Sunday, September 20, 2009

ವರುಷದೊಳಗೆ .. ಸಂಖ್ಯೆ ನೂರು........



ವಿಶ್ವೇಶ್ವರ ಭಟ್ ರವರ ಪುಸ್ತಕ ಬಿಡುಗಡೆ ಸಮಾರಂಭ...

ಜಯಂತ್ ಕಾಯ್ಕಿಣಿಯವರ ಮಾತಿನ ಮೋಡಿಯಲ್ಲಿ ಕಳೆದು ಹೋಗಿದ್ದೆ...

ಯಾರೋ ಬೆನ್ನು ತಟ್ಟಿದರು...

"ಸರ್... ನೀವು ಇಟ್ಟಿಗೆ ಸಿಮೆಂಟಾ...?"

ನನಗೆ ಆಶ್ಚರ್ಯವಾಯಿತು....
ನನಗೆ ಏನು ಹೇಳ ಬೇಕೆಂದು ತೋಚಲಿಲ್ಲ...

ಇತ್ತೀಚೆಗೆ ನಾನು "ಇಟ್ಟಿಗೆ ಸಿಮೆಂಟು" ಅಂತ ಆಗಿದ್ದು...
ಆ... ಥರಹ ... ನನ್ನನ್ನು ಗುರುತಿಸುತ್ತಿರುವದು....

ಸ್ವಲ್ಪ ಬೇಸರವಾಗುತ್ತಿದ್ದರೂ...
ಖುಷಿಯಾಗುತ್ತಿದೆ...

ಬೇರೆ ಥರಹ ನನ್ನನ್ನು ಗುರುತಿಸುತ್ತಿದ್ದಾರಲ್ಲ
ಸಂತೋಷವೂ ಆಗುತ್ತಿದೆ...

ಘಟನೆ .. ಒಂದು...

ಮೊನ್ನೆ ಪರಿಸರ ವಿಜ್ಞಾನಿ, ಪರಿಸರ ಪ್ರೇಮಿ.. ನಾಗೇಶ ಹೆಗಡೆಯವರನ್ನು ಭೇಟಿಯಾಗುವ ಸುಯೋಗ ಬಂದಿತ್ತು...
ಅವರೊಡನೆ ಮೂರುತಾಸು ಮಾತನಾಡಿದ್ದೆ....
ಅವರೊಂದು ಜ್ಞಾನದ ಸಮುದ್ರ...
ಅವರ ಸಾಧನೆ... ಅಧ್ಯಯನ ಬಲು ದೊಡ್ಡದು...

ದೊಡ್ಡ ವ್ಯಕ್ತಿಯಾಗಿದ್ದರೂ ಅವರ ಸರಳತೆ ನೋಡಿ ಮೂಕನಾಗಿದ್ದೆ....

ಅಂಥವರೊಡನೆ ಕುಳಿತು ಮಾತನಾಡಿದ್ದು ನನ್ನ ಸುಯೋಗ...
ನನ್ನ ಪುಣ್ಯ...!
ಅವರು ನನ್ನ ಬ್ಲಾಗಿನ ಬಗೆಗೆ ಮೆಚ್ಚುಗೆಯ ಮಾತನಾಡುತ್ತಿದ್ದಾಗ ಖುಷಿಯಿಂದ ಕಣ್ಣಲ್ಲಿ ನಿರು ಬಂದಿತ್ತು......

ಘಟನೆ ಎರಡು...

"ಹೆಸರೇ... ಬೇಕಿರದ" ನನ್ನದೊಂದು ಪುಸ್ತಕಕ್ಕೆ.....
ಜಿ.ಎನ್ ಮೋಹನ್ ಸುಂದರ ಮುನ್ನುಡಿ ಬರೆದು ಕೊಟ್ಟಿದ್ದಾರೆ....
ಹಿತನುಡಿಗಳನ್ನು.. ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ....

ತಮ್ಮ ಕೆಲಸದ ಒತ್ತಡದ ನಡುವೆಯೂ ...
ನನ್ನ ಕೆಲಸವನ್ನೂ ಮಾಡಿಕೊಡುತ್ತಾರೆ.... ಇನ್ನು ಬರೆಯಿರಿ ಅಂತ ಬೆನ್ನು ತಟ್ಟುತ್ತಾರೆ....
ಅವರ ಶುಭ ಹಾರೈಕೆಗಳು, ಪ್ರೋತ್ಸಾಹಕ್ಕೆ...
ನನ್ನ ಉತ್ಸಾಹ ಇಮ್ಮಡಿಯಾಗುತ್ತಿದೆ..

ಹಲವಾರು ಗಣ್ಯರು ಪ್ರೋತ್ಸಾಹಕ ನುಡಿಗಳನ್ನು ಬರೆದುಕೊಟ್ಟು ಬೆನ್ನು ತಟ್ಟುತ್ತಿದ್ದಾರೆ....

ಘಟನೆ ಮೂರು...

ರಂಗಶಂಕರದದಲ್ಲಿ ಕಲಾ ಗಂಗೊತ್ರಿಯವರ
"
ಮೈಸೂರು ಮಲ್ಲಿಗೆ " ನಾಟಕದ ಕೊನೆಯಲ್ಲಿ...
ಡಾ. ಬಿವಿ ರಾಜಾರಾಂ ಅವರು....
"ಇಟ್ಟಿಗೆ ಸಿಮೆಂಟಿನ ಪ್ರಕಾಶ ಹೆಗಡೆಯವರು..
ವೇದಿಕೆಗೆ ಬರಬೇಕು"
ಎಂದು ನೆನಪಿನ ಕಾಣಿಕೆ ಕೊಟ್ಟರು.....ಅಷ್ಟೆಲ್ಲಾ ಪ್ರೇಕ್ಷಕರ ಮುಂದೆ...!

ನಾನು ಮಾತು ಬಾರದೆ ಮೂಕನಾಗಿದ್ದೆ....

ಘಟನೆ ನಾಲ್ಕು.....

ಸುಶ್ರುತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ..
ಮೆಚ್ಚಿನ ಕಥೆಗಾರ "ವಸುಧೇಂದ್ರ " ಸಿಕ್ಕಿದ್ದರು...

"ಚೆನ್ನಾಗಿದ್ದೀರಾ... ಏನನ್ನುತ್ತದೆ ಇಟ್ಟಿಗೆ ಸಿಮೆಂಟು..?.."

ಎಂದು ಆತ್ಮೀಯವಾಗಿ ಕೇಳಿದರು..
ಅಂಥಹ ದೊಡ್ಡ ಕಥೆಗಾರ..!

ಘಟನೆ... ಐದು....

"ಸ್ವಾಮಿ... ನೀವು ಯಾರೆಂದು ಗೊತ್ತಿಲ್ಲ...
ನೀವು ಬರೆದ ಲೇಖನ ಓದಿ ...
ಮನೆಬಿಟ್ಟು ಓಡಿಹೋಗಿದ್ದ ನನ್ನ ಮಗ
ಐದು ವರ್ಷದ ನಂತರ ಮನೆಗೆ ಮರಳಿದ್ದಾನೆ..."

ಫೋನ್ ಮಾಡಿದವರು ಖುಷಿಯಿಂದ ಅಳುತ್ತಿದ್ದರೆ.....
ನನ್ನ ಕಣ್ಣಲ್ಲೂ ನೀರಾಡಿತ್ತು...

ಭಾವುಕನಾಗಿಬಿಟ್ಟಿದ್ದೆ....

( ಲೇಖನ....
"
ಮಿಲ್ತಿ ಹೇ ಜಿಂದಗಿ ಮೇ ಮೊಹಬ್ಬತ್ ಕಭಿ... ಕಭಿ."...)

ನನ್ನ ಬ್ಲಾಗಿನ ಪ್ರೊಫೈಲ್ ನೋಡಿದವರ ಸಂಖ್ಯೆ ಹದಿಮೂರು ಸಾವಿರ ದಾಟಿದೆ...

ಬೆಂಗಳೂರಿನ ಟ್ರಾಫಿಕ್ ಜಾಮಿನಲ್ಲಿ ಕಳೆದು ಹೋಗಿ...
ವ್ಯವಹಾರ.. ಕೆಲಸದ ಒತ್ತಡದಲ್ಲಿ ಮುಳುಗಿರುತ್ತಿದ್ದ...
ನನ್ನಂಥಹ ಸಾಮಾನ್ಯನಿಗೆ ಇವೆಲ್ಲ ಅಚ್ಚರಿಯ ಸಂಗತಿಗಳು...

ನಿರೀಕ್ಷೆಯೇ ಇರದ ಅನಿರೀಕ್ಷಿತ... ಖುಷಿಗಳು....

ಕನಸೋ... ನನಸೋ ಎಂದು ಚಿಗುಟಿ ನೋಡಿಕೊಳ್ಳುವಂಥಹ ಸಂಗತಿಗಳು....

ನನ್ನ ಮೆಚ್ಚಿನ ....
ಜೋಗಿ, ಬಿ. ಸುರೇಶ, ಪಿ. ಶೇಷಾದ್ರಿ...
ಪತ್ರಕರ್ತ "ಅಶೋಕ್ ಕುಮಾರ್" ಅವರ ಪ್ರೋತ್ಸಾಹ ಮರೆಯಲಾರೆ..

ಪ್ರೋತ್ಸಾಹಿಸಿದ ಇನ್ನೂ ಅನೇಕರ ಹೆಸರು ಬಿಟ್ಟುಹೋಗಿದೆ...
ಬರೆಯಲು ಜಾಗವೂ ಸಾಲುವದಿಲ್ಲ...
ಅವರಿಗೆಲ್ಲ ಹೇಗೆ ಕೃತಜ್ಞತೆ ಅರ್ಪಿಸಲಿ...?

ಮೆಚ್ಚಿನ ಅಭಿನೇತ್ರಿ ಜಯಲಕ್ಷ್ಮಿ ಪಾಟಿಲ್
(
ಮುಕ್ತಾದ "ಮಂಗಳತ್ತೆ")
ಇನ್ನೂ ಅನೇಕರು...ಅನೇಕರು....
ಹಲವರ ಹೆಸರೇ... ಗೊತ್ತಿಲ್ಲ...
ನನ್ನ ಬ್ಲಾಗಿಗೆ ಬಂದು ಮೆಚ್ಚುಗೆಯಮಾತುಗಳನ್ನಾಡುತ್ತಾರೆ...

ಅವರು ಪ್ರೋತ್ಸಾಹಕ್ಕಾಗಿ...
ಸೌಜನ್ಯಕ್ಕೆಂದು ಹೇಳಿದ ಮಾತುಗಳಾದರೂ...
ನನಗಂತೂ ಖುಷಿಯಾಗುತ್ತದೆ...

ಇವೆಲ್ಲ ನಿಜವಾ....?
ಅಚ್ಚರಿಯಾಗುತ್ತದೆ.....
ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತದೆ....

ದಿನನಿತ್ಯ ಬರುವ ಹಲವಾರು ಮೇಲ್ ಗಳು ..,
ಲೇಖನಕ್ಕೆ ಬರುವ ಪ್ರೋತ್ಸಾಹದ ನುಡಿಗಳು...
ನನ್ನ ಪುಟ್ಟ ಪ್ರಪಂಚವನ್ನು ಬದಲಿಸಿ ಬಿಟ್ಟಿದೆ....

ಹಲವರ ಜೀವಮಾನದ ಕನಸುಗಳನ್ನು ನನಸು ಮಾಡುತ್ತಾ..
ಅವರ ಮನೆಕಟ್ಟಿ.....
ಅದರಲ್ಲಿ ಲಾಭ.., ನಷ್ಟ , ಕಷ್ಟ ಸುಖದಲ್ಲಿ ಮುಳುಗಿರುತ್ತಿದ್ದ...
ನನ್ನನ್ನು..
"ಇಟ್ಟಿಗೆ ಸಿಮೆಂಟು " ಬದಲಿಸಿ ಬಿಟ್ಟಿದೆ...

ಓದುಗರ ಪ್ರತಿಕ್ರಿಯೆಗಾಗಿ ಕಾಯುವದೂ ..
ಮುಂದಿನ ಬರಹಕ್ಕಾಗಿ ಯೋಚಿಸುವದೂ.... ಖುಷಿಯಾಗುತ್ತಿದೆ....

ಸ್ನೇಹಿತರಾದ ಶಿವೂ, ಮಲ್ಲಿಕಾರ್ಜುನ್ ಇನ್ನೂ ಹಲವರ ಪ್ರೋತ್ಸಾಹಗಳು..
ನನ್ನನ್ನು ಬಹಳ ಪ್ರೇರೇಪಿಸಿವೆ....

" ಬ್ಲಾಗಿನಿಂದ ಹೊಟ್ಟೆ ತುಂಬುವದಿಲ್ಲ ..."
ಎಂದು ನನ್ನ ಸ್ನೇಹಿತರು ಹಿತವಚನ ಕೊಡುತ್ತಿದ್ದರು......

ಅದಕ್ಕೂ ಈಗ ಉತ್ತರ ಸಿಕ್ಕಿದೆ...

ನನ್ನ ಬ್ಲಾಗ್ ಓದುಗರು ನನಗೆ ಮನೆಕಟ್ಟುವ ಗುತ್ತಿಗೆ ಕೊಟ್ಟಿದ್ದಾರೆ...
ಆರ್ಥಿಕ ಹಿಂಜರಿತದ ದಿನಗಳಲ್ಲೂ ಬ್ಲಾಗ್ ಓದುಗರು ಎರಡು ಕೆಲಸ ಕೊಟ್ಟಿದ್ದಾರೆ...
ಮನೆಕಟ್ಟುವವರು ನನ್ನ ಬಳಿ ಮಾಹಿತಿ ಪಡೆಯುತ್ತಿದ್ದಾರೆ..

ನನ್ನ ಈ ಬ್ಲಾಗಿನಿಂದ ನನಗೆ ಬಿಸಿನೆಸ್ ಸಿಕ್ಕುತ್ತಿದೆ..

ನಿಮಗೆಲ್ಲ ಹೇಗೆ ಕೃತಜ್ಞತೆ ಹೇಳಲಿ...?

ಇದಕ್ಕೆಲ್ಲ ಕಾರಣ ನನ್ನ ಬ್ಲಾಗ್....ಈ ಬ್ಲಾಗ್ ಲೋಕ....!

ಬ್ಲಾಗ್ ಶುರುಮಾಡಿ ಇನ್ನೂ ಒಂದು ವರ್ಷವೂ ಆಗಿಲ್ಲ...
ಸಂಖ್ಯೆ ನೂರಾಗುತ್ತಿದೆ...
ಫೋಟೋಗಳನ್ನೂ ಸೇರಿಸಿ....

ಖುಷಿಯಾಗುತ್ತಿದೆ... ಭಾವುಕನಾಗಿಬಿಡುತ್ತೇನೆ....

ಮನದ ಹಿಗ್ಗು....
ಸಂತೋಷದ
ಬುಗ್ಗೆಯಾಗಿದೆ...

ನನಗೆ ಪ್ರೋತ್ಸಾಹ ಕೊಡುತ್ತಿರುವ ಅಸಂಖ್ಯಾತ ಓದುಗರಿಗೆ...
ಅನಂತ... ಅನಂತ...
ತುಂಬಾ.... ತುಂಬಾ....
ರಾಶಿ... ರಾಶಿ... ಸಿಕ್ಕಾಪಟ್ಟೆ ಧನ್ಯವಾದಗಳು...

ನನ್ನ ತಪ್ಪು, ಒಪ್ಪುಗಳನ್ನು ತಿದ್ದಿ ಪ್ರತಿಕ್ರಿಯಿಸಿದ...
ನೋಡಿ ಪ್ರೋತ್ಸಾಹಿಸಿದ... ನಿಮಗೆಲ್ಲ ನಾನು ತುಂಬಾ ಆಭಾರಿಯಾಗಿದ್ದೇನೆ..

ಬ್ಲಾಗ್ ಲೋಕದ ...... ಈ ...ಆತ್ಮೀಯತೆಗೆ..
ಸ್ನೇಹ ಭಾವಕ್ಕೆ ನನ್ನದೊಂದು ಸಲಾಮ್...

ನನ್ನ ಬ್ಲಾಗ್ ಫಾಲೋ ಮಾಡಿ...
ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲ ಕೃತಜ್ಞತೆ ಹೇಳಲೂ...
ನನ್ನ ಬಳಿ ಶಬ್ಧಗಳಿಲ್ಲ...

ನಿಮ್ಮಿಂದಾಗಿ ನನ್ನ ಜವಾಬ್ದಾರಿ ಹೆಚ್ಚಿದೆ...
ಅದಕ್ಕೆ ತಕ್ಕಂತೆ ನಡೆಯುವ ಪ್ರಯತ್ನ ಮಾಡುತ್ತೇನೆ...

ವರುಷದೊಳಗೆ ಸಂಖ್ಯೆ ನೂರು...
ನಿಮ್ಮ ಭಾವ ಜಗದೊಳು..
ಇನಿತು ಜಾಗವಷ್ಟೇ ಸಾಕು ಎನಗೆ.....
ಅಂಕೆ ಸಂಖ್ಯೆಗಳೆಲ್ಲವೂ...
ಅಗಣಿತ ಗಣಿತದ ಲೆಕ್ಕಾಚಾರವು...

ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದೂ ಇರಲಿ....

ಪ್ರೀತಿಯಿಂದ....
ಇಟ್ಟಿಗೆ ಸಿಮೆಂಟು....



Thursday, September 10, 2009

ಹೆಸರೇ... ಇಲ್ಲದ ... ಗುರುತು.. ಇರಬೇಕಿತ್ತು....!!

ಆರ್ಥಿಕ ಹಿಂಜರಿತದ ಈ ದಿನಗಳಲ್ಲಿ ಕೆಲಸದ ದಕ್ಷತೆ ಜಾಸ್ತಿಯಾಗಿ ಬಿಡುತ್ತದೆ..

ನಾಳೆಯೇ .. ಕಾಂಕ್ರೀಟು..
ನೋಡಿ ಬರೋಣ ಎಂದು ಬಿಲ್ಡಿಂಗ್ ಕಡೆ ಹೊರಟೆ..


ಎಲ್ಲರೂ ಮನೆಕಡೆ ಹೊರಟಿದ್ದರು...

ಗೋವು ಮಾತ್ರ ತನ್ನಪಾಡಿಗೆ ಕೆಲಸದಲ್ಲಿ ಮಗ್ನನಾಗಿದ್ದ...

"ಗೋವು.... ಟೈಮ್ ಆಯ್ತಲ್ಲಪಾ.. ಹೊರಡು.." ಅಂದೆ...

" ಸರ್... ಇರಿ.. ನಿಮ್ಮ ಹತ್ರ ಮಾತಾಡಬೇಕು...
ಸ್ವಲ್ಪ ಇರಿ.. ಟೀ ತರ್ತೇನೆ.."

ಎಂದು ಓಡಿ ಹೋಗಿ ಕಾಕಾ ಅಂಗಡಿಯಿಂದ ಪ್ಲಾಸ್ಕಿನಲ್ಲಿ ಟೀ ತಂದ...

"ಏನಪಾ .. ಗೋವು ... ಎಲ್ಲ ಹೇಗೆ ನಡಿತಿದೆ...?"
ಸಹಜವಾಗಿ ಕೇಳಿದೆ...

"ಸಾರ್... ಈ ಜಗತ್ತಿನಲ್ಲಿ "ದೇವರೇ.. ಇಲ್ಲದ ಧರ್ಮ ಇರಬೇಕಿತ್ತು... ಅಲ್ಲವಾ...?"

"ಏನಾಯ್ತೋ ನಿಂಗೆ...?.. "

" ಸಾರ್.. ಈ ದೇವರುಗಳಿಂದಲೇ... ಜಗತ್ತು ಹಾಳಾಗಿದೆ...
ಕ್ರಿಶ್ಚಿಯನ್ಸು.. ಮುಸ್ಲಿಮ್ಸು... ಹಿಂದೂಗಳು... ದೇವರುಗಳಿಂದಲೇ ಹಾಳಾಗಿರೋದು...
ಎಲ್ಲರೂ ಬಡಿದಾಡೋದು...
ಆ ದೇವರೇ... ಇಲ್ದೇ.. ಇದ್ದಿದ್ರೆ.. ಈ ಜಗಳ ಎಲ್ಲ ಆಗ್ತಿರಿಲಿಲ್ಲ..ಸಾರ್.."

"ಅದು ಹೌದು ...ನೋಡು.. ಬೆಲ್ಲದದಂಥಹ ಮಾತು.."

"ಅಷ್ಟೆ... ಸಾರ್...!
ಬಣ್ಣವೇ ಇಲ್ಲದ ಬೆಳಕು ಇರಬೇಕಿತ್ತು......

ಈ ಬಣ್ಣದಿಂದಲೇ ಎಲ್ಲ ಹಾಳಾಗ್ತಿರೋದು..."

"ಏನೋ... ಗೋವು.. ಆರಾಮಿಲ್ಲೇನೊ...?"

"ನೋಡಿ ಸಾರ್...
ಹಿಂದೂಗಳ ಕೇಸರಿ ಬಣ್ಣ...
ಕ್ರಿಶ್ಚ್ಯನ್ನರ ಬಿಳಿ ಬಣ್ಣ.. ಮುಸ್ಲಿಮ್ಮರ ಹಸಿರು ಬಣ್ಣ..
ಎಲ್ಲ ತಮ್ಮ.. ತಮ್ಮ ಬಣ್ಣಗಳಿಗೆ ಸಾಯ್ತಾರೆ...!

ಬದುಕಲಿಕ್ಕೆ...ಯಾಕೆ ಬಣ್ಣ ಬೇಕು ಸಾರ್...?

ಸಾಯಲಿಕ್ಕೆ.... ಸತ್ತ ಮೇಲೆ.... ಯಾವ ಬಣ್ಣವೂ ಬೇಡ...
ಸಾಯಲಿಕ್ಕೂ ಬೇಡದ ಬಣ್ಣ ಬದುಕಿಗೆ ಯಾಕೆ ಬೇಕು...?
ಬಣ್ಣವೇ.. ಇಲ್ಲದ ಬೆಳಕು ಇರಬೇಕಿತ್ತು...ಅಲ್ವಾ... ಸಾರ್..."

"ಏನು ಹೇಳ್ತಾ ಇದ್ದೀಯಾ... ಗೋವು...!!
ಸತ್ಯವಾದ ಮಾತು..
ಸಾವಿಗೂ.. ಬದುಕಿಗೂ ಬಣ್ಣವೇ ಬೇಡ ನೋಡು...
ಅಂದರೆ... ಎಲ್ಲಾ ಬ್ಲ್ಯಾಕ್ ಎಂಡ್ ವೈಟು...
ಕಪ್ಪು.. ಬಿಳುಪು ಇರಬೇಕು ಅನ್ನು..."

"ಕಪ್ಪೂ... ಬಿಳುಪೂ ಬಣ್ಣವೇ ಅಲ್ಲವಾ...?
ಆಫ್ರಿಕಾದಲ್ಲಿ...
ದೊಡ್ಡ... ಶ್ರೀಮಂತ... ಧರಿದ್ರ ದೇಶ ...
ಅಮೇರಿಕಾದಲ್ಲೂ ಕಪ್ಪು, ಬಿಳುಪಿನ ಸಮಸ್ಯೆ ಅಲ್ಲವಾ...?

ಯಾವುದೇ ಬಣ್ಣವೇ ಇರಬಾರದಾಗಿತ್ತು..."

ನನಗೆ ತಲೆ ಕೆಡಲಿಕ್ಕೆ ಶುರುವಾಯ್ತು...

ಈ ಹುಡುಗನಿಗೆ ಏನಾಗಿದೆ...??
ವಿಚಿತ್ರವಾಗಿ ಮಾತಾಡ್ತಾ ಇದ್ದಾನಲ್ಲ.. ಎಂದು....

ನೋಡೋಣ ಸ್ವಲ್ಪ ಕಾಲೆಳೆಯುವ ಅಂತ.. ವಿಚಾರ ಮಾಡಿದೆ...

"ಬಣ್ಣವೇ ಇಲ್ದೇ ಇದ್ರೆ ಬದುಕಿಗೆ ಎಲ್ಲಿದೇ ಚಂದ...?
ಗೋವು...

ಬದುಕಿನ ಸ್ವಾರಸ್ಯವೇ ಬಣ್ಣ ಅಲ್ಲವೇನೊ...?
ಬಣ್ಣಗಳು ಚಂದ...ಕೆಂಪು..ಹಸಿರು.. ಗುಲಾಬಿ...!"

"ಸಾರ್.... ಚಂದ ಯಾರು ನೋಡ್ತಾರೆ...?
ಹೊಟ್ಟೆ ತುಂಬಿದವರು...!
ಹಸಿವು ಇರುವವನಿಗೆ ಚಂದ ಕಾಣಿಸೋದಿಲ್ಲ... ಸಾರ್...!
ಅವನಿಗೆ ಅದರ ಅಗತ್ಯವೂ ಇಲ್ಲ...
ಬಣ್ಣ... ಬಣ್ಣದ ಬದುಕು..
ಅಂದ.. ಚಂದ...

ಎಲ್ಲ ಹೊಟ್ಟೆ ತುಂಬಿದವರಿಗೆ... ಸಾರ್...!
ಹಸಿವಿಗೆ ಧರ್ಮವೇ.. ಇಲ್ಲ ಸಾರ್...!
ಅದಕ್ಕೆ ಧರ್ಮವೇ ಬೇಕಿಲ್ಲ..."

ಈ ಗೋವು ಎಲ್ಲಿಂದಲೋ ಎಲ್ಲಿಗೋ ಹೋಗ್ತಾ ಇದ್ದಾನಲ್ಲ...!
ವಿಚಿತ್ರವಾದ ಅವನ ವಾದ ಸರಣಿ ನನಗೆ ಕುತೂಹಲ ಹುಟ್ಟಿತು....

"ಏನೋ ಹಾಂಗದ್ರೆ...?
ಜಗತ್ತಿನಲ್ಲಿ ಹಸಿವೆ ಇದೆ ಅಂತ...
ಹೊಟ್ಟೆ ತುಂಬಿದವರಿಗೆ ಬಣ್ಣ ಬೇಡವಾ,,?
ಬಣ್ಣದ ಬದುಕು ಬೇಡವೇನೋ...?
ಏನಾಯ್ತೋ ನಿಂಗೆ..? ಯಾಕೋ ತಲೆ ಬಿಸಿ ಮಾಡ್ಕೊಂಡಿದ್ದೀಯಾ...?"

" ಸಾರ್... ಈ ಬಿಸಿನೇ ಇರಬಾರದು...
ಬಿಸಿನೇ...ಇಲ್ದಿರೋ...ಬೆಂಕಿ ಇರಬೇಕು...
ಈ ಬಿಸಿನೇ ಸುಡೋದು... ಸಾಯ್ಸೋದು...!
ಮನಸ್ಸನ್ನೂ.. ಸುಡ್ತದೆ...
ಹೃದಯಾನೂ ಸುಡ್ತದೆ..

ಇರಲಿಕ್ಕೂ ಬಿಡೋದಿಲ್ಲ... ಸಾಯಲಿಕ್ಕೂ ಬಿಡೋದಿಲ್ಲ..."

"ಗೋವು... ನಿಜ ಹೇಳು ಏನಾಯ್ತು..?
ಹೀಗೆಲ್ಲ ಒಗಟಾಗಿ ಮಾತಾಡ ಬೇಡ.. ಏನಾಯ್ತು...?"

"ಸಾರ್...
ನನ್ನ ಅಪ್ಪ ನನಗೆ ಮದುವೆ ಆಗಲಿಕ್ಕೆ ಒತ್ತಾಯ ಮಾಡ್ತಾ ಇದ್ದಾನೆ...

ನಂಗೆ ಇಷ್ಟ ಇಲ್ಲ...
ನಂಗೆ ಮದುವೆನೇ.. ಬೇಡ..

ಲಿಂಗ ಇಲ್ದಿರೋ ಮನುಷ್ಯ ಜಾತಿ ಇರ್ಬೇಕಿತ್ತು...
ಗಂಡು.. ಹೆಣ್ಣು ಅಂತ ಇರಬಾರದಿತ್ತು..
ಈ ಮದುವೆ.. ಮಕ್ಕಳು.. ಸಂಸಾರ.. ಸಮಸ್ಯೆನೇ ಇರ್ತಿರಲಿಲ್ಲ...."

" ಯಾವ ವಯಸ್ಸಿನಲ್ಲಿ ಏನು ಆಗಬೇಕೊ ಅದು ಆಗ ಬೇಕು...
ನಿಂಗೆ.. ಮದುವೆ ಆಗಲಿಕ್ಕೆ ಏನು ತೊಂದ್ರೆ...?"

"ಸಾರ್...
ಈಗಿನ ಹೆಣ್ಣು ಮಕ್ಕಳು ಅತ್ತೆ ,ಮಾವನ್ನ ಸರಿಯಾಗಿ ನೋಡಿಕೊಳ್ಳೋದಿಲ್ಲ...
ಅವರಿಗೆ ತಮ್ಮ ವಯಕ್ತಿಕ ಬದುಕೇ ಮಹತ್ವ...
ನಾನೂ ನನ್ನ ಫ್ರೆಂಡು.. ಸಂಬಂಧಿಕರ ಮನೆಗಳಲ್ಲಿ ನೋಡಿದಿನಿ...

ಅತ್ತೆ, ಮಾವಂದಿರ ಬಗೆಗೆ ಅವರಿಗೆ ಸ್ವಲ್ಪವೂ ಗೌರವ ಇರೋದಿಲ್ಲ..
ಗಂಡನ ಮನಸ್ಸನ್ನೂ ತಿರುಗಿಸಿ ಬಿಡ್ತಾರೆ...
ಆ ಗಂಡನಿಗೂ ಹೆಂಡತಿಗೆ ಹೊಂದಿಕೊಳ್ಳೋ ...
ಅನಿವಾರ್ಯ ಸ್ಥಿತಿ ತಂದಿಟ್ಟು ಬಿಡ್ತಾರೆ..."


" ಎಲ್ಲರೂ ಹಾಗಿರೊಲ್ಲ... ಗೊತ್ತಿರೋ ಹೆಣ್ಣು ನೋಡಿ ಮದುವೆ ಆಗ ಬೇಕು..."

"ಅಲ್ಲೇ ಸಾರ್... ಇರೋದು...
ನಮ್ಮ ಮೇಸ್ತ್ರಿ ಮಾವನ ಮಗಳು ನಮಗೆ ಸಣ್ಣ ಇರುವಾಗಿಲಿನಿಂದ ಗೊತ್ತು..
ಅವಳು ನನ್ನ ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಾಳೆ...
ನಮ್ಮ ಮನೆ ಸ್ಥಿತಿ ಎಲ್ಲ ಅವಳಿಗೆ ಗೊತ್ತು...
ಅವಳು ನನಗೆ ಇಷ್ಟ..
ನಾನು ಅಂದರೆ ಅವಳಿಗೂ ಇಷ್ಟ...."


"ಸರಿ ಇನ್ನೇನು...?
ಇಬ್ಬರ ಬಳಿಯೂ ನಾನು ಮಾತಾಡ್ತೇನೆ..."


"ಇಲ್ಲ ಸಾರ್...
ಇಬ್ಬರೂ ಹಾವು... ಮುಂಗುಸಿ ಥರ ಇದ್ದಾರೆ..
ನಮ್ಮ ಜಾತಿ.. ಭಾಷೆಗಳು.. ಬೇರೆ.. ಬೇರೆ..
ಹೃದಯಕ್ಕೆ ಬೇಡದ ಜಾತಿಯನ್ನು ಯಾರು ಮಾಡಿದ್ದು... ಸಾರ್...?
ನನ್ನ ಅಪ್ಪನಿಗೆ ಇತ್ತೀಚೆಗೆ ಮೇಸ್ತ್ರಿ ಕಂಡ್ರೆ ಆಗಲ್ಲ...
ಇನ್ನು ಮೇಸ್ತ್ರಿ ಮಾವನಿಗೆ..
ನನ್ನ ಹೆಸರು ಕೇಳಿದ್ರೆ.. ಆಗೋದಿಲ್ಲ.."


"ಯಾಕೆ...?"

"ಸರ್....ಜಗತ್ತಿನಲ್ಲಿ..
ಮನುಷ್ಯರಿಗೆ...ಈ ಹೆಸರೇ... ಇರಬಾರ್ದು...
ಹೆಸರೇ ಇಲ್ದಿರೋ ಗುರುತು ಇರಬೇಕಿತ್ತು...
ಒಂದು ಮನಷ್ಯನನ್ನು ನೋಡಿದ್ರೆ...
ಪಕ್ಕದಲ್ಲಿ ಕಂಪ್ಯೂಟರನಲ್ಲಿ ಬರ್ತದಲ್ಲಾ..

ಆ...ಥರಹ ಒಂದು ಸ್ಕ್ರೀನ್ ಬರ್ಬೇಕು..
ಅದರಲ್ಲಿ ಅವನ ಒಳ್ಳೇ ಕೆಲಸಗಳು.. ಕೆಟ್ಟ ಕೆಲಸಗಳು ಬಂದು ಬಿಡಬೇಕು...
ಜನ ಅವನ ಒಳ್ಳೆಯ ಕೆಲಸದಿಂದ ಗುರುತು ಹಿಡಿಯ ಬೇಕಿತ್ತು...

ಹೆಸರೇ ಇಲ್ದಿರೊ ಗುರುತು ಇರಬೇಕಿತ್ತು..."

"ಅದಕ್ಕೂ ... ನಿನ್ನ ವಿಷ್ಯಕ್ಕೂ ಏನೋ ಸಂಬಂಧ...?"

"ಸಾರ್.. ನಾಲ್ಕಾರು ವರ್ಷದ ಹಿಂದೆ..
ನಾನೊಂದು ಹುಡ್ಗಿಗೆ ಲೈನ್ ಹೊಡಿತಿದ್ನಂತೆ..

ಅದನ್ನು ಮೇಸ್ತ್ರಿ ಮಾವ ನೋಡಿದ್ನಂತೆ...
ಅಲ್ಲಿಂದ ಅವನಿಗೆ ನನ್ನ ಮೇಲೆ ಒಳ್ಳೆಯ ಅಭಿಪ್ರಾಯ ಇಲ್ಲ..

ನಾನು ಬದಲಾಗಿದ್ದೇನೆ... ಸರ್...
ನಾನು ಆಥರಹ ಇಲ್ಲ...
ಜನ ಯಾಕೆ ಹಳೆಯದನ್ನೇ ಹಿಡಕೊಂಡು ಕೂತಿರ್ತಾರೆ...?
ಬದಲಾವಣೆ ಕಾಣೋದಿಲ್ವಾ...? ಯಾಕೆ ನೋಡೋದಿಲ್ಲಾ...?"

"ಓಹೊ .. ಇದೋ ಸಮಾಚಾರ..!
ನಾನು ಏನು ಮಾಡ ಬೇಕು...? ಹೇಳು..."


"ಸಾರ್...
ಸಧ್ಯದಲ್ಲೇ ನನ್ನಪ್ಪ ನಿಮ್ಮ ಹತ್ರ ಮಾತಾಡುವವರಿದ್ದಾರೆ..

ನನ್ನನ್ನು ಮದುವೆಗೆ ಒಪ್ಪಿಸಲಿಕ್ಕೆ..
ನೀವು ಹೇಳಿದ್ರೆ ನಾನು ಒಪ್ತೀನಿ ಅಂತ..
ನಾನು ಮದುವೆ ಆದ್ರೆ ಮೇಸ್ತ್ರಿ ಮಾವನ ಮಗಳನ್ನು..
ಇಲ್ಲ ಅಂದ್ರೆ ನಂಗೆ ಮದುವೇನೇ.. ಬೇಡ..

ಈ ಮೇಸ್ತ್ರಿ ಮಾವ... ನನ್ನಪ್ಪ ನಮ್ಮ ಮದುವೆಗೆ ಒಪ್ಪೋದಿಲ್ಲ...

ನನಗೆ ಹೆಚ್ಚಿಗೆ ಒತ್ತಾಯ ಮಾಡಿದ್ರೆ ದೇಶಾಂತರ ಹೊರಟು ಹೋಗ್ತೇನೆ..."

" ಛೇ.. ಹಾಗೆಲ್ಲ ಮಾತಾಡ ಬೇಡ...
ನಿಮ್ಮಿಬ್ಬರ ಮದುವೆ ನಾನು ಸಹಾಯ ಮಾಡ್ತೇನೆ..
ನೋಡೋಣ ಇರು..."

ನಾನೇನೋ ಧೈರ್ಯ ಆವನಿಗೆ ಹೇಳಿದೆ....

ಹೇಗಾದರೂ ಮಾಡಿ ಇವರಿಬ್ಬರ ಮದುವೆ ಮಾಡಿಸ ಬೇಕಲ್ಲ.....!

ಮೊದಲು ಇವನನ್ನು ಇಷ್ಟಪಡುವ ಆಹುಡುಗಿಯ ಸಂಗಡ ಮಾತನಾಡ ಬೇಕು...!
ಅವಳ ಮನಸ್ಸಲ್ಲಿ ಏನಿದೆ...?
ಅದನ್ನು ಮೊದಲು ತಿಳಿದು ಕೊಳ್ಳ ಬೇಕು...

ಆದರೆ...

ಭೇಟಿಯಾಗುವದು...
ಹೇಗೆ...?

ಎಲ್ಲಿ..?



( ನಮ್ಮ ಗೋವು ಅಂದರೆ ನಿಮಗೆ ನೆನಪಾಯ್ತಾ...?
ಅದೇ ಪಲ್ಸರ್ ಬೈಕ್... ಸೈಕಲ್ ಬೆಲ್ಲು..!!

ಇಲ್ಲಿ ನೋಡಿ...

ಜನಕ್ಕೆ ನಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಬರಲಿಕ್ಕೆ .. ನಮ್ಮ ಒಡನಾಟವಷ್ಟೇ.. ಸಾಲೋದಿಲ್ಲ......


ಚಂದವಾದ.. ಮನೋಜ್ಞವಾದ ಪ್ರತಿಕ್ರಿಯೆಗಳಿವೆ...
ದಯವಿಟ್ಟು ಓದಿ

Saturday, September 5, 2009

ನಮಗೆ.. ಬೆಂಕಿ ಇಡ್ಲಿಕ್ಕಾದ್ರೂ... ಗಂಡು ಮಕ್ಳು ಬೇಕಲ್ಲಾ...!!

ನನ್ನ ಮದುವೆಯ ಮಾರನೆ ದಿನ...
ಮನೆಯಲ್ಲಿ ನೆಂಟರು, ಗೆಳೆಯರು .. ಸಡಗರ.. ಸಂಬ್ರ್ಹಮ...
ಬಾಯಿತುಂಬಾ ಮಾತುಗಳು... ಗೌಜಿ.. ಗದ್ದಲ...!

ನನ್ನ ಮುದ್ದಿನ ಮಡದಿ ಸಂಗಡ... ನೆಂಟರ..ಸ್ನೇಹಿತರ ಜೊತೆ... ತಮಾಷೆಯಾಗಿ ಮಾತಾಡುತ್ತ ಕುಳಿತಿದ್ದೆವು...

" ಪಕ್ಕೇಶ ಹೆಗಡೇರು ಇದ್ದಾರಾ...?"

ನನ್ನೆದುರಿಗೇ.. ನನ್ನನ್ನು "ಪಕ್ಕು" ಎಂದು ಕರೆಯುವವದು....
ಈ ಜಗತ್ತಿನಲ್ಲಿ ಒಬ್ಬನೇ...
ಅದೂ ಅತ್ಯಂತ ಪ್ರೀತಿಯಿಂದ... ಅಭಿಮಾನದಿಂದ...

ನಾನು ಬಗ್ಗಿ ನೋಡಿದೆ... ಕುಷ್ಟ... ಬಂದಿದ್ದ...

"ಅರೇ.. ಕುಷ್ಟ ಬಾರೊ... ಚೆನ್ನಾಗಿದ್ದೀಯಾ...?"

" ನಾ ...ಚೆನ್ನಾಗಿದ್ದೀನ್ರಾ..... ನಿಮಗೆ ಮದುವೆ ಆಯ್ತಂತೆ... ಎಲ್ಲಿ ಸಣ್ಣಮ್ಮ..?"

ನಾನು ನನ್ನಾಕೆಯನ್ನು ಕರೆದೆ... ತೋರಿಸಿದೆ...
ಕುಷ್ಟ ಸ್ವಲ್ಪ ನಾಚಿಕೆ ಮಾಡಿಕೊಂಡ...

" ಪಕ್ಕೇಶ ಹೆಗ್ಡೇರೆ... ಜೋಡಿ ಚಂದಾಗೈತೆ... "
ಎಂದು ಏನೋ ಉಡುಗೋರೆ ಕೊಟ್ಟ..

"ಇದೆಲ್ಲ ಯಾಕೆ ಕುಷ್ಟ... ?...ಪ್ರೀತಿ ಇದ್ರೆ ಆಯ್ತಪ್ಪಾ.."

"ಇರ್ಲಿ ಬಿಡ್ರಾ... ಇದೂ ಪ್ರೀತಿಗೇ ಕೊಟ್ಟಿದ್ದು..."

ನಾನೂ ಅವನೂ ಅದೂ ಇದೂ ಲೋಕಾಭಿರಾಮವಾಗಿ ಮಾತಾಡಿದೆವು...

ನಮ್ಮ ತಾತನ ಕಾಲದಿಂದಲೂ ಕುಷ್ಟನ ಮನೆಯವರು ನಮ್ಮನೆಯಲ್ಲಿ ಕೆಲಸ ಮಾಡುತ್ತಾರೆ..
ಅತ್ಯಂತ ನಂಬಿಕಸ್ಥ ಜನ... ಹೃದಯವಂತರು...

ಕುಷ್ಟ ಮತ್ತು ನಾನು ಒಂದೇ ವಯಸ್ಸಿನವರು.. ಹಾಗಾಗಿ ಸಲುಗೆ ಇತ್ತು...

ಅವರಿಗೂ ಸ್ವಲ್ಪ ಜಮಿನು, ಅಡಿಕೆ ತೋಟ ಇದ್ದುದರಿಂದ ವರ್ಷವಿಡಿ ಕೆಲಸಕ್ಕೆ ಬರುತ್ತಿರಲಿಲ್ಲ...
ಅವರ ಹೊಲದಲ್ಲಿ ಕೆಲಸವಿಲ್ಲದಿದ್ದಾಗ ನಮ್ಮನೆಗೆ ಬಂದು ಕೆಲಸ ಮಾಡಿಕೊಡುತ್ತಿದ್ದರು..

ನಾನು ಕಾಲೇಜಿಗೆ ಹೋಗುವಾಗಲೇ ಈತನ ಮದುವೆಯಾಗಿತ್ತು...
ಓದು ಬರಹ ಅಷ್ಟಾಗಿ... ಅರಿಯದ ಕುಷ್ಟನದು ಪ್ರೇಮ ವಿವಾಹ... !!
ಅದೊಂದು ದೊಡ್ಡ ಕಥೆ...
ನಾನು ಸಿರ್ಸಿಯಲ್ಲಿ ಓದುವಾಗ ಮನೆಗೆ ಬಂದಾಗ ನಾನು ತಪ್ಪದೆ ಕುಷ್ಟನನ್ನು ಭೇಟಿ ಮಾಡುತ್ತಿದ್ದೆ...

ಇವನಿಗೆ ಒಂದಾದ ಮೇಲೊಂದು ಹೆಣ್ಣುಮಕ್ಕಳು... ಮನೆ ತುಂಬಾ ಹೆಣ್ಣುಮಕ್ಕಳು...

"ಕುಷ್ಟ... ಇಷ್ಟೆಲ್ಲ ಮಕ್ಕಳು ಯಾಕಪ್ಪಾ..?? ಮುಂದೆ ಕಷ್ಟ ಆಗ್ತದೆ...."

"ಅದೆಲ್ಲ..ನಮ್ಮ ಕೈಲಿ ಏನೈತ್ರ...?
ದೇವರು ಕೊಟ್ಟಂಗೆ ಆಗ್ತದೆ..

ಗಂಡು ಮಗ ಬೇಕು ಅಂತ ಎಲ್ಲ ಹೆಣ್ಣು ಮಕ್ಳು ಆಗಿ ಬಿಟ್ರು..."

"ಕುಷ್ಟ ..ಈಗಿನ ಕಾಲದಲ್ಲಿ ಹೆಣ್ಣು ಮಕ್ಳು ಗಂಡು ಮಕ್ಳು ಎಲ್ಲ ಒಂದೇಯಾ..
ಹೆಣ್ಣು ಮಗಳಿಗೆ ಮದುವೆ ಮಾಡಿ ಮನೆಯಲ್ಲೇ ಇಟ್ಗೊ..."

" ಅಯ್ಯೋ ರಾಮ ...!
ನೀವು ಓದಿದವರು... ನಿಮಗೇ ಗೊತ್ತಿಲ್ವಾ..?
ನಮ್ಮ ಕೀರ್ತನೆ ದಾಸರು ಹೇಳಿದ್ದು ಕೇಳಿಲ್ವ...?"

" ಏನು ..?"

" ನಾವು ಸತ್ತಾಗ ನಮಗೆ ಗಂಡು ಮಕ್ಳು ಬೆಂಕಿ ಇಟ್ರೆ .. ಸ್ವರ್ಗ ಲೋಕ ಸಿಕ್ತದಂತೆ...
ನಮಗೆ ಬೆಂಕಿ ಇಡ್ಲಿಕ್ಕಾದ್ರೂ ಗಂಡು ಮಗ ಬೇಕಲ್ರ..!
ಗಂಡಾಗ್ತದೆ.. ಗಂಡಾಗ್ತದೆ... ಅಂತ ಎಲ್ಲ ಹೆಣ್ಣಾಗಿ ಹೋದ್ವು..."

"ಮಾರಾಯಾ...!
ಕಿರ್ತನೇ ದಾಸರು ಹೇಳಿದ್ದು ರಾಮಾಯಣದ ಕಥೆ... ಈಗಿಂದಲ್ಲ..
ಅದೆಲ್ಲಾ ಪುರಾಣ ಕಾಲದಲ್ಲಿ... ಈಗಲ್ಲ.."

ಅವನ ಮುಗ್ಧತನಕ್ಕೆ ಬಹಳಷ್ಟು ತಿಳಿ ಹೇಳಿದ್ದೆ...

ನಾನು ಮುಂಬೈ ಹೋಗಿ ಅಲ್ಲಿಂದ.. ಕಲ್ಕತ್ತಾ.. ಲಕ್ನೋ.... ದೋಹಾ ಎಲ್ಲ ತಿರುಗಿದ್ದೆ..

ಹಲವು ವರ್ಷಗಳ ನಂತರ ಈಗ ಸಿಕ್ಕಿದ್ದ...

" ಪಕ್ಕೇಶ ಹೆಗ್ಡೇರೆ... ನಿಮ್ಮ ಹತ್ರ ಒಂದು ವಿಷ್ಯಾ ಹೇಳ ಬೇಕ್ರಾ..
ಹೆಂಗಸ್ರೂ .. ಮಕ್ಕಳ್ರೂ ಎದುರಿಗೆ ಆ .. ವಿಷ್ಯಾ..
ಮಾತಾಡುದು.. ಬ್ಯಾಡ್ರಾ...

ಇಲ್ಲೆಲ್ಲ ಬ್ಯಾಡಾ..ಅಡಿಕೆ ತೋಟಕ್ಕೆ ಹೋಗೋಣ..."

ನನ್ನ ಅಣ್ಣನಿಗೂ ಕುತೂಹಲ ಹುಟ್ಟಿತು..

"ಏನೋ ಕುಷ್ಟಾ... ನಾನೂ ಬರಬಹುದೇನೋ...?"

"ಬನ್ನಿ ವಡೆಯಾ..ನಿಮಗೆ ಪ್ರಯೋಜನ ಇಲ್ರಾ..
ನಿಮಗೆ ವಯಸ್ಸಾಯಿತಲ್ರಾ..!
ಪಕ್ಕೇಶ ಹೆಗ್ಡೆರಿಗೆ ಉಪಯೋಗ ಆಗ್ತದೆ..
ಈಗಷ್ಟೇ ಮದುವೆ ಆಗಿದೆಯಲ್ರ...!!"

ನನಗೂ ಕೆಟ್ಟ ಕುತೂಹಲ ಹುಟ್ಟಿತು..!!

ಏನಿರ ಬಹುದು ..!!..? ?

"ನಡಿ .. ಕುಷ್ಟ.... ಇಲ್ಲೇ ಅಡಿಕೆ ತೋಟಕ್ಕೆ ಹೋಗೋಣ.."

ತೋಟಕ್ಕೆ ಹೊರಟೇ ಬಿಟ್ಟೇವು... !!

ಅಣ್ಣ ಮನೆಯಲ್ಲೇ ಉಳಿದ....

"ಕುಷ್ಟ ... ಎಷ್ಟು ಮಕ್ಳು ಈಗ ನಿನಗೆ...? "

" ನಂಗೆ ಎಂಟು ಮಕ್ಕಳು ....
ಇನ್ನು ಮಕ್ಳು ಅಗದೆ ಇದ್ದಾಂಗೆ... "ವೆಲ್ಡಿಂಗ್ " ಮಾಡ್ಕೋ ಬಿಟ್ಟಿದ್ದೀನಿ....."

"ವೆಲ್ಡಿಂಗಾ...? ಏನೋ ಇದು...?"

"ಅದೇ.... ಸಿರ್ಸಿ ಪೇಟೆಯಲ್ಲಿ.. .ಕಬ್ಬಿಣ ಎಲ್ಲ ಮಾಡ್ತಾರಲ್ರ... ಹಂಗೆಯಾ...!!
ನನಗೂ .. ನಮ್ಮ ಹೆಂಡ್ರಿಗೂ ಮಕ್ಕಳು ಆಗ್ದಿದ್ದಾಂಗೆ ವೆಲ್ಡಿಂಗ್ ಮಾಡ್ಕೋಬಿಟ್ಟಿದ್ದೇವೆ....!!...
ಅದೇ...ತೂತು ಬಿದ್ದಿರೊ ಹಿತ್ತಾಳೆ ಪಾತ್ರಕ್ಕೆ ವೆಲ್ಡಿಂಗು ಮಾಡ್ತಾರಲ್ರ....!
ಅದೇ ಥರ..!!"

" ಅಯ್ಯೋ.. ಮಾರಾಯಾ...!!
ಅಪರೇಷನ್ನು ಅನ್ನು...!!
ಒಳ್ಳೆದಾಯ್ತು ನೋಡು..ತುಂಬಾ ತಡ ಆದ್ರೂ..
ಬುದ್ಧಿ ಬಂತಲ್ಲ...ನಿನಗೆ.."

" ನಂಗೆ ಎಂಟನೆಯದು ಗಂಡು ಮಗುವ್ರಾ..!
ಅದನ್ನೇ.. ನಿಮಗೆ ಹೇಳ್ಬೇಕಿತ್ರಾ..."


"ಅಂತೂ..ಗಂಡು ಮಗು ಆಯ್ತಾ...!! ಅದೂ.. ಒಳ್ಳೆದಾಯ್ತು ಬಿಡು.."

"ಸುಮ್ನೆ.. ಕಾಲಿ ಪುಕ್ಕಟೆ.. ಗಂಡು ಮಗಾ ಆಗ್ಲಿಲ್ರಾ.. !
ನಾವು ಗಂಡ ಹೆಂಡ್ತಿ.. ಸಿಕ್ಕಾಪಟ್ಟೆ ..ಕಷ್ಟಪಟ್ಟಾಯ್ತು..!
ಸಿರ್ಸಿಯಲ್ಲಿ ಎಲ್ಲಾ ಡಾಕ್ಟ್ರ ಹತ್ರ ಹೋದೆ..
ಆ.. ಇಂಗ್ಲೀಷ್ ಡಾಕ್ಟ್ರ ಹತ್ರ.. ಏನೂ ಆಗ್ಲಿಲ್ಲ..!."

" ಹೌದಾ..? ಏನು ಮಾಡ್ದೆ...?"

" ನಮ್ಮ..ಕಾಮತ್‍ರು ಗೊತ್ತಲ್ಲ...!!
ಅದೇ... ಮಂತ್ರ ಎಲ್ಲ ಮಾಡ್ತರಲ್ರ.. "ಕಾಮತ್ ಹತ್ರ ಹೋಗಿದ್ದೆರಾ.."

"ಕಾಮತ್‍ರಾ...? ಅವರು .. ಏನು ಮಾಡಿದ್ರು...?"

" ಅವರು ನಂಗೂ... ನನ್ನ ಹೆಂಗಸ್ರಿಗೂ ...
ತಾಯತ ಕೊಟ್ಟು ಮಂತ್ರಿಸಿ ಕೊಟ್ರು ... ನೋಡಿ.. !!
ಎಂತಾ.. ಮಂತ್ರ ಶಕ್ತಿ ಅಂತೀರ್ರೀ..!!.?
ಗಂಡು ಮಗು ಆಗೇ ಬಿಡ್ತು.. !!
ಮಗು ಹೆಂಗೈತೆ ಅಂತಿರ್ರಾ...!!..???
ಹೂವೇ..ಹೂವು...!
ಕಾಮತ್‍ರ ಹಂಗೇ ಐತೆ..!!.

ಬೆಳ್ಳಗೆ..ಕೆಂಪಗೆ ಟೊಮೆಟೊ ಹಂಗೆ ಐತೆ...!!.."

"ಛೇ.. ಛೇ... ಹಾಗೆಲ್ಲ ಹೇಳಬೇಡಪ್ಪ..."

" ನನ್ನ ಮಗನ್ನ ನೋಡದು ಬ್ಯಾಡಾ...!
ಕಾಮತ್ರ ನೋಡದು ಬ್ಯಾಡಾ..!
ಹೂವೇ..ಹೂವು.... ಕಾಮತ್ರು..!!.. ಪಕ್ಕೇಶ್ ಹೆಗಡೇರೆ...!.."

" ಥೂ ... ಮಳ್ಳ ...!
ಹಂಗೆಲ್ಲ ಬೇರೆ ಯಾರತ್ರೂ ಹೇಳ್ಬೇಡ..!
ಅಪಾರ್ಥ ಮಾಡ್ಕೋತಾರೆ..
ನಿನ್ನ ಹೆಂಡ್ತಿ ಬೆಳ್ಳಗೆ ಇದ್ದಾಳೆ ..
ಮಗುನೂ ಬೆಳ್ಳಗೆ ಹುಟ್ಟಿದೆ...
ಅದರ್ಲಿ ...
ಏನೋ ಹೇಳ್ಬೇಕು ಅಂದ್ಯಲ್ಲಾ... ಏನು..?"


" ಪಕ್ಕೇಶ್ ಹೆಗ್ದೇರೆ...!
ನಮಗೂ ನಿಮಗೂ ದೋಸ್ತಿ ಐತೆ..
ಅದಕ್ಕೆ ಮನಸ್ಸು ತಡಿಲಿಕ್ಕೆ ಆಗ್ದೆ.... ಹೇಳ್ಳಿಕ್ಕೆ ಬಂದೆ....
ನೀವೂ ಹೊಸತಾಗಿ ಮದುವೆ ಆಗಿದ್ದೀರಿ...
ನೀವೂ..ನಂಥರ ಎಡವಟ್ಟು ಮಾಡ್ಕೋಬೇಡಿ..!!.
ಕಾಮತ್‍ರ ಹತ್ರ ಹೋಗಿ ತಾಯತ ಕಟ್ಟಿಸಕ್ಕಳ್ಳಿ ...
ಗಂಡು ಮಗು ಆಗ್ತದೆ.."

ಯಾರೋ ಹಿಂದುಗಡೆಯಿಂದ ಕಿಸಕ್ಕನೇ ನಕ್ಕಂತಾಯಿತು...

ಹಿಂದೆ ನೋಡಿದ್ರೆ ಅಣ್ಣ ಬಿದ್ದೂ ಬಿದ್ದೂ ನಗ್ತಾ ಇದ್ದ....!!

ಅಣ್ಣ ನಗುತ್ತಲೆ...ಕುಷ್ಟನನ್ನು ಕೇಳಿದ...

"ಕುಷ್ಟಾ... ನಿನಗೆ ವೆಲ್ಡಿಂಗ್ ಮಾಡಿದ್ದು ಯಾರು...???..!
ಕಾಮತ್ರಾ...?"

ಕಾಮತ್ರಿಗೆ.. ವೆಲ್ಡಿಂಗ್ ಮಾಡ್ಲಿಕ್ಕೆ ಬರೂದಿಲ್ರ...!
ಅವರು ಏನಿದ್ರೂ ..ವೆಲ್ಡಿಂಗ್ ತೆಗಿತಾರ್ರಾ....!!..
ಅವರ ಮಂತ್ರ ಶಕ್ತಿಗೆ .. ಅವರ ತಾಯತಕ್ಕೆ.. ಸಿಕ್ಕಾಪಟ್ಟೆ ತಾಕತ್ ಐತ್ರ..!
ನಮಗೆ ವೆಲ್ದಿಂಗು.. ಸಿರ್ಸಿ ಡಾಕ್ಟ್ರು ಮಾಡಿದ್ದು.."

ಮತ್ತೆ ಕುಷ್ಟನೇ ಹೇಳಿದ...

" ದೊಡ್ಡ ಹೆಗ್ಡೇರೆ....
ನೀವಾದ್ರೂ ಹೇಳಿ... ಪಕ್ಕೇಶ ಹೆಗ್ಡೆರಿಗೆ...
ಜೀವನದಲ್ಲಿ ಬದುಕಲಿಕ್ಕೆ ಕಷ್ಟ ಪಡ್ತೀವಿ...
ಸತ್ತಮೇಲಾದ್ರೂ.. ಆರಾಮ್ ಇರುಬಹ್ದು...
ಗಂಡು ಮಕ್ಳು ಹುಟ್ಟಿ..ಬೆಂಕಿ ಇಟ್ರೆ ....
ಸ್ವರ್ಗಕ್ಕೆ ಹೋಗಬಹುದಲ್ಲ..!
ಕಾಮತ್‍ರ ತಾಯತ ..ಕಟ್ಟಿಸ್ಕಳ್ಳಿಕ್ಕೆ..ನಿವಾದ್ರೂ.. ಹೇಳ್ರೀ..."

...............................................................



( ಕುಷ್ಟನ ಮಾತುಗಳು ನಿಮಗೆ ಅರ್ಥವಾಗುತ್ತದಾ...?
ಅದು ಅಲ್ಲಿನ ಆಡು ಭಾಷೆ...)




Sunday, August 30, 2009

ಭರವಸೆಯ.. ಭಾಸ್ಕರ... ಮತ್ತೆ ಮರಳಿ ... ಬಾ...!

ಪ್ರತಿದಿನವೂ... ಕತ್ತಲಾಗುವ ಸಮಯ....
ಸೂರ್ಯ ಮುಳುಗವ ಮುಸ್ಸಂಜೆಯ.. ವೇಳೆ.....
ಹಲವು
ಭಾವನೆಗಳನ್ನು... ಮೂಡಿಸುತ್ತದೆ...
ನಮ್ಮ ಮನದ ಭಾವಗಳಿಗೆ ತಕ್ಕಂತೆ... ಬಾನಿನ ಚಿತ್ರ ಕಾಣುತ್ತದೆ....

ಮರೆಯಾಗುತ್ತಿರುವ ನೇಸರ....
ಆಗಸದ ಹೃದಯದಲ್ಲಿ...
ಬಿಡಿಸುವ ... ಬಣ್ಣದ ಚಿತ್ತಾರ... ಮನಮೋಹಕ....!


ಇದೋ... ನಿಮಗಾಗಿ...
ಮರೆಯಲ್ಲಿ ನ ರವಿಯ...
ಹಲವು ಭಾವಗಳು..... ಬಣ್ಣದ ಚಿತ್ತಾರಗಳು....!




ಬೆಳ್ಳಿ ಮೊಡವೆ... ಎಲ್ಲಿ ಓಡುವೆ...?.
ಸಂಜೆಯ ನೇಸರನ ನೋಡಲು....
ಸಂಭ್ರಮವೇ...?
ಇರುಳಿನ ಚಂದ್ರಮನ ಆಗಮನದ... ನಾಚಿಕೆಯೇ...?



... ಮೋಡ ಬಾನಲ್ಲಿ... ತೇಲಾಡುತಾ...
ನಿನಗಾಗಿ.. ನಾ... ಬಂದೆ.. ನೋಡೆನ್ನುತಾ....
ನಲ್ಲಾ..... ನಿನ್ನ ಸಂದೇಶವಾ.... ನನಗೇ... ಹೇಳಿದೆ.....


ನೇಸರನ ನಿರ್ಗಮನ....
ಪ್ರಿಯಕರ ಚಂದ್ರಮನ... ಆಗಮನದ...
ಕಾತುರ... ಸಂಭ್ರಮ... ಬಾನಿಗೆ...!



ಗಗನವು... ಎಲ್ಲೋ...
ಭೂಮಿಯು.. ಎಲ್ಲೋ...
ಒಂದೂ....... ಅರಿಯೆ... ನಾ....



ಆಕಾಶದಾಗೆ...ಬಣ್ಣದ ಚಿತ್ತಾರಾ.. ಮಾಡಿದವನೇ...
ಮನಸ್ಸನ್ನು ಗೆದ್ದ ಮೋಡಿಗಾರನೆ.....




... ಸಂಜೆ ಯಾಕಾಗಿದೆ....?
ನೀನಿಲ್ಲದೆ...?
ವಿರಹವೇದನೆ... ನಿವೇದನೆಗೂ... ಸ್ಪೂರ್ತಿ.... ...ಬಾನು....


ಸುತ್ತ.. ಮುತ್ತಲೂ...
ಸಂಜೆ.. ಕತ್ತಲು... ಮೆತ್ತ.. ಮೆತ್ತಗೆ.... ಬಯಕೆ... ಮತ್ತಲು...!



ಯಾವ ಕಲಾಕಾರನೂ ಬಿಡಿಸಲಾರಾ.....
ಮನಸೂರೆಗೊಳ್ಳುವ... ಇಂಥಹ ಬಣ್ಣದ ಚಿತ್ತಾರವಾ..
.


ಇದೇನು...? ಚಂಬಲ್... ಕಣಿವೇಯಾ...?
ಪಕ್ಕದಲ್ಲೊಂದು ಬೆಟ್ಟ... ಮೋಡಗಳ ಬೆಳಕಿನ ಬಣ್ಣದಾಟ...!


ಯೇ.... ಶ್ಯಾಮ್... ಮಸತಾನಿ....
ಮಧುಹೊಶ್... ಕಿಯೇಜಾಯ್...
ಮುಜ್ಹೆ ದೂರ್.. ಕೋಯಿ.. ಕೀಛೇ.....
ತೇರಿ ಔರ್... ಲಿಯೇ ಜಾಯೆ....



ಸಂಜೆ.. ಕೆಂಪು ಮೂಡಿತು...
ಇರುಳು.. ಸೆರಗು ಹಾಸಿತು...
ಇಂದು ನಾಳೆಯ ಸೇರಿತು...
....


..ವೋ..... ಶ್ಯಾಮ್... ಕುಛ್... ಅಜೀಬ್ ಥೀ....
ಯೇ .. ಶ್ಯಾಮ್... ಭೀ... ಅಜೀಬ್ ಹೇ....
ವೋ... ಪಲ್.... ಭೀ... ಪಾಸ್.. ಪಾಸ್ ಥೀ.. ವೋ... ಆಜ್ ಭೀ ಕರಿಬ್ ಹೇ....


ಕಹೀ... ದೂರ್.. ಜಬ್ ದಿನ ಢಲ.. ಜಾಯೆ...
ಸಾಂಜ್ ಕಿ ದುಲ್ಹನ್..... ಬದನ ಚುರಾಯೇ...... ಚುಪಕೆಸೆ... ಆಯೇ...
ಮೇರೆ... ಖಯಾಲೋ ಕೆ ಆಂಗನ್ ಮೇ...
ಕೋಯಿ ಸಪನೋಕೆ ದೀಪ್ ಜಲಾಯೇ....!



ಕೈಲಾಸ ಮಾನಸ ಸರೋವರ ಹೀಗೆ ಇದ್ದಿತಾ...?
ಎಂಥಹ ಬಣ್ಣದ ಚಿತ್ತಾರಾ...!!




ಒಂಟಿ ಮನಕೆ...
ಸಂಜೆ ಏಕಾಂತವು... ಅಪ್ಯಾಯಮಾನವು...



ಮತ್ತದೇ... ಬೇಸರ...
ಅದೇ ಸಂಜೆ... ಅದೇ ಏಕಾಂತ... ನಿ ಜೊತೆಯಿಲ್ಲದೆ....
ನಿನ್ನ ನೆಪಾಗಿದೆ....




ಹಿಮಾಲಯದ ಪರ್ವತ ಶ್ರೇಣಿ...
ಪಕ್ಕದಲ್ಲೊಂದು ಕೊಳ... ಮೋಡಗಳ... ಬಣ್ಣದ ದೋಕುಳಿಯಾಟ....





ಮುಗಿಲ ಮಾರಿಗೆ... ರಾಗ ರತಿಯ...
ರಂಗ ಏರಿತ್ತ.... ಆಗ ಸಂಜೆಯಾಗಿತ್ತ....!!





ಮುಸ್ಸಂಜೆಯ ಹೊತ್ತು...
ಕ್ಷಣ ಕ್ಷಣಕ್ಕೂ ರಂಗು ಬದಲಾಯಿಸುತ್ತ...
ಬಣ್ಣದ ಚಿತ್ತಾರ ಬಿಡಿಸುತ್ತ....
ಮುಳುಗುವ ನೇಸರನಿಗೊಂದು.. ಸಂಭ್ರಮದ ವಿದಾಯ...
ಮತ್ತೆ ಮರಳಿ ಬಾ.... ಭಾಸ್ಕರ...!
ಭರವಸೆಯ...
ಭಾವಗಳನ್ನು ಹೊತ್ತು ತಾ...!.





ನಮ್ಮ ಭಾವನೆಗಳಿಗೆ ತಕ್ಕ ರಂಗಸ್ಥಳ...
ಬಾನಿನಂಗಳ...

ಪ್ರೇಮಿಗಳಿಗೆ.. ವಿರಹಿಗಳಿಗೆ... ಅನಾಥ ಭಾವದ ನೋವುಣ್ಣುವವರಿಗೆ...
ಬದುಕು ಸಾವಿನ ಅಂಚಿನಲ್ಲಿರುವವರಿಗೆ...
ಮದಿರೆಯ ಮಧ್ಯದಲ್ಲಿ.. ಮೋಜು ಮಾಡುವವರಿಗೆ...

ಸ್ವಲ್ಪ ಏಕಾಂತ...
ಹಕ್ಕಿಗಳ ಚಿಲಿಪಿಲಿ ಗಾನದ ಜೊತೆ....
ಗುನುಗು ...ನಿನ್ನ ಇಷ್ಟದ ಹಾಡು....
ಆಗಸದ ಮೂಲೆಗೊಮ್ಮೆ ನೋಡು....
ಬದಲಾಗುವದು ಮನದ ಭಾವದ ಗೂಡು...

ಬಂದೇ ಬರುವನು...
ಭರವಸೆಯ ಭಾಸ್ಕರ...
ಹೊಸ ಭಾವಗಳ....
ಹೊಸತತನದ ಹೊಸ ದಿನವನ್ನು...
ತಂದೇ... ತರುವನು... ನಮ್ಮ ದಿನಕರ..

Saturday, August 22, 2009

ಅವರ ಮಕ್ಕಳಿಗೆ... ಅವರೇ... ಹೆಸರಿಟ್ಟಿದ್ದಾರೆ...!


ಶಾರಿ ಊರಿಂದ ಫೋನ್ ಮಾಡಿದ್ದಳು...

" ಹೋಯ್... ಗೊಮಟೇಶ್ವರ..!!
ಟಿವಿ ೯ ರವರಿಗೆ ಒಂದು ಥ್ಯಾಂಕ್ಸ್ ಹೇಳಪ್ಪ..."


"ಯಾಕೆ ಏನಾಯ್ತೆ..? ಶಾರಿ...??"

"ಅಲ್ಲಾ...!!
ಅಷ್ಟು ಸಣ್ಣ ಟಿವಿಯಲ್ಲಿ ನಿನ್ನಂಥಹ ದೈತ್ಯನನ್ನು ತೋರಿಸಿದರಲ್ಲಾ...?

ಅದು ಹೇಗೆ ಸಾಧ್ಯ..!!.?"

ಗಣೇಶ ಹಬ್ಬದ ಕಾರ್ಯಕ್ರಮದಲ್ಲಿ ನಾನು ನನ್ನಾಕೆ ಟಿವಿ ನೈನ್‍ನಲ್ಲಿ ಬಂದಿದ್ದೇವು ..
ಲೇಡೀಸ್ ಕ್ಲಬ್ ಕಾರ್ಯಕ್ರಮದಲ್ಲಿ...

ಈ ಶಾರಿ ನಿಜವಾಗಿಯೂ ಕೇಳ್ತಾ ಇದ್ದಾಳೋ...!
ಅಥವಾ ನನ್ನನ್ನು ಹಾಸ್ಯ ಮಾಡ್ತಿದಾಳೊ.. ಗೊತ್ತಾಗಲಿಲ್ಲ...


"ಏಯ್.. ಶಾರಿ ಚೆನ್ನಾಗಿದ್ದಿಯೇನೆ..? ಏನಂತಾನೆ ಗಣಪ್ತಿ...?.."

" ಅಯ್ಯೋ ಅವರಿಗೇನೊ...?
ಆರಾಮಾಗಿ ಬಾಯಿತುಂಬಾ ಎಲೆ ಅಡಿಕೆ ಹಾಕ್ಕೊಂಡು ಆರಾಮಾಗಿದ್ದಾರೆ...
ಎಲೆ ಅಡಿಕೆ ಇದ್ರೆ ಅವರಿಗೆ ಈ ಪ್ರಪಂಚದಲ್ಲಿ ಏನು ಬೇಡ....
ನನಗೇ ಟೆನ್ಷನ್ ಕಣಪ್ಪಾ..."

" ಏನಾಯ್ತೆ.. ? ಶಾರಿ ನಿಂಗೂ ಟೆನ್ಷನ್ನಾ...?"

" ಹೌದೋ ಪ್ರಕಾಶು...
ಅದೇನೋ ಹಂದಿ ಜ್ವರನಂತೆ ನಂಗೆ ಸ್ವಲ್ಪ ಅದರ ಬಗ್ಗೆ ಹೇಳೊ...

ನಾನು ನಮ್ಮವರಿಗೆ ಹೇಳಿದೆ ಹಂದಿ ಜ್ವರದ ಬಗೆಗೆ ಪ್ರಕಾಶನ ಹತ್ರ ಕೇಳಿ...
ಶರೀರ ದೊಡ್ಡದಾದ್ರೂ.. ಬುದ್ಧಿವಂತನ ಥರ ಕಾಣ್ತಾನೆ......
ಬೆಂಗಳೂರಲ್ಲಿ ಇದ್ದಾನೆ..
ಫೋನ್ ಮಾಡಿ ಅಂದ್ರೆ ಬಾಯಿಂದ ಎಲೆ ಅಡಿಕೆ ತೆಗಿತಾನೆ ಇಲ್ಲ... "

ಇವಳು ಈ ಥರಹ ಹೊಗಳುವದು ನಂಗೆ ಸ್ವಲ್ಪ ಅಭ್ಯಾಸವಾಗಿತ್ತು....

"ಶಾರಿ... ಈ ರೋಗ.. ಗಾಳಿಯಲ್ಲಿ ಹರಡ್ತದೆ..
ರೋಗ ಬಂದವನು ಒಮ್ಮೆ ಕೆಮ್ಮಿದರೆ...

ಅವನಿಂದ ಬರುವ ವೈರಸ್‍ಗಳು.. ಐದು ತಾಸು ಹವೆಯಲ್ಲಿ ಇರ್ತದೆ..
ಮುಖಕ್ಕೆ ಬಟ್ಟೆ ಕಟ್ಗೋ ಬೇಕು... ರೋಗಿಗೂ ಬಟ್ಟೆ ಕಟ್ ಬೇಕು..."

" ಹೌದೇನೋ ..?
ಇಡೀ ದಿನ ಕಟ್ಟಿಕೊಂಡಿರ ಬೇಕು ಅನ್ನು...

ಅಲ್ಲಾ ಎಂಥಾ ಪರಿಸ್ಥಿತಿ ಬಂದೋಯ್ತು...!!...??...
ನಮ್ಮ ಮುಖ ಬೇರೆಯವರಿಗೆ ತೋರ್ಸೋದಿರೋ ಹಾಗಾಯ್ತಲ್ಲಪ್ಪ...!!
ಮುಖ ನೋಡಿ ಪ್ರೀತಿನೂ..... ಮಾಡೋಕ್ಕೆಆಗೋಲ್ಲ ಅನ್ನು...! ಛೇ...
ಛೇ... ಕಲಿಗಾಲಾ...!!"


" ಹುಂ ಮತ್ತೆ ತುಂಬಾ ಎಚ್ಚರಿಕೆಯಲ್ಲಿರ ಬೇಕು...
ಸಿರ್ಸಿ ಕಡೇನೂ ಬಂದಿದೆಯಂತೆ ..

ಹುಷಾರು.. ಮಕ್ಕಳಿಗೂ ಕರ್ಚೀಫ್ ಕಟ್ಟಿ ಶಾಲೆಗೆ ಕಳಿಸು..."

" ಇದೊಳ್ಳೆ ಸಮಸ್ಯೆ ಆಯ್ತಲ್ಲಪಾ... !!
ನನ್ನ ಮಾವ ದಿನಕ್ಕೆ ಹತ್ತು ಕಟ್ಟು ಬೀಡಿ ಕುಡಿತಾನೆ..

ಮುಖಕ್ಕೆ... ಬಟ್ಟೆ ಕಟ್ಟಿಕೊಂಡು ... ಹೇಗೆ ಕುಡಿತಾನೆ...?"

"ಶಾರಿ... ಕರ್ಚೀಫ್ ಒಂದು ಸಣ್ಣ ತೂತು ಮಾಡಿದ್ರಾಯ್ತಪಾ..."

"ಸರಿ.... ಆಯ್ತು ಕಣಪಾ..
ನಂಗೆ ನನ್ನ ಯಜಮಾನ್ರದ್ದೇ ಚಿಂತೆ...!!

ರಾತ್ರಿ ಮಲಗುವಾಗ ಎಲೆ ಅಡಿಕೆ ಹಾಕಿ ...
ಬೆಳಿಗ್ಗೆ ಎದ್ದು ತುಪ್ಪೋ ಅಭ್ಯಾಸ ....ಇವರಿಗೇನು ಮಾಡುವದು..?

ಬಾಯಿಗೆ ಬಟ್ಟೆ ಕಟ್ಟಿಕೊಂಡು... ಎಲೆ ಅಡಿಕೆ ಹೇಗೆ ಹಾಕ್ಕೊಳ್ತಾರೆ..?

ಗಣಪ್ತಿಗೆ ಎಲೆ ಅಡಿಕೆ ಜಗಿಯೋ ಅಭ್ಯಾಸ....
ಎಲೆ ಮಡಚಿ ಬಾಯಿಗೆ ಹಾಕಿ... ಸಂಗಡ ಸುಣ್ಣ, ತಂಬಾಕಿನ ಪೀಸು ಹಾಕುತ್ತಲೇ ಇರಬೇಕು...
ಅದು ಒಂದಾದಮೇಲೊಂದು ಬಾಯಿಗೆ ಹೋಗುತ್ತಲೇ ಇರಬೇಕು...
ಅದೋಂಥರಾ ಎಲೆ ಅಡಿಕೆ ಅಗಿಯೋ ಮಶಿನ್ನು....!!

"ಇದಕ್ಕೆ ನನ್ನ ಬಳಿ ಏನೂ ಐಡಿಯಾ ಇಲ್ಲ ಮಾರಾಯ್ತಿ..!!
ಒಂದು ದೊಡ್ಡ ಲುಂಗಿ ಕಟ್ಟಿ ಕಳಿಸು....
ನೋಡು ಇನ್ನೊಂದು ವಿಷಯ...
ಹೊರಗಡೆಯಿಂದ ಬದವರು ಕೈ, ಮುಖತೊಳೆದು ಕೊಂಡೇ....
ತಮ್ಮ ಮೂಗು, ಕಣ್ಣು ಮುಟ್ಕೋ ಬೇಕು..

ಅಲ್ಲೆಲ್ಲ ವೈರಸ್ ಅಂಟಿಕೊಳ್ಳೋ ಸಾಧ್ಯತೆ ಇವೆಯಂತೆ...
ಮಕ್ಕಳಿಗೆ ಎಲ್ಲವನ್ನೂ ತಿಳ್ಸಿ ಹೇಳು ಮಾರಾಯ್ತಿ.."

"ಆಯ್ತು ಮಾರಾಯಾ...!
ಎಲ್ಲಾ ರೋಗ ಬಡವರನ್ನೇ ಸಾಯಿಸ್ಲಿಕ್ಕೆ ಬರ್ತದೆ ನೋಡು...
ಬಗ್ಗಿಕೊಂಡು ಗದ್ದೆ ನೆಟ್ಟಿ ಮಾಡೋರು...
ಅಡಿಕೆ ಮರ ಹತ್ತಿ , ತೆಂಗಿನ ಮರಹತ್ತೋರಿಗೆಲ್ಲ ಇದು ಹೇಗೆ ಸಾಧ್ಯ...?
ಗದ್ದೆ ಊಳೋನಿಗೆ ಬಾಯಿಗೆ ಬಟ್ಟೆ ಕಟ್ಟಿ ಕೆಲಸ ಮಾಡು ಅಂದ್ರೆ ಹೇಗಪ್ಪಾ...?
ಇದೆಲ್ಲಾ ಬರೋದು ಬಡವರನ್ನ ಸಾಯಿಸಲಿಕ್ಕೆ..."


" ಹೌದು ಕಣೆ... ಇದಕ್ಕೆಲ್ಲ ಏನೂ ಮಾಡ್ಲಿಕ್ಕೆ ಬರಲ್ಲ... ಎಚ್ಚರಿಕೆಯಲ್ಲಿರ ಬೇಕು..."

" ಪ್ರಕಾಶು ನಂಗೆ ಇನ್ನೊಂದು ಡೌಟು....
ಈ ರೋಗದ ಹೆಸರೆಲ್ಲ ಯಾಕೇ ಹೀಗಿರ್ತದೆ...?
ಕೋಳಿ ಜ್ವರ.. ಹಕ್ಕಿ ಜ್ವರ... ಹಂದಿ ಜ್ವರ...?
ಎಲ್ಲಾ ಮಾಂಸಹಾರಿಗಳದ್ದೇ ಆಗೋಯ್ತಲ್ಲಾ..??."

" ಶಾರಿ ....ಅದೆಲ್ಲಾ ಅಮೇರಿಕದಲ್ಲಿ ಹುಟ್ಟಿದ ರೋಗ ಕಣೆ..
ಅವರ ಮಕ್ಕಳಿಗೆ.. ಅವರೇ ನಾಮಕರಣ ಮಾಡಿದ್ದಾರೆ.."


" ಅಲ್ಲಿ ತರಕಾರಿಗಳು ಸಿಗೋದಿಲ್ವಾ..?
ಒಪ್ಪವಾಗಿ, ಲಕ್ಷಣವಾಗಿ....
ಬಸಳೆ ಸೊಪ್ಪಿನ ಜ್ವರ,..!!
ಬದನೆಕಾಯಿ ಜ್ವರ...!! ಅನ್ನೋ ಬಹುದಿತ್ತು...

ಹೋಗ್ಲಿ ಬಿಡು... ನೀನೂ ನಿನ್ನ ಹೆಂಡ್ತೀನೂ ಹುಷಾರಿಯಲ್ಲಿರ್ರಪಾ..."

"ಆಯ್ತು ಕಣೆ..."

" ಆಲ್ಲಾ ಹೊರಗಿನಿಂದ ಬಂದು ಹೆಂಡ್ತೀನಾ ತಬ್ಬಿಕೊಳ್ಳೋದಿಕ್ಕೆ ಹೋಗ್ಬೇಡ...!
ಕೈ . ಮುಖ ಎಲ್ಲ ತೊಳ್ಕೊಂಡು... ಪ್ರೀತಿ ಮಾಡ್ಕೊಳ್ಳಿ...!
ಪ್ರೀತಿ, ಪ್ರೇಮ ಮಾಡ್ಕೊಳ್ಳೋ ಮೊದ್ಲು ಸೋಪು ಹಚ್ಚಿ ಸ್ನಾನ ಮಾಡಿ.....
ಯಾಕೊ ಪ್ರಕಾಶು ಹೂಂ ಅಂತಾನೇ ಇಲ್ಲಾ...??"

" ಶಾರಿ... ಸಾಕು ಮಾರಾಯ್ತಿ...ನಾನು ಹೇಳಿದ್ದು ನಂಗೇ ಹೇಳ್ತಿದ್ದಿಯಲ್ಲ..."

"ನೀನು ನಂಗೆ ಯಾವಾಗ್ಲೂ ಸಣ್ಣವನೇ ಕಣಪ್ಪಾ...!
ಅಲ್ಲೋ ಪ್ರಕಾಶು... ಈ ರೋಗ ಪ್ರಾಣಿ.. ಪಕ್ಷಿಗಳಿಗೆ ಬರೋಲ್ವೇನೊ...?"

"ಇಲ್ಲ.. ಕಣೆ..."

" ನೋಡು ನಮಗಿಂತ ಮಾತು ಬರದ ಮೂಕ ಪ್ರಾಣಿಗಳೇ ಮೇಲು...
ಈ ಥರಹ ಅವಾಂತರಗಳನ್ನು ಮಾಡ್ಕೊಂಡಿಲ್ಲ...
ತಮ್ಮ ಪಾಡಿಗೆ ತಾವು... ಆರಾಮಿಗಿವೆ..."


ನನಗೆ ಏನು ಹೇಳ್ಬೇಕು ಅಂತ... ಗೊತ್ತಾಗಲಿಲ್ಲ.....
!!

"ಪ್ರಕಾಶು .. ನಮ್ಮ ಸಮಸ್ಯೆಗೆ ಏನು ಕಾರಣ ಗೊತ್ತಾ..?"

" ನಮಲ್ಲಿನ ಬಡತನ... ಅನಕ್ಷರತೆ... ಅಜ್ಞಾನ..."

" ನೀನು ಪೇಟೆ ಸೇರಿ ಬುದ್ಧಿವಂತ ಆಗಿದಿಯಾ ಅಂದು ಕೊಂಡರೆ ...
ನೀನು ... ನನ್ನ ಯಜಮಾನ್ರ ತರಹ ಆಗಿ ಬಿಟ್ಯಲ್ಲೋ...!!
ಒಳ್ಳೆ ವೋಟ್ ಕೇಳಲಿಕ್ಕೆ ಬಂದ ರಾಜಕಾರಣಿ ತರಹ ಅದನ್ನೇ ಉರು ಹೊಡೆದು ಹೇಳ್ತಾ ಇದ್ದೀಯ...!
ಮ್ಮ ಸಮಸ್ಯೆಗಳಿಗೆ " ಅಮೇರಿಕಾ" ಕಾರಣ...
ಎಲ್ಲಾ ರೋಗ ಹುಟ್ಟಿ ಹಾಕೋದೇ.... ಅಮೇರಿಕಾ...

ಅಷ್ಟರಲ್ಲಿ ಗಣಪ್ತಿ ಬಂದ ಅನಿಸುತ್ತದೆ...
ಗಣಪ್ತಿ ಬಾವ ಫೋನ್ ತೆಗೆದು ಕೊಂಡ...

" ಪ್ರಕಾಶು... ನಿನಗೊಂದು ವಿಷಯ ಹೇಳ ಬೇಕು....
ಕಳೆದ ಒಂದು ತಿಂಗಳಿಂದ .. ನಮ್ಮನೆಗೆ ಟಿವಿ ಬಂದಿದೆ...
ಪೇಪರು ಬರ್ತಾ ಇದೆ..."

" ಅದರಿಂದ ಏನಾಯ್ತು...?"

" ಏನೋ ಹೇಳ್ತಾರಲ್ಲ ... ಮಾರಾಯಾ...!
ಸುಮ್ನೆ ಇರಲಿಕ್ಕೆ ಆಗದೆ ಇರೋನು ಮೈ ಮೇಲೆ ಇರುವೆ ಬಿಟ್ಕೊಂಡಿ ದ್ನಂತೆ ....
ನಿನ್ನ ಶಾರಿಗೆ ಈಗ ನಲವತ್ತೈದು ವರ್ಷ...
ಇಲ್ಲಿಯವರೆಗೆ ಏನೂ ಚಿಂತೆ ಇಲ್ದೆ ಹಾಯಾಗಿದ್ಲು... ಮನೆ.. ಮಕ್ಕಳು ಸಂಸಾರ ಅಂತ....
ಟಿವಿ, ಪೇಪರ್ರು ಬಂದ ಮೇಲೆ ಹೀಗಾಗಿ ಬಿಟ್ಟಿದ್ದಾಳೆ...."

" ಓದಲಿ.. ಬಿಡು ಗಣಪ್ತಿ... ಬಾವ... ಪ್ರಪಂಚ ಜ್ಞಾನ ಬೆಳಿತದೆ..."

"ಪ್ರಕಾಶು ನೀನು....
ನಿಜ ಹೇಳಿದ್ರೂ..... ಹುಂ ಅಂತಿಯಾ....
ಸುಳ್ಳು ಹೇಳಿದ್ರೂ.... ಹುಂ.. ಅಂತಿಯಾ....
ನಿನ್ನ ಶಾರಿ ನನಗೆ ಕುಳಿತಲ್ಲಿ ಕುತ್ಕೊಳೋದಕ್ಕೆ ಬಿಡಲ್ಲ ಕಣಪಾ...
ಹೆಂಗಸರು ಓದಿದ್ರೆ ಹಿಂಗೆ ಆಗೋದು.....
ನೋಡು...!!.
ಗಂಡಸರಿಗೆ ಆರಾಮಾಗಿ ಇರಲಿಕ್ಕೆ ಬಿಡಲ್ಲ...!!."







ಎಲ್ಲರಿಗೂ .. ಗೌರಿ ಗಣೇಶ ಹಬ್ಬದ ಶುಭಾಶಯಗಳು.....


(ಪುಸ್ತಕದ ತಯಾರಿ ಜೋರಾಗಿಯೇ ನಡೆದಿದೆ....
ಪುಸ್ತಕದ ಹೆಸರು ಕೂಡ ಸಿಲೆಕ್ಟ್ ಆಗಿದೆ....
ಪ್ರಕಾಶಕರ ಒತ್ತಡ ಭರ್ಜರಿಯಾಗಿಯೇ ಇದೆ...
ಸಧ್ಯದಲ್ಲಿ ಇನ್ನೊಂದು ಖುಷಿಯ ವಿಚಾರ ಹಂಚಿಕೊಳ್ಳುವೆ...
ಪ್ರೋತ್ಸಾಹ ಹೀಗೆಯೇ ಇರಲಿ....)