Friday, June 21, 2013

" ನಮ್ಮನ್ನು ಪ್ರೀತಿಸುವ ... ಪ್ರೀತಿಯನ್ನು ಸಾಯಿಸಬಾರದು...."

ಒಬ್ಬ ಅಜ್ಜ..
ಮೊಮ್ಮಕ್ಕಳಿಗೆ ಮಹಾಭಾರತದ ಕಥೆ ಹೇಳುತ್ತಿದ್ದ...

ಯುದ್ಧ ಪರ್ವದ ಕೊನೆಯ ಭಾಗ ಅದಾಗಿತ್ತು...

"ಧುರ್ಯೋಧನ ಯುದ್ಧದಲ್ಲಿ ತನ್ನವರೆನ್ನೆಲ್ಲ ಕಳೆದುಕೊಂಡು..
ಪಾಂಡವರಿಗೆ ಹೆದರಿ...
ರಕ್ತ..
ಹೆಣದ ರಾಶಿಗಳ ಕುರುಕ್ಷೇತ್ರ ರಣರಂಗದಲ್ಲಿ ...
ಒಂಟಿಯಾಗಿ ಬರುತ್ತಿದ್ದ....

ಎಲ್ಲಿ ನೋಡಿದರೂ ಹೆಣಗಳ ರಾಶಿ....!

ತನ್ನ ಛಲದಿಂದಾಗಿ ...
ಎಷ್ಟೆಲ್ಲ ಅಮಾಯಕರು ಸತ್ತರು...!
ಎಷ್ಟೆಲ್ಲ ವಿಧವೆಯರು... ಮಕ್ಕಳು... ಅನಾಥರಾದರು..!... "

"ಇಲ್ಲಿ ಸತ್ತವರು...  
ಜೀವ ಹೋಗುವ ಯಮ ಯಾತನೆಯಲ್ಲಿ ... 
ನೋವಿನಲ್ಲಿ.. 
ನನ್ನನ್ನು  ಶಪಿಸುತ್ತಾ ಸತ್ತಿರಬಹುದೇ ?.. 

ಪ್ರತಿಯೊಂದು ಹೆಣದ ಕಣ್ಣುಗಳು ತನ್ನನ್ನೇ ದಿಟ್ಟಿಸಿ ನೋಡುತ್ತಿವೆ..
ಭರ್ಚಿಯಿಂದ ಇರಿಯುತ್ತಿವೆ... 

ಅಯ್ಯೋ ದೇವರೇ... 
ಹೇಗೆ ಎದುರಿಸಲಿ ಈ ನೋಟಗಳನ್ನು ?"

ಧುರ್ಯೋಧನ ಕೊರಗಿದ... 
ಮಮ್ಮಲ ಮರುಗಿದ... 

ಅಜ್ಜ ... 
ತನ್ನ ಕನ್ನಡಕವನ್ನು ಸರಿ ಪಡಿಸಿಕೊಂಡು ... 
ಮತ್ತೆ ಮುಂದುವರೆಸಿದ...

"ಮುಂದೆ ಹೋಗುವಾಗ ...
ಕಾಲಿಗೆ ಒಂದು ಹೆಣ ತಾಗಿ ... 
ಧುರ್ಯೋಧನ ಬೀಳುವಂತಾದ...

ನೋಡುತ್ತಾನೆ ...!
ಅದು ಅವನ ತಮ್ಮನ ಹೆಣ!!

ತನ್ನ ಬದುಕಿನ ಸ್ವಾರ್ಥ .. ಆಸೆಗಳಿಗೆ .. 
ತನ್ನ ತಮ್ಮ ಶವವಾಗಿದ್ದಾನೆ... !

ಅನತಿ ದೂರದಲ್ಲಿ ವೀರ ಅಭಿಮನ್ಯುವಿನ ಹೆಣ....!

ಉಂಡು.. 
ತಿಂದು.. ತುಂಟಾಟವಾಡಿ ..
ಬೆಳೆಯುವ ಪುಟ್ಟ ಕಂದ...  
ತನ್ನ ಛಲದಿಂದಾಗಿ ಹೆಣವಾಗಿದ್ದಾನೆ.. !...

ಎಲ್ಲ ಕಡೆ.. 
ರಕ್ತ ಪಿಪಾಸು ರಣ ಹದ್ದುಗಳ ಹಾರಾಟ.. !
ಕಾಡು ಪ್ರಾಣಿಗಳ ಕೇಕೆ.... !!

ಎತ್ತ ನೋಡಿದರೂ.... ತನ್ನ ಬಂಧುಗಳ ಹೆಣಗಳ ರಾಶಿ.... !

ಅಯ್ಯೋ ದೇವರೆ.... !!

ಧುರ್ಯೋಧನ ವಿಲವಿಲ  ಒದ್ದಾಡಿದ ....

ತಾನು ಪಾಪಿ... !

ಹೆಣಗಳ ರಾಶಿಯಲ್ಲಿ ಜೋರಾಗಿ ಚೀರಿದ.. .. !
ರೋಧಿಸಿದ.....!
ಎದೆ..
ಎದೆ ಬಡಿದುಕೊಂಡ.... !"

ಅಜ್ಜ ಕಥೆಯನ್ನು ನಿಲ್ಲಿಸಿ ಮಕ್ಕಳ ಕಡೆ ನೋಡಿದ...

"ಮಕ್ಕಳೆ...
ಇಲ್ಲಿ ಕುರುಕ್ಷೇತ್ರ.... 
ಹೆಣಗಳು.. 
ಶವಗಳ ರಾಶಿ  ...  ಅಂದರೆ ಏನು ಗೊತ್ತಾ ?... "

ಮಕ್ಕಳಿಗೆ ಅರ್ಥವಾಗಲಿಲ್ಲ...

"ನೀನೆ ಬಿಡಿಸಿ ಹೇಳು ಅಜ್ಜಾ..."

"ಭಾವನೆಗಳು...
ಪ್ರೀತಿ...ಪ್ರೇಮ... 
ನಮ್ಮ ಬಾಂಧವ್ಯಗಳು..  ...

ಕುರುಕ್ಷೇತ್ರವೆಂದರೆ... 
ಸ್ವಾರ್ಥದ..  ಸೊಕ್ಕಿನ... ನಮ್ಮ ಪಾಪದ ಬದುಕು.... 

ಧುರ್ಯೋಧನ ಬದುಕಿರುವಾಗ .... 
ಬಹಳಷ್ಟು  ಜನರ ಭಾವನೆಗಳಿಗೆ ಹಿಂಸಿಸಿದ...
ನೋಯಿಸಿದ..!

ಪಾಂಡವರನ್ನು ಅರಗಿನ ಮನೆಯಲ್ಲಿಟ್ಟು... 
ಬೆಂಕಿ ಇಡುವಾಗ.....
ತನ್ನ ಮಕ್ಕಳ ಬಗೆಗೆ ತಾಯಿ ಕುಂತಿದೇವಿ ... 
ಎಷ್ಟು ಆತಂಕ ಪಟ್ಟಿರ ಬಹುದು...?

ರಾಜಕುಮಾರರಾಗಿದ್ದ ಪಾಂಡವರನ್ನು ... 
ಕಪಟ ಜೂಜಿನಲ್ಲಿ ಸೋಲಿಸಿ..
ವನವಾಸಕ್ಕೆ ಅಟ್ಟಿದಾಗ..
ಪಾಂಡವರ ಹೃದಯ ಎಷ್ಟು ನೊಂದಿರಬಹುದು..?

ಆತಂತ್ರ ಬದುಕಿನ ಆತಂಕ ಎಷ್ಟು ಕಾಡಿರಬಹುದು ?..

ಮಾನವೇ ಭೂಷಣವೆಂದು ನಂಬಿರುವ ... 
ಸಾಧ್ವಿ ದ್ರೌಪದಿಯು ..
ತುಂಬಿದ ಸಭೆಯಲ್ಲಿ ಬೆತ್ತಲಾಗುವಾಗ  .. 
ಎಷ್ಟು  ರೋಧಿಸಿರಬಹುದು  ?.. ...

ನೊಂದವರ...
ನಮ್ಮಿಂದಾಗಿ ಅತ್ತವರ  ... 
ಶಾಪ ನಮ್ಮನ್ನು ಕಾಡದೇ ಬಿಡುವದಿಲ್ಲ...."

ಮಕ್ಕಳು ಸುಮ್ಮನಿದ್ದರು...

"ಮಕ್ಕಳೆ..
ಬದುಕಿನಲ್ಲಿ ನಮ್ಮ ಬಂಧುಗಳ..
ಪ್ರೀತಿಸಿದವರ..
ನಮ್ಮವರ ಭಾವನೆಗಳನ್ನು ಪ್ರೀತಿಸಬೇಕು ...

ಇಲ್ಲವಾದಲ್ಲಿ...
ನಮ್ಮ ವೃದ್ಧಾಪ್ಯದ ಕುರುಕ್ಷೇತ್ರದ ರಣರಂಗದಲ್ಲಿ..

ಒಂಟಿಯಾಗಿ ಸಾಗುವಾಗ.. 
ನಾವು ಕೊಂದ ಭಾವನೆಗಳ ಹೆಣ ..
ನಮ್ಮ ಕಾಲಿಗೇ ..  ಎಡವುತ್ತದೆ ... 
ನಮ್ಮ ಜೀವ ಹಿಂಡುತ್ತದೆ ....  

ನಾನು... ನನ್ನದು... 
ನನಗೆ ಮಾತ್ರ ಎನ್ನುವ ಭಾವರಹಿತ ಬದುಕಿಗೆ... 
ಪ್ರತಿಯೊಬ್ಬರೂ.. 
ಅವರವರ ಬದುಕಿನ ಕುರುಕ್ಷೇತ್ರದಲ್ಲಿ ... 
ಉತ್ತರ ಕೊಡುವ ಸಂದರ್ಭ ಬಂದೇ ಬರುತ್ತದೆ... 

ಎಲ್ಲೋ ಒಂದು ಕಡೆ .. 
ಒಬ್ಬಂಟಿಯಾದಾಗ.. ..
ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ... 
ಯಾರಾದರೂ ಬೇಕು ಎಂದಾಗ

ಬಂಧುಗಳ .. 
ಭಾವನೆಗಳನ್ನು ಕೊಂದ  ಧುರ್ಯೋಧನ ನಾವಾಗಬೇಕಾಗುತ್ತದೆ...!

ಒಬ್ಬಂಟಿಯಾಗಿಯೇ..   ರೋಧಿಸಬೇಕಾಗುತ್ತದೆ...

ಸಹಜ ಬದುಕಿನಲ್ಲಿ ಸಿಗುವ .. ಬಾಂಧವ್ಯಗಳು... 
ಬಂಧುಗಳು... 
ಭಾವನೆ .. 
ಪ್ರೀತಿ.. ಪ್ರೇಮಗಳು ನಮಗೆ ಬೇಕು ಎನ್ನುವಾಗ ಸಿಗುವದಿಲ್ಲ... 

ನಮಗೆ  ಸಿಕ್ಕಿದ 
ಮುಗ್ಧ ಭಾವನೆಗಳನ್ನು .. 
ಹಿಂಸಿಸಬಾರದು.... ನೋಯಿಸಬಾರದು...

ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು...."

ಅಜ್ಜನಿಗೆ ಮಾತು ಮುಂದುವರೆಸಲಾಗಲ್ಲಿಲ್ಲ...

ಕನ್ನಡಕ ಮಂಜು ಮಂಜಾಗಿತ್ತು....




Tuesday, June 4, 2013

ಮಾತಿಲ್ಲ.. ನನ್ನ ಮೌನ ಗೌರಿ.. ನೋಡಲೂ ಚಂದ...!

ಮದುವೆಯಾಗಿ ಒಂದು ವಾರವಷ್ಟೇ ಆಗಿತ್ತು..

"ಪ್ರಕಾಶು..
ಚಂದಾವರದ ಅತ್ತೆ ಮನೆಗೆ ಹೋಗಿ ಬನ್ನಿ.."
ಅಂತ ಮನೆಯ ಹಿರಿಯರ ಸಲಹೆ...

"ನಾನೂ ಬರ್ತೇನೆ.."
ನನ್ನ ಪ್ರೀತಿಯ ಕಮಲಾಕರ ಚಿಕ್ಕಪ್ಪನೂ ನಮ್ಮೊಡನೆ ಹೊರಟ...

"ಚಿಕ್ಕಪ್ಪಾ.. ಕಾರಿಗೆ ಹೇಳುವೆ.."

"ಬೇಡ ಪ್ರಕಾಶು..

ಉಳಿಸಿದ ಹಣವೇ,,.. ಗಳಿಸಿದ ಹಣ...!

ದುಡಿದ ಹಣವನ್ನು ಉಳಿತಾಯ ಮಾಡಬೇಕು..  ಯಾಕೆ ದುಡ್ಡು ವ್ಯರ್ಥವಾಗಿ ಖರ್ಚು ಮಾಡ್ತೀಯಾ..
ಬಸ್ಸಿನಲ್ಲಿ ಹೋಗೋಣ..."

ಸರಿ..
ಸಿರ್ಸಿಗೆ ಬಂದು ಕುಮುಟಾ ಬಸ್ಸು ಹಿಡಿದೆ..

ಮೇ...  ತಿಂಗಳು..
ಸೆಖೆ..

ಸಿಕ್ಕಾಪಟ್ಟೆ ರಷ್...

ಹಾಗೂ ಹೀಗೂ ಒಂದು ಸೀಟು ಹಿಡಿದೆ..

ನಾನು ಮತ್ತು ನನ್ನ ಜಿಂಕೆ ಮರಿ ಇಬ್ಬರೂ ಕುಳಿತೆವು..

ನನ್ನ ಚಿಕ್ಕಪ್ಪ ನಮ್ಮ ಬಳಿ ನಿಂತು ಕೊಡರು...

ಸಂಸ್ಕಾರ...
ಅಪ್ಪನಿಲ್ಲದ ನಮಗೆ ಅವರೇ ಬದುಕು ಕಲಿಸಿದ್ದು..

ನಾನು ಎದ್ದು ನಿಂತು ಅವರಿಗೆ ಜಾಗ ಮಾಡಿಕೊಟ್ಟೆ...

ಆ ನೂಕು ನುಗ್ಗಲಿನಲ್ಲಿ ಮುಂದೆ ಹೋದೆ..
ಅಲ್ಲಿ ಒಂದು ಸೀಟು ಸಿಕ್ಕಿತು...

"ಚಿಕ್ಕಪ್ಪನಿಗೆ ಇಲ್ಲಿ ಕರೆದು ..
ನಾನು ಜಿಂಕೆ ಮರಿ ಹತ್ತಿರ ಹೋಗ ಬಹುದಲ್ಲವಾ ?... "

ತಿರುಗಿ ನೋಡಿದೆ...

ಉಹೂಂ... 
ತುಂಬಾ ರಷ್ ಇತ್ತು.. 

ಅವರು ಇಲ್ಲಿ ಬಂದು .. 
ನಾನು ಅಲ್ಲಿ ಹೋಗುವದು ದೊಡ್ಡ ರಾಮಾಯಣ.. !

ಸುಮ್ಮನೆ ಅಲ್ಲಿಯೇ ಕುಳಿತೆ...

ಎಷ್ಟೆಲ್ಲಾ ಹಂಬಲಿಸಿದ್ದೆ .. ನನ್ನಾಕೆಯ ಬಗೆಗೆ !
ಎಷ್ಟೆಲ್ಲ ಪತ್ರ ಬರೆದಿದ್ದೆ..

ನನ್ನೆಲ್ಲ ಕನಸುಗಳು ನನಸಾಗಿದ್ದವು..
ನಾನು ನಮಸ್ಕರಿಸುವ ದೇವರಿಗೆ  ಮನಸಾರೆ ವಂದಿಸಿದೆ... 

ಮುದ್ದಾದ..
ನನ್ನಿಷ್ಟದ ಹುಡುಗಿ ನನ್ನವಳಾಗಿದ್ದಳು...

ಹನಿಮೂನಿಗೆ ಹೋಗೋಣವೆಂದರೆ ... 
" ನೆಂಟರ ಮನೆಗಳಿಗೆ ಮೊದಲು ಹೋಗಿ ಬನ್ನಿ.." 
ಎನ್ನುವ ಆಜ್ಞೆ..ಮನೆಯ ಹಿರಿಯರದ್ದು... 

ನನ್ನಾಕೆಯ... 
ಹತ್ತಿರ ಕುಳಿತುಕೊಳ್ಳಬೇಕು..
ನನ್ನಾಸೆಗಳನ್ನು ಹೇಳೀಕೊಳ್ಳಬೇಕು..

ಅವಳ ನಾಚಿಕೆಯನ್ನು ಅವಳ ಕಣ್ಣುಗಳಲ್ಲಿ ನೋಡಬೇಕು...!

ಬಸ್ಸಿನಲ್ಲಿ ... 
ಯಾರೋ ಮೂಟೆ ಚೀಲ ನನ್ನ ಪಕ್ಕಕ್ಕೆ ತಳ್ಳಿದಂತಾಯಿತು..

ಭರ್ಜರಿ  ಹೊಟ್ಟೆಯವನೊಬ್ಬ ನನ್ನ ಪಕ್ಕದಲ್ಲಿ ನಿಂತಿದ್ದ..!
ಅವನ ಹಾಕಿದ ಶರ್ಟ್ ಬಟನ್ .... 
ಬಿಚ್ಚಿ ಹರಿದು ಹೋಗುವ ಸ್ಥಿತಿಯಲ್ಲಿತ್ತು..... 
ಹೊಟ್ಟೆಯ ದೊಡ್ಡ ಬಾವಿಯಂಥಹ ಹೊಕ್ಕಳು ಕಾಣುತ್ತಿತ್ತು.... 

ಮುಖ ನೋಡಲು ಪ್ರಯತ್ನಿಸಿದೆ...
ಕುಳಿತಿದ್ದರಿಂದ ಬರಿ ಹೊಟ್ಟೆಯೇ ಕಾಣುತ್ತಿತ್ತು...

ಕುಮುಟಾ ಬಸ್ಸು ದೇವಿಮನೆ ಘಟ್ಟ ಇಳಿಯಲು ಪ್ರಾಂಭಿಸಿತ್ತು..
ತಿರುವು ..
ಮುರುವು..

ಆ ಕಡೆ.. 
ಈ ಕಡೆ ನಮ್ಮ ಶರೀರ ವಾಲುತ್ತಿತ್ತು... !

ಪಕ್ಕದಲ್ಲಿ ಜಿಂಕೆ ಮರಿಯಿದ್ದರೆ ಎಷ್ಟು ಸೊಗಸಿತ್ತು.. !
ರಿಂಗು ಹಾಕಿದ ಮೊಂಡು ಮೂಗು... 
ಮುದ್ದು ಕೆನ್ನೆಗಳನ್ನು ಇಷ್ಟು ಹತ್ತಿರದಲ್ಲಿ ಸವಿಯ ಬಹುದಿತ್ತು... !
ಛೇ... !

ಅಷ್ಟರಲ್ಲಿ .... 
ಬಿಸಿ  ಬಿಸಿ.... 
ಎರಡು ಬಕೆಟ್ ಸಂಬಾರು ಅನ್ನವನ್ನು .. 
ನನ್ನ ತಲೆಯ ಮೇಲೆ ಎರಚಿದಂತಾಯಿತು... ...!

"ಊವ್ವೇ... ಊವ್ವೇ... !!... "

ಆ ದೊಡ್ಡ ಹೊಟ್ಟೆಯವ ನನ್ನ ತಲೆಯ ಮೇಲೆ ವಾಂತಿ ಮಾಡುತ್ತಿದ್ದ..

... !! ಅಯ್ಯಯ್ಯೋ...  !!.. ಗಡಿಬಿಡಿ ಬಿದ್ದೆ... !

ತುಟಿ ಮುಚ್ಚಿಕೊಂಡೆ..

ಹಣೆ..
ಮುಖ... ಕೆನ್ನೆಯ ಮೇಲೆ ವಾಂತಿ ಇಳಿಯುತ್ತಿತ್ತು...

ಕಣ್  ಬಿಡಲಾಗುತ್ತಿಲ್ಲ...
ಸಿಂಬಳದಂಥಹ ದ್ರವ ರೆಪ್ಪೆಗಳಿಗೆ ಅಂಟಿಕೊಂಡಿತ್ತು.... 

ಏಳುವ ಪ್ರಯತ್ನ ಮಾಡಿದೆ..

ಮತ್ತೆ ............ 

"ಊವ್ವೇ.. ಉವ್ವೇ....." ! 
ಮತ್ತೆರಡು ಬಕೆಟ್ ವಾಂತಿ ಚೆಲ್ಲಿದಂತಾಯಿತು...!

ಸಿರ್ಸಿ ಪೇಟೆ  ಗಲೀಜೆಲ್ಲ ... 
ನನ್ನ ಮೈಮೇಲೆ ಎರಚಿದಂತಾಯಿತು.... !

ಷರ್ಟ್..
ಒಳಗೆಲ್ಲ ಅಂಟು.. ಅಂಟು...!

ಲೋಳೇ ದ್ರವ ಕಣ್ಣುಗಳನ್ನು ಮುಚ್ಚಿತ್ತು...

ಕಣ್ಣುಜ್ಜಿಕೊಂಡೆ..

ಕೆಟ್ಟ.. 
ಅಸಾಧ್ಯವಾಸನೆ...!
ನನಗೂ ವಾಂತಿ ಬರುವಂತಾಯಿತು...

ನನ್ನ ಅಕ್ಕ ಪಕ್ಕದವರೆಲ್ಲ ಓಡಿ ಹೋಗಿದ್ದರು...

ಅಯ್ಯೋ ದೇವರೆ...
ಹೊಸ ಹೆಂಡತಿಯ ಎದುರು  ಇದೆಂಥಹ ಅವತಾರ...!

ನಾಚಿಕೆ.. ಅಸಹ್ಯ... !

ನನ್ನಾಕೆ ವ್ಯಾನಿಟಿ ಬ್ಯಾಗಿನಿಂದ ಸಣ್ಣ ಪೌಂಡ್ಸ್ ಪೌಡರ್  ಡಬ್ಬವನ್ನು .. 
ತುದಿ ಬೆರಳಲ್ಲಿ  ಕೊಟ್ಟಳು...
ಮೂಗಿಗೆ ತುರುಕಿ ಕೊಂಡೆ...

ಕುಮುಟಾ ಬರುವಷ್ಟರಲ್ಲಿ .... 
ಮೈಮೇಲಿನ ವಾಂತಿಯೆಲ್ಲ ಅರೆ ಬರೆ ಒಣಗಿತ್ತು..

ವಾಂತಿಯ ಸಂಗಡ ಅಸಾಧ್ಯ ಸೆಖೆ... !

ಒಳಗೆಲ್ಲ ಅಂಟು ಅಂಟು..
ಲೋಳೆಯ ಅನುಭವ... !

ಎಲ್ಲರೂ ನನ್ನನ್ನು ಕರುಣಾಜನಕವಾಗಿ ನೋಡುತ್ತಿದ್ದರು..

ಹೇಗೋ ಹೇಗೋ... ಚಂದಾವರಕ್ಕೆ ಬಂದೆವು...

ಮೊದಲು ಬಚ್ಚಲಿಗೆ ಹೋಗಿ ಸ್ನಾನ ಮಾಡಿದೆ...

ಒಂದು ಹೊಸ ಸೋಪ್ ಪೂರ್ತಿ ಮೈಗೆ ತಿಕ್ಕಿದೆ...

ನನ್ನ ಅವಸ್ಥೆ ನೋಡಿ ... 
ನನ್ನ "ಲಕ್ಷ್ಮಿ ಅತ್ತೆ" ಮನೆಯಲ್ಲಿದ್ದ ಪೌಡರ್ ಡಬ್ಬಗಳನ್ನೆಲ್ಲ ಕೊಟ್ಟರು..

ಮೈಗೆ ಎಲ್ಲವನ್ನೂ ಬಳಿದುಕೊಂಡೆ...

ನನ್ನಾಕೆ ಹತ್ತಿರ ಬರುತ್ತಿಲ್ಲ.. !
ದೂರದಿಂದಲೇ ಮಾತುಕತೆ.. !

ನನ್ನ "ವೆಂಕಟರಮಣ" ಮಾವ ಅವರ ಅಮೂಲ್ಯ ಸಲಹೆ ಕೊಟ್ಟರು..

"ಪ್ರಕಾಶು..
ಇನ್ನೂ ಎರಡು ಬಾರಿ ಸ್ನಾನ ಮಾಡು ಮಗನೆ..
ಲಕ್ಸ್ ಸೋಪು ಹಚ್ಚಿಕೊಂಡು.."

ಎಷ್ಟೇ ಸೋಪು ಹಚ್ಚಿದರೂ..
ಮನಸ್ಸಿಗೆ ಅಂಟಿದ ವಾಸನೆಯನ್ನು ಹೇಗೆ ತೆಗೆಯುವದು ?

ಊಟವೂ ಸರಿಯಾಗಿ ಸೇರಲಿಲ್ಲ...

ಅದೇ.. ವಾಂತಿಯ ದೃಶ್ಯ ಕಣ್ಣೆದುರಿಗೆ ಬರುತ್ತಿತ್ತು...!

ಮಧ್ಯಾಹ್ನ ಊಟವಾದ ಮೇಲೆ...

"ಹೊಸ ಮದುಮಕ್ಕಳು...
ಕೋಣೆಯಲ್ಲಿ ವಿಶ್ರಾಂತಿ ಮಾಡಿ" 
ಲಕ್ಷ್ಮಿ ಅತ್ತೆ ಹಾಸಿಗೆ ಹಾಸಿಕೊಟ್ಟಳು...

ನನ್ನಾಕೆ ದೂರವೇ ಇದ್ದಳು..

ಈ ಅಸಹ್ಯ ... 
ಮುಜುಗರ ಸನ್ನಿವೇಶದಲ್ಲಿ ಏನು ಮಾತನಾಡುವದು ?

ಮಾತಿಲ್ಲ.. 
ನನ್ನ ಮೌನ ಗೌರಿ.. ನೋಡಲೂ ಚಂದ...!

ದೂರವೇ ಮಲಗಿದೆ..

ಫ್ಯಾನ್ ಗಾಳಿ..
ನನ್ನಾಕೆ ಚಂದದ ಮುಖ.. ಸಣ್ಣ ನಿದ್ದೆ ಬಂದಿದ್ದೆ ಗೊತ್ತಾಗಲಿಲ್ಲ...

ಯಾರೊ ಮೈ ತಟ್ಟಿ ಎಬ್ಬಿಸಿದಂತಾಯಿತು..

ನನ್ನಾಕೆ !

ಅವಳ ತುಟಿ ಚಲವಲನೆ ಕಾಣುತ್ತಿತ್ತು.. 
ಶಬ್ಧ ಕೇಳುತ್ತಿಲ್ಲ.. !

ಅಯ್ಯೋ.. !
ನಾನು ... 
ನನಗೆ ಕಿವುಡೆ ?.... 

ಈಗ ನನ್ನ ಮಾವ ಕೂಡ ಕಂಗಾಲಾದರು...
ಹೊಸ ಮದುವೆ ಜೋಡಿ...!
"ತಮ್ಮ ಮನೆಗೆ ಬಂದು ಹೀಗೆ ಆಗಿಹೋಯ್ತೆ..!" 
ಎನ್ನುವ ಗಾಭರಿ... !

ಆತಂಕ ಪಟ್ಟುಕೊಂಡು ಕಿವಿಗೆ ಹಾಕುವ "ಚಿಮಟಿಗೆ" ತಂದರು...

ನನ್ನಾಕೆ ... 
ನನ್ನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು..
ಅನುಭವ 
ಮೃದುವಾಗಿ ಹಿತವಾಗಿತ್ತು ...

ಕಿವಿಗೆ ಚಿಮಟಿಗೆ ಹಾಕಿದ ಅನುಭವ..
ಏನನ್ನೋ ಹೊರಗೆ ತೆಗೆದಳು...

ಮತ್ತೊಂದು ಕಿವಿಗೂ ಚಿಮಟಿಗೆ ಹಾಕಿದಳು..
ಮತ್ತಷ್ಟು ತೆಗೆದಳು..

ನನಗೆ  ಸ್ವಲ್ಪ ಸ್ವಲ್ಪ ಕಿವಿ ಕೇಳತೊಡಗಿತು...!

ಕಿವಿಯಿಂದ ತೆಗೆದದ್ದು ಏನು ಅಂತ ನೋಡಿದೆ..

ಹಳದಿ ಬಣ್ಣದ ಅನ್ನದ ಅಗುಳು..  !!
ಹಳದಿ ಬಣ್ಣದ ಲೋಳೆ.. ಲೋಳೆ.... ಅಂಟು.. !

ಚಿಗುಟಿನಂಥಂಹ .. ಹಲಸಿನ ಗುಜ್ಜಿನಂಥಹದ್ದು..

ಇದು ಚಿಕ್ಕನ್ನು ಇದ್ದಿರ ಬಹುದಾ ?
ಮೀನವಾ !!

"ಊವ್ವೆ.. ಉವ್ವೇ... ಊವ್ವೇ......."

ತಡೆದು ಕೊಳ್ಳಲಾಗದೆ...
ನನ್ನಾಕೆ ವಾಂತಿ ಮಾಡುತ್ತಿದ್ದಳು.... 

ಅಯ್ಯಯ್ಯೋ....  ನನ್ನ ಮೈ ಮೇಲೆ....!