Tuesday, March 20, 2012

ಸುರುಳಿ..................,


ನಾನೇನೂ ಪೋಲಿಯಲ್ಲ..
ಹಾಗಂತ ಸಭ್ಯಸ್ಥನೂ ಅಲ್ಲ...
ಹೊಸ ಹುಡುಗಿಯೊಬ್ಬಳು ನಮ್ಮ ಆಫೀಸಿಗೆ ಇವತ್ತು ಬಂದಿದ್ದಾಳೆ..
ಅವಳನ್ನು ನೋಡ್ತಾ ಇದ್ದೆ..


ಕೆನ್ನೆಯ ಮೇಲಿನಿಂದ ಕೂದಲು ..
ಜಾರಿ ಇಳಿದು ..
ಕುತ್ತಿಗೆಯ ಬಳಿ ಸುರುಳಿ ಸುತ್ತಿದ್ದು ನೋಡ್ತಾ ಇದ್ದೆ...!


ಬಹಳ ಚಂದ ಆ ಕೆನ್ನೆಯ ಉಬ್ಬು..!


ನೋಡ್ತಾನೇ ಇದ್ದೆ..


ತಟ್ಟನೆ ಅವಳೂ ನೋಡಿದಳು..!


ನಾನು ಗಲಿಬಿಲಿಗೊಂಡು ದೃಷ್ಟಿ ಬದಲಿಸಿದೆ..


ಹೆಣ್ಣು ಮಕ್ಕಳಿಗೆ ..
ಯಾರಾದರೂ ತಮ್ಮ ಬೆನ್ನಿನ ಹಿಂದೆ ನೋಡಿದರೂ ಗೊತ್ತಾಗಿ ಬಿಡುತ್ತದಂತೆ...!


ಚಂದ ನೋಡುವ ವಯಸ್ಸು.. 
ಮನಸ್ಸು ...
ಮತ್ತು ಮತ್ತೂ ನೋಡುವ ಆಸೆ...


ಆಗಾಗ ಕದ್ದು ಕದ್ದು ನೋಡುತ್ತಿದ್ದೆ...


ಆಕೆ ಜವಾನನ್ನು ಕರೆದು ಒಂದು ಚೀಟಿ ಕೊಟ್ಟಳು..
ಆತ ನನಗೆ ತಂದು ಕೊಟ್ಟ..


"ಕದ್ದು ನೋಡುವದೇಕೆ?
ಕ್ಯಾಂಟೀನಲ್ಲಿ ಕಾಫೀ ಕುಡಿಯೋಣ ಬನ್ನಿ..
ಖರ್ಚೆಲ್ಲ ನನ್ನದು..
ಹಣ ಮಾತ್ರ ನಿಮ್ಮದು...."


ನಾನು ಆಕೆಯನ್ನು ನೋಡಿದೆ.. 
ಆಕೆಯ ನಗುವೂ ಬಹಳ ಸುಂದರವಾಗಿತ್ತು...


ಕೆಲವೊಬ್ಬರು ಹಾಗೇನೆ...


ಬಲುಬೇಗ ನಮ್ಮನ್ನು ಆವರಿಸಿಕೊಂಡು ಬಿಡುತ್ತಾರೆ...
ಹೇಗೆ?
ಏನು?
ಪೂರ್ವಾಪರ ವಿಚಾರ ಗೊತ್ತಿಲ್ಲದೆಯೇ ಆಕೆ ತುಂಬಾ ಹತ್ತಿರವಾಗಿಬಿಟ್ಟಳು...


ದಿನಾಲೂ ಅವಳ ಕೆನ್ನೆ, ಉಬ್ಬುಗಳ ಮೇಲಿನ ಮುಂಗುರುಳನ್ನು ನೋಡುವದು..
ಆಕೆಯೊಡನೆ ಕಾಫೀ... 
ಹರಟೆ ತುಂಬಾ ಸೊಗಸಾಗಿರುತ್ತಿತ್ತು...


"ನೀವು ನಿಮ್ಮ ಬಗೆಗೆ ಏನೂ ಹೇಳಲೇ ಇಲ್ಲ..."


"ನಾನು ಕನ್ನಡಿಗಳದಾರೂ ಹೊರದೇಶದಲ್ಲೇ ಹುಟ್ಟಿದ್ದು..
ಬೆಳೆದದ್ದು..
ಅಪ್ಪ, ಅಮ್ಮ ಇನ್ನೂ ಅಲ್ಲಿಯೇ ಇದ್ದಾರೆ..
ಒಬ್ಬಳೇ ಮಗಳು...
ಭಾರತ ನೋಡಬೇಕಿನಿಸಿತು...
ಕೆಲಸವೂ ಸಿಕ್ಕಿತು.. ಇಲ್ಲಿಗೆ ಬಂದೆ..."


ಹುಡುಗಿ ತನ್ನ ಬಗೆಗೆ ಹೇಳಿ ನನ್ನೆಡೇಗೆ ಪ್ರಶ್ನಾರ್ಥಕವಾಗಿ ನೋಡಿದಳು..


"ನಾನು ತುಂಬಾ ಖುಷಿ ಮನುಷ್ಯ...
ಅಪ್ಪ,ಅಮ್ಮ ಹಳ್ಳಿಯಲ್ಲಿರ್ತಾರೆ..
ಅಪ್ಪ, ಅಮ್ಮನ ಮುದ್ದಿನ ಮಗ..."


ದಿನಗಳು..
ದಿನ ನಿತ್ಯದ ಸಂಗತಿಗಳು ಹೀಗೆಯೇ ಇರುವದಿಲ್ಲವಲ್ಲ...
ಬದಲಾಗುತ್ತದೆ..
ಬದಲಾಗುತ್ತಲೇ ... ಇರುತ್ತದೆ...


ಆಫೀಸಿನಲ್ಲಿ ಒಂದು ಟ್ರಿಪ್ ಇಟ್ಟಿದ್ದರು...


ಜಂಗಲ್ ರಿಸಾರ್ಟ್...
ತುಂಬಾ ಸುಂದರ ತಾಣ...
ರಾತ್ರಿ ಪಾರ್ಟಿ ಕೂಡ ಇತ್ತು...


ಎಲ್ಲರೂ ತಮ್ಮ ತಮ್ಮ ಗೆಳೆಯರ ಸಂಗಡ ಹರಟುತ್ತಿದ್ದರು...


"ನಾನು ...
ಅಪರೂಪಕ್ಕೆ ಡ್ರಿಂಕ್ಸ್ ತೆಗೆದು ಕೊಳ್ಳುತ್ತೇನೆ...
ನಿಮ್ಮ ಅಭ್ಯಂತರವಿಲ್ಲದಿದ್ದರೆ ಇವತ್ತೂ ಕೂಡ...
ಪ್ಲೀಸ್..."


" ಪ್ಲೀಸ್ , ಗಿಸ್ ... ಏನೂ ಬೇಡ..
ನನಗೂ ಒಂದು ತನ್ನಿ..
ನನಗೂ ರೂಢಿ ಇದೆ..."


ಸನಿಹದಲ್ಲಿ...
ಚಂದದ ಹುಡುಗಿ... !
ಸ್ವಲ್ಪ ಸ್ವಲ್ಪವಾಗಿ ಏರುತ್ತಿರುವ ನಶೆ...!


ವಾಹ್ !!


ಸಮಯ ..
ಈ ಕ್ಷಣಗಳು..
ಇಲ್ಲೇ ಎಲ್ಲೋ ಒಮ್ಮೆ ನಿಂತು ಹೋಗಬೇಕಿತ್ತು ಅನಿಸಿತು..!


ಆದರೆ ... ನಿಲ್ಲಲಿಲ್ಲ...


" ಹುಡುಗಿ...
ನೀವು ಅಪಾರ್ಥ ಮಾಡಿಕೊಳ್ಳದಿದ್ದಲ್ಲಿ ..
ನನಗೆ ಒಂದು ಆಸೆ ಇದೆ...


ಒಪ್ಪಿಗೆ ಕೊಟ್ಟರೆ ಕೇಳುತ್ತೇನೆ..."


"ಕೇಳಿ.. 
ಅದಕ್ಕೇನಂತೆ..?"


"ಈ ರಾತ್ರಿ ನಿಮ್ಮೊಡನೆ ಕಳೆಯುವಾಸೆ...
ಇಬ್ಬರೂ ..
ಒಂದಾಗುವಾಸೆ... 
ಪ್ಲೀಸ್...
ಇಲ್ಲ ಅನ್ನಬೇಡಿ.."


"ನನ್ನನ್ನು ನೋಡಿ ಕಾಮಿಸುವ ಆಸೆ ಆಯ್ತಾ?
ಅಷ್ಟೇನಾ?
ನನ್ನಲ್ಲಿ ಪ್ರೀತಿ ಹುಟ್ಟಲಿಲ್ವಾ?"


"ಹುಡುಗಿ..
ನಿನ್ನ ಬಗೆಗೆ ತುಂಬಾ ತುಂಬಾ ಪ್ರೀತಿ ಇದೆ..


ಪ್ರೀತಿ ಇರದಿದ್ದಲ್ಲಿ "ಕಾಮ" ಸಾಧ್ಯನಾ?


ನನಗೆ ಈ ಸಮಯಕ್ಕೆ..
ಈ ಸಂದರ್ಭದಲ್ಲಿ ಈ "ಆಸೆ" ಹುಟ್ಟಿತು...


ಇಷ್ಟವಿಲ್ಲದಿದ್ದಲ್ಲಿ ಬೇಡ.. ಯಾವುದಕ್ಕೂ ಬಲವಂತ ಇಲ್ಲ..."


"ಹುಡುಗಾ...
ಕಾಮ ದೈಹಿಕ ಅಗತ್ಯ...
ಪ್ರೀತಿ ಮಾನಸಿಕ ಅಗತ್ಯ...


ಅಪ್ಪ, ಅಮ್ಮರಿಂದ.. ಗೆಳೆಯರಿಂದ ದೂರವಿರುವ ನನಗೆ ..
ನಿನ್ನ "ಪ್ರೀತಿ" ಬೇಕು...


ನನಗೂ ಆಸೆ ಇಲ್ಲ ಅಂತ ಏನಿಲ್ಲ..
ಇದೆ..
ಆದರೆ...."


"ಆದರೆ.... ಏನು?"


"ಗಂಡಿನ ಅನುಭವ ನನಗೂ ಇದೆ...
ಪರದೇಶದಲ್ಲಿ  ನನಗೂ ಗೆಳೆಯರಿದ್ದರು...


ರೂಮಿನ ಕತ್ತಲೆಯಲ್ಲಿ ನಡೆಯುವದು ಕಾಮದಾಟವಲ್ಲ..


ಅದು ಒಂದು ಹೊಡೆದಾಟ..


ಅಲ್ಲಿ ಯಾರೋ ಒಬ್ಬರು ಸೋಲುತ್ತಾರೆ..
ಯಾರೋ ಒಬ್ಬರು ಗೆಲ್ಲುತ್ತಾರೆ..


ಸೋಲು, ಗೆಲುವಿನ ಮನಸ್ಥಿತಿಯನ್ನು..
ಗಂಡು, ಹೆಣ್ಣು ಹೇಗೆ ನಿಭಾಯಿಸುತ್ತಾರೆ ಎನ್ನುವದರ ಮೇಲೆ ..
ಮುಂದಿನ ಸಂಬಂಧದ ...
ಅಳಿವು..
ಉಳಿವು... ಆಲ್ವಾ?


ಹುಡುಗಾ..
ಯಶಸ್ವಿ  ದಾಂಪತ್ಯವೆಂದರೆ ಇದೇ ತಾನೆ?


ದೌರ್ಬಲ್ಯದೊಡನೆಯ..ಅಡ್ಜಸ್ಟಮೆಂಟ್...!
ಬೇಕು ಬೇಡಗಳೊಡನೆಯ ಹೊಂದಾಣಿಕೆ.. !.."


ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ...


"ಹುಡುಗಾ..
ನಮ್ಮಿಬ್ಬರ ಇಷ್ಟು ಚಂದದ ಗೆಳೆತನ..
ಸೋಲು ..
ಗೆಲುವಿನಲ್ಲಿ ಹಳಸುವದು ಬೇಡ..


ಈ ಗೆಳೆತನಕ್ಕೆ ಇನ್ನಷ್ಟು ಸಮಯ ಕೊಡೋಣ...


ಅದೃಷ್ಟವಿದ್ದಲ್ಲಿ...
ಅವಕಾಶವಿದ್ದಲ್ಲಿ ಅನುಕೂಲವಾದ ಸಮಯ ಸಿಕ್ಕೇ ಸಿಗುತ್ತದೆ..."


ನನಗೆ ಬಹಳ ನಿರಾಸೆಯಾಯಿತು...
ಅವಳ ಮಾತಿಗೆ ಒಪ್ಪಿಕೊಂಡೆ..


ಮರುದಿನದಿಂದ ಮತ್ತೆ ಅದೇ ಆಫೀಸ್...
ಕಾಫಿ ಹರಟೆ..


ಟ್ರಿಪ್ಪಿನ ನಂತರ ನನ್ನ ಆಸೆಗಳ..
ಕನಸುಗಳ ಬಣ್ಣ ಬದಲಾಗಿತ್ತು...


ಮಾತಿನ ಮಧ್ಯದಲ್ಲಿ ನಾನು ಮತ್ತೆ ..ಮತ್ತೆ ..
ನನ್ನ ಬೇಡಿಕೆ ಇಡುತ್ತಿದ್ದೆ...
ಆಕೆ ನಗುತ್ತ ಸಲುಗೆಯಿಂದ  ಬೇಡವೆನ್ನುತ್ತಿದ್ದಳು...


ನಾನು ಆಕೆಯ ಕೆನ್ನೆಯ ಉಬ್ಬು... ಮುಂಗುರುಳಗಳ ನೋಡುತ್ತಲೇ ಇರುತ್ತಿದ್ದೆ...


ಇಷ್ಟು ಮುಕ್ತವಾಗಿ ಮಾತನಾಡಿದ ಮೇಲೂ ...
ಸಂಬಂಧ ಮುಂದುವರೆಯುತ್ತಿರುವಾಗ..
ಕಂಡ ಕನಸುಗಳು ನನಸಾಗಲು ಹಾತೊರೆಯುತ್ತಿದ್ದವು...


ಆಸೆಗಳನ್ನು ಬಲವಂತವಾಗಿ ಹತ್ತಿಕ್ಕುತ್ತಿದ್ದೆ...


ಒಂದು ದಿನ ಆಕೆ ಬರಲಿಲ್ಲ...
ಫೋನ್ ಮಾಡಿದೆ ಫೋನ್ ತೆಗೆದುಕೊಳ್ಳಲಿಲ್ಲ..


ಆ ದಿನ ನನಗೆ ಬಹಳ ಬೇಸರದ ದಿನ...


ಮರುದಿನವೂ ಹಾಗೇ ಆಯ್ತು...


ಒಂದು ವಾರ ಕಳೆಯಿತು...


ಒಂದು ಅವಳಿಂದ ಎರಡಕ್ಷರದ ಮೇಲ್ ಬಂತು 


"ಹುಡುಗಾ .. ಹೇಗಿದ್ದೀಯಾ ?...."


ನನಗೆ ಖುಷಿ ಆಯ್ತು...


"ನನ್ನ ಪ್ರೀತಿಯ ಮುಂಗುರುಳೆ...


ನಿನ್ನನ್ನು ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಿದೆಯಾ?
ನೀನಿಲ್ಲದ...
ನೀನು ಕಣ್ಣಿಗೆ ಕಾಣದ.. 
ನಿನ್ನೊಡನೆ ಮಾತನಾಡದ ದಿನಗಳನ್ನು ಕಳೆಯುವದು ಕಷ್ಟ...


ಪ್ರೀತಿಯ ..ಸುರುಳಿ  ಮುಂಗುರುಳೆ..!


ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ...
ನೀನಿಲ್ಲದ ಕ್ಷಣಗಳಲ್ಲಿ  ನನಗೆ ಮತ್ತಷ್ಟು ಅರಿವಾಯ್ತು...


ದಯವಿಟ್ಟು ಇಲ್ಲವೆನ್ನಬೇಡ...


ನಮ್ಮಿಬ್ಬರ ಸಂಬಂಧಕ್ಕೆ "ಸಮಯ" ಕೊಟ್ಟಿದ್ದು ಸಾಕು...
ನಾವಿಬ್ಬರೂ ಮದುವೆಯಾಗೋಣ..."


ನನ್ನ ಮೇಲ್ ಗೆ ಉತ್ತರ ಬರಲಿಲ್ಲ...


ಮತ್ತೆ ನಾಲ್ಕಾರು ದಿನಗಳ ಮೌನ...!


ಯಾವ ಸುದ್ಧಿಯೂ ಇಲ್ಲ..


ಮತ್ತೊಂದು ದಿನ ಒಂದು ಎಸ್ಸೆಮ್ಮೆಸ್ಸ್ ಬಂದಿತು...


"ಹುಡುಗಾ...
ಅಂದು ನೀನು ನನ್ನನ್ನು..
ನನ್ನ ದೇಹವನ್ನು  ಬಯಸಿದ್ದೆ...


ನೆನಪಿದೆಯಾ ?...


ಇವತ್ತು ನಮ್ಮ ಮನೆಗೆ ಬರ್ತೀಯಾ?


ಕಾಯ್ತಾ ಇರ್ತೀನಿ...
ನಿನಗಾಗಿ ..... ನಾನೊಬ್ಬಳೆ..."


ವಾಹ್.. !!
ನನಗೆ ಹಾರಿ ಕುಣಿಯಬೇಕೆನಿಸಿತು...!


ಸ್ವಲ್ಪವೂ ತಡಮಾಡದೆ ಅವಳ ಮನೆಗೆ ಓಡಿದೆ...!!


ಬಾಗಿಲು ಸಣ್ಣದಾಗಿ ತೆರೆದಿತ್ತು...


ಎದೆಯಲ್ಲಿ ಢವ ಢವ....!


ಒಂದು ಎಸ್ಸೆಮ್ಮೆಸ್ ಬಂದಿತು..


" ಹುಡುಗಾ...
ಒಳಗೆ ಬಾ..
ಅಲ್ಲಿ ಟಿಪಾಯಿಮೇಲೆ ಒಂದು ಪತ್ರವಿದೆ ದಯವಿಟ್ಟು ಓದು..."


ನಾನು ಲಗುಬಗೆಯಿಂದ ಕೈಗೆತ್ತಿಕೊಂಡೆ...


"ಹುಡುಗಾ...
ಅಂದು ನೀನು ನನ್ನನ್ನು ಬಯಸಿದ್ದೆ..
 ಆ  ಆಸೆ ಇಂದು ನನ್ನ ಆಸೆ...


ನನಗೂ ನಿನ್ನೊಡನೆ ಸೇರಬೇಕು...


ಯಾಕೆಂದರೆ ನನ್ನೊಡನೆ ಸಮಯ ಜಾಸ್ತಿ ಇಲ್ಲ...
ಹೋಗುವದೊರಳಗೆ ದಯವಿಟ್ಟು ನನ್ನ ..
ಅಂತಿಮ..
ಕೊನೆಯ ಆಸೆಯನ್ನು ನೆರವೇರಿಸು...


ಅರ್ಥ ಆಗಲಿಲ್ಲವಾ?


ನಾನು ಕ್ಯಾನ್ಸರ್ ರೋಗಿ...


ಅತ್ತು.. ಕರೆಯುವದು ಬೇಡ...
ನನ್ನ ಪಾಲಿಗೆ ಬಂದಿದ್ದು ಇಷ್ಟು... 
ಸ್ವೀಕರಿಸಿದ್ದೇನೆ...


"ಕಿಮೋಥೆರೆಪಿ" ಮಾಡಿದ್ದಾರೆ... ಅದರಿಂದ ಪ್ರಯೋಜನವಿಲ್ಲ...


ನಿನ್ನ ಅನುಕಂಪವೋ..
ಪ್ರೀತಿಯೋ.., 
ಪ್ರೇಮವೋ ನನಗೆ ಗೊತ್ತಿಲ್ಲ...!


ಹೇಗಾದರೂ ದಯವಿಟ್ಟು ಬಾ...
ಇಂದು ನನಗೆ ನೀನು ನನ್ನಾಸೆಯಾಗಿ ಬಾ...


ನನ್ನ ಸಾವು ನೆನಪಾಗಿ ..
ಇದು ನಿನ್ನಿಂದ ಅಸಾಧ್ಯ ಅಂತ ಅನ್ನಿಸಿದರೆ ಬೇಡ ಬಿಡು..


ನನಗೆ ನಿನ್ನ ನಿರಾಕರಣದಲ್ಲೂ ದೂರು ಇಲ್ಲ...


ಅಂದು ನಾನು ನಿರಾಕರಿಸಿದೆ..
ಇವತ್ತು ನೀನು...


ಇಷ್ಟವಿಲ್ಲದಿದ್ದರೆ ಹಾಗೇಯೇ ಹೊರಟು ಹೋಗು... 
ಒಳಗೆ ಬರಬೇಡ...


ನಿನ್ನನ್ನು ಬಯಸುವ ಈಗಿನ ನನ್ನ ಮನಸ್ಥಿತಿಯಲ್ಲಿ ...
ನನಗೆ ಬೇರೆ ಏನೂ ಬೇಕಿಲ್ಲ..
ನಿನ್ನ ಅನುಕಂಪದ ಮಾತೂ ಕೂಡ ಬೇಡ..


ನಿನ್ನ ಯಾವುದೇ ನಿರ್ಣಯ ನನಗೆ ಸಮ್ಮತ....


ನಿನ್ನ ಪ್ರೀತಿಯ..
ಸುರುಳಿ ಮುಂಗುರುಳು..."


ನನಗೆ ದಿಕ್ಕು ತೋಚಂದಂತಾಯಿತು...


ಏನು ಮಾಡಲಿ........?
ಏನು ಮಾಡಲಿ............?


ಅವಳನ್ನು ಮನಸಾರೆ ಪ್ರೀತಿಸುತ್ತಿರುವದಂತೂ ನಿಜ...


ಆಕೆಯ ಬದುಕಿನ ಕೊನೆಯ ಆಸೆ...!


ಪ್ರೀತಿಯ ಮುಖವೇ ಇರದ ಯಾರ್ಯಾರೋ ಸಂಗಡ ಮಲಗಿದ್ದಿದೆ...
ಹಣ ಕೊಟ್ಟು ಸುಖವನ್ನು ಅರೆಸಿದ್ದು ಇದೆ...


ಇಷ್ಟು ದಿನ ಈಕೆಯನ್ನು ಪ್ರೀತಿಸಿದ್ದೇನೆ...
ಬಯಸಿದ್ದೇನೆ..


ಅವಳ ಆಸೆಯನ್ನು ನೆರವೇರಿಸಿ ಬಿಡುವದೇ ಸೂಕ್ತ...


ಸರಿ...


ಹಾಲಿನಿಂದ ಬೆಡ್ ರೂಮಿನ ಹತ್ತಿರ ಬಂದೆ...!


ಬಾಗಿಲು ಅಲ್ಲಿಯೂ ಸಣ್ಣಗೆ ತೆರೆದಿತ್ತು...


ಒಳಗೆ ಪೂರ್ತಿಯಾಗಿ ಕತ್ತಲೆ ಇಲ್ಲದಿದ್ದರೂ..
ಯಾವುದೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ...


ನಾನು ಅವಳಿದ್ದ ಹಾಸಿಗೆ ಕಡೆ ಹೋದೆ...


ಚಾದರ ಹೊದ್ದು ನನಗಾಗಿ ಕಾಯುತ್ತಿದ್ದಳು...


ಬಿಗಿದಪ್ಪಿದೆ...!!


ಮುತ್ತಿಟ್ಟೆ...!!


ಅಷ್ಟು ದಿನದಿಂದ ಕಾಯುತ್ತಿದ್ದ ..
ಆ ಕೆನ್ನೆ ..!
ಆ ಕುತ್ತಿಗೆ ಎಲ್ಲವನ್ನು ಮುತ್ತಿಡತೊಡಗಿದೆ...!


ಅವಳ ಮುಚ್ಚಿದ ಕಣ್ಣುಗಳನ್ನೊಮ್ಮೆ ನೋಡಬೇಕೆನಿಸಿತು...


ಕಿಡಕಿಯಿಂದ ಸಣ್ಣ ಬೆಳಕು ಬರುತ್ತಿತ್ತು...


ಬೊಗಸೆಯಲ್ಲಿ ಅವಳ ಮುಖ ಹಿಡಿದು ನೋಡಿದೆ...


ನನಗೆ ಆಘಾತವಾಯಿತು...!


ನಿಸ್ತೇಜ ಕಣ್ಣುಗಳು...! 
ಉದುರಿದ ತಲೆಯ ಕೂದಲು...!


ಸುಕ್ಕುಗಟ್ಟಿದ ಚರ್ಮ...!
ಕಳೆಗುಂದಿದ ಕೆನ್ನೆ...!


ನಾನು  ನನಗರಿವಿಲ್ಲದಂತೆ  ತಣ್ಣಗಾದೆ.........
ನಿಸ್ತೇಜನಾದೆ...


ಬಿಸಿಯೆಲ್ಲ ತಣ್ಣಗಾಯಿತು...


ಮಂಚದ ತುದಿಯಲ್ಲಿ ಕುಳಿತುಕೊಂಡೆ...


"ಹುಡುಗಾ ಏನಾಯ್ತು?...
ಬಾ.. ಬೇಗ..."


ಆಕೆ ಕೈ ಹಿಡಿದು ಎಳೆದಳು...


"ಹುಡುಗಿ...
ನಾನು ನಿನ್ನನ್ನು ಮನಸಾರೆ ಪ್ರೀತಿಸಿದ್ದು ನಿಜ...
ನಿನ್ನನ್ನು ...
ನಿನ್ನ ದೇಹವನ್ನೂ ಬಯಸಿದ್ದೂ ನಿಜ...


ಯಾರನ್ನಾದರೂ ...
ಯಾವ ಸ್ಥಿತಿಯಲ್ಲಾದರೂ ಪ್ರೀತಿಸಬಹುದು...


ಕಾಮ ಹಾಗಲ್ಲ ಕಣೆ...
ಇದಕ್ಕೆ ಇನ್ನೂ ಏನೇನೋ ಬೇಕು...!


ನಿನ್ನ ಆಸೆ ಈಡೇರಿಸಲು ನನ್ನಿಂದ ಆಗ್ತಾ ಇಲ್ಲ...


ದಯವಿಟ್ಟು ಕ್ಷಮಿಸು..."






( ಈ ಕಥೆಗೆ ಸುಂದರ ಪ್ರತಿಕ್ರಿಯೆಗಳಿವೆ..
ದಯವಿಟ್ಟು ಓದಿ...)

Saturday, January 28, 2012

ರಾಸಾಯನಿಕ...


ನಾನೆಲ್ಲಿ ತಪ್ಪಿದೆ.. ಅಂತ ನನಗೇ ಗೊತ್ತಾಗುತ್ತಿಲ್ಲ...


ಇದು ನನ್ನಿಷ್ಟದ ಮದುವೆಯಾಗಿತ್ತು...
ಹುಡುಗ ನನ್ನನ್ನು ಕಾಡಿ.. ಬೇಡಿ ಮದುವೆಯಾಗಿದ್ದ..
ಅವನ್ನನ್ನು ನಾನೂ ಸಹ ಬೆಟ್ಟದಷ್ಟು ಪ್ರಿತಿಸಿಯೇ ಮದುವೆಯಾದದ್ದು...


ಸ್ವಂತ ಅಂದದ ಮನೆ..
ಕಾರು...
ಶ್ರೀಮಂತಿಕೆ... 
ಸರಸ ದಾಂಪತ್ಯ... ಎಲ್ಲವೂ ಸರಿಯಾಗಿತ್ತು...


ಎಲ್ಲಿ ತಪ್ಪಿದ್ದು....?


ಮದುವೆಯಾದ ಒಂದು ವರುಷಕ್ಕೆ ಕೆಲಸ ಬಿಡಬೇಕಾಯಿತು...
ಪುಟ್ಟ.. ಮುದ್ದಾದ ಮಗು ನಮ್ಮಿಬ್ಬರ ಜೊತೆಯಾಯಿತು...


ಆ ಮಗುವಿನ ಪಾಲನೆ, ಪೋಷಣೆ ನಾನಂದುಕೊಂಡಂತೆ ಇರಲಿಲ್ಲ...


ತಾಯಿತನ ಹೆಮ್ಮೆ ಎನಿಸಿದರೂ...
ನಿದ್ದೆಯಿಲ್ಲದ ರಾತ್ರಿಗಳು...
ಮಗುವಿನ ಒದ್ದೆಯಾದ ಬಟ್ಟೆಗಳು...
ಹೆಸಿಗೆಯನ್ನು ಸ್ವಚ್ಛಗೊಳಿಸುವದು...


ಪಾಪುವಿನ ಬೇಕು ಬೇಡಗಳು...
ಎಲ್ಲಕ್ಕಿಂತ ಪಾಪುವನ್ನು ಸಮಾಧಾನಗೊಳಿಸುವದು... 
ಇವೆಲ್ಲ ಕೇವಲ ನನ್ನೊಬ್ಬಳ  ಜವಾಬ್ದಾರಿಯಾಗಿತ್ತು...


ರಾತ್ರಿಯೆಲ್ಲ ಜಾಗರಣೆ...
ಹಗಲಲ್ಲಿ ಮನೆಕೆಲಸ...


ಗಂಡ ಬೆಳಿಗ್ಗೆ ಎಂಟುಗಂಟೆಗೆ ಮನೆ ಬಿಟ್ಟವನು ಬರುವದು ರಾತ್ರಿ ಹತ್ತುಗಂಟೆಗೆ...
ಊಟ ಮಾಡಿದ ಶಾಸ್ತ್ರ ಮಾಡಿ ಬೆಡ್ ರೂಮಿಗೆ ಹೋಗಿ ಮಲಗಿ ಬಿಡುತ್ತಿದ್ದ..


ಒಂದು ಪ್ರೀತಿಯ ಮಾತು...
ನಿನ್ನ ಜೊತೆ ನಾನಿದ್ದೇನೆ ಎನ್ನುವಂಥಹ ಒಂದು ಸಣ್ಣ ಮಾತು..,
ಸಹಾಯ  ನಾನು ನಿರೀಕ್ಷಿಸುವದು ತಪ್ಪೇ...?


ಸಹಾಯದ ಮಾತು ಪಕ್ಕಕ್ಕಿರಲಿ...
ಒಂದು ಪ್ರೀತಿಯ..
ಮೆಚ್ಚುಗೆಯ ನೋಟವೂ ಇರಲಿಲ್ಲ...


ಏನಾಯಿತು ನನ್ನ ಗೆಳೆಯನ ಪ್ರೀತಿಗೆ...?


ಒಂದು ದಿನ ಅವನನ್ನು ಬಲವಂತವಾಗಿ ಕುಳ್ಳಿರಿಸಿ ಕೇಳಿಯೇ ಬಿಟ್ಟೆ....


" ಡುಮ್ಮು ಪುಟ್ಟಾ..
ಬಹಳ ಚಂದದ ಕನಸುಗಳನ್ನು ಕಟ್ಟಿಕೊಂಡಿದ್ದೆ...
ನಮ್ಮ ಪುಟ್ಟ ಸಂಸಾರ.. ಮಗು.. ಮನೆ...


ಎಲ್ಲವೂ ಸಿಕ್ಕಿದೆ...
ಆದರೆ ನೀನು .. ನಿನ್ನ ಪ್ರೀತಿ..ಮಾತ್ರ ದೂರವಾಗಿಬಿಟ್ಟಿದೆ.....


ನನ್ನ ಕಡೆ ನೋಡುತ್ತಲೂ ಇಲ್ಲ...
ನನ್ನ ಮೇಲಿನ ಆಕರ್ಷಣೆ, ಪ್ರೀತಿ ಈಗ ನಿನಗಿಲ್ಲ...."


ನನ್ನವ ನನ್ನ ಮುಖವನ್ನೇ ನೋಡುತ್ತ ಹೇಳಿದ..


"ಡುಮ್ಮಕ್ಕಿ..
ಹಾಗಲ್ಲ ಅದು...
ಹಗಲು, ರಾತ್ರಿ ದುಡಿಯುತ್ತ ನಾನೊಬ್ಬನೇ ಖುಷಿಯಾಗಿದ್ದೇನೆ ಅಂದುಕೊಂಡಿದ್ದೀಯಾ...?
ಇಲ್ಲ ಕಣೆ ಡುಮ್ಮಕ್ಕಿ...
ನಾನು ಇಷ್ಟೆಲ್ಲ ದುಡಿಯುತ್ತಿರುವದು ಯಾಕೆ...?


ನಮ್ಮ ಪುಟ್ಟ ಮಗುವಿಗೆ... ನಮ್ಮ ಮುಂದಿನ ಬದುಕಿನ ಭದ್ರತೆಗಾಗಿ.."


ನನಗೆ ಕೋಪ ಬಂತು...


" ಡುಮ್ಮು ಪುಟ್ಟ..
ಬದುಕು ನನಗೆ ಬೋರಾಗಿದೆ...


ಇತ್ತೀಚೆಗೆ ಸುಂದರ ಕನಸುಗಳೇ ಬೀಳುತ್ತಿಲ್ಲ...
ಮಗುವಿನ ಗಲೀಜು ಸ್ವಚ್ಛಗೊಳಿಸಿದ ಕನಸು ಬೀಳುತ್ತವೆ ಆಗಾಗ..


ನಾನು  ನಿನ್ನೊಟ್ಟಿಗೆ ಮಲಗಿದ್ದರೂ..
ರಾತ್ರಿಯೆಲ್ಲ ಒಂಟಿಯಾಗಿಬಿಡುತ್ತೇನೆ...


ನಿರೀಕ್ಷೆಗಳೇ ಇಲ್ಲದೆ ಬೆಳಗಾಗಿಬಿಡುತ್ತವೆ...
ಎಲ್ಲವೂ ಯಾಂತ್ರಿಕವಾಗಿಬಿಟ್ಟಿದೆ...


ಹೊಸತನ.. ಹೊಸ ಬೆಳಕು ಏನೂ ಇಲ್ಲ...


ನೀನು ಹೊರಗಡೆ ಹೋಗಿಬಿಡುತ್ತೀಯಾ... ನಾನೇನು ಮಾಡಲಿ...?"


ಡುಮ್ಮು ಪುಟ್ಟನ ಕಣ್ಣಲ್ಲಿ  ನಗು ಕಂಡಿತು...


"ಡುಮ್ಮಕ್ಕಿ...
ಇಷ್ಟೇ ತಾನೆ...?
ನಮ್ಮ ಮನೆಯಲ್ಲಿ ಇಂಟರ್ ನೆಟ್ ಇದೆ..
ನಿನಗೊಂದು ಫೇಸ್ ಬುಕ್ ಅಕೌಂಟ್ ಓಪನ್ ಮಾಡಿಕೊಡುತ್ತೇನೆ...
ಅಲ್ಲಿ ಗೆಳೆಯರು ಸಿಗುತ್ತಾರೆ...


ನಿನ್ನ ಹಳೆಯ ಕಾಲೇಜ್  ಗೆಳತಿಯರೂ ಸಿಗುತ್ತಾರೆ...


ಅವರೊಡನೆ ಚಾಟ್ ಮಾಡು... ಹರಟು...
ಅವರ ಕಷ್ಟ, ಸುಖಗಳ ಬಗೆಗೆ ಮಾತಾಡು...


ಸುಖ, ಸಂತೋಷ ಎಲ್ಲವೂ.. ಹೋಲಿಕೆಯಲ್ಲಿರುತ್ತವೆ ಕಣೆ..
ಅವರನ್ನು ಕಂಡು ನೀನು ಸಂತೋಷ ಪಡು..."


ನನಗೂ ಕುತೂಹಲವಾಯಿತು...
ನನ್ನವ  ಅದೇ ಕ್ಷಣ ನನಗೆ ಫೇಸ್ ಬುಕ್ ಮಾಡಿಕೊಟ್ಟ...


ಆದರ ಬಗೆಗೆ ಎಲ್ಲವಿವರಗಳನ್ನೂ ಹೇಳಿಕೊಟ್ಟ...


ನನಗೂ ಖುಷಿಯಾಯಿತು....
ಮರು ದಿನದಿಂದ ನನ್ನ ಬದುಕಿನಲ್ಲಿ ಹೊಸ ಗಾಳಿ ಬೀಸತೊಡಗಿತು...
ನನ್ನ ಅನೇಕ ಗೆಳೆಯ ಗೆಳತಿಯರು ಸಿಕ್ಕರು...


ಒಂದು ದಿನ ನಾನು ನನ್ನ ಮಗುವನ್ನು ಮುದ್ದಿಸುವ ಫೋಟೊ ಹಾಕಿದ್ದೆ...


" ಅದೇ.. 
ಮುದ್ದುಕಣ್ಣುಗಳು...
ಮುದ್ದು..
ಮಗುವಿನ ಮುಖದಲ್ಲಿ ಅದೇ.. ನಗು..!.."


ಯಾರಪ್ಪಾ ಇವರು ಅಂತ ನೋಡಿದೆ...


ನನ್ನ ಕಾಲೇಜು ಸ್ನೇಹಿತ...!


ಆತ ಚಾಟ್ ಮಾಡಲು ಬಂದ...


"ನನ್ನ ನೆನಪಿದೆಯಾ...?


ನಾನು ಹಿಂದಿನ ಬೇಂಚಿನ ಹುಡುಗ...
ನಿಮ್ಮ ಕಣ್ಣುಗಳನ್ನು ನೋಡುತ್ತ ಎಷ್ಟೋ ಕವಿತೆಗಳನ್ನು ಬರೆದಿದ್ದೆ...
ಕೊಡಲು ಧೈರ್ಯವಿಲ್ಲವಾಗಿತ್ತು..
ಹೆದರ ಬೇಡಿ...
ನನಗೀಗ ಮದುವೆಯಾಗಿ ಚಂದದ ಸಂಸಾರದ ಪತಿಯಾಗಿದ್ದೇನೆ..."


ನನಗೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ...
ಒಳಗೊಳಗೆ ಖುಷಿಯಾಗಿತ್ತು...


"ಧನ್ಯವಾದಗಳು..
ನಿಮ್ಮ ಪತ್ನಿ ಏನು ಮಾಡುತ್ತಾರೆ...? ಹೇಗಿದ್ದಾರೆ..?"


ಆತ ತನ್ನ ಆಲ್ಬಮ್ಮಿನ ಲಿಂಕ್ ಕೊಟ್ಟ...
ನೋಡಿದೆ...
ತುಂಬು ಪ್ರೀತಿಯ ಸಂಸಾರ....
ಹೆಂಡತಿ ಸುಂದರಿ ಅಲ್ಲದಿದ್ದರೂ ಮಗು ಮುದ್ದಾಗಿತ್ತು...


"ಚಂದದ ಸಂಸಾರ" ಅಂತ ಪ್ರತಿಕ್ರಿಯೆ ಹಾಕಿದೆ...


ಆ ದಿನವಿಡಿ ಆ ಹುಡುಗನ ಬಗೆಗೆ ಯೋಚಿಸಿದೆ...
ನನ್ನ ಬಗೆಗೆ.. 
ನನ್ನ ಕಣ್ಣಿನ ಬಗೆಗೆ ಕವಿತೆ ಬರೆಯುವ ಹುಡುಗ ನನಗೆ ಖುಷಿ ಕೊಟ್ಟ..


ಮರುದಿನ ಮತ್ತೆ ಚಾಟ್ ಗೆ ಬಂದ...


" ನಿಮ್ಮ ಸಂಸಾರ ಹೇಗಿದೆ...?"


ನಾನು ನನ್ನ ಬಗೆಗೆ ಹೇಳಬೇಕೋ ಬೇಡವೋ ಅಂತ ಗೊಂದಲದಲ್ಲಿದ್ದೆ...


"ನಿಮ್ಮ ಕುಟುಂಬದ ಹಾಗಿಲ್ಲ...
ನನ್ನ ಗಂಡ  ದಿನಪೂರ್ತಿ ಕೆಲಸದಲ್ಲಿ ಮುಳುಗಿರುತ್ತಾನೆ..
ಚಂದದ ಮಾತು...
ನಗು ಎಲ್ಲವೂ ಅಪರೂಪ...
ಆತನಿಗೆ ನನ್ನ ಬಗೆಗೆ ಆಸಕ್ತಿಯೇ ಹೊರಟು ಹೋಗಿದೆ..."


"ನಿಮ್ಮ ಯಜಮಾನರಿಗೆ ಚಟಗಳಿವೆಯಾ...?"


"ಇಲ್ಲ..."


"ಚಟವಿಲ್ಲದ ಗಂಡ...ನೀವು ಪುಣ್ಯವಂತರು ಅಂದುಕೊಳ್ಳಿ...


ನಿಮಗೆ ಒಂದು ವಿಷಯ ಪ್ರಾಮಾಣಿಕವಾಗಿ ಹೇಳಿಬಿಡುತ್ತೇನೆ...
ನನ್ನ ಕವನಗಳ ಸ್ಪೂರ್ತಿ ನೀವು...


ನಿಮ್ಮ ಕಣ್ಣುಗಳು  ಈಗಲೂ ನನ್ನನ್ನು ಕಾಡುತ್ತವೆ...


ಅಪಾರ್ಥ ಮಾಡಿಕೊಳ್ಳಬೇಡಿ...


ಆಗ ನನ್ನ ಹದಿಹರೆಯ ಪ್ರೀತಿಸಿದ ನೆನಪುಗಳನ್ನು ಬಿಟ್ಟು ಇರಲಾಗುತ್ತಿಲ್ಲ..."


ನನಗೆ ಅವನ ನೇರವಾದ ಮಾತುಗಳನ್ನು ಕೇಳಿ ಮಾತು ಬರದಂತಾಯಿತು...
ಸಂತೋಷದ ಜೊತೆಗೆ ಕಸಿವಿಸಿಯಾಯಿತು...


"ಬೇಜಾರು ಮಾಡ್ಕೋಬೇಡಿ...
ನಿಮ್ಮೊಡನೆ ಮಾತನಾಡಿದ ನೆನಪುಗಳು ನನಗಿವೆ..
ಆದರೆ ..
ನಿಮ್ಮ ಪ್ರೀತಿ, ಪ್ರೇಮಗಳ ನನಗೆ ನಿಜವಾಗಿಯೂ ಗೊತ್ತಾಗಲಿಲ್ಲ..."


"ಪರವಾಗಿಲ್ಲ ಬಿಡಿ..
ಅಂದು ನಿಮ್ಮ ಎದುರಿಗೆ ಹೇಳಲಾಗದ ಭಾವಗಳು ...
ಇಂದು ಕವನಗಳಾಗುತ್ತಿವೆ..


ಈ ಪ್ರೀತಿ ನನ್ನದು ಮಾತ್ರ...
ನೆನಪುಗಳ ಚಿಗುರುಗಳನ್ನು ಜತನವಾಗಿ ಬಚ್ಚಿಟ್ಟುಕೊಂಡಿದ್ದೇನೆ...


ಈಗಲೂ ನೀವು ನನ್ನ ಕವನಗಳ ಸ್ಪೂರ್ತಿ...
ಈಗ..
ಇಷ್ಟು ದಿನಗಳ ನಂತರ ನನಗೆ ಸಿಕ್ಕಿದ್ದೀರಲ್ಲ..
ನನ್ನನ್ನು ಸ್ನೇಹಿತ ಅಂತ ಒಪ್ಪಿಕೊಂಡಿದ್ದೀರಲ್ಲ.. ತುಂಬಾ ತುಂಬಾ ಖುಷಿ ಆಯ್ತು.."


ನನಗೆ ಗೊತ್ತಿಲ್ಲದಂತೆ..
ನನ್ನೆದೆಯ ಢವ ಢವ ಬಡಿತ ನನಗಷ್ಟೇ ಕೇಳುತ್ತಿತ್ತು...


ಮತ್ತೊಂದು ದಿನ ನನ್ನ ಮೊಬೈಲ್ ನಂಬರ್ ತೆಗೆದುಕೊಂಡ...


ಸಂದೇಶಗಳನ್ನು ಕಳಿಸುತ್ತಿದ್ದ...ನನ್ನ ಕಣ್ಣುಗಳ ಕುರಿತಾಗಿ..

ಬರಿ ಪ್ರೀತಿ, ಪ್ರೇಮದ ಸಾಲುಗಳು..
ಅದರೊಳಗಿನ ಭಾವನೆಗಳು ನನ್ನನ್ನು ತಾಕಿದವು...
ನಾನು ಅವನ ಕವನಗಳ ಅಭಿಮಾನಿಯಾಗಿಬಿಟ್ಟೆ...


ಶಬ್ಧಗಳಲ್ಲಿ ಹೃದಯದ ಪ್ರೀತಿಯನ್ನೆಲ್ಲ ತುಂಬಿಡುತ್ತಿದ್ದ...


ನಾನು ಹಂಬಲಿಸುವ ಪ್ರೀತಿ ಇದಾಗಿತ್ತಾ...?


ಇತ್ತೀಚೆಗೆ ನನಗೆ ಕನಸುಗಳು ಬೀಳತೊಡಗಿದವು...
ಅವುಗಳಲ್ಲಿ ಬಣ್ಣಗಳೂ ಇರುತ್ತಿದ್ದವು..


ಹಳೆಯ ಹಿಂದಿ ಹಾಡುಗಳು.. 
ಅವುಗಳ ಅರ್ಥ ಇಷ್ಟವಾಗತೊಡಗಿತು...
ನನಗೆ ಗೊತ್ತಿಲ್ಲದಂತೆ ಆ ಹುಡುಗ ನನನ್ನು ಆವರಿಸಿಕೊಂಡು ಬಿಟ್ಟ..


ನನ್ನ ಸಂಸಾರವನ್ನು ಬಿಟ್ಟು ಇವನನ್ನು ಪ್ರೀತಿಸುವದು ತಪ್ಪೆಂದುಕೊಂಡರೂ..
ಮನಸ್ಸಿಗೆ ಕಡಿವಾಣವಿಲ್ಲವಲ್ಲ...


ಹಾರುತ್ತಿತ್ತು.... ಹಾರಾಡುತ್ತಿತ್ತು...


ಆತನ ಚಂದದ ಕವನಗಳಿಗೆ ಮನಸ್ಸು ಕಾಯುತ್ತಿತ್ತು...


ಆ ದಿನ ಭಾನುವಾರ..


ಆ ಹುಡುಗ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು ಬಿಟ್ಟಿದ್ದ...
ನನ್ನ ಯಜಮಾನ ಆತನನ್ನು ಆತ್ಮೀಯವಾಗಿ ಸ್ವಾಗತಿಸಿದ...


ಆ ಹುಡುಗ ಮನೆಯನ್ನೆಲ್ಲ ಸೂಕ್ಷ್ಮವಾಗಿ ಗಮನಿಸತೊಡಗಿದ..


ನನಗೆ ಕಸಿವಿಸಿಯಾಯಿತು..


ಮನೆಯತುಂಬೆಲ್ಲ ಮಗುವಿನ ಆಟಿಕೆ ಸಾಮಾನುಗಳು... 
ಬಟ್ಟೆಗಳು.. ಹರಡಿಕೊಂಡು ಬಿದ್ದಿದ್ದವು..


ಛೇ... !!


ಈತ ಬರುವದು ಮೊದಲೇ ಗೊತ್ತಿದ್ದರೆ....!


ತಕ್ಷಣ ಗಡಬಡಿಸಿ ಎಲ್ಲವನ್ನೂ ಓರಣವಾಗಿಡುವ ಪ್ರಯತ್ನ ಮಾಡಿದೆ..


ಐದು ನಿಮಿಷ ಬಿಟ್ಟು ಆತನನ್ನು ಮಾತಾನಾಡಿಸಿದೆ...
ಗಡಿಬಿಡಿಯಲ್ಲಿ ಓಡಾಡಿದ್ದರ ಪರಿಣಾಮವಾಗಿ ಏದುಸಿರುಬಿಡುತ್ತಿದ್ದೆ..


ಆತ ಮುಗುಳ್ನಕ್ಕ...


"ನಿಮ್ಮ ಯಜಮಾನರಿಂದ ನನಗೆ ಒಂದು ಸಹಾಯಬೇಕಿತ್ತು...
ನಾನು ಹೊಸ ಕಂಪ್ಯೂಟರ್ ಖರಿದಿಸುತ್ತಿರುವೆ.. ಅದರ ಬಗೆಗೆ ಮಾಹಿತಿ ಬೇಕಾಗಿತ್ತು."


" ನೀವು ನನಗೆ ಹೇಳಲೇ ಇಲ್ಲ..."


"ಸಣ್ಣ ಸರಪ್ರೈಜ್ ಇರಲಿ ಅಂತ ಹೇಳಲಿಲ್ಲ..."


ಆತ ನಾನು ಅಂದುಕೊಂಡಿದ್ದಕ್ಕಿಂತ ಚಂದವೇ ಇದ್ದ...
ನನ್ನನ್ನೇ ನೋಡುತ್ತಿದ್ದ..


ನಾನು ನನ್ನನ್ನು ಗಮನಿಸಿಕೊಂಡೆ...


ಛೇ... !!!!
ಹಳೆ ನೈಟಿ ಹಾಕಿಕೊಂಡಿದ್ದೆ...!!


ಲಗುಬಗೆಯಿಂದ ಒಳಗೋಡಿದೆ...


ಕೈಗೆ ಸಿಕ್ಕಿದ ಚೂಡಿದಾರ ಹಾಕಿಕೊಂಡು ..
ಟೀ.. ಬಿಸ್ಕತ್ತು ರೆಡಿ ಮಾಡಿ ... ಟಿಪಾಯಿಯ ಮೇಲಿಟ್ಟೆ...


ಆತ ಟೀ  ಕುಡಿದು ಹೋದ...


ನನ್ನ ಯಜಮಾನರು ಖುಷಿಯಲ್ಲಿದ್ದರು..


"ನಿನ್ನ ಗೆಳೆಯ ನನಗೂ ಇಷ್ಟವಾದ ಕಣೆ...
ಕೆಮಿಕಲ್ ವಿಜ್ಞಾನಿಯಾದರೂ... ಕಂಪ್ಯೂಟರ್ ಬಗೆಗೆ ಆತನಿಗೆ ಬಹಳ ಗೊತ್ತಿದೆ...
ಅವನ ಸಾಹಿತ್ಯ ಆಸಕ್ತಿ ಖುಷಿಕೊಡುತ್ತದೆ...
ಇಂಥವನನ್ನು ಬಿಟ್ಟು ನನ್ನ ಮಾತಿಗೆ ಮರುಳಾಗಿ ನನ್ನ ಮದುವೆಯಾಯಲ್ಲೆ.."


ನನ್ನವ ಹೊಟ್ಟೆತುಂಬಾ ನಕ್ಕ...
ಅವರ ಹಾಸ್ಯಕ್ಕೆ ಅವರೊಬ್ಬರೇ ನಕ್ಕರು...


ಮರುದಿನ ನನ್ನವ ಆಫೀಸಿಗೆ ಹೋದಮೇಲೆ ಮಗುವನ್ನು ಮಲಗಿಸಿ ಕಂಪ್ಯೂಟರ್ ಹಚ್ಚಿಕೊಂಡೆ..


ಆತ ನೆಟ್ ನಲ್ಲಿ ಇರಲಿಲ್ಲ..
ನನಗೆ ಕಸಿವಿಸಿಯಾಯಿತು..


ಮೂರನೇ ದಿನವೂ  ನೆಟ್ ಗೆ ಬರ್ಲಿಲ್ಲ.. 
ಎಸ್ಸೆಮ್ಮೆಸ್ ಮಾಡಿದೆ.. ಉತ್ತರ ಬರ್ಲಿಲ್ಲ...


ನಾನು ಕನ್ನಡಿಯ ಮುಂದೆ ಹಳೆಯ ನೈಟಿಹಾಕಿಕೊಂಡು ನೋಡಿಕೊಂಡೆ..


ಸುಳ್ಳು ಹೇಳುವ ಕನ್ನಡಿ ನಿಜ ನುಡಿಯುತ್ತಿಲ್ಲ ಅನ್ನಿಸಿತು...
ಆ ಹಳೆಯ ನೈಟಿಯಲ್ಲೂ ನಾನು ಚಂದವಿದ್ದೇನೆ ಅನ್ನಿಸಿತು...


ಈ ಹುಡುಗನಿಗೇನಾಯಿತು...?


ಅವನ ನಿರೀಕ್ಷೆಯಂತೆ ನಾನು ಇಲ್ಲವೆ...?
ನನ್ನ ಆಕರ್ಷಣೆ.. 
ಚಂದಗಳೆಲ್ಲವೂ ಕಡಿಮೆಯಾಗಿ ಹೋಯಿತಾ?


ಇದೇನಿದು...?
ನನ್ನ ಗಂಡ.. ಮಗುವನ್ನು ಬಿಟ್ಟು ಅವನ ಬಗೆಗೆ ಯೋಚಿಸುತ್ತಿದ್ದೇನಲ್ಲಾ...


ಆತ ಮಾತನಾಡಿದರೆಷ್ಟು...? ಮಾತನಾಡದಿದ್ದರೆಷ್ಟು...?
ನನ್ನ ಬದುಕಿನಲ್ಲಿ ಅವನ ಸ್ಥಾನವೇನು?


ಅವನನ್ನು ಪ್ರೀತಿಸುತ್ತಿರುವೇನಾ? ನನ್ನದು ಪ್ರೀತಿಸುವ ವಯಸ್ಸಾ?


ಪ್ರಶ್ನೆಗಳಿಗೆ ಉತ್ತರ ಇರ್ಲಿಲ್ಲ..


ಇನ್ನೂ ನಾಲ್ಕೈದು ದಿನಗಳ ನಂತರ ಒಂದು ಎಸ್ಸೆಮ್ಮೆಸ್ ಬಂತು ಆ ಹುಡುಗನಿಂದ...


"ನನ್ನ..
ಒಂಟಿ..
ಕತ್ತಲ ಏಕಾಂತದ..
ಮೌನದ ಕ್ಷಣಗಳು ನಗುತ್ತವೆ...
ಬೆಳಕು..
ಬೆಳದಿಂಗಳಾಗಿ..
ಹುಣ್ಣಿಮೆ ಚಂದ್ರಮನಾಗಿ..
ನಿನ್ನ..
ಪ್ರೀತಿ...
ಕಣ್ಣುಗಳ ನೆನಪಾಗಿ...."


ವಾಹ್ !! 
ಎಂಥಹ ಸಾಲುಗಳು.. !
ನನ್ನನ್ನು ಮರೆತಿಲ್ಲ... 
ನನ್ನ ಮೇಲಿನ ಆಕರ್ಷಣೆ ಕಡಿಮೆಯಾಗಲಿಲ್ಲ ಇವನಿಗೆ !
ಖುಷಿಯಾಯ್ತು...


ಅವನೇ ಫೋನ್ ಮಾಡಿ ಮಾತನಾಡಿದ...


"ಎಲ್ಲಿ ನಾಪತ್ತೆಯಾಗಿದ್ದೆ...? ಸುದ್ದಿನೇ ಇಲ್ಲವಲ್ಲ..."


"ಹುಡುಗಿ...
ನನ್ನಲ್ಲಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲವಾಗಿತ್ತು...


ಈಗ ಉತ್ತರ ಸಿಕ್ಕಿದೆ.."


"ನನ್ನ ಬಳಿ ಮಾತನಾಡದಿರುವಷ್ಟು ಮೌನ ಯಾಕೆ?...


ಅಷ್ಟೆಲ್ಲ ಪ್ರೀತಿಯ ಎಸ್ಸೆಮ್ಮೆಸ್ ಕಳಿಸ್ತೀಯಾ...?
ನಾನು ನಿನ್ನ ಪ್ರೀತಿಯ ಎಸ್ಸೆಮ್ಮೆಸ್ಸುಗಳನ್ನು ಬಹಳ ಮಿಸ್ ಮಾಡ್ಕೊಂಡೆ.. 


ನಿನ್ನ ಪ್ರೀತಿ.. ಪ್ರೇಮ ಅದೆಲ್ಲ ಸುಳ್ಳಾ...?"


"ನಿನ್ನನ್ನು...
ನಿನ್ನ ಕಣ್ಣನ್ನು ಯಾವಾಗಲೂ ಪ್ರೀತಿಸುತ್ತೇನೆ ಇದು ನಿಜ...
ಆದರೆ...
ನಿನ್ನ ಮೇಲೆ ಬೇಸರವಾಯ್ತು..."


"ಯಾಕೆ?"


"ನಿನ್ನ ಗಂಡ ಸರಿ ಇಲ್ಲ ಅಂತ ನೀನು ಹೇಳಿದ್ದು.....
ನಿಜ ಹೇಳಬೇಕೆಂದರೆ ನೀನೇ ಸರಿ ಇಲ್ಲ..."


"ಅದು ಹೇಗೆ...?"


"ನಿಮ್ಮ ಮನೆಗೆ ಬಂದಾಗ ಗೊತ್ತಾಯ್ತು...
ನಿನ್ನ ಗಂಡ ನಿನ್ನ ಮೇಲೆ ದಬ್ಬಾಳಿಕೆ ಮಾಡ್ತಾ ಇಲ್ಲ..
ನಿನಗೆ ಒಂದೂ ಮಾತನ್ನು ಎದುರು ಹೇಳುವವನಲ್ಲ..
ತನ್ನ ಅಭಿಪ್ರಾಯವನ್ನು ನಿನ್ನ ಮೇಲೆ ಹೇರುತ್ತಿಲ್ಲ..."


"ನಿಜ... 
ಆತ ಆ ವಿಷಯದಲ್ಲಿ ಬಹಳ ಒಳ್ಳೆಯವ..."


"ನಿನಗೆ ಸ್ವಾತಂತ್ರ್ಯ ಕೊಟ್ಟಿದ್ದಾನೆ...


ಹುಡುಗಿ...
ಪ್ರೀತಿ ಸಂಸಾರಕ್ಕೆ ಇನ್ನೇನು ಬೇಕು...?
ನಿನ್ನ ಮನೆಯಲ್ಲಿ ನಿನ್ನದೇ ದರ್ಬಾರು... ಕಾರುಬಾರು...
ನಿನ್ನಲ್ಲೇ... ಕೊರತೆಯಿದೆ...


ಇನ್ನೊಂದು ವಿಷಯ ಗೊತ್ತಾ...?"


"ಏನು...?"


"ನಿನ್ನ ಗಂಡ ಹೊರಗಡೆ ಕೆಲಸ ಮಾಡುವವನು..
ಅಲ್ಲಿ ಚಂದವಾಗಿ ರೆಡಿಯಾದ ಹೆಣ್ಣುಮಕ್ಕಳು ಕಣ್ಣಿಗೆ ನೋಡ ಸಿಗುತ್ತಾರೆ...
ನಿನಗೆ ಪ್ರತಿ ಹಂತದಲ್ಲಿ...
ಪ್ರತಿ  ಕ್ಷಣದಲ್ಲಿ ಅಲ್ಲಿ ಪ್ರತಿಸ್ಪರ್ಧಿಗಳಿದ್ದಾರೆ.."


ನನಗೆ ಕೋಪ ಬಂತು..


"ಅದಕ್ಕೇನೀಗ...?.."


"ಹುಡುಗಿ...
ವಾರಕ್ಕೊಂದು ದಿನ  ಗಂಡ ಮನೆಯಲ್ಲಿರುತ್ತಾನೆ..


ನೀನು ಸ್ವಲ್ಪ ಒಪ್ಪವಾಗಿ ರೆಡಿಯಾಗಿ...
ತೆಳುವಾಗಿ ಮೇಕಪ್ ಮಾಡಿಕೊಂಡು ನಗು ಸೂಸುತ್ತಿದ್ದರೆ ಎಷ್ಟು ಚಂದವಿರುತ್ತಿತ್ತು...


ಕೊಳೆ ಕೊಳೆಯಾದ ನೈಟಿ ಹಾಕಿಕೊಂಡು..
ತಲೆಯನ್ನೂ ಬಾಚಿಕೊಳ್ಳದೆ ...
ಅವನ ಭಾನುವಾರವನ್ನು ನೀರಸವಾಗಿ ಮಾಡುತ್ತೀಯಲ್ಲ..


ಹುಡುಗಿ ನಿನ್ನದೇ ತಪ್ಪುಗಳು...
ಎಲ್ಲವೂ ನಿನ್ನದೇ ತಪ್ಪುಗಳು..


ನಾನು ಬಂದೆನೆಂದು ಓಡಿ ಹೋಗಿ ನೈಟಿ ಬದಲಿಸಿ ಬಂದೆಯಲ್ಲ...


ನಿನ್ನ ಬದುಕಿನ ಪ್ರೀತಿ...
ನಿನ್ನ ಪತಿ ನಿನ್ನ ಬಳಿಯಲ್ಲಿದ್ದ...


ಅವನ ಇಷ್ಟದ ಬಗೆಗೆ.. 
ಆಕರ್ಷಣೆಯ ಬಗೆಗೆ ನೀನು ಯೋಚನೆಯೇ ಮಾಡಿಲ್ಲ...


ಪ್ರೀತಿ... 
ಪ್ರೇಮ  ಹೊರಗಡೆ  ಸಿಗುವದಿಲ್ಲ...
ನಮ್ಮ ಬಳಿಯಲ್ಲಿದ್ದರೂ..
ನಾವು ಅದನ್ನು ಕಂಡುಕೊಳ್ಳಬೇಕು... 
ನಾವು ಅದನ್ನು ಹುಡುಕಿ... ಕಾಯ್ದುಕೊಳ್ಳಬೇಕು... 
ಅದು ನಮ್ಮ ಹಕ್ಕು...
ಜವಾಬ್ದಾರಿ..."


ನಾನು ಅಪ್ರತಿಭಳಾದೆ...!!


"ಹುಡುಗಾ...
ಇಷ್ಟೆಲ್ಲ ಬೊಗಳೆ ಬಿಡುವ ನೀನು ಮಾಡಿದ್ದೇನು..?..


ನನಗೆ ಪ್ರೇಮದ ಎಸ್ಸೆಮ್ಮೆಸ್ಸು... 
ಕವನಗಳನ್ನು ..ಕಳಿಸ್ತೀಯಲ್ಲ..
ನಿನ್ನದೂ ಆಷಾಢಭೂತಿತನವಲ್ಲವೆ...?..


ನನ್ನಲ್ಲೂ ಒಂದಷ್ಟು ಹುಚ್ಚು ಕನಸು ಹುಟ್ಟಿಸಿ ಬಿಟ್ಟೆಯಲ್ಲ...


ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ಏನು ಹೇಳ್ತೀಯಾ...?"


"ಹುಡುಗಿ...
ನಾನು ಕೆಮಿಕಲ್ ವಿಜ್ಞಾನಿ.. 
ನೀನೂ ಕೂಡ ಅದನ್ನೇ ಓದಿದ್ದೀಯಾ...


ಒಂದು ರಾಸಾಯನಿಕ ಕ್ರಿಯೆ ನಡೆಯುವಾಗ "ವೇಗ ವರ್ಧಕ"  ಬಳಸುತ್ತಾರೆ..
"ಕ್ಯಾಟಲಿಸ್ಟ" ಅನ್ನುತ್ತಾರಲ್ಲ ಅದು..
ಅದರಿಂದ ರಾಸಾಯನಿಕ ಕ್ರಿಯೆಯ ವೇಗ ಜಾಸ್ತಿಯಾಗುತ್ತದೆ.. 


ಆದರೆ ಅದು ಕ್ರಿಯೆಯಲ್ಲಿ ಯಾವ ಪರಿಣಾಮವನ್ನೂ ಬೀರುವದಿಲ್ಲ..."


"ಅದಕ್ಕೂ.. ಇದಕ್ಕೂ ಏನು ಸಂಬಂಧ...?"


"ನಿನ್ನ ಮಗು... 
ಗಂಡ..
ನಿನ್ನ ಬಾಳು.. ಒಂದು ಕ್ರಿಯೆ..
ಅದರಲ್ಲಿ ನಾನು ಕ್ಯಾಟಲಿಸ್ಟ್ ಆಗಿರಬಲ್ಲೆ...


ನಿಮ್ಮ ಬಾಳಲ್ಲಿ ಪರಿಣಾಮ ಬೀರದ ಮೂರವನೆಯಾಗಿರಬಲ್ಲೆ ಅಷ್ಟೇ...


ನೀನೂ ಅಷ್ಟೆ..


ನನ್ನ ಮಕ್ಕಳು.. ಹೆಂಡತಿ ..
ಸಂಸಾರದಲ್ಲಿ..
ನನ್ನ ಕ್ಯಾಟಲಿಸ್ಟ್.. ವೇಗವರ್ಧಕ....


ಹಳತು... ಹಳಸದಂತೆ..
ಹೊಸತನ ಚಿಗುರಿಸುವದಷ್ಟೆ ಕ್ಯಾಟಲಿಸ್ಟ್.. ಕೆಲಸ...


ನಾನು ನಿನ್ನನ್ನು ಹಳೆ ನೈಟಿಯಲ್ಲಿ...
ಹಣೆಯ ಬೆವರುಗಳ ಸಾಲಿನ ...
ನಿನ್ನ ಆಯಾಸಗೊಂಡ ..


ಮಾದಕ  ಕಣ್ಣಿನ ಬಗೆಗೆ ಇನ್ನೂ ಒಂದಷ್ಟು ಕವನ ಬರೆಯ ಬಲ್ಲೆ...


ಇಷ್ಟೇ..
ನನ್ನ.. ನಿನ್ನ ನಡುವಿನ ಸಂಬಂಧ...!.."


ನನ್ನ ಕಣ್ಣುಗಳು ಒದ್ದೆಯಾಗತೊಡಗಿತು...
ನಾನು ಮುಂದೆ ಮಾತನಾಡಲಿಲ್ಲ...


ಕ್ಯಾಟಲಿಸ್ಟ್ ಹುಡುಗ ಇನ್ನೂ ಇಷ್ಟವಾದ...




( ಚಂದದ ಪ್ರತಿಕ್ರಿಯೆ.. ಸಂವಾದಗಳಿವೆ..
ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ...)

Friday, January 6, 2012

ಬೆತ್ತಲೆಯಾಗುವದು ಅನಿವಾರ್ಯ ಎಂದಾಗ . .. ನಮ್ಮವರ ಬಳಿಯೇ.. ಬೆತ್ತಲಾಗಬೇಕು .. !!


ಭಾಗ:: ಎರಡು..PART :: 2 
(ಹಿಂದಿನ  ಭಾಗ ಓದಿ.. ದಯವಿಟ್ಟು  ಇದನ್ನು ಓದಿ..)


ನಾನು  ಕೆಲವು ದಿನಗಳ ಹಿಂದೆ ಕೇರಳದ ಕೊಚ್ಚಿ   ಹೋಗಿದ್ದೆ..


ರೂಮಿನಲ್ಲಿ ಹೆಂಡತಿ ಮಗನನ್ನು ಬಿಟ್ಟು..
ಕ್ಯಾಮರಾ ಹೆಗಲಿಗೆ ಹಾಕ್ಕೊಂಡು ತಿರುಗಾಡಲು ಹೋಗಿದ್ದೆ..
ಅಲ್ಲಿ  ..
ಬಸ್ ನಿಲ್ದಾಣದಲ್ಲಿ ಒಬ್ಬ ಕಾರಿನಿಂದ ಇಳಿದ...


ಹೌದು.. !!
ಆತ ನಮ್ಮ ಗ್ಯಾಸ್ ನಮ್ಮ ಮಹಾದೇವ.. !..!..!! "


ಮಹಾದೇವು ಕಾರನಲ್ಲಿ ತಿರುಗ್ತಿದ್ದಾನಾ...?.. !!"


ಹೆಚ್ಚಿಗೆ ಬದಲಾಗಿರಲಿಲ್ಲ.. 
ಅಲ್ಲಲ್ಲಿ ಕೂದಲು ಹಣ್ಣಾಗಿತ್ತು...
ನನ್ನನ್ನು ನೋಡಿದವನೆ ಓಡಿ ಬಂದು ತಬ್ಬಿಕೊಂಡು ಬಿಟ್ಟ...


ಅವನ ಸ್ವಭಾವವೂ ಬದಲಾಗಿರಲಿಲ್ಲ.. !! 


ಅವನ ಸ್ನೇಹದ ಆ ಅಪ್ಪುಗೆ ಹಾಗಿತ್ತು... !!


ಖುಷಿಆಯ್ತು.. !!


ನನಗೂ ಅವನನ್ನು ನೋಡಿದಾಗ ನೆನಪಾದದ್ದು ಅವನ "ಗ್ಯಾಸ್ ಸಮಸ್ಯೆ.." 


ಆತ ನನ್ನನ್ನು ಆತನ ಮನೆಗೆ ಕರೆದ..


ನಾನು ಹಿಂದೆ ಮುಂದೆ ನೋಡಿದೆ...ಅನುಮಾನಿಸಿದೆ..


" ಪ್ರಕಾಶು...
ಹೆದರ್ ಬೇಡ್ವೋ... 
ನನಗೆ ಈಗ ಗ್ಯಾಸಿನಿಂದ  ಸಮಸ್ಯೆ ಇಲ್ವೇ ಇಲ್ಲ... !!.."


ನನಗೆ ನಂಬಿಕೆ ಬರಲಿಲ್ಲ...


ಸರಿ ಎನ್ನುತ್ತ ಅವನ ಕಾರಿನಲ್ಲಿ ಕುಳಿತೆ... 


ಯಾವದಕ್ಕೂ ಇರಲಿ ಅಂತ ಕರ್ಚೀಫ್ ಕೈಯಲ್ಲಿ ಇಟ್ಟುಕೊಂಡೆ...



ನನಗೆ ಮಹಾದೇವನನ್ನು ಕಂಡು ತುಂಬಾ ಖುಷಿಯಾಗಿತ್ತು...
ಆತನ ದುಬಾರಿ ಕಾರು ನೋಡಿ ದಂಗಾಗಿ ಹೋಗಿದ್ದೆ...


ಆತ ದಾರಿಯಲ್ಲಿ ತನ್ನ ಸುದ್ಧಿ ಹೇಳುತ್ತ ಹೊರಟ..."


ನನಗೆ ಕುತೂಹಲ ಜಾಸ್ತಿ ಆಯ್ತು...


" ಪ್ರಕಾಶು..
ನನಗೆ ಈಗ ಗ್ಯಾಸಿನಿಂದ ಏನೂ ತೊಂದರೆ ಇಲ್ಲಪ್ಪಾ...
ಎಲ್ಲವೂ ನಮ್ಮ ನಾಗುವಿನ ಉಪಾಯ... !!
ಅವನ ಕೃಪೆ...!!..."


ನನಗೆ ಎಚ್ಚರ ತಪ್ಪಿ ಬೀಳುವದೊಂದು ಬಾಕಿ...!


ಈ ನಾಗು ಎಲ್ಲೆಲ್ಲಿ ಏನೇನು ಮಾಡಿದ್ದಾನೆ...?.. !!


"ಮುಂದೆ ಹೇಳೊ... " 


 ಮಹಾದೇವು ತುಂಬಾ ಸಮಾಧಾನದಲ್ಲಿದ್ದ...


"ನಿಜಕ್ಕೂ ನಮ್ಮ ನಾಗು ದೇವರ ಹಾಗೆ ಕಣೊ...
ನಿನಗೆ ನೆನಪಿದೆಯಾ...?


ನಾವು ಓದುವಾಗ ಒಬ್ಬ ವಿಜ್ಞಾನಿಯ ಪಾಠ ಬಂದಿತ್ತು..
ಲೂಯಿ ಪ್ಯಾಸ್ಚರ್ ಯಾರೋ ಒಬ್ಬ.. 
ಆತ ಒಂದು ರೋಗ ನಿರೋಧಕ ಕಂಡು ಹಿಡಿಯುತ್ತಾನೆ...


ಯಾವುದೋ ಒಂದು  ರೋಗಕ್ಕೆ ..
ಅದೇ ರೋಗದ ವೈರಸ್ ಇಂಜೆಕ್ಷನ್ ಚುಚ್ಚಿ ರೋಗ ನಿರೋಧಕ ಕಂಡುಹಿಡಿಯುತ್ತಾನೆ...!.."


ನಾನು ತಲೆ ಕೆರೆದು ಕೊಂಡೆ..
ಅರ್ಥ ಆಗಲಿಲ್ಲ..


"ಹೌದು.. 
ಅದಕ್ಕೂ ನಾಗುವಿಗೂ ಏನು ಸಂಬಂಧ...?"


"ನಮ್ಮ ನಾಗು ಪ್ರತಿಭಾವಂತ ಕಣೊ..
ನಮ್ಮ ನಾಗು ನನಗೆ ಹೇಳಿದ್ದು ಇಷ್ಟು...


"ಮಹಾದೇವು...
ಬೆಂಕಿಗೆ ಬೆಂಕಿಯೇ ಮದ್ದು...!
ನಿನ್ನ ಗ್ಯಾಸಿಗೆ... ಗ್ಯಾಸೇ ಮದ್ದು...!


ನೀನು ದಿನಾಲೂ ಬೆಳಿಗ್ಗೆ...
ಮಧ್ಯಾಹ್ನ .. ಸಾಯಂಕಾಲ  ...
ಖಾಲಿ ಹೊಟ್ಟೆಯಲ್ಲಿ...
ಹಸಿ  ಆಲೂಗಡ್ಡೆ.....!
ಹಿಂದಿನ ದಿನ ನೆನೆಸಿಟ್ಟ... ದೊಡ್ಡ ಕಡ್ಲೆ... !
ಸಣ್ಣ ಕಡ್ಲೆ..!
ಶೇಂಗಾ ಬೀಜ..!
ಮೂಲಂಗಿ... !
ಇವನ್ನೆಲ್ಲ... ಸಮನಾಗಿ ಸೇರಿಸಿ..ಸ್ವಲ್ಪ ಸೋಡಾ ಬೆರೆಸಿ... 


ಬರೊಬ್ಬರಿ ಎರಡು ಗ್ಲಾಸು ಜ್ಯೂಸ್ ಕುಡಿ... !!


ಬೇಕಿದ್ದಲ್ಲಿ ರಾತ್ರಿ ಮಲಗುವಾಗಲೂ ಕುಡಿ...!!..


ಹದಿನೈದು ದಿನ ತಗೋ... 
ನಿನ್ನ ಗ್ಯಾಸ್ ಸಮಸ್ಯೆ ಹೊರಟು ಹೋಗುತ್ತದೆ ನೋಡು".....
ಅಂತ ಅಂದಿದ್ದ.....!! "


ನನ್ನ ತಲೆ ಹಾಳಾಗಿ ಹೋಯ್ತು...!! 


ಚಚ್ಚಿ ಕೊಳ್ಳೋಣ ಅಂದರೆ ಪಕ್ಕದಲ್ಲಿ ಗೋಡೆಯೂ ಇರಲಿಲ್ಲ...!!


"ಏನ್ ಎಡಬಟ್ಟ್ ಇದ್ದಿಯೋ ನೀನು...?.. !..


ಆ ನಾಗು ಹೇಳಿದ್ನಂತೆ... !
ಇವನು ಹಸಿ ಆಲೂಗಡ್ಡೇ ಜ್ಯೂಸ್ ಕುಡಿದ್ನಂತೆ... !!.."


" ಪ್ರಕಾಶು..
ಇಲ್ಲಿ ಕೇಳೊ ಮಾರಾಯ್ನೆ...
ಕಳೆದು ಕೋಳ್ಳಲಿಕ್ಕೆ ಏನೂ ಇಲ್ದೇ ಇರುವಾಗ ರಿಸ್ಕ್ ತೆಗೆದು ಕೊಳ್ಳಬಹುದು ಕಣೊ...!
ನಾನು ರಿಸ್ಕ್ ತೆಗೆದು ಕೊಂಡೆ... 


ಈಗ ನೋಡು ನಾನೀಗ ಗ್ಯಾಸ್ ಫ್ರೀ ಮಹಾದೇವ..."


ನನ್ನ ಮೈಯಲ್ಲಿರುವ ಕೂದಲುಗಳೆಲ್ಲ ನಿಮಿರಿನಿಂತ ಅನುಭವ !!


ನಿಜವಾ... !!


ನಿಜವಾ...?


ಮಹಾದೇವನನ್ನು ಮುಟ್ಟಿ ... ಮುಟ್ಟಿ..
ಅಲುಗಾಡಿಸಿ ಕೇಳಿದೆ..


"ಲೇ... 
ಲೇ..ಗ್ಯಾಸು... !!
ತಮಾಶೆ ಮಾಡಬೇಡ್ವೋ... ನಿಜ ಹೇಳೊ...??.."


"ನಿಜ ಕಣೊ..
ನಾನೀಗ ಸ್ವಂತ ಬಿಜಿನೆಸ್ ಮಾಡ್ತಿದಿನಿ...
ಮದುವೆಯಾಗಿದೆ... !
ಎರಡು ಮಕ್ಕಳಿದ್ದಾರೆ.. !!
ಬದುಕಿನಲ್ಲಿ ಸಂತೋಷ ಇದೆ ಕಣೊ..."


ನನಗೂ ಹೇಳಲಾರದಷ್ಟು ಖುಷಿಆಯಿತು...


ಸ್ವಲ್ಪ ದೂರ ಹೋದ ಮೇಲೆ ಮಹಾದೇವು ಕಾರ್ ನಿಲ್ಲಿಸಿದ...


"ಇರು ಬಂದೆ...
ಕಾರಿನ ಗ್ಲಾಸ್ ತೆಗೆಯ ಬೇಡ..."


ಮಹಾದೇವು ಕಾರಿನಿಂದ ಇಳಿದು  ಹೊರಗಡೆ ಸ್ವಲ್ಪ ಹೋಗಿ... 
ಕೈ ಕಾಲು ಅಲ್ಲಾಡಿಸಿದ...
ಮೈ ..
ಹೊಟ್ಟೆ ಕುಲುಕಾಡಿಸಿ... 
ಕಾಲು ಅಗಲಿಸಿಕೊಂಡು ಸಾವಕಾಶವಾಗಿ  ನಡೆಯುತ್ತ ಬಂದ...!!..


ಕಾರ್ ಸ್ಟಾರ್ಟ್ ಮಾಡಿದ...


"ಪ್ರಕಾಶು...
ನನಗೆ ಗ್ಯಾಸ್ ಪೂರ್ತಿಯಾಗಿ ವಾಸಿಯಾಗಲಿಲ್ಲ...


ಆದರೆ ನಾಗುವಿನ ಔಷಧಿಯಿಂದ ನನ್ನ ಗ್ಯಾಸನ್ನು 
ಒಂದು ತಾಸು....
ಮುಕ್ಕಾಲು ತಾಸು ಏನೂ ತೊಂದರೆ ಇಲ್ಲದೆಯೇ ತಡೆ ಹಿಡಿದುಕೊಳ್ಳ ಬಲ್ಲೆ...!.."


ನನಗೆ ನಗಬೇಕೋ ಅಳಬೇಕೊ ಗೊತ್ತಗಲಿಲ್ಲ...


"ಮತ್ತೆ ...
ನಿನ್ನ ಸಮಸ್ಯೆ ಹೇಗೆ ಪರಿಹಾರವಾಯ್ತೋ.....??..
ಮದುವೆಯಾಗಿದೆ... ಮಕ್ಕಳಿವೆ ಅಂತಿಯಲ್ಲೋ..!!"


"ನಾನೀಗ ತಾಸುಗಟ್ಟಲೆ ಗ್ಯಾಸ್ ಬಿಡದೆ ಇರ್ತಿನಲ್ಲೋ..


ಗುಂಪಿನಲ್ಲಿ ಇರುವಾಗ ..
ಒಂದು ತಾಸು ಬಿಟ್ಟು ಹೊರಗಡೆ ಹೋಗಿ ಗ್ಯಾಸ್ ಬಿಟ್ಟು ಬರ್ತಿನಿ...
ಯಾರಿಗೂ ಗೊತ್ತೇ ಆಗುವದಿಲ್ಲ....!


ನನ್ನ ಮನೆಯವರಿಗೆ...
ಊರಿನ ಜನರಿಗೆ.. ನೆಂಟರಿಗೆ ...
ಎಲ್ಲರಿಗೂ "ನನಗೆ ನಾಗುವಿನ ಔಷಧದಿಂದ ಗ್ಯಾಸ್ ವಾಸಿಯಾಯಿತು" ಎಂದೆ..
ಎಲ್ಲರೂ ನಂಬಿದರು.."


"ಒಟ್ಟಿನಲ್ಲಿ ನಿನಗೆ ಒಳ್ಳೆಯದಾಯ್ತಲ್ಲ.. ಬಿಡು...
ಅದು ಸರಿ..
ಮದುವೆ ಹೇಗಾಯ್ತೋ...??.."


"ನನಗೆ ಗ್ಯಾಸ್ ರೋಗ ವಾಸಿ ಆಯ್ತು ಅಂದ ಕೂಡಲೆ ಮನೆಯವರೆಲ್ಲ ಹೆಣ್ಣು ಹುಡುಕಿದರು...
ನಾನೂ ನೊಡಲು ಹೋಗಿದ್ದೆ... 
ಹುಡುಗಿ ಚೆನ್ನಾಗಿದ್ದಳು.."


"ಹುಡುಗಿಗೆ ಹೇಳಲಿಲ್ಲವೇನೋ.. ನಿನ್ನ ಗ್ಯಾಸ್ ಸಮಸ್ಯೆಯನ್ನು..??.."


" ನಾನು ಹೇಳೋದನ್ನು ಸ್ವಲ್ಪ ಕೇಳು...


ಹಿರಿಯರ ಬಳಿ "ನಾನು ಹುಡುಗಿಯೊಡನೆ ಪ್ರತ್ಯೇಕವಾಗಿ ಮಾತನಾಡಬೇಕು " ಅಂತ ಕೇಳಿದೆ..
ಅವರೆಲ್ಲ ಒಪ್ಪಿದರು..
ನಾವು ಟೆರ್ರೆಸಿಗೆ ಹೋದೆವು...


ಹುಡುಗಿ ತುಂಬಾ ನಾಚಿಕೊಂಡಿದ್ದಳು..


"ನೋಡಿ..
ನನಗೆ ನೀವು ತುಂಬಾ ಇಷ್ಟವಾಗಿದ್ದೀರಿ...
ಒಂದು ಸಮಸ್ಯೆ ಇದೆ...


ನಾನು ಗ್ಯಾಸ್ ಪ್ರಕೃತಿಯವ..
ನನಗೆ ಗ್ಯಾಸ್ ಸಮಸ್ಯೆ ಇದೆ...
ಅದನ್ನು ನೀವು ಸಹಿಸಿ ಕೊಳ್ತೀರಿ ಅಂದರೆ.. ಮದುವೆಯಾಗೋಣ..."


ನನಗೆ ಸಮಾಧಾನ ಆಯ್ತು...


"ಒಳ್ಳೆ ಕೆಲಸ ಮಾಡಿದೆ ಕಣೊ..
ಹುಡುಗಿ.. ಏನಂದಳೋ...?"


"ಹುಡುಗಿ ಮೊದಲೇ ನಾಚಿಕೊಂಡಿದ್ದಳು.. 
ಈಗ ಮತ್ತೂ ನಾಚಿಕೊಂಡಳು...!!


"ಇಷ್ಯೀ...
ಈಶ್ಯೀ.... ರಾಮಾ.. ರಾಮಾ.. !!..
ಇದನ್ನು ಹೇಳಲಿಕ್ಕೆ ಇಲ್ಲಿ ಕರೆದುಕೊಂಡು ಬಂದ್ರಾ ?..


ನನ್ನ ಅಪ್ಪನಿಗೂ ಗ್ಯಾಸ್ ತೊಂದರೆ ಇದೆ...!
ನನ್ನ ಅಮ್ಮನಿಗೆ ಆರು ಜನ ಮಕ್ಕಳು.... !!.."


"ಅಬ್ಭಾ... 
ಹುಡುಗಿ ಜೋರಿದ್ದಾಳೆ ಕಣೊ..."


"ತುಂಬಾ ಒಳ್ಳೆಯವಳು ಕಣೊ..!!.."


ನನಗೆ ಮತ್ತೊಂದು ಸಂಶಯ ಹುಟ್ಟಿತು...


"ಮಹಾದೇವು...!!
ಮೊದಲ ರಾತ್ರಿ ಏನು ಮಾಡಿದೆಯೋ...??.. !!.."


"ಪ್ರಕಾಶು...


ನಾಲ್ಕೈದು ಫ್ಲಾಸ್ಕಿನಲ್ಲಿ ಚಹ ಮಾಡಿ ಇಟ್ಕೊಂಡಿದ್ದೆ...


ಚಹ ಕುಡಿಯುತ್ತ... 
ಆಗಾಗ ಏಳುತ್ತ... ನಿದ್ರೆ ಮಾಡದೆ ಬೆಳಗು ಮಾಡಿದೆ...!


ಮಧ್ಯ ಮಧ್ಯದಲ್ಲಿ..
ಅವಳನ್ನು ಪ್ರೀತಿನೂ ಮಾಡಿದೆ ಕಣೊ...!
ಅವಳಿಗೆ ಏನೂ ಗೊತ್ತಾಗಲಿಲ್ಲ..."


ನಮ್ಮ ಮಹಾದೇವು ಬುದ್ಧಿವಂತ ಅನ್ನಿಸಿತು...


"ಮಹಾದೇವು...
ಅವಳೊಡನೆ ಬದುಕುತ್ತಾ ಇದ್ದೀಯಾ...
ಗೊತ್ತಗಲಿಲ್ಲವೆ...?


ಆತ ಉತ್ತರ ಕೊಡುವಷ್ಟರಲ್ಲಿ  ಅವನ ಮನೆ ಬಂತು...


ದೊಡ್ಡ ಮನೆ.. ಕಲ್ಲಿನಲ್ಲಿ ಕಟ್ಟಿಸಿದ್ದಾನೆ...
ಒಳಗೆ ಹೋದೆವು...
ದೊಡ್ಡ ಹಾಲ್...
ಮಹಾದೇವನ ಬಗೆಗೆ ಹೆಮ್ಮೆಯೂ ಮೂಡಿತು... ಪ್ರೀತಿಯೂ ಉಕ್ಕಿತು...


ಅವನ ಹೆಂಡತಿ ಪ್ರೀತಿಯಿಂದ ಮಾತನಾಡಿಸಿದಳು...


"ನೀವು ಪ್ರಕಾಶಣ್ಣ ಅಲ್ಲವಾ...
ನಿಮ್ಮ ಸುದ್ಧಿ ಎಲ್ಲ ಹೇಳ್ತಾ ಇರ್ತಾರೆ...


ನನಗೆ ಒಮ್ಮೆ ನಿಮ್ಮ ಗೆಳೆಯ ನಾಗುವನ್ನು ನೋಡಬೇಕು...


ಇವರು ಇನ್ನೂ ಕರೆದು ಕೊಂಡು ಹೋಗೇ ಇಲ್ಲ..."


ನಾನು ಮಹಾದೇವನ ಮುಖ ನೋಡಿದೆ...


ಆತ ನನ್ನ ಕಣ್ಣು ತಪ್ಪಿಸಿ ಬೇರೆ ಎಲ್ಲೋ ನೋಡುತ್ತಿದ್ದ...


ಅವಳು ಬಿಸಿ.. ಬಿಸಿ  ಚಹ ಕೊಟ್ಟು ಒಳಗೆ ಹೋದಳು...


"ಪ್ರಕಾಶು ಮನೆ ತೋರಿಸ್ತಿನಿ ಬಾರೊ..."


ನಾನು ಅವನನ್ನು ಹೊಂಬಾಲಿಸಿದೆ...


"ನೋಡೋ... 
ಇದು ಮಾಸ್ಟರ್ ಬೆಡ್ ರೂಮ್..."


ತುಂಬಾ ಚೆನ್ನಾಗಿತ್ತು... ಅಲಂಕಾರಗಳು ಭರ್ಜರಿಯಾಗಿಯೇ ಇದ್ದವು...


ಗೋಡೆ ತುಂಬಾ ಕಿಡಕಿಗಳೇ ಇದ್ದವು..


ಇನ್ನೊಂದು ರೂಮಿಗೆ ಕರೆದುಕೊಂಡು ಬಂದ...


"ಪ್ರಕಾಶು ...
ಇದು ಮಾಸ್ಟರಣಿ ರೂಮ್...!!.."


ಏನಪಾ ... ಇದು..??... !!


ನಾನು ತಲೆ ಕೆರೆದು ಕೊಂಡೆ..!


"ನೋಡೊ...
ಇದು ತುಂಬಾ ಸಿಂಪಲ್ ಕಣೋ..


ನಾವು ರಾತ್ರಿ  ಊಟ ಮಾಡಿದ ನಂತರ ..
ಪ್ರೀತಿ ಮಾಡ್ಲಿಕ್ಕೆ ಆ  ರೂಮ್...!


ಪ್ರೀತಿ ಮುಗಿದ ಮೇಲೆ ಅವಳು ಈ ರೂಮಿಗೆ ಬರ್ತಾಳೆ....!!!..


ಜಾಸ್ತಿ ಪ್ರೀತಿ ಬೇಕು ಅಂದಾಗ ಮಧ್ಯದಲ್ಲಿ ಎದ್ದು ಬರ್ತಾಳೆ...!!.."


ನಾನು ಮತ್ತೆ ಎಚ್ಚರ ತಪ್ಪಿ ಬೀಳುವವನಿದ್ದೆ..!!..


ಹೇಗೋ..
ಹೇಗೊ ಸಂಭಾಳಿಸಿಕೊಂಡೆ...!


ಆತ ಹೆಚ್ಚು ಹೊತ್ತು ಮನೆಯಲ್ಲಿ ಇರಗೊಡಲಿಲ್ಲ...


ನನ್ನನ್ನು ಬಸ್ಟ್ಯಾಂಡಿಗೆ ಕರೆದುಕೊಂಡು ತಂದು ಬಿಟ್ಟ...


"ಪ್ರಕಾಶು..
ಎಲ್ಲರಿಂದ  ದೂರವಾಗಿ.. 
ಇಲ್ಲಿ ಭಾಷೆ ಬರದ ನಾಡಿನಲ್ಲಿ ಹಾಯಾಗಿದ್ದೇನೆ..!


ಬೆತ್ತಲಾಗ ಬೇಕು ..
ಬೆತ್ತಲೆಯಾಗುವದು ಅನಿವಾರ್ಯ ಎಂದಾಗ .  
ನಮ್ಮವರ ಬಳಿಯೇ.. ಬೆತ್ತಲಾಗಬೇಕು ಕಣೋ..!


ನನ್ನ ಹೆಂಡತಿ ಒಳ್ಳೆಯವಳು.."


ಎನ್ನುತ್ತಾ ನನ್ನನ್ನು ತಬ್ಬಿಕೊಂಡ...
ಆ ಅಪ್ಪುಗೆಯಲ್ಲಿ ಹೇಳಲಾಗದ ತುಂಬಾ ಮಾತುಗಳಿದ್ದವು...


ನಾನು ರೂಮಿಗೆ ಬಂದೆ..
ನಾನು ನನ್ನ ಮಡದಿಗೆ ಈ ಕಥೆಯನ್ನೆಲ್ಲ ಹೇಳಿದೆ...


ಬಿದ್ದೂ ಬಿದ್ದೂ ನಕ್ಕಳು...


"ಅಲ್ಲಾರಿ...
ಅವನಿಗೆ ಎರಡು ಮಕ್ಕಳು ಅಂದ್ರಲ್ಲ...
ಮಕ್ಕಳು ಹೇಗಿದ್ದಾರೆ...?
ಪಾಪ..!!..
ಮಕ್ಕಳಿಗೆ ಗ್ಯಾಸ್ ಸಮಸ್ಯೆ ಇದೆಯಂತಾ...?"


"ಮಕ್ಕಳಿಗೆ ಗ್ಯಾಸ್ ಸಮಸ್ಯೆ ಇಲ್ಲಂತೆ ಕಣೆ...!
ಅವರು ಚೆನ್ನಾಗಿದ್ದಾರೆ..


ಆದರೆ...


ಆ ಮಕ್ಕಳಿಗೆ ಮುಖದ ತುಂಬ ದೊಡ್ಡ ಮೂಗು ಇದೆ ಕಣೆ...!!


ದೊಡ್ಡ... ದೊಡ್ಡ... ಮೂಗು.. !!.."


ನನ್ನಾಕೆ... 
ನಗು ತಡೇಯಲಾರದೆ ಹೊರಕ್ಕೆ ಓಡಿದಳು...!!


ನನಗೂ  ನಗು ತಡೆಯಲಾಗಲಿಲ್ಲ...


ಜೋರಾಗಿ ನಕ್ಕು ಬಿಟ್ಟೆ...!!...








(ಈ "ಆಲುಗಡ್ಡೆ ಜ್ಯೂಸ್ " ಬಗೆಗೆ ನನಗೆ ವಿವರಗಳು ಗೊತ್ತಿಲ್ಲ..


ನನ್ನ ಗೆಳೆಯ ಇನ್ನೂ ಇತರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದ..
ಅದರಿಂದಲೂ ವಾಸಿಯಾಗಿರ ಬಹುದು..")


Sunday, January 1, 2012

"ವಾಸನೆಗಳೇ .. ಹೀಗೆ... .. ದೊಸ್ತಿಯಾದಮೇಲೆ ಏನೂ ಅನ್ನಿಸೋದಿಲ್ಲ... !!.."

PART :: 1
ಭಾಗ :: ಒಂದು...


ರಜೆಗಳೆಲ್ಲ ಮುಗಿದು ..
ಹೊಸತಾಗಿ ಕಾಲೇಜು ಶುರುವಾಗಿತ್ತು..
ನಮಗೆಲ್ಲ ಏನೋ ಒಂಥರಾ ಸಂಭ್ರಮ..


ಕೆಲವು ಹೊಸ ಮುಖಗಳೂ ಬಂದಿದ್ದವು...
ಚಂದದ ಬಣ್ಣಗಳೂ ಇದ್ದವು... 


ಆತನೊಬ್ಬ ವಿಚಿತ್ರ ಹುಡುಗ...


ಇನ್ನೇನು ಕ್ಲಾಸ್ ಶುರುವಾಗುತ್ತದೆ ಅನ್ನುವಾಗ ಬರ್ತಿದ್ದ..!


ಕ್ಲಾಸ್ ಮುಗಿಯುತ್ತಿದ್ದ ಹಾಗೆ ಜಲ್ದಿ ಜಲ್ದಿಯಲ್ಲಿ ಹೋಗಿಬಿಡುತ್ತಿದ್ದ..!


ಯಾವಾಗಲೂ ಎಲ್ಲರಿಗಿಂತ ಹಿಂದೆ ಕುಳಿತಿರುತ್ತಿದ್ದ...


ಆತ ಯಾರೆಂದು ನಮಗ್ಯಾರಿಗೂ ಗೊತ್ತಿರಲಿಲ್ಲ..!


"ಆತ  ಯಾಕೆ  ಹೀಗೆ?"


"ಅಯ್ಯೋ ...
ಅವನು   "ಗ್ಯಾಸ್ ಮಹಾದೇವ...".. !!
ಅವನೊಬ್ಬ  ಗ್ಯಾಸ್ ಏಜನ್ಸಿ...!!.


ಆಸಾಧ್ಯ ಗ್ಯಾಸ್.. ಬಿಡ್ತಾನೆ ಮಾರಾಯರಾ...!
ಅವನ ಗ್ಯಾಸ್ ವಾಸನೆ ತಗೊಂಡ್ರೆ ...
ಎರಡು ದಿನ ಮೂಡ್ ಎಲ್ಲ ಹಾಳಾಗಿ ಹೋಗ್ತದೆ...!


ಅಂಥಹ  ಧರಿದ್ರ.. 
ಕೆಟ್ಟವಾಸನೆ ಎಲ್ಲಿಂದ ಬರ್ತದೆ ಅನ್ನೋದೇ ಗೊತ್ತಾಗಲ್ಲ ..
ಮೂಗಿನೊಳಗಿನ ಕೂದಲುಗಳೆಲ್ಲ ಉದುರಿ ಹೋಗಿಬಿಡುತ್ತವೆ..!


ಅವನ ವಿಷಯ ನಮಗೆ ಬೇಡ್ರೋ...."


ಆತನ ಸ್ವಲ್ಪ ಪರಿಚಯ ಮಾಡಿಕೊಂಡ ಉಮಾಪತಿ ವರದಿ ಒಪ್ಪಿಸಿದ..


ನಾಗುವಿಗೆ ಅವನ ಬಗೆಗೆ ಆಸಕ್ತಿ ಹುಟ್ಟಿತು..


ನಮ್ಮ ನಾಗು ಯಾವಾಗಲೂ ಹಾಗೇನೆ..


ಆವನನ್ನು ಮಾತನಾಡಿಸಿದ..
ಆ ಹುಡುಗ  ಬಹಳ ಬೇಸರದಲ್ಲಿದ್ದ..


"ನಿಜ ಕಣ್ರೋ..
ನನಗೆ ಹುಟ್ಟಿನಿಂದ ಈ ಸಮಸ್ಯೆ ಇದೆ..
ನನ್ನ ಪರಿಚಯದವರು ಯಾರೂ ನನ್ನ ಹತ್ತಿರ ಬರೋದಿಲ್ಲ..
ಎಲ್ಲಿಯೂ ಹೋಗೊ ಹಾಗಿಲ್ಲ..
ನನಗೆ ಯಾರೂ ಫ್ರೇಂಡ್ಸ್ ಕೂಡ ಇಲ್ಲ..
ನನ್ನ ಅಪ್ಪ.. ಅಮ್ಮ.. ಅಣ್ಣ.. ತಂಗಿ ಕೂಡ ನನ್ನನ್ನು ಹತ್ತಿರ ಸೇರಿಸೋಲ್ಲ.."


"ಔಷಧಿ  ಮಾಡಿಸ ಬೇಕಿತ್ತು..."


"ಅದೂ ಆಯ್ತು.. ಕಣ್ರೋ..
ಎಷ್ಟೇ ಔಷಧ ಮಾಡಿಸಿದ್ದರೂ ವಾಸಿಯಾಗಲಿಲ್ಲ...
ಸಿರಸಿಯ  ಯಾವ ಡಾಕ್ಟರಿಗೂ ಇದನ್ನು ವಾಸಿ ಮಾಡಲು ಆಗಲಿಲ್ಲ..
ಇದು ನನ್ನ ಜನ್ಮಕ್ಕೆ ಅಂಟಿದ ಶಾಪ...


" ಛೇ.. 
ಬೇಜಾರು ಮಾಡ್ಕೋ ಬೇಡವೋ .. ."


ನಾನು ಎಲ್ಲೇ ಹೋದರು ಜನ ಓಡಿ ಹೋಗುತ್ತಾರೆ..
ನನ್ನನ್ನು ಅಪಹಾಸ್ಯ ಮಾಡ್ತಾರೆ..


ಎಲ್ಲರೂ ಇದ್ದು ನಾನು ಒಂಥರಾ ಒಂಟಿ..
ನನ್ನ ಊರಿನವರಿಗೆ...
ನನ್ನ ಸಂಬಂಧಿಕರಿಗೆ.. ಗೆಳೆಯರಿಗೆ..
ನಾನು ನಗಲಿಕ್ಕೆ ಒಂದು ವಿಷಯ ಆಗಿಬಿಟ್ಟಿದ್ದೇನೆ..


ವಯಸ್ಸಿನ ಆಸೆ..
ಹೆಣ್ಣುಮಕ್ಕಳನ್ನು ನೋಡಿದರೂ.. ಕಿಸಕ್ಕನೆ ನಗುತ್ತಾರೆ..
ನನಗೂ ಆಸೆ ಇದೆ..
ನನ್ನ ನೋವು ಯಾರಿಗೂ ಅರ್ಥನೇ ಆಗೋಲ್ಲ.."


ನಮಗೆಲ್ಲ ನಿಜಕ್ಕೂ ಪಾಪ ಅನಿಸಿತು..


ನಾಗು ಅವನಿಗೆ ಧೈರ್ಯ ತುಂಬಿದ..


"ಹೆದರಬೇಡ ಕಣೋ..
ನಾವೆಲ್ಲ ನಿನ್ನ ಜೊತೆ ಇದ್ದೇವೆ.."


ನಾಗು ನಮಗೆಲ್ಲ ಹೇಳಿದ..


"ನೋಡ್ರೋ..
ದಿನಾಲೂ ಒಂದು ಖರ್ಚೀಫ್ ಇಟ್ಕೋಳ್ಳೋಣ..
ಏನೇನೋ.. ಸಹಿಸ್ಕೋತೀವಿ..
ಇದು ದೊಡ್ಡ ವಿಷಯ ಆಗೋದಿಲ್ಲ ಕಣ್ರೋ..


ವಾಸನೆಗಳೇ ಹೀಗೆ...
ದೊಸ್ತಿಯಾದಮೇಲೆ ಸಹ್ಯವಾಗಿಬಿಡುತ್ತವೆ...
ಏನೂ ಅನ್ನಿಸೋದಿಲ್ಲ...  


ಯಾರನ್ನೇ ಆಗಲಿ..
"ನಮ್ಮವರು" ಅಂತ ಅಂದುಕೊಂಡರೆ  ಅವರ ಎಷ್ಟೋ ವಾಸನೆಗಳು ...
ನಮಗೆ ಗೊತ್ತೇ ..ಆಗುವದಿಲ್ಲ ಕಣ್ರೋ.."

ನಾವೆಲ್ಲ ಹೂಂ.. ಅಂದೆವು...


ಅಂದಿನಿಂದ ಆತ ನಮ್ಮೊಡನೆ ಕೂತ್ಕೋತ್ತಿದ್ದ..
ತನಗೆ ಗ್ಯಾಸ್ ಬರ್ತದೆ ಅಂದಕೂಡಲೆ ಒಂದು ಬಾರಿ ಸಣ್ಣಗೆ ಕೆಮ್ಮುತ್ತಿದ್ದ..
ನಾವೆಲ್ಲ ತಕ್ಷಣ ಖರ್ಚೀಪ್ ಮೂಗಿಗೆ ಇಟ್ಕೋತಿದ್ವಿ...


ಇಂಥಹ ಕೆಟ್ಟ  ವಾಸನೆ ಜಗತ್ತಿನಲ್ಲಿ ಇರಬಹುದೆಂಬ ಕಲ್ಪನೆ  ನಮಗೂ ಇರ್ಲಿಲ್ಲ..!
ಅತ್ಯಂತ  ಕೆಟ್ಟ ವಾಸನೆ ಅದು...!


ಕರ್ಚೀಪ್ಹ್ ಮಧ್ಯದಲ್ಲಿ  ಪೌಡರ್ ಹಾಕ್ಕೊಂಡು ಬರ್ತಿದ್ವಿ...


ಕ್ರಮೇಣ ಅವನೊಂದಿಗೆ ಅವನ ವಾಸನೆಯೊಂದಿಗೂ ಸ್ನೇಹವಾಯಿತು...


ಒಮ್ಮೆ ನಮ್ಮ ಕಾಲೇಜಿನವರು ..
ಒಂದು ಚಾಂಪಿಯನ್  ಕ್ರಿಕೆಟ್ ಟೀಮಿನೊಂದಿಗೆ ಜಯ ಸಾಧಿಸಿದ್ದೇವು..


ಏನಾಗುತ್ತಿದೆ ಅನ್ನುವಷ್ಟರಲ್ಲಿ ಎದುರು ಟೀಮಿನ ಆರು ಆಟಗಾರರು ಔಟಾಗಿದ್ದರು...!!


ನಾವು ಮಾಡಿದ್ದು ಏನೂ ಇಲ್ಲ..
ನಾಗುವಿನ ಸಲಹೆಯಂತೆ "ಇಂಡೇನ್ ಗ್ಯಾಸ್" ನನ್ನು ..
ಬ್ಯಾಟ್ಸಮನ್  ಹತ್ತಿರ  "ಸ್ಲಿಪ್ಪಿನಲ್ಲಿ "  ನಿಲ್ಲಿಸಿದ್ದೆವು..


ಟುಸ್ಸು..ಟುಸ್ಸು...ಟುಸ್ಸು....!!


ಜಯ ಸುಲಭವಾಗಿ ಸಿಕ್ಕಿತ್ತು...


ಆಗ ನಾನು ಮತ್ತು ಉಮಾಪತಿ ...
ಸಿದ್ದಾಪುರದ "ಪದ್ಮನಾಭ ಭಟ್ಟರ " ಮನೆಯಲ್ಲಿ ರೂಮ್ ಮಾಡಿದ್ದೇವು..


ಮಹಡಿಯ ಮೇಲೆ ಮರದ ಹಲಗೆಗಳನ್ನು ಜೋಡಿಸಿ..
ರೂಮುಗಳನ್ನಾಗಿ ವಿಭಾಗ ಮಾಡಿದ್ದರು..


ನಾವು ಊರಿಗೆ ಹೋಗಿ ಬರುವಾಗ ...
ಮನೆಯಿಂದ ಚಕ್ಕುಲಿ.. ಕೋಡುಬಳೆ..ರವೆ ಉಂಡೆ.. ಇತ್ಯಾದಿಗಳನ್ನು ತರುತ್ತಿದ್ದೆವು..


ಎಲ್ಲರಿಗೂ ಹಂಚಿ ತಿನ್ನಲು ಸಾಲುತ್ತಿರಲಿಲ್ಲ..
ಅದಕ್ಕಾಗಿ ರೂಮಿನಲ್ಲಿ ನಾನು ಉಮಾಪತಿ.. ನಾಗು ಮೂವರು ಮಾತ್ರ ತಿನ್ನುತ್ತಿದ್ದೆವು..


ಪಕ್ಕದ ರೂಮಿನ  "ನರಶಿಂವ"  ಮಹಾ ಪ್ರಚಂಡ...
ಅವನದು ಅಸಾಧ್ಯವಾದ ಮೂಗು...
ನಮ್ಮ ರೂಮಿನ ಎಂಥಹ ವಾಸನೆಯನ್ನಾದರೂ ಬಲು ಬೇಗ ಗ್ರಹಿಸಿ ಬಿಡುತ್ತಿದ್ದ...


"ಉಮಾಪತಿ...!
ನಿನ್ನೆ.. ರವೆ ಉಂಡೆ ಚೆನ್ನಾಗಿತ್ತೇನೋ..?"


ನರಶಿಂವನ ಮಾತುಕೇಳಿ ನಮಗೆ ಮುಜುಗರ ಆಗ್ತಿತ್ತು... 
ಸಿಟ್ಟೂ ಕೂಡ ಬರ್ತಿತ್ತು..
ಹಂಚಿಕೊಂಡು ತಿನ್ನಲಾಗದ ಅಸಹಾಯಾಕತೆ..


ಆತ ನಮಗೆಂದೂ ತನ್ನ ತಿಂಡಿ ಯಾವತ್ತೂ ಕೊಡುತ್ತಿರಲಿಲ್ಲ...


ನಾಗು ಒಂದು ಉಪಾಯ ಮಾಡಿದ..


"ಅವನ ಮೂಗು ಏನೂ ಇಲ್ರೋ...
ಆತ ಹಲಗೆಯ ಕಿಂಡಿಯಿಂದ  ಇಣುಕಿ ನೋಡುತ್ತಾನೆ..
ಹಲಗೆಗೆ.. ಪೇಪರ್ ಅಂಟಿಸ್ರೋ...."


ನಾನು ಉಮಾಪತಿ ಪೇಪರ್ ಅಂಟಿಸಿದೆವು...


ನರಶಿಂವ ಮತ್ತೆ ಮರುದಿನ ಕೇಳಿದ..
"ನಿನ್ನೆ ನೀವು ತಿಂದ  "ಕೋಡುಬಳೆ"  ಚೆನ್ನಾಗಿತ್ತೆನ್ರೋ...? " .. 


ನಾಗು ಈ ಬಾರಿ ಬೇರೆ ಉಪಾಯ ಮಾಡಿದ...


ರಾತ್ರಿ ಊಟವಾದ ಮೇಲೆ.. ಲೈಟ್ ಆಫ್ ಮಾಡಿದೆವು..
ಪ್ಲಾಸ್ಟಿಕ್  ಕೊಟ್ಟೆಯ  "ಸಡ ಪಡ"  ಶಬ್ಧ ಮಾಡಿದೆವು...


ಪಕ್ಕದ ರೂಮಿನಿಂದ ಒಂದು ಕಡ್ಡಿ ನಮ್ಮ ರೂಮಿನಲ್ಲಿ ಇಣುಕಿತು..


" ಓಹೋ.. 
ಈ..ನರಶಿಂವ .. 
ಕಡ್ಡಿಯಿಂದ ನಾವು ಅಂಟಿಸಿದ ಪೇಪರನ್ನು..
ತೂತು ಮಾಡಿ.. ಅಲ್ಲಿಂದ ಇಣುಕಿ ನೋಡುತ್ತಾನೆ.. "


ನಾಗು ಮೊದಲೆ "ಸಿಲಿಂಡರ್ ಗ್ಯಾಸ್"  ನನ್ನು ಕರೆದಿದ್ದ...


ನಮ್ಮ  ಗ್ಯಾಸು ಮಹಾದೇವ..
ತಕ್ಷಣ ಆ ಕಡ್ಡಿ ಬಂದ ಜಾಗದಲ್ಲಿ ತನ್ನ ಚಡ್ಡಿಯನ್ನು ಸರಿಯಾಗಿ ಒತ್ತಿ ಹಿಡಿದು..
ಯಥಾನು ಶಕ್ತಿ..
ಇನ್‍ಸ್ಟಾಲ್‍ಮೆಂಟಿನಲ್ಲಿ ... ಗ್ಯಾಸ್ ಬಿಡಲು ಶುರುಮಾಡಿದ..


ಟುಸ್ಸು... !
ಟುಸ್ಸು...! ಟುಸ್ಸು... ! ಟುಸ್ಸೂ...!!!


ಕಂತು.. ಕಂತಾಗಿ ಗ್ಯಾಸ್ ಆ ತೂತಿನಲ್ಲಿ ಹೋಗ ತೊಡಗಿತು...!


ಪಕ್ಕದ ರೂಮಿನಿಂದ ..


"ಅಯ್ಯಯ್ಯೋ.. !!!
ಅಯ್ಯಯ್ಯೋ....!
ಸತ್ತೇನ್ರಪ್ಪೋ.. ಸತ್ತೇ... !!..." 


ನರಶಿಂವ  ಕೂಗಿದ ಶಬ್ದ ಮಾತ್ರ  ಕೇಳಿತು...!.


ಮುಂದೆ ಯಾವತ್ತೂ ....
ನರಶಿಂವ ನಮ್ಮ ರೂಮಿನ ಕಡೆ ಇಣುಕಿಯೂ ನೋಡಲಿಲ್ಲ...!


ಒಂಥರಾ ಹುಳಿ ಮುಖ ಮಾಡಿಕೊಂಡು ಮುಖ ತಿರುಗಿಸಿ ತಪ್ಪಿಸಿಕೊಳ್ಳುತ್ತಿದ್ದ...


ನಮ್ಮ ಒಎನ್ ಜಿಸಿ ..
ಗ್ಯಾಸ್ ಮಹಾದೇವನಿಗೆ ಒಂದು ಕಲೆ ಸಿದ್ದಿಸಿತ್ತು...


ಆತ ತನಗೆ ಬೇಕಾದಾಗ ಶಬ್ದ ಮಾಡಿ ಬಿಡುತ್ತಿದ್ದ..


ಇಲ್ಲವಾದಲ್ಲಿ ಶಬ್ಧವಿಲ್ಲದೆ.. ಸಾವಕಾಶವಾಗಿ..ತಣ್ಣಗೆ ಗ್ಯಾಸ್  ..ಬಿಡುತ್ತಿದ್ದ...


ಆ ಇಚ್ಚಾಶಕ್ತಿ ಇತ್ತು ಅವನಿಗೆ...!


ನಾವು ಕಾಲೇಜಿಗೆ ಹೋಗುವ ದಿನಗಳಲ್ಲಿ ..
ರಾಷ್ಟ್ರಮಟ್ಟದ ನಾಯಕರುಗಳು ಆಗಾಗ ನಿಧನರಾಗುತ್ತಿದ್ದರು..


ನಮ್ಮ ಪ್ರಿನ್ಸಿಪಾಲರು..
ಕಾಲೇಜಿನ ಎಲ್ಲ ಹುಡುಗರನ್ನು ಮೈದಾನದಲ್ಲಿ ಸೇರಿಸಿ....
ಬೋಳು ಕಾಯುವ ರಣ ಬಿಸಿಲಲ್ಲಿ  ..
ಐದು ನಿಮಿಷ ಮೌನಾಚರಣೆ ಮಾಡಿಸುತ್ತಿದ್ದರು..


ಯಾಕೆ ಅಂತ ಗೊತ್ತಿಲ್ಲ..
ಈ ಮೌನಾಚರಣೆ ಎಂದರೆ ಸಿಕ್ಕಾಪಟ್ಟೆ ನಗು ಬರ್ತಿತ್ತು..


ನಮ್ಮಲ್ಲಿ ಯಾರಾಬ್ಬರಾದರೂ "ಬುಸುಕ್" ಅಂತ ಶಬ್ದ ಮಾಡಿದರೆ ..
ತಡೆಯಲಾರದ  ನಗು ಬರ್ತಿತ್ತು..


ಆಗ ನಕ್ಕರೆ ಶಿಕ್ಷೆ ಗ್ಯಾರೆಂಟಿ...
ಎಲ್ಲ ಹುಡುಗರೆದುರಿಗೆ ನಿಲ್ಲಿಸಿ ..
ಸಿಕ್ಕಾಪಟ್ಟೆ ಬೈಯ್ದು ಅವಮಾನ ಮಾಡಿಸಲಾಗುತ್ತಿತ್ತು...


ಈ ಮೌನಾಚರಣೆಯನ್ನು ನಿಲ್ಲಿಸುವದು ಹೇಗೆ..??


ನಾಗು ಗ್ಯಾಸ್ ಮಹಾದೇವನನ್ನು  ಮುಂದಿನ ಸಾಲಿನಲ್ಲಿ ..
ಪ್ರಿನ್ಸಿಪಾಲರ ಹತ್ತಿರ ನಿಲ್ಲಿಸಿದ ...


ಆತ ಯಥಾನು ಶಕ್ತಿ ಗ್ಯಾಸ್ ಬೀಟ್ಟ.. 
ಸೌಂಡ್ ಇಲ್ಲದೆ...
ಕಂತು.. ಕಂತಾಗಿ.. ಸ್ವಲ್ಪ ಸ್ವಲ್ಪವಾಗಿ ಬಿಟ್ಟ...


ಟುಸ್ಸು... !!!
ಟುಸ್ಸು... ಟುಸ್ಸು...ಟುಸ್ಸೂ...!!!


ಬಹಳ ಅದ್ಭುತವಾದ ವಾಸನೆ ಅವನದು.. !!


ಮುಂದೆ ನಿಂತಿದ್ದ ಪ್ರಿನ್ಸಿಪಾಲರ ..
ಮೂಗು...
ಕನ್ನಡಕ ತಂತಾನೇ   ಎಗರಾಡಿತು..!


ಗಟ್ಟಿಯಾಗಿ ಮೂಗು ಹಿಡಿದುಕೊಂಡು ತಮ್ಮ ಛೇಂಬರಿಗೆ ಓಡಿ ಹೋದರು..!


ಹುಡುಗರಿಗೆಲ್ಲ ನಗು ತಡೆಯಲಾಗಲಿಲ್ಲ...!


ಇದೆ ಸಮಯಕ್ಕಾಗಿ ಕಾಯುತ್ತಿದ್ದ..
ಎಲ್ಲರೂ "ಹ್ಹೋ... ಹ್ಹೋ.." ಎಂದುಜೋರಾಗಿ  ನಕ್ಕರು...!


ಪ್ರಿನ್ಸಿಪಾಲರು  ಕೋಪದಿಂದ ಥೈ ಥೈ  ಕುಣಿದಾಡಿದರು...!


"ಯಾವನ್ರೀ.. ಅವನು..?..?..
ಏನು ತೀಂತ್ತಾನ್ರಿ..? .. !!..
ಅಬ್ಬಬ್ಬಾ... !!
ಹದಿನೈದು ದಿನ ಟಾಯ್ಲೆಟ್ಟಿಗೆ ಹೋಗ್ದೇ ಇದ್ರೆ ಈ ಥರ ವಾಸನೆ ಬರಬಹುದು...!


ನಾನು ಊಟ ಮಾಡೋದು ಹೇಗ್ರೀ..?


ನನ್ನ ಮೂಗಿನ ವಾಸನೆಯ ಸಂವೇದನೆಯೇ ಹೊರಟು ಹೋಯ್ತಲ್ರೀ.. !!
ರಾಮಾ... ರಾಮಾ... !
ಯಾರ್ರೀ... ಅವನು...?.. !!.."


ಅಂದಿನಿಂದ ..
ದೇಶದ  ಯಾವ  "ನಾಯಕರು"  ಸತ್ತರೂ ...
"ಮೌನಾಚರಣೆಯ ಕಷ್ಟ"   ಇರುತ್ತಿರಲಿಲ್ಲ...






(ಇನ್ನೂ ಇದೆ...
ನಾಗು ಅವನಿಗೆ ಗ್ಯಾಸ ಬಿಡಿಸಿದ ಕಥೆ... ಮುಂದಿನ ಭಾಗದಲ್ಲಿ...


ಪ್ರತಿಕ್ರಿಯೆಗಳಲ್ಲಿ ಇಲ್ಲಿ ಹೇಳಿರದ ಘಟನೆಗಳಿವೆ.. 
ದಯವಿಟ್ಟು ನೋಡಿ..)


ಎಲ್ಲರಿಗೂ..
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...
ಜೈ ಹೋ.. !!