Friday, December 12, 2008

ಭಯೋ...ಟೆಕ್ನೋಲಜಿ...


ದಿನದ ಕೂಲಿಯಯಲಿ ಬದುಕ ಹಿಡಿಯುವವರ ಬೆದರಿಸುತ್ತಿದೆ
ಬೀದಿ ಬದಿಯ ಬಾಂಬು
ತಾರಾ ಲೋಕದ ತಾಜಾ ಸ್ವರ್ಗದಲಿ
ತೂಕಡಿಸುತ್ತಿದ್ದವರ ನಿದ್ದೆಗೆಡಿಸಿದೆ
ಕದ್ದು ಒಳನುಗ್ಗಿದ್ದವರ ಬಂದೂಕಿನ ಸದ್ದು.

ಇಲಿಯನ್ನು ಬಿಟ್ಟು ಬಿಲ ಮುಚ್ಚುವ ರಾಜತಾಂತ್ರಿಕರು
ಮರವನ್ನು ಬೆಳೆಯಲು ಬಿಟ್ಟು
ಬಿದ್ದ ಬೀಜವ ಆರಿಸುತ್ತಿದ್ದಾರೆ
ಮುಂದಿನ ಚುನಾವಣೆಯಲ್ಲಿ
ಬಿಸಿ ಬೆಳೆ ಬಾತಿಗೆ ಬೇಯಿಸಬಹುದೆಂದು.

ಕಪ್ಪು ಮುಸುಕಿನ ಹಗಲು ದೆವ್ವಗಳನ್ನುಅಲ್ಲಾಡಿಸಲಾಗದವರು ಕಸಿದಿದ್ದಾರೆ
ಸನ್ಯಾಸಿನಿಯ ಕಾವಿ ವಸನವನ್ನು
ಕೆಂಪು ಕಣ್ಣುಗಳಿಗೆಲ್ಲ ಕೇಸರಿಯ ರೋಗ
ಸ್ವಾಮಿ(ನಿ) ನಿಷ್ಠೆ ಮೆರೆದವರಿಗೆ
ಶಿಲುಬೆಯಡಿಯಲ್ಲಿ ಸೆಕ್ಯುಲರ್ ಸ್ವರ್ಗ

ಆದರೆ......
ಸಾವಿನ ನೋವನ್ನೂ ಮಾರುತ್ತಾರೆ ಮಾಧ್ಯಮದವರು
"ಭಯೋತ್ಪಾದಕರ ಗುಂಡಿಗೆ ಸತ್ತವರ ಸಂಖ್ಯೆ
ನೂರಕ್ಕೂ ಮೀರಬಹುದು"
ಜಾಹೀರಾತಿನ ನಂತರ ವಾರ್ತೆ ಮುಂದುವರೆಯುವದು.

ದಿವಾಕರ ಹೆಗಡೆ

( ನನ್ನ ಗೆಳೆಯ ಬರೆದದ್ದು..)

9 comments:

Santhosh Rao said...

ಚೆನ್ನಾಗಿದೆ..ನನ್ ಅಭಿನಂದನೆಗಳನ್ನು ನಿಮ್ ಸ್ನೇಹಿತನಿಗೆ ತಿಳಿಸಿಬಿಡಿ

Geetha said...

ತು೦ಬಾ ಚೆನ್ನಾಗಿದೆ.
’ಮರ ಬೆಳೆಯಲು ಬಿಟ್ಟು ಬೀಜ ಆರಿಸುವುದು...’ ಕಟು ಸತ್ಯ...ಕಹಿಯು ಹೌದು.
ಈ ಪದ್ಯ ನಡೆಯುತ್ತಿರುವ ವಿಷಯಗಳಿಗೆ (current affairs) ಗೆ ಕನ್ನಡಿ ಹಿಡಿದ೦ತಿದೆ.

shivu.k said...

ಕವನ ಚೆನ್ನಾಗಿದೆ. ನಿಮ್ಮ ಗೆಳೆಯನಿಗೆ ಪದಗಳ ಮೇಲೆ ಹಿಡಿತವಿದೆ. ನನ್ನ ಅಭಿನಂದನೆಗಳನ್ನು ದಿವಾಕರ ಹೆಗಡೆಯವರಿಗೆ ತಿಳಿಸಿ !

Harisha - ಹರೀಶ said...

ಕಟು ಸತ್ಯ :(

Ittigecement said...

ಸಂತೋಷ್....

ಗೀತಾ.....

ಶಿವು ಸರ್....

ಹರೀಷ್....

ನನ್ನ ಪರಮಾಪ್ತ ಗೆಳೆಯ "ದಿವಾಕರ" ಒಂದು ದೈತ್ಯ ಪ್ರತಿಭೆ...!!
ಈ ಕವನವನ್ನು ಆತ ೧೦ ನಿಮಿಷದಲ್ಲಿ ಬರೆದಿದ್ದಾನೆ...
ಮೂರು ಪಾತ್ರಗಳ "ಏಕವ್ಯಕ್ತಿ ತಾಳಮದ್ದಲೆ ಯಕ್ಷಗಾನ" ವನ್ನು ಮೊಟ್ಟಮೊದಲಬಾರಿಗೆ ಮಾಡಿ ಬಲ್ಲಿದರಿಂದ ತಲೆದೂಗಿಸಿ ಕೊಂಡಿದ್ದಾನೆ..!
ಹಲವಾರು ಯಕ್ಷಗಾನ ಪಾತ್ರಗಳಲ್ಲಿ ಪ್ರಸಿದ್ಧನಾಗಿದ್ದಾನೆ..
ಯಕ್ಷಗಾನ ತಾಳಮದ್ದಲೆಯಲ್ಲಿ ಸಮರ್ಥ ಅರ್ಥಧಾರಿ...
ಹಲವಾರು "ನಾಟಕಗಳನ್ನು" ಬರೆದು "ಚಂದ್ರಶೇಖರ್ ಕಂಬಾರ್ ಅಂಥವರಿಂದ "ಶಭಾಶ್" ತೆಗೆದು ಕೊಂಡಿದ್ದಾನೆ...

ಆದರೆ...
ಏನು ಮಾಡೋಣ..
ಈತನ ಪ್ರತಿಭೆಯೆ ಈತನಿಗೆ ಶತ್ರುವಾಗಿದೆ..!!

Harisha - ಹರೀಶ said...

ಪ್ರತಿಭೆಯೇ ಶತ್ರುವಾಗಿದೆ ಅಂದ್ರೆ?? ಯಾಕೆ? ಏನಾತು?

Ittigecement said...

ಹರೀಷ್...
ನಿಜ ಆತನ ಪ್ರತಿಭೆಯೆ ಅವನ ಶತ್ರು...
ನೀವು ಯಕ್ಷಗಾನ ವಲಯದಲ್ಲಿ ದಿವಾಕರ ಹೆಗಡೆ ಬಗೆಗೆ ಕೇಳಿ ನೋಡಿ..
ಒಮ್ಮೆ ಇವನ ಎದುರಾಳಿಯಾದವರು ಮತ್ತೊಮ್ಮೆ ಇವನ ಸಂಗಡ ಅರ್ಥ ಹೇಳಲಿಕ್ಕೆ ಹೆದರುತ್ತಾರೆ...
ನನ್ನ ಗೆಳೆಯನೆಂದು ಹೊಗಳುತ್ತಿಲ್ಲ..
ಒಮ್ಮೆ ಇವನ ಕಾರ್ಯಕ್ರಮ ನೋಡಿ ಆಮೇಲೆ ಹೇಳಿ...
ಏಕವ್ಯಕ್ತಿ ತಾಳಮದ್ದಲೆ ಆಯೋಜಿಸುತ್ತೀರಾ?
ಇವನ ಡೇಟ್ ನಾನು ಹೊಂದಿಸಿ ಕೊಡುತ್ತೇನೆ...
ಇವನಿಗೆ ಹಿಂದುಗಡೆಯಿಂದ "ಗಾಡ್ ಫಾದರ್" ಯಾರೂ ಇಲ್ಲ...
ಇವನ ಪ್ರತಿಭೆಯ ಬಗೆಗೆ "ಶ್ರೀ ಶತಾವಧಾನಿ ಅರ್. ಗಣೇಶ್" ಬಳಿ ಕೇಳಿ ನೋಡಿ...
ಇನ್ನೂ ಬೆಕಾದಷ್ಟು ಹೇಳಲಿಕ್ಕೆ ಇವೆ ಇವನ ಬಗೆಗೆ...

ಹರೀಷ್...ಧನ್ಯವಾದಗಳು...

Anonymous said...

ಬಹಳ ಚೆನ್ನಾಗಿದೆ! ದಿವಾಕರ ಹೆಗಡೆಯವರಿಗೆ ನನ್ನ ಅಭಿನಂದನೆಗಳು... ಹಾಗೆಯೇ ನಿಮಗೂ, ಇಲ್ಲಿ ಪ್ರಕಾಶಿಸಿದ್ದಕ್ಕೆ! :-D

Ittigecement said...

ಪ್ರಕವಿಯವರೆ....
ಪ್ರತಿಕ್ರಿಯೆಗೆ ಧನ್ಯವಾದಗಳು...

ನಿಮ್ಮೆಲ್ಲರ್ರಿಗೆ ""ದಿವಾಕರ"" ಶುಭಾಶಯಗಳನ್ನು ತಿಳಿಸಿದ್ದಾನೆ...