Friday, June 13, 2014

ಮಥನ

ಬಹಳಷ್ಟು ಬಾರಿ ...
ನನ್ನನ್ನೇ ನಾನು ಕೇಳಿಕೊಂಡಿದ್ದಿದೆ.... 

"ನನ್ನ
ಬದುಕಿನಲ್ಲೇ ಯಾಕೆ ಹೀಗಾಗುತ್ತದೆ ?.."

ಇದೀಗ
ಅವನಿಂದ ಸಂದೇಶ ಬಂದಿದೆ....

"ಇಂದು ರಾತ್ರಿ ನನ್ನ ಬಳಿ ಬಾ...."

ಮೊದಲ ಬಾರಿ 
ನಾನಾಗಿಯೇ ಅವನ ಬಳಿ ಅನಿವಾರ್ಯವಾಗಿ ಹೋಗಿದ್ದೆ...

ಆದರೆ ಈಗ ಹಾಗಲ್ಲವಲ್ಲ...

ಅವನಿಗಾಗಿ
ಬಯಸಿ...
ಎದೆಯಲ್ಲಿ ಪ್ರೀತಿಯ ಹೂ ಹೊತ್ತು ಹೋಗುತ್ತಿರುವೆ....

ನಾನು "ತಾರೆ..."
ಕಿಷ್ಕೆಂದೆಯ ವಾಲಿಯ ಮಡದಿಯಾಗಿದ್ದವಳು...

ವಾಲಿ 
ನಿಮಗೆಲ್ಲ ಗೊತ್ತಲ್ಲ...
ಮಹಾ ಶಕ್ತಿಶಾಲಿ....

ಹಿಂದೆ
ಸಮುದ್ರ ಮಥನವಾಗುತ್ತಿದ್ದಾಗ ಅಲ್ಲಿ ಬಂದಿದ್ದ...

ರಾಕ್ಷಸರೂ..
ದೇವತೆಗಳು ಸಮುದ್ರ ಮಥನ ಮಾಡುತ್ತಿದ್ದಾಗ ಅವರಿಗೆ ದಣಿವಾಗಿದ್ದಾಗ
ವಾಲಿ ಅಲ್ಲಿದ್ದನಂತೆ..

ತಾನೊಬ್ಬನೇ 
ವಾಸುಕಿಯನ್ನು ಎರಡೂ ಕಡೆ ಎಳೆದು...
ಕಡೆದು 
ಮಥನ ಮಾಡಿದ್ದನಂತೆ..

ಅಂಥಹ " ಮಥನದ "  ಸಂದರ್ಭದಲ್ಲಿ ನಾನು ಹುಟ್ಟಿದ್ದು....

ಆಗ... 
ಅಲ್ಲಿರುವ ರಾಕ್ಷಸರು... 
ದೇವತೆಗಳು 
ನನ್ನನ್ನು ಆಸೆಯಿಂದ ನೋಡುವಂಥಹ ಸಂದರ್ಭದಲ್ಲಿ... 

ವಾಲಿ  ನನ್ನನ್ನು ಕಂಡು ...
ಮೋಹಿತನಾಗಿ...
ಎಲ್ಲ ದೇವತೆಗಳ ಸಮ್ಮುಖದಲ್ಲಿ ಬಹಳ ಸೊಕ್ಕಿನಿಂದ ಹೇಳಿದ್ದ...

"ಇವಳು ನನ್ನವಳು....
ಇವಳನ್ನು ನಾನು ಮದುವೆಯಾಗುತ್ತೇನೆ..."

ಅಲ್ಲಿದ್ದ 
ಯಾವ ರಾಕ್ಷರೂ..
ದೇವತೆಗಳೂ ತುಟಿ ಬಿಚ್ಚಲಿಲ್ಲವಾಗಿತ್ತು...

ಜವಬ್ದಾರಿ...
ಪರಿಶ್ರಮದ.. ಕೆಲಸ ..
ತಾಕತ್ತು...
ಅಧಿಕಾರವನ್ನು ಸಹಜವಾಗಿ ಕೊಡುತ್ತವೆ....

ನಾನು ಹೆಣ್ಣಲ್ಲವೆ... ?
ನನ್ನ
ಇಷ್ಟ.. ಕಷ್ಟಗಳನ್ನು ಯಾರೂ ಅಲ್ಲಿ ಕೇಳಲೇ ಇಲ್ಲ..... !

ಶಕ್ತಿಯ ಮೇಲೆ ... 
ಸೊಕ್ಕಿರುವ  ಗಂಡಸು 
ಹೆಣ್ಣನ್ನು... 
ಪ್ರಕೃತಿಯನ್ನು ಪ್ರೀತಿಸಲಾರ... 

ಅಧಿಕಾರದ ದರ್ಪವನ್ನು ಮಾತ್ರ ತೋರಿಸಬಲ್ಲ... 

ನಾನು ವಾಲಿಯ ಮಡದಿಯಾದೆ....
ಕಿಷ್ಕಿಂದೆಯ
ಪಟ್ಟದ ರಾಣಿಯಾದೆ...

ಮುಂದಿನ ವಿಷಯ ನಿಮಗೆ ಗೊತ್ತಲ್ಲ...

ವಾಲಿ
ಸುಗ್ರೀವರಿಬ್ಬರೂ ಮಾಯಾವಿ ರಾಕ್ಷನನ್ನು ಕೊಲ್ಲಲು ಹೋಗಿದ್ದು...

ವಾಲಿ ಮಾಯಾವಿ ರಾಕ್ಷಸನಿಂದ ಸತ್ತು ಹೋದ ಅಂತ ಸುಗ್ರೀವ ವಾಪಸ್ಸು ಬಂದಿದ್ದು...


ಸುಗ್ರೀವ ರಾಜಾನಾದದ್ದು..


ನಾನು 
ಅವನ ಸಿಂಹಾಸನದ ಪಕ್ಕದಲ್ಲಿ ಹೋಗಿ ಕುಳಿತದ್ದು...

ಕೆಲವು ದಿನಗಳ ನಂತರ ವಾಲಿ ಬಂದು 
ಸುಗ್ರೀವನಿಗೆ ಚೆನ್ನಾಗಿ ಹೊಡೆದು..
ಬಡಿದು ಕಾಡಿಗೆ ಅಟ್ಟಿದ್ದು...

ಸುಗ್ರೀವನ ಹೆಂಡತಿ "ರುಮೆಯನ್ನು" ತಾನು ಇಟ್ಟುಕೊಂಡಿದ್ದು...


ಶ್ರೀರಾಮ ಬಂದು..

ಮರೆಯಿಂದ ಬಾಣ ಹೊಡೆದು ವಾಲಿಯನ್ನು ಸಾಯಿಸಿದ್ದು....

ಇದು
ನಿನ್ನೆಯವರೆಗಿನ ಕಥೆ....

ಇಂದು
ಮತ್ತೆ ಸುಗ್ರೀವನಿಗೆ ಪಟ್ಟಾಭಿಷೇಕ..!

ವಾಲಿ
ಸತ್ತಿದ್ದಾನೆಂದು ದುಃಖಪಡಬೇಕೊ..?

ಸುಗ್ರೀವ ಮತ್ತೆ ಬಂದಿದ್ದಾನೆಂದು ಖುಷಿಪಡಬೇಕೊ ...!


ನನ್ನ
ಅಂತರಂಗವನ್ನು..
ನನ್ನ ಭಾವನೆಯನ್ನು ಕೇಳುವರ್ಯಾರು ?

ಈ ಗಂಡಸರಿಗೆ ನಾಚಿಕೆ ಇಲ್ಲ....

ಶಾಸ್ತ್ರ ಸಮ್ಮತವಾಗಿ..
ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾದ ರುಮೆಯನ್ನು ಬಿಟ್ಟು...
ನನಗೆ ಬಾ ಎಂದಿದ್ದಾನೆ...

ನನ್ನ
ಮೊದಲ ಮದುವೆಯಲ್ಲೂ ಇಷ್ಟು ಸಂಭ್ರಮ ನನಗಾಗಿರಲಿಲ್ಲ...

ಸುಗ್ರೀವನ 
ಅಂತಃಪುರದ ಬಾಗಿಲು ತೆರೆದು ಒಳಗೆ ಪ್ರವೇಶಿಸುವಾಗ
ನನ್ನ ಕೈಯೆಲ್ಲ ಬೆವರಿತ್ತು....

ಈ ಸುಗ್ರೀವ ನನಗೆ ಹೊಸಬನೇನಲ್ಲ....

ಆದರೆ

ಇಂಥಹ ... 
ಪ್ರತಿಬಾರಿಯ ಸಂದರ್ಭ ಹಾಗಾಗಿಬಿಡುತ್ತದೆ... .... 

ಅಗಲಿಕೆ ಇದೆಯಲ್ಲ...
ಬಾಂಧವ್ಯವನ್ನು..
ಸಂಬಂಧದ ಬೆಸುಗೆಯನ್ನು ಬಲವಾಗಿ ಹೊಸೆದುಬಿಡುತ್ತದೆ...

ಇಷ್ಟು ದಿನ
ವಾಲಿಯಬಳಿ ನರಳುವಾಗ ಸುಗ್ರೀವ ನೆನಪಾಗುತ್ತಿದ್ದ...

ಈಗ ಮತ್ತೆ ಸುಗ್ರೀವ ಸಿಕ್ಕಿದಾನೆ..

ವಾಲಿಯ ಯಾವುದೇ ಆತಂಕವಿಲ್ಲದೆ....

ಸುಗ್ರೀವ ನನ್ನ ಕೈ ಹಿಡಿದು ಪಕ್ಕಕ್ಕೆ ಕುಳ್ಳಿರಿಸಿಕೊಂಡಾಗ ಮೈ ಜುಮ್ಮೆನ್ನುತ್ತಿತ್ತು....

ಸುಗ್ರೀವ ಯಾವಗಲೂ ಹಾಗೆ....

ಹೂವಿನಂಥವನು...

"ತಾರೆ...
ನನ್ನದು ಒಂದಷ್ಟು ಪ್ರಶ್ನೆಗಳಿವೆ...."

"ಇದೆನು ?
ಕೂಡುವಾಗ.. ಪ್ರಶ್ನೆಗಳೆ ?

ಸುಗ್ರೀವ ನನ್ನನ್ನೇ ದಿಟ್ಟಿಸುತ್ತಿದ್ದ...

"ಪ್ರಶ್ನೆಗಳು ... 
ಇರುವದಕ್ಕಾಗಿಯೆ 
ಕೂಡುವದು..
ಕಳೆಯುವದು ಹುಟ್ಟಿಕೊಂಡಿದೆ..."

ಇವ ಸೊಗಸಾದ ಮಾತುಗಾರ...
ನಾನು ನಕ್ಕುಬಿಟ್ಟೆ.... 

" ಇರು ಮಾರಾಯಾ...
ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡು..."

ಸುಗ್ರೀವ
ತನ್ನ ಬೆರಳುಗಳುಗಳಿಂದ ನನ್ನ ಕಿವಿ ಬಳಿ ಕಚಗುಳಿ ಇಡುತ್ತಿದ್ದ...
ನನ್ನನ್ನು ಬಳಸಿ ಕೇಳಿದ.... 

"ಏನು ...?"

"ಅಣ್ಣನ ಮಡದಿಯಾಗಿದ್ದಾಗ ... 
ನೀನು 
ನನ್ನ ಕಾಲುಂಗುರ ನೋಡುತ್ತಿದ್ದೆ.....

ಈಗ 
ನನ್ನೆದೆಯ  ಬಂಗಾರದ ಸರಗಳನ್ನು ಕಣ್ಣ್ಮುಚ್ಚದೆ ನೋಡುತ್ತೀಯಾ... 
ಸೊಂಟದ ಪಟ್ಟಿಗೆ ಕೈ ಹಾಕುತ್ತೀಯಾ.. ?

ಏನಿದು

ಸಂಬಂಧ... ಬಾಂಧವ್ಯಗಳ ಅರ್ಥ ?

ದೇಹ.. ಮನಸ್ಸು.. 
ಬಯಕೆ ... 
ಆಸೆಗಳು ... 
ಸಂಬಂಧ...   ಇವುಗಳ ನಡುವಿನ ಪರಿಧಿ  ಏನು   ?  "

ಸುಗ್ರೀವ ತನ್ನ ಕೈ ಸಡಿಲಿಸಿದ... 
ದೂರ ಕುಳಿತ...

ಸ್ವಲ್ಪ ಹೊತ್ತು ಸುಮ್ಮನಿದ್ದ...

"ದೇಹವಾಗಲಿ.. 
ಮನಸ್ಸಾಗಲಿ .... 
ಸಿಕ್ಕಿದ "ಸಂದರ್ಭವನ್ನು" ಬೇಡವೆನ್ನುವದಿಲ್ಲ..   

ದೇಹ... 
ಮನಸ್ಸು... ಆಸೆಗಳಿಗಾಗಿಯೇ ಹಂಬಲಿಸುತ್ತವೆ... 
ಬದುಕುತ್ತವೆ.... 

ಬೇಡವೆನ್ನುವದು ಶಿಷ್ಟಾಚಾರ... 

ಸರಿ... ತಪ್ಪುಗಳು  .. ಮನಃಸಾಕ್ಷಿಗೆ ಬಿಟ್ಟಿದ್ದು.... 

ನಮ್ಮ 
ಈ ವರ್ತಮಾನದಲ್ಲಿ "ವಿಧವೆ" ... 
ಅತ್ತಿಗೆಗೆ ಬಾಳು ಕೊಡುವದು ತಪ್ಪಲ್ಲ...

ಅದು ಶಾಸ್ತ್ರ ಸಮ್ಮತ...


ಈಗ.... 

ನಿನ್ನ ಅಂತರಂಗವನ್ನು ಕೇಳಿಕೊ...

ಅಂದು

ಸಿಂಹಾಸನದಲ್ಲಿ 
ನಾನು ನನ್ನ ಮಡದಿ 
ರುಮೆಯೊಡನೆ ಕುಳಿತಿರುವಾಗ
ಮೊದಲಿಗೆ ನೀನಾಗಿಯೆ ಬಂದು ಕುಳಿತುಕೊಂಡೆ...

ನಾನು ಕರೆದಿರಲಿಲ್ಲ...


ಆಗ ನಿನಗೇನು ಅನ್ನಿಸಲಿಲ್ಲವಾ?


ಮೈದುನ.. 

ಅತ್ತಿಗೆ .. ಸಂಬಂಧ ಅಂತ..?... "

ನಾನು ಸಣ್ಣದಾಗಿ ಬೆವರುತ್ತಿದ್ದೆ... 

ನನ್ನ 
ಧ್ವನಿ ಕಂಪಿಸುತ್ತಿತ್ತು.... 


"ಅಂದು ..... 
ನಾನು ಹೆಣ್ಣಾಗಿ ನಿನ್ನ ಬಳಿ ಬರಲಿಲ್ಲ..

ನನ್ನ ಮಗ "ಅಂಗದನ" ಭವಿಷ್ಯಕ್ಕಾಗಿ..

ಒಬ್ಬ ತಾಯಿಯಾಗಿ ಬಂದೆ...

ಒಂದು 

ಹೆಣ್ಣಿಗೆ ಹಿಂದೆ ಮುಂದೆ ಯೋಚಿಸಬೇಕಾಗುತ್ತದೆ ..

ಒಬ್ಬ  ತಾಯಿಗೆ... 
ಮಗ ಮತ್ತು ಅವನ ಭವಿಷ್ಯ ಮಾತ್ರ ಕಾಣುತ್ತದೆ.."

ಸುಗ್ರೀವ  ಪಕ ಪಕನೆ ನಗುತ್ತಿದ್ದ....
ಮತ್ತೆ ಹತ್ತಿರ ಬಂದ....

"ತಾರೆ...
"ಮೈದುನ" ಎನ್ನುವ ಶಬ್ಧ ..... 

"ಮೈಥುನ"ದಿಂದ ಹುಟ್ಟಿರಬಹುದಾ ?"

ನನಗೆ ನಾಚಿಕೆಯಾಯಿತು....
ಸುಗ್ರೀವನನ್ನು ತಬ್ಬಿಕೊಂಡೆ...

ತನ್ನದಲ್ಲದ್ದು..
ಇದೀಗ ತನ್ನದ್ದಾಗಿದೆ....

ಮೈ ಹಿತವಾಗಿ ಕಂಪಿಸುತ್ತಿತ್ತು... ಕಣ್ಮುಚ್ಚಿದೆ..


ಸುಗ್ರೀವ ಮೆಲ್ಲಗೆ ಕಣ್ಣು ಬಿಡಿಸಿದ...


"ಈಗ ಹೇಳು...
ನನ್ನಣ್ಣ ಜಗಜಟ್ಟಿ...
ಅವನನ್ನು ಸೋಲಿಸಲು ದೇವತೆಗಳಿಂದಲೂ ಸಾಧ್ಯವಿಲ್ಲವಾಗಿತ್ತು...

ನಾನು ತೀರಾ ಸಾಮಾನ್ಯದವ..


ನನಗೂ..

ವಾಲಿಗೂ ಹೇಗೆ ಹೋಲಿಕೆ ? 
ಏನನ್ನಿಸುತ್ತದೆ ?.."

ನನಗೆ ಕೋಪವುಕ್ಕಿತು.. ಸುಗ್ರೀವನನ್ನು ದೂಡಿದೆ...

"ರುಮೇಯನ್ನೂ..
ನನ್ನನ್ನೂ ನೋಡಿದ್ದೀಯಾ... ನಿನಗೇನನ್ನಿಸುತ್ತದೆ ?

ಇಂದು 

ರುಮೆಯನ್ನು ಬಿಟ್ಟು ನನ್ನನ್ನು ಕರೆದಿದ್ದೀಯಾ ? 

ಯಾಕೆ ? "

ಸುಗ್ರೀವ ಮತ್ತೂ ಬಿಗಿಯಾಗಿ ತಬ್ಬಿಕೊಂಡ...
ಕಿವಿಯಲ್ಲಿ ಉಸುರಿದ..

"ಅಕ್ರಮವಾಗಿ 
ಸಿಗುವದು ರೋಮಾಂಚಕಾರಿಯಾಗಿರುತ್ತದೆ..

ಈಗ ನೀನು ಹೇಳು ... 

ನನ್ನಣ್ಣನ ತಾಕತ್ತಿನ ನಿನ್ನ ಅನುಭವ..."

ಈಗ ನಾಚಿಕೆಯಾಗಲಿಲ್ಲ... 

ಆದರೆ 
ಸುಗ್ರೀವನ ಮುಖ ನೋಡಲಾಗಲಿಲ್ಲ... 

"ಸುಗ್ರೀವಾ... 
ನಿನ್ನ ಅಣ್ಣನಿಗೆ ಒಂದು ವರವಿತ್ತು ಗೊತ್ತಿದೆಯಲ್ಲ ?

ಆತ 

ಯಾರ ಸಂಗಡ ಕುಸ್ತಿಯನ್ನಾಗಲಿ..
ಯುದ್ಧವನ್ನಾಗಲಿ ಮಾಡುವಾಗ..
ಎದುರಾಳಿಯ ಅರ್ಧ ಬಲ ಅವನಿಗೆ ಸಿಗುತ್ತಿತ್ತು...

ಅವನನ್ನು ಸೋಲಿಸಲು 

ಯಾರಿಂದಲೂ ಸಾಧ್ಯವಿರುತ್ತಿರಲಿಲ್ಲ... ..."

ಸುಗ್ರೀವ ಹುಬ್ಬೇರಿಸಿದ

"ಏನು ಇದರ ಅರ್ಥ ?"

"ನಿನ್ನಣ್ಣ...
ಮಡದಿಯೊಡನೆಯ ದಾಂಪತ್ಯ ಪ್ರೀತಿಯನ್ನೂ ..
ಕುಸ್ತಿ.. 
ಹೊಡದಾಟ ಅಂತಲೇ ತಿಳಿದುಕೊಂಡಿದ್ದ...

ನನಗೆ  ಪ್ರತಿ ದಿನ ರಾತ್ರಿ ... 
ಕುಸ್ತಿಯಾಡಿ ಸೋತ ಅನುಭವ...
ಮೈಕೈ ನೋವು.... "

ಸುಗ್ರೀವ ನನ್ನ ಕಣ್ಣುಗಳನ್ನೇ ದಿಟ್ಟಿಸಿದ..

"ದಾಂಪತ್ಯಕ್ಕೆ ಶಕ್ತಿ ಬೇಕಿಲ್ಲವೆ ?..."

ನನಗೆ ನಗು ತಡೆಯಲಾಗಲಿಲ್ಲ...

ಕಣ್ಮುಚ್ಚಿ ನಕ್ಕು ಬಿಟ್ಟೆ...


"ಸುಗ್ರೀವಾ...

ಹೂ ಅರಳಲು... 

ಯಾವುದೇ ತಾಕತ್ತು ಬೇಕಿಲ್ಲ...

ಸೂರ್ಯನ

ಮೃದು ಕಿರಣ .... 
ಹಿತವಾಗಿ ಚುಂಬಿಸಿದರೆ ಸಾಕು...

ಹೂ ಅರಳಿ ನಕ್ಕು ಬಿಡುತ್ತದೆ...."


ಸುಗ್ರೀವ
ಕೆಲ ಹೊತ್ತು ಮೌನವಾದ....

ಕಿವಿಯಲ್ಲಿ ಪಿಸುಗುಟ್ಟಿದ...

"ಪಾಪ !
ನನ್ನ ರುಮೆ...

ಅವಳು ನಿನ್ನಷ್ಟು ಬಲಶಾಲಿಯಲ್ಲ...


ಹೂವಿನಂತವಳು... "

ನಾನು ತಡಮಾಡಲಿಲ್ಲ...

ನಮ್ಮಿಬ್ಬರ ಏಕಾಂತದಲ್ಲಿ ಮಾತಿನದೇನು ಗಲಾಟೆ ?


ಮೆಲ್ಲಗೆ  
ದೀಪವಾರಿಸಿದೆ...


(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ...)