Wednesday, February 27, 2013

ನಿರ್ಗಮನ...


ಮೈ.. ಕೈ ನೋವು ಜಾಸ್ತಿಯಾಗಿತ್ತು.... 
ಅತ್ತಿತ್ತ ಹೊರಳಾಡಿದೆ.... 

ನನ್ನ .. 

ನೋವಿನಲ್ಲೂ  ರಾಧೆಯ ನೆನಪು ಸಿಹಿ.. ಸವಿ .... !

ನನ್ನ ರಾಧೆ ಇದ್ದಾಳಲ್ಲ...

ಅವಳೊಂದು ವಿಚಿತ್ರ...

"ಕೃಷ್ಣಾ...

ನನಗಾಗಿ ಕೊಳಲ ನುಡಿಸು...."

ಕೊಳಲೆಂದರೆ ನನಗೆ ಪಂಚ ಪ್ರಾಣ... ...

ನಾನು ಹೇಳಲಾಗದ ಭಾವಗಳಿಗೊಂದು ಅದು ಧ್ವನಿ... !

ಕಣ್ಮುಚ್ಚಿ..

ತನ್ಮಯನಾಗಿ ನುಡಿಸುತ್ತಿದ್ದೆ...

ಗಿರಿ 

ಪರ್ವತಗಳನ್ನೇರಿ... 
ಆಕಾಶದಲ್ಲಿ.. 
ಮೋಡಗಳ ಜೊತೆಯಾಗಿ....  ತೇಲಿ... ತೇಲಿಹೋಗುತ್ತಿದ್ದೆ.... 

"ನನ್ನ ಮುದ್ದು ಕೃಷ್ಣಾ..

ನಿನ್ನ ಮುದ್ದಾದ ತುಟಿಗಳು ನನಗೆ ಮಾತ್ರ ಬೇಕು...

ಬಾ..

ನನ್ನ ಅಧರಗಳಲ್ಲಿ .. 
ನಿನ್ನ ಕೊಳಲ ನುಡಿ ನುಡಿಸು....

ನಿನ್ನಿಷ್ಟದ ರಾಗ ನುಡಿಸು ಬಾ..."


ಹುಚ್ಚು ರಾಧೆ... !! 

ನನಗೆ ನಗು ಬಂತು... ನಕ್ಕೆ...

" ನಗಬೇಡ ಶ್ಯಾಮಾ....


ನಾನು ಎದುರಿಗಿದ್ದರೂ...

ನನ್ನನ್ನು  ಬಿಟ್ಟು .. 
ಕಣ್ಮುಚ್ಚಿ ಈ ಕೊಳಲಿಗೆ ತುಟಿ ಹಚ್ಚಿ ಅನುಭವಿಸುವೆಯಲ್ಲ...
ಅದು ಹೇಗೊ ??.... 

ನನ್ನಲ್ಲಿ ಇಲ್ಲದ್ದು ಈ ಕೊಳಲಲ್ಲಿ ಏನಿದೆ ಶ್ಯಾಮಾ  ? "


ನಾನು ರಾಧೆಗೆ ಕೊಳಲು ಕೊಟ್ಟೆ...


"ನೀನೇ ನೋಡು... 

ಏನಿದೆ ಅಂತ..."

ರಾಧೆ ಕೊಳಲ ಒಳಗೆ ಇಣುಕಿ ನೋಡಿದಳು..


" ಇದರಲ್ಲಿ ಏನೂ ಇಲ್ಲ .. 

ನನ್ನ ಶ್ಯಾಮಾ...."

"ಈ ಕೊಳಲು ...

ನನ್ನ ಬಳಿ ಬಂದಾಗ .. 
ಏನನ್ನೂ  ಬಯಸದೆ ಬರುತ್ತಾಳೆ...

ನನ್ನ ಅಧರ ಸೋಕಿದಾಗಲೂ ... 

ಏನನ್ನೂ ಬೇಡುವದಿಲ್ಲ....
ಬಯಸುವದಿಲ್ಲ... 

ನೀನು  ಹಾಗಲ್ಲ.... "


ರಾಧೆ ನನ್ನ ಬಾಯಿ ಮುಚ್ಚಿದಳು....

ಬಿಗಿಯಾಗಿ ಅಪ್ಪಿದಳು...

"ಶ್ಯಾಮಾ....

ನನ್ನ ಮುಂದೆ ಯಾರನ್ನೂ ಹೊಗಳಬೇಡ..
ಈ ಕೊಳಲನ್ನೂ ಸಹ....

ನನ್ನ ಮುದ್ದು ಶ್ಯಾಮ ನನ್ನವನು .. 

ನನಗೆ ಮಾತ್ರ ಬೇಕು.... "... 

ಪ್ರೇಮವಿದ್ದಲ್ಲಿ ಅಧಿಕಾರವಿರಲೇ.... ಬೇಕಾ ?


ನನ್ನ .. 

ಏಕಾಂತದಲ್ಲೂ ಕಾಡುವಳು ಈ ರಾಧೆ....!

ರಾಧೆಯ ಹುಚ್ಚು ಪ್ರೇಮ ನನಗೂ ಇಷ್ಟ...


ಅತ್ತಿತ್ತ ಹೊರಳಾಡಿದೆ...

ಮೈ ಕೈ ನೋಯುತ್ತಿತ್ತು...

ನಿನ್ನೆ ಕಂಸ ಕಳುಹಿಸಿದ ರಾಕ್ಷಸನೊಡನೆ ಹೋರಾಡಿ ಸಾಯಿಸಿದ್ದೆ...


ಅಷ್ಟರಲ್ಲಿ ಬಾಗಿಲು ಕಿರ್ರ್.. ಶಬ್ಧ...


"ಕೃಷ್ಣಾ..."


" ಯಾರದು...?"


"ನಾನೊಬ್ಬ ಗೋಪಾಲಕ..

ನಂದ ಪ್ರಭುಗಳು ಕಳುಹಿಸಿದ್ದಾರೆ...
ನಿನ್ನ  ಸೇವೆ ಮಾಡಲಿಕ್ಕೆ..."

ನಾನು ಪ್ರಶ್ನಾರ್ಥಕವಾಗಿ ನೋಡಿದೆ...


"ಕೃಷ್ಣಾ...

ನಾನು ಚೆನ್ನಾಗಿ ತೈಲ ಸ್ನಾನ ಮಾಡಿಸುವೆ...
ಗೋಕುಲದಲ್ಲೇ ಪ್ರಸಿದ್ದ..."

ಆತ ... 

ತಾನು ತಂದಿದ್ದ ತೈಲವನ್ನು ಕೈಗೆ ಹಾಕಿಕೊಂಡು ಕಾಲುಗಳಿಗೆ ಸವರತೊಡಗಿದ.....

ನನಗೆ ಹಿತವಾಗುತ್ತಿತ್ತು...


"ನಾನು ನಿನ್ನ ಭಕ್ತ ...

ಕೃಷ್ಣಾ.....
ನಿನ್ನನ್ನು ಹತ್ತಿರದಿಂದ ನೋಡಬೇಕು... 
ಮಾತನಾಡಿಸಬೇಕು ...
ಎನ್ನುವದು ನನ್ನ ಬಹುದಿನಗಳ ಹಂಬಲ.. "

ಆತನ 

ನಡೆ..ನುಡಿಯಲ್ಲಿ  ಭಕ್ತಿ ಗೊತ್ತಾಗುತ್ತಿತ್ತು...

ಆತ ಮೃದು ಹೂವನ್ನು ಮುಟ್ಟುವಂತೆ ನನ್ನನ್ನು ಸ್ಪರ್ಷಿಸುತ್ತಿದ್ದ....


ಆತ ...

ಸಣ್ಣ ಧ್ವನಿಯಲ್ಲಿ ಮಾತನಾಡುತ್ತ ತೈಲ ಹಚ್ಚುವದನ್ನು ಮುಗಿಸಿ...
ಹಿತವಾಗಿ ಸ್ನಾನ ಮಾಡಿಸಿದ...

ಓಡೋಡಿ ಹೋಗಿ ಧೂಪವನ್ನು ತಂದ....


"ಕೃಷ್ಣಾ...

ನನ್ನ ಮನೆಯವರೆಲ್ಲ ನಿನ್ನ ಭಕ್ತರು...

ನನ್ನ ಮಡದಿಯಂತೂ ನಿನ್ನ ಹೆಸರಿನಲ್ಲೇ  .. 

ಊಟ...
ನಿನ್ನ ಹೆಸರಲ್ಲೇ ದಿನ ... 
ಬೆಳಗು ... ರಾತ್ರಿ.... ನಿನ್ನದೇ ಧ್ಯಾನ... !

ಅವಳ ಮನದಲ್ಲಿ .. ನೀನಿಲ್ಲದ ಕ್ಷಣವಿಲ್ಲ...


ಪ್ರತಿ ಕ್ಷಣ ನಿನ್ನದೇ ಭಜನೆ...."


" ಹೌದಾ.. !

ಯಾರವಳು....? "

"ರಾಧೆ....."


"ಯಾವ ರಾಧೆ.... ?"


"ಯಶೋಧೆಯಮ್ಮನ ಕಣ್ಣು ತಪ್ಪಿಸಿ...

ನಿನಗೆ .. 
ನಿತ್ಯ ಬೆಣ್ಣೆ ಕೊಡುವಳಲ್ಲ...ಆ  ರಾಧೆ...!

ನಮ್ಮ ಗೋಕುಲದಲ್ಲಿ ಒಬ್ಬಳೇ ರಾಧೆ...."...


ಸಾವಿರ ಭರ್ಚಿಗಳಿಂದ ಚುಚ್ಚಿದಂತೆ ಭಾಸವಾಯಿತು...!


ಹೇಳಲಾಗದ .. 

ಅಪರಾಧಿ ಮನೋಭಾವ ನನ್ನೊಳಗೆ......

"ಕೃಷ್ಣಾ...


ಪಾದಗಳನ್ನೊಮ್ಮೆ ಇತ್ತ ಕೊಡು...

ಮೃದುವಾಗಿ ಒತ್ತುವೆ...
ಆಯಾಸ ಕಡಿಮೆಯಾಗುತ್ತದೆ...."

"ಬೇಡ.. ಬೇಡ.. ಸಾಕು...

ನನಗೆ ನಿದ್ದೆ ಬರುತ್ತಿದೆ..
ಸ್ವಲ್ಪ ಹೊತ್ತು ನಿದ್ರಿಸುವೆ..."

"ಕೃಷ್ಣಾ...

ನೀನು ನಿದ್ರಿಸು...

ನನ್ನ ಮಡದಿ ಹೇಳುತ್ತಿರುತ್ತಾಳೆ...


" ಮಲಗಿದ ಕೃಷ್ಣನ ಮುಖ ಇನ್ನೂ ಮುದ್ದಾಗಿರುತ್ತದೆ..."


ನಾನು ಇಲ್ಲೇ ಗಾಳಿಬೀಸುತ್ತ ಇರುವೆ..."


ಮುಗ್ಧ ಭಕ್ತಿ... 

ಉತ್ಕಟ ಪ್ರೇಮ ...
ಎರಡನ್ನೂ ಹೇಗೆ ನಿಭಾಯಿಸಲಿ ?.. 

ನನಗೆ ನಾನು ಹೇಗೆ ಉತ್ತರಿಸಲಿ ?


ವಾತಾವರಣ .. 

ಬದಲಾಗಲು ಕೆಲವು ಶಬ್ಧಗಳು..
ಮಾತುಗಳು ಸಾಕು....

"ಬೇಡ...

ನನಗೆ ಏಕಾಂತ ಬೇಕು....
ದಯವಿಟ್ಟು ಹೊರಟು ಹೋಗು...."

ಆತ ನಿರಾಸೆಯಿಂದ ತಲೆ ತಗ್ಗಿಸಿ...

ನಮಸ್ಕರಿಸಿ ಹೊರಟು ಹೋದ...

ಆತ ಹೋಗುವಾಗ ... 

ಆತನ ಪ್ರತಿ ಹೆಜ್ಜೆ ನನ್ನ ಎದೆಯ ಮೇಲೆ ನಡೆದಂತಿತ್ತು....

ಅತ್ತಿತ್ತ ಹೊರಳಾಡಿದೆ....


ಮತ್ತೆ ಬಾಗಿಲು ಕಿರ್ರ್ ಶಬ್ಧ....


ರಾಧೆ... !!!!!!

ನನ್ನ ರಾಧೆ ಬರ್ತಿದ್ದಾಳೆ... !

ಕಣ್ಣು ಒರೆಸಿಕೊಂಡು ನೋಡಿದೆ... 


ನಿಜ .. !

ರಾಧೆ ಗಡಿಗೆಯಲ್ಲಿ ಬೆಣ್ಣೆ ತಂದಿದ್ದಳು.....

ಓಡೊಡಿ ಬಂದು ತಬ್ಬಿಕೊಂಡಳು..


ಮುಳ್ಳಿಂದ ಚುಚ್ಚಿದಂತಿತ್ತು...

ಕಸಿವಿಸಿ...

"ನನ್ನ ಮನಸ್ಸು ಸರಿ ಇಲ್ಲ..

ದಯವಿಟ್ಟು ದೂರ ಇರು...."

ಕಠಿಣವಾಗಿ ಹೇಳಬೇಕೆಂದುಕೊಂಡೆ... ಆಗಲಿಲ್ಲ...


" ನನ್ನ ಮುದ್ದು ಶ್ಯಾಮಾ...

ನಿನ್ನ ಮನಸ್ಸು ಸರಿ ಮಾಡುವದೇ.. ನನ್ನ ಕೆಲಸ..
ನಾನು ನಿನ್ನ ಸ್ಪೂರ್ತಿ...

ಏನಾಯ್ತು...? "


"ಹೇಳಿದೆನಲ್ಲ..

ಮನಸ್ಸು ಸರಿ ಇಲ್ಲ ಅಂತ.." 

ಕ್ಷಣ..

ಕ್ಷಣಕ್ಕೂ ಭಾವಗಳು ಬದಲಾಗಬಲ್ಲದು...

ಬದಲಾಗುವ ಸಮಯದಲ್ಲಿ ನಾವೂ ಬದಲಾಗಲೇ ಬೇಕು.... 


"ದಯವಿಟ್ಟು ದೂರ ಇರು.... 

ನನ್ನನ್ನು ಮುಟ್ಟಬೇಡ.."

"ಶ್ಯಾಮಾ...

ಆಯ್ತು..

ದೂರ ಕೂಡ ಹತ್ತಿರ ಮಾಡುತ್ತೇನೆ...


ನಾನು ನಿನ್ನನ್ನು ನೋಡಬಹುದಲ್ಲ...."


ಬಹಳ ಹಠಮಾರಿ ಈ ರಾಧೆ...


ರಾಧೆ ನನ್ನನ್ನೇ ನೋಡತೊಡಗಿದಳು...


ನನ್ನ ಹಣೆ...

ಹುಬ್ಬು..
ಕಣ್ಣು... ಕೆನ್ನೆ..
ತುಟಿ...
ಗಲ್ಲ....

ಈ ಜಗತ್ತಿನ ಸಮಸ್ತ ಪ್ರೇಮಧಾರೆ ಆ ನೋಟದಲ್ಲಿತ್ತು....

ಕ್ಷಣ..

ಕ್ಷಣದ ಆ ನೋಟ.. !
ಆ ಆಸೆ.. !
ಆ ಪ್ರೇಮ.. !!

ಅವಳ ನೋಟ ಮೃದುವಾದ ಚುಂಬನದಂತಿತ್ತು.... !

ನನಗೆ ಸುಮ್ಮನಿರಲಾಗಲಿಲ್ಲ...

ಬರಸೆಳೆದು ತಬ್ಬಿಕೊಂಡೆ....

"ಹೇಳು ಕೃಷ್ಣಾ...ಏನಾಯ್ತು...? "


"ಈಗ .. 

ಸ್ವಲ್ಪ ಸಮಯದ ಮೊದಲು .. 
ನಿನ್ನ ಗಂಡ..
ಗೋಪಾಲಕ ಬಂದಿದ್ದ... ತೈಲ ಸ್ನಾನ ಮಾಡಿಸಲು..."

ಇಬ್ಬರಲ್ಲೂ ಮಾತಿರಲಿಲ್ಲ....


ಮಾತುಗಳಿಗೆ ಶಬ್ದ ಸಿಗುತ್ತಿರಲಿಲ್ಲ.... 


ಸ್ವಲ್ಪ ಹೊತ್ತು ಬಿಟ್ಟು ರಾಧೆಯೇ ಕೇಳಿದಳು..


"ಜಾರಿ ..

ಬೀಳುವಾಗ..
ಬಿದ್ದಿದ್ದಷ್ಟೇ ಗೊತ್ತು..

ಎಲ್ಲಿ..  ?

ಏನು ಗೊತ್ತಾಗುವದಿಲ್ಲ....!

ಬೇಕೆಂದು  ಬಿದ್ದಿಲ್ಲವಲ್ಲ...."


"ಬಿದ್ದಮೇಲೆ ... 

ಎದ್ದು ನಿಲ್ಲಲೇ ... ಬೇಕಲ್ಲ... !

ನಾವೂ ನಿಲ್ಲಬೇಕು..."


"ಕೃಷ್ಣಾ....

ಜಾರಿ ಬಿದ್ದ ನೆಲದ ಮಣ್ಣು ಹೇಗೆ ಬಿಡುವದು... ?

ಅಂಟಿಕೊಂಡ ... 

ಕೆಸರಿನೊಡನೆ ನಂಟು ಹೇಗೆ ಬಿಡುವದು...?... "

"ರಾಧೆ..

ನಮಗೆ ಅಂಟಿದ ಕೆಸರನ್ನು ನಾವು ಸ್ವಚ್ಛ ಮಾಡಿಕೊಳ್ಳಬಹುದು... 

ಲೋಕದ ಕಣ್ಣಿನ ಕೆಸರನ್ನು ಏನು ಮಾಡುವದು  ?

ಯಾವಾಗಲೂ ಕೆಸರಿನ ಕಣ್ಣಿನಲ್ಲೇ ನೋಡುತ್ತಾರಲ್ಲ  ... !

ಈ ಕೃಷ್ಣನನ್ನು ಒಬ್ಬರೂ ಅರ್ಥ ಮಾಡಿಕೊಂಡಿಲ್ಲ...


ಯಾರ್ಯಾರು ಹೇಗೆ ಬಯಸಿದ್ದಾರೋ..

ಅವರವರಿಗೆ 
ಅವರು ಬಯಸಿದಂತೆಯೇ .. ಹಾಗೆಯೇ..  ಸಿಕ್ಕಿದ್ದೇನೆ....

ಯಶೋಧೆ ... 

ನಂದರಿಗೆ ಹೆತ್ತ ಮಗನಂತೆಯೇ ಕಂಡಿರುವೆ...

ಅಕ್ರೂರನಿಗೆ ದೇವರಂತೆ...


ದುರುಳ ಕಂಸನಿಗೆ ತನ್ನ ಸಾವಿನಂತೆ...


ಗೋಪಿಕಾಸ್ತ್ರೀಯರಿಗೆ ಅವರ ಮನೋಭಾವಂದಂತೆ.. 

ಪ್ರೇಮ.. ಪ್ರೀತಿಯಂತೆ..ಕಂಡಿರುವೆ..."

"ಶ್ಯಾಮಾ...

ನನಗೆ... ?  !!..."

"ನಿನಗೆ..

ನಿನ್ನ ಪವಿತ್ರ ಪ್ರೇಮದಂತೆ ಸಿಕ್ಕಿರುವೆ... 
ಕಣ್ಮುಚ್ಚಿ ಕೊಟ್ಟಿರುವೆ.... 

ರಾಧೆ...

ನನ್ನ ಈ ಜನ್ಮದಲ್ಲಿ ... 
ನನಗಾಗಿ ನಾನು ಏನನ್ನೂ ಬಯಸಲಿಲ್ಲ....

ಅವರವರ ಭಾವದಂತೆ ... 

ಅವರವರಿಗೆ ಕಂಡಿದ್ದೇನೆ....
ಅವರವರಿಗೆ ಅದನ್ನೇ..  ಕೊಟ್ಟಿರುವೆ..."

ರಾಧೆ ಮತ್ತಷ್ಟು ತಬ್ಬಿಕೊಂಡಳು...


"ನನ್ನ ಪ್ರೇಮಕ್ಕೆ ನೀನು ಪ್ರೇಮ ಕೊಟ್ಟಿರುವೆ.... 


ಸರಿ... 


ಈ ಪ್ರೇಮವನ್ನು ನೀನೂ ಸಹ  ಅನುಭವಿಸಿಲ್ಲವೇ ?... 


ಅವರವರಿಗೆ ಬಯಸಿದ್ದನ್ನು ಕೊಡುವಾಗ .. 

ನೀನೂ ಸಹ ಅನುಭವಿಸಿರುವೆಯಲ್ಲವೇ ? .. 

ಭಕ್ತಿಯನ್ನೋ... 

ಪ್ರೀತಿ.. ಪ್ರೇಮವನ್ನೋ.. 
ಕಾಮವನ್ನೊ... ಅನುಭವಿಸಿಲ್ಲವೇ ?.... 

ಕೊಟ್ಟಿರುವೆ ಎನ್ನುವ ಅಹಂಭಾವ ಇದೆಯಲ್ಲವೇ ?... "

ನಾನು ಸುಮ್ಮನಿದ್ದೆ.... 

ಎಲ್ಲ ಪ್ರಶ್ನೆಗಳಿಗೂ ಮಾತಿನಲ್ಲಿ ಉತ್ತರ ಕೊಡಬೇಕು ಅಂತ ಇಲ್ಲವಲ್ಲ.... 

"ನನ್ನ ಶ್ಯಾಮಾ...


ಹತ್ತಿರವಾದರೂ ಸರಿ..

ದೂರವಾದರೂ ಸರಿ.. ನನಗೆ ನೀನು ಬೇಕು...
ನಿನ್ನ ಪ್ರೇಮ ಬೇಕು...
ಸುಡುವ ವಿರಹವಾದರೂ ನನಗೆ ನಿನ್ನ ನೆನಪು ಬೇಕು..."

ನಾನು ಮಾತನಾಡಲೇ ಬೇಕಿತ್ತು....


"ವಿರಹವಿಲ್ಲದ ಪ್ರೇಮ ಅಪೂರ್ಣ....


ರಾಧೆ...

ನಾಳೆ...
ಗೋಕಲ ಬಿಟ್ಟು ಹೋಗಬೇಕಾಗಿದೆ...
ಕಂಸನ ಆಮಂತ್ರಣವಿದೆ.. ಮಥುರೆಗೆ ಬರಲು...

ಹೆತ್ತ .. 

ತಂದೆ ತಾಯಿಯರನ್ನು ಕಂಸನ ಬಂಧನದಿಂದ  ಬಿಡಿಸಬೇಕಾಗಿದೆ...."

"ಮತ್ತೆ ತಿರುಗಿ ಬರುವೆಯಲ್ಲ...?.."


ಅವಳ ಮಾತನ್ನು ಮುಚ್ಚಿಸಲೇ ಬೇಕಿತ್ತು....

ಮೃದುವಾಗಿ ಅವಳ ತುಟಿಗಳನ್ನು ಸವರಿದೆ..... 
ಕೆನ್ನೆಗಳು.. 
ಕಿವಿಯ ಬಳಿ ಮೃದುವಾಗಿ ಸ್ಪರ್ಶಿಸಿದೆ.... 

ರಾಧೆ  ಉನ್ಮತ್ತಳಾದಳು..... !

ರಾಧೆಯನ್ನು ದಿಕ್ಕು ತಪ್ಪಿಸಲು ಇಷ್ಟು ಸಾಕು..... 


"ರಾಧೆ...

ಸಿಕ್ಕಿದೆಯಲ್ಲ ಈ ಕ್ಷಣ... !

ಈ ಮಧುರ ಪ್ರೇಮದಲ್ಲಿ..

ಮಿಲನದಲ್ಲಿ... 
ವಿಚಾರಕ್ಕೆ..
ಬುದ್ಧಿಗೇಕೆ ಜಾಗ ಕೊಡುವೆ ?..

ನನ್ನೆಲ್ಲ ಪ್ರೇಮಧಾರೆ ನಿನಗಾಗಿ...

ನಿನ್ನ ಪ್ರೀತಿಗಾಗಿ..."

ರಾಧೆ ಬಿಗಿಯಾಗಿ ತಬ್ಬಿದಳು...


ಬಿಟ್ಟರೆ..

ಎಲ್ಲಿ ಓಡಿಹೋಗುವೆನೇನೋ ಎಂಬಂತೆ.....

ಮತ್ತೆ ..
ತಿರುಗಿ ಬರಲಾಗದ  ಮಥುರೆ.. ನನ್ನ ಕರೆಯುತ್ತಿತ್ತು...

ನನ್ನ ಅವತಾರದ ಅಪೂರ್ಣ ಕೆಲಸಗಳು... ನೆನಪಾಗುತ್ತಿತ್ತು...


ಗೋಕಲ ಬಿಟ್ಟು ಹೊರಡಲೇ ಬೇಕಿತ್ತು...


ಮುದ್ದು ರಾಧೆಯ .. 

ಮುದ್ದು ತುಟಿಗಳು ನನ್ನ ಅಧರಗಳನ್ನು   ಸೋಕುತ್ತಿದ್ದವು.... 

ರಾಧೆಯ ಕಣ್ಣುಗಳು ಮುಚ್ಚಿದ್ದವು.... 


ಮುಚ್ಚಿದ 
ಕಂಗಳಲ್ಲೂ ...  ಭರವಸೆ  ಕಾಣುತ್ತಿತ್ತು... 
ತನ್ನ ಪ್ರೀತಿಯ ಮೇಲೆ... 
ನನ್ನ ಮೇಲೆ.... 

ರಾಧೆಯ ಕಣ್ಣುಗಳು ಮುಚ್ಚಿಯೇ.. ಇದ್ದವು.... .....



(ಉತ್ತಮ ಪ್ರತಿಕ್ರಿಯೆಗಳಿವೆ .. 
ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....  )