Friday, February 26, 2010

ತಾಯಿ ಮಗು ಸೆಂಟಿಮೆಂಟು..! ಮರಳು .. ಸಿಮೆಂಟು.. ಕಾಂಕ್ರೀಟು...!

ಪ್ರತಿ ಮನೆ ಕಟ್ಟುವಾಗ..
ಇಂತಹದೊಂದು ಬದುಕು ಕಣ್ಣಿಗೆ  ಕಾಣುತ್ತದೆ...
ಕಾಡುತ್ತದೆ..

ಇಲ್ಲಿ ಕಷ್ಟವಿದೆ.. ಬವಣೆಯಿದೆ..
ಮೋಸವಿದೆ..
ಮಮತೆಯಿದೆ..

ಎಲ್ಲ ಇಲ್ಲದುದರಗಳ ನಡುವೆ...
ವಿಷಾದವಿದೆ..
ನಗುವೂ ಇದೆ...

ಈ ತಾಯಿಗೆ ...
ಎಲ್ಲಿರುತ್ತದೆ..ಈ ತಾಳ್ಮೆ...!!  ??
ಇಷ್ಟೊಂದು   ಮಮತೆ.. ವಾತ್ಸ್ಯಲ್ಲ...!!..??



ಸುಡು ಬಿಸಿಲು.. ಕಾಂಕ್ರಿಟ್  ಕೆಲಸದ ಭರಾಟೆ.. ನಮ್ಮ ಬಗ್ಗೆ ಗಮನವೆಲ್ಲಿ...? 

ಅಮ್ಮಾ... ಹಸಿವಾಗಿದೆ...! ಬೇಗ ಬಾರಮ್ಮಾ... !!


ಆಡೋಣಾ...ನಾನು... ನೀನು...!!
 ಈ ಮರಳಲ್ಲಿ..
ಈ ಬಿಸಿಲಲ್ಲಿ...!!

ಅಮ್ಮಾ... ಯಾವಾಗ ಕೆಲಸ ಮುಗಿಯುತ್ತದಮ್ಮಾ...?

ಇದು ನನ್ನ  ಆಟ... ನನ್ನ ಪಾಠ.. !


ಈ ಭೂಮಿಯೇ ಹಾಸಿಗೆ..!
ಆಗಸವೇ ಹೊದಿಕೆ...!!
ಇದೆಂಥಹ  ಕೆಟ್ಟದಾದ...   ಕಹಿ ಜಗತ್ತು...!!  ??


ನಿನ್ನ ಜೊತೆ ನಾನೂ  ಬರ್ಲೇನೋ...??

ಮಗುವೆ...
ನಿನ್ನ ಹೂ ನಗೆ...
ಭರವಸೆ  ಎನ್ನ ಬಾಳಿಗೆ....



ನನ್ನ ರಾಜ..! ನನ್ನ ಮುದ್ದು ಕಂದ...!

ಹಸಿವೆ ಯಾಗಿದೆಯಾ..? ಸ್ವಲ್ಪ  ಇರು  ..! ಈಗ ಉಟ ಕೊಡುತ್ತೇನೆ...!

ಮರಳು...
ಮರುಳು..
 ಈ ಬದುಕು..!
ಈ ಬಾಲ್ಯ... !

ಬುತ್ತಿ ಕೊಡುವೆನೆಂದ  ಅಮ್ಮ ಬರಲಿಲ್ಲ...!
ಕೆಲಸವಿನ್ನೂ ಮುಗಿದಿಲ್ಲ... !


ಮುದ್ದು ಕಂದನಿಗೆ ಮೊಲೆಯುಣಿಸಿ  ಬರುವೆ...
 ಸ್ವಲ್ಪ ಕಾಯುತ್ತಿರಾ...?

ಏನೂ ಹೇಳಿದ್ರೂ ಸುಮ್ಮನಿರ್ತಾ  ಇಲ್ಲ..
ಈ ತಂಗಿ..!!.
ಅಮ್ಮಾ  ಬೇಗ.. ಬಾರಮ್ಮಾ...!!

ಇದೇ.. ನಿನ್ನ  ಸುಪ್ಪತ್ತಿಗೆ...
ಮೆತ್ತನೆಯ ಹಾಸಿಗೆ... ಮಗುವೆ...!!


ಅಳ ಬೇಡಾ...
ಕಂದಾ  ಅಳ ಬೇಡಾ... !
ನಿನ್ನ ಅಳುವ ಗಮನಿಸುವವರು
ಯಾರೂ... ಇಲ್ಲಿಲ್ಲಾ...!

 ಅತ್ತೂ.. ಅತ್ತೂ..
ಬತ್ತಿ..
ಬರಿದಾಗದಿರಿ...
ಭಾವಗಳೇ....!

ಹಸಿವೆ.. 
ದುಃಖ... ಒತ್ತರಿಸಿದರೂ..
 ಬತ್ತುತ್ತಿದೆ .. ಕಣ್ಣಿರು......!

ಕಮರಿ...
ಕರಗಿ
 ಹೋಗದಿರಿ...
ಕಂದಮ್ಮಗಳೇ..
ನಿಮ್ಮ...
ಕನಸುಗಳ ಜೊತೆ......
ಕಣ್ಣಿರ ಧಾರೆಯಾಗಿ...!

ಅಮ್ಮಾ... ಯಾವಾಗ ಮುಗಿಯುತ್ತದಮ್ಮಾ  ಈ ಕೆಲಸ...?

ಬತ್ತಿದಾ... ಕಣ್ಣಿರಲು ಆಸೆಯಿದೆ.. ಇನ್ನೆಕೋ...?
ದೇಹಕೆ.. ಉಸಿರೇ.. ಸದಾ ಭಾರಾ...
ನೀನೆ..... ಭರವಸೆಯ ಆಧಾರಾ...!

 
ಉಪ್ಪರಿಗೆಯ ಸುಪ್ಪತ್ತಿಗೆ.... ಕಟ್ಟುತ್ತಿರುವೆ ಕಂದಾ...!


ಇದೂ.. ಒಂದು  ಬದುಕು...
ನನ್ನ ಕಂದನಿಗೂ
ಒಂದು ಬದುಕು ಕೊಡ ಬೇಕಿದೆ...
ಕನಸು... ಕಟ್ಟ ಬೇಕಿದೆ...

ತಾಯಿ ಎಂಬ ದೈವಕೆ..
ಬೇರಾರೂ ಸಾಟಿಯೇ...??...!!


ಹಾದಿ.. ಬೀದಿಯ ಬದುಕು...



ಅಳ ಬೇಡ.. ಮಗುವೆ...!
ಎತ್ತಿ..
ಎದೆಗಾನಿಸಿ..
ಅಪ್ಪಿಕೊಳ್ಳಲು..  ಸಮಯವಿಲ್ಲ ...!!




ನಮಗೂ..
ಒಂದು..
ಬದುಕಿದೆ...
ಆಸೆಯಿದೆ...
ಕನಸಿದೆ...
ಅರಳುವ  ಭರವಸೆ  ಎಲ್ಲಿದೆ...?





ಇಷ್ಟೆಲ್ಲಾ...
ಕಷ್ಟಗಳ.. ನಡುವೆ..
ಮಗುವನ್ನೂ ಸಮಾಧಾನ ಪಡಿಸುತ್ತಾ..
ನಗುತ್ತ..
ಕನಸು ಕಟ್ಟು ವಿಯೆಲ್ಲ...!!

ಮ್ಹಾ... ತುಜ್ಹೆ  ಸಲಾಂ...!!!!

Sunday, February 7, 2010

ಒಮ್ಮೆ ಬೆಂಗಳೂರಿಗೆ ಬಂದ್ರೆ .. ಸ್ವರ್ಗ ಗ್ಯಾರೆಂಟಿ....!!

ಪಾಟೀಲ್ ನಮ್ಮ  ಕಾಲೇಜು ದಿನಗಳ ಸ್ನೇಹಿತ..

ಹುಬ್ಬಳ್ಳಿಯಲ್ಲಿಯಿಂದ ಬೆಂಗಳೂರಿಗೆ ಬಂದಿದ್ದ...

" ನೋಡೋ  ಪ್ರಕಾಶು...
ಒಂದು ದಿನ  ಬೆಂಗಳೂರೆಲ್ಲ ಸುತ್ತ ಬೇಕು..
ಮತ್ತೆ ಕಾಲೇಜು ದಿನಗಳ ನೆನಪು ಬರ ಬೇಕು ನೋಡು...

ಆ .. ಅಡ ಪೋಟ್ರು...ನಾಗೂವನ್ನೂ ಕರೆದು ಕೊಂಡು  ಬಾ "

ನಮಗೂ ಖುಷಿಯಾಗಿತ್ತು...

ಈ ಕೆಲಸದ ಒತ್ತಡಗಳು...
ಬೆಂಗಳೂರಿನ  ಟ್ರಾಫಿಕ್..
ಈ ಪಾಟೀಲ್ , ನಾಗು  ಜೊತೆ ಚೆನ್ನಾಗಿ ಹರಟಿ.. ನಕ್ಕು ಒಮ್ಮೆ  ಫ್ರೆಷ್ ಆಗ ಬಹುದಲ್ಲಾ....!

ನಾಗುವನ್ನೂ ಅವನ ಮನೆಯಿಂದ  ಕರೆದುಕೊಂಡು  ಬನ್ನೇರು ಘಟ್ಟ ರೋಡಿನ  ಹುಳಿಮಾವು ಕ್ರಾಸಿನ ಬಳಿ ಬಂದಿದ್ದೆ... 

" ಲೋ... ಪ್ರಕಾಶು...
ಎಲ್ಲಿದ್ದೀಯೋ  ಪುಣ್ಯಾತ್ಮಾ...?
ಈಗಲೇ  ಒಂಬತ್ತುವರೆ..
ಇನ್ನು ನೀನು ಬರೋದು ಯಾವಾಗ...?
ಬೆಂಗಳೂರು  ಸುತ್ತೋದು ಯಾವಾಗ...?
ನನಗಂತೂ  ಕಾದು.. ಕಾದು  ಬೋರಾಗ್ತಾ  ಇದೆ,,
ಯಾವಾಗ ಬರ್ತೀಯೋ...?"

ಈ  ಪಾಟಿಲನಿಗೆ ಸ್ವಲ್ಪ ಕಿಚಾಯಿಸಬೇಕು ಅನ್ನಿಸಿತು...

" ಅದು ಹೇಗೋ  ಹೇಳ್ಳಿಕ್ಕೆ ಸಾಧ್ಯ..??
ಅದೂ ಈ ಬೆಂಗಳೂರಲ್ಲಿ...??!!"

"ಯಾಕೋ ಹೀಗಂತೀಯಾ...?"

"ಬೆಂಗಳೂರಲ್ಲಿ ಬರೋ ಸಮಯ ಹಾಗೆಲ್ಲ ಹೇಳ್ಳಿಕ್ಕೆ ಆಗೋದಿಲ್ಲಪ್ಪಾ...!!
ನೀನು ಬೆಳಿಗ್ಗೆ ಎದ್ದು  ಯಾರ ಮುಖ ನೋಡಿದ್ದೀಯಾ..!!.?
ನಿನ್ನ  ಈ ಜನ್ಮದ ಪುಣ್ಯ..!!
ಹಿಂದಿನ  ಜನ್ಮ ಜನ್ಮಾಂತರದ ಪುಣ್ಯ..!!.
ನಿನ್ನ ಹಿರಿಯರು ಮಾಡಿದ ಪಾಪ  .. ಪುಣ್ಯ..!!
ನಿನ್ನ  ಗ್ರಹಗತಿಗಳು...!!
ನಿನ್ನ  ಮನೆ  ವಾಸ್ತು..!!
ಎಲ್ಲ  ಸೇರ್ಕೊಂಡಿರ್ತದೆ..!!
ಇದು  ಬೆಂಗಳೂರಿನ ಟ್ರಾಫಿಕ್ಕು  ಕಣೊ...!!
ಮಾಮೂಲಿ  ವಿಷಯ ಅಲ್ಲ...!!

ಪಾಟೀಲನಿಗೆ  ರೇಗಿ ಹೋಯ್ತು....

" ಅಲ್ಲಾ...
ನೀವು ಈ ಬೆಂಗಳೂರಲ್ಲಿ  ಹೇಗಪ್ಪಾ  ಬದುಕ್ತೀರೀ..??..!!
ಬೆಂಗಳೂರಲ್ಲಿ ಬದುಕೋರೆಲ್ಲ  ಪಾಪಿಗಳು...!!
ಅತಿ..ಕೆಟ್ಟ ಪಾಪ ಮಾಡಿದೋರು  ಬೆಂಗಳೂರಿಗೆ  ಬರ್ತಾರೆ...!!"

ಅಷ್ಟರಲ್ಲಿ  ಜೆಪಿನಗರದ ಕ್ರಾಸ್  ಬಂತು...
ಅಲ್ಲೇ ಪಕ್ಕದಲ್ಲಿದ್ದ ನಮಗಾಗಿ  ಕಾಯುತ್ತಿದ್ದ... ಪಾಟಿಲ್...!!

ಪಾಟೀಲ್ ಕಂಡು  ನನಗೂ, ನಾಗುಗೂ... ತುಂಬಾ  ಖುಷಿಯಾಯ್ತು...

ಬಹಳ ವರ್ಷಗಳ ನಂತರ ಭೇಟಿಯಾಗ್ತಾ ಇದ್ದಿದ್ದು ..
ನಮ್ಮ ಏರಿದ ಧ್ವನಿಯ ಮಾತುಕತೆಯಲ್ಲಿ ಗೊತ್ತಾಗ್ತಾ ಇತ್ತು...

"ಎಲ್ಲಿ ಹೋಗೋಣ್ರೋ..??"

ನಾಗು  ವಾಸ್ತವ ಪ್ರಪಂಚಕ್ಕೆ ಬಂದ...

"ಮೊದ್ಲು  ಮೆಜೆಸ್ಟಿಕ್ ತೋರಿಸ್ರಪಾ... ಅಲ್ಲಿಗೆ ಹೋಗೋಣು..."

ನಮ್ಮ ಕಾರು ಮೆಜೆಸ್ತೀಕ್ ಕಡೆ ತಿರುಗಿತು...

ಕನಕಪುರ ರಸ್ತೆಯಲ್ಲಿ ಬನಶಂಕರಿ ದೇವಸ್ಥಾನದ ಬಳಿ ಬಂದೆವು...

ಟ್ರಾಫಿಕ್  ಮುಂದೆ ಹೋಗ್ತಾನೇ ಇಲ್ಲ...

ಹಾರನ್...!!

 ಗದ್ದಲ... ಗಾಡಿಗಳ ಹೊಗೆ...ಧೂಳು...!!
ಸೆಖೆ....!!

"  ಏ.. ಏನ್ರಪಾ ...!!
ಈ ಬೆಂಗಳೂರಿನಲ್ಲಿ ಹೇಗೆ ಬದುಕ್ತೀರಪಾ...??
ಇಲ್ಲಿ ಬದುಕೊದಲ್ದೆ...... 


ನಗ್ತಾ ಇದ್ದಿರಲ್ರೋ... !!
ಈ ಬೆಂಗಳೂರಲ್ಲಿ..  ಹ್ಯಾಗೆ  ನಗ್ತಿರ್ರೋ ಇಲ್ಲಿ... !! ??..
ನನಗಂತೂ ಒಂದೇ ದಿನದಲ್ಲಿ  ಸಾಕು.. ಸಾಕಾಗಿ ಹೋಯ್ತು...!!
ಸಿರ್ಸಿಯಂಥಾ ಸ್ವರ್ಗ ಬಿಟ್ಟು  .. ಇಲ್ಲಿ ಈ ಹೊಗೆಯಲ್ಲಿ..
ಈ ಗಲೀಜು  ಪಟ್ಟಣದಲ್ಲಿ ಹೇಗಪ್ಪಾ  ಇರ್ತೀರ್ರೀ...?"

ಅಲ್ಲಿಯವರೆಗೆ ಸುಮ್ಮನಿದ್ದ  ನಾಗು  ಮಾತಿಗೆ ಶುರು ಹಚ್ಚಿಕೊಂಡ....

" ಬೆಂಗಳೂರಲ್ಲೇ..ಬದುಕು ಇದೆ ನೋಡು...
ನಮ್ಮ ಟಿವಿಯಲ್ಲಿ..,

ಸಿನೇಮಾದಲ್ಲಿ...ತೋರಿಸೊ ಕನಸು...
ಈ ಬೆಂಗಳೂರಲ್ಲಿದೆ ನೋಡು...
ಎರಡು ದಿನ ಇಲ್ಲಿ ಇರು...

ನಿಂಗೇ.. ಎಲ್ಲಾ  ಗೊತ್ತಾಗ್ತದೆ..."

"ಈ  ಹೊಲಸು ಬೆಂಗಳೂರಲ್ಲಿ  ಎರಡು ದಿನಾನಾ..?!...?
ನಾನು ಇವತ್ತೇ  ಹೊರಟೆ..! 

ಟಿಕೆಟ್ ಬುಕ್ ಮಾಡಿಬಿಟ್ಟಿದ್ದೇನೆ...
ಈ ಬೆಂಗಳೂರಲ್ಲಿ ಬದುಕೋರೆಲ್ಲ ಪಾಪಿಗಳು...!
ಪಾಪ ಮಾಡಿದೋರು  ಬೆಂಗಳೂರಲ್ಲಿರ್ತಾರೆ...

ಇಲ್ಲಿ ಸಾವು ಕೂಡ  ನೆಟ್ಟಗೆ ಬರೋದಿಲ್ಲ...!
ನೀವೆಲ್ಲ  ಬಹಳ ಕೆಟ್ಟ  ಪಾಪ ಮಾಡಿದ್ದಿರಿ..!!.."

ಈಗ ನಾಗುವಿಗೆ  ಸ್ವಲ್ಪ ರೇಗಿತು...

" ಲೋ.. ಪಾಟೀಲು...
ಪುಣ್ಯ ಮಾಡ್ದೋರು ಬೆಂಗಳೂರಲ್ಲಿ ಹುಡ್ತಾರೆ...!!

ಪುಣ್ಯ  ಮಾಡಿದೋರು  ಇಲ್ಲಿ ಬದುಕ್ತಾರೆ..!!
ಬೆಂಕಿ .. ಓವನ್ ನಲ್ಲಿ ಬದುಕೋ..ನೀನು ...

ಬೆಂಗಳೂರಿನ ಬಗ್ಗೆ ಮಾತಾಡಬೇಡ......!
ನಿಂಗೆ ಏನು ಗೊತ್ತಿಲ್ವೋ...

ನೋಡೋ...
ಇಲ್ಲಿ ಬದುಕಲಿಕ್ಕೂ ಪುಣ್ಯ ಮಾಡಿರ್ಬೇಕು...
ನಿನ್ನಂಥಾ...

 ಪಾಪಿಗಳೆಲ್ಲ ಇಲ್ಲಿ ಇರ್ಲಿಕ್ಕೆ ಸಾಧ್ಯ.... ಇಲ್ಲಾ..."

"ಅಯ್ಯೋ...

ಇಲ್ಲಿ ಎಂತಾ  ಪುಣ್ಯಾನೋ ಮಾರಾಯಾ...!!!..??
ಈ  ಟ್ರಾಫಿಕ್ಕು..!

ಈ ಜಾಮ್...!
ಹೊಲಸು.. ಗಲೀಜು  ...!!
ನೀವೂ... ನಿಮ್ಮ  ಬದುಕಿಗೂ ..

ದೊಡ್ಡ.. ಸಾಂಷ್ಟಾಂಗ ನಮಸ್ಕಾರ್ರಾ ಕಣ್ರಪಾ...!!!.."

"ಇಲ್ಲೇ... ನೀ ತಪ್ಪು ಮಾಡ್ತಿರೋದು...

ಪಾಟೀಲು...!!
ಈ ಟ್ರಾಫಿಕ್  ಅಂದ್ರೆ ಏನು ತಿಳ್ಖೊಂಡಿದೀಯಾ..?.?
ಬೆಂಗಳೂರಿನ  ರಸ್ತೆ ಅಂದ್ರೆ ಏನು ಗೊತ್ತಿದೆ ನಿಂಗೆ..??!!!?"

""ಏನು..?? !! "

"ಬೆಂಗಳೂರಿನ ಟ್ರಾಫಿಕ್ ಅಂದ್ರೆ...

 ಪುಣ್ಯ  ನದಿಗಳು..!!!!!.
ನಮ್ಮ ಪಾಪ ತೊಳೆಯೋ... ಗಂಗಾ ನದಿಗಳು...!!"

ಪಾಟೀಲನಿಗೆ  ಆಶ್ಚರ್ಯ...!!

" ಏನ್ ಹೇಳ್ತಾ ಇದ್ದೀಯಾ  ನಾಗು...??""

ಅಷ್ಟರಲ್ಲಿ ಜೇಸಿ ರೋಡ್  ಬಂತು....

" ನೋಡು ಪಾಟೀಲಾ...
ದಿನಾ.... ಇಲ್ಲಿ ...

ಈ ಟ್ರಾಫಿಕ್ಕಿನಲ್ಲಿ ನಿಂತು... ನಿಂತು...
ನಮ್ಮ  ಪಾಪಗಳೆಲ್ಲಾ  ತೊಳೆದು ಹೋಗ್ತದೆ...!!
ಅದರಲ್ಲೂ ಸುಡು ಬೇಸಿಗೆಯಲ್ಲಿ ..
ತಲೆಗೆ ಕಪ್ಪು ಹೆಲ್ಮೆಟ್ ಹಾಕ್ಕೊಂಡು..
ಟ್ರಾಫಿಕ್ಕಿನಲ್ಲಿ  ಕಾಯ್ತಾ ಇರು..
ಈ ಜನ್ಮದ್ದೊಂದೇ ಅಲ್ಲಾ...
ಹಿಂದಿನ  ಜನ್ಮ.. ಜನ್ಮಾಂತರದ ಪಾಪಗಳೆಲ್ಲ  ತೊಳೆದು ಹೋಗ್ತದೆ..!!
ಬೆಂಗಳೂರಿನ  ಸರ್ಕಲ್ಲುಗಳೆಂದರೆ...

ಪುಣ್ಯ ನದಿಗಳ  ಸಂಗಮಗಳು...!!..!! "

"ಏನೋ..?? ಏನು ಹೇಳ್ತಾ  ಇದ್ದೀಯಾ...??!!"

ಅಷ್ಟರಲ್ಲಿ  ಕಾರ್ಪೋರೇಷನ್  ಸರ್ಕಲ್ ಬಂತು...

" ನೋಡು ಪಾಟೀಲು..
ಇದು ಕಾರ್ಪೋರೇಷನ್  ಸರ್ಕಲ್ಲು..
ಇದು.. 

ಜಗತ್ತಿನ ನೂರಾ ಎಂಟು ಪುಣ್ಯ ನದಿಗಳ ಸಂಗಮ...!!
ಇಲ್ಲಿ ಯಾವ ನದಿ ಎಲ್ಲಿ ಸೇರ್ತದೆ...!
ಎಲ್ಲಿಗೆ ಹೋಗ್ತದೆ  ??
ಆ ದೇವ್ರಿಗೂ ಗೊತ್ತಾಗೋದಿಲ್ಲ...!!
ನೀನು ಇವತ್ತು ಇಲ್ಲಿ ಬಂದ್ಯಲ್ಲಾ...
ನಿನ್ನ  ಎಲ್ಲಾ ಪಾಪಗಳು  ತೊಳೆದು  ಪುಣ್ಯವಂತನಾಗಿದ್ದೀಯಾ...!!


ಒಮ್ಮೆ ಬೆಂಗಳೂರಿಗೆ  ಬಂದ್ರೆ  ಸ್ವರ್ಗ  ಗ್ಯಾರೆಂಟಿ....!! "

" ನಾಗು... ನೀನು ಅಸಾಧ್ಯ  ಕಣಪ್ಪಾ...""

"ಈ.. ಬೆಂಗಳೂರಲ್ಲಿ...
ದಿನನಿತ್ಯದ ಪಾಪಗಳನ್ನು ತೊಳೆಯೋದಲ್ದೆ..
ವಿಶೇಷದಿನಗಳೂ ಇರ್ತದೆ...
ಅವತ್ತು ಫುಲ್ ಹೋಲ್ ಸೇಲನಲ್ಲಿ ಪಾಪಗಳನ್ನು ತೊಳೆಯಲಾಗ್ತದೆ...
ಆ  ಹಬ್ಬ  ಬಂದಾಗ ನಿನಗೆ ತಿಳಿಸ್ತೇನೆ  ..
ನೀನು ನಿನ್ನ  ಮನೆಯವರೆನ್ನೆಲ್ಲ ಕರ್ಕೊಂಡು ಬಾ...!!"

"ಯಾವಾಗ್ಲೋ...?? !!!!"

" ಇಲ್ಲಿ  ಯಡ್ಯೂರಪ್ಪನಿಗೆ  ಕುಮಾರಸ್ವಾಮಿ  ಕೈಕೊಟ್ಟಾಗ...

ಧರಣಿಗಳು  ಆಗ್ತವೆ... ರಸ್ತೆ ತಡೆಗಳು ಆಗ್ತವೆ...!!!

ದೇವೆ ಗೌಡ್ರಿಗೆ  ರೈತರ ಮೇಲೆ ಪ್ರೀತಿ ಉಕ್ಕಿದಾಗ ...

ನೈಸ್ ರೋಡು  ಬಂದಾಗ್ತದೆ...
ಆಗ ಹೊಸೂರು ರೋಡಿನವರ ಪಾಪಗಳು  ತೊಳೆದು ಚೊಕ್ಕವಾಗ್ತದೆ...!!

ಯಡ್ಯೂರಪ್ಪ ಅಸಮರ್ಥ ಅಂತ ಕಾಂಗ್ರೆಸ್ಸಿನೋರಿಗೆ ಗೊತ್ತಾಗಿ...
ಅದನ್ನು  ವೋಟ್  ಹಾಕೋ ಜನರಿಗೆ.. 
ತಿಳಿಸ್ಲಿಕ್ಕೆ ಅಂತ.. ಹೊರಟಾಗ...
ಟ್ರಾಫಿಕ್ ಜಾಮ್ ಆಗ್ತದೆ..


ಇನ್ನು  ದೆಹಲಿಯಿಂದ ದೈವಾಂಶ ಸಂಭೂತ ಮಂತ್ರಿಗಳು ಆಗಾಗ ಬರ್ತಾರೆ...

 ಆಗ  ನಮಗೆ.....
ನಮ್ಮ ಬೆಂಗಳೂರಿನವ್ರೆಲ್ಲರಿಗೆ ಹಬ್ಬ...!!
ನಮ್ಮ ಪಾಪಗಳೆಲ್ಲ ಸರ್ವ ನಾಶವಾಗಿ ಹೊರಟೋಗ್ತದೆ ...!!

ಅದೊಂಥರ  ಕುಂಭ ಮೇಳ...!!"

ಅಷ್ಟರಲ್ಲಿ  ಸಿಗ್ನಲ್ ಜಂಪ್ ಆಗಿ ಹೋಗಿತ್ತು...
ಪೋಲಿಸ್ ನಮ್ಮ ಕಾರನ್ನು ನಿಲ್ಲಿಸಿದ...

"ನೋಡೊ..ಪಾಟಿಲು  ....!!
ಇವರು ವಿಶ್ವಾಮಿತ್ರನ  ಶಿಷ್ಯರು...!!!!!


ನಕ್ಷತ್ರಿಕರು.. .!!

ಹರಿಶ್ಚಂದ್ರನ ಸತ್ಯವನ್ನು ಜಗತ್ತಿಗೆ ತೋರಿಸಿದ ಹಾಗೆ.....
ನಮ್ಮ  ಪಾಪಗಳನ್ನು ತೊಳೆದು...

  ಸ್ವರ್ಗಕ್ಕೆ ಕಳಿಸೋ ...
 ವಿಶ್ವಾಮಿತ್ರನ  ಶಿಷ್ಯರು...!!

ನಮ್ಮ ತಾಳ್ಮೆ.. ಸಹನೆಯನ್ನು  ಟೆಸ್ಟ್  ಮಾಡಿ...
ನಮ್ಮನ್ನು ಪರಿಪೂರ್ಣ ಮನುಷ್ಯರನ್ನಾಗಿ  ಮಾಡ್ತಾರೆ...!!.."
 
"ನಾಗು..

ಒಂದು ಹೆಲ್ಪು ಮಾಡು..  
ನಿನ್ನ  ಕಾಲು ತೋರಿಸೋ  .. ಪುಣ್ಯಾತ್ಮಾ...!!"
 


"ಯಾಕೋ... ಏನು ಮಾಡ್ತಿಯಾ..? .."

""  ನಾಗು...
ನಿನ್ನ  ಪಾದ ತೊಳೆದು ..
ಪಾದ ಪೂಜೆ  ಮಾಡ್ಲಿಕ್ಕೆ...!!
ಈಗ್ಲೇ ನಿಂಗೆ  ಸಾಷ್ಟಾಂಗ ನಮಸ್ಕಾರ ಮಾಡ್ಬೇಕು ಅನ್ನಿಸ್ತಾ ಇದೆ ಕಣಪ್ಪಾ...!!"




( ನಮ್ಮ  ಪಾಟಿಲ್ ಸಾಹೇಬ  ಹುಬ್ಬಳ್ಳಿಯ  ಸಮೀಪದ  ಹಳ್ಳಿಯಾಂವ ......
ಓದು ಮುಗಿಸಿ  ಹೊಲ, ಜಮೀನು ನೋಡಿಕೊಂಡು ಹಾಯಾಗಿದ್ದಾನೆ...
ಅವನು ತನ್ನ ಕಣ್ಣಿಂದ ಬೆಂಗಳೂರನ್ನು  ನೋಡಿದ ರೀತಿ ಅದ್ಭುತವಾಗಿತ್ತು.....! )