Wednesday, June 22, 2011

ಮಾಬ್ಲು .. ನಮ್ಮೂರಿಗೆ ಈಗಲೂ ಬರ್ತಾನೆ... !




ನಾವಾಗ ಕನ್ನಡ ಶಾಲೆಯಲ್ಲಿ ಓದುತ್ತಿದ್ದೆವು...


ಶಾಲೆಯಲ್ಲಿ ಏಳು ಕ್ಲಾಸುಗಳಿಗೆ ಇಬ್ಬರೇ ಮಾಸ್ತರುಗಳು..


ಹಾಗಾಗಿ ಮಾಸ್ತರ್ರು ಕೆಲವು ಕ್ಲಾಸಿನ ಮಕ್ಕಳಿಗೆ ..
ನಿಬಂಧ.. ಪ್ರಶ್ನೋತ್ತರ ಬರೆಯುವ ಕೆಲಸ ಕೊಟ್ಟು ತಾವು  ಪಾಠ ಮಾಡುತ್ತಿದ್ದರು...


ಇನ್ನು ಕೆಲವು ಕ್ಲಾಸಿನ ಮಕ್ಕಳಿಗೆ ಆಟ ಆಡಲು ಹೇಳುತ್ತಿದ್ದರು..


ಅಂದು ನಮಗೆ 
" ಹೋಗ್ರೋ...
ಹೊರಗೆ ಹೋಗಿ ಆಟ ಆಡಿ.. 
ಗಲಾಟೆ ಮಾಡಬೇಡಿ.. ಸುಮ್ಮನೆ ಆಟ ಆಡಿ..
ಗಲಾಟೆ ಮಾಡಿದರೆ ಛಡಿ ಏಟು...!!.."


ಎಂದು ಕಣ್ಣು ಕೆಂಪಗೆ ಮಾಡಿ ಹೇಳಿದರು...
ಅವರು ಯಾವಾಗಲು ಹಾಗೇನೆ.. !


ನಾವು ಛಂಗನೇ ಜಿಗಿಯುತ್ತ ಆಟದ ಮೈದಾನಕ್ಕೆ ಬಂದಿದ್ದೆವು...


" ಏನು ಆಟ ಆಟ ಆಡೋಣ...?"


"ಕಳ್ಳ.. ಪೋಲಿಸು ಆಟ...? "


ಪರಮೇಸ್ರಣ್ಣಯ್ಯನಿಗೆ ಚಿಂತೆಯಾಯಿತು...


" ನೋಡ್ರೋ.. 
ನಮ್ಮನೆಗೆ ನನ್ನ ಅತ್ತೆಯ ಮಗ  ಮಾಬ್ಲು ಬಂದಿದ್ದಾನೆ...
ಅವನನ್ನೂ ಸೇರಿಸ್ಕೊಂಡು ಆಟ ಆಡಿ ಅಂತ ಮನೆಯಲ್ಲಿ ಹೇಳಿದ್ದಾರೆ.."


ಮನೆಗೆ ನೆಂಟರ ಮಕ್ಕಳು ಬಂದರೆ  ...
ಮನೆಯಲ್ಲಿ ಗಲಾಟೆ ಮಾಡುತ್ತಾರೆಂದು ಶಾಲೆಗೆ ಕಳಿಸುವದು ..


ಆಗ ನಮ್ಮೂರಲ್ಲಿ ಅದು ಸಾಮಾನ್ಯವಾಗಿತ್ತು...


ಪರಮೇಸ್ರಣ್ಣಯ್ಯ.. ಮಾಬ್ಲುವನ್ನು ಶಾಲೆಗೆ ಕರೆದುಕೊಂಡು ಬಂದಿದ್ದ...


ಇನ್ನೊಬ್ಬ ಹುಡುಗ ಆಡಲಿಕ್ಕೆ ಸಿಕ್ಕಿದ್ದಾನಲ್ಲ...!!
ಕುಷ್ಟನಿಗೆ ಖುಷಿಯಾಯ್ತು..


"ಒಳ್ಳೆಯದಾಯ್ತು ಬಿಡ್ರಾ..
ಪರಮೇಸ್ರಣ್ಣ.. 
ಆಡ್ಲಿಕ್ಕೆ ಇನ್ನೊಬ್ರು ಜಾಸ್ತಿ ಆದ್ರು..."


"ಹಾಗಲ್ರೋ... 
ಮಾಬ್ಲುಗೆ ಆರೋಗ್ಯ ಸರಿ ಇಲ್ಲ...
ಅವನನ್ನು ಬಿಟ್ಟು ಹೇಗೆ ಆಡೋದು...?"


ನಾವೆಲ್ಲ ಮಾಬ್ಲು ಹತ್ತಿರ ಬಂದೆವು...
ಮುಖ ಬಾಡಿಸಿಕೊಂಡು ಕುಳಿತ್ತಿದ್ದ...


ಕುಷ್ಟನಿಗೆ ಬೇಸರ ಆಯ್ತು...


" ಮಾಬ್ಲು.. 
ಹೆದರ ಬೇಡ್ರಾ...
ಏನಾಗ್ತ ಇದೇರ್ರಾ...?.."


" ಹೊಟ್ಟೆಯಲ್ಲಿ ಏನೋ ಆಗ್ತ ಇದೆ...
ಸಣ್ಣಕೆ ನೋವು..ತಲೆ ನೋವು..."


ಕುಷ್ಟ ಮೈ ಮುಟ್ಟಿ ನೋಡಿದ..


"ಜ್ವರ ಇಲ್ರಾ... 
ನೀವು ಇಲ್ಲೇ .. ಇರ್ರಾ...
ನಮ್ಮನೆಯಲ್ಲಿ ಮಾತ್ರೆ ಇದೇರ್ರಾ...
ತರ್ತೀನ್ರಾ.. "


ಕುಷ್ಟನ ಮನೆ ಶಾಲೆಯಿಂದ ತುಂಬಾ ಹತ್ತಿರ..
ಒಂದು ಏರು ಹತ್ತಿ.. 
ಒಂದು ಇಳಕಲು  ಇಳಿದರೆ.. ಅವನ ಮನೆ !!


ಚಕ್ಕನೆ ಮನೆಗೆ ಓಡಿ ಹೋಗಿ ಬಂದ..

ಏದುಸಿರು ಬಿಡುತ್ತ ಬಂದ..


" ಮಾಬ್ಲು..
ನಮ್ಮ ಸಂಗಡ ಆಡ ಬಹುದ್ರಾ...
ಹೆದರ ಬೇಡ್ರಾ.. ಈ ಮಾತ್ರೆ ತಕಳಿ.."


ಪರಮೇಸ್ರಣ್ಣಯ್ಯ ಶಾಲೇಯಿಂದ ಚೊಂಬಲ್ಲಿ ನೀರು ತಂದ...
ನಮ್ಮ ಶಾಲೆಯಲ್ಲಿ ಲೋಟ ಇಲ್ಲವಾಗಿತ್ತು..


ಕುಷ್ಟ ಒಂದು ಮಾತ್ರೆ ಕೊಟ್ಟ.. ಮಾಬ್ಲು ನೀರು ಕುಡಿದು ಮಾತ್ರೆ ತಗೊಂಡ..


ಕುಷ್ಟ ಮಾಬ್ಲುವಿಗೆ ಮತ್ತಷ್ಟು ಧೈರ್ಯ ತುಂಬಿದ..


"ಏನೂ ಆಗೋದಿಲ್ರ..
ನಮ್ಮ ಸಂಗದ ಆಡ ಬಹುದ್ರಾ...
ಇದು ಹೊಟ್ಟೆ ನೋವಿನ ಮಾತ್ರೆ.. 
ಕಾನಸೂರು ಡಾಕ್ಟ್ರು ಕೊಟ್ಟಿದ್ರಾ...
ನೀವು ತಗಳ್ರಾ.."


ಕುಷ್ಟ ಈಗ ಐದು ಮಾತ್ರೆ ಕೊಟ್ಟ...
ಮಾಬ್ಲು  ತಗೊಂಡ...


ಸ್ವಲ್ಪ ಹೊತ್ತು ಕಳೆಯಿತು.. ಮಾಬ್ಲುಗೆ ಕಡಿಮೆ ಆಗಲಿಲ್ಲ..


"ಮಾಬ್ಲು..
ಇನ್ನೂ ಮಾತ್ರೆ ಇದೇರ್ರಾ.. ಹೆದರ ಬೇಡ್ರಾ.. ತಕಳಿ..!!.."


ಅಂತ ಮತ್ತೆ ಒಂದಷ್ಟು ಮಾತ್ರೆ ಕೊಟ್ಟ..


ಮಾಬ್ಲುಗೆ ಸಣ್ಣ ಸಂಶಯ ಬಂತು..


" ಕುಷ್ಟಾ ...
ನಿನಗೆ ಹೇಗೆ ಗೊತ್ತು ಇದು ಹೊಟ್ಟೆ ನೋವಿನ ಮಾತ್ರೆ ಅಂತ...?


" ನನ್ನ ಅವ್ವಂಗೆ ..
ಆಗಾಗ ಹೊಟ್ಟೆ ನೋವು ಬರ್ತದರ್ರಾ..
ನೀವು ತಗಳ್ರಾ..  
ಹೆದರಬೇಡ್ರಾ. !!.."


ಮಾಬ್ಲು  ಕುಷ್ಟ ಕೊಟ್ಟ ಅಷ್ಟೂ ಮಾತ್ರೆ ತಗೊಂಡ...!


ಸ್ವಲ್ಪ ಹೊತ್ತು ಕಳೆಯಿತು...


ಮಾಬ್ಲು ಬೆವರ ತೊಡಗಿದ... 


"ನನಗೆ ಏನೋ ಆಗ್ತಾ ಇದೆ... !
ಅಯ್ಯೋ.. ಅಯ್ಯೊಯ್ಯೋ.. !!
ಹೊಟ್ಟೆ ನೋವು..!
ತಡಿಲಿಕ್ಕೆ ಆಗ್ತ ಇಲ್ಲ...!.."


ಅಂತ ಬಿದ್ದು  ಬಿದ್ದು..ಹೊರಳಾಡ ತೊಡಗಿದ...!


ನಾವೆಲ್ಲ ಗಾಭರಿಯಿಂದ ಮಾಸ್ತರ್ರ ಬಳಿ ಓಡಿದೆವು..
ಮಾಸ್ತರ್ರು ಓಡೋಡಿ ಬಂದರು...


"ಏನಾಯ್ತು..?.. !.."


" ಮಾಬ್ಲುಗೆ ಹೊಟ್ಟೆ ನೋವು.. 
ಕುಷ್ಟ ಮನೆಗೆ ಹೋಗಿ ಮಾತ್ರೆ ಕೊಟ್ಟ..


ಈಗ ಜಾಸ್ತಿ ಆಗೋಯ್ತು.."


ಈಗ ಮಾಸ್ತರ್ರೂ ಗಾಭರಿ ಬಿದ್ದರು..!


ಮಾಬ್ಲು ಹೊಟ್ಟೆ ನೋವಿನಿಂದ ಮತ್ತೂ ಜೋರಾಗಿ ಕೂಗಾಡತೊಡಗಿದ...


"ಅಯ್ಯೋ... ಅಯ್ಯೊಯ್ಯೋ... !!.."


ನೋವು ತಡೆಯಲಾಗದೆ ಹೊರಳಾಡ ತೊಡಗಿದ..!


ಮಾಸ್ತರ್ರು ಅಲ್ಲೆ ಇದ್ದ ಹಳ್ಳಿಯ ಜನರನ್ನು ಕೂಗಿ  ...
ಮಾಬ್ಲುವನ್ನು ಕಾನಸೂರಿಗೆ ಕಳಿಸುವ ವ್ಯವಸ್ಥೆ ಮಾಡಿದರು...


ಅಗೆಲ್ಲ ವಾಹನ ಸೌಕರ್ಯ ಇರಲಿಲ್ಲ..


ಹಳ್ಳಿಯವರು ಕಂಬಳಿಯಲ್ಲಿ ಮಾಬ್ಲುವನ್ನು ಹಾಕಿ..
ಕಾನಸೂರಿಗೆ ಹೊತ್ತುಕೊಂಡು ಓಡೋಡಿ ಹೋದರು.. 


ನಮಗೆಲ್ಲ ಹೆದರಿಕೆ ಗಾಭರಿ... ಆತಂಕ... ಕುತೂಹಲ...!!


ನಮ್ಮೂರಿಂದ ಕಾನಸೂರು ನಾಲ್ಕು ಕಿಲೋಮೀಟರ್..
ಸಮತಟ್ಟಾದ ರಸ್ತೆಯೇ ಇಲ್ಲ.. ಮಣ್ಣು ರಸ್ತೆ..


ಅಲ್ಲಿ ನಡೆದು ಬರುವದೇ ಒಂದು ಸಾಹಸ.. !


ಸುಮಾರು ಹೊತ್ತಿನ ಮೇಲೆ ಒಬ್ಬ ಸೈಕಲಿನಲ್ಲಿ ಬಂದ...
ಗಡಿಬಿಡಿಯಲ್ಲಿದ್ದ.. !


ಬಹುಶಃ  ಸೈಕಲ್ಲು ತಲೆ ಮೇಲೆ ಹೊತ್ತು ಬಂದಂತಿತ್ತು... !
ಬಹಳ ಏದುಸಿರು ಬಿಡುತ್ತಿದ್ದ...! 


"ಮಾಸ್ತರ್ರೆ...
ಇಲ್ಲಿ ಕುಷ್ಟ ಅಂದ್ರೆ ಯಾರು..?"


ಮಾಸ್ತರು ಕುಷ್ಟನ ಕಡೆ ನೋಡಿದರು..


ಕುಷ್ಟನಿಗೆ ಕೈಕಾಲು ನಡುಕ ಹುಟ್ಟಿತು...!


ಕಾನಸೂರಿನಿಂದ ಬಂದವ ಬುಸು ಬುಸು ಶ್ವಾಸ ತೆಗೆಯುತ್ತಿದ್ದ...!
ಬೆವರುತ್ತಿದ್ದ...!


" ಕುಷ್ಟ.. 
ನೀನು ಯಾವ ಮಾತ್ರೆ ಕೊಟ್ಟಿದ್ದು..?"


" ಗೊತ್ತಿಲ್ರ... !
ಮನೆಯಲ್ಲಿತ್ತು... ತಂದೆರ್ರಾ...!!.."


ಕಾನಸೂರಿನಿಂದ ಬಂದವ ಬಹಳ ಟೆನ್ಷನ್ ಮಾಡ್ಕೊಂಡಿದ್ದ..
ಸಿಕ್ಕಾಪಟ್ಟೆ ಗಾಭರಿಯಲ್ಲಿದ್ದ.. !


" ಮಾಸ್ತರ್ರೆ...
ಇದು ಬಹಳ ಸೀರಿಯಸ್ ವಿಷಯ...!
ಅಲ್ಲಿ ಹುಡುಗ ಪ್ರಜ್ಞೆ ತಪ್ಪುತ್ತಿದ್ದಾನೆ...!
ಯಾವ ಮಾತ್ರೆ ಅಂತ ಗೊತ್ತಾಗದ ಹೊರತು ಔಷಧ ಕೊಡುವದು ಕಷ್ಟವಂತೆ..
ಕುಷ್ಟನ ಮನೆಯವರನ್ನು ಕೇಳೋಣ .. 
ನಡೀರ್ರೀ.. !.."


ಮಾಸ್ತರ್ರು ನಾವು ಎಲ್ಲರೂ ಕುಷ್ಟನ ಮನೆಗೆ ಹೊರಟೆವು..


ಅಗ ಮಧ್ಯಾಹ್ನ ಊಟಕ್ಕೆ ಬಿಡುವ ಸಮಯ...!


ನಮ್ಮನ್ನೆಲ್ಲ ನೋಡಿ ಕುಷ್ಟನ ಮನೆಯವರೂ ಕಂಗಾಲು...!
ಆತಂಕ.. !!


"ಕುಷ್ಟಾ ..
ಮಾತ್ರೆ ಎಲ್ಲಿತ್ತು..?..?.. "


ಕುಷ್ಟನಿಗೂ ಹೆದರಿಕೆ ಆಗತೊಡಗಿತು.. 
ಧ್ವನಿ ಕಂಪಿಸುತ್ತಿತ್ತು..


"ಅಡಿಗೆ ಮನೆಯಲ್ಲಿ... !
ಮಜ್ಜಿಗೆ ಕಪಾಟಿನಲ್ಲಿ..!
ಒಗ್ಗರಣೆ ಡಬ್ಬ ಇಡುವ ಜಾಗದ  ಪಕ್ಕದಲ್ಲಿತ್ರ ...!!.."


"ಅಲ್ಲಿ ಯಾವ ಮಾತ್ರೆ ಇತ್ತು...?.?"


ಕುಷ್ಟನ ಅಪ್ಪ ತೊದಲಿದ..
ಅವನೂ ಗಾಭರಿಯಲ್ಲಿದ್ದ..!


"ಭೂತನ ಕಟ್ಟೆ ಭೂತದ ಆಣೆ.. ಮಾಡ್ತಿನ್ರಾ..!
ನನಗೆ ಗೊತ್ತಿಲ್ರ..!!..."


ಮತ್ತೆ ಟೆನ್ಷನ್ !!


ಕುಷ್ಟನ  ಅಮ್ಮನನ್ನು ಕರೆಸಲಾಯಿತು..!!


"ಮಜ್ಜಿಗೆ ಕಪಾಟಿನಲ್ಲಿ ಇಟ್ಟ ಮಾತ್ರೆ ಯಾವದು..?.. !.."


ಅಮ್ಮ ಸ್ವಲ್ಪ ನಾಚಿಕೊಂಡಳು..


"ಅದು ಹೆಂಗಸರ ಮಾತ್ರೆರ್ರಾ...
ಹೋದ ವರ್ಷ ತಂದಿದ್ದು... !"


ಮಾಸ್ತರರಿಗೆ ಕೋಪ ಬಂತು...
ಮಾಸ್ತರ್ರು  ಸ್ವಲ್ಪ ಧ್ವನಿ ಏರಿಸಿದರು..


"ನೋಡಮ್ಮ ... 
ಜಲ್ದಿ ಹೇಳು.. !
ಅಲ್ಲಿ ಹುಡುಗ ಪ್ರಜ್ಞೆ ತಪ್ಪುತ್ತಿದ್ದಾನೆ..!
ಯಾವ ಮಾತ್ರೆ ಅಂತ ಹೇಳಿ..
ಮೆಡಿಸಿನ್ ಕೊಡ್ಲಿಕ್ಕೆ ಅವಶ್ಯಕತೆ ಇದೆ.. !.."


ಕುಷ್ಟನ  ಅಮ್ಮ ತಡವರಿಸಿದಳು...


"ಅದು..
ಅದೂ.. ಏನೂ ಇಲ್ರ.. !!
....
ಹೋದ ವರ್ಷ ಗಣೇಶನ ಹಬ್ಬಕ್ಕೆ ...
ತಿಂಗಳ ರಜೆ ಬಾರದಿರಲಿ ಅಂತ ತರಿಸಿದ್ದೇರ್ರಾ...!


ಮುಟ್ಟು ಮುಂದೆ  ಹೋಗುವ ಮಾತ್ರೆ.. !!.. "


ಮಾಸ್ತರ್ರು ಎಚ್ಚರ ತಪ್ಪುವದೊಂದು ಬಾಕಿ...!!


ಅಯ್ಯೋ ರಾಮಾ !!


ಕಾನಸುರಿನಿಂದ ಬಂದವ ಕಂಗಾಲಾದ !


" ಎಷ್ಟು ಮಾತ್ರೆ ಇತ್ತು ?"


"ಯಾವದಕ್ಕೂ ಇರ್ಲಿ ಅಂತ ಹದಿನೈದು ತರ್ಸಿದ್ದೇರ್ರಾ..."


"ಯಾವುದಕ್ಕೂ ಇರ್ಲಿ ಅಂತ ಅಷ್ಟೆಲ್ಲ ತರಿಸಲಿಕ್ಕೆ...
 ಅದೇನು 
ಸಕ್ರೆ ಚೀಲಾನಾ? ?  
ಎಣ್ಣೆ ಡಬ್ಬಾನಾ? ? ಛೆ.. ಛೆ.. !!.."


ಮಾಸ್ತರ್ರು ಈಗ ಕುಷ್ಟನ ಕಡೆ ತಿರುಗಿದರು...


ಕುಷ್ಟ ಎದ್ದೂ ಬಿದ್ದೂ ತೋಟದ ಕಡೆ ಓಡತೊಡಗಿದ...!!
ಮೂರು ನಾಲ್ಕು ದಿನ ಶಾಲೆಗೂ ಬರಲಿಲ್ಲ...!


ಸಧ್ಯ ಮಾಬ್ಲುಗೆ  ಏನೂ ಆಗಲಿಲ್ಲ...


ಮಾಬ್ಲು... ನಮ್ಮೂರಿಗೆ ಈಗಲೂ ಬರ್ತಾನೆ...


ಅವನನ್ನು ನೋಡಿ ...
ನಾವು ಮನೆಗೆ ಬಂದು ಕನಿಷ್ಟ ಹತ್ತು ನಿಮಿಷವಾದರೂ ನಗುತ್ತೇವೆ...


ಕೆಲವು ಬಾರಿ ಬಿದ್ದು ಬಿದ್ದು...!
ಕಣ್ಣಲ್ಲಿ ನೀರು ಬರುವಷ್ಟು.. !!.. 
ಬೇಡ ಬೇಡವೆಂದರೂ ನಗು ಬರುತ್ತದೆ.. ತಡೆಯಲಾರದಷ್ಟು..!








Wednesday, June 15, 2011

....ವ್ಯವಹಾರ...


ಮೊದಲಿಗೆ ನನ್ನ ಬಗೆಗೆ ಹೇಳಿಬಿಡಬೇಕು..

ನಾನು ಬಹಳ ಸಂಪ್ರದಾಯಸ್ಥ ಮನೆತನದಿಂದ ಬಂದವನು...
ಹಳ್ಳಿಯಿಂದ..
ಈಗ ನಾನಿರುವದು ಪಟ್ಟಣದಲ್ಲಿ...

ಟಿವಿ.. ಸಿನೇಮಾ.. 
ಇಂಗ್ಲೀಷ್ ಪತ್ರಿಕೆಗಳು... ಅವುಗಳ ವಿಚಾರಧಾರೆಗಳು..
ನನ್ನನ್ನು ಗೊಂದಲಕ್ಕೆ ಈಡು ಮಾಡಿವೆ..

ದೊಡ್ಡ ದೊಡ್ಡ ಮಾಲ್~ಗಳು.. ಪಬ್ ಗಳು..
ಸ್ನೇಹಿತರ ಸಂಗಡ ಬಾರಿಗೆ ಹೋಗುವದು...

ಮನೆಯಲ್ಲಿ ಅರ್ಧಗಂಟೆ ಪೂಜೆ ಮಾಡುವದು..

ಒಟ್ಟಿನಲ್ಲಿ ವಿರೋಧಾಭಾಸದ ನಡುವೆ ನನ್ನ ಬದುಕು ನಡೆಯುತ್ತಿದೆ..

ನಿಜ ಹೇಳಬೇಕೆಂದರೆ...
ಅತ್ತ ಸಂಪ್ರದಾಯಕ್ಕೂ ಒಗ್ಗದೆ.. ಇತ್ತ ಆಧುನಿಕರಣಕ್ಕೂ ಹೊಂದಿಕೊಳ್ಳದೆ...
ಒಂದು ರೀತಿಯ ಎಡಬಿಡಂಗಿಯಾಗಿಬಿಟ್ಟಿದ್ದೇನೆ..

ಹಾಗಂತ ಎಲ್ಲೂ ಸಲ್ಲದವ ನಾನಲ್ಲ..
ನಾನು ಮೊದಲಿಗೆ ಒಂದು ಮಠದಲ್ಲಿ ಕೆಲಸ ಮಾಡುತ್ತಿದ್ದೆ..
ಗುರುಗಳಿಗೆ ಹತ್ತಿರವಾಗಿ ದೊಡ್ಡ ದೊಡ್ಡ ಜನರ ಹತ್ತಿರದ ಪರಿಚಯವೂ ಆಗಿದೆ ಅನ್ನಿ...

ನಾನು ಭಾಷಣವನ್ನು ತುಂಬಾ ಚೆನ್ನಾಗಿ ಮಾಡುತ್ತೇನೆ...

ಎಲುಬಿಲ್ಲದ ನಾಲಿಗೆ ಹೇಳುವ ಮಾತಿಗೇನು..?
ಆತ್ಮಸಾಕ್ಷಿಯ ಚಿಂತೆ ಬೇಕಿಲ್ಲ..

ಯಾಕೋ ಆ ಕೆಲಸ ಬೇಸರವಾಯಿತು... ಬಿಟ್ಟು ಬಂದೆ..

ಸ್ವಂತ ಬಿಸಿನೆಸ್ ಮಾಡೋಣ ಅಂತ ಜೆರಾಕ್ಸ್ ಅಂಗಡಿ ಇಟ್ಟೆ... ಸರಿಯಾಗಿ ನಡೆಯಲಿಲ್ಲ..

ಸ್ಟೇಷನರಿ ಅಂಗಡಿ ಇಟ್ಟೆ... ಮತ್ತೆ ಫೇಲಾದೆ...

ಅಷ್ಟರಲ್ಲಿ ಅಲ್ಲಿಯವರೆಗೆ ಕಟ್ಟಿಟ್ಟ ದುಡ್ಡು ಖರ್ಚಾಯಿತು...

ದಿನನಿತ್ಯ ಅಡಿಗೆ ಮನೆಯಿಂದ ಶಬ್ಧಗಳು ಜೋರಾಗಿ ಬರತೊಡಗಿದವು..

ಮನೆಯಲ್ಲಿ ಗಂಡಿನ ಸಂಪಾದನೆ ಇರದಿದ್ದಲ್ಲಿ ಹಂಗಿನ ಮಾತು ಕೇಳುವದು ಅನಿವಾರ್ಯ..

"ನಾನು ಓದಿದ್ದೇನೆ.. ನಾನೂ ಕೆಲಸ ಮಾಡುತ್ತೇನೆ.."

ಮಡದಿಯ ಮಾತಿಗೆ ಹೂಂ ಹೇಳಬೇಕಾಯಿತು..


ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತು..

ಇತ್ತ ನಾನು ನೌಕರಿಯನ್ನೂ ಮಾಡಲಾಗದೆ..
ಸ್ವಂತ ಬಿಸಿನೆಸ್  ಮಾಡಲು ಹಣವಿಲ್ಲದೆ ಅತಂತ್ರನಾದೆ...

ಹೆಂಡತಿಯ ಎದುರಿಗೆ ಗಟ್ಟಿಯಾಗಿ ನಿಂತು ಮಾತಾನಾಡುವ ಧೈರ್ಯ ಕಳೆದುಕೊಂಡಿದ್ದೆ..
ಪ್ರತಿಯೊಂದಕ್ಕೂ ಹೆಂಡತಿಯ ಹತ್ತಿರ ಬೇಡಬೇಕಾದ ಸ್ಥಿತಿ ..

ಬದುಕು ಬಹಳ ಕಷ್ಟವಾಯಿತು..

ಇನ್ನೊಂದು ವಿಷಯ..

ನಾನು ಖಾಲಿಯಾಗೇನೂ ಇರಲಿಲ್ಲ..

ಆಗಾಗ ಭಾಷಣ  ಮಾಡುವ ಅವಕಾಶ ಸಿಗುತ್ತಿತ್ತು..
ನಾನು ಚೆನ್ನಾಗಿ ಮಾತನಾಡುತ್ತಿದ್ದೆ...
ಗೌರವವೂ ಸಿಗುತ್ತಿತ್ತು..

ಶಾಲುಗಳು.. ಹಣ್ಣಿನ ಬುಟ್ಟಿಯೂ ಯಥೇಚ್ಛವಾಗಿ ಸಿಗುತ್ತಿತ್ತು...


ಇದರಿಂದ ಹೊಟ್ಟೆ ತುಂಬುವದಿಲ್ಲವಲ್ಲ...
ಮನೆಯಲ್ಲಿ ಮರ್ಯಾದಿಯೂ ಹೆಚ್ಚಲಿಲ್ಲ....

ಈ ಪರಾವಲಂಬಿ ಬದುಕು ಸಾಕು ಸಾಕಾಯಿತು..

ಒಂದುದಿನ ನನ್ನಾಕೆ ಸಡಗರದಿಂದ ಬಂದಳು..
ನಾನು ಅನ್ಯಮನಸ್ಕನಾಗಿ ಹಾಲಿನಲ್ಲಿ ಕುಳಿತ್ತಿದ್ದೆ...

"ರೀ...
 ಗುಡ್ ನ್ಯೂಸ್...!!. "

"ಏನು?"...

" ರೀ..
ನಮ್ಮ ಮಾಲೀಕರು ತುಂಬಾ ಒಳ್ಳೆಯವರು..
ಪ್ರಾಮಾಣಿಕರನ್ನು ಬಹಳ ಇಷ್ಟಪಡುತ್ತಾರೆ..
ನನಗೂ  ಸಂಬಳ ಹೆಚ್ಚಿಸಿದ್ದಾರೆ.."

ಬಹಳ ಸಂಭ್ರಮದಿಂದ ಹೇಳುತ್ತಿದ್ದಳು..

ನನ್ನಾಕೆ ನನ್ನನ್ನು ಹಂಗಿಸುತ್ತಿದ್ದಾಳೆ ಅನ್ನಿಸಿತು...
ಖುಷಿಯಾಗಲಿಲ್ಲ... ಸತ್ತುಹೋಗಿಬಿಡಬೇಕು ಅನ್ನುವಷ್ಟು ದುಃಖವಾಯಿತು..

"ರೀ..
ವಿಷಯ ಅದಲ್ಲ..
ನಾನು  ನಿಮ್ಮ ಬಗೆಗೆ ಹೇಳಿದ್ದೆ...
ಅವರಿಗೆ ನಿಮ್ಮ ಪ್ರತಿಭೆಯ ಬಗೆಗೆ ಖುಷಿಯಾಯಿತು..
ನಿಮಗೂ ಒಂದು ಬಿಸಿನೆಸ್ ಕೊಡ್ತಾರಂತೆ...
ನೀವು ಸ್ವತಂತ್ರವಾಗಿ ವ್ಯವಹಾರ ಮಾಡಬಹುದು...
ಇನ್ವೆಸ್ಟ್ ಮೆಂಟ್ ಎಲ್ಲದೂ ಅವರದ್ದು...

ರೀ.. 
ಇನ್ನು ಸ್ವಲ್ಪ ಹೊತ್ತಿನಲ್ಲಿ ಅವರು ನಮ್ಮ ಮನೆಗೆ ಬರ್ತಾರೆ...
ನಿಮ್ಮ ಬಳಿ ಮಾತನಾಡಲಿಕ್ಕೆ..
ನೀವು ಹೂಂ ಅಂದುಬಿಡಿ.. ಬದುಕು ಸುಂದರವಾಗುತ್ತದೆ...

ನಮ್ಮ ಮಾಲಿಕರು ತುಂಬಾ ಒಳ್ಳೆಯವರು...
ಪ್ರಾಮಾಣಿಕರನ್ನು ಕಂಡರೆ ಜೀವಕ್ಕೆ ಜೀವ ಕೊಡುತ್ತಾರೆ.."

ನನಗೆ ಆಶ್ಚರ್ಯವೂ... ಕುತೂಹಲವೂ ಆಯಿತು..

ಇವಳು ಸಂಭ್ರಮದಿಂದ ಅಡಿಗೆ ಮನೆಗೆ ಓಡಿದಳು..

ಅಡಿಗೆ ಮನೆಯಿಂದ ಒಳ್ಳೋಳ್ಳೆ ರುಚಿ ರುಚಿಯಾದ ಸುವಾಸನೆ ಬರತೊಡಗಿತು..
ಬಹುಷಃ ಮಾಲಿಕರು ಒಳ್ಳೆಯವರೇ ಇದ್ದಿರಬೇಕು..

ಹೆಂಗಸರ ಪ್ರೀತಿ ಅಡಿಗೆಯ ಸುವಾಸನೆಯಿಂದ ಗೊತ್ತಾಗುತ್ತದೆ..

ಸ್ವಲ್ಪ ಹೊತ್ತಿನಲ್ಲಿ ಮಾಲಿಕರು ಬಂದರು..
ಅವರ ಸಂಗಡ ಒಬ್ಬ ಹುಡುಗಿಯೂ ಇದ್ದಳು..

ಬಹಳ ಗತ್ತಿನ ಮನುಷ್ಯ...

"ನಿಮ್ಮ ಮಡದಿಯವರ ಕಾರ್ಯ ಕೌಶಲ್ಯತೆ.. 
ಚಾಕಚಕ್ಯತೆಗೆ ಮಾರುಹೋಗಿದ್ದೇನೆ..
ಅವರು ನಮ್ಮ ಕಂಪೆನಿಗೆ ಅನಿವಾರ್ಯ ಆಗಿಬಿಟ್ಟಿದ್ದಾರೆ..

ಅವರು ನಿಮ್ಮ ಬಗ್ಗೆ ಹೇಳಿದ್ದಾರೆ..
ಇಷ್ಟೆಲ್ಲ ಪ್ರತಿಭೆಯಿದ್ದು ಯಾವ ವ್ಯವಹಾರವೂ ಕೈಗೂಡುತ್ತಿಲ್ಲ ಅಂತ.."

ನಾನು ತಲೆ ಹಾಕಿದೆ..

"ನೋಡಿ..
ನಿಮಗೆ ಒಂದು ಆಫೀಸು ಮಾಡಿಕೊಡುತ್ತೇನೆ..
ನಮ್ಮ ಪ್ರಾಡಕ್ಟುಗಳನ್ನು ನಿಮಗೆ ಕೊಡುತ್ತೇನೆ...
ಅದನ್ನು ಖರಿದಿಸುವ ಏಜನ್ಸಿಗಳನ್ನು ನಿಮಗೆ ಪರಿಚಯ ಮಾಡಿಕೊಡುತ್ತೇನೆ..
ಅವರು ನಮ್ಮ ಪ್ರಾಡಕ್ಟುಗಳನ್ನು ನಿಮ್ಮ ಬಳಿಯೇ ಖರಿದಿಸುತ್ತಾರೆ..


ಇದರಲ್ಲಿ ನಿಮಗೆ ಲಾಭದಲ್ಲಿ ಆರು  ಪರ್ಸಂಟೇಜ್ ಕೊಡುತ್ತೇನೆ..

ಇನ್ನೊಂದು ವಿಷಯ..
ಇದರಿಂದ ನನಗೇನು ಲಾಭ ಅಂದುಕೊಳ್ಳ ಬಹುದು...

ಇದರಿಂದ ನನಗೆ ಇನ್~ಕಮ್ ಟ್ಯಾಕ್ಸ್ ಉಳಿಯುತ್ತದೆ..
ಅದು ಬಲುದೊಡ್ಡ ಮೊತ್ತ..
ನನಗೆ ಪ್ರಾಮಾಣಿಕರು ಬೇಕು..

ನಿಮಗೆ ರಿಸ್ಕ್ ಇಲ್ಲದ ಬಿಸಿನೆಸ್..
ಇಬ್ಬರಿಗೂ ಅನುಕೂಲ ಏನಂತೀರಿ..?"

ಅವರು ಕೊಟ್ಟ ಅವಕಾಶ ನನಗೆ ಹಿಡಿಸಿತು..

"ನೋಡಿ..
ನಿಮಗೆ ನಾನು ಕೊಡುವದು ಕಡಿಮೆ ಅಂತ ಅನ್ನಿಸ ಬಹುದು..
ಇದರಲ್ಲಿ ರಿಸ್ಕ್.. ಖರ್ಚು ಎಲ್ಲವೂ ನನ್ನದು.."

ಅವರು ಮಾತು ನನಗೆ ಇಷ್ಟವಾಯಿತು..

ಮುಳುಗುತ್ತಿರುವವನಿಗೆ ನೆಪಕ್ಕೆ ಹುಲುಕಡ್ಡಿ ಸಿಕ್ಕರೂ ಸಾಕು...ಬದುಕಿಕೊಳ್ಳಬಹುದು..

ಮೇಲೇಳಲು ಅವಕಾಶಕ್ಕಾಗಿ ಕಾಯುತ್ತಿದ್ದೆ...
ಒಪ್ಪಿಕೊಂಡೆ..

"ನನ್ನ ಕಂಪನಿಯ ಪ್ರಾಡಕ್ಟುಗಳ ವಿವರ ಕಾರಿನಲ್ಲಿದೆ..
ತರುತ್ತೇನೆ ಇರಿ.."
ಅವರು ಹೊರಗಡೆ ಹೋದರು..

ಅವರ ಸಂಗಡ ಬಂದಿದ್ದ ಹುಡುಗಿ ಮಾತನಾಡತೊಡಗಿದಳು..

"ಸರ್..
ನೀವು ಚೆನ್ನಾಗಿ ಮಾತನಾಡುತ್ತೀರಂತೆ.. ತುಂಬಾ ಓದಿಕೊಡಿದ್ದೀರಂತೆ..
ನನಗೆ ನಿಮ್ಮಿಂದ ಒಂದು ಸಹಾಯವಾಗಬೇಕು.."

ಅವಳ ಮುಖನೋಡಿದೆ...

ಆಕರ್ಷಕ ಮುಗುಳ್ನಗುವ ಕಣ್ಣುಗಳು..
ಕೆನ್ನೆ, ತುಟಿ.. ಎಲ್ಲವೂ ಚಂದ.. ಬಹಳ ಚಂದ..

"ಸರ್..
ನಮ್ಮದೊಂದು ಕ್ಲಬ್ ಇದೆ..
ಅಲ್ಲಿ ನಿಮ್ಮಂಥಹ ಪ್ರತಿಭಾವಂತ ಮಾತುಗಾರರನ್ನು ಕರೆದು ಭಾಷಣ ಮಾಡಿಸುತ್ತೇವೆ..
ನಿಮ್ಮಂಥವರ ಅಗತ್ಯ ನಮ್ಮ ಕ್ಲಬ್ಬಿಗೆ ಬಹಳ ಅಗತ್ಯವಿದೆ..

ನೀವು ಅಲ್ಲಿ ಆಗಾಗ ಭಾಷಣ ಮಾಡಲು ಸಾಧ್ಯವೇ?
ನಿಮ್ಮ ಭಾಷಣ ಕೇಳಿ ನಿಮಗೆ ಏನು ಕೊಡ ಬಹುದು ಅಂತ ನಿರ್ಣಯ ಮಾಡೋಣ..
ಪ್ರತಿಭೆ ನಮ್ಮ ಕ್ಲಬ್ಬಿಗೆ ಬೇಕು..

ಸರ್..
ನಾಳೆ ನಮ್ಮ ಕ್ಲಬ್ಬಿನಲ್ಲಿ ನಿಮ್ಮ ಭಾಷಣ..ಇಟ್ಟುಕೊಳ್ಳೋಣವೆ..?.."

ನನಗೆ ಬಹಳ ಸಂತಸವಾಯಿತು..

"ಧಾರಾಳವಾಗಿ.. ಖಂಡಿತವಾಗಿ ಇಟ್ಟುಕೊಳ್ಳಿ ಬರ್ತೇನೆ..
ಯಾವ ವಿಷಯದ ಬಗೆಗೆ ಮಾತನಾಡಬೇಕು..? "

" ಶೀಲ... 
ಮನಸ್ಸಿಗೆ ಸಂಬಂಧ ಪಟ್ಟಿದ್ದೋ... ದೇಹಕ್ಕೋ..
ಇದರ ಬಗೆಗೆ ಮಾತನಾಡಬೇಕು..."

ವಿಷಯ ನನಗೆ ಹಿಡಿಸಿತು..

" ಖಂಡಿತವಾಗಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ.."

ಬಹಳ ಖುಷಿಯಾಯಿತು...

ಇದೇನಿದು...?
ಬಂದರೆ ಎಲ್ಲಕಡೆಯಿಂದಲೂ ಬರುತ್ತದಲ್ಲಾ?..

ಇದಕ್ಕೂ ನಾನು ಒಪ್ಪಿಗೆ ಸೂಚಿಸಿದೆ..

ಅಷ್ಟರಲ್ಲಿ ಮಾಲಿಕರು ತಮ್ಮ ಕಂಪನಿಯ ಕೆಲವು ಫೈಲುಗಳನ್ನು ಕೊಟ್ಟರು..
ನಾನು ವಿನಮ್ರನಾಗಿ ಸ್ವೀಕರಿಸಿದೆ..

ನನ್ನಾಕೆ ರುಚಿ ರುಚಿಯಾದ ತಿಂಡಿಗಳನ್ನು ಕೊಟ್ಟಳು...
ಅವಳ ಸಂಭ್ರಮ.. ಸಡಗರ ನೋಡಿ ನನಗೂ ಸಂತೋಷವಾಯಿತು..

ನನಗೂ ನನ್ನ ನಿಷ್ಕ್ರಿಯತೆ ಬಗೆಗೆ ಇದ್ದ ಕೀಳರಿಮೆ ದೂರವಾಗತೊಡಗಿತು..

ನನ್ನ ಹೆಂಡತಿಯ ಬಗೆಗೆ ಬಹಳ ಸಂತಸವಾಯಿತು..
ಹೆಮ್ಮೆಯೂ ಉಂಟಾಯಿತು..
ಬಹುದಿನಗಳ ನಂತರ ಮನೆಯಲ್ಲಿ ಸಂಭ್ರಮ.. ಸಂತೋಷ..
ದೊಡ್ಡ ನಗು ಎಲ್ಲವೂ ಇತ್ತು...

ಮನೆಯ ಸಂತೋಷ ...
ಹೆಂಗಸರ 
ನಗುವಿನಲ್ಲಿದೆ...
ಅವರ  ಸಂಭ್ರಮದಲ್ಲಿದೆ ..!

ಅವರು ಹೊರಟರು..

ಮಾಲಿಕರು ಕಾರು ಹತ್ತುವ ಮೊದಲು ನನ್ನನ್ನು ಕರೆದರು..

"ನೋಡಿ ..
ನಾಳೆ ಒಂದು ಕಾರು ನಿಮ್ಮ ಮನೆಗೆ ಬರುತ್ತದೆ...
ನಮ್ಮ ಡ್ರೈವರ್ ನಿಮಗೆ ನಿಮ್ಮ ಆಫೀಸ್ ಇರುವ ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ...
ನಿಮಗೆ ಹೇಗೆ ಬೇಕೋ ಹಾಗೆ ಒಳಗಿನ ಅಲಂಕಾರ ವಿನ್ಯಾಸ ಮಾಡಿಸಿಕೊಳ್ಳಿ..
ಖರ್ಚು ನನ್ನದು.. ಬಿಲ್ ಕಳಿಸಿಕೊಡಿ.."

ನನಗೆ ಒಮ್ಮೆ ಚಿವುಟಿಕೊಳ್ಳೋಣ ಅನ್ನಿಸಿತು..
ಇದೆಲ್ಲ ನಿಜವಾ?

ಮರುದಿನ ಬಹಳ ಖುಷಿಯಿಂದ ನನ್ನ ನೂತನ ಆಫೀಸಿಗೆ ಹೋಗಿ ಬಂದೆ..
ಮಾಲಿಕರು ಒಬ್ಬ ಆರ್ಕಿಟೆಕ್ಟ್ ಕಳಿಸಿಕೊಟ್ಟಿದ್ದರು..
ಒಂದು ಸುಂದರ ವಿನ್ಯಾಸ ಮಾಡಲು ಹೇಳಿದೆ..

ಬದುಕು ಇದ್ದಕ್ಕಿದ್ದಂತೆ ಸುಂದರ ಅನ್ನಿಸಿತು...
ಹಳೆಯದನ್ನು ನೆನಪು ಮಾಡಿಕೊಳ್ಳಲು  ಮನಸ್ಸು ಬಯಸಲಿಲ್ಲ..

ಮಧ್ಯಾಹ್ನದ ಮೇಲೆ ಭಾಷಣಕ್ಕೆ ಹೋದೆ..

ಅಲ್ಲಿಯೂ ಸಂಭ್ರಮದ ಸ್ವಾಗತ..!

ಭಾಷಣ ಮಾಡಲು ವೇದಿಕೆ ಹತ್ತಿದೆ..

ಭಾಷಣವೆಂದರೆ ನನಗೆ ಕರತಲಾಮಲಕ.. ಲೀಲಾಜಾಲ...
ಶುರು ಮಾಡಿದೆ...

"ಶೀಲವೆಂದರೆ ದೇಹಕ್ಕೆ ಸಂಬಂಧಿಸಿದ್ದಲ್ಲ.. 
ಮನಸ್ಸಿಗೆ ಸಂಬಂಧಿಸಿದ್ದು...

ಆಹಾರ, ನಿದ್ರಾ.. ಮೈಥುನ.. ಇವೆಲ್ಲ ದೇಹದ ಅಗತ್ಯಗಳು...
ಹಸಿವೆಯಾಯಿತು.. ತಿನ್ನಬೇಕು.. ತಿನ್ನುತ್ತೇವೆ..

ಆಯಾಸವಾಯಿತು ನಿದ್ರೆ ಮಾಡಬೇಕು..ಮಾಡುತ್ತೇವೆ..

ಮೈಥುನಕ್ಕಾಗಿ ಇಷ್ಟೆಲ್ಲಾ ಕಷ್ಟ ಯಾಕೆ?
ಒಂದು ಸಹಜವಾದ ಕ್ರಿಯೆಗೆ ದೇಹ ಸಹಕರಿಸುತ್ತದೆ..
ಅದು ಯಾವುದಾದರೇನು? 
ದೇಹದ ಪ್ರತಿಸ್ಪಂದನೆಯಾದರೆ ಸಾಕು..

ಮುಖ್ಯವಾಗಿ ಮನಸ್ಸು ಒಪ್ಪಬೇಕು..
ಮನಸ್ಸಿನದೆ... ಗೊಜಲು... ಗೊಂದಲ..

ನಾವು ಖರೀದಿಸುವ ಅಂಗಡಿಯಲ್ಲಿ   ಬಾಕ್ಸ್  ಒಡೆದಿದ್ದರೆ  ನಾವು ಖರಿದಿಸುವದಿಲ್ಲ..
ಸೀಲ್ ಒಡೆಯದ ಬಾಕ್ಸ್.. ಕೇಳುತ್ತೇವೆ...

ಮುಖ್ಯವಾಗಿ ಬಾಕ್ಸ್  ಒಳಗಿರುವ ವಸ್ತು ಬಳಸಿಕೊಳ್ಳಲು ಇಷ್ಟೆಲ್ಲ ತಾನೆ..?

ಬಾಕ್ಸ್ ಒಳಗಿರುವ ವಸ್ತು ಚೆನ್ನಾಗಿದ್ದರೆ ಸಾಕಲ್ಲವೇ?


ಒಡೆದಿರುವ ಬಾಕ್ಸ್  ಮನಸ್ಸು ಬಯಸುವದಿಲ್ಲ..



ಇದೆಲ್ಲ ಮನಸ್ಸಿಗೆ ಸಂಬಂಧಿಸಿದ್ದು...


ಶೀಲ ಮನಸ್ಸಿಗೆ ಸಂಬಂಧಿಸಿದ್ದು.."

ನನ್ನ ಮಾತು ಆ ಚಂದದ ಹುಡುಗಿಗೆ ಬಹಳ ಇಷ್ಟವಾಯಿತು..
ಅವಳ ಕಣ್ಣುಗಳೇ.. ಹೇಳುತ್ತಿದ್ದವು...

"ಸರ್.. 
ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿದ್ದವು..
ನೀವು ನಮ್ಮ ಕ್ಲಬ್ಬಿನ ಆಸ್ತಿ..
ನಮ್ಮ ಕ್ಲಬ್ಬಿನ ಸದಸ್ಯತ್ವ ಬಹಳ ದುಬಾರಿ...
ಆದರೆ.. ನಿಮಗೆ 
ನಿಮ್ಮ ಕುಟುಂಬಕ್ಕೆ ಇದು ಫ್ರೀ..
ಇಲ್ಲಿನ ಊಟ, ತಿಂಡಿ.. ಎಲ್ಲವು ನಿಮಗೆ ಫ್ರೀ.."

ನನಗೆ ಆಶ್ಚರ್ಯವಾಯಿತು...

"ಸರ್...
ಇದು ಫ್ರೀ ಅಂದರೆ  ಪುಕ್ಕಟೆಯಲ್ಲ..
ನೀವು ಆಗಾಗ ಇಲ್ಲಿ ಭಾಷಣ ಮಾಡಬೇಕಾಗುತ್ತದೆ...

ನಿಮ್ಮ ಭಾಷಣದ ಪ್ರತಿಭೆಗೆ ನಾವು ಕೊಡುತ್ತಿರುವ ಬೆಲೆ ಇದು..."

ನಾನು ತಲೆಯಾಡಿಸಿದೆ...
ಮನಸ್ಸು ಸಂತೋಷದಿಂದ ಬೀಗುತ್ತಿತ್ತು...

" ಸರ್...
ಇನ್ನೊಂದು ವಿಷಯ...
ನಿಮಗೆ ಈ ಕ್ಲಬ್ಬಿನ ಸಂಗಡ ನನ್ನ ಪ್ರಿತಿಯನ್ನೂ ಕೊಡುವೆ..
ನಿಮಗಾಗಿ ಪ್ರೀತಿಯಿಂದ ನಾನಿರುವೆ..
ನನ್ನ ಸೇವೆಯನ್ನೂ ನೀವು ಬಳಸಿಕೊಳ್ಳಬಹುದು.."


ಬಹಳ ಗೂಡಾರ್ಥದ ಮಾತುಗಳು.. !!


ಹುಡುಗಿ ಚಂದವಿದ್ದರೂ... ಮನಸ್ಸು ಒಪ್ಪಲಿಲ್ಲ...
ಮಡದಿ.. ಸಂಸಾರ..ಅವಳ ಪ್ರೀತಿ ನೆನಪಾಯಿತು..


ನನಗೆ ಇದು ಇಷ್ಟವಾಗಲಿಲ್ಲ..


"ನೋಡಿ..
ಎಲ್ಲದಕ್ಕೂ ಮನಸ್ಸು ಒಪ್ಪಬೇಕಲ್ಲ...

ಒಂದು ವೇಳೆ ಮನಸ್ಸು ಒಪ್ಪಿದರೂ..
ಸಂದರ್ಭ...
ಸಂಬಂಧಗಳು.. ಒಪ್ಪಬೇಕಲ್ಲ...

ಕೆಲವೊಂದನ್ನು ನಮ್ಮ  ಬಳಿಯಲ್ಲಿಯೇ ಹುಡುಕಿಕೊಳ್ಳಬೇಕು...
ಹೊರಗಡೆ ಎಷ್ಟು ಹುಡುಕಿದರೂ ಸಿಗುವದಿಲ್ಲ..


ಬಳಿಯಲ್ಲಿ ಸಿಗದಿರುವದು ಹೊರಗಡೆಯೂ ಸಿಗುವದಿಲ್ಲ.."

ಅವಳಂತೆಯೇ ನಾನು ಕೂಡ ಮಾರ್ಮಿಕವಾಗಿ ಹೇಳಿದೆ...

ಮನೆಗೆ ಬಂದೆ..
ಕತ್ತಲೆಯಾಗಿಬಿಟ್ಟಿತ್ತು ..


ನನ್ನ ಸಂತೋಷವನ್ನು ಮಡದಿಯೊಡನೆ ಹೇಳಿಕೊಳ್ಳಬೇಕಿತ್ತು . !!

ಸ್ವಲ್ಪ ದೂರದಲ್ಲಿರುವಾಗಲೇ ಮನೆಯ ಮುಂದೊಂದು ಕಾರು ನಿಂತಿರುವದು ಕಾಣಿಸಿತು...

ನನಗೆ ಆಘಾತವಾಯಿತು..

"ಅದು ಮಾಲಿಕರ ಕಾರು..!!"

ಹಾಲಿನಲ್ಲಿ ಲೈಟ್ ಇರಲಿಲ್ಲವಾಗಿತ್ತು...
ಇಣುಕಿನೊಡಿದೆ.. 
ಬೆಡ್ ರೂಮಿನ ಬೆಳಕಿತ್ತು...!!

ಮನೆಯಲ್ಲಿ ಬೇರೆ ಎಲ್ಲೂ ಬೆಳಕಿರಲಿಲ್ಲ...

ಇದು ನಿಜವಾ..? 
ಸತ್ಯವಾ?
ಕೋಪದಿಂದ ಮೈಯೆಲ್ಲ ಉರಿಯತೊಡಗಿತು...

ಏನು ಮಾಡಲಿ...? 
ಏನು ಮಾಡಲಿ..? ಛೇ...!

ಅಷ್ಟರಲ್ಲಿ ಆ ಹುಡುಗಿಯ ಫೋನ್.. !

"ಸರ್...
ನಾನು ಮಾತಾಡಿದ್ದರ ಬಗೆಗೆ ಬೇಸರಗೊಳ್ಳಬೇಡಿ..
ಮಾಲಿಕರು ...
ನಿಮಗೆ ಎಲ್ಲರೀತಿಯ ಸಹಕಾರ ಕೊಡಲಿಕ್ಕೆ.. ಹೇಳಿದ್ದರು..
ಹಾಗಾಗಿ ಹೇಳಿದೆ..
ನೀವು ಹೇಳಿದ್ದು ನಿಜ.. 
ಶೀಲ ಮನಸ್ಸಿಗೆ ಸಂಬಂಧಿಸಿದ್ದು...

ಬೇಸರ ಮಾಡ್ಕೋಬೇಡಿ ನನ್ನ ಬಗ್ಗೆ.."

ನನಗೆ ಮೈಯೆಲ್ಲಾ ಉರಿಯುತ್ತಿತ್ತು...

"ಖಂಡಿತ ಬೇಸರ ಇಲ್ಲಮ್ಮ...
ನಾಳೆ ಬೆಳಿಗ್ಗೆ ನಮ್ಮ ಮನೆಗೆ ಬರ್ತೀರಾ..?
ನನ್ನಾಕೆ ಆಫೀಸಿಗೆ ಹೋಗಿರ್ತಾರೆ.."

"ಏನ್ ಸರ್ ಇದು.. ?
ನಿಜವಾ?
ನಾನು ಬರಬಹುದಾ?"


ಬದುಕಲು ಹೊಸ ಆಸೆ..
ಕನಸುಗಳನ್ನು ಹುಡುಕಬೇಕಿತ್ತು....


"ದಯವಿಟ್ಟು ಬನ್ನಿ..
ಶೀಲ ಅನ್ನೋದು ಮನಸ್ಸಿಗೂ.. ದೇಹಕ್ಕೂ ಸಂಬಂಧಿಸಿದ್ದು ಅನ್ನೋದಕ್ಕಿಂತ..

ಶೀಲ ಅನ್ನೋದು ಸಂದರ್ಭಕ್ಕೆ.. ವ್ಯವಹಾರಕ್ಕೆ..ಸಂಬಂಧಿಸಿದ್ದು.. "


...........


(ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ...)