Wednesday, February 27, 2013

ನಿರ್ಗಮನ...


ಮೈ.. ಕೈ ನೋವು ಜಾಸ್ತಿಯಾಗಿತ್ತು.... 
ಅತ್ತಿತ್ತ ಹೊರಳಾಡಿದೆ.... 

ನನ್ನ .. 

ನೋವಿನಲ್ಲೂ  ರಾಧೆಯ ನೆನಪು ಸಿಹಿ.. ಸವಿ .... !

ನನ್ನ ರಾಧೆ ಇದ್ದಾಳಲ್ಲ...

ಅವಳೊಂದು ವಿಚಿತ್ರ...

"ಕೃಷ್ಣಾ...

ನನಗಾಗಿ ಕೊಳಲ ನುಡಿಸು...."

ಕೊಳಲೆಂದರೆ ನನಗೆ ಪಂಚ ಪ್ರಾಣ... ...

ನಾನು ಹೇಳಲಾಗದ ಭಾವಗಳಿಗೊಂದು ಅದು ಧ್ವನಿ... !

ಕಣ್ಮುಚ್ಚಿ..

ತನ್ಮಯನಾಗಿ ನುಡಿಸುತ್ತಿದ್ದೆ...

ಗಿರಿ 

ಪರ್ವತಗಳನ್ನೇರಿ... 
ಆಕಾಶದಲ್ಲಿ.. 
ಮೋಡಗಳ ಜೊತೆಯಾಗಿ....  ತೇಲಿ... ತೇಲಿಹೋಗುತ್ತಿದ್ದೆ.... 

"ನನ್ನ ಮುದ್ದು ಕೃಷ್ಣಾ..

ನಿನ್ನ ಮುದ್ದಾದ ತುಟಿಗಳು ನನಗೆ ಮಾತ್ರ ಬೇಕು...

ಬಾ..

ನನ್ನ ಅಧರಗಳಲ್ಲಿ .. 
ನಿನ್ನ ಕೊಳಲ ನುಡಿ ನುಡಿಸು....

ನಿನ್ನಿಷ್ಟದ ರಾಗ ನುಡಿಸು ಬಾ..."


ಹುಚ್ಚು ರಾಧೆ... !! 

ನನಗೆ ನಗು ಬಂತು... ನಕ್ಕೆ...

" ನಗಬೇಡ ಶ್ಯಾಮಾ....


ನಾನು ಎದುರಿಗಿದ್ದರೂ...

ನನ್ನನ್ನು  ಬಿಟ್ಟು .. 
ಕಣ್ಮುಚ್ಚಿ ಈ ಕೊಳಲಿಗೆ ತುಟಿ ಹಚ್ಚಿ ಅನುಭವಿಸುವೆಯಲ್ಲ...
ಅದು ಹೇಗೊ ??.... 

ನನ್ನಲ್ಲಿ ಇಲ್ಲದ್ದು ಈ ಕೊಳಲಲ್ಲಿ ಏನಿದೆ ಶ್ಯಾಮಾ  ? "


ನಾನು ರಾಧೆಗೆ ಕೊಳಲು ಕೊಟ್ಟೆ...


"ನೀನೇ ನೋಡು... 

ಏನಿದೆ ಅಂತ..."

ರಾಧೆ ಕೊಳಲ ಒಳಗೆ ಇಣುಕಿ ನೋಡಿದಳು..


" ಇದರಲ್ಲಿ ಏನೂ ಇಲ್ಲ .. 

ನನ್ನ ಶ್ಯಾಮಾ...."

"ಈ ಕೊಳಲು ...

ನನ್ನ ಬಳಿ ಬಂದಾಗ .. 
ಏನನ್ನೂ  ಬಯಸದೆ ಬರುತ್ತಾಳೆ...

ನನ್ನ ಅಧರ ಸೋಕಿದಾಗಲೂ ... 

ಏನನ್ನೂ ಬೇಡುವದಿಲ್ಲ....
ಬಯಸುವದಿಲ್ಲ... 

ನೀನು  ಹಾಗಲ್ಲ.... "


ರಾಧೆ ನನ್ನ ಬಾಯಿ ಮುಚ್ಚಿದಳು....

ಬಿಗಿಯಾಗಿ ಅಪ್ಪಿದಳು...

"ಶ್ಯಾಮಾ....

ನನ್ನ ಮುಂದೆ ಯಾರನ್ನೂ ಹೊಗಳಬೇಡ..
ಈ ಕೊಳಲನ್ನೂ ಸಹ....

ನನ್ನ ಮುದ್ದು ಶ್ಯಾಮ ನನ್ನವನು .. 

ನನಗೆ ಮಾತ್ರ ಬೇಕು.... "... 

ಪ್ರೇಮವಿದ್ದಲ್ಲಿ ಅಧಿಕಾರವಿರಲೇ.... ಬೇಕಾ ?


ನನ್ನ .. 

ಏಕಾಂತದಲ್ಲೂ ಕಾಡುವಳು ಈ ರಾಧೆ....!

ರಾಧೆಯ ಹುಚ್ಚು ಪ್ರೇಮ ನನಗೂ ಇಷ್ಟ...


ಅತ್ತಿತ್ತ ಹೊರಳಾಡಿದೆ...

ಮೈ ಕೈ ನೋಯುತ್ತಿತ್ತು...

ನಿನ್ನೆ ಕಂಸ ಕಳುಹಿಸಿದ ರಾಕ್ಷಸನೊಡನೆ ಹೋರಾಡಿ ಸಾಯಿಸಿದ್ದೆ...


ಅಷ್ಟರಲ್ಲಿ ಬಾಗಿಲು ಕಿರ್ರ್.. ಶಬ್ಧ...


"ಕೃಷ್ಣಾ..."


" ಯಾರದು...?"


"ನಾನೊಬ್ಬ ಗೋಪಾಲಕ..

ನಂದ ಪ್ರಭುಗಳು ಕಳುಹಿಸಿದ್ದಾರೆ...
ನಿನ್ನ  ಸೇವೆ ಮಾಡಲಿಕ್ಕೆ..."

ನಾನು ಪ್ರಶ್ನಾರ್ಥಕವಾಗಿ ನೋಡಿದೆ...


"ಕೃಷ್ಣಾ...

ನಾನು ಚೆನ್ನಾಗಿ ತೈಲ ಸ್ನಾನ ಮಾಡಿಸುವೆ...
ಗೋಕುಲದಲ್ಲೇ ಪ್ರಸಿದ್ದ..."

ಆತ ... 

ತಾನು ತಂದಿದ್ದ ತೈಲವನ್ನು ಕೈಗೆ ಹಾಕಿಕೊಂಡು ಕಾಲುಗಳಿಗೆ ಸವರತೊಡಗಿದ.....

ನನಗೆ ಹಿತವಾಗುತ್ತಿತ್ತು...


"ನಾನು ನಿನ್ನ ಭಕ್ತ ...

ಕೃಷ್ಣಾ.....
ನಿನ್ನನ್ನು ಹತ್ತಿರದಿಂದ ನೋಡಬೇಕು... 
ಮಾತನಾಡಿಸಬೇಕು ...
ಎನ್ನುವದು ನನ್ನ ಬಹುದಿನಗಳ ಹಂಬಲ.. "

ಆತನ 

ನಡೆ..ನುಡಿಯಲ್ಲಿ  ಭಕ್ತಿ ಗೊತ್ತಾಗುತ್ತಿತ್ತು...

ಆತ ಮೃದು ಹೂವನ್ನು ಮುಟ್ಟುವಂತೆ ನನ್ನನ್ನು ಸ್ಪರ್ಷಿಸುತ್ತಿದ್ದ....


ಆತ ...

ಸಣ್ಣ ಧ್ವನಿಯಲ್ಲಿ ಮಾತನಾಡುತ್ತ ತೈಲ ಹಚ್ಚುವದನ್ನು ಮುಗಿಸಿ...
ಹಿತವಾಗಿ ಸ್ನಾನ ಮಾಡಿಸಿದ...

ಓಡೋಡಿ ಹೋಗಿ ಧೂಪವನ್ನು ತಂದ....


"ಕೃಷ್ಣಾ...

ನನ್ನ ಮನೆಯವರೆಲ್ಲ ನಿನ್ನ ಭಕ್ತರು...

ನನ್ನ ಮಡದಿಯಂತೂ ನಿನ್ನ ಹೆಸರಿನಲ್ಲೇ  .. 

ಊಟ...
ನಿನ್ನ ಹೆಸರಲ್ಲೇ ದಿನ ... 
ಬೆಳಗು ... ರಾತ್ರಿ.... ನಿನ್ನದೇ ಧ್ಯಾನ... !

ಅವಳ ಮನದಲ್ಲಿ .. ನೀನಿಲ್ಲದ ಕ್ಷಣವಿಲ್ಲ...


ಪ್ರತಿ ಕ್ಷಣ ನಿನ್ನದೇ ಭಜನೆ...."


" ಹೌದಾ.. !

ಯಾರವಳು....? "

"ರಾಧೆ....."


"ಯಾವ ರಾಧೆ.... ?"


"ಯಶೋಧೆಯಮ್ಮನ ಕಣ್ಣು ತಪ್ಪಿಸಿ...

ನಿನಗೆ .. 
ನಿತ್ಯ ಬೆಣ್ಣೆ ಕೊಡುವಳಲ್ಲ...ಆ  ರಾಧೆ...!

ನಮ್ಮ ಗೋಕುಲದಲ್ಲಿ ಒಬ್ಬಳೇ ರಾಧೆ...."...


ಸಾವಿರ ಭರ್ಚಿಗಳಿಂದ ಚುಚ್ಚಿದಂತೆ ಭಾಸವಾಯಿತು...!


ಹೇಳಲಾಗದ .. 

ಅಪರಾಧಿ ಮನೋಭಾವ ನನ್ನೊಳಗೆ......

"ಕೃಷ್ಣಾ...


ಪಾದಗಳನ್ನೊಮ್ಮೆ ಇತ್ತ ಕೊಡು...

ಮೃದುವಾಗಿ ಒತ್ತುವೆ...
ಆಯಾಸ ಕಡಿಮೆಯಾಗುತ್ತದೆ...."

"ಬೇಡ.. ಬೇಡ.. ಸಾಕು...

ನನಗೆ ನಿದ್ದೆ ಬರುತ್ತಿದೆ..
ಸ್ವಲ್ಪ ಹೊತ್ತು ನಿದ್ರಿಸುವೆ..."

"ಕೃಷ್ಣಾ...

ನೀನು ನಿದ್ರಿಸು...

ನನ್ನ ಮಡದಿ ಹೇಳುತ್ತಿರುತ್ತಾಳೆ...


" ಮಲಗಿದ ಕೃಷ್ಣನ ಮುಖ ಇನ್ನೂ ಮುದ್ದಾಗಿರುತ್ತದೆ..."


ನಾನು ಇಲ್ಲೇ ಗಾಳಿಬೀಸುತ್ತ ಇರುವೆ..."


ಮುಗ್ಧ ಭಕ್ತಿ... 

ಉತ್ಕಟ ಪ್ರೇಮ ...
ಎರಡನ್ನೂ ಹೇಗೆ ನಿಭಾಯಿಸಲಿ ?.. 

ನನಗೆ ನಾನು ಹೇಗೆ ಉತ್ತರಿಸಲಿ ?


ವಾತಾವರಣ .. 

ಬದಲಾಗಲು ಕೆಲವು ಶಬ್ಧಗಳು..
ಮಾತುಗಳು ಸಾಕು....

"ಬೇಡ...

ನನಗೆ ಏಕಾಂತ ಬೇಕು....
ದಯವಿಟ್ಟು ಹೊರಟು ಹೋಗು...."

ಆತ ನಿರಾಸೆಯಿಂದ ತಲೆ ತಗ್ಗಿಸಿ...

ನಮಸ್ಕರಿಸಿ ಹೊರಟು ಹೋದ...

ಆತ ಹೋಗುವಾಗ ... 

ಆತನ ಪ್ರತಿ ಹೆಜ್ಜೆ ನನ್ನ ಎದೆಯ ಮೇಲೆ ನಡೆದಂತಿತ್ತು....

ಅತ್ತಿತ್ತ ಹೊರಳಾಡಿದೆ....


ಮತ್ತೆ ಬಾಗಿಲು ಕಿರ್ರ್ ಶಬ್ಧ....


ರಾಧೆ... !!!!!!

ನನ್ನ ರಾಧೆ ಬರ್ತಿದ್ದಾಳೆ... !

ಕಣ್ಣು ಒರೆಸಿಕೊಂಡು ನೋಡಿದೆ... 


ನಿಜ .. !

ರಾಧೆ ಗಡಿಗೆಯಲ್ಲಿ ಬೆಣ್ಣೆ ತಂದಿದ್ದಳು.....

ಓಡೊಡಿ ಬಂದು ತಬ್ಬಿಕೊಂಡಳು..


ಮುಳ್ಳಿಂದ ಚುಚ್ಚಿದಂತಿತ್ತು...

ಕಸಿವಿಸಿ...

"ನನ್ನ ಮನಸ್ಸು ಸರಿ ಇಲ್ಲ..

ದಯವಿಟ್ಟು ದೂರ ಇರು...."

ಕಠಿಣವಾಗಿ ಹೇಳಬೇಕೆಂದುಕೊಂಡೆ... ಆಗಲಿಲ್ಲ...


" ನನ್ನ ಮುದ್ದು ಶ್ಯಾಮಾ...

ನಿನ್ನ ಮನಸ್ಸು ಸರಿ ಮಾಡುವದೇ.. ನನ್ನ ಕೆಲಸ..
ನಾನು ನಿನ್ನ ಸ್ಪೂರ್ತಿ...

ಏನಾಯ್ತು...? "


"ಹೇಳಿದೆನಲ್ಲ..

ಮನಸ್ಸು ಸರಿ ಇಲ್ಲ ಅಂತ.." 

ಕ್ಷಣ..

ಕ್ಷಣಕ್ಕೂ ಭಾವಗಳು ಬದಲಾಗಬಲ್ಲದು...

ಬದಲಾಗುವ ಸಮಯದಲ್ಲಿ ನಾವೂ ಬದಲಾಗಲೇ ಬೇಕು.... 


"ದಯವಿಟ್ಟು ದೂರ ಇರು.... 

ನನ್ನನ್ನು ಮುಟ್ಟಬೇಡ.."

"ಶ್ಯಾಮಾ...

ಆಯ್ತು..

ದೂರ ಕೂಡ ಹತ್ತಿರ ಮಾಡುತ್ತೇನೆ...


ನಾನು ನಿನ್ನನ್ನು ನೋಡಬಹುದಲ್ಲ...."


ಬಹಳ ಹಠಮಾರಿ ಈ ರಾಧೆ...


ರಾಧೆ ನನ್ನನ್ನೇ ನೋಡತೊಡಗಿದಳು...


ನನ್ನ ಹಣೆ...

ಹುಬ್ಬು..
ಕಣ್ಣು... ಕೆನ್ನೆ..
ತುಟಿ...
ಗಲ್ಲ....

ಈ ಜಗತ್ತಿನ ಸಮಸ್ತ ಪ್ರೇಮಧಾರೆ ಆ ನೋಟದಲ್ಲಿತ್ತು....

ಕ್ಷಣ..

ಕ್ಷಣದ ಆ ನೋಟ.. !
ಆ ಆಸೆ.. !
ಆ ಪ್ರೇಮ.. !!

ಅವಳ ನೋಟ ಮೃದುವಾದ ಚುಂಬನದಂತಿತ್ತು.... !

ನನಗೆ ಸುಮ್ಮನಿರಲಾಗಲಿಲ್ಲ...

ಬರಸೆಳೆದು ತಬ್ಬಿಕೊಂಡೆ....

"ಹೇಳು ಕೃಷ್ಣಾ...ಏನಾಯ್ತು...? "


"ಈಗ .. 

ಸ್ವಲ್ಪ ಸಮಯದ ಮೊದಲು .. 
ನಿನ್ನ ಗಂಡ..
ಗೋಪಾಲಕ ಬಂದಿದ್ದ... ತೈಲ ಸ್ನಾನ ಮಾಡಿಸಲು..."

ಇಬ್ಬರಲ್ಲೂ ಮಾತಿರಲಿಲ್ಲ....


ಮಾತುಗಳಿಗೆ ಶಬ್ದ ಸಿಗುತ್ತಿರಲಿಲ್ಲ.... 


ಸ್ವಲ್ಪ ಹೊತ್ತು ಬಿಟ್ಟು ರಾಧೆಯೇ ಕೇಳಿದಳು..


"ಜಾರಿ ..

ಬೀಳುವಾಗ..
ಬಿದ್ದಿದ್ದಷ್ಟೇ ಗೊತ್ತು..

ಎಲ್ಲಿ..  ?

ಏನು ಗೊತ್ತಾಗುವದಿಲ್ಲ....!

ಬೇಕೆಂದು  ಬಿದ್ದಿಲ್ಲವಲ್ಲ...."


"ಬಿದ್ದಮೇಲೆ ... 

ಎದ್ದು ನಿಲ್ಲಲೇ ... ಬೇಕಲ್ಲ... !

ನಾವೂ ನಿಲ್ಲಬೇಕು..."


"ಕೃಷ್ಣಾ....

ಜಾರಿ ಬಿದ್ದ ನೆಲದ ಮಣ್ಣು ಹೇಗೆ ಬಿಡುವದು... ?

ಅಂಟಿಕೊಂಡ ... 

ಕೆಸರಿನೊಡನೆ ನಂಟು ಹೇಗೆ ಬಿಡುವದು...?... "

"ರಾಧೆ..

ನಮಗೆ ಅಂಟಿದ ಕೆಸರನ್ನು ನಾವು ಸ್ವಚ್ಛ ಮಾಡಿಕೊಳ್ಳಬಹುದು... 

ಲೋಕದ ಕಣ್ಣಿನ ಕೆಸರನ್ನು ಏನು ಮಾಡುವದು  ?

ಯಾವಾಗಲೂ ಕೆಸರಿನ ಕಣ್ಣಿನಲ್ಲೇ ನೋಡುತ್ತಾರಲ್ಲ  ... !

ಈ ಕೃಷ್ಣನನ್ನು ಒಬ್ಬರೂ ಅರ್ಥ ಮಾಡಿಕೊಂಡಿಲ್ಲ...


ಯಾರ್ಯಾರು ಹೇಗೆ ಬಯಸಿದ್ದಾರೋ..

ಅವರವರಿಗೆ 
ಅವರು ಬಯಸಿದಂತೆಯೇ .. ಹಾಗೆಯೇ..  ಸಿಕ್ಕಿದ್ದೇನೆ....

ಯಶೋಧೆ ... 

ನಂದರಿಗೆ ಹೆತ್ತ ಮಗನಂತೆಯೇ ಕಂಡಿರುವೆ...

ಅಕ್ರೂರನಿಗೆ ದೇವರಂತೆ...


ದುರುಳ ಕಂಸನಿಗೆ ತನ್ನ ಸಾವಿನಂತೆ...


ಗೋಪಿಕಾಸ್ತ್ರೀಯರಿಗೆ ಅವರ ಮನೋಭಾವಂದಂತೆ.. 

ಪ್ರೇಮ.. ಪ್ರೀತಿಯಂತೆ..ಕಂಡಿರುವೆ..."

"ಶ್ಯಾಮಾ...

ನನಗೆ... ?  !!..."

"ನಿನಗೆ..

ನಿನ್ನ ಪವಿತ್ರ ಪ್ರೇಮದಂತೆ ಸಿಕ್ಕಿರುವೆ... 
ಕಣ್ಮುಚ್ಚಿ ಕೊಟ್ಟಿರುವೆ.... 

ರಾಧೆ...

ನನ್ನ ಈ ಜನ್ಮದಲ್ಲಿ ... 
ನನಗಾಗಿ ನಾನು ಏನನ್ನೂ ಬಯಸಲಿಲ್ಲ....

ಅವರವರ ಭಾವದಂತೆ ... 

ಅವರವರಿಗೆ ಕಂಡಿದ್ದೇನೆ....
ಅವರವರಿಗೆ ಅದನ್ನೇ..  ಕೊಟ್ಟಿರುವೆ..."

ರಾಧೆ ಮತ್ತಷ್ಟು ತಬ್ಬಿಕೊಂಡಳು...


"ನನ್ನ ಪ್ರೇಮಕ್ಕೆ ನೀನು ಪ್ರೇಮ ಕೊಟ್ಟಿರುವೆ.... 


ಸರಿ... 


ಈ ಪ್ರೇಮವನ್ನು ನೀನೂ ಸಹ  ಅನುಭವಿಸಿಲ್ಲವೇ ?... 


ಅವರವರಿಗೆ ಬಯಸಿದ್ದನ್ನು ಕೊಡುವಾಗ .. 

ನೀನೂ ಸಹ ಅನುಭವಿಸಿರುವೆಯಲ್ಲವೇ ? .. 

ಭಕ್ತಿಯನ್ನೋ... 

ಪ್ರೀತಿ.. ಪ್ರೇಮವನ್ನೋ.. 
ಕಾಮವನ್ನೊ... ಅನುಭವಿಸಿಲ್ಲವೇ ?.... 

ಕೊಟ್ಟಿರುವೆ ಎನ್ನುವ ಅಹಂಭಾವ ಇದೆಯಲ್ಲವೇ ?... "

ನಾನು ಸುಮ್ಮನಿದ್ದೆ.... 

ಎಲ್ಲ ಪ್ರಶ್ನೆಗಳಿಗೂ ಮಾತಿನಲ್ಲಿ ಉತ್ತರ ಕೊಡಬೇಕು ಅಂತ ಇಲ್ಲವಲ್ಲ.... 

"ನನ್ನ ಶ್ಯಾಮಾ...


ಹತ್ತಿರವಾದರೂ ಸರಿ..

ದೂರವಾದರೂ ಸರಿ.. ನನಗೆ ನೀನು ಬೇಕು...
ನಿನ್ನ ಪ್ರೇಮ ಬೇಕು...
ಸುಡುವ ವಿರಹವಾದರೂ ನನಗೆ ನಿನ್ನ ನೆನಪು ಬೇಕು..."

ನಾನು ಮಾತನಾಡಲೇ ಬೇಕಿತ್ತು....


"ವಿರಹವಿಲ್ಲದ ಪ್ರೇಮ ಅಪೂರ್ಣ....


ರಾಧೆ...

ನಾಳೆ...
ಗೋಕಲ ಬಿಟ್ಟು ಹೋಗಬೇಕಾಗಿದೆ...
ಕಂಸನ ಆಮಂತ್ರಣವಿದೆ.. ಮಥುರೆಗೆ ಬರಲು...

ಹೆತ್ತ .. 

ತಂದೆ ತಾಯಿಯರನ್ನು ಕಂಸನ ಬಂಧನದಿಂದ  ಬಿಡಿಸಬೇಕಾಗಿದೆ...."

"ಮತ್ತೆ ತಿರುಗಿ ಬರುವೆಯಲ್ಲ...?.."


ಅವಳ ಮಾತನ್ನು ಮುಚ್ಚಿಸಲೇ ಬೇಕಿತ್ತು....

ಮೃದುವಾಗಿ ಅವಳ ತುಟಿಗಳನ್ನು ಸವರಿದೆ..... 
ಕೆನ್ನೆಗಳು.. 
ಕಿವಿಯ ಬಳಿ ಮೃದುವಾಗಿ ಸ್ಪರ್ಶಿಸಿದೆ.... 

ರಾಧೆ  ಉನ್ಮತ್ತಳಾದಳು..... !

ರಾಧೆಯನ್ನು ದಿಕ್ಕು ತಪ್ಪಿಸಲು ಇಷ್ಟು ಸಾಕು..... 


"ರಾಧೆ...

ಸಿಕ್ಕಿದೆಯಲ್ಲ ಈ ಕ್ಷಣ... !

ಈ ಮಧುರ ಪ್ರೇಮದಲ್ಲಿ..

ಮಿಲನದಲ್ಲಿ... 
ವಿಚಾರಕ್ಕೆ..
ಬುದ್ಧಿಗೇಕೆ ಜಾಗ ಕೊಡುವೆ ?..

ನನ್ನೆಲ್ಲ ಪ್ರೇಮಧಾರೆ ನಿನಗಾಗಿ...

ನಿನ್ನ ಪ್ರೀತಿಗಾಗಿ..."

ರಾಧೆ ಬಿಗಿಯಾಗಿ ತಬ್ಬಿದಳು...


ಬಿಟ್ಟರೆ..

ಎಲ್ಲಿ ಓಡಿಹೋಗುವೆನೇನೋ ಎಂಬಂತೆ.....

ಮತ್ತೆ ..
ತಿರುಗಿ ಬರಲಾಗದ  ಮಥುರೆ.. ನನ್ನ ಕರೆಯುತ್ತಿತ್ತು...

ನನ್ನ ಅವತಾರದ ಅಪೂರ್ಣ ಕೆಲಸಗಳು... ನೆನಪಾಗುತ್ತಿತ್ತು...


ಗೋಕಲ ಬಿಟ್ಟು ಹೊರಡಲೇ ಬೇಕಿತ್ತು...


ಮುದ್ದು ರಾಧೆಯ .. 

ಮುದ್ದು ತುಟಿಗಳು ನನ್ನ ಅಧರಗಳನ್ನು   ಸೋಕುತ್ತಿದ್ದವು.... 

ರಾಧೆಯ ಕಣ್ಣುಗಳು ಮುಚ್ಚಿದ್ದವು.... 


ಮುಚ್ಚಿದ 
ಕಂಗಳಲ್ಲೂ ...  ಭರವಸೆ  ಕಾಣುತ್ತಿತ್ತು... 
ತನ್ನ ಪ್ರೀತಿಯ ಮೇಲೆ... 
ನನ್ನ ಮೇಲೆ.... 

ರಾಧೆಯ ಕಣ್ಣುಗಳು ಮುಚ್ಚಿಯೇ.. ಇದ್ದವು.... .....



(ಉತ್ತಮ ಪ್ರತಿಕ್ರಿಯೆಗಳಿವೆ .. 
ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....  )


73 comments:

ಸಂಧ್ಯಾ ಶ್ರೀಧರ್ ಭಟ್ said...

ಕೃಷ್ಣನ ಬಗ್ಗೆ ಏನೂ ಹೇಳುವಂತಿಲ್ಲ. ಆತ ಎಲ್ಲ ಆಳ ಅಗಲಗಳ ಮೀರಿ ನಿಂತವನು. ಅಪೂರ್ಣತೆಯಲ್ಲೂ ಪೂರ್ಣತೆಯ ಭಾವ ಮೂಡಿಸಿದವ. ಮೋಡಿ ಮಾಡಿದವ. ಕೃಷ್ಣ , ಗೋಪಿಕೆಯರ ಸಂಬಂಧಗಳು ಏನೇ ಇದ್ದರೂ ಅಪವಿತ್ರತೆಯ ಅಂಶ ಸೋಕದಿರಲು ಕೃಷ್ಣನ ಮೇಲಿನ ನಂಬಿಕೆಯೇ ಕಾರಣವಿತ್ತೋ ಏನೋ.

"ಜಾರಿ ..
ಬೀಳುವಾಗ..
ಬಿದ್ದಿದ್ದಷ್ಟೇ ಗೊತ್ತು..
ಎಲ್ಲಿ.. ಏನು ಗೊತ್ತಾಗುವದಿಲ್ಲ....!

ಬೇಕೆಂದು ಬಿದ್ದಿಲ್ಲವಲ್ಲ...."
ನಿಜಕ್ಕೂ ಅಧ್ಬುತ ಮಾತು ಪ್ರಕಾಶಣ್ಣ. ಇದೊಂದು ಉದಾಹರಣೆಯಷ್ಟೇ . ಆಳಕ್ಕೆ ಇಳಿದಂತೆಲ್ಲ ವಿಶಾಲ ಅರ್ಥಗಳುಂಟು ಇಲ್ಲಿನ ಮಾತುಗಳಿಗೆ.

ಚಂದದ ಕಥೆ ...

Asha said...

prati saalallu adestu preeti iddu prakashanna.. nimagonde saadya ee tara bariyale baradu anastu ..

ಚಿತ್ರಾ said...

ರಾಧೆ -ಕೃಷ್ಣ ಇವರ ನಡುವಿನ ಸಂಬಂಧಕ್ಕೆ ಲೋಕವಿಟ್ಟ ಹೆಸರು ಪ್ರೀತಿ ! ಅವರ ನಂಟನ್ನು ಹಾಡಿ ಹೊಗಳುತ್ತೇವೆ . ಅಲ್ಲಿ ಬರೀ ಪ್ರೆಮವಿತ್ತೋ , ಕಾಮವೂ ಇತ್ತೋ ಗೊತ್ತಿಲ್ಲ . ಬಿಟ್ಟೂ ಬಿಡಲಾರದ ಅವಿನಾ ಸಂಬಂಧ ,, ನನ್ನ ಮಟ್ಟಿಗಂತೂ ಅದು ಒಂಥರಾ ಒಗಟು !ಆ ನಿಷ್ಕಲ್ಮಷ ಪ್ರೇಮಕ್ಕೆ ಸಲಾಂ .ಆದರೂ ಈಗಿನ ದೃಷ್ಟಿ ಕೋನದಿಂದ ನೋಡಿದರೆ ? ಅದು ಮೋಸವೆನಿಸುತ್ತದೆ . ಅನೈತಿಕವಾಗಿಬಿಡುತ್ತದೆ! ಇಂದು ಯಾವುದೇ ವಿವಾಹಿತ ವ್ಯಕ್ತಿ ಇನ್ನೊಬ್ಬ ಹೆಣ್ಣು ಅಥವಾ ಗಂಡಿನೊಂದಿಗೆ ಇಂಥಾ ಸಂಬಂಧ ಇಟ್ಟುಕೊಂಡರೆ? ಒಪ್ಪುತ್ತೆವೆಯೇ? ಅಮರ ಪ್ರೇಮ ಎನ್ನುತ್ತೆವೆಯೇ ? ಅವರಿಗೆ ಏನೆಂದು ಹೆಸರಿಡುತ್ತೇವೆ? ಕೃಷ್ಣ ದೇವರು ,ಹೀಗಾಗಿ ಅದು ಸರಿ ಎಂದಾಗುತ್ತದೆಯೇ? ಎಷ್ಟೆಲ್ಲಾ ಪ್ರಶ್ನೆಗಳು !! ಇವು ನನ್ನನ್ನು ಯಾವಾಗಲೂ ಕಾಡುತ್ತವೆ .
ಪ್ರಕಾಶಣ್ಣ ಪ್ರಶ್ನೆಗಳು ಏನೇ ಇದ್ದರೂ ಕಥೆ ಮನ ತಟ್ಟಿತು ! .

ಮೌನರಾಗ said...

ಪರಮಾತ್ಮ ಯಾರಿಗೆ ಹೇಗೆ ಬೇಕೋ ಹಾಗೆ ದಕ್ಕುತ್ತಾನೆ ಎಂಬುದಕ್ಕೆ ಕೃಷ್ಣ ಸಾಕ್ಷಿ.
ಇಂತಹ ಕೃಷ್ಣನ ಮೇಲೆ ರಾಧೆಯ ಪ್ರೀತಿ ಅನನ್ಯವಾದುದು.. ಚಂದದ ಕತೆ ಪ್ರಕಾಶಣ್ಣ..
ನಡುನಡುವೆ ಬರುವ "ಬಿದ್ದಮೇಲೆ ...
ಎದ್ದು ನಿಲ್ಲಲೇ ಬೇಕಲ್ಲ...
ನಾವೂ ನಿಲ್ಲಬೇಕು..."
ಇಂತಹ ಸಾಲುಗಳು ಚಿಂತನೆಗೆ ಹಚ್ಚುತ್ತದೆ...

ತುಂಬಾ ಇಷ್ಟವಾಯಿತು...

Unknown said...

ಇದು ಕಥೆಯಲ್ಲ... ಕಾವ್ಯ... ಪ್ರಕಾಶ್ ಜಿ... ನಿಮ್ಮ ಸರಳ ಪದಗಳು ಕೊಡುವ ಚಿತ್ರಕ ಅನುಭವ ಮತ್ತೊಬ್ಬರಿಂದ ಸಾಧ್ಯವಿಲ್ಲ...

Ittigecement said...

ಸಂಧ್ಯಾ....

ಕೃಷ್ಣ ಒಬ್ಬ ಚರಿತ್ರೆಯ ಮನುಷ್ಯ ಅಂತ ಓದಿದರೂ ಆತ ನನಗಂತೂ ತುಂಬಾ ಸೋಜಿಗ !!

ಅವನ ಕಾಲಘಟ್ಟದಲ್ಲಿ ಆತನ ನಡೆ..
ನುಡಿ... ಅದ್ಭುತ !

ಚಾಣಾಕ್ಷ್ಯ.... !

ಆತನ ಪ್ರತಿಯೊಂದು ನಡೆ ಕೂದಲಿನಿಂದ ಬೆಣ್ಣೆಯನ್ನು ಕತ್ತರಿಸಿದಂತೆ...
ಬೆಣ್ಣೆ ಕತ್ತರಿಸಿದ್ದು ನಿಜ....
ಕಣ್ಣಿಗೆ ಕಾಣುವದಿಲ್ಲ.. !

ರಾಧೆಗೆ ತನ್ನೆಲ್ಲ ಪ್ರೀತಿ ಧಾರೆಯೆರೆಯುತ್ತ...
ಗೋಕುಲ ನಿರ್ಗಮನದ ವಿಚಾರ ಮಾಡುತ್ತಾನೆ....

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಧನ್ಯವಾದಗಳು....

ಜಲನಯನ said...

ಪ್ರಕಾಶೂ..ನೀನು ಈ ಬಗ್ಗೆ ಸೂಕ್ಷ್ಮ್ನವಾಗಿ ಹೇಳಿದಾಗ ನನಗೂ ಹೌದು ಹೇಗಿದ್ದಿರಬಹುದು...ಈ ಕಥೆ..?? ಅಥವಾ ಹ್ಯಾಗಿರಬಹುದು ಪ್ರಕಾಶನ ಕಥನ..??
ಆದರೆ ರಾಧಾ-ಕೃಷ್ಣನ ಪ್ರೇಮದ ಕಥೆ ತಿಳಿದಿದೆಯೇ ಹೊರತು ಅದು ಅನೈತಿಕ ಎನ್ನುವ ಸುಳಿವೂ ಇಲ್ಲದಂತೆ ಓದಿದ ನೆನಪು. ಪ್ರೇಮಕ್ಕೆ ರೂಪ ಮಿಥ್ಯ ಮನಸು ಸತ್ಯ... ಹಾಗೆಯೇ ಮೀರಾ ಮದುವೆಯಾದರೂ ಕೃಷ್ಣನ ಆರಾಧಕಿ ಇದು ಮತ್ತೊಂದು ರೀತಿಯ ಭಕ್ತಿಪ್ರಧಾನ ಸಮರ್ಪಣಾ ಭಾವ..ಮತ್ತೂ ಇತ್ತೀಚಿನದೆಂದರೆ ಅಕ್ಕಮಹಾದೇವಿ ಶಿವನನ್ನೇ ಪತಿಯೆಂದದ್ದು...
ಎಲ್ಲ ಬಾಂಧವ್ಯಗಳಿಗೆ ಕೇವಲ ದೈಹಿಕ ಸಂಬಂಧದೊಂದಿಗೆ ಕಲ್ಪಿಸಿಕೊಳ್ಳುವುದು ಈಗಿನ ಕಾಲಮಾನಕ್ಕೆ ಅಸಹಜವೆನಿಸುತ್ತದೆ. ಏಕೆಂದರೆ ಕಾಲಕ್ಕೆ ತಕ್ಕಂತೆ ಮಾನವನ ಯೋಚನೆ ಮೌಲ್ಯಗಳೂ ಅಧೋಮುಖವಾಗಿದ್ದು ಕಾರಣ.
ಸುಂದರ ಸಂಭಾಷಣೆ ಮತ್ತು ಸೂಕ್ಷ್ಮಗಳ ಅಂತರಾಳದಲ್ಲೇ ವಿಶ್ಲೇಷಿಸಿರುವುದು ಮತ್ತು ಎಂದಿನಂತೆ ಸರಳತೆಯಲ್ಲಿ ಗಾಡತೆಯನ್ನು ತುಂಬಿರುವುದು "ಇಟ್ಟಿಗೆ ಸಿಮೆಂಟ್" ನ ಜೀವಾಳಕ್ಕೆ ಧಕ್ಕೆಯಿಲ್ಲದಂತೆ ಮುನ್ನಡೆಸಿದೆ ನಿರೂಪಣೆ...ಜೈ ಹೋ ಪ್ರಕಾಶೂ..

ಚಿನ್ಮಯ ಭಟ್ said...

ಪ್ರಕಾಶಣ್ಣಾ,
ಮೊದಲ ನಾಲ್ಕೈದು ಸಾಲಿನಲ್ಲೆ ಹಿಡಿದಿಬಿಡುತ್ತೀರಿ ನಮ್ಮ ಕಣ್ಣುಗಳನ್ನು ಆಚೀಚೆ ಓಡಾಡದಂತೆ..
ಹಮ್...ಭೈರಪ್ಪನವರ ಪರ್ವ ಓದ್ತಾ ಇದ್ದೆ...ಅಲ್ಲಿಯೂ ಅದೇ,ಇಲ್ಲಿಯೂ ಅದೇ..
ಕೃಷ್ಣ-ರಾಧೆ ಇಲ್ಲಿಯ ಪಾತ್ರಗಳಷ್ಟೇ..ಕಥೆಯಲ್ಲಿ ನನಗಿಷ್ಟವಾದದ್ದು ಕಲ್ಮಶವಿಲ್ಲದ ಮನಸ್ಸು ಹಾಗೂ ಬೇಕಿದ್ದನ್ನು ಬೇಕು ಎಂದು ಹೇಳಲು ಆಸ್ಪದ ಕೊಡುವ ಬಯಕೆಗಳು..
ಬರೆಯುತ್ತಿರಿ...ನಿಮ್ಮ ಕಥಾ ನಿರೂಪಣೆಗೊಂದು ನಮನ ಅಷ್ಟೇ..
ನಮಸ್ತೆ

ಮನಸು said...

ಲೋಕದ ಕಣ್ಣಿಗೆ ರಾಧೆಯೂ ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೂ ಹಾಗೆ ಕೃಷ್ಣನ ಕೋರುವ ಪ್ರೀತಿಯ ನೀಡಿದ ಕಣ್ಣು - ಹೆಚ್ ಎಸ್ವಿ ಅವರ ಈ ಸಾಲುಗಳು ನೆನಪಾಯಿತು ನಿಮ್ಮ ಲೇಖನ ಓದಿ

Ittigecement said...

ಆಶಾ...

ಕೃಷ್ಣನ ಮೇಲೆ ಒಂದು ಆರೋಪವಿದೆ...

ಹದಿನಾಲ್ಕು ಸಾವಿರ ಗೋಪಿಕಾ ಸ್ತ್ರೀಯರನ್ನು ವಿವಾಹವಾಗಿದ್ದಾನೆ ಅಂತ...

ನರಕಾಸುರನ ವಧೆಯ ನಂತರ ಅವನ ಬಳಿ ಸೆರೆಯಾಗಿದ್ದ
ಹದಿನಾಲ್ಕು ಸಾವಿರ ಗೋಪಿಕಾ ಸ್ತ್ರೀಯರನ್ನು ಆತ ಬಿಡುಗಡೆಗೊಳಿಸುತ್ತಾನೆ...

ಆಗಲೂ ಸಮಾಜ ಸ್ತ್ರೀಯರನ್ನು ಈಗಿನ ಹಾಗೆ ನೋಡುತ್ತಿತ್ತು...

ಸ್ತ್ರೀಯರು ಸೆರೆಯಾಗಿದ್ದರು ಅಂದರೆ ಆತ್ಯಾಚಾರ ನಡೆದಿತ್ತು ಅಂತಲೇ ಅರ್ಥ...

ಇಂಥಹ ಸ್ತ್ರೀಯರು ಸಮಾಜದಲ್ಲಿ ಬದುಕುವದು ಹೇಗೆ ?

"ನಾನು ಇವರನ್ನೆಲ್ಲ ಮದುವೆಯಾಗಿದ್ದೇನೆ..
ಇವರೆಲ್ಲ ನನ್ನ ಪತ್ನಿಯರು " ಅಂತ ಲೋಕಕ್ಕೆ ಸಾರುತ್ತಾನೆ ಕೃಷ್ಣ...

ಇದು ಕೃಷ್ಣನ ಪರವಾಗಿ ಒಂದು ಸಮರ್ಥನೆ ಅಷ್ಟೆ.....

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ಬರುತ್ತಾ ಇರಿ...

ಪದ್ಮಾ ಭಟ್ said...

ಪ್ರಕಾಶಣ್ಣ ತುಂಬಾನೆ ಇಷ್ಟ ಆಯ್ತು..ರಾಧೆಯ ಪ್ರೀತಿಯನ್ನು ಯಾವಾಗಲೂ ಪ್ರೇಮ ಪ್ರಸಂಗಗಳಲ್ಲಿ ಕೆಲವು ಸನ್ನಿವೇಶಗಳನ್ನು ಹೋಲಿಸುತ್ತಲೇ ಇರುತ್ತಾರೆ..ಕೃಷ್ಣನಿಗೆ ಕಾದ ರಾಧೆಯಂತೆ ಎಂದು..ಅವಳ ಪ್ರೀತಿ ಎಂದರೆ ಅಂತಹುದು..

ಅದರಲ್ಲೂ ನೀವು ಬರೆದ ಕತೆಯನ್ನು ಓದಿ ಈ ಕತೆಗೆ ಯಾವುದಾದರೂ ಅವಾರ್ಡ ಸಿಗಬಹುದಿತ್ತು ಎನ್ನುವಷ್ಟು ಚಂದವಾಗಿ ಬರೆದಿದ್ದೀರ..
ನಿಮ್ಮ ಬರವಣಿಗೊಂದು ಸಲಾಮ್......

ಗಿರೀಶ್.ಎಸ್ said...

ಪ್ರಕಾಶಣ್ಣ,ಅವತ್ತು ಕಥೆಯನ್ನು ಅರ್ಧ ಹೇಳಿದಾಗ ನನ್ನ ತಲೆಗೆ ಹುಳ ಬಿಟ್ಟ ಹಾಗೆ ಆಗಿತ್ತು... ಹೇಗೆ ಮುಂದುವರೆಸುತ್ತೀರಾ ,ಮುಂದೆ ಏನಿದೆ ಅನ್ನೋದು ಯೋಚನೆ ಆಗಿತ್ತು... ಹೆಣ್ಣನ್ನು ನೋಡುವ ದೃಷ್ಟಿ ಅಂದಿಗೂ ಇಂದಿಗೂ ಏನು ಬದಲಾವಣೆ ಆಗಿಲ್ಲ. ಅಂದ ಹಾಗೆ ನಾವು ದೇವರು ಎಂದು ಭಾವಿಸಿರುವ ಪ್ರತಿಯೊಬ್ಬನಲ್ಲೂ,ರಾಮ ಆಗಿರಬಹುದು,ಕೃಷ್ಣ ಅಥವಾ ವಿಷ್ಣು ,ಯಾರೇ ಇರಲಿ ಅವರಲ್ಲೂ ಮನುಷ್ಯ ಸಹಜವಾದ ಕೆಲವು ಭಾವನೆಗಳು ಇದ್ದವು... ಪ್ರೀತಿ,ಪ್ರೇಮ, ಮೋಹ ಎಲ್ಲವೂ ಅವರಲ್ಲೂ ಇತ್ತು...

ಕಥೆ ತುಂಬಾ ಚೆನ್ನಾಗಿದೆ... ಅದಕ್ಕಿಂತ ರಾಧೇ ಮತ್ತು ಕೃಷ್ಣನ ನಡುವಿನ ಸಂಭಾಷಣೆ ತುಂಬ ಚೆನ್ನಾಗಿದೆ .. ಅವು ಎಷ್ಟೊಂದು ಒಳ ಅರ್ಥಗಳನ್ನು ನೀಡುತ್ತದೆ...

umesh desai said...

ಕಥೆಯ ಶೈಲಿ ಚೆನ್ನಾಗಿದೆ.. ಕೃಷ್ಣಲೀಲೆಯ ಬಗ್ಗೆ
ಮಡಿವಂತರ ಅಭಿಪ್ರಾಯ ಏನೇ ಇರಲಿ..ಆತ ಮಾನವ ಹೇಳೂದಾದ್ರೆ
ಮಾನವಂತ ಮಾನವ. ಅವ ಹತ್ತಿರ ಆಗೋದು ಅವನ ಸುತ್ತಲಿನವರಿಗೆ ಅವ ಮಿಡಿಯುವ ರೀತಿಯಿಂದ..
ನಿಮ್ಮ ಕೃಷ್ಣನೂ ಹಾಗೆಯೇ .ಇನ್ನು ರಾಧೆಮತ್ತು ಅವನ ನಡುವೆ ಪ್ರೇಮಇತ್ತೋ ಅಥವಾ ಕಾಮ ಇತ್ತೋ
ಇದು ಚರ್ಚಾಸ್ಪದ ವಸ್ತು ಅಲ್ಲಿ ಇಲಿ ಓದಿ ನೋಡಿ,ತಿಳಿದು ಅದು ಹೀಗೆ ಅಂತ ಹೇಳಬಹುದೇನೋ
ಸತ್ಯ ಏನಿತ್ತು ಅದು ಅವರಿಬ್ಬರಿಗೆ ಮಾತ್ರ ಗೊತ್ತು...!!

ಶ್ರೀವತ್ಸ ಕಂಚೀಮನೆ. said...

ಯಾವುದೋ ಭಾವದಲ್ಲಿ, ಎಲ್ಲಿಯೋ ಕಳೆದು ಹೋಗಿ, ಮೌನದಲ್ಲಿ ಹೂತು ಹೋಗಿವೆ ಮಾತುಗಳು...
ಪ್ರಕಾಶಣ್ಣ ಎಂದಿನಂತೆ ಬರಹ ಸೂಪರ್...

Suma said...

Radha Krishna ra sambandha yavagalu sundara ! Adrallu ee baraha kalpanika kathege jeeva tumbida hagittu .. Superb !

Ittigecement said...

ಚಿತ್ರಾ....

ದೇವರನ್ನು ಹುಟ್ಟಿಸಿದ್ದು ಮನುಷ್ಯ ತಾನೆ ?
ದೇವರು ಮನುಷ್ಯನ ಅಗತ್ಯ...

ತಾನು ಹುಟ್ಟಿಸಿದ ದೇವರಿಗೆ ಮನೆ ಮಕ್ಕಳು.. ಸಂಸಾರ ಎಲ್ಲವನ್ನು ಕಟ್ಟಿದ್ದಾನೆ....

ಪುರಾಣದಲ್ಲಿ "ಕೃಷ್ಣ" ನನಗೆ ಬಲು ಇಷ್ಟವಾದ ವ್ಯಕ್ತಿತ್ವ...

ಇದುವರೆಗೆ ಕೃಷ್ಣನ ಬಗೆಗೆ ಅಪರೂಪದ ಮೂರು ಪುಸ್ತಕಗಳನ್ನು ಓದಿದೆ...

ಕೃಷ್ಣ ಎಷ್ಟು ಇಷ್ಟವಾದ ಅಂದರೆ...
ಅವನ ಚರಿತ್ರೆಯನ್ನು ನನ್ನ ಕಲ್ಪನೆಯಲ್ಲೇ ಬರೆಯೋಣ ಅಂತ ಅನ್ನಿಸಿಬಿಡ್ತು... !

ದೇವರಾಗಲಿ..
ಮನುಷ್ಯನಾಗಲಿ ಭಾವನೆಗಳು ಇದ್ದೇ ಇರುತ್ತವೆ ಅಲ್ಲವಾ ?

ತನಗಿಂತ ಹಿರಿಯಳಾದ ರಾಧೆಗೆ ಮದುವೆಯಾಗಿದ್ದು ಕೃಷ್ಣನಿಗೆ ಗೊತ್ತಿತ್ತು...

ಅದು ..
ಭಕ್ತಿಯೋ..
ಪ್ರೇಮದ ಆರಾಧನೆಯೋ..
ಪ್ರಣಯವೋ.. ಗೊತ್ತಿಲ್ಲ..

ಅದನ್ನೆಲ್ಲ ಬದಿಗಿಟ್ಟು..
ಹೀಗಿದ್ದರೆ ಹೇಗೆ ಎನ್ನುವ ಒಂದು ಹುಚ್ಚು ಕಲ್ಪನೆ ನನ್ನದು...

ರಾಧೆಯ ಗಂಡ ಒಬ್ಬ ಗೋಪಾಲಕ...
ಕೃಷ್ಣನ ಭಕ್ತ...

ಹೇಗೆ ಇದ್ದರೂ...
ಕೃಷ್ಣ...
ಅವನು ಪ್ರತಿಯೊಬ್ಬರ ಬಳಿ ನಡೆದುಕೊಂಡ ರೀತಿ...
ಪ್ರತಿಯೊಬ್ಬರಿಗೂ ಆತನ ಸ್ಪಂದನೆ... ಯಾರಿಗಾದರೂ ಇಷ್ಟವಾಗಿಬಿಡುತ್ತದೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಧನ್ಯವಾದಗಳು....

Srikanth Manjunath said...

ಇಡಿ ದಶಾವತಾರದಲ್ಲಿ ಶ್ರೀ ಕೃಷ್ಣನಷ್ಟು ವಿಶಿಷ್ಟ ಅವತಾರ ಇನ್ನೊಂದಿಲ್ಲ. ಪ್ರತಿಯೊಂದು ಸಮಸ್ಯೆಗೂ ಅವನ ಬಳಿ ಉತ್ತರ, ಸಮಜಾಯಿಷಿ, ಭರವಸೆ ಎಲ್ಲವೂ ಇರುತ್ತದೆ. ಶ್ರೀ ಕೃಷ್ಣನ ಬಳಿ ಹೋಗದ ಸಮಸ್ಯೆಗಳೇ ಅಪೂರ್ಣ. ಅವನನ್ನು ಮುತ್ತಿ ಕಾಡಿದರೆ ಸಮಸ್ಯೆಗಳ ಜನನಕ್ಕೆ ಒಂದು ಸಾರ್ಥಕತೆ. ಇಂತಹ ಒಂದು ಪಾತ್ರವನ್ನು ನಿಮ್ಮ ಲೇಖನದಲ್ಲಿ ತಂದದ್ದು (ನನ್ನ ನೆನಪಿನ ಪ್ರಕಾರ ಎರಡನೇ ಬಾರಿ - ಮೊದಲನೆಯದು ನಮ್ಮನ್ನು ನಾವೇ ಕೊಂದು ಕೊಳ್ಳುವುದು) ನನಗೆ ಬಹಳ ಖುಷಿ ಕೊಟ್ಟಿತು.

ಕೃಷ್ಣನ ವ್ಯಕ್ತಿತ್ವ ಕಾಮನ ಬಿಲ್ಲಿನ ಹಾಗೆ ವರ್ಣಮಯ, ಮಾತುಗಳು ತುಂತುರು ಮಳೆಯಂತೆ ಆಹ್ಲಾದಕರ. ನಮ್ಮ ಪ್ರಪಂಚ ಕಂಡ ನಿಸ್ಸಂಶಯ ಬುದ್ಧಿವಂತ, ಮೇಧಾವಿ, ಚಾಣಾಕ್ಷ. ರಾಧೆಯ ಪ್ರೇಮ ಅನುರಾಗ ತಾವರೆ ಎಳೆಯ ಮೇಲಿನ ಬಿಂದುವಂತಿದ್ದರೂ ಅದನ್ನು ನಿಮ್ಮ ಮಾತುಗಳಲ್ಲಿ ಕಟ್ಟಿ ಕೊಡುವ ಪರಿ ಸೊಗಸಾಗಿದೆ. "ಪ್ರೇಮವಿದ್ದಲ್ಲಿ ಅಧಿಕಾರವಿರಲೇ ಬೇಕಾ ?" ಈ ಸಾಲುಗಳು ಬಲು ಕಾಡಿದವು. ಪ್ರಾಯಶಃ ಕಥೆಗೆ ದಿಕ್ಕು ತೋರುವುದೇ ಈ ಸಾಲುಗಳು ಅನ್ನಿಸುತ್ತೆ.

ನಿಮ್ಮ ಲೇಖನದಲ್ಲಿ ಸಂಭಾಷಣೆಗೆ, ಭಾವಕ್ಕೆ, ಅನುಭಾವಕ್ಕೆ ಕೊಡುವ ಬಣ್ಣಗಳು ಆ ವಾಕ್ಯದ ಘನತೆಯನ್ನು, ಘಾಡತೆಯನ್ನು ಇನ್ನಷ್ಟು ಮೇಲಕ್ಕೆ ಏರಿಸುತ್ತದೆ, ತೂಕ ಕೊಡುತ್ತದೆ. ಕೃಷ್ಣನಿಗೆ ಶ್ರೀಕೃಷ್ಣನೆ ಸಾಟಿ. ಬೆಳಕಿಗೆ ಪ್ರಕಾಶಣ್ಣನೆ ಸಾಟಿ! ಸುಂದರ ಲೇಖನ ಇಷ್ಟವಾಯಿತು!


Sudeepa ಸುದೀಪ said...

ಪ್ರಕಾಶಣ್ಣ, ನಿಮ್ಮ ಕಥೆಯ ಪ್ರತಿಯೊಂದು ಸಾಲುಗಳು ಮನಮುಟ್ಟುತ್ತೆ. ಅದೆಷ್ಟು ಚೆನ್ನಾಗಿ ಬರೀತಿರಿ. ನಾನು ಇಷ್ಟ ಪಡುವ ಬ್ಲಾಗಗಳಲ್ಲಿ ಪ್ರಥಮ ಸ್ಥಾನದಲ್ಲಿ ಇರುವುದೇ ನಿಮ್ಮ ಬ್ಲಾಗ್. ಅದು ಯಾವುದೇ ವಿಷಯ ಇರಲಿ ಪ್ರತಿಯೊಂದು ಅಕ್ಷರಗಳು ಪ್ರೀತಿಯಿಂದ, ತುಂಬು ಮನಸ್ಸಿನಿಂದ ಬರದು ಬಿಡ್ತೀರಾ. ನಮ್ಮನ್ನೆಲ್ಲಾ ಹಾಗೆ ಸೆಳೆದು ಬಿಡುತ್ತೆ. ಎಂದಿನಂತೆ ಸೂಪರ writing.. :))

Ittigecement said...

ಮೌನ ರಾಗ........

ಸಂಬಂಧ...
ಬಾಂಧವ್ಯಗಳನ್ನು ಕೃಷ್ಣ ನಿಭಾಯಿಸುವ ರೀತಿ ನಿಜಕ್ಕೂ ಆಶ್ಚರ್ಯ ಹುಟ್ಟುತ್ತದೆ...

ಇದೊಂದು ಕಾದಂಬರಿ..
ನಾಯಕ ಕೃಷ್ಣ ಅಂತ ಓದಿದರೂ ಸಹ...

ಸಾಹಸ..
ಯುದ್ಧರಂಗದಲ್ಲೂ ಸಹ ಇವನ ಕೌಶಲ್ಯ ಅದ್ಭುತ...

ಕಂಸ ಇವನಲ್ಲಿ ತನ್ನ ಸಾವನ್ನು ಕಂಡ..
ವಿಧುರನ ಮುಗ್ಧ ಭಕ್ತಿ.... "ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ".....

ಸತ್ಯವಂತರಾದ ಪಾಂಡವರ ಪಕ್ಕದಲ್ಲಿ ನಿಂತು ಕುರುಕ್ಷೇತ್ರ ಯುದ್ಧದಲ್ಲಿ ಧರ್ಮವಿಜಯವಾಗುವಂತೆ ನಿಭಾಯಿಸಿದ್ದು.... ಅತ್ಯದ್ಭುತ !

ಪ್ರತಿ ಸಂದರ್ಭದಲ್ಲಿ ತನ್ನ ಚಾಣಾಕ್ಷತನ ಮೆರೆದಿದ್ದಾನೆ..
ಬಹುಷಃ ಅಂದಿನ ಕಾಲಘಟ್ಟದಲ್ಲಿ ಇದು ಅಗತ್ಯವಿತ್ತೇನೊ....

ತನ್ನನ್ನು ಒಪ್ಪಿದವರು...
ಒಪ್ಪದವರಿಗೆ ಸಮಯ..
ಸಂದರ್ಭಕ್ಕಾಗಿ ಕಾದು.. ಅವರನ್ನು ಮಟ್ಟ ಹಾಕಿದ್ದು...

ಎಲ್ಲವೂ ಕೂದಲಿನಿಂದ ಬೆಣ್ಣೆ ಕತ್ತರಿಸಿದ ಹಾಗೆ...
ಕತ್ತರಿಸಿದ್ದು ನಿಜ... ಕಣ್ಣಿಗೆ ಕಾಣುತ್ತಿಲ್ಲ...

ಕಥೆಯನ್ನು ಇಷ್ಟ ಪಟ್ಟಿದ್ದಕ್ಕಾಗಿ ಪ್ರೀತಿಯ ಧನ್ಯವಾದಗಳು....

Ittigecement said...

ಗೋಪಾಲ ವಾಜಪೇಯಿ ಅಣ್ಣಾ...
ವಂದನೆಗಳು..

ದ್ರೌಪದಿಗೆ ಸಹಾಯ ಮಾಡಿದ ರೀತಿ ನೋಡಿದರೆ..
ಇವನಂಥಹ ಅಣ್ಣ ಇನ್ನಿಲ್ಲ...

ಸುಧಾಮ ಮತ್ತು ಇವನ ಗೆಳೆತನ....
ಇವನಂಥಹ ಗೆಳೆಯ ಇನ್ನಿಲ್ಲ....

ಬಲರಾಮನನ್ನು ನಡೆಸಿಕೊಂಡ ರೀತಿ...
ಇವನಂಥಹ ತಮ್ಮ ಇನ್ನಿಲ್ಲ....

ಈತ ಮಾಡಿದ್ದು ಪ್ರತಿಯೊಂದು ರಾಜಕಾರಣದ ಹಿಂದೆ ..
ಧರ್ಮಕ್ಕಾಗಿ... ಸತ್ಯ ಸ್ಥಾಪನೆಗಾಗಿ...

ಇವನಂಥಹ ರಾಜಕಾರಣಿ ಇನ್ನಿಲ್ಲ...

ಎಲ್ಲಕ್ಕಿಂತ ಹೆಚ್ಚಾಗಿ..
ಎಲ್ಲ ಹೆಣ್ಣುಮಕ್ಕಳು ಬಯಸುವಂಥಹ ಆದರ್ಶ ಗಂಡು ಇವನಾಗಿದ್ದ....

ತನ್ನ ಬದುಕಿನ ಎಲ್ಲ ಸಂಬಂಧಗಳನ್ನು ಸಮರ್ಥವಾಗಿ ನಿಭಾಯಿಸಿದ್ದ...

ಇಷ್ಟೆಲ್ಲ ಬುದ್ಧಿವಂತನಾದ ಕೃಷ್ಣ...
ಕೊನೆಯಲ್ಲಿ ತನ್ನ ಜಾತಿ ಬಾಂಧವರನ್ನು ನಿಯಂತ್ರಿಸಲಾಗಲಿಲ್ಲ.... ಅದು ಯಾದವೀ ಕಲಹ....
ಅದೊಂದು ದುರಂತ...

ನಿಜಕ್ಕೂ ಇವನೊಬ್ಬ ಅಧ್ಯಯನ ಮಾಡತಕ್ಕಂತ ವ್ಯಕ್ತಿತ್ವ....

ವಾಜಪೇಯಿ ಅಣ್ಣ..

ನಿಮ್ಮಪ್ರೀತಿಯ ಪ್ರೋತ್ಸಾಹಕ್ಕಾಗಿ ಪ್ರೀತಿಯ ವಂದನೆಗಳು...

Badarinath Palavalli said...

ಎರಡು ಕಾರಣಗಳಿಂದ ಈ ಕಥನವು ಮನವನ್ನು ಕಾಡಿತು :
1. ರಾಧೇಯ ಮಿತವಾದ ಪ್ರೀತಿ, ನೀವೇ ಹೇಳಿದಂತೆ,
"ಬಾ..
ನನ್ನ ಅಧರಗಳಲ್ಲಿ ..
ನಿನ್ನ ಕೊಳಲ ನುಡಿ ನುಡಿಸು...." ಹೌದಲ್ಲವೇ!

2. ಅಷ್ಟು ಒಳವನು ತೋರಿದ ರಾಧೆ - ಪರಮಾತ್ಮನಿಗೆ ದಕ್ಕದೆ ಹೋದದ್ದು ಮತ್ತು ಅವಳ ಗಂಡನು ಅವನ ಸೇವೆಗೇ ಬಂದದ್ದು, ಎಂತಹ ಪರೀಕ್ಷೇ!

ಯಾಕೋ ತುಂಬಾ ಕಾಡುವ ಕತನವಿದು...

Raghunandan K Hegde said...

ಕೃಷ್ಣ ಎಲ್ಲರಿಗೂ ಧಕ್ಕಿದ್ದಾನೆ ಅವರವರ ಭಾವದಂತೆ, ಇಲ್ಲಿ ಪ್ರಕಾಶಣ್ಣನಿಗೂ ಈಗ...

ಕಥನ ಅವರವರ ಭಾವದ್ದು, ಕಂಡದ್ದಾದರೆ ಅದು ಕಥೆ ಅಲ್ಲ, ನಡೆದ ಇತಿಹಾಸ ಸಾಹಿತ್ಯವಾಗುವಾಗ ಕಥೆಯಾಗಬಹುದು...

ನಮ್ಮ ನಿಲುಕಿಗೆ ಸಿಕ್ಕಿದ್ದು ನಮ್ಮದು, ಅದಕ್ಕೊಂದು ಅಕ್ಷರ ರೂಪ...

ರಾಧಾ ಕೃಷ್ಣರ ಬಂಧವನ್ನ ಹೇಳುವ ಕಥೆಯೊಳಗಿನ ಪ್ರಕಾಶಣ್ಣನ ಶೈಲಿ ನಂಗಿಷ್ಟ,

"ಜಾರಿ ಬಿದ್ದ ನೆಲದ ಮಣ್ಣು ಹೇಗೆ ಬಿಡುವದು... ?
ಅಂಟಿಕೊಂಡ ...
ಕೆಸರಿನೊಡನೆ ನಂಟು ಹೇಗೆ ಬಿಡುವದು...?..." ಈ ತರಹದ ಸಾಲು,
"ಕೊಟ್ಟಿರುವೆ ಎನ್ನುವ ಅಹಂಭಾವ ಇದೆಯಲ್ಲವೇ ?..." ಎನ್ನುವಂತಹ ಪ್ರಶ್ನೆ...

ಒಂದಷ್ಟು ದ್ವಂದ್ವ, ಮತ್ತಷ್ಟು ಭಾವಗಳ ಕಥನಕ್ಕೆ ಶರಣು, ಜೈ ಹೋ...

akshaya kanthabailu said...

chanda ide

ಮೌನವೀಣೆ said...

ಕಳೆದೋದೆ ನಾನು ಕಳೆದೋದೆ..ನಿಂತಲ್ಲೇ ಕರಗಿ ಎಲ್ಲೋ ತೇಲಿ ಹೋದ ಅನುಭವ. ಅದ್ಬುತವಾಗಿ ಬರೆದಿದ್ದೀರ.

ಅಮರ ಪ್ರೇಮ ಎಂದಾಕ್ಷಣ ಒಮ್ಮೆ ನೆನಪಿಗೆ ಬರುವುದು ರಾಧಾ - ಕೃಷ್ಣರು...
ನಿಜಕ್ಕೂ ಜಗವನ್ನೇ ಮರೆಸುವುದು ಅವರ ಉತ್ಕಟ ಪ್ರೇಮ ಪರಾಕಾಷ್ಟೆ..

ಕಥೆ ಓದಿ ಅಮ್ರತ ಪಾನ ಮಾಡಿದ ಅನುಭವ.

ನಿಮ್ಮ ಬರಹಕ್ಕೊಂದು ದೊಡ್ಡ ಸಲಾಮ್..

Unknown said...

ನನ್ನ ಪ್ರೇಯಸಿಯೂ ರಾಧೆಯಂತೆ....... ಅವಳ ಮುಂದೆ ಯಾರನ್ನೂ,ಯಾವುದನ್ನೂ ಹೊಗಳುವಂತಿಲ್ಲ. ಪ್ರಕಾಶಣ್ಣ ನಿಮ್ಮ ಈ ಕಥೆ ಬರಿಯ ಕಥೆಯಲ್ಲ ಚಿತ್ರ ಕಾವ್ಯ.

ದಿನಕರ ಮೊಗೇರ said...

ಪ್ರಕಾಶಣ್ಣ,
ನಾನು ಓದಿದ ನಿಮ್ಮ ಕಥೆಗಳಲ್ಲಿ ಇದು one of the BEST.... ಈ ಕಥೆಯಲ್ಲಿ ಬರುವ ಪಾತ್ರಗಳ ಬಾಯಲ್ಲಿ ಬರುವ ಮಾತುಗಳೆಲ್ಲ ಮುತ್ತುಗಳು.... ಇಲ್ಲಿ ಕಥೆಗಿಂತ ಕಥೆಯ ವಿವರಣೆ ಮತ್ತು ಪಾತ್ರ ಪೋಷಣೆಯೆ ಎದ್ದು ಕಾಣತ್ತೆ.... ಅದೇ ಈ ಕಥೆಗೆ ಮುಖ್ಯವಾಗಿತ್ತು ಎನಿಸತ್ತೆ.... ಅದ್ಭುತ ಕಥೆ...ಕಥಾ ವಿವರಣೆ..ಕಥಾವಸ್ತು...

Ittigecement said...

ಆಜಾದೂ..

ನಿನ್ನ ಮಾತು ಬಹಳ ಇಷ್ಟವಾಯಿತು...

ನಮ್ಮ ವಿಚಾರ ಶಕ್ತಿ...
ಬುದ್ಧಿವಂತಿಕೆ ಜಾಸ್ತಿಯಾಗಿದೆ...
ಹಾಗಾಗಿ ದೇವರಲ್ಲಿ ದೇವರನ್ನು ಕಾಣಲಿಕ್ಕೆ ಆಗುತ್ತಿಲ್ಲ...

ಒಳ್ಳೆಯವರಲ್ಲಿ ಒಳ್ಳೆಯದನ್ನು ಕಾಣುತ್ತಿಲ್ಲ..

ಈ ಬದಲಾವಣೆ ಸಹಜವೆ ? ಆಸಹಜವೆ ?

ಪ್ರತಿಯೊಂದು ಕಾಲಘಟ್ಟದಲ್ಲಿ ಇಂಥಹ ಬದಲಾವಣೆ ಈ ಮೊದಲೂ ಇತ್ತಲ್ಲವೆ ?

ಇಂಥಹ ಕಥಾವಸ್ತುವಿನಲ್ಲಿ ...
ಈ ರೀತಿಯ ಹುಡುಕಾಟದಿಂದ ಏನಾದರೂ ಸಿಗಬಹುದೆಂಬ ಆಶಯವಿದೆ...

ಈ ಕಥೆ ಇಷ್ಟು ಜನಪ್ರಿಯವಾಗುತ್ತದೆ ಎಂದು ನಾನು ಎಣಿಸಿರಲಿಲ್ಲ....

ಇಷ್ಟಪಟ್ಟಿದ್ದಕ್ಕೆ..
ಪ್ರೋತ್ಸಾಹಕ್ಕೆ ಪ್ರೀತಿಯ ವಂದನೆಗಳು....

Ittigecement said...

ಚಿನ್ಮಯ....

ಕೃಷ್ಣ- ರಾಧೆಯರ ಪ್ರೇಮ ಎಲ್ಲರಿಗೂ ಗೊತ್ತಿರುವ ವಿಷಯ...

ರಾಧೆಯ ಗಂಡ ಮುಗ್ಧ ಭಕ್ತಿಯವನಾಗಿದ್ದು..
ಕೃಷ್ಣನನ್ನು ಭೇಟಿಯಾದಲ್ಲಿ ಏನಾಗ ಬಹುದು ?

ದೇವರಾದರೂ....
ದೇವರ ಅವತಾರವಾದರೂ...
ಅವನಿಗೆ ಭಾವನೆಗಳು ಇದ್ದೇ ಇರಬೇಕಲ್ಲವೆ ?

ಸರಿ, ತಪ್ಪುಗಳು...
ಅದಕ್ಕೆ ತಕ್ಕಂತೆ
ಅಪರಾಧಿ ಮನೋಭಾವನೆ ಸಹಜವಲ್ಲವೆ ?

ಹಾಗಾಗಿ ಈ ಪುರಾಣ ಕಥಾವಸ್ತುವನ್ನು ಆಯ್ದುಕೊಂಡೆ...

ನನ್ನ ಕಲ್ಪನೆಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದರೆ ಇದಕ್ಕಿಂತ ಹೆಚ್ಚಿನ ವಿವರಣೆ ...
ಸಂಬಂಧಗಳ ಸಲುವಾಗಿ ಬರೆಯುವ ಅಗತ್ಯವಿತ್ತು....

ಕಥೆಯನ್ನು ಇಷ್ಟಪಟ್ಟಿದ್ದಕ್ಕಾಗಿ ಪ್ರೀತಿಯ ವಂದನೆಗಳು.....

Unknown said...

...ಜಾರಿ ಬೀಳುವಾಗ ಬಿದ್ದಿದಷ್ಟೇ ಗೊತ್ತು. ಈ ಒಂದು ಸಾಲು ಸಾಕು...
ಓದಿದ್ದೆ ಈ ಹಿಂದೆ. ಅದ್ಭುತವಾಗಿ ಬರೆದಿದ್ದೀರಿ. ಹೋದ ಗುರುವಾರ ಭಾರತೀಯ ವಿದ್ಯಾಭವನದಲ್ಲಿ "ಮಹತಿ" ನೃತ್ಯರೂಪಕಕ್ಕೆ ನನ್ನ ನಿರೂಪಣೆ ಇತ್ತು. ಡಾ.ಗಣೇಶ್ ಅವರ ವಿರಚಿತ. ಇಲ್ಲಿ ಅವರು...ಹೆಣ್ಣಿನ 3 ಮಹತ್ವವನ್ನು ಸಾರಿದ್ದಾರೆ. ಸ್ವಿಯಾ, ಪರಕೀಯ ಮತ್ತು ಸಾಧಾರಣ. ಸ್ವಿಯಾ ಭಾವ ಅಂದರೆ, ಒಂದು ಹೆಣ್ಣು ತನ್ನ ಸರ್ವಸ್ವವನ್ನೆಲ್ಲಾ ಏಕೈಕ ವ್ಯಕ್ತಿಗೆ ಸಮರ್ಪಿಸುವುದು. ತನು ಮನ ಸಮೇತ! ಜೀವನಪರ್ಯಂತ ಅವನನ್ನು ಬಿಟ್ಟರೆ ಅವಳಿಗೆ ಬೇರೆ ಬದುಕೇ ಇಲ್ಲದಂತಾ ಅರ್ಪಣಾ ಭಾವ.
ಪರಕೀಯ ಅಂದ್ರೆ, ಒಂದು ಹೆಣ್ಣು...ತನಗೆ ಮದುವೆಯಾಗಿ, ಗಂಡನೊಟ್ಟಿಗಿದ್ದರೂ...ಮನಸ್ಸು, ಆತ್ಮವನ್ನು ಪರಪುರುಷನಿಗೆ ಅರ್ಪಿಸಿಕೊಳ್ಳುವುದು...ಅವನನ್ನೇ ಮನಸಾವರಿಸಿಕೊಂಡು ಆರಾಧಿಸುವುದು.
ಸಾಧಾರಣ ...ಅಂದ್ರೆ, ಸ್ವತಂತ್ರ ಮನೋಭಾವದ ಹೆಣ್ಣು. ಯಾರಿಗೂ ಸೇರದವಳು. ಆದರೆ ತಾನಿಷ್ಟಪಟ್ಟವರನ್ನು ಯಾವಾಗ ಬೇಕಾದರೂ ಒಲಿಸಿ, ವರಿಸಬಲ್ಲವಳು. ಆದರೆ ಒಟ್ಟಾಗಿ ಬಾಳುವ ಮನಸ್ಠಿತಿಯಿಲ್ಲದವಳು...ಸ್ವಚ್ಚಂದ ಬದುಕನ್ನು ಇಷ್ಟಪಡುವವಳು.
ಮದುವೆಯಾಗಿ ಪತಿಯೊಡನೆ ಇದ್ದರೂ ...ತನು ಮನ ಪೂರ್ತಿ ಪರಪುರುಷನನ್ನೇ ಆರಾಧಿಸುತ್ತಾ, ತನ್ನನ್ನು ಅವನಿಗೇ ಅರ್ಪಿಸಿಕೊಳ್ಳುತ್ತಾ...ಅನಂತ ಪ್ರೀತಿಯ ಮಹತ್ವವನ್ನು ಸಾರುವವಳು ..ರಾಧೆ! ಅವಳ ಪ್ರೀತಿಯ ಪರಾಕಾಷ್ಠೆ ಎಷ್ಟಿತ್ತು ಎಂದರೆ...ಅವಳು ಸಮಾಜ, ನೀತಿ, ಸಂಪ್ರದಾಯ, ಧರ್ಮವನ್ನೂ ಮೀರಿ, ತನಗಿಂತಲೂ ಚಿಕ್ಕವನಾದ...ಪರಪುರುಷನಾದ...ಶ್ರೀಕೃಷ್ಣನಿಗೆ ಅರ್ಪಿತವಾಗುತ್ತಾಳೆ. ಅದು ಕೇವಲ ಪ್ರೀತಿಯಲ್ಲ...ಭಗವಂತನೆಡೆಗೆ ದಾಸಿಗಿರುವ ಭಕ್ತಿಯೂ ಹೌದು. ಆದರೂ ಇಂದು ಕೂಡ ನಮ್ಮ ಸಮಾಜದಲ್ಲಿ ರಾಧಾ ಕಷ್ಣರ ಪ್ರೀತಿಗೆ ಮನ್ನಣೆಯಿದೆ. ಅವಳು ರಾತ್ರಿಯಾದ ಕೂಡಲೇ ಕೃಷ್ಣನನ್ನು ಭೇಟಿಯಾಗಲು ಮನೆಯಿಂದ ಓಡಿಹೋಗುತ್ತಿದ್ದಳು. ಅವಳಲ್ಲಿ ಅಷ್ಟನಾಯಿಕೆಯರ ಚಿತ್ರಣವನ್ನು ನಾವಿಲ್ಲಿ ಕಾಣಬಹುದು. ರುತುಮಾನಕ್ಕೆ ಅನುಗುಣವಾಗಿ ಅವಳನ್ನು ಚಿತ್ರಿಸಲಾಗಿದೆ. ಶ್ರಾವಣದಲ್ಲಿ ಅಭಿಸಾರಿಕೆಯಾದರೆ, ವಸಂತದಲ್ಲಿ ಖಂಡಿತ, ನಂತರದಲ್ಲಿ ವಿಪ್ರಲಬ್ಧೆ...ಹೀಗೆ ಕಾಲಕ್ಕೆ ಅನುಗುಣವಾಗಿ ಅವಳ ಪ್ರೀತಿಯ ಅಭಿವ್ಯಕ್ತವಾಗುತ್ತದೆ. ಕೊನೆಯಲ್ಲಿ ಅವಳು ನಿಜವಾದ ಪ್ರೀತಿ ಎಂದರೆ ಏನೂ ಅನ್ನೋದನ್ನ ನಿರೂಪಿಸೋಕೆ ಸ್ವಾಧೀನ ಪತಿಕ ವಾಗುತ್ತಾಳೆ. ಅಂದರೆ ಕೃಷ್ಣನಲ್ಲೇ ಲೀನವಾಗಿ...ಏಕವಾಗುತ್ತಾಳೆ. ಇಲ್ಲಿ ರಾಧೆಯ ಪ್ರೀತಿ ತಪ್ಪು ಅಂತ ಅನ್ನಿಸೋದೇ ಇಲ್ಲ. ಗಂಡನಿದ್ದೂ ಪರಪುರುಷನಿಗೆ ತನ್ನನ್ನು ಅರ್ಪಿಸಿಕೊಂಡರೂ...ಅವಳು ಪತಿತೆ ಎನಿಸುವುದಿಲ್ಲ. ಇಡೀ ಜಗತ್ತು ಕಾಣುವುದು ಅವಳಿಗೆ ಭಗವಂತೆಡೆಗೆ ಇರುವ ಪ್ರೀತಿಯೊಂದೇ....

http://santasajoy-vasudeva.blogspot.com said...

ಇದು ಸರಿಯಾದ ದೃಷ್ಟಿಕೋನ .. ಪ್ರಕರವಾಗಿದೆ ಕವನ :-)
ಜಿ.ವಿ. ಜಯಶ್ರೀ

Ittigecement said...

ಮನಸು.....

ಕೃಷ್ಣ - ರಾಧೆಯರ ಬಗೆಗೆ ತುಂಬಾ ಕುತೂಹಲವಿತ್ತು.....
ಅದಕ್ಕಾಗಿ ಹಲವು ಪುಸ್ತಕಗಳನ್ನು ಓದಿದೆ...

ನಿಜ ಹೇಳಬೇಕೆಂದರೆ ..
ಕಥೆಯನ್ನು ಬೇರೆ ರೀತಿಯಲ್ಲೇ ಬರೆಯಲು ಹೊರಟಿದ್ದೆ...

ಒಂದೆರಡು ಸ್ನೇಹಿತರಿಗೆ... ನನ್ನಾಕೆಗೆ ಕಥೆಯನ್ನು ಹೇಳಿದೆ...

"ಓಕೆ .. ಬರಿರಿ" ಅಂದ್ರು...

ಆದರೆ ಆ ಪುಸ್ತಕಗಳ ಓದು ಕಥೆಯ ತಿರುವನ್ನು ಬದಲಿಸಿ ಬಿಟ್ಟಿತ್ತು...
ಬದಲಾದ ಕಥೆ ಎಲ್ಲರಿಗೂ ಆಶ್ಚರ್ಯ ಹಾಗು ಖುಷಿ ಕೊಟ್ಟಿತ್ತು....

ಮೊದಲು ಕಥೆ ಕೇಳಿದ್ದ ನನ್ನಾಕೆ "ಸಣ್ಣ ಮಂಗಳಾರತಿ... ಮಂತ್ರಾಕ್ಷತೆ" ಕೊಟ್ಟಿದ್ದಳು..
"ಹೀಗೆಲ್ಲ ಬರಿಬೇಡಿ" ಅಂತಲೂ ಹೇಳಿದ್ದಳು...

ಕಥೆಗಳಿಗಿಂತ ಸಣ್ಣ ಕಾದಂಬರಿಗಳು ಒಳ್ಳೆಯದು ಅಂತ ಅನ್ನಿಸುತ್ತಿದೆ...

ಅಲ್ಲಿನ ಕ್ಷೇತ್ರ ಇನ್ನೂ ವಿಶಾಲ ಅಲ್ಲವಾ ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...

Ittigecement said...

ಪದ್ಮಾ....

ನಿಜ ರಾಧೆ ಉತ್ಕಟ ಪ್ರೇಮಕ್ಕೆ...
ವಿರಹಕ್ಕೆ ಉದಾಹರಣೆ...

ಕೃಷ್ಣ ಗೋಕುಲ ಬಿಟ್ಟು ಹೋಗುವಾಗ ತನ್ನ ಪ್ರೀತಿಯ ಕೊಳಲನ್ನು ರಾಧೆಗೆ ಕೊಟ್ಟು ಹೋಗುತ್ತಾನೆ...

ಮತ್ತೆ ತಿರುಗಿ ಗೋಕುಲಕ್ಕೆ ಬರುವದಿಲ್ಲ...
ಕೊಳಲನ್ನೂ ಹಿಡಿಯುವದಿಲ್ಲ....

ತನ್ನ ಕರ್ತವ್ಯ...
ಕೆಲಸದಲ್ಲಿ ಮುಳುಗಿ ಹೋಗುತ್ತಾನೆ...

ಇತ್ತ ರಾಧೆ ಅವನಿಗಾಗಿ ಕಾಯುತ್ತಿರುತ್ತಾಳೆ.......

ವಿರಹಕ್ಕೆ... ತ್ಯಾಗಕ್ಕೆ ರಾಧೆಗಿಂತ ಬೇರೆ ಉದಾಹರಣೆ ಇದ್ದಿರಲಿಕ್ಕಿಲ್ಲ.... !

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು....

shubha hegde said...

ಸುಂದರ ನಿರೂಪಣೆಯ ಜೊತೆ ವಿಶಿಷ್ಟ ಶೈಲಿ ಓದುಗರನ್ನು ತನ್ನತ್ತ ಸೆಳೆಯುತ್ತದೆ. ಗೊತ್ತಿರುವ ಕಥೆಯಾದರೂ ಕಾಡುವಂತೆ ಮಾಡುತ್ತದೆ ಎಂದರೆ ಅದಕ್ಕೆ ನೀವು ಬರೆಯುವ ರೀತಿ.
ಕೃಷ್ಣ,ರಾಧೆಯರದ್ದು ಅಮರ ಪ್ರೇಮ. ಪ್ರೇಮಕ್ಕೆ, ವಿರಹಕ್ಕೆ ಇನ್ನೊಂದು ಹೆಸರು ರಾಧೆ.ಎಲ್ಲವೂ ಸರಿ.
ತನಗಿಂತ ಹಿರಿಯಳಾದ, ಮದುವೆಯಾದ ರಾಧೆಯನ್ನು ಪ್ರೇಮಿಸಿ, ಅವಳಿಗೊಂದು ಸ್ಥಾನ ಕೊಡದೆ ರಾಧೆಯನ್ನು ಗೋಕುಲದಲ್ಲೇ ಕೃಷ್ಣ ಬಿಟ್ಟು ಹೋಗುತ್ತಾನೆ.
ನಾವು ಕೃಷ್ಣನನ್ನು ಪೂಜಿಸುವಾಗ "ಕೃಷ್ಣ,ರಾಧೆಯರನ್ನು ಮಾತ್ರ" ಪೂಜಿಸುತ್ತೇವೆ. ಯಾಕೆ?
ಅವನ ಅಧಿಕೃತ ಹೆಂಡತಿಯರಾದ ರುಕ್ಮಿಣಿ, ಜಾಂಬವತಿ ಇತ್ಯಾದಿಯವರೆನ್ನೆಲ್ಲ ಅವನ ಜೊತೆಯಲ್ಲಿ ಪೂಜೆ ಮಾಡುವದಿಲ್ಲ ಯಾಕೆ ?
ಇನ್ನೊಂದು ಪ್ರಶ್ನೆ.
ಕೃಷ್ಣ ಧರ್ಮ ಸ್ಥಾಪನೆಗಾಗಿ ಅವತಾರವೆತ್ತಿದ್ದಾನೆ.ಈ ಮೊದಲೆ ಮದುವೆಯಾದ,ತನಗಿಂತ ಹಿರಿಯಳಾದ ಪರಸ್ತ್ರೀಯಳನ್ನು ಮೋಹಿಸುತ್ತಾನೆ.
ಇದೆಂಥಹ ಧರ್ಮಸ್ಥಾಪನೆ ? ಸಮಾಜಕ್ಕೆ ಇದೆಂಥಹ ಆದರ್ಶ ? ಪ್ರೀತಿ,ಪ್ರೇಮ ಧರ್ಮದಿಂದ ಹೊರತಾಗಿ ಉಳಿದದ್ದು ಯಾಕೆ?
ಇಂಥಹ ಪ್ರಶ್ನೆಗಳನ್ನು ಹುಟ್ಟಿಸಿದ್ದು ನಿಮ್ಮ ಕಥೆ, ನಿಮ್ಮ ಶೈಲಿ. ಸುಂದರ ಕಥೆಯನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

PrashanthKannadaBlog said...

ಕಥೆ ಚೆನ್ನಾಗಿದೆ ಪ್ರಕಾಶಣ್ಣ. ಇವರಿಬ್ಬರನ್ನು ಪ್ರೀತಿಗೆ ಉದಾಹರಣೆಯಾಗಿ ತೆಗೆದುಕೊಳ್ಳುತ್ತೇವೆ.
ಆದರೆ ನಮ್ಮ ಸಮಾಜ ಈ ರೀತಿಯ ಸಂಬಧವನ್ನು ಒಪ್ಪಲಾರದು. ಏನು ವಿಪರ್ಯಾಸ :-)

ಇದೇ ವಿಷಯದ ಮೇಲೆ ನಾನೊಂದು ಕವನ ಬರೆದಿದ್ದೆ. ಸಮಯ ಸಿಕ್ಕೆದಾಗ ನೋಡಿ

http://prashanthkannada.blogspot.com/2012/08/blog-post.html

Unknown said...

ಜಾರಿ ಬಿದ್ದ ನೆಲದ ಮಣ್ಣು ಹೇಗೆ ಬಿಡುವದು... ?

ಅಂಟಿಕೊಂಡ ...
ಕೆಸರಿನೊಡನೆ ನಂಟು ಹೇಗೆ ಬಿಡುವದು...?... "

ಮನಸನ್ನು ಊರಿದ ಸಾಲುಗಳು ಇವು .ಯಾರ್ಯಾರಿಗೆ ಹೇಗೆ ಬೇಕೋ ಹಾಗೇ ಭಗವಂತ .ಸುಂದರ ಸಾಲುಗಳಲ್ಲಿ ಭಗವಂತನ ಪ್ರೇಮ ಹಿಡಿದಿರಿಸಿರುವುದು ಓದುವಾಗ ನಿಜಕ್ಕೂ ಅಶ್ರುಧಾರೆ .

Swarna said...

ಮೇಲಿನ ಅಭಿಪ್ರಾಯಗಳಲ್ಲಿ ಎಲ್ಲವೂ ವ್ಯಕ್ತವಾಗಿವೆ, ಆದರೂ ಇಂತಹ ಒಂದು ಕಾವ್ಯವನ್ನ ಕಟ್ಟಿದ ನಿಮಗೆ ಧನ್ಯವಾದಗಳು ಮತ್ತು ವಂದನೆಗಳು

Jayalaxmi said...

ಚೆಂದದ ಕತೆ ಪ್ರಕಾಶ್. ಕೃಷ್ಣನ ಬಗ್ಗೆ ತುಂಬಾ ಪುಸ್ತಕಗಳನ್ನು ಓದಿರುವುರಿ ಅಂತ ನೀವು ಉತ್ತರಿಸಿದ ಕಮೆಂಟುಗಳಿಂದ ಗೊತ್ತಾಯಿತು. ಹಾಗೆಂದೇ ಬ್ಲಾಗಿನಲ್ಲಿ ಬರೆದುಕೊಂಡಿದ್ದ ನನ್ನ ಈ ಪ್ರಶ್ನೆಯನ್ನು ನಿಮ್ಮ ಮುಂದಿಡುತ್ತಿರುವೆ. ಉತ್ತರದ ನಿರೀಕ್ಷೆಯಲ್ಲಿರುವೆ...
http://antaraala-jayalaxmi.blogspot.in/2008/06/blog-post_14.html

Ittigecement said...

ಗಿರಿಶೂ....

ದೇವರು ಅಂದರೆ ಭಾವನೆಗಳು ಇರಲೇ ಬೇಕಲ್ಲವೆ ?
ರಾಧೆಯ ಗಂಡ ಕೃಷ್ಣನನ್ನು ಭೇಟಿಯಾದಮೇಲೆ ಕೃಷ್ಣನ ಮನಸ್ಸು ಹೊಯ್ದಾಡುತ್ತದೆ...
ಅದೇ ಸಮಯದಲ್ಲಿ ಕಂಸನಿಂದ ಆಮಂತ್ರಣ ಬಂದಿರುತ್ತದೆ...

ಆಗ ಗೋಕುಲವನ್ನು ಬಿಡುವ ನಿರ್ಧಾರ ಮಾಡುತ್ತಾನೆ..

ಇದೊಂದು ಮಾತ್ರ ನನ್ನ ಕಲ್ಪನೆ...(ರಾಧೆಯ ಗಂಡ ಕೃಷ್ಣನನ್ನು ಭೇಟಿಯಾಗಿದ್ದು.. ಕೃಷ್ಣನಿಗೆ ಕಸಿವಿಸಿಯಾಗಿದ್ದು...)

ಒಮ್ಮೆ ಜಾರಿಬಿದ್ದವರನ್ನು ಸಮಾಜ ಯಾವಾಗಲೂ ಕೆಸರು ಕಣ್ಣಿನಿಂದಲೇ ನೋಡುತ್ತದೆ....
ಬಿದ್ದವರು ಕೆಸರನ್ನು ತೊಳೆದುಕೊಂಡರೂ ಸಹ....

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಉಮೇಶ ದೇಸಾಯಿಯವರೆ...

ನಿಜ ಪುರಾಣ ಕಥೆಗಳೇ ಹೀಗೆ...
ನಾವು ಕಲ್ಪಿಸಿಕೊಂಡಷ್ಟು...
ನಮ್ಮ ಜ್ಞಾನವಿದ್ದಷ್ಟು ಅರ್ಥವಾಗುತ್ತದೆ...

ಕಡೆದಷ್ಟು ಬೆಣ್ಣೆಸಿಗುವದಂತೂ ನಿಜ....

ಇಲ್ಲಿನ ಪ್ರತಿಕ್ರಿಯೆಗಳನ್ನು ಓದಿ ತುಂಬಾ ಖುಷಿಯಾಯಿತು...

ಇಲ್ಲಿನ ಪ್ರಶ್ನೆಗಳ ಉತ್ತರಕ್ಕಾಗಿ ಇನ್ನಷ್ಟು ಓದಬೇಕಾಗಿದೆ..
ಹಿರಿಯರನ್ನು ಕೇಳಬೇಕಾಗಿದೆ...

ಚಂದದ ಅಭಿಪ್ರಾಯಕ್ಕಾಗಿ ಪ್ರೀತಿಯ ವಂದನೆಗಳು...

Ittigecement said...

ಪ್ರೀತಿಯ ಶ್ರೀವತ್ಸ....

ನಿಜ ..
ಈ ಕಥೆಯನ್ನು ಬರೆಯುತ್ತ.. ಬರೆಯುತ್ತ ನಾನೂ ಸಹ ಕಳೆದು ಹೋಗಿದ್ದೆ...
ಕೃಷ್ಣ - ರಾಧೆಯರ ಪ್ರೇಮವೇ ಹಾಗಿತ್ತು...

ಹಿಂದಿ ಮೂಲದ ಕೃಷ್ಣ ಚರಿತ್ರೆಯನ್ನು "ಸಿದ್ದವನಳಿ ಕೃಷ್ಣ ಶರ್ಮರು" ಅನುವಾದಿಸಿದ್ದು ತುಂಬಾ ಸೊಗಸಾಗಿದೆ....
ಅದರಲ್ಲಿ..
ರಾಧೆಯ ಗಂಡ ಕಂಸನ ಬಳಿ ಸೇನಾಧಿಪತಿಯಾಗಿರುತ್ತಾನೆ...

ನಿಜಕ್ಕೂ ನಮ್ಮ ಪುರಾಣಕಥೆಗಳಲ್ಲಿ
"ಮಾನವೀಯ ಸಂಬಂಧಗಳ.. ಬಾಂಧವ್ಯಗಳ ಹುಡುಕಾಟದ ಸೊಗಸಿನ ರುಚಿಯೇ.. ಬೇರೆ....

ನಾವೂ ಸಹ ಎಲ್ಲಿಯೋ ಕಳೆದು ಹೋಗುತ್ತೇವೆ.."

ಕಥೆಯನ್ನು ಇಷ್ಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...

ಮಂಜಿನ ಹನಿ said...

"ಈ ಕೃಷ್ಣನನ್ನು ಒಬ್ಬರೂ ಅರ್ಥ ಮಾಡಿಕೊಂಡಿಲ್ಲ...

ಯಾರ್ಯಾರು ಹೇಗೆ ಬಯಸಿದ್ದಾರೋ..
ಅವರವರಿಗೆ
ಅವರು ಬಯಸಿದಂತೆಯೇ .. ಹಾಗೆಯೇ.. ಸಿಕ್ಕಿದ್ದೇನೆ....

ಯಶೋಧೆ ...
ನಂದರಿಗೆ ಹೆತ್ತ ಮಗನಂತೆಯೇ ಕಂಡಿರುವೆ...

ಅಕ್ರೂರನಿಗೆ ದೇವರಂತೆ...

ದುರುಳ ಕಂಸನಿಗೆ ತನ್ನ ಸಾವಿನಂತೆ...

ಗೋಪಿಕಾಸ್ತ್ರೀಯರಿಗೆ ಅವರ ಮನೋಭಾವಂದಂತೆ..
ಪ್ರೇಮ.. ಪ್ರೀತಿಯಂತೆ..ಕಂಡಿರುವೆ..."

ಈ ಸಾಲುಗಳು ಮಾತ್ರ ತುಂಬಾ ಹಿಡಿಸಿತು ಪ್ರಕಾಶಣ್ಣ. ನಿಮ್ಮ ಬರಹಗಳೇ ಹಾಗೆ ದೃಶ್ಯ ಮಾಧ್ಯಮದಂತೆ, ಮನಸ ಪರದೆಯ ಮೇಲೆ ಪ್ರತಿಯೊಂದು ದೃಶ್ಯಗಳೂ ಹಾದು ಹೋದಂತೆ. ಶ್ರೀ ಕೃಷ್ಣ ಒಂದು ಮಾಯೆಯೇ ಇರಬೇಕು, ಆತ ತನ್ನ ಪ್ರೇಮದಿಂದ ಎಲ್ಲರನ್ನೂ ಆವರಿಸಿಬಿಡುತ್ತಾನೆ. ಅಷ್ಟು ಪ್ರೇಮವನ್ನು ಧಾರೆ ಎರೆಯಲು ಅವನೊಬ್ಬನಿಗೆ ಮಾತ್ರ ಸಾಧ್ಯವಿರಬೇಕು. ಅದಕ್ಕೆ ಪಾತ್ರರಾದ ನಾವುಗಳು ಮಾತ್ರ ಪಾವನರಾಗುತ್ತೇವೆ. ಬಹಳ ಹಿಡಿಸಿತು ಈ ಬರಹ.

- ಪ್ರಸಾದ್.ಡಿ.ವಿ.

ಮಹಿಮಾ said...

ಹಾ..ಇಡೀ ಗೋಕುಲವನ್ನ..ರಾಧೆಯನ್ನ..ನನ್ನೊಲವಿನ ಶ್ಯಾಮನನ್ನ..ಕಣ್ಣೆದುರು ನಿಲ್ಲಿಸಿದ್ದೀರಾ!!ಜಗವನ್ನಲಿ ನನ್ನ ನೂರು..ನಾನವನ ರಾಧೆ..ಸಣ್ಣಕ್ಕಿರ್ತಾ ಅಮ್ಮನ ಹತ್ತಿರ ಕೇಳ್ತಿದ್ದೆ ಅಂತೆ..ಅಮ್ಮ ನಾನು ಹ್ಯಾಗೆ ಮೀರಾ ತರ ಆಗೋದು..ರಾಧೆ ತರಾ ಇದ್ರೆ ನಂಗೆ ಮುದ್ದು ಗೋಪಾಲಾ ಸಿಗ್ತಾನಾ ಅಂತ..ಸಂಸಾರದಲ್ಲಿ ಮುಳುಗಿದ್ದೂ ಒಮ್ಮೊಮ್ಮೆ ನಾನವನನ್ನ ನನ್ನಲ್ಲಿ ಕಂಡಿದ್ದೀನಿ..ಅದು ನೂರೊಂದು ತರ..ನೂರೊಂದು ವಿಚಾರಗಳಲ್ಲಿ...ತುಂಬಾ ಇಷ್ಟ ಆಯ್ತು..ನಿಮ್ಮ ಓದು..ಮತ್ತಷ್ಟು ನನ್ನ ಶ್ಯಾಮಾನಂದದಲ್ಲಿ ಮುಳುಗಿಸಲಿ..ಈ ರಾಧೆಗೊಂದು ಬಹುಮಾನ..ಈ ಮೀರಾಳಿಗೊಂದು ಸುಂದರ ಸಪ್ನ..ನಿಮ್ಮ ಬರಹಗಳಿಂದ ಲಭ್ಯವಾಗಲಿ..

viju said...

rashi chanda iddu kathe.........prakashanna....kan edrige nadita iddange anstu odta hodange.............so nice....

viju said...

rashi chanda iddu kathe.........prakashanna....kan edrige nadita iddange anstu odta hodange.............so nice....

balasubramanya said...

ಅಕ್ಷರದ ಗಾರುಡಿಗ ಈ ಪ್ರಕಾಶ್ ಹೆಗ್ಡೆ ಕಣ್ರೀ ಮನಸಿಗೆ ಹಿಡಿಸುವ ಅರ್ಥವತ್ತಾದ ಬರಹ ಇದು.ಈ ಲೇಖನ ಓದಿದ ನನಗೆ ಒಂದು ಹಾಡು ಜ್ಞಾಪಕಕ್ಕೆ ಬಂತು. ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರನ್ತೀ ಒಂದು ಹೆಣ್ಣು..........!!!! ಆಹಾ ಎಂತಹ ಸುಂದರ ಪ್ರೀತಿ ವಿಮರ್ಶೆಯ ಪದಗ ಸುಂದರ ನರ್ತನ ಜೈ ಹೊ ಪ್ರಕಾಶ್ ಜಿ.ವಾ ವಾಹ್ ಕ್ಯಾ ಬಾತ್ ಹೇ

Kishan said...
This comment has been removed by the author.
Kishan said...

Very thought provoking and intensely written but yet, in a simple way. You unfolded some of the things which a layman cannot comprehend. Excellent indeed!

Shruthi said...

Very Practically poem I should say ! Even though we see Radha as Lover of Krishna , she is always Bhagna Premi and waiting for Krishna always !
And in you poem the way you showed about possessiveness, and comfort level that she had on Krishna, even after getting married .... is super .And again which can be debated on both sides :-) . But when Look at it as LOVE and Only LOVE probably we can understand both Krishna and Radha and their relationship better ......

Ittigecement said...

ನನ್ನ ಮೆಚ್ಚಿನ ಕಥೆಗಾರ ಬೋಳುವಾರು ಮಹಮ್ಮದ್ ಕುಂಜ್~ಇ ಸರ್ ಈ ಕಥೆ ಓದಿ ಹೀಗೆ ಹೇಳಿದರು....
ಇದು ನನ್ನ ಪಾಲಿಗೆ ಬಹುಮಾನ...

" ನಿಮ್ಮ ಕತೆ ಓದಿದೆ.
ಆಲ್ಲ ಹೆಗಡೆಯವರೆ, ನಿವು ಅದು ಹೇಗೆ ಅಷ್ಟೊಂದು ಸಲಿಸಾಗಿ ಬರೆಯುತ್ತಿರಿ?
ಪ್ರತಿ ಸಾಲುಗಳನ್ನು ಎರೆಡೆರಡು ಬಾರಿ ಒದಿಕೊಂಡೆ. ಸಂತೊಷವಾಯಿತು.
ಅಭಿನಂದನೆಗಳು. "

Unknown said...

ಅದ್ಬುತ ಬರಹ !,
ಪ್ರೇಮ -ಸಂಬಂದ - ತೊಳಲಾಟ ಎಲ್ಲವನ್ನು ಅನುಭವಿಸುವಂತೆ ಮಾಡಿತು !!
ಸರಳವಾದ ಮಾತುಗಳಲ್ಲಿ ಯೋಚಿಸುವಂತೆ ಮಾಡಬಲ್ಲ ತಮ್ಮ ಕೌಶಲ್ಯ ಅದ್ಬುತ !!

Ittigecement said...

ಸುಮಾರವರೆ...

ಓದುಗರಾದ "ಶುಭಾರವರ" ಪ್ರಶ್ನೆ ನಿಜಕ್ಕೂ ಕುತೂಹಲವಾಗಿದೆ...

"ಕೃಷ್ಣನೇ ರಾಧೆಗೆ..
ರಾಧೆಯ ಸಂಬಂಧಕ್ಕೊಂದು ಹೆಸರು ಕೊಟ್ಟಿಲ್ಲ..

ಅವಳನ್ನು ಗೋಕುಲದಲ್ಲಿ ಬಿಟ್ಟು..
ಅವಳ ಕೈಗೆ ಕೊಳಲನ್ನು ಕೊಟ್ಟು ಹೋಗಿಬಿಡುತ್ತಾನೆ...

ಹಾಗಿದ್ದಲ್ಲಿ ಕೃಷ್ಣನ ಜೊತೆಯಲ್ಲಿ ರಾಧೆಯನ್ನಿಟ್ಟು "ರಾಧಾಕೃಷ್ಣನನ್ನು" ಯಾಕೆ ಪೂಜೆ ಮಾಡುತ್ತೇವೆ ?

"ರುಕ್ಮಿಣಿ.. ಜಾಂಬವತಿ.. ಇತ್ಯಾದಿ ಆಧಿಕೃತ ಪತ್ನಿಯರ ಜೊತೆಯಲ್ಲಿ ಪೂಜೆಯನ್ನು ಯಾಕೆ ಮಾಡುವದಿಲ್ಲ.. ?

ಹೌದು ಅಲ್ವಾ ?

ಇದಕ್ಕೆ ಉತ್ತರ ನನಗೂ ಸರಿಯಾಗಿ ಗೊತ್ತಿಲ್ಲ...ಇಂದು ಅಥವಾ ನಾಳೆ ಉತ್ತರ ಸಿಗಲಿದೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು....

Ittigecement said...

ಪ್ರೀತಿಯ ಶ್ರೀಕಾಂತ್ ಮಂಜುನಾಥ್..

ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

"ಪ್ರೀತಿ ಇದ್ದಲ್ಲಿ ಅಧಿಕಾರ ಇರಲೇ ಬೇಕಾ ?
ಪ್ರೀತಿ ಇದ್ದಲ್ಲಿ ಪೊಸ್ಸೆಸ್ಸಿವ್ ನೆಸ್ ತನ್ನಿಂದ ತಾನೆ ಬರುತ್ತದೆ..

ರಾಧೆ ಅಷ್ಟು ಪೊಸ್ಸಿಸ್ಸಿವ್ ಇದ್ದಳಾ ಅಂತ ಅನೇಕರು ಕೇಳಿದ್ದಾರೆ..
ಇದ್ದಿರಲೇ ಬೇಕು.. ಪ್ರೀತಿ ಇದ್ದಲ್ಲಿ ಇವೆಲ್ಲ ಸಹಜ..

ಪ್ರೀತಿ ಇದ್ದಲ್ಲಿ ಸಂಶಯವೂ ಕೂಡ ಸಹಜ..

ಆದರೆ ರಾಧೆಯ ಕಣ್ಣಲ್ಲಿ ತನ್ನ ಪ್ರೀತಿಯ ಬಗೆಗೆ..
ಕೃಷ್ಣ ತನ್ನ ಕೈ ಬಿಡಲಾರ ಎನ್ನುವ ಭರವಸೆ ಇತ್ತು..
ಭರವಸೆಯಿಂದಲೇ ಕಣ್ಣು ಮುಚ್ಚಿದ್ದಳು.. ಕಣ್ಣು ಮುಚ್ಚಿಯೇ ಇದ್ದಳು.. ಕೃಷ್ಣ ಗೋಕುಲ ಬಿಟ್ಟು ಹೋಗುವಾಗಲೂ...

ಪ್ರೀತಿಯ ಪೊರೆ ಇರುವಾಗ ಹೆಚ್ಚಾಗಿ ಕಟು ಸತ್ಯ ಗೊತ್ತೇ ಆಗುವದಿಲ್ಲ ಅಲ್ಲವಾ ?

ಕಥೆಯನ್ನು ಇಷ್ಟಪಟ್ಟಿದ್ದಕ್ಕಾಗಿ ಪ್ರೀತಿಯ ವಂದನೆಗಳು...

Unknown said...

ಇಷ್ಟವಾಯ್ತು ಪ್ರಕಾಶಣ್ಣ :).... ಆ ರಾಧಾ -ಕೃಷ್ಣರ ಪ್ರೀತಿಯಂತಹ ಪರಿಶುದ್ಧ ಪ್ರೀತಿ ಎಲ್ಲರಿಗೂ ದಕ್ಕಲಿ .... ಪ್ರೀತಿಗೊಂದು ಅರ್ಥ ಸಿಗಲಿ ....

ಪ್ರೀತಿಯ ಪರಿಯನ್ನು ಸುಂದರವಾಗಿ ಚಿತ್ರಿಸಿದ್ದೀರಿ .... ಧನ್ಯವಾದ :)

ಕನಸು ಕಂಗಳ ಹುಡುಗ said...

ಹಾಂ ಆ ರಾಧೆ ಬದುಕಿದ್ದದ್ದು ಆ ಒಬ್ಬ ಕೃಷ್ಣನಿಗಾಗಿ ಮಾತ್ರ....
ಮಧುರೆಗೆ ಹೊರಡಲೇ ಬೇಕು ಮಾಧವ....
ಏಕೆಂದರೆ ಅವನದು ಉದ್ದೇಶಿತ ಜನನ...

ರಾಧೆಯ ಪ್ರತಿಯೊಂದು ಭಾವನೆಗಳೂ ಕೃಷ್ಣನಿಗೆ ಪರಿಪೂರ್ಣ...
ಕೃಷ್ಣನನ್ನೂ ವಿಚಾರಕ್ಕೀಡು ಮಾಡುವಷ್ಡು....
ಶ್ಯಾಮನ ಮನಸ್ಸನ್ನೂ ಕಳವಳಗೊಳಿಸುವಷ್ಟು ಪರಿಪೂರ್ಣ
ರಾಧೆಯ ಪ್ರೀತಿ...

ಅದಕ್ಕೇ ಇರಬೇಕು..
ಬೇಡನ ಬಾಣಕ್ಕೆ ಗುರಿಯಾಗಿ ತಟದ ಚಿರುರಿನ ಮರದ
ಅಡಿತಂಪಲ್ಲಿ ಕುಳಿತು ದ್ವಾಪರ ಯುಗದ ಕೊನೆಗೊಳಿಸಿ
ಅವತಾರಧಾತನ ಕೊನೆಯುಸಿರಿನಲ್ಲಿ ಹೇಳಿದ ಒಂದೇ ಒಂದು ಮಾತು...
"ರಾಧಾ"..

ಅಧ್ಬುತ ಬರಹ..
ಚಿತ್ರಣ ಕಣ್ಣು ಕಟ್ಟುವಂತಿದೆ..
ಜೈ ಹೋ ಪ್ರಕಾಶಣ್ಣಾ...

ಸತೀಶ್ ನಾಯ್ಕ್ said...

ಹದಿನಾರು ಸಾವಿರ ಗೋಪಿಕೆಯರಲ್ಲಿ .. ಸತ್ಯಭಾಮೆಯ ಹಾಗೆ ರಾಧೆಯೂ ಕೃಷ್ಣನಿಗೆ ಒಬ್ಬ ಅನನ್ಯ ಪ್ರೇಯಸಿ ಅಂತ ಮಾತ್ರ ಇಲ್ಲೀವರೆಗೂ ತಿಳಿದಿತ್ತು.. ರಾಧೆಯ ಹಿಂದಿನ ಬದುಕಿನ ಚಿತ್ರಣ ಈ ಮೊದಲು ಗೊತ್ತೇ ಇರಲಿಲ್ಲ.. ರಾಧೆಯ ವೃತ್ತಾಂತ ಕೇಳಿದ ಮೇಳ ಕೃಷ್ಣ ರಾಧೆಯ ಸಂಬಂಧ ಅನೈತಿಕವೇ ಅನ್ನೋ ಅನುಮಾನ ಮೂಡಿದ್ದು ನಿಜ.. ಆದ್ರೆ ಸರ್ವೋತ್ತಮ ಪುರುಷರೆಂದಾಗ ಈಗಲೂ ನಾವು ಕೊಡಬಲ್ಲ ಉದಾಹರಣೆಯೆಂದರೆ ಕೃಷ್ಣ ಮತ್ತು ರಾಮ ಮಾತ್ರ.. ಕೃಷ್ಣನ ಸಾಂಗತ್ಯ ಅಂಥಹ ಒಂದು ಭಾಗ್ಯ ಅಂತ ಅನ್ನಿಸಿದ್ದಿರಬಹುದೇನೋ.. ಕಥೆ ಹೊಸ ವೃತ್ತಾಂತ ಒಂದನ್ನ ಪರಿಚಯ ಮಾಡಿಸ್ತು ಪ್ರಕಾಶಣ್ಣ.. ಪಾತ್ರದೊಳಗಣ ಭಾವುಕತೆಯನ್ನ ನೀವು ತೆರೆದಿಡೋ ರೀತಿ ಅಮೋಘ.. ತುಂಬ ಇಷ್ಟ ಆಯ್ತು.. :) :)

Ittigecement said...

ಸುಮತಿಯವರೆ....

ಮೆಚ್ಚಿನ ನಟಿ..
ಹಾಗೂ ಲೇಖಕಿಯವರ ಪ್ರಶ್ನೆ ಕೂಡ ತಲೆ ಕೆಡಿಸಿದೆ...
೧) "ಕೃಷ್ಣನ ಹೆಸರಿನೊಂದಿಗೆ ಅಂಟಿಕೊಂಡ ರಾಧೆ, ಕೃಷ್ಣ ಅವಳನ್ನು ತೊರೆದು ಹೋದ ನಂತರ ಏನಾದಳು?...."

೨)"ರಾಧಾ ಮಾಧವರ ಪ್ರೀತಿಯನ್ನು ನಮ್ಮ ಭಾರತಿಯ ಸಂಪ್ರದಾಯ ಇಷ್ಟು ಸುಲಭವಾಗಿ ಸ್ವೀಕರಿಸಿದ್ದು ಹೇಗೆ? ಯಾಕಾಗಿ?..."


ನಮ್ಮ ಪುರಾಣ ಕಥೆಗಳಲ್ಲಿನ ಸಂಬಂಧಗಳ "ಒಳ ಕೆದಕು" ನಿಜಕ್ಕೂಸೋಜಿಗ..

ಇದು ಕಥೆ ಅಂತ ಅಂತ ಓದಿದರೂ..
ಸಾವಿರ ಸಾವಿರ ಪ್ರಶ್ನೆಗಳು ಇಂದಿಗೂ ಪ್ರಸ್ತುತ...

ಕಡೆದಷ್ಟೂ ವಿಷಯ ಬರುತ್ತವೆ..

ಹಾಗಾಗಿ ಅಲ್ಲಿನ ಪಾತ್ರಗಳು ನಮ್ಮ ನಮ್ಮ ಬದುಕಿನ ಅವಿಭಾಜ್ಯಗಳಾಗಿಬಿಟ್ಟಿವೆ...

ಒಳ್ಳೆಯವನೆಂದರೆ ಧರ್ಮರಾಯ.. ಸತ್ಯ ಹರಿಶ್ಚಂದ್ರ..
ಕೆಟ್ಟವ ಕೀಚಕ.. ಕಂಸ.. ರಾವಣ..
ಛಲಕ್ಕೆ ಬಿದ್ದು ಹಾಳಾದವ ಧುರ್ಯೋಧನ.. ಇತ್ಯಾದಿ..

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...

Gubbachchi Sathish said...

ಪ್ರೇಮವಿದ್ದಲ್ಲಿ ಅಧಿಕಾರವಿರಲೇ.... ಬೇಕಾ ?

Nice writeup.

ವೆಂಕಟೇಶ್ ಹೆಗಡೆ said...

ಪ್ರಕಾಶಣ್ಣ ಅದ್ಭುತ ... ನಿಜಕ್ಕೂ ಅಷ್ಟೆಲ್ಲ ಬರೆಯುತ್ತಿರಲ್ಲ ಯಾವದಾದರೂ ಪುಸ್ತಕ ಇದ್ದರೆ ಹೇಳುತ್ತಿರ ? ಕೃಷ್ಣ ರಾಧೆಯರ ಪ್ರೇಮದ ಬಗ್ಗೆ ಒಂದು ಚೂರು ಹೆಚ್ಚಿಗೆಯೇ ತಿಲಿದುಕೊಂದಿದ್ದಿರ ... ಎಲ್ಲ ಪ್ರೇಮಿಸುವ ಹೃದಯದಲೂ ಕೃಷ್ಣ ರಾಧೇ ಯರು ಇರುತ್ತಾರೆ ಅಲ್ಲವ ?

Unknown said...

KRISHNA!!!!A hesare adbhuta,aa vyaktitvavoo ashte,5 saaviravarshagalinda,kotyantara janarannu adenu modi madideyo..avanillada kathe,kayaya,chitra,shilpa,vedanta,yavudoo illa.Premadalluu,Radheyondige, AVANA HESARU CHIRASTHAYI..AA divya premada tunukanna..hradayasprshiyagi,binbisiddeeri prakash avre..K.M.Munshi nenapadadu..Kathe,manasooregonditu....Yavudu eshtu sariyo, bhagavantane balla...jagattige,GEETEyannu bodhisidavanallave avanu??..Kaalana jaradiyalli pollu hogi gatti kalu uliuttallave..Indiguu ee premakke shashvata shtana janamaanasadalli sikkide andare, adaralli,eno divyate iralebeku...Mundeyuu,ellarannu,chintisuvane madutta akarshisuttale iruttade ee samarpana prema..tumba chennagi,avara bhavanegalanna manodeseyanna ondonu vakyadalloo,abhivyaktagolisiddeeri..Prakash avre,KRISHNAna premada bagge mattomme chintisuvante maadida nimage..dhanyavadagalu

ಶ್ರೀಹರ್ಷ ಭಟ್ಟ said...

ಕೃಷ್ಣ-ರಾಧೆ-ಪ್ರೇಮ ಈ ಮೂರರ ಅವಿನಾಭಾವ ಸ೦ಬ೦ಧದ
ಚಿತ್ರಣ ಸೊಗಸಾಗಿದೆ.....

ಮನಕ್ಕೆ ತು೦ಬಾ ಹಿಡಿಸಿತು...

Anonymous said...

...
ರಾಧೆ ಹಾಗೂ ಕೃಷ್ಣ ಇಂಥದ್ದೊಂದು ಪ್ರೀತಿಗೆ ಮಾದರಿ ತೋರಿಸಿಹೋಗಿದ್ದಾರೆ ಅಷ್ಟೇ.

ಇಂತಹ ನಿಷ್ಕಲ್ಮಶ ಪ್ರೀತಿ ಈ ಬುವಿಯ ಮೇಲೆ ಎಂದೆಂದೂ ಇರಬಹುದು ಎನ್ನುವುದರ ಸೂಚನೆ ನೀಡಿ ಹೋಗಿದ್ದಾರೆ, ಅಷ್ಟೇ.

ಅದು ಇಂದಿಗೂ ಇದೆ.

ಎಷ್ಟು ಮಂದಿ ಅಂಥ ಪ್ರೀತಿಯನ್ನು ನಿಷ್ಕಲ್ಮಶವಾಗಿ ಉಳಿಸಿಕೊಂಡಿದ್ದಾರೆ?

ಆದರೆ ಅದನ್ನು ಎಷ್ಟು ಮಂದಿ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ?

ಅಲ್ಲದೇ, ಹಾಗೆ ವ್ಯಕ್ತಪಡಿಸಿದಾಗ, ಈ ಸಮಾಜದಲ್ಲಿ ಎಷ್ಟು ಮಂದಿ ಅದನ್ನು ಸ್ವಾಗತಿಸಿ ಒಪ್ಪಿಕೊಳ್ಳುತ್ತಾರೆ?


Manjula said...

ತುಂಬಾ ವೈಯಕ್ತಿಕ, ತುಂಬಾ ಸರಳ, ತುಂಬಾ ಮನಮುಟ್ಟೋ ವರ್ಣನೆ.. ನೀವೇ ಅವರ ಪ್ರೀತಿಯ ಅನುಭಾವದ ಪ್ರತ್ಯಕ್ಷದರ್ಶಿಯಾಗಿದ್ದಿರೇನೋ ಅನ್ನುವಷ್ಟು ಚೆನ್ನಾಗಿದೆ! :-)

suragi \ ushakattemane said...

ಕೃಷ್ಣ ಸದಾ ವರ್ತಮಾನದಲ್ಲಿ ಬದುಕಿದ . ಹಾಗಾಗಿ ಇದೆಲ್ಲಾ ಅವನಿಗೆ ಸಾಧ್ಯವಾಯಿತು. ಭೂತ-ಭವಿಷ್ಯತ್ ಗಳಿಲ್ಲದ ವ್ಯಕ್ತಿಗೆ ಸಮಾಜದ ಚೌಕಟ್ಟುಗಳು ಯಾವ ಲೆಕ್ಕ.? ಆ ಕ್ಷಣದಲ್ಲಿ ಅವನೆದುರಿಗೆ ಯಾವ ವ್ಯಕ್ತಿ ನಿಂತಿದ್ದಾನೆಯೋ ಅವನಿಗಾಗಿ/ಅವಳಿಗಾಗಿ ಬದುಕಿದ.
ಶ್ರೇಣಿಕೃತ ಸಮಾಜ ವ್ಯವಸ್ಥೆಯ ಕೆಳಹಂತದಲ್ಲಿ ಜನಿಸಿದರೂ ಕಳಶವೇ ತನ್ನೆಡೆಗೆ ಬಾಗುವವಂತೆ ಮಾಡಿದ ಚತುರ ರಾಜಕಾರಣಿ. ಹಾಗಾಗಿ ಅವನು ವಯಸ್ಸಿನಲ್ಲಿ ಹಿರಿಯಳಾದ ರಾಧೆಯನ್ನು ಮಾಧವನಾಗಿ ಎದೆಗಪ್ಪಿಕೊಂಡ.ದಾಸಿಪುತ್ರ ವಿದುರನಿಗೆ ತಲೆ ಬಾಗಿದ.ಅಳಿಯನಾದರೂ ಅಭಿಮನ್ಯುವನ್ನು ವಂಚಿಸಿದ.ಪಾಂಡವರಿಗೆ ಕಂಟಕನಾಗಬಹುದೆಂದು ಕರ್ಣನನ್ನು ಮನೋಕ್ಲೇಶಕ್ಕೆ ಈಡು ಮಾಡಿ ಜೀವಂತ ಕೊಂದ.ಸಂಧಾನದ ಬಾಗಿಲನ್ನು ಉದ್ದೇಶಪೂರ್ವಕವಾಗಿ ಮುಚ್ಚಿದ....ನಿಜವಾದ ಅರ್ಥದಲ್ಲಿ ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ ಬಾಳಿದವನು ಅವನು. ನೋಟಕ್ಕೆ ಅಂದ. ಸ್ಪರ್ಶಕ್ಕೆ ಬರೀಯ ನೀರು..!

ಪತಂಗ ಪಯಣ said...

ಅದ್ಭುತ ಕಾವ್ಯಕ್ಕೆ ಚಂದದ ಕಾಮೆಂಟುಗಳು.

ಸೌP said...
This comment has been removed by the author.
Anonymous said...

ಚೆನ್ನಾಗಿದೆ, ನಿಮ್ಮ ಪ್ರಶ್ನೆಗಳು. ನಾನು ಸಹ ಬರೆದಿದ್ದೆ. ರಾಧೆ ಮತ್ತು ಮೀರಾ ನಿಮಗಾಗಿ.
http://neelanjala.wordpress.com/2013/01/26/%E0%B2%B0%E0%B2%BE%E0%B2%A7%E0%B2%BF%E0%B2%95%E0%B3%86/

http://neelanjala.wordpress.com/2013/03/29/%E0%B2%AE%E0%B3%80%E0%B2%B0%E0%B2%BE-%E0%B2%85%E0%B2%AD%E0%B2%BF%E0%B2%B8%E0%B2%BE%E0%B2%B0%E0%B2%BF%E0%B2%95%E0%B3%86%E0%B2%AF-%E0%B2%95%E0%B2%A4%E0%B3%86%E0%B2%97%E0%B2%B3%E0%B3%81-7/

Badarinath Palavalli said...

ರಾಧಾ ಕೃಷ್ಣರ ಅಸಲೀ ಬದುಕಿನಲ್ಲಿ ಏನೇ ಸಂಭವಿಸಿದ್ದರೂ, ವಯುಕ್ತಿಕ ಬದುಕನ್ನು ನಾವು ಎತ್ತಿಟ್ಟು, ಗಮನಿಸ ಬೇಕಾಗಿರುವುದು ಅವರ ಅನನ್ಯ ಪ್ರೇಮ ಭಾವ. ಬಿಟ್ಟಿರಲಾರೆ ಎನ್ನುವ ಮೂರ್ತ ಭಾವ. ಆ ಪ್ರೇಮದ ಸಂಕೇತ.

ಇಂದಿಗಾದರೂ ನಮಗೆ ಸಿಗುವ ಪ್ರತಿಮೆಗಳು ರಾಧಾ ಕೃಷ್ಣರದೇ ಎನ್ನುವಲ್ಲಿ ಅವರ ಒಲುಮೆಯೂ ಆದರ್ಶವೇ ಹೊರತು ಅವರ ಹಿನ್ನಲೆ ನಮಗೆ ಬೇಡದ ಸಂಗತಿ.

ಈ ಬರಹ ಮತ್ತು ಇದರ ಹಿನ್ನಲೆಯಲ್ಲಿ ಇಲ್ಲಿ ನಡೆದಿರುವ ಎಲ್ಲ ಚರ್ಚೆಗಳು ನನಗೆ ಒಲವಿನ ಆಯಾಮವನ್ನು ತೆರೆದಿಟ್ಟಿದ್ದು ಮಾತ್ರ ಸುಳ್ಳಲ್ಲ.

ಚರ್ಚೆ ಮುಂದುವರೆಯಲಿ...

balasubramanya said...

ಶ್ರೀ ಕೃಷ್ಣ ವೃಂದಾವನ ತ್ಯಜಿಸಿದ ಮೇಲೆ ರಾಧೇ ಅವನ ನೆನಪಿನಲ್ಲಿ ಯಮುನಾ ನಧಿಯಲ್ಲಿ ಮುಳುಗಿ ಜೀವ ತ್ಯಾಗ ಮಾಡುತ್ತಾಳೆ, ಕೃಷ್ಣನ ಸಖಿಯರು ಅವಳ ದೇಹವನ್ನು ಯಮುನಾ ನಧಿಯಿಂದ ಹೊರತೆಗೆಯುತ್ತಾರೆ , ಮುಂದೆ ಅವಳೇ ಸತ್ಯಭಾಮೆಯಾಗಿ ಜನ್ಮ ತಳೆದು ಶ್ರೀ ಕೃಷ್ಣನನ್ನು ವಿವಾಹ ಆಗುತ್ತಾಳೆ . ಎಂದು ಬಹಳ ಜನರ ಅಭಿಪ್ರಾಯ ಇದರ ಬಗ್ಗೆ ಲಿಂಕ್ ಇಲ್ಲಿದೆ ನೋಡಿ, ಕೃಷ್ಣ ವೃಂದಾವನ ತ್ಯಜಿಸಿದ ಮೇಲೆ ರಾಧೇ ಏನಾದಳು ಎಂಬ ಬಗ್ಗೆ ಬಹಳಷ್ಟು ಜನ ಉತ್ತರ ನೀಡಿದ್ದಾರೆ ಇಲ್ಲಿ ನಿನಗೆ ಸರಿ ಅನ್ನಿಸಿದ್ದನ್ನು ಆಯ್ಕೆ ಮಾಡಿಕೊಳ್ಳಿ. ಲಿಂಕ್ ಇಲ್ಲಿದೆ ನೋಡಿ http://www.indiadivine.org/audarya/hare-krishna-forum/445635-radharani-after-krishna-left-mathura.html
ಇದೆ ವಿಚಾರದಲ್ಲಿ ಬಹಳಷ್ಟು ಚರ್ಚೆ ಆಗಿದೆ, ಆಸಕ್ತಿ ಇದ್ದವರು ಅವರಿಗೆ ಒಪ್ಪಿಗೆಯಾದ ಉತ್ತರ ಈ ಲಿಂಕ್ ನಲ್ಲಿ ಓದಿ ತಿಳಿದುಕೊಳ್ಳಬಹುದು.

ಬರೀ ನೆನಪು..... said...

ಅದ್ಭುತವಾದ ಬರವಣಿಗೆ.

ಶ್ರೀಕೃಷ್ಣ ರಾಧೆಯಲ್ಲದೆ ಸಾವಿರಾರು ಮಂದಿಗೆ ತನ್ನ ಪ್ರೀತಿಯ ಸ್ಪರ್ಶ ನೀಡಿದ್ದಾನೆ, ಮತ್ತೆ ಅವನ್ನ ಚಾಣಕ್ಷ ತನದಿಂದ ಅದೆಷ್ಟೋ ಜನಕ್ಕೆ ನರಕದ ಬಾಗಿಲು ತೋರ್ಸಿ ಜ್ಞಾನೋದಯ ಮಾಡಿಸಿದ್ದನೆ.

ತಮಗೆ ಧನ್ಯವಾದಗಳು.

Shripad Gouda said...

Dear prakashanna, nim ee kathegalanna evatte first time odata erodu. so short, so sweet! nim prati pada, salu heart touching! radhege krishnan mele preeti adage, nange nim kategal mele agide anta ansatte!!

PRIYA HEGDE said...

ರಾಧಾಕೃಷ್ಣ ಪ್ರೇಮ ದೇವತೆಗಳು ಇವರು...
ರಾಧೆಯ ಪರಿಪೂರ್ಣ ಸಮರ್ಪಣಾ ಭಾವಕ್ಕೆ ಬದಲಾಗಿ ಕೃಷ್ಣನೂ ಆಕೆಗೆ ಪರಿಪೂರ್ಣವಾಗಿ ಲಭಿಸಿದ್ದ..

ಭಗವಂತನೆಂದರೇ ಹಾಗೆ ನಮ್ಮ ಭಾವಕ್ಕೆ ತಕ್ಕಂತೆ ಸಿಗುವ...
ಸರ್ವಸ್ವವೂ ನಿನ್ನದೆಂದು ಅರ್ಪಿಸಿದರೆ ಆತನೂ ಸರ್ವಸ್ವವನ್ನೇ ನೀಡುವ...
ಇಂತಹ ಸಮರ್ಪಣಾ ಭಾವಕ್ಕೆ ಉತ್ತಮ ಉದಾಹರಣೆ ರಾಧಾಕೃಷ್ಣರು...
ಅವರಿಬ್ಬರೂ ಒಂದೇ...
ತನ್ನದೆಲ್ಲವನ್ನೂ ನೀಡಿ 'ನೀನೇ ಎಲ್ಲವೂ' ಎಂಬ ಭಾವಕ್ಕಿಂತ ಶ್ರೇಷ್ಠ ಭಾವ ಇನ್ನೊಂದಿಲ್ಲ...
ಅಷ್ಟು ಪ್ರೀತಿಸಿದ ರಾಧೆಗೆ ಕೃಷ್ಣ ಮಥುರೆಯನ್ನು ಬಿಟ್ಟು ಹೋಗುವಾಗ ಹೇಗಿರಬೇಡ ಆಕೆಯ ಸ್ಥಿತಿ...
ಕಣ್ಮುಚ್ಚಿದರೂ ಕೃಷ್ಣ...
ಕಣ್ತೆರೆದರೂ ಕೃಷ್ಣ...
ಎಲ್ಲವೂ ಕೃಷ್ಣನೇ ಆಗಿತ್ತು ಆ ರಾಧೆಗೆ...ಮಾಧವಪ್ರಿಯೆಗೆ...

PRIYA HEGDE said...

ಇನ್ನೂ ಬರೆಯಿರಿ ಪ್ರಕಾಶಣ್ಣ....
ನಿಮ್ಮ ಕಲ್ಪನೆ ಅಕ್ಷರಗಳಲ್ಲಿ ಮೂಡಲಿ....

PRIYA HEGDE said...

ಇನ್ನೂ ಬರೆಯಿರಿ ಪ್ರಕಾಶಣ್ಣ....
ನಿಮ್ಮ ಕಲ್ಪನೆ ಅಕ್ಷರಗಳಲ್ಲಿ ಮೂಡಲಿ....