Saturday, October 10, 2009

ಮಾತು ಕೇಳಿದರೆ ... ಮನಸ್ಸು ಗೊತ್ತಾಗುವದಿಲ್ಲವಲ್ಲ... !

part...3




ನನ್ನಾಕೆಯ ಧೈರ್ಯದ ಮಾತುಗಳು ...
ನನ್ನಲ್ಲಿ ಹೊಸ ಹುಮ್ಮಸ್ಸು ತಂದು ಬಿಟ್ಟಿತ್ತು...


"ನೀವು ಈ ವ್ಯವಹಾರದಲ್ಲಿ ಹಾಕಿದ್ದೇನು...?
ಕಳೆದು ಕೊಂಡಿದ್ದೇನು...?



ನಂಬಿಕೆನಾ...? 
ಹಣನಾ..?


ಹಣದ ಸಲುವಾಗಿ ಆತ್ಮವಿಶ್ವಾಸ ಕಳೆದು ಕೊಂಡಿದ್ದು ತಪ್ಪು...


ಅದೆಲ್ಲಾ ದೊಡ್ಡ ವಿಷಯವಲ್ಲ...


ಅಷ್ಟಕ್ಕೂ ನೀವೆನೂ ಚಟ ಮಾಡಿ, ಜೂಜಾಡಿ ಹಣ ಕಳೆದು ಕೊಂಡಿಲ್ಲವಲ್ಲ...
ಹಣಗಳಿಸದಿದ್ದರೂ..
ನಮ್ಮೊಡನೆ ಜನರಿದ್ದಾರೆ...
ಈ ಸಮಸ್ಯೆಯನ್ನು ನೀವೇ ನಿಭಾಯಿಸಲು ನೋಡಿ...
ಸಾಧ್ಯವಾಗದ್ದಲ್ಲಿ ಹತ್ತಿರದವರ ಸಹಾಯ ಪಡೆಯೋಣ.."


ಅವಳ ಮಾತುಗಳು ನನಗೆ ಸರಿಯಾಗಿ ನಾಟಿದವು...


ನಾನು ಯಾಕೆ ಕಣ್ಣು ತಪ್ಪಿಸಿ,
ಸುಳ್ಳು ಹೇಳುತ್ತ ಇರಬೇಕು...?
ನನಗೇನೂ ಅವರಿಗೆಲ್ಲ ಮೋಸ ಮಾಡುವ ಉದ್ದೇಶವಿಲ್ಲವಲ್ಲ...


ಆಕೆಯ ಸಾಂತ್ವನದ ಮಾತುಗಳು..
ನಾನು ಮಾಡುತ್ತಿದ್ದ ವಿಚಾರ ಸರಣಿಯನ್ನು ಬದಲಿಸಿದವು...
ಉತ್ಸಾಹ ಬಂದು ಬಿಟ್ಟಿತ್ತು....
ಕಷ್ಟಗಳನ್ನೆಲ್ಲ  ಎದುರಿಸುವ ಧೈರ್ಯ ಬಂದುಬಿಟ್ಟಿತ್ತು......


ಬೆಳಗಾಯಿತು...


ಮೊದಲಿಗೆ ಬಂದವರು ಭೈರಪ್ಪನವರು...!


ನಂತರ ಉಳಿದ ಎಂಟೂ ಜನರೂ ಬಂದರು...


ಉಪ್ಪಿಟ್ಟು, ಟೀ ಎಲ್ಲ ಆದಮೇಲೆ ನಾನೇ ಮಾತು ಶುರು ಮಾಡಿದೆ..


"ನೋಡಿ...
ನಾನೊಂದು ಮನೆಕಟ್ಟಿ, ...
ಅದರಲ್ಲಿ ಕೈಸುಟ್ಟು ಕೊಂಡೆ..
ಅದು ಹೇಗೆ, ...
ಯಾರು ಅನ್ನುತ್ತ ಚರ್ಚಿಸುವದರಲ್ಲಿ ಅರ್ಥವಿಲ್ಲ.....

ನಾನು ಎಚ್ಚರಿಕೆಯಲ್ಲಿರಬೇಕಿತ್ತು...
ಇರಲಿ...
ಪರಿಚಯದವರು...., 
ದೊಡ್ಡ ಜನ...ಅಂತ ನಂಬಿದ್ದಕ್ಕೆ ತಕ್ಕ ಶಾಸ್ತಿಯಾಯಿತು...


ನನಗೆ ನಿಮ್ಮ ಹಣ ಮೋಸ ಮಾಡುವ ಉದ್ದೇಶ ಖಂಡಿತ ಇಲ್ಲ...
ನಿಮ್ಮ ಹಣವನ್ನು ಪೈಸೆಗೆ.. ಪೈಸೆ ಎಲ್ಲವನ್ನೂ ಕೊಡುತ್ತೇನೆ..


ಈ ರೀತಿ ಹಣದ ಸಮಸ್ಯೆ ಎದುರಿಸಿದ್ದು ...
ನನ್ನ ಜೀವನದಲ್ಲಿ ಇದೇ ಮೊದಲು...
ಇಂಥಹ ಪರಿಸ್ಥಿಯಲ್ಲಿ ನಾನು ಸ್ವಲ್ಪ ಎದೆಗುಂದಿದೆ...


ಇಂಥಹ ಸಂದರ್ಭವನ್ನು ಎದುರಿಸಲು ನಾನು ಮಾನಸಿಕವಾಗಿ ಸಿದ್ದನಿರಲಿಲ್ಲ...


ಹೇಗೆ ಎದುರಿಸ  ಬೇಕೆಂಬುದೂ... ಗೊತ್ತಾಗಲಿಲ್ಲ...


ನಿಮಗೆಲ್ಲ  ಸುಳ್ಳು ಹೇಳಿದೆ...
ದಯವಿಟ್ಟು  ಕ್ಷಮಿಸಿಬಿಡಿ..


ನನ್ನ ವ್ಯವಹಾರವನ್ನು...
 ನನ್ನ ನಡೆನುಡಿಯನ್ನು ...ಇಲ್ಲಿಯವರೆಗೆ ನೀವು ನೋಡಿದ್ದೀರಿ...
ಪ್ರತಿವಾರ ನಿಮ್ಮಲ್ಲಿಗೆ ಬಂದು ನಾನೇ ನಿಮ್ಮ ಬಿಲ್ ಕ್ಲಿಯರ್ ಮಾಡುತ್ತಿದ್ದೆ...
ಈಗಲೂ...
ನೀವು ಕೊಟ್ಟ ಹಣಕ್ಕೆ ನಾನು ಮೋಸ ಮಾಡುವದಿಲ್ಲ...


ಈಗ ನೀವು ನನಗೆ ಸ್ವಲ್ಪ ಸಹಕಾರ ಕೊಡ ಬೇಕು.."


ನನ್ನ ಮಾತನ್ನು ಆಲಿಸಿದ ಜಲ್ಲಿ ಸಪ್ಲಾಯರ್ ರೆಡ್ಡಿಯವರು...


" ನಿನ್ನ ಮೇಲೆ ನನಗೆ ನಂಬಿಕೆ ಇದೆಯಪ್ಪಾ...
ಆದರೆ ಹೇಗೆ ತೀರಿಸುತ್ತೀಯಾ...?"


ಅವರಿಗೆ ಸುಮಾರು ಎಪ್ಪತ್ತು ವರ್ಷ.... 
ಅವರು ನನ್ನ ಬಳಿ ಮಾತನಾಡುವದೇ... ಹೀಗೆ...


"ಮತ್ತೆ ... ಹೊಸ ಮನೆಕಟ್ಟುವ ಕೆಲಸದ ಮಾತುಕತೆ ನಡೆಯುತ್ತಿದೆ...
ಅವುಗಳಿಗೆ ಮಟೀರಿಯಲ್ಸ್ ನೀವೇ ಕೊಡಿ...
ಕೆಲಸ ಮಾಡುತ್ತ....
ನಿಮ್ಮ ಬಿಲ್ಲನ್ನೂ ತೀರಿಸುವೆ...
ದಯವಿಟ್ಟು ನನ್ನಲ್ಲಿ ನಂಬಿಕೆ ಇಡಿ..."


ಅಷ್ಟರಲ್ಲಿ ನಾಲ್ಕುಜನ ಸಪ್ಲೈದಾರರು ಎದ್ದು ನಿಂತರು...


ನನಗೆ ಹೆದರಿಕೆಯಾಯಿತು.....


" ಹೆಗಡೆಯವರೆ...
ಈ ವಿಷಯವನ್ನು ಫೋನ್‍ನಲ್ಲಾದರೂ ಹೇಳ ಬಹುದಿತ್ತು...
ನಮ್ಮನ್ನು ಇಲ್ಲಿಗೆ ಕರೆಸುವ ಅಗತ್ಯವೇ.. ಇರಲಿಲ್ಲ... 
ನೀವು ಆದಾಗ ಹಣ ಕೊಡಿ..
ಆದರೆ ನಮ್ಮ ಬಿಟ್ಟು ಬೇರೆ ಜನರ ಬಳಿ ಮಟೀರಿಯಲ್ಸ್ ತಗೊ ಬೇಡಿ....
ನಮ್ಮ ಬಳಿಯೇ ವ್ಯವಹಾರ ಮಾಡಿ..
ನಾವು ಬರ್ತೇವೆ.."


ಎಂದು ಎದ್ದು ಹೊರಟರು.....


ನನಗೆ ಅರಿವಿಲ್ಲದೆ  ಕೃತಜ್ಞತೆಯಿಂದ  ಕೈ ಮುಗಿದೆ...


ಕಣ್ಣು ತುಂಬಿ ಬಂದಿತು...ಮಾತು ಬರಲಿಲ್ಲ...



ಅವರ ನಂತರ ಮತ್ತೆ ಮೂವರು ಎದ್ದು ನಿಂತರು...


ಅದರಲ್ಲಿ ಬೈರಪ್ಪನೂ ಇದ್ದ...!
ಅವನೇ ಮಾತಾಡಿದ..


"ಹೆಗಡೆಯವರೆ...
ನನಗೆ ಮಟಿರಿಯಲ್ ಕೊಡಲಿಕ್ಕೆ ಆಗುವದಿಲ್ಲ...
ಆದರೆ...
ಸ್ವಲ್ಪ ದಿನ ತಡೆದುಕೊಳ್ಳ ಬಲ್ಲೆ...
ಬಹಳ ದಿನ ತಡ ಮಾಡ ಬೇಡಿ...ನನಗೂ ಕಷ್ಟ ಇದೆ...
ನಾನೂ ಕೂಡ ನಿಮ್ಮಂತೆ ಹಣ ಇಟ್ಟುಕೊಂಡು ವ್ಯವಹಾರಕ್ಕೆ ಬರಲಿಲ್ಲ..
ಆದಷ್ಟು ಬೇಗ ಕೊಡುವಂತೆ ಮಾಡಿ..."


ಬಾಗಿಲ ತನಕ ಹೋದವನು ಮತ್ತೆ ತಿರುಗಿ ಬಂದ...


" ಹೆಗಡೆಯವರೆ...
ನಿನ್ನೆ ನಾನು ಹೇಳಿದ ಮಾತು ನಿಮಗೆ ನೋವು ಉಂಟು ಮಾಡಿರ ಬಹುದು....
ಮಾತಿನಿಂದ..
ಯಾರು ಹೇಗೆ ? ಏನು ? ಅಂತ ಗೊತ್ತಾಗುವದಿಲ್ಲ..

ದಿನಾ ಬಣ್ಣದ ಮಾತಾಡುವ ಜನರನ್ನು ನೋಡಿ..
ನೀವೂ ಬಣ್ಣದ ಜನ ಅಂದುಕೊಂಡೆ...


ಮುಖ ನೋಡಿದರೆ..
ಮಾತು ಕೇಳಿದರೆ ...
ಮನಸ್ಸು ಗೊತ್ತಾಗುವದಿಲ್ಲವಲ್ಲ...
ಬೇಸರಿಸ ಬೇಡಿ.."


ಭೈರಪ್ಪ ಗಲಾಟೆ ಮಾಡ ಬಹುದು ಅಂದುಕೊಂಡಿದ್ದೆ...


ಭೈರಪ್ಪನವರಿಗೂ ನಾನು ಕೃತಜ್ಞತೆಯಿಂದ ಕೈಮುಗಿದೆ....
ಹೃದಯ ತುಂಬಿ ಬಂದಿತ್ತು...


ಇನ್ನೊಬ್ಬ ಸಪ್ಲೈದಾರ ಎದ್ದುನಿಂತ...


"ನೋಡಿ ಹೆಗಡೇಯವರೆ...
ನನಗೆ ನಿಮ್ಮ ಕಥೆ, ಪುರಾಣ ಕೇಳಲು ಪುರುಸೊತ್ತಿಲ್ಲ..
ಅದರ ಅಗತ್ಯವೂ ನನಗಿಲ್ಲ...
ನಾನು ಮಟೀರಿಯಲ್ ಕೊಟ್ಟಿದ್ದೇನೆ..
ನನ್ನ ಹಣ ನನಗೆ ಬರಬೇಕು...
ನಾಡಿದ್ದು ಸಾಯಂಕಾಲದ ಒಳಗೆ ನನಗೆ ನನ್ನ ಹಣ ಬಂದುಬಿಡಬೇಕು..."



ಬಹಳ ಖಡಕ್ಕಾದ ಧ್ವನಿಯಲ್ಲಿ ಹೇಳಿದರು...


" ಆಯಿತು...
ನಾನು ವ್ಯವಸ್ಥೆ ಮಾಡುತ್ತೇನೆ.."


ನಾನು ಮತ್ತೇನೂ ಹೇಳಲಿಲ್ಲ...
ಅವರು ಧಡ ಧಡನೆ ಎದ್ದು ಹೋದರು....


ರೆಡ್ಡಿಯವರು ಇನ್ನೂ ಕುಳಿತೇ ಇದ್ದರು...


"ಇಲ್ಲಿ ಬಾಪ್ಪಾ.... ಕುತ್ಗೊ..."
ಪಕ್ಕಕ್ಕೆ ಕುಳಿಸಿಕೊಂಡರು...


"ಎಲ್ಲರಿಗೂ ಒಟ್ಟೂ ಎಷ್ಟು ಹಣ ಕೊಡುವದಿದೆ...?"


"ಸುಮಾರು ಮೂರು ಲಕ್ಷ"


ಅವರು ತಮ್ಮ ಕಿಸೆಯಿಂದ ಚೆಕ್ ತೆಗೆದು ಸಹಿ ಹಾಕಿ ಹೇಳಿದರು...


"ತಗೊಪ್ಪಾ...
ಇದರಲ್ಲಿ ಮೂರು ಲಕ್ಷ ಬರೆದಿದ್ದೇನೆ...
ವ್ಯವಹಾರದಲ್ಲಿ ಇದೆಲ್ಲ ಇದ್ದದ್ದೇ...


ವ್ಯವಹಾರದಲ್ಲಿ ಒಳ್ಳೆಯವರಾಗಿದ್ರೆ ಸಾಲದು...
ಚಾಲಾಕಿತನವೂ ಇರಬೇಕು...
ನೀನು ಮೋಸ ಮಾಡ ಬೇಡ... ಹಾಗೆಯೇ ಮೋಸ ಹೋಗಲೂ ಬೇಡ..


ಜಗತ್ತಿನಲ್ಲಿ ಕೆಟ್ಟವರು ಕಡಿಮೆ ಇರ್ತಾರೆ...
ನಮ್ಮ ಜೀವನದಲ್ಲೂ ಕೆಟ್ಟದ್ದು ಕಡಿಮೆ ಆಗಿರ್ತದೆ..


ಆದರೆ ನಾವು ಕೆಟ್ಟವರನ್ನ, ಕೆಟ್ಟದ್ದನ್ನ ಮರೆಯದೆ...
ಅದನ್ನೇ ದೊಡ್ಡದಾಗಿ ಸಾಯೋತನಕ ಹೇಳ್ತಾ ಇರ್ತೇವೆ...


ನೀನು ಈ ಮೋಸವನ್ನ ಮರಿಬೇಡ..
ಹಾಗೆ ಒಳ್ಳೆತನವನ್ನೂ ಬಿಡ ಬೇಡ... ತಗೊ ಈ... ಚೆಕ್.."


ನನಗೆ ಏನು ಹೇಳ ಬೇಕೆಂದು ಗೊತ್ತಾಗಲಿಲ್ಲ...

ಅವರ ಅಂತಃಕರಣಕ್ಕೆ.. ವಿಶ್ವಾಸಕ್ಕೆ ತುಂಬಾ ಭಾವುಕನಾಗಿಬಿಟ್ಟೆ...

ಮಾತಾಡಲು ಶಬ್ಧಗಳು ಸಿಗುತ್ತಿಲ್ಲ...


ಸಂಬಂಧ ವ್ಯವಹಾರಿಕವಾಗಿದ್ದರೂ....
ಅವರ ವಿಶ್ವಾಸಕ್ಕೆ, ಆತ್ಮೀಯತೆಗೆ ಮೂಕನಾಗಿಬಿಟ್ಟೆ....

ಒಳ್ಳೆಯತನಕ್ಕೆ ಯಾವ ಜಾತಿ..?

ಯಾವ ಭಾಷೆ...?
ಯಾರು ಬಂಧುಗಳು...?

ಯಾರು ಸ್ನೇಹಿತರು...?


ಅಷ್ಟಕ್ಕೂ .....
ನನಗೂ ಇವರಿಗೂ ಏನು ಸಂಬಂಧ...?
ನಮ್ಮವರು ಅನ್ನುವವರೇ ನಡುದಾರಿಯಲ್ಲಿ ಕೈ ಕೊಟ್ಟಾಗ ...
ಬಂಡೆಗಲ್ಲಿನಂತೆ ಬಂದು ನಿಲ್ಲುವ ಇವರು ಯಾರು....?

ಮಾತು ಆಡಲಾಗುತ್ತಿಲ್ಲ...
ಕಣ್ಣು ತುಂಬಿ ಬಂದಿತ್ತು......


ಏನಾದರೂ ಹೇಳಲೇ ಬೇಕಿತ್ತು...


" ಸರ್...
ನನಗೆ ಅವಶ್ಯ ಬಿದ್ದರೆ ನಿಮ್ಮ ಬಳಿ ಕೇಳುತ್ತೇನೆ...
ಈ ತೊಂದರೆಯನ್ನು ನಾನೇ ನಿಭಾಯಿಸಲು ಪ್ರಯತ್ನಿಸುತ್ತೇನೆ...
ನೀವು ಆಶೀರ್ವಾದ ಮಾಡಿ......"


ಎಂದು ಅವರಿಗೆ ಬಗ್ಗಿ ನಮಸ್ಕರಿಸಿದೆ...


ಅವರಿಗೂ ಹೆಚ್ಚು ಮಾತನಾಡಲಾಗಲ್ಲ...


ಮುಂದೆ ನನಗೆ ಹಣದ ಅವಶ್ಯಕತೆ ಬಂದಿತ್ತು...
ಆದರೆ ರೆಡ್ಡಿಯವರ ಬಳಿ ಕೇಳುವ ಪರಿಸ್ಥಿತಿ ಬರಲಿಲ್ಲ...


ಅದಕ್ಕೆ ಕಾರಣ ನನ್ನ ಆತ್ಮೀಯ ಗೆಳೆಯ "ಸತ್ಯ..."


ಬದುಕಿನ ಏರಿಳುವಿನಲ್ಲಿ ನನ್ನ ಜೊತೆಯಿರುವ ಆ ಸ್ನೇಹಿತನ ಬಗೆಗೆ ನಿಮಗೆ ಹೇಳಲೇ ಬೇಕು...


ಇದ್ದರೆ ಇರಬೇಕು ಇಂಥಹ ಗೆಳೆಯ..!



{ಊರಿಗೆ ಹೋಗಿಬಿಟ್ಟಿದ್ದೆ...
ಲೇಖನ ಹಾಕಲಿಕ್ಕೆ ತಡ ಆಯಿತು...
ಬಹಳಷ್ಟು ವಿಷಯ ಹೊತ್ತು ತಂದಿದ್ದೇನೆ...
ಎಲ್ಲವನ್ನೂ..
ಒಂದೊಂದಾಗಿ ಬರೆಯುವೆ...}

51 comments:

ಹಿತ್ತಲಮನೆ said...

ನಿಜಕ್ಕೂ ಭಾವುಕ ಲೇಖನ ಪ್ರಕಾಶಣ್ಣ. ನಿಮ್ಮ ಬಾಯಲ್ಲಿ ಇದನ್ನು ಕೇಳಿದ್ದೇನೆ. ಇಷ್ಟು ವಿವರವಾಗಿ ಗೊತ್ತಿರಲಿಲ್ಲ. ಕೆಲವೊಮ್ಮೆ ಹಾಗೇ. ಕೆಟ್ಟವರ ಸಲುವಾಗಿ ಮನುಷ್ಯರ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುತ್ತೇವೆ. ಅದರ ಮಧ್ಯದಲ್ಲೆ ಕೆಲವರು ನಂಬಿಕೆಯನ್ನು ಮರಳಿ ತರುತ್ತಿರುತ್ತಾರೆ. ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದು ಕಲಿಯುವುದರೊಳಗೇ ಜೀವನ ಕಳೆದುಹೋಗುವುದೊಂದು ವ್ಯಂಗ.

Me, Myself & I said...

ಪ್ರಕಾಶ ಸಾರ್,

ಒಂಸಾರಿ ಮೊಸವೊದ್ರೆ, ಮುಂದೆ ಒಳ್ಳೆದನ್ನೂ ಮನಸ್ಸು ಅನುಮಾನದಿಂದ್ಲೇ ನೋಡುತ್ತೆ.

ಹಾ !!!
ಊರಿಂದ ತಂದಿರೂ ವಿಷ್ಯಾಕ್ಕೆ ನಮ್ಮ ಕಿವಿಗೆ ಬಿದ್ದಿದೆ. ಇನ್ನೂ ಕಣ್ಣಿಗೆ ತೋರ್ಸಿ ಬಿಡಿ. ಓದಿ ಬಿಡ್ತೀವಿ.
ಆದ್ರೆ ಬರಿ ವಿಷ್ಯ ಮಾತ್ರನೇ ತಂದಿರೋ, ಅಥವ ಅಜ್ಜಿ ಮಾಡ್ಕೊಟ್ಟ ಉಂಡೆನೂ/ಶಂಕರ ಪಳ್ಯಾನೂ ತಂದಿರೋ ? :)

Unknown said...

ಪ್ರಕಾಶಣ್ಣ ,
ನಿಮ್ಮ ಮೊದಲಿನ ಬರಹ ಆವತ್ತೇ ಓದಿದೆ ನಾನು ಅನುಭವದಲ್ಲಿ ತು೦ಬಾ ಚಿಕ್ಕವಳಾದ ಕಾರಣ ನನಗೆ ಏನು ಹೇಳ ಬೇಕು ಎ೦ದು ತೋಚದೆ ಸುಮ್ಮನಾದೆ .
ಈಗ ಪೋಸ್ಟ್ ನಲ್ಲಿ ಆ ಕಷ್ಟ ಕರಗಿದ ಬಗ್ಗೆ ಹೇಳಿದ ಕಾರಣ ಸ್ವಲ್ಪ ನೆಮ್ಮದಿ ಆಯಿತು . .
"ಜಗತ್ತಿನಲ್ಲಿ ಕೆಟ್ಟವರು ಕಡಿಮೆ ಇರ್ತಾರೆ...ನಮ್ಮ ಜೀವನದಲ್ಲೂ ಕೆಟ್ಟದ್ದು ಕಡಿಮೆ ಆಗಿರ್ತದೆ..ಆದರೆ ನಾವು ಕೆಟ್ಟವರನ್ನ, ಕೆಟ್ಟದ್ದನ್ನ ಮರೆಯದೆ...
ಅದನ್ನೇ ದೊಡ್ಡದಾಗಿ ಸಾಯೋತನಕ ಹೇಳ್ತಾ ಇರ್ತೇವೆ...ನೀನು ಈ ಮೋಸವನ್ನ ಮರಿಬೇಡ..ಹಾಗೆ ಒಳ್ಳೆತನವನ್ನೂ ಬಿಡ ಬೇಡ... "
ಈ ಸಾಲು ಗಳು ನನಗೆ ತು೦ಬಾ ಇಷ್ಟವಾಯಿತು .
ನಿಮ್ಮ ಹೊಸ ಅನುಭವ ಕಣಜದ ನಿರೀಕ್ಷೇಯಲ್ಲಿ .

PARAANJAPE K.N. said...

ಜೀವನಚಕ್ರದಲ್ಲಿ ನೀವನುಭವಿಸಿದ ಕಹಿಗಳಿಗೆಯ ದಿನಗಳ ಯಥಾವತ್ ಚಿತ್ರ ಕೊಟ್ಟಿದ್ದೀರಿ. ಹೌದು, ಕಷ್ಟಗಳು ಕರಗಿ ಸುಖದ ದಿನಗಳು ಬಂದೆ ಬರುತ್ತವೆ, ಆದರೆ ಅದಕ್ಕೆ ಕಾಯಬೇಕು ಅಷ್ಟೇ.
"ಜಗತ್ತಿನಲ್ಲಿ ಕೆಟ್ಟವರು ಕಡಿಮೆ ಇರ್ತಾರೆ, ಆದರೆ ........" ಈ ಮಾತು ಸತ್ಯ. ಅ೦ತೂ ಕೊನೆಗೆ ಪ್ರಕರಣ ಸುಖಾ೦ತ್ಯವಾಯಿತಲ್ಲ.

Ittigecement said...

ಹಿತ್ತಲ ಮನೆ ( ಎಮ್ಮಾರು..)

ಬಹಳ ಸತ್ಯವಾದ ಮಾತು...
ಸಾಯುವರೆಗೂ ಕಲಿಯುತ್ತಲೇ ಇರಬೇಕು...

ನಾನು ಇಬಹಳ ಮನೆ ಕಟ್ಟಿದ್ದೇನೆ ಸುಮಾರು ಎಪ್ಪತ್ತು ಮನೆಗಳು...
ಮೋಸ ಮಾಡಿದವರು ಇಬ್ಬರೇ ಇಬ್ಬರು...

ಉಳಿದ ಅರವತ್ತೆಂಟು ಜನರಲ್ಲಿ ಕೆಲವರು ಲೆಕ್ಕಾಚಾರದಲ್ಲಿ ತಗಾದೆ ಇದ್ದರೂ
ಹಣ ಕೊಟ್ಟಿದ್ದಾರೆ...

ಅವರಲ್ಲಿ ಕೆಲವರ ಹೆಸರೂ ಕೂಡ ನೆನಪಿಲ್ಲ...

ಈ ಕೆಟ್ಟವರು ಮಾತ್ರ ಮರೆಯುವದಿಲ್ಲ ಯಾಕೆ..?

ರೆಡ್ಡಿಯವರು ಈಗಿಲ್ಲ... ಅವರ ಮಗ ಬಾಲಾಜಿ ರೆಡ್ಡಿ ಈಗಲೂ ನನಗೆ ಜಲ್ಲಿ ಸಪ್ಲೈ ಮಾಡುತ್ತಾರೆ...
ನನ್ನ ಬಂಧುವಿನ ಥರಹ...

ಅವರ ಮನೆಯಲ್ಲಿ ಏನೇ ವಿಶೇಷವಾದರೂ ನನಗೆ ಆಮಂತ್ರಣ ಇರುತ್ತದೆ...

ಆಪತ್ತಿಗಾದವನೇ ಬಂಧು...

ಅಂಥಹ ಕೆಟ್ಟ, ಅಪನಂಬಿಕೆಯ ಸಂದರ್ಭದಲ್ಲೂ
ನಂಬಿಕೆ ಉಳಿಸುವರರು ಬರುತ್ತಾರಲ್ಲ...!

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

ಹಿತ್ತಲಮನೆ said...

ಕೆಟ್ಟವರು ಕೊಟ್ಟ ಹೊಡೆತ ಹಾಗಿರುತ್ತದಲ್ಲ! ಅದಕ್ಕೆ ನೆನಪಿನಲ್ಲಿರುತ್ತಾರೆ. ನೆನಪಿರಬೇಕು ಕೂಡ. ನೆನಪು ಒಳ್ಳೆಯದೇ. ಜೊತೆಗೆ ಒಳ್ಳೆಯವರನ್ನೂ ನೆನಪಿಟ್ಟುಕೊಂಡಿದ್ದೀರಲ್ಲ... ಅದು ನಿಮ್ಮ ಒಳ್ಳೆಯತನ.

ದಿನಕರ ಮೊಗೇರ said...

ಪ್ರಕಾಶಣ್ಣ,
ಓದುತ್ತಾ ಓದುತ್ತಾ ಕಣ್ಣು ಮಂಜಾದವು.... ರೆಡ್ಡಿಯವರಂತ ಒಳ್ಳೆಯವರು ನಿಮಗೆ ಸಿಕ್ಕೇ ಸಿಗುತ್ತಾರೆ, ಯಾಕಂದ್ರೆ ನೀವೂ ಒಳ್ಳೆಯವರಲ್ವಾ? ನಿಮ್ಮ ಮನೆಯವರ ಧೈರ್ಯ, ನಿಮ್ಮ ಒಳ್ಳೆತೆನ, ನಿಮ್ಮ ಮಗನ ಭಾಗ್ಯ ನಿಮ್ಮನ್ನು ಸಂಕಟದಿಂದ ಪಾರು ಮಾಡಿದೆ..... ನಿಮ್ಮ ಗೆಳೆಯ "ಸತ್ಯ' ಅವರ ಬಗ್ಗೆ ಕುತೂಹಲ ಮೂಡಿದೆ,,,,,, ಹೆಚ್ಚಿಗೆ ಕಾಯಿಸಬೇಡಿ.....

ಚಿತ್ರಾ said...

ಪ್ರಕಾಶಣ್ಣ,

ಕಾಯ್ತಾ ಇದ್ದಿದ್ದಿ. ಈಗ ಮನಸ್ಸು ಶಾಂತ ಆತು.
ಎಷ್ಟೋ ಸಲ ನಮ್ಮ ಪ್ರಾಬ್ಲಂ ನ ಬಗ್ಗೆ ಯೋಚನೆ ಮಾಡಿಯೇ ನಾವು ಅರ್ಧ ಹೆದರಿ ಹೋಗದು ಅನಿಸ್ತು. ಹತ್ತಿರದವರಲ್ಲಿ , ಸ್ನೇಹಿತರಲ್ಲಿ ಹೇಳಿಕೊಂಡರೆ ಎಲ್ಲೋ ಒಂದು ಕಡೆಯಿಂದ ಸಮಸ್ಯೆಗೆ ಪರಿಹಾರ ಸಿಗ್ತು.
ಅಥವಾ ಆ ಪರಿಸ್ಥಿತಿನ ಎದುರಿಸಲೇ ಯಾರೋ ಬೆನ್ನು ತಟ್ಟಿ ಧೈರ್ಯ ತುಂಬಿ ನಮ್ಮ ಜೊತೆ ನಿಂತಿರ್ತ .
ನಿಮ್ಮ ಅರ್ಧಾಂಗಿಯ ಸಾಂತ್ವನ , ಹಿತೈಷಿಗಳ ಬೆಂಬಲ ಮತ್ತು ನಿಮ್ಮ ಧೈರ್ಯ ಹಾಗೂ ಪ್ರಾಮಾಣಿಕತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದು ನಿಜಕ್ಕೂ ಸಮಾಧಾನ ತಂದಿತು.
ಮುಖ ನೋಡಿದರೆ..ಮಾತು ಕೇಳಿದರೆ ... ಮನಸ್ಸು ಗೊತ್ತಾಗುವದಿಲ್ಲವಲ್ಲ.. ಎನ್ನುವುದು ನೂರಕ್ಕೆ ನೂರು ಸತ್ಯ ಪ್ರಕಾಶಣ್ಣ !

ಸವಿಗನಸು said...

ಪ್ರಕಾಶಣ್ಣ,
ನಿಮ್ಮ ಕಷ್ಟಗಳಿಗೆ ಒಂದು ಪರಿಹಾರ ಸಿಕ್ಕಿದ್ದು ನೋಡಿ ಸಮಾಧಾನವಾಯಿತು....
ಇಂತಹ ಸಂದರ್ಭದಲ್ಲಿ ಎದೆಗುಂದದೆ ಸಾಂತ್ವನ ನೀಡಿದ ಆಶಾತ್ತಿಗೆ, ಹಿತೈಷಿಗಳ ಸಹಕಾರ ಎಲ್ಲವೂ ನಿಮ್ಮ ಪ್ರಾಮಾಣಿಕತೆಗೆ ಸಿಕ್ಕ ಪುರಸ್ಕಾರ....
ನಿಮಗೆ ಸದಾ ಶುಭವಾಗಲಿ...
ಊರಿನ ವಿಷಯ ಹಾಕಿ ಬೇಗ....

ashwath said...

ಪ್ರಕಾಶ ಹೆಗಡೇ, ಚೊಲೊ ಬರಿತ್ರಪ್ಪ.
ಕಮೆಂಟ್ ಬರೆಯನ ಅಂದ್ರೆ ಕಣ್ಣೆಲ್ಲ ಮಂಜು ಮಂಜು.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನೀವು ಮೋಸ ಹೋದ ಕಥೆ ಮೊದಲ ಭಾಗದಲ್ಲಿ ಓದಿದಾಗಲೇ ನನಗೆ ಸ್ಪೇನ್ ಕಳ್ಳತನದ ಬಗೆಗೆ ಬರೆಯಲು ಮನಸ್ಸಾಯಿತು. ನಿಮ್ಮ ಹಾಗೆ ನನಗೂ ಅಂಥಹ ಮೋಸ ಹೊಸದು. ಅದಕ್ಕೆ ನಿಮ್ಮ ಲೇಖನವೇ ಪ್ರೇರಣೆ.
ರೆಡ್ಡಿಯವರ ಔದಾರ್ಯತೆ ನಿಜಕ್ಕೂ ದೊಡ್ಡದು.
''ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು'' ಎನ್ನುವಂತೆ ನಾವು ಒಳ್ಳೆಯವರಾದರೆ ಎಲ್ಲ ಕಡೆಯಿಂದಲೂ ಒಳ್ಳೆಯತನಗಲೇ ಕಾಣುತ್ತವೆ.
ನಿಮ್ಮ ಪ್ರಾಮಾಣಿಕತೆಯೇ ನಿಮ್ಮನ್ನು ರಕ್ಷಿಸುತ್ತಿದೆ. ಅದಕ್ಕೆ ಎಲ್ಲರೂ ನಿಮ್ಮ ಸಹಾಯಕ್ಕೆ ಆ ಸಮಯದಲ್ಲಿ ಬಂದರು.
ಒಂದು ಒಳ್ಳೆಯ ಬಾವುಕತೆಯ ಲೇಖನ. ಮನಸ್ಸಿಗೆ ತುಂಬಾ ನಾಟಿದೆ.

sunaath said...

ಪ್ರಕಾಶ,
ನಿಮ್ಮ ಲೇಖನಕ್ಕಾಗಿ ಬಹಳ ದಿನ ಕಾಯ್ದೆ. ಕೊನೆಗೂ ನೀವು ನಂಬಿಕೆ ಉಳಿಸಿಕೊಂಡು ಬಂದೇ ಬಿಟ್ಟಿರಿ! ಬದುಕನ್ನು ನೀವು ಎದುರಿಸಿದ ರೀತಿಯನ್ನು ಓದಿದಾಗ, ಮನಸ್ಸಿನಲ್ಲಿ ಸಮಾಧಾನದ ಬೆಳಕು ಮೂಡುತ್ತದೆ.

ಮೌನಿ said...

ಪ್ರಕಾಶಣ್ಣ....
ನಾನು ಪ್ರಥಮ ಬಾರಿಗೆ ಇಲ್ಲಿ ಅನಿಸಿಕೆ ಬರೆಯುತ್ತಿದ್ದೇನೆ.
ನಾನು ಇತ್ತೀಚೆಗಷ್ಟೆ ನಿಮ್ಮ ಬ್ಲೊಗ್ ಗೆ ಬಂದವನು.
ಈಗ ಮತ್ತೆ ಮತ್ತೆ ಬರುವಂತೆ ಮಾಡುತ್ತಿದೆ.
ಇದು ನನಗೆ ತುಂಬಾ ಮನಸ್ಸಿಗೆ ನಾಟಿತು.ನಾನೂ ಕೂಡ ಚೂರು ಭಾವುಕನಾಗಿರುವುದಕ್ಕೋ ಎನೋ,ತಡೆಯಲಾರದೆ ಅನಿಸಿಕೆ ಬರೆಯುತ್ತಿದ್ದೇನೆ.
ತುಂಬಾ ಚೆನ್ನಾಗಿ,ಸರಳವಾಗಿ,ನಾಟುವಂತೆ ಬರೆಯುತ್ತೀರಾ.
ಹೀಗೆ ಬರೆಯುತ್ತಿರಿ.
ಗುರುದಾಸ್ ಭಟ್.

ಸುಮ said...

ಕಷ್ಟ ಬಂದಾಗ ಧೃತಿಗೆಡದೆ ಹೇಗೆ ಎದುರಿಸಬೇಕು ಮತ್ತು ಅಂತಹ ಸಂದರ್ಭದಲ್ಲಿ ಪತಿ ಪತ್ನಿಯರ ಪರಸ್ಪರ ಸಹಕಾರ ಎಷ್ಟು ಮುಖ್ಯ ಎಂದು ಉತ್ತಮವಾಗಿ ತಿಳಿಸಿದ್ದೀರಿ ಪ್ರಕಾಶಣ್ಣ.
ನನ್ನ ಬ್ಲಾಗಲ್ಲಿ ನಾಗಂದಿಗೆಯ ನಾಗಂದಿಗೆಯ ಲಿಂಕ್ ಕೊಟ್ಟಿದ್ದೇನೆ.
ಊರಿಂದ ಹೊತ್ತು ತಂದಿರುವ ವಿಶೇಷಗಳಿಗಾಗಿ ಕಾಯುತ್ತಿದ್ದೇನೆ.

ಸುಧೇಶ್ ಶೆಟ್ಟಿ said...

ರೆಡ್ಡಿಯವರ ಅ೦ತಕರಣಕ್ಕೆ ಮನಸ್ಸು ತು೦ಬಿ ಬ೦ತು ಪ್ರಕಾಶಣ್ಣ... ಮಾತು ಕೇಳಿದರೆ ಮನಸ್ಸು ಗೊತ್ತಾಗುವುದಿಲ್ಲವಲ್ಲ ಅನ್ನುವ ಮಾತು ಎಷ್ಟು ಸತ್ಯ....ರೆಡ್ಡಿಯವರ ಸಹಾಯವನ್ನು ನಿರಾಕರಿಸಿ ಇದನ್ನು ನಾನೇ ಬಗೆಹರಿಸಿಕೊಳ್ಳುತ್ತೇನೆ ಎ೦ದ ನಿಮ್ಮ ಮೇಲೆ ಇದ್ದ ಗೌರವ ಇಮ್ಮಡಿ ಆಯಿತು ಪ್ರಕಾಶಣ್ಣ.....

Ittigecement said...

ಲೋದ್ಯಾಶಿಯವರೆ...

ತೆನ್ನಾಲಿ ರಾಮಕೃಷ್ಣನ ಬೆಕ್ಕಿನ ಕಥೆ ಕೇಳಿರ ಬಹುದು...
ಕೆಟ್ಟವರು..
ಕೆಟ್ಟದ್ದು ಕಡಿಮೆ...

ಆದರೆ ನಮ್ಮ ಮನಸ್ಸಿನಿಂದ ಅದು ಮರೆಯಾಗುವದಿಲ್ಲ...

ಈಗಲೂ ಪ್ರತಿ ಮನೆ ಕಟ್ಟುವಾಗ ನನಗೆ ಈ ಘಟನೆ ನೆನಪಾಗುತ್ತದೆ..

ಈ ಸಾರಿ ಊರಿನಿಂದ ನನ್ನ ಬಾಲ್ಯದ ನೆನಪನ್ನು ತಂದಿದ್ದೇನೆ...
ಎಲ್ಲಿಂದ ಶುರು ಮಾಡಬೇಕೆಂದು ಗೊತ್ತಾಗುತ್ತಿಲ್ಲ...

ನೀವು ಭಲೆ ಚಾಣಾಕ್ಷರು...!
ಯಾರು ಹೇಳಿದರು ನಿಮಗೆ...?

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Dileep Hegde said...

ಪ್ರಕಾಶಣ್ಣ...
ಈ ಜಗತ್ತೇ ಹಾಗೆ...
ಇಲ್ಲಿ ನಿಮಗೆ ಮೋಸ ಮಾಡಿದ ನಿಮ್ಮ ದೂರದ ಸಂಬಂಧಿ ಯಂತವರೂ ಇದ್ದಾರೆ..
ಆಪತ್ಕಾಲದಲ್ಲಿ ನೆರವಿನ ಹಸ್ತ ಚಾಚಿದ ರೆಡ್ಡಿ ಯಂತವರೂ ಇದ್ದಾರೆ....
ಆದ ಮೋಸವನ್ನ ಮರೀದೆ, ಒಳ್ಳೆತನವನ್ನ ಬಿಡದೇ ಮುಂದೆ ಸಾಗಬೇಕಷ್ಟೆ...
ನಿಮ್ಮ ಲೇಖನವನ್ನ ಓದುತ್ತಿದ್ದರೆ "ಗೆದ್ದೇ ಗೆಲ್ಲುವೆ ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ" ನೆನಪಾಯ್ತು....
ಭಾವನೆಗಳಲ್ಲಿ ತೇಲಿಸಿ, ಮುಳುಗಿಸಿ ಕೊನೆಯಲ್ಲಿ ಸುಖಾಂತ್ಯ ಕಾಣಿಸಿದ್ದಕ್ಕೆ ಅನಂತ ಅಭಿನಂದನೆಗಳು...

Laxman (ಲಕ್ಷ್ಮಣ ಬಿರಾದಾರ) said...

ಪ್ರಕಾಶರವರೆ,
ನಿಮ್ಮ ಈ ಪ್ರಸಂಗ ಮನತಟ್ಟಿತು.
ಓಳ್ಳೆಯತನಕ್ಕೂ ಬೆಲೆ ಇದೆ ನಿರೂಪಿಸಿತು.
ಬಂದವರಾರು ಕೆಟ್ಟವರಲ್ಲ,
ಅವರೆಲ್ಲಾ ತಮ್ಮ ಹಣ ಮಾತ್ರ ಕೇಳಲು ಬಂದಿದ್ದರು.
ಇಷ್ಟೆಲ್ಲಾ ಆಗಿದ್ದು ಬೇರೆಯವ್ರಿಂದ ಅಲ್ವಾ.

Keshav.Kulkarni said...

ಪ್ರಕಾಶ,
ನಿಮ್ಮ ಈ ನೈಜ ಘಟನೆ ಹೃದಯಸ್ವರ್ಶಿ, ನನ್ನನ್ನು ಭಾವುಕನನ್ನಾಗಿಸಿತು.
- ಕೇಶವ

Ittigecement said...

ರೂಪಾರವರೆ....

ನಮ್ಮ ಹೆಚ್ಚಿನವರ ಜೀವನದಲ್ಲಿ ಒಳ್ಳೆಯದೇ ಜಾಸ್ತಿ ಆಗಿರ್ತದೆ...
ಅಳುವಿಗಿಂತ ಹೆಚ್ಚಾಗಿ ನಗು ನಮ್ಮದಾಗಿರ್ತದೆ...

ಆದರೂ..
ದುಃಖವನ್ನು ,ನೋವನ್ನು
ಮರೆಯದೆ ಹಾಗೆ ಇಟ್ಟು ಕೊಂಡಿರುತ್ತೇವೆ....

ಖಲೀಲ್ ಗಿಬ್ರಾನ್ ಹೇಳುತ್ತಾನೆ..
"ನೋವು ಮತ್ತು ನಗು ಎರಡೂ ಒಂದೇ...
ಅವೆರಡೂ ಇದ್ದಾಗ ನಮಗೆ ಬೇರೇ ಏನೂ ಬೇಕಾಗಿರಲ್ಲ...
ಎರಡನ್ನೂ ಒಂಟಿಯಾಗಿಯೇ ಅನುಭವಿಸಿರುತ್ತೇವೆ...

ನೋವನ್ನು ನೆನಪಿಸಿಕೊಳ್ಳುವದರಲ್ಲೂ ಸುಖವಿದೆ ಎಂದಾಯಿತು...

ನೋವನ್ನು ಕಳೆದು ಬಂದ ಬಗೆ ಖುಷಿ ತರುತ್ತದೆ...
ಅದರ ಮೆಲುಕು ಸುಖವಾಗಿರುತ್ತದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

umesh desai said...

ಹೆಗಡೇಜಿ ನೋವು ನುಂಗಿ ನಲಿದ ನಿಮ್ಮ ಜೀವನ ಒಂದು ಪಾಠಶಾಲೆ ಎಲ್ಲರೂ ಈ ಸುಳಿಗೆ ಒಂದಿಲ್ಲೊಂದು ದಿನ ಸಿಕ್ಕವರೆ
ಪಾರಾಗಿ ಬಂದ ಪುಣ್ಯವಂತರಲ್ಲಿ ನೀವೂ ಒಬ್ರು

ಮನಸು said...

ಒಳ್ಳೆಯತನ ನಿಮ್ಮನ್ನು ಕಾಪಾಡಿದೆ... ಬಾವುಕ ಲೇಖನ... ನಾವು ಒಬ್ಬರಿಗಾದರೆ ನಮಗಿನ್ನೊಬ್ಬರಾಗುವರು ಅಲ್ಲವೆ..? ನಿಮ್ಮ ಜೀವನದಲ್ಲಿ ಹಾಗೆ ಆಗಿದೆ.ನಿಮ್ಮ ಜೀವನದ ಕಹಿಸತ್ಯವನ್ನು ನಮ್ಮ ಮುಂದಿಟ್ಟಿದ್ದೀರಿ.. ನಮ್ಮೆಲ್ಲರಿಗು ತಿಳಿಹೇಳುವಂತಹ ಪಾಠ ಇದು... ಧನ್ಯವಾದಗಳು.
ನಿಮ್ಮಾಕೆಗೆ ಮನಪೂರ್ವಕ ಹರಸಲೇ ಬೇಕು.. ಮತ್ತೆಂದೂ ಇಂತಹ ಕಹಿಘಟನೆ ನಿಮ್ಮತ್ತ ಸುಳಿಯದಿರಲೆಂದು ಆಶಿಸುತ್ತೇನೆ.
ವಂದನೆಗಳು

ಮೂರ್ತಿ ಹೊಸಬಾಳೆ. said...

ದೇವರಿಗೆ ಎಲ್ಲರೂ ಇದ್ದಲ್ಲಿ ಹೋಗಿ ಯೋಗಕ್ಷೇಮ ವಿಚಾರಿಸಲು,ಕಷ್ಟಕ್ಕೆ ನೆರವಾಗಲೂ ಆಗುವುದಿಲ್ಲವಂತೆ.
ಆದರೆ ರೆಡ್ಡಿಯವರ ಅಥವಾ ಸತ್ಯರಂತವರನ್ನ ಕಳಿಸಿಕೊಡುತ್ತಾನಂತೆ. ಸದ್ಬಳಕೆ ಮಾಡಿಕೊಂಡವರಲ್ಲಿಗೆ ಮತ್ತೆ ಮತ್ತೆ ಕಳಿಸಿಕೊಡುತ್ತಾನಂತೆ.ಇನ್ನು ಕೆಲವರಿಗೆ ಜೊತೆಯಲ್ಲಿಯೇ ಇರುವಂತೆ ಮಾಡುತ್ತಾನಂತೆ.

AntharangadaMaathugalu said...

ಪ್ರಕಾಶ್ ರವರೇ.....
ಕೆಟ್ಟವರನ್ನು ಮರೆಯದಿದ್ದಾಗಲೇ ನಾವು ಮುಂದೆ ಮೋಸಹೋಗದಿರಬಹುದು.... ರೆಡ್ಡಿ ಅಂಕಲ್ ಅಂಥವರು ಬಹಳ ಕಡಿಮೆ ನೋಡಲು ಸಿಕ್ಕುತ್ತಾರೆ. ಅವರು ನಿಮ್ಮ ಬೆಂಬಲವಾಗಿದ್ದರು ಎಂಬ ಒಂದೇ ಒಂದು ಮಾತು ಅಥವಾ ನೆನಪು ನಿಮ್ಮನ್ನು ನಿಮ್ಮ ಬದುಕಿನುದ್ದಕ್ಕೂ ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಸಮಸ್ಯೆಗಳ ಪರಿಹಾರ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಅಂಥವರ ಆಶೀರ್ವಾದವಿರುವ ನೀವೇ ಧನ್ಯರು....... ಒಳ್ಳೆಯ ಬರಹ (ಅನುಭವವಾದರೂ). ಧನ್ಯವಾದಗಳು...
ಶ್ಯಾಮಲ

Ittigecement said...

ಪರಾಂಜಪೆಯವರೆ...

ತಾಳ್ಮೆ, ವಿವೇಕ ನಮ್ಮಲ್ಲಿರಬೇಕು...
ಕಷ್ಟ ಬಂದಾಗ ತಾಳ್ಮೆ ಇಟ್ಟುಕೊಳ್ಳ ಬೇಕು...
ಇದು ನಾನು ಕಲಿತ ಪಾಠ...

ಕೆಟ್ಟವರು ಕಡಿಮೆ ಇರ್ತಾರೆ...
ಬಹುಮತ ಜನರು ಅವರಿಗೆ ಹೆದರುತ್ತಾರೆ..
ಇದೂ ಕೂಡ ಸತ್ಯ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಹಿತ್ತಲಮನೆ(ಎಮ್ಮಾರು)

ರೆಡ್ಡಿಯವರನ್ನು ಹೇಗೆ ಮರೆಯಲು ಸಾಧ್ಯ...?

ಕಷ್ಟದಲ್ಲಿದ್ದಾಗ ಸಾಂತ್ವನ ಹೇಳಿದವರು ಅವರು...
ಅವರ ಮನೆಗೆ ಬೇಕಾದಷ್ಟು ಬಾರಿ ಹೋಗಿದ್ದೇನೆ..
ಅವರೆಲ್ಲರೂ ನಮ್ಮನೆಗೆ ಬಹಳ ಸಾರಿ ಬಂದಿದ್ದಾರೆ...
ಯಾವ ಜಾತಿ...?
ಯಾವ ಭಾಷೆ....?
ಯಾರು ನಮ್ಮವರು...?

ಸಂದರ್ಭಗಳು ವ್ಯಕ್ತಿಯ ಪರಿಚಯ ಮಾಡಿ ಕೊಡುತ್ತದೆ...

ನಮ್ಮವರು ಯಾರು...?
ಪರಾಯ ಯಾರು ? ಅನ್ನುವದನ್ನು ಸ್ಪಷ್ಟವಾಗಿ
ಪರಿಸ್ಥಿತಿಗಳು ಬಿಡಿಸಿಡುತ್ತವೆ...

ಸಂದರ್ಭಗಳು ಬಿಡಿಸಿದ ಚಿತ್ರಗಳು ಕೆಲವೊಮ್ಮೆ ಅರ್ಥವೇ ಆಗುವದಿಲ್ಲ...
ಕೆಲವೊಮ್ಮೆ ಅಂದವಾಗಿರುವದಿಲ್ಲ...

ನಮಗೆ ಸುಂದರವೆನಿಸಿದ ಚಿತ್ರಗಳನ್ನು..
ಪರಿಸ್ಥಿತಿ ಬೆತ್ತಲಾಗಿಸಿಬಿಡುತ್ತವೆ...

ಅಲ್ಲವಾ...?


ಧನ್ಯವಾದಗಳು ಎಮ್ಮಾರು....

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ದೇವರೆಲ್ಲಿದ್ದಾನೆ? ಈ ಪ್ರಶ್ನೆಗೆ ಈ ನಿಮ್ಮ ಲೇಖನದಲ್ಲಿ ಉತ್ತರವಿದೆ. ರೆಡ್ಡಿಯವರಂತಹ ಮಹಾನುಭಾವರನ್ನು ಸದಾ ನೆನೆಯಬೇಕು.
ಊರಿಂದ ತಂದಿರುವ ರುಚಿಕಟ್ಟಾದ ಸಂಗತಿಗಳನ್ನು ಬರೆಯಿರಿ. ಕಾಯುತ್ತಿದ್ದೇವೆ.

Guruprasad said...

ಪ್ರಕಾಶ್ ಸರ್..
ತುಂಬ ಚೆನ್ನಾಗಿ ವಿವರಿಸಿದ್ದಿರ ನಿಮ್ಮ ಅನುಭವ ಕಥನವನ್ನ,,, ಒಂದಂತು ನಿಜ ಯಾವುದೇ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳ ಬಾರದು,,,,ನಾವು ಒಳ್ಳೆಯವರಗಿದ್ದರೆ ನಮಗೂ ಒಳ್ಳೆಯದನ್ನ ಮಾಡಲು ಇರುತ್ತಾರೆ.. ಅದಕ್ಕೆ ರೆಡ್ಡಿ ಅಂತಹವರೇ ಸಾಕ್ಷಿ...
ನಿಮ್ಮ ಮುಂದಿನ "ಹೊತ್ತು ತಂದಿರುವ ಸುದ್ದಿಗಳಿಗಾಗಿ " ಕಾಯುತಿದ್ದೇವೆ ..

ಗೋಪಾಲ್ ಮಾ ಕುಲಕರ್ಣಿ said...

ತುಂಬಾ ಚೆನ್ನಾಗಿದೆ. ಎಲ್ಲ ನವರಸಗಳನ್ನೂ ನಮಗೆ ಉಣ್ಣಿಸುವ...ಪ್ರಯತ್ನ ನಿಮ್ಮದು. ನಿಮ್ಮ ಬಾಲ್ಯದ ನೆನಪುಗಳ ಸರಮಾಲೆಗೆ ಕಾತುರದಿಂದ ಕಾಯುತ್ತಿರುವೆ.

ಸೀತಾರಾಮ. ಕೆ. / SITARAM.K said...

ರೆಡ್ಡಿಯ೦ಥ ಜನರು ಇನ್ನೂ ಸಮಾಜದಲ್ಲಿರುವದರಿ೦ದ ಮಾನವೀಯ ಮೌಲ್ಯಗಳು ಅರ್ಥ ಕಳೆದುಕೊಳ್ಳದೇ ಇವೇ.
ಕೈ ಹಿಡಿದು ನಡೆಸುವ ಮಡದಿಯ ವೈಶಿಷ್ಟತೆ ಏನು ಏ೦ಬುದು ಕಷ್ಟಕಾಲದಲ್ಲೇ ಗೊತ್ತಾಗುವದು.
ಮನುಷ್ಯನಲ್ಲಿರುವ ಪ್ರಾಮಾಣಿಕತೆ ಅವನ ಮುಖದಿ೦ದ ನೇರ ಹೊರಹೊಮ್ಮುವದು.
ಅ೦ಥಾ ಪ್ರಮಾಣಿಕತೆ ಎ೦ಥಾ ಕಠೋರಿಗಳನ್ನು ಕರಗಿಸುವದು.
ನಿಮ್ಮ ವಿಷಯದಲ್ಲಿ ನಡೆದದ್ದು ಅದೇ. ಕೆಲವೊ೦ದು ಅಪವಾದಗಳಿರಬಹುದು.
ನಿಮ್ಮ ಪ್ರಾಮಾಣಿಕತೆ ಅವರಲ್ಲಿನ ಮಾನವೀಯ ಕಾಳಜಿಯನ್ನು ಈ ಯಾ೦ತ್ರಿಕ ಬದುಕಿನಲ್ಲೂ ತೆರೆಯಲು ಕಾರಣವಾಯಿತು.
ತು೦ಬಾ ಮನಮಿಡಿಯುವ ಆಪ್ತತೆಯ ಪರಕಾಷ್ಠೆಯ ಅನುಭವವನ್ನು ಎ೦ದಿನ೦ತೆ ನವಿರಾಗಿ ನಿರೂಪಿಸಿದ್ದಿರಾ ಧನ್ಯವಾದಗಳು.

Roopa said...

ಒಳ್ಳೆಯ ಮನಸುಳ್ಳವರಿಗೆ ಒಳ್ಳೆಯದು ತಡವಾದರೂ ಆಗುತ್ತದೆ ಎನ್ನುವುದಕ್ಕೆ ನಿಮ್ಮ ಈ ಅನುಭವವೇ ಸಾಕ್ಷಿ ಪ್ರಕಾಶ್. ಲೇಖನದ ಭಾವುಕ ಬರವಣಿಗೆ ಕಣ್ಣಲ್ಲಿ ನೀರು ತರಿಸಿತು
ಮುಂದಿನ ಕಂತುಗಳಿಗೆ ಕಾಯುವೆ

ಕ್ಷಣ... ಚಿಂತನೆ... said...

ಪ್ರಕಾಶಣ್ಣ,

ನಿಮ್ಮ ಅನುಭವದ ಲೇಖನ ಓದಿದೆ. ಓದುತ್ತಾ ಹೋದಂತೆ... ನನಗನಿಸಿದ್ದೂ ಹೀಗೆ. ಇದನ್ನೇ 'ಕಲ್ಲೂ ಕರಗುವ ಸಮಯ' ಎನ್ನಬಹುದು.

ಇನ್ನು, ನಿಮ್ಮ ಆತ್ಮೀಯ ಗೆಳೆಯ 'ಸತ್ಯ'...

ನಿಮ್ಮ ಕಷ್ಟನಷ್ಟಗಳನ್ನು ನೀವು ಈ 'ಸತ್ಯ'(ಸತ್ಯವೆಂಬ ಮಾತು) ದಿಂದಲೇ ಹೇಳಿಕೊಂಡಿದ್ದಕ್ಕೆ, ನಿಮ್ಮ ಮೇಲೆ ಆ ಎಂಟು ಜನರಲ್ಲಿದ್ದ ನಂಬಿಕೆ, ಅದರಲ್ಲಿಯೂ ರೆಡ್ಡಿಯವರಿಗೆ ನಿಮ್ಮ ಬಗೆಗಿನ ವಿಶ್ವಾಸ.

'ಸತ್ಯ' ಎಂದಿಗೂ ಕೈಬಿಡುವುದಿಲ್ಲ. ಎಂಬುದಕ್ಕೆ ಆ ಸತ್ಯನೇ ನೆರವಿಗೆ ಬಂದರಲ್ಲವೇ. ಅದಕ್ಕೆಂದೇ, 'ಆಪತ್ತಿಗಾದವನೇ ನೆಂಟ' ಎಂಬ ಗಾದೆಯು ಇಂತಹವರನ್ನು ನೋಡಿಯೇ ಮಾಡಿದ್ದಿರಬೇಕು. ಇಲ್ಲವಾದರೆ.. ಎಲ್ಲರೂ ತಾರಮ್ಮಯ್ಯ ಆಡಿಸಿಬಿಡುತ್ತಿದ್ದರು.

ಮಾತು ಆಡಲಾಗುತ್ತಿಲ್ಲ...
ಕಣ್ಣು ತುಂಬಿ ಬಂದಿತ್ತು......


ಚಂದ್ರು,

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ನಿಜಕ್ಕೂ ಮನ ಕಲುಕುವ ಲೇಖನ.

ರಾಜೀವ said...

ಪ್ರಕಾಶ್ ಅವರೇ,

ಕಷ್ಟದ ಸಮಯದಲ್ಲೇ ನಮ್ಮ ನಿಜವಾದ ವ್ಯಕ್ತಿತ್ವ ಹೊರಬರುತ್ತದೆ. ನಿಜವಾಗಿ ನಮ್ಮ ಜೊತೆ ಇರುವವರು ಯಾರು ಎಂದೂ ಆಗಲೇ ತಿಳಿಯುವುದು. ಇಂತಹ ಸಮಯಗಳಲ್ಲಿ ಕಲಿಯುವ ಜೀವನದ ಪಾಠ ಮರೆಯಲು ಸಾಧ್ಯವೇ ಇಲ್ಲ. ಸಂಪಾದಿಸಿದರೆ ಇಂತಹ ಸ್ನೇಹಿತರನ್ನು ಸಂಪಾದಿಸಬೇಕು.

ಮನೆಯ ಹೆಂಗಸರು ತಾಳ್ಮೆಗೆಟ್ಟರೆ ಮನೆಯೇ ಉರಿದಂತೆ. ತಾಳ್ಮೆಯಿಂದ ನಿಮ್ಮಾಕೆ ನಿಮಗೆ ಸಲಹೆ ನೀಡಿದ ಪರಿ ಪ್ರಶಂಸನೀಯ. ನಿಮ್ಮಾಕೆಗೂ ನನ್ನ ನಮಸ್ಕಾರಗಳು.

Ittigecement said...

ದಿನಕರ....

ರೆಡ್ಡಿಯವರು ನನಗೆ ಜಲ್ಲಿ ಸಪ್ಲೈ ಮಾಡುತ್ತಿದ್ದರು...
ನಾನು ಅವರಿಗೆ ಚೌಕಾಸಿ ಮಾಡಿ ಹಣ ಕೊಡುತ್ತಿದ್ದೆ...
ಆ ದಿನದವರೆಗೆ ನಮ್ಮ ನಡುವೆ ಇದ್ದಿದ್ದು ಬರಿ ವ್ಯವಹಾರ ಸಂಬಂಧ....

ಈ ಘಟನೆಯಿಂದ ನನಗೊಬ್ಬ ಹತ್ತಿರದ ಸಂಬಂಧಿಕರು..
ಆತ್ಮೀಯರು, ಹಿತೈಷಿಗಳು ಸಿಕ್ಕರು...

ಮನ ನೊಂದಿದ್ದರೂ...
ಕಹಿ ಘಳಿಗೆಯಾಗಿದ್ದರೂ...

ಅಮೂಲ್ಯರಾದ ರೆಡ್ಡಿಯವರು ಸಿಕ್ಕರು...

ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ಇನ್ನಷ್ಟು ಬರೆಯಲು ಉತ್ಸಾಹ ತರುತ್ತದೆ...
ಧನ್ಯವಾದಗಳು...

geeta bhat said...

Namaskara...
Nimaa ee lekhana nanage tumba tumba ista aatu,hage manassige bejaru aatu.Namma sutta mutta ententa jana irta alda? ella time bandagale gottagadu.neenu dodda manushya heli sambodisida aa vyakthi nimma Reddy,matte Sathya avara edurige estu sannavaragi bitru alda? Nimma ee lekhana neejavada doddastike iradu elli annodanna chennagi torsi kottiddu.Anta friends sigalu adrasta beku.anta time face madalu aste dhirya beku...really great Ashakka!

Ittigecement said...

ಚಿತ್ರಾ....

"ಮುಖನೋಡಿದರೆ...
ಮಾತು ಕೇಳಿದರೆ... ಮನಸ್ಸು ಗೊತ್ತಾಗುವದಿಲ್ಲ..."

ಭೈರಪ್ಪನವರ ಹಿಂದಿನ ದಿನದ ಆರ್ಭಟ ನೋಡಿ ನನಗೆ ಆತಂಕವಿತ್ತು...
ನನ್ನ ಮಾತು, ಉಳಿದ ಜನರ ವರ್ತನೆ ನೋಡಿ ಅವರೂ ತಮ್ಮ ಅಭಿಪ್ರಾಯ ಬದಲಿಸಿದರೇನೊ...
ಅವರೂ ಸಹ ನನಗೆ ತುಂಬ ಸಹಕಾರ ಕೊಟ್ಟರು...

ಭಯ, ಆತಂಕಗಳು ನಮ್ಮನ್ನು ಹೆದರಿಸಿ ಬಿಡುತ್ತವೆ..
ಮುಂದೆ ಏನಾಗುತ್ತದೋ ಎನ್ನುವ ವಿಚಾರ ನಮ್ಮನ್ನು ಧೃತಿಗೆಡಿಸಿಬಿಡುತ್ತದೆ...

ಮುಂದೇನು ಮಾಡ ಬೇಕು ಎನ್ನುವ ವಿಚಾರ ಮರೆತು ಹೋಗುತ್ತದೆ...
ಅದು ತಪ್ಪು...
ವಿವೇಕ, ವಿವೇಚನೆ ನಮ್ಮಲ್ಲಿರಬೇಕು...

ಪ್ರತಿಕ್ರಿಯೆಗಳು ನನಗೆ ಟಾನಿಕ್ ಥರಹ...

ಧನ್ಯವಾದಗಳು ....

shivu.k said...

ಪ್ರಕಾಶ್ ಸರ್,

ಕೊನೆಯ ಭಾಗದಲ್ಲಿ ಏನಾಗೊತ್ತೋ ಅನ್ನುವ ಕುತೂಹಲ ಭಯ ನನಗೂ ಇತ್ತು. ನಾವೆಷ್ಟೇ ಬುದ್ಧಿವಂತರಾದರೂ, ಆತುರದ ನಿರ್ಧಾರಗಳನ್ನು ತಡೆಯಲು ಮನೆಯಲ್ಲಿ ಬುದ್ಧಿವಂತ ಸತಿಯಿರಬೇಕು. ಅದು ಮನಸ್ಸನ್ನೇ ತಿದ್ದಿಬಿಡುತ್ತದೆ. ಮರುಕ್ಷಣದಿಂದ ಈ ಪ್ರಪಂಚ ಈ ಜೀವನ ನಮ್ಮದಾಗುತ್ತದೆ. ನಿಮಗೆ ಆಗಿದ್ದು ಅದೇ ಅಲ್ಲವೇ ಸರ್.

ಮುಂದೆ ಎಲ್ಲಾ ಒಳ್ಳೆಯದೇ ಆಯಿತಲ್ಲ...ಅಷ್ಟು ಸಾಕು ನನಗೆ.
ಬದುಕು ಬದುಕುವುದನ್ನು ಕಲಿಸುತ್ತದೆ. ಬದುಕುವಾಗ ಅದನ್ನು ಪಾಲೀಶ್ ಮಾಡಿ ಬದುಕುವುದನ್ನು ಮನೆಯ ಹಿರಿಯರು, ಹೆಂಡತಿ, ಮಕ್ಕಳು ಕಲಿಸುತ್ತಾರಂತೆ.

ಸತ್ಯರವರಂಥ ಗೆಳೆಯರನ್ನು ಹೊಂದಿದ ನೀವು ಅದೃಷ್ಟವಂತರು.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,
ಸದ್ಯ ಮಾರಾಯ್ರೆ ಬಂದ್ರಲ್ಲ...
ಬದುಕು ಎಂತೆಂತಹ ಘಟ್ಟಗಳನ್ನ ದಾಟಿ ಬರುತ್ತೆ ಅಲ್ವ. ಕಷ್ಟದಲ್ಲಿ ಆದವನೇ ನೆಂಟ ಅಂತಾರಲ್ಲ ಇದಕ್ಕೆ ಅನ್ಸುತ್ತೇನೋ...

Ittigecement said...

ಸವಿಗನಸು..(ಮಹೇಶ್)...

ನಮ್ಮೊಡನೆ ನಮ್ಮವರಿದ್ದಾರೆ..
ಎನ್ನುವ ಭರವಸೆ ಇದ್ದರೆ ಸಾಕು...

ಎಂಥಹ ಕಷ್ಟಗಳನ್ನಾದರೂ ಎದುರಿಸ ಬಹುದು..
ಅಲ್ಲವಾ...?

ಪ್ರೋತ್ಸಾಹಕ್ಕೆ ವಂದನೆಗಳು ... ಮಹೇಶ್...

Ittigecement said...

ವನ್ಯಾ...

ನನ್ನ ಬ್ಲಾಗಿಗೆ ಸ್ವಾಗತ....

ಜೀವನದಲ್ಲಿ ನಾವು ದುಃಖಕ್ಕಿಂತ..
ಹೆಚ್ಚಿಗೆ ನಗು, ಸಂತೋಷ ಅನುಭವಿಸಿರ್ತೀವಿ....

ಆದರೆ ಖುಷಿಯ ಕ್ಷಣಗಳು ಹೆಚ್ಚಾಗಿ ನೆನಪಿರುವದಿಲ್ಲ...
ಆದರೆ ದುಃಖ, ಬೇಸರಗಳು..
ಆಳವಾಗಿ ಮನದಲ್ಲುಳಿದು ಬಿಟ್ಟಿರ್ತದೆ...

ಇದು ವಿಪರ್ಯಾಸ...!

ಪ್ರತಿಕ್ರಿಯೆಗೆ ಧನ್ಯವಾದಗಳು...

ಬಾಲು, ಶಾಂತಲಾ ನಿಮಗೆ ಪರಿಚಯ ಇದೆಯಾ...?

Ittigecement said...

ಡಾ. ಗುರುಮೂರ್ತಿ (ಸಾಗರದಾಚೆಯ ಇಂಚರ)...

ನಿಮ್ಮ ಬ್ಲಾಗಿನ ಲೇಖನ ಓದಿದರೂ ಪ್ರತಿಕ್ರಿಯೆ ಹಾಕಲಾಗಲಿಲ್ಲ...
ದಯವಿಟ್ಟು ಬೇಸರಿಸದಿರಿ...

ಬದುಕೇ ಹಾಗೆ...
ಮೋಸ, ದುಃಖ, ಸಂತೋಷ, ನಗು...
ಎಲ್ಲವೂ ಇದ್ದೇ ಇರುತ್ತದೆ...
ಅವುಗಳಲ್ಲಿ ನಮಗೆ ಚಾಯ್ಸ್ ಇಲ್ಲ...
ಬೇಡವೆಂದರೂ... ಸ್ವೀಕರಿಸಲೇ ಬೇಕು...

ಕಹಿ ಇದ್ದರೇನೇ... ಸಿಹಿಗೊಂದು ಬೆಲೆ...!

ನಿಮ್ಮ ಭಯಾನಕ ಅನುಭವ ಓದಿ ಸಿಕ್ಕಾಪಟ್ಟೆ ಬೇಸರವೂ, ಆತಂಕವೂ ಆಯಿತು...
ಹೊರದೇಶ, ಗೊತ್ತಿಲ್ಲದ
ಕಾನೂನು, ಭಾಷೆ..
ಬಹಳ ಕಷ್ಟ...

ಅಲ್ಲೂ ಸಹ ನಿಮ್ಮ ಒಳ್ಳೇತನ ನಿಮಗೆ ಸಹಾಯ ಮಾಡಿದೆ...

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಸುನಾಥ ಸರ್....

ನಾನು ಇದನ್ನು ಬರೆದ ಉದ್ದೇಶವೂ ಅದೇ ಆಗಿದೆ...
ಕಷ್ಟಗಳು ಬಂದೇ ಬರುತ್ತವೆ...
ಆಗ ದುಡುಕಿ ನಿರ್ಧಾರ ತೆಗೆದು ಕೊಳ್ಳ ಬಾರದು...

"ಕಾಣದ ಸಾವಿಗಿಂತ...
ಎದುರಿಗಿರುವ ಬದುಕು ದೊಡ್ಡದು..."

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಮೂಕರೋಧನೆ.... (ಗುರುದಾಸ್..)...

ನನ್ನ ಬ್ಲಾಗಿಗೆ ಸ್ವಾಗತ...

ತೀರಾ ಪ್ರ್ಯಾಕ್ಟಿಕಲ್ ಆಗಿರುವವರಿಗೆ ಈ ಘಟನೆ ಬಗೆಗೆ ಏನೂ ಅನ್ನಿಸುವದಿಲ್ಲವೇನೋ..

ಭಾವುಕ ಮನಸ್ಸುಗಳೇ ಹೀಗೆ...
ತಲೆಯಲ್ಲಿ ವಿಚಾರ ಮಾಡದೆ...
ಹೃದಯದಲ್ಲಿ ವಿಚಾರ ಮಾಡಿ..
ನಿರ್ಣಯ ತೆಗೆದು ಕೊಳ್ಳುತ್ತಾರೆ....

ದುಡುಕಿನ ನಿರ್ಧಾರಗಳು ಹೃದಯಗಳೇ ತೆಗೆದುಕೊಂಡು ಬಿಡುತ್ತದೆ...

ಸ್ವಲ್ಪ ವಿವೇಕ, ವಿವೇಚನೆ ಇರಲೇ ಬೇಕಾಗುತ್ತದೆ...

ಬರುತ್ತಾ ಇರಿ...
ಧನ್ಯವಾದಗಳು...

Ittigecement said...

ಸುಮ....

ನಮ್ಮ ಬ್ಲಾಗಿಗರಲ್ಲಿ ಒಬ್ಬರು "ಚಂದ್ರಕಾಂತ" ಅನ್ನುವವರಿದ್ದಾರೆ...
ಅವರು ಒಮ್ಮೆ ನನಗೆ ಪ್ರತಿಕ್ರಿಯೆ ಕೊಟ್ಟಿದ್ದರು...

"ನೋವುಗಳು ನಮ್ಮನ್ನು ಬೆಳೆಸುವಷ್ಟು..
ಖುಷಿ, ಸಂತೋಷಗಳು ಬೆಳೆಸಲಾರವು..."

ಎಷ್ಟು ಸತ್ಯವಾದ ಮಾತು ಅಲ್ಲವಾ...?

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...


"ನಾಗಂದಿಗೆ" ಲಿಂಕ್ ನೋಡಿದೆ...
ಸೊಗಸಾಗಿದೆ...
ತುಂಬಾ ಚೆನ್ನಾಗಿ ಬರೆಯುತ್ತಾರೆ...
ಅಂದು ಚಿಟ್ಟಾಣಿಯವರ ಸಭೆಯಲ್ಲಿ "ಸುಧಾಕಿರಣ್" ಅವರ ಮಾತಿನ ಮೋಡಿಗೆ ಬೆರಗಾಗಿದ್ದೇನೆ...
ಅವರಿಗೆ ನನ್ನ ಅಭಿನಂದನೆ ತಿಳಿಸಿ...

Ittigecement said...

ಸುಧೇಶ್....

ಉದಾಹರಣೆಗೆ ನಮ್ಮನ್ನೇ.. ನೋಡಿ...

ನಾವು ಮಾತನಾಡುವಾಗ ನಮ್ಮನ್ನು ನಗ್ನವಾಗಿ ಎಲ್ಲೂ ಬಿಚ್ಚಿಡುವದಿಲ್ಲ...
ಬಟ್ಟೆ ಹಾಕಿಯೇ ಮಾತನಾಡುತ್ತೇವೆ...
ಅದರಲ್ಲೂ...
ರಂಗು ರಂಗಿನ ಬಟ್ಟೆಯನ್ನೇ ತೊಡಿಸಿ ಬಿಡುತ್ತೇವೆ...
ಕೇಳುವವವರೂ ಅದನ್ನೇ ಬಯಸುತ್ತಾರೆ...

ಮಾತು...ಕೇಳಿದರೆ...
ಮನಸ್ಸು ಖಂಡಿತವಾಗಿ ಗೊತ್ತಾಗುವದಿಲ್ಲ... ಅಲ್ಲವಾ...?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹಕ ಮಾತುಗಳು ನನಗೆ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...

Ittigecement said...

ದಿಲೀಪ್.........

ಮೋಸ ಮಾಡಿದವರಿಗಿಂತ...
ಸಮಯದಲ್ಲಿ ನಮಗಾಗಿ ಸಹಾಯ ಹಸ್ತ ನೀಡಿದವರು ಮನದಲ್ಲುಳಿದು ಬಿಡುತ್ತಾರೆ...
ಹೃದಯಕ್ಕೆ ಹತ್ತಿರವಾಗಿಬಿಡುತ್ತಾರೆ...

ಸಮಯ,, ಸಂದರ್ಭಗಳು...
ವ್ಯಕ್ತಿ ಪರಿಚಯ ಮಾಡಿಕೊಡುತ್ತವೆ....
ನಮ್ಮವರು ಯಾರೆಂಬುದನ್ನು ತಿಳಿಸಿ ಕೊಡುತ್ತವೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Unknown said...

ಒಳ್ಳೆಯವರಿಗೆ ಒಳ್ಳೆದಾಗಲಿ... ಕೆಟ್ಟವರೂ ಒಳ್ಳೆಯವರಾಗಲಿ...

Jayalaxmi said...

ರೆಡ್ಡಿಯವರಿಗೆ ಕೈ ಮುಗಿದೆ. ಅಂಥ ಜನ ಅಪರೂಪ. ನಿಮ್ಮಾಕೆ ಇಂಥ ಸ್ಥಿತಿಯಲ್ಲಿ ’ಸಹಧರ್ಮಿಣಿ’ ಶಬ್ದಕ್ಕೆ ಪೂರ್ಣ ಅರ್ಥ ಕೊಟ್ಟಿದ್ದು ನಿಮ್ಮ ಜೀವನದ ಸ್ಸರ್ಥಕತೆ ಆಲ್ಲವಾ? ಒಳ್ಳೆಯತನದ ಪರೀಕ್ಷೆ ಆಗುವುದು ಇಂಥ ಹೊತ್ತಲ್ಲೆ ಅಲ್ಲವೆ? ಗೆದ್ದವರು ನೀವು.

Prashant said...

mama...ninna experience ellarigu tumba besara padiside..innu munde yavattu ithara sandharba barade erali!!!

ಹೆಸರು:ಪ್ರದೀಪ said...

ಪ್ರಕಾಶ್...ಇದನ್ನು ಓದಿ ನನ್ನ ಮನಸ್ಸು ಇಪ್ಪತ್ತು ವರ್ಷಗಳ ಹಿಂದೆ ಓಡಿತು. ವ್ಯತ್ಯಾಸವೆಂದರೆ ಅಂದು ನಿಮ್ಮ ಜಾಗದಲ್ಲಿ ನಾವಿದ್ದೆವು. ಇನ್ನೊಂದು ಕಡೆ ಇಟ್ಟಿಗೆ-ಸಿಮೆಂಟು! ನಮಗೆ ಆತ ಬರೋಬ್ಬರಿ ೧ ಲಕ್ಷ ನಾಮ ಎಳೆದಿದ್ದನು. ಇದು ಲೆಕ್ಕಕ್ಕೆ ಸಿಕ್ಕಿದ್ದು. ಲೆಕ್ಕಕ್ಕೆ ಸಿಗದೇ ಹೋಗಿದ್ದು ಅದಕ್ಕಿಂತಲೂ ಜಾಸ್ತಿ. ಕಂಟ್ರಾಕ್ಟರ್ ಗೆ ಅನುಭವವಿಲ್ಲದಿದ್ದರೂ ನಮ್ಮಪ್ಪ ಪಾಪ ಅವನಿಗೂ ಒಳ್ಳೆಯದಾಗಲಿ ಎಂದು ಎಲ್ಲರ ಮಾತನ್ನು ಗಾಳಿಗೆ ತೂರಿ ಗುತ್ತಿಗೆ ಕೊಟ್ಟು ಕೊನೆಗೆ ಕೈ ಸುಟ್ಟಿಕೊಂಡಿದ್ದು ಹೀಗೆ. ಅದೂ ಆತ ಸಾಬಿ ಬೇರೆ. ನಮ್ಮಲ್ಲಿ ಯಾರಿಗೂ ಕೂಡ ಇಷ್ಟವಿರಲಿಲ್ಲ. ಆದರ ನಮ್ಮಪ್ಪಂದು ಒಂದು ಥರಾ ಭಂಡ ಹಟ. ಅವನ ಧಿಮಾಕು ಎಷ್ಟ್ಟಿತ್ತೆಂದರೆ ಆತ ಕೆಲಸವೂ ಮಾಡುವುದಿಲ್ಲ, ಹಣವೂ ಕೊಡುವಿದಲ್ಲ ಎಂದು ಹೇಳಿ ರಾಜಾರೋಷವಾಗಿ ನಮ್ಮ ಮುಂದೆಯೇ ತಿರುಗಾಡಿಕೊಂಡಿದ್ದನು. ನಿಮ್ಮ ಹಾಗೆ ವಿಷ ಕುಡಿಯುವ ಸರದಿ ಅಂದು ನಮ್ಮದು. ೩ ಲಕ್ಷ ಸುರಿದಿದ್ದೆವು. ನಾಮ ಹಾಕಿಸಿಕೊಂಡಿದ್ದು ಸೇರಿದರೆ ಹೆಚ್ಚು ಕಮ್ಮಿ ೪ ಲಕ್ಷ. ಅಂದಿನ ದಿನದಲ್ಲಿ ಒಂದು ಬಂಗಲೆ ಕಟ್ಟುವಷ್ಟು ದುಡ್ಡು ಇದಾಗಿತ್ತು. ಮನೆ ಕಟ್ಟಲು ಶುರು ಮಾಡಿ ೧ ವರ್ಷವಾದರೂ ಕೂಡ ತಾರಸಿ ಹಂತದಲ್ಲೇ ನಿಂತಿತ್ತು. ಬೇರೆಯವರಾಗಿದ್ದರೆ ಇಷ್ಟರಲ್ಲಿ ೨ ಮನೆಗಳನ್ನು ಕಟ್ಟಿರುತ್ತಿದ್ದರು. ಬರೀ ಕಿಟಕಿ, ಬಾಗಿಲು, ಪ್ಲಾಸ್ಟರಿಂಗ್ ಮಾಡಿಸಲು ಕೂಡ ಕಮ್ಮಿ ಅಂದರೂ ೧ ಲಕ್ಷ ಬೇಕಾಗಿತ್ತು. ಹೇಗೋ ಅವರಿವರ ಹತ್ತಿರ ಸಾಲ ತೆಗೆದು ಇವಿಷ್ಟನ್ನು ಮಾಡಿಸಿಕೊಂಡಿದ್ದಾಯಿತು. ಎಲ್ಲರ ಸಲಹೆಯಂತೆ ಗ್ರಾಹಕರ ಕೋರ್ಟ್ ನಲ್ಲಿ ಕೇಸ್ ಹಾಕಿ ಸುಮಾರು ೧೨ ವರ್ಷಗಳ ಕಾಲ ಅಲೆದಾಡಿದ ಮೇಲೆ ಕೊನೆಗೆ ಸಿಕ್ಕಿದ್ದು ಜುಜುಬಿ ೨೫ ಸಾವಿರ! ಹೇಗಿದೆ ನೋಡಿ ನಮ್ಮ ದೇಶದ ಕಾನೂನು. ಈಗಲೂ ಕೂಡ ಆತ ಬಿಂದಾಸ್ ಆಗಿ ಮೈಸೂರಿನಲ್ಲಿ ತಿರುಗಾಡಿಕೊಂಡು ಇದಾನೆ! ನೀವು ಹೇಳಿದ ಹಾಗೆ ನೋಡಿದ ಕೂಡಲೇ ಯಾರು ರಾಜಕುಮಾರ್ ಅಥವ ವಜ್ರಮುನಿ ಎಂದು ತಿಳಿಯುವುದಿಲ್ಲ!