Sunday, December 19, 2010

ನನ್ನ ಹೆಸರನ್ನು ಕನ್ನಡದಲ್ಲಿ ಇಟ್ಟಿದ್ದಾರೆ... !!


ಒಂದು ದಿನ ಕುಷ್ಟ ಶಾಲೆಗೆ ಬರುವಾಗ ಒಂದು ಹಾವು ಹಿಡಿದುಕೊಂಡು ಬಂದ...


ನಮಗೆಲ್ಲ ಹೆದರಿಕೆ ಆಯಿತು..


"ಪಕ್ಕೇಶ್ ಹೆಗ್ಡೆರೆ ... 
ಹೆದರ್ ಬೇಡ್ರಾ... 
ಇದು "ಹಸಿರುಳ್ಳೆ" ಹಾವು..
ಇದು  ಎಂತಾ ಮಾಡಿದ್ರೂ.. ಕಚ್ಚೂದಿಲ್ಲ... ನೋಡಿ.."


ಎಂದು  ಅದರ ಬಾಯೊಳಗೆ  ಬೆರಳು ಹಾಕಿ ತೂರಿಸಿದ..!


ನಮಗೂ ಸ್ವಲ್ಪ ಧೈರ್ಯ ಬಂತು...!


ನಾವು ಮುಟ್ಟಿ... ಕೊರಳಿಗೆ ಎಲ್ಲ ಸುತ್ತಿಕೊಂಡು ಆಟ ಆಡಿದೆವು..


ಯಾಕೋ ಆ  ಹಾವಿನ ಮೇಲೆ ಪ್ರೀತಿಯೂ ಬೆಳೆಯಿತು..


ನಾಗುವಿಗೆ  ಒಂದು ಉಪಾಯ ಬಂತು...


"ಕುಷ್ಟಾ.. 
ಈ ಹಾವನ್ನು ನಾವು ಸಾಕಿದರೆ ಹೇಗೆ?..
ಈ ಹಾವು ನಮಗೆ ಸಹಾಯ ಮಾಡಬಹುದಾ?
ಮೊನ್ನೆ ಒಂದು ಸಿನೇಮಾದಲ್ಲಿ  ..
ಹಾವು ಒಬ್ಬ ಹುಡುಗನಿಗೆ ಸಹಾಯ ಮಾಡುತ್ತಿತ್ತಲ್ಲ  ಹಾಗೆ.."


"ನಾಗಣ್ಣ.. ಇದೆಲ್ಲ  ನಮಗೆ ಯಾಕ್ರ ಉಸಾಬರಿ..? "


"ಇಲ್ಲಾ  ಕುಷ್ಟ ..
ನಾವು ಇದನ್ನು ಸಾಕೋಣ.."


ನಾಗು ಹೇಳಿದ ಮೇಲೆ ಅದಕ್ಕೆ ಯಾರೂ ಏನೂ ಹೇಳುವದಿಲ್ಲವಾಗಿತ್ತು...


ಸರಿ...


ಮನೆಗೆ ಬಂದು  ಅಟ್ಟದ ಮೇಲಿಂದ "ಕಸ್ತೂರಿ ನೀಲಮ್ ಬಾರ್ ಸೋಪ್" ರಟ್ಟಿನ ಬಾಕ್ಸನ್ನು ತೆಗೆದೆವು...


ಅದರ ಮೇಲಿನ ಕವರನ್ನು ಕತ್ತರಿಸಿ ಅದಕ್ಕೆ ಪ್ಲಾಸ್ಟಿಕ್ ಅಂಟಿಸಿದೆವು..
ನಮಗೆ ಹೊರಗಿನಿಂದ ನೋಡಲು ಅನುಕೂಲವಾಗಲಿ ಅಂತ..


ಆ ಪ್ಲಾಸ್ಟಿಕ್ಕಿಗೆ ಮಧ್ಯದಲ್ಲಿ ನಾಲ್ಕೈದು ತೂತುಗಳನ್ನು ಮಾಡಿದೆವು..


ಹಾವಿಗೆ ಉಸಿರಾಡಲು ಆಗಲಿ ಅಂತ..!


ರಟ್ಟಿನ ಬಾಕ್ಸಿನ ಒಳಗೆ  ಒಂದು  ತೆಂಗಿನ ಕಾಯಿ  "ಗರಟೆ" ಇಟ್ಟು ಅದರಲ್ಲಿ ನೀರು ತುಂಬಿದೆವು..


ಹಾಗೆ  ಅಕ್ಕಿ ಕಾಳುಗಳನ್ನು  ಹಾಕಿದೆವು...


ಹಾವು ಅಕ್ಕಿ ತಿನ್ನ ಬಹುದು ಅಂತ...!


ದಿನಾಲೂ ಸ್ಕೂಲ್ ಬಿಟ್ಟು ಬಂದು  ರಟ್ಟಿನ ಬಾಕ್ಸಿನ ಮುಂದೆ ನಮ್ಮ  ಮೀಟಿಂಗು...


ದಿನ ಕಳೆಯುತ್ತಿದ್ದ ಹಾಗೆ  ಆ  ಹಾವು ಯಾಕೋ ಡಲ್ ಆಗತೊಡಗಿತು...


ಆಗ...
ನಮ್ಮೂರ ಶಾಲೆಯಲ್ಲಿ ನಾವು ಕಲಿಯುವಾಗ ಏಳನೆ ತರಗತಿಯವರೆಗೆ  ಎರಡೆ  ಮಾಸ್ತರು..


ಮಾಸ್ತರರಿಗೆ ಬಹಳ ಕಷ್ಟವಾಗುತ್ತಿತ್ತು..


ಹಾಗಾಗಿ  ಊರವರೆಲ್ಲ ಒಂದು ಸಭೆ ಮಾಡಿ ಪಕ್ಕದ ಊರಿಂದ ಒಬ್ಬ "ಅಕ್ಕೋರನ್ನು" ನೇಮಕ ಮಾಡಿಕೊಂಡರು..


"ಲೇಡಿ ಟೀಚರನ್ನು "ಅಕ್ಕೋರು" ಅಂತ ಕರೆಯುತ್ತಿದ್ದೇವು..


ಅವರು ಬಹಳ ಕಟ್ಟುನಿಟ್ಟಿನ, ಶಿಸ್ತಿನ "ಅಕ್ಕೋರ್ರಾಗಿದ್ರು..


ಆಗತಾನೆ ಇಂಗ್ಲೀಷ್ ಶುರುವಾಗಿತ್ತು.. 


ನಮಗೂ ಉತ್ಸಾಹ.. 
ನಮ್ಮ ಅಕ್ಕೋರ್ರು  ಕನ್ನಡದ "ಅ.. ಆ.. ಇ  ಈ.." ಗಳನ್ನು ಇಂಗ್ಲೀಷಿನಲ್ಲಿ ಬರೆಸುತ್ತಿದ್ದರು..
ಅದನ್ನು ಕಲಿತ ಮೇಲೆ ನಮ್ಮ ಹೆಸರುಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಹೇಳಿದರು..


" ನಾಗೇಶಾ..... ನಿನ್ನ ಹೆಸರಿನ ಸ್ಪೆಲ್ಲಿಂಗ್ ಹೇಳೊ.." 


"ಅಕ್ಕೋರ್ರೆ.... N.. A . G.. E.. S..H..A.."


" ನಾಗೂ..ನಿನ್ನ ಹೆಸರಲ್ಲಿ  ಕೊನೆಯಲ್ಲಿ "A " ಬರೋದಿಲ್ಲ.. !."


"ಯಾಕೆ  ಅಕ್ಕೊರೆ..? "


"ನಿನ್ನ ಹೆಸರು ಇಂಗ್ಲೀಷಿನಲ್ಲಿ  "ನಾಗೇಶ್ " ಅಂತಾಗುತ್ತದೆ.. ಅದಕ್ಕೆ"


" ಅಕ್ಕೋರ್ರೆ..... 
ನನ್ನ ಹೆಸರನ್ನ ಕನ್ನಡದಲ್ಲಿ "ನಾಗೇಶಾ" ಅಂತ ಇಟ್ಟಿದ್ದಾರೆ..
ಇಂಗ್ಲಿಷಿನಲ್ಲಿ  ಅಲ್ಲಾ..
ನನ್ನ ಅಪ್ಪನಿಗೆ ಇಂಗ್ಲೀಷ್ ಬರೋದಿಲ್ಲಾ..!
ಹಾಗಾಗಿ..
ನನ್ನ ಹೆಸರು "ನಾಗೇಶ" ಅಂತ...."


ಅಕ್ಕೊರ್ರಿಗೆ  ಸಿಕ್ಕಾಪಟ್ಟೆ ಕೋಪ ಬಂತು...!


"ಎದುರು ಉತ್ತರ ಕೊಡ್ತಿಯೇನೊ.. ಎಲ್ಲಿ ಕೈ ಹಿಡಿ.."


ನಾಗೂ ಕೈ ಹಿಡಿದ..


ಕೈ ಕೆಂಪಗೆ ಆಗುವ ಹಾಗೆ  ಬೆಚ್ಚಗೆ ಎರಡು ಏಟು ಕೊಟ್ಟರು..
ಹುಡುಗರೆಲ್ಲ ನಕ್ಕರು.. ನಾಗುವಿಗೆ ಅಳು ಬಂತು..


ಪಕ್ಕದಲ್ಲಿದ್ದ ಕುಷ್ಟ ಸಮಾಧಾನ  ಮಾಡಿದ..


"ನಾಗಣ್ಣ..  
ಅಳ ಬೇಡ್ರಾ... 
ಈ ಅಕ್ಕೋರ್ರಿಗೆ   ಒಂದು ಉಪಾಯ ಮಾಡುವ..
ಇನ್ನು ಮುಂದೆ ನಮ್ಮ ಸುದ್ದೀಗೆ ಬರಬಾರ್ದು....
 ಹಾಂಗ್ ಮಾಡುವ..
ನೀವು ಕಣ್ಣಿರು..ಸುಂಬಳ ಒರೆಸ್ಕಣಿ.."


ಕುಷ್ಟನಿಗೆ  ನಾಗು ಕಂಡರೆ  ಪ್ರೀತಿ..


ನಾಗುವೂ ಬೇಕಾದಷ್ಟು ಬಾರಿ " ಅಕ್ಕೊರ್ರಿಂದ "  ಪೆಟ್ಟು ತಿಂದಿದ್ದ..


ಕುಷ್ಟನಿಗೆ  ಒಂದು ಉಪಾಯ ಬಂತು..


"ನಾವು ಸಾಕಿದ ಹಾವನ್ನು  ..
ನಮ್ಮ ಪಾಟಿಚೀಲದೊಳಗೆ ಹಾಕಿಕೊಂಡು ಹೋಗೋಣ..!!.."


ಎಂದು  ಒಳ್ಳೆಯ ಘನಂದಾರಿ ಉಪಾಯ ಕೊಟ್ಟ..


ನಮಗೆಲ್ಲ ಅವನ ಉಪಾಯ ಇಷ್ಟವಾಯಿತು..


ನಾಗೂ  ಪಾಟೀಚೀಲದೊಳಗೆ ಆ ಹಾವನ್ನು ತುಂಬಿಕೊಂಡು ಶಾಲೆಗೆ ಬಂದ...


ಅಕ್ಕೋರು ಬಂದವರೆ...


"ಮಕ್ಕಳೆ  ...
ನಿನ್ನೆ ನಿಮಗೆ ಬರೆಯಲು ಕೊಟ್ಟ ಪಾಠವನ್ನು   ಬರೆದಿದ್ದೀರಾ?
ಒಬ್ಬೊಬ್ಬರಾಗಿ ತೋರಿಸಿ..
ನಾಗು.. 
ಎಲ್ಲಿ  ಪಾಠ ಬರೆದುದನ್ನು ತೋರಿಸು"


"ಅಕ್ಕೋರ್ರೆ... 
ನನ್ನ ಪಾಟೀಚೀಲ ತೆಗೆಯಲು ಆಗ್ತ ಇಲ್ಲ.."


"ಇಲ್ಲಿ ತಗೋ ಬಾ... ನಾನು ತೆಗೆದು ಕೊಡ್ತೇನೆ.."


ನಾಗು ಪಾಟೀಚೀಲ ತೆಗೆದುಕೊಂಡು ಅವರಿಗೆ ಕೊಟ್ಟ...


ಅಷ್ಟರಲ್ಲಿ ಪಕ್ಕದ ಕೋಣೆಯಿಂದ  ನಮ್ಮ ಹೆಡ್ ಮಾಸ್ತರ್ರೂ ಬಂದಿದ್ದರು....


ಅಕ್ಕೋರು ಪಾಟಿಚೀಲ  ತೆಗೆದರು.. !!


ಅದರೊಳಗಿದ್ದ ಹಾವು ನೋಡಿ ಕಂಗಾಲಾದರು... !!!.


"ಅಯ್ಯೊಯ್ಯೊ..!!
ಅಯ್ಯಯ್ಯೋ...!!!..." ಅಂತ ಹೊರಗೆ ಓಡಿದರು..!


ಹೆಡ್ ಮಾಸ್ತರ್ರಿಗೆ ಕಣ್ಣು ಕೆಂಪಗಾಯಿತು...!


" ಯಾರದ್ದು... ಈ  ಕಿತಾಪತಿ  ?..? "


ಎಂದು ವಿಚಾರಣೆ ಮಾಡಿ ...
ನಾಗುವಿಗೆ ..
ಕುಷ್ಟನಿಗೆ  ಮತ್ತು ನನಗೂ ಬೆತ್ತದ ರುಚಿ ತೋರಿಸಿದರು..


"ಹೋಗಿ ...
ಈ ಹಾವನ್ನು ಅದು ಎಲ್ಲಿತ್ತೋ ಅಲ್ಲಿ ಬಿಟ್ಟು ಬನ್ನಿ" 
ಅಂತ ಗದರಿಸಿದರು..


ಸ್ವಲ್ಪ ದಿನ ಕಳೆಯಿತು..


ಆಗೆಲ್ಲ ...
ಸರಕಾರಿ ಶಾಲೆಗಳನ್ನು ವರ್ಷಕ್ಕೊಮ್ಮೆ  ತಪಾಸಣೆ ಮಾಡಲು ತಾಲೂಕಿನಿಂದ "ಮೇಲಾಧಿಕಾರಿಗಳು" ಬರುತ್ತಿದ್ದರು..


ಅವರಿಗೆ ನಾವೆಲ್ಲ "ಇನ್ನಿಸ್ಪೆಟ್ಟರ್ರು" ಅಂತ್ತಿದ್ದೆವು..


ಆ ವರ್ಷವೂ  ಒಬ್ಬರು ಬಂದರು..


ಅವರು ಬಂದಾಗ ..
ನಮ್ಮನ್ನೆಲ್ಲ ಪ್ರಶ್ನೆ ಕೇಳಿ... 
ನಮಗೆ  ಶಿಕ್ಷಕರು ಹೇಗೆ ಕಲಿಸಿದ್ದಾರೆ ಎಂದು  ಚೆಕ್ ಮಾಡುತ್ತಿದ್ದರು...


ಅವರು ಬಂದು ನಮ್ಮನ್ನು ಉದ್ದೇಶಿಸಿ..


"ಮಕ್ಕಳೆ...
ನಾನು ಇವತ್ತು ನಿಮಗೆಲ್ಲ ಪುಸ್ತಕದ ಪ್ರಶ್ನೆ ಕೇಳುವದಿಲ್ಲ..
ಬದಲಿಗೆ ನೀವೇ.. ನನ್ನನ್ನು ಪ್ರಶ್ನೆ ಕೇಳಿ..
ನಿಮಗೆ  ಎಂತಹ  ಸಂಶಯ ಬಂದಿದ್ದರೂ ಕೇಳಿ  ನಿವೆಲ್ಲ  ಜನರಲ್ ನಾಲೇಜನ್ನು ಬೆಳೆಸಿಕೊಳ್ಳ ಬೇಕು..


ನನಗೆ ನಿಮ್ಮ  ಜನರಲ್ ನಾಲೇಜನ್ನು ಪರಿಕ್ಷಿಸ ಬೇಕಾಗಿದೆ"


ಯಾರೂ ಮಾತನಾಡಲಿಲ್ಲ..


"ಮಕ್ಕಳೆ ..
ಹೆದರ ಬೇಡಿ.. 
ನಿಮಗೆ ದಿನ ನಿತ್ಯದಲ್ಲಿ ಕಾಣುವ ಯಾವುದೆ ಸಂಶಯದ ಬಗೆಗೆ ಪ್ರಶ್ನೆ ಕೇಳಿ..
ಪ್ರಶ್ನೆ ಕೇಳಲಿಕ್ಕೆ  ಹೆದರ ಬಾರದು..
ಪ್ರಶ್ನೆ ಕೇಳುವದನ್ನು ನೀವು ಬೆಳೆಸಿಕೊಳ್ಳ ಬೇಕು "


ಈಗ ಅಲ್ಲಲ್ಲಿ ಸಣ್ಣಗೆ ಗುಸು ಗುಸು ಶುರುವಾಯಿತು...


ನಾಗು  ಸಟಕ್ಕನೆ ಎದ್ದು ನಿಂತ...!!


ಇನ್ನಿಸ್ಪೆಟ್ಟರ್ರೆ. ...
ಏನು ಬೇಕಾದರೂ  ..
ಪ್ರಶ್ನೆ ಕೇಳ ಬಹುದಾ ?. !! "


"ನೋಡಿ ಮಕ್ಕಳೆ ...
ಹೀಗೆ ದೈರ್ಯವಾಗಿ ಪ್ರಶ್ನೆ ಕೇಳ ಬೇಕು... 
ಕೇಳಪಾ  ಏನು ನಿನ್ನ ಪ್ರಶ್ನೆ..?  "


" ಇನ್ನಿಸ್ಪೆಟ್ಟರ್ರೆ..
ಹಾವು ಯಾಕೆ  "ಉಚ್ಚೆ"  ಹೊಯ್ಯುವದಿಲ್ಲ..? ? "


ಮೇಲಾಧಿಕಾರಿಗಳು ಕಂಗಾಲಾದರು..!!


"ಏನು ?...!!
ಹಾವು  ಉಚ್ಚೆ ಹೊಯ್ಯುವದಿಲ್ಲವಾ ?.. !!
ಎಂಥಾ  ಪ್ರಶ್ನೆ  ಇದು..!! "


ಬಹುಷಃ  ಅವರಿಗೂ ಉತ್ತರ ಗೊತ್ತಿರಲಿಕ್ಕಿಲ್ಲ..


ನಾಗುವಿಗೆ ಈಗ ಮತ್ತೂ ಧೈರ್ಯ ಬಂತು...!


ಹೆಮ್ಮೆಯಿಂದ ಎದೆ ಸೆಟೆದು  ಮತ್ತೆ ಕೇಳಿದ..!


"ಇನ್ನಿಸ್ಪೆಟ್ಟರ್ರೆ... 
ನಾವು  ಒಂದು ಹಾವನ್ನು ಸಾಕಿದ್ದೆವು...
ಅದು ಒಂದು ವಾರ ಆದರೂ "ಉಚ್ಚೆ"  ಹೊಯ್ಯಲಿಲ್ಲ..
ಯಾಕೆ  ? !.."


ಮೇಲಾಧಿಕಾರಿಗಳಿಗೆ  ಅವಾಕ್ಕಾದರು... !!
ಉತ್ತರ ಕೊಡಲಾಗದೆ  ತಡವರಿಸಿದರು..!!




ಈಗ ಮಾಸ್ತರ್ರು  ನಾಗುವಿಗೆ  ಗದರಿದರು..


"ಕುತ್ಕೊಳ್ಳೋ...! 
ಭಾರಿ..  ಬುದ್ಧಿವಂತ...!
ಹಾವು  ಉಚ್ಚೆ  ಹೊಯ್ಯುವದಿಲ್ಲವಂತೆ..!
ಅದು ಉಚ್ಚೆ ಹೊಯ್ದರೆಷ್ಟು ..
ಬಿಟ್ಟರೆಷ್ಟು..?
ಮಹಾ  ಸಂಶಯ ಇವಂದು... 
ಕೂತ್ಕೋ.. ತಲೆಹರಟೆ.. !!"


ನಾಗು ಕುಳಿತು ಕೊಂಡ..


"ಎಂಥಾ ... ಮಕ್ಕಳ್ರೀ..  ಇವ್ರು..?
ಈಗ್ಲೇ ...ಹೀಗೆ.. !
ದೊಡ್ಡವರಾದ ಮೇಲೆ  ಇನ್ನು ಹೇಗೆ..?
ಅಬ್ಬಬ್ಬಾ...!!
ಹೇಗೆ ಸಂಭಾಳಿಸ್ತೀರ್ರಿ ನೀವು"
ಅಂತ ಮೇಲಾಧಿಕಾರಿಗಳು  ಮಾಸ್ತರ್ರನ್ನು ಕೇಳಿದರು..


ಮಾಸ್ತರ್ರಿಗೂ ಅವಮಾನ ಆದಂತಾಯಿತು..


ನಮ್ಮ ಮೂವರನ್ನು ದುರುಗುಟ್ಟಿ ನೋಡಿದರು...!!


ಕುಷ್ಟ ನನ್ನ ಕಿವಿಯಲ್ಲಿ ಪಿಸುಗುಟ್ಟಿದ..


"ಪಕ್ಕೇಶ್ ಹೆಗ್ಡೆರ್ರೆ....
ಯಾಕೆ ಬೇಕಿತ್ತು ಈ ಪ್ರಶ್ನೆ..?
ಇನ್ನಿಸ್ಪೆಟ್ರು ಹೋದಮೇಲೆ  ಮತ್ತೆ  ಪೆಟ್ಟು ತಿನ್ನ ಬೇಕಲ್ರಾ?


ಈ ಮಾಸ್ತರ್ರು ...
ನಮ್ಮ ಮೂರೂ ಜನಕ್ಕೆ  ಬೆತ್ತ ಪುಡಿ...  ಪುಡಿ ಮಾಡ್ತಾರೆ ನೋಡಿ.."


ನನಗೆ ಸಣ್ಣಗೆ ನಡುಕ ಶುರುವಾಯಿತು..


ಮಾಸ್ತರರು ಎಲ್ಲರೆದುರಿಗೆ ನಾಗುವಿಗೆ ಗದರಿದ್ದರಿಂದ ನಾಗುವಿಗೆ ಅಳು ಬಂದಂತಾಗಿತ್ತು..

ಶಾಲೆಯಿಂದ  ಹೊರಗೆ ಬರುತ್ತಿದ್ದ ಹಾಗೆ  ಕುಷ್ಟ ನಾಗುವಿಗೆ  ಸಮಾಧಾನ ಮಾಡಿದ..


"ನಾಗಣ್ಣ .. 
ನೀವು ಬೇಜಾರು ಮಾಡ್ಕೋಬ್ಯಾಡ್ರಿ..
ಆ  ಇನ್ನಿಸ್ ಪೆಟ್ರಿಗೆ ಎಂತದೂ ಗೊತ್ತಿಲ್ರ...!


ನೀವೇ.. ಹೇಳಿ.. ನಮ್ಮ ದೇವರು  ಶಿವನ ಕೊರಳಲ್ಲಿ ಎನಿದೆರ್ರ..?.."


" ಹಾವು... !! "


"ಆ ಹಾವು  ..
ನಾವು ಮಾಸ್ತರರ  ಹತ್ರ ಕೇಳಿದ ಹಾಗೆ   ..
ಸ್ವಲ್ಪ "ಉಚ್ಚೆ ಹೊಯ್ದು ಬರ್ತೆ.." 
ಅಂತ ಆಗಾಗ ಹೋಗ್ತಾ ಇದ್ರೆ  ಶಿವನಿಗೆ ಕಿರಿಕಿರಿ ಅಲ್ವೇನ್ರ ?..?


"ಹೌದು.."


" ಇನ್ನು.. ದೇವ್ರು "ವಿಷ್ಣು " ಎಲ್ಲಿ ಮಲಗಿದೆನ್ರಾ..?"


"ಹಾವಿನ ಮೇಲೆ.."


ಈ ಹಾವು.. ಆಗಾಗ..  
"ನಾನು ಉಚ್ಚೆ ಹೊಯ್ದು ಬರ್ತೆ..
ನಾನು  ಸ್ವಲ್ಪ  ಉಚ್ಚೆ  ಹೊಯ್ದು ಬರ್ತೆ..
ಸ್ವಲ್ಪ ಆಚೆ ನಿಂತು ಕೊಳ್ರಿ.." 
ಅಂತ ಹೇಳಿದರೆ ಹ್ಯಾಂಗ್ರ .. ? ? 


ಹಂಗೆಯಾ  ನಮ್ಮ ಡೊಳ್ಳು ಹೊಟ್ಟೆ ಗಣಪ 
ಹಾವನ್ನು ಬೆಲ್ಟಿನ ತರಹ ಹೊಟ್ಟೆಗೆ ಹಾಕ್ಕೊಂಡಿದ್ದ ..


ಆ ಹಾವು  ಪದೆ.. ಪದೇ.... 
" ಸ್ವಲ್ಪ ಇರಪ್ಪಾ.. .. ಉಚ್ಚೆ ಹೊಯ್ದು ಬರ್ತೀನಿ..."
 ಅಂತಾ  ಇದ್ರೆ..
ನಮ್ಮ ಗಣಪನ ಹೊಟ್ಟೆ ಗತಿ ಏನಾಗ್ತಿತ್ತು...?


"ಅದಕ್ಕೆ ಏನೀಗ..?"


"ನೀವು ಬೇಜಾರು ಮಾಡ್ಕೋ ಬ್ಯಾಡ್ರಿ ..
ಆ...  ದೇವ್ರೇ ಹಾವಿಗೆ  ಉಚ್ಚೆ ಹೊಯ್ಯದ ಹಾಗೆ ಮಾಡಿದೆನ್ರ..
ಆ ಮಾಸ್ತರರಿಗೆ.. ಇನ್ನಿಸ್ ಪೆಟ್ರಿಗೆ  ಏನೂ ಗೊತ್ತಿಲ್ರ.."


ನಾನು.. ನಾಗೂ ಇಬ್ಬರೂ .. 
ಹೌದು ಅಂತ ತಲೆ  ಅಲ್ಲಾಡಿಸಿದೆವು...




( ದಯವಿಟ್ಟು ಪ್ರತಿಕ್ರಿಯೆ ಓದಿ...)





Thursday, December 9, 2010

ವರುಷ ಮೂರು... !! ಸಂಖ್ಯೆ ಮುನ್ನೂರು... !!



ನನ್ನ ಬ್ಲಾಗ್ ಹೊಸದಾಗಿ ಓದಲು ಶುರುಮಾಡಿದ ಒಬ್ಬರು ನನಗೆ ಫೋನ್ ಮಾಡಿದ್ದರು...


"ಪ್ರಕಾಶಣ್ಣಾ..
ನಿಮ್ಮ  ಕವನಗಳು ಬಲು ಸೊಗಸಾಗಿರುತ್ತದೆ..!
ನಾನು ಈ ಮೊದಲು ಇಂಥಹ ಕವನಗಳನ್ನು ಓದಿರಲೇ ಇಲ್ಲ...!!"


ಮೊದಲೇ ಡುಮ್ಮಣ್ಣನಾದ ನಾನು ಮತ್ತಷ್ಟು ಉಬ್ಬಿ ಹೋದೆ..


" ಛಾಯಾ ಚಿತ್ತಾರ ಬ್ಲಾಗ್ ಅಲ್ಲವಾ..?"


"ಅಲ್ಲಾ.. ಪ್ರಕಾಶಣ್ಣಾ...!
ಇಟ್ಟಿಗೆ ಸಿಮೆಂಟ್ ಬ್ಲಾಗು.. !!  "


"ಇಟ್ಟಿಗೆ ಸಿಮೆಂಟಿನಲ್ಲಿ ಕವಿತೆಗಳಾ...?.. !!.."


" ಅದೇ.. ಪ್ರಕಾಶಣ್ಣಾ...!!
ಬಣ್ಣ.. ಬಣ್ಣದ  ಅಕ್ಷರಗಳು...  !
ಓದಿದೆ...!
 ಸೊಗಸಾಗಿತ್ತು.. !!.. !! "


ನಾನು ತಲೆ ಕೆರೆದು ಕೊಂಡೆ.. !


"  ಯಾವದು ?  "


"ಅದೇ.. ಪ್ರಕಾಶಣ್ಣಾ... "ಅಸಹಜ"..ಅಂತ....
ಮಸ್ತ್  ಬರಿತಿಯಾ  ಪ್ರಕಾಶಣ್ಣಾ... !! "


"ಅಯ್ಯೋ ..!!
 ಮಾರಾಯ್ರೆ ಅದು  ಕವಿತೆ  ಅಲ್ಲ..!!
ಆದು ನಾನು ಬರೆದ  ಕಥೆ.. !! .."


.........................................
...........................



ಇನ್ನೊಂದು  ವಿಷಯ ನಿಮಗೆ  ಹೇಳಲೇ ಬೇಕು...


ಅದೇನು ಗೊತ್ತಾ?


ನನ್ನ ಮಗನಿಗೆ  ಅವನ ಗೆಳೆಯ ರಜತ್ ಕೇಳಿದನಂತೆ...
( ಈ ಪುಟ್ಟ ರಜತ್ ನನ್ನ ಗೆಳೆಯ "ಸತ್ಯ" ನ  ಮಗ)


"ಕನ್ನಡ ಕವಿತೆಗಳನ್ನು ಬರೆಯುವದು ಹೇಗೆ?"


ನನ್ನ  ಮಗ ಅವನಿಗೆ ಹೇಳಿದನಂತೆ..


"ಬಹಳ ಸುಲಭ ಕಣೋ...
ಒಂದು ವಾಕ್ಯ  ಬರೆದುಕೊ..
ಆಮೇಲೆ ಅದರ ಒಂದು ಅಥವಾ ಎರಡು ಶಬ್ಧಗಳನ್ನು...
ಒಂದೊಂದು ಸಾಲುಗಳಲ್ಲಿ ಬರೆಯುತ್ತ...
ಅವುಗಳ ಮುಂದೆ ಪೂರ್ಣವಿರಾಮಗಳನ್ನು ಯಥಾನುಶಕ್ತಿ ಇಡು.. 


ಅದೇ  ಕವನ  ಕಣೋ..!!...


ನನ್ನಪ್ಪ ಹೀಗೇ  ಕವನ ಬರಿತಾರೆ  ..!!. "

ಅಂದನಂತೆ..


.....................
...................................


ಬರೆಯುತ್ತ.. ಬರೆಯುತ್ತ... 
ಮೂರು ವರ್ಷಗಳು  ಕಳೆದು ಹೋದವು...


ಇಂಥಹ  ಸೊಗಸಾದ ಅನುಭವಗಳ ಜೊತೆ..!!


ನಿನ್ನೆ  ಬೆಳಿಗ್ಗೆ  ಎಂದಿನಂತೆ  ಬ್ಲಾಗ್ ನೋಡಿದೆ...


ಪ್ರೋತ್ಸಾಹಿಸುವವರ ಸಂಖ್ಯೆ.." ಮುನ್ನೂರು"  !!


ಅಬ್ಭಾ... !  
ಬಹಳ  ಬಹಳ ಖುಷಿಯಾಯಿತು...!


ಆತ್ಮಸ್ತುತಿ ಅನ್ನಿಸಿದರೂ... ಆನಂದವನ್ನು  ಬಚ್ಚಿಡಲಾಗಲಿಲ್ಲ ...!


ಎಲ್ಲೋ...
ಈ ಬೆಂಗಳೂರಿನ... 
ಟ್ರಾಫಿಕ್ಕು... ಜನಸಂದಣಿ.. ಟೆನ್ಷನ್ ಗಳ ನಡುವೆ...
ಲಾಭ, ನಷ್ಟಗಳ ಜೊತೆ ಲೆಕ್ಕಾಚಾರ ಮಾಡುತ್ತಿದ್ದ  ..
ನನ್ನನ್ನು ...
ಇಲ್ಲಿಗೆ ತಂದು  ಪ್ರೋತ್ಸಾಹಿಸುತ್ತಿರುವ  ನಿಮಗೆಲ್ಲ  ನನ್ನ  ಅನಂತ  ಅನಂತ ಕೃತಜ್ಞತೆಗಳು...


ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗಳು ...
ನನಗೆ ಇನ್ನಷ್ಟು ಬರೆಯಲು ಉತ್ಸಾಹ 
ಕೊಟ್ಟಿದೆ...


ಕೊಡುತ್ತಿದೆ...


ಈ ಬ್ಲಾಗ್ ಲೋಕ  ಒಳ್ಳೆಯ ಸ್ನೇಹಿತರನ್ನು... ಸಹೋದರಿಯರನ್ನು ಕೊಟ್ಟಿದೆ...


ದೂರದ ದೇಶದಿಂದ...
ರಾಜ್ಯದ ಇತರೆ ಭಾಗಗಳಿಂದ...
ಪುಣೆಯಿಂದ, ದೆಹಲಿಯಿಂದ.. ಮುಂಬೈಯಿಂದ...
ಸ್ನೇಹಿತರು.. ನನ್ನನ್ನು ಭೇಟಿಯಾಗಲು ಬರುತ್ತಾರೆ.. ಎಷ್ಟೋ ವರ್ಷಗಳ ಬಳಗದವರಂತೆ.. ! 


ಅವರೊಡನೆಯ ಮಾತುಗಳು...
ನಗು... ಹಾಸ್ಯ... !
ಆ  ಅನುಭವ...ಬಾಂಧವ್ಯ  ಕೊಡುವ  ಖುಷಿ ವರ್ಣಿಸಲು ಆಗದು...

ಈ..
ಬ್ಲಾಗ್ ಲೋಕಕ್ಕೆ...
ನಿಮ್ಮ  ..
ಪ್ರೀತಿಗೆ..
ಸ್ನೇಹಕ್ಕೆ..   ನನ್ನ  ನಮನಗಳು...
ಧನ್ಯವಾದಗಳು....

ನನ್ನ  ಬ್ಲಾಗನ್ನು ಅನುಸರಿಸುವ..
ಮತ್ತು ಓದುವ ಎಲ್ಲ ಸ್ನೇಹಿತರಿಗೆ  ನನ್ನ  ವಂದನೆಗಳು...
ಕೃತಜ್ಞತೆಗಳು..
ಪ್ರೋತ್ಸಾಹ ಹೀಗೆಯೇ.. ಇರಲಿ...

ಪ್ರೀತಿಯಿಂದ...



ಪಕ್ಕುಮಾಮ 1


ಪಕ್ಕುಮಾಮ ವಿಡಿಯೋ  ಭಾಗ ಎರಡು ನೋಡಲಿಕ್ಕೆ  ಇಲ್ಲಿ ಕ್ಲಿಕ್ಕಿಸಿರಿ...
PAKKUMAMA 2





(ಪಕ್ಕುಮಾಮ ಸಂದರ್ಶನ  
ಸಂದರ್ಶಕರು .. ಶ್ರೀ. ಸತ್ಯನಾರಾಯಣ..(ಕುಬೇರ ಕನ್ಸ್ಟ್ರಕ್ಷನ್ಸ್  ಬೆಂಗಳೂರು)
 ಕ್ಯಾಮರ...       ಆಶೀಷ್ ಪಿ. 
ಹಿನ್ನೆಲೆ ಸಂಗೀತ ... ಡಾ. ಪ್ರಶಾಂತ್ 
ವಸ್ತ್ರ  ಮತ್ತು  ಮೇಕಪ್ ಮತ್ತು ನಾಮ ವಿನ್ಯಾಸ   ..  ಆಶಾ ಹೆಗಡೆ ಮತ್ತು ರೇಖಾ  ದೀಕ್ಷಿತ್ 
ಸಲಹೆ ಸೂಚನೆ... ನಾಗರತ್ನ ಮತ್ತು  ಕೆ.ಎಸ. ರಜತ್..


("ಕುಡಿಯಿರಿ ಮತ್ತು ಕಲಿಸಿರಿ"  ಯೋಜನೆಯ  ಕಲ್ಪನೆ "ನಿಮ್ಮೊಳಗೊಬ್ಬ ಬಾಲು")


ಜೈ ಹೋ....



Sunday, November 28, 2010

ಅಸಹಜ


ನಾನು  ತುಂಬಾ ಒಳ್ಳೆಯ  ಮನುಷ್ಯ..

ಹಾಗಂತ ಎಲ್ಲರೂ ಹೇಳುತ್ತಾರೆ.. 
ಅದನ್ನು ಕೇಳಲಿಕ್ಕೆ  ಬಹಳ ಖುಷಿಯಂತೂ ಹೌದು.....
ಹೆಮ್ಮೆಯೂ ಆಗುತ್ತದೆ...

ಆದರೆ ...
ಆತ್ಮಸಾಕ್ಷಿಯಾಗಿ ನಿಜ ಹೇಳುತ್ತೇನೆ...
ಒಳ್ಳೆಯವನಾಗಿರುವದು  ಒಂಥರಾ  ಹಿಂಸೆ ಕಣ್ರೀ...
ಕೆಲವು ಸಂದರ್ಭ  ಯಾಕಾದ್ರೂ ಒಳ್ಳೆಯವನಾದೆ ಅನ್ನಿಸಿ ಬಿಡುತ್ತದೆ..

ಕೆಲವರು ಹಾಗಿರುವದಿಲ್ಲ ನೋಡಿ...

ಬೇರೆಯವರೆಲ್ಲ ಯಾಕೆ ?
ನನ್ನ  ಪರಮಾಪ್ತ ಗೆಳೆಯನನ್ನೇ ತೆಗೆದು ಕೊಳ್ಳಿ..
ಜೀವನದ ಪ್ರತಿ ಕ್ಷಣವನ್ನೂ  ಸಂತೋಷದಿಂದ  ಕಳೆಯುತ್ತಿದ್ದಾನೆ..

ಬಹಳ ಹೆಣ್ಣುಮಕ್ಕಳ ಗೆಳೆತನ ಅವನಿಗಿದೆ...
ಅದು  ಕೇವಲ ಗೆಳೆತನ ಅಲ್ಲ ಅಂತ ಎಲ್ಲರಿಗೂ ಗೊತ್ತು...
ಕಾಲೇಜಿನಲ್ಲಿ ಪ್ರತಿವರ್ಷ ಒಂದೊಂದು ಹೆಣ್ಣುಮಕ್ಕಳ ಜೊತೆ ಓಡಾಡಿದ..
ಪ್ರೀತಿ, ಪ್ರೇಮ ಅಂತೆಲ್ಲ ಹೇಳಿಕೊಂಡ...

ತಾನು ಮದುವೆಯಾಗುವ ಹೆಣ್ಣನ್ನು ನನ್ನಿಂದ  ಸಿಲೆಕ್ಟ್ ಮಾಡಿಸಿದ..!

ಆತ ನನ್ನ ಬಳಿ ಹೇಳಿದ್ದು ಇಷ್ಟೆ...

"ನೋಡೊ... 
ಬದುಕಿನ ಬಗೆಗೆ  ಬಹಳ ತಲೆ ಕೆಡಿಸಿಕೊಂಡವನು ನೀನು...
ನನ್ನ ಬದುಕಿನ ಬಗೆಗೆ  ನನಗಿಂತ ನಿನಗೆ  ಹೆಚ್ಚಿನ ಕಾಳಜಿ ಇದೆ..
ನನ್ನ  ಸ್ವಭಾವ ಎಲ್ಲದೂ ನಿನಗೆ ಗೊತ್ತು...
ನಾನು ಮದುವೆಯಾಗುವ ಹುಡುಗಿಯನ್ನು ನೀನೇ  ನಿರ್ಧರಿಸು...


ನಾನು ಕಣ್ಮುಚ್ಚಿ  ತಾಳಿ ಕಟ್ಟುತ್ತೇನೆ..."

ನನ್ನ ಗೆಳೆಯನ ಹೆಂಡತಿಯನ್ನು ನಾನೇ  ಹುಡುಕಿ  ನಿಶ್ಚಯ ಮಾಡಿಕೊಟ್ಟೆ...
ಅವನ  ಮನೆಯವರು  ನೋಡಿ "ಸಂಬಂಧ " ಚೆನ್ನಾಗಿದೆ ಅಂತ ನಿರ್ಣಯಿಸಿದ್ದರು..
ನಾನು  ಹೋಗಿ..
ಹುಡುಗಿ ನೋಡಿ...  ನನ್ನ ಗೆಳೆಯನಿಗೆ  " ಯೋಗ್ಯವಾದ "  ಹುಡುಗಿ ಅಂತ  ಒಪ್ಪಿಗೆ  ಕೊಟ್ಟು ಬಂದಿದ್ದೆ...

ಆತ ಕಣ್ಮುಚ್ಚಿ ತಾಳಿಕಟ್ಟಲಿಲ್ಲ..!

ಮದುವೆಗೆ ಮೊದಲು  ಅವಳ ಸಂಗಡನೂ.. 
ಸಿನೇಮಾ....
ಪಾರ್ಕು.. ಲಾಜ್ ಅಂತೆಲ್ಲ ಓಡಾಡಿದ..!

ವಿಷಯ ಏನು ಗೊತ್ತಾ..?

ಮದುವೆಯಾಗಿ ನಾಲ್ಕೈದು ತಿಂಗಳಾಗಿದೆ...

ಇದೀಗ ತಾನೆ  ಅವನನ್ನು ಏರ್ ಪೋರ್ಟ್ ಗೆ ಬಿಟ್ಟು ಬರುತ್ತಿದ್ದೇನೆ...
ನನ್ನ ಜೊತೆ  ಅವನ ಮಡದಿಯೂ ಇದ್ದಾಳೆ..

ಅವನು  ತುರ್ತಾದ ಕೆಲಸದ ಮೇಲೆ ಜಪಾನ್ ದೇಶಕ್ಕೆ ಹೋಗುವ ಕೆಲಸ ಬಂತು..

"ನೋಡೊ... 
ನನಗೇನೂ ಚಿಂತೆಯಿಲ್ಲ...
ಒಂದುವಾರ ಅಷ್ಟೆ ವಾಪಸ್ಸು ಬಂದು ಬಿಡ್ತೇನೆ...
ನೀನಿರ್ತಿಯಲ್ಲ.. ಅವಳಿಗೆ  ದೈರ್ಯ ಹೇಳು..."

ನಾನು ಒಳ್ಳೆಯವನಲ್ಲವೇ..
ಇಂಥಹ  ಸಂದರ್ಭಗಳನ್ನು ನಿಭಾಯಿಸಲು  ಖುಷಿಯಾಗುತ್ತದೆ..
ಒಳ್ಳೇ ತನದ ಬದುಕು ಸಾರ್ಥಕ ಅನ್ನಿಸುವಂಥಹ ಸಂದರ್ಭಗಳು...

ನಾನು ಕಾರ್  ಡ್ರೈವ್ ಮಾಡುತ್ತಿದ್ದೇನೆ...

ಅವಳನ್ನೊಮ್ಮೆ ಗಮನಿಸಿದೆ...

ಮನದಲ್ಲಿ ಕೆಟ್ಟ ಯೋಚನೆ ಬರುತ್ತಿದೆಯಾ...?
ಒಂಟಿ ಹೆಣ್ಣು...! 
ಯಾರೂ ಇಲ್ಲದ ಸಂದರ್ಭ...!

ಇದು ಕೆಟ್ಟದ್ದು ಅನ್ನಿಸಿದರೂ... 
ಬೇಡ ಅನ್ನಿಸಿದ್ದರೂ...ಹಿತವಾಗಿತ್ತು....

ತುಂಬಾ ಚೆಲುವೆ...!
ಕಣ್ಣು...  ಮೂಗು..!.
ಕೆನ್ನೆಯ ಮೇಲೆ ಆಗಾಗ ಇಳಿದು ಬರುವ  ಕೂದಲು...!
ಹರವಾದ.... ಬಿಳುಪಾದ...
ನುಣುಪಾದ  ಗಲ್ಲ......!

ವಾಹ್  !!.....

ಛೇ..!! 
ಹೀಗೆಲ್ಲ ನೋಡ ಬಾರದು.. ವಿಚಾರವನ್ನೂ  ಮಾಡಬಾರದು...

"ನಿಮ್ಮ ಗೆಳೆಯ ಕಾಲೇಜುದಿನಗಳಲ್ಲಿ ಹೇಗಿದ್ದ...?’

ಆಕೆ ನನ್ನ  ನೋಟವನ್ನೇ ಗಮನಿಸುತ್ತ ಕೇಳಿದಳು...

" ನನ್ನ ಗೆಳೆಯ ತುಂಬಾ ತುಂಟನಾಗಿದ್ದ..
ಯಾವಾಗಲೂ ಗೆಳೆಯರ ಗುಂಪು  ಅವನ ಹಿಂದೆ ಇರ್ತಿತ್ತು...."

".. ಹೆಣ್ಣುಮಕ್ಕಳು...?..? "

ಬಹಳ ತೀಕ್ಷ್ಣವಾಗಿತ್ತು ಅವಳ ಪ್ರಶ್ನೆ...

ನಾನು ತಡವರಿಸಿದೆ...

"ನನಗೆ ಗೊತ್ತು... ನನ್ನವರು ಹೆಣ್ಣುಮಕ್ಕಳ ಸಂಗಡ ಓಡಾಡುತ್ತಿದ್ದರು...
ಅವರೇ..ನನ್ನ ಬಳಿ ಹೇಳಿಕೊಂಡಿದ್ದಾರೆ..."

"ಹೌದಾ...? !!..
ಅಪಾರ್ಥ ಮಾಡಿಕೊಳ್ಳ ಬೇಡಿ... ಆತನದು ಬರಿ.. ಸ್ನೇಹ ಅಷ್ಟೆ..
ಪ್ರೀತಿ.., ಪ್ರೇಮ  ಏನೂ ಇಲ್ಲವಾಗಿತ್ತು...."

"ಆ ವಯಸ್ಸಿನ  ಪ್ರಿತಿ, ಪ್ರೇಮಗಳ   ಅರ್ಥ  ನನಗೆ ಚೆನ್ನಾಗಿ ಗೊತ್ತು..."

ನಾನು  ತಲೆ ಕೆರೆದು ಕೊಂಡೆ...
ಈ ಮಾತನ್ನು ಎಲ್ಲಿಯವರೆಗೆ  ಅರ್ಥ ಮಾಡಿಕೊಳ್ಳ ಬಹುದು ಅಂತ ...

ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವದೇ.. ಕಷ್ಟ...

ಗೆಳೆಯನಿದ್ದಾಗ ಈ ಥರಹದ ಮಾತುಗಳನ್ನು ಯಾವತ್ತೂ ಆಡಿಯೇ ಇಲ್ಲ...
ಮಾತು ಬಹಳ ಕಡಿಮೆ...

ಒಂದು  ಮುಗಳ್ನಗು.. 
ಚಂದದ ನೋಟದಲ್ಲಿ ಮಾತು ಮುಗಿಸಿ ಬಿಡುತ್ತಿದ್ದಳು...

" ಹೋಗ್ಲಿ ಬಿಡಿ...
ಆಗ ಅಂಥಾದ್ದೇನೂ ನಡೇದಿಲ್ಲ.. 
ಈಗ  ಚೆನ್ನಾಗಿದ್ದನಲ್ಲ...
ನಿಮ್ಮಿಬ್ಬರ ಪ್ರೀತಿ, ಪ್ರೇಮನೋಡಿ ಖುಷಿಯಾಗುತ್ತದೆ..."

" ಥ್ಯಾಂಕ್ಯೂ......
ನೀವು ಯಾಕೆ ಮದುವೆಯಾಗಿಲ್ಲ...?"

" ನಾನು  ಬಯಸುವಂಥಹ  ಹುಡುಗಿ ಸಿಕ್ಕಿಲ್ಲ..."

"ಅಥವಾ... 
ನೀವು ಬಯಸಿದ ಹುಡುಗಿ  ನಿಮ್ಮನ್ನು ಬಯಸಲಿಲ್ಲ..... ಅಲ್ಲವಾ?"

"ಓಹ್...!
 ನನ್ನ ಗೆಳೆಯ  ಅದನ್ನೂ ನಿಮಗೆ ಹೇಳಿಬಿಟ್ಟಿದ್ದಾನೋ...
ಹೋಗ್ಲಿ ಬಿಡಿ..ಅದೆಲ್ಲ ಈಗ ಯಾಕೆ..?"

"ನೀವು ಗಂಡಸರು ....
ನಿಮ್ಮ  ಆಸೆ.. ಬಯಕೆಗಳ ಬಗೆಗಷ್ಟೇ ವಿಚಾರ ಯಾಕೆ ಮಾಡುತ್ತೀರಿ...?
ಪ್ರತಿ ಹೆಣ್ಣಿಗೂ ...
ಬೇಕು  ಬೇಡಗಳಿರುತ್ತವೆ.. 
ಅದರ ಬಗೆಗೆ ಯಾಕೆ ವಿಚಾರ ಮಾಡೋದಿಲ್ಲ...?"

ನನಗೆ ಆಶ್ಚರ್ಯವಾಯಿತು...

"ಯಾಕೆ...? 
ನಿಮಗೆ  ಏನಾದರೂ... ಬೇರೆ   ಬೇಕು  ಬೇಡಗಳಿದ್ದವೆ..? "

" ಇದ್ದವೋ... ಇಲ್ಲವೋ...
ಈಗ ಹೇಳಿ  ಏನು ಪ್ರಯೋಜನ...?
 ಒಂದು  ನೆಲೆ...
ಒಂದು  ಬದುಕು ಸಿಕ್ಕಿದೆ... 
ಬಾಳ ಬೇಕಲ್ಲ... 
ಇಲ್ಲಿಯೇ.. ಖುಷಿ ಕಾಣ ಬೇಕಲ್ಲ..."

ಅಂದರೆ... ..
ಇವಳಿಗೆ  ಮನಸ್ಸಿಲ್ಲದ ಮದುವೆಯಾ?

ಅಷ್ಟರಲ್ಲಿ ಮನೆ ಬಂತು...

ನಾನು ಅವಳನ್ನು ಬಿಟ್ಟು ಕೊಡಲು ಹಾಲ್  ತನಕ ಬಂದೆ...

 "ನೋಡಿ... 
ಹೇಗಿದ್ದರೂ.. ಪಕ್ಕದ ಮನೆಯಲ್ಲೇ ಇರ್ತಿನಲ್ಲ...
ಏನಾದರೂ ಬೇಕಿದ್ದಲ್ಲಿ ಫೋನ್ ಮಾಡಿ... ತಕ್ಷಣ ಬಂದುಬಿಡುತ್ತೇನೆ..."

"ಊಟ ಮಾಡಿ ಹೋಗಿ... 
ಬೇಗನೇ.. ಊಟಕ್ಕೆ  ತಯಾರು ಮಾಡುತ್ತೇನೆ...
ಒಬ್ಬಳೆ ಊಟ ಮಾಡುವದು ಬಲು ಬೋರು..."

ನನಗೂ  ಸರಿಯೆನ್ನಿಸಿತು....

ಹಾಲಿನಲ್ಲಿ ಕುಳಿತೆ... 
ಆಕೆ ಟಿವಿ  ಆನ್ ಮಾಡಿ  ರಿಮೋಟ್  ಕೊಟ್ಟಳು...

ಕಣ್ಣು ಟಿವಿ ನೋಡುತ್ತಿದ್ದರೂ  ಮನ ಎಲ್ಲೋ  ಓಡಾಡುತ್ತಿತ್ತು...
ಮನದಲ್ಲಿ ಕೆಟ್ಟ ಆಲೋಚನೆಗಳು...
ಹೇಳಲಾಗದ ದ್ವಂದ್ವಗಳು...

ಈ ಕೆಟ್ಟ ಮನಸ್ಸು,, ಆಲೋಚನೆಗಳು..  ಖುಷಿ ಕೊಡುವದಂತೂ ನಿಜ...

ಆಕೆ ಲಗುಬಗೆಯಿಂದ ಅಡುಗೆ  ರೆಡಿ ಮಾಡಿ  ಊಟಕ್ಕೆ ಕರೆದಳು...

ಅವಳು...
ಅವಳು ಸೀರೆ ಉಟ್ಟ ರೀತಿ....
ಇಷ್ಟವಾಗ ತೊಡಗಿತು.....

ನಾನು  ಡೈನಿಂಗ್ ಟೇಬಲ್  ಮುಂದೆ ಕುಳಿತೆ...

ಇಂಥಹ ಸಂದರ್ಭ  ಮತ್ತೆ ಸಿಗಲಿಕ್ಕಿಲ್ಲ...
ಮನದಲ್ಲಿ ಏನೇನೋ  ಯೋಚನೆಗಳು...

ಹೊಸ ಅನುಭವಕ್ಕಾಗಿ  ಸಂದರ್ಭವೇ ನನ್ನನ್ನು ಹುಡುಕಿ ಬಂದಂತಿತ್ತು...

" ನಿಮ್ಮನ್ನು ಬಹಳ ದಿನಗಳಿಂದ ಒಂದು ಪ್ರಶ್ನೆ ಕೇಳಬೇಕಿತ್ತು..."

ನನ್ನ ಹೃದಯ ಬಡಿತ ಜೋರಾಯಿತು.. 

"  ಕೇಳಿ... "

"ನೀವು  ...
ನಿಮ್ಮ ಗೆಳೆಯನಿಗಾಗಿ ಹೆಣ್ಣು ನೋಡಲು ಯಾಕೆ  ಬಂದದ್ದು...?
ಗೆಳೆಯನಿಗೆ ಬರಲಿಕ್ಕೆ ಏನಾಗಿತ್ತು...?"

"ಸ್ನೇಹ... ಪ್ರೀತಿ...
ನಮ್ಮಿಬ್ಬರ ಗೆಳೆತನ.. 
ಇಬ್ಬರಿಗೂ   ಒಬ್ಬರಿಗೊಬ್ಬರ ಋಣದ ಬದುಕು..
ನಂಬಿಕೆ... ವಿಶ್ವಾಸ.. 
ನಮ್ಮ ಗೆಳೆತನವೇ  ಹಾಗಿದೆ.."

ಈ ಮಾತುಗಳನ್ನು  ಹೇಳಲು ಬಲು ಕಷ್ಟವಾಯಿತು...

ಈ ಸಂದರ್ಭಕ್ಕೆ  ಬೇಡ ಎನಿಸುತ್ತಿದ್ದರೂ  ನಾಲಿಗೆ  ಗೊತ್ತಿಲ್ಲದಂತೆ ಮಾತು  ಆಡುತ್ತಿತ್ತು...

"ಇದು  ಒಂದು ಥರಹದ ಮೋಸವಲ್ಲವೆ...?
"ತಂಗಿಯನ್ನು ತೋರಿಸಿ  ಅಕ್ಕನನ್ನು ಮದುವೆ ಮಾಡಿದರು" ಅನ್ನುವ ಗಾದೆಯ ಹಾಗಾಯ್ತು ಅಲ್ಲವೆ?"

ನಾನು ಅವಕ್ಕಾದೆ...!!
ಏನಿದರ ಅರ್ಥ..!!.. ??...

"ನಾನು ಮೊದಲೇ  ಹೇಳಿ ಬಂದಿದ್ದೆನಲ್ಲ... 
ಮದುವೆ  ನನಗಲ್ಲ... ನನ್ನ ಗೆಳೆಯನಿಗೆ ಅಂತ..."

" ನೋಡಿ...
ನಾನು ಮೊದಲಿನಿಂದಲೂ ಸ್ವಲ್ಪ ಮಾತಲ್ಲಿ ಜೋರು..
ಮದುವೆಯಾದ ಮೇಲೆ  ಸ್ವಭಾವ ಬದಲಿಸಿಕೊಳ್ಳ ಬೇಕಲ್ಲ..
ಹಾಗಾಗಿ  ಸುಮ್ಮನಿರುವ ಅನಿವಾರ್ಯ.. 
ಸುಮ್ಮನಿರುತ್ತೇನೆ...
ಇವತ್ತು ಸಂದರ್ಭ ಕೂಡಿ ಬಂದಿದೆ..
ಕೇಳಿ ಬಿಡುತ್ತೇನೆ..

ನೀವು ನನ್ನ ಸ್ಥಿತಿಯಲ್ಲಿದ್ದು ವಿಚಾರ ಮಾಡಿ..

ನನ್ನ ಭವಿಷ್ಯದ ಪ್ರೀತಿ...
ನನ್ನ ಮುಂದಿನ ಬಾಳಿನ ಸಂಗಾತಿ ನನ್ನನ್ನು ನೋಡಲು ಬರುವದಿಲ್ಲ...
ನನ್ನ ಅಂದವನ್ನು..ಚಂದವನ್ನು...
ಬೇರೊಬ್ಬರು ಬಂದು  ನಿರ್ಣಯಿಸುತ್ತಾರೆ...
ನನ್ನ ಬದುಕಿನ  ಕನಸನ್ನು ಮದುವೆಗೆ ಮೊದಲು..
ಕೊನೆ ಪಕ್ಷ ನೋಡುವಂಥಹ ಸಂದರ್ಭ ಕೂಡ ನನಗಿರುವದಿಲ್ಲ..."

ನನಗೆ  ಪಿಚ್ಚೆನಿಸಿತು...
ಅವಳ ಮಾತುಗಳ ಸತ್ಯ ನನ್ನನ್ನು ಇರಿಯಿತು...

 ಅವಳೇ.. ಮತ್ತೆ ಮಾತನಾಡಿದಳು..

"ನೀವು ...
ನಿಮ್ಮ ಗೆಳೆಯನಿಗಾಗಿ ನನ್ನನ್ನು ನೋಡಿದರೂ...
ನನ್ನನ್ನು ನೋಡಿದ್ದು ...
ನಿಮ್ಮ ಕಣ್ಣು...
ನಿಮ್ಮ ಮನಸ್ಸು... 
ನಿಮಗೆ "ಇಷ್ಟವಾಗಿದ್ದಕ್ಕೆ"  ನನ್ನನ್ನು ಗೆಳೆಯನಿಗಾಗಿ  ಸಿಲೆಕ್ಟ್ ಮಾಡಿದ್ದೀರಿ ಅಲ್ಲವಾ?" 

ನಾನು  ತಡವರಿಸಿದೆ...

"ಸ್ಸಾರಿ... 
ಆ  ಸಂದರ್ಭದಲ್ಲಿ  ನಮ್ಮ ಗೆಳೆತನ ಬಿಟ್ಟು ಬೇರೆ ಯೋಚನೆ  ಬರಲಿಲ್ಲ..."

ಊಟ  ಸೊಗಸಾಗಿತ್ತು..
ದಿನಾ  ನನ್ನ  ಕೈ ಅಡುಗೆಯ ಸಪ್ಪೆ ಊಟ ನೆನಪಾಯಿತು..
ಆದರೆ.. 
ಆಸ್ವಾದಿಸುವಂಥಹ   ಸವಿಯುವಂಥಹ  ವಾತಾವರಣ ಅಲ್ಲಿರಲ್ಲಿಲ್ಲ...

ಇಬ್ಬರದೂ ಊಟವಾಯಿತು...

"ಸರಿ  ...
ನಾನಿನ್ನು ಹೊರಡುವೆ... ಬಾಗಿಲು ಹಾಕಿಕೊಳ್ಳಿ.."

"ಪ್ಲೀಸ್....
 ನೀವು ಈ ರಾತ್ರಿ ಇಲ್ಲಿಯೇ ಮಲಗಿ..."

"ಬೇಡಾ... ರಿ.." 
ನಾನು  ತೊದಲಿದೆ...
ಮತ್ತೆ ಹೇಳಲಾಗದ ಆಸೆ ಗರಿಗೆದರಿತು...!!

"ಪ್ಲೀಸ್.. ಪ್ಲೀಸ್...
ನನಗೆ  ಬಹಳ ಹೆದರಿಕೆ.."

ಅವಳ ಬೊಗಸೆ ಕಣ್ಣುಗಳಿಗೆ  ಇಲ್ಲವೆನ್ನಲಾಗಲಿಲ್ಲ....

ದೇವರೇ..
ಏನಾದರೂ  ಘಟಿಸಲಿ... !!
ಏನಾದರೂ.....ಆಗಿ ಹೋಗಲಿ....! 
ಅನ್ನುತ್ತಿತ್ತು  ಒಳ ಮನಸ್ಸು...!

ಮನಸ್ಸು  ಬಯಸಿದ್ದು ಅದನ್ನೇ ಆದರೂ... ಬೇಡವೆನ್ನುವ  ಮನಸ್ಸಲ್ಲಿ ಒಪ್ಪಿದೆ...

"ನನಗೆ  ಹಾಸಿಗೆ  ತರಲು ಸಹಾಯ ಮಾಡಿ... 
ದಯವಿಟ್ಟು ಬನ್ನಿ..."
ನಾನು  ಅವಳನ್ನು ಹಿಂಬಾಲಿಸಿದೆ...

ನಾವು ಇಬ್ಬರೇ.. !!
ಈ ರಾತ್ರಿ... ಈ ಮನೆಯಲ್ಲಿ...! 
ಒಂಥರಾ... ಪುಳಕ...! ಅಂಜಿಕೆ..  !!

ಮನದ ಹುಚ್ಚು ಆಲೋಚನೆಗಳಿಂದ  ಒಂಥರಾ ಥ್ರಿಲ್ಲಾಯಿತು....

ಹತ್ತಿ ಹಾಸಿಗೆ ಭಾರವಿತ್ತು...ನಾನು ಅದನ್ನು ಎತ್ತುವಾಗ  ಅವಳು  ಸನಿಹ ಬಂದಳು...

ಅವಳ ಮೈಯಿಂದ  ಒಂದು ಥರಹದ ಸುವಾಸನೆ...!
ಮತ್ತೇರಿಸುವಂತಿತ್ತು...

ಭಾವನೆಗಳು ಕೆರಳ ತೊಡಗಿತು... ಹಾಲಿಗೆ ಬಂದು  ಇಳಿಸಲು ನೋಡಿದೆ...

ಸಹಾಯಕ್ಕೆ  ಅವಳೂ ಬಂದಳು..
ಮತ್ತೆ  ಹತ್ತಿರ ಬಂದಳು... ಅವಳ ಸ್ಪರ್ಷದಲ್ಲಿ ರೋಮಾಂಚನೆಯಿತ್ತು..

ಅವಳು ಬೆಡ್ ಶೀಟ್ ಹಾಸ ತೊಡಗಿದಳು.....
ಬಗ್ಗುವಾಗ ನನ್ನನ್ನೇ ನೋಡುತ್ತಿದ್ದಳು...!

ಆ ಬೊಗಸೆ ಕಣ್ಣುಗಳಲ್ಲಿ  ಆಸೆ ಇದೆಯಾ?
ಏನಿದು ನೋಟ...?
ಏನಿದರ ಅರ್ಥ...? ನನ್ನನ್ನು  ಬಾ  ಎನ್ನುತ್ತಿದೆಯಾ...?

ಹೆಣ್ಣಿನ ಈ ಮೌನ ಭಾಷೆ ಅರ್ಥವಾಗುವಂತಿದ್ದರೆ...?

ನನ್ನ  ಕಲ್ಪನೆಯಾ  ಇದೆಲ್ಲಾ...?  ನಾನು ಸ್ವಲ್ಪ ಧೈರ್ಯ ಮಾಡಿ ಬಿಡಲಾ...?

" ನೀವು ಮಲಗಿ... ಟಿವಿ  ಆಫ್ ಮಾಡ್ತೀನಿ...
ಮತ್ತೆ ಏನಾದರೂ ಬೇಕಾ...?"

ನಾನು ಸ್ವಲ್ಪ ಮುಂದೆ ಹೋಗಿ ಅವಳ ಕೈ ಹಿಡಿದು ಕೊಳ್ಳ ಬೇಕು ಅಂದುಕೊಂಡೆ....

ಅಥವಾ  ತಬ್ಬಿಕೊಂಡು ಬಿಡಲಾ...?

ಅವಳು ಟಿವಿ  ಆಫ್ ಮಾಡಿದಳು...

ನನ್ನ ಗಮನ ಟಿವಿ ಕಡೆ ಸರಿಯಿತು...

ಟಿವಿ ಪಕ್ಕದಲ್ಲಿ ನನ್ನ ಗೆಳೆಯನ ಮದುವೆ  ಫೋಟೊ...!

ಅವರಿಬ್ಬರ ಹೆಗಲ ಮೇಲೆ ಕೈ  ಹಾಕಿ  ನಿಂತಿರುವ  ನನ್ನ ಫೋಟೊ...!!

ನನಗೆ ಏನನ್ನಿಸಿತೊ ... !

"ನೀವು  ...
ಬೆಡ್ ರೂಮ್ ಬಾಗಿಲು ಹಾಕಿಕೊಳ್ಳಿ... 
ಹೆದರಿಕೆ ಬೇಡ...
ನಾನಿದ್ದೇನೆ... ಧೈರ್ಯವಾಗಿರಿ..."

ಅವಳು ನನ್ನನ್ನೊಮ್ಮೆ ನೋಡಿ...
ಲೈಟ್ ಆಫ್ ಮಾಡಿ ...
ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು...

ಹೇಗೋ  ... ..  ಬೆಳಗಾಯಿತು.. .. ..

ನಾನು ಏಳುತ್ತಿರುವ ಹಾಗೆ ಅವಳು  ಘಮಘಮಿಸುವ ಕಾಫೀ ತಂದಿದ್ದಳು...

" ರಾತ್ರಿ  ನಿದ್ದೆ ಬಂತಾ...? "

ನಾನು ತಲೆಯಾಡಿಸಿದೆ...

" ನೀವು ...
ತುಂಬಾ  ಒಳ್ಳೆಯವರು ಕಣ್ರೀ...!
ನನ್ನ  ಯಜಮಾನ್ರು  ನಿಮ್ಮ ಬಗೆಗೆ   ಏನು  ಹೇಳಿದ್ರು  ಗೊತ್ತಾ  ?  "

" ನನ್ನ  ಬಗೆಗಾ ? 
ಏನು  ಹೇಳೀದ್ದ.. ? "

"ನೋಡು ..
ಕೆಲವೊಮ್ಮೆ ನನಗೆ .. ನನ್ನ ಮೇಲೇ ...ನಂಬಿಕೆ ಇರುವದಿಲ್ಲ...
ಆದರೆ ...
ನನ್ನ ಗೆಳೆಯ ಹಾಗಲ್ಲ...
ಸ್ಪಟಿಕದಂಥಹ  ಮನುಷ್ಯ...!!
ಶುದ್ಧ ಹೃದಯದ ಸ್ನೇಹ ಆತನದು...!!

ನಿಜ...
ನನ್ನವರು ಹೇಳಿದ ಹಾಗೆ .. " ನೀವು ತುಂಬಾ ಒಳ್ಳೆಯವರು ಕಣ್ರೀ..."

ನಾನು ತಲೆಯಾಡಿಸಿದೆ....



ಇದು   "  ಕಥೆ  "





(ಒಳ್ಳೆಯ ಪ್ರತಿಕ್ರಿಯೆಗಳಿವೆ...
ದಯವಿಟ್ಟು  ಪ್ರತಿಕ್ರಿಯೆಗಳನ್ನೂ ಓದಿ....)