Friday, February 25, 2011

ಪಾಲು...




ಕೆಲವು ಸಂದರ್ಭಗಳಲ್ಲಿ..
ನಮ್ಮ  ನಡತೆಗಳಿಗೆ ...ನಮ್ಮ ಬಳಿಯೇ ಉತ್ತರವಿರುವದಿಲ್ಲ....


ನಮ್ಮ ಮನಸ್ಸಿಗೆ ಇಷ್ಟವಿಲ್ಲದಿದ್ದರೂ..
ಕೆಲವೊಂದು ಕಠಿಣ ನಿರ್ಧಾರಕ್ಕೆ ಬಂದುಬಿಡುತ್ತೇವೆ...


ಇದೆಲ್ಲ ಯಾಕೆ ಅಂತೀರಾ?


ನಾನು ನನ್ನ ಹುಟ್ಟಿದ ಊರಿಗೆ ಹೋಗದೇ ಬಹಳ ವರ್ಷಗಳೇ ಆದವು..


ಅಲ್ಲಿ ಅಪ್ಪ, ಅಮ್ಮ ಇರದಿದ್ದರೂ... 
ಒಬ್ಬ ಒಡಹುಟ್ಟಿದ ತಮ್ಮನಿದ್ದ..


ಮೊನ್ನೆ ನನ್ನ ತಮ್ಮ ಆಸ್ಪತ್ರೆಯಲ್ಲಿ ತೀರಿಕೊಂಡನಂತೆ...


ತಮ್ಮನ  ಹೆಂಡತಿಯ ಅಣ್ಣನ ಫೋನ್ ಬಂದಿತ್ತು...


" ನಿಮ್ಮ ತಮ್ಮ ತೀರಿಕೊಂಡಿದ್ದಾರೆ... 
ವಾಸಿಯಾಗದ ಖಾಯಿಲೆಯಿಂದ..
ನಿಮ್ಮ  ಬಳಿ ಮಾತನಾಡಬೇಕೆಂದು ಪ್ರಯತ್ನಿಸಿದರೂ.. 
ನೀವು ಮಾತನಾಡಲೇ ಇಲ್ಲ.."




ಅವರ ಧ್ವನಿಯಲ್ಲಿ  ಆಕ್ಷೇಪಣೆಯಿತ್ತು .. ..
ನಾನು ಸುಮ್ಮನಿದ್ದೆ...
ನನಗೆ ಅವರ ಬಳಿ ಮಾತಿನ ಅವಶ್ಯಕತೆಯೂ ಇರಲಿಲ್ಲ...


"ನೋಡಿ .. 
ಬದುಕಿದ್ದಾಗ ದ್ವೇಷ... ಹಗೆತನ...
ಈಗ  ನಿಮ್ಮಿಬ್ಬರ  ಜಮೀನು ಮಾರಾಟಮಾಡುವಂಥಹ ಸ್ಥಿತಿ ಇದೆ...
ಸಿಕ್ಕಾಪಟ್ಟೆ ಸಾಲವಿದೆ.."


ಓಹೋ...!
ಇದಕ್ಕೆ ಇಷ್ಟೆಲ್ಲ ಪೀಠಿಕೆ..!  


ನನಗೆ ಕೋಪ ಬಂತು...


"ಮಾರಾಟ ಮಾಡಿಕೊಳ್ಳಿ.. 
ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ..
ನನ್ನದೂ.. ಅಂತ ಅಲ್ಲಿ ಯಾವದೂ... ಇಲ್ಲ...
ಯಾರೂ.... ಇಲ್ಲ.."


"ನೋಡಿ...
ನಿಮಗೆ  ಬೇಡದಿದ್ದರೂ.. 
ಕಾಗದ ಪತ್ರಗಳಿಗೆ ಸಹಿ ಹಾಕಲು ನೀವೊಮ್ಮೆ ಬರಬೇಕಾಗುತ್ತದೆ..
ನಿಮ್ಮ ಸಹಿ ಇಲ್ಲದಿದ್ದರೆ ಯಾರೂ ಖರಿದಿಗೆ ಬರುತ್ತಿಲ್ಲ..
ದಯವಿಟ್ಟು ಇಲ್ಲವೆನ್ನಬೇಡಿ...
ನನ್ನ ತಂಗಿ.. ಮಕ್ಕಳ ಬಾಳಿನ ಪ್ರಶ್ನೆ...
ದಯವಿಟ್ಟು ಬನ್ನಿ.."


ಬಹಳ ಗೋಗರೆದರು...


ನಾನು ನನ್ನ ಮಡದಿಯ ಸಂಗಡ ಚರ್ಚಿಸಿದೆ...


"ಹೋಗಿ ಬನ್ನಿ... 
ಸುಮ್ಮನೇ.. ಸಹಿ ಹಾಕಬೇಡಿ...
ಮನೆ ಸಾಲ ಇನ್ನು ತೀರಿಸಿಲ್ಲ...
ಮಕ್ಕಳು ದೊಡ್ದವರಾಗ್ತಾ  ಇದ್ದಾರೆ...
ಅವರ ಓದಿಗೂ.. ಖರ್ಚುಗಳಿವೆ...


ಅಲ್ಲಿಂದ ಏನಾದರೂ  "ನಮ್ಮ ಪಾಲನ್ನು"  ಕಿತ್ತುಕೊಂಡು ಬನ್ನಿ..
ನಮ್ಮ  ಕಷ್ಟದ ದಿನಗಳು ನಿಮಗೆ ನೆನಪಿದೆಯಲ್ಲವೆ...?"



ನಿಜ...
ನನಗೆ  ಆ ದಿನಗಳು ಬೇಡವೆಂದರೂ ನೆನಪಾದವು....


ಆಗ ನಾನು ನನ್ನ ಸ್ನೇಹಿತನ ಸಾಲದ ಪತ್ರಕ್ಕೆ ಸಹಿ ಹಾಕಿ ಬಹಳ ತೊಂದರೆಗೆ ಸಿಲುಕಿದ್ದೆ...
ಸ್ನೇಹಿತ  ನಾಪತ್ತೆಯಾಗಿ... 
ಅವನ ಸಾಲವನ್ನೆಲ್ಲ ನಾನು ತೀರಿಸುವಂಥಹ ಅನಿವಾರ್ಯ ಸ್ಥಿತಿ ಬಂದಿದ್ದೆ...


ದಿನಾ ಬೆಳಗಾದರೆ.. ಸಾಲಗಾರರ... 
ರೌಡಿಗಳ ಕಾಟ..!
ನಾನು ಮಾಡದ ತಪ್ಪಿಗೆ ಮರ್ಯಾದೆ ಹೋಗುತ್ತಿದೆ...!


ಆತ್ಮ ಹತ್ಯೆ ಮಾಡಿಕೊಳ್ಳುವಂಥಹ ಹೀನ ಸ್ಥಿತಿ... !!


ಆಗ ನೆನಪಾದದ್ದು ನನ್ನ  ತಮ್ಮ...!


ಆಪತ್ತಿನಲ್ಲಿ ನೆನಪಾಗುವವರು ನಮ್ಮವರು ತಾನೆ?


"ಅಣ್ಣಾ...
ಇಲ್ಲಿ ಜಮೀನನಲ್ಲಿ ಏನೂ ಬೆಳೆ ಆಗುತ್ತಿಲ್ಲ..
ಈ ಕೂಲಿ ರೇಟು... 
ಬೆಳೆಗೆ ಬೆಲೆ ಇಲ್ಲ...
ಈ ವರ್ಷ ಊಟ ಮಾಡಿಕೊಂಡು ಹೋಗುವದೇ.. ಕಷ್ಟವಾಗಿದೆ..."


ಪಕ್ಕದಲ್ಲಿದ್ದ  ನನ್ನ  ತಮ್ಮನ ಹೆಂಡತಿಯ ಮುಖದಲ್ಲಿನ  ನಗು .. ...
ನನಗೆ ಬೇಡವೆಂದರೂ ಕಾಣುತ್ತಿತ್ತು...!


ಅದು ಅಪಹಾಸ್ಯದ ನಗು...! !
ಛೇ....
ಇದೆಂಥಹ...  ಅವಮಾನ !!


ಸಾವಿರಾರು ಭರ್ಚಿಗಳಿಂದ ಮೈಯನ್ನು ಚುಚ್ಚಿದ ಅನುಭವ... !


ಮದುವೆಯಾದ ಮೇಲೆ  ಈ... ರಕ್ತ ಸಂಬಂಧಗಳು...
ಬಾಂಧವ್ಯಗಳು ...
ಯಾಕೆ  ಬದಲಾಗಿ ಬಿಡುತ್ತವೆ...?


ನಾನು ಕಣ್ಣೀರಿಡುತ್ತಿದ್ದರೆ.. 
ನನ್ನ ತಮ್ಮನ ಹೆಂಡತಿಗೆ  ಇದು ಹಾಸ್ಯವಾಗಿ ಕಾಣುತ್ತಿದೆಯಾ?


ನನ್ನ ತಮ್ಮ  ಮತ್ತು ಇವಳು ...
ಇಬ್ಬರೂ ಸೇರಿ ಮಾಡಿದ ಉಪಾಯವಲ್ಲವಾ?


ಕಷ್ಟದಲ್ಲಿ ಕಣ್ಣೀರು ಒರೆಸದ ಬಾಂಧವ್ಯ ಯಾಕೆ ಇರಬೇಕು...?


ಅದೇ.. ಕೊನೆ...!


ನಾನು ಮತ್ತೆ ಊರಿಗೆ ಹೋಗಲೇ ಇಲ್ಲ...!


ಅಲ್ಲಿನ ಆಸ್ತಿ... ಹಣ...
ರಕ್ತ ಸಂಬಂಧ ಎಲ್ಲವನ್ನೂ  ಬಿಟ್ಟು ಬಂದೆ...!


ಈಗ ಮತ್ತೆ ಊರಿಗೆ ಹೋಗಬೇಕಾಗಿದೆ... 


ಊರಿಗೆ ಬಂದಾಗ ಬೆಳಿಗ್ಗೆ  ಏಳು ಗಂಟೆ...


ನಾನು ಹೊಟೆಲ್ಲಿನಲ್ಲಿ ನಾಷ್ಟ ಮಾಡಿಕೊಂಡು ನಮ್ಮೂರ ಗೌಡರ ಮನೆಗೆ ಬಂದೆ...


ಅವರು ನನ್ನ ತಂದೆಯ  ಮಿತ್ರರು...


"ನೋಡಪ್ಪಾ...
ನಿನ್ನ  ತಮ್ಮನ  ಸಂಸಾರ ಬೀದಿಗೆ ಬಂದಿದೆ...
ಜಮೀನು ಪರ ಭಾರೆ ಆಗ್ತ ಇದೆ... 
ನಿನ್ನ ತಂದೆಯವರು.. ನಾನೂ ಸ್ನೇಹಿತರು... ಇದೆಲ್ಲ ನೋಡಕ್ಕೆ ಆಗಲ್ಲಪ್ಪ... 
ಮನೆಯ ದೊಡ್ಡ ಮಗ...
ನೀನೆ ಏನಾದ್ರೂ ಮಾಡು..."


"ನೋಡಿ... ಗೌಡ್ರೆ...


ಮುರಿದ ಮನಸ್ಸನ್ನು ಸೇರಿಸುವದು  ಬಲು ಕಷ್ಟ....
ಆಸ್ಪತ್ರೆಗಳಲ್ಲಿ ನಡೆಯೋ ಅಪರೇಷನ್ ತರಹ ಅಲ್ಲವಲ್ಲ...


ನನ್ನ ತಮ್ಮ ಇದ್ದಾಗಲೇ... 
ಎಲ್ಲ ಸಂಬಂಧವನ್ನೂ ನಾನು  ಬಿಟ್ಟು ಬಿಟ್ಟಿದ್ದೇನೆ..
ಈಗ ಬಂದಿದ್ದು ಕಾಗದ ಪತ್ರಗಳಿಗೆ ಸಹಿ ಹಾಕಲು.. 
ಆ ಕೆಲಸ ಪೂರೈಸಿ ....
ನನಗೆ ವಾಪಸ್ಸು ಇವತ್ತೇ ಹೋಗಬೇಕು..."


"ಆಯ್ತಪ್ಪಾ..."


ಅವರು ಹೆಚ್ಚು ಮಾತನಾಡಲಲಿಲ್ಲ..


ಅವರು ತಮ್ಮನ ಹೆಂಡತಿಯನ್ನು ಕರೆಸಿದರು...


ಅವಳ ಮುಖನೋಡಲೂ ನನಗೆ ಇಷ್ಟವಿರಲಿಲ್ಲ...


ಅವಳೊಂದಿಗೆ  ಸಣ್ಣ ಸಣ್ಣ ಮಕ್ಕಳೂ ಬಂದರು....


ಬದುಕು ಎಂಥಹ ಅನೀರೀಕ್ಷಿತ ತಿರುವುಗಳನ್ನು ತಂದಿಡುತ್ತದೆ... !


ತಮ್ಮನ ಹೆಂಡತಿ ತಲೆ ತಗ್ಗಿಸಿಯೇ ನಿಂತಿದ್ದಳು..


"ಭಾವ...
ಅವರ ಖಾಯಿಲೆಗೆ ಬಹಳ ಖರ್ಚಾಯಿತು..
ಅವರು ಬದುಕಿದರೆ ಸಾಕೆಂದು ಬಹಳ ಪ್ರಯತ್ನಿಸಿದೆ..
ಏನೂ ಪ್ರಯೋಜನ ಆಗಲಿಲ್ಲ... 
ನಮ್ಮನ್ನೆಲ್ಲ ಬಿಟ್ಟು ಹೋಗಿ ಬಿಟ್ರು..."


ಅವಳಿಗೆ ಮುಂದೆ ಮಾತನಾಡಲಾಗಲಿಲ್ಲ... ದುಃಖ ಉಮ್ಮಳಿಸಿ ಬಂತು...


ನನಗೆ ಆ ಸನ್ನಿವೇಶ ಒಂಥರಾ ಮುಜುಗರವಾದರೂ...


"ನೋಡಮ್ಮ... 
ನನಗೆ  ಕಾಗದ ಪತ್ರಗಳನ್ನು ತಂದು ಕೊಡು..
ಸಹಿ ಹಾಕಿ ನನಗೆ ಇವತ್ತೇ ವಾಪಸ್ಸು ಹೋಗಬೇಕು.."


ನನ್ನ ಮಾತುಗಳು ನನಗೇ ಆಶ್ಚರ್ಯ ತರಿಸಿದವು...


ಇಷ್ಟು ಕಠಿಣವಾಗಿ ನಾನು ಮಾತನಾಡ ಬಲ್ಲೇನಾ ?


ಅನುಭವಿಸಿದ ಅಂದಿನ ಅಪಹಾಸ್ಯದ ಸಂದರ್ಭ ಬೇಡವೆಂದರೂ ನೆನಪಾಗುತ್ತಿತ್ತು...


ಅಷ್ಟರಲ್ಲಿ  ಗೌಡರು  ಚಹ ತರಿಸಿದರು..


ನಾನು ಚಹ ಕುಡಿಯುತ್ತಿದ್ದೆ...


ಕಾಲಿಗೆ ಏನೋ ತಡಕಿದಂತಾಯಿತು...


ಅದು  ಒಂದು ಪುಟ್ಟ  ಮಗು... !


" ದೊಡ್ಡಪ್ಪಾ...!  
ಬೆಂಗಳೂರು ದೊಡ್ಡಪ್ಪಾ... 
ನಾನು...!..
ನಾನು.. !.."


ಕೆದರಿದ ... 
ಎಣ್ಣೆಯಿಲ್ಲದೆ ಜಿಡ್ಡುಗಟ್ಟಿದ ಕೂದಲು..!
ಅತ್ತೂ... ಅತ್ತು ಬಾಡಿದ.. ದೈನ್ಯ  ಮುಖ..!


ಆದರೂ ಮಗು ಮುದ್ದಾಗಿತ್ತು... ಎತ್ತಿಕೊಂಡೆ...


"ನೀನು ಬೆಂಗಳೂರು ದೊಡ್ಡಪ್ಪ ಅಲ್ವಾ?
ಅಮ್ಮ ಹೇಳ್ತಾ ಇರ್ತಾಳೆ..."


ನಾನು ಹೌದು ಎನ್ನುವಂತೆ ತಲೆಯಾಡಿಸಿದೆ...


"ದೊಡ್ಡಪ್ಪಾ... ದೊಡ್ಡಪ್ಪಾ.. 
ಅಪ್ಪ  ಎಲ್ಲಿಗೆ ಹೋಗಿದ್ದಾರೆ...?.."


ನನಗೆ  ಉತ್ತರಿಸಲು ಆಗಲಿಲ್ಲ...


"ದೊಡ್ಡಪ್ಪಾ... 
ದೊಡ್ಡಪ್ಪಾ...!
ಅಪ್ಪ... ಬೆಂಗಳೂರಿಗೆ ಹೋಗಿದ್ದಾನಂತೆ ಹೌದಾ?..


ಅಮ್ಮ ಬಹಳ ಕೆಟ್ಟವಳು ದೊಡ್ಡಪ್ಪಾ.. 


ಏನು ಕೇಳಿದರೂ ಕೊಡಿಸ್ತಾನೆ ಇಲ್ಲ.."


ಯಾಕೊ ನನ್ನ ಬಾಯಿಂದ  ಮಾತೇ.. ಬರುತ್ತಿಲ್ಲ...
ಮಗು ಮಾತನಾಡುತ್ತಲೇ ಇತ್ತು...


" ದೊಡ್ಡಪ್ಪಾ..
ಅಪ್ಪ ಯಾವಾಗ ಬರ್ತಾನೆ..?... 
ನಿನ್ನ ಸಂಗಡ.. ನನ್ನನ್ನೂ ಕರ್ಕೊಂಡು ಹೋಗು ದೊಡ್ಡಪ್ಪಾ...
ನನಗೆ  ಅಪ್ಪನ್ನ ತೋರಿಸು..."


ಅಷ್ಟರಲ್ಲಿ  ತಮ್ಮನ ಹೆಂಡತಿ ಕಾಗದ ಪತ್ರಗಳನ್ನು ತಂದಳು...


ಆಗ ಗೌಡರೆ.. ಕೇಳಿದರು...


"ನೋಡಪಾ.. 
ಇದರಲ್ಲಿ ನಿನಗೇನಾದರೂ ಪಾಲು ಬೇಕಿದ್ದರೆ ಈಗಲೇ ಹೇಳು...
ಇದು ಪಿತ್ರಾರ್ಜಿತ ಆಸ್ತಿ..
ನಿನ್ನ ಪಾಲಿನದು ನೀನು ಇಟ್ಟು ಕೊಳ್ಳ ಬಹುದು..."


ನನಗೆ ಮಡದಿಯ ಮಾತು ನೆನಪಾಯಿತು...


ಈ ಪುಟ್ಟ ಕಂದ..  
ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿತ್ತು...!


ನಾನು ಹೇಳಿದೆ..


"ಗೌಡರೆ...
ನಾನು ಸಹಿ ಹಾಕುವದಿಲ್ಲ...


ನನಗೆ ಪಾಲೂ ಬೇಕಿಲ್ಲ..


ನನ್ನ ತಮ್ಮನ ಸಂಸಾರವನ್ನು  ಎತ್ತಿ ನಿಲ್ಲಿಸುತ್ತೇನೆ... 
ಎಷ್ಟು ಸಾಲವಿದೆ ಹೇಳಿ.. ಎಲ್ಲ ತೀರಿಸುತ್ತೇನೆ....."


ನಾನು ಏನು ಹೇಳ್ತಾ ಇದ್ದೇನೆ ಅಂತ ನನಗೆ ಗೊತ್ತಾಗ್ತಾ ಇಲ್ಲವಾಗಿತ್ತು....!


ಕಣ್ಣೆಲ್ಲ ಮಂಜಾಗಿದ್ದವು...


ಪುಟ್ಟ ಮಗುವನ್ನು ಬಿಗಿಯಾಗಿ ..
ಮತ್ತೂ ಜೋರಾಗಿ ಅಪ್ಪಿಕೊಂಡೆ....! 


ನನಗೆ ನನ್ನ  ತಮ್ಮ ನೆನಪಾದ...!


ಅವನೂ.. 
ಈ.. ಕಂದನ  ಹಾಗೆಯೇ... ಇದ್ದ..!.








(ಇದು ಕಥೆ)

(ಒಳ್ಳೆಯ ಪ್ರತಿಕ್ರಿಯೆ ಗಳಿವೆ... ದಯವಿಟ್ಟು ಓದಿ...)


Tuesday, February 15, 2011

ನೀ..ನಿರದ ನೀರವದಲಿ..ನಿನ್ನ ನೆನಪಿನ ಕಲರವ..!

                                                                              ನಲ್ಲನ ಬರುವಿಕೆಗೆ ಕಾದು ಕುಳಿತಿಹೆ

ಘಂಟೆಗಳು ಉರುಳುತಿದೆ
ರವಿಯ ಕಿರಣ ಸರಿಯುತಿದೆ
ಬರದ ನಲ್ಲನಿಗೆ ಮನಸು ಕಾಯುತಿದೆ.....

ಸಂಜೆ ನೆರಳು ನೀರೊಳು ಬೆರೆತು
ಅಲೆಯ ಉಂಗುರಕೆ ಸೇರಿತು
ಹೊತ್ತು ಕಳೆದರು ಏಕೋ ಕಾಣಲಿಲ್ಲ
ನನ್ನಿಯನ ಹೆಜ್ಜೆ ಗುರುತು....

ಪ್ರಜ್ವಲಿಸಿ ಬಿಂಬಿಸುವ ಮುಖ ಬಾಡಿ
ಬೇಸರಿಸಿದರೂ ಕೂತ ಬಂಡೆಯಲೆ
ನಿನ್ನೆಸರ ಕೆತ್ತಿ ಚಿತ್ರಿಸಿದೆ ಈ ನನ್ನ ಬೆರಳು
ಇದ ನೋಡಲೊಮ್ಮೆ ಇತ್ತ ನೀ ಮರಳು......

ನಿನ್ನೆಸರ ಪಟಿಸುವ ನನ್ನೀ ಹೃದಯ
ಒದ್ದೆಯಾಗದಂತಿರಲು ಬಾ ನನ್ನಿಯ....
ಕಣ್ಣ ಹನಿ ನೀರ ಅಲೆಯಾಗುವ ಮುನ್ನ
ನಲ್ಲ ನೀ ಬಂದು ಸೇರಿ ಬಿಡು ನನ್ನ
                                                    
(ಕವಯಿತ್ರಿ.. ಶ್ರೀಮತಿ ಸುಗುಣಾ ಮಹೇಶ್)



ಇಳಿಸ೦ಜೆ ಹೊತ್ತಿನಲ್ಲಿ, ಇನಿಯನ ನೆನಪಿನಲಿ
ನೀರ ಅಲೆಗಳ ಕಲಕಿ ಏನ ನೀ ಹುಡುಕುತಿಹೆ
ಹೊನ್ನಬಣ್ಣದ ನೀರು ತ೦ಪೆರೆವ ತ೦ಗಾಳಿ
ಮನಕೆ ಮುದ ನೀಡುತಿದೆ ಹಿತಮಿತದ ಚಳಿಯು

ಎಲ್ಲಿ ನೀ ಕು೦ತಿರುವೆ ಯಾರ ನೀ ಕಾಯುತಿಹೆ
ನೀರ ಕಲರವದಲ್ಲಿ ನೋವುಗಳ ಮರೆತು
ನೆನಪಿನ೦ಗಳದಲ್ಲಿ ನೂರು ಕಾಮನೆ ಮೆರೆದು
ಬಚ್ಚಿಟ್ಟ ಭಾವಗಳ ಮೊಗೆದು ಸುರಿದು

ನೀರಿನೋಕುಳಿಯಲ್ಲಿ ಮನಭಾವವದು ಅರಳಿ
ನೆನಪಿಸಿವೆ ಯೌವ್ವನದ ನೆನಪ ಸುರುಳಿ
ನೀರ ಪುಳಕವನು೦ಡು ಬಿಟ್ಟು ಬಿಗುಮಾನವನು
ಒ೦ದಾಗು ನಲ್ಲನಲಿ ಮರೆತೆಲ್ಲ ದುಗುಡ..
( ಕವಿ.. ಶ್ರೀ. ಪರಾಂಜಪೆ)


 ಮೌನರಾಗ

ಶಾಂತ ನಾ ಏಕಾದೆ 
ಕಾಡಿತೇ ನನಗೇಕಾಂತ ?
ಮನದ ಗ್ಲಾನಿಯ ಹರಳು
ನಿಂತ ನೀರಲಿ ಸಣ್ಣ ನವಿರಲೆ
ಮೌನಮಾನಸದಲ್ಲಿ ಇರುಳು
ಕರುಳಹಿಂಡುಯಾತನೆ ಬಲು
ಪೀಡಿಸೋ ದುಗುಡ, ಎಲ್ಲಿ? ಏಕೆ?
ಹೀಗೆ ಇನಿಯನ ಕಾಣದೆ ದಿಗಿಲು?
ಬರುವನೆಂದು ಇಡೀ ದಿನಕಾದೆ
ಬಂದಂತೆ ಮಾಯವಾದ ನೆಳಲು
ತಾಪದ ಒಂದು ದಿನದ ನಿರೀಕ್ಷೆ 
ಏಕೆ ಈ ಪರಿ ತಪಿತ ಪರೀಕ್ಷೆ ?
ಅಸಹಜವಲ್ಲ ವನಿತೆಗಿದು
ತ್ರೇತಾ ಸೀತೆಗಂದು ಹದಿನಾಲ್ಕು
ದ್ರೌಪದಿಗಾಯ್ತು ಹನ್ನೆರಡು
ಶಬರಿಯೋ ಸಹನೆಯೇ ಮೂರ್ತಿ
ನನ್ನದು ಆಗಲಿಲ್ಲ ದಿನವಿನ್ನೂ ಪೂರ್ತಿ
ಹೌದು ಅಲೆಯೆದ್ದು ಮತ್ತೆ ಶಾಂತ
ನಿಂತನೀರಿಗೆ ಆಗಿ ಇದು ನಿರಂತ
ನಾನೂ ಕಲಿಯಬೇಕು ಹೀಗೇ
ಹಿಗ್ಗಿನಲಿ ಹಿಗ್ಗುತ ಮ್ಲಾನದಿ ತಗ್ಗುತ
ಅಲೆ ನಿಂತಲೆ ಮಾನಸ ಶಾಂತ

(ಕವಿ.. ಜಲನಯನ(ಆಜಾದ್ ) 




ನೀರೆ ಯಾಕೆ ನೀರಮೇಲೆ ಮೋಹ ಹುಟ್ಟಿದೆ
ನೀರಿನಲ್ಲಿ ನಿನ್ನ ಬಿಂಬ ಹುಡುಕುವಾಸೆಯೇ
ನೀರಿನಲ್ಲಿ ಮತ್ಸ್ಯ ನಡೆಯ ಜಾಡು ಹಿಡಿದರೂ
ನಿನ್ನ ಮನದ ತಪನೆ ಮಾತ್ರ ಯಾರು ತಿಳಿಯರು

ಚಂಚಲಾಂಗಿ ವಾರಿ ನೋಡಿ ಭಾರಿ ಮೋಹವೇ
ಸುತ್ತಿಬರುವ ಸುಳಿಯ ಒಮ್ಮೆ ನೋಡುವಾಸೆಯೇ
ಸರಸಿಯಲ್ಲಿ ಏಳ್ವ ಅಲೆಯು ಲೆಕ್ಕ ಸಿಕ್ಕರೂ
ಸರಸಿಜಾಕ್ಷಿ ನಿನ್ನ ಭಾವ ಯಾರು ಬಲ್ಲರು?
(ಕವಿ.. ಶ್ರೀ. ಮಹಾಬಲಗಿರಿ ಭಟ್)



ಪಡುವಣಕೆ ರವಿ ಹೊರಟ
ಸುತ್ತೆಲ್ಲ ಮುಸ್ಸಂಜೆ ಮಬ್ಬು

ಮೆಲ್ಲ ಮೆಲ್ಲನೆ ಮೆಲ್ಲುತಿದೆ ಮನ

ನಲ್ಲ ನಿನ್ನ ನೆನಪ ಸಿಹಿ ಕಬ್ಬು


ತೊಡಿಸೆ ಕಾದು ಕುಳಿತಿಹೆನು

ಹೊನ್ನ ನೀರಿನಲೆಯ ಉಂಗುರ

ಮಿಡಿವ ಎದೆಯ ಮಿಡಿತವೆಲ್ಲ

ನಲ್ಲ ನಿನ್ನ ಹೆಸರ ಡಂಗುರ


ಕಾಯಲಾರೆ ಸಾಕು ಇನ್ನು 

ವಿರಹದುರಿಯು ಸುಡುತಿದೆ

ತಾಳಲಾರೆ ಬೇಕು ನೀನು

ಆಡೋ ಮಾತು ನೂರಿದೆ..

(ಕವಿ.. ಶ್ರೀ. ದಿಲೀಪ್..)



ನೀ.. ನಿರದ..
ಈ..
ನೀರವದಲಿ....
ಗೆಳೆಯಾ...
ನಿನ್ನ
ನೆನಪಿನ 
ಕಲರವ..
ನನ್ನ... ಹೃದಯದತುಂಬಾ...!



ಹೊತ್ತು ಮುಳುಗುವ ಹೊತ್ತು
ಇಬ್ಬನಿ ಜಾರುತಲಿತ್ತು
ಇನಿಯ
ನಾ ಕಾದೆ ನಿನಗಾಗಿ
ಈ ಲೋಕವ ಮರೆತು..........

ಯಾಕೋ ಮನದಲ್ಲಿ ಅಲೆಗಳು ಏಳುತಿವೆ
ನೆನಪುಗಳು ಬಹಳ ಕಾಡುತಿವೆ
ಕ್ಷಣವು ಉರುಳಿ ದಿನಗಳಾಗಿ
ದಿನಗಳು ಯುಗವಾಗುತ್ತಿದೆ
ಆದರೂ ನಿನ್ನ ನೆನಪು ಕಾಡುತಿದೆ........

ಯಾತನೆಯ ಸಹಿಸಲು ಆಗದ ಗಳಿಗೆ
ನೆನಪಾಯ್ತು ನಿನ್ನ ಪ್ರೀತಿ ಸಲುಗೆ
ನಿಂತ ನೀರಿಗೆ ಕಲ್ಲೆಸೆದು ನೀನು
ಹೊರಟು ಹೋದೆಯಲ್ಲ ದೂರ ದೂರಕೆ..................

ಕಾದಿರುವೆ ಗೆಳೆಯ ನೀ ಬರುವೆಯೆಂದು.......
ಬೈಗು ಹೊತ್ತಿನಲಿ ಹಾದಿಯ ಕಾದು
ಕುಳಿತಿಹೆ ನೂರಾರು ನೆನಪುಗಳ ಹೊತ್ತು
ಮರೆಯದಿರು ಎಂದೆಂದೂ ನಾ ನಿನ್ನ ಸ್ವತ್ತು................



(ಕವಿ..ಪ್ರವೀಣ ಗೌಡ..)




"ಅಲೆ"
ಮುತ್ತು
ಮುನಿಸು
ಮುತ್ತಿಕ್ಕಿ
ಮುನಿಸಿಕೊಂಡು
ಮತ್ತೆ ಮುತ್ತಿಕ್ಕಿ
ಮತ್ತೆ...
ಮುತ್ತಿಕ್ಕುವ ಬಾಲೆ.... !



(ಕವಿ .. ಗುಬ್ಬಚ್ಚಿ ಸತೀಶ್)




ಕನಸುಗಳ ಕಾವಲಿದ್ದ

ಮನದ ತಿಳಿಗೊಳದಲ್ಲಿ
ನನ್ನ ಬಿಂಬವ ನೋಡುತ್ತಾ ಕುಳಿತಿದ್ದೆ ..
ಯಾರೋ ಬಂದು ಇಣುಕಿ ನೋಡಿದರು..
ಪ್ರೀತಿಯ ಕಲ್ಲೆಸೆದರು..
ಭಾವನೆಗಳ ಅಲೆಯೆದ್ದಿತು..
ಕನಸುಗಳ ಗೋಪುರದೊಳಗೆ ಭಾವನೆಗಳ ಗುಸು-ಗುಸು ...
ಕಲ್ಲು ತಳ ಸೇರಿದೆ
ಅಲೆಗಳು ಶಾಂತವಾಗಿವೆ ..
ಆದರೆ ...
ನನ್ನ ಬಿಂಬ ಮಾತ್ರ ನಾಪತ್ತೆ.. !!!



(ಕವಯಿತ್ರಿ.. ಸೌಮ್ಯಾ ಭಾಗವತ್.. )




ಹರಿಯುತ್ತಿದೆ ನದಿ ನಮ್ಮಿಬ್ಬರ ನಡುವಿನಲಿ...
ನಾನೊಂದು ದಡದಲ್ಲಿ, ನೀನೊಂದು ದಡದಲಿ.....
ಕುಳಿತಿರುವ ದಡದಲ್ಲಿ ದೋಣಿಯಿಲ್ಲ....
ಕಾಡುತಿರುವ ನೆನಪುಗಳಿಗೆ ಬರವಿಲ್ಲ......

ಬಿಕ್ಕಿದ್ದು, ಅತ್ತಿದ್ದು ಯಾರೂ ಕೇಳಲಿಲ್ಲ....
ನನ್ನೆದೆಯ ಪ್ರೀತಿ ತೇರು ನೀನೂ ಎಳೆಯಲಿಲ್ಲ...
ಕರಕಲಾದ ಕಣ್ಣೀರು ಕಾಣಿಸಲೇ ಇಲ್ಲ...
ನನ್ನ ಒಬ್ಬಂಟಿ ರಾತ್ರಿ ತಿಳಿಯಲೇ ಇಲ್ಲ...

ಹರಸಿಕೊಂಡ ಹರಕೆಗಳಿಗೆ ಲೆಕ್ಕವಿರಲಿಲ್ಲ...
ಸಲ್ಲಿಸಿದ ಕಾಣಿಕೆಗೆ ರಶೀತಿಯಿರಲಿಲ್ಲ..
ಜಾರಿಹೋದ ಹನಿಗಳ ಕುರುಹೇ ಇಲ್ಲ...
ನಿನ್ನನ್ನು ಮರೆತ ನೆನಪೇ ಇಲ್ಲ...


ನಿನ್ನನ್ನೇ ನೆನಪಿಸುತ್ತೇನೆ,
ಬಿಕ್ಕಳಿಕೆಗೆ ಮಾತ್ರ ಅರ್ಥವಾಗುವವರೆಗೂ....
ಕಾಯುತ್ತೇನೆ ನಿನ್ನನ್ನೇ,
ಮೊದಲ ನಕ್ಷತ್ರದ ಬೆಳಕಿನವರೆಗೂ....

ಕೊನೆಯದಾಗಿ....
ಎಲ್ಲರ ಪ್ರೀತಿಯೂ ತೀರ ಮುಟ್ಟಿದ್ದಿದ್ದರೆ......
ತಾಜ್ ಮಹಲ್ ಹುಟ್ಟುತ್ತಿರಲಿಲ್ಲ....



(ಕವಿ... ದಿನಕರ್ ಮೊಗೆರ...)






ಕಾದು ಕುಳಿತೆ ಇನಿಯಾ...
ಇರದೆ ನಿನ್ನ ಸನಿಹ...
ಅವಕಾಶ ಸಿಕ್ಕಂತೆ ನೇಸರ ಎನ್ನ ತಬ್ಬಿ
ಮುತ್ತಿನ ಮಳೆಗರೆಯುತ್ತಿದ್ದ
ಮಾತು ಮಾತಿಗೂ ನಿನ್ನ ನೆನಪ
ಎನ್ನ ಎದೆಯೊಳಗೆ ಪಸರಿಸುತ್ತಾ...
ಆರದ ಬಿಸಿಯುಸಿರು, ಮುತ್ತಿನ ಮತ್ತು
ಕಾಡಿದೆ...ಹಂಬಲಿಸಿದೆ... ಕನವರಿಸಿದೆ....
ಆದರೆ ನಿನ್ನ ಸನಿಹವಿರಲಿಲ್ಲ...
ಕಂಡ ಕನಸ ಬರದಾಗಿಸುತ್ತಾ...
ಕೊಟ್ಟ ಮಾತ ಯಾಕೆ ಮರೆತೆ
ಗುಗುಡದಿಂದ ಯಾಕೆ ಕುಳಿತೆ...
ಹೇಳು ನನ್ನ ಇನಿಯಾ...
ಮುಸ್ಸಂಜೆ ಮಬ್ಬಿನಲಿ ಒಂಟಿ ನಾನು
ಕತ್ತಲೊಳಗೆ ಮನೆಯ ಹೊಸಿಲು
ತುಳಿಯದಿರೆ...
ಇರಿಯುವುವು... ಎದುರುಗೊಳ್ಳುವವು...
ನೂರೆಂಟು ಪ್ರಶ್ನೆಗಳು
ಮನದ ತುಮುಲ ಅರಿಯಲಾರೆಯಾ....

(ಕವಿ... ಶಶಿ  ಬೆಳ್ಳಾಯರು..)






ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನು
ನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?

ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರೇನು
ನದ ತಲ್ಲಣಗಳರಿವು ತಮಗಾಗುವುದೇನು?

ಮನದೊಳಗೆ ಕೆರೆಯ ನೀರ ಮೇಲಿನಲೆಗಳಂತೆ
ತಲ್ಲಣದ ತರಂಗಗಳು ಸದಾ ಕಾಡುತಿರುವವಂತೆ

ಬಂಧಿಸಲು ನಾವೆಷ್ಟೇ ಯತ್ನಿಸಿ ಸೋತರೇನಂತೆ
ಕಣ್ಣ ಮುಚ್ಚಾಲೆಯಾಟ ಸದಾ ಸಾಗುತಿರುವುದಂತೆ

ಜೀವನದೀ ಏರು ಪೇರುಗಳು ದಾಖಲಾಗದಿವೆಲ್ಲೂ
ನಗು ಮುಖದ ಸೋಗು ಪ್ರತಿಯೊಂದು ಚಿತ್ರದಲ್ಲೂ

ಸಂತಸವಿರಲಿ ನಮ್ಮ ಚಿತ್ರಗಳ ಕಂಡವರ ನೆನಪಲ್ಲೂ
ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ



(ಕವಿ.. ಅತ್ರಾಡಿ ಸುರೇಶ)
************************








ನೆನಪಾಗುತ್ತಿದ್ದಾನೆ 
ಅವನು 
ಎಲ್ಲಿಂದಲೋ ಹೇಗೋ ಬಂದು 
ಎದೆಯ ಕದವ 
ಮೆಲ್ಲಗೆ 
ತಟ್ಟಿದವನು ..

 ತಿಳಿಯಾದ ಮನದ ಕೊಳದೊಳಗೆ 
ಪ್ರೀತಿಯ ಕಲ್ಲೆಸೆದು 
ಮಧುರ  ಭಾವದಲೆಗಳ 
ಎಬ್ಬಿಸಿದವನು 

ಕಣ್ಣಲ್ಲಿ ಕನಸು ತುಂಬಿ 
ಹೃದಯ  ಗರಿ ಬಿಚ್ಚಿ 
ಹಾಡುತ್ತಿದ್ದಾಗಲೇ ,
ಮಾಯವಾದವನು .. 

ಮತ್ತೆ ಬರುವೆನೆಂದು 
ಮಾತು ಕೊಟ್ಟವನ
ಬರವ ಕಾಯುತ್ತಿರುವೆ 
ಸಂಜೆ ಇಳಿದು 
ಕತ್ತಲಾಗುತ್ತಿದ್ದರೂ ..

(ಕವಯಿತ್ರಿ.. ಶ್ರೀಮತಿ ಚಿತ್ರಾಂಜಲಿ ಪುಣೆ..)







बेखरारी के लम्हे और सह न पाऊं यह तन्हाई
आह्ट का कर रहा दिल इंतजार बार बार
गर्म सांसॊं कॊ फिर से परखने का मन
मचल रहा दिल - पर, उफ. यह तन्हाई

वादे तो करते हैं, और दिल जलाने वाले
बातें तो करते हैं, और वादा न निभाने वाले
इंतजार और बेताबी हॊती क्या चीज है
भला वह क्या जाने, वादा करके भुलाने वाले

बेचैन हॊ उठी है झील भी तिल मिला कर
उठा रही है हलकी सी लहरॆं गेहराई पाकर
आ भी जा मेरे दिलबर और न सता यॊं
दर्द कॊ पहचान ने वाले बेदर्दि इस कदर क्यॊं?

ಕವಿ.. ಆಜ್ಹಾದ್ ಸಾಹೇಬ್..




"ಮಗನಾಗೋ ಮುಕುಂದ"
ಮನ ಮಡಿಯಾಗಿಸಿ
ಜೇಡಿಮಣ್ಣಲಿ ನಿನ್ನ ಬಂಧಿಸಿರುವೆ, ಪೂಜಿಸಲಲ್ಲೋ
ಮುದ್ದಿಸಲು ಮಗನೆ

ನನ್ನ ಸೆರಗೆಳೆದು
ಬೆಣ್ಣೆಗಾಗಿ ಕೈ ಚಾಚಲು ಬಾರೋ
ಕಾಡಿ-ಬೇಡಿ ಹುಸಿಮುನಿಸ
ಕಣ್ಣೀರ ತರಲು ಬಾರೋ

ನಡುಮನೆಯಲ್ಲಿ ಬೆಣ್ಣೆ
ಮುಚ್ಚಿಟ್ಟಿರುವೆ, ಕದಿಯಲು
ಕಳ್ಳ ಹೆಜ್ಜೆಯಲಿ ಬಾರೋ
ಬಂದಾರು ಬಾರೋ ಹಾಲುಗೆನ್ನೆಯ ಕಂದ

ರಗಳೆಯಾಗಲಿ
ಚೆಲ್ಲಾಟವಾಗಲಿ ಏನಾದರಾಗಲಿ,
ನಿನ್ನದೇ ಗೆಲುವಾಗಲಿ ಬಾರೋ
ನನ್ನೆದೆಯಲಿ ಹಾಲ್ಗಡಲ ಜಿನುಗಿಸಲು
ಒಡಲಿಗೆ ಚಿಗುರಾಗಿ ಜಾರೋ

ಹಠ ಬಿಟ್ಟು,
ಬಾಯ್ತುಂಬ ಅಮ್ಮಾ ಎಂದು ಕರೆಯೋ
ಮಣ್ಣ ಮುಕುಂದ, ಮುದ್ದು ಮುಕುಂದ 


ಕವಿ  ಕೆ. ನಾಗರಾಜ..




पता नहि..

आ रहे हो किस रास्ते, पता नहीं.

लोग सिर्फ भगवान को केहते,

उसके आने में देर है, अंधेर नहीं.

लेकिन मे जानती हु.

तुम्हारे आने मे, तुम्हारे प्यार में

कॊई हॆर नहीं, कॊई फॆर नहीं..


मैं उसी नदी किनारे बैठी हूं.

जिसके रेत पर हम दोनों ने लिखी है

अपनी ही प्यार कि दास्ताँ.


ताजी हैं आज भी यादें हमारे प्यार की,

इस बहती नदी के पानी कि तरह..


देखि अभी मैंने तुम्हारी तसवीर,

इसी बहते पानी में, खुद कि नहीं..!

नादां हुं दर्पण और आईने क्या हैं, पता नहि..!


मुझ में तुम ऐसे बसे हो यह जानती हूं,

पर साया और परछाई का फर्क पता नहि..!


अभी अभी एक मचली ने किनारे आके मुझसे पुछा,

किसकी याद में डूबी हो ?

मैंने प्यार से उसे समझाया,

डूबी नहि- अब तक तैर रही हूं..!


तुम्हारे इन्त्जार में मुझे दॆख,

डूब रहा सूरज थम गया है. 

शायद जल भी रहा हॊ.! पता नहीं..


उफ यह बेचैनी मुझे और न सतावो

जल्दी से आवो अपनी बाहों में ले लो,

इसी सॊच में शायद तुम भी हो. 

और तुम कितने बेताब हो, पता नहीं..
ಕವಿ  ಅನಿಲ ಬೆಡಗೆ...







ಮೈಂ ಬೈಠೀ ಕಿನಾರೆ ಝೀಲ್ ಕೆ
ಕಿ ಖಾಮೋಶೀ ಭೀ ಚುಭ್ ರಹೀ ಥೀ
ಮೇರೀ ಬೇಚೈನಿ ಕೆ ಕಂಪನ್
ಹಲ್ಕೆ ಸೆ ತರಂಗ್ ಶಾಂತ್ ಸತಹ್ ಪರ್
ಪರ್ ಉಸ್ ಪರ್ ಕ್ಯೋಂ ಮೆರಾ ಗುಸ್ಸಾ?
ಮೇರಾ ತಡ್ ಪನ್ ಮೇರೀ ಬೇಚೈನೀ ಕೋ
ನಹೀಂ ಹೋರಹಾ ಸಹನ್
ಸರ್ ಪರ್ ಕಾ ಸೂರಜ್ ಸುನಹ್ರಾ ಹುವಾ
ಢಲ್ ಸುನಹ್ರೀ ಶಾಮ್ ಛಾಯೆಗಾ ಅಂಧೇರಾ
ವಾದಾ ತೊ ಕಿಯಾ ಹೈ,,ಆಯೆಗಾ ಪಿಯಾ
ಭಲೇ ಹೀ ರಾತ್ ಢಲ್ ಜಾಯ್
ಔರ್ ರ್ಕ್ಯೋಂ ನ ಹೋ...

ಯೆಗಾ ಸವೇರಾ
ಕವಿ  "ಜಲನಯನ (ಆಜಾದ್)







ನೆನಪೇ ಘಾಸಿಗೊಳಿಸದಿರು.. ಈ ಮನವನ್ನ 
ಮತ್ತೆ ಮತ್ತೆ ಬಂದು ...
ನಿನ್ನ ಮರೆಯಲೇ ಓಡುತ್ತಿರುವುದು ಬಲುದೂರ 
ಹೊಸ ಕನಸು ಹೊಸ ಆಕಾಂಕ್ಷೆ ಗಳೊಡನೆ ... 
ಆದರೂ ಮತ್ತೆ ಬಂದು ನೋಯಿಸದಿರು ,
ತಾಳಿಕೊಳ್ಳದು ಈ ಹೃದಯ ....
ಮತ್ತೆ ಮತ್ತೆ ಬರುವ ನಿನ್ನ ನೆಪುಗಳ 
ಸಾವಿರ ಹೋಳಾಗುವುದು ಖಚಿತ ..
ಏನು ಮಾಡಲಿ ಆ ಸಾವಿರ ಚೂರುಗಳು ....
ಸಾವಿರ ನೆನಪುಗಳಾಗಿ ಕಾಡಿಸಿದರೆ..???
ಎಲ್ಲಿ ಹೋಗಲಿ ನಿನ್ನಿಂದ ತಪ್ಪಿಸಿಕೊಂಡು..
ಹಕ್ಕಿಯಾಗಿ ಹಾರಿ ಹೋಗೋಣವೆಂದರೆ ,,, ಬಿರುಗಾಳಿಯಾಗಿ 
ಬಂದು ದಿಕ್ಕು ತಪ್ಪಿಸುವೆ ....
ಭೋರ್ಗರೆಯುವ ನೀರಾಗಿ ಹರಿದು ಬಿಡಲೆಂದರೆ 
ಹೆಬ್ಬಂಡೆಯಾಗಿ ತಡೆಯುವೆ ...   
ಕತ್ತಲಲಿ ಕಣ್ಣು ತಪ್ಪಿಸಿ ಹೋಗೋಣವೆಂದರೆ  
ಬೆಳದಿಂಗಳ ನೆರಳಿನಂತೆ  ಹಿಂಬಾಲಿಸುವೆ...
ಎಲ್ಲಿ ಹೋದರು ಬೆಂಬಿಡದೆ ಬರುವೆ ....ನೆರಳಾಗಿ ...
ಏಕೆಂದರೆ ನೀನು ನೆನಪಲ್ಲವೇ ?         
ಕವಿ   
ವೆಂಕಟೇಶ್ (ನನ್ನೊಳಗಿನ ಕನಸು)




 ನೀರೊಳಗರಳಿ
ನೀರ್ಕಲ್ಲ ಮೇಲೊಂದು ಕಲ್ಲುಗೊಂಬೆ
ಮೇಲಿಂದುದುರಿದ ಆ ಒಂದು ನಕ್ಷತ್ರ
ಆರಿದ್ದು ನೀರೊಳಗೆ
ಹರಿವ ನೀರೀಗ
ಹರಿಯದೇ ಹರಳು

ನಕ್ಷತ್ರ ನೀರೊಳಗಾರಿದ ನೆನಪು
ನೀರೊಳಗರಳಿ
ಹರಿದಷ್ಟಕ್ಕೂ
ನೆನಪೀಗ ನುಣುಪು
ಹರಿದಷ್ಟಕ್ಕೂ ಹೊಳಪು ನೆನಪ ಕಲ್ಲಿನದು
ಕಲ್ಲಗೊಂಬೆಯದು
ನಿರ್ಭಾವಜೀವ ಕಲ್ಲುಗೊಂಬೆಯದು

ಪಾದದಡಿಯಲಿ ಕಳಚಿಬಿದ್ದ ಕಲ್ಲುಗೆಜ್ಜೆ
ಕೈಯೊಳಗಿರದ ಜೀವವೀಣೆ
ಎಲ್ಲವೂ ಹೊಸತು
ಮೊದಲ ಮುತ್ತಿಗೂ
ಮಿಗಿಲಾದ ಮೊದಲ ಕಾಣಿಕೆ
ಕಳೆದುಹೋಗಿದೆ ಕಲೆತು
ನಿಂತ ನೀರೊಳಗೆ

ಕೆಂಗೆಟ್ಟ ಕನಸು ಉರಿದುರಿದು
ಕಳೆದ ಕ್ಷಣದ ಮರೆಯ ಸ್ತಬ್ಧ
ಭಾವ ನೀರವ ನಿಶ್ಶಬ್ಧ
ಮಬ್ಬು ಮಂಪರಿನ ಮನೆ ಸುತ್ತ
ನೀ ಬರುವ ಈ ಕ್ಷಣಕ್ಕೆ

ಮತ್ತೆ ಬರಬೇಡ
ಎಬ್ಬಿಸದಿರು
ನಿಂತ ನೀರಲೆಗಳನ್ನು
ದೂರ ನಿಲ್ಲು ಮತ್ತೆ
ಹುಡುಕುತ್ತಿದ್ದೇನೆ
ನೀರೊಳಗೆ ಬಿದ್ದ
ಆ ನಕ್ಷತ್ರವನ್ನು
ದೂರವೇ ನಿಲ್ಲು ಮತ್ತೆ
ಇರಲಿಬಿಡು ಆ ಕಾಲ್ಗೆಜ್ಜೆ
ಅಲ್ಲಿಯೇ ಹರಿದು ಚೆಲ್ಲಿ
ಮತ್ತೆ ಪೋಣಿಸಿ
ತೊಡಿಸಿದೆಯೋ ಜೋಕೆ!



ಕವಯಿತ್ರಿ  ಶಾಂತಲಾ ಭಂಡಿ 
(ನೆನಪು ಕನಸುಗಳ ನಡುವೆ)





(ಗೆಳೆಯರೇ.. 
ಇನ್ನೂ ಫೋಟೋಗಳಿವೆ...
ನೀವು ಬರೆದಷ್ಟು ಕವನಗಳಿಗೆ ....
ನೀವು ಬರೆಯುವ ..ಸಾಲುಗಳಿಗೆ...
ನೀವು ಇಲ್ಲಿರುವ ಫೋಟೋಗಳಿಗೆ  ಸಂಬಂಧಿಸಿದಂತೆ ..  
ಕವಿತೆಗಳನ್ನು.. ಸುಂದರ ಸಾಲುಗಳನ್ನು ಬರೆದರೆ ಈ ಚಿತ್ರ ಲೇಖನದಲ್ಲಿ ಹಾಕುವೆ..
ಹೊಸ ಫೋಟೋ ಸಂಗಡ..!)


(  ನನ್ನ ಫೋಟೋಗ್ರಫಿ ಸುಧಾರಿಸಲು ಪ್ರಯತ್ನಿಸುತ್ತಿರುವವರು 
ಶ್ರೀ. ದಿಗ್ವಾಸ್ ಹೆಗಡೆ.. 
ಇಲ್ಲಿರುವ ಫೋಟೋಗಳು ಚಂದವಾಗಿದ್ದರೆ.. ಅದಕ್ಕೆ ದಿಗ್ವಾಸ್ ಕಾರಣ..
ತಪ್ಪು ಕಂಡು ಬಂದಲ್ಲಿ.. ನಾನೇ.. ಕಾರಣ...)