Saturday, December 6, 2014

.....ಷಂಡ ...............

( ಒಮ್ಮೆ ತಾರೆ... 
ತನ್ನ ಪತಿ ಬ್ರಹಸ್ಪತಿಯ ಬಳಿ ತನ್ನ ಕಾಮದಾಸೆಯನ್ನು ನಿವೇದಿಸುತ್ತಾಳೆ..
ಬ್ರಹಸ್ಪತಿ ಅವಳ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ದೇವಲೋಕದತ್ತ ಹೋಗುತ್ತಾನೆ..
ಬ್ರಹಸ್ಪತಿ 
ಆಶ್ರಮದಲ್ಲಿ ಇಲ್ಲದ ಸಮಯದಲ್ಲಿ ಅಲ್ಲಿಗೆ ಬಂದ ಚಂದ್ರ.. 
ತಾರೆಯರಲ್ಲಿ ಸಂಬಂಧ ಏರ್ಪಡುತ್ತದೆ...
ಅಲ್ಲಿಂದ ಮುಂದೆ... 
ಬ್ರಹಸ್ಪತಿಯ ಸ್ವಗತ...)

:::::::::::::::::::::::::::::::::::::;;;;;;;;;;;;;;;;;;;;;;;;


ನಾನು
ತಾರೆಯನ್ನು ಮದುವೆಯಾದ ದಿನಗಳು...
ಹೊಸ ಬಿಸಿಯ ದಿನಗಳಲ್ಲವೆ ಈಗ.. ?

ನನ್ನವಳ ಪ್ರಶ್ನೆಗಳು ತುಂಬಾ ವಿಚಿತ್ರ...

"ನೀವ್ಯಾಕೆ ಗಡ್ಡ ಬಿಟ್ಟಿದ್ದೀರಿ ? "

ನನಗೆ ನಗು ಬಂತು..

"ನಾನು ಆಧ್ಯಾತ್ಮ ಚಿಂತನೆ..
ಪರಮಾತ್ಮಿಕ ವಿಚಾರಗಳಲ್ಲಿ ತಪಸ್ಸು ಮಾಡುವವನು..

ನಾನು ದೇವಲೋಕದ ಗುರು.. "ಬ್ರಹಸ್ಪತಿ" ನಾನು...

ಇಹಲೋಕದ 
ಕ್ಷಣಿಕ ಸುಖಗಳು  ಮಿಥ್ಯ ಅಂತ ನಂಬಿದವನು....
ಬಂಧನದೊಳಗೆ  ಇದ್ದು.. ಪರಿಧಿಯಾಚೆ ನೋಡುವವನು .. .
ದಿನ ಪೂರ್ತಿ  ಪರಮಾತ್ಮನ  ಚಿಂತನೆಯಲ್ಲಿ ಮುಳುಗಿದವನು..

ನನ್ನಂಥವನಿಗೆ ಬಾಹ್ಯ ಸೌಂದರ್ಯ ಇದ್ದರೆಷ್ಟು.. ಬಿಟ್ಟರೆಷ್ಟು.. ?

ಗಡ್ಡದ ಇರುವು ಪ್ರತಿಕ್ಷಣ ಗೊತ್ತಾದಾಗ... 
ನನ್ನ ಸಾಧನೆ ಇನ್ನೂ ಇದೆ ಅಂತ ಜ್ಞಾಪಕವಾಗುವದಕ್ಕೆ ಗಡ್ಡ ಬಿಟ್ಟಿದ್ದೇನೆ..."

ಅವಳು ನಕ್ಕಳು...
ಕಣ್ಣರಳಿಸಿ ನಗುವಾಗ ಅವಳ ಮುಖವೆಲ್ಲ ಅರಳುತ್ತದೆ...

ನನಗೂ 
ಅವಳನ್ನು ಸ್ವಲ್ಪ ಮಾತನಾಡಿಸುವ ಹಂಬಲ ಉಂಟಾಯಿತು...

"ತಾರೆ...
ಗಡ್ಡ.. 
ಮೀಸೆಗಳು ಗಂಡಸಿಗೆ ಮಾತ್ರ ಯಾಕೆ... ?

ಹೆಣ್ಣಿಗೇಕೆ ಇಲ್ಲ  ಗೊತ್ತಾ ?"

ನನ್ನವಳ ಮನದ ಗೊಂದಲ 
ಅತ್ತಿತ್ತ ಓಡಾಡುವ 
ಅವಳ ಬೊಗಸೆ ಕಣ್ಣುಗಳಲ್ಲಿ ಗೊತ್ತಾಗಿಬಿಡುತ್ತದೆ...

"ಯಾಕೆ ಮುನಿವರ್ಯಾ  ?"

"ಹೆಣ್ಣು ಹೂವಿನಂತೆ...
ಅವಳ ಪ್ರತಿ ಕಣ ಕಣದಲ್ಲೂ ಭಾವನೆಗಳು ಹರಿದಾಡುತ್ತಿರುತ್ತವೆ..

ಅವಳ ಕೆನ್ನೆಗಳಲ್ಲಿ...
ಕಣ್ಣುಗಳಲ್ಲಿ...
ಮೌನ ತುಟಿಗಳಲ್ಲೂ ಭಾವ ತುಂಬಿರುತ್ತವೆ...

ಗಡ್ಡ 
ಮೀಸೆಗಳಿಂದ ಹೆಣ್ಣಿನ ಮುಖ ತುಂಬಿ ಹೋದರೆ ಕಷ್ಟ ಅಲ್ಲವ  ?..

ಗಂಡಿಗೆ 
ಭಾವನೆಗಳು ಕಡಿಮೆ...
ಗಡ್ಡ .. ಮೀಸೆಗಳಿಂದ ಮುಖ ಮುಚ್ಚಿದರೆ ಯಾವ ನಷ್ಟವೂ ಇಲ್ಲ..."

ಈಗ ಅವಳು ಕಣ್ ಮುಚ್ಚಿ ಗಲಗಲನೆ  ನಕ್ಕಳು...

"ಮುನಿವರ್ಯಾ
ಹೆಣ್ಣಿನ ಭಾವನೆಗಳಿಗೂ ಪುರುಷ ಬೆಲೆಕೊಡಬೇಕಲ್ಲವೆ ?"

ನಾನು ಅವಳ ಮಾತನ್ನು ಅಲ್ಲಿಯೆ ತುಂಡರಿಸಿದೆ...

"ಅಗತ್ಯವಿಲ್ಲ...

ಹೆಣ್ಣು ... ಪ್ರಕೃತಿಯ ಹಾಗೆ...
ಹೊಲವನ್ನು ಕೇಳಿ ಯಾರೂ ಉಳುಮೆ ಮಾಡುವದಿಲ್ಲ...

ತನಗೆ ಬೆಳೆ ಬೇಕೆನಿಸಿದಾಗ...
ತನ್ನ ಅವಶ್ಯಕತೆಗಳಿಗಷ್ಟೆ ಪುರುಷ ಹೊಲವನ್ನು ಊಳುತ್ತಾನೆ...

ಪುರುಷನಿಗೋಸ್ಕರವೇ ಪ್ರಕೃತಿ ಹುಟ್ಟಿದ್ದು...
ಹೆಣ್ಣು ಹುಟ್ಟಿದ್ದು...

ಹೆಣ್ಣನ್ನು 
ತನಗೆ ಹೇಗೆ ಬೇಕೋ  ಹಾಗೆ ಬಳಸಿಕೊಳ್ಳುವದು ಪುರುಷನ ಹಕ್ಕು... "

ಅವಳು ಮುಗ್ಧವಾಗಿ ಕಣ್ಣರಳಿಸಿದಳು...

"ನನಗೆ ಅರ್ಥವಾಗಲಿಲ್ಲ ಮುನಿವರ್ಯ..."

"ದಾಂಪತ್ಯದ ..
ಹೆಣ್ಣು ಗಂಡಿನ ಮಿಲನದ ... 
ಸುಖದ ಕ್ಷಣಗಳಿವೆಯಲ್ಲ...

ಸೂಕ್ಷ್ಮವಾಗಿ ಗಮನಿಸಿದ್ದೀಯಾ ?

ಗಂಡು ತನ್ನ ಖುಷಿಯ.. 
ಸುಖದ ಕೊನೆಯ ಹಂತ ತಲುಪಿದಕೂಡಲೆ 
ಮಿಲನದ ಕಾರ್ಯ ನಿಂತುಬಿಡುತ್ತದೆ...

ಗಂಡು ಹೆಣ್ಣಿನ ಮೈಥುನದಲ್ಲಿ ಗಂಡಿನ ಸ್ಖಲನವೇ ಮುಖ್ಯ...
ಗಂಡಸಿನ ತೃಪ್ತಿಯೇ ನಿರ್ಣಾಯಕ... . 

ಅಲ್ಲಿ 
ಹೆಣ್ಣಿಗೆ ಇನ್ನೂ ಸುಖದ ಕ್ಷಣದ ಅಗತ್ಯ ಬೇಕಿದ್ದರೂ 
ಗಂಡು ತೃಪ್ತಿ ಪಡೆದು ಮಲಗಿರುತ್ತಾನೆ...

ಹೆಣ್ಣನ್ನು ಸೃಷ್ಟಿಸಿದ ರೀತಿಯೇ ಹಾಗಿದೆ..

ಸುಖದ ವಿಚಾರ ಬಂದಾಗಲೂ ಹೆಣ್ಣು ಅಬಲೆ... 

ಗಂಡಿಗೋಸ್ಕರ..
ಗಂಡಿನ ಭೋಗ.. 
ಸುಖಗೋಸ್ಕರ ಹೆಣ್ಣಿನ ಹುಟ್ಟು ಆಗಿದೆ..."

ಅವಳಿಗೆ ಕೋಪ ಬಂದಿದ್ದು ಸ್ಪಷ್ಟವಾಗಿ ಕಾಣಿಸಿತು..

"ನೀವ್ಯಾಕೆ ಮದುವೆಯಾಗಿದ್ದೀರಿ  ?
ನೀವು ಸಂಸಾರದ ಸುಖ ಭೋಗಗಳನ್ನು ಬಿಟ್ಟವರಲ್ಲವೆ  ?

ನಿಮಗ್ಯಾಕೆ ಮದುವೆಯ ಅಗತ್ಯ ? "

" ಈ ಜಗತ್ತಿನಲ್ಲಿ 
ಗಂಡು.. ಹೆಣ್ಣು ಹುಟ್ಟಿರುವದು ಸಂತಾನೋತ್ಪತ್ತಿಗೋಸ್ಕರ...

ಆಧ್ಯಾತ್ಮ ಚಿಂತನೆ..
ತಪಸ್ಸಿಗೋಸ್ಕರ ನನ್ನ ಬದುಕು..
ನಾನು ಸನ್ಯಾಸಿ ಅಂತಿದ್ದರೂ..

ಈ ದೇಹದ 
ಮೂಲಗುಣವನ್ನು ಬಿಟ್ಟು ಇರಲಾಗುತ್ತದೆಯೆ  ?

ದೇಹದ ಮೂಲಭೂತವಾದ ಗುಣ ಕಾಮವನ್ನು ಬಿಟ್ಟು ಬದುಕು ಇಲ್ಲ...

ಕಾಮದ ಜೊತೆಗೆ ಪಾರಮಾರ್ಥಿಕ ಸಾಧನೆ ಮಾಡಬೇಕು... 
ಇದು ಸಹಜ... 

ದೇವಲೋಕದ ಎಲ್ಲ ಸಪ್ತ ಋಷಿಗಳನ್ನು ನೋಡು..
ಎಲ್ಲರೂ ಮದುವೆಯಾದವರು...

ಮದುವೆಯಾಗಿ
ಪಾರಮಾರ್ಥಿಕತೆಯತ್ತ ಹೊರಟವರು ನಾವು..."

ಅವಳ ಕೋಪ ತಡೆಯಲಾಗಲಿಲ್ಲ...

"ಆಧ್ಯಾತ್ಮ ಚಿಂತನೆಯವರಿಗೆ 
ಯಾಕೆ ನನ್ನಂಥಹ ಚೆಲುವೆಯ ಅಗತ್ಯ  ?

ಕುಂಟಿಯೋ..
ಕುರುಡಿಯೋ ಸಾಕಾಗುತ್ತಿರಲಿಲ್ಲವೆ ?

ಅಂಥಹ ಅಸಹಾಯಕಳಿಗೆ 
ಸಾಮಾನ್ಯರು ಕಣ್ಣೆತ್ತಿ ನೋಡದ ಕುರೂಪಿಯೊಬ್ಬಳಿಗೆ 
ಬದುಕುಕೊಟ್ಟಿದ್ದರೆ ಚೆನ್ನಾಗಿತ್ತಲ್ಲವೆ  ?

ನಿಮ್ಮಂಥಹ ಋಷಿಗಳಿಗೆ ಚಂದದ ಹೆಣ್ಣೇಕೆ ಬೇಕು  ?"

ನನಗೆ ನಗು ಬಂತು..

"ಅಯ್ಯೋ ಹುಚ್ಚಿ... !

ನಮ್ಮ ಆಧ್ಯಾತ್ಮ ಚಿಂತನೆಗಳಿಗೆ .. 
ತಪಸ್ಸಿಗೆ ಚಂದದ ಅಗತ್ಯವಿಲ್ಲ...

ನಾವು ಮಾಡುವ ಯಜ್ಞ ಯಾಗಾದಿಗಳಿಗೆ 
ಹೋಮ ಹವನಗಳಿಗೆ ಹೆಂಡತಿಯ ಅಗತ್ಯ ಮಾತ್ರ ಇದೆ.. 

ಅಲ್ಲಿಯೂ ಅಂದ ಚಂದದ ಅಗತ್ಯವಿಲ್ಲ..

ಆದರೆ..
ದಾಂಪತ್ಯದ ಹಾಸಿಗೆಗೆ..
ಉದ್ರೇಕದ ಹಸಿವೆಗೆ ಚಂದ ಬೇಕೇ ಬೇಕು...

ಕಾಮದ ಆಕ್ಷಣದ ಸುಖಕ್ಕೆ 
ಚಂದ ಇದ್ದರೆ ಸುಖದ  ಸೊಗಸು ಇನ್ನೂ ಜಾಸ್ತಿ...."

"ಮುನಿವರ್ಯಾ....
ಆಲದಂತಹ ಹೆಮ್ಮರವನ್ನು ಬೆಳೆಸುವ 
ಸಾಮರ್ಥ್ಯವಿರುವ ಪ್ರಕೃತಿಯ ಹೊಲದಲ್ಲಿ 
ಮೆಂತೆ ಸೊಪ್ಪನ್ನು ಬೆಳೆಸುವ ಪುರುಷನಿಗೆ ಏನನ್ನ ಬೇಕು  ?

ಪುರುಷ ಕೊಟ್ಟಾಗಲಷ್ಟೇ ಸುಖ ಅನುಭವಿಸಬೇಕು..

ಪುರುಷ ಕೊಟ್ಟಷ್ಟೇ ಸುಖದಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು...!

ಪ್ರಕೃತಿಗೆ.. 
ಹೆಣ್ಣಿಗೆ ಇದರಲ್ಲಿ ಅವಕಾಶ ಇಲ್ಲವೆಂದಾದರೆ..

ಪ್ರಕೃತಿ ಅಂದರೆ ಸಹಜ ಅಂತ ಅರ್ಥವೆ ?..
ಹೆಣ್ಣಿನ ಅತೃಪ್ತಿ ಸಹಜವೇ ?.. ?

ಇವಳಿಗೊಂದು ಸೊಕ್ಕಿನ ಉತ್ತರ ಕೊಡಬೇಕು ಎನಿಸಿತು...

"ಹೌದು...
ಅದಕ್ಕಾಗಿಯೇ ಹೇಳಿದ್ದು... 

ಶಾರೀರಿಕವಾಗಿ ಒಂದೇ ಅಲ್ಲ... 
"ಸುಖ" ಪಡುವ ವಿಷಯದಲ್ಲೂ   ಹೆಣ್ಣು ಅಬಲೆ...!

ಈ ಹೆಣ್ಣಿನ ಕುಲವಿರುವದು ಪುರುಷನ 
ಸುಖ,, ಭೋಗಸ್ಕೋರ ಮಾತ್ರ...

ಇದು ಜಗತ್ತಿನ ಸಹಜ ಸತ್ಯ..."

ಅವಳು ಮತ್ತೆ ಮಾತನಾಡಲಿಲ್ಲ..
ಎದ್ದು ಹೋದಳು...

ಇಂಥಹ ಚರ್ಚೆ ನಮ್ಮಿಬ್ಬರಲ್ಲಿ ಅತ್ಯಂತ ಮಾಮೂಲಿ...

ನಾನು 
ದೇವಲೋಕದಿಂದ ಬಂದಮೇಲೆ ಗೊತ್ತಾಯಿತು..
ನನ್ನ ತಾರೆ ಬಸುರಿ ಅಂತ..

ತುಂಬಾ ಸಂತೋಷವಾಯಿತು...

ಮುಂದೊಂದು ದಿನ 
ಒಂದು ಅತ್ಯಂತ ಮುದ್ದಾದ ಗಂಡು ಮಗುವಿಗೆ ಅಪ್ಪನೂ ಆದೆ..

ಎಲ್ಲೆಡೆ ಸಂಭ್ರಮ  !

ಮಗುವಿನ ನಾಮಕರಣದ ಕಾರ್ಯಕ್ರಮವನ್ನು 
ವಿಜ್ರಂಭಣೆಯಿಂದ ಆಚರಿಸಲು ನಿಶ್ಚಯಿಸಿದೆ.

ಸಮಸ್ತ ಲೋಕದ ಗಣ್ಯರನ್ನು ಆಹ್ವಾನಿಸಿದೆ...

ಪುರೋಹಿತ ವರ್ಗದವರ ಮಂತ್ರ ಘೋಷಣೆ  ಮುಗಿಲು ಮುಟ್ಟಿತ್ತು...

ಅತಿಥಿಗಳ ಕಿಲ ಕಿಲ ನಗು...
ಸಂಭಾಷಣೆ.. 
ಗದ್ದಲದಿಂದ ಸಂಭ್ರಮಕ್ಕೆ ಕಳೆ ಕಟ್ಟಿತ್ತು..

ಆಗ ಒಂದು ಘರ್ಜನೆ ಕೇಳಿ ಬಂತು... !

"ಈ ಕಾರ್ಯಕ್ರಮವನ್ನು ಇಷ್ಟಕ್ಕೇ  ನಿಲ್ಲಿಸಿ..!."

ನಾನು ಆ ಧ್ವನಿಯತ್ತ ತಿರುಗಿ ನೋಡಿದೆ...

ನನ್ನ ಶಿಷ್ಯ ಚಂದ್ರ..!

ನನ್ನನ್ನು ನೋಡಿದ ಚಂದ್ರ ಮತ್ತೆ ಹೂಂಕರಿಸಿದ...

"ಗುರುವರ್ಯಾ...
ಈ ಮಗುವಿಗೆ ಅಪ್ಪ ನಾನು..

ಈ ಮಗುವಿನ ನಾಮಕರಣ ನನ್ನ ಹಕ್ಕು  !
ಈ ಮಗುವಿಗೆ ನಾನು ಹೆಸರಿಡುವೆ..."

ನಾನು ದಿಘ್ಬ್ರಾಂತನಾದೆ !

ನೆರೆದಿರುವ ಅತಿಥಿಗಳನಡುವೆ 
ನನ್ನ ಮಾನ..
ಮರ್ಯಾದೆ ಮಣ್ಣು ಪಾಲಾಗುತ್ತಿದೆ...!

"ನೀಚನಂತೆ ಮಾತನಾಡಬೇಡ...
ಯಾರ ಬಳಿ.. 
ಯಾವ ಮಾತನಾಡುತ್ತಿರುವೆಯೆಂದು ಪ್ರಜ್ಞೆ ಇಟ್ಟುಕೊ..."

ಚಂದಿರ ಮತ್ತೆ ಹೂಂಕರಿಸಿದ...

ಸಭೆಯಲ್ಲಿ ಗದ್ದಲ ಶುರುವಾಯಿತು...
ಬಿಸಿ ಬಿಸಿ ಚರ್ಚೆ.. ವಾಗ್ವಾದ ಶುರುವಾಯಿತು...

ಇಂದ್ರದೇವ ಮುಂದೆ ಬಂದು ಎಲ್ಲರನ್ನೂ ಶಾಂತಗೊಳಿಸಿದ..

"ಇಬ್ಬರೂ ಈ ರೀತಿ ಜಗಳವಾಡಿದರೆ 
ವಿಷಯ ಗೊತ್ತಾಗುವದಿಲ್ಲ...
ಮಗುವಿನ ತಾಯಿಯನ್ನು ಕರೆಸಿರಿ..."

ತಲೆಯನ್ನು ತಗ್ಗಿಸಿ 
ತಾರೆ ಸಭೆಗೆ ಬಂದಳು...

ಅಲ್ಲಿರುವ 
ಹಿರಿಯರು ಪರಿ ಪರಿಯಾಗಿ ತಾರೆಗೆ ಪ್ರಶ್ನೆ ಕೇಳಿದರು...

"ಈ ಮಗುವಿನ "ಅಪ್ಪ" ಯಾರು  ?"

ತಾರೆ ಮಾತನಾಡಲಿಲ್ಲ... 
ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ...
ಮೌನವಾಗಿ ಸುಮ್ಮನಿದ್ದುಬಿಟ್ಟಿದ್ದಳು... !

ನನಗೆ..
ನನ್ನ ಗರ್ವಕ್ಕೆ ದೊಡ್ಡ ಕೊಡಲಿ ಏಟು ಬಿದ್ದಂತಾಗಿತ್ತು...

ಇಂದ್ರ ಲೋಕದಲ್ಲಿ 
ತ್ರಿಲೋಕ ಸುಂದರಿಯರಾದ ಅಪ್ಸರೆಯರನ್ನು ನಿರ್ವಿಕಾರವಾಗಿ ನೋಡಿ.. 
ಪ್ರತಿಕ್ರಿಯಿಸುವ .. 
ನಾನು ಪತಿ ಧರ್ಮವನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದವನು... 

ನಾನಿಲ್ಲದ ಸಮಯದಲ್ಲಿ ತಾರೆ ಜಾರಿದಳೆ  ?

ತುಂಬಿದ ಸಭೆಯಲ್ಲಿ  ಕೋಪದಿಂದ.. 
ಅವಮಾನದಿಂದ 
ಕಾಲನ್ನು  ಜೋರಾಗಿ ಒದೆಯುತ್ತ... 
ನೇರವಾಗಿ..
ತಾರೆಯ ಅಜ್ಜ..
ಬ್ರಹ್ಮನ ಬಳಿ ಹೋದೆ...

"ಸೃಷ್ಟಿಕರ್ತಾ...
ದೇವತೆಗಳ ಗುರುವಾದ  ನನಗೆ ಅನ್ಯಾಯವಾಗಿದೆ...

ಅವಮಾನವಾಗಿದೆ ನಿನ್ನ ಮೊಮ್ಮಗಳಿಂದ...!

ನನಗೆ ನ್ಯಾಯ ಕೊಡಿಸು..."

ಬ್ರಹ್ಮದೇವ..
ಚಂದ್ರನನ್ನೂ.. ತಾರೆಯನ್ನೂ ಪ್ರತ್ಯೇಕವಾಗಿ ಕರೆದು ಮಾತನಾಡಿದ...

ಆಮೇಲೆ ನನ್ನನ್ನು ಕರೆದ...

"ಗುರು... 
ಬ್ರಹಸ್ಪತಿ... ಶಾಂತನಾಗು...

ನೀನು 
ಇಹಲೋಕದ ಐಹಿಕ ಸಾಂಗತ್ಯವನ್ನು ತ್ಯಜಿಸಿ ... 
ಋಷಿಯಾದವನು...
ಮತ್ತೆ ಜಗದ ಜಂಜಡಗಳಿಗೆ ಬೀಳಬೇಡ...

ತಾರೆಗೆ
ಪ್ರಕೃತಿ ಸಹಜವಾಗಿ 
ಕಾಮದಾಸೆ ಆದಾಗ ನೀನು ಪುರಸ್ಕರಿಸಲಿಲ್ಲ.. .

ಅದು ನಿನ್ನ ಮೊದಲ ತಪ್ಪು...

ಅವಳು ಚಂದ್ರನನ್ನು ಸೇರಿದಾಗ 
ನಿನ್ನ ಕುರಿತು ಧ್ಯಾನದಲ್ಲೇ ಇದ್ದಳಂತೆ...

ಗಂಡು.. 
ಹೆಣ್ಣಿನ ಮಿಲನದಲ್ಲಿ 
ಬೇರೆ ವ್ಯಕ್ತಿಯ ಬಗೆಗೆ ಚಿಂತಿಸಿದರೆ ... 
ಅದು ಮಾನಸಿಕ ವ್ಯಭಿಚಾರವಾಗುತ್ತದೆ..

ಆದರೆ 
ನಿನ್ನ ತಾರೆ
ಚಂದ್ರನನ್ನು ಸೇರುವಾಗಲೂ 
ನಿನ್ನ ಧ್ಯಾನದಲ್ಲೇ ಇದ್ದಳು... ಇದು ವ್ಯಭಿಚಾರವಲ್ಲ.. ಸದಾಚಾರವಲ್ಲವೇ ?..

ಈ ವಿಷಯವನ್ನು ದೊಡ್ಡದಾಗಿಸಿ...
ಆಕಾಶಕ್ಕೆ 
ಎಂಜಲು ಉಗಿದು 
ನಿನ್ನ ಮುಖಕ್ಕೆ  ಯಾಕೆ  ಬೀಳಿಸಿಕೊಳ್ಳುತ್ತೀಯಾ ?

ಅವಳನ್ನು ಕ್ಷಮಿಸಿ ದೊಡ್ಡ ಮನುಷ್ಯನಾಗಿಬಿಡು..."

ನಾನು ಸುಮ್ಮನೆ
ಅವಡುಗಚ್ಚಿ ಹೊರಗೆ ಬಂದೆ...

ಒಳಗೊಳಗೆ ಜ್ವಾಲಾಮುಖಿ ಕುದಿಯುತ್ತಿತ್ತು...

ಉಪದೇಶ ಬೇರೆಯವರಿಗೆ ಕೊಡುವದು ಸುಲಭ...!

ನನ್ನೊಳಗಿನ ಗಂಡಸು..
ಸೊಕ್ಕಿನ ಅಹಮ್ ಸುಮ್ಮನಿರಬೇಕಲ್ಲ...!

ಗಡಸುತನದಿಂದ ಅಲ್ಲವೇ ಗಂಡಸು ಶಬ್ದ ಉತ್ಪತ್ತಿಯಾದದ್ದು ? 

ಆಶ್ರಮಕ್ಕೆ ಬಂದವನೇ ಮಗುವನ್ನು ಎತ್ತಿಕೊಂಡೆ...

ಮಗು ಮುಗ್ಧವಾಗಿ ನಗುತ್ತಿತ್ತು...

ಆ ನಗು 
ನನ್ನ ಗಂಡಸುತನವನ್ನು..
ನನ್ನ ಹಂಕಾರವನ್ನು ಅಣಕಿಸಿದಂತಿತ್ತು..
ಕೆಣಕುವಂತಿತ್ತು... 

ಕಮಂಡಲದಿಂದ ನೀರು ತೆಗೆದುಕೊಂಡೆ...

ತಾರೆ ಗಾಭರಿಯಿಂದ ನನ್ನ ಕಾಲು ಹಿಡಿದುಕೊಂಡಳು...

ನಾನು ಕಾಲು ಝಾಡಿಸಿದೆ... 
ತಾರೆ ದೂರ ಹೋಗಿ ಬಿದ್ದಳು...!

" ನನ್ನದಲ್ಲದ ಈ ಮಗು...ಷಂಡನಾಗಲಿ... ...!

ಗಂಡಾಗಿ ಹುಟ್ಟಿದ್ದರೂ ... 
ನಿರ್ವೀರ್ಯದ ಬದುಕು ಸಾಗಿಸಲಿ..."

ತಾರೆ
ಪರಿ ಪರಿಯಾಗಿ  ಬೇಡಿಕೊಂಡಳು...

ನಾನು ಬಗ್ಗಲಿಲ್ಲ...

"ತಾರೆ..
ನಾನು ಯಾಕೆ ಈ ಘೋರವಾದ ಶಾಪ ಕೊಟ್ಟೆ ಗೊತ್ತಾ ?"

ದಳ 
ದಳನೆ ನೀರಿಳಿವ ಕಣ್ಣಿಂದ 
ತಾರೆ ದೈನ್ಯವಾಗಿ ನನ್ನನ್ನು ನೋಡಿದಳು...

" ಪತಿಯನ್ನು ಧಿಕ್ಕರಿಸಿ..
ಅಕ್ರಮ ಸಂಬಂಧ ಮಾಡುವ 
ಪ್ರತಿಯೊಂದೂ ಹೆಣ್ಣಿಗೂ ಈ ಶಾಪ ನೆನಪಿನಲ್ಲಿರಬೇಕು...

ಹೆಣ್ಣಿನ ಅಕ್ರಮ ಸಂಬಂಧ ಮಾಡುವ 
ಪ್ರತಿಯೊಬ್ಬ  ಗಂಡಸಿಗೂ ಇದು ನೆನಪಿನಲ್ಲಿರಬೇಕು..

ನೀನೂ..
ನಿನ್ನ ಚಂದ್ರ ಬದುಕಿನುದ್ದಕ್ಕೂ
ಷಂಡ ಮಗುವನ್ನು ನೆನಪಿಸಿಕೊಂಡು ಕೊರಗುತ್ತಿರಬೇಕು...

ನಿಮ್ಮಿಬ್ಬರಿಗೆ 
ನಿಮ್ಮ ಅಕ್ರಮ ಸಂಬಂಧ ನೆನಪಾದಗಲೆಲ್ಲ 
ಈ "ನಿರ್ವೀರ್ಯ" ಮಗು ನೆನಪಾಗಬೇಕು....!.. "

ನನ್ನ  ಬಿರುಸಿನ ಮಾತನ್ನು ಕೇಳಿದ 
ತಾರೆ ಧಡಕ್ಕನೆ ಎದ್ದಳು...

ಕೋಪದಿಂದ ಕಂಪಿಸುತ್ತಿದ್ದಳು.... 

"ಮುನಿವರ್ಯಾ...
ತಪ್ಪು ಮಾಡಿದೆ...

ಈ ವಿಶ್ವದಲ್ಲಿ..
ಸೂರ್ಯ.. 
ಚಂದ್ರ.. ತಾರೆ..ಗುರು ....
ಇರುವ ತನಕ "ಬುಧನೂ" ಇರುತ್ತಾನೆ...

ಪ್ರೀತಿಸಿದ
ಒಲಿದ
ಹೆಣ್ಣಿನ ಆಸೆ ನೆರವೇರಿಸದ 
"ಗುರು" .... 
ಅವನ ಪೌರುಷ.. ಅಹಂಕಾರ.. ಸೊಕ್ಕೂ ಕೂಡ ನೆನಪಾಗುತ್ತದೆ....

ನೀನು ಹೇಳುವ 
ಅಕ್ರಮ..
ಅನೈತಿಕ ಸಂಬಂಧಳೂ ಶಾಶ್ವತವಾಗಿ ಇರುತ್ತವೆ...

ನನ್ನ ಈ ಮಾತು  ಸೂರ್ಯನಷ್ಟೆ ಸತ್ಯ...!.. .".. 

ನನ್ನ ಕೋಪವಿನ್ನೂ ಆರಿರಲಿಲ್ಲ...

ಆಕಾಶ ನೋಡಿದೆ...

ಹುಣ್ಣಿಮೆಯಾಗಿತ್ತು...

ಚಂದ್ರ ಬಾನಿನಲ್ಲಿ ನಕ್ಕಂತೆ ಕಂಡ....

ನನ್ನ ಮೈಯೆಲ್ಲ ಉರಿಯುತ್ತಿತ್ತು....!


( ಕಥೆಯನ್ನು ಓದಿ .. ಚರ್ಚಿಸಿ .. ಸಲಹೆ, ಸೂಚನೆ ನೀಡಿದ 
ಗೆಳೆಯ "ಸುಬ್ರಮಣ್ಯ .. ದೀಕ್ಷಾ ಕಾಲೇಜು ಹುಬ್ಬಳ್ಳಿ"
ಮತ್ತು ನನ್ನ ಪ್ರೀತಿಯ "ವಾಜಪೇಯಿ ಅಣ್ಣ" ಇವರಿಗೆ ಪ್ರೀತಿಯ ನಮನಗಳು.. 

ಚಂದದ ಪ್ರತಿಕ್ರಿಯೆಗಳಿವೆ.. 
ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ... )


28 comments:

Nivedita Chirantan said...

ಹೆಣ್ಣು ಗಂಡಿನ ಮಧುರ ಸಂಬಂಧವನ್ನು ಇಷ್ಟು ಹಗುರವಾಗಿ ನೋಡಿದ ಮತ್ತು ಹೆಣ್ಣು ಒಂದು ಆಸ್ತಿಯ ಸ್ವರುಪವಷ್ಟೇ ಅಂತ ತಿಳಿದ ಭ್ರುಹಸ್ಪತಿಗೆ ಸರಿಯಾಯಿತು ಅಂತ ಖುಶಿಪಡಬೇಕೇ .... ಏನೇ ಆದರು ಒಂದು ಗೆರೆಯನ್ನು ದಾಟಬಾರದು ಎಂದು ತಿಳಿಯದ ತಾರೆಗಾಗಿ ದುಃಖಿಸಬೇಕೆ.....

ಏನೇ ಆಗಲಿ ನಿಮ್ಮ ಬರವಣಿಗೆ ಅದ್ಭುತ.. ಭಾಷೆಯ ಹಿಡಿದ ಅಮೊಗವಾಗಿದೆ..

Unknown said...

ಪ್ರಕಾಶಣ್ಣ..ಅದ್ಭುತವಾಗಿ, ನವಿರಾಗಿ, ಮನೋಭಾವನೆಯ ಅನಾವರಣ. ಸತ್ಯವನ್ನು ಹೇಳುವ ಸು೦ದರ, ಅದ್ಭುತ ಸಾಲುಗಳು..

ಸಂಧ್ಯಾ ಶ್ರೀಧರ್ ಭಟ್ said...

ಕೋಪ ಮಡುಗಟ್ಟಿದಾಗ ಯಾವ ರೀತಿಯಲ್ಲೂ ಕಟ್ಟೆಯೊಡೆಯಬಹುದು .. ತಾರೆ ನೀತಿ ಮೀರಿದರೆ ಬ್ರಹಸ್ಪತಿಗಳು ನೀತಿ ಮರೆತರು.. ಅನೈತಿಕ ಸಂಬಂಧಕ್ಕೂ ಬ್ರಹ್ಮನದು ನೈತಿಕ ಚೌಕಟ್ಟಿನ ನ್ಯಾಯ..!! ತಾರೆ ಪ್ರಕೃತಿಯಾದರೆ ಹೆಣ್ಣಿನ ಶಾಪ ನಿಜವಾಗಿದೆ ಎನಿಸುತ್ತಿದೆ ಈಗಿನ ಸಮಾಜವನ್ನು ನೋಡಿದಾಗ..

Ittigecement said...

ನಿವೇದಿತಾ...

ಮೊದಲ ಬಾರಿಗೆ ಪುರುಷನಿಗೋಸ್ಕರ ..
ಪುರುಷನ ಪರವಾಗಿ ಕಥೆ ಬರೆಯುವ ಪ್ರಯತ್ನ ಮಾಡಿದೆ.. ಸಾಧ್ಯವಾಗಲಿಲ್ಲ..

ತನಗಾಗಿ.. ತನಗೋಸ್ಕರ ಪ್ರಕೃತಿ ಎಂದು ಅಹಂಕಾರ ತೋರಿದವರಿಗೆಲ್ಲ
ಪ್ರಕೃತಿ ತನ್ನದೇ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಿರುವದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ...
ಉದಾಹರಣೆಗೆ "ಗ್ಲೋಬಲ್ ವಾರ್ಮಿಂಗ್"

ಹೆಣ್ಣೂ ಸಹ ಇದಕ್ಕೆ ಹೊರತಾಗಿಲ್ಲ......

ಸೇಡು ತೀರಿಸಿಕೊಂಡರೂ ಹಾಳಾಗಿದ್ದು ಅವರವರ ಸ್ವಂತದ.. ಪ್ರೀತಿಸುವ ಬದುಕು ತಾನೆ ?..

ಪ್ರಕೃತಿದತ್ತವಾಗಿ ಹೆಣ್ಣು ಅಬಲೆ...
ಸುಖದ ವಿಷಯದಲ್ಲೂ ಸಹ ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ...

ಬ್ರಹಸ್ಪತಿಯ ಸೊಕ್ಕಿಗೂ..
ದಾರಿ ತಪ್ಪಿದ ತಾರೆಗೂ ಪಾಠವಾದ ಈ ಕಥೆ ಬಹಳವಾಗಿ ಕಾಡುತ್ತದೆ..

ನಮ್ಮ ಪುರಾಣಗಳಲ್ಲಿರುವಷ್ಟು ವಿಷಯ ಸಮೃದ್ಧಿ ಬೇರೆ ಎಲ್ಲೂ ಸಿಗಲಿಕ್ಕಿಲ್ಲ..

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು...

Ittigecement said...

ಪ್ರೀತಿಯ ಮಂಜೂ...

ಸುಖದ ವಿಷಯದಲ್ಲಿ ಹೆಣ್ಣು ಅಬಲೆ ...

ಈ ವಿಷಯದ ಬಗೆಗೆ ನನ್ನ ಆತ್ಮೀಯರಲ್ಲಿ ಮಾತನಾಡಿದ್ದೆ..

"ಹೆಣ್ಣಿಗೆ ಒಂದು ರೂಪಾಯಿ ಬೇಕು ಅಂತ ಆಸೆ ಇದ್ದಾಗ ....
ಗಂಡು ಐವತ್ತು ಪೈಸೆ ಮಾತ್ರ ಕೊಡುತ್ತಾನೆ ಅಂತಿಟ್ಟುಕೊಳ್ಳೋಣ..

ಹೆಣ್ಣು ಆಗ ಗಂಡಿನ ಬಳಿ ಐವತ್ತೇ ಪೈಸೆ ಇದೆ..
ಇಷ್ಟೇ ತನ್ನ ಭಾಗ್ಯ.. ತನ್ನ ಅವಶ್ಯಕತೆ ಅಂತ ಸಮಾಧಾನಿಸಿಕೊಳ್ಳುತ್ತಾಳೆ..

ತನ್ನ ಆಸೆಯಾದ ಒಂದು ರೂಪಾಯಿಗೋಸ್ಕರ ಹೊರಗಡೆ ಕೇಳಲು ಹೋಗುವದಿಲ್ಲ..
ಹಾಗಾಗಿ ಎಷ್ಟೆಲ್ಲ ಸಂಸಾರಗಳು ಒಟ್ಟಿಗಿವೆ.."

ಎನ್ನುವದು ಅವರ ಅಭಿಪ್ರಾಯವಾಗಿತ್ತು...

"ಹಾಗಾದರೆ ಅದು ಸಹಜ ಹೇಗಾಗುತ್ತದೆ ?..
ಪ್ರಕೃತಿ ಅಂದರೆ ಸಹಜ ಅಂತ ಅರ್ಥವಲ್ಲವೆ ?..

ಹೆಣ್ಣಿನ ಅತೃಪ್ತಿ ಎನ್ನುವದು ಸಹಜವೇ ಈ ಜಗತ್ತಿನಲ್ಲಿ ?..."

ಆ ಹೆಣ್ಣುಮಗಳು ಕೊಟ್ಟ ಉತ್ತರ " ಹೌದು....ಅದು ಸತ್ಯ...."

ಕಡೆಯುತ್ತಾ ಹೋದಲ್ಲಿ ಎಷ್ಟೆಲ್ಲ ವಿಷಯಗಳಿವೆ ಇಲ್ಲಿ ಅಲ್ಲವಾ ?

ಕಥೆಯನ್ನು ಓದಿ ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು...

ಪೀಯೂಷ said...

ಪ್ರಕಾಶಣ್ಣ ಕಥೆ ಚಿಂತನೆಗೆ ಓರೆ ಹಚ್ಚುತ್ತದೆ.. ಇಬ್ಬರದೂ ಸರಿಯಲ್ಲ ಹಾಗೆಂದು ತಪ್ಪು ಎಂದು ಖಡಾಖಂಡಿತವಾಗಿ ಹೇಳಲು ಮನಸ್ಸು ಒಪ್ಪುತ್ತಿಲ್ಲ. ಆಲದ ಮರ ಬೆಳೆಯುವಲ್ಲಿ ಮೆಂತೆಯ ಸೊಪ್ಪುನ್ಣು ಬೆಳೆಸುವುದು ಎಷ್ಟು ಸರಿ ಎನ್ನುವುದು ಹೇಗೆ ಕಾಡುತ್ತೋ ಹಾಗೆ ಕ್ಷಣಿಕ ಸುಖದಾಸೆಗೆ ಚಂದ್ರನ ಒಪ್ಪಿದ್ದೂ ಎಷ್ಟು ಸರಿ ಎಂದು ಕಾಡುತ್ತೆ.. ಪ್ರಕೃತಿಯ ಮುನಿದರೆ ಯಾವ ಪುರುಷನಿಂದಲು ಅದನ್ನು ನಿಯಂತ್ರಣದಲ್ಲಿರಿಸಲು ಸಾದ್ಯವಿಲ್ಲ.. ಅದನ್ನು ಮನಗಂಡೇ ಗಂಡಸಿಗೆ ಗಡಸುತನ ಹೆಣ್ಣಿಗೆ ಮೃದುತನ.... ಪ್ರಕೃತಿಗೆ ತನ್ನ ಶಕ್ತಿ ಅರಿವಾಗದಿರಲಿ ಎಂದು ದುರ್ಬಲ ಮನೋಭಾವ ಸಹಜವಾಗಿ ಬಂದಿದೆಯೇನೋ ಅನ್ಸುತ್ತೆ.. ಪುರುಷನ ಅಸಹಾಯಕತೆಯೇ ಶಾಪ.. ಆ ಶಾಪದ ಇನ್ನೊಂದು ಮಜಲೇ ಅದರ ಮುಂದುವರಿಕೆ... ಆ ನಿಟ್ಟಿನಲ್ಲಿ ತಾರೆಯ ಕೊನೆಯ ಮಾತುಗಳು ಕನ್ನಡಿ... ಇದು ನನ್ನ ಆಲೋಚನೆಯ ಮಿತಿ ತಪ್ಪಿದ್ದರೆ ತಿದ್ದಿ....

Unknown said...

ನಿಜಕ್ಕೂ ಕಥೆಯ ನಿರೂಪಣೆ ಅದ್ಭುತ .....

Ittigecement said...

ಸಂಧ್ಯಾ ಪುಟಾಣಿ...

ಪರಸ್ಪರ ಹೊಂದಾಣಿಕೆ ಇರಲಿ ಎನ್ನುವದು ಸೃಷ್ಟಿಯ ಆಶಯ...
ಪ್ರಕೃತಿಯಾಗಲಿ..
ಪುರುಷನಾಗಲಿ ತಮಗೆ ಬೇಕಿದ್ದ ಹಾಗೆ ಅರ್ತೈಸಿಕೊಂಡರೆ ಅದು ಸೃಷ್ಟಿಯ ತಪ್ಪಲ್ಲ...

"ಸನ್ಯಾಸಿಗಳು.. ಋಷಿಗಳೆಲ್ಲರೂ ಮದುವೆಯಾಗಿದ್ದವರು.." ಇದು ನನಗೆ ಸೋಜಿಗವೆನಿಸಿದ್ದು..

ಅವರ್ಯಾರೂ ದೇಹದ ಆಸೆಯಾದ ಕಾಮವನ್ನು ಮೀರಲು ಹೋಗದೆ..
ಅದರೊಳಗಿದ್ದು ತಮ್ಮ ಸಾಧನೆಯನ್ನು ಗುರುತಿಸಿಕೊಂಡವರು...

ಸನ್ಯಾಸಿಗಳು ಮದುವೆಯಾಗಬಾರದು ಎನ್ನುವದು ಎಲ್ಲಿಂದ ಹುಟ್ಟಿತು ?

ಇವೆಲ್ಲ
ಪುರಾಣದ ಕಥೆಗಳು ಅಂತ ಇಟ್ಟುಕೊಂಡರೂ...
ಆಗಿನ ಕಾಲದಲ್ಲೂ ಇಂಥಹ "ಅನೈತಿಕ" ಸಂಬಂಧಗಳಿದ್ದವು...
ಅವುಗಳನ್ನು "ಬ್ರಹ್ಮ" ಹೇಳಿದ ರೀತಿಯಲ್ಲಿ ಪರಿಹರಿಸುತ್ತಿದ್ದರು.. ಇವೆಲ್ಲ ಕುತೂಹಲಕಾರಿಯಾಗಿವೆ...

"ತಾರೆ..
ಚಂದ್ರನಿಂದ ಮಗುವನ್ನು ಪಡೆದ ಮೇಲೂ.. ಅವಳು ಗುರು ಬ್ರಹಸ್ಪತಿಯೊಡನೆಯೇ ದಾಂಪತ್ಯ ಜೀವನ ನಡೆಸುತ್ತಿದ್ದಳು..."

ಇದು
ಅಂದಿನ ಸಾಮಾಜಿಕ ವಿಚಾರಧಾರೆಗೆ ಹಿಡಿದ ಕನ್ನಡಿಯಂತೆ...

ಬಹುಷಃ
ಒಂದಷ್ಟು ಕಟ್ಟುಪಾಡುಗಳೊಡನೆ ಮುಕ್ತ ಕಾಮ ಆಗ ಸಹಜವಾಗಿತ್ತು..
ಅಂದಿನ ಸಮಾಜವೂ ಇವುಗಳನ್ನು ಒಪ್ಪಿತ್ತು...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...

umesh desai said...

ಸೊಗಸಾದ ಕತೆ ಹೆಗಡೇಜಿ..ಇದು ಎಲ್ಲ ಖರೆನೋ ಅಲ್ಲವೋ ಅದು ಬೇರೆ ವಿಷಯ..ಆದರೆ
ಇಂತಹ ಕತೆ/ಪುರಾಣಗಳು ಪೀಳಿಗೆ ಪೀಳಿಗೆ ಹರಿದು ಖಾಪ್ ,ತಾಲಿಬಾನ್ ಗಳಿಗೆ ಕಾರಣವಾಗಿರಬಹುದು..!!

Sneha said...

ಅದ್ಭುತವಾಗಿ ವರ್ಣಿಸಿದ್ದೀರಾ ಸರ್... ಹೆಣ್ಣಿನ ನವಿರು ಭಾವನೆ ಅವಳ ಮನಸ್ಥಿತಿ ಆಕ್ರೋಶ ಅಸಹಾಯಕತೆ ಎಲ್ಲಾ ಭಾವಗಳು ಪೂರ್ಣವಾಗಿ ಬಿಂಬಿಸಿದ್ದೀರಾ... ಅಹಂಕಾರಿ ಬೃಹಸ್ಪತಿಗೆ ಸಲ್ಲ ಬೇಕಾದ್ದುದ್ದೆ ... ಅವನ ಸ್ವಗತ ಪೂರಾ ತಾರ ಮೆರೆದಿದ್ದಳು ಅವನ ಠೊಳ್ಳು ಅಹಂನ ಬಿಸಿಲನಲ್ಲಿ... ಸಾಧ್ಯವಾದರೆ ಚಂದ್ರನ ಸ್ವಗತ ಬರೆಯಿರಿ ಸರ್ ಓದುವ ಆಸೆ... ಅವನ ಮುಖದರ್ಶನ ಕೂಡ ಆಗಲಿ... ಒಂದು ಒಳ್ಳೆಯ ಬರಹಕ್ಕೆ ಧನ್ಯವಾದಗಳು

Badarinath Palavalli said...

ತಾರೆಯ ಮಾತು ನಿ, ಹೆಣ್ಣಿನ ಮುಖ ಭಾವಗಳಲ್ಲೇ ಅರ್ಧ ಮಾತು. ಆಕೆ ತಾರೆಯಂತೆ ಮೌನವಾಗಿದ್ದರೆ.. ಸಮ್ಮತಿ ಲಕ್ಷಣ!

’ಪುರುಷನಿಗೋಸ್ಕರವೇ ಪ್ರಕೃತಿ ಹುಟ್ಟಿದ್ದು...
ಹೆಣ್ಣು ಹುಟ್ಟಿದ್ದು...’
ಚಿಂತಿಸಬೇಕಾದ ವಿಚಾರವೇ...

’ಕಾಮದ ಜೊತೆಗೆ ಪಾರಮಾರ್ಥಿಕ ಸಾಧನೆ ಮಾಡಬೇಕು... ’
ಇದಂತೂ ನಿಜ...

ತಾರೆಯ ಹಂಬಲ..
ಚಂದ್ರನ ತಾಕಲಾಟ ಮತ್ತು ಬ್ರಹಸ್ಪತಿಗಾದ ನೋವೂ ಸಮರ್ಥವಾಗಿ ಮೂಡಿಬಂದಿದೆ.

shared at :
https://www.facebook.com/groups/kannada3K/

Krishna Mohan said...

ಕಾಮ, ಪ್ರೇಮ, ಗಂಡು ಹೆಣ್ಣಿನ ಸಂಬಂದಗಳು, ನೈತಿಕತೆಯ ಬೇರೆಬೇರೆ ಮಗ್ಗುಲುಗಳನ್ನು ನವಿರಾಗಿ ಹೇಳಿದ್ದಿರಾ. ಇವರೆಲ್ಲ ೨೧ನೆಯ ಶತಮಾನದಲ್ಲಿ ನಮ್ಮೊಂದಿಗಿರುವ ಮಂದಿಗಿಂತ ಭಿನ್ನವಲ್ಲದ ರೀತಿಯಲ್ಲಿ ಸಾಗಿದೆ ನಿಮ್ಮ ಕತೆ. ಸಾವಿರಾರು ವರುಷ ಕಳೆದರೂ ಹೆಚ್ಚಿನ ಬದಲಾವಣೆ ಕಾಣದ ಈ ಸಂಕೀರ್ಣ ಸಂಬಂದಗಳನ್ನು ಅದ್ಬುತವಾಗಿ ನಿರೂಪಿಸಿದ್ಡಿರಿ.

Unknown said...

ಬರೆಯುವದು ಸುಲಭದ ಕಾಯಕವಲ್ಲ. ಬಲ್ಲವರಿಂದ ಯಾವುದೇ ಆಕ್ಷೇಪಣೆಗಳೂ ಬರದಂತೆ ಬರೆಯುವದು ಕಾಲಮಾನದ ವಿಪರೀತಗಳನ್ನು ತಾಳಿಕೊಂಡು ಬದುಕಿದಂತೆ ಸರಿ.

ಪ್ರಕಾಶ ಹೆಗಡೆಯವರು ವಿಷಯವನ್ನು ಸಮಗ್ರವಾಗಿ ಅಭ್ಯಸಿಸಿ ಸದಾಕಾಲ ನಿಲ್ಲುವ ಸತ್ಯವನ್ನು ಆಯ್ಕೆಮಾಡಿಕೊಂಡು ಇಂದಿನ ಜನರ ಅಭಿರುಚಿಗೆ ತಕ್ಕಂತೆ ವಿಷಯವನ್ನು ಕಾವ್ಯಾತ್ಮಕವಾಗಿ ಪ್ರಸ್ತುತ ಪಡಿಸುವ ಕಲೆಯನ್ನು ಕರಗತಮಾಡಿಕೊಂಡವರು. ಜೀವನಕ್ಕಾಗಿ ಇಟ್ಟಿಗೆ , ಸಿಮೆಂಟ್ ಗಳನ್ನು ಆಯ್ದುಕೊಂಡರೂ ಸಾಂಸ್ಕ್ರತಿಕ ಲೋಕದಲ್ಲಿ ಸಾಹಿತ್ಯಿಕವಾಗಿ ಒಪ್ಪ ಓರಣವಾಗಿ ಜೋಡಿಸಿದ ಇಟ್ಟಿಗೆ , ಸಿಮೆಂಟಿನಂತೆ ಅರ್ಥವತ್ತಾದ ಶಬ್ದ ಪುಂಜಗಳನ್ನು ಜೋಡಿಸಿ ಜನ ಮಾನಸ ತಲುಪಬಲ್ಲವರು.

ಪ್ರಕಾಶ ಹೆಗಡೆಯವರ ಲೇಖನಿಯಿಂದ ಬಂದ ಸಾಹಿತ್ಯವನ್ನು ಓದುವಾಗ ಹೆಮ್ಮೆಯೆನಿಸುವದು.

Good Wishes to Prakash Hegde and family.

sunaath said...

ಪ್ರಕಾಶರೆ,
ಪೌರಾಣಿಕ ಕತೆಗಳ ಆಧುನಿಕ ನಿರೂಪಣೆಗಾಗಿ ಅಭಿನಂದನೆಗಳು. ಸಮಂಜಸ ಸಂತಾನೋತ್ಪತ್ತಿ ಎನ್ನುವುದು ನಿಸರ್ಗದ ಪರಮೋದ್ದೇಶ. ಈ ಕಾರಣಕ್ಕಾಗಿಯೇ ಒಂದು ಕಾಲದಲ್ಲಿ ಬಹುಪತಿತ್ವ, ಸಂಘಕೂಟ ಇವು ರೂಢಿಯಲ್ಲಿದ್ದವು. ಕಾಲಕ್ರಮೇಣ ನಮ್ಮ ಸಮಾಜವು ಪುರುಷಪ್ರಧಾನ ಸಮಾಜವಾಗಿ ಬದಲಾದ ಮೇಲೆ, ಬಹುಪತ್ನಿತ್ವ, ಏಕಪತಿತ್ವ ಇವೆಲ್ಲ ರೂಢಿಯಾದವು. ಈ ಅನೈಸರ್ಗಿಕ ಪದ್ಧತಿಯಿಂದಾಗಿ ಹೆಣ್ಣು ಅತೃಪ್ತಿಯಲ್ಲಿ ಬಾಳುವಂತಾಗಿದೆ.

ಮಹಿಮಾ said...

ಹೆಣ್ಣು ಅಬಲೆ ಅನ್ನುವ ಮಾತು ಒಪ್ಪಲಾಗದು...ನೀತಿ ನಿಯಮಗಳ ಕಟ್ಟನ್ನು ಮೀರುವ ಹಕ್ಕನ್ನು ಆಕೆ ಕಾಪಾಡಿಕೊಂಡಿರುತ್ತಾಳೆ....ಸಂಬಂಧಗಳಲ್ಲಿ ಅನೈತಿಕ ಅನ್ನುವುದು ಸಮಾಜದ ಆ ನಿಯಮಗಳಿಗಷ್ಟೆ..ಅದು ಮನೋಲೋಕಕ್ಕಲ್ಲ...ಅದು ಅಲ್ಲದೆ ಬೃಹಸ್ಪತಿ ಕಾಮವನ್ನ ಮೀರಲಾಗದವನು...ಆದರೂ ತಾರೆಯ ಆಸೆಯನ್ನ ಪೂರೈಸಲಾಗದವನು...ಅವನು ಒಂಥರಕ್ಕೆ ಕಥೆಯ ಟೈಟಲ್ಲಿಗೆ ಹೇಳಿಸಿ ಮಾಡಿಸಿದವನೆ...ಮಗುವನ್ನು ಶಪಿಸುವಷ್ಟೇ ಸಾಮರ್ಥ್ಯ ಅವನಿಗಿದ್ದದ್ದು....ತಾರೆ ಮೀರಹೋದವಳು..ಮೀರಿದರೂ ಮೀರಲಾರದವಳು..ಅದು ಅವಳ ಒಳ್ಳೆಯತನವೇ ಹೊರತು ಅಬಲೆಯ ಸಂಕೇತವೆನಲ್ಲ...ಬಹುಶಃ ರೋಹಿಣಿಯ ನೆಮ್ಮದಿ ಹಾಳು ಮಾಡುವ ಇರಾದೆ ಆಕೆಗಿದ್ದಿಲ್ಲ ಅನ್ನೋಣ....ಸಮಾಜದ ಈ ಅಸಮತೋಲನ ಅಬಲೆ ಎನ್ನುವ ಹುಯಿಲು ಆಧುನಿಕ ತಾರೆಯರನ್ನು ೧೦೦:೮೦ ಆಗುವಂತೆ ಮಾಡಿದೆ....ಯಾವ ಚಂದ್ರನು..ಅಹಲ್ಯೆಗಾಗಿ ಶಾಪಕ್ಕೊಳಗಾದ ಇಂದ್ರನೂ..ಮತ್ತೆ ಸಮಾಜವನ್ನು ಉದ್ಧರಿಸುವ ಹೊಣೆ ಹೊತ್ತುಕೊಂಡ ಬೃಹಸ್ಪತಿಯಂತ ಕಿಂಗ್ ಮೇಕರ್ರ್ ಗಳು ಕೂಡ ಇನ್ನಾಗುವ ಅನಾಹುತ ತಡೆಯಲಾರರು...ಸೈನ್ಸ್ ಜರ್ನಲ್ ನಲ್ಲಿ ನಾ ಓದಿದ ಪ್ರಕಾರ, ಗಂಡು ಮಕ್ಕಳ ಪುರುಷತ್ವ ಇತ್ತೀಚಿಗೆ ಕ್ಷೀಣಿಸುತ್ತಿದೆ,ಆದ್ದರಿಂದ...ಉಳುವವನೇ ಹೊಲದೊಡೆಯ ಬದಲಾಗುವ ಕಾಲ ದೂರವಿಲ್ಲ....
ಇದು ನನ್ನ ಅಭಿಪ್ರಾಯ, ಕಥೆಯನ್ನಷ್ಟೆ ಹಾಗಂದುಕೊಂಡೇ ಓದಿದಾಗ ನಿಮ್ಮ ಶೈಲಿ ನನಗೆ ಯಾವತ್ತಿನಂತೆ ಇಷ್ಟವೇ....

Ittigecement said...

ಶೋಭಾ ರಾವ್...

ಪ್ರಕೃತಿ, ಪುರುಷರಿಬ್ಬರೂ...
ಹೊಂದಿಕೊಂಡು ಬಾಳಬೇಕು ಎನ್ನುತ್ತದೆ ಸೃಷ್ಟಿ...

ಇಬ್ಬರಲ್ಲಿ ಒಬ್ಬರಿಗಾದರೂ "ಅಹಂ" ಕಾಡಿದರೆ ಬದುಕು ಮೂರಾಬಟ್ಟೆಯಾಗುವದನ್ನು ಕಾಣುತ್ತಿದ್ದೇವೆ..

ಗಂಡ ಸಿಗಲಿಲ್ಲ ಅಂತ ಕ್ಷಣಿಕ ಆಸೆಗೆ ಚಂದ್ರನನ್ನು ಅರಸಿದ್ದು ತಪ್ಪು...
ಮಡದಿಯ ಆಸೆಯನ್ನು ಧಿಕ್ಕರಿಸಿದ್ದು ಗುರುವಿನ ತಪ್ಪು...

ಬೇಡ ಬೇಡವೆನ್ನುತ್ತ ಮಜಾ ಉಡಾಯಿಸಿದ ಚಂದ್ರನಾದರೂ..
ಆತನಿಗೂ ಗುರು ಶಾಪ ತಟ್ಟಿತು..
ಇಲ್ಲಿ ಚಂದ್ರನ ಶಾಪವನ್ನು ಹೇಳಲಿಲ್ಲ ಅಷ್ಟೆ..

ಈ ಎಲ್ಲರ ತಪ್ಪಿಗೆ ಬೆಲೆ ಕಟ್ಟಿದವನು "ಬುಧ".....

ಯಾವಾಗಲೂ ಹೀಗೆ ಆಗುತ್ತದೆ..
ಪತಿ, ಪತ್ನಿಯರ ತಪ್ಪಿಗೆ.. ಅಹಂಕಾರಕ್ಕೆ
ಏನೂ ಅರಿಯದ "ಮಕ್ಕಳು" ಬಲಿಪಶುವಾಗುತ್ತಾರೆ...

ಕೊನೆಯಾಗದ ದಂಪತಿಗಳ ಜಗಳದಲ್ಲಿ ಮಾನಸಿಕ ಕೀಳರಮೆಯಿಂದ ಬಳಲುತ್ತಾರೆ...

"ಪ್ರತಿಯೊಂದೂ ದಂಪತಿಗಳಿಗೂ "ಪ್ರತಿ ಸ್ಪರ್ಧಿ" ಸಿಕ್ಕೇ ಸಿಗುತ್ತಾರೆ...
ಆಗ ವಿವೇಕವಿದ್ದರೆ ಅನರ್ಥವಾಗುವದಿಲ್ಲ..."
ಇದು ಕಾರಂತಜ್ಜ ಹೇಳಿದ ಮಾತು...

ನಿಮ್ಮ ಪ್ರತಿಕ್ರಿಯೆಗಳು ಬರೆಯಲು ಟಾನಿಕ್ ಥರಹ..
ಉತ್ಸಾಹ ಕೊಡುತ್ತದೆ..

ಚಂದದ ಪ್ರತಿಕ್ರಿಯೆಗೆ ಪ್ರೀತಿಯ ಧನ್ಯವಾದಗಳು...

Subrahmanya Bhat said...

ಸಮಾಜವನ್ನು ಬದಿಗಿಟ್ಟು ಕೇವಲ ವ್ಯಕ್ತಿಯಾಗಿ ವಿಚಾರಮಾಡಿದಾಗ ತಾರೆಯೂ ಸರಿ ಬೃಹಸ್ಪತಿಯೂ ಸರಿ. ಅವರವರ ಅನಿಸಿಕೆಗಳು ಅವರಿಗೆ ಮಹತ್ವದ್ದಾಗುತ್ತವೆ. ಇದು ಬೃಹಸ್ಪತಿಯ ಅನಿಸಿಕೆಯಂತೆ ಸರಿಯೇ... ಅದರೂ ತಾರೆಗೆ ಸರಿಯೆನಿಸಬೇಕೆಂದೇನಿಲ್ಲ.... ಏನೆ ಇರಲಿ ಕಲ್ಪನೆಯಂತೂ ತುಂಬ ನೈಜವಾಗಿದೆ.

Srikanth Manjunath said...

ಅಣ್ಣಾವ್ರು ಶಂಕರ್ ಗುರು ಚಿತ್ರದಲ್ಲಿ ಅನೇಕ ವರ್ಷಗಳ ನಂತರ ಕಳೆದು ಹೋಗಿದ್ದ ತನ್ನ ಹೆಂಡತಿಯ ಜೊತೆಯಲ್ಲಿ ದೂರವಾಣಿಯಲ್ಲಿ ಮಾತಾಡಿದಾಗ ಒಂದು ಮಾತು ಹೇಳುತ್ತಾರೆ "ಅಬ್ಬಬ್ಬಾ ಎಷ್ಟು ವರ್ಷಗಳಾಯ್ತು"

ಅದೇ ಅನುಭವ ನನಗೆ ಈ ಲೇಖನ ಓದಿದ ಮೇಲೆ ಅನಿಸಿತು.. ಅಬ್ಬಬ್ಬಾ ಎಷ್ಟು ಸೊಗಸಾಗಿದೆ ಪುರಾಣದ ಕಥೆಗೆ ನಿಮ್ಮ ಸ್ಪರ್ಶ.. ಇಲ್ಲಿನ ಪ್ರತಿ ಸಾಲುಗಳು ಅರ್ಥಗರ್ಭಿತ.. ಇಬ್ಬರ ವಾದವೂ ಸರಿ.. ಅನ್ನಿಸುತ್ತದೆ... ಕಡೆಯಲ್ಲಿ ತಾರೆ ಹೇಳುವ ಮಾತು ಅಬ್ಬಾ ಸುಂದರ ಅತಿ ಸುಂದರ..

ಬೃಹಸ್ಪತಿಯ ಮಾತುಗಳು ಇಷ್ಟವಾದವು... ಎಷ್ಟು ನಾಜೂಕಾಗಿ ಹೇಳಬೇಕಾದ ವಿಷಯವನ್ನು ಕಥೆಯ ಹಂದರದಲ್ಲಿ ಕೂರಿಸಿ ತಲುಪಿಸುತ್ತೀರಾ ಸೂಪರ್ ಪ್ರಕಾಶಣ್ಣ..

ಲೇಖನದ ಶೀರ್ಷಿಕೆ ಕೊಂಚ ಘಾಟಿ ಎನಿಸಿದರೂ ಓದುತ್ತ ಓದುತ್ತಾ ಹೋದ ಹಾಗೆ ಇದೆ ಸರಿಯಾದ ಶೀರ್ಷಿಕೆ ಎನ್ನಿಸಿತು.. ಜೊತೆಯಲ್ಲಿ ನೀವು ಅಕ್ಷರಗಳಿಗೆ ತುಂಬುವ ಬಣ್ಣ.. ಆ ಸಂದರ್ಭಕ್ಕೆ ತಕ್ಕ ಹಾಗೆ ಇದೆ.

ಸೂಪರ್ ಪ್ರಕಾಶಣ್ಣ

Jagadish Shastri said...

ಪ್ರಕಾಶ ಹೆಗಡೆಯವರೇ, ನೀವಂದಂತೇ ಸನ್ಯಾಸ ಹಾಗೂ ಬ್ರಹ್ಮಚರ್ಯಗಳೆರದೂ ಬೇರೆ ಬೇರೆ.ಸನ್ಯಾಸಿಯಾದವರು ಬ್ರಹ್ಮಚಾರಿಗಳಾಗಿರಬಹುದು ಅಥವಾ ಆಗದೇ ಇರಲುಬಹುದು. ಹಾಗಂತ ಬ್ರಹ್ಮಚಾರಿಗಳೆಲ್ಲರೂ ಸನ್ಯಾಸಿಗಲಲ್ಲ. ಈಮೇಲಿನ ಎರಡೂ ಆಶ್ರಮಗಳ ಮೂಲ ಉದ್ದೇಶ ಮಾತ್ರ ಧರ್ಮ ಜಾಗ್ರತಿ ಮತ್ತು ಸಂಘಟನೆ . ನಮ್ಮ ಧರ್ಮದಲ್ಲಿ ಕಂಡು ಬರುವ ಹೆಚ್ಚಿನ ಎಲ್ಲ ಋಷಿಮುನಿಗಳೂ ವಿವಾಹಿತರೆ.ಅಶ್ತೆ ಅಲ್ಲ ಒಂದಕ್ಕಿಂತ ಹೆಚ್ಚು ಸ್ತ್ರೀ ಯರೊಂದಿಗೆ ಅವರಿಗೆ ಸಂಪರ್ಕಗಳಿದ್ದವು. ಜೊತೆಜೊತೆಯಲ್ಲೇ ಅವರ ಧಾರ್ಮಿಕ ಜವಾಬ್ದಾರಿಗಳನ್ನೂ ನಿಭಾಯಿಸುತ್ತಿದ್ದರು. ಅವರ ವಿವಾಹ ಹಾಗೂ ವಿವಾಹೇತರ ಸಂಬನ್ಧಗಳು ಯಾವತ್ತೂ ಆಕ್ಷೇಪಕ್ಕೊಳಗಾಗಲಿಲ್ಲ. ಶ್ರೀ ಆದಿಶಂಕರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಅವರು ತಮ್ಮ ಅತಿ ಮಾನುಷ ಶಕ್ತಿಯಿಂದ ಬ್ರಹ್ಮಚರ್ಯದಲ್ಲಿದ್ದುಕೊಂಡೇ ಪರಕಾಯ ಪ್ರವೇಶ ಮುಖಾಂತರ ಸ್ತ್ರೀ ಸುಖವನ್ನು ಹೊಂದುತ್ತಾರೆ. ಇದು ಎಲ್ಲೂ ಅಕ್ಷೇಪಕ್ಕೊಳಗಾಗಲಿಲ್ಲ. ಕಾರಣ ಇಷ್ಟೇ ಅವರು ಇದೆಲ್ಲವನ್ನೂ ಧರ್ಮಕ್ಕಗಿಯೇ ಮಾಡಿದರು. ಮತ್ತು ಜನ ಅವರ ಗುಣ ಹಾಗೂ ಕೊಡುಗೆಗಳನ್ನು ಗುರುತಿಸಿದರು. ಬಹುಶಃ ಶಂಕರರು ಪರಕಾಯ ಪ್ರವೇಶ ಮುಖಾಂತರ ಸ್ತ್ರೀ ಸುಖ ಅನುಭವಿಸುವುದಕ್ಕೆ ಕಾರಣ ತನ್ನ ಶಿಷ್ಯ ಪರಂಪರೆ ತನ್ನನ್ನೇ ನೆಪವಾಗಿಟ್ಟುಕೊಂಡು ಸ್ತ್ರೀ ವ್ಯಾಮೋಹಕ್ಕೋಳಾಲಗಾಗಿ ಮೂಲೋದ್ದೇಶವನ್ನು ಮರೆಯದಿರಲಿ ಎಂಬುದೇ ಇರಬಹುದೇ ವಿನಃ ಸ್ತ್ರೀ ಸುಖ ನಿಷಿಧ ಎನ್ದಾಗಿರಲಿಕ್ಕಿಲ್ಲ.ಬಹುಪತ್ನಿತ್ವ ಹಾಗೂ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾಗ್ಯೂ ಧರ್ಮಕ್ಕೆ ನೀಡಿದ ಕೊಡುಗೆಯಿಂದ ದೈವೀ ಸ್ಥಾನ ಪಡೆದಿರುವ ಋಷಿಮುನಿಗಳ ಉದಾಹರಣೆ ನಮ್ಮ ಎದುರಿಗಿರುವಾಗ ಕಥಿನವಾದ ಶಂಕರಾಚಾರ್ಯ ಪರಂಪರೆಯಲ್ಲಿ ಬಾಲ ಸನ್ಯಾಸ ಪಡೆದು ಇಂದಿನ ಕಾಲಕೆ ತಕ್ಕಂತೆ ಧರ್ಮ ಕಾರ್ಯದಲ್ಲಿ ನಿರತ ರಾಗಿರುವ ಯತಿಗಳ ಮೇಲೆ ವ್ರತ ಆರೋಪ ಮಾಡುವವರು ಹಾಗೂ ಅದನ್ನೇ ನಂಬುತ್ತಿರುವ ಜನರನ್ನು ನೋಡಿದಾಗ ದುಃಖವಾಗುತ್ತದೆ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಶಾಸ್ತ್ರೀ ಗಳ ಯೋಚನೆ ಬಹಳ ಚೆನ್ನಾಗಿದೆ.
ಮೆಚ್ಚಬೇಕು..ಹೀಗೂ ಯೋಚಿಸಬಹುದೆಂದು
ನನಗೆ ಕಲ್ಪನೆ ಇರಲಿಲ್ಲ.ನನ್ನ ಕಣ್ಣುತೆರೆಸಿದ್ದಾರೆ.
ಧನ್ಯವಾದಗಳು ಶಾಸ್ತ್ರೀಗಳೇ..

ಅದೇನಿದ್ದರೂ ಕತೆ ಮನೋಜ್ನವಾಗಿ ಬಂದಿದೆ.
ತುಂಬ ಸಮಯದ ಬಳಿಕ ನಿಮ್ಮ ಬರಹ ಮತ್ತೊಮ್ಮೆ ನಿಮ್ಮನ್ನು ಸಮೀಪಕ್ಕೆ ತಂದಿದೆ.:)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಶಾಸ್ತ್ರೀ ಗಳ ಯೋಚನೆ ಬಹಳ ಚೆನ್ನಾಗಿದೆ.
ಮೆಚ್ಚಬೇಕು..ಹೀಗೂ ಯೋಚಿಸಬಹುದೆಂದು
ನನಗೆ ಕಲ್ಪನೆ ಇರಲಿಲ್ಲ.ನನ್ನ ಕಣ್ಣುತೆರೆಸಿದ್ದಾರೆ.
ಧನ್ಯವಾದಗಳು ಶಾಸ್ತ್ರೀಗಳೇ..

ಅದೇನಿದ್ದರೂ ಕತೆ ಮನೋಜ್ನವಾಗಿ ಬಂದಿದೆ.
ತುಂಬ ಸಮಯದ ಬಳಿಕ ನಿಮ್ಮ ಬರಹ ಮತ್ತೊಮ್ಮೆ ನಿಮ್ಮನ್ನು ಸಮೀಪಕ್ಕೆ ತಂದಿದೆ.:)

Shubha said...

ವಿಭಿನ್ನವಾಗಿ,ವಿವಿಧ ರೀತಿಯಲ್ಲಿ ಯೋಚಿಸುವಂತೆ ಮಾಡುವ ಕಥೆ.

Unknown said...

ಎಲ್ಲಾ ತಿಳಿದ ಬೃಹಸ್ಪತಿಗೆ ತನ್ನ ಮನೆಯಲ್ಲಿ ನಡೆದ ಘಟನೆ ಗೊತ್ತಾಗ್ಲಿವಲ್ಲ. ಬರಹದ ಶೈಲಿ ಬಹಳ ವಿಭಿನ್ನವಾಗಿದೆ. ಓದಲು ಸರಾಗ ಅನಿಸುತ್ತೆ.

prashasti said...

ಪೌರಾಣಿಕ ಕತೆಗಳನ್ನ ಹೀಗೆ ನಮ್ಮ ಭಾವನೆಗಳಿಗೆ ತಕ್ಕಂತೆ ವಿಸ್ತರಿಸಿ ಅದಕ್ಕೆ ಬದಲಾದ ರೂಪ ಕೊಡಬಹುದೇ ? ಗೊತ್ತಿಲ್ಲ !
ರಾಮಾಯಣದ ಬದ್ಲು ಸೀತಾಯಣವೋ, ರಾವಣಾಯಣವೋ ಮಾಡಿದ್ರೆ ಹೆಂಗಿರುತ್ತೆ ? ಕಾವ್ಯದ ದೃಷ್ಠಿಯಿಂದ , ನಿರೂಪಣೆಯ ದೃಷ್ಟಿಯಿಂದ ಚೆಂದವೆನಿಸಬಹುದೇನೋ. ಆದ್ರೆ ಕೆಲವು ಆದರ್ಶಗಳು, ಮೌಲ್ಯಗಳು , ಅವುಗಳ ಪ್ರತಿರೂಪಗಳು ಅಂತೆಲ್ಲಾ ಅಂದುಕೊಂಡ ಪಾತ್ರಗಳ ಬಗ್ಗೆ ಬೇರೆಯ ಕಲ್ಪನೆ ಬಂದಾಗ ಯಾಕೋ ಕೊಂಚ ಜೀರ್ಣಿಸಿಕೊಳ್ಳೋದು ಕಷ್ಟವೇ.

ಇನ್ನು ಕತೆಗಳು ಮತ್ತು ಇಲ್ಲಿನ ನಿರೂಪಣೆಯ ಬಗ್ಗೆ ಬರೋದಾದ್ರೆ
ಅ. ಬುಧ ಅನ್ನುವವನು ಚಂದ್ರ-ತಾರೆಯರ ಮಗ ಅನ್ನೋ ಬಗ್ಗೆ ಪುರಾಣ ಕತೆಗಳು (ಇತ್ತೀಚಿಗೆ ವಿಕಿಪೀಡಿಯಾದಲ್ಲೂ ಇದೆ
http://en.wikipedia.org/wiki/Navagraha)
ಆ. ಬುಧನ ಪುರುಷತ್ವದ ಬಗೆಗಿನ ಸಂದೇಹಗಳ ಮಾಹಿತಿ ಸರಿಯಾಗಿದ್ರೂ ಅವ ಕೊನೆಯವರೆಗೂ ಹಾಗೇ ಇದ್ದನೆಂಬ ಮಾಹಿತಿಯಿಲ್ಲ. ಅಂದ್ರೆ ಬುಧನ ಶಾಪ ವಿಮೋಚನೆಯಾದ ಪರಿಯೂ ಇದ್ದಿದ್ರೆ ಕತೆ ಇನ್ನೂ ಆರ್ಥಪೂರ್ಣವಾಗುತ್ತಿತ್ತೇನೋ..
ಬುಧನ ಬಗ್ಗೆ ಇನ್ನೊಂಚೂರು ಹುಡುಕಿದ್ರೆ ಅವ ಇಳಾ ಎಂಬುವಳನ್ನು(ಪಾರ್ವತಿಯ ಶಾಪ ಪಡೆಯೋ ಮುಂಚೆ ಸುದ್ಯುಮ್ನ ಎಂದಾಗಿದ್ದ ರಾಜಕುಮಾರನನ್ನ) ಮದುವೆಯಾಗಿ ಅವಳಿಂದ ಅನೇಕ ಮಕ್ಕಳನ್ನು ಪಡೆದ ಬಗ್ಗೆ ಅದೇ ಮುಂದೆ ಚಂದ್ರವಂಶವಾದ ಬಗ್ಗೆಯೂ ಓದಬಹುದು
http://www.ancestortale.com/2014/08/budha-and-his-wife-ila.html

ಕತೆಗೋ ಕವನಕ್ಕೋ ಪೌರಾಣಿಕ ಪ್ರಸಂಗವೊಂದರ ನೆರವು ಪಡೆಯೋದು ತಪ್ಪಲ್ಲದಿದ್ದರೂ ಅದರ ಯಾವುದೋ ಒಂದು ಭಾಗವನ್ನಷ್ಟೇ ತೋರಿಸಿ ಕತೆಯ ಸಮಗ್ರತೆಗೆ ಬೇರೆ ರೂಪ ಕೊಡೋದು ಸರಿಯೇ ಅನ್ನೋ ಭಾವವಷ್ಟೇ ನಂದಿಲ್ಲಿ. ಉದಾಹರಣೆಗೆ ಗೌತಮರ ಪತ್ನಿ ಅಹಲ್ಯೆಯ ಬಗ್ಗೆ ಬರೆಯುತ್ತಾ ಆಕೆ ಕಲ್ಲಾದ ಕತೆ ಬರದ್ರೆ ಮುಂದೆ ಆಕೆ ಶ್ರೀರಾಮನಿಂದ ಶಾಪವಿಮೋಚನೆ ಪಡೆದದ್ದನ್ನೂ ಬರೆದ್ರೆ ಒಂದು ಚಂದ. ಅದಿಲ್ಲದೇ ಆಕೆ ಗೌತಮನ ರೂಪ ಧರಿಸಿ ಬಂದ ಇಂದ್ರನ ಸೇರಿದ್ದಷ್ಟೇ ಬರದ್ರೆ ಆಕೆಯ ಚಾರಿತ್ಯ್ರವಧೆಯಾಗೋಲ್ಲವೇ ಅದು ? ನಮ್ಮಿಷ್ಟದಂತೇ ಕತೆ ಬರೆಯಬೇಕೆಂದ್ರೆ ಗುಂಡಣ್ಣ-ಗುಂಡಮ್ಮ ಅಂತ್ಲೋ ಮತ್ತಿನ್ಯಾವುದೋ ಹೆಸ್ರಲ್ಲೋ ಬರ್ಯೋಣ. ನಮ್ಮ ಕಲ್ಪನೆಗಳಿಗೆ ಹೊಸ ಹೊಳವು ಕೊಡೋಕೆ ಪೌರಾಣಿಕ ಪಾತ್ರಗಳೇ ಆಗಿರ್ಬೇಕೇ ?

ಮೌನರಾಗ said...

ವಾಸ್ತವಗಳು ಅಂದಿಗೂ ಇಂದಿಗೂ ಎಂದಿಗೂ ಸತ್ಯ..!
ಇಷ್ಟವಾಯಿತು :)

Unknown said...

ಸರ್ ನಿಮ್ಮ ಲೇಖನಗಳನ್ನು ಡೇಲಿಹಂಟ್ ಇ-ಬುಕ್ಸ್ ನಲ್ಲಿ ಪ್ರಕಟಿಸಿ, ನಿಮ್ಮ ಉತ್ತಮ ಬರಹಗಳಿಗಾಗಿ ಧನ್ಯವಾದಗಳು

Janki said...

Kannada news live tv on mobile
tv9 Public Kannada News Live - Android Apps on Google Play (https://play.google.com/store/apps/details?id=com.quick.kannadanew)

Janki said...

Kannada news live tv on mobile
tv9 Public Kannada News Live - Android Apps on Google Play (https://play.google.com/store/apps/details?id=com.quick.kannadanew)