Thursday, October 27, 2011

ಬಸ್ ನಂಬರ್ "ಇಪ್ಪತ್ತೆಂಟು..ಮೂವತ್ತೆರಡು "..... ಹುಕ್ಲಕೈಗೆ ಹೋಗ್ತದೆ......!!


ಶಾರೀ ಮನೆಗೆ ಬಂದಾಗ ಮಧ್ಯಾಹ್ನ ಹನ್ನೊಂದು ಗಂಟೆ...


ಭರ್ಜರಿ ಸ್ವಾಗತ ಸಿಕ್ಕಿತು...


ಪುಟಾಣಿಯೊಬ್ಬಳು ತಂಬಿಗೆಯಲ್ಲಿ ನೀರಿಟ್ಟು ನಮಸ್ಕರಿಸಿ ..
ಒಳಗೆ ಓಡಿದಳು...
ಶಾರೀಗೂ ಖುಷಿಯಾಗಿತ್ತು...


ಗಣಪ್ತಿ ಬಾವ ...
ಬಾಯಲ್ಲಿದ್ದ ಎಲೆ ಅಡಿಕೆಯನ್ನು ಮತ್ತೊಂದು ಪಕ್ಕಕ್ಕೆ ಇಟ್ಟುಕೊಂಡು ಮಾತನಾಡಿಸಿದ..


"ಪ್ರಕಾಶು..
ಬೆಂಗಳೂರಿನ ಕಡೆ ಏನು ವಿಶೇಷ?
ನಮ್ಮ ರಾಜಕೀಯದವರಿಗೆ ಏನಾಗಿದೆ ಮಾರಾಯಾ ?
ಎಲ್ಲರೂ ಜೈಲಿಗೆ ಹೋಗ್ತಿದ್ದಾರೆ... ಹಗರಣ ಮಾಡ್ತಿದ್ದಾರೆ.."


"ಹೌದು ಗಣಪ್ತಿ ಬಾವ..
ನಾವು ಓಟು ಹಾಕಿದ ಜನರ ಬಗೆಗೆ ಬೇಸರ ಆಗುತ್ತದೆ..
ದುಃಖವೂ ಆಗುತ್ತದೆ..."


ಗಣಪ್ತಿ  ಭಾವನೂ ಅದಕ್ಕೆ ತಲೆ ಹಾಕಿದ..
ಅಷ್ಟರಲ್ಲಿ ಶಾರಿ ಬಾಯಿ ಹಾಕಿದಳು..


" ಪ್ರಕಾಶು...
ಇನ್ನೊಂದು ಬೇಜಾರು ಸಂಗತಿ ಇದೆ...
ನಾನೂ ದಿನಾಲೂ ಪೇಪರ್ ಓದ್ತಿನಲ್ಲಾ..


ನಮ್ಮ ದೇಶದಲ್ಲಿ ಬೇಜಾರು ಮಾಡ್ಕೊಳ್ಳೋಕೆ... 
ದುಃಖ ಪಟ್ಕೊಳ್ಳೋಕೆ..
ಎಲ್ಲದಕ್ಕೂ ಜಾತಿ ಬೇಕು...


ಇನ್ನೊಂದು ವಿಷಯ ಗೊತ್ತಾ?


ಅರೋಪ ಮಾಡ್ಳಿಕ್ಕೆ..
ಆರೋಪ ಸಮರ್ಥನೆ ಮಾಡಿಕೊಳ್ಳಲಿಕ್ಕೆ  ಜಾತಿ ಜಾತಿ ಬೇಕಾಗ್ತದೆ....


ನಿನ್ನೆ ಟಿವಿ ಚಾನೆಲ್ಲಿನಲ್ಲಿ "ತಿರುಪತಿ ತಿಮ್ಮಪ್ಪ ದೇವರು" ಯಾವ ಜಾತಿಯವ ಅಂತ ಚರ್ಚೆ ನಡೆಯುತ್ತಿತ್ತು... !!


ಜಾತ್ಯಾತೀತ ದೇಶದಲ್ಲಿ ಜಾತಿ ಮೊದಲಿಗೆ ಬೇಕು..
ಎಲ್ಲ ಜಾತಿ, ಮಠ, ಧರ್ಮ ಮೊದಲು...
ನಮ್ಮ ದೇಶ ಆಮೇಲೆ...
ಅಂಬೇಡ್ಕರ್ರು ಇದ್ದಿದ್ರೆ ಯಾಕಾದ್ರೂ ಸಂವಿಧಾನ ಮಾಡಿಬಿಟ್ಟೆ ಅಂತಿದ್ರೇನೊ !!.."


ಗಣಪ್ತಿ ಬಾವ  ಬಾಯಲ್ಲಿದ್ದ ಎಲೆ ಅಡಿಕೆಯನ್ನು ಇನ್ನೊಂದು ಪಕ್ಕಕ್ಕೆ ಸರಿಸಿದ..


ಅಷ್ಟರಲ್ಲಿ ಮನೆಯ ಫೋನ್ ರಿಂಗಾಯಿತು...


ಗಣಪ್ತಿ  ಭಾವ ಫೋನ್ ತಗೊಂಡ... ಮಾತಾಡಿದ..
ಫೋನ್ ಇಟ್ಟು ಶಾರಿಗೆ ಹೇಳಿದ..


"ಶಾರೀ..
ಇವತ್ತಿನ ಬೆಳಗಿನ ಬಸ್ಸಿಗೆ ..
 ನಮ್ಮ ಮಗಳು ಅಳಿಯ "ಹುಕ್ಲಕೈ ಬಸ್ಸಿಗೆ "  ಹೊರ್ಟಿದ್ದಾರಂತೆ...
ಊಟಕ್ಕೆ ರೆಡಿ ಮಾಡು..."


"ಮಧ್ಯಾಹ್ನ ಬಂದಿದ್ರೆ ಚೆನ್ನಾಗಿತ್ತು...
ಸಾಯಂಕಾಲ ಎಷ್ಟು ಹೊತ್ತಿಗೆ ಬರ್ತಾರೋ.. !
ಏನು ಕಥೆಯೋ... !"


ಶಾರಿ ಬೇಸರ ಪಟ್ಟುಕೊಂಡಳು..


ನನ್ನ ಮಡದಿಗೆ ಆಶ್ಚರ್ಯ..


" ಬೆಳಗಿನ  ಬಸ್ಸಿಗೆ ಬರ್ತಿದ್ದಾರಲ್ಲ.. 
ಇದೀಗ ಇನ್ನೂ ಹನ್ನೊಂದು ಗಂಟೆ..
ಎಷ್ಟೇ ತಡ ಆದರೂ ಮಧ್ಯಾಹ್ನ ಬಂದೇ ಬರ್ತಾರಲ್ವಾ?"


"ಇಲ್ಲಾ.. ಮಾರಾಯ್ತಿ...
ನಮ್ಮೂರಿನ ಬಸ್ಸಿಗೆ ಹೊರಡುವ.. 
ತಲುಪುವ ಸಮಯ  ಯಾರಿಗೂ ಹೇಳಲಿಕ್ಕೆ ಆಗೋದಿಲ್ಲ...


ಆದರೆ..
ಬಸ್ ನಿಲ್ದಾಣದಿಂದ ಹೊರಟಮೇಲೆ.. 
ಎಷ್ಟೇ ಹೊತ್ತಾದರೂ ನಮ್ಮೂರಿಗೆ ಬಂದೇ ಬರ್ತದೆ..
ಇದು ಮಾತ್ರ ಗ್ಯಾರೆಂಟಿ.."


ಈಗ ಮತ್ತೊಮ್ಮೆ  ಆಶ್ಚರ್ಯ  ಪಡುವ ಸರದಿ ನನ್ನದು..!


"ಅಷ್ಟೇ ಅಲ್ಲ ಪ್ರಕಾಶು...


ಎಲ್ಲೋ ವರ್ಷಕ್ಕೊಮ್ಮೆ ...
ನಮ್ಮೂರ ಬಸ್ಸು ಸರಿಯಾದ ಸಮಯಕ್ಕೆ ಬಂದು ಬಿಟ್ಟರೆ..
ನಮಗೆಲ್ಲರಿಗೂ ಏನೋ ಬೇಸರ...


ನಮ್ಮೂರಲ್ಲಿ ಪ್ರತಿನಿತ್ಯ ಬೆಟ್ಟಿಂಗ್ ಕೂಡ ನಡೆಯುತ್ತದೆ...!


ಬೆಳಿಗ್ಗೆ ಹನ್ನೊಂದು ಗಂಟೆ ಬಸ್ಸು ...
ರಾತ್ರಿ ಎಷ್ಟು ಗಂಟೆಗೆ ತಲುಪುತ್ತದೆ ಅಂತ... !!!


ಒಂಥರಾ "ಓಸೀ" ಆಟ ಇತ್ತಲ್ಲ... ಅದೇ ತರಹದ  ಬೆಟ್ಟಿಂಗ್ ಈಗಲೂ ಇದೆ... !!"


ಗಣಪ್ತಿ  ಭಾವ ಮತ್ತೊಂದು ರೌಂಡ್ ಎಲೆ ಅಡಿಕೆ ಬಾಯಿಗೆ ಹಾಕಿದ..


"ಪ್ರಕಾಶು..
ಒಂದು ಮಜಾ ವಿಷಯ ಗೊತ್ತಾ?
ಕಳೆದ ತಿಂಗಳು ನಮ್ಮೂರ " ಹುಕ್ಲಕೈ" ಬಸ್ಸು ಕಳೆದು ಹೋಗಿತ್ತು...


ಅದೂ ಬಸ್ ನಿಲ್ದಾಣದಲ್ಲಿದ್ದ ಬಸ್ಸು...!!


ಹಗಲು ಹೊತ್ತಿನಲ್ಲಿ !!


ಆಮೇಲೆ ಹದಿನೈದು ದಿನದ ನಂತರ ಸಿಕ್ಕಿತ್ತು...!!"


ನನ್ನ ತಲೆಯಲ್ಲಿ  ಅಳಿದುಳಿದ  ಹದಿನೈದು ಕೂದಲೂ ..
ಉದುರಿ ಹೋದ ಅನುಭವ ನನಗಾಯ್ತು !!


"ಏನು ಗಣಪ್ತಿ  ಬಾವಯ್ಯಾ...?
ಬಸ್ಸನ್ನು ಕದ್ದುಕೊಂಡು ಹೋದ್ರಾ..?"


"ಅದೊಂದು ದೊಡ್ಡ ಕಥೆ...
ಬುಡದಿಂದ ಹೇಳ್ತೀನಿ ಕೇಳು..."


ನನ್ನಾಕೆ.. 
ಮತ್ತು ಆಶೀಷ್ ಕಿವಿ ನೆಟ್ಟಗೆ ಮಾಡಿಕೊಂಡು ಇನ್ನೂ ಹತ್ತಿರ ಬಂದರು...


" ಆ ದಿನ.. ಮಂಗಳವಾರ ..
ಪಟ್ಟಣದಲ್ಲಿ ಸಂತೆ... ಸಿಕ್ಕಾಪಟ್ಟೆ ಜನ...


ಬೆಳಿಗ್ಗೆ ಹನ್ನೊಂದು ಗಂಟೆಗೆ ಬಿಡುವ ಬಸ್ಸು ಮಧ್ಯಾಹ್ನ ಒಂದು ಗಂಟೆಯಾದ್ರೂ ಬಿಡಲಿಲ್ಲ...
ಜನರು.. ಬಸ್ಸು ಹತ್ತೋದು.. ಇಳಿಯೋದು ಮಾಡುತ್ತ ಇದ್ರು.."


"ಬಸ್ಸು ಹಾಳಾಗಿತ್ತೇನೋ.. ಅಲ್ವಾ?"


"ಇಲ್ಲಾ.. ಮಾರಾಯಾ...
ಬಸ್ಸು ಬಸ್ಸು ನಿಲ್ದಾಣದಲ್ಲೇ ಇತ್ತು...
ಕಂಡಕ್ಟರ್ ಕೂಡ ಅಲ್ಲೇ ಒಡಾಡ್ತಾ ಇದ್ದ...
ಡ್ರೈವರ್ ಕೂಡ ಅಲ್ಲೇ ಟೀ ಕುಡಿತಾ ಇದ್ದ...


ಎಷ್ಟೇ ಹೊತ್ತಾದ್ರೂ ಬಸ್ಸು ಬಿಡಲಿಲ್ಲ.. ಜನರು ಹೋಗಿ ಕಂಪ್ಲೇಂಟು ಮಾಡಿದರು...


ಈಗ ಅಲ್ಲಿನ ಆಫೀಸರ್ರುಗಳಿಗೆ ಎಚ್ಚರ ಆಯ್ತು... 
ಮೈಕಿನಿಂದ ಜೋರಾಗಿ ಅನೌನ್ಸ್ ಮಾಡಿದರು...


" ಬಸ್ ನಂಬರ್  "ಇಪ್ಪತ್ತೆಂಟು... ಮೂವತ್ತೆರಡು"  ...
ಹುಕ್ಲಕೈಗೆ.. ಹೋಗ್ತದೆ...
ಕಾನಸೂರು.. 
ಅಜ್ಜಿಬಳ್ಳು..ಯಡಳ್ಳಿ ಹೋಗುವವರು ಇಪ್ಪತ್ತೆಂಟು ಮುವತ್ತೆರಡು ಬಸ್ಸನಲ್ಲಿ ಕುಳಿತುಕೊಳ್ಳಿ.."


ಜನ ಓಡಿದರು...


ಅಲ್ಲಿ  ಬಸ್ಸೇ... ಇರಲಿಲ್ಲ... !!


ಎಲ್ಲರಿಗೂ ಆಶ್ಚರ್ಯ... !!


"ವಾಪಸ್ಸು ಡಿಪೋಕ್ಕೆ  ತೆಗೆದು ಕೊಂಡು ಹೋದ್ರೇನೋ.. ಅಲ್ವಾ?"


"ಇಲ್ಲಾ ಮಾರಾಯಾ... !!
ಮ್ಯಾನೇಜರ್ರು ಡಿಪೋಗೆ ಫೋನ್ ಮಾಡಿದರು..


"ನಾವು ನಿಲ್ದಾಣದಿಂದ ಬಸ್ಸು ತಂದಿಲ್ಲ ಎನ್ನುವ ಉತ್ತರ ಸಿಕ್ಕಿತು.! "


"ಹಾಗಾದರೆ ಬಸ್ಸು ಎಲ್ಲಿ ಹೋಯ್ತು...?"


" ಎಲ್ಲರಿಗೂ ಕುತೂಹಲವಾಯ್ತು...


ಅಲ್ಲಿನ ಸಿಬ್ಬಂದಿ ಅಕ್ಕಪಕ್ಕದ ರಸ್ತೆ..
ಓಣಿ.. ಗಲ್ಲಿ...
ಎಲ್ಲವನ್ನೂ ಹುಡುಕಿದರು.. ಬಸ್ಸು ಸಿಗಲಿಲ್ಲ...!!


"ಹುಕ್ಲಕೈ ಬಸ್ಸು ಕಳುವಾಗಿ ಹೋಯ್ತಂತೆ...!!!!! .."


ಇದು ಬಹಳ ದೊಡ್ಡ ವಿಷಯವೇ ಆಗಿ ಹೋಯ್ತು... !!
ಮರುದಿನ ಅಲ್ಲಿನ ಲೋಕಲ್ ಪತ್ರಿಕೆಗಳಲ್ಲಿ ಮುಖ ಪುಟದ ಸುದ್ಧಿ ಆಯ್ತು.. !!


" ಗಣಪ್ತಿ ಭಾವಾ... ಬಸ್ಸು ಎಲ್ಲಿ ಹೋಯ್ತು...?"


"ಬಹುಷಃ ...
ಬಸ್ ನಿಲ್ದಾಣದ ಮ್ಯಾನೇಜರ್ರು ಪೋಲಿಸ್ ಕಂಪ್ಲೇಂಟು ಕೊಟ್ರು ಅಂತ ಅನಿಸ್ತದೆ...
ಪೋಲಿಸರೂ ಬಂದರು..."


ಆಶೀಷ್ ಗೆ ಕೆಟ್ಟ ಕುತೂಹಲ ಜಾಸ್ತಿ ಆಯ್ತು...


"ಗಣಪ್ತಿ ಮಾಮಾ.. 
ಪೋಲಿಸರು ಬಸ್ಸನ್ನು ಹುಡುಕಿದ್ರಾ...?"


"ಇಲ್ಲಾ.. ಪುಟ್ಟಾ...
ಎಲ್ಲಿ ಅಂತ ಹುಡುಕ್ತಾರೆ...?
ಅದೂ ಮಟ ಮಟ ಮಧ್ಯಾಹ್ನ ...!
ಬಸ್ ನಿಲ್ದಾಣದಲ್ಲಿದ್ದ ಬಸ್ಸು ..
ಕಳುವಾಗಿ ಹೋಯ್ತು ಅಂದ್ರೆ ಏನು ಕಥೆ ?
ಬಸ್ಸಿಗೆ ಸಂಬಂಧ ಪಟ್ಟವರಿಗೆಲ್ಲ ಅವಮಾನ ಅಲ್ವಾ?"


" ಏನು ಮಾಡಿದರು.....?"


"ಯಾರಾದ್ರೂ ಏನು ಮಾಡ್ತಾರೆ?..


ಹೀಗೆ ಹತ್ತು ದಿನ ಕಳೆಯಿತು...


ಕಳೆದು ಹೋಗಿದ್ದು  ಸಿಗಲಿಕ್ಕೆ ಅದೇನು ಎಮ್ಮೆ ನಾ? 
ಹಸು ನಾ?


ಒಟ್ಟಿನಲ್ಲಿ  ಬಸ್ಸು ಸಿಗಲಿಲ್ಲ... !!
ಎಲ್ಲರ ಬಾಯಲ್ಲೂ ಒಂದೇ ಮಾತು ... !


" ಹುಕ್ಲಕೈ ಬಸ್ಸು ಕಳುವಾಗಿ ಹೋಯ್ತಂತೆ !!"


"ಮುಂದೆ ಏನಾಯ್ತು,...?"


"ಒಂದು ದಿನ ಪಕ್ಕದ ಊರಿನ   "ಅಟ್ಲಕಾಯಿ ಹೆಗಡೆ" ಸಿರ್ಸಿಗೆ ಹೋಗಿದ್ದ..."


"ಏನದು "ಅಟ್ಲಕಾಯಿ ಹೆಗಡೆ..".. ?.. !!!...


"ಅಯ್ಯೋ ಮಾರಾಯಾ..
ಅದು ಅವನ ಅಡ್ಡ ಹೆಸರು...!!


ಆತ ಯಾವುದೇ ವಿಷಯ ಇರಲಿ...
ಚೆನ್ನಾಗಿ ನೋರೆ ಬರುವ ಹಾಗೆ ಮಸೆದು ಮಸೆದು ...
ತಿಕ್ಕಿ.. ತಿಕ್ಕಿ...
ವಿಚಾರ ಮಾಡ್ತಾನೆ.. ನೊರೆ ತಂದು ಇಡ್ತಾನೆ...


ಹಾಗಾಗಿ ನಾವೆಲ್ಲ ಅವನಿಗೆ  "ಅಟ್ಲಕಾಯಿ ಹೆಗಡೆ" ಅಂತ ಕರೆಯೋದು..."


"ಸರಿ... ಮುಂದೆ ಏನಾಯ್ತು...?"


"ಈ ಅಟ್ಲಕಾಯಿ ಹೆಗಡೆಗೆ  ಯಾರೋಹೇಳಿದ್ರು .. 
"ಹುಕ್ಲಕೈ ಬಸ್ಸು ಕಳುವಾಗಿದೆ.. ಇನ್ನೂ ಸಿಕ್ಕಿಲ್ಲ" ಅಂತ..."


ಆತ ಸೀದಾ ಬಸ್ ನಿಲ್ದಾಣದ ಮ್ಯಾನೇಜರ್ರ ಬಳಿ ಹೋಗಿ ಹೇಳಿದ..


"ನಮ್ಮೂರ ಶಾಲೆ ಮನೆ ಹತ್ರ ...
ಒಂದು ಬಸ್ಸು ಬಂದು ಸುಮ್ನೆ ನಿಂತುಕೊಂಡಿದೆ......
ಹತ್ತು ದಿನದಿಂದ  ಆ ಬಸ್ಸು ಅಲ್ಲೇ ಇದೆ..!!..."


ಮ್ಯಾನೇಜರ್ರಿಗೆ ಹೊಟ್ಟೆ ಒಡೆದು ಹೋಗುವಷ್ಟು ಸಂತೋಷ ಆಯ್ತು..
ಅವನನ್ನು ತಬ್ಬಿ ಮುದ್ದಾಡುವಷ್ಟು ಖುಶಿಆಯ್ತು... !!


"ನೋಡಿ.. 
ದಮ್ಮಯ್ಯ...
ಇಲ್ಲಿ ನಮ್ಮ ಮರ್ಯಾದೆ ಮೂರುಕಾಸಿಗೆ ಮಾರಾಟ ಆಗ್ತ ಇದೆ..


ಇಲ್ಲಿ ಬಂದವರೆಲ್ಲ ..


"ಹುಕ್ಲಕೈ  ಬಸ್ಸು ಸಿಗ್ತಾ?
ಹುಕ್ಲಕೈ ಬಸ್ಸು ಸಿಗ್ತಾ..?' 


ಅಂತ ಕೇಳಿ ಕೇಳಿ ನನ್ನ ತಲೆ ತಿಂತಾ ಇದ್ದಾರೆ...!


ಎಲ್ಲಾದ್ರೂ ನೀರು ಇರುವ ಹೊಳೆಗೆ ಹಾರಿಬಿಡೋಣ ಅಂತ ಅನ್ನಿಸ್ತಾ ಇತ್ತು...!
ದಯವಿಟ್ಟು ಬನ್ನಿ .. 
ಎಲ್ಲಿದೆ ಅಂತ ತೋರಿಸಿ..."


ಮ್ಯಾನೇಜರ್ರು ಪೋಲಿಸರಿಗೆ ಫೋನ್ ಮಾಡಿದರು...


ಪೋಲಿಸರನ್ನು ನೋಡಿ ಅಟ್ಲಕಾಯಿ ಹೆಗಡೇರಿಗೆ ಹೆದರಿಕೆ ಆದ್ರೂ ..
ಪೋಲಿಸ್ ಜೀಪು ಹತ್ತಿದರು...


ಇಲ್ಲಿ ಶಾಲೆ ಮನೆ ಹತ್ತಿರ ಬಂದು ನೋಡಿದರೆ...


"ಹುಕ್ಲಕೈ ಬಸ್ಸು"  ತಣ್ಣಗೆ ನಿಂತುಕೊಂಡಿದೆ.....!!


"ಯಾರು ಈ ಬಸ್ಸುನ್ನು ತಂದು ಇಲ್ಲಿ ನಿಲ್ಲಿಸಿದ್ದಾರೆ...? !!..’


ಎಲ್ಲರೂ ತಲೆ ಕೆರೆದು ಕೊಂಡರು...


ಬಹಳ ವಿಚಾರ ಮಾಡಿ ಅಟ್ಲಕಾಯಿ ಹೆಗಡೆ ಹೇಳಿದ..


"ಸರ್ರಾ...
ಇದು ನಮ್ಮ ಕೇಡಿಭಟ್ರ ಕೆಲ್ಸ ಆಗಿರಬಹುದು...
ಅವರೊಬ್ಬರಿಗೆ ಡ್ರೈವಿಂಗು ಬರ್ತದೆ...
ತುಂಬಾ ಒಳ್ಳೆಯ ಜನ..
ಆದರೆ.. ತುಂಬಾ ಕೊಪಿಷ್ಟರು... 
ಹುಶಾರಿಯಿಂದ ಮಾತನಾಡಬೇಕು..
ತಿಳಿತಾ..?"


ಸರಿ...


ಎಲ್ಲರೂ ಕೇಡಿ ಭಟ್ರ ಮನೆಗೆ ಹೋದರು...


ಕೇಡಿ ಭಟ್ರು..ಎಮ್ಮೆಗೆ ಸ್ನಾನ ಮಾಡಿಸ್ತ ಇದ್ದರು...


" ಕೇಡಿ ಭಟ್ರೆ...
ಒಂದು ವಿಷಯಾ..ಬೇಜಾರು ಮಾಡ್ಕೋಬೇಡಿ...
ಹುಕ್ಲಕೈ ಬಸ್ಸು ತಂದಿದ್ದು ನೀವಾ...?"


ಕೇಡಿ ಭಟ್ರಿಗೆ ಎಲ್ಲಿಲ್ಲದ ಕೆಂಡಾ ಮಂಡಲ  ಕೋಪ ಬಂತು...!!


"ಹೌದ್ರಿ... !!
ನಾನೇ... ತಂದಿದ್ದು...!  
ಏನೀಗಾ..?...
ಏನು ಮಾಡ್ತೀರ್ರೀ..ಈಗಾ .?


ಮಾತನಾಡಲಿಕ್ಕೆ ಬಂದವರು ಕಂಗಾಲಾದರು...!
ಕಣ್ಣು ಕೆಂಪಗೆ ಮಾಡಿಕೊಂಡು  ಭಟ್ರು ಇನ್ನೂ ಜೋರಾಗಿ ಹೇಳಿದ್ರು...


" ಅಲ್ರೀ....
 ಅವತ್ತು ಹನ್ನೊಂದು ಗಂಟೆಗೆ ಬಿಡೋ ಬಸ್ಸನ್ನು ..
ಒಂದು ಗಂಟೆ ಆದ್ರೂ ಬಿಡಲಿಲ್ಲ..!


ಕಂಡಕ್ಟರ್ ಕೇಳಿದ್ರೆ "ಡ್ರೈವರ್ ರಿಪೋರ್ಟ್ ಮಾಡ್ಲಿಲ್ಲ" ಅಂತಾರೆ..


ಡ್ರೈವರ್ರು ಕೇಳಿದ್ರೆ... "ನನಗೆ ಯಾರೋ ಹೇಳಿಲ್ಲ ಅಂತಾರೆ.."...


ಮ್ಯಾನೇಜರ್ರು ಕೇಳಿದ್ರೆ "ಬಸ್ಸು ಬಂದಿದ್ದ ಬಗೆಗೆ ಏನೂ ಗೊತ್ತಿಲ್ಲ" ಅಂತ ಹೇಳ್ತಾರೆ...


ನನಗೆ ಸಿಟ್ಟು ಬಂತು...


ಬಸ್ಸನ್ನು ಇಲ್ಲಿ ತಂದಿಟ್ಟಿದ್ದೇನೆ...


ನನ್ನ ಮೇಲೆ ಪೋಲಿಸ್ ಕೇಸ್ ಹಾಕ್ತೀರಾ...? 
ಹಾಕಿ...
ನಾನೂ ಕಾನೂನು ಓದಿದ್ದೇನೆ ..
ಒಂದು ಕೈ ನೋಡ್ಕೋತೇನೆ..."


ಎಂದು ಅಬ್ಬರಿಸಿದ...


ಅಷ್ಟರಲ್ಲಿ  ಅಟ್ಲಕಾಯಿ ಹೆಗಡೆ.. ಮ್ಯಾನೆಜರ್ರಿಗೆ ಕಿವಿಯಲ್ಲಿ ಕಿಸಿಪಿಸಿ ಮಾತನಾಡಿದ..


"ಮ್ಯಾನೆಜರ್ರೆ..
ಇವರಿಗೆ ನಮ್ಮೂರಲ್ಲಿ ಭಾರಿ ಜನ ಬೆಂಬಲ ಉಂಟು..
ಹುಷಾರಿ...
ಇವರನ್ನು ಎದುರು ಹಾಕ್ಕೊಬೇಡಿ..."


ಬಸ್ ಮ್ಯಾನೇಜರ್ರಿಗೆ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ...
ಬಹಳ ವಿಚಾರ ಮಾಡಿ...


"ಆಗಿದ್ದು ಆಗಿ ಹೋಯ್ತು...
ಭಟ್ರೆ... 
ಇನ್ನು ಮುಂದೆ ಹೀಗೆ ಮಾಡಬೇಡಿ"


 ಅಂತ.. ಬಸ್ಸು ತಗೊಂಡು  ಬಂದ್ರು.... "


ನಮಗೆಲ್ಲರಿಗೂ ಹೊಟ್ಟೆ ಹುಣ್ಣಾಗುವಷ್ಟು ನಗು...!!
ತಡೆಯಲಿಕ್ಕೆ ಆಗ್ಲಿಲ್ಲ...!


ಆಶೀಷ್ ಗೆ ಒಂದು ಅನುಮಾನ.. !!


"ಗಣಪ್ತಿ  ಮಾಮಾ.....
ಕೇಡಿ ಭಟ್ರು  ಅಂದ್ರೆ ಏನದು?
ಅದೆಂಥಾ ವಿಚಿತ್ರ ಹೆಸರು...?.. !!.."


ಗಣಪ್ತಿ ಬಾವ ಬಾಯಿತುಂಬಾ ಎಲೆ ಅಡಿಕೆ ಇಟ್ಟುಕೊಂಡೇ ನಗೆಯಾಡಿದ...


" ಅಯ್ಯೋ.. 
ಅದು ಅವರ  ಹೆಸರು...!
" ಕೃಷ್ಣಯ್ಯ  ದಶರಥ  ಭಟ್ " ಅಂತ..


ಅದನ್ನು ಶಾರ್ಟ್ ಆಗಿ ಇಂಗ್ಲಿಷಿನಲ್ಲಿ  "ಕೆ.ಡಿ. ಭಟ್ " ಅಂತ ಕರಿತಾರೆ...
ಅವರು ಕೇಡಿ ಅಲ್ಲ..
ತುಂಬಾ ತಂಬಾ.. ಒಳ್ಳೆ ಮನುಷ್ಯ...! 
ಊರಿನಲ್ಲಿ ಎಲ್ಲರಿಗೂ ಬೇಕಾದವರು...!


ಇನ್ನೂ ಒಂದು ವಿಷ್ಯಾ ಹೇಳ್ತೀನಿ ಕೇಳು..
ಕೇಡಿ ಭಟ್ರ ತಮ್ಮನ ಹೆಸರು "ಭಾಸ್ಕರ ದಶರಥ ಭಟ್"...


ಇಂಗ್ಲಿಷಿನಲ್ಲಿ  "ಬೀಡಿ  ಭಟ್" ಅಂತ..


ಆ ಮನುಷ್ಯನಿಗೆ ತಂಬಾಕು ಚಟ ಇಲ್ಲವೇ.. .. ಇಲ್ಲ....!! .."


ಮತ್ತೊಮ್ಮೆ ನಮಗೆಲ್ಲ ನಗು ಉಕ್ಕಿತು.....





(ಪ್ರೀತಿಯ ಓದುಗ ಬಂಧುಗಳಿಗೆ 
ಬೆಳಕಿನ ಹಬ್ಬದ ಶುಭಾಶಯಗಳು... )....


ಈ ಬಸ್ಸಿಗೆ ಸಂಬಂಧ ಪಟ್ಟ ಇನ್ನು ಕೆಲವು ಸಂಗತಿಗಳಿವೆ...!
ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ....




ಆಗ..
ಬಸ್ ನಿಲ್ದಾಣಗಳಲ್ಲಿ ಇದೆ ರೀತಿ..
ಇದೆ ಧ್ವನಿಯಲ್ಲಿ..
ಇದೆ ಧಾಟಿಯಲ್ಲಿ ಬಸ್ ಬಗೆಗೆ ವಿವರಗಳನ್ನು ಕೊಡುತ್ತಿದ್ದರು..

ಇದನ್ನು ಓದಿದವರು ನಮ್ಮ ಪ್ರೀತಿಯ "ಗಂಗಣ್ಣ"...

Thursday, October 20, 2011

ನೀವು ...ನಾ ಖರೆ ಹೇಳಿದ್ರೂ ಹೂಂ ಅಂತಿರಿ..! ಸುಳ್ಳು ಹೇಳಿದ್ರೂ ಹೂಂ ಅಂತಿರ್ರಿ.!!."


ಕುಷ್ಟ ಬೆಂಗಳೂರಿಗೆ ಬಂದಿದ್ದ..
ಒಂದು ವಾರ ಆಗಿತ್ತು...


ಅವನ ಸಂಬಂಧಿಕರೊಬ್ಬರ ಹೊಟೆಲ್ ಮಾಗಡಿ ರೋಡಿನಲ್ಲಿದೆ..
ಅಲ್ಲಿಗೆ ಬಂದ ಕುಷ್ಟನನ್ನು ಅವರು ನಮ್ಮನೆಗೆ ಕರೆತಂದಿದ್ದರು..


ಯಾಕೋ ಕುಷ್ಟನ ಮುಖ ಬಾಡಿತ್ತು..


"ಏನಾಯ್ತು ಕುಷ್ಟ..?
ಬೆಂಗಳೂರು ಇಷ್ಟ ಆಗ್ಲಿಲ್ವಾ?"


"ಇಲ್ರ... 
ಇದು ಎಂಥಾ ಪಟ್ಟಣವ್ರಾ?...
ಗಲೀಜು..
ರೋಗ ಹಿಡಿಸ್ಕಳ್ಳಿಕ್ಕೆ..!


ನಮ್ಮೂರಲ್ಲೂ ಗಲೀಜು ಇದೇರ್ರಾ.. 


ಆದ್ರೆ ಅದರಿಂದ..ಗೊಬ್ಬರ ಆಗ್ತದೆ ..!
ಇಲ್ಲಿನ ಗಲೀಜಿಂದ ರೋಗ ಹಿಡಿತದೆ...!


ಇಲ್ಲಿ ಹ್ಯಾಂಗೆ ಇರ್ತೀರಿ ಪಕ್ಕೇಶ್ ಹೆಗ್ಡೇರ್ರೇ..?


"ಹೋಗ್ಲಿ ಬಿಡು ಮಾರಾಯಾ..
ನಮಗೆ ಇದು ರೂಢಿ ಆಗಿಬಿಟ್ಟಿದೆ..
ಇವತ್ತು ರಾಜಕುಮಾರನ ಸಣ್ಣ ಮಗನ ಸಿನೇಮಾ ನೋಡೋಣ.."


" ದೊಡ್ಡ ನಮಸ್ಕಾರ ಪಕ್ಕೇಶಣ್ಣಾ...!!


ಅದು ಎಂಥಾ ಸಿನೇಮಾರ್ರಾ...?


ಬರಿ ಬುರ್ನಾಸು ಪಿಲ್ಮು..."


ನನಗೆ ಆಶ್ಚರ್ಯವಾಯ್ತು.. !


"ನಾನು ಆ ಸಿನೇಮಾ ನೋಡಿದೇರ್ರಾ...


ಅರ್ಧ ಸಿನೇಮಾ ನೋಡುವ ಹೊತ್ತಿಗೆ..
ನಾನು ದಡ್ಡ ..
ನನ್ನ ತಲಿ ಒಳಗೆ ಬರಿ  ಆಲೂ ಗಡ್ಡೆ ಇದೆ ..
ಬೇರೆ ಏನೂ ಇಲ್ಲ ಅಂತ  ಅನ್ನಿಸ್ಲಿಕ್ಕೆ ಶುರುವಾಗಿ ಬಿಡ್ತು.....


ನನ್ನ ಬಗ್ಗೆ ನನಗೆ ಪಾಪ ಅನ್ನಿಸಲಿಕ್ಕೆ ಶುರುವಾತ್ರ...


ಪೂರ್ತಿ ನೋಡಿದ್ರೂ ತಲೆ ಬುಡ ಗೊತ್ತಾಗ್ಲಿಲ್ರ...


ನಿಮಗೆ ಇನ್ನೊಂದು ವಿಷ್ಯ ಗೊತ್ತಾ?"


"ಏನು?"


"ರಾಜಕುಮಾರನ  ದೊಡ್ಡ ಮಗನ ಸಿನೇಮಾನೂ ನೋಡಿದೇರ್ರಾ...
ಜೋಗಯ್ಯ..."


"ಹೇಗಿದೆ...?"


"ತಲಿ ಕೆಟ್ಟು ಹೋತ್ರಾ..!!


ಈಗಿನ ಸಿನೇಮಾದಾಗೆ  "ಕಥಿನೇ.." ಇರೋದಿಲ್ರಾ.....
ಆದ್ರೆ..
" ಶ್ಟೋರಿ ".. ಇರ್ತದೆ...
ಅದು ನಮಗೆ ಅರ್ಥ ಆಗೂದಲ್ರ...!!.."


"ಹೀಗಂದ್ರೆ ಏನು ಮಾರಾಯಾ.."


"ಅವರಿಗೆ ಪಿಲ್ಮು  ಮಾಡಿ.. 
ದುಡ್ಡು ಹಾಳು ಮಾಡ್ಲಿಕ್ಕೆ ಶ್ಟೋರಿ ಇರ್ತದೆ...!


ನಮಗೆ ಸಿನೆಮಾ  ನೋಡ್ಲಿಕ್ಕೆ "ಕಥಿ" ಇರೋದಿಲ್ರಾ...!


ಅಲ್ರಾ.. ಪಕ್ಕೆಶ್  ಹೆಗ್ದೆರ್ರೆ..


ಈ ರಾಜಕುಮಾರನ ಮಕ್ಕಳಿಗೆ ...
ಹೊಡೆದಾಟ ಮಾಡ್ಲಿಕ್ಕೂ ಬರೂದಿಲ್ರಾ...!


ಅವ್ರು ಅಂತ ಅಲ್ರಾ...
ಈಗಿನ ಸಿನೆಮಾದವ್ರಿಗೆ ಹೊಡೆದಾಟ ಮಾಡ್ಲಿಕ್ಕೆ ಬರೂದಿಲ್ರಾ..!!..."


"ಹಾಗೆಲ್ಲ ಅನ್ನಬೇಡ ಕುಷ್ಟಾ..
ನಾನು ಪುನೀತ್ ಅಭಿಮಾನಿ...
ಅವರ ಬಾಡಿ ನೋಡಿದಿಯಾ... ಮಸ್ತ್ ಫೈಟ್ ಮಾಡ್ತಾರೆ ಮಾರಾಯಾ.."


"ಎಂಥಾ ಅಭಿಮಾನೀರ್ರಾ...?


ನೋಡಿ..
ನೀವು...
ನಾ ಖರೆ ಹೇಳಿದ್ರೂ ಹೂಂ ಅಂತಿರಿ..!
ಸುಳ್ಳು ಹೇಳಿದ್ರೂ ಹೂಂ ಅಂತಿರ್ರಿ..!.."


"ಏನು ಹಾಗಂದ್ರೆ?.."


"ಇವ್ರು..
ಒಬ್ಬಂವಂಗೆ ಹೊಡಿಬೇಕಾದ್ರೆ ..
ಮೈತುಂಬಾ ಮೈ ತುಂಬಾ ಗಾಯ ಮಾಡ್ಕೋತಾರ್ರೆ..!!
ಸುಸ್ತಾಗಿ ಬಿಡ್ತಾರ್ರೆ..


ನೋಡ್ಲಿಕ್ಕೆ ಆಗೂದಿಲ್ರಾ.. !
ಮುಖದ ತುಂಬಾ ರಕ್ತ...ಗಾಯ...!!


ಪಾಪ ಅನ್ನಿಸ್ತದರ್ರಾ...!


" ಮಾರಾಯಾ...
ನಿನಗೆ ಅದೆಲ್ಲಾ ಅರ್ಥ ಆಗೋದಿಲ್ಲಾ ಬಿಡು...
ಮೊದಲಿಗಿಂತ ಈಗ ಫೈಟಿಂಗು ಚೆನ್ನಾಗಿ ತೋರಸ್ತಾರೆ.."


"ನೀವ್...  ಏನೇ ಹೇಳ್ರ...
ಅದೇ.. ನಮ್ಮ ರಾಜ್ಕುಮಾರ ಇದ್ದ..


ಸಿನೇಮಾದಲ್ಲಿ  ಹೊಡೆದಾಟದಾಗೆ ಹೆಂಗೆ ಪೈಟಿಂಗು ಮಾಡ್ತಿದ್ದಾ ಅಂತೀರ್ರೀ...?..


"ಹೇಗೆ...? "


ನಮ್ಮ ರಾಜಕುಮಾರ ಕೈ ಎತ್ತೋದ್ರೊಳಗೆ...
ಅಲ್ಲಿ  ನಾಲ್ಕು ಜನ ಬಿದ್ದು ಹೋಗ್ತಿದ್ರು...!


ಶಂಕರ ಗುರು ಪಿಲ್ಮು ನೋಡ್ರಾ...!!


ಹತ್ತು ಹದಿನೈದು ಜನಕ್ಕೆ ಒಬ್ನೆ ರಾಜಕುಮಾರ ಹೊಡಿತಿದ್ದಾನ್ರಾ...!


ಹದಿನೈದು ಜನಕ್ಕೆ ಹೊಡೆದ್ರೂ.. 
ಒಂದು ಕೂದಲೂ ಅಲುಗಾಡ್ತಿಲಿಲ್ರ..


ಹಾಕ್ಕೊಂಡಿದ್ದ ಅಂಗಿ ಮಣ್ಣು ಆಗ್ತಿರಿಲಿಲ್ರ..


ಆ ಥರ ಪೈಟು ಇವರ ಹತ್ರ ಬರೂದಿಲ್ರ.."


" ನೀನು ರಾಜಕುಮಾರ ಅಭಿಮಾನಿ ಅನ್ನು.."


"ಹೌದ್ರಾ..
ಮಯೂರ ಪಿಲ್ಮು ನೋಡ್ರಾ...


ಎಲ್ಲಾದ್ರೂ ಅಪರೂಪಕ್ಕೆ ರಾಜಕುಮಾರ್ಗೆ ರಕ್ತ ಬಂದು ಬಿಟ್ರೆ...
ಹೊಡೆದವನ ಸಾಯಿಸುವ ಹಾಗೆ ಹೊಡೆದು ಬಿಡ್ತಿದ್ದಾ...


ನಮ್ಮ ರಾಜಕುಮಾರ..
ಅಂತಾವ್ರು ಈಗ ಯಾರಿದ್ದಾರ್ರಾ..?..


ಅವನ ಮಕ್ಕಳು ಇನ್ನೂ ಹೊಸಬ್ರು..
 ರೂಢಿ ಇಲ್ರ..
ಮುಂದೆ ಹೊಡೆದಾಟ ಕಲ್ತುಕೋತಾರೆ ಬಿಡಿ.."


"ಕುಷ್ಟ..
ಮೆಜೆಷ್ಟಿಕ್ ಕಡೆ ಹೋಗುವಾ..
ಅಲ್ಲಿ ರಾಜಕುಮಾರನ ಸಿನೇಮಾ ಇರಬಹುದು..."


"ಪಕ್ಕೆಶ್  ಹೆಗ್ದೆರ್ರೆ..
ಈ ಟ್ರಾಫಿಕ್ ಕಾಟ ಬಾಳ ಮಾರಾಯ್ರೆ..


ಯಾವ ನಮೂನಿ ಗಾಡಿ.. ?
ಅದೆಷ್ಟು ಜನರ್ರಾ...?


ಜಗತ್ತಿನ ಜನ ಎಲ್ಲ ಬೆಂಗಳೂರು ಸೇರ್ಕೋಬಿಟ್ಟಿದಾರ್ರಾ ..!!


ಇವತ್ತು ಹೊರಟ್ರೆ ನಾಳೆ ಮುಟ್ತೀವಿ ಅಷ್ಟೆ..."


"ಕುಷ್ಟಾ ನಿನಗೆ ಗೊತ್ತೇನೊ.. ?
ಮೆಟ್ರೋ ಟ್ರೇನ್ ಆಗ್ತ ಇದೆ... ಬೆಂಗಳೂರಿನಲ್ಲಿ  !!
ಆಗ ಟ್ರಾಫಿಕ್ ಕಡ್ಮೆ ಆಗ್ತದೆ.."


"ನಾನು ಬಂದು ಒಂದು ವಾರ ಆತ್ರಾ..
ಎಲ್ಲ ಓದಿ.. 
ನೋಡಿ ತಿಳ್ಕೊಂಡೆ.. ಈ ಬೆಂಗಳೂರು ಎಂಥದ್ದು ಅಂತ..."


ಅಲ್ರಾ...
ಅದು ಯಾವ ಪುಣ್ಯಾತ್ಮ ಈ ಹೆಸರು ಈಟ್ಟಿದ್ದಾನೊ ಗೊತ್ತಿಲ್ರ..!


"ನಮ್ಮ ಮೆಟ್ರೊ" ಅಂತ...!!.."


ನನಗೆ ಸ್ವಲ್ಪ ಖುಷಿ ಆಯ್ತು...


"ಚೆನ್ನಾಗಿದೆ ಅಲ್ವಾ.. ಹೆಸರು...?
ನಮ್ಮ ಮೆಟ್ರೋ...!!"


"ಪಕ್ಕೇಶ್ ಹೆಗ್ಡೆರ್ರೇ.. 
ನಿಮಗೊಂದು ವಿಷ್ಯಾ ಹೇಳ್ತೀನ್ರ.....


ಬೆಂಗಳೂರ್ಗೆ ತೆಲಗಿನವರು ಬಂದ್ರು...
ಹಿಂದಿ ಜನ  ಬಂದ್ರು...


ತಮಿಳ್ರು ಬಂದ್ರು...


ಬಂದ್ರು.. ಸರಿ..


ಬಂದವ್ರು ಸುಮ್ನೆ ಇದ್ದಾರ್ರಾ...?..


"ಏನು  ಮಾಡಿದ್ರು ?.."


"ಅಲ್ಲಿಂದ ಬಂದವರು  ನಮ್ಮವರನ್ನ ತುಳಿದ್ರು.. !
ಮೆಟ್ಟಿದ್ರು...!!


ಇಲ್ಲಿನ  ಕನ್ನಡಿಗ್ರು...
ಕನ್ನಡ ಭಾಷೆನಾ ತುಳಿದ್ರು...!


ಇನ್ನು " ಮೆಟ್ರೊ "  ಬರ್ಲಿ...


ಇನ್ನಷ್ಟು  ಹೊರಗಿನ ಜನ ಬರ್ತಾರೆ...
ನಮ್ಮವರನ್ನ ತುಳಿತ್ತಾರ್ರೆ...
ಮೆಟ್ಟುತ್ತಾರೆ...

ನಮ್ಮವರು ಆಗ್ಲೂ  ಸುಮ್ನೆ ಇದ್ರು..
ಈಗ್ಲೂ ಸುಮ್ನೆ ಇದ್ದಾರೆ..


ಹಾಗಾಗಿ   ನಾವು ಕನ್ನಡಿಗರು ...
"ನಮ್ಮನ್ನು ಮೆಟ್ರೊ...!!.."
ನಮ್ಮನ್ನು ತುಳಿರ್ರೋ.. !!.." 
ಅಂತ ಹೇಳ್ತಾ ಇದ್ದೇವ್ರಾ...


"ನಮ್ಮ ಮೆಟ್ರೊ" ಅಂತ ಚೆನ್ನಾಗಿ ಹೆಸರು ಇಟ್ಟಿದಾರೆ ಬಿಡಿ...!!


" ಬನ್ನಿ.. ಎಲ್ರೂ ಬನ್ನಿ..ನಮ್ಮನ್ನು ಮೆಟ್ಟಿ ಬಿಡಿ.."


 ಅಂತ ನಾವೆ ಅವರನ್ನ ಕರಿತಾ ಇದ್ದಿವಿ...!!.."


ನನಗೆ ಏನು ಹೇಳ ಬೇಕು ಅಂತ ಗೊತ್ತಾಗಲಿಲ್ಲ....


 ಪಕ್ಕನೆ ನಗು ಬಂತು...... 
ಜೋರಾಗಿ ನಕ್ಕುಬಿಟ್ಟೆ...


"ನಮ್ಮ ಮೆಟ್ರೋ.. 
ನಮ್ಮನ್ನು ಮೆಟ್ರೋ..ನಮ್ಮನ್ನು ಇನ್ನೂ ಮೆಟ್ರೋ..!! .."



(ಕುಷ್ಟನ ಮಾತು ವಿಚಿತ್ರ ..
ಅರ್ಥ ಆಗುತ್ತದೆ ಆಲ್ವಾ?..)

Saturday, October 1, 2011

.............ಹೀಗೆ .


ನಿರ್ಧಾರಗಳು ಯಾಕೆ ಬದಲಾಗುತ್ತವೆ?


ಉತ್ತರ ಬಲು ಕಷ್ಟ...


ನನ್ನಪ್ಪ ಊರಿಂದ ಬರುವಾಗ ಹೇಳಿದ್ದರು...


"ಮಗಾ..
ಪಟ್ಟಣದಲ್ಲಿ ಇರ್ತೀಯಾ...
ಹದಿಹರೆಯದ ವಯಸ್ಸು... ಮನಸ್ಸು ಹಿಡಿತದಲ್ಲಿರೋದಿಲ್ಲ..


ಮೊದಲಬಾರಿಗೆ ಊರಿಂದ... ಅಪ್ಪ,ಅಮ್ಮರಿಂದ ದೂರ ಇರ್ತಿದ್ದೀಯಾ..
ಒಂಟೀತನ ಕಾಡಬಹುದು...


ಚಟಕ್ಕೆ ..
ಹೆಣ್ಣುಮಕ್ಕಳ ಕಡೆಗೆ  ಮನಸ್ಸು ಎಳೆಯ ಬಹುದು..


ನೀನು ಎಚ್ಚರಿಕೆಯಲ್ಲಿರಬೇಕು..."


ನಾನೂ ಗಟ್ಟಿಯಾಗಿ ನಿರ್ಧರಿಸಿದ್ದೆ... ಅಪ್ಪಹೇಳಿದಂತೆ ನಡೆಯಬೇಕು ಅಂತ...


ಆದರೆ...
ಆ ಹುಡುಗಿ....
ಸ್ವಲ್ಪ ಕುಳ್ಳಿ... 
ಕಣ್ಣಲ್ಲೇ ನಗುವ..ಚಂದದ ತುಟಿಗಳಿಗೆ ಮರುಳಾಗಿಬಿಟ್ಟೆ...


ಅರಳು ಹುರಿದಂತೆ ಅವಳು ಮಾತನಾಡುವಾಗ ನಾನೋ ಎಲ್ಲೋ ಕಳೆದು ಹೋಗುತ್ತಿದ್ದೆ...


ಅವಳ ಧ್ವನಿಯೂ ಇಂಪು...


ಅವಳು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಹಾಡಿದ್ದಳು...


"ನೀ...ನಿರಲು ಜೊತೆಯಲ್ಲಿ.. ಬಾಳೆಲ್ಲ ಹಸಿರಾದಂತೆ..."


ವಾಹ್ !!


ನಾನು ಏನು ಮಾಡಬಾರದಾಗಿತ್ತೋ... ಅದನ್ನು ಮಾಡಿದೆ...
ನನ್ನ ಹೃದಯ ಢವ ಢವ ಅನ್ನುತ್ತಿತ್ತು...
ಧೈರ್ಯಮಾಡಿ ಹುಡುಗಿ ಒಬ್ಬಳೆ ಇದ್ದಾಗ ಹೇಳಿದೆ..


"ಹುಡುಗಿ.. 
ನಿನ್ನನ್ನು ನಾನು ಪ್ರೀತಿಸುತ್ತಿದ್ದೇನೆ..."


ಅವಳ ಜಿಂಕೆ ಕಣ್ಣುಗಳಲ್ಲಿ ಆಶ್ಚರ್ಯ.... !


"ಹೌದಾ...?
ನನ್ನ ಪ್ರೀತಿಸ್ತಿದ್ದೀಯಾ...?


ಯಾಕೆ?"


"ಗೊತ್ತಿಲ್ಲ... 
ನೀನು ನನಗೆ ತುಂಬಾ ತುಂಬಾ ಇಷ್ಟ..
ತುಂಬಾ ತುಂಬಾ ಪ್ರೀತಿಸ್ತಾ ಇದ್ದಿನಿ..."


"ಹುಡುಗಾ...
ಸಿನೇಮಾ ಥರಹ ನನ್ನನ್ನು ತಬ್ಬಿಕೊ ಬೇಕು...
ಹಾಡು ಹೇಳಬೇಕು ...
ಅಂತೆಲ್ಲ  ಅನ್ನಿಸ್ತಾ ಇದೆಯಾ...?"


ಅನಿರೀಕ್ಷಿತವಾದ ಅವಳ ಈ ನೇರ ಮಾತಿಗೆ ನನ್ನಲ್ಲಿ ಉತ್ತರ ಇರಲಿಲ್ಲ...


ತಡಬಡಿಸಿದೆ... 
ಸಣ್ಣಗೆ ಹಣೆಯಲ್ಲಿ ಬೆವರು ಬಂತು...!


"ಹುಡುಗಾ...
ಪ್ರೀತಿ ಎಂದರೆ ಏನು?"


ನಾನು ತಲೆ ಕೆರೆದು ಕೊಂಡೆ...


ಅಸಲಿಗೆ ಪ್ರೀತಿ ಎಂದರೇನು ಅಂತ ನನಗೂ ಗೊತ್ತಿಲ್ಲ...!


"ಗೊತ್ತಿಲ್ಲ ...
ನಿನ್ನನ್ನು ನೋಡಬೇಕು ಅನ್ಸುತ್ತೆ...
ನೀನು ನನಗೆ ಚಂದ ಕಾಣ್ತಾ  ಇದ್ದೀಯ...


ನೋಡ್ತಾ ಇದ್ದೀನಿ...


ನೀನು ಖುಷಿಯಾಗಿರಬೇಕು...
ನಿನ್ನ ಸಂತೋಷ ನಾನು ನೋಡಬೇಕು...


ನಿನಗೆ ಒಳ್ಳೆಯದನ್ನು ಬಯಸುತ್ತೇನೆ... ಹೃದಯಪೂರ್ವಕವಾಗಿ..."


"  ಸರಿ...
ಹಾಗಾದರೆ..ನೀನು ನನ್ನನ್ನು ಪ್ರೀತಿ ಮಾಡಬಹುದು...
ಆದರೆ...
ಒಂದು ಕಂಡೀಷನ್......."


"ಏನು...?"


" ನೀನು ನನ್ನಿಂದ ದೂರ ಇರಬೇಕು...


ನನ್ನ ಕಡೆಗೆ ಪೆಂಗನಂತೆ ನೋಡುತ್ತ.. 
ಹುಚ್ಚುರೀತಿಯಲ್ಲಿ ವರ್ತಿಸಬಾರದು...


ಅವಶ್ಯಕತೆ ಇದ್ದಷ್ಟೇ ಮಾತನಾಡಬೇಕು...
ಕಾರಣವಿಲ್ಲದೆ ನನ್ನನ್ನು ಭೇಟಿ ಮಾಡಬಾರದು..."


ನಾನು ಮತ್ತೆ ತಲೆ ಕೆರೆದುಕೊಂಡೆ...


"ಆಯಿತು...
ಓಕೆ..
ಎಸ್ಸೆಮ್ಮೆಸ್  ಕಳಿಸ ಬಹುದಾ?"


ಹುಡುಗಿ ಈಗ ತುಂಬಾ ಕಠಿಣವಾದಳು...


" ಇಲ್ಲ...
ನಾವಿಬ್ಬರೂ ಇಲ್ಲಿ ಓದಲಿಕ್ಕೆ ಬಂದಿದ್ದೇವೆ... ಚೆನ್ನಾಗಿ ಓದಬೇಕು...
ಅದು ನಮ್ಮ ಮೊದಲ ಗುರಿ...


ನನ್ನ ಓದಿಗೆ ನೀನು ..
ನಿನ್ನ ಪ್ರೀತಿ ...
ನನಗೆ ತೊಂದರೆ ಕೊಡಬಾರದು..."


ನಾನು ಅವಳು ಹೇಳಿದುದಕ್ಕೆ "ಹೂಂ" ಅಂದೆ...


"ನೋಡು ಹುಡುಗಿ...


ನಾನೂ ಕೂಡ ಒಳ್ಳೆಯವನು... 
ಒಳ್ಳೆಯ ಮನೆತನದವನು...
ಕೆಟ್ಟ ಅಭ್ಯಾಸಗಳಿಲ್ಲ..
ದಯವಿಟ್ಟು ನನ್ನನ್ನೂ ಪ್ರೀತಿಸು.... ಪ್ಲೀಸ್...."


ಈ ಪ್ರೀತಿ ನಿವೇದನೆ ಬಲು ಕಷ್ಟ....


ಹುಡುಗಿ ಕಿರುಗಣ್ಣಿನಿಂದ ನೋಡಿದಳು...
ತಕ್ಷಣ ಉತ್ತರ ಕೊಡಲಿಲ್ಲ...


"ಪ್ರೀತಿಗೆ ಬಲವಂತ ಮಾಡಬಾರದು.. .. 
ಹುಡುಗಾ...
ಕಾದು ನೋಡೋಣ...


ನೀನು ನನ್ನನ್ನು ಪ್ರೀತಿಸಿಕೊ.. 


ಪರವಾಗಿಲ್ಲ...
ಆದರೆ ನನಗೆ ತೊಂದರೆ ಕೊಡಬೇಡ...."


ಅಂದಿನಿಂದ ....
ಅವಳನ್ನು ದೂರದಿಂದಲೇ ನೋಡುತ್ತಿದ್ದೆ...
ಕಣ್ಣತುಂಬಾ... ಹೃದಯದ ತುಂಬಾ....


ನೋಡುತ್ತಿದ್ದೆ.. 
ಅವಳಿಗೆ ಗೊತ್ತಾಗದ ಹಾಗೆ... 
ಕವನ ಗೀಚುತ್ತಿದ್ದೆ.... ಕನಸು ಕಾಣುತ್ತಿದ್ದೆ....


ಏನೋ ಒಂಥರಾ ಖುಷಿ..!
ಅವಳಿದ್ದಳು ನನ್ನ  ಮನಸ್ಸಲ್ಲಿ ..
ನಿದ್ದೆ  ಕನಸುಗಳಲ್ಲಿ..


ಪ್ರೀತಿ ಎಂದರೆ  ಇದೇನಾ?


ನೋಡು ನೋಡುತ್ತಿರುವಂತೆ... ನಮ್ಮ ಓದು ಮುಗಿಯಿತು...
ಇಬ್ಬರೂ ಪಾಸಾಗಿದ್ದೆವು...


ನೌಕರಿಯೂ ಸಿಕ್ಕಿತು....


ಇನ್ನೇನು?


ಈ ಆಸೆಗಳದ್ದೇ ಸಮಸ್ಯೆ....!


ಅಸೆಗಳು ಮತ್ತೆ ಗರಿಗೆದರಿತು....


ಆಸೆಗಳಿಗೇನು...?
ಯಾವಾಗಲೂ ಅವಕಾಶ ಹುಡುಕುತ್ತಿರುತ್ತವೆ....


"ಹುಡುಗಿ...
ನನ್ನ ಪ್ರೀತಿ ಮರೆತುಬಿಟ್ಟೆಯಾ...?


"ಇಲ್ಲ ಕಣೋ...
ಮರೆತಿಲ್ಲ... 
ನೀನು ತುಂಬಾ ಒಳ್ಳೆಯ ಹುಡುಗ...
ನಾನು ಹೇಳಿದಂತೆ ನಡೇದುಕೊಂಡಿದ್ದೀಯಾ..."


"ಸರಿ...
ಮುಂದೇನು...?


"ಹುಡುಗಾ...
ನನ್ನ ಅಪ್ಪ ತುಂಬಾ ಕಷ್ಟ ಪಟ್ಟು ನನಗೆ ಓದಿಸಿದ್ದಾನೆ..
ನನಗೂ ಒಂದಷ್ಟು ಕನಸಿದೆ..
ನನ್ನ ಅಪ್ಪನಿಗೆ ಏನಾದರೂ ಕೊಡಬೇಕು...
ಒಂದಷ್ಟು ದಿನ ಕೆಲಸ ಮಾಡಿ ....
ಅಪ್ಪನಿಗೆ ಏನಾದರೂ ನನ್ನಿಂದ ಸಹಾಯ ಆಗಬೇಕು....."


ನಿಜ ಹೇಳ್ತೀನಿ...
ಈಗ ಮಾತಾಡಿದ್ದು ನಾನಲ್ಲ...
ನನ್ನ ಆಸೆಗಳು...


ನನ್ನ ಆಸೆಗಳೇ ಮಾತಾಡಿದವು...


" ಖಂಡಿತವಾಗಿ ಕೊಡು ಮಾರಾಯ್ತಿ...
ನನ್ನ ಅಭ್ಯಂತರ ಏನೂ ಇಲ್ಲ...


ನಾನು ನಿನ್ನ ಕೈ ಹಿಡಿದುಕೊಂಡು ಪಾರ್ಕಿನಲ್ಲಿ ಓಡಾಡಬಹುದಾ?
ನಿನ್ನ ಜೊತೆ ಪಾನಿ ಪುರಿ ತಿನ್ನ ಬಹುದಾ?


ನನಗೆ ನಿನ್ನ ಮೇಲೆ ಪ್ರೀತಿ ಇನ್ನೂ ಜಾಸ್ತಿಯಾಗಿದೆ..."


"ಇಲ್ಲ ಕಣೊ...
ನೀನು ನನ್ನನ್ನು ಮುಟ್ಟಬಾರದು...
ದೂರದಿಂದಲೇ ಮಾತನಾಡಬೇಕು...


ಆದರೆ..."


"ಏನು..?"


"ಆದರೆ..
ನನ್ನೊಟ್ಟಿಗೆ ಓಡಾಡ ಬಹುದು...
ವಾರಕ್ಕೊಮ್ಮೆ ಪಾರ್ಕು.. ಸಿನೇಮಾ ನೋಡಬಹುದು...


ಆದರೆ ಎಲ್ಲವೂ ದೂರ...ದೂರದಲ್ಲೇ.. ಇರಬೇಕು...!


ನಿನ್ನ ಪ್ರೀತಿ ನನ್ನ ಮೈ ಮುಟ್ಟಬಾರದು..."


ನನಗೆ ಬಹಳ ಸಂತೋಷವಾಯಿತು...!
ಸ್ವರ್ಗ ಸಿಕ್ಕಿದಷ್ಟು ಖುಷಿಯಾಯಿತು....!


ನನ್ನ ಹುಡುಗಿ ನನಗೆ ಮಾತನಾಡಲು ಸಿಗುತ್ತಾಳಲ್ಲ...!


ವಾಹ್..!


"ಹುಡುಗಿ...
ನಾನು ಫೋನ್ ಮಾಡಬಹುದಾ?"


"ಮಾಡು..
ಸಾಯಂಕಾಲ ಮಾತ್ರ... 
ನಾನು ಆಫೀಸಿನಿಂದ  ಬಂದಮೇಲೆ..."


ನಿಜ ಹೇಳ್ತಾ ಇದ್ದೀನಿ..
ಆಡುವ ಮಾತುಗಳು ಇಷ್ಟು ಅಪ್ಯಾಯಮಾನವಾಗಿರುತ್ತವೆ ...
ಅಂತ ನನಗೆ ಗೊತ್ತಾಗಿದ್ದು ಆವಾಗಲೇ...


ನಾವಿಬ್ಬರೂ ಹರಟಿದೆವು.... ಓಡಾಡಿದೆವು...
ಸಿನೇಮಾ ನೋಡಿದೆವು...


ಪಾರ್ಕಿನ ಮೂಲೆಯಲ್ಲಿ ಕುಳಿತು ನನ್ನ ಹುಡುಗಿ ನನಗಾಗಿ ಹಾಡು ಹಾಡುತ್ತಿದ್ದಳು...
ನನ್ನಿಷ್ಟದ ಹಾಡುಗಳು... !!


"ತುಮ್ ಸೆ.. ನಾರಾಜ್ ನಹೀ...ಜಿಂದಗೀ...
ಹೈರಾನು ಹೂಂ... ಮೈ ಪರೇಶಾನು ಹೂಂ...


ತೆರೆ ಮಾಸೂಮ್ ಸವಾಲೋ ಸೆ  ಪರೆಶಾನೂ ಹೂಂ..."


ಅವಳ ಧ್ವನಿ ಬಲು ಇಂಪು....


ಅವಳು ನನ್ನ ಪ್ರತಿಮಾತಿಗೂ ನಗುತ್ತಿದ್ದಳು...
ನಗುವಾಗ ಅವಳ ಕಣ್ಣುಗಳು ಮುಚ್ಚುತ್ತಿದ್ದವು...


ಅವಳ ಜೊತೆಯಲ್ಲಿ ಏನೇನೋ ಕನಸು ಕಂಡೆ...!
ಅವಳನ್ನು ದೂರದಿಂದ ಕಣ್ಣು ತುಂಬಿಸಿಕೊಳ್ಳುತ್ತಿದ್ದೆ...

ಅವಳು ನನಗೆ ಮತ್ತಷ್ಟು ಇಷ್ಟವಾದಳು... 
ಹತ್ತಿರವಾದಳು...


ವರುಷ ಕಳೆದು ಹೋಯಿತು....


"ಹುಡುಗಾ...
ನಿನ್ನೆ ನನ್ನ ಅಪ್ಪ ....
ನನ್ನ ಮದುವೆಯ ಬಗೆಗೆ ಮಾತನಾಡಿದ..
ನನಗೆ ಗಂಡು ಹುಡುಕುತ್ತಾನಂತೆ...
ನಾನು ನಿನ್ನ ಬಗೆಗೆ ಹೇಳಿಲ್ಲ...


ದಯವಿಟ್ಟು ನೀನು ನಿನ್ನ ಅಪ್ಪನೊಡನೆ ಮಾತನಾಡು...


ನಮ್ಮ ಮದುವೆಯ ಬಗೆಗೆ ಮಾತಾಡು..
ನಮ್ಮ ಸಂಭಂಧಕ್ಕೊಂದು  ಹೆಸರು ಕೊಡು..
ಭದ್ರತೆ  ಕೊಡು.."


"ಹುಡುಗಿ..
ನಿನಗೆ ನಾನು ಇಷ್ಟನಾ?


ನಾನು ಪ್ರೀತಿಸಿದ ಹಾಗೆ ...
ನೀನೂ ನನ್ನನ್ನು  ಪ್ರೀತಿಸುತ್ತೀಯಾ?"


"ಹೌದು ಕಣೋ...


ನನ್ನ ಪ್ರೀತಿ ನನ್ನ ಕಣ್ಣಲ್ಲಿದೆ.. ಗೊತ್ತಾಗಲಿಲ್ಲವಾ?


ಹುಚ್ಚು ಹುಡುಗ ನೀನು...!


ನಿನ್ನ ಸಭ್ಯತೆ... ವಿನಯ...
ಸಂಯಮ...
ನೀನು ದೂರದಿಂದ ನನ್ನನ್ನು ಪ್ರೀತಿಸುವ ರೀತಿ..
ನಿನ್ನ ಪ್ರೀತಿತುಂಬಿದ ಕಣ್ಣುಗಳು ನನಗಿಷ್ಟ ಕಣೊ...


ನಿನ್ನೊಂದಿಗೆ ನನ್ನ ಬದುಕು ಸಂತಸವಾಗಿರುತ್ತದೆ...
ನನ್ನ ಬದುಕಿನ ಭರವಸೆ ನೀನು...


ದಯವಿಟ್ಟು ನಮ್ಮ ಮದುವೆಯ ಪ್ರಸ್ತಾಪ ನಿನ್ನಪ್ಪನೊಡನೆ ಮಾಡು..."


"ಹುಡುಗಿ...
ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅಂತ ನನಗೇ ಗೊತ್ತಿಲ್ಲ...


ನಿನ್ನ ನೋಟ,,.. ಧ್ವನಿ... ಪ್ರೀತಿ... ಎಲ್ಲವನ್ನೂ..
ಇಷ್ಟು ವರ್ಷ ನನ್ನ ಹೃದಯದಲ್ಲಿ ತುಂಬಿಟ್ಟುಕೊಂಡಿದ್ದೇನೆ...


ನಿನ್ನ ಪ್ರೀತಿಯನ್ನು ನಿನ್ನೊಡನೆ ಮಾತನಾಡದೇ ಅನುಭವಿಸಿದ್ದೇನೆ...


ಮಾತಾನಾಡಿಯೂ ಅನುಭವಿಸಿದ್ದೇನೆ...
ನಿನ್ನ ಪ್ರೀತಿಯನ್ನು ನನ್ನೆದೆಯೊಳಗೆ ಪೂಜಿಸಿದ್ದೇನೆ..


ನಿನ್ನಂಥಹ ಹುಡುಗಿ ನನ್ನ ಸಂಗಾತಿಯಾಗುವದು ಎಷ್ಟೋ ಜನ್ಮದ ಪುಣ್ಯ..."


ನನಗೆ ಮುಂದೆ ಮಾತನಾಡಲಾಗಲಿಲ್ಲ...
ಗಂಟಲು ಉಬ್ಬಿ ಬಂತು...


"ಹುಡುಗಾ ..
ಏನಾಯ್ತೋ.....?
ನಾನು ನಿನ್ನವಳು... 
ಇಬ್ಬರೂ ಮದುವೆಯಾಗೋಣ.. ಚಿಂತೆ ಮಾಡಬೇಡ..."


ಹುಡುಗಿ ನನ್ನ ತಲೆ ಸವರಿದಳು...


"ಹುಡುಗಿ...
ಮದುವೆಯಾಗಿ  ವಾಸ್ತವದ ಬದುಕಿನಲ್ಲಿ ನನ್ನ ಪ್ರೀತಿಯನ್ನು ಸಾಯಿಸುವದು ನನ್ನಿಂದ ಆಗದು...
ಸಂಸಾರದ ಜಂಜಾಟದಲ್ಲಿ ನಾವು ಜಗಳಕಾದು...
ಕೂಗಾಡುವದು.. ರೇಗಾಡುವದು ನನ್ನಿಂದಾಗದು...


ನಮ್ಮ ಪ್ರೀತಿ ಹೀಗೆಯೇ ಇರಲಿ...


ನಿನ್ನಪ್ಪ ನಿನಗೊಂದು ವರ ಹುಡುಕುತ್ತಾನೆ ಅವನನ್ನು ಮದುವೆಯಾಗು...
ನನಗೂ ಒಬ್ಬಳು ಮಡದಿಯಾಗಿ ಬರುತ್ತಾಳೆ...


ನಮ್ಮ ಪ್ರೀತಿಯನ್ನು ಬಚ್ಚಿಟ್ಟುಕೊಂಡು...
ಆಗಾಗ ತೆರೆದು ಅನುಭವಿಸೋಣ...


ಎಲ್ಲ ಸಂಬಂಧಗಳು... ಬಾಂಧವ್ಯಗಳು...
ಪ್ರೀತಿ..
ಪ್ರೇಮ ದೂರದಿಂದಲೇ ಚಂದ ...
ಸುಂದರ...ಕಣೆ...


ಇಷ್ಟೆಲ್ಲಾ ಕನಸು ಕೊಟ್ಟ 
ನೀನು...
ನಿನ್ನ ಪ್ರೀತಿ ನನ್ನೊಡನೆ ಯಾವಾಗಲೂ ಹೀಗೆಯೇ ಇರಲಿ...

ನಾವು ಮದುವೆಯಾಗುವದು ಬೇಡ.. ಕಣೆ...
ಬೇಡ..."


ಹುಡುಗಿ ಮಾತನಾಡಲಿಲ್ಲ...


ನನಗೆ ...... 
ನನ್ನ ಹುಡುಗಿಯ ಹುಡುಗಿಯ ಮುಖ ನೋಡಬೇಕಿತ್ತು...


ಹುಡುಗಿ ಸರಿಯಾಗಿ ಕಾಣಿಸುತ್ತಿರಲಿಲ್ಲ...
ಮಂಜು ಮಂಜಾಗಿತ್ತು.....

ನನ್ನ ಕಣ್ಣಂಚಲ್ಲಿ  ನೀರಿತ್ತು....




( ಚಂದದ ಪ್ರತಿಕ್ರಿಯೆಗಳು... 
ಪ್ರೀತಿ ಬಗೆಗಿನ ಸಂವಾದ ಚೆನ್ನಾಗಿದೆ...
ದಯವಿಟ್ಟು ನೋಡಿ....)