Saturday, December 6, 2014

.....ಷಂಡ ...............

( ಒಮ್ಮೆ ತಾರೆ... 
ತನ್ನ ಪತಿ ಬ್ರಹಸ್ಪತಿಯ ಬಳಿ ತನ್ನ ಕಾಮದಾಸೆಯನ್ನು ನಿವೇದಿಸುತ್ತಾಳೆ..
ಬ್ರಹಸ್ಪತಿ ಅವಳ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ದೇವಲೋಕದತ್ತ ಹೋಗುತ್ತಾನೆ..
ಬ್ರಹಸ್ಪತಿ 
ಆಶ್ರಮದಲ್ಲಿ ಇಲ್ಲದ ಸಮಯದಲ್ಲಿ ಅಲ್ಲಿಗೆ ಬಂದ ಚಂದ್ರ.. 
ತಾರೆಯರಲ್ಲಿ ಸಂಬಂಧ ಏರ್ಪಡುತ್ತದೆ...
ಅಲ್ಲಿಂದ ಮುಂದೆ... 
ಬ್ರಹಸ್ಪತಿಯ ಸ್ವಗತ...)

:::::::::::::::::::::::::::::::::::::;;;;;;;;;;;;;;;;;;;;;;;;


ನಾನು
ತಾರೆಯನ್ನು ಮದುವೆಯಾದ ದಿನಗಳು...
ಹೊಸ ಬಿಸಿಯ ದಿನಗಳಲ್ಲವೆ ಈಗ.. ?

ನನ್ನವಳ ಪ್ರಶ್ನೆಗಳು ತುಂಬಾ ವಿಚಿತ್ರ...

"ನೀವ್ಯಾಕೆ ಗಡ್ಡ ಬಿಟ್ಟಿದ್ದೀರಿ ? "

ನನಗೆ ನಗು ಬಂತು..

"ನಾನು ಆಧ್ಯಾತ್ಮ ಚಿಂತನೆ..
ಪರಮಾತ್ಮಿಕ ವಿಚಾರಗಳಲ್ಲಿ ತಪಸ್ಸು ಮಾಡುವವನು..

ನಾನು ದೇವಲೋಕದ ಗುರು.. "ಬ್ರಹಸ್ಪತಿ" ನಾನು...

ಇಹಲೋಕದ 
ಕ್ಷಣಿಕ ಸುಖಗಳು  ಮಿಥ್ಯ ಅಂತ ನಂಬಿದವನು....
ಬಂಧನದೊಳಗೆ  ಇದ್ದು.. ಪರಿಧಿಯಾಚೆ ನೋಡುವವನು .. .
ದಿನ ಪೂರ್ತಿ  ಪರಮಾತ್ಮನ  ಚಿಂತನೆಯಲ್ಲಿ ಮುಳುಗಿದವನು..

ನನ್ನಂಥವನಿಗೆ ಬಾಹ್ಯ ಸೌಂದರ್ಯ ಇದ್ದರೆಷ್ಟು.. ಬಿಟ್ಟರೆಷ್ಟು.. ?

ಗಡ್ಡದ ಇರುವು ಪ್ರತಿಕ್ಷಣ ಗೊತ್ತಾದಾಗ... 
ನನ್ನ ಸಾಧನೆ ಇನ್ನೂ ಇದೆ ಅಂತ ಜ್ಞಾಪಕವಾಗುವದಕ್ಕೆ ಗಡ್ಡ ಬಿಟ್ಟಿದ್ದೇನೆ..."

ಅವಳು ನಕ್ಕಳು...
ಕಣ್ಣರಳಿಸಿ ನಗುವಾಗ ಅವಳ ಮುಖವೆಲ್ಲ ಅರಳುತ್ತದೆ...

ನನಗೂ 
ಅವಳನ್ನು ಸ್ವಲ್ಪ ಮಾತನಾಡಿಸುವ ಹಂಬಲ ಉಂಟಾಯಿತು...

"ತಾರೆ...
ಗಡ್ಡ.. 
ಮೀಸೆಗಳು ಗಂಡಸಿಗೆ ಮಾತ್ರ ಯಾಕೆ... ?

ಹೆಣ್ಣಿಗೇಕೆ ಇಲ್ಲ  ಗೊತ್ತಾ ?"

ನನ್ನವಳ ಮನದ ಗೊಂದಲ 
ಅತ್ತಿತ್ತ ಓಡಾಡುವ 
ಅವಳ ಬೊಗಸೆ ಕಣ್ಣುಗಳಲ್ಲಿ ಗೊತ್ತಾಗಿಬಿಡುತ್ತದೆ...

"ಯಾಕೆ ಮುನಿವರ್ಯಾ  ?"

"ಹೆಣ್ಣು ಹೂವಿನಂತೆ...
ಅವಳ ಪ್ರತಿ ಕಣ ಕಣದಲ್ಲೂ ಭಾವನೆಗಳು ಹರಿದಾಡುತ್ತಿರುತ್ತವೆ..

ಅವಳ ಕೆನ್ನೆಗಳಲ್ಲಿ...
ಕಣ್ಣುಗಳಲ್ಲಿ...
ಮೌನ ತುಟಿಗಳಲ್ಲೂ ಭಾವ ತುಂಬಿರುತ್ತವೆ...

ಗಡ್ಡ 
ಮೀಸೆಗಳಿಂದ ಹೆಣ್ಣಿನ ಮುಖ ತುಂಬಿ ಹೋದರೆ ಕಷ್ಟ ಅಲ್ಲವ  ?..

ಗಂಡಿಗೆ 
ಭಾವನೆಗಳು ಕಡಿಮೆ...
ಗಡ್ಡ .. ಮೀಸೆಗಳಿಂದ ಮುಖ ಮುಚ್ಚಿದರೆ ಯಾವ ನಷ್ಟವೂ ಇಲ್ಲ..."

ಈಗ ಅವಳು ಕಣ್ ಮುಚ್ಚಿ ಗಲಗಲನೆ  ನಕ್ಕಳು...

"ಮುನಿವರ್ಯಾ
ಹೆಣ್ಣಿನ ಭಾವನೆಗಳಿಗೂ ಪುರುಷ ಬೆಲೆಕೊಡಬೇಕಲ್ಲವೆ ?"

ನಾನು ಅವಳ ಮಾತನ್ನು ಅಲ್ಲಿಯೆ ತುಂಡರಿಸಿದೆ...

"ಅಗತ್ಯವಿಲ್ಲ...

ಹೆಣ್ಣು ... ಪ್ರಕೃತಿಯ ಹಾಗೆ...
ಹೊಲವನ್ನು ಕೇಳಿ ಯಾರೂ ಉಳುಮೆ ಮಾಡುವದಿಲ್ಲ...

ತನಗೆ ಬೆಳೆ ಬೇಕೆನಿಸಿದಾಗ...
ತನ್ನ ಅವಶ್ಯಕತೆಗಳಿಗಷ್ಟೆ ಪುರುಷ ಹೊಲವನ್ನು ಊಳುತ್ತಾನೆ...

ಪುರುಷನಿಗೋಸ್ಕರವೇ ಪ್ರಕೃತಿ ಹುಟ್ಟಿದ್ದು...
ಹೆಣ್ಣು ಹುಟ್ಟಿದ್ದು...

ಹೆಣ್ಣನ್ನು 
ತನಗೆ ಹೇಗೆ ಬೇಕೋ  ಹಾಗೆ ಬಳಸಿಕೊಳ್ಳುವದು ಪುರುಷನ ಹಕ್ಕು... "

ಅವಳು ಮುಗ್ಧವಾಗಿ ಕಣ್ಣರಳಿಸಿದಳು...

"ನನಗೆ ಅರ್ಥವಾಗಲಿಲ್ಲ ಮುನಿವರ್ಯ..."

"ದಾಂಪತ್ಯದ ..
ಹೆಣ್ಣು ಗಂಡಿನ ಮಿಲನದ ... 
ಸುಖದ ಕ್ಷಣಗಳಿವೆಯಲ್ಲ...

ಸೂಕ್ಷ್ಮವಾಗಿ ಗಮನಿಸಿದ್ದೀಯಾ ?

ಗಂಡು ತನ್ನ ಖುಷಿಯ.. 
ಸುಖದ ಕೊನೆಯ ಹಂತ ತಲುಪಿದಕೂಡಲೆ 
ಮಿಲನದ ಕಾರ್ಯ ನಿಂತುಬಿಡುತ್ತದೆ...

ಗಂಡು ಹೆಣ್ಣಿನ ಮೈಥುನದಲ್ಲಿ ಗಂಡಿನ ಸ್ಖಲನವೇ ಮುಖ್ಯ...
ಗಂಡಸಿನ ತೃಪ್ತಿಯೇ ನಿರ್ಣಾಯಕ... . 

ಅಲ್ಲಿ 
ಹೆಣ್ಣಿಗೆ ಇನ್ನೂ ಸುಖದ ಕ್ಷಣದ ಅಗತ್ಯ ಬೇಕಿದ್ದರೂ 
ಗಂಡು ತೃಪ್ತಿ ಪಡೆದು ಮಲಗಿರುತ್ತಾನೆ...

ಹೆಣ್ಣನ್ನು ಸೃಷ್ಟಿಸಿದ ರೀತಿಯೇ ಹಾಗಿದೆ..

ಸುಖದ ವಿಚಾರ ಬಂದಾಗಲೂ ಹೆಣ್ಣು ಅಬಲೆ... 

ಗಂಡಿಗೋಸ್ಕರ..
ಗಂಡಿನ ಭೋಗ.. 
ಸುಖಗೋಸ್ಕರ ಹೆಣ್ಣಿನ ಹುಟ್ಟು ಆಗಿದೆ..."

ಅವಳಿಗೆ ಕೋಪ ಬಂದಿದ್ದು ಸ್ಪಷ್ಟವಾಗಿ ಕಾಣಿಸಿತು..

"ನೀವ್ಯಾಕೆ ಮದುವೆಯಾಗಿದ್ದೀರಿ  ?
ನೀವು ಸಂಸಾರದ ಸುಖ ಭೋಗಗಳನ್ನು ಬಿಟ್ಟವರಲ್ಲವೆ  ?

ನಿಮಗ್ಯಾಕೆ ಮದುವೆಯ ಅಗತ್ಯ ? "

" ಈ ಜಗತ್ತಿನಲ್ಲಿ 
ಗಂಡು.. ಹೆಣ್ಣು ಹುಟ್ಟಿರುವದು ಸಂತಾನೋತ್ಪತ್ತಿಗೋಸ್ಕರ...

ಆಧ್ಯಾತ್ಮ ಚಿಂತನೆ..
ತಪಸ್ಸಿಗೋಸ್ಕರ ನನ್ನ ಬದುಕು..
ನಾನು ಸನ್ಯಾಸಿ ಅಂತಿದ್ದರೂ..

ಈ ದೇಹದ 
ಮೂಲಗುಣವನ್ನು ಬಿಟ್ಟು ಇರಲಾಗುತ್ತದೆಯೆ  ?

ದೇಹದ ಮೂಲಭೂತವಾದ ಗುಣ ಕಾಮವನ್ನು ಬಿಟ್ಟು ಬದುಕು ಇಲ್ಲ...

ಕಾಮದ ಜೊತೆಗೆ ಪಾರಮಾರ್ಥಿಕ ಸಾಧನೆ ಮಾಡಬೇಕು... 
ಇದು ಸಹಜ... 

ದೇವಲೋಕದ ಎಲ್ಲ ಸಪ್ತ ಋಷಿಗಳನ್ನು ನೋಡು..
ಎಲ್ಲರೂ ಮದುವೆಯಾದವರು...

ಮದುವೆಯಾಗಿ
ಪಾರಮಾರ್ಥಿಕತೆಯತ್ತ ಹೊರಟವರು ನಾವು..."

ಅವಳ ಕೋಪ ತಡೆಯಲಾಗಲಿಲ್ಲ...

"ಆಧ್ಯಾತ್ಮ ಚಿಂತನೆಯವರಿಗೆ 
ಯಾಕೆ ನನ್ನಂಥಹ ಚೆಲುವೆಯ ಅಗತ್ಯ  ?

ಕುಂಟಿಯೋ..
ಕುರುಡಿಯೋ ಸಾಕಾಗುತ್ತಿರಲಿಲ್ಲವೆ ?

ಅಂಥಹ ಅಸಹಾಯಕಳಿಗೆ 
ಸಾಮಾನ್ಯರು ಕಣ್ಣೆತ್ತಿ ನೋಡದ ಕುರೂಪಿಯೊಬ್ಬಳಿಗೆ 
ಬದುಕುಕೊಟ್ಟಿದ್ದರೆ ಚೆನ್ನಾಗಿತ್ತಲ್ಲವೆ  ?

ನಿಮ್ಮಂಥಹ ಋಷಿಗಳಿಗೆ ಚಂದದ ಹೆಣ್ಣೇಕೆ ಬೇಕು  ?"

ನನಗೆ ನಗು ಬಂತು..

"ಅಯ್ಯೋ ಹುಚ್ಚಿ... !

ನಮ್ಮ ಆಧ್ಯಾತ್ಮ ಚಿಂತನೆಗಳಿಗೆ .. 
ತಪಸ್ಸಿಗೆ ಚಂದದ ಅಗತ್ಯವಿಲ್ಲ...

ನಾವು ಮಾಡುವ ಯಜ್ಞ ಯಾಗಾದಿಗಳಿಗೆ 
ಹೋಮ ಹವನಗಳಿಗೆ ಹೆಂಡತಿಯ ಅಗತ್ಯ ಮಾತ್ರ ಇದೆ.. 

ಅಲ್ಲಿಯೂ ಅಂದ ಚಂದದ ಅಗತ್ಯವಿಲ್ಲ..

ಆದರೆ..
ದಾಂಪತ್ಯದ ಹಾಸಿಗೆಗೆ..
ಉದ್ರೇಕದ ಹಸಿವೆಗೆ ಚಂದ ಬೇಕೇ ಬೇಕು...

ಕಾಮದ ಆಕ್ಷಣದ ಸುಖಕ್ಕೆ 
ಚಂದ ಇದ್ದರೆ ಸುಖದ  ಸೊಗಸು ಇನ್ನೂ ಜಾಸ್ತಿ...."

"ಮುನಿವರ್ಯಾ....
ಆಲದಂತಹ ಹೆಮ್ಮರವನ್ನು ಬೆಳೆಸುವ 
ಸಾಮರ್ಥ್ಯವಿರುವ ಪ್ರಕೃತಿಯ ಹೊಲದಲ್ಲಿ 
ಮೆಂತೆ ಸೊಪ್ಪನ್ನು ಬೆಳೆಸುವ ಪುರುಷನಿಗೆ ಏನನ್ನ ಬೇಕು  ?

ಪುರುಷ ಕೊಟ್ಟಾಗಲಷ್ಟೇ ಸುಖ ಅನುಭವಿಸಬೇಕು..

ಪುರುಷ ಕೊಟ್ಟಷ್ಟೇ ಸುಖದಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು...!

ಪ್ರಕೃತಿಗೆ.. 
ಹೆಣ್ಣಿಗೆ ಇದರಲ್ಲಿ ಅವಕಾಶ ಇಲ್ಲವೆಂದಾದರೆ..

ಪ್ರಕೃತಿ ಅಂದರೆ ಸಹಜ ಅಂತ ಅರ್ಥವೆ ?..
ಹೆಣ್ಣಿನ ಅತೃಪ್ತಿ ಸಹಜವೇ ?.. ?

ಇವಳಿಗೊಂದು ಸೊಕ್ಕಿನ ಉತ್ತರ ಕೊಡಬೇಕು ಎನಿಸಿತು...

"ಹೌದು...
ಅದಕ್ಕಾಗಿಯೇ ಹೇಳಿದ್ದು... 

ಶಾರೀರಿಕವಾಗಿ ಒಂದೇ ಅಲ್ಲ... 
"ಸುಖ" ಪಡುವ ವಿಷಯದಲ್ಲೂ   ಹೆಣ್ಣು ಅಬಲೆ...!

ಈ ಹೆಣ್ಣಿನ ಕುಲವಿರುವದು ಪುರುಷನ 
ಸುಖ,, ಭೋಗಸ್ಕೋರ ಮಾತ್ರ...

ಇದು ಜಗತ್ತಿನ ಸಹಜ ಸತ್ಯ..."

ಅವಳು ಮತ್ತೆ ಮಾತನಾಡಲಿಲ್ಲ..
ಎದ್ದು ಹೋದಳು...

ಇಂಥಹ ಚರ್ಚೆ ನಮ್ಮಿಬ್ಬರಲ್ಲಿ ಅತ್ಯಂತ ಮಾಮೂಲಿ...

ನಾನು 
ದೇವಲೋಕದಿಂದ ಬಂದಮೇಲೆ ಗೊತ್ತಾಯಿತು..
ನನ್ನ ತಾರೆ ಬಸುರಿ ಅಂತ..

ತುಂಬಾ ಸಂತೋಷವಾಯಿತು...

ಮುಂದೊಂದು ದಿನ 
ಒಂದು ಅತ್ಯಂತ ಮುದ್ದಾದ ಗಂಡು ಮಗುವಿಗೆ ಅಪ್ಪನೂ ಆದೆ..

ಎಲ್ಲೆಡೆ ಸಂಭ್ರಮ  !

ಮಗುವಿನ ನಾಮಕರಣದ ಕಾರ್ಯಕ್ರಮವನ್ನು 
ವಿಜ್ರಂಭಣೆಯಿಂದ ಆಚರಿಸಲು ನಿಶ್ಚಯಿಸಿದೆ.

ಸಮಸ್ತ ಲೋಕದ ಗಣ್ಯರನ್ನು ಆಹ್ವಾನಿಸಿದೆ...

ಪುರೋಹಿತ ವರ್ಗದವರ ಮಂತ್ರ ಘೋಷಣೆ  ಮುಗಿಲು ಮುಟ್ಟಿತ್ತು...

ಅತಿಥಿಗಳ ಕಿಲ ಕಿಲ ನಗು...
ಸಂಭಾಷಣೆ.. 
ಗದ್ದಲದಿಂದ ಸಂಭ್ರಮಕ್ಕೆ ಕಳೆ ಕಟ್ಟಿತ್ತು..

ಆಗ ಒಂದು ಘರ್ಜನೆ ಕೇಳಿ ಬಂತು... !

"ಈ ಕಾರ್ಯಕ್ರಮವನ್ನು ಇಷ್ಟಕ್ಕೇ  ನಿಲ್ಲಿಸಿ..!."

ನಾನು ಆ ಧ್ವನಿಯತ್ತ ತಿರುಗಿ ನೋಡಿದೆ...

ನನ್ನ ಶಿಷ್ಯ ಚಂದ್ರ..!

ನನ್ನನ್ನು ನೋಡಿದ ಚಂದ್ರ ಮತ್ತೆ ಹೂಂಕರಿಸಿದ...

"ಗುರುವರ್ಯಾ...
ಈ ಮಗುವಿಗೆ ಅಪ್ಪ ನಾನು..

ಈ ಮಗುವಿನ ನಾಮಕರಣ ನನ್ನ ಹಕ್ಕು  !
ಈ ಮಗುವಿಗೆ ನಾನು ಹೆಸರಿಡುವೆ..."

ನಾನು ದಿಘ್ಬ್ರಾಂತನಾದೆ !

ನೆರೆದಿರುವ ಅತಿಥಿಗಳನಡುವೆ 
ನನ್ನ ಮಾನ..
ಮರ್ಯಾದೆ ಮಣ್ಣು ಪಾಲಾಗುತ್ತಿದೆ...!

"ನೀಚನಂತೆ ಮಾತನಾಡಬೇಡ...
ಯಾರ ಬಳಿ.. 
ಯಾವ ಮಾತನಾಡುತ್ತಿರುವೆಯೆಂದು ಪ್ರಜ್ಞೆ ಇಟ್ಟುಕೊ..."

ಚಂದಿರ ಮತ್ತೆ ಹೂಂಕರಿಸಿದ...

ಸಭೆಯಲ್ಲಿ ಗದ್ದಲ ಶುರುವಾಯಿತು...
ಬಿಸಿ ಬಿಸಿ ಚರ್ಚೆ.. ವಾಗ್ವಾದ ಶುರುವಾಯಿತು...

ಇಂದ್ರದೇವ ಮುಂದೆ ಬಂದು ಎಲ್ಲರನ್ನೂ ಶಾಂತಗೊಳಿಸಿದ..

"ಇಬ್ಬರೂ ಈ ರೀತಿ ಜಗಳವಾಡಿದರೆ 
ವಿಷಯ ಗೊತ್ತಾಗುವದಿಲ್ಲ...
ಮಗುವಿನ ತಾಯಿಯನ್ನು ಕರೆಸಿರಿ..."

ತಲೆಯನ್ನು ತಗ್ಗಿಸಿ 
ತಾರೆ ಸಭೆಗೆ ಬಂದಳು...

ಅಲ್ಲಿರುವ 
ಹಿರಿಯರು ಪರಿ ಪರಿಯಾಗಿ ತಾರೆಗೆ ಪ್ರಶ್ನೆ ಕೇಳಿದರು...

"ಈ ಮಗುವಿನ "ಅಪ್ಪ" ಯಾರು  ?"

ತಾರೆ ಮಾತನಾಡಲಿಲ್ಲ... 
ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ...
ಮೌನವಾಗಿ ಸುಮ್ಮನಿದ್ದುಬಿಟ್ಟಿದ್ದಳು... !

ನನಗೆ..
ನನ್ನ ಗರ್ವಕ್ಕೆ ದೊಡ್ಡ ಕೊಡಲಿ ಏಟು ಬಿದ್ದಂತಾಗಿತ್ತು...

ಇಂದ್ರ ಲೋಕದಲ್ಲಿ 
ತ್ರಿಲೋಕ ಸುಂದರಿಯರಾದ ಅಪ್ಸರೆಯರನ್ನು ನಿರ್ವಿಕಾರವಾಗಿ ನೋಡಿ.. 
ಪ್ರತಿಕ್ರಿಯಿಸುವ .. 
ನಾನು ಪತಿ ಧರ್ಮವನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದವನು... 

ನಾನಿಲ್ಲದ ಸಮಯದಲ್ಲಿ ತಾರೆ ಜಾರಿದಳೆ  ?

ತುಂಬಿದ ಸಭೆಯಲ್ಲಿ  ಕೋಪದಿಂದ.. 
ಅವಮಾನದಿಂದ 
ಕಾಲನ್ನು  ಜೋರಾಗಿ ಒದೆಯುತ್ತ... 
ನೇರವಾಗಿ..
ತಾರೆಯ ಅಜ್ಜ..
ಬ್ರಹ್ಮನ ಬಳಿ ಹೋದೆ...

"ಸೃಷ್ಟಿಕರ್ತಾ...
ದೇವತೆಗಳ ಗುರುವಾದ  ನನಗೆ ಅನ್ಯಾಯವಾಗಿದೆ...

ಅವಮಾನವಾಗಿದೆ ನಿನ್ನ ಮೊಮ್ಮಗಳಿಂದ...!

ನನಗೆ ನ್ಯಾಯ ಕೊಡಿಸು..."

ಬ್ರಹ್ಮದೇವ..
ಚಂದ್ರನನ್ನೂ.. ತಾರೆಯನ್ನೂ ಪ್ರತ್ಯೇಕವಾಗಿ ಕರೆದು ಮಾತನಾಡಿದ...

ಆಮೇಲೆ ನನ್ನನ್ನು ಕರೆದ...

"ಗುರು... 
ಬ್ರಹಸ್ಪತಿ... ಶಾಂತನಾಗು...

ನೀನು 
ಇಹಲೋಕದ ಐಹಿಕ ಸಾಂಗತ್ಯವನ್ನು ತ್ಯಜಿಸಿ ... 
ಋಷಿಯಾದವನು...
ಮತ್ತೆ ಜಗದ ಜಂಜಡಗಳಿಗೆ ಬೀಳಬೇಡ...

ತಾರೆಗೆ
ಪ್ರಕೃತಿ ಸಹಜವಾಗಿ 
ಕಾಮದಾಸೆ ಆದಾಗ ನೀನು ಪುರಸ್ಕರಿಸಲಿಲ್ಲ.. .

ಅದು ನಿನ್ನ ಮೊದಲ ತಪ್ಪು...

ಅವಳು ಚಂದ್ರನನ್ನು ಸೇರಿದಾಗ 
ನಿನ್ನ ಕುರಿತು ಧ್ಯಾನದಲ್ಲೇ ಇದ್ದಳಂತೆ...

ಗಂಡು.. 
ಹೆಣ್ಣಿನ ಮಿಲನದಲ್ಲಿ 
ಬೇರೆ ವ್ಯಕ್ತಿಯ ಬಗೆಗೆ ಚಿಂತಿಸಿದರೆ ... 
ಅದು ಮಾನಸಿಕ ವ್ಯಭಿಚಾರವಾಗುತ್ತದೆ..

ಆದರೆ 
ನಿನ್ನ ತಾರೆ
ಚಂದ್ರನನ್ನು ಸೇರುವಾಗಲೂ 
ನಿನ್ನ ಧ್ಯಾನದಲ್ಲೇ ಇದ್ದಳು... ಇದು ವ್ಯಭಿಚಾರವಲ್ಲ.. ಸದಾಚಾರವಲ್ಲವೇ ?..

ಈ ವಿಷಯವನ್ನು ದೊಡ್ಡದಾಗಿಸಿ...
ಆಕಾಶಕ್ಕೆ 
ಎಂಜಲು ಉಗಿದು 
ನಿನ್ನ ಮುಖಕ್ಕೆ  ಯಾಕೆ  ಬೀಳಿಸಿಕೊಳ್ಳುತ್ತೀಯಾ ?

ಅವಳನ್ನು ಕ್ಷಮಿಸಿ ದೊಡ್ಡ ಮನುಷ್ಯನಾಗಿಬಿಡು..."

ನಾನು ಸುಮ್ಮನೆ
ಅವಡುಗಚ್ಚಿ ಹೊರಗೆ ಬಂದೆ...

ಒಳಗೊಳಗೆ ಜ್ವಾಲಾಮುಖಿ ಕುದಿಯುತ್ತಿತ್ತು...

ಉಪದೇಶ ಬೇರೆಯವರಿಗೆ ಕೊಡುವದು ಸುಲಭ...!

ನನ್ನೊಳಗಿನ ಗಂಡಸು..
ಸೊಕ್ಕಿನ ಅಹಮ್ ಸುಮ್ಮನಿರಬೇಕಲ್ಲ...!

ಗಡಸುತನದಿಂದ ಅಲ್ಲವೇ ಗಂಡಸು ಶಬ್ದ ಉತ್ಪತ್ತಿಯಾದದ್ದು ? 

ಆಶ್ರಮಕ್ಕೆ ಬಂದವನೇ ಮಗುವನ್ನು ಎತ್ತಿಕೊಂಡೆ...

ಮಗು ಮುಗ್ಧವಾಗಿ ನಗುತ್ತಿತ್ತು...

ಆ ನಗು 
ನನ್ನ ಗಂಡಸುತನವನ್ನು..
ನನ್ನ ಹಂಕಾರವನ್ನು ಅಣಕಿಸಿದಂತಿತ್ತು..
ಕೆಣಕುವಂತಿತ್ತು... 

ಕಮಂಡಲದಿಂದ ನೀರು ತೆಗೆದುಕೊಂಡೆ...

ತಾರೆ ಗಾಭರಿಯಿಂದ ನನ್ನ ಕಾಲು ಹಿಡಿದುಕೊಂಡಳು...

ನಾನು ಕಾಲು ಝಾಡಿಸಿದೆ... 
ತಾರೆ ದೂರ ಹೋಗಿ ಬಿದ್ದಳು...!

" ನನ್ನದಲ್ಲದ ಈ ಮಗು...ಷಂಡನಾಗಲಿ... ...!

ಗಂಡಾಗಿ ಹುಟ್ಟಿದ್ದರೂ ... 
ನಿರ್ವೀರ್ಯದ ಬದುಕು ಸಾಗಿಸಲಿ..."

ತಾರೆ
ಪರಿ ಪರಿಯಾಗಿ  ಬೇಡಿಕೊಂಡಳು...

ನಾನು ಬಗ್ಗಲಿಲ್ಲ...

"ತಾರೆ..
ನಾನು ಯಾಕೆ ಈ ಘೋರವಾದ ಶಾಪ ಕೊಟ್ಟೆ ಗೊತ್ತಾ ?"

ದಳ 
ದಳನೆ ನೀರಿಳಿವ ಕಣ್ಣಿಂದ 
ತಾರೆ ದೈನ್ಯವಾಗಿ ನನ್ನನ್ನು ನೋಡಿದಳು...

" ಪತಿಯನ್ನು ಧಿಕ್ಕರಿಸಿ..
ಅಕ್ರಮ ಸಂಬಂಧ ಮಾಡುವ 
ಪ್ರತಿಯೊಂದೂ ಹೆಣ್ಣಿಗೂ ಈ ಶಾಪ ನೆನಪಿನಲ್ಲಿರಬೇಕು...

ಹೆಣ್ಣಿನ ಅಕ್ರಮ ಸಂಬಂಧ ಮಾಡುವ 
ಪ್ರತಿಯೊಬ್ಬ  ಗಂಡಸಿಗೂ ಇದು ನೆನಪಿನಲ್ಲಿರಬೇಕು..

ನೀನೂ..
ನಿನ್ನ ಚಂದ್ರ ಬದುಕಿನುದ್ದಕ್ಕೂ
ಷಂಡ ಮಗುವನ್ನು ನೆನಪಿಸಿಕೊಂಡು ಕೊರಗುತ್ತಿರಬೇಕು...

ನಿಮ್ಮಿಬ್ಬರಿಗೆ 
ನಿಮ್ಮ ಅಕ್ರಮ ಸಂಬಂಧ ನೆನಪಾದಗಲೆಲ್ಲ 
ಈ "ನಿರ್ವೀರ್ಯ" ಮಗು ನೆನಪಾಗಬೇಕು....!.. "

ನನ್ನ  ಬಿರುಸಿನ ಮಾತನ್ನು ಕೇಳಿದ 
ತಾರೆ ಧಡಕ್ಕನೆ ಎದ್ದಳು...

ಕೋಪದಿಂದ ಕಂಪಿಸುತ್ತಿದ್ದಳು.... 

"ಮುನಿವರ್ಯಾ...
ತಪ್ಪು ಮಾಡಿದೆ...

ಈ ವಿಶ್ವದಲ್ಲಿ..
ಸೂರ್ಯ.. 
ಚಂದ್ರ.. ತಾರೆ..ಗುರು ....
ಇರುವ ತನಕ "ಬುಧನೂ" ಇರುತ್ತಾನೆ...

ಪ್ರೀತಿಸಿದ
ಒಲಿದ
ಹೆಣ್ಣಿನ ಆಸೆ ನೆರವೇರಿಸದ 
"ಗುರು" .... 
ಅವನ ಪೌರುಷ.. ಅಹಂಕಾರ.. ಸೊಕ್ಕೂ ಕೂಡ ನೆನಪಾಗುತ್ತದೆ....

ನೀನು ಹೇಳುವ 
ಅಕ್ರಮ..
ಅನೈತಿಕ ಸಂಬಂಧಳೂ ಶಾಶ್ವತವಾಗಿ ಇರುತ್ತವೆ...

ನನ್ನ ಈ ಮಾತು  ಸೂರ್ಯನಷ್ಟೆ ಸತ್ಯ...!.. .".. 

ನನ್ನ ಕೋಪವಿನ್ನೂ ಆರಿರಲಿಲ್ಲ...

ಆಕಾಶ ನೋಡಿದೆ...

ಹುಣ್ಣಿಮೆಯಾಗಿತ್ತು...

ಚಂದ್ರ ಬಾನಿನಲ್ಲಿ ನಕ್ಕಂತೆ ಕಂಡ....

ನನ್ನ ಮೈಯೆಲ್ಲ ಉರಿಯುತ್ತಿತ್ತು....!


( ಕಥೆಯನ್ನು ಓದಿ .. ಚರ್ಚಿಸಿ .. ಸಲಹೆ, ಸೂಚನೆ ನೀಡಿದ 
ಗೆಳೆಯ "ಸುಬ್ರಮಣ್ಯ .. ದೀಕ್ಷಾ ಕಾಲೇಜು ಹುಬ್ಬಳ್ಳಿ"
ಮತ್ತು ನನ್ನ ಪ್ರೀತಿಯ "ವಾಜಪೇಯಿ ಅಣ್ಣ" ಇವರಿಗೆ ಪ್ರೀತಿಯ ನಮನಗಳು.. 

ಚಂದದ ಪ್ರತಿಕ್ರಿಯೆಗಳಿವೆ.. 
ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ... )