Monday, March 16, 2015

.........ವೈರುಧ್ಯ.........

ಎಷ್ಟು ಹೊತ್ತಿನಿಂದ ಕಣ್ಮುಚ್ಚಿದ್ದೆನೊ ಗೊತ್ತಾಗಲಿಲ್ಲ...
ಎಚ್ಚರವಾದಾಗ ಕಗ್ಗತ್ತಲೆ... ...

ಆಕಾಶದಲ್ಲಿ ಮಿಂಚುವ ತಾರೆಗಳು...

ಅಸಾಧ್ಯ ನೋವು.....!

ಆಗಾಗ 

ನರಿಗಳು.. ತೋಳಗಳು ಊಳಿಡುವ ವಿಕಾರ ಸ್ವರಗಳು  !

ಓಹ್...!


ನಾನು ಕುರುಕ್ಷೇತ್ರದ ರಣರಂಗದಲ್ಲಿದ್ದೇನೆ...

ಒಂಟಿಯಾಗಿ 
ಮಲಗಿದ್ದೇನೆ... !

ಯಾರೋ ತತ್ವಶಾಸ್ತ್ರಜ್ಞ ಹೇಳಿದ ಮಾತು ನೆನಪಾಯಿತು...

"ನೋವು...
ಸಂತೋಷ ಎರಡೂ ಒಂದೇ...!

ಅವುಗಳ 

ಅತ್ಯುನ್ನತ ಹಂತದಲ್ಲಿ ..
ಉತ್ಕಟದ ಉತ್ಕರ್ಷದಲ್ಲಿ....ಯಾರೂ ಬೇಕಾಗುವದಿಲ್ಲ... 
ನೀನೊಬ್ಬನೇ ಇರುತ್ತೀಯಾ....

ಒಬ್ಬನೆ

ಒಂಟೀಯಾಗಿ ಅನುಭವಿಸುತ್ತೀಯಾ...."... 

ಮಲಗಿದ್ದವನಿಗೆ ಪಕ್ಕಕ್ಕೆ ಹೊರಳಬೇಕೆನಿಸಿತು....

ಆಗಲಿಲ್ಲ....
ಬಾಣಗಳು ಚುಚ್ಚುತ್ತಿವೆ  ....!

ರಕ್ತ ಹೆಪ್ಪುಗಟ್ಟಿದ ಜಾಗದಲ್ಲಿ ಮತ್ತೆ ಬಿಸಿರಕ್ತ ಒಸರುತ್ತಿದೆ....

ಅಸಾಧ್ಯವಾದ ಉರಿ... ನೋವು  !

ನಾನು ಮಲಗಿದ್ದುದು ಬಾಣಗಳ ಹಾಸಿಗೆಯಮೇಲೆ...


ನನ್ನ ಮೊಮ್ಮಗ 

ಅರ್ಜುನ ನನ್ನನ್ನು ಯುದ್ಧದಲ್ಲಿ ಸೋಲಿಸಿ
ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದ್ದಾನೆ...

"ಅಜ್ಜಾ...

ಭೀಷ್ಮಜ್ಜಾ... 
ನಿನ್ನನ್ನು ನಾವು ಇದ್ದಲ್ಲಿಗೆ ಕರೆದೊಯ್ಯುತ್ತೇವೆ.. ಬಾ..."

ನಾನು ನಿರಾಕರಿಸಿದ್ದೆ...


"ನಾನು

ಎಂದಿಗೂ ರಣರಂಗದಲ್ಲಿ ಸೋತು ಅರಮನೆಗೆ ಹೋಗಿಲ್ಲ...

ಉತ್ತರಾಯಣ ಪರ್ವಕಾಲಕ್ಕಾಗಿ ಕಾಯುತ್ತಿದ್ದೇನೆ...

ಅಲ್ಲಿಯ ತನಕ ಇಲ್ಲೇ ಇರುವೆ.."

ಅವರೆಲ್ಲ ಹೋಗುವ ಮುನ್ನ

ನನ್ನ ಆರಾಧ್ಯ ದೈವ ಶ್ರೀಕೃಷ್ಣನಿಗೆ ಕೈ ಮುಗಿದಿದ್ದೆ...

"ಕೃಷ್ಣಾ....

ನನ್ನ ಜೀವ ನಿನ್ನ ಪಾದ ಸೇರುವ ಮುನ್ನ.. ನನ್ನಲ್ಲಿ 
ಒಂದಷ್ಟು ಪ್ರಶ್ನೆಗಳಿವೆ...

ಇಂದು ರಾತ್ರಿ 

ಯುದ್ಧ ಮುಗಿದ ಮೇಲೆ ಇಲ್ಲೊಮ್ಮೆ ಬರುವೆಯಾ  ?"...

ಕೃಷ್ಣ ನನ್ನಾಸೆಗೆ ಇಲ್ಲವೆನ್ನಲಿಲ್ಲ...

ಗಂಭೀರವಾಗಿ ನಕ್ಕು ತಲೆಯಾಡಿಸಿ ಹೋಗಿದ್ದ....

ಏನು ಅರ್ಥವಿದೆ .... 

ನನ್ನ ಇಷ್ಟು ಸುಧೀರ್ಘ ಬದುಕಿಗೆ....?... 

ಯಾವ ಪುರುಷಾರ್ಥಕಾಗಿ ಇಲ್ಲಿವರೆಗೆ ಬದುಕಿದೆ.... ?


ಹೆಂಡತಿ..

ಮಕ್ಕಳು... ?
ಸಂಸಾರ...?
ಯಾವುದೂ ನನಗಿಲ್ಲವಲ್ಲ... ... ! ... 

ಪ್ರಾಯಕ್ಕೆ 

ಬಂದ ಮಗನಿದ್ದಾನೆ ಎನ್ನುವದನ್ನೂ ಮರೆತು...
ನನ್ನ ಅಪ್ಪ "ಶಾಂತನು"... 
ಮಗನ ವಯಸ್ಸಿನ  ಚೆಲುವೆ "ಮತ್ಸ್ಯಗಂಧಿಯಲ್ಲಿ"  ಮೋಹಿತನಾಗಿದ್ದ...

ಆಗ 

ನನಗೂ ಉಕ್ಕುವ ಯೌವ್ವನ...
ಕಣ್ಣು ಕುಕ್ಕುವ ತಾರುಣ್ಯ... !

"ಅಪ್ಪಾ....ಚಿಂತಿಸಬೇಡ...

ಈ ಸಾಮ್ರಾಜ್ಯದ ಸಿಂಹಾಸನವನ್ನೂ ಎಂದೂ ಏರುವದಿಲ್ಲ....

ತಾಯಿ 

ಮತ್ಸ್ಯಗಂಧಿ ನನ್ನಮ್ಮನಾಗಿ ಬರಲಿ..
ಅವರ ಮಗ ಈ ಸಿಂಹಾಸನವನ್ನು ಆಳಲಿ..

ನನ್ನ ಸಮಸ್ತ ಶಕ್ತಿ..

ಬಾಹುಬಲ
ಯುದ್ಧ ಕೌಶಲ್ಯವನ್ನು ಈ ಸಿಂಹಾಸನದ ರಕ್ಷಣೆಗೆ ಮುಡಿಪಾಗಿಡುವೆ..."

ಅಪ್ಪನ ಮದುವೆಗಾಗಿ


ಪ್ರತಿಜ್ಞೆ  ಸಾಕಿತ್ತಲ್ಲವೆ  ?

ಮತ್ಸ್ಯಗಂಧಿಯ 

ಅಪ್ಪ 
ತನ್ನ ಮಗಳ ಭವಿಷ್ಯದ ವಿಚಾರ ಮಾಡಿದ...
ಅವನಿಗಾಗಿ..
ನನ್ನ ಚಿಕ್ಕಮ್ಮನಿಗಾಗಿ ... 
ಅವಳ ಮಕ್ಕಳು ರಾಜರಾಗಲೆಂದು ಇನ್ನೊಂದು ಪ್ರತಿಜ್ಞೆ ಮಾಡಿದೆ 

"ನನ್ನ

ಬದುಕಿನುದ್ದಕ್ಕೂ  ಬ್ರಹ್ಮಚಾರಿಯಾಗಿರುವೆ...

ಎಂದಿಗೂ ಮದುವೆಯಾಗಲಾರೆ  " .....!.. 


ಮುಂದೆ

ಎಂಥಹ ಸಂದರ್ಭ ಎದುರಾದರೂ ... 
ನಾನು
ಮದುವೆಯಾಗಲಿಲ್ಲ  .. 
ನನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡೆ.....
:::::::::::::::::::::::::::

ನನ್ನಪ್ಪ

ಬದುಕನ್ನು ಕಂಡವ...ಉಂಡಿದವ...

ತನ್ನ ಬದುಕಿನ 

ಪ್ರತಿಯೊಂದೂ ಕ್ಷಣ ಕ್ಷಣವನ್ನೂ ಅನುಭವಿಸಿದವ...

ನನ್ನ ಪ್ರತಿಜ್ಞೆಯನ್ನು ಕೇಳಿ

ಸಂತೋಷದಿಂದ ನನಗೊಂದು ವರವನ್ನು ದಯಪಾಲಿಸಿದ...

"ಮಗನೇ...

ನೀನು ಇಚ್ಛಾ ಮರಣಿಯಾಗು...."...  !.. 

"ಇಚ್ಛಾಮರಣಿ"  ಅಂದರೆ ಆತ್ಮಹತ್ಯೆ  ಅಲ್ಲವೇ  ?


ನನಗೆ ನಗು ಬರುತ್ತಿದೆ....

ನಗೋಣ ಎಂದು ಕೊಂಡೆ...

ನಗಲಾಗಲಿಲ್ಲ... ಕಣ್ಣಲ್ಲಿ ನೀರು ಒಸರುತ್ತಿದೆ...


"ಬದುಕಿನುದ್ದಕ್ಕೂ

ನನ್ನ ಮಗ 
ಹೆಣ್ಣು ಸಂಗಾತಿಯಿಲ್ಲದೆ ಇರುತ್ತಾನೆ..
ಒಂಟೀ ಜೀವ....

ಒಂಟೀ ಬದುಕು ಅಂದರೆ ಸಾವಿಗೆ ಹತ್ತಿರ...


"ಆತ್ಮ ಹತ್ಯಾ ದೋಷ ತನ್ನ ಮಗನನ್ನು ತಾಗದಿರಲಿ" 

ಅಂತ ಈ ವರವನ್ನು ಕೊಟ್ಟಿರಬಹುದಾ  ?...

ಸಾವನ್ನು ಎದುರು ನೋಡುತ್ತಿರುವ 

ಈ ಸಂದರ್ಭದಲ್ಲಿ
ಬದುಕಿನಲ್ಲಿ ನಡೆದ ಹಲವಾರು ಘಟನೆಗಳು 
ಬೇಡವೆಂದರೂ ನೆನಪಾಗುತ್ತಿವೆ....

"ಆಯ್ಯೋ...

ನೋವು...."...
ಯಾರೋ ಚೀರುವ ಸದ್ಧು....
ನನ್ನ ಮನಸ್ಸು ಮಮ್ಮಲ ಮರುಗಿತು...

ಈ ಕುರುಕ್ಷೇತ್ರ ಯುದ್ಧದಲ್ಲಿ

ಯಾರೆಲ್ಲ ಸಾಯುತ್ತಿದ್ದಾರೆ.. !

ಯಾರದ್ದೋ ಮಗ..

ಯಾರದ್ದೋ ಪತಿ...
ಇನ್ಯಾರದ್ದೋ ಅಪ್ಪ...

ಸಾಯುವವ ಒಬ್ಬ ವ್ಯಕ್ತಿಯಲ್ಲ...

ಒಂದು  ಕುಟುಂಬ... 
ಕುಟುಂಬದ ಭವಿಷ್ಯಗಳು ... ಆಸೆಗಳೂ ಇಲ್ಲಿ ಸಾಯುತ್ತಿವೆ.....
ಎಷ್ಟೋ ಕನಸುಗಳು ಇಲ್ಲಿ ಕಮರುತ್ತಿವೆ.... !

ಯಾರೋ ಬರುತ್ತಿರುವ  ಸದ್ಧು.....
ಕುತ್ತಿಗೆ ಹೊರಳಿಸುವ ಪ್ರಯತ್ನ ಮಾಡಿದೆ...

ಚುಚ್ಚಿದ ಬಾಣಗಳಿಂದಾಗಿ ಆಗಲಿಲ್ಲ...


" ಭೀಷ್ಮಾ... 

ನಾನು..
ನಿನ್ನ ಕೃಷ್ಣ ಬಂದಿರುವೆ.. "

ನನ್ನ ಕಣ್ಣುಗಳು ಮಿನುಗಿದವು !

ನನ್ನ ಆರಾಧ್ಯ ದೈವ ... ಶ್ರೀಕೃಷ್ಣ...! ... 

"ಕೃಷ್ಣಾ...

ಮಾಧವಾ... 
ಹರಿ...ಮುರಾರಿ...
ಗೋವರ್ಧನ ಗಿರಿಧಾರಿ....
ನನ್ನ 
ಬಾಯಿತುಂಬಾ ನಿನ್ನ ಹೆಸರನ್ನಾದರೂ ಹೇಳಿಬಿಡುತ್ತೇನೆ...!

ಕಣ್ ತುಂಬ ನೋಡಿ .... 

ಕೈ ಮುಗಿಯುವ ಭಾಗ್ಯವೂ ನನಗಿಲ್ಲ ನೋಡು...."

ನನ್ನ ಧ್ವನಿ ನಡುಗುತ್ತಿತ್ತು...

ಕಣ್ಣಲ್ಲಿ ನೀರು ತುಂಬಿತ್ತು...

ಈಗ ಕೃಷ್ಣ ನನ್ನ ಮುಂದೆ ಬಂದು ನಿಂತ...


"ಭಕ್ತಿಗೆ 

ಆಡಂಬರ ಬೇಕಿಲ್ಲ..
ಶುದ್ಧ ಅಂತಃಕರಣದ ಭಾವ ಸಾಕು...

ಭೀಷ್ಮಾ....

ನೋವಾಗುತ್ತಿದೆಯಾ... ?"... 

ನನಗೆ ನಗು ಬಂತು....


"ಮಾಧವಾ...

ಕಣ್ ಮುಚ್ಚಿದರೂ... 
ಕಾಡುವ
ಮಾನಸಿಕ ನೋವಾ.. ?..

ಕ್ಷಣ ಕ್ಷಣಕ್ಕೂ ಚುಚ್ಚುವ ಬಾಣಗಳ ದೈಹಿಕ ನೋವಾ ?... 


ಯಾವ ನೋವು ಅಂತ ಹೇಳಲಿ ಕೃಷ್ಣಾ ..  ?... 


ಇದುವರೆಗೂ 

ನೋವಿನೊಂದಿಗೆ ಜೊತೆ ಜೊತೆಯಾಗಿ ಬದುಕಿರುವೆ..".. 

ಕೃಷ್ಣ ಮುಗುಳು ನಗುತ್ತಿರುವಂತೆ ಕಾಣುತ್ತಿತ್ತು..


"ಭೀಷ್ಮಾ...

ನಿನಗೆಂಥಹ ನೋವು...?... 

ಹಸ್ತಿನಾವತಿಪುರದ  

ಮಹಾರಥಿ ಸೇನಾನಿ...
ಹರಿ ಹರರನ್ನೇ ಗೆಲ್ಲಬಲ್ಲ ಭೀಷ್ಮನಿಗೆ ನೋವೇ  ?..."

ನನಗೆ ಅರ್ಥವಾಯಿತು...

ಕೃಷ್ಣ ನನ್ನನ್ನು ಕೆಣಕುತ್ತಿದ್ದಾನೆ ಅಂತ...

"ಮಾಧವಾ...

ನನ್ನ ಅಂತರಂಗ ಅರಿತಿದ್ದರೂ..
ಮತ್ತೆ ಕೆಣಕುವೆಯೇಕೆ .. ?"

ಕೃಷ್ಣ ಮುಗುಳ್ನಕ್ಕ...


"ಭೀಷ್ಮಾ...

ನಿನ್ನ ಬದುಕನ್ನು ನಾನು ಬಲ್ಲೆ...

ಬದುಕಿನ ಕುರಿತ ನಿನ್ನ ನಿಷ್ಠೆಯನ್ನೂ ಬಲ್ಲೆ...


ರಾಜ ವೈಭೋಗವನ್ನು ಅನುಭವಿಸುತ್ತ...

ರಾಜನ ಆಸ್ಥಾನದಲ್ಲಿ 
ನರ್ತಕಿಯರ ನೃತ್ಯಗಳನ್ನು ನೋಡುತ್ತ...
ಆಸ್ಥಾನದ ಅರೆನಗ್ನ ಹೆಂಗಳೆಯರ ಪಟಗಳನ್ನು ನೋಡುತ್ತ...
ವೈಭೋಗದ ಮಧ್ಯೆ 
ಬ್ರಹ್ಮಚಾರಿಯಾಗಿವದು ಬಹಳ ಕಷ್ಟ...

ನೀನೊಬ್ಬ ಸೇನಾನಿ...

ವೀರ ಯೋಧ...!

ಹರಿ ಹರ .. 

ಬ್ರಹ್ಮಾದಿಗಳನ್ನು ಸೋಲಿಸಬಲ್ಲ ವೀರ...

ಶೂರತನ ಸುಲಭವಾಗಿ ಬರುವದಿಲ್ಲ...


ಅದಕ್ಕೆ ತಕ್ಕ ವ್ಯಾಯಾಮ...

ಪೌಷ್ಟಿಕ ಆಹಾರ ಸೇವಿಸುವ ಅನಿವಾರ್ಯ...

ಸಮರ್ಥ

ವೀರ್ಯವಂತನ.. 
ದೇಹ 
ತನ್ನ ಜೈವಿಕ ಕ್ರಿಯೆಯನ್ನು ಮಾಡಲೇ ಬೇಕಲ್ಲವೆ  ?... 

ಭೀಷ್ಮಾ...

ನೀನು ಪ್ರತಿಜ್ಞೆ ಮಾಡಿದ್ದು ನಿನ್ನ ಯೌವ್ವನದ ದಿನಗಳಲ್ಲಿ...

ಆರಮನೆಯ ರಾಜಕುವರ..

ಹತ್ತಾರು ಸುಂದರ ಹೆಂಗಳೆಯರ ಕನಸು ಕಂಡವ....!

ಪ್ರತಿಜ್ಞೆ ಮಾಡಿದರೂ..

ಬದುಕಿನುದ್ದಕ್ಕೂ ಕನಸುಗಳು ಕಾಡದೆ ಬಿಟ್ಟಾವೆಯೆ... ?... 

ಭೀಷ್ಮಾ..

ನಿನಗೆ .. 
ಕನಸುಗಳು ಕೂಡಾ   ನೋವುಗಳಾಗಿದ್ದವು  ಅಲ್ಲವೆ ?"...

ಈ 

ಕೃಷ್ಣ 
ನನ್ನನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದ...

ತಲೆ  ಅಲ್ಲಾಡಿಸುವ ಪ್ರಯತ್ನ ಮಾಡಿದೆ...ನೋವಿನಿಂದ ಮುಖ ಕಿವುಚಿದೆ...


"ಮಾಧವಾ....

ಬದುಕಿನುದ್ದಕ್ಕೂ .. 
ನಾನು 
"ಕಾಮವನ್ನು" ಧಿಕ್ಕರಿಸಿ ... ಎದುರಿಸಿ ಬದುಕಿದ್ದೇನೆ...

ನನ್ನ 

ಬದುಕಿನ ವೈರುಧ್ಯ ನೋಡು ಕೃಷ್ಣಾ...

ನನ್ನಿಂದ 

ಬ್ರಹ್ಮಚೈರ್ಯದ ಪ್ರತಿಜ್ಞೆ ಮಾಡಿಸಿದ
ನನ್ನ ಚಿಕ್ಕಮ್ಮ
ಮತ್ಸ್ಯಗಂಧಿಗೆ ಯೋಗ್ಯರಾದ ಸೊಸೆಯರನ್ನು ನಾನು ತರಬೇಕಾಯಿತು.... 

ಮುಂದೊಮ್ಮೆ 

ಅವರು  ಮಕ್ಕಳಾಗದೆ ವಿಧವೆಯರಾದರು....

ರಾಜ್ಯದ ಸಿಂಹಾಸನಕ್ಕೆ ಉತ್ತರಾಧಿಕಾರಿ ಬೇಕಲ್ಲ... !


ವೇದವ್ಯಾಸರು ಸಮಸ್ಯೆ ಪರಿಹರಿಸಲಿಕ್ಕೆ ಬರಬೇಕಾಯಿತು....


ಕುಟುಂಬದ ಹಿತೈಷಿಯಾಗಿ..

ಇದಕ್ಕೆಲ್ಲ ನಾನು ಸಾಕ್ಷಿಭೂತನಾಗಿದ್ದೆ....

ಎಲ್ಲೋ 

ಬೆಟ್ಟದಲ್ಲಿ ...
ಹಿಮಾಲಯದಲ್ಲಿ  ಮರದ ಕೆಳಗೆ
ಬದುಕಿನ ಸಂಬಂಧಗಳನ್ನೆಲ್ಲ 
ತೊರೆದು...
ಸನ್ಯಾಸಿಯಾಗಿ ಬ್ರಹ್ಮಚಾರಿಯಾಗುವದು ಸುಲಭ....

ರಾಜಭೋಗದಲ್ಲಿ .... 

ಸನ್ಯಾಸಿಯಾಗಿ ನಾನು ಗೆದ್ದಿರುವೆ ಕೃಷ್ಣಾ...."

ಕೃಷ್ಣ ನನ್ನನ್ನು ನೋಡಿ ಹೆಮ್ಮೆಯಿಂದ ನಕ್ಕ...


"ಕೃಷ್ಣಾ....

ಈ ಸೃಷ್ಟಿಯಲ್ಲಿ 
ಒಂದು ಗಂಡು..
ಒಂದು ಹೆಣ್ಣು ಹುಟ್ಟುವದು ಸಂತಾನೋತ್ಪತ್ತಿಗೋಸ್ಕರ...

ಇದು ನನಗೆ ತಿಳಿಯದ ವಿಷಯವೇನಲ್ಲ...


ನನ್ನ 

ಕಣ್ಣೇದುರಲ್ಲೇ ... 
ಕಾಮದ ಭಯಂಕರ ಆಟಗಳನ್ನು  ನೋಡಿರುವೆ..."

"ಎಲ್ಲಿ  ?"


"ಕೃಷ್ಣಾ...

ಧೃಥರಾಷ್ಟ್ರ ಹುಟ್ಟು ಕುರುಡ...!

ನಮ್ಮ ಕಣ್ಣಿಗೆ ಕಾಣುವ 

ಬಣ್ಣಗಳ ರಂಗುಗಳನ್ನು ಆತ ನೋಡಲೇ ಇಲ್ಲ...

ಹೆಣ್ಣಿನ ಸೌಂದರ್ಯದ 

ಸೊಬಗಿನ ಕಲ್ಪನೆ ಕೂಡ ಅವನಿಗಿಲ್ಲ...

ಅಂಥಹ ಹುಟ್ಟು ಕುರುಡನ

ಕಾಮಕ್ಕೆ 
ಮಡದಿ  ಗಾಂಧಾರಿ ಸಾಕಾಗಲಿಲ್ಲ...

ದಾಸಿಯಲ್ಲಿ ಮೋಹಿತನಾದ 

ಅವಳಲ್ಲಿ ಮಗುವನ್ನು ಪಡೆದ...

ಅದೊಂದು ದೊಡ್ಡ ಗಲಾಟೆಯೇ ಆಗಿ ಹೋಯಿತು... 

ಅವನ ಈ ಅವಾಂತರವನ್ನು ಪರಿಹರಿಸಿದ್ದು ನಾನು...

ಅವನ ದಾಸಿ ಪುತ್ರ 

"ಯಯತ್ಸು" ನಿನಗೂ ಗೊತ್ತಲ್ಲವೆ ?"

ಕೃಷ್ಣ ನಗುತ್ತ ತಲೆಯಾಡಿಸಿದ...


"ಕೃಷ್ಣಾ...

ಇದಕ್ಕಿಂತಲೂ ಆಶ್ಚರ್ಯವಾದ ಇನ್ನೊಂದು ವಿಷಯವಿದೆ...

ಧೃಥರಾಷ್ಟ್ರನ ಸಹೋದರ  

ಪಾಂಡು ಮಹಾರಾಜನಿಗೆ  ಒಂದು ಭಯಂಕರ ಶಾಪವಿತ್ತು...

"ನೀನು 

ಕಾಮಾತುರನಾಗಿ...
ಮಡದಿಯನ್ನು ಭೋಗಿಸಲು ಮುಂದಾದರೆ ನಿನಗೆ ಸಾವು ಖಂಡಿತ" .. 
ಅಂತ.....

ಕಾಮವನ್ನು ಅನುಭವಿಸಲು ಹೋದರೆ  ಸಾವು ಖಂಡಿತ !


ಈ ಪಾಂಡು ಮಾಡಿದ್ದೇನು  ?


ತನ್ನ ಸಾವನ್ನು ಲೆಕ್ಕಿಸದೆ...   

ಕಾಮವನ್ನು ಅನುಭವಿಸಲು ಹೋದ...
ಸತ್ತೂ  ಹೋದ.. "... 

ಸಾವಿನ ಭಯವಿದ್ದರೂ 

ದೇಹವನ್ನೂ ... ಮನಸ್ಸನ್ನೂ  
ಕಾಡುವ ಕಾಮವೇ ದೊಡ್ಡದಾಗಿ ಹೋಯ್ತು.... ! "... 

ಕೃಷ್ಣ ಮತ್ತೆ  ಕಿರು ನಗು ನಕ್ಕ.....


"ಕೃಷ್ಣಾ...

ನಿನ್ನಲ್ಲಿ ಒಂದು ಪ್ರಶ್ನೆಯಿದೆ...."

"ಏನದು ಪ್ರಶ್ನೆ...  ?....


"ಮಾಧವಾ...

ಬದುಕಿನುದ್ದಕ್ಕೂ ನಾನು "ಪ್ರಕೃತಿಯ"  ವಿರುದ್ಧವಾಗಿ ಬದುಕಿದೆ...

ಮನಸ್ಸಿನ...

ದೇಹದ ಸಹಜ ಆಸೆಗಳನ್ನು 
ಹತ್ತಿಕ್ಕಿ..
ಹಠದಿಂದ ಬದುಕಿದೆ...

ನನ್ನ

ಬದುಕಿನ ಕ್ಷಣ ಕ್ಷಣದಲ್ಲೂ 
ಈ ಹೆಣ್ಣು ... 
ಈ ಪ್ರಕೃತಿ .... ನನ್ನನ್ನು ಕಾಡಿದೆ...

ಅಂಬೆಗೆ 

ನಾನು ಮಾಡಿದ್ದೇನು... ?
ನನ್ನ ತಮ್ಮನಿಗಾಗಿ ಅವಳನ್ನು ಕರೆ ತಂದೆ...
"ನಾನು ಸಾಲ್ವ ಮಹಾರಾಜನನ್ನು ಪ್ರೀತಿಸಿದ್ದೇನೆ..." ಎಂದಾಗ
ಬಹಳ ಮರ್ಯಾದೆಯಿಂದ ಅವನಲ್ಲಿ ಅವಳನ್ನು ಕಳುಹಿಸಿಕೊಟ್ಟೆ...

ಸಾಲ್ವ ಮಹಾರಾಜ 

ಅಂಬೆಯನ್ನು  ತಿರಸ್ಕರಿಸಿದರೆ ನನ್ನ ತಪ್ಪೇನಿದೆ ? ... 

ಇಂದು ಅಂಬೆ ... 

ಶಿಖಂಡಿಯಾಗಿ ನನ್ನ ಸಾವಿಗೆ ಕಾರಣಳಾಗಿದ್ದಾಳೆ...

ಕೃಷ್ಣಾ...

ಇದುವರೆಗೂ 
ಕುರುವಂಶದ ಸಿಂಹಾಸನವನ್ನು 
ವೈರಿಗಳಿಂದ ಕಾಪಾಡಿಕೊಂಡು ಬಂದಿದ್ದೆ..
ಇಂದು 
ಮನೆಯ ಸೊಸೆ "ದ್ರೌಪದಿಯಿಂದಾಗಿ"  ಕುರುವಂಶ ನಾಶವಾಗುತ್ತಿದೆ...

ನನ್ನ 
ಬದುಕಿನಲ್ಲಿ  ಯಾವಾಗಲೂ 
"ಹೆಣ್ಣು "
ಈ ರೀತಿಯಾಗಿ  ಬಂದು 
ವಿಪರ್ಯಾಸಗಳನ್ನು ಹುಟ್ಟು ಹಾಕುವದು ಯಾಕೆ  ?

ಯಾಕೆ ಹೀಗೆ  ?


ಬ್ರಹ್ಮಚಾರಿಯಾಗಿರಬೇಕು ಎಂದರೆ ಕಾಮವನ್ನು ಗೆಲ್ಲಬೇಕು....


ಈ ಪ್ರಕೃತಿ..

ಈ ಸ್ತ್ರೀಯನ್ನು ವಿರೋಧಿಸಿ ಬದುಕಿದ್ದು ತಪ್ಪಾ ?....

ಕಾಮದ ಹೊರತಾಗಿ 

ಈ ಬದುಕಿನಲ್ಲಿ ಏನೂ ಇಲ್ಲವೆ ಕೃಷ್ಣಾ...  ?..."

ಕೃಷ್ಣ ನಗುತ್ತಿದ್ದ...

ಒಂದೇ ಸವನೆ ನಗುತ್ತಿದ್ದ...

ನಗುವ 

ಮುದ್ದು ಮುಖದ 
ಕೃಷ್ಣನ ಮುಖವನ್ನು ಕಣ್ ತುಂಬಾ ತುಂಬಿಕೊಂಡೆ...

"ಭೀಷ್ಮಾ....

ಏನು ಹೇಳಲಿ  ?...
ನಾನೂ ಸಹ ನಿನ್ನ ಹಾಗೆಯೇ ಬ್ರಹ್ಮಚಾರಿ.... 

ಇದು ನಿನಗೂ ಗೊತ್ತಲ್ಲವೆ  ?...


ಲೋಕದ ಸಹಜ  ಸೃಷ್ಟಿ "ಪ್ರಕೃತಿ.. ಪುರುಷ" ,...

ಇಲ್ಲಿ ಕಾಮವೂ ಸಹಜ....

ಸಹಜತೆಯನ್ನು

ಒಪ್ಪಿದರೂ .... 
ಅಪ್ಪಿ ಕೊಳ್ಳುವ ಅಗತ್ಯವೇನಿಲ್ಲ...."

ಭೀಷ್ಮಾ... 

ನಿನ್ನ ಬದುಕು .. 
ಸಾರ್ಥಕ ಬದುಕು... 

ಅಪ್ಪನಿಗಾಗಿ ಮಾಡಿದ ಪ್ರತಿಜ್ನೆಗಾಗಿ ನಿನ್ನ ಬದುಕನ್ನೇ ಮುಡಿಪಾಗಿಟ್ಟೆ... 


ವೈಭೋಗದ 

ಕಾಮಕೂಪದಲ್ಲಿದ್ದರೂ... 
ನಿನ್ನ ಛಲವನ್ನು ಬಿಡಲಿಲ್ಲ... 

ನೀನು ಗೆದ್ದಿದ್ದೀಯಾ  ಭೀಷ್ಮಾ... !


ನಿನ್ನದು ಸಾರ್ಥಕ ಬದುಕು... ".. 


ನನ್ನ 
ನೋವುಗಳನ್ನು ಲೆಕ್ಕಿಸದೆ ... 
ಬಾಣಗಳಿಂದ ಜರ್ಜರಿತವಾದ 
ರಕ್ತಸಿಕ್ತ ಕೈಗಳನ್ನು 
ಎತ್ತಿ 
ಕಣ್ಮುಚ್ಚಿ ಕೈಮುಗಿದೆ... 

ಭಕ್ತಿಯಿಂದ ಪರವಶನಾದೆ... 

ನನ್ನ ಧ್ವನಿ ನಡುಗುತ್ತಿತ್ತು... 

"ಕೃಷ್ಣಾ .... 

ಕೃಷ್ಣಾ ....... ಕೃಷ್ಣಾ ..."... 

ಕೃಷ್ಣ 

ಮೃದುವಾಗಿ  ಮೈದವಡುತ್ತಿದ್ದ... 

ನನ್ನ 
ಕಣ್ಣುಗಳಲ್ಲಿ  ಧಾರಾಕಾರವಾಗಿ ನೀರಿಳಿಯುತ್ತಿತ್ತು..




(ಆಸ್ತಿಕ ಮನಸ್ಸುಗಳ ಕ್ಷಮೆ ಕೋರುವೆ....)

ಸುಂದರ ಪ್ರತಿಕ್ರಿಯೆಗಳಿವೆ.... ದಯವಿಟ್ಟು ಪ್ರತಿಕ್ರಿಯೆಗಳನ್ನೂ  ನೋಡಿ...