Monday, July 20, 2009

ಇದು ಜಗತ್ತಿನ ಯಾವ ವಿಜ್ಞಾನಕ್ಕೂ ಅರ್ಥವಾಗದ ವಿಚಾರ...!

ಕಾಲೇಜು ದಿನಗಳಲ್ಲಿಯೂ ನಾನು ಬಹಳ ಸಂಕೋಚದ ಸ್ವಭಾವನಾಗಿದ್ದೆ..

ಕೀಳರಿಮೆ , ಅನಾಥ ಪ್ರಜ್ಞೆ ನನ್ನನ್ನು ಕಾಡುತ್ತಿತ್ತು...
ಬೇರೆಯವರಿಂದ ಅನುಕಂಪ, ಸಿಂಪಥಿ ಯಾವಾಗಲೂ ಬಯಸುತ್ತಿದ್ದೆ...

ಯಾರಾದರೂ ...ಅನುಕಂಪದಿಂದ...
"ಪಾಪ.. ...!!
ಅಪ್ಪ ಇಲ್ಲದ ಹುಡುಗ.. "
ಅಂತ ಅಂದು ಬಿಟ್ಟರೆ ನನ್ನೊಳಗೆ ಒಂಥರಾ... ಖುಷಿಯಾಗುತ್ತಿತ್ತು...
ಅದನ್ನು ನನ್ನ ಮನಸ್ಸು ಬಯಸ್ಸುತ್ತಿತ್ತು.....

ಇದನ್ನು ಹೊರದೊಡಿಸಿದವರು ನನ್ನ ಚಿಕ್ಕಮ್ಮ....

ಅವರು ಸ್ವಲ್ಪ ನಿಷ್ಠೂರವಾದಿ..
ತಮಗೆ ಸರಿ ಎನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಎದುರಿಗೇ ಹೇಳಿ ಬಿಡುವಂತವರು..

"ನೀನು ಅನುಕಂಪ ಬಯಸುತ್ತಿದ್ದಿಯಾ...
ಇದು ತಪ್ಪು....
ಇದು ನಿನ್ನ ಏಳಿಗೆಗೆ ತೊಂದರೆ ಕೊಡುತ್ತದೆ...

ಅಲ್ಪತ್ರಪ್ತನನ್ನಾಗಿ ಮಾಡಿ ಬಿಡುತ್ತದೆ...
ಇದರಿಂದ ಹೊರಗೆ ಬಂದಂತೂ ನೀನು ಉದ್ಧಾರವಾಗೋದಿಲ್ಲ"
ನನ್ನ ಚಿಕ್ಕಮ್ಮ ಅಪ್ಪಟ ಹಳ್ಳಿ ಪ್ರತಿಭೆ...
ಆ ಭಾಗದಲ್ಲಿ...
ಹಾಡು, ಕಲೆ ಕಸೂತಿಯಿಂದಾಗಿ ಬಹಳ ಪ್ರಸಿದ್ದರು...

ಅವರ ಮಾತು ನನ್ನಲ್ಲಿ ಬಹಳ ನಾಟಿತು...

ಆದರೆ ಹೇಗೆ... ಹೊರಬರುವದು...?

ಚಿಕ್ಕಪ್ಪ, ಚಿಕ್ಕಮ್ಮ ಇಬ್ಬರೂ ನನಗೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವದಕ್ಕೆ ಪ್ರೋತ್ಸಾಹಿಸುತ್ತಿದ್ದರು...

"ನಿನ್ನಪ್ಪ ...ಆ ಕಾಲದಲ್ಲಿ ..
ಆ .. ದೇವಿಸರದ ಕುಗ್ರಾಮದಲ್ಲಿ ನಾಟಕ ತಂಡ ಕಟ್ಟಿ..
ನಾಟಕದ ನಿರ್ದೇಶನ ಮಾಡಿ ...
ರಾತ್ರಿಯಿಂದ ಬೆಳಗಿನವರೆಗೆ ನಾಟಕ ಆಡಿಸಿದ್ದರು...

ಅವರೇ ಮುಖ್ಯ ಖಳನಾಯಕನ ಪಾತ್ರ..
ನಮ್ಮೂರಲ್ಲಿ " ನ ಭೂತೋ... ನಭವಿಷ್ಯತಿ.."
ಅನ್ನುವಂಥಹ ನಾಟಕ...
ಅವರ ಮಗ ನೀನು....
ನೀನೂ ಭಾಷಣ ಮಾಡ ಬಲ್ಲೆ ...ಮಾಡು..."
ಎಂದು ಹುರಿದುಂಬಿಸುತ್ತಿದ್ದರು...


ನನ್ನಲ್ಲಿ ಆತ್ಮ ವಿಶ್ವಾಸದ ಕೊರತೆ.....

ಅವರ ಒತ್ತಾಯಕ್ಕೆ ಭಾಷಣ ಮಾಡಿದರೂ ಬಹುಮಾನ ಬಂದಿರಲಿಲ್ಲ....

ಕಾಲೇಜು ದಿನಗಳಲ್ಲಿ ನಾಗು, ದಿವಾಕರ ನನಗೆ ಬಹಳ ಆಪ್ತರಾದರು..
ದಿವಾಕರ ಒಳ್ಳೆಯ ಮಾತುಗಾರ...
ನನ್ನನ್ನೂ ತನ್ನ ಸಂಗಡ ಸೇರಿಸಿಕೊಂಡು ಚರ್ಚಾ ಸ್ಪರ್ಧೆಗೆ ಕರೆದು ಕೊಂಡು ಹೋಗುತ್ತಿದ್ದ...
ತಾನೇ ಭಾಷಣ ಬರೆದು ಕೊಡುತ್ತಿದ್ದ...

ಆದರೆ ....
" ಹೇಳಿಕೊಟ್ಟ ಮಾತು..

ಕಟ್ಟಿಕೊಟ್ಟ ಬುತ್ತಿ ಹೆಚ್ಚು ದಿನ ಬರುವದಿಲ್ಲವಲ್ಲ...!!.."

ಏನಾದರೂ ಇದ್ದರೆ.... ಅದು ನಮ್ಮ ಸ್ವಂಥದ್ದು...
ನಮ್ಮ ಸ್ವಂತಿಕೆ.....

ನನ್ನ ಆತ್ಮ ವಿಶ್ವಾಸದ ಕೊರತೆಯಿಂದಾಗಿ ಆ ಭಾಷಣಗಳೆಲ್ಲ ಸಪ್ಪೆಯಾಗಿ ಬಿಡುತ್ತಿತ್ತು...

"ನೀನು ಒಂದು ಬಹುಮಾನ ತೆಗೆದು ಕೊಳ್ಳುವವರೆಗೆ ನಾನು ಬೀಡುವದಿಲ್ಲ"
ಎಂದು ದಿವಾಕರ ಭೀಷ್ಮ ಪ್ರತಿಜ್ಞೆ ಮಾಡಿ ಬಿಟ್ಟ...

ನಾಗು, ದಿವಾಕರ ಇಬ್ಬರೂ ಪಣ ತೊಟ್ಟರು....

ಸಿದ್ದಾಪುರದ ಟೌನ್ ಹಾಲಿನಲ್ಲಿ ಒಂದು ಚರ್ಚಾ ಸ್ಪರ್ಧೆ ಇತ್ತು..

" ಅಣುಸ್ಥಾವರಗಳು ವಿನಾಷಕ್ಕೆ ದಾರಿ"

ಆಗ "ಉತ್ತರ ಕನ್ನಡ ಜಿಲ್ಲೆ ಉಳಿಸಿ" ಎನ್ನುವ ಆಂದೋಲನದ ಜೋರಾಗಿತ್ತು...
ಕೈಗಾ ಅಣುಸ್ಥಾವರ ವಿರೋಧ ಎಲ್ಲೆಡೆ ಇತ್ತು....

ಕಾರಂತಜ್ಜ ನಮ್ಮೆಲ್ಲರ ನಾಯಕರಾಗಿದ್ದರು...

"ಅಣುಸ್ಥಾವರಗಳು ಬೇಕು" ಅನ್ನಲಿಕ್ಕೆ ಯಾರೂ ಇರುತ್ತಿರಲಿಲ್ಲ...

ನಾವು.., ನಮ್ಮ ಗುಂಪು ಸ್ವಲ್ಪ ಎಡವಟ್ಟುಗಳು....
"ಅಣುಸ್ಥಾವರಗಳು ಬೇಕು" ಎಂದು ವಾದ ಮಾಡುವದಕ್ಕೆ ತಯಾರಿ ಮಾಡಿದೆವು...

ದಿವಾಕರ ರಾಜ್ಯಮಟ್ಟದಲ್ಲಿ ಭಾಷಣಕ್ಕೆ ಪ್ರಥಮ ಬಹುಮಾನ ಪಡೆದವ..
ಈಗಲೂ ಅತ್ಯುತ್ತಮ ವಾಗ್ಮಿ... ಪ್ರತಿಭಾವಂತ...

ಆದರೂ ನಮಗೆ ಬಹುಮಾನ ಸಿಗುವದು ಸಾಧ್ಯವೇ ಇಲ್ಲವಾಗಿತ್ತು...!!

ಅದಕ್ಕೆ ಕಾರಣ.....
"ನಯನಾ" ಎನ್ನುವ ಹುಡುಗಿ....


ಸುಂದರ ದುಂಡು ಮುಖದ ನೀಲಿ ಕಣ್ಣಿನ ಹುಡುಗಿ ಭಾಷಣಕ್ಕೆ ಬರುತ್ತಿದ್ದಳು..

ನೋಡಲು ನಾಲ್ಕು ಕಣ್ಣು ಸಾಲದು...
ಧ್ವನಿಯೂ ಮತ್ತೇರಿಸುವಂತಿತ್ತು...
ಸ್ವಲ್ಪ ಏರಿದ ಧ್ವನಿಯಲ್ಲಿ...
ಮೇಜು ಕುಟ್ಟಿ... ಮಾತನಾಡಿದರಂತೂ...
..........................................
ನಾವು ಬಹುಮಾನದ ಆಸೆ ಬಿಟ್ಟು ಬಿಡುತ್ತಿದ್ದೇವು...!

ನಾಗು ಹೇಳಿದ...
" ಈ ಬಾರಿ ಇದಕ್ಕೆಲ್ಲ ಕೊನೆ ಹಾಕೋಣ...
ಈ ಬಾರಿ ನಾವೇ ಗೆಲ್ಲುತ್ತೇವೆ..ನನ್ನ ಬಳಿ ಉಪಾಯವಿದೆ.."


ಅವನ ವಿಚಾರಗಳು.. ಧೋರಣೆಗಳು ಬೇರೆಯೇ...

ಭಾಷಣದ ದಿನ ಬಂತು...
ಊರಿನಿಂದ ನನ್ನ ಭಾಷಣ ಕೇಳಲು ನನ್ನ ಅಣ್ಣ ಬಂದಿದ್ದರು...

ಜನಸಾಗರವೇ ಸೇರಿತ್ತು....

ಮೊದಲು ದಿವಾಕರ...!
ಎಂದಿನ ತನ್ನ ಸಿಂಹ ಧ್ವನಿಯಲ್ಲಿ ಹೇಳಿದ..

"ವಿಜ್ಞಾನ ವೆಂದರೆ ಒಂದು ಕತ್ತಿ ಇದ್ದ ಹಾಗೆ...
ಅದು ಒಬ್ಬ ಕ್ರಷಿಕನ ಕೈಗೆ ಸಿಕ್ಕರೆ ಬೆಳೆಯನ್ನು, ಕಳೆಯನ್ನು ಕಡಿಯಲಿಕ್ಕೆ ಉಪಯೋಗಿಸುತ್ತಾನೆ..
ಅದೇ ಕತ್ತಿ ಒಬ್ಬ ಕೊಲೆಗಡುಕನ ಕೈಗೆ ಸಿಕ್ಕರೆ ತಲೆಕಡಿಯಲು ಉಪಯೋಗಿಸುತ್ತಾನೆ..

ಇಲ್ಲಿ ಕತ್ತಿಯ ತಪ್ಪು ಏನೂ ಇಲ್ಲ...

ಕತ್ತಿ ಉಪಯೋಗಿಸುವವನ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ..

ಅಣುಸ್ಥಾವರಗಳೂ ಹಾಗೇ...ಅದು ಇಂದಿನ ವಿಜ್ಞಾನ ..
ಅದು ಭವಿಷ್ಯದ ಅವಶ್ಯಕತೆ...."
ಎಂದು ತನ್ನ ವಾದ ಮಂಡಿಸಿದ...
ಜನರೆಲ್ಲ ತಲೆದೂಗಿದರು....

ನಂತರ ಬಂದವಳು ಬಳುಕುವ .."ನಯನಾ..."...!!!!...
ತನ್ನ ಕಿರುನೋಟವನ್ನು ತೀರ್ಪುಗಾರರ ಮೇಲೆ ಹರಿಸಿದಳು....
ಕಣ್ಣ ಮುಂದೆ ಬಂದ ಕೂದಲನ್ನು ಹಿಂದಕ್ಕೆ ತಳ್ಳುತ್ತಾ...
ತನ್ನ ಮಾದಕ ..
ಮೋಹಕ ಧ್ವನಿಯಲ್ಲಿ
....ಶುರು ಮಾಡಿದಳು...

" ನನ್ನ ಪ್ರೀತಿಯ ಬಂಧುಗಳೇ...

ಅಣು ಶಕ್ತಿಯಿಂದ ವಿಕಿರಣ ಉಂಟಾಗುತ್ತದೆ....!

ಸ್ವಲ್ಪ ಎಚ್ಚರ ತಪ್ಪಿದರೆ... ವಿನಾಷ ಗ್ಯಾರೆಂಟಿ...!

ರಷಿಯಾದ ಚರ್ನೋಬಿಲ್ಲಿನಲ್ಲಿ ಏನಾಯಿತು.....?

ನಾಗಸಾಕಿ, ಹಿರೋಷಿಮಾದಲ್ಲಿ ಏನಾಗಿದೆ..? ಏನಾಗುತ್ತಿದೆ...??

ಸಹಸ್ರಾರು.., ಕೊಟ್ಯಾಂತ ಜನರು.. ಪರಿತಪಿಸುತ್ತಿದ್ದಾರೆ...!

ಸಾವು ಬದುಕಿನ ಮದ್ಯೆ ಒದ್ದಾಡುತ್ತಿದ್ದಾರೆ....!

ಅಣು ವಿಕಿರಣದಿಂದ ಪರಿಸರ ನಾಶವಾಗುತ್ತದೆ...

ನಯನಾ ತನ್ನ ಧ್ವನಿಯನ್ನು ಮತ್ತೂ ಏರಿಸಿ...
ಮೇಜು ಕುಟ್ಟಿದಳು...!

ಆವೇಶ ...ಜಾಸ್ತಿಯಾಯಿತು..!!

"ಬದುಕು ದುಸ್ಥರವಾಗುತ್ತದೆ...!
ಗಂಡಸರು ನಪಂಸಕರಾಗುತ್ತಾರೆ...!
ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!
ಕಣ್ಣಿಲ್ಲದ, ಕಾಲಿಲ್ಲದ ಮಕ್ಕಳು ನಮ್ಮ ಭವಿಷ್ಯವಾಗುತ್ತಾರೆ...!

ನನ್ನ ಆತ್ಮೀಯ ಬಂಧುಗಳೇ.....
ಇಂಥಹ ಬದುಕು ನಿಮಗೆ ಬೇಕಾ...?

ನೀವೇ ಹೇಳಿ ಅಣು ಸ್ಥಾವರ ನಮಗೆ ಬೇಕಾ..?"

ಅವಳ ಸೌಂದರ್ಯ, ಮಾದಕ ಧ್ವನಿಗೆ ....ಮರುಳಾಗಿದ್ದ ಜನರೆಲ್ಲ...
"ಬೇಡ .. ಬೇಡ " ಎಂದರು...

ನಂತರ ಸರದಿ ನನ್ನದು...!!
ಸೋಲು.... ಖಚಿತವಾಗಿತ್ತು...!!

ಒಂಬತ್ತನೆ ವಿಕೆಟ್ಟಿಗೆ ಅನಿವಾರ್ಯವಾಗಿ ಆಡಲು ಬರುವ ಆಟಗಾರನ ಸ್ಥಿತಿ ನನ್ನದಾಯಿತು..

ನರ್ವಸ್ ಆಗಿಬಿಟ್ಟಿದ್ದೆ..

ಅವಳ ಭಾಷಣದ ಮೋಡಿಯಿಂದ ..
ಜನರ ತಪ್ಪಾಳೆ ನನ್ನನ್ನು ಅಧಿರನನ್ನಾಗಿ ಮಾಡಿ ಬಿಟ್ಟಿತ್ತು....!

ಅಷ್ಟರಲ್ಲಿ ನಾಗು ಓಡೋಡಿ ಬಂದ...!
ಕಿವಿಯಲ್ಲಿ ಏನೇನೋ ಹೇಳಿದ...! ಹುರಿದುಂಬಿಸಿದ....!!

"ಈ ಸ್ಟೇಜು ನಿಂದು.. ಈ ಕ್ಷಣ ಈ ಘಳಿಗೆ ನಿನ್ನದು...
ಈ ಸಮಯ ಮತ್ತೆ ಸಿಗುವದಿಲ್ಲ...
ಪ್ರಕಾಶು.. ...
ಸೋಲು... ಸೋಲುತ್ತಿರುವಾಗ... ಗೆಲ್ಲ ಬೇಕು ..
ಹೋಗು... ಗೆದ್ದೇ ಗೆಲ್ತಿಯಾ.!!..!!"
ಬೆನ್ನುತಟ್ಟಿದ....

ನಾನು ದಿವಾಕರನ ಮುಖ ನೋಡಿದೆ...

"ಹೊಡಿ... ಮುಂದುವರೆಸು.." ಎಂದು ಕಣ್ಣಸನ್ನೆಯಲ್ಲೇ ಹೇಳಿದ...

ನಾನು ಸ್ಟೇಜಿಗೆ ಬಂದೆ...

ಎಲ್ಲೆಲ್ಲೂ ಪಿನ್ ಡ್ರಾಪ್ ಸೈಲೆನ್ಸ್.... !!

ಜನರೆಲ್ಲ ನನ್ನನ್ನೇ ದಿಟ್ಟಿಸುತ್ತಿದ್ದರು.....!
ನನಗೆ ಎಲ್ಲಿಲ್ಲದ ಧೈರ್ಯ ಬಂದು ಬಿಟ್ಟಿತ್ತು....

"ಮಾನ್ಯರೆ....
ನಮ್ಮ ವಿರೋಧಿಯವರು ಈಗ ತಾನೆ ಹೇಳಿದರು...

ಇದು ನಮ್ಮ ಜಗತ್ತಿನ ಯಾವ ವಿಜ್ಞಾನಕ್ಕೂ ...
ಸಾಧ್ಯವಾಗದ, ಅರ್ಥವಾಗದ ವಿಚಾರ...!!

ನನಗಂತೂ ಅರ್ಥವಾಗುತ್ತಿಲ್ಲ....
ನಿಮಗೆ ಅರ್ಥವಾಯಿತಾ...??

"ಗಂಡಸರೆಲ್ಲ ನಪಂಸಕರಾಗುತ್ತಾರೆ...!!

ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!!!!!!

ಗಂಡಸರು ನಪಂಸಕರಾದರೆ...
ಅಂಗವಿಕಲ ಮಕ್ಕಳು ಹೇಗೆ ಹುಟ್ಟುತ್ತಾರೆ..???..!!!


ಇದನ್ನು ಕಂಡು ಹಿಡಿದ ಪುಣ್ಯಾತ್ಮ ಯಾರು..???...!!

ಮಹಾಜನಗಳೆ....

ನಾವೆಲ್ಲ ಅವನಿಗೆ ಕರೆದು ಸನ್ಮಾನ ಮಾಡಬೇಕು.....!!.."


ಇಡಿ ಸಭೆಯಲ್ಲಿ ಹಂಚು ಹಾರಿಹೋಗುವಷ್ಟು.. ನಗು.. ತಪ್ಪಾಳೆ...!!!

ಶಿಳ್ಳೆ... ಮುಂದೆ ಮಾತನಾಡಲಾಗದ ಸ್ಥಿತಿ....!!

ನನಗೆ ಉತ್ಸಾಹ ಜಾಸ್ತಿಯಾಯಿತು..... ಮಾತು ಮುಂದುವರೆಸಿದೆ.....

ನಾನು ಸ್ಟೇಜಿನಿಂದ ಹೊರಗೆ ಬರುತ್ತಲೇ ದಿವಾಕರ ನಾಗು ನನ್ನ ಆಲಂಗಿಸಿ ಕೊಂಡರು...

ನನ್ನಣ್ಣನ ಕಣ್ಣಂಚಲ್ಲಿ ನೀರಿತ್ತು...
ಅವನ ಖುಷಿ, ಸಂತೋಷ...
ಹೇಳದಿದ್ದರೂ ಗೊತ್ತಾಗುತ್ತಿತ್ತು...

ಆದರೆ ....
ಅಲ್ಲೂ ನಮಗೆ ಎರಡನೆಯ ಬಹುಮಾನ...!

ಕಾರ್ಯಕ್ರಮವನ್ನು ಸಂಘಟಿಸಿದವರು ಪರಿಸರವಾದಿಗಳು...!
ಕೈಗಾ ಅಣುಸ್ಥಾವರ ವಿರೋಧಿಸುವ ನಮಗೆ...
ಯಾರಿಗೂ "ಆ ವಿಷಯದಲ್ಲಿ" ಮೊದಲ ಬಹುಮಾನ ಬೇಡವಾಗಿತ್ತು...

ಆದರೆ ಸ್ಟೇಜಿನಲ್ಲಿ ಗಟ್ಟಿಯಾಗಿ ನಿಂತು ಮಾತಾಡಿ ಜನರ ಶಿಳ್ಳೆ ಸಿಕ್ಕಿದ್ದು ನನಗೆ ಖುಷಿಯಾಗಿತ್ತು...



Tuesday, July 14, 2009

ಜನಕ್ಕೆ ನಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಬರಲಿಕ್ಕೆ .. ನಮ್ಮ ಒಡನಾಟವಷ್ಟೇ.. ಸಾಲೋದಿಲ್ಲ......


ನನ್ನ ಬಳಿ ಒಂದು ವ್ಯವಸ್ಥಿತವಾದ ಟೀಮ್ ಕಟ್ಟಲಿಕ್ಕೆ ಪ್ರಯತ್ನ ಮಾಡ್ತಾನೆ ಇರ್ತೀನಿ...

ನಂಬಿಗೆ ಜನರನ್ನು ಬಹಳ ಕಷ್ಟಪಟ್ಟು ಕಲೆ ಹಾಕಿದ್ದೇನೆ..
ಹಾಕುತ್ತಿದ್ದೇನೆ... ಇದು ನಿರಂತರ ಕಾರ್ಯ....

ನಮ್ಮ ಕೆಲಸದಲ್ಲಿ ಅದು ಅನಿವಾರ್ಯ ಕೂಡ..

ಮೊನ್ನೆ
ಒಂದು ರೂಫ್ ಕಾಂಕ್ರಿಟಿಗೆ ತಯಾರಿ ನಡೆಸಿದ್ದೆ..

ಮೇಸ್ತ್ರಿ ರಾಜೇಂದ್ರ ನನ್ನ ಬಳಿ ಹೇಳಿದ...

"ಸಾರ್..ಬಾರ್ ಬೆಂಡರ್ ರಾಮಣ್ಣನಿಗೆ ಆರಾಮಿಲ್ಲ.
ವಯಸ್ಸಾಯಿತು
...
ಅವರಿಗೆ
ಕಂಬಿ ಕಟ್ಟಲಿಕ್ಕೆ ಬರ್ಲಿಕ್ಕೆ ಆಗಲ್ಲವಂತೆ..

ಅವನ
ಮಗ ಕೆಲಸಕ್ಕೆ ಬಂದಿದ್ದಾನೆ...
ಸ್ವಲ್ಪ "ಐಲು" ಥರಹ ಕಾಣ್ತಾನೆ...
ಅವನು ತಿಕಲ....
ನಮ್ಮನೆ ಪಕ್ಕದಲ್ಲಿದ್ದ.
..
ಅವನ ಕೆಲಸ
ನೀವೊಮ್ಮೆ ಚೆಕ್ ಮಾಡ್ಬಿಡಿ.."

ರಾಮಣ್ಣ
ನನ್ನ ಬಳಿ ಕಳೆದ ಹದಿನೈದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ...

ತುಂಬಾ
ಸಭ್ಯ ಮತ್ತು ಒಳ್ಳೆಯ ಮನುಷ್ಯ..


"ಸರಿ.. ಮೇಸ್ತ್ರಿ.. ನಾನು ಚೆಕ್ ಮಾಡ್ತೇನೆ ಬಿಡಿ " ಅಂದೆ...

ಎಲ್ಲ ಡಿಟೇಲಾಗಿ ಚೆಕ್ ಮಾಡಿದೆ ...
ಎಲ್ಲವೂ
ಸರಿ ಇತ್ತು...

ಹುಡುಗನನ್ನು ಗಮನಿಸಿದೆ...

ಬಹಳ ವಿಚಿತ್ರವಾಗಿದ್ದವು ಅವನ ಡ್ರೆಸ್ಸುಗಳು...

"ಏನಪ್ಪಾ... ನಿನ್ನ ಹೆಸರು..? ರಾಮಣ್ಣ ಬರ್ಲಿಲ್ವಾ..?" ಅಂತ ಕೇಳಿದೆ.

"ಸಾರ್... ರಾಮಣ್ಣಂಗೆ ಹುಶಾರಿಲ್ಲ..
ನಾನು ಅವರ ಮಗ..

ನನ್ನ
ಹೆಸರು ಗೋವಿಂದ ಅಂತ ಎಲ್ಲರೂ ನನ್ನನ್ನು "ಗೋವು" ಅಂತ ಕರಿತಾರೆ..."

ಆತನನ್ನು
ನೋಡಿದೆ...
ಬೇಜವಾಬ್ದಾರಿ
ಹುಡುಗ ಅನಿಸುತ್ತಿತ್ತು...


ಆತನ
ವಿಚಿತ್ರ ವೇಷ ಭೂಷಣ ...
ಗೋಕರ್ಣದ "ಓಮ್ ಬೀಚ್" ನೆನಪಾಗುತ್ತಿತ್ತು...

" ನಿಮಗೆ ಡ್ರಾಯಿಂಗ್ ಓದಲು ಬರ್ತದೆಯಾ...?
ಅನುಭವ
ಇದೆಯಾ...?
ಇದು...
ಐದು ಟನ್ ಸ್ಟೀಲ್ ಕೆಲಸ..
ಅಪ್ಪನ
ಸಂಗಡ ನಿನ್ನನ್ನು ಎಲ್ಲೂ ನೋಡಿಲ್ಲವಲ್ಲಪ್ಪ..."


"ಸಾರ್... ನಾನು ಅಪ್ಪನ ಸಂಗಡ ಕೆಲಸ ಮಾಡಿಲ್ಲ...
ಆದರೆ
ಬಾರ್ ಬೆಂಡಿಂಗ್ ಕೆಲ್ಸ ಗೊತ್ತು...
ಬೇರೆಯವರ ಬಳಿ ಕೆಲಸ ಮಾಡಿ ಕಲ್ತಿದೀನಿ...

ಡ್ರಾಯಿಂಗ್
ಎಲ್ಲ ಓದ್ತೀನಿ..

ಪಿಯೂಸಿ
ತನಕ ಇಂಗ್ಲೀಷ್ ಮೀಡಿಯಮ್ ನಲ್ಲಿ ಓದಿದೀನಿ..
ನನ್ನ ಕೆಲಸ ನೀವೇ ಚೆಕ್ ಮಾಡಿ ನೋಡಿ.."

ನನಗೆ ಮೇಸ್ತ್ರಿ ಮಾತು ನೆನಪಾಯಿತು...
"ಐಲು"...!!
ನೋಡಿದರೆ ಆ ಥರಹ ಇದ್ದಿದ್ದು ಹೌದು....

ಡ್ರಾಯಿಂಗ್ ತೋರಿಸಿ ಕೆಲವು ಪ್ರಶ್ನೆ ಕೇಳಿದೆ...
ಸರಿಯಾದ
ಉತ್ತರ ಕೊಟ್ಟಿದ್ದ..

ಅದೂ
ಇಂಗ್ಲೀಷಿನಲ್ಲಿ...
!
ನನಗೆ
ಖುಷಿಯಾಯಿತು...

ಕೆಲವೊಮ್ಮೆ
ವೇಶ ಭೂಷಣಕ್ಕೂ,... ಕೆಲಸಕ್ಕೂ ಸಂಬಂಧ ಇರುವದಿಲ್ಲ...

"ನೋಡಪ್ಪ....
ಏನೇ...
ಡೌಟು ಬಂದಲ್ಲಿ ಫೋನ್ ಮಾಡು.
ಇಪ್ಪತ್ತು ನಾಲ್ಕು ಗಂಟೆ ನನ್ನ ಮೊಬೈಲು ಚಾಲು ಇರ್ತದೆ..."


ಗೋವು ನಿಂತೇ ಇದ್ದ...

"ಸರ್... ನನ್ನದು ಒಂದೆರಡು ರಿಕ್ವೆಸ್ಟ್ ಇದೆ..."

ರಾಮಣ್ಣ
ನನ್ನ ಬಳಿ ಯಾವತ್ತೂ ರೇಟಿನ ಬಗ್ಗೆ ಚಕಾರ ಮಾತಾಡಿರಲಿಲ್ಲ...

ಈ ಹುಡುಗ ರೇಟಿನ ಬಗ್ಗೆ ಕೆಳುತ್ತಾನಾ...?

"ಕೇಳಪ್ಪ.."


"ಸರ್...
ನಾನು ಪ್ರತಿದಿನ ನೀವು ಬಂದಾಗ ನಮಸ್ಕಾರ ಮಾಡುವದಿಲ್ಲ...
ನನ್ನ
ಮನಸ್ಸು ಬಂದರೆ ಮಾಡ್ತೇನೆ...
ನನ್ನ ಪಾಡಿಗೆ ಕೆಲಸ ಮಾಡ್ತಾ ಇರ್ತೇನೆ..

ನನಗೆ
ಎಫ್.ಎಮ್ ಹಾಡು ಕೇಳ್ತಾ ಕೆಲಸ ಮಾಡೊ ಅಭ್ಯಾಸ...
ಪ್ಲೀಸ್ ಇಲ್ಲ ಅನ್ನ ಬೇಡಿ.."


" ನೋಡಪ್ಪ...
ನಮಸ್ಕಾರ ಏನೂ ಬೇಕಾಗಿಲ್ಲ...
ಕೆಲಸ ಸರಿ ಮಾಡು..
ಮಾಡುವಾಗ ನಿನ್ನ ಲಕ್ಷ್ಯ ಬೇರೆಕಡೆಗೆ ಹೋಗಿ ಬಿಡ್ತದೆ ..
ಹಾಗಾಗಿ
ಹಾಡು ಬೇಡ ಅನ್ನುವದು..

ಇದು ಏಸಿ ರೂಮಿನ ಕೆಲಸ ಅಲ್ಲ..
ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಅಪಾಯ.."

"ಅಂಥಹ ಸಮಯದಲ್ಲಿ ರೆಡಿಯೋ ಆಫ್ ಮಾಡ್ತೀನಿ ಸರ್"

"ಆಯ್ತಪ್ಪಾ
..." ಅಂದೆ....


ನನಗೆ ಎಲ್ಲೋ ಒಂದು ಕಡೆ ಅಳುಕು ಇದ್ದುದರಿಂದ...
ದಿನಾ ಬಂದಾಗ ಅವನ ಕೆಲಸ ಚೆಕ್ ಮಾಡ್ತಿದ್ದೆ...

ಎಲ್ಲ
ಸರಿಯಾಗಿಯೇ ಮಾಡ್ತಿದ್ದ...

ಕೆಲಸದಲ್ಲಿ
ರಾಮಣ್ಣನಿಗಿಂತ ಬಹಳ ಚುರುಕು...
!

ಒಂದು
ದಿನ ಮುಂಚಿತವಾಗಿ ಮುಗಿಸಿ ಬಿಟ್ಟ...
!

ನನಗೆ
ಖುಷಿಯಾಯಿತು...

ಲೆಕ್ಕಾಚಾರ
ಮಾಡಿ ಹಣ ಕೊಟ್ಟ ಮೇಲೆ ಕೇಳಿದೆ...

"ಏನಪ್ಪಾ... ಗೋವು....?
ನಮ್ಮ ಮೇಸ್ತ್ರಿ.. ಯಾಕೆ ನಿನ್ನನ್ನು ಇಷ್ಟ ಪಡೋದಿಲ್ಲ...?
ಏನಾದ್ರೂ
ಜಗಳ ಆಗಿತ್ತೇನು..?"

"ಏನೂ ಇಲ್ಲ ಸಾರ್...
ನಾನು ತುಂಬಾ ಸ್ಟ್ರೇಟ್...

ಕೇಳುವದನ್ನು
,..
ಅನಿಸಿದ್ದನ್ನು ನೇರವಾಗಿ ಕೇಳಿ ಬಿಡ್ತೀನಿ...

ಅದಕ್ಕೆ ನನ್ನ ಕಂಡರೆ ಆಗಲ್ಲ ಅನಿಸ್ತದೆ.."

"ಏನು
ಕೇಳಿದ್ದೆ ಮೇಸ್ತ್ರಿ ಬಳಿ..?"


"ಈ ಮೇಸ್ತ್ರಿ ನಮ್ಮ ಮನೆ ಪಕ್ಕದಲ್ಲಿ ಇದ್ದ...
ಅಜ್ಜನ
ಮನೆಯಲ್ಲಿ ಓದುತ್ತಿದ್ದ ಅವನ ಮಗಳು
..
ಬಹಳ ದಿನಗಳ ನಂತರ ಮನೆಗೆ ಬಂದಿದ್ದಳು...
ಚಂದ ಇದ್ದಳು..

ನಾನು
ಮೇಸ್ತ್ರಿ ಬಳಿ " ಮೇಸ್ತ್ರಿಯಣ್ಣ.. ನಿನ್ನ ಮಗಳು ಚಂದ ಇದ್ದಾಳೆ" ಅಂದೆ...

ಅದಕ್ಕೆ
ಆ ಯಪ್ಪ...
ಬೇಸರ ಮಾಡ್ಕೊಂಡು ಮನೆ ಬೇರೆಕಡೆ ಮಾಡಿದ..

ಹೇಳಿ
ಸಾರ್ ಇದರ ನನ್ನ ತಪ್ಪು ಏನು ಇದೆ?"


"ಆದ್ರೂ .. ನಿನ್ನ ವಯಸ್ಸಿನವರು ಆಥರಹ ಮಾತೋಡಾದು ತಪ್ಪು"

"ಸಾರ್ ಚಂದ ಇದಾಳೆ ಅಂತ ಮನಸ್ಸಲ್ಲಿ ಇಟ್ಕೊಂಡು ..
ಮೇಸ್ತ್ರಿ
ಎದುರಿಗೆ ಹಲ್ಲು ಕಿರಿದರೆ ಸರಿ ಇರ್ತಿತ್ತಾ..?

ನಾನೇನು
ಅವಳ ಬಳಿ ಕೆಟ್ಟದಾಗಿ ನಡ್ಕೊಂಡಿಲ್ಲವಲ್ಲ...

ನನಗೆ ಚಂದ ಕಂಡ್ಲು...
ಅದನ್ನು ನೇರವಾಗಿ ಹೇಳಿದೆ..
ಏನು ತಪ್ಪು..?"


ಹುಡುಗ ನಿಜಕ್ಕೂ ಐಲು ಅನಿಸಿತು....


"ಹಾಗೆಲ್ಲ ಮಾತಾಡ ಬಾರದು...
ಅದು ಸಭ್ಯತೆ ಅಲ್ಲಪ್ಪ...

ಜನ
ನಿನ್ನ ಬಗ್ಗೆ ತಪ್ಪು ಅಭಿಪ್ರಾಯಕ್ಕೆ ಬಂದು ಬಿಡ್ತಾರೆ..."


"ಈ ಜನಕ್ಕೇನು ಸಾರ್...

ನಮ್ಮ
ಬಗ್ಗೆ ಒಳ್ಳೆ ಅಭಿಪ್ರಾಯ ಬರ್ಲಿಕ್ಕೆ..
ನಮ್ಮ ಒಡನಾಟ ಸಾಲೋದಿಲ್ಲ..
ಸಾರ್..
ಅವರಿಗೆ ಇನ್ನೊಬ್ಬರು "ನಮ್ಮ ಬಗ್ಗೆ" ಹೇಳಬೇಕು...

ಬೇರೆಯವರು ನಮ್ಮ ಬಗ್ಗೆ ಹೇಳಿದ್ದರ ಮೇಲೆ..
ನಮ್ಮ ಒಳ್ಳೆತನ ನಿರ್ಧಾರ ಮಾಡ್ತಾರೆ...
ನಾನು
ಎಂಥವನು ಅಂತ ಈ ಮೇಸ್ತ್ರಿಗೆ ಗೊತ್ತಿಲ್ಲವಾ...?

ಸಣ್ಣ
ಇದ್ದಾಗಿಂದ ನೋಡಿಲ್ಲವಾ...?"


"ಏನೇ ಆದ್ರು.. ನೀನು ಹೇಳಿದ ರೀತಿ, ವಿಷಯ ಸರಿ ಕಾಣೋದಿಲ್ಲ...
ನೀನು ಕೆಟ್ಟ ಅರ್ಥದಲ್ಲಿ ಹೇಳಿದ್ದಲ್ಲ ಅಂತ ಮೇಸ್ಟ್ರಿಗೆ ಹೇಳಬೇಕಿತ್ತು..."

" ಸಾರ್... ಜನ...
ನಾನು ಏನು ಹೇಳ್ತಿನೋ ಅದನ್ನು ಕೇಳಲ್ಲ..
ನನ್ನ ಮಾತನ್ನು ಅವರಿಗೆ ಹೇಗೆ ಬೇಕೋ ಹಾಗೆ ಅರ್ಥ ಮಾಡ್ಕೊತಾರೆ...
ಎಲ್ಲರಿಗೂ ಅವರವರದೇ ದ್ರಷ್ಟಿ... ಅವರದ್ದೇ ರೀತಿ...
ನಾವು ಹೀಗೆ ಅಂಥ ಜನಕ್ಕೆ ಆರ್ಥ ಮಾಡ್ಸೋದು ಬಲು ಕಷ್ಟ ಸಾರ್...
ನಮಗೆ ಹೇಗೆ ಬೇಕೋ ಹಾಗೆ ಇದ್ದುಬಿಡಬೇಕು...
ಪ್ರಭುದೇವ ಫಿಲ್ಮಲ್ಲಿ ಹಾಡು ಇದೆಯಲ್ಲ...
ಟೇಕ್ ಇಟ್ ಈಸಿ ಪಾಲಿಸಿ.. ಥರ ಇರಬೇಕು ಸಾರ್...""


ಹೀಗೆ ಮಾತಾಡುತ್ತ ತನ್ನ ಪಲ್ಸರ್ ಬೈಕ್ ಬಳಿ ಬಂದ..

" ಸಾರ್ .. ಈ ನನ್ನ ಬೈಕ್ ನೋಡಿ...

ಇದಕ್ಕೆ ಸೈಕಲ್ ಬೆಲ್ ಇಟ್ಕೊಂಡಿದ್ದೀನಿ..."

ನಾನು ದಂಗಾಗಿ ಹೋದೆ...

ಪಲ್ಸರ್ ಬೈಕು... ಸೈಕಲ್ ಬೆಲ್ಲು...!


"ಏನಪ್ಪ ಇದು ..?
ಬೈಕಿಗೆ ಸೈಕಲ್ ಬೆಲ್ಲ್ ಯಾಕೆ?"

"ಸಾರ್...
ಎಲ್ಲರ ಥರಹ ನಾವು ಯಾಕೆ ಇರ್ಬೇಕು...?
ಸ್ವಲ್ಪ ಡಿಫರಂಟ್ ಇರಬೇಕು ಸಾರ್...

ಅದಕ್ಕೆ
ಸೈಕಲ್ ಬೆಲ್ ಇಟ್ಟಿದ್ದೀನಿ..
ನಾನು ಸ್ವಲ್ಪ ಡಿಫರೆಂಟು ಸಾರ್...

ಹೊಸತನ ಇರಬೇಕು ಸಾರ್..."

ಎನ್ನುತ್ತಾ ಸ್ಟೈಲಾಗಿ ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋದ...


ಅಷ್ಟರಲ್ಲಿ ಮೇಸ್ತ್ರಿ ಬಂದ...

"ಸಾರ್....
ಅವನ ಬೈಕ್ ಗೆ ಕಾರ್ಪೋರೇಷನ್ ಕಸ ತುಂಬೋ ಗಾಡಿಗೆ ಗಂಟೆ ಇರುತ್ತದಲ್ಲ...
ಅದನ್ನು
ಕಟ್ಟ ಬೇಕಿತ್ತು ..

ಹೊಸತನ ಇರ್ತಿತ್ತು...
ಅಥವಾ ದೇವಸ್ಥಾನದಲ್ಲಿ ಊದೋ ಶಂಖ ಇಟ್ಕೊಂಡ್ರೆ ಒಳ್ಳೆದು...
ಹಿಂದಗಡೆ ಕುತವನು ಊದುತ್ತಾ ಹೋದರೆ ...
ಇನ್ನೂ ಹೊಸತನ ಇರ್ತದೆ...
......
ಅಹಾ...!!..
ಏನು ಜನಾನೋ...!!
ಏನು ವಿಚಾರನೋ...
!!
ತಲೆ
ತಗೊಂಡು ಗೊಡೆಗೆ ಚಚ್ಕೋ ಬೇಕು
...!!
ಎಲ್ಲ
ಸಿನೇಮಾ ಪ್ರಭಾವ ಸಾರ್...
ಮಕ್ಕಳು ಎಕ್ಕುಟ್ಟುಹೋಗ್ತಾ ಇವೆ...
ಸಾರ್....
ಹುಡುಗರ ..
ಆಚಾರ ವಿಚಾರ..
ರೀತಿ, ನೀತಿ ಎಲ್ಲ ಸಿನೆಮಾ ಟಾಕಿಸಿನಲ್ಲಿ ತಯಾರಾಗ್ತದೆ...."

ನಾನು ತಲೆ ಹಾಕ ಬೇಕೋ ಬೇಡವೋ ಅಂತ ವಿಚಾರ ಮಾಡತೊಡಗಿದೆ......


( ಕೆಲಸ ಕಡಿಮೆ ಇದ್ದರೂ ಬ್ಯೂಸಿಯಾಗಿದ್ದೇನೆ...
ಸಂಗಡ ಒಂದು ಕೊಲೆಯ ಸುತ್ತಮುತ್ತದ ಕಥೆ ಬರೆಯಲು ತೊಡಗಿದ್ದೇನೆ..
"ಕೊಲೆ " ಆಯಿತೆಂದರೆ ಒಂದು ವ್ಯಕ್ತಿಯದಲ್ಲ...
ಅಲ್ಲಿ ಬಹಳಷ್ಟು ಕೊನೆಯಾಗುತ್ತದೆ... ಕೊಲೆಯಾಗುತ್ತದೆ...
ಸಸ್ಪೆನ್ಸ್, ರಹಸ್ಯ ಇದ್ದೆ ಇರುತ್ತದೆ....
ಅದು ಮಿನಿ ಕಾದಂಬರಿಯಾಗುತ್ತಿದೆ...

20 x 20 ಮ್ಯಾಚಿಂದ ಟೆಸ್ಟ್ ಆಡಲು ಹೊರಟ ಹಾಗಿದೆ...

ಇದು ನನ್ನಿಂದ ಆಗ ಬಹುದಾ..?
ಬರೆದು ಏನು ಮಾಡ ಬೇಕು...?

ಪುಸ್ತಕ...?

ಅದರ ಬಗೆಗೂ ತಯಾರಿ ನಡೆದಿದೆ...
ಬ್ಲಾಗಿನ ಲೇಖನಗಳು ಪುಸ್ತಕರೂಪದಲ್ಲಿ...
ಆ ಲೇಖನಕ್ಕೆ ಬಂದ ಒಳ್ಳೆಯ ಪ್ರತಿಕ್ರಿಯೆಗಳು....
ಅವರ ಬ್ಲಾಗ್ ವಿಳಾಸ , ಹಾಗೂ ಅವರ ಈಮೇಲ್ ಕೂಡ ಹಾಕುವ ವಿಚಾರ ನಡೆಯುತ್ತಿದೆ......
ನನ್ನ ಬ್ಲಾಗಿನ ಫಾಲೋ ಮಾಡುವವರ ವಿವರಗಳು...
ಇತ್ಯಾದಿ....

ನಿಮ್ಮ ಅಭಿಪ್ರಾಯ ತಿಳಿಸುವಿರಾ...?

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...)

ಇಟ್ಟಿಗೆ ಸಿಮೆಂಟ್ ಬ್ಲಾಗ್ ಬಗೆಗೆ ಬರೆದ "ಅಶೋಕ್ ಕುಮಾರ್ " ಅವರಿಗೂ...
ಉದಯವಾಣಿ ಪತ್ರಿಕೆಗೂ ...(೧೩/೦೭/೦೯)
ಅನಂತ ವಂದನೆಗಳು....

ಅತ್ಯುತ್ತಮ ಪ್ರತಿಕ್ರಿಯೆಗಳು...!!
ಸ್ನೇಹಿತ ಶಿವೂ ಅವರ ಅನುಭವ, ದೇಸಾಯಿಯವರ ಅನಿಸಿಕೆ...ಎಲ್ಲ ಓದುಗರ ಪ್ರತಿಕ್ರಿಯೆ ಸೊಗಸಾಗಿದೆ... ಒಳ್ಳೆಯ ಸಂವಾದ ಪ್ರತಿಕ್ರಿಯೆಯಲ್ಲಿ ನಡೆಯುತ್ತಿದೆ .. ಓದಿ...




Tuesday, July 7, 2009

... ಮಾತಿಲ್ಲದೆ... ಮೌನವಾಗಿ... ಪ್ರೇಮಿಸುವ... ಪ್ರೇಮಿಯ.... ಪ್ರೆಮದಂತಿರಬೇಕು .!!.!

(ಹಿಂದಿನ ಲೀಖನದಿಂದ......)

ನಮಗೆಲ್ಲಾ ಆಶ್ಚರ್ಯದ ಜೊತೆಗೆ ಒಂದು ದೊಡ್ಡ ಶಾಕ್...!

ರಾಜಿ ತನ್ನ ಅಪ್ಪ... ಮಿಲಿಟರಿ ಸುಬ್ಬರಾವ್....
ಸಂಗಡ ಲೆಕ್ಚರರ್ ಸಂಗಡ ಬರ್ತಾ ಇರೋದು .....
ಆತಂಕದ ಸಂಗಡ ಹೆದರಿಕೆ....!

ಇದ್ದಕಿದ್ದಂತೆ ನೀರವ ಮೌನ....!
ನಮ್ಮೆದೆಯ ಬಡಿತದ ಶಬ್ಧ...!

ಹ್ರದಯ ಬಾಯಿಗೆ ಬಂದ ಸ್ಥಿತಿ....!

ಮಿಲಿಟರಿ ಸುಬ್ಬರಾವ್ ದಾಪುಗಾಲು ಹಾಕುತ್ತ ನಮ್ಮ ಬಳಿಯೇ ಬಂದು ನಿಂತರು.....

"ಇಲ್ಲಿ ಪೆಟ್ಟಿಗೆ ಗಪ್ಪತಿ ಅಂದರೆ ಯಾರು..?"

ನಾವು ಮಾತಾಡೋಣವೆಂದರೆ ಧ್ವನಿಯೇ ಬರುತ್ತಿಲ್ಲ....
ಬಾಯೆಲ್ಲ ಒಣಗಿದ ಅನುಭವ....

ಅಷ್ಟರಲ್ಲಿ ರಾಜಿ ಮುಂದೆ ಬಂದು
ನಾಗುವನ್ನು ನೋಡುತ್ತ
"ಇಲ್ಲಿ ಗಪ್ಪತಿ ರೂಮ್ ಎಲ್ಲಿ...?"


ನಾಗು ತೋರಿಸಿದ...

ಅಷ್ಟರಲ್ಲಿ ಪೆಟ್ಟಿಗೆ ಗಪ್ಪತಿನೂ...
ಏನು ಅಂತ ನೋಡುತ್ತ ... ಹೊರಗೆ ಬಂದ...

ರಾಜಿ ತನ್ನ ಪರ್ಸಿನಿಂದ ರಾಖಿ ತೆಗೆದು..

"ಗಪ್ಪತಿ ಅಣ್ಣ ...
ತುಂಬಾ ಥ್ಯಾಂಕ್ಸು...
ಎಲ್ಲರೂ ಕೆಟ್ಟ ದ್ರಷ್ಟಿಯಲ್ಲಿ ನೋಡುವಾಗ ...
ನಿನಗೊಬ್ಬನಿಗಾದರೂ...

ಒಳ್ಳೆಯ ಭಾವನೆ, ಮನಸ್ಸು ಇದೆಯಲ್ಲ...
ಖುಷಿಯಾಗ್ತದೆ..
ಎಲ್ಲಿ ನಿನ್ನ ಕೈ ಕೊಡು"

ಅಂತ ನಾವೆಲ್ಲ ನೋಡುತ್ತಿದ್ದ ಹಾಗೆ ರಾಖಿ ಕಟ್ಟೇ ಬಿಟ್ಟಳು....!!

"ನೀನು ಬರೆದ ಪ್ರೀತಿಯ ಪತ್ರಕ್ಕೆ...
ನನ್ನ ಉತ್ತರ ಅದರ ಹಿಂಬದಿಗೆ ಬರೆದ್ದಿದ್ದೇನೆ ..
ತಗೋ ಗಪ್ಪತಿ ಅಣ್ಣಾ.."


ಪೆಟ್ಟಿಗೆ ಗಪ್ಪತಿ ಬಾಯಿ ತೆರೆದು ....
ಅವಕ್ಕಾಗಿ... ನಿಂತು ಬಿಟ್ಟಿದ್ದ...!!


ಆಗ ಮಿಲಿಟರಿ ಸುಬ್ಬರಾವ್ ತಮ್ಮ ದಪ್ಪ ಧ್ವನಿಯಲ್ಲಿ...

" ಖುಷಿಯಾಗ್ತಿದೆ.... ಹುಡುಗ... ಶಭಾಸ್....!
ನನ್ನ ಮಗಳನ್ನು ನೋಡಿದರೆ ನಿನಗೆ ನಿನ್ನ ತಂಗಿಯ ನೆನಪಾದರೆ...
ನಮಗೂ ಸಹ ನಮ್ಮನ್ನು ಅಗಲಿದ ನಮ್ಮ ಮಗನ ನೆನಪಾಗುತ್ತಿದೆ...
ನಿಮ್ಮ ಅಣ್ಣ, ತಂಗಿ ಬಾಂಧವ್ಯ ಯಾವಾಗಲೂ ಇರಲಪ್ಪ....
ರಜೆಯಲ್ಲಿ ನಮ್ಮನೆಗೆ ಬಾ...
ಕೆಟ್ಟು ಹೋಗುತ್ತಿರುವ ಇಂದಿನ ಯುವಕರಿಗೆ ನೀನು ಆದರ್ಶ ಕಣಪ್ಪಾ...
ನಮ್ಮ ಹುಡುಗರು ಕಾಲೇಜಿಗೆ ಬಂದ ಕೂಡಲೇ ಕೆಟ್ಟು ಹೋಗ್ತಾರೆ...
ನಮ್ಮ ಸಂಸ್ಕ್ರತಿ ಮರೆತು ಬಿಡ್ತಾರೆ..
ಮನೆಯಲ್ಲಿ ಅಕ್ಕ, ತಂಗಿ ಇದ್ದಾರೆ ಅನ್ನೋದನ್ನ ಮರೆತು ಬಿಡ್ತಾರೆ....
......ಹೂಂ....
ಇಲ್ಲಿ....
ನಾಗು, ಮತ್ತೆ ಪ್ರಕಾಶ ಅಂದರೆ ಯಾರು..?"

ಸಿಡಿಲಿನಂಥಹ ಮಾತು...!!

ಅವರ ನೋಟ ನಮ್ಮ ಮೇಲಿತ್ತು...

"ಡ್ಯಾಡಿ... ಅದೆಲ್ಲ ಮುಗಿದ ಕಥೆ...
ಆ ಕವನ ನನ್ನ ಮೇಲೆ ಬರೆದಿದ್ದಲ್ಲ ಅಂತ ..
ಇವರೆಲ್ಲ ಪ್ರಿನ್ಸಿಪಾಲರ ಮುಂದೆ ಹೇಳಿ ಆಗಿದೆ...

ಆ ಬಗ್ಗೆ ನೋಟಿಸ್ ಬೋರ್ಡಿನಲ್ಲಿ ಇನ್ನೊಂದು ಕವಿತೆ ಕೂಡ ಹಾಕಿದ್ದಾರೆ...
ನೀನು ಬಾ ...."
ಸುಬ್ಬರಾವ್ ಕೈ ಹಿಡಿದು ಎಳೆದಳು...

ಅಷ್ಟರಲ್ಲಿ ಲೆಕ್ಚರರ್ ಕೂಡ
" ಸುಬ್ಬರಾವ್... ಅದು ಮುಗಿದ ಕಥೆ...
ಅದು ನಿಮ್ಮ ಮಗಳ ಬಗ್ಗೆ ಅಲ್ಲ... ಬನ್ನಿ ಹೋಗೋಣ....."

ಸುಬ್ಬರಾವ್ ಹೊರಟರು...
ಅವರ ಅನುಮಾನದ ಕೆಂಗಣ್ಣು ನಮ್ಮ ಮೇಲೇಯೇ ಇತ್ತು....

" ರಾಜಿ, ಮಗಳೆ...
ನಿನ್ನ ಬಳಿ ಇನ್ನೂ ರಾಖಿ ಇದೆಯಾ...?

ಇವರಿಗೆಲ್ಲ ಒಂದೊಂದು ಕಟ್ಟಿಸಿ ಬಿಡೋಣ..."

ಅಯ್ಯೋ....! ದೇವರೆ....!
ನಾಗುವಿಗೆ ರಾಜಿ ಕೈಯಿಂದ ರಾಖಿ ಕಟ್ಟಿಸಿ ಬಿಡ್ತಾರಾ...?

ಮತ್ತೆ ಡವ...ಢವ....!

"ಇಲ್ಲಪ್ಪ.... ಎಲ್ಲ ಖಾಲಿ ಆಗಿದೆ....
ನೀ ಬಾ ಡ್ಯಾಡಿ... ಲೇಟ್ ಅಗೋಯ್ತು..."

ಸುಬ್ಬರಾವ್ ರನ್ನು ಬಲವಂತವಾಗಿ ಎಳೆದು ಕೊಂಡು ಹೋದಳು...

ನಾಗು ನನ್ನ ಬಳಿ ಪಿಸು ಗುಟ್ಟಿದ..
" ಪ್ರಕಾಶು...
ಈ ...
ಮಸಾಲೆ..ಹಸಿಮೆಣಸಿನ ಕಾಯಿ ...
ಗೇಟು ದಾಟುವದರೊಳಗೆ...
ತಿರುಗಿ ನೋಡಿಯೇ... ನೋಡ್ತಾಳೆ ನೋಡು..."


ಒಂದು...!
ಎರಡು....!
ಮೂರು...!
ಮುಂದೆ ಹೋಗುತ್ತಾ ಇದ್ದವಳು...

ನಿಂತಳು....!!!

ಸಾವಕಾಶವಾಗಿ ಕೂದಲು ಸರಿ ಮಾಡಿಕೊಳ್ಳುವ ಹಾಗೆ...
ಕತ್ತು ಬಗ್ಗಿಸಿ ..
ಓರೆ ನೋಟದಿಂದ ನಮ್ಮನ್ನು ಒಮ್ಮೆ ನೋಡಿದಳು....!


ಅಬ್ಭಾ....!
ಏನಿತ್ತು ... ನೋಟದಲ್ಲಿ..?
ಅದು ಇಷ್ಟವಾ...? ಆಸಕ್ತಿಯಾ...?

ಎಷ್ಟೊಂದು ರಹಸ್ಯ ಈ ನೋಟ...!

ಮಿಂಚಿನ ನೋಟದ ಸಂಗಡ...
ಕಂಡೂ ಕಾಣದಂಥ

ತುಟಿಯೊಲ್ಲೊಂದು ಕಿರುನಗು....!!.

ಏನು ಇದರ ಅರ್ಥ...?

ನಾಗು ಸಣ್ಣಗೆ ಚೀರಿದ...
"ಪ್ರಕಾಶು... ಬಾಣ ಬಿತ್ತು ಕಣೋ..."

ನಾಗು ಪೂರ್ತಿ ಬೋಲ್ಡ್ ಆಗಿದ್ದ....

ಅವರೆಲ್ಲ ಹೋದ ಮೇಲೆ ಗಪ್ಪತಿ ದೊಡ್ಡದಾಗಿ ಅಳಲು ಶುರು ಮಾಡಿದ...

ಅವನ ಕೈಲಿದ್ದ ಪತ್ರ ಉಮಾಪತಿ ಓದಿದ...

ಸೀತಾರಾಮನಿಗೆ ಕುತೂಹಲ ತಡೆಯಲಾಗದೇ ಕೇಳಿದ...

" ರಾಜಿ ಬಂದು ರಾಖಿ ಕಟ್ಟಿ.." ಅಣ್ಣಾ " ಅಂತಾ ಹೋಗಿಬಿಟ್ಟಳಲ್ಲ...!!
ಏನಿದೆಯೋ ಅದರಲ್ಲಿ!!??"

"ಇದರಲ್ಲಿ.. ಎಲ್ಲ ಇದೆ ಮಾರಾಯಾ...!
ಕರುಳು ಕಿತ್ತು ಬರುವ ಹಾಗೆ..
ರಕ್ತ ಸಂಬಂಧ, ಕರಳು ಸಂಬಂಧ..
ಹ್ರದಯ, ಭಾವ ಅಂತೆಲ್ಲ ರಾಜಿಗೆ ಬರೆದು ...
"ನಿನ್ನ ನೋಡಿದರೆ ನನ್ನ ಅಮೇರಿಕಾದ ತಂಗಿಯ ನೆನಪಾಗ್ತದೆ" ಅಂತೆಲ್ಲ ಇದೆ ಕಣೊ..
ಇದನ್ನು ಒದಿದ ರಾಜಿ ಗಪ್ಪತಿಗೆ ರಾಖಿ ಕಟ್ಟದೆ ಇನ್ನೇನು ಮಾಡ್ತಾಳೆ..?
ರಾಜಿ... ಅಲ್ಲ ..
ಅವಳ ಅಮ್ಮ ಇದ್ದರೂ ಇದೇ ಕೆಲಸ ಮಾಡ್ತಿದ್ದ್ರು.."

ಪೆಟ್ಟಿಗೆ ಗಪ್ಪತಿ ಮತ್ತೂ ದೊಡ್ಡದಾಗಿ..
" ಲಬೋ... ಲಬೋ."..ಅಂತ ಅಳಲು ಶುರು ಮಾಡಿದ...

"ಅವಳ ಅಮ್ಮ ಕಟ್ಟಿದ್ದರೆ ಬೇಜಾರಿತ್ತಿಲ್ಲ ಕಣೋ...!
ರಾಜಿ ಕಟ್ಟಿ ಬಿಟ್ಟಳಲ್ಲೋ..!!
ನಾಳೆಯಿಂದ ಹೇಗೆ ನೋಡಲೋ ಅವಳನ್ನಾ..?
ಏನು ಅಂತ ನೋಡಲೋ..?
ಎಲ್ಲ ನಾಗು ಮಾಡಿದ್ದು..
ನನ್ನ ಹಣದಲ್ಲಿ ಮಸಾಲೆ ದೋಸೆ, ಸಿನೆಮಾ ಎಲ್ಲ ನೋಡಿದ್ದಲ್ದೆ...
ಸರಿಯಾದ ನಾಮಾನೂ ಹಾಕಿ ಬಿಟ್ರಲ್ಲೋ.....
ಪಾಪಿ ಮುಂಡೆದು.."

ಉಮಾಪತಿ ಗಪ್ಪತಿಗೆ ಸಮಾಧಾನ ಮಾಡಿದ...

"ನೀನು ಮಾಡಿದ್ದು ತಪ್ಪು.. ಗಪ್ಪತಿ..
ರಾಜಿಯನ್ನು ನಾಗು ಇಷ್ಟ ಪಡ್ತಾನೆ ಅಂತ ಗೊತ್ತಿದ್ದೂ ಹೀಗೆ ಮಾಡಬಾರದಿತ್ತು..
ನೀನು ಅವನಿಗೆ ಇಂಥಾ ಹುಡುಗಿ ಅಂತ ಹೇಳಲೂ ಇಲ್ಲ...
ಹೋಗಲಿಬಿಡು ...
ನಿನ್ನ ಎರಡನೆ ಆಪ್ಷನ್ "ನಯನಾ " ಇದ್ದಾಳಲ್ಲ..
ಬೇಜಾರು ಮಾಡ್ಕೋಬೇಡ..
ನಾವೆಲ್ಲ ನಿಂತು... ನಿನ್ನ ಲವ್ವು ಮಾಡಿಸ್ತಿವಿ ಕಣೋ...
ಅಲ್ವೇನೋ ನಾಗು..?.."

ನಾಗು ತಲೆ "ಓಕೆ" ಅನ್ನುವಂತೆ ಅಲ್ಲಾಡಿಸಿದ...
ಅವರೆಲ್ಲ ಗಪ್ಪತಿ ಕರೆದು ಕೊಂಡು ರೂಮಿಗೆ ಹೋದರು...

ನಾಗು ನನ್ನ ಹೆಗಲ ಮೇಲೆ ಕೈ ಹಾಕಿದ....

" ಲೋ ಪ್ರಕಾಶು....
ಈಗ.. ನಂಗೆ ಪತ್ರ ಲೇಖನ ಬೇಕು ಕಣೋ...!

ಪತ್ರ ಲೇಖನ ಅಂದರೆ ಹೇಗಿರಬೇಕು ಗೊತ್ತಾ...?

ಅಪ್ಪ ಮಗನನ್ನು ಪಕ್ಕಕ್ಕೆ ಕುಳ್ಳಿರಿಸಿಕೊಂಡು..
ತಲೆ ಸವರುತ್ತ ಹೇಳುವ...
ಹಿತವಚನದಂತಿರ ಬೇಕು..!

ತಾಯಿಯ ಮಡಿಲಲ್ಲಿ...ಬೆಚ್ಚಗೆ..
ಕುಳಿತ ಮಗುವಿಗೆ ಕೇಳಿಸುವ...

ಜೋಗುಳದಂತಿರಬೇಕು...!

ನೋವಾದ ....
ಒಂಟಿಮನಸ್ಸಿಗೆ...
ಗೆಳೆಯನು ಹೇಳುವ ಸಾಂತ್ವನದಂತಿರಬೇಕು...!

ಪ್ರಿಯತಮೆ.....
ಪ್ರಿಯನ ಕಿವಿಯಲ್ಲಿ ...
ಪಿಸುಗುಟ್ಟುವ ಮಾತಿನಂತಿರಬೇಕು..!

ಲೇಖನವೆಂದರೆ...
ಮಾತಿಲ್ಲದೆ... ಮೌನವಾಗಿ...
ಪ್ರೇಮಿಸುವ...
ಪ್ರೇಮಿಯ.. ..
ಪ್ರೆಮದಂತಿರ ಬೇಕು....!

ಹೇಳಲಾಗದೆ....
ತನ್ನೊಳಗೆ...
ಬಚ್ಚಿಟ್ಟ
ಭಾವಗಳ...
ನಿವೇದನೆಯಂತಿರಬೇಕು..!

ಬರೆದದ್ದು... ಪೆನ್ನಿನಿಂದಲ್ಲ...
ಹ್ರದಯದಿಂದ ಬರೆದಂತಿರ ಬೇಕು ...ಪ್ರಕಾಶು....


ನನಗೆ ರಾಜಿ ಬೇಕು.... ಕಣೋ...
ರಾಜಿ ಬೇಕೆ ಬೇಕು....!
ನಾನು ರಾಜಿ ಪ್ರೀತಿಸ್ತಾ ಇದ್ದೀನಿ...
ರಾಜಿ .. ನನ್ನ ಜೀವ.. ಕಣೋ...
ನನ್ನ ಜೀವನ..ಕಣೋ...

ಅವಳನ್ನು ಬೆಟ್ಟದಷ್ಟು ಪ್ರೀತಿಸ್ತೀನಿ ... ಪ್ರಕಾಶು...!
"

"ನಾಗು...
ಈ ಹುಡುಗಿ ...
ತುಂಬಾ ಜೋರಾಗಿದ್ದಾಳೆ ... ಮಾರಾಯಾ...!
ಅವಳಿಗೆ ನಿನ್ನ ಮೇಲೆ ಆಸಕ್ತಿ ಇದ್ದರೂ ಇರಬಹುದು....

ಆದರೆ....
ಈ ಮಿಲಿಟರಿ...
ಮೀಸೆ... ಸುಬ್ಬರಾವ್ ಗೆ ಏನು ಮಾಡ್ತೀಯಾ...?"


plz visit.....


( ನನ್ನ ಪ್ರೊಫೈಲ್ ವಿಕ್ಷಿಸಿ...
ಪ್ರೋತ್ಸಾಹ ಹೀಗೆಯೇ ಇರಲಿ...
ಹ್ರದಯ ಪೂರ್ವಕ ಧನ್ಯವಾದಗಳು..)


Thursday, July 2, 2009

ಯಾವ ಹೂವು.... ಯಾರ ಮುಡಿಗೋ...! ಯಾರ ಒಲವು.. ಯಾರ ಕಡೆಗೋ...!!

part 3


ಲ್ಲ ಹುಡುಗರಿಗೂ ದೊಡ್ಡ ಸಮಸ್ಯೆ ಧುತ್ತೆಂದು ಎದುರಿಗೆ ಬಂದು ಬಿಟ್ಟಿತು...

ಕಾಲೇಜಿನಲ್ಲಿ ನಡೆವ "ರಕ್ಷಾ ಬಂಧನ " ಹೇಗೆ ಎದುರಿಸುವದು....?

ನಾಗು ಎಲ್ಲರಿಗೂ ಧೈರ್ಯ ಹೇಳಿದ..
"ನೋಡ್ರೊ.. ಎಲ್ಲದಕ್ಕೂ ಪರಿಹಾರ ಇದ್ದೇ ಇದೆ..
ನಿಮಗೆಲ್ಲ ಯಾವ ಹುಡುಗಿ ಇಷ್ಟ ಅಂತ ಮೊದಲು ಲೀಸ್ಟ್ ಕೊಡಿ"

ತೆಂಗಿನ ಕಾಯಿ ಸೀತಾಪತಿ ತಲೆ ಕೆರೆದು ಕೊಂಡ..

"ನಾಗು ನನ್ನ ಕೇಸು ಇನ್ನೂ ಮನಸ್ಸಲ್ಲೇ ಇದೆ ಕಣೊ..
ನನ್ನ ಬಳಿ ಲೀಸ್ಟ್ ಇದೆ ... ಈ..
ಆರು ಜನರಲ್ಲಿ ಯಾರಾದರೂ ಒಬ್ಬರು ಅಂತ...
ಆರು ಜನ ರಾಖಿ ಕಟ್ಟದೆ ಇದ್ರೆ ಆಯ್ತು ನೋಡು..."

ತನ್ನ ಸಮಸ್ಯೆ ಇಟ್ಟ...

" ಎಲ್ಲರದ್ದೂ ಇದೇ ಸಮಸ್ಯೆ ಏನ್ರೋ...?..
ಓಕೆ ಮಾರಾಯ್ರ.....
ಎಲ್ಲರೂ ಗಪ್ಪತಿ ಬಳಿ ತಮ್ಮ ಲೀಸ್ಟ್ ಕೊಡ್ರೊ.."
ಅಂತ ನನ್ನನ್ನು ಕಾಲೇಜು ಮೈದಾನಕ್ಕೆ ಎಳೆದು ಕೊಂಡು ಹೋದ...

"ಪ್ರಕಾಶು...
ನಾನು "ರಾಜಿ" ಇಷ್ಟ ಪಡ್ತಿದ್ದೀನಿ ಅಂತ ಗೊತ್ತಿದ್ದೂ..
ಗಪ್ಪತಿ ಹೀಗೆ ಮಾಡಿದ್ದಾನಲ್ಲ...!
ಈ ದಿನ ಗಪ್ಪತಿಗೆ ಬರೆದು ಕೊಡೊ..
ವಿಷಯ , ರೂಪ ಬದಲಾವಣೆ ಆಗ ಬೇಕು....
ಈಗ ನೀನು ಲೇಖನ ಬರಿಯಬೇಕು...."

"ಲೇಖನ ಬಹಳ ಸುಲಭ ಕಣೋ...
ಎಸ್ಸೇ .. ನಿಬಂಧ .. ಥರ ಅಲ್ವೇನೋ..
ಬರೀತಿನಿ ಬಿಡು..."

"ಲೋ... ಲೇಖನ ಅಂದ್ರೆ...
ಹೇಗೇಗೋ ಬರೆದು ಬಿಡ ಬೇಡ...
ಅದಕ್ಕೂ..ಒಂದು ರೀತಿ.. , ನೀತಿ ಇದೆ...
ಒಳ್ಳೇ... ಗೌಳಿ ಎಮ್ಮೆ...
ಉಚ್ಛೆ ಹೊಯ್ದ ಹಾಗೆ ಬರಿ ಬೇಡ..."

"ಎಮ್ಮೆ ಉಚ್ಛೆ ಹೊಯ್ದ ಹಾಗಾ..?..!!..?
ಲೇಖನಕ್ಕೂ ಎಮ್ಮೆ... ಉಚ್ಛೆ ಹೊಯ್ಯುವದಕ್ಕೂ ...
ಏನು ಸಂಬಂಧ ಮಾರಾಯಾ...?"

"ಲೋ... ಎಮ್ಮೆ ಉಚ್ಚೆ ಹೇಗೆ ಹೊಯ್ತದೆ ನೋಡೀದೀಯಾ..?"

" ನೋಡಿದ್ರೂ... ನೆನಪಾಗ್ತ ಇಲ್ಲ...
ಕಲ್ಪನೆ ಬರ್ತಾ ಇಲ್ಲ...!!"

"ಎಮ್ಮೆ ಹೇಗೆ ಹುಚ್ಛೆ ಹೊಯ್ತದೆ..?
ನಾಲ್ಕೂ ಕಾಲು ಅಗಲಿಸಿ...
ಬಾಲ ಮೇಲಕ್ಕೆ ಎತ್ಗೊಂಡು.....
ಬೆನ್ನು ಬಗ್ಗಿಸಿ..
ಪ್ರೀತಿಯಿಂದ... ಆಕಾಶಾ ನೋಡ್ತಾ....
ಜೊಳ.. ಜೊಳ ಅಂತ...
ಒಂದೇ ಸಮನೆ ....
ಬಕೆಟಲ್ಲಿದ್ದ ನೀರು ತಲೆಗೆ ಹೊಯ್ಕೊಳ್ಳೋ ಹಾಗೆ
ಒಂದೇ ಉಸುರಿಗೆ ಎಲ್ಲವನ್ನೂ ಭರ್ರ್ ಎಂದು ಹೊಯ್ದು ಮುಗಿಸ್ತದೆ......"

" ಛೇ... ಛೇ....!! "

"ನೀನು ಹೇಳುವ ವಿಷಯ ಪ್ಯಾರಾ ಮಾಡಿ ಹೇಳು..
ಓದುವವನಿಗೆ ಸ್ವಲ್ಪ ಮಧ್ಯದಲ್ಲಿ ಬ್ರೇಕ್ ಕೊಡು..
ವಿಶ್ರಾಂತಿ ಕೊಡು...
ಬುಡದಿಂದ.. ಕೊನೆತನಕ...
ಒಂದೇ ಪ್ಯಾರಾಗ್ರಾಫ್ ನಲ್ಲಿ...
ಎಮ್ಮೆ ಉಚ್ಛೆ ಹೊಯ್ದ ಹಾಗೆ... ಮಾಡಬೇಡ...
ಅದಕ್ಕೊಂದು... ಲಯ.., ಹದ .. ಇರಬೇಕು..
ಇಲ್ಲಾ ... ಅಂದ್ರೆ...
ಓದುವವ.. ಎದ್ದೋಗಿ ಬಿಡ್ತಾನೆ ಅಷ್ಟೆ.."

" ಅರ್ಥ ಆಯ್ತು ಗುರುವೆ... ಈಗ ವಿಷ್ಯ ಹೇಳು ಪುಣ್ಯಾತ್ಮಾ... "
ನಾಗು ವಿಷಯ ಹೇಳುತ್ತ ರೂಮಿಗೆ ಕರೆದು ಕೊಂಡು ಹೋದ...
ಅವನು ಹೇಳಿದ ರೀತಿಯಲ್ಲಿ ಲೇಖನ ಬರೆದು ಕೊಟ್ಟೆ...

ಮರುದಿನ ಬೆಳಿಗ್ಗೆ ನಾಗು
ನಮ್ಮ ಗುಂಪಿನವರನ್ನು ಕರೆದು ಹೇಳಿದ...
"ನೋಡ್ರೋ...
ನಮ್ಮ ಕ್ಲಾಸಿನಲ್ಲಿ ಕೆಲವು ಪುಣ್ಯಕೋಟಿ ಹಸುಗಳಿವೆ..."

ಉಮಾಪತಿ ತಲೆ ಕೆರೆದು ಕೊಂಡ...

"ಪುಣ್ಯಕೋಟಿ ಹಸುಗಳಾ...? ಏನೋ ಹಾಗಂದ್ರೆ..?"

"ನೋಡ್ರೋ...
ಕೆಲವು ಹೆಣ್ಣುಮಕ್ಕಳನ್ನ ನೋಡಿದ್ರೆ...
ಏನೂ.. "ಭಾವನೆ".. ಬರಲ್ಲ...
ನೋಡಿದರೆ ತಂಗಿ ಅಂತ ಮನಸ್ಸಿಗೆ ಅನಿಸಿ ಬಿಡ್ತದೆ..
ಅಂಥಹ ನಾಲ್ಕು ಗೋವುಗಳನ್ನು ನೀವೇ ರೆಡಿ ಮಾಡಿ ಕೊಳ್ಳಿ...
ಅವರಿಗೆ ಮೊದಲೇ ತಿಳಿಸಿಡಿ..ನನಗೆ ನೀವೆ ರಾಖಿ ಕಟ್ಟಿ ಅಂತ..
ಅವರಿಗೆ ಗಿಫ್ಟ್ ಅಂತ ಕಾಸೂ ಕೊಡಿ.."

ಎಲ್ಲರಿಗೂ ಬಹಳ ಸಂತೋಷವಾಯಿತು...
ಮುಖ ಅರಳಿತು...

ನಾಗು ಮತ್ತೆ ಹೇಳಿದ..
"ಇಷ್ಟೇ ಸಾಲದು ...
ನಾಳೆ ಬೆಳಿಗ್ಗೆ ಅರ್ಧ ಗಂಟೆ ಮೊದ್ಲು ಬನ್ನಿ ..
ಇನ್ನೊಂದು ರಕ್ಷಣಾ ತಂತ್ರ ಇದೆ...
ಪ್ರತಿಯೊಬ್ಬರೂ ಅದನ್ನು ಮಾಡಿಕೊಳ್ಳಲೇ.. ಬೇಕು..."

ಎಲ್ಲರೂ ಖುಷಿಯಿಂದ ತಲೆ ಹಾಕಿ..
ತಮ್ಮ... ತಮ್ಮ ..ಪುಣ್ಯಕೋಟಿ ಹಸುಗಳನ್ನು ಹುಡುಕ ಹೊರಟರು...

ನಾಗು ಪೆಟ್ಟಿಗೆ ಗಪ್ಪತಿ ಕರೆದು ಪತ್ರ ಕೊಟ್ಟ...

ಗಪ್ಪತಿಗೆ ಆಶ್ಚರ್ಯ "ಇದೇನೋ ಸ್ವಲ್ಪ ದಪ್ಪ ಇದೆ..?'

ನಾಗು ಮುಗುಳ್ನಕ್ಕ ... "ನೀನು ಕೊಟ್ಟು ಬಾರೋ ಸಾಕು ..
ಹುಡುಗಿ ಓಡಿ ಬರ್ತಾಳೆ..." ಅಂದ...

ಗಪ್ಪತಿಗೆ ಖುಷಿಯಯಿತು...

ಮರುದಿನ ಬೆಳಿಗ್ಗೆ ಎಲ್ಲರೂ ನಾಗುವಿನ ರೂಮಿನ ಎದುರಿಗೆ ಜಮಾಯಿಸಿದ್ದರು...

ಏನು ಮಾಡ್ತಾನೆ ಈ ನಾಗು ಅಂತ ಕೆಟ್ಟ ಕುತೂಹಲ....!

ನಾಗು ರೂಮಿನಿಂದ ಬಂದವನೇ...
ಪ್ರತಿಯೊಬ್ಬರಿಗೂ ಒಂದೊಂದು ಪ್ಯಾಕ್ ನೀಡಿದ...!

ಎಲ್ಲರೂ ಬಿಚ್ಚಿ ನೋಡಿದರು..!

ಅದರಲ್ಲಿ "ರಾಖಿಯಿತ್ತು...."

"ಲೇ ನಾಗು ಇದೇನೋ.. ಇದು ..??..!
ಏನೋ ಮಾಡ್ತೀಯಾ ಅಂದುಕೊಂಡರೆ ..
ನಿನೂ ಪ್ರಿನ್ಸಿಪಾಲ್ ಆಗಿಬಿಟ್ಯಲ್ಲೋ..."

" ಲೋ ಮಕ್ಕಳ್ರಾ....
ಆ ಹೆಣ್ಣುಮಕ್ಕಳು ಕಟ್ಟೋಕ್ಕಿಂತ ಮೊದ್ಲು...
ನಿಮಗೆ ನೀವೆ ಕಟ್ಗೋ ಬಿಡಿ...
ಅಕಸ್ಮಾತ್ ನಿಮ್ಮ ಮನಸ್ಸಿನಲ್ಲಿರೋ ಹುಡುಗಿಯರು ಕಟ್ಟಲಿಕ್ಕೆ ಬಂದರೆ..
"ನನಗೆ ಇಷ್ಟೆಲ್ಲ .. ಕಟ್ಟಿಬಿಟ್ಟಿದ್ದಾರೆ....
ಕೈ ..ಕಾಲಿ.. ಇರೋರಿಗೆ ಕಟ್ಟಿ.."
ಅಂತ ಅವರಿಗೆ ಹೇಳಿ..."


ಎಲ್ಲ ಹುಡುಗರಿಗೂ ನಾಗುವಿನ ಮೇಲೆ ಭಯಂಕರ ಕ್ರತಜ್ಞತೆ ಬಂದು ಬಿಟ್ಟಿತು....

ನಾವೆಲ್ಲ ಕೈತುಂಬಾ ರಾಖಿ ಕಟ್ಟಿಕೊಂಡು ಕಾಲೇಜಿಗೆ ಹೋದೆವು...

ಸಭೆಯಲ್ಲಿ ಪ್ರಿನ್ಸಿಪಾಲರು ಗಂಭೀರವಾಗಿದ್ದರು...

"ಎಷ್ಟು ಜನ ಇವತ್ತು ಬರಲಿಲ್ಲ...??..? "

ಅಂತ ಗಂಡು ಮಕ್ಕಳ ಕಡೆಗೇ ... ನೋಡಿದರು...

ನಾವೆಲ್ಲ ನಮ್ಮ ಕ್ಲಾಸಿನ ಗಂಡುಮಕ್ಕಳನ್ನು ಎಣಿಸಿದೆವು...

ಪೆಟ್ಟಿಗೆ ಗಪ್ಪತಿ ಬರಲೇ ಇಲ್ಲ...!!

ಅವನನ್ನು ಸೇರಿಸಿ ಒಟ್ಟೂ ನಾಲ್ಕೂ ಜನ ಬರಲಿಲ್ಲವಾಗಿತ್ತು...

ಪ್ರಿನ್ಸಿಪಾಲರು..
"ನೋಡಿ ರಾಖಿಯೆಂದರೆ ಅದು ಬರಿ ದಾರವಲ್ಲ..
ಕಟ್ಟುವ ದಾರದಲ್ಲಿ ಸಂಬಂಧ ಇರುವದಿಲ್ಲ...
ಅದರ ಹಿಂದಿನ ಭಾವದಲ್ಲಿ.
ಮೂಡುವ ಅನುಬಂಧದಲ್ಲಿರುತ್ತದೆ...

ಇಂದು ಬಾರದೇ ಇರುವ ವಿದ್ಯಾರ್ಥಿಗಳ ಬಗೆಗೆ...
ಎಲ್ಲೋ ಒಂದು ಕಡೆ ಹೆಮ್ಮೆ ಎನಿಸುತ್ತದೆ...

ಅವರು ಅದಕ್ಕೆ ಅಷ್ಟು ಮಹತ್ವ ಕೊಟ್ಟಿದ್ದಾರಲ್ಲ...ಎಂದು..

ಆದರೆ ಅವರಿಗೆಲ್ಲ ನಾಳೆ ಪನಿಶ್ಮೆಂಟು ಇದೆ.."

ಎಲ್ಲರೂ ರಾಖಿ ಕಟ್ಟಿಸಿ ಕೊಡರು...

ಹೆಚ್ಚಾಗಿ ಪುಣ್ಯಕೋಟಿ ಹಸುಗಳು ರಾಖಿ ಕಟ್ಟಿದರು...

ರಾಜಿ ನಮ್ಮ ಗುಂಪಿನ ಒಬ್ಬರಿಗೂ ರಾಖಿ ಕಟ್ಟಲು ಬರಲಿಲ್ಲ...

ಹುಡುಗರಿಗೆಲ್ಲ ಖುಷಿಯಾಗಿತ್ತು...

ರೂಮಿಗೆ ಬಂದೆವು...
ಪೆಟ್ಟಿಗೆ ಗಪ್ಪತಿ ರೂಮಿನಲ್ಲಿ ದೊಡ್ಡದಾಗಿ ಹಾಡು ಹೇಳಿಕೊಳ್ಳುತ್ತಿದ್ದ...

"ಯಾವ ಹೂವು... ಯಾರ ಮುಡಿಗೋ...
ಯಾರ ಒಲವು... ಯಾರ ಕಡೆಗೋ..."

ಉಮಾಪತಿ ನಾಗುವಿನ ಕಾಲೆಳೆಯಲು ಶುರು ಮಾಡಿದ...

"ನೀನು ಏನೇ ಹೇಳು ನಾಗು...
ಈ.. ಪೆಟ್ಟಿಗೆ ಗಪ್ಪತಿ....
ಗೊತ್ತಿದ್ದು .., ಗೊತ್ತಿದ್ದು..,ರಾಜಿ ಲವ್ವು ಮಾಡ ಬಾರದಿತ್ತು...
ಅದೂ ನಿನ್ನ ಸಹಾಯ ತೆಗೆದು ಕೊಂಡು...
ನೋಡು ಇಂದು ಚಕ್ಕರ್ ಹಾಕಿ..
ಪ್ರಿನ್ಸಿ ಹತ್ತಿರ ಗ್ರೇಟ್ ಅನ್ನಿಸ್ಕೊಬಿಟ್ನಲ್ಲ...!!.."

ಅಷ್ಟರಲ್ಲಿ ಹೆಣ್ಣು ಮಕ್ಕಳ ಗುಂಪೊಂದು ನಮ್ಮ ರೂಮಿನ ಹತ್ತಿರ ಬಂತು...!

ರಾಜಿಯ ಗುಂಪು...!!..??...!

ನಮಗೆಲ್ಲ ಗಾಭರಿಯಾಯಿತು...

ಸೀತಾಪತಿ ಸಣ್ಣಗೆ ಚೀರಿದ...

" ಆ... ಭೀಮನ ಮೀಸೆಯವ "ರಾಜಿ" ಅಪ್ಪ...!!
ಮಿಲಟರಿ ಸುಬ್ಬರಾಯ...!!!
ನಾಗೂ...
ಇವತ್ತು
ನಮ್ಮ ಕಥೆ ಮುಗಿಯಿತು...!!"


ಉಮಾಪತಿ ಮತ್ತೂ ಗಾಭರಿ ಆದ..!!

"ಅಲ್ಲಿ ನೋಡ್ರೋ...
ನಮ್ಮ ಲೆಕ್ಚರರ್ ಅವರ ಸಂಗಡ ಬರ್ತಾ ಇದ್ದಾರೆ..!!
ಯಾಕ್ರೋ...??!!..
.
..ಓಡಿ ಹೋಗೋಣ್ವಾ...??!!"

ನೋಡು ....ನೋಡುತ್ತಿದ್ದ ಹಾಗೆ ಅವರು ನಮ್ಮ ಬಿಲ್ಡಿಂಗ್ ಪ್ರವೇಶಿಸಿದರು.....

ನಮ್ಮೆಲ್ಲರ ಎದೆ ಢವ... ಢವ ಹೊಡೆಯ ತೊಡಗಿತು..

ಕವನದ ಬಗೆಗೆ ರಾಜಿ ಸೇಡು ತಿರಿಸ್ಕೋ ಬಹುದಾ...??...!!

ಆತಂಕ.... !!
ಭಯ....!!


ದಪ್ಪ ಮೀಸೆಯವ ನಮ್ಮನ್ನು ದುರುಗುಟ್ಟಿ ನೋಡಿದ ಹಾಗೆ ಅನಿಸಿತು....


(ದಯವಿಟ್ಟು ನಾನು ಬರೆದ
"
ನಗುವವರ ಮುಂದೆ ಎಡವಿ ಬೀಳ ಬೇಡ " ಓದಿ...
)
http://ittigecement.blogspot.com/2008/12/blog-post_14.html


( ನನ್ನ ಬ್ಲಾಗನ್ನು ಫಾಲೋ ಮಾಡುವವರ ಸಂಖ್ಯೆ ಶತಕ ದಾಟಿದೆ....

ಫಾಲೋ ಮಾಡದೆ ಓದುವವರ ಸಂಖ್ಯೆ ಇದಕ್ಕೂ ಮೀರಿದೆ...

ಖುಷಿಯಾಗುತ್ತದೆ...

It is a great feeling....!

ನಿಮ್ಮ ಪ್ರೋತ್ಸಾಹ , ಅಭಿಮಾನ, ಪ್ರೀತಿ ಹೀಗೆ ಇರಲಿ..

ಇದು ನನಗೆ ಇನ್ನೂ ಬರೆಯಲು ಉತ್ಸಾಹ ನೀಡುತ್ತದೆ....


ಎಲ್ಲ ಓದುಗರಿಗೂ ನನ್ನ ನಮನಗಳು...
ಪ್ರೀತಿಯಿಂದ...
ಇಟ್ಟಿಗೆ ಸಿಮೆಂಟು ...