Thursday, April 9, 2009

ಸಂಶಯಾ... ಪ್ರೇಮ..ಕಾವ್ಯದಾ.. ಕಹಿ ಬರಹಾ...!

"ನನ್ನ ಹೆಸರು ವಿನಾಯಕ ಅಂತ. ನಮ್ಮನೆ " ಫಸ್ಟ್ ಫ್ಲೋರ್" ಕಟ್ಟಬೇಕಿತ್ತು..
ನೀವೊಮ್ಮೆ ಬರ್ತೀರಾ..? "

ಅಬ್ಬಾ !... ಈ ಆರ್ಥಿಕ ಹಿಂಜರಿತದ ಸಮಯದಲ್ಲಿ ..
ಒಂದು ಓಯಾಸಿಸ್ ಕಂಡ ಹಾಗಿತ್ತು...


ಇಂಥಹ ಸಮಯದಲ್ಲಿ ಆದ ಸಂತೋಷವನ್ನ,
ಖುಷಿಯ ಭಾವೋದ್ವೇಗವನ್ನ..
ವ್ಯಕ್ತ ಪಡಿಸ ಬಾರದೆಂಬ ಕಿವಿ ಮಾತು ಇದೆ...


"ವಿನಾಯಕರವರೆ ನಿಮ್ಮನೆ ಎಲ್ಲಿದೆ..?"

ಸರ್ಜಾಪುರ್ ರೋಡಿನ ವಿಳಾಸ ಕೊಟ್ಟರು..

ಎಷ್ಟು ದೊಡ್ಡ ಸೈಟಿರ ಬಹುದು.., ಓನರ್ ಹೇಗಿರ ಬಹುದು.. ಎನ್ನುವ ಯೋಚನೆ ಶುರುವಾಯಿತು...

"ಅಯ್ತು ಸರ್ ಬರ್ತೇನೆ.. ಈಗಲೇ ಹೊರಟಿದ್ದೇನೆ..."

ಕೂಡಲೇ ಸತ್ಯನಿಗೆ ಫೋನಾಯಿಸಿದೆ..
" ಹಲೋ .., ಪಾರ್ಟ್ನರ್ ... ಇವತ್ತು ನಾನು ಬರ್ತಾ ಇಲ್ಲಮ್ಮ...
ಅಪರೂಪಕ್ಕೆ ಮನೆ ಕಟ್ಟಿಸುವವರೊಬ್ಬರು ಸಿಕ್ಕಿದ್ದಾರೆ.. ಭೇಟಿಯಗಿ ಬರ್ತೀನಿ.."

"ಎಚ್ಚರಿಕೆಯಪ್ಪ... ಇಂಥಾ ಸಮಯದಲ್ಲಿ ಮನೆ ಕಟ್ಟಿಸ್ತಾನೆ ಅಂದ್ರೆ...
ಭಾರೀ ಬುದ್ಧಿವಂತ ಇರಬೇಕು.... ಹುಶಾರಿ...!
ಇಮೋಶನಲ್ ಆಗ ಬೇಡ ... ವಿಚಾರ ಮಾಡಿ ಮಾತಾಡು..."

ಸತ್ಯನ ಅನುಭವದ , ವಿಚಾರ, ಬುದ್ಧಿ ಶಕ್ತಿಯ ಮುಂದೆ ನಾನು ಮಾತಾಡುವದಿಲ್ಲ...

ಮನಸ್ಸಿಗೆ ಎಷ್ಟು ಖುಷಿಯಾಗಿತ್ತು ಅಂದರೆ..ಟ್ರಾಫಿಕ್ ಕೂಡ ಏನೂ ಅನ್ನಿಸಲೇ ಇಲ್ಲ...

ಎರಡು ತಾಸು ಡ್ರೈವ್ ಮಾಡಿ ಅಡ್ರೆಸ್ ಹುಡುಕಿ ಅವರ ಮನೆ ಮುಂದೆ ಬಂದೆ...
ಎಲ್ಲ ಸರಿಯಾಗಿದೆ...

ಕಾರ್ ನಿಲ್ಲಿಸಿ... ನೋಡಿದೆ...
ಎಲ್ಲವನ್ನೂ ಕಲ್ಲಿನಲ್ಲೇ ಕಟ್ಟಿದ್ದಾರೆ..
ಕಂಪೌಂಡ್ ಕೂಡ..ದೊಡ್ಡ ಶ್ರೀಮಂತನೇ ಇರಬೇಕು...
ಲಗುಬಗೆಯಿಂದ ಬಾಗಿಲ ಬಳಿ ಬಂದು ಬೆಲ್ ಮಾಡಿದೆ...

ಸುಮಾರು ಐವತ್ತು ವರ್ಷದವರೊಬ್ಬರು ಬಾಗಿಲು ತೆರೆದರು..
"ಬನ್ನಿ ನಾನು ವಿನಾಯಕ..."

ನಮಸ್ಕಾರ...." ನಾನು ಒಳಗೆ ಅಡಿಯಿಟ್ಟೆ...

ಅಲ್ಲಿ ನೋಡಿದರೆ ಅದ್ಭುತವಾದ ಮನೆ.. !
ಒಳಾಂಗಣ ವಿನ್ಯಾಸ ಬಹಳ ಸುಂದರವಾಗಿತ್ತು..

ಅವರ ಅಭಿರುಚಿ ..
ಮಾಡಿದ ಖರ್ಚು.. ಎದ್ದು ಕಾಣುತ್ತಿತ್ತು..

ಒಂದು ಬದಿಯಲ್ಲಿ ಮೂರು ಅಡಿಗೂ ದೊಡ್ಡದಾದ ಗಂಡ ಹೆಂಡತಿ ಫೋಟೊ...
ಪಕ್ಕದಲ್ಲಿ ಯುವಕನೊಬ್ಬನ ಫೋಟೊ...ಸಣ್ಣ ಮಗುವಿನ ಫೋಟೊ...

ಅಲ್ಲಿಯೇ ಕಂಪ್ಯೂಟರ್....

"ಬನ್ನಿ ಹೆಗಡೆಯವರೆ..ಅದು ನಮ್ಮ.. ಮೊಮ್ಮಗ ಮತ್ತು ಮಗ ವಿಜಯ್..
ಅಮೆರಿಕಾದಲ್ಲಿದ್ದಾರೆ.....

ನೀವು ನಿಮ್ಮ ವಿಸಿಟಿಂಗ್ ಕಾರ್ಡ್ ಕೊಡುತ್ತೀರಾ..?"

ನಾನು ತಡಕಾಡಿದೆ...
"ಗಾಡಿಯಲ್ಲಿದೆ.. ತರ್ತೀನಿ ಇರಿ..."
ನಾನು ಹೊರಗಿನಿಂದ ತಂದು ..ಕಾರ್ಡ್ ಕೊಟ್ಟೆ...

ಭವ್ಯವಾದ ಮನೆ... ನೋಡಲು ಖುಷಿಯಾಗುತ್ತಿತ್ತು...

ಎಲ್ಲೆಲ್ಲೂ ಅಲಂಕಾರ..!

ನಾನು ಅವರ ಪಕ್ಕದ ಸೋಫಾದಲ್ಲಿ ಕುಳಿತು ಕೊಳ್ಳಲು ಹೋದೆ...

"ಇಲ್ಲಿ ಬೇಡ ಇಲ್ಲಿ ಕುಳಿತು ಕೊಳ್ಳಿ"
ಅಂತ ತಮ್ಮ ಎದುರಿಗೆ ನನ್ನನ್ನು ಒತ್ತಾಯವಾಗಿ ಕುಳ್ಳಿರಿಸಿದರು..

ನನ್ನ ಹಿಂದೆ ಬೆಡ್ ರೂಮು.. ಕಿಚನ್.. ಇತ್ತು...

ನನಗೆ ಅಭಾಸ ಎನಿಸಿದರೂ ಮಹತ್ವ ಕೊಡಲಿಲ್ಲ....

"ಹೆಗಡೆಯವರೆ.. ನಾನು ಇಲ್ಲಿಯವರೆಗೆ ಮೂರು ಗುತ್ತಿಗೆದಾರರ ..
ಎಸ್ಟಿಮೇಶನ್ ತೆಗೆದು ಕೊಂಡಿದ್ದೇನೆ..
ನೀವು ಕೊಟ್ಟರೆ ನಾಲ್ಕನೆಯದು..

ಮತ್ತೆ ಯಾರದ್ದೂ ತೆಗೆದು ಕೊಳ್ಳುವ ವಿಚಾರವಿಲ್ಲ..."

ಉತ್ಸಾಹವೆಲ್ಲ ಟುಸ್ಸ್ ಅಂತ ಇಳಿದು ಹೋಯಿತು...

ಇದೆಲ್ಲ ನಮ್ಮ ವ್ರತ್ತಿಯಲ್ಲಿ ಇದ್ದದ್ದೇ...

"ನನ್ನ ಎಶ್ಟಿಮೇಶನ್ ಬೇಕುತಾನೆ ..? ನನಗೆ ನಿಮ್ಮ ಮನೆಯ ಪ್ಲಾನ್ ಕೊಡಿ..
ಒಂದೆರಡು ದಿನದಲ್ಲಿ ಕೊಡುತ್ತೇನೆ"

"ಅದಕ್ಕೂ ಮೊದಲು ನೀವು ಅವರ ಎಸ್ಟಿಮೇಶನ್ ನೋಡಿ.. ನನಗೆ ಅಭಿಪ್ರಾಯ ಹೇಳಿ"

ಓಹೋ... ಅವರ ಎಸ್ಟಿಮೇಶನ್ ದೋಷ ನನ್ನಿಂದ ಬೇಕು...

" ನಾನು ಬೇರೆಯವರ ಕೆಲಸದ ಬಗೆಗೆ ಏನೂ ಹೇಳುವದಿಲ್ಲ.....
ನಾನು ಏನಾದರೂ ಹೇಳುವದಿದ್ದರೆ
ನನ್ನ ಬಗ್ಗೆ.., ನನ್ನ ಕೆಲಸದ ಬಗ್ಗೆ..
ಬೇರೆಯವರ ಬಗೆಗೆ ನಾನು ಹೇಳುವದು ತಪ್ಪಾಗುತ್ತದೆ.. "

" ನೀವು ಇರಿ .." ಎಂದು ಹಾಲಿನ ಪಕ್ಕದ ರೂಮಿಗೆ ಹೋದರು...

ಮತ್ತೆ ಮನೆಯಲ್ಲವನೂ ಅವಲೋಕಿಸಿದೆ...

ನನಗೆ ಶಾಕ್ ಹೊಡೆದಂತಾಯಿತು...!

ಅವರ ಗಂಡ , ಹೆಂಡತಿ ಜೋಡಿ ಫೋಟೊ ಉಲ್ಟಾ ಇಡಲಾಗಿತ್ತು.....!

ನಾನು ಮೊದಲು ಬಂದು ನೋಡಿದಾಗ ಸರಿಯಾಗಿ ಇತ್ತಲ್ಲಾ...!

ನಾನು ಹೊರಗಡೆ ಹೋದಾಗ ಹೀಗೆ ಇಟ್ಟಿರ ಬಹುದಾ...?

ಮಗನ, ಮೊಮ್ಮಗನ ಫೋಟೊ ಕಾಣುವ ಹಾಗೇ ಸರಿಯಾಗಿ ಇತ್ತು...

ಅಷ್ಟರಲ್ಲಿ ಒಳಗಿನಿಂದ ಬಂದರು..

"ಹೆಗಡೆಯವರೆ.. ನೋಡಿ ಇದು ಒಬ್ಬರ ಎಶ್ಟಿಮೇಶನ್ನು"


ಅದರಲ್ಲಿ ಕೊನೆಯಲ್ಲಿ ಟೊಟಲ್ ಮೊತ್ತವನ್ನು ಅಳಿಸಲಾಗಿತ್ತು...
ಆದರೆ ರೇಟುಗಳು ಹಾಗೆಯೇ ಇತ್ತು..

ಇಪ್ಪತ್ತೈದು ವರ್ಷದ ಅನುಭವ.. ರೇಟು ನೋಡಿ ಟೋಟಲ್ ಮೊತ್ತ ಊಹೆ ಮಾಡಬಲ್ಲೆ..
ನನಗೆ ಮನಸ್ಸಿನಲ್ಲಿಯೇ ನಗು ಬಂತು..

"ಈ... ಎಸ್ಟಿಮೇಶನ್ ಹೇಗೆ..?"

"ಹೀಗೆಲ್ಲ ಹೇಳಲಾಗುವದಿಲ್ಲ..
ಲೆಕ್ಕಾಚಾರ ಮಾಡಿದ ಮೇಲೆ ಹೇಳಬೇಕಾಗುತ್ತದೆ"


"ನೀವು ಸ್ವಲ್ಪ ಇರಿ.." ಮತ್ತೆ ಒಳಗೆ ಹೋದರು...

ಮತ್ತೆ ಇಪ್ಪತ್ತು ನಿಮಿಷ ಬಿಟ್ಟು ಬಂದರು...

"ಇದನ್ನೂ ನೋಡಿ..."

"ನಾನು ನೋಡುವದಷ್ಟೆ... ಏನೂ ಹೇಳುವದಿಲ್ಲ " ಎಂದೆ...

ಅವರೇ ಮತ್ತೆ ಕೇಳಿದರು...
"ನಿಮ್ಮದು ಸ್ವಂತ ಮನೆಯಾ.?.. ಬಾಡಿಗೆ ಮನೆಯಾ.. ?"

"ಸ್ವಂತದ್ದು"

"ಯಾವಾಗ ಕಟ್ಟಿದ್ದು..?"

"ಕಳೆದ ವರ್ಷ"

" ಇಷ್ಟು ವರ್ಷ ಗುತ್ತಿಗೆದಾರರಾಗಿ ಬಾಡಿಗೆ ಮನೆಯಲ್ಲಿದ್ರಾ...?..?"

ಅವರಿಗೆ ಬಹಳ ಆಶ್ಚರ್ಯ..!

ನಾನು ಸುಮ್ಮನಿದ್ದೆ.. ಎದ್ದು ಹೋಗಿ ಬಿಡೋಣ ಎನಿಸುತ್ತಿತ್ತು...

"ಸ್ವಂತ ಮನೆ ... ಹುಂ..... ಲೇ.. ಟೀ.. ಕೊಡ್ತಿಯೇನೆ...?"

ಈಗ ಟೀ ಮಾಡು ಎಂದು ಹೇಳಿದಂತಿತ್ತು.....

ಅರೇ ..! ಮನೆಯಲ್ಲಿ ಇನ್ನೂ ಒಬ್ಬರಿದ್ದಾರಾ..?
ನನಗೆ ಆಶ್ಚರ್ಯವಾಯಿತು..

ಇವರು ಎದ್ದು ಹೋಗಿ..
ನಾನು ಕುಳಿತ ಸೋಫಾದ ಹಿಂದಿನ ಬೇಡ್ ರೂಮಿನ ಚಿಲಕ ತೆಗೆದರು...!


ಹಾಗೆ ನನ್ನೆದುರು ಬಂದು ಕುಳಿತರು...

ಅಷ್ಟರಲ್ಲಿ ಒಂದು ಹೆಣ್ಣಿನ ಆಕ್ರತಿ ಧಡಕ್ಕನೆ..
ಬಾಗಿಲು ತೆಗೆದು ತಟಕ್ಕನೆ ..
ಕಿಚನ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿತು...

ನಾನು ಕತ್ತು ತಿರುಗಿಸಿ ನೋಡುವಷ್ಟರಲ್ಲಿ ನಡೆದು ಹೋಯಿತು...

ವಿನಾಯಕರು ಏನೇನೊ ಮಾತನಾಡುತ್ತಿದ್ದರು...
ನಾನು ಮನಸ್ಸಿಲ್ಲದಿದ್ದರೂ ಕೇಳುತ್ತಿದ್ದೆ...

ಸ್ವಲ್ಪ ಹೊತ್ತಿನಲ್ಲಿ ಕೆಮ್ಮಿದ ಶಬ್ಧ.... ಮೂರು ಸಾರಿ....

ಓಹೊ... ಟೀ... ರೆಡಿ ಆಗಿರ ಬಹುದು ಅಂದು ಕೊಂಡೆ...

ಕಿಚನ್ ಬಾಗಿಲು ಹಾಕಿಯೇ ಇತ್ತು...

ಸ್ವಲ್ಪ ಹೊತ್ತಿನಲ್ಲಿ ಕಿಚನ್ ಬಾಗಿಲು ತಟಕ್ಕನೆ..
ತೆಗೆದು ಬೆಡ್ ರೂಮಿಗೆ ಹೋಗಿ ಬಾಗಿಲು.. ಧಡಕ್ಕನೆ..
ಹಾಕಿ ಕೊಂಡ ಶಬ್ಧ....


ಈಗ ವಿನಾಯಕರಿಗೆ ಗೊತ್ತಯಿತು ಅನಿಸುತ್ತದೆ...

"ಇರಿ... ಟೀ ರೆಡಿಯಾಯಿತು ... ತರ್ತೇನೆ.."

ಟೀ ತಂದರು...

"ನನ್ನ ಮಡದಿಯವರಿಗೆ ನಿನ್ನೆಯಿಂದ ಜ್ವರ...ನಾನೇ ನಿಮಗೆ ಕೊಡ ಬೇಕಾಯಿತು "

ಟೀ ಮಾಡಲಿಕ್ಕೆ ಜ್ವರ ಇಲ್ಲ... ಕೊಡಲಿಕ್ಕೆ ಜ್ವರವಾ...?

ನಾನು ಸುಮ್ಮನೆ ಕುಡಿದೆ...

"ನಾನು ಬರ್ತೀನಿ ವಿನಾಯಕರೆ..
ನಿಮ್ಮ ಮನೆಯಲ್ಲಿ ಹೇಗಿದ್ದರೂ ಇಂಟರ್ ನೆಟ್ ಇದೆ..

ನಿಮ್ಮ ಈಮೇಲ್ ಕೊಡಿ ಎಸ್ಟಿಮೇಶನ್ ಕಳಿಸ್ತೇನೆ".."

"ಅಯ್ಯೋ.. ಈಮೇಲಾ.... ನನಗೆ ಅದೆಲ್ಲ ಅರ್ಥ ಆಗಲ್ಲ...
ಕಂಪ್ಯೂಟರ್ ನನ್ನ ಶ್ರೀಮತಿಯವರಿಗೆ ಮಾತ್ರ ಗೊತ್ತು..
ಅದೆಲ್ಲ ಬೇಡಾರಿ... ನೀವೇ ಬಂದು ಕೊಡಿ..."

ನನಗೆ ಅರ್ಥವಾಯಿತು...

"ಹಾಗೇ ಮಾಡ್ತೇನೆ.."

ಎಂದು ಹೊರಗೆ ಬಂದೆ...ಇವರೂ ಹೊರಗೆ ಬಂದರು ಗೇಟಿನವರೆಗೆ...

"ನೀವು ಹೇಗೆ ಬಂದಿದ್ದೀರಿ...?"

"ಕಾರಿನಲ್ಲಿ"

"ಓಹೊ...! ಈ ಕಾರು ನಿಮ್ಮದಾ...? ಫೋರ್ಡು...!
ಛೇ.... ಈಗ ಊಟದ ಸಮಯ... ಊಟ ಮಾಡಿಕೊಂಡು ಹೋಗ ಬಹುದಿತ್ತು.."

"ಇಲ್ಲ ವಿನಾಯಕರೆ.... ನನಗೆ ತಡ ಆಯಿತು ಬರ್ತೇನೆ... ನಮಸ್ಕಾರ"

ಕಾರು ನೋಡಿದ ಮೇಲೆ ಊಟ ಹಾಕುವ ವಿಚಾರ..!

ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ಹೋರಟೆ....

ನನಗೆ ಮನಸ್ಸೆಲ್ಲ ಬೇಜಾರಾಗಿತ್ತು...

ಅಂದು ನನ್ನ ಮನೆಗೆ ಸ್ನೇಹಿತ ನಾಗು ಊಟಕ್ಕೆ ಬಂದಿದ್ದ....

ನಡೆದದ್ದೆಲ್ಲ ಹೇಳಿದೆ...

ನನ್ನ ಮಡದಿ ಒಳ್ಳೆಯ ಮೂಡಿನಲ್ಲಿದ್ದಳು...

"ರೀ... ನೀವು ಫೋಟೊವನ್ನು...
ನೋಡಿದ ರೀತಿನೇ ಸರಿ ಇಲ್ಲಾವಾಗಿತ್ತೇನೋ..?

ಫೋಟೋವನ್ನೇ.. ಹೀಗೆ ತಿನ್ನುವ ಹಾಗೆ ನೋಡ್ತಾನೆ..
ಇನ್ನು ಎದುರಿಗೆ ಹೆಂಡ್ತಿ ನೋಡಿದ್ರೆ ಹೇಗೆ..?
ಅಂತ ಹೆದರಿರ ಬೇಕು"


"ಇರೊ... ಒಂದು ಹೇಡ್ತೀನಾ ನೋಡಿದ್ರೆ ಸಾಕು..ಮಾರಾಯ್ತಿ...!
ಬೆರೆಯವರೆನ್ನೆಲ್ಲ ಏನು ನೋಡುವದು...?

ಅವರಿಗೂ ಐವತ್ತು ಆಗಿರ ಬಹುದೇನೋ...
ಮಗ., ಮೊಮ್ಮಗ..ಎಲ್ಲ ಇದ್ದಾರೆ..

ಅದು ಹಾಗಲ್ಲ...
ಅವನು ಸಂಶಯ ಪ್ರವರ್ತಿಯವ ಅನ್ನಿಸ್ತದೆ.."


ನಾಗು ಹೇಳಿದ....
" ಇದು ಕಂಪ್ಯೂಟರ್ ಯುಗ..
ಕಂಪ್ಯೂಟರ್ ಗೊತ್ತಿರುವ ಹೆಂಗಸು.
ಮೂವತ್ತು ವರ್ಷದಿಂದ....

ಈ ಮನುಷ್ಯನ...ಸಂಶಯ...
ಈ ಥರಹದ ಮಾನಸಿಕ ಚಿತ್ರ ಹಿಂಸೆ ..

ಹೇಗೆ ತಡೆದು ಕೊಂಡಿರ ಬಹುದು...?
ಸಂಶಯ ಪಡುವದಕ್ಕೂ ಮಿತಿ ಬೇಡವೆ..?"

ನನ್ನಾಕೆಗೆ ಅಷ್ಟು ಸಿಕ್ಕರೆ ಸಾಕಾಗಿತ್ತು...

"ಎಲ್ಲ ಗಂಡಸರೂ ಹಾಗೇನೆ... ಸಂಶಯ ಪಿಷಾಚಿಗಳು..!"

"ಸರ್ಟಿಫಿಕೆಟ್" ಕೊಟ್ಟೇ.. ಬಿಟ್ಟಳು...

"ಈ ಪ್ರಕಾಶನೂ ನಿನ್ನ ಸಂಶಯ ಮಾಡ್ತಾನಾ.?... ."

ನಾಗುವಿಗೆ .. ಕಾಲೆಳೆಯುವದಕ್ಕೆ ಅಷ್ಟು ಸಾಕಾಗಿತ್ತು...


ನನಗೆ ಕೋಪ ಹತ್ತಿತು...

"ಯಾಕೋ .. ನಾಗು ..? ... ನೀನು ಸಂಶಯ ಮಾಡಲ್ವಾ...?"

ಆಶಾ ಮಧ್ಯ ತಡೆದು ಹೇಳಿದಳು...

" ನಾಗುವಿಗೆ ... ವ್ಯವಹಾರದ ಮಧ್ಯೇ ಟೈಮ್ ಎಲ್ಲಿರುತ್ತದೆ...?

ಸಂಶಯ ಮಾಡ್ಲಿಕ್ಕೆ ಪುರುಸೊತ್ತೆಲ್ಲಿದೆ ..?

ಇವತ್ತು ಹೆಂಡ್ತಿ ಯಾವ ಡ್ರೆಸ್ ಹಾಕಿದಾಳೆ ?

ಗೊತ್ತಿದೆಯಾ ಕೇಳಿ..?

ಇಡೀ ದಿವಸ .. ಕೆಲಸ... ಕೆಲಸ !.ಕೆಲಸ !!.. .."

ನಾಗುವಿಗೆ ಸ್ವಲ್ಪ ಕೋಪ ಬಂದಿರ ಬೇಕು..

" ಅದೆಲ್ಲಾ ಬೇಡ.. ಈ ಪ್ರಕಾಶನ ಬಗೆಗೆ ಹೇಳು ...
ಈ... " ಡುಮ್ಮ " ಸಂಶಯ ಮಾಡೋಲ್ವಾ...?"

"ಇವರ ಸಂಶಯ ಸಂಶಯ ಅಲ್ವೋ... ನಾಗು..!

ಅದು ಪೊಸೆಸ್ಸಿವನೆಸ್ಸ್...!

ಅದು ಪ್ರೀತಿ...ಪ್ರೇಮದ..ಬಾಂಧವ್ಯದ ..

ಮಧ್ಯೆ.. ಇರಲೇ .. ಬೇಕಾದದ್ದು.......!

ಆ ಥರಹದ ಸಂಶಯ ಪ್ರತಿ ಹೆಂಗಸರೂ ಬಯಸುತ್ತಾರೆ..!

ತನ್ನ ಗಂಡ ತನ್ನನ್ನು ಸಂಶಯ ಮಾಡ್ತಾನೆ...

ಅಂದ್ರೆ.... ತನ್ನಲ್ಲಿ ಇನ್ನೂ "ಅಂದ ಚಂದ"... ಇದೆ ಅಂತ ಅರ್ಥ...!

ತಾನು ಇನ್ನೂ ಆಕರ್ಷಕವಾಗಿದ್ದಿನಿ ಅಂತ ಕಣೋ...

ಆ ತರಹದ ಸಂಶಯ ಸಣ್ಣದಾಗಿ ಇರಬೇಕು......!

ಹೋಗಿ... ನಿನ್ನ ಹೆಂಡ್ತಿ ಕೇಳು... ಹೇಳ್ತಾಳೆ...!.. "

ನಾಗುವಿಗೆ ಆಶಾ ಉತ್ತರ ಕೇಳಿ ಸುಸ್ತಾಗಿತ್ತು...

"ನೀವು ಹೆಂಗಸರೆಲ್ಲಾ ಒಂದೆ...
ನಿಮಗೆ ನಮ್ಮ ಸ್ವಾತಂತ್ರ್ಯ ಜಾಸ್ತಿ ಆಗಿ ಬಿಟ್ಟಿದೆ..

ನೋಡು ಪ್ರಕಾಶು... ಇವತ್ತೇ ಎಶ್ಟಿ ಮೇಶನ್ ರೆಡಿ ಮಾಡು..
ಕೊಡಲಿಕ್ಕೆ ನಾನೂ ಬರ್ತೀನಿ...
ಆ ಮನುಷ್ಯನನೊಮ್ಮೇ ನೋಡಿ ಬರಬೇಕು...

ಸಾಧ್ಯ ಆದ್ರೆ ಫೋಟೋ ತೆಕ್ಕೊಂಡು ಬರ್ತೇನೆ.."

ಯಾಕೆ..?

" ದೊಡ್ಡದಾಗಿ ಮನೆಯಲ್ಲಿ ಹಾಕಲಿಕ್ಕೆ...
ಮನುಷ್ಯನ ಫೋಟೋ ನೋಡಿದ್ರೆ..
ನಮ್ಮ ಹೆಂಗಸರಿಗೆ ಗೊತ್ತಾಗಲಿ..
ಇಂಥವರೂ ಇರ್ತಾರೆ ... ಅಂತ..
ನಮ್ಮ ಪ್ರೀತಿ ಇವರಿಗೆ ಆಗಾಗ.. ನೆನಪು ಮಾಡಿ ಕೊಡ್ತಾ ಇರಬೇಕು..
ಮನುಷ್ಯನ ಫೋಟೋ ನೋಡಿದ್ರೆ ನಮ್ಮ ಪ್ರೀತಿ ಇವರಿಗೆ ನೆನಪಾಗ್ತಾ ಇರಬೇಕು.."

ಆಶಾಳಿಗೆ ಕೋಪ ಬಂದಿತು.. ನಾಗುವಿಗೆ ತರಾಟೆ ತೆಗೆದು ಕೊಂಡಳು...

" ಜಗತ್ತಿನ ಎಲ್ಲ ಹೆಂಡತಿಯರಿಗೂ..
ಗಂಡನ ಮೇಲೆ ಕಂಪ್ಲೆಂಟ್ ಇದ್ದೆ ಇರ್ತದೆ....!"

ಇನ್ನು ಸುಮ್ನೆ ಇದ್ರೆ ಇಷ್ಟಕ್ಕೆ ನಿಲ್ಲಲ್ಲ ಅಂತ ನಾನು ಹೆದರಿದೆ...

"ನೋಡೇ .. ನಿಮ್ಮಪ್ಪ ಫೋನ್ ಮಾಡಿದ್ರು...!
ನಾಳೆ ನಮ್ಮನೆಗೆ ಬರ್ತಾರಂತೆ..
ಜೊತೆಗೆ ನಿಮ್ಮಮ್ಮನೂ .. ಬರ್ತಾರಂತೆ.. !."


" ನಿಜವೆನ್ರಿ...?..!!.. "


ಎಷ್ಟೇ ಕೋಪವಿರಲಿ... ತವರು ಮನೆಯ ಸೆಳೆತವೆ ಬೇರೆ..!

ತವರು ಮನೆ ಸುದ್ಧಿ ಕೇಳಿದ ..

ಸಂತೋಷ .!! .. ಖುಷಿ..! !...ಸಂಭ್ರಮ..!!

ಧ್ವನಿಯಲ್ಲಿ ಕಾಣ್ತಾ ಇತ್ತು...!!

ಅದು ನನಗೂ ಬೇಕಾಗಿತ್ತು...!


ಕಂಪ್ಯೂಟರ್ ಗೊತ್ತಿರುವ...
ಮನೆಯಲ್ಲಿ ಬೀಗ ಹಾಕಿಸಿ ಕೊಂಡು...
ಜೈಲಿನಲ್ಲಿರುವ...

ಅವರ ವಿದ್ಯಾವಂತ ಮಡದಿಯನ್ನು ಒಮ್ಮೆ ನೋಡುವ ಬಯಕೆ ನನಗೂ ಆಯಿತು....

ಗಂಡ ಹೆಂಡತಿಯ ಮಧುರ ಸಂಬಂಧದಲ್ಲಿ...

ಪ್ರೀತಿ ಪ್ರೇಮದಿಂದ ಬೆಸೆಯುವ ಬಾಂಧವ್ಯದಲ್ಲಿ...

ಈ ಸಂಶಯ ಯಾಕೆ...?

ಎಸ್ಟಿ ಮೆಶನ್ ರೆಡಿ ಆಗ್ತಾ ಇದೆ.....


( ಪ್ರತಿಕ್ರಿಯೆಗಳು ಚೆನ್ನಾಗಿವೆ...
ಅರ್ಥ ಪೂರ್ಣವಾಗಿವೆ... ಓದಿ...)

Monday, April 6, 2009

ಏಲಕ್ಕಿಯ ಉಪ ಬೆಳೆಗಳು....!




ಸಿರ್ಸಿ ಬಸ್ ಸ್ಟಾಂಡ್......

ಅಲ್ಲೊಬ್ಬ ಟೆಂಪೊ ಏಜಂಟ್...

ಯಾವ ಯಾವ ಟೇಂಪೊ ಎಲ್ಲಿಗೆ ಹೋಗುತ್ತದೆ...?
ಎಂದು ಹೇಳುವದು ಅವನ ಕೆಲಸ...


ಅವನ ಬಗೆಗೆ ...
ನಾಗೂವಿಗೂ.., ತೆಂಗಿನ ಕಾಯಿ ಸಿತಾಪತಿಗೂ.., ಉಮಾಪತಿಗೂ ಬೆಟ್...!

ಟೆಂಪೋ ಏಜಂಟ ಬಗೆಗೆ ನಾಗುವಿನ ಚಾಲೇಂಜ್...!

"ನನ್ನ ಕಿವಿಯನ್ನು ಏನೂ ಕೇಳದ ಹಾಗೆ "ಹತ್ತಿ" ಹಾಕಿ...
ಏರ್ ಟೈಟ್ ಮಾಡಿ.., ಬಂದು ಮಾಡಿ...!
ಅವನು ಏನು ಹೇಳುತ್ತಾನೆ ಅನ್ನುವದನ್ನು ನಾನು ಹೇಳುತ್ತೇನೆ...!"

"ನೀನು ಸೋತು ಹೋದರೆ...? !!..."
ಉಮಾಪತಿಗೆ ಸಣ್ಣ ಸಂಶಯ..!


"ನಾನು ಸೋತು ಹೋದರೆ " ಸಾಮ್ರಾಟ್ ಹೊಟೆಲ್" ನಲ್ಲಿ ಪಾರ್ಟಿ..ಕೊಡುತ್ತೇನೆ.."

ಸರಿ ......
ನಾಗುವಿಗೆ ಸಿರ್ಸಿ ಬಸ್ಟ್ಯಾಂಡಿಗೆ ಕರೆದು ಕೊಂಡು ಹೋಗಿ...

ಕಿವಿಗೆ ಹತ್ತಿ ತುಂಬಿ.., ಬ್ಯಾಂಡ್ ಏಡ್ ನ ಪ್ಲಾಸ್ಟರ್ ನಿಂದ.. ಸೀಲ್ ಮಾಡಿ..

ಕಿವಿ ಮುಚ್ಚುವ ಹಾಗೆ ತಲೆಗೊಂದು ಪೇಟ "ಬಿಗಿಯಾಗಿ" ಕಟ್ಟಿದೆವು...

ಟೆಂಪೋ ಏಜಂಟ್ ಬಂದ...

"ಸಿರ್ಸಿ.. ಸಿದ್ದಾಪುರ...! ಸಿರ್ಸಿ ಸಿದ್ದಾಪುರ..!" ಅಂತ ಕೂಗಿದ..

ನಾಗು ಸರಿಯಾಗಿ ಅವನು ಹೇಳಿದ್ದನ್ನೆ ಸರಿಯಾಗಿ ಹೇಳಿದ...!

ನಮಗೆಲ್ಲ ಆಶ್ಚರ್ಯ...!

ಮತ್ತೆ ಬಂದ ಟೆಂಪೋದವ

"ಸಿರ್ಸಿ... ಭಟ್ಕಳ್... ಸಿರ್ಸಿ ಭಟ್ಕಳ್.."

ಅಂತ ಕೂಗಿದ ನಾಗು ಮತ್ತೆ ಸರಿಯಾಗಿ ಹೇಳಿದ...!

ನಾವೆಲ್ಲ ಆಶ್ಚರ್ಯದಿಂದ ಮೂಕರಾಗಿ ಬಿಟ್ಟೇವು..!!

" ಇದು ಹೇಗೆ ನಾಗು... ಹೇಳೊ..ಪ್ಲೀಸ್.."
ಎಂದು ಗೋಗರೆದೆವು...

ಆಗ ಮತ್ತೆ ಬಂದ ಟೆಂಪೊದವ...

" ಸಿರ್ಸಿ ಕುಮುಟಾ... ಸಿರ್ಸಿ ಕುಮುಟಾ..
ಕುಮುಟಾ ಹೋಗುವವರಿಗೆ ಟೆಂಪೋ ರೆಡಿ ಇದೆ...."


ನಾಗು ಹೇಳಿದ " ನೋಡ್ರೊ.. ಅವನು ಎಲ್ಲಿ ಕೆರೆದುಕೊಳ್ಳುತ್ತಿದ್ದಾನೆ...?"

"ಹೊಟ್ಟೆಯ ಮೇಲೆ..!"

" ಅವನು ಒಂದೊಂದು ಊರಿಗೆ ಒಂದೊಂದು ಕಡೆ ತುರಿಸಿಕೊಳ್ಳುತ್ತಾನೆ..!

ಕುಮುಟಾದಲ್ಲಿ ಸೆಖೆ ಅಲ್ಲವಾ..! ಹೊಟ್ಟೆ ತುರಿಸಿಕೊಳ್ಳುತ್ತಿದ್ದಾನೆ....!"

ನಾಗು ನಗುತ್ತಿದ್ದ...


ಟೆಂಪೋದವ ಮತ್ತೆ ಕೂಗಿದ...

" ಸಿರ್ಸಿ ಗೋಕರ್ಣ... ಸಿರ್ಸಿ ಗೋಕರ್ಣ....!"

ಈಗ ಆತ ತೊಡೆ ತುರುಸಿಕೊಳ್ಳುತ್ತಿದ್ದ...!

ಗೋಕರ್ಣದಲ್ಲಿ ಮತ್ತೂ ಸೆಖೆನಾ....?

ಅದು ನಿಜ ಆತ ಒಂದೊಂದು ಊರಿಗೆ...

ಒಂದೊಂದು ಕಡೆ ತುರಿಸಿ.., ಕೆರೆದು ಕೊಳ್ಳುತ್ತಿದ್ದ...!


ಕೆಲವು ಅಭ್ಯಾಸಗಳೇ ಹಾಗೆ.....! ಬಿಡಲಾಗುವದಿಲ್ಲ...!

ಇವೆಲ್ಲ ಏಲಕ್ಕಿ ಉಪ ಬೆಳೆಗಳು...!

ತೋಟದಲ್ಲಿ ಏಲಕ್ಕಿ ಪ್ರಮುಖ ಬೆಳೆಯಾದರೆ...
ಕೆಲವು ಉಪ ಬೆಳೆಗಳೂ ಇರತ್ತವೆ...!






ನಮಗೆ ಗೊತ್ತಿಲ್ಲದಂತೆ...
ನಮ್ಮ
ಕೈಗಳು ಎಲ್ಲೆಲ್ಲೊ ಓಡಾಡುತ್ತಿರುತ್ತವೆ...
!!



ಕೆರೆದರೂ.... ಸಾಲದೇ...!

.. ತುರಿಕೆಯೇ......!

(" ಕರೆದರೂ... ಕೇಳದೆ .." ... ಧಾಟಿಯಲ್ಲಿ
)







ತುರಿಕೆಯಲ್ಲಿ.. ಇರೋ ...ಸುಖ ...

ಗೊತ್ತೇ
ಇರಲಿಲ್ಲಾ...!

ಹ್ಹುಂ .. ಅಂತೀಯಾ...?...

ಉಹೂಂ.. ಅಂತೀಯಾ...?


(ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ... ಧಾಟಿಯಲ್ಲಿ ಹಾಡಿಕೊಳ್ಳಿ..!)




ಪ್ರತಿಯೊಬ್ಬರೂ ಏನಾದರು "ಉಪ ಬೆಳೆ " ಬೆಳೆದೇ ಬೆಳೆಯುತ್ತಾರೆ....

ಗಮನವಿರುವದಿಲ್ಲ ಅಷ್ಟೆ....!

ಬೆಳೆಗಳಿಗೆ ಹೆಸರಿಡಲು ನನ್ನಿಂದ ಆಗಲಿಲ್ಲ...!

ಇದನ್ನು ಬೆಳೆ ಅನ್ನುವದಕ್ಕಿಂತ ...

ಬೆಳೆಯ ಸಂಗಡ ಬೆಳೆಯುವ ..."ಕಳೆ"

ಅಂದರೆ ಸರಿಯಾಗಬಹುದೇನೋ....!

ಕೆಟ್ಟ ಕಳೆಗಳನ್ನು ತೆಗೆದು ಹಾಕ ಬಹುದಲ್ಲವೇ...?...?


ಪ್ರಿಯ ಓದುಗರೇ...
ಲೇಖನ ಬರೆಯುವ ಭರದಲ್ಲಿ ...ಅವುಗಳಿಂದ ಕೆಲವರ ಮನಸ್ಸಿಗೆ ನೋವಾಗಿದ್ದಲ್ಲಿ.. ಬೇಸರ ಪಟ್ಟುಕೊಳ್ಳ ಬೇಡಿ..
ನನ್ನ ಉದ್ದೇಶ ಯಾರಿಗೂ ನೋವು ಕೊಡುವದಲ್ಲ...


Tuesday, March 31, 2009

" ಈ.... ಜಗತ್ತು ಸುಧಾರಣೆ ಆದರೂ .. ನೀವು.. ಮಾತ್ರ ಆಗಲ್ಲಾ..!!



ಬೆಂಗಳೂರಿನಲ್ಲಿ ನೌಕರಿ ಸಿಕ್ಕಿತ್ತು..
ಹೇಳಲಿಕ್ಕೆ "ಅಸಿಸ್ಟಂಟ್ ಇಂಜನೀಯರ್" ಹುದ್ದೆ..

ಹಗಲಿರುಳು ಕೆಲಸ..!
ಸಂಬಳ "ಏಳುನೂರು ಐವತ್ತು ".....!


ವಿಧ್ಯಾರ್ಥಿ ಜೀವನದಲ್ಲಿ ಸಹಾಯ ಮಾಡಿದವರಿಗೂ...
"ಮಾಡಿದ್ದು ವ್ಯರ್ಥವಾಗಲಿಲ್ಲವಲ್ಲ...
ಈ ಪ್ರಕಾಶ ... ಜೀವನದಲ್ಲಿ "ಸೆಟಲ್" ಆದನಲ್ಲ.."
ಎನ್ನುವ ಭಾವನೆ...


ನನ್ನ ಜೀವನದ ಕಷ್ಟದಲ್ಲಿ, ಸುಖದಲ್ಲಿ, ಬಂಡೆಗಲ್ಲಿನಂತೆ ಇದ್ದ ನನ್ನ ಬಾವ...

ನನ್ನನ್ನು ನೋಡಿ ಬರಲು ಬೆಂಗಳೂರಿಗೆ ಬಂದೇ ಬಿಟ್ಟರು...!

ಸಣ್ಣ ವಯಸ್ಸು.., ಕೈಗೆ ಸಂಬಳ ಸಿಗ್ತಾ ಇದೆ....
ಹುಡುಗ ಚಟಕ್ಕೆ ಬಿದ್ದು ಹಾಳಾದರೆ..?
ಎನ್ನುವ ಕಾರಣವೂ ಇದ್ದೀತು....

ನಾನು ಸಂಭ್ರಮದಿಂದ ಮೆಜೆಷ್ಟಿಕ್ ಹೋಗಿ..
ಕರೆದು ಕೊಂಡು ಬಂದೆ...

ನಮ್ಮ ರೂಮ್ ನೋಡಿ ಬಾವನಿಗೂ ಖುಷಿಯಾಯ್ತು...

ರೂಮಿನಲ್ಲಿ ನಾನು ಮತ್ತು ಸ್ನೇಹಿತ "ಪುಟ್ಟಸ್ವಾಮಿ" ಇದ್ದೆವು...

" ಬಾವ .. ನೀನು ರೂಮಿನಲ್ಲೇ ಇರು..
ಬೇಸರವಾದರೆ ಇಲ್ಲೇ ಹತ್ತಿರ ಅಡ್ಡಾಡಿ ಬಾ...
ನಾನು ಸಾಯಂಕಾಲ ಐದು ಗಂಟೆಗೆ ಬರ್ತೇನೆ.. "

ಎಂದು ಹೇಳಿ ನಾನು ಹೊರಟೆ...

ಬಾವ ರೂಮಿನಲ್ಲೇ ಉಳಿದರು...

ನಾನು ನನ್ನ ಸೀನಿಯರ್ ಇಂಜನೀಯರ ಬಳಿ ಅನುಮತಿ ಪಡೆದು..
ಮಧ್ಯಾಹ್ನವೇ ಮನೆಗೆ ಬಂದು ಬಿಟ್ಟೆ...


ಬಾಗಿಲು ತೆಗೆದರು ಬಾವ...

ಮುಖನೋಡಿದೆ...

ಕೆಂಡಾಮಂಡಲ.. ಕೋಪ ಬಂದಿದೆ...!

ಕಣ್ಣೆಲ್ಲ ಕೆಂಪಾಗಿ ಧುಮು ಧುಮು ಗುಡುತ್ತಿದ್ದರು...!

ನನ್ನನ್ನು ಕಂಡವರೇ... ಜೋರು ಮಾಡಿ.. ಹೇಳಿದರು...

"ಜಗತ್ತು ಸುಧಾರಣೆ ಆದರೂ ..
ನೀವು ಮಾತ್ರ ಸುಧಾರಣೆ ಆಗಲ್ಲ ಬಿಡಿ..."


..ಅಯ್ಯೋ ದೇವರೇ ..!

ಪುಟ್ಟಸ್ವಾಮಿಯ "ವಿಸ್ಕಿ, ಬಿಯರ್ ಬಾಟಲ್. " ನೋಡಿ ಬಿಟ್ಟರಾ..?

ನನಗೋ.. ಹೆದರಿಕೆ... !
ಸಣ್ಣ ಧ್ವನಿಯಲ್ಲೇ ಕೇಳಿದೆ...

" ಏನಾಯ್ತು.. ಬಾವ..?"

" ಅಲ್ಲಾ... ಇದೆಂಥಾ ಪತ್ರನೋ...?"

".. ಯಾವದು..? "....

" ಇದೇ...! ಇದು.... !" ಅಂತ ಅಣ್ಣ ಬರೆದ ಪತ್ರ ತೋರಿಸಿದರು..

" ಇದು ಅಣ್ಣ ಬರೆದದ್ದು..ಮೊನ್ನೆ ಬಂದಿದೆ.."

" ಅದು ನನಗೂ ಗೊತ್ತಾಗ್ತಾ ಇದೆ...
ಏನು ಬರೆದಿದ್ದಾನೆ..ನೋಡು ತಲೆ ಹರಟೆ..?,.."


ಮೊನ್ನೆಯೇ ಓದಿದ್ದರೂ ಮತ್ತೊಮ್ಮೆ ಓದಿದೆ...
ಬಹಳ ಸಣ್ಣ ಪತ್ರ...


" ಪ್ರಕಾಶು..

ನಾವೆಲ್ಲಾ ಆರಾಮು... ನೀನು ಕ್ಷೇಮನಾ..?

ಇಲ್ಲಿ ಮತ್ತೇನೂ ವಿಶೇಷವಿಲ್ಲ...

ಹಾಂ.. ನೆನಪಾಯಿತು..!

ನಮ್ಮೂರ ತಮ್ಮಣ್ಣನ ಹೆಂಡತಿಗೆ ಹಾವು ಕಚ್ಚಿತ್ತು...
ಡಾಕ್ಟರ್ ಬಂದಿದ್ರು.. ಹೆದರಿಕೆ ಏನೂ ಇಲ್ಲ...
ಎಲ್ಲಾ ಸರಿ ಆಗುತ್ತದೆ...
ಐದು ತಿಂಗಳು ಬೇಕು ಅಂದರು..."

ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಇರಲಿ..

ಆಯಿ ಚೆನ್ನಾಗಿದ್ದಾಳೆ.."

ನಾನು "ಇದರಲ್ಲಿ ಕೋಪ ಬರುವಂಥದ್ದು ಏನಿದೆ..?"...
ತಲೆ ಕೆರೆದು ಕೊಂಡೆ...


ಮತ್ತೊಮ್ಮೆ ಓದಿದರೂ ಅಂಥಹ ವಿಷಯ ಕಾಣಲಿಲ್ಲ...

"ಅಲ್ಲಾ... ನೀವೆಲ್ಲಾ ಯಾವಾಗ ಸುಧಾರಣೇ ಆಗ್ತೀರಪ್ಪಾ..?"

ಮತ್ತೆ ಕೋಪ ತಡೇಯಲಾಗದೆ ಅಬ್ಬರಿಸಿದರು ಬಾವ...

"ಏನಾಯಿತು ಬಾವ.. ?
ಅಂತಹ ವಿಷಯ ಇದರಲ್ಲಿ ಏನಿದೆ..?.. "


ಬಾವನಿಗೆ ಕೋಪ , ಅಸಮಧಾನ.. ಜಾಸ್ತಿಯಾಗತೊಡಗಿತು...

" ಈ ಪತ್ರ ಓದಿಕೊಂಡು...
ಆ..ತಮ್ಮಣ್ಣನ ಅಪ್ಪನಿಗೆ ಫೋನ್ ಮಾಡಿದೆ..!!..."


ತಮ್ಮಣ್ಣನ ತಂದೆ ಊರಲ್ಲಿ ಪ್ರತಿಷ್ಠಿತ ವ್ಯಕ್ತಿ..ಹಿರಿಯರು..!

ಇಡೀ ಊರೇ ಗೌರವ ಕೊಡುತ್ತದೆ...!

ಬಾವನಿಗೂ ಅವರಿಗೂ ಗೌರವದ ಸಂಬಂಧವಿದೆ...!

ನಮ್ಮ ಬಾವನೂ ಸುತ್ತಮುತ್ತಲಿನ ಊರುಗಳಲ್ಲಿ ಗೌರವದ ವ್ಯಕ್ತಿ..!

"ಬ್ಯಾಂಕಿನ ಮ್ಯಾನೇಜರ್"...


ಎಲ್ಲರಿಗೂ ನನ್ನ ಬಾವನೆಂದರೆ ಆದರ.. ಗೌರವ..

ನನಗೆ ಅರ್ಥವಾಗ ಹತ್ತಿತು.. ..

" ಅಣ್ಣ... ಹೀಗೆ "ತಮಾಷೆಗೆ " ಬರೆದದ್ದು....
ನೀವು ಫೋನ್ ಯಾಕೆ ಮಾಡ್ಲಿಕ್ಕೆ ಹೋದ್ರಿ ಬಾವಾ..?..."


" ತಮ್ಮಣ್ಣನ ಮನೆಯವರು ನಮಗೆಲ್ಲ ಆಪ್ತರು...
ಟೆನ್ಷನ್ ಆಗಲ್ವೇನೋ..? ಅದಕ್ಕೇ ಫೋನ್ ಮಾಡಿದೆ.."

"ಆಮೇಲೆ..?"

" ಆಮೇಲೆ ಏನು ? ಮಣ್ಣು ಬದನೆಕಾಯಿ..!..! "

ಬಾವ ನಶೀಕಾಂತ ನಡುಗುತ್ತಿದ್ದರು.. ಕೋಪದಿಂದ...

" .." ಹಾವು" ಕಚ್ಚಿದೆಯಂತಲ್ಲಾ...?
ಯಾವ
" ಹಾವು" ..? ಹೇಗಿತ್ತು..?
ಯಾವಾಗ..?
"ವಿಷ" ತುಂಬಾ ಏರಿಬಿಟ್ಟಿದೆಯಾ..? ಅಂತೆಲ್ಲಾ ಕೇಳಿದೆ..!!..."

ನನಗೆ ಏನು ಹೇಳ ಬೇಕೆಂದು ತೋಚಲಿಲ್ಲ...
ಏನೂ ಹೇಳಲಾಗದೆ ಚಡಪಡಿಸಿದೆ...

ಬಾವ ಮತ್ತೆ ಶುರು ಹಚ್ಚಿಕೊಂಡರು...

"ಅವರು ಹೇಳಿದರು " ಇಲ್ಲಿ ಯಾರಿಗೂ ಹಾವು ಕಚ್ಚಿಲ್ಲ.. ..!

ನಿಮಗೆ ತಪ್ಪು ಮಾಹಿತಿ ಆಗಿದೆ... " ಮ್ಯಾನೆಜರ್ರೆ..."..!!

ನಮ್ಮೂರಲ್ಲಿ ಯಾರಿಗೂ ಹಾವು ಕಚ್ಚಿಲ್ಲಾ"... ಎಂದರು.."


ನಾನು ಸುಮ್ಮನಿದ್ದೆ..ಬಾವನೇ ಮುಂದುವರೆಸಿದರು...


"ಅಲ್ಲಾ... ನೋಡಿ...ಇವರೆ...
ನಾನು ಬೆಂಗಳೂರಲ್ಲಿದ್ದೇನೆ "ಪ್ರಕಾಶನ ಮನೆಯಲ್ಲಿ"
ನಾಗೇಶ ಊರಿಂದ ಪತ್ರ ಬರೆದಿದ್ದಾನೆ....
ನಿಮ್ಮ ಸೊಸೆಗೆ ಹಾವು ಕಚ್ಚಿದೆಯಂತೆ.. !!
ಹೇಗಿದ್ದಾಳೆ ಈಗ..? ..!!..."..


ಈಗ ನಾನು ಕೇಳ ಬಾರದ ಪ್ರಶ್ನೆ ಕೇಳಿದೆ......

" ಬಾವಾ... ಅವರು.. ಏನಂದರು..?"

ಬಾವನಿಗೆ ಮತ್ತೂ ಕೋಪ ಜಾಸ್ತಿಯಾಯಿತು..
ಸಿಟ್ಟು ತಡೆಯಲಾರದೆ ಕೂಗತೊಡಗಿದರು....

ಜಮದಗ್ನಿ ಅವತಾರ...!

"ನೀವು ಅಣ್ಣ , ತಮ್ಮ ಇಬ್ರೂ ಸೇರಿ ..
ನನ್ನ ಗೌರವ ಎಲ್ಲ ಮಣ್ಣುಪಾಲು ಮಾಡಿಬಿಡ್ತೀರಿ..!!...

ನೀನೋ.. !.. ಅಣ್ಣನೋ... !!
ಏನು ಭಾಷೇನೋ ನಿಮ್ಮದು...?

ಅಲ್ಲಾ... . ಯಾವಾಗಾ ನೀವೆಲ್ಲ ಸುಧಾರಣೆ ಆಗೋದು..?

ಅವರ ಸೊಸೆ "ಬಸಿರಾಗಿದ್ದಾಳಂತೆ" ..!!

ಅದನ್ನ ಯಾವರೀತಿ ಬರೆಯೋದು...?

ಹಾವು ಕಚ್ಚಿದೆ ಅಂತಾನಾ..?

ಕನ್ನಡ ಕೊಲೆ ಮಾಡಿ ಬಿಡ್ತೀರಿ ನೀವುಗಳು...!
ಅಹಾ..! ಏನು ಕನ್ನಡಾನೋ ನಿಮ್ಮದು...?

ಏನು ಉಪಮೆ...!!..?... ಏನು ಛಂದಸ್ಸು..?
ಯಾವುದಕ್ಕೆ ಏನು ಹೋಲಿಕೆ...?


ಅಹಹಾ...!! ಜನ್ಮ ಸಾರ್ಥಕವಾಯಿತು...!
ನಿಮ್ಮ ಭಾಷೆ ಕೇಳಿ...!
..ಛೇ.."

"ಅಲ್ಲಾ.. ಬಾವ...
ನೀವ್ಯಾಕೆ... ಅಣ್ಣನ ಪತ್ರ ಓದಲಿಕ್ಕೆ ಹೋದ್ರಿ..?

ಫೋನ್ ಮಾಡೊಕ್ಕಿಂತ ಮೊದ್ಲು ..
ನಂಗೊಂದು ಮಾತು ಕೇಳ್ಬಾರದಿತ್ತಾ..?... "


" ನೀನು ಮಾತಾಡ ಬೇಡ...! ಸುಮ್ನಿರು..!

ನಿಮ್ಮ ಎಡವಟ್ಟು ಕೆಲಸದಿಂದ ನಾನು ಹೇಗೆ ಮುಖ ತೋರಿಸ್ಲೋ..?

ಅವರ ವಯಸ್ಸೇನು..? ನನ್ನ ವಯಸ್ಸೇನು.?.

ನನ್ನ ಮರ್ಯಾದಿ ಎಲ್ಲ ತೊಳೆದು ..
ಸರ್ವ ನಾಶ ಮಾಡಿ ಬಿಟ್ರಿ...!..."


ಬಹಳ ಪೇಚಾಡಿಕೊಂಡರು ನನ್ನ ಬಾವ.....

ಐದು ತಿಂಗಳ ನಂತರ ಅಣ್ಣನ ಪತ್ರ ಮತ್ತೆ ಬಂತು..!

"ಪ್ರಕಾಶು...

ನಾವೆಲ್ಲ ಆರಾಮು..

ತಮ್ಮಣ್ಣನಿಗೆ.. "ಗಂಡು ಕರು"..!

"ತಾಯಿ ಮತ್ತು ಕರು" ಚೆನ್ನಾಗಿದ್ದಾರೆ...!.."


ಅಂದಿನಿಂದ....

ಅಣ್ಣನ ಪತ್ರ ಯಾರಿಗೂ ಸಿಗದ ಹಾಗೆ ಇಡ್ತಾ ಇದ್ದೇನೆ...

Friday, March 27, 2009

ಯುಗಾದಿ ಹಬ್ಬದ ಶುಭಾಶಯಗಳು.....!

ಈ ಮರ ನಮ್ಮೂರ ಬೆಟ್ಟದಲ್ಲಿದೆ...
ನಾನು ಚಿಕ್ಕವನಿದ್ದಾಗಲಿಂದಲೂ ನೋಡುತ್ತಿದ್ದೇನೆ....

ಇದು ಒಂದು ಸೋಜಿಗ......! ವಿಸ್ಮಯ....!

ಪ್ರತಿ ವರ್ಷ ಮಳೆಗಾಲದಲ್ಲಿ ಇದರ ರೆಂಭೆಗಳನ್ನು ಕಡಿಯುತ್ತಾರೆ..
ಛಲ ಬಿಡದೆ ಇದು ಚಿಗುರುತ್ತಿತ್ತು..!

ಮತ್ತೆ .. ಮತ್ತೆ ಚಿಗುರುತ್ತಲಿದೆ.....!

ವಸಂತಾಗಮನಕ್ಕೆ....
ಹಳೆ ಎಲೆಗಳೆಲ್ಲ್ಲ ಉದುರಿ..
ಹೊಸ ಚಿಗುರೆಲೆಗಳೊಂದಿಗೆ...

ಅದೂ.......

ಹ್ರದಯಾಕಾರದಲ್ಲಿ...!!

ಪ್ರೀತಿ.. ಪ್ರೇಮದ ಸಂಕೇತವಾಗಿ....

ಈ ಪ್ರಕ್ರತಿಯೇ ನಮಗೆ ಶುಭ ಕೋರುತ್ತಿದೆ...!

ನಿಮಗೆಲ್ಲರಿಗೂ "ಉಗಾದಿ ಹಬ್ಬದ " ಶುಭಾಶಯಗಳು.....

ನಿಮ್ಮೆಲ್ಲ ಆಸೆ ಕನಸುಗಳು ಈಡೇರಲಿ...
ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ....



Tuesday, March 24, 2009

ನನ್ನಾಕೆಯ ಗುದ್ದು... ಮತ್ತು ಪ್ರೀತಿ..!

ನಡೆದದ್ದು ಇಷ್ಟು...

ಬಹುದಿನಗಳಿಂದ ನಮ್ಮ ಪರಿಚಯದವರೊಬ್ಬರು ಮನೆಗೆ ಬರುತ್ತೇನೆಂದು ಹೇಳಿದ್ದರು.

ನಾನು ಆಯಿತೆಂದು ಹೇಳಿದ್ದೆ..
ನನ್ನ ಗ್ರಹಚಾರಕ್ಕೆ ...
ಇಂದು ಬಂದೇ ಬಿಟ್ಟಿದ್ದರು....!!

ನನ್ನಾಕೆಗೆ ಹೇಳಲು ಮರೆತು ಹೋಗಿತ್ತು....!

ನನ್ನಾಕೆ ಗಡಿಬಿಡಿ ಬಿದ್ದು ..
ಸ್ವೀಟು , ಊಟ ಬಡಿಸಿ,
ನಗು ನಗುತ್ತ ಉಪಚಾರದ ಮಾತು ಹೇಳಿ ಕಳಿಸಿದಳು...


ನಂತರ ಶುರುವಾದದ್ದು...
ಗುಡುಗು ಸಿಡಿಲು...ಆಗಾಗ ಮಿಂಚು....!

ಇದಕ್ಕೆಲ್ಲಾ ಮಳೆ ಬರುವದಿಲ್ಲ ಬಿಡಿ..

"ಅವರು ಮೊದಲೇ ನಮ್ಮನ್ನು ನೋಡಿ ನಗುವವರು,
ನಾವು ಬಾಡಿಗೆ ಮನೆಯಲ್ಲಿದ್ದಾಗ ನಮ್ಮನ್ನು ಮಾತಾಡಿಸುತ್ತಲೂ ಇರಲಿಲ್ಲ..
ಈಗ ನಿಮ್ಮ ಕಾರು, ಮನೆ ನೋಡಿ ಮನೆಗೆ ಬಂದಿದ್ದಾರೆ..
ಅವರು ಬಂದಾಗ ಮನೆ ಕ್ಲೀನ್ ಇರಬೇಕಿತ್ತು..
ಅಡಿಗೆ ಮನಗೆ ಬಂದು ಕೆಲಸ ಮಾಡಿ ನೋಡಿ ಗೊತ್ತಾಗುತ್ತದೆ..
ಎಷ್ಟು ಕಷ್ಟ ಅಂತ...!!


ನೀವು ಮೊದಲೇ ಯಾಕೆ ಹೇಳಲಿಲ್ಲ..? "


ನನ್ನಾಕೆ ಹೇಳುವದು ಸರಿ ಇತ್ತು..

"ಸಾರಿ ಕಣೆ ಚಿನ್ನಾ..
ಮರೆತು ಹೋಯಿತು .. ನನ್ನ ರಾಜ..!"


" ನಿಮಗೆ ನಿಮ್ಮ ಕೆಲಸ..
ಬ್ಲಾಗು ಬಿಟ್ರೆ ಏನು ನೆನಪಿರುತ್ತದೆ..?
ನಿಮಗೆ ನನ್ನ ಬೆಲೆ ಗೊತ್ತಿಲ್ಲ,
ನೀಮಗೂ , ನಿಮ್ಮ ಪುತ್ರ ರತ್ನನಿಗೂ ...
ನಾನು ಹಾಸ್ಯವಾಗಿ ಹೋಗಿದ್ದೇನೆ,

ನಿಮಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ..!.
ನೀವು ನನ್ನನ್ನು ಮೊದಲಿನ ಹಾಗೆ ಪ್ರಿತಿಸುತ್ತಿಲ್ಲ...!.. "


ಹಳೆಯ ಎಲ್ಲ ಘಟನೆ ಎಲ್ಲ ತೆಗೆದು, ಝಾಡಿಸ ತೊಡಗಿದಳು..
ಸಮರ್ಥನೆಗೆ ಪುರಾವೆಗಳೂ ಬರತೊಡಗಿದವು...

ಮಂಗಳಾರತಿ, ಮಂತ್ರಾಕ್ಷತೆ ಸಿಗತೊಡಗಿತು...

ಎಲ್ಲದರಲ್ಲೂ ನಾನು ಅಪರಾಧಿಯೇ...ನನ್ನ ತಪ್ಪಿತ್ತು.... !

ಅಷ್ಟರಲ್ಲಿ...ಬಾಗಿಲು ಬಡಿದ ಸದ್ದು.
ನಾನು ಎದ್ದು ಬಾಗಿಲು ತೆಗೆದು ನೋಡಿದೆ...

ಭರತ್, ಅರುಣ ನಿಂತಿದ್ದರು...
ನಮ್ಮ ಅಪಾರ್ಟಮೆಂಟಿನ ಕೆಳಗಡೆ ಇದ್ದವರು...
ಅವರ ತಂದೆಯವರನ್ನು "ಹಾರ್ಟ್ ಎಟಾಕ್ " ಆಗಿ ಆಸ್ಪತ್ರೆಗೆ ಸೇರಿಸಿದ್ದರು...

ಭರತನ ಕಣ್ಣುಗಳು ಕೆಂಪಗಾಗಿದ್ದವು..

ಅರುಣನ ಕಣ್ಣು ತುಂಬ ನೀರಿತ್ತು ..

ಅವನ ಸಂಕಟ , ವೇದನೆ ಹತಿಕ್ಕಲ್ಲಾರದೆ ಹನಿಹನಿಯಾಗಿ ಬೀಳುತ್ತಿದ್ದವು..
ಎಷ್ಟೆಂದರು ಸಣ್ಣವಯಸ್ಸಲ್ಲವೆ..?

"ಪ್ರಕಾಶಣ್ಣ .. ಅಪ್ಪನ ಬೀಪಿ ಕಡಿಮೆಯಾಗುತ್ತಿದೆಯಂತೆ...
ಆಸ್ಪತ್ರೆಯಿಂದ ಅಮ್ಮನ ಫೋನ್ ಬಂದಿತ್ತು.."

ನನಗೆ ನಿಧಾನವಾಗಿ ವಿಷಯ ಅರ್ಥ ಆಗತೊಡಗಿತು...

ಹೌದಾ..? ಮಧ್ಯಾಹ್ನದವರೆಗೂ ಆರಾಮಿದ್ದರಲ್ಲ...?
ಬನ್ನಿ... ಒಳಗೆ ಬನ್ನಿ.."

" ಇಲ್ಲ ಪ್ರಕಾಶಣ್ಣ...
ವರದಳ್ಳಿ ತೀರ್ಥ ಇದೆಯಾ..?

ಅಮ್ಮ ತರಲಿಕ್ಕೆ ಹೇಳಿದ್ದಾರೆ..."

ನಂಬುಗೆ, ವಿಶ್ವಾಸ ಯಾವಾಗಲೂ ಇರಬೇಕು...
ಪುಣ್ಯ ತೀರ್ಥವನ್ನು ಹಾಕಿದರೆ ವಾಸಿಯಾಗ ಬಹುದೇನೋ..

ಆ ತಾಯಿಯ ಆಸೆ....!
ಹೇಗಾದರೂ ಬದುಕಿಬಿಡಲಿ...ಅನ್ನುವದು..!


ಆಸೆ, ಕನಸುಗಳು ಇದ್ದರೆ.. ಬದುಕು...!

ನನ್ನಾಕೆ ಲಗುಬಗೆಯಿಂದ ದೇವರ ಮನೆಗೆ ಹೋಗಿ ತೀರ್ಥದ ಬಾಟಲಿ ತಂದು ಕೊಟ್ಟಳು..

"ಪ್ರಕಾಶಣ್ಣ ನಾವು ಬರ್ತೇವೆ... ಏನಾಯಿತು ಅಂತ ಫೋನ್ ಮಾಡ್ತೇವೆ.."

" ಈಗ ನೀವು ಡ್ರೈವ್ ಮಾಡಿ ಹೋಗುವದು ಬೇಡ .. ನಾನು ಬರ್ತೇನೆ.."

ಮನಸ್ಸು ಬೇಜಾರಿನಲ್ಲಿರುವಾಗ ಡ್ರೈವಿಂಗ್ ಮಾಡುವದು ಕಷ್ಟ.....

"ಇಲ್ಲ ಪ್ರಕಾಶಣ್ಣ ನಾವು ಬರ್ತೇವೆ...
ಏನಾದರೂ ಸಹಾಯ ಬೇಕಿದ್ದರೆ ಕೇಳ್ತೇವೆ..

ನಿನ್ನ ಬಳಿ ಸಂಕೋಚವಿಲ್ಲ.."

ಮೆಟ್ಟಲಿಳಿದು ಹೋದರು...

ನನ್ನಾಕೆ ಬಹಳ ಬೇಸರ ಮಾಡಿಕೊಂಡಳು.....

"ಛೇ ಎಂತಹ ಅನ್ಯಾಯರೀ..
ಇದು ಇಂದು ಮಧಾಹ್ನ ನಮ್ಮನೆಗೆ ಬಂದು ಕಷಾಯ ಕುಡಿದು ಹೋಗಿದ್ದಾರಲ್ಲ..!

ಬೀಪಿ ಕಡಿಮೆಯಾದರೆ ಪ್ರಾಣಕ್ಕೇನೂ ಅಪಾಯವಿಲ್ಲತಾನೇ..?"

" ಭರತ, ಅರುಣರ ಮುಖನೋಡಿದರೆ ..
ಅಪಾಯವಿರಬಹುದೇನೋ ಅನ್ನಿಸುತ್ತದೆ...

ಅವರ ಕಣ್ಣುಗಳು ಅತ್ತು ಅತ್ತು ಕೆಂಪಗಾಗಿದ್ದವು..."

ನನಗೂ ಆಘಾತವಾಗಿತ್ತು..

ನನ್ನಾಕೆಗೂ ಸಹ "ಕಹಿ ಸತ್ಯ" ಅರಗಿಸಿ ಕೊಳ್ಳಲಾಗಲಿಲ್ಲ...

ಮಧ್ಯಾಹ್ನ ನಮ್ಮನೆಗೆ ಬಂದು..
" ಕಾಫೀ ಬೇಡಾ..," ಕಷಾಯ " ಮಾಡು.. ಆಶಾ "

ಅಂತ
ಹೇಳಿ .., ಮಾಡಿಸಿ ಕುಡಿದು ಹೋಗಿದ್ದರು ....!

ಉತ್ಸಾಹದ ಬದುಕು... !

"ಸಾಗರದಲ್ಲಿ ಜಮೀನು ತಗೊ.. ಪ್ರಕಾಶ..
ನಾನು ಕೊಡಸ್ತೇನೆ..! "

ಬಹಳ ಆತ್ಮವಿಶ್ವಾಸದಿಂದ ಹೇಳಿದ್ದರು...!

"ರೀ... ಎದೆ ನೋವು ತುಂಬಾ ಬಂದಿರ ಬಹುದಾ..?
ಹಾರ್ಟ್ ಎಟಾಕ್ ಅಂದರೆ ನೋವು ಜಾಸ್ತಿ ಇರುತ್ತದಾ.?"

ನಿಜ... ಹ್ರದಯಾಘಾತದ ನೋವಿನ ಸಾವು..
ಅತ್ಯಂತ ನೋವಿನ ಸಾವಂತೆ...


ಹೆಂಗಸರ ಡೆಲಿವರಿ ನೋವಿಗಿಂತಲೂ ಜಾಸ್ತಿ ಇರುತ್ತದಂತೆ..

"ಛೇ.. ಏನು ಅನ್ಯಾಯ ಇದು...?
ಒಬ್ಬರಿಗೂ ಅನ್ಯಾಯ, ಕೆಟ್ಟ ಮಾತು ಹೇಳಿದವರಲ್ಲ..
ಅವರಾಯಿತು ಅವರ ದುಡಿಮೆಯಾಯಿತು ಅಂತಿದ್ದವರು..
ಅವರಿಗೇಕೆ ಈ ನೋವಿನ ಸಾವು..?"

ಅವರಿಗೆ ಸಾಯುವಂಥ ವಯಸ್ಸೇನೂ ಅಲ್ಲ..
ಐವತ್ತೈದರ ಅಂಚಿನಲ್ಲಿದ್ದರು....
ಮತ್ತೊಬ್ಬ ಮಗನ ಮದುವೆ ಮಾಡಬೇಕಿತ್ತು..

ಆಗತಾನೆ ಹುಟ್ಟಿದ ಮೊಮ್ಮಗನ ಸಂಗಡ ಆಡುವ ವಯಸ್ಸು....

ಈಗಲೇ ಕರೆ ಬಂದಿತೇ..?


"ಏನು ಮಾಡೋಣ .. ಹುಟ್ಟು ಸಾವು ನಮ್ಮ ಕೈಲಿ ಇಲ್ಲವಲ್ಲ.."

"ಅಲ್ಲಾರೀ.. ಅವರ ತಾಯಿ ನೋಡಿ..
ಎಷ್ಟು ಲಕ್ಷಣವಾಗಿ.. ಹಣೆ ತುಂಬಾ ದೊಡ್ಡ ಕುಂಕುಮ ಇಟ್ಟು ಚಂದವಾಗಿದ್ದರು..
ಅವರನ್ನು ನೋಡಿದರೆ ಕೈಮುಗಿದು ಬಿಡೋಣ ಅನಿಸುತ್ತದೆ ಅಲ್ಲವೇ?

ಅದು ನಿಜ...

ಅವರಲ್ಲಿ ನಾನು ನನ್ನಮ್ಮನ್ನು ನೋಡುತ್ತಿದ್ದೆ..
ಅಮ್ಮ ಊರಲ್ಲಿದ್ದಾಗ ಏನಾದರೂ ನೆಪ ಮಾಡಿ ಅವರ ಮನೆಗೆ ಹೋಗಿ..
ಕಣ್ಣತುಂಬ ನೋಡಿ ಬರುತ್ತಿದ್ದೆ...

ನೆಪ ಸಿಕ್ಕಿದಾಗ ಕಾಲು ಮುಟ್ಟಿ ನಮಸ್ಕಾರ ಮಾಡಿ ಬರುತ್ತಿದ್ದೆ....

ಮತ್ತೆ ಆಶಾಳೇ ಹೇಳಿದಳು..

ಭರತ, ಅರುಣರನ್ನು ನೋಡಿದರೆ... ಪಾಪ..ಅನಿಸುತ್ತದೆ...

ಇಲ್ಲಿಯವರೆಗೆ ಹೆಜ್ಜೆಹೆಜ್ಜೆಗೂ ಇದ್ದ ಅಪ್ಪ... !
ಮಾನಸಿಕವಾಗಿ, ಭೌತಿಕವಾಗಿ ಧೈರ್ಯ ತುಂಬುವ..
ಜೀವಕ್ಕಿಂತ ಪ್ರೀತಿ ಮಾಡುವ ಅಪ್ಪ ಇನ್ನು ಇರುವದಿಲ್ಲ ಅಂದರೆ...!

ಹೇಗಾಗಿರ ಬೇಡ..?
ಛೇ.. ಒಳ್ಳೆಯವರಿಗೇ ದೇವರು ಯಾಕೆ ಹೀಗೆ ಮಾಡುತ್ತಾನೆ...?...


ದೇವರು ಎಷ್ಟು ನಿರ್ದಯಿ ಅಲ್ಲವಾ...?"


" ಇಲ್ಲಿ ನೋಡು... ಪ್ರತಿಯೊಬ್ಬರೂ ಭರತ, ಅರುಣರ ಸ್ಥಾನದ ಅನುಭವ ಅನುಭವಿಸಲೇ ಬೇಕು..

ಪ್ರತಿಯೊಬ್ಬರ ಅಪ್ಪ, ಅಮ್ಮರೂ ಸಾಯುತ್ತಾರೆ...

ನಿನ್ನ ಅಪ್ಪ, ಅಮ್ಮರೂ ಒಂದು ದಿನ ಹೋಗೇ ಹೋಗುತ್ತಾರೆ...ಇದು ಸಹ ಸತ್ಯ.."

"ಛೇ ಹಾಗಲ್ಲ ಅನ್ನ ಬೇಡಿ.. ಛೇ...!"

ನೋಡು ಆಶಿ...
ಪ್ರತಿಯೊಬ್ಬರೂ ಭರತನ ತಂದೆಯ ದಿನ ನೋಡಲೇ ಬೇಕು..

ಸಾವನ್ನು ಎದುರಿಸಲೇ ಬೇಕು...

ಪ್ರತಿಯೊಬ್ಬರಿಗೂ ಸಾವು ಇದ್ದೇ ಇದೆ...!

ನನ್ನಮ್ಮನೂ ಒಂದು ದಿನ ಬಿಟ್ಟು ಹೋಗಿಬಿಡುತ್ತಾಳೆ...!

ನಿನ್ನಪ್ಪ, ಅಮ್ಮನೂ ಸಹ..!

ನಾನೂ ಸಾಯುತ್ತೇನೆ.. ನೀನೂ ಸಹ.. ಸಾಯಲೇ ಬೇಕು....!

ನಮ್ಮ ಸಾವನ್ನು " ನಮ್ಮ ಮಗನೂ" ನೋಡಲೇ ಬೇಕು....

ನಾವಿರುವಷ್ಟು ದಿನ ನಮ್ಮ ಸಂಗಡ ಇದ್ದಾರಲ್ಲ...
ಅವರೊಡನೆ ಪ್ರೀತಿಯಿಂದ ಇದ್ದು ಬಿಡಬೇಕು...!

ಎಷ್ಟು ಪ್ರೀತಿ ಮಾಡ ಬೇಕೋ ಮಾಡಬೇಕು..

ನಾಳೆ ನೋಡಿಲ್ಲವಲ್ಲ...!

ನೀನೂ ಸಹ ಸಾಯುತ್ತೀಯಾ... ನಾನೂ ಸಾಯುತ್ತೀನಿ ...

ನಿನ್ನ ಸಾವನ್ನು ನಾನು ನೋಡ್ತಿನೋ.....

ನನ್ನ ಸಾವನ್ನು ನೀನು ನೋಡ್ತಿಯೋ.. ...ಗೊತ್ತಿಲ್ಲ...!

ನಾನು ಸತ್ತ ಮೇಲೆ ಅಳುವದಕ್ಕಿಂತ ..

ಈಗ ನನ್ನನ್ನು ಪ್ರೀತಿ ಮಾಡೇ ಪ್ಲೀಸ್.....

ಎಷ್ಟು ಪ್ರೀತಿ ಬೇಕಾದರೂ ಮಾಡು... ನಾನೂ ಮಾಡ್ತೇನೆ..


ನಮ್ಮಿಬ್ಬರ ನಡುವೆ ಜಗಳ ಎಲ್ಲ ಯಾಕೆ.. ಬೇಕು..?

ಈಗ ನಿನ್ನ ಕಣ್ಣಮುಂದೆ ಇದ್ದೀನಲ್ಲ......

ಎಷ್ಟು ಬೇಕಾದರೂ ಪ್ರೀತಿ ಮಾಡು ...

ಮಾಡ್ತೀಯಾ..?"


"ಛೇ .. ಎಷ್ಟು ಕ್ರೂರವಾಗಿ ಮಾತಾಡ್ತಿರಿ ..ನೀವು..

ಮನಸ್ಸಾದರೂ ಹೇಗೆ ಬರುತ್ತದೆ...?

ಇರಿ..ನಿಮಗೆ ಮಾಡಿಸ್ತೇನೆ.."

ಅಂತ....

ಆಶಾ... ನನ್ನ ಬೆನ್ನಿಗೆ ಬಲವಾಗಿ..
ಜೋರಾಗಿ..ತಾಕತ್ತೆಲ್ಲಾ ಹಾಕಿ ಗುದ್ದಿದಳು...

ಹಿಂದಿನಿಂದ ಬಿಗಿದಪ್ಪಿದಳು...

ಅವಳ... ಆ.. ಗುದ್ದಿನಲ್ಲಿ ..
ಆ ಅಪ್ಪುಗೆಯಲ್ಲಿ...

ಅವಳ "ಪ್ರೀತಿ ಪ್ರೇಮವೆಲ್ಲ" ... ಇತ್ತು...


ನನ್ನಾಕೆಯ ಪ್ರೀತಿ ಕೆಲವು ಸಾರಿ...

ನನಗೆ ಚೆನ್ನಾಗಿ ಅರ್ಥ ಅಗುತ್ತದೆ.....



( ಇದೀಗ.. ಮಡದಿಯನ್ನು ಗೋಕರ್ಣದ ಬಸ್ಸಿಗೆ ಕಳುಹಿಸಿ ಬಂದಾಗ..
ಮನೆಯಲ್ಲ ಬಿಕೋ ಅನಿಸ ತೊಡಗಿತು..
ಅವಳಿಲ್ಲದೆ.. ಬೇಜಾರಾಗ ತೊಡಗಿತು..
ಹೀಗೊಂದು ನೆನಪು.. ಅವಳಿಗಾಗಿ..)

Sunday, March 22, 2009

ಪೆಟ್ಟಿಗೆ... "ಗಪ್ಪತಿ " .. ಅನ್ನುವ....."ಅಡಪೊಟ್ರು "...!!

ಪೆಟ್ಟಿಗೆ ಗಪ್ಪತಿ....

ತುಂಬಾ ಸಾಧು ಮನುಷ್ಯ... ನಿಧಾನ ಗತಿಯ ಸ್ವಭಾವ......
ಬರೆಯುವದು.. ಓದುವದು...

ನಡೆಯುವದು...

ವಿಚಾರ ಮಾಡುವದು... ... ಮಾತನಾಡುವದು...

ಎಲ್ಲದರಲ್ಲೂ...ನಿಧಾನ....

ತುಂಬಾ... ತುಂಬಾ ಸಮಾಧಾನ...!


ಅವನ ತೋರು ಬೆರಳಿಗೆ ಉಂಗುರವೊಂದಿತ್ತು....!

ಉಂಗುರ ಒಳಗೆ ಹೋದಮೇಲೆ ....

ಬೆರಳಿನ ಗಂಟು ಒಂದುಥರ ದಪ್ಪವಾಗಿ ..

ಹೊರಗೆ ತೆಗೆಯಲು ಬಾರದ ಸ್ಥಿತಿಯಲ್ಲಿತ್ತು...


" ಇದು ಹೇಗಾಯಿತು.... ಗಪ್ಪತಿ...? "

" ಇದಾ.....ಅಂದು ಭಾನುವಾರ ..ನಾನು ಆರು ಗಂಟೆಗೆ ಎದ್ದು ತೋಟಕ್ಕೆ ..

ಅಡಿಕೆ ಆರಿಸಿಕೊಂಡು ಬರಲು ಹೋಗಿದ್ದೆ...


ಅಲ್ಲಿ ತುದಿ ಮನೆಯ ಮನೆಯ ವೆಂಕಪ್ಪಣ್ಣ ಸಿಕ್ಕಿದ..


ಅವನು ಯಾವಾಗಲೂ ನಮ್ಮನೆ ತೋಟದಿಂದ ಬಾಳೆ ಎಲೆ ಕೊಯ್ಯುವದು..

ಅಂದು ನಾನು ಎದುರಿಗೆ ಸಿಕ್ಕಿ ಬಿಟ್ಟೇನಲ್ಲ ಹಾಗಾಗಿ.. ಸಪ್ಪೆ ಮುಖದಿಂದ ಬಾರದ ನಗು ನಕ್ಕ...

ಅವನ ಸಂಗಡ ಪಕ್ಕದ ಮನೆ ಮಂಜಪ್ಪಣ್ಣನೂ ಇದ್ದ...

ನಾನು ಮನೆಗೆ ಬಂದು.. ಮುಖತೊಳೆದು..ಹಲ್ಲು ತಿಕ್ಕಿ ...

ತಿಂಡಿ ತಯ್ಯಾರಾಗಿದೆಯಾ..? .. ಎಂದು ಅಡಿಗೆ ಮನೆ ಇಣುಕಿದೆ...

ಅಮ್ಮ ದೋಸೆಗೆ ರೆಡಿ ಮಾಡುತ್ತಿದ್ದಳು...

ನಮ್ಮ ಮನೆಯಲ್ಲಿ ಯಾವಾಗಲೂ "ಮೊಗೆಕಾಯಿ ದೋಸೆ ತೆಳ್ಳೇವು " ಮಾಡ್ತಾರೆ.."


" ಹೊಯ್... ಗಪ್ಪತಿ.... ನಿಂಗೆ ಬೆರಳು ಹೀಗೇಕೇಕಾಯಿತು..? ಅದು ಹೇಳು ...

ನಿಮ್ಮನೆ.. ಮೊಗೆಕಾಯಿ ದೋಸೆ ಕಟ್ಟಿಕೊಂಡು ನಂಗೇನು..?

ಎಲ್ಲೆಲ್ಲೋ ಹೋಗ್ಬೇಡಾ...."


" ಅದನ್ನೇ ಹೇಳ್ತಾ ಇದ್ದಿನಪ್ಪಾ..ಸ್ವಲ್ಪ ಇರು...

ಹಾಗೆ... ದೋಸೆ ತಿಂದು ಹೊರಗೆ ಬಂದೆ...

ಹೊರಗೆ ಬಂದರೆ ನಮ್ಮನೆ ನಾಯಿ ಒಂದೇ ಸಮನೇ ಕೂಗುತ್ತಿತ್ತು...

ನೋಡ್ತೀನಿ.. ಪಕ್ಕದ ಮನೆ ಮಂಜಪ್ಪಣ್ಣ.. ಹೋಗ್ತಾ ಇದ್ದ...

ನಾನು ಅದಕ್ಕೆ ಗದರಿಸಿದೆ...

ಆ ನಾಯಿ ನನ್ನ ಅಜ್ಜನ ಮನೆಯದು...

ನಾವು ಎರಡು ವರ್ಷದ ಹಿಂದೆ.. ಅಜ್ಜನ ಮನೆಗೆ ಹೋದಾಗ...


" ಹೋಯ್... ಪುಣ್ಯಾತ್ಮಾ... ! ನಿಂಗೆ ಈ ಬೆರಳು ಯಾಕೆ ಹೀಗಾಯ್ತು ಅದನ್ನ ಹೇಳು ...?

ಏನೇನೋ ಹೇಳ್ತೀಯಲ್ಲ.. ಮಾರಾಯಾ..!."


" ಅದನ್ನೇ ಹೇಳ್ತಾ ಇದ್ದೀನಪ್ಪ... ಇರು ..

ನನ್ನ ಅಜ್ಜನ ಮನೆಯಲ್ಲಿ ಒಂದು ಹೆಣ್ಣು ನಾಯಿ....

ಅದಕ್ಕೆ ಎರಡು ಮರಿಗಳು.....

ಅದು ಯಾವಾಗಲೂ ಹೆಣ್ಣು ಮರಿ ಹಾಕುವದು ...

ಆದರೆ ಆ ಬಾರಿ ಎರಡೂ ಗಂಡು ಮರಿ ಹಾಕಿತ್ತು....!

ನನ್ನ ಮಾವ "ಒಂದು ಮರಿ ನೀನು ಬೇಕಾದರೆ ತಗೊ ಮಾರಾಯ" ಅಂದ..

ನಾನು ಬಹಳ ವಿಚಾರ ಮಾಡಿ..ಒಂದು ಮರಿ ತೆಗೆದು ಕೊಂಡೆ...."


" ಲೇ... ಮಾರಾಯಾ...! ...! ನಿನ್ನ ಬೆರಳಿಗೆ ಉಂಗುರ...

ಸಿಕ್ಕಿ ಹಾಕಿ ಕೊಂಡಿದ್ದು ಹೇಗೆ ಮಾರಾಯಾ..?


ನಾಯಿಯಂತೆ... ಹೆಣ್ಮರಿಯಂತೆ.. ಅದನ್ನೆಲ್ಲ ಯಾಕೆ ಕೊರಿತೀಯಾ..? .."



" ಅದನ್ನೇ ಹೇಳ್ತಾ ಇದೀನಪ್ಪಾ... ಸ್ವಲ್ಪ ಇರು...

ಆ ನಾಯಿ ಹಗಲು ಹೊತ್ತು ಪಕ್ಕದ ಮನೆಯವರನ್ನು ನೋಡಿದರೆ ಮಾತ್ರ ಕೂಗ್ತದೆ

ರಾತ್ರಿ ಹೊತ್ತು ಯಾರು ಬಂದರೂ ಕೂಗುತ್ತದೆ..

ಹಗಲು ಹೊತ್ತಿನಲ್ಲಿ ಬೇರೆ ಯಾರೇ ಬಂದರೂ ಬಾಲ ಅಲ್ಲಾಡಿಸಿ ನಗ್ತದೆ..."


ನನಗೆ ವಿಚಿತ್ರ ಎನಿಸಿತು..

"ಹೌದಾ...! ಯಾಕೆ ಹಾಗೆ..?


" ಅದು ದೊಡ್ಡ ಕಥೆ... ಆ ನಾಯಿ ಮರಿ ಸಣ್ಣ ಇದ್ದಾಗ... ಪಕ್ಕದ ಮನೆಯ ಮಂಜಪ್ಪಣ್ಣ...

ಈ ನಾಯಿ ಮರಿಗೆ ಹೊಡೆದು ಬಿಟ್ಟಿದ್ದ...

ಅಲ್ಲಿವರೆಗೂ ಪ್ರೀತಿಯಿಂದ ಇದ್ದ ಎರಡೂ ಮನೆಯವರು....

ದೊಡ್ಡ ಜಗಳ ಆಗಿ..... ವೈರತ್ವ, ಹಗೆ ಎಲ್ಲ ಶುರುವಾಗಿ..

ಬದ್ಧ ವೈರಿಗಳಾಗಿಬಿಟ್ಟೆವು...!

ಭಾರತ , ಪಾಕಿಸ್ತಾನ ಆಗಿಬಿಟ್ಟೇವು..

ಈಗ " ಕೇಸು" ಕೋರ್ಟಿನಲ್ಲಿದೆ... ಮಾರಾಯಾ...!!


" ಅಯ್ಯೊ.. ರಾಮಾ...! ನಾಯಿಗೆ ಹೊಡೆದದ್ದು..

ಕೋರ್ಟಿನಲ್ಲಿ ಕೇಸಾಯಿತಾ...?
ಏನಪ್ಪಾ ಇದು..??


" ಛೇ.. ಛೇ.. ಅಲ್ಲೋ ಮಾರಾಯಾ...!

ಅದು ಆಗಿದ್ದು ನಮ್ಮನೆ ತೆಂಗಿನ ಮರದಿಂದ..

ನಮ್ಮನೆ ಅವರ ಮನೆ ಮಧ್ಯ .. ನನ್ನಜ್ಜ ನೆಟ್ಟ ತೆಂಗಿನ ಮರ ಇದೆ...

ತೆಂಗಿನ ಕಾಯಿ ಮನೆ ಮೆಲೆ ಬಿದ್ದು ಹಂಚು ಒಡೆಯುತ್ತಿತ್ತು..

ಒಂದು ದಿವಸ ಪಕ್ಕದ ಮನೆ ಮಂಜಪ್ಪಣ್ಣನ..

ಭುಜದ ಮೇಲೆ
ತೆಂಗಿನ ಕಾಯಿ ... ಬಿತ್ತು...

ಅವನ ಮೇಲೆ ಬಿದ್ದಾಗ ಅಂವ ನೋವಿನಿಂದ ಕೂಗಿದ..

ಆಗ ... ಈ ನಾಯಿ..

ಅವನನ್ನು ನೋಡಿ ಕೂಗಿ ಬಿಟ್ಟಿತ್ತು...

ಮಂಜಪ್ಪಣ್ಣನಿಗೆ ಅಸಾಧ್ಯ ಕೋಪ ಬಂದು....

ನಾಯಿಗೆ ಹೊಡೆದಿದ್ದ....

ನಮ್ಮನೆ ನಾಯಿಗೆ ಹೊಡೆಯಲು ಇಂವ ಯಾರು...?

ಹಾಲು., ಅನ್ನ ಹಾಕಿ ಮುದ್ದಿನಿಂದ ನಾವು ಸಾಕಿದ್ದೇವೆ...!!...

ಅಲ್ಲ.. ನಾಯಿ ನೋವು ಬೇರೆ ನಮ್ಮ ನೋವು ಬೇರೇನಾ... ?..

ನೀನೇ ಹೇಳು.... ಇದು ನ್ಯಾಯಾ ನಾ...?... "


ತಥ್... ಇವನಾ...!

ಇದು ಎಲ್ಲಿಂದ ಎಲ್ಲೋ ಹೋಗ್ತಾ ಇದೆಯಲ್ಲ...!!

ನನಗೆ ತಲೆ ಬ್ಲಾಸ್ಟ್ ಆಗಿ ಒಡೆದು ಹೋಗುತ್ತೇನೋ ಅನಿಸಿತು...!


" ಅದೆಲ್ಲ ಬೇಡ... ಗಪ್ಪತಿ...!! ಪಾಯಂಟು ... ಪಾಯಂಟು... ಮಾತಾಡು..

ಕೆಲಸಕ್ಕೆ ಬಾರದ ವಿಷ್ಯ ಬೇಡ...

ಈ ಬೆರಳು ಹೇಗೆ...ಯಾಕೆ.. ಹೀಗಾಯ್ತು..?

ಏನಾಯ್ತು...? ಅದನ್ನು ಹೇಳು..."


" ಅದನ್ನೇ ಹೇಳ್ತಾ ಇದ್ದೀನಪ್ಪ ಸ್ವಲ್ಪ ಇರು..

ಈ.. ನಾಯಿ ಸಾಮಾನ್ಯ ನಾಯಿಯಲ್ಲ...!

ಸ್ವತಹ ಸೋನಿಯಾ ಗಾಂಧಿಯವರೆ ಅಪ್ಪಿ ಮುದ್ದಾಡಿದ್ದಾರೆ...!!


" ಲೋ.... ಬುರುಡೆ ಬಿಡಬೇಡಪ್ಪಾ... ಎಲ್ಲಿಯ ಸೋನಿಯಾ ಗಾಂಧಿ..??

ಎಲ್ಲಿ ನಿಮ್ಮನೆ ಹಡಬೆ.. ಬೀದಿ ನಾಯಿ ..?? ಸುಮ್ನಿರಪ್ಪ...!

ಸುಮ್ನೇ ಕುಯ್ಯಿಬೇಡಾ.. ! "


" ನೋಡು ತುದಿಮನೆ ವೆಂಕಪ್ಪಣ್ಣ ಗೊತ್ತಲ್ಲ.....

ಅವನ ಮಗ ಸೋನಿಯಾ ಗಾಂಧಿಯ ಸೆಕ್ರೇಟರಿ ಬಳಿ ಕೆಲಸ ಮಾಡುವದು..

ದೆಹಲಿಯಲ್ಲಿ...

ನಮ್ಮನೆ ನಾಯಿಗೂ ಅವರಮನೆ ನಾಯಿಗೂ ದೋಸ್ತಿಯಾಗಿ.. ಮರಿ ಹುಟ್ಟಿದ್ದವು ..

ಆಮರಿಗಳೆಲ್ಲ ನಮ್ಮನೆ ನಾಯಿಯ ಹಾಗೆ ಇದ್ದವು...

ಒಂದು ಮರಿಯನ್ನು ಕಷ್ಟಪಟ್ಟು ದೆಲ್ಲಿಗೆ ಒಯ್ದಿದ್ದ.....

ಅಲ್ಲಿ ಸೋನಿಯಾ ಗಾಂಧಿ ನೋಡಿದ್ದರಂತೆ...!!.."..


ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ...


ಅಷ್ಟರಲ್ಲಿ ನಾಗು ಮತ್ತು ಗೆಳೆಯರು ಬಂದರು..

"ಏನ್ರಪಾ..? ಏನು ಮಾತು ಕಥೆ..?

ಲೇ ಪೆಟ್ಟಿಗೆ ಏನು ಕಥೆಯೋ..?.."

ಕೇಳಿದ ಎಂದಿನಂತೆ ಹಾಸ್ಯವಾಗಿ..


" ಅದೇ ಬೆರಳಿನ ಉಂಗುರದ ಕಥೆನೋ..!

ಈ ಪ್ರಕಾಶಾ ಹೇಳ್ಳಿಕ್ಕೇ ಬಿಡಲ್ಲಪ್ಪಾ ..!

ಕೆಲಸಕ್ಕೆ ಬಾರದ ಪ್ರಶ್ನೆ ಕೇಳ್ತಾನೆ..""



" ಲೇ ಪ್ರಕಾಶು ನಿನ್ನ ಕಥೆ... ದೇವ್ರೇ ಕಾಪಾಡಬೇಕು..!

ಎಲ್ಲಿವರೆಗೆ ಬಂದಿದ್ದಾನೆ...?

ಒಬಾಮಾ...? ಅಮೇರಿಕಾದ ಚುನಾವಣೆ ಎಲ್ಲ ಆಯ್ತಾ..?

ಕೋಫಿ ಅಣ್ಣನ್ .., ವಿಶ್ವಸಂಸ್ಥೆ... ಎಲ್ಲಾ ಆಯ್ತಾ..? "


ಅದಕ್ಕೆ ಗಪ್ಪತಿನೇ ಹೇಳಿದ...


" ಇಲ್ಲೋ.. ಮಾರಾಯಾ ..!...

ಇನ್ನೂ "ಸೋನಿಯಾ ಗಾಂಧಿ" ಬಳಿ ಇದ್ದೀನಪ್ಪಾ..!

.. ಮಧ್ಯದಲ್ಲಿ ಕೆಲಸಕ್ಕೆ ಬಾರದ ಪ್ರಶ್ನೆ ಹಾಕ್ತಾನೆ..

ಹೇಗೆ ಹೇಳುವದು..? "


ನಾಗುಗೆ ಕೋಪ ಬಂತು ..ನನ್ನ ಸ್ಥಿತಿ ನೋಡಿ ಕನಕರನೂ ಬಂದಿರ ಬೇಕು..

" ಸೀತಾರಾಮ.. ಉಮಾಪತಿ ಹಿಡ್ಕೊಳ್ರೋ.. ಈ.. ಪೆಟ್ಟಿಗೇನಾ..

ನಾನು ಹೇಳ್ತೀನಿ ಇದು ಹೇಗಾಯ್ತು ..ಅಂತ...! "

ಉಮಾಪತಿ... ಸೀತಾರಾಮ...ಇಬ್ಬರೂ..

ಗಪ್ಪತಿಯನ್ನು ಬಾಯಿ ಮುಚ್ಚಿ ಬಲವಾಗಿ ಹಿಡಿದು ಕೊಂಡರು


ನಾಗು ಹೇಳಿದ.....


" ಇಂವ ... ಬಾಳೆ .. ಎಲೆ ಕೊಯ್ಯಲು ಹೋದಾಗ..

ಕತ್ತಿ ತಾಗಿ ಕೈ ಬೆರಳು.. ಪೆಟ್ಟಾಯ್ತು..

ಬ್ಯಾಂಡೇಜು ಹಾಕಿದ್ರು..

ಗಡಿಬಿಡಿಯಲ್ಲಿ ಉಂಗುರ ಅಲ್ಲೇ ಇದ್ದು ಹೋಗಿತ್ತು ..


ವಾಸಿಯಾದಮೇಲೆ ಉಂಗುರದ ಮುಂದೆ ಗಡ್ಡೆಯಾಗಿ ...

ತೆಗಿಯಲಿಕ್ಕೆ ಬಾರದ ಸ್ಥಿತಿಯಾಗಿತ್ತು... !!..".


ಗಪ್ಪತಿ ಕೊಸರಾಡೀಕೊಂಡು ಬಿಡಿಸಿಕೊಂಡು ಕೂಗಿದ.....


"ಸ್ವಲ್ಪ ಹೊತ್ತು ಸುಮ್ನೇ ಕೇಳಿದ್ದರೆ ನಾನೇ ಹೇಳ್ತಿದ್ದೆ ಚಂದವಾಗಿ ...

ರಸ ಭಂಗ ಮಾಡಿ ಬಿಟ್ಯಲ್ಲೋ..?... "



" ಅಬ್ಬಬ್ಬ...! ಪುಣ್ಯಾತ್ಮಾ...!

ಸುಮ್ನೀರು ಮಾರಾಯಾ.. ಸಾಕೋ ಸಾಕು..!


... ಈ.. ಜನ್ಮಕ್ಕೆ ಸಾಕಾಗುವಷ್ಟು ಕೊರೆದು ಬಿಟ್ಯಲ್ಲೋ..!!"


ಅಯ್ಯೋ... ಶಿವನೇ...!!

ಎಂದು ನಾನು ಬೆವರು ಒರೆಸಿ ಕೊಂಡೆ...


ತಲೆ ಆಡಿಸಿ....

ಜೋರಾಗಿ.. ಕೊಡವಿ ಕೊಂಡೆ..!

ಅಬ್ಬಾ... !... ಅಬ್ಬಬ್ಬಾ...!!



ಈ ಪೆಟ್ಟಿಗೆ ಗಪ್ಪತಿ...

" ನಯನಾ "... ಅನ್ನೋ ಹುಡುಗಿ ಲವ್ ಮಾಡಿ

ಅಡಪೋಟ್ರು ಆದದ್ದು ದೊಡ್ಡ ಕಥೆ....

Saturday, March 14, 2009

ನಾನೂ...ಒಂಥರಾ.. " ಅಡಪೊಟ್ರು " ಸಾಹೇಬ್ರೆ...!!...!!


ನನ್ನ ದೇಹದ ಭಾಗಗಳೆಲ್ಲವೂ ಮಾತಾಡುತ್ತಿದ್ದವು...

ನಿಧಾನವಾಗಿ ಕಾಲೆಳೆಯುತ್ತ ಸತ್ಯನೆಡೆಗೆ ಬಂದೆ..

ಅಂಗಾತ ಮಲಗಿ ಶವಾಸನ ಹಾಕಿ ಮಲಗಿ ಬಿಟ್ಟಿದ್ದ...!

'ಸತ್ಯ ಏನಾಯ್ತೊ..? ಏಳೊ.."

ಎಬ್ಬಿಸುವ ಪ್ರಯತ್ನ ಮಾಡಿದೆ..

ಮೆಲ್ಲಗೆ ಕಣ್ಣು ತೆರೆದ..
ಪ್ರಲಾಪ ಶುರು ಮಾಡಿದ...

" ಇಡೀ " ಬ್ರಹ್ಮಾಂಡ " ನನ್ನ ಮೇಲೆ ಬಿದ್ದಂತಾಯಿತು ಕಣೊ...!"...

ಎಲ್ಲಿಯ " ನಲವತ್ತೈದು " ಕೇಜಿ..?

ಎಲ್ಲಿಯ " ಕ್ವಿಂಟಾಲು.".?

ಬಂಡೆಗಲ್ಲಿನ ಹಾಗೆ ನನ್ನ ಮೇಲೆ ಬಿದ್ದು " ಇಸ್ತ್ರೀ" ಹೊಡೆದು ಬಿಟ್ಯಲ್ಲೋ ..!"


" ನಂಗೂ ನೋವಾಗಿದೆ ಮಾರಾಯಾ.. ಏಳು.. ವೈದ್ಯರನ್ನು ಭೇಟಿ ಮಾಡಿ ಬಾ.."
ಎಬ್ಬಿಸಿದೆ..

ಸಾವಕಾಶವಾಗಿ ಎದ್ದು ವೈದ್ಯರನ್ನು ಭೇಟಿ ಮಾಡಲು ಹೋದ...

ನಾನು ಅಲ್ಲೇ ಕುಳಿತೆ...

ಆಟೋದವ ಅದೂ ಇದು ಮಾತಾಡಲು ಶುರು ಮಾಡಿದ...
ಆಟೊದವನಿಗೆ ಅಪರಾಧಿ ಮನೋಭಾವನೆ ಕಾಡಿರಬೇಕು..

" ಬೇಜಾರಗ್ಬೇಡ್ರಿ.. ಸಾಹೇಬರ...
ದಿನವಿಡಿ ದುಡಿತೀನ್ರೀ.. ರಾತ್ರಿ ಆಟೋ ಓಡುಸ್ತೀನ್ರೀ..
ಬದುಕು ಕಷ್ಟ ಸಾಹೆಬರೆ.. ಹಣ ಸಾಲದು.."

"ಯಾಕೆ ಸಾಲೋದಿಲ್ರೀ..?"

" ಮನೆ ತುಂಬಾ ಮಕ್ಕಳ್ರೀ..

ಅವರಿಗೆ ಬಟ್ಟೆ ಬರೆ.. ಊಟ ತಿಂಡಿ.. ಬದುಕು.. ಕಷ್ಟಾರೀ..

ಇಪ್ಪತ್ತು ವರ್ಷದಿಂದ ಆಟೋ ನಡಸ್ತಾ ಇದ್ದೀನ್ರಿ..

ಯಾವ ರಾಜಕಿಯದವ್ರು ಬಂದ್ರೂ...

ಬದುಕು ಹಾಗೇ ಇದೇರಿ..""


" ಯಾಕೇ ಅಷ್ಟೆಲ್ಲ ಮಕ್ಕಳು ಮಾಡ್ಕೊಂಡ್ರಿ..?
ಕುಟುಂಬ ಯೋಜನಾ ಮಾಡ್ಕೋಬೇಕಿತ್ತು...."

" ಸಾಹೇಬ್ರೆ " ಅದು " ಬೇರೆ...

ಇದೇ... ಬೇರೆ...!

ಮನೆಯಲ್ಲಿ " ಶಾಂತಿ " ಇರ ಬೇಕೆಂದ್ರ....

ಮನೆ ತುಂಬಾ ಮಕ್ಕಳಿರಬೇಕ್ರಿ..!!"


" ಮಕ್ಕಳಿದ್ರೆ ಗಲಾಟೆ ಅಲ್ವೇನಪ್ಪಾ..?"


" ಅದೇ ಗುಟ್ಟು ಸಾಹೇಬ್ರೆ,..

ಮಕ್ಕಳ ಗಲಾಟೆ ಇರ್ತದರಿ...

ಮನೆಯಲ್ಲಿ ಹೆಂಗಸ್ರು ಸುಮ್ನೆ ಶಾಂತಿಯಿಂದ ಇರಬೇಕು ಅಂದ್ರ..

ಮನೆ ತುಂಬಾ.. ಮಕ್ಕಳಿರಬೇಕ್ರಿ..

ಮಕ್ಕಳ ಕೆಲಸಾದಾಗ...

ನಮ್ಮ"ಹೆಂಗಸ್ರು" ನಮ್ಮ ಹತ್ರ....

ಜಗಳ ಮಾಡೋದಿಲ್ರೀ...

ನಾವು ಮನೆಗೆ ಹೋದಾಗ ಶಾಂತಿಯಿಂದ ಇರ್ತಾರ್ರೀ..

ಏನ್ ಹೇಳ್ತಿರಿ ಸಾಹೇಬ್ರ..?"


" ನಿಮ್ಮನೆಯಲ್ಲಿ " ಶಾಂತಿ " ಇದೆಯೇನಪ್ಪಾ..? "


" ಇದೇ ಸಾಹೇಬ್ರ..

ಮಕ್ಕಳ ಗಲಾಟೆ ಏನೂ ಅನಿಸೋದಿಲ್ರಿ..

ದೊಡ್ಡ ಮೀಸೆ.., ಕೆಂಪು ಕಣ್ಣು ಬಿಟ್ರೆ.. ಮಕ್ಕಳು ಸುಮ್ನೆ ಇರ್ತಾರ್ರೀ...

ನನ್ನ ಹೆಂಡ್ತಿ "ಶಾಂತಿ" ನೂ ಶಾಂತವಾಗಿರ್ತಾರ್ರಿ...!"


" ಮತ್ತೆ ಖರ್ಚು...?"

" ಖರ್ಚಿಗೆ ಕಷ್ಟ ಆಗ್ತದ ..

ಒಂದು ಮಗ ಇದ್ದಾಗ ನೂರು ರುಪಾಯಿ ಅಂಗಿ ತಗೊತಿದ್ದೆ..

ನಾಲ್ಕು ಮಕ್ಕಳು ಇದಾರೆ..

ಇಪ್ಪತ್ತೈದು ರೂಪಾಯಿದು "ನಾಲ್ಕು " ಅಂಗಿ ತಗೋತಾ ಇದ್ದಿನ್ರಿ...!

ಸಾಹೇಬ್ರೆ ಇನ್ನೊಂದು ವಿಷಯ.. ನಿಮಗೆ ಎಷ್ಟು ಮಕ್ಕಳಿದಾರ್ರೀ.."


" ಒಬ್ನೇ ಕಣಪ್ಪಾ...."


" ಛೇ.. ಛೇ.. ಪ್ಯಾಟಿ.. ಮ್ಯಾಲಿನೋವ್ರು...

ಇದೆ ತಪ್ಪು ಮಾಡ್ತಾರ್ರಿ...

ಜಾಸ್ತಿ ಮಕ್ಕಳಿದ್ರೆ .. ಒಬ್ಬನಾದರೂ..

ಕೊನೆ ಕಾಲದಾಗ .. ನೋಡ್ಕೊತಾನ್ರಿ....

ಒಂದೆ ಮಗ ಇದ್ದು..

ಹೆಂಡ್ತಿ ಬಂದಮೆಲೆ ತಲೆ ಕೆಟ್ಟು ಹೋದ್ರೆ.. ?

ಏನು ಮಾಡ್ತಿರ್ರಿ.. ಸಾಹೇಬ್ರ...!..?? "....."

ಇನ್ನೂ ಏನೇನೋ ಹೇಳ್ತಾ ಇದ್ದ..

ಹಿಂದಿನಿಂದ ಬಂದ ಸತ್ಯನಿಗೆ ತಡೆಯಲಾಗಲಿಲ್ಲ...

" ನೋವು ಕೊಟ್ಟಿದ್ದಲ್ಲದೇ...
ಪುಕ್ಕಟೆ ಉಪದೇಶಾ ಮಾಡ್ತಿಯಲ್ಲೋ..

ಸಾಕಪ್ಪ ಉಪದೇಶ.. ಮಾರಾಯಾ..!
ಎಲ್ಲಾ ಕೆಲಸ " ಆಯಿತು..
ಈಗ ಹೋಗೋದು ಹೇಗೆ..?"


" ನಾನಿದ್ದೀನಲ್ಲ ಸಾಹೇಬ್ರೆ..!"
...

" ಬೆಳಗಿನ ತನಕ ಸೊಳ್ಳೆ ಹತ್ರ ಕಡಿಸಿಕೊಂಡು..

" ಸತ್ತು." .. ಹೋದ್ರೂ ಪರವಾಗಿಲ್ಲಾ.. ನಿನ್ನ ಆಟೋ ಬೇಡಪ್ಪಾ.."

ಆದರೆ ಏನು ಮಾಡುವದು..?

ಕೊನೆಗೆ ನಾನೂ, ಸತ್ಯ ಇಬ್ಬರೂ ಸೇರಿ..
ಒಂದು ಉಪಾಯ ಮಾಡಿದೆವು..

"ನೋಡಪ್ಪಾ.. ನೀನು ಗಾಡಿಯನ್ನ..

ಎರಡು ನಿಮಿಷ " ಚಾಲು " ಮಾಡಬೇಕು.......

ನಂತ್ರ " ಆಫ್ " ಮಾಡ್ಬೇಕು..

ಹೊಟೆಲ್ ಹೋಗು ತನಕ.. ಹೀಗೆ ಹೋಗ ಬೇಕು..

ನಿಧಾನ ಬಿಡಬೇಕು..

ಹಾಗಾದ್ರೆ ಬರ್ತೀವಿ.."


ಇದಕ್ಕೆ ಅವನೂ ಒಪ್ಪಿಕೊಂಡ...

ನಾವು ಆಟೋದ ಮೇಲೆ ಕುಳಿತು ....
" ಆಫ್ ಮಾಡು.."
" ಆನ್ ಮಾಡು".... ಅನ್ನುತ್ತ ಹೊಟೆಲ್ ಗೆ ಬಂದೆವು...


ಅಲ್ಲೇ ಮೆಡಿಕಲ್ ಅಂಗಡಿಯಲ್ಲಿ ಮಾತ್ರೆ ತೆಗೆದು ಕೊಂಡು..
ರೂಮಿನಲ್ಲಿ ಮಲಗಿದ್ದಷ್ಟೇ ಗೊತ್ತು...

ಬೆಳಿಗ್ಗೆ ಎದ್ದಾಗ ಮೈಕೈ ನೋವು ಇನ್ನೂ ಇತ್ತು..
ಅಲ್ಲೇ ಗೊಬ್ಬರದಂತಹ "ನಾಷ್ಟಾ" ಮಾಡಿ ರೂಮನ್ನು ಖಾಲಿ ಮಾಡಲು ರೆಸೆಪ್ಷನ್ ಬಳಿ ಬಂದರೆ...!!

ಸಣ್ಣ ಬ್ಯಾಗು ಎಲ್ಲೂ... ಕಾಣ್ತಾನೇ ಇಲ್ಲ...!

ಅದರಲ್ಲಿ "ಹದಿನೈದು ಸಾವಿರ" ರೂಪಾಯಿ ಕ್ಯಾಶ್ ಇತ್ತು...!

ಅಯ್ಯೋ ದೇವರೆ..ಏನಪ್ಪಾ ಇದು...?? !!

ಮುಂದೇನು ಮಾಡಬಹುದು ಅನ್ನುತ್ತಾ...ಇರುವಾಗ...

ತನ್ನ ಕಪ್ಪನೆಯ.. ಹಲ್ಲು .. ತೋರಿಸುತ್ತ..
ನಗುತ್ತ ಆಟೋದವ ನಿಂತಿದ್ದ...!


"ಸಾಹೇಬ್ರೆ .. ನಿನ್ನೆ ನಿಮ್ಮ ಬ್ಯಾಗು ಆಟೋದಲ್ಲೇ ಇದ್ದಿತ್ರಿ..!

ಹಣ ಇದ್ರೆ ಎಣಿಸ್ಕೊ ಬಿಡ್ರಿ.."

ಅನ್ನುತ್ತಾ ಬ್ಯಾಗು ಕೊಟ್ಟ...!

ಲಗುಬಗೆಯಿಂದ ಎಣಿಸಿದೆ...
ಎಲ್ಲವೂ ಸರಿಯಾಗಿತ್ತು... ಹೋದ ಜೀವ ಬಂದಂತಾಗಿತ್ತು...!

ಒಂದು ರೀತಿಯ ಕ್ರತಜ್ಞತಾ ಭಾವ ಬಂದಿತು.....

ಸತ್ಯ ಅವನಿಗೆ ಐನೂರು ಕೊಡಲು ಹೋದ....

ಅವನಿಗೆ ಪ್ರಾಮಾಣಿಕರನ್ನು ಕಂಡರೆ ಹ್ರದಯ ಕರಗಿ ಹೋಗುತ್ತದೆ...

"ಇದೆಲ್ಲಾ ಬ್ಯಾಡ್ರೀ ಸಾಹೇಬ್ರೆ..

ನೂರು ರುಪಾಯಿ ಸಾಕ್ರಿ.."


ನಾವು ಎಷ್ಟೇ ಹೇಳಿದರೂ ನೂರು ರುಪಾಯಿ ತೆಗೆದು ಕೊಂಡ..

"ಯಾಕಪ್ಪಾ.. ನಾವು ಖುಷಿಯಿಂದಲೇ ಕೊಡ್ತಾ ಇದ್ದೇವೆ ತಗೋ..."


" ಬ್ಯಾಡ್ರೀ ಸಾಹೇಬ್ರೆ....

ನಾನು ಅಷ್ಟೇಲ್ಲಾ ಒಳ್ಳೆ ಮನುಷ್ಯ ಆಲ್ರೀ..

ನನ್ನ ಥರ ಆಟೋ ಇಲ್ಲಿ ಎಲ್ಲೂ.. ಇಲ್ರೀ..

ನೀವು ಪೋಲಿಸ್ ಕಂಪ್ಲೇಂಟು ಕೊಟ್ರೆ ...

ನಂಗೇ ಒಳಗೆ ಹ್ಹಾಕಿ...

ಒದ್ದು ವಸೂಲಿ ಮ್ಮಾಡ್ತಾರೀ..

ನಂಗೆ ಇಷ್ಟೇ ಸಾಕ್ರಿ....

ನನ್ನ " ಆಟೋ ".. ಥರ....

ನಾನೂ...ಒಂಥರಾ "ಅಡಪೋಟ್ರು.. " ಸಾಹೇಬ್ರಾ..! ಬರ್ತಿನ್ರಿ..."


ಅನ್ನುತ್ತ ಆಟೋ ಹತ್ತಿ ಸ್ಟಾರ್ಟ್ ಮಾಡಿದ..

ಆಟೋ ನೋಡಿದೆ..

ಬ್ರೇಕು.., ಲೈಟು..., ಹಾರ್ನು..,
ಏನೂ ಇಲ್ಲದ .. ಆಟೋಕ್ಕೆ..


ಮೇಲಿನ " ಹೊದಿಕೆಯೂ " ಅದಕ್ಕೆ ಇಲ್ಲವಾಗಿತ್ತು...!


(ಇದರ ಹಿಂದಿನ "ಪೋಸ್ಟ್" ಓದಿ...)
( ಈ ಲೇಖನಕ್ಕೆ ಓದುಗರ ಉತ್ತಮ ಪ್ರತಿಕ್ರಿಯೇಗಳಿವೆ ಓದಿ..)