿಸಿದೆ...

"ಹಲ್ಲೋ..."

"ಏನ್ರಿ...?... !!.."


"ಏನಿಲ್ಲ ಕಣೆ... 
ನಿನ್ನ ಜೀವನ ಹೇಗಿದೆಯೆ..?
ಭಾರ ಆಯ್ತು ಅಂತ ಅನಿಸ್ತಾ ಇದೆಯಾ...?"

"ಏನ್ರಿ.. ಹೀಗಂತೀರಾ...? 
ರಾಯರು ಒಳ್ಳೆ ಮೂಡಲ್ಲಿರೊ ಹಾಗಿದೆ..?"

"ಇಲ್ಲಾ ಚಿನ್ನಾ..
ಹೇಳು ನಿನ್ನ ಜೀವನ ಭಾರ ಆಯ್ತು ಅಂತ ಅನಿಸ್ತಾ ಇದೆಯಾ..?"

"ಇಲ್ರೀ... 
ಏನು ಅಂತ ಮಾತಾಡ್ತೀರಾ?
ನೀವಿರುವಾಗ ಎಂಥಾ ಭಾರ ..?
ಎಲ್ಲಾ ಹಗುರ ರೀ....
ನೀವು ಜೊತೆಯಲ್ಲಿರುವಾಗ ಏನು ಭಾರ ಮಾರಾಯ್ರೆ...?
ಎಲ್ಲಾ ಭಾರ ನೀವೇ ಹೊರ್ತಾ ಇದ್ದೀರಲ್ಲಾ..!
ನಂಗೇನು...?
ನಾನು ಆರಾಮಾಗಿದ್ದೀನ್ರಿ..."

ಹೌದಲ್ವಾ...!!..?

ನಾನು ಫೋನ್ ಕಟ್ ಮಾಡಿದೆ...

ನಿಜ ....
ಅವಳಿಗೇನು? ಜಿಂಕೆ ಹಾಗೆ ಕುಣಿತಾ ಇದ್ದಾಳೆ...!

ಭಾರ ಹೊರ್ತಿರೋದು ನಾನು...!

ಈ ಜೀವನದ ಭಾರ ಕಡಿಮೆ ಮಾಡ್ಕೋ ಬೇಕು ಅನ್ನಿಸ್ತಾ ಇದೆ....!

..................................................................................................................


ಹುಟ್ಟಿದಾಗ ನನ್ನ ತಲೆ ದೊಡ್ಡದಾಗಿತ್ತಂತೆ...
ಡೆಲಿವರಿ ಸಮಯದಲ್ಲಿ ಅಮ್ಮನಿಗೆ ಬಹಳ ಕಷ್ಟವಾಯಿತಂತೆ...

ಹೆರಿಗೆಯ ನೋವು ಊಹೆಗೂ ಮೀರಿದ್ದು...!
ಗಂಡಸರ ಕಲ್ಪನೆಗೆ ಮೀರಿದ್ದು ಅದು...
ಪ್ರತಿ ಹೆರಿಗೆಯಲ್ಲೂ ಮಗುವಿನ ಸಂಗಡ ತಾಯಿಯೊಬ್ಬಳು ಹುಟ್ಟುತ್ತಾಳೆ..
ಮರು ಜನ್ಮ ಪಡೆಯುತ್ತಾಳೆ...

ನೋವಿನಲ್ಲೂ ಸುಖ ಕಾಣುವ ತಾಯಿಯ ಬಗೆಗೆ,
ಹೆಣ್ಣಿನ ಆ ಸ್ವಭಾವದ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ...

ಅದು ಹೇಗೆ ಸಾಧ್ಯ ಎನ್ನುವ ಕುತೂಹಲವೂ ಇದೆ...

ನಾನು ಹುಟ್ಟಿದ ಮೂರು ತಿಂಗಳಲ್ಲಿ ನನಗೆ ರಿಕೆಟ್ಸ್ ರೋಗ ಆಯಿತು...

ಹುಬ್ಬಳ್ಳಿಯಲ್ಲಿ , ...
ಸಿರ್ಸಿಯ ವಿನಾಯಕ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದ್ದರಂತೆ...

ಬಡಕಲು ಶರೀರ...ಎಲುಬು ಚರ್ಮ...
ತಲೆಯೊಂದು ಮಾತ್ರ ದೊಡ್ಡದು...
ಯಾವಾಗಲೂ ಅಳುತ್ತಿದ್ದನಂತೆ...
ನನ್ನ ಮೈಗೆ "ಕಾಡ್ಳಿವರ್ ಆಯಲ್"
(ಮೀನಿನ ಎಣ್ಣೆ) ಹಚ್ಚಿ ಬೆಳಗಿನ ಬಿಸಿಲಲ್ಲಿ ಮಲಗಿಸುತ್ತಿದ್ದರಂತೆ...
ಸುಮಾರು ಏಳು ವರ್ಷ ಕಾಡಿತ್ತು ಈ ರೋಗ....!


ಅಶಕ್ತತೆಯ ಮಗು, ಕುರೂಪ...
ಎಲುಬು ಚರ್ಮ, ರಕ್ತವಿರದ ...
ಯಾವಾಗಲೂ ರೋಗಿಷ್ಟವಾದ .....
ನಕ್ಕರೂ ಚಂದ ಕಾಣದ ನನ್ನನ್ನು ನನ್ನಮ್ಮ ಎಂದೂ ಅಲಕ್ಷಿಸಲಿಲ್ಲ..

ಪ್ರೀತಿಗೆ ಕೊರತೆ ಮಾಡಲಿಲ್ಲ...
ಯಾವಾಗಲೂ ಮುದ್ದಿಸುತ್ತಿದ್ದರು....
ಎದೆಗೆ ಅವಚಿಕೊಳ್ಳುತ್ತಿದ್ದರು...
"ಚಿನ್ನಾ... ನೀನು ಕೃಷ್ಣನ ಹಾಗಿದ್ದಿಯಾ.." ಅಂತಿದ್ದರು...
ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ದೊಡ್ಡವನ್ನನ್ನಾಗಿಸಿದರು...

ನನ್ನ ತಂದೆ ತೀರಿದ ಒಂದು ತಿಂಗಳ ನಂತರ ನಾನು ಹುಟ್ಟಿದ್ದು...
ಪತಿಯ ಅಗಲಿಕೆಯ ನೋವು...
ಹೆರಿಗೆಯ ನೋವು...
ನನ್ನ ಅನಾರೋಗ್ಯ, ಅಶಕ್ತತೆ...,
ಕುರೂಪ...
ಭವಿಷ್ಯದ ಕತ್ತಲು....!
ಇದ್ಯಾವದೂ ಪ್ರೀತಿಗೆ, ಮಮತೆಗೆ ಅಡ್ಡಿ ಬರಲಿಲ್ಲ...

ಯಾವ ತಾಯಿಗೂ ಇವೆಲ್ಲ ಕಾಣಿಸೋದೂ ಇಲ್ಲ....!!

ನೋವಿನಲ್ಲೂ ಸುಖ ಕಾಣುವ ..
ತಾಯಿಯ ಬಗೆಗೆ, ಹೆಣ್ಣಿನ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ...

ಅಳುವಿನಲ್ಲೂ ನಗ ಬಲ್ಲರು..
ಅವರು ದುಃಖದಲ್ಲೂ ಸುಖ ಕಾಣ ಬಲ್ಲರು.....
ಕುರೂಪದಲ್ಲೂ ರೂಪ ಕಾಣ ಬಲ್ಲರು...ಮಮತೆ ಕೊಡ ಬಲ್ಲರು...!

ಅಂಥಹ ತಾಯಿಗೆ...
ಸಮಸ್ತ ಹೆಣ್ಣುಕುಲಕ್ಕೆ
ಹೆಣ್ಣು ಹೃದಯಗಳಿಗೆ ನನ್ನ ನುಡಿ ನಮನಗಳು...

.............................................................................................................


ಕಳೆದ ಒಂದು ವರ್ಷದಿಂದ ನಾನು ಬ್ಲಾಗ್ ಬರೆಯುತ್ತಿದ್ದೇನೆ...

ನೀವೆಲ್ಲ ಇಲ್ಲಿ ಬಂದಿದ್ದೀರಿ...
ಓದಿದ್ದೀರಿ...

ಕೆಲವೊಮ್ಮೆ ನಕ್ಕಿದ್ದೀರಿ... ದುಃಖವೂ ಆಗಿರ ಬಹುದು...

ಖುಷಿ ಪಟ್ಟಿದ್ದೀರಿ...
ನನ್ನ ಲೇಖನ ಬೋರ್ ಆಗಿ ಬೇಸರ ಪಟ್ಟಿರ ಬಹುದು
ಕೆಲವು ಶಬ್ಧಗಳ ಪ್ರಯೋಗದ ಬಗ್ಗೆ ಬಯ್ದಿರಲೂ ಬಹುದು... !

ಆದರೂ ....
ನನ್ನ ಬೆನ್ನು ತಟ್ಟಿದ್ದೀರಿ... ಸಂತಸ ಪಟ್ಟಿದ್ದೀರಿ...
!

ನನಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದ್ದೀರಿ... !

ಈ "ಹೇಸರೇ.. ಬೇಡ" ಪುಸ್ತಕ ನನ್ನ ಮಗು..

ಗುಣ ದೋಷ ನನಗೆ ಕಾಣುತ್ತಿಲ್ಲ...
ಬರಿ ಚಂದ ಮಾತ್ರ ಕಾಣುತ್ತಿದೆ...
ಸೊಗಸು ಮಾತ್ರ ನೋಡುತ್ತಿದ್ದೇನೆ...

ತಾಯಿ ಹೃದಯದ ಭಾವ ಅರ್ಥ ಆಗುತ್ತಿದೆ...
ಗುಣ ದೋಷ ಕಂಡರೂ ಕಾಣದಂತಿದ್ದೇನೆ....
!

ಇದೇ ಭಾನುವಾರ ನನ್ನ ಮಗುವನ್ನು ನಿಮ್ಮ ಕೈಗೆ ಇಡುತ್ತಿದ್ದೇನೆ...
ದಯವಿಟ್ಟು ಬನ್ನಿ...
ನನ್ನ ಸಂತಸದ ಕ್ಷಣಗಳವು.... ನಿಮಗಾಗಿ ಕಾಯುತ್ತೇನೆ.... ಬನ್ನಿ...
ಪ್ರೋತ್ಸಾಹಿಸಿ...


ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ... ಬೆಳಿಗ್ಗೆ ಹತ್ತು ಗಂಟೆಗೆ...

ಅಂದು ಏನೇನಿರುತ್ತದೆ...?


ವಾರದ ರಜಾದಿನದದಲ್ಲಿ ಬೆಚ್ಚನೆಯ ಕಾಫೀ...ತಿಂಡಿ...

ಪುಸ್ತಕ ಪ್ರೇಮಿಗಳಿಗೆ ಪುಸ್ತಕದ ಮಳಿಗೆಗಳು..
ಅವಧಿಯ ಎಲ್ಲಾ...ಪುಸ್ತಕಗಳು... !!

ಜಿ. ಎನ್. ಮೋಹನ್ ರವರ ಸೊಗಸಾದ ಮಾತುಗಳು...
ನಗೆಯುಕ್ಕಿಸುವ ಅವರ ಶೈಲಿಯ ಜೋಕುಗಳು...
ನಿಮ್ಮನ್ನು ನಿರಾಸೆ ಗೋಳಿಸಲಾರದು...

ನಾಗೇಶ ಹೆಗಡೆಯರ ಭಾಷಣ...
ಅವರ ಜ್ಞಾನದ, ತಿಳುವಳಿಕೆಯ ಮಾತುಗಳು...
ಅವರೊಂದು ಸಮುದ್ರ....
ಅಂಥಹ ಪರಿಸರ ತಜ್ಞರು ನಮ್ಮೊಂದಿಗೆ ಇರುವದೇ ನಮ್ಮ ಭಾಗ್ಯ...


ಡಾ. ಬಿ. ವಿ. ರಾಜಾರಾಮರ ಮಾತುಗಳು..
ಅವರು ಸೊಗಸಾದ ವಾಗ್ಮಿಗಳು....

ನಗೆ ನಾಟಕಗಳ ಸರದಾರ..
ಯಶವಂತ ಸರದೇಶಪಾಂಡೆಯವ ನಗೆ ಚಟಾಕಿಗಳು...
ಹೊಟ್ಟೆ ಹುಣ್ಣು ತರಿಸುವ ಹಾಸ್ಯಗಳು... ಜೋಕುಗಳು...

ಅಲ್ಲಿಗೆ ಬರುವ ಸಾಹಿತಿಗಳು... ಅನೇಕ ಗಣ್ಯರು.... !

ನಮ್ಮ ಬ್ಲಾಗ್ ಮಿತ್ರರು...
ಅದೊಂದು ಬ್ಲಾಗ್ ಗೆಳೆಯರ ಸಮಾರಂಭ...ಹಲವಾರು ಮಿತ್ರರ ಮುಖ ಪರಿಚಯ ಆಗುತ್ತದೆ...
ಸುಮಾರು ನೂರು ಬ್ಲಾಗ್ ಮಿತ್ರರು ಬರುತ್ತಿದ್ದಾರೆ...!

ನನ್ನ ಕಥನಗಳಲ್ಲಿ ಬರುವ ಪಾತ್ರಗಳು....


ನನ್ನ ಕೆಲಸದ ಒತ್ತಡದಿಂದಾಗಿ ಪ್ರತ್ಯೇಕವಾಗಿ ಕರೆಯಲು ಸಾಧ್ಯವಾಗದಿದ್ದುದಕ್ಕೆ ಕ್ಷಮೆ ಇರಲಿ...

ಬನ್ನಿ ನನ್ನ ಭಾವ ತೋಟಕ್ಕೆ..
ನಿಮಗಾಗಿ ಅಂದು ನಾನು ಕಾಯುತ್ತೇನೆ...


ನಿಮ್ಮೆಲ್ಲರ ..
ಪ್ರತಿಯೊಬ್ಬರ ನಗುವಿಗಾಗಿ ..
ನಾನು, ನನ್ನ ಗೆಳೆಯರು... ನನ್ನ ಕಥನದ ಪಾತ್ರಧಾರಿಗಳು....
ಬಾಗಿಲಲ್ಲಿ ಕಾಯುತ್ತೇವೆ..... ... ಬರುತ್ತೀರಲ್ಲ...??!!

ಒಂದು ರಜಾದಿನ ...
ಬೋರಾಗಿ...
ಎಂದಿನಂತೆ ಮಾಮೂಲಿಯಂತೆ....
ಕಳೆದು ಹೋಗುವ ಮುನ್ನ...ದಯವಿಟ್ಟು ಬನ್ನಿ..