Tuesday, September 11, 2012

.................ಅರ್ಧ ಸತ್ಯ .

ಆಗಾಗ....
ನನ್ನೆದೆಯಲ್ಲಿ ಒಂದು ಥರಹದ "ಆತಂಕ " ಆದ ಅನುಭವ ಆಗುತ್ತಿತ್ತು...

ತಣ್ಣಗೆ... 
ತಲ್ಲಣ ... ಆದ ಅನುಭವ ...  ........... !

ಹಾಗೆ ಆಗುವದು ಕೆಲವೇ ಕ್ಷಣಗಳು ಮಾತ್ರ ...!

ನಲವತ್ತೈದು ವರ್ಷ ಆಯಿತಲ್ಲ.... 
ಸಕ್ಕರೆ.. 
ಬಿಪಿ ಶುರುವಾಗಿರ ಬಹುದೆಂಬ ಅನುಮಾನ ನನ್ನ ಮಡದಿಗೆ.....

ನನ್ನ ಪ್ರೀತಿಯ ಮುದ್ದಿನ ಮಡದಿ...
ಅವಳು ಹೇಳಿದ ಹಾಗೆ ಕೇಳಲೇ ಬೇಕಲ್ಲ..

ನಾನೂ.. ಅವಳೂ..
ಒಂದು ಮಲ್ಟಿ ಸ್ಪೆಷಲ್ ಆಸ್ಪತ್ರೆಗೆ ತಪಾಸಣೆ ಮಾಡಲು ಹೋದೆವು...

ಅವರು ಹತ್ತು ಹಲವಾರು ಟೆಸ್ಟ್ ಮಾಡಿ ವರದಿ ಕೊಟ್ಟರು.....

ಅದನ್ನು ನೋಡಿದ ಡಾಕ್ಟರು...

" ನಿಮ್ಮ ..
ಆರೋಗ್ಯ ತುಂಬಾ ಚೆನ್ನಾಗಿದೆ...
ಎಲ್ಲವೂ ಸರಿಯಾಗಿಯೇ ಇದೆ...

ಆದರೆ ಒಂದು ಸಮಸ್ಯೆ ಇದೆ  ....! ... "

"ಏನು.....?"

"ಮತ್ತೇನಿಲ್ಲ...
ನೀವು ಒತ್ತಡದಲ್ಲಿ ಕಾರ್ಯ ನಿರ್ವಹಿಸುವಾಗ ..
ಹೃದಯದ ಒಂದೆರಡು ಭಾಗಕ್ಕೆ ರಕ್ತ ಸಂಚಲನೆಯಾಗುವದಿಲ್ಲ..."

"ಅಂದರೆ ಏನು ...?"

ನನ್ನ ಹೆಂಡತಿ ನನಗಿಂತ ಗಾಭರಿಯಾದಳು....!

" ನಿಮ್ಮ ಹೃದಯದಲ್ಲಿ ಬ್ಲಾಕೇಜು ಇದೆ....
ಇದು ಹೃದಯಾಘಾತದ ಮುನ್ಸೂಚನೆ...

ನಿಮ್ಮ  ಬಿಪಿ ಕೂಡ  ಜಾಸ್ತಿ ಇದೆ..."

ಇಷ್ಟು ಬೇಗ  ವಯಸ್ಸಾಗಿ ಹೋಯಿತಾ ನನಗೆ...?
ಮುಪ್ಪು ಆವರಿಸಿ ಬಿಟ್ಟಿತಾ  ?

ನನ್ನಮಡದಿಗೆ ಅಳು ಬಂದಿತು...
ನಾನು ಸಮಾಧಾನಿಸುವ ಪ್ರಯತ್ನ ಮಾಡಿದೆ...

"ನೀವು ...
ಗಾಭರಿ ಪಡುವಂಥಾದು ಏನೂ ಇಲ್ಲ...

ಇದು ಹೃದಯದ ಸ್ನಾಯುಗಳು ಸ್ವಲ್ಪ ಕಠಿಣವಾದರೂ ..
ಈ ಫಲಿತಾಂಶ ಬರುತ್ತದೆ...

ಇದಕ್ಕಾಗಿ "ಇಕೋ " ಟೆಸ್ಟ್ ಮಾಡಿಸಿ..."

 ನಾವು ಒಪ್ಪಿದೆವು...

ಅತಂಕಗೊಂಡ ನನ್ನಾಕೆ ಲಾಬ್ ನ ಬಾಗಿಲವರೆಗೆ ಬಂದಳು...

ತಬ್ಬಿಕೊಂಡೇ ಬಂದಳು... 
ಕಣ್ಣಲ್ಲಿ ನೀರು ಜಿನುಗಿತ್ತು...

"ಏನೂ ಆಗಿಲ್ಲಾರಿ...
ಏನೂ ಆಗೋದೂ ಇಲ್ಲ ಬಿಡಿ...
ನಾನು ಹರಕೆ ಹೊತ್ತಿದ್ದೇನೆ... ನಮ್ಮ ಮನೆ ಕುಲ ದೇವರಿಗೆ..."

ನನಗೆ ಪ್ರೀತಿಯುಕ್ಕಿತು...

ನನ್ನ 
ಎಷ್ಟೆಲ್ಲ ದೌರ್ಬಲ್ಯಗಳ ಜೊತೆ ಬದುಕುತ್ತಿದ್ದಾಳೆ...!
ಆದರೂ ಎಷ್ಟೊಂದು ಪ್ರೀತಿ... ನನ್ನ ಮೇಲೆ... !

ನನ್ನಾಕೆಯ ಕೆನ್ನೆಯೆಂದರೆ ನನಗೆ ಬಲು ಇಷ್ಟ...

ಅವಳ ಕೆನ್ನೆಯನ್ನು ಸಣ್ಣದಾಗಿ ಚಿವುಟಿದೆ   ..
ನಾನು ಹಾಗೆ ಚಿವುಟುವದು  ಅವಳಿಗೂ ಇಷ್ಟ...

ಒಳಗೆ ಬಂದು ಷರ್ಟ್ ಬಿಚ್ಚಿ ಮಲಗಿದೆ...

ನರ್ಸ್ ನನ್ನೆದೆಗೆ ಜೆಲ್ ಸವರಿ... 
ಒಂದು ಸಣ್ಣ ಮಷೀನನ್ನು ಎದೆಯ ಭಾಗದಲ್ಲಿ ಓಡಾಡಿಸ ತೊಡಗಿದಳು...

ಪಕ್ಕದ ಕಂಪ್ಯೂಟರಿನಲ್ಲಿ ಅದರ ಚಿತ್ರ ಬರುತ್ತಿತ್ತು...

" ಕಂಪ್ಯೂಟರಿನಲ್ಲಿ ಏನು ಕಾಣುತ್ತಿದೆ...?"

" ನಿಮ್ಮ ಹೃದಯ...! "

 ನನಗೆ ಕುತೂಹಲವಾಯ್ತು...

" ವಾವ್... !
ನನ್ನ ಹೃದಯವಾ...?
ಪ್ಲೀಸ್... ದಯವಿಟ್ಟು ನನಗೊಮ್ಮೆ ತೋರಿಸಿ...

ನನ್ನ ಹೃದಯ ನಾನು ಇನ್ನೂ ನೋಡೇ ಇಲ್ಲ .. !"

ನರ್ಸ್ ಕಂಪ್ಯೂಟರ್ ಟೇಬಲ್ಲನ್ನು ನನಗೆ ಕಾಣುವ ಹಾಗೆ ತಿರುಗಿಸಿದಳು...

 ನಾನು ಮಲಗಿದ್ದಲ್ಲೇ  ಹೃದಯವನ್ನು ನೋಡಿದೆ...

ಅದು ವಿಲ ..ವಿಲನೆ  .. 
ಒದ್ದಾಡಿದ ಹಾಗೆ ಭಾಸವಾಗುತ್ತಿತ್ತು....!

ಅಯ್ಯೋ....!
ನನ್ನ ಹೃದಯ ಸಂಕಟ ಪಡುತ್ತಿದೆಯಾ !!

"ನೋಡ್ರೀ...
ನನ್ನ ಹೃದಯ ಅಳುತ್ತಿದೆಯಾ?
ತುಂಬಾ ಸಂಕಟ  ಪಡುವ ಹಾಗೆ ಕಾಣುತ್ತಿದೆ... !’

"ಹೌದು ಸಾರ್....
ಅಳುತ್ತಾ ಇರೋ ಹಾಗೆ ಕಾಣ್ತಿದೆ...

ನೀವು ಏನು ಮಾಡಿಕೊಂಡಿದ್ದೀರಿ...?"

"ನನ್ನದು ಸ್ವಂತ ಬಿಸಿನೆಸ್ ಇದೆ..."

"ಬೇಸರ ಮಾಡ್ಕೋಬೇಡಿ.. 
ಸಾರ್..
ವ್ಯಾಪಾರಮ್ ದ್ರೋಹ ಚಿಂತನಮ್...

ಜನರಿಗೆ ಮೋಸ ಮಾಡುತ್ತೀರಾ ಸಾರ್...?"

" ಇಲ್ವಲ್ಲಮ್ಮಾ...
ಇಷ್ಟು ವರ್ಷವಾದರೂ ..
ಒಂದು ಸೈಟು ಖರಿದಿಸಿಲ್ಲ...

ಬದಲಿಗೆ ಜನರೇ ನನಗೆ ಕೆಲವು ಬಾರಿ ಮೋಸ ಮಾಡಿದ್ದಾರೆ..."

 ನರ್ಸ್ ಮಾತನಾಡುವ ರೀತಿ ನನಗೆ ಬಲು ಇಷ್ಟವಾಯ್ತು...

" ಸಾರ್..
ತಪ್ಪು ತಿಳಿಯ ಬೇಡಿ...

ಕಾಲೇಜು ದಿನಗಳಲ್ಲಿ ..
ಯಾವುದಾದರೂ ಹುಡುಗಿ ..
ಪ್ರೀತಿ ಮಾಡಿ..ನಿಮಗೆ ಮೋಸ ಮಾಡಿದ್ದಳಾ...?"

"ಇಲ್ಲಮ್ಮ...
ಒಂದು ಹುಡುಗಿಯನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ...

ಆದರೆ ಹೇಳಲಿಕ್ಕೆ ಧೈರ್ಯ ಸಾಲದೆ... 
ಸುಮ್ಮನಿದ್ದು ಬಿಟ್ಟೆ..

ಬಹುಷಃ ಆ ನೋವು  ..
ನನ್ನ ಹೃದಯದಲ್ಲಿ ಉಳಿದು ಬಿಟ್ಟಿದೆ ಅಂತ ಅನ್ನಿಸುತ್ತದೆ..."

"ಹೋಗಿ ಸಾರ್ ನೀವು..!

ಅಂಥಹ ಪ್ರೀತಿ ..
ಯಾವಾಗಲೂ ಒಂದು ಮಧುರ ಭಾವನೆಯನ್ನು ಉಳಿಸುತ್ತದೆ...
ಅದು ನಿಮ್ಮ ಹೃದಯಕ್ಕೆ ಖುಷಿ ಕೊಡುತ್ತದೆ..."

"ಹಾಗಾದರೆ...
 ನನ್ನ ಹೃದಯ ವಿಲ ವಿಲನೆ  ಒದ್ದಾಡುತ್ತಿರುವುದು ಏಕೆ...?"

"ನೀವು ಯಾರಿಗಾದರೂ..
ಮೋಸ ಮಾಡಿರುತ್ತೀರಿ ಸರ್..
ಬಿಸಿನೆಸ್ ಅಲ್ಲವಾ?...."

"ಇಲ್ಲಮ್ಮ..
ನನಗೆ ಲಾಸ್ ಆದರೂ ಪರವಾಗಿಲ್ಲ...
ವ್ಯವಹಾರದಲ್ಲಿ ನಾನು ತುಂಬಾ ಕ್ಲೀನ್...

ನಾನು ಯಾವಾಗ್ಲೂ ನಗು ನಗ್ತಾ ಇರ್ತಿನಿ...
ನನ್ನ ಹೃದಯಕ್ಕೆ ..
ಅಳು.. 
ದುಃಖ ಕೊಡುವದು ಕಡಿಮೆ.."

"ಸಾರ್...
ನಾನು ದಿನಾಲೂ  ..
ನೂರಾರು ಹೃದಯ ನೋಡ್ತಾ ಇರ್ತೇನೆ...

ಎಲ್ಲ ಹೃದಯಗಳು ಅಳುತ್ತಾ ಇರುತ್ತವೆ... ವಿಲಿ ವಿಲಿ ಒದ್ದಾಡುತ್ತ ಇರುತ್ತವೆ...!

ಎಲ್ಲರೂ...
ಬೇರೆಯವರಿಗೆ ಮೋಸ ಮಾಡುತ್ತಾರೆ...!

ಅಥವಾ..

ತಮಗೇ  ತಾವು ಮೋಸ ಮಾಡಿಕೊಳ್ಳುತ್ತಾರೆ... "

"ಇಲ್ಲಮ್ಮ...
ನಾನು ಯಾರಿಗೂ ಮೋಸ ಮಾಡಿಲ್ಲಮ್ಮ..."

"ಸಾರ್..
ನಾನು ಇಂಥಾದ್ದೆಲ್ಲ ನಿಮ್ಮ ಬಳಿ ಮಾತನಾಡಬಾರದು...

ಹೋಗ್ಲಿ ಬಿಡಿ ...

ಇಲ್ಲಿ ಹೃದಯದ ಟೆಸ್ಟಿಗೆ ಬರುವವರೆಲ್ಲ ಹೆಚ್ಚಾಗಿ ಸಾವಿನ ಹತ್ತಿರ ನಿಂತಿರುವವರು......

ಸಾವಿನ ಎದುರಿಗೆ ..
ಎಲ್ಲರೂ ಪ್ರಾಮಾಣಿಕರಾಗಿರುತ್ತಾರೆ...
ತಮ್ಮೊಳಗೂ ಪ್ರಾಮಾಣಿಕರಾಗಲು ಪ್ರಯತ್ನಿಸುತ್ತಾರೆ..

ನೀವು ನಿಜ ಹೇಳಿರ್ತೀರಿ...

ನಿಮ್ಮ ಹೃದಯ ..
ನಿಮ್ಮ ಮಡದಿಯ ದುಃಖ ನೋಡಿ ಅಳುತ್ತಿರಬಹುದು...."

ನನಗೀಗ ಸಮಾಧಾನವಾಯಿತು...

ಎಲ್ಲರ ಹೃದಯಗಳೂ ಅಳುತ್ತವೆ.. 
ನನ್ನೊಬ್ಬನದೇ ಅಲ್ಲ...

ಟೆಸ್ಟ್ ಮುಗಿಸಿ ಹೊರಗಡೆ ಬಂದೆ...

ನನ್ನಾಕೆ ಕಾಯ್ತ ನಿಂತಿದ್ದಳು...

"ತಗೊಳ್ಳಿ...
ನಿಮ್ಮ ಮುದ್ದಿನ ಮಗಳು ಫೋನ್ ಮಾಡಿದ್ದಾಳೆ..."

"ಹಲ್ಲೋ.. 
ಏನಮ್ಮಾ ಪುಟ್ಟಿ...?
ನಿನ್ನಮ್ಮ ಸುಮ್ಮನೆ ಗಾಭರಿಯಾಗಿದ್ದಾಳಮ್ಮ..
ನನಗೇನೂ ಆಗಿಲ್ಲ..
ಈಗ ತಾನೆ..
ನನ್ನ ಹೃದಯ ನೋಡ್ಕೊಂಡು ಬಂದೆ ಕಣೆ..."

"ಅಪ್ಪಾ...
ನಿನ್ನ ಹೃದಯಕ್ಕೆ ಏನೂ ಆಗೊಲ್ಲಪ್ಪಾ...
ನಾನೂ ಅಮ್ಮ.. ಪ್ರೀತಿಯಿಂದ ಕಾಯ್ತಾ ಇರ್ತೀವಿ....

ಅಪ್ಪೂ ...
ಇನ್ನು ಮುಂದೆ ನೋ ಡ್ರಿಂಕ್ಸ್... ಪ್ಲೀಸ್.. !.."

" ಓಕೆ ಪುಟ್ಟಾ...
ಆಮೇಲೆ ಸಿಗೋಣ..."

ನಾನೇ..
ಕಟ್ಟಿಕೊಂಡ ಈ ಪುಟ್ಟ ಗೂಡು ಯಾಕೋ ಬಹಳ ಆಪ್ತವಾಯಿತು....

ನನ್ನವರೆನ್ನುವ ಭರವಸೆ...
ಆಪ್ತವಾಯಿತು...

ಕಣ್ಣು ಒದ್ದೆಯಾಯಿತು...
ಅಲ್ಲೇ ಮಡದಿಯ ಭುಜ ಹಿಡಿದು ತಬ್ಬಿಕೊಂಡೆ...

ನನ್ನಾಕೆಯ ಕಣ್ಣಲ್ಲಿನ ನೀರು ಹಾಗೆ ಇತ್ತು....

ಅಷ್ಟರಲ್ಲಿ..
ನರ್ಸ್ ಲ್ಯಾಬಿನಿಂದ ಹೊರಗೆ ಬಂದಳು...

"ಸಾರ್..
ಮೊಬೈಲ್ ಬಿಟ್ಟು ಬಂದಿದ್ದೀರಿ... ತಗೊಳ್ಳಿ..
ಮೆಸೇಜ್ ಇದೆ...

ಕ್ಷಮಿಸಿ.. "

ನಾನು ಲಗುಬಗೆಯಿಂದ ಮೆಸೇಜ್ ನೋಡಿದೆ...

ಓಹ್...
ಚಂದದ ಮೊಂಡು ಮೂಗಿನ...
ಚೂಪು ಗಲ್ಲದ  ಹುಡುಗಿ.... !

" ಗೆಳೆಯಾ...
ಹೇಗಿದ್ದೀಯೋ ಪುಟ್ಟಣ್ಣಿ...!

ಹೃದಯ ಸ್ಕ್ಯಾನಿಂಗ್ ಮಾಡಿಸಿದೆಯಾ...?

ನಿನ್ನ ..
ಹೃದಯದ ಕತ್ತಲ ಕೋಣೆಯಲ್ಲಿ ...
ನನ್ನನ್ನು ಎಲ್ಲಿ ಬಚ್ಚಿಟ್ಟಿದ್ದೀಯಾ ..?

ನಾನು ನಿನ್ನ ಹೃದಯದಲ್ಲಿ ಎಲ್ಲಿದ್ದೆನೆ  ? 

ನನ್ನನ್ನು ಕಂಡೆಯೇನೋ...?

ನನ್ನ ಹೃದಯ ಅಲ್ಲಿ ಸುಮ್ಮನಿತ್ತೇನೋ...!... "

ನಾನು ನರ್ಸ್ ಮುಖ ನೋಡಿದೆ...

ನರ್ಸ್ ...
ನನ್ನನ್ನು ಒಂಥರಾ ನೋಡುತ್ತ ಲ್ಯಾಬ್ ಒಳಗೆ ಹೋದಳು....



(ಇದು ಕಥೆ ....)

Saturday, September 8, 2012

ಯಾರೆಲ್ಲ ಅವತರಿಸಿದರೂ...ಈ ಜಗತ್ತು ಹೀಗೆಯೇ ಇರುತ್ತದೆ...!


ಪಾಂಡವರು ವನವಾಸ...
ಒಂದು ವರ್ಷ ಅಜ್ಞಾತವಾಸ ಮುಗಿಸಿ ಕುಳಿತಿದ್ದರು...

ಎಲ್ಲರಿಗೂ ಚಿಂತೆ ಒಂದೆ ಇತ್ತು...


"ದುರ್ಯೋಧನ ರಾಜ್ಯವನ್ನು ಬಿಟ್ಟುಕೊಟ್ಟಾನೆಯೇ...?

ಸಂಧಾನವೋ...?
ಸಂಗ್ರಾಮವೋ....? ...

ಸಂಗ್ರಾಮವಾದರೆ ಸಾವು.. 

ನೋವುಗಳು... !
ಅನಿವಾರ್ಯವಾದ ರಕ್ತಪಾತ...
ಮಾನಸಿಕ ಹಿಂಸೆ....!

ಬಂಧುಗಳೊಡನೆ ಹೊಡೆದಾಟ ಮಾಡಬೇಕೆ...?"


ಕೃಷ್ಣ ಹೇಳಿದ...


"ನಿಮಗೆ...

ಏನು ಬೇಕೊ.. ಅದರ ಬಗೆಗೆ ಹೋರಾಟ ಮಾಡಲೇ ಬೇಕು....!
ಯುದ್ಧವನ್ನಾದರೂ  ಮಾಡಲೇ ಬೇಕು....
ಪ್ರಯತ್ನ ಮಾಡಲೇ ಬೇಕು....

ಇಲ್ಲವಾದಲ್ಲಿ...

ಸಿಗದಿರುವದರ ಬಗೆಗೆ ..
ದುಃಖಿಸಲು..
ಬೇಸರ ಪಟ್ಟು ಕೊಳ್ಳಲು ನಿಮಗೆ  ಅಧಿಕಾರವಿಲ್ಲ... ! .."

ಪಾಂಡವರು ಕೃಷ್ಣನ ಮಾರ್ಗದರ್ಶನದಲ್ಲೇ ನಡೆದರು...


............. ..........  .............................


ಕೃಷ್ಣ ...

ಹೇಳಿದ ಮಾತು ದುರ್ಯೋಧನನ ಕಿವಿಗೂ ಬಿತ್ತು....!

ಧುರ್ಯೋಧನ ಕೃಷ್ಣನ ಮಾತನ್ನು ಸಮರ್ಥಿಸಿದ....


"ಕೃಷ್ಣ ಹೇಳಿದ್ದು ನಿಜ...


ಈ ಸಿಂಹಾಸನ ...

ಕುಲಕ್ಕೆ ಹಿರಿಯನಾದ ದೃಥರಾಷ್ಟ್ರನ ಮಕ್ಕಳಾದ ಕೌರವರ ಹಕ್ಕು.. !

ಈ ರಾಜ್ಯ...

ಈ ಅಧಿಕಾರ... ನಮ್ಮದು...!

ನಮಗೇ ಸಿಗಬೇಕಾಗಿದ್ದರ ಬಗೆಗೆ ನಾವು ಹೋರಾಟ ಮಾಡಲೇ ಬೇಕು...


ಯುದ್ಧವಾದರೂ ಸರಿ...

ನಮ್ಮ ಈ ರಾಜ್ಯಕ್ಕಾಗಿ ಹೋರಾಟ ಮಾಡಲೇ ಬೇಕು.... !.."

ದುಃಶ್ಯಾಸನ ...

ಶಕುನಿಗಳು "ಹೌದು" ಅಂತ ಬೆಂಬಲಿಸಿದರು  ....

.............  ..........  .............  ...............


ಮಹಾಭಾರತದ ಯುದ್ಧ ನಡೆಯಿತು......



ಗೆದ್ದವರು ... ಸೋತರು...
ಸೋತವರು.. ಸತ್ತರು.... ..!

ಪಾಂಡವರ... 
ಕೌರವರ ಛಲದ ಗದ್ದುಗೆಗಾಗಿ ...
ಧರ್ಮದ... 
ನ್ಯಾಯದ... ಸ್ಥಾಪನೆಗಾಗಿ ಎಷ್ಟೋ ಅಮಾಯಕರು ಹತರಾದರು....

ಹಿಂಸೆ...

ಕ್ರೌರ್ಯ  ಕುರುಕ್ಷೇತ್ರದಲ್ಲಿ ವಿಜ್ರಂಭಿಸಿತು .... !

ಕೊನೆಯಲ್ಲಿ 


"ನ್ಯಾಯ..

ಧರ್ಮ ಗೆದ್ದಿತು " ಎಂದು ಸಾರಲಾಯಿತು ....

 ............  ...........  ......  .... .......... 


ಉಪದೇಶಗಳು .....

ಪುಣ್ಯ ಗ್ರಂಥಗಳು ....
ಮತ ಧರ್ಮಗಳಿಂದ ಏನು ಲಾಭ ?

ತಾವು ಇಟ್ಟ ನಡೆ..

ನಿರ್ಧಾಗಳಿಗೆ ತಮಗೆ ಬೇಕಾದಂತೆ "ಸಮರ್ಥನೆ" ಸಿಗುತ್ತದೆ...!

ಕಾಯಿದೆ..

ಕಾನೂನುಗಳ  ಹಾಗೆ ..
ತಮ್ಮ ಅನೂಕೂಲಕ್ಕೆ ತಕ್ಕ ಹಾಗೆ ಅರ್ಥೈಸಿಕೊಳ್ಳುತ್ತಾರೆ...!

ಭಗವಂತ...

ದಾರ್ಶನಿಕರು...
ಏಸು..
ಪೈಗಂಬರರು....
ಬಸವಣ್ಣ... ಗುರುವೃಂದ....

ಯಾರೆಲ್ಲ ಅವತರಿಸಿದರೂ...


ಜಗತ್ತು ಇರುವದು ಹೀಗೆಯೇ... ಹೀಗೆಯೇ ಇರುತ್ತದೆ...!


ಈ ಜಗತ್ತು...

ಅವರ "ಉಪದೇಶದ"  ಮಾತುಗಳಿಂದ ...
ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತದೆ..

ಎಲ್ಲರೂ..

ಬುದ್ಧಿವಂತರು....

ಹಾಗಾಗಿ ಯಾರಿಗೂ ..

ಉಪದೇಶದ...
ಧರ್ಮಗ್ರಂಥಗಳ ಅಗತ್ಯವಿರುವದಿಲ್ಲ...

ಒಂದುವೇಳೆ ..

ಬೇಕಿದ್ದರೂ.. ಅದು ತಮ್ಮ ..
ನಡೆಯ...
ನಿರ್ಧಾರದ ಸಮರ್ಥನೆಗೆ ಮಾತ್ರ.....

.........  ..............  .......................... ......................



(ಒಳ್ಳೆಯ ಪ್ರತಿಕ್ರಿಯೆಗಳಿವೆ...
ದಯವಿಟ್ಟು ಓದಿ....)

......