Friday, December 6, 2013

..... ಆಯ್ಕೆ .....

ಕತ್ತಲೆಂದರೆ..
ನನಗೆ ಬಲು ಇಷ್ಟ...

ಕತ್ತಲಿಗೆ ಎಲ್ಲ ಬಣ್ಣಗಳೂ ಒಂದೇ...

ಭಾವಗಳೂ ಸಹ ಒಂದೆ...

ಕಣ್ ಮುಚ್ಚಿದರೂ..

ಕಣ್ಣು ಬಿಟ್ಟರೂ ಒಂದೆ...

ಕಪ್ಪು ಬಿಳುಪು ಕೂಡ ಬಣ್ಣಗಳಾಗಿಬಿಡುತ್ತವೆ...

ನೆನಪುಗಳೊಂದಿಗೆ ರಂಗು.. ರಂಗಾಗಿಬಿಡುತ್ತವೆ...

ನನ್ನ

ಎಷ್ಟೋ ಒಂಟಿತನದ ...
ಖಾಲಿ ಖಾಲಿ ಭಾವಗಳನ್ನು ಅದು ತುಂಬಾ ಖುಷಿಯಿಂದ ಮಾತನಾಡಿಸುತ್ತದೆ..

ನನ್ನ

ಏಕಾಂತಗಳಲ್ಲಿ "ಅವಳು" ಇರುತ್ತಾಳೆ..

ಓಹ್..

ಅವಳೆಂದರೆ ನಿಮಗೆ ಗೊತ್ತಿಲ್ಲ..!

ತುಂಬು ... 

ಬಟ್ಟಲ ಕಣ್ಣು..

ಮುತ್ತಿಡಲು ಹರವಾದ ಕೆನ್ನೆ..


ಮುದ್ದು.. ಚೂಪಿನ ಗದ್ದ.

ಕ್ಲಾಸಿನಲ್ಲಿದ್ದಾಗ ಅವಳನ್ನೇ ನೋಡುತ್ತ ಕುಳಿತುಬಿಡುತ್ತಿದ್ದೆ....

ನನ್ನ ಓದಿನ ದಿನಗಳಲ್ಲಿ ನನ್ನ ಮನವನ್ನು ತುಂಬಿದ್ದಳು..


ಮನದಣಿಯೇ ನೋಡುತ್ತಿದ್ದೆ..


ಹೇಗೆ ಮಾತನಾಡಿಸಲಿ ?

ಯಾವಾಗಲಾದರೂ ಎದುರಿಗೆ ಬಂದಾಗ ಧೈರ್ಯವಿರುತ್ತಿರಲಿಲ್ಲ..

ನನ್ನೆದೆಯ ಢವ ಢವಗಳೊಡನೆ

ಸುಮ್ಮನಿದ್ದುಬಿಡುತ್ತಿದ್ದೆ..

ನನ್ನ ಜೀವದ ಗೆಳೆಯ ಸುಮ್ಮನಿರಬೇಕಲ್ಲ..


"ನಾಡಿದ್ದು ಸಂಕ್ರಾಂತಿ ಹಬ್ಬ..

ಶುಭಾಶಯ ಪತ್ರ ಕಳಿಸೋಣ.."

ಅವನೇ ಹೋಗಿ ಗ್ರೀಟಿಂಗ್ ಕಾರ್ಡ್ ತಂದಿದ್ದ..

ಬಹಳ ಬುದ್ಧಿವಂತ ಆತ....

"ಇದರಲ್ಲಿ ಏನಾದರೂ ಬರಿ...

ನೀನು ಅಂತ ಗೊತ್ತಾಗಬೇಕು..
ಆದರೆ...
ಉಳಿದವರಿಗೆ ಗೊತ್ತಾಗಬಾರದು..."

ಅವಳ ಬಳಿ ಯಾವತ್ತೂ ಮಾತನಾಡಿದ್ದಿಲ್ಲ..


ಅವಳ ಜೊತೆಯಲ್ಲಿ ಇರುತ್ತಿದ್ದೆ.. 

ಅವಳ 
ಕೆನ್ನೆಗಳೊಡನೆ...
ಮುದ್ದು ಗಲ್ಲದೊಡನೆ..
ತೆಳುವಾದ ತುಟಿಗಳೊಡನೆ...

ಆಗಾಗ..

ಬೇಡವೆಂದರೂ ಸಂಧಿಸುವ
ಅವಳ ಕುಡಿ ನೋಟದೊಡನೆ.. ಜೊತೆಯಲ್ಲಿರುತ್ತಿದ್ದೆ.. 

ನನ್ನ ನೋಟದ ಇಂಗಿತ ಅವಳಿಗೆ ಗೊತ್ತಾಗಿರಬಹುದಾ ?


" ಗೊತ್ತಾಗದೆ  ಏನು ?

ಅವಳಿಗೂ ಹರೆಯ..."

ಇಬ್ಬರ ನೋಟ ಸಂಧಿಸಿದಾಗ ... 

ಅವಳ ತುಟಿಯಲ್ಲಿ ಸಣ್ಣ ಕಿರುನಗುವಿರುತ್ತಿತ್ತಾ ?

ಅದು ನನ್ನ ಭ್ರಮೆಯಾ ?


ಗೆಳೆಯ ತಂದುಕೊಟ್ಟ ಶುಭಾಶಯ ಪತ್ರದಲ್ಲಿ ಧೈರ್ಯ ಮಾಡಿ ಬರೆದೆ..


"ಆಕಳು..

ಕರುವನ್ನು ಮರೆಯ ಬಹುದು..

ತಾಯಿ..

ಮಗುವನ್ನು ಮರೆಯ ಬಹುದು...

ಆದರೆ..

ನನ್ನ ಕಣ್ಣುಗಳು ನಿನ್ನನೆಂದಿಗೂ ಮರೆಯಲಾರವು..."

ನನ್ನ ಗೆಳೆಯ ನಕ್ಕುಬಿಟ್ಟ..


ವಾಕ್ಯವನ್ನು ಬದಲಿಸಲು ಹೇಳಿದ.. ನಾನು ಬದಲಿಸಲಿಲ್ಲ..


ಮಾರನೆಯ ದಿನ ಕ್ಲಾಸಿಗೆ ಪೋಸ್ಟಮ್ಯಾನ್ ಪತ್ರಗಳನ್ನು ತಂದುಕೊಟ್ಟ..

ನಾನು ಕಳುಹಿಸಿದ್ದು ಅವಳಿಗೆ ತಲುಪಿತ್ತು..

ಅಸಕ್ತಿಯಿಂದ ನೋಡಿದಳು..

ಓದಿ ಆದಮೇಲೆ ... 
ಬೊಗಸೆ  ಕಣ್ಣಿನಿಂದ  ನನ್ನತ್ತ ನೋಡಿದಳು..

ನೋಟದಲ್ಲಿ ನಗುವಿತ್ತಾ ?

ನೋಟಗಳ ಭಾಷೆ ನನಗೆಂದೂ ಗೊತ್ತೇ ಆಗಲಿಲ್ಲ..
ಅರ್ಥವಾಗುವದೇ ಇಲ್ಲ...

ಅಷ್ಟೆ...


ನನಗೆ ಉತ್ತರ ಸಿಗಲಿಲ್ಲ..


ದಿನಗಳು ಕಳೆದವು..

ಬದುಕಿನಲ್ಲಿ ಏಳುತ್ತ ಬೀಳುತ್ತ..
ಈಗ ಒಂದು ಸ್ಥಿತಿಯನ್ನು ಮುಟ್ಟಿದ್ದೇನೆ...

ಕಾರುಗಳ ಮಾಲಿಕನಾಗಿ..

ಚಂದದ ಮಡದಿಗೆ ಪತಿಯಾಗಿ.... ಮಗುವಿಗೆ ಅಪ್ಪನಾಗಿರುವೆ...

ಎಷ್ಟಾದರೂ..

ಏನೇ ಆದರೂ..
ಉದ್ದ ಲಂಗದ..
ನಸುಗಪ್ಪಿನ ಆ ಹುಡುಗಿ ನನ್ನಿಂದ ಮರೆಯಾಗಲೇ ಇಲ್ಲ...

ಅವಳು..

ನನ್ನನ್ನು ಎಂದೂ ಒಂಟಿಯಾಗಿ ಇರಲು ಬಿಡಲೇ ಇಲ್ಲ..
ಮುದ್ದು..
ಮುದ್ದಾಗಿ ನಗುತ್ತಿದ್ದಳು..
ಮಾತನಾಡುತ್ತಿದ್ದಳು..

ನಾನು ಜನಜಂಗುಳಿಯಲ್ಲಿದ್ದರೂ..

ನನ್ನನ್ನು 
ತನ್ನ ಬಳಿ ಕರೆದೊಯ್ದುಬಿಡುತ್ತಿದ್ದಳು..

ನನ್ನ ಬದುಕಿನ  ಯಶಸ್ಸಿನ ಹಿಂದೆ ಇದ್ದವರು ನನ್ನ ಗುರುಗಳು..


ನನಗೆ

ಊಟ ಹಾಕಿ..
ನನ್ನ ಖರ್ಚು.. ವೆಚ್ಚಗಳನ್ನು ತಾವು ಭರಿಸಿಕೊಂಡು ನನ್ನನ್ನು ಓದಿಸಿದರು..

ಅವರ ಮಡದಿ...


ಆಗ 

ಅವರ ಬಗೆಗೆ ಕೆಟ್ಟ ಅನಿಸಿಕೆ ಇದ್ದರೂ..
ಈಗ ಖಂಡಿತ ಇಲ್ಲ..

ಆಗ 

ಅವರೆಲ್ಲರ ಊಟವಾದ ಮೇಲೆ ನನ್ನನ್ನು  ಊಟಕ್ಕೆ ಕರೆಯುತ್ತಿದ್ದರು..

ಸಂಭಾರು ತೆಳ್ಳಗಾಗಿ "ಸಾರು" ಆಗಿರುತ್ತಿತ್ತು.. 

ಉಪ್ಪು.. ಹುಳಿ ಕಡಿಮೆಯಾಗಿರುತ್ತಿತ್ತು..

ಕೆಲವೊಮ್ಮೆ ಬೆಳಗ್ಗೆ ಹೆಚ್ಚಾದ ತಿಂಡಿ ಮಧ್ಯಾಹ್ನ ಸಿಗುತ್ತಿತ್ತು..

ಮಜ್ಜಿಗೆ ನೀರಿನಂತಿರುತ್ತಿತ್ತು..

ಬಡತನಕ್ಕೆ..

ದುಃಖಗಳಿಗೆ ಆಯ್ಕೆಗಳು ಇರುವದಿಲ್ಲ..

ಸಿಕ್ಕಿದಷ್ಟು ಸ್ವೀಕರಿಸುವ ಅನಿವಾರ್ಯ...


ಅವರು ನನ್ನ ಬಡತನದ..

ಹಸಿವಿನ ದಿನಗಳಲ್ಲಿ ಹೊಟ್ಟೆತುಂಬಿಸಿದ್ದರಲ್ಲ..

ಕೃತಜ್ಞತೆ ಹೇಗೆ ಹೇಳಲಿ...?


ಊರಿಗೆ ಹೋಗಿ.. 

ಅವರನ್ನೊಮ್ಮೆ ಭೇಟಿಯಾಗಿ ನಮಸ್ಕರಿಸಬೇಕು ... 

ಸರಿ... 

ಹೊರಟೇ ಬಿಟ್ಟೆ... 

ಕತ್ತಲಾಗಿತ್ತು..

ಗುರುಗಳ ಮನೆ ಮುಂದೆ ಕಾರು ನಿಲ್ಲಿಸಿದಾಗ ಸಾಯಂಕಾಲ ಏಳು ಗಂಟೆ..

ಕರೆಂಟು ಇರಲಿಲ್ಲ..


ಗುರು ದಂಪತಿಗಳಿಗೆ ವಯಸ್ಸಾಗಿತ್ತು..

ಪ್ರೀತಿಯಿಂದ ಬರ ಮಾಡಿಕೊಂಡರು..

ಆದರ.. 

ಉಪಚಾರ ಮಾಡಿದರು..

"ಒಂದು ಲೋಟ ನೀರು ಕೊಡಿ.. ಸಾಕು" 


"ಹಾಗಾದರೆ ಊಟ ಮಾಡಿ ಹೋಗು.."


ನಾನು ತಲೆಯಾಡಿಸಿದೆ..


ಅವರ ಮಡದಿ ನೀರು ತಂದಿಟ್ಟರು..


" ನೋಡಪ್ಪಾ..

ಆಗ ನಮಗೂ ಬಡತನವಿತ್ತು..
ಸರಿಯಾಗಿ ಊಟ ಹಾಕಲಾಗಲಿಲ್ಲ... ಬೇಸರ ಮಾಡ್ಕೋಬೇಡ ..."

ಒಳ್ಳೆಯ ಮನಸಿದ್ದವರಿಗೆ 

ಅಪರಾಧಿ ಮನೋಭಾವ ಕಾಡುತ್ತದೆ..

ಕ್ಷಮೆ ಎನ್ನುವ ಶಬ್ಧವಿಲ್ಲದೆ..

ಕ್ಷಮೆ ಕೋರಿಬಿಡುತ್ತಾರೆ..

"ಇಲ್ಲಮ್ಮ.. 

ನನಗೆ ಚೆನ್ನಾಗಿಯೇ ಊಟ ಹಾಕಿದ್ದೀರಿ..
ಹಸಿದ ಹೊಟ್ಟೆಗೆ ಊಟ ಹಾಕಿ ಓದಿಸಿದ್ದೀರಲ್ಲ..

ನಮ್ಮವರೆನ್ನುವವರಿದ್ದೂ..ಅನಾಥನಾಗಿದ್ದೆ..

ಏನೂ ಅಲ್ಲದ 
ಏನೂ ಇಲ್ಲದ .. 
ನನ್ನ ಭವಿಷ್ಯ ರೂಪಿಸಿದ್ದೀರಿ...."

ಕೃತಜ್ಞತೆಯಿಂದ ಕೈ ಮುಗಿದೆ..


ಭಾವುಕರಿಗೆ..

ಭಾವುಕ ಕ್ಷಣಗಳಷ್ಟು ಖುಷಿ ಮತ್ತೆ ಯಾವುದೂ ಇಲ್ಲ..

ಅವರು ..

ಒತ್ತರಿಸಿ ಬರುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತ ಅಡಿಗೆ ಮನೆಗೆ ಹೋದರು..

ಮಾಸ್ತರು ಕನ್ನಡಕ ಸರಿ ಮಾಡಿಕೊಂಡರು..


"ತುಂಬಾ ಖುಷಿ ಆಗುತ್ತಪ್ಪ..


ನಿನ್ನ ಯಶಸ್ಸಿನಲ್ಲಿ ನಾವು ಮಾಡಿದ್ದು ಏನೂ ಇಲ್ಲ..


ನಿನ್ನನ್ನು ಮುಂದೆ ತಂದಿದ್ದು ನಿನ್ನ  

ಓದಿನ ಹಸಿವೆ...
ಶೃದ್ಧೆ.. ಪರಿಶ್ರಮ..

ಪ್ರಾಮಾಣಿಕನಾಗಿರು..

ಎಲ್ಲ ಕಾಲದಲ್ಲೂ ಬೆಲೆ ಬಾಳುವಂಥಾದ್ದು ಪ್ರಾಮಾಣಿಕತೆ.."

ನಾನು ತಲೆ ತಗ್ಗಿಸಿದೆ...

ಅವರ ಪಾದಗಳನ್ನು ನೋಡುತ್ತಿದ್ದೆ...

ಅವರು ನನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು...


"ನಮ್ಮ ಮಕ್ಕಳಿಗೆ ಕೊಡಿಸುವಂಥಹ ಬಟ್ಟೆಗಳನ್ನು ... ನಿನಗೆ ಕೊಡಿಸುವದಿಲ್ಲವಾಗಿತ್ತು..


ಕಡಿಮೆ ಬೆಲೆಯ ಬಟ್ಟೆ ನಿನಗೆ ಕೊಡುತ್ತಿದ್ದೆ.."


ಅವರಿಗೂ 

ಅಪರಾಧಿ ಮನೋಭಾವ !

" ಹಾಗೇನೂ ಇಲ್ಲ ಸಾರ್..

ನಿಮ್ಮ ಇತಿ ಮಿತಿಗಳಲ್ಲಿ ನನಗೆ ಓದಿಸಿದ್ದೀರಿ...

ನಿಮಗೂ ಮಕ್ಕಳಿದ್ದರು..

ಅವರ ಭವಿಷ್ಯ.. ಖರ್ಚು ನಿಮಗೂ ಇತ್ತಲ್ಲ...

ಎಲ್ಲವೂ 

ನಮ್ಮದಾಗಲು ಸಾಧ್ಯವಿಲ್ಲವಲ್ಲ..

ಹತ್ತಿರವಿದ್ದರೂ ನಮ್ಮದೆನಿಸುವದಿಲ್ಲ..


ಅದು ಸಹಜ..


ನನಗೆ ಖಂಡಿತ ಬೇಸರವಿಲ್ಲ.. 


ನನ್ನ 

ಸರಿ..ತಪ್ಪುಗಳನ್ನು ತಿಳಿಸಿ..
ಹತ್ತಿರದವರಾಗಿ ನನಗೆ ಒಂದು ದಾರಿ ತೋರಿಸಿದ್ದೀರಲ್ಲ..

ಅಷ್ಟು ಸಾಕು ನನ್ನ ಕೃತಜ್ಞತೆಯ ಬದುಕಿಗೆ..."


ಕಣ್ಣು ಒದ್ದೆಯಾಗಿತ್ತು.. ಒರೆಸಿಕೊಂಡೆ...


ಕರೆಂಟು ಇರಲಿಲ್ಲ.. 


ಬೆಳಕು ಮಂದವಾಗಿತ್ತು..

"ಒಂದು ವಿಷಯ ... 

ನಿನಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ..
ನನಗಂತೂ ನೆನಪಿದೆ..."

" ಯಾವುದು ಸಾರ್...?.."


ಮಾಸ್ತರು  ಕನ್ನಡಕ ಸರಿಮಾಡಿಕೊಂಡರು..


" ನಿನ್ನ ಕ್ಲಾಸಿನಲ್ಲಿ 

ಒಬ್ಬಳು ನಸುಗಪ್ಪಿನ ಹುಡುಗಿ ಇದ್ದಳು..
ಉದ್ದ ಲಂಗದ.. ಉದ್ದದ ಹುಡುಗಿ..

ಚೆನ್ನಾಗಿ ಹಾಡುತ್ತಿದ್ದಳಲ್ಲ.. ಅವಳು..."


ನನ್ನ ಹೃದಯ ಮತ್ತೆ ಖುಷಿಯಿಂದ ಕುಣಿಯತೊಡಗಿತು..


ಅವಳನೆನಪಲ್ಲೇ ಬದುಕು ..!


ಅವಳ ನೆನಪಿನಲ್ಲೆ ನನ್ನ ಮೌನ...!


"ಹೌದು ಸಾರ್.. ನೆನಪಿದೆ..."


"ನಾನು ಕ್ಲಾಸ್ ಟೀಚರ್ ಆಗಿದ್ದೆ..

ಅವಳು ಕ್ಲಾಸ್ ಮಾನಿಟರ್ ಆಗಿದ್ದಳು..

ನೀವು ಬರೆದ ನೋಟ್ ಬುಕ್ಕುಗಳನ್ನು ನನಗೆ ತಂದುಕೊಡುತ್ತಿದ್ದಳು..."


ನಾನು ತಲೆ ಆಡಿಸಿದೆ..

ಅವರಿಗದು ಕಾಣುತ್ತಿರಲಿಲ್ಲ..

"ಹೂಂ..." ಗುಟ್ಟಿದೆ..


"ಒಂದು ದಿನ ... 

ನಾನು ನೋಡಿ ಇಟ್ಟ ನೋಟ್ ಬುಕ್ಕುಗಳನ್ನು ತೆಗೆದು ಕೊಂಡು ಹೋಗುವಾಗ..
ಅವಳ ಕೈಯಲ್ಲಿ ಏನೋ ಚೀಟಿ ಇತ್ತು..."

ನನಗೆ ಮೈಯೆಲ್ಲ ಕಿವಿಯಾಯಿತು..


"ನಾನು ಗದರಿಸಿ ಅವಳಿಂದ ಕಸಿದುಕೊಂಡೆ..


ಅವಳು ಅಳುತ್ತಿದ್ದಳು.."


ನನಗೆ ದಿಗಿಲು ಶುರುವಾಯಿತು..


ನಾನು ಬರೆದ ಶುಭಾಶಯ ಪತ್ರವಾ ?


ಕತ್ತಲಲ್ಲಿ 

ಢವ.. ಢವ ಶಬ್ದಗಳು ಜೋರಾಗಿ ಕೇಳುತ್ತವೆ...

ಗುರುಗಳು ಸ್ವಲ್ಪ ಹೊತ್ತು ಸುಮ್ಮನಿದ್ದರು...


"ಬಹುಷಃ ಅಂದು ನಾನು ಗದರಿಸಿ ...

ಅದನ್ನು ನನ್ನ ಬಳಿ ಇಟ್ಟುಕೊಳ್ಳದೆ ಹೋಗಿದ್ದರೆ..
ಇಂದು..
ನೀನು ಹೀಗೆ ಆಗುತ್ತಿರಲಿಲ್ಲ...

ಪೋಲಿ ಹುಡುಗನಾಗಿಬಿಡುತ್ತಿದ್ದೆ..."


ಢವ ಢವ ಜೋರಾಯಿತು... 

ನನ್ನ ಹೃದಯ ಬಾಯಿಗೆ ಬಂದಿತ್ತು...!

"ಏನಿತ್ತು ಅದರಲ್ಲಿ...?"


"ಮತ್ತೇನಿಲ್ಲ...

ಆ ವಯಸ್ಸಿನ ಹದಿ ಹರೆಯದ ಭಾವನೆಗಳು..

ಆ ಹುಡುಗಿ ನಿನಗೆ ಮನಸೋತು..

ಪತ್ರ ಬರೆದಿದ್ದಳು...!

ಅವಳ ಭಾಷೆ.. ಪತ್ರ ಓದಿ ನನಗಂತೂ ನಗು ಬಂದಿತ್ತು..


ಈಗಲೂ ನಗು ಬರುತ್ತದೆ.."


ಮಾಸ್ತರು ನಗತೊಡಗಿದರು.... 


ಗಾಳಿ ಜೋರಾಯಿತು..


ಹಚ್ಚಿದ್ದ ಮೊಂಬತ್ತಿ ಗಾಳಿಗೆ ಕುಣಿಯುತ್ತಿತ್ತು..

ಮೊಂಬತ್ತಿ ಬೆಳಕು ಮತ್ತೂ ಸಣ್ಣದಾಯಿತು... .. 


ಹೃದಯ ಭಾರವಾಗಿತ್ತು.. 


ಅಷ್ಟರಲ್ಲಿ ಅವರ ಮಡದಿ ಊಟಕ್ಕೆ ಕರೆದಳು..
ಊಟಕ್ಕೆ ಕುಳಿತೆವು..

ಅವರ ಮಡದಿ 

ಬಹಳ ಪ್ರೀತಿಯಿಂದ ಸಡಗರದಿಂದ ಬಡಿಸುತ್ತಿದ್ದರು...

"ನಿನ್ನ  ಬದುಕು ಈಗ ಚೆನ್ನಾಗಿದೆ... 

ಕೃತಜ್ಞತೆಯಿಂದ ನಮ್ಮನ್ನು ನೆನಪಿಸಿಕೊಳ್ಳುತ್ತೀಯಲ್ಲ.. 

ಒಳ್ಳೆಯ ಮನಸ್ಸು ನಿನ್ನದು.. 

ಸಂಕೋಚ ಮಾಡ್ಕೋಬೇಡ.. 

ಎಲ್ಲವನ್ನೂ ಹಾಕಿಸ್ಕೊ... 

ನಿನ್ನ ಇಷ್ಟಗಳನ್ನೇ ಮಾಡಿದ್ದೇನೆ..."

ಬಾಳೆ ಎಲೆ  ನೋಡಿದೆ... 

ಎಲೆಯ ತುಂಬ ನನ್ನಿಷ್ಟದ ತಿಂಡಿಗಳು..
ಸಿಹಿ..
ಖಾರ... ಎಲ್ಲವೂ ಇತ್ತು...

ಹುಡುಗಿಯ ಬಗೆಗೆ ಇನ್ನೂ ಕೇಳಬೇಕೆನಿಸಿತು... 

" ಆ ಹುಡುಗಿ ಈಗ ಎಲ್ಲಿದ್ದಾಳೆ...?"


"ಅವಳದ್ದೊಂದು ದೊಡ್ಡ ಕಥೆ...."


" ಏನಾಯ್ತು..?... "


" ಗಂಡ ಕುಡುಕ... 

ವ್ಯಸನಿ...
ಪರ ಹೆಣ್ಣುಗಳ ಸಹವಾಸ...

ಪ್ರೀತಿ ಸಿಗದ  ಕಣ್ಣೀರಿನ ಜೊತೆ  ಬದುಕು.. .. !

ನಿನ್ನ ಜೊತೆಯಾಗಿದ್ದರೆ ಸುಖವಾಗಿರುತ್ತಿದ್ದಳೇನೋ...!.. "


ಸಾವಿರ ಸೂಜಿಗಳಿಂದ ಹೃದಯವನ್ನು ಚುಚ್ಚಿದಂತಾಯಿತು.... 

 ಅಯ್ಯೋ.... !!..

ಬೇಡ ಬೇಡವೆಂದರೂ
ಕಣ್ಣಲ್ಲಿ ದಳ ದಳ ನೀರು ಇಳಿಯುತ್ತಿತ್ತು..

ಹೃದಯ ಚೀರಿತು...

ಕಣ್ಣು ಒರೆಸಿಕೊಂಡೆ..

ಬಾಳೆ ಎಲೆ  ನೋಡಿದೆ... 

ಎಲ್ಲವೂ ಮಂಜು ಮಂಜಾಗಿತ್ತು.... 


ಕಿಡಕಿಯಿಂದ ಗಾಳಿ ಜೋರಾಗಿ ಬಂತು... 
ಮೊಂಬತ್ತಿ ಆರಿಹೋಯಿತು.. 

ಕತ್ತಲು.... 


ಕತ್ತಲಿಗೆ ಎಲ್ಲ  ಬಣ್ಣಗಳೂ... 

ಭಾವಗಳೂ   ಒಂದೆ... 


( ಕಥೆ )

(ದಯವಿಟ್ಟು ಪ್ರತಿಕ್ರಿಯೆಗಳನ್ನು ನೋಡಿ................ )

28 comments:

ಚುಕ್ಕಿಚಿತ್ತಾರ said...
This comment has been removed by the author.
ಚುಕ್ಕಿಚಿತ್ತಾರ said...

ಪ್ರಕಾಶಣ್ಣ .. ಎಂಥಾ ಪರಿಸ್ತಿತಿ..!!! ಒಳ್ಳೇದಾಯಿತು ಬಿಡಿ.. ಆಗುವುದೆಲ್ಲಾ ಒಳ್ಳೆಯದಕ್ಕೆ..ಕಥೆ ಚನ್ನಾಗಿದೆ ...

Ittigecement said...

ವಿಜಯಾ.... (ಚುಕ್ಕಿಚಿತ್ತಾರ)

ಮಾಸ್ತರು ಹುಡುಗನಿಗೆ ಒಳ್ಳೆಯದಾಗಲಿ ಅಂತ ಹುಡುಗಿಯ ವಿಷಯದಲ್ಲಿ ನಿರ್ಣಯ ತೆಗೆದುಕೊಂಡರು..

ಅವರಿಗೇನು ಗೊತ್ತಿತ್ತು.. "

ಹುಡಗನದ ಜೀವದ ಹಂಬಲ ಆ ಹುಡುಗಿ ಎಂದು ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು....

samanvaya bhat said...

heart touching story prakashanna...sooper... bardira stylooo sooper...

sunaath said...

ಪಾಪ, ಅವರೇನೊ ಒಳ್ಳೆಯ ಉದ್ದೇಶದಿಂದಲೇ ಹಾಗೆ ಮಾಡಿರಬಹುದು. ಪರಿಣಾಮ ಏನಾಯಿತು? ‘ಗುರುಗಳು ಕೊಂದ ಹುಡುಗಿ’ ಎಂದು ಕರೆಯುವಂತಾಯಿತಲ್ಲ!

Anagha Kirana ಅನಘ ಕಿರಣ said...

ಕಥೆಯಾದವಳು

Ittigecement said...

ಸಮನ್ವಯಾ...

ಪ್ರತಿ ಸಂದರ್ಭದಲ್ಲೂ ಆಯ್ಕೆಗಳಿರುತ್ತವೆ..

ಹುಡುಗನಿಗೆ ಹುಡುಗಿಗೆ ನಿವೇದನೆ ಮಾಡುವ ಆಯ್ಕೆ ಇತ್ತು...

ಹುಡುಗನಿಗೆ ಓದಿಸಿದ ಗುರುದಂಪತಿಗಳಿಗೆ..
ಇನ್ನೂ ಚೆನ್ನಾಗಿ ನೋಡಿಕೊಳ್ಳುವ ಆಯ್ಕೆ ಇತ್ತು...

ಆಯ್ಕೆಗಳು ಇಲ್ಲದಿರುವಾಗ..
"ಹಿಂತಿರುಗಿ" ನೋಡುವ ಆಯ್ಕೆ ಇರುತ್ತದಲ್ಲವೆ ?..

ಆಯ್ಕೆಗಳ ಪರಿಣಾಮ "ಭವಿಷ್ಯವ" ..
ಕಾಲವೇ ನಿರ್ಣಯಿಸುತ್ತದೆ...ಅಲ್ಲವಾ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...

Ittigecement said...

ಸುನಾಥ ಸರ್....

ಹುಡುಗರ ಭವಿಷ್ಯದ ಬಗೆಗೆ ವಿಚಾರ ಮಾಡುವ ಯಾವ ಗುರುವೇ ಆಗಲಿ ಇಂಥಹ ನಿರ್ಣಯ ( ಆಯ್ಕೆ )ತೆಗೆದುಕೊಳ್ಳುವದು ಸಾಮಾನ್ಯ...

ಪರಿಣಾಮ ?

ಬದುಕಿನಿಡಿ ಹಂಬಲಿಸಿದ..
ಕಾಡುವ ಹುಡುಗಿ ಹೀಗಾಗಿಬಿಟ್ಟಳೆ ?

ನಾನು ಬರೆವ ಪ್ರತಿ ಬರಹವನ್ನು ನನ್ನಾಕೆಗೆ ಓದಿ ಹೇಳುತ್ತೇನೆ..
ನಿನ್ನೆ ಬರೆದು ಪೋಸ್ಟ್ ಮಾಡುತ್ತಿದ್ದೆ..

ನನ್ನಾಕೆ ಎರಡು ಮೂರು ಬಾರಿ ಕಂಪ್ಯೂಟರ್ ಇಣುಕಿದಳು..

"ಏನು ಬರೆದಿದ್ದೀರಿ ? ನನಗೂ ಓದಿ ಹೇಳಿ..."

ನಿಜ ಹೇಳ್ತೀನಿ..
ನನಗೆ ಓದಿ ಹೇಳುವ ಸಾಧ್ಯತೆ ಇಲ್ಲವಾಗಿತ್ತು..

ದುಃಖ ಒತ್ತರಿಸಿ ಬರುತ್ತಿತ್ತು..

ಭಾವನೆಗಳೇ ಹಾಗೆ..
ಭಾವಿಸಿಕೊಂಡರೆ ಉಂಟು... ಇಲ್ಲವಾದಲ್ಲಿ ಇಲ್ಲ..

ಸರ್..
ನಿಮ್ಮ ಪ್ರೋತ್ಸಾಹಕ್ಕೆ ಪ್ರೀತಿಯ ವಂದನೆಗಳು....

Badarinath Palavalli said...

ಆ ಕಣ್ಣುಗಳನ್ನು ನಿಜವಾಗಲೂ ಮರೆಯಲು ಸಾಧ್ಯವಿಲ್ಲ - ನಾಯಕನ ಕಣ್ಣುಗಳ ಬಣ್ಣವೇ ಅಂತದು ಅದರಲ್ಲಿ ಮಾಂತ್ರಿಕ ಶಕ್ತಿಯಿದೆ. ಉದ್ದ ಲಂಗದ ಬಾಲೆಗೆ ತಟ್ಟನೆ ಹೊಳೆದುಬಿಟ್ಟಿರುತ್ತದೆ ನೋಡಿದ ಕೂಡಲೇ.

ತಮ್ಮ ಗುರುಗಳ ಮನೆ ವಾತಾವರಣ ಓದಿದ ಮೇಲೆ ನನ್ನ ದಾರುಣ ಎಣ್ಣೆಯ ಗಿರಣಿಯ ಕೆಲಸದ ದಿನಗಳು ನೆನಪಾದವು. ಯಾಕೋ ಬಡತನಕ್ಕಿಂತಲೂ ಶಾಪ ಇನ್ನೊಂದಿಲ್ಲ ಅನಿಸಿಬಿಡುತ್ತದೆ ಪ್ರಕಾಶಣ್ಣ.

ಕ್ಷಮೆ ಎನ್ನುವ ಶಬ್ಧವಿಲ್ಲದೆ.. ಕ್ಷಮೆ ಕೋರಿಬಿಡುತ್ತಾರೆ.. ಅಷ್ಟಾದರೂ ಅಪರಾಧಿ ಮನೋಭಾವ ಕಾಡುತ್ತದಲ್ಲ ಅದು ಸಾಕು ಎಷ್ಟೋ ಜನಕ್ಕೆ ಅದರ ಪರಿವೆಯೂ ಇರಲಾರದು.

"ನಿನ್ನ ಜೊತೆಯಾಗಿದ್ದರೆ ಸುಖವಾಗಿರುತ್ತಿದ್ದಳೇನೋ...!.. "

ಸಾವಿರ ಸೂಜಿಗಳಿಂದ ಹೃದಯವನ್ನು ಚುಚ್ಚಿದಂತಾಯಿತು.... "
ನಿಜವಾಗಲೂ ಅಯ್ಯೋ...

ಕತ್ತಲು....

ಕತ್ತಲಿಗೆ ಎಲ್ಲ ಬಣ್ಣಗಳೂ...
ಭಾವಗಳೂ ಒಂದೆ...
ಕೆನ್ನೆಯಿಂದಿಳಿವ ಕಣ್ಣೀರು,
ಹಸಿವಿನಿಂದ ಆಳಕಿಳಿದ ಉದರ,
ಕಾಣದು ನಮಗೇ...

Srikanth Manjunath said...

ಘಟ್ಟ ಪ್ರದೇಶದಲ್ಲಿ, ಕರಾವಳಿಯ ತೀರದಲ್ಲಿ ಮಳೆಯಲ್ಲಿ ನೆನೆಯುವುದು ಒಂದು ರೀತಿಯ ಅನನ್ಯ ಖುಷಿ ಕೊಡುತ್ತದೆ.. ಒಮ್ಮೆಗೆ ಬರ್ ಎಂದು ಬರುವ ಮಳೆ ಅಷ್ಟೇ ಬೇಗ ನಿಲ್ಲುತ್ತದೆ.. ಮೈ ಬಟ್ಟೆ ಒಣಗಿತು ಅನ್ನುವಷ್ಟೊತ್ತಿಗೆ ಮತ್ತೆ ಮಳೆ.. ಮತ್ತೆ ಒಣಗುವ ಪ್ರಕ್ರಿಯೆ.. "ಆಯ್ಕೆ" ಓದುತ್ತಾ ಹೋದ ಹಾಗೆ ನನಗೆ ಈ ಭಾವ ಕಾದ ಹತ್ತಿತು. ಇಳಿಜಾರಿನ ಬದುಕಲ್ಲಿ ಕೈಹಿಡಿದು ಏರು ಬದಿಗೆ ತಂದ ಮಹನೀಯರನ್ನು ನೆನಪಿಸಿಕೊಳ್ಳುವ ಉದಾರ ಗುಣ, ಕಷ್ಟಗಳನ್ನು ಮೆಟ್ಟಿ ಅದನ್ನೇ ಚಿಮ್ಮು ಹಲಗೆ ಮಾಡಿಕೊಂಡು ಬಾಳಿನ ಸಾಗರದಲ್ಲಿ ಸಂತಸದಾಯಕ ನೌಕೆಯಲ್ಲಿ ತೇಲುತ್ತಿರುವ ಜೀವನ, ನಮಗೆ ಅರಿವಿಲ್ಲದೆ ನಮ್ಮ ಜೀವನವನ್ನು ರೂಪಿಸುವ ಕಾಣದ ಕೈಗಳು, ಆ ಕಾಣದ ಕೈಯನ್ನು ಕಂಡಾಗ ನಡೆಯುವ ತುಮುಲಗಳು ವಾವ್ ಎಲ್ಲವೂ ಸೊಗಸಾಗಿವೆ. ಒಮ್ಮೆ ಕಣ್ಣನ್ನು ಮಗದೊಮ್ಮೆ ಆನಂದ ಭಾಷ್ಪ ಸುರಿಸುವ ತಾಕತ್ ನಿಮ್ಮ ಬರವಣಿಗೆಯಲ್ಲಿದೆ. ಕೆಲವೊಮ್ಮೆ ಆಯ್ಕೆಗಳು ನಮ್ಮ ಕೈಯಲ್ಲಿ ಇಲ್ಲದಿದ್ದರೂ.. ಅಥವಾ ಇದ್ದರೂ ಅದನ್ನು ದೂರದಿಂದ ಗುರುತಿಸಿ ಶಬರಿ ಚೆನ್ನಾದ ಹಣ್ಣುಗಳನ್ನು ಮಾತ್ರ ರಾಮನಿಗೆ ನೀಡಿ ಸಾರ್ಥಕ ಜೀವನ ಪಡೆದಂತೆ ಮಾಸ್ತರು ಶಿಷ್ಯನ ಜೀವನ ರೂಪಿಸುವುದಕ್ಕೆ ನೀಡಿದ ಒಂದು ತಿರುವು ಎಂಥಹ ಮಹತ್ ತಿರುವು.. ಸೂಪರ್ ಪ್ರಕಾಶಣ್ಣ ಬಲು ಇಷ್ಟವಾಯಿತು.. ಹಾಟ್ಸ್ ಆಫ್ ನಿಮ್ಮ ಶ್ರದ್ಧೆ, ಛಲಯುಕ್ತ ಜೀವನ ಶೈಲಿಗೆ!

ಸತೀಶ್ ನಾಯ್ಕ್ said...

ನಾನು ಕೂಡ ಹೀಗೊಂದು ಹುಡುಗಿಯನ್ನ ಇಷ್ಟ ಪಟ್ಟಿದ್ದೆ ಪ್ರಕಾಶಣ್ಣ.. ನಂಬ್ತೀರೋ ಬಿಡ್ತೀರೋ ಲೆಟರ್ ಕೂಡಾ ಕೊಟ್ಟಿದ್ದೆ.. ಐದು ವರ್ಷದ ಹಿಂದೆ. ಲೆಟರ್ ನಲ್ಲಿ ಏನೇನು ಬರೆದಿದ್ದೆ ಅನ್ನೋದು ಈಗಲೂ ನೆನಪಿದೆ, ಒಂದು ಶಬ್ಧಕ್ಕೂ ನಾನು ನಿವೇದನೆ ಮಾಡಿಕೊಂಡಿರಲಿಲ್ಲ. ಕೇವಲ ಅವಳ ಕುರಿತಾಗಿನ ಆಕರ್ಷಣೆಯ ಸಂತೋಷವನ್ನಷ್ಟೇ ಪುಟಗಟ್ಟಲೆ ಬರೆದಿದ್ದೆ, ಕೆಲವು ಕವನಗಳೊಂದಿಗೆ. ಅಷ್ಟೇ ಆ ನಂತರ ಅವಳನ್ನು ಕಾಣುವ ಅಥವಾ ಅವಳ ಪ್ರತಿಕ್ರಿಯೆಗೆ ಕಾಯುವ ಕೆಲಸ ಮಾಡಲಿಲ್ಲ. ನನಗೆ ಕೆಲಸ ಸಿಕ್ಕ ಒಂದು ತಿಂಗಳಿಗೆ ಅವಳಿಗೆ ಮದುವೆಯಾಯ್ತಂತೆ. ಒಂದು ದಿನವೂ ಅವಳ ಜೊತೆ ಒಂದು ಮಾತೂ ಆಡಲಿಲ್ಲ. ಧೈರ್ಯ ಮಾಡಿ ಲೆಟರ್ ಹೇಗೆ ಕೊಟ್ಟೆ ಅನ್ನೋದೇ ಅರ್ಥ ಆಗ್ತಿಲ್ಲ. ಗುರುಗಳು & ವಾರಾನ್ನದ ವಿಷಯ ಹೊರತಾಗಿ ಮಿಕ್ಕೆಲ್ಲ ಕಥೆಯೂ ನನ್ನದೇ ಅನ್ನುವಂತಿತ್ತು. ಆ ನನ್ನ ಹುಡುಗಿ ಬಹುಷಃ ಬದುಕಿನಲ್ಲಿ ಚೆನ್ನಾಗಿರಬಹುದು ಅನ್ನೋ ನಂಬಿಕೆಯಲ್ಲೇ ಐದು ವರ್ಷ ಕಳೆದಿದ್ದೇನೆ. ಅವಳು ಚೆನ್ನಾಗೆ ಇರುತ್ತಾಳೆ ಅನ್ನುವ ಆಶಾ ಭಾವನೆಯೂ ಕೂಡ. ಯಾಕೋ ಅವಳ ಬಗ್ಗೆ ಇನ್ನಿಲ್ಲದಂತೆ ಯೋಚಿಸುವಂತಾಗಿ ಬಿಡ್ತು ಈ ಕಥೆಯ ಅಂತ್ಯಕ್ಕೆ. ನನಗಂತೂ ಬಹಳ ಇಷ್ಟವಾದ ಕಥೆ. ಧನ್ಯವಾದಗಳು ಪ್ರಕಾಶಣ್ಣ.

shubha hegde said...

oh! this story mooes to heart..at the end i got emotional.. cofused whether to feel proud to his social status or to feel sorrow to his love status.. How did you choice the tittle 'choice' here?.. Infact poverty has no chance to chice.. it mooves according to its basic requirements... here also he did not have option to choice since there might be more 'to build than to dream'.. and 'no great works can be done without sacrifice'.. however why do people consider 'to be fall in love is to fall in life falure of life?.. obiviously this is wrong concept..
At the end after discloser of un expected truth heart might be burning with out flames!..despair of loves makes unable to taste.. very heart touching story u have framed here.

bilimugilu said...

ಕನಸಾಗಿಹೋದಳು ಆ ಹುಡುಗಿ...
ಭಾವನೆಗಳೇ ಹಾಗೆ..ಭಾವಿಸಿಕೊಂಡರೆ ಉಂಟು... ಇಲ್ಲವಾದಲ್ಲಿ ಇಲ್ಲ..
ಕಥೆ ತು೦ಬಾ ಇಷ್ಟವಾಯ್ತು ಪ್ರಕಾಶ್ ಜೀ... ವಿಪರೀತವಾಗಿ ಮನ ಮುಟ್ಟಿದೆ.

Anitha Naresh Manchi said...

ಕಳೆದ ಕಾಲ ಮತ್ತೆ ಬಾರದು.. :( ಒಳ್ಳೆಯ ಕಥೆ

PAGAL PRADEE said...

hudugi bagge swalpa besara agutte

Ittigecement said...

ಅನಘ ಕಿರಣ....

ಹದಿಹರೆಯದ ಹಸಿ ಪ್ರೇಮ ಅದೇಕೆ..
ಯಾವಾಗಲೂ
ಎದೆಯಲ್ಲಿ ಹಸಿರಾಗಿ ಉಳಿದುಬಿಡುತ್ತದೊ.. ! ಗೊತ್ತಿಲ್ಲ..

ವಿನುತಾ ಫೋನ್ ಮಾಡಿದ್ದರು..

"ಪ್ರಕಾಶಣ್ಣ..
ಒಬ್ಬ ಬಡಕಲು ಹುಡುಗ ಹೈಸ್ಕೂಲ್ ದಿನಗಳಲ್ಲಿ ನನ್ನನ್ನೇ ನೋಡುತ್ತಿದ್ದ..

ಮೂರು ವರ್ಷದಲ್ಲಿ ಒಂದೂ ದಿನವೂ ಮಾತನಾಡಲಿಲ್ಲ..

ಚುರುಕಾಗಿದ್ದ..

ಈಗಲೂ ಆಗಾಗ ನೆನಪಾಗುತ್ತಾನೆ "

ಹೇಳಿಕೊಳ್ಳಲಾಗದ ಭಾವ
ಒಳಗೊಳಗೆ
ಹುದುಗಿ..
ಆಗಾಗ ಹಸಿರಾಗಿ..
ಚಿಗುರುತ್ತಿರುತ್ತವೆ...

ಅಂಥಹ ಹದಿಹರೆಯದ ಪ್ರೇಮಕ್ಕೊಂದು ಸಲಾಮ್...

ಥ್ಯಾಂಕ್ಯೂ ಹರ್ಷ....

ashwath said...

ಮೇಲೆ ನಿಮ್ಮ ಕಥೆಯನ್ನು ಕೇಳಿದರೆ ಕಣ್ಣಲ್ಲಿ ನೀರು ತುಂಬುತ್ತದೆ.. ಇದು ಬರಿ ಕಥೆಯಲ್ಲ ವ್ಯಥೆ.ಅನುಭವಿಸಿದನ್ನು ಕಣ್ಣು ಕಟ್ಟುವಂತೆ ಬರೆದಿದ್ದೀರಿ.. ಒಬ್ಬೊಬ್ಬರ ಒಂದೊಂದು ಬಾಳಲ್ಲಿ ಈ ಥರ ಸನ್ನಿವೇಷಕ್ಕೆ ಒಳಗಾಗಿರುತ್ತಾರೆ.ಪ್ರೀತಿ ಎನ್ನೋದು ಒಂದು ಮರೆಯಾಲಾಗದ ಅನುಭಂದ, ವರ್ಣಿಸಲು ಪದಗಳು ಸಾಲದು, ಅದನ್ನು ಅನುಭವಿಸಿದವನಿಗೆ ಮಾತ್ರಗೊತ್ತಾಗುತ್ತೆ. ... ಪ್ರೀತಿ ಅನ್ನೋದು ಅನುಭವಿಸಿದವನೇ ಪುಣ್ಯ ಹಾಗಾಗಿ ಎಲ್ಲರಿಗೂ ಆ ಪುಣ್ಯ ಸಿಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ.. ವಂದನೆಗಳು ಅಶ್ವತ್ ಬಿಡದಿ..

Pradeep Rao said...

ಅಯ್ಯೋ.. ಅಂತ್ಯದಲ್ಲಿ ಹೃದಯ ಹಿಂಜಿದಂತಾಯಿತು! ಜೀವನ ಈ ರೀತಿ ಹಲವರಿಗೆ ಹಲವು ಸಲ Bus miss ಆಗಿಬಿಡುತ್ತೆ... ಆದರೂ ನಾಯಕ ಜೀವನ ಸುಂದರವಾಗಿರುವುದು ಬಹಳ ಸಂತೋಷವಾಯ್ತು!

ಕನಸು ಕಂಗಳ ಹುಡುಗ said...

ಎಂದೋ ಕಣ್ ಮಿಲಾಯಿಸಿದ ಹುಡುಗಿಯ ನೆನಪು ಹೃದಯದಲ್ಲಿ
ಬತ್ತಿಲ್ಲ ಇನ್ನೂ... ಇನ್ನೂ ಕೂಎಆ ಮನಸ್ಸು ಅವಳ ಬಗ್ಗೆ ಮಧುರ ನೆನಪುಗಳ ಮಾಲೆ ಹೆಣೆಯುತ್ತೆ.... ಆದರೆ ಮಾಸ್ತರರು ಹೇಳಿದ ಅವಳ ವಿಷಯ ಕೇಳಿದ ಮೇಲೆ ಆ ವಿಷಯ ಎಷ್ಟು ಕಾಡಬಹುದು... ಎಲ್ಲಿಯವರೆಗೆ ಕಾಡಬಹುದು.....
ಅವಳಿಗೂ ಇಷ್ಟವಿತ್ತು ಮತ್ತು ಅವಳ ಈಗಿನ ಪರಿಸ್ಥಿತಿ ಹುಡುಗನ ಮನಸ್ಸಲ್ಲಿ ಬೀರುವ ಪರಿಣಾಮ ಹೇಗಿರಬೇಡ....

ತುಂಬಾ ಚಂದದ ಕಥೆ ಪ್ರಕಾಶಣ್ಣಾ....

ಮನಸು said...

ಕೈ ತಪ್ಪಿದ ಪರಿಸ್ಥಿತಿಗಳು ಕೆಲವೊಮ್ಮೆ ಜೀವನ ಪೂರ್ತಿ ಕಾಡುತ್ತವೆ.

Veena DhanuGowda said...

Each and every person would have come across such situations in life.. But most of us are helpless..
Yen madodu manushya janmane astu !!! alwa ???... Expect the unexpected things in life

Swarna said...

ನಿಮ್ಮ ಕಥೆಗಳೆಂದರೆ ಹೊಸ್ತಿಲ ಮೇಲಿನ ದೀಪ ಆಚೆಯೂ ಬೆಳಕಿದೆ ಈಚೆಯೂ. ಅವು ಸರಿಯೂ ಹೌದು ತಪ್ಪೂ ಹೌದು. ಒಂದು ಕ್ಷಣ ಅವನಿಂದ ಅವಳನ್ನು ಕಸಿದುಕೊಂಡರಲ್ಲ ಎನಿಸಿದರೆ ಮರು ಕ್ಷಣ ಸಿಕ್ಕರೆ ಏನಾಗುತ್ತಿತ್ತೋ? ಎನಿಸುತ್ತದೆ. ಕತ್ತಲಿಗೆ ಎಲ್ಲರೂ ಸಮ ...ನಿಜ ಚಂದದ ಕಥೆ

aghanashini said...

ಆತ್ಮೀಯ ಪ್ರಕಾಶಣ್ಣ...

ನಿನ್ನ ಬರಹಗಳ ಪರಿಚಯ ಆಗಿದ್ದು ಇತ್ತೀಚೆಗೆ..
ಸಂಧ್ಯೆಯಂಗಳದ ಬರಹಗಳನ್ನು ಓದುತ್ತಿದ್ದಾಗ ಇಣುಕಿತು..
ಓದಿದಂತೆಲ್ಲ ನಾನು ನಿನ್ನ ಫ್ಯಾನು..

ಓದಿದಂತೆಲ್ಲ ಮನಸ್ಸು ಮೂಕವಾಗುತ್ತದೆ..
ಎಲ್ಲೋ ಈ ಕತೆಗಳು ನಮ್ಮ ಬದುಕಿನ ಚಿತ್ರಣವಾ ಅನ್ನಿಸುವ ಕಾರಣ ಪ್ರಕಾಶಣ್ಣನ ಕಥೆಗಳನ್ನು ಓದಬೇಕಾ..? ಬೇಡವಾ.. ಅನ್ನೋ ಭಯ.. ಓದಿದರೆ ನನ್ನ ಬರುಕು ಮತ್ತೆ ನೆನಪಾಗಿ ಕಣ್ಣೀರು ಹನಿಯಾಗಿ ಇಳಿದುಬಿಡುತ್ತದೆಯೋ ಎನ್ನುವ ದುಗುಡ...

ಮತ್ತೊಮ್ಮೆ ಖುಷಿ ಕೊಟ್ಟಿದೆ ಪ್ರಕಾಶಣ್ಣ...

(ಸಚ್ಚಿದಾನಂದ ಹೆಗಡೆ ಸರ್ ಮಗಳ ಮದುವೆಯಲ್ಲಿ ಸಿಕ್ಕಿದ್ದ ನೆನಪಿದೆಯಾ..?)

Shruthi B S said...

ಪ್ರಕಾಶಣ್ಣ ಬಹಳ ದಿನಗಳ ನ೦ತರ ನಿಮ್ಮ ಬ್ಲಾಗಿಗೆ ಭೇಟಿ ನೀಡಿದೆ. ಒ೦ದು ಉತ್ತಮವಾದ ಕಥೆಯನ್ನು ನೀಡಿದ್ದೀರಿ. ಕಾಮೆ೦ಟುಗಳನ್ನೂ ಓದಿದೆ. ಏನು ಹೇಳಬೇಕೆ೦ದು ತಿಳಿಯುತ್ತಿಲ್ಲ ಚನ್ನಾಗಿದೆ ಎ೦ದಷ್ಟೇ ಹೇಳಬಲ್ಲೆ :)

ಚಿನ್ಮಯ ಭಟ್ said...

ಅಂದು ಬರೆದು ಬಾರದ ಚೀಟಿ,
ಇಂದು ಬಂದಿದೆ ಕಣೆ ಹುಡುಗಿ...
ಒಂದಿಷ್ಟು ದೀರ್ಘವಿರಾಮಕೊಟ್ಟು ,
ನಾ ಬಿಟ್ಟ ಕಣ್ಣೀರಿನಂಗಿ ತೊಟ್ಟು..

ಬೆಟ್ಟು ಬಿದ್ದಿಲ್ಲ ಕಾಲಾಂತರದಲಿ,
ಭಾವವಿನ್ನೂ ಹಸಿಯಾಗಿದೆ,
ಆದರೆ,ವಿರಹದಕಾವಿಗೋ,ಕೈಸಿಗದನೋವಿಗೂ
ಅಕ್ಷರಗಳುರಿದು ಕರಿಮಸಿಯಾಗಿದೆ...

ನಿನ್ನಪೆನ್ನಿನ ಶಾಯಿಯ ಸ್ಪರ್ಶಮಾತ್ರದಲೆ,
ವರ್ಣಮಾಲೆಯೆದ್ದು ನಲಿದಾಡಿದೆ..
ಆದರೆ,ಬರಿಗಣ್ಣುಗಳದನು ಗುರುತಿಸಲಾಗದೇ
ಚಾಲೀಸಿನ ಚಸ್ಮಕ್ಕೆ ತಡಕಾಡಿದೆ....

ಕಟ್ಟಿಟ್ಟ ಕನಸಹೊತ್ತಿಗೆಗಳೆಲ್ಲಾ
ಈಗ ಒಂದೊಂದೇ ಬಿಚ್ಚಿಕೊಳ್ಳುತ್ತಿವೆ...
ನಿನ್ನೆಪತ್ರಿಕೆಯನಿಂದು ಮಾರಲಾಗಂದೆಂಬುದನರಿತು
ಮತ್ತೆ ಸದ್ದಿಲ್ಲದೇ ಮುಡುಗಿ ಮಡಚಿಕೊಳ್ಳುತ್ತಿವೆ...

ನಿನ್ನಪಾತ್ರವನೂ ಹೊಲಿದು ಬರೆದಿದ್ದ ನಾಟಕದಿ,
ನೀನಿಲ್ಲ,ನಾನೊಬ್ಬನೇ ಹಳೆಯ ಪಾತ್ರವಾಗಿದ್ದೇನೆ..
ಹೊಸ ಮುಖಗಳೊಡಗೂಡಿ ಕಥೆಹೇಳುತ್ತಾ,
ಅವರಿಗಾಸರೆಯಾಗುವ ಸಂಘಸೂತ್ರಧಾರನಾಗಿದ್ದೇನೆ...

ಅಂದು ಬರೆದು ಬಾರದ ಚೀಟಿ,ಇಂದು ಬಂದಿದೆ .....
ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,
ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ..

umesh desai said...

ಬದುಕು ಕೊಟ್ಟ ಗುರು ಅಂದ್ತಿ ಆದ್ರ ಒಂದು ಕೋನದಿಂದ ನೋಡಿದ್ರ
ಅವರು ವಿಲನ್ ಅನಸ್ತಾರ...

ಸಂಧ್ಯಾ ಶ್ರೀಧರ್ ಭಟ್ said...

ಬದುಕಿನಲ್ಲಿ ಆಯ್ಕೆಗಳು ಸಹಜ. ಕೆಲವೊಮ್ಮೆ ಕವಲು ದಾರಿಯಂಚಲ್ಲಿ ತಂದಿಟ್ಟು ಬದುಕು ಆಯ್ಕೆಗಳನ್ನು ನಮಗೆ ಬಿಟ್ಟು ಬಿಡುತ್ತದೆ. ಯಾವುದೋ ಒಂದನ್ನು ಆರಿಸಿಕೊಂಡು ನಾವು ನಮ್ಮ ದಾರಿಯಲ್ಲಿ ಸಾಗಿಬಿಡಬಹುದು ಆದರೆ ಕೆಲವೊಮ್ಮೆ ನಮ್ಮ ಆಯ್ಕೆಗಳಲ್ಲಿ ಇನ್ನೊಬ್ಬರ ಜೀವನವೇ ನಿಂತಿರುತ್ತದೆ ಎಂದರೆ ಅದಕ್ಕಿಂತ ಕಷ್ಟ ಇನ್ನೊಂದಿಲ್ಲ ಎನಿಸುತ್ತೆ .

Poorvi said...

i remembered my first crush...its good one