Monday, August 26, 2013

..... ಮಧ್ಯಮ ....

ಇದು ಬಲು ಕಷ್ಟದ ಕೆಲಸ...

ಹೇಗೆ ಹೇಳುವದು...?


ನಾನು ಮತ್ತು ಅವಳು..

ಇಬ್ಬರೇ ಇದ್ದಾಗ ಕರೆದು ಹೇಳಿದೆ...

"ತುಂಬಾ ದಿನ ಆಗೋಯ್ತು.. 

ಇಂದು ರಾತ್ರಿ ನಾವಿಬ್ಬರೂ ಭೇಟಿ ಆಗೋಣ  ಬಾ..."

ಹೊಟ್ಟೆ ತುಂಬಾ ನಕ್ಕುಬಿಟ್ಟಳು..

ಇವಳು ನಗುವಾಗ ಕಣ್ಮುಚ್ಚಿ ನಗುತ್ತಾಳೆ...!

ಕಷ್ಟವನ್ನು ನೋಡಲೇ ಇಲ್ಲ ಎನ್ನುವಂತೆ...


ನಕ್ಕಾಗ ಬಲು ಚಂದ ಇವಳು..!


"ಯಾಕೆ..?

ರಾತ್ರಿ ಭೇಟಿ...?.."

"ಮಾತಾಡೋಣ...

ಪ್ರೀತಿ ಮಾಡೋಣ..
ಮುದ್ದು ಮಾಡೋಣ.. "... 

"ಬೇಡ..

ಯಾರಾದರೂ ನೋಡಿದರೆ ಕಷ್ಟ...

ಮರ್ಯಾದೆ....  ಮಾನ ಹರಾಜು..."


"ಇಲ್ಲವೆನ್ನಬೇಡ..

ತುಂಬಾ ದಿನಗಳಾಯ್ತು ನೀನು ಕೈಗೆ ಸಿಗದೆ..
ಪ್ರೀತಿ ಮಾಡೋಣ...

ಮತ್ತೆ..

ಮತ್ತೆ..."

"ಮತ್ತೆ.. ಏನು ..?


ಏನು ಪ್ರಯೋಜನ..?


ನೀನು ಗಂಡೂ ಅಲ್ಲ..

ಹೆಣ್ಣೂ ಅಲ್ಲ.. ನಪುಂಸಕ..!.."

ನಾನು ತಲೆ ತಗ್ಗಿಸಿದೆ...


ಮತ್ತೆ ಅವಳೇ ಸಮಾಧಾನಪಡಿಸಿದಳು...


"ಬೇಸರ ಬೇಡ..

ನಿನಗೆ ಬೇಸರ ಮಾಡಬೇಕು  ಅಂತ ಹೇಳಿದ್ದಲ್ಲ.... 

ನಮ್ಮಿಬ್ಬರ 

ವರ್ತಮಾನದ ಏಕಾಂತದಲ್ಲಿ ಮತ್ತೇನು ಮಾಡಲು ಸಾಧ್ಯ?

ಪ್ರೀತಿ.. 

ಪ್ರೇಮ.. ಪ್ರಣಯ..?

ಸಲ್ಲಾಪದ ಮಾತುಗಳು... ?


ಏನೂ ಆಗದ ಸ್ಥಿತಿಯಲ್ಲಿ .. 

ಸುಮ್ಮನಿದ್ದುಬಿಡುವದು ಬುದ್ಧಿವಂತಿಕೆ.... "

ಅಷ್ಟರಲ್ಲಿ ಯಾರೋ ಬಂದ ಸದ್ದಾಯಿತು...


ಆಕೆ ಅಲ್ಲಿಂದ ಹೊರಟು ಹೋದಳು...


ನಿಮಗೆ ನನ್ನ ವಿಷಯ ಗೊತ್ತಿರಬಹುದು...


ನಾನು ಮಧ್ಯಮ ಪಾಂಡವ... 

ಅರ್ಜುನ... 

ಹಿಂದೊಮ್ಮೆ...

ಊರ್ವಶಿ ನನ್ನನ್ನು ಬಯಸಿದ್ದಳು..

"ನೀನು .. 

ಇಂದ್ರನ ಲೋಕದ ಅಪ್ಸರೆ..

ಇಂದ್ರ ನನಗೆ ತಂದೆ..


ನನ್ನ ತಾಯಿಯನ್ನು ಪ್ರೀತಿಸುವದೆ..?... 


ನಿನ್ನೊಡನೆ ಪ್ರಣಯ ನನ್ನಿಂದಾಗದು..."


"ಪಾರ್ಥ...

ನನ್ನದು ಯಾವುದೇ ಬಂಧನ ಬಯಸದ ಸಂಬಂಧ...

ಒಂದು ರಾತ್ರಿಯ...

ಒಂದು ಕ್ಷಣದ 
ಒಂದು ಸಮಾಗಮ ಕೇಳುತ್ತಿರುವೆ...

ಅಮೇಲೆ ನೀನ್ಯಾರೋ.. 

ನಾನ್ಯಾರೋ...!

ಇದೆಲ್ಲ ಇಲ್ಲಿ ಸಹಜ...


ಬೇಲಿ..  

ಅವಶ್ಯವಾಗಿ ಇರಬೇಕು...  
ನಮ್ಮ ಸಂತೋಷವನ್ನು 
ನಾವು ಪಡೆದ ಮೇಲೆ ಬೇಲಿಯನ್ನು ಹಾಕಿಕೊಳ್ಳಬೇಕು.. 

ಬೇಲಿ ಸಂತೋಷವನ್ನು ಹಾಳು ಮಾಡಬಾರದು... 


ಬಾ.. ಪಾರ್ಥಾ ಬಾ... "


ಬೇಲಿ ದಾಟಲು ನನ್ನ ಮನಸ್ಸು ಒಪ್ಪಲಿಲ್ಲ...


ಊರ್ವಶಿಗೆ ಕೋಪ ಬಂತು...


" ಬಯಸಿ ಬಂದ ಹೆಣ್ಣನ್ನು ನಿರಾಕರಿಸುವದು ಪೌರುಷವಲ್ಲ ..


ನಪುಂಸಕತೆ !!


ನನ್ನನ್ನು ನಿರಾಕರಿಸಿದ ... 

ನೀನು ಒಂದು ವರುಷ ನಪುಂಸಕನಾಗು ...!!... "

ಮೂರು ಲೋಕದ ಗಂಡ... 

ಮಹಾ ಪರಾಕ್ರಮಿ...

ಶೂರ..ವೀರ ಈ ಅರ್ಜುನ ಈಗ ನಪುಂಸಕ ...!


ಗಂಡು ಅಲ್ಲ.. 

ಹೆಂಗಸೂ ಅಲ್ಲ.... !

ವಿಚಿತ್ರವಾದ ಮನಸ್ಥಿತಿ.... ದೇಹಸ್ಥಿತಿ... !


ಈಗ... 

ವಿರಾಟ ಮಹರಾಜನ ಆಸ್ಥಾನದಲ್ಲಿ ... 
ಅಜ್ಞಾತವಾಸವನ್ನು  .. 
ನಾವು ಪಾಂಡವರು ಪೂರೈಸುತ್ತಿದ್ದೇವೆ...

ವಿರಾಟನ ಮಗಳು ಉತ್ತರೆಗೆ ನಾಟ್ಯವನ್ನು ಹೇಳಿಕೊಡುವ ಕೆಲಸ ನನ್ನದು..


ನಾನು ಬೃಹನ್ನಳೆ ...


ಈ ಜಗತ್ತಿನ ಭಗವಂತ..

ಶಿವನೊಡನೆ ಮಲ್ಲಯುದ್ಧ ಮಾಡಿ "ಭೇಷ್.." ಎನಿಸಿಕೊಂಡವ
ಇಂದು ಷಂಡನಾಗಿದ್ದೇನೆ..

ನಾಗಲೋಕದ ಉಲೂಚಿ...

ಚಿತ್ರಾಂಗದೆ..
ಸುಭದ್ರೆ.. ದ್ರೌಪದಿಯರ ಚಂದವನ್ನು ..
ಸುಖವನ್ನು ಮನಸಾರೆ ಅನುಭವಿಸಿದವ ನಾನು...!

ಅರಮನೆಯ ಸುಂದರ ತರುಣಿಯರ ..

ಚಂದಗಳ ಜೊತೆಯಲ್ಲಿರಬೇಕು...

ಅವರಿಗೋ..

ನಾನೆಂದರೆ ಅಲಕ್ಷ...
ಅಪಹಾಸ್ಯ.. !

ಅರಮನೆಯ ನಾಟ್ಯ ಶಾಲೆಯ ಪಕ್ಕದಲ್ಲಿ ರಾಣಿಯ ಸಹಾಯಕಿ.. 

ಸೈರಂದ್ರಿ..
ನನ್ನ ಮಡದಿ.. ದ್ರೌಪದಿ .. 

ಬಿಚ್ಚು ಕೂದಲಿನ..

ಅಪೂರ್ವ ಸೌಂದರ್ಯ ರಾಶಿ ನನ್ನ ದ್ರೌಪದಿ..!

ನೋಡಿದರೆ... 

ಮತ್ತೆ.. ಮತ್ತೆ ನೋಡಬೇಕೆನ್ನಿಸುವ .. 
ಮತ್ತೇರಿಸುವ.. 
ಮನ ಕೆರಳಿಸುವ ಸೌಂದರ್ಯ ಅವಳದ್ದು... !

ಅಜ್ಞಾತವಾಸದ ಮುನ್ನ ... 

ನಾವು ಪಾಂಡವರು ಹಾಕಿಕೊಂಡ ಕಟ್ಟು ಪಾಡು ನನಗೆ ನೆನಪಿದೆ... 

ಏನು ಮಾಡಲಿ...?


ನಪುಂಸಕನಾದರೂ.. ..

ಉಪ್ಪು ಹುಳಿ ತಿನ್ನುವ ದೇಹವಿದೆಯಲ್ಲ... 

ದೈಹಿಕ .. 

ಕಾಮಾನೆಗಳ ಸುಖ ಅನುಭವಿಸಿದ ನೆನಪು 
ಆಸೆಗಳ ರುಚಿ ಇದೆಯಲ್ಲ... !

ಹಾಗಾದರೆ ... 

ಸುಖ ಅನುಭವಿಸಲಾಗದ.. 
ನಪುಂಸಕನಿಗೆ  ಕಾಮದ ಆಸೆ ಯಾಕೆ ಬರಬೇಕು ?.... 

ಮೊದಲು 

ಇದೇ ದ್ರೌಪದಿಯ ಮೇಲೆ ವಿಜೃಂಭಿಸಿದ್ದೇನೆ. .. !

ಈಗ  ಎಲ್ಲದಕ್ಕೂ ಅಜ್ಞಾತವಾಸ... 

ಆಸೆ.. 
ಬಯಕೆಗಳಿಗೂ ಸಹ... 

ಉದ್ರೇಕವಿಲ್ಲದಿದ್ದರೂ...

ಒಳಗೊಳಗೆ ಕುದಿಯುವ ..
ಬಯಕೆಯ 
ಕಾಮನೆಯ ಕೊಪ್ಪರಿಗೆ ಇದೆಯಲ್ಲ... !

ನಿನ್ನೆಯ ಪೌರುಷವನ್ನು ಕೆಣಕುತ್ತಿರುತ್ತದೆಯಲ್ಲ... 


ಕೆದಕುವ ಆಸೆಗಳಿಗೆ ತೃಪ್ತಿಯನ್ನು ಎಲ್ಲಿ ಹುಡುಕಲಿ ? ?


ಇಲ್ಲದ 

ಸಂವೇದನೆಗಳಿಗೆ ಸಮಾಧಾನ ಎಲ್ಲಿಂದ ತರಲಿ  ?

ಬಲು ಕಷ್ಟ.. ಈ ನಪುಂಸಕ ಬದುಕು... 


ದಿನಕ್ಕೆ ಒಂದೆರಡು ಬಾರಿಯಾದರೂ ನಮ್ಮ ಭೇಟಿ ಆಗುತ್ತಿತ್ತು.... 

ರಾಜ್ಯ.. 

ಅಧಿಕಾರ.. 
ನನ್ನತನವನ್ನೂ  ಕಳೆದುಕೊಂಡ 
ನನಗೆ 
ಇವಳು ನನ್ನ ಮಡದಿಯೆಂಬ ಅಧಿಕಾರದ  ಅಹಂ ಇಣುಕುತ್ತಿತ್ತು.. ಕೆಣಕುತ್ತಿತ್ತು.. ... 

ಆಸೆಗಳೇ ಹಾಗೆ..
ಯಾವಾಗ ..
ಹೇಗೆ ಹೊಂಚು ಹಾಕುತ್ತವೆ ಎನ್ನಲಿಕ್ಕಾಗಲ್ಲ..

ಒಮ್ಮೆ.. ..

ನಾನೊಬ್ಬನೆ ಇರುವಾಗ ದ್ರೌಪದಿ ಸಿಕ್ಕಳು...

"ಇಂದು ರಾತ್ರಿ ಬಾ..."


" ಬರುವದಿಲ್ಲ...."

"ನಮ್ಮಿಬ್ಬರದು... 

ಒಂದು ಅಕ್ರಮ ಸಂಬಂಧವೆಂದು ತಿಳಿದು...
ಸಂತೋಷಕ್ಕಾಗಿ.. .. 
ಒಂದು ಕ್ಷಣದ ರೋಮಾಂಚನೆಗಾದರೂ ...  ಬಾ..."

"ಅಕ್ರಮ ಸಂಬಂಧ ರೋಮಾಂಚನವೆ .. ! ...?.. "


"ಹೌದು...

ಅದಕ್ಕಾಗಿಯೇ ಅಲ್ಲವೆ ಈ ಜಗತ್ತಿನಲ್ಲಿ ಅಕ್ರಮ ಸಂಬಂಧಗಳಿರುವದು...

ಕಾಮದ ರುಚಿ ಎಲ್ಲರಿಗೂ ಸಹಜ... 


ಆದರೆ ಅಕ್ರಮಗಳು ಹಾಗಲ್ಲವಲ್ಲ... "


" ನನಗೇನು ಗೊತ್ತು...?

ನೀವು ರಾಜರು..
ಅಧಿಕಾರದಲ್ಲಿರುವವರು... 

ಬಹಳ ಸಂಬಂಧಗಳನ್ನು ...

ಸಕ್ರಮ ಮಾಡಿಕೊಂಡವರು.."

ಹೆಣ್ಣಿನ  ನಾಲಿಗೆ ಬಾಣಕ್ಕಿಂತಲೂ ಹರಿತ... 


" ನೀನು .. 

ಹೇಗಾದರೂ ಬಾ.. 

ಒಬ್ಬ ಉನ್ಮತ್ತ ಗಂಡಸನ್ನೂ 
ನಪುಂಸಕನನ್ನಾಗಿ ಮಾಡುವ ಶಕ್ತಿ ಹೆಣ್ಣಿಗಿದೆ.. 

ನಪುಂಸಕನನ್ನು 
ಗಂಡಸನ್ನಾಗಿ ಮಾಡುವ ತಾಕತ್ತು ಹೆಣ್ಣಿಗಿದೆ.. 

ನನ್ನನ್ನು 
ನಪುಂಸಕನೆಂದು  ಹೀಯಾಳಿಸ ಬೇಡ...

ನಾನು ಗಂಡಾಗ ಬೇಕು.. 
ನಿನಗೆ ಗಂಡನಾಗಬೇಕು... "

ಸೈರಂದ್ರಿ 

ಮತ್ತೊಮ್ಮೆ ನಕ್ಕಳು...

ಮೋಹಕವಾಗಿ !

ಕಣ್ಮುಚ್ಚಿ... 
ಬಲು ಚಂದದಿಂದ...!

"ಯಾಕೆ ನಗ್ತೀಯಾ...?"


"ಅರಮನೆಯಲ್ಲಿರುವಾಗಲೂ ನಿನ್ನ  ಪರಾಕ್ರಮ ನನಗೆ ಗೊತ್ತಿಲ್ಲವೆ?.."


"ಏನು ಗೊತ್ತಿದೆ...?.."... 


"ಹಾಸಿಗೆಯಲ್ಲಿ  ನೀವಿದ್ದರೂ...


ನೀವು 

ಹೆಚ್ಚಿನ ಬಾರಿ ನನ್ನೊಡನೆ ಇರುತ್ತಿರಲಿಲ್ಲ...

ನಿಮ್ಮ ವೈರಿ... 

 ಕರ್ಣನ ಬಗೆಗೊ..
ಧುರ್ಯೋಧನನ ಬಗೆಗೊ...ಯೋಚಿಸುತ್ತ.. 
ನಿಮ್ಮ ರಾಜಕೀಯದಲ್ಲಿ ನೀವು ಇರುತ್ತಿದ್ದೀರಿ...

ನೀವು ಗಂಡಸರೇ.. ಹೀಗೆ... !.. 

ದಾಂಪತ್ಯದಲ್ಲಿ  ಮಡದಿಯೊಡನೆ ಇರುವದು ಕಡಿಮೆ.. "

ನನಗೆ ಸೋಜಿಗವೆನಿಸಿತು...


" ನಿನ್ನೊಡನೆ .. ಏಕಾಂತದಲ್ಲಿ 

ನಾನಿರುತ್ತಿರಲಿಲ್ಲ..

ಸರಿ..


ನೀನು ಇರುತ್ತಿದ್ದೆಯಾ?..."


ದ್ರೌಪದಿ ಸ್ವಲ್ಪ ಹೊತ್ತು ಸುಮ್ಮನಿದ್ದಳು...


"ಪಾರ್ಥಾ.... 

ಅನಭವಿಸುವಾಗ ತನ್ಮಯತೆ ಇರಬೇಕು....

ತನ್ಮಯತೆ ... 

ತಾದ್ಯಾತ್ಮತೆ... 
ಇಲ್ಲದಿದ್ದರೆ ಅದು ಸುಖವೇ ಅಲ್ಲ..."

"ನಾನು ಕೇಳಿದ್ದು..

ಆಗ ನೀನು ನನ್ನ ಜೊತೆ ಇರುತ್ತಿದ್ದೆಯಾ?.."

"ನಿನಗೆ  ಗೊತ್ತಾಗುತ್ತಿ‌ರಲಿಲ್ಲವೆ..?.."


"ಪಾಂಚಾಲಿ.... 

ನೀನು ಕಣ್ಮುಚ್ಚಿ ಇರುತ್ತಿದ್ದೆ...

ಮುಚ್ಚಿದ ಕಣ್ಣುಗಳ 

ಭಾವನೆಗಳು ಹೇಗೆ ಅರ್ಥವಾಗುತ್ತದೆ ...?...

ಹೇಗೆ ಅರ್ಥ ಮಾಡಿಕೊಳ್ಳಬೇಕು...? 


ನೀನು... 

ನನ್ನೊಡನೆ ಇದ್ದರೂ... 
ಕಣ್ಮುಚ್ಚಿದಾಗ 
ಧರ್ಮಜ.. ಭೀಮರ 
ನೆನಪು ಬಾರದಿರುತ್ತದೆಯೇ ?

ಸುಖ ಸಿಗುವದಲ್ಲ... 

ಸುಖವನ್ನು ಪಟ್ಟುಕೊಳ್ಳಬೇಕು... 

ಸುಖ..

ಹೋಲಿಕೆಯಲ್ಲಿರುತ್ತದೆ ಅಲ್ಲವಾ?..."

ದ್ರೌಪದಿ ಕಿಲ ಕಿಲನೆ ನಕ್ಕಳು...!


ನಗು ... 

ಒಂದು ಉತ್ತರವೆಂದು ನನಗೆ ಗೊತ್ತಿರಲಿಲ್ಲ.....

 ನನ್ನ ಜೊತೆ ಮಿಲನವನ್ನು ಯಾಕೆ ನಿರಾಕರಿಸುತ್ತಾಳೆ ಈ ಸೈರಂದ್ರೀ...?


ನನಗೆ ಅರ್ಥವಾಗಲಿಲ್ಲ...


ಈಗ ನಪುಂಸಕನಾದರೂ ... 

ನಾನು ಗಂಡು...

ಗಂಡಸಿನ .. 

ಪುರುಷನ ಅಹಂಕಾರವನ್ನು ಮನಸಾರೆ ಅನುಭವಿಸಿದವನು...

ಒಂದು ಕಾಲದಲ್ಲಿ ..

ಅನುಭವಿಸಿದ ಭಾವನೆಗಳು.. ..
ಸುಖದ ನೆನಪುಗಳು  ಇನ್ನೂ ಹಸಿರಾಗಿ ಇದೆಯಲ್ಲ....

ಆಗ..

ವಿಜೃಂಭಿಸುವಾಗ   ಹರಿದ ಬೆವರುಗಳ..
ತಂಪು..
ಕಂಪು ಇನ್ನೂ ಕಾಡುತ್ತಿದೆ...!

ಮತ್ತೊಮ್ಮೆ ದ್ರೌಪದಿಯೊಡನೆ ವಿಜೃಂಭಿಸಬೇಕು... ....


ಸುಸ್ತಾದ... 

ಅವಳ ಸಂತೃಪ್ತಿಯ .... 
ತೇಲುಗಣ್ಣಿನ ನೋಟವನ್ನು ಮನಸಾರೆ ನೋಡಿ ಆನಂದಿಸಬೇಕು....

ಮತ್ತೆ....

ಮೂರು ನಾಲ್ಕು ದಿನ ಸೈರಂಧ್ರಿ ನನಗೆ ಕಾಣಲಿಲ್ಲ...

ರಾಜಕುಮಾರಿ ಉತ್ತರೆಗೆ ನಾಟ್ಯ ಹೇಳಿಕೊಡುತ್ತಿದ್ದರೂ..

ಮನಸ್ಸು ಸೈರಂಧ್ರಿಯ ಬಗೆಗೆ ಯೋಚಿಸುತ್ತಿತ್ತು..

ದ್ರೌಪದಿ..

ನನ್ನ ಪೌರುಷದ ಅಪಹಾಸ್ಯ ಮಾಡಿದಳೆ...?

ಸಾವಿರ ಮುಳ್ಳುಗಳಿಂದ ಚುಚ್ಚಿದಂತಾಯಿತು...


ದ್ರೌಪದಿಯ ಮೇಲೆ ಕೋಪ ಉಕ್ಕಿಬಂತು...


ಇಂದು ಬೆಳಿಗ್ಗೆ...

ನಾನು ನಾಟ್ಯ ಶಾಲೆಯಲ್ಲಿ ಒಬ್ಬನೆ ಇದ್ದೆ..

ರಾಜಕುಮಾರಿ ಇನ್ನೂ ಬಂದಿರಲಿಲ್ಲ....

ವೀಣೆಯನ್ನು ಹಿಡಿದುಕೊಂಡು ವಿರಹದ ರಾಗ ನುಡಿಸುತ್ತಿದ್ದೆ...

ನುಡಿಸುತ್ತ..

ನುಡಿಸುತ್ತ ತನ್ಮಯತೆಯಲ್ಲಿ  ಕಳೆದು ಹೋಗಿದ್ದೆ...

ಯಾರೋ ಬಂದಂತೆ... 

ಕಾಲು ಗೆಜ್ಜೆಯ ಸದ್ದು... ನನ್ನನ್ನು ಎಚ್ಚರಿಸಿತು..

ಎದುರಿಗೆ ನನ್ನ ದ್ರೌಪದಿ... !


ಅದೇ ತಾನೆ ಸ್ನಾನ ಮಾಡಿ ಬಂದಂತಿತ್ತು..


ಕಣ್ಣುಗಳು ನಗು ಸೂಸುತ್ತಿದ್ದವು... 


"ಇಂದು ಬರುತ್ತೇನೆ... 

ರಾತ್ರಿ.. ನಿಮ್ಮ ಏಕಾಂತದಲ್ಲಿ...."

ಇನ್ನೊಮ್ಮೆ ದ್ರೌಪದಿಯ ಚಂದದ ಮುಖವನ್ನು ನೋಡಿದೆ..


ಓಹ್...!

ರಜಸ್ವಲೆಯಾಗಿ ಮಿಂದು ಬಂದಿದ್ದಾಳೆ... !

ಬಯಕೆ ತುಂಬಿದ ಕಣ್ಣುಗಳು  .. 

ನನ್ನನ್ನು ಆಸೆಯಿಂದ ಬಯಸಿ.. ಬಯಸಿ ನೋಡುತ್ತಿದ್ದವು...

"ಪಾಂಚಾಲಿ.... 

ನೀನು ರಾತ್ರಿ... 
ಪಾರ್ಥನನ್ನು ಬಯಸಿ ಬಂದರೂ..
ಅಲ್ಲಿ ಸಿಗುವವ  " ಬೃಹನ್ನಳೆ  " ... ಪರವಾಗಿಲ್ಲವೆ ?...."

ದ್ರೌಪದಿ ಮತ್ತೊಮ್ಮೆ ನಕ್ಕಳು..


"ಪಾರ್ಥಾ.. 


ವಾಸ್ತವದ ಮುಳ್ಳು ಚುಚ್ಚುತ್ತಿದ್ದರೂ... 

ಭಾವಲೋಕದ ಗುಲಾಬಿ ಹೂ ಸುಂದರ...!

ಕಲ್ಪನೆಗಳು ಸೊಗಸು....


ಕನಸುಗಳು ಅದಕ್ಕಾಗಿಯೇ ಇಷ್ಟವಾಗುತ್ತವೆ...


ಮನಸ್ಸು..

ದೇಹ..
ಬಯಸುವದು ಮೂರು ಲೋಕದ ಗಂಡನಾದ ಪಾರ್ಥನನ್ನು.. 

ಸಿಗುವದು "ಬೃಹನ್ನಳೆ "...

ಇದೇ ದಾಂಪತ್ಯವಲ್ಲವೆ...?..

ಪಾರ್ಥ..

ಪ್ರತಿಯೊಂದೂ ಹೆಣ್ಣು ಸಹ .. 
"ಪಂಚ ಪಾಂಡವರನ್ನು ಬಯಸುತ್ತಾಳೆ..."

"ಹೌದಾ...!!..?"


"ಹೌದು... ಪಂಚಪಾಂಡವರೆಂದರೆ..

ಪ್ರೀತಿ...
ಭದ್ರತೆ..
ಸುಖ..
ಸಂತಾನ..
ಒಂದು ಮರ್ಯಾದೆಯ ಭರವಸೆಯ ಬದುಕು.."

ನಾನು ಸ್ವಲ್ಪ ಹೊತ್ತು ಸುಮ್ಮನಿದ್ದೆ...


" ಪಾಂಚಾಲಿ...


ಪ್ರತಿಯೊಬ್ಬ ಗಂಡ.. 

ಪತಿ.. 
ಹೆಂಡತಿಯಲ್ಲಿ ಒಬ್ಬ ಪತಿವೃತೆಯನ್ನು ಬಯಸುತ್ತಾನೆ...

ಆದರೆ ಅವನೊಳಗಿನ ಗಂಡಸು ಹಾಗಲ್ಲ..."


"ಏನು...?"


"ಪ್ರತಿಯೊಬ್ಬ ಗಂಡಸು.. ಪಾಂಚಾಲಿಯನ್ನು ಇಷ್ಟಪಡುತ್ತಾನೆ..."


ದ್ರೌಪದಿಯ ಕಣ್ಣುಗಳು ಬಹಳ ಮಾತನಾಡುತ್ತವೆ... 


ಅವಳ ಆಸೆ ತುಂಬಿದ ಕಣ್ಣುಗಳು ನನ್ನನ್ನು ಕೆರಳಿಸುತ್ತಿತ್ತು...


"ಪಾರ್ಥಾ...

ನಾನು ದ್ರೌಪದಿ .. ..

ನಿನ್ನೊಳಗಿನ ಗಂಡಸು  ಬಯಸುವ ಪಾಂಚಾಲಿ..  ...!


ಇಂದು ನಿನ್ನ ಏಕಾಂತದ ರಾತ್ರಿಯಲ್ಲಿ ನಿನ್ನ ಜೊತೆ ಇರುವೆ...."


ನನಗೆ ಸಂತೋಷವಾಯಿತು...


ಕೈಯಲ್ಲಿದ್ದ  ವೀಣೆಯನ್ನು ಪಕ್ಕದಲ್ಲಿಟ್ಟೆ...


ಆಗ ನನ್ನ ಸೆರಗು ಜಾರಿತು..


ಕುಪ್ಪುಸ ಕಾಣುತ್ತಿತ್ತು... 


"ಸೈರಂಧ್ರೀ...

ಇಂದು ಬರುವದು ಬೇಡ... 
ಇನ್ನೊಮ್ಮೆ ಭೇಟಿಯಾಗೋಣ..."

ನನಗೆ..

ನಾನು ಉಟ್ಟಿದ್ದ ಸೀರೆಯನ್ನು ಸರಿಪಡಿಸಿಕೊಳ್ಳಬೇಕಿತ್ತು....

ನನ್ನ ಹೊಕ್ಕಳು ಬೇರೆಯವರಿಗೆ ಕಾಣಿಸದಂತೆ ಮರೆಮಾಚಬೇಕಾಗಿತ್ತು...


"ಪಾರ್ಥಾ... 


ನಪುಂಸಕತೆ.. .. 

ಬದುಕಿನ ಕಾಲಘಟ್ಟದಲ್ಲಿ 
ಕೆಲವರಿಗೆ... 
ಕೆಲವೊಮ್ಮೆ 
ಮನಸ್ಥಿತಿ... ದೇಹಸ್ಥಿತಿ.... 

ನಪುಂಸಕತೆ... .. 

ಪ್ರತಿಯೊಬ್ಬ ಗಂಡಸನ್ನು .. ಹೆಣ್ಣನ್ನೂ ಕಾಡುವ... 

ಜೊತೆಯಾಗಿ ... 

ಬದುಕುವ ದಾಂಪತ್ಯದಲ್ಲಿ  ಅನಿವಾರ್ಯವಾದ ಒಂದು ಸ್ಥಿತಿ... 

ನಿನಗೆ.. 

ಈ ಸ್ಥಿತಿ ಅಸಹನೀಯವಾಗಿರಬಹುದು.... 

ಸಹಿಸಿಕೊಳ್ಳುವದು ನನಗೆ ದೊಡ್ಡ ಸಂಗತಿಯಲ್ಲ...  


ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ... 

"ಬೃಹನ್ನಳೆಗಳೇ.. ... 

ಕೆಲವರು ಮಾನಸಿಕವಾಗಿ... 

ಇನ್ನು ಕೆಲವರು ದೈಹಿಕವಾಗಿ... "

ದ್ರೌಪದಿ ಕಣ್ಮುಚ್ಚಿ ಗಲಗಲನೆ  ನಕ್ಕಳು...


ನಗು ....

ಎಷ್ಟೆಲ್ಲಾ ಮಾತನಾಡುತ್ತದೆ.. . !!




(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....)