Wednesday, July 15, 2015

ಕತ್ತಲೆ.................

ಆಗಿನ್ನೂ
ನನಗೆ ಮದುವೆ ಆಗಿಲ್ಲವಾಗಿತ್ತು..

ಏಕಾಂತದಲ್ಲಿ 
ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..

ಸ್ನಾನ 
ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...

ಅರಮನೆಯ ಈಜುಕೊಳದ ಪಕ್ಕದಲ್ಲಿರುವ ಕೊಳಕ್ಕೆ ಸ್ನಾನಕ್ಕೆ ಹೋಗಿದ್ದೆ...

ಬಟ್ಟೆಯಲ್ಲವನ್ನೂ ಬಿಚ್ಚಿ
ಪಕ್ಕದಲ್ಲಿ ಇಟ್ಟು...
ಬಿಳಿಬಣ್ಣದ
ತೆಳು ವಸ್ತ್ರವನ್ನು ಸುತ್ತಿಕೊಂಡಿದ್ದೆ..

ಒಮ್ಮೆ
ಕೊಳದಲ್ಲಿ ಮುಳುಗೆದ್ದು ಮುಖ ಉಜ್ಜಿಕೊಂಡು ಮೇಲೆ ನೋಡಿದೆ..

ಕಿಟಾರನೆ ಕಿರುಚಿದೆ...

ಜಿಂಕೆ ಮರಿಯೊಂದು ನನ್ನನ್ನೇ ದಿಟ್ಟಿಸುತ್ತಿತ್ತು... !

ಅಲ್ಲೆ
ಪಕ್ಕದಲ್ಲಿದ್ದ ಅಮ್ಮ ಗಾಬರಿಯಿಂದ ಓಡೋಡಿ ಬಂದಳು

"ಏನಾಯ್ತು ಮಗಳೆ  ?".... 

ಬಂದವಳು 
ನನ್ನ ಅಮ್ಮನಾದರೂ 
ನಾನು 
ಕಷ್ಟಪಟ್ಟು ನನ್ನ ಎದೆಯ ಭಾಗವನ್ನು ಮುಚ್ಚಿಕೊಳ್ಳುತ್ತಿದ್ದೆ..

"ಅಮ್ಮಾ...
ಆ .. ಜಿಂಕೆಮರಿ ನನ್ನನ್ನೇ ದಿಟ್ಟಿಸುತ್ತಿದೆ...

ಮೊದಲು ಅದನ್ನು ಇಲ್ಲಿಂದ ಓಡಿಸು..."

ಅಮ್ಮ ಹೊಟ್ಟೆ ತುಂಬಾ ನಕ್ಕುಬಿಟ್ಟಳು..

"ನೋಡು ಮಗಳೆ..

ನೋಟಕ್ಕೊಂದು 
ಸಂವೇದನೆ..
ಭಾವನೆ 
ಇದ್ದರೆ ನಾಚಿಕೆ ಸಹಜವಾಗಿ ಆಗುತ್ತದೆ..

ಈ ಪುಟ್ಟ ಜಿಂಕೆಮರಿಗೆ ನಿನ್ನ ಚಂದ ಬೇಕಿಲ್ಲ...

ಅದು 
ಯಾವ ಭಾವನೆಗಳಿಲ್ಲದೆ 
ಶೂನ್ಯವಾಗಿ 
ಮುಗ್ಧವಾಗಿ ನೋಡುತ್ತದೆ.....

ಇದಕ್ಕೆಲ್ಲ ಸ್ಪಂದಿಸುವ ಅಗತ್ಯ ಇಲ್ಲ..."

ಆಗ
ಅಮ್ಮ ಹೇಳಿದ ಮಾತು ಅರ್ಥವಾಗಿರಲಿಲ್ಲ...

ಅರ್ಥವಾಗುವ ಹೊತ್ತಿಗೆ ಮದುವೆಯಾಗಿತ್ತು...

ನಾನು
ಎಷ್ಟೆಲ್ಲ ಕನಸು ಕಂಡಿದ್ದೆ...
ನನ್ನ ಕನಸಿನಲ್ಲಿ ಎಷ್ಟೆಲ್ಲ ಬಣ್ಣಗಳಿದ್ದವು..!

ನನಗೆ ಗೊತ್ತಿತ್ತು ನಾನು ಚಂದವಿದ್ದೇನೆ ಅಂತ..

ನನ್ನಮ್ಮನೂ ನನ್ನ ಕಿವಿಯಲ್ಲಿ ಉಸುರುತ್ತಿದ್ದರು..

"ಮಗಳೆ..
ನಿನ್ನನ್ನು ಮದುವೆಯಾಗುವವ ಪುಣ್ಯ ಮಾಡಿರಬೇಕು..

ದೇವರು
ಎಷ್ಟೆಲ್ಲ ಸಮಯ ತೆಗೆದುಕೊಂಡು ನಿನ್ನನ್ನು ಸೃಷ್ಟಿಸಿದನೋ ಗೊತ್ತಿಲ್ಲ...

ನೀ
ನನ್ನ ಮಗಳಾದರೂ
ನಿನ್ನಂದ ಕಂಡು ನನಗೆ ಹೊಟ್ಟೆಕಿಚ್ಚು ಆಗುತ್ತಿದೆ.."

ಒಮ್ಮೆ
ನನ್ನಪ್ಪನ ಆಸ್ಥಾನದಲ್ಲಿ 
ಕವಿಯೊಬ್ಬ 
ನನ್ನ ಕಣ್ಣುಗಳ ಬಗೆಗೆ ಕವನವನ್ನೇ ಓದಿ ಹೇಳಿದ್ದ...

ಅದೆಷ್ಟು ಬಾರಿ
ಒಬ್ಬಳೇ ಏಕಾಂತದಲ್ಲಿ
ನನ್ನ 
ಕೋಣೆಯಲ್ಲಿ ನಗ್ನವಾಗಿ 
ನನ್ನನ್ನು ನೋಡಿಕೊಳ್ಳುತ್ತಿದ್ದೇನೋ   ಗೊತ್ತಿಲ್ಲ... !

ಸುತ್ತಲೂ
ಇರುವ ಕನ್ನಡಿಯಲ್ಲಿ 
ನನ್ನಂದ ಚಂದವನ್ನು ನೋಡಿಕೊಂಡು ನನ್ನಷ್ಟಕ್ಕೇ ನಾಚಿಕೆ ಪಟ್ಟುಕೊಳ್ಳುತ್ತಿದ್ದೆ...
ಸಂಭ್ರಮಿಸುತ್ತಿದ್ದೆ...
ಹೆಮ್ಮೆ ಪಡುತ್ತಿದ್ದೆ...!

ನನ್ನ  ಕನಸುಗಳು 
ಬಲು ವಿಚಿತ್ರವಾಗಿರುತ್ತಿದ್ದವು...
ಮುಖ ಅಸ್ಪಷ್ಟವಾದ
ಒಬ್ಬ 
ರಾಜಕುಮಾರ 
ಬಿಳಿ ಬಣ್ಣದ ಕುದುರೆಯೇರಿ
ನನ್ನನ್ನು ಕರೆದೊಯ್ಯಲು ಬರುತ್ತಿದ್ದ...

ನನ್ನತ್ತ ಕೈಚಾಚುತ್ತಿದ್ದ..

ನಾನು
ಕೈ ಕೊಡುವಷ್ಟರಲ್ಲಿ ಆತನ ಕುದುರೆ ಮುಂದೆ ಓಡಿಹೋಗಿಬಿಡುತ್ತಿತ್ತು...

ಜೋರಾಗಿ ಬೀಳುವ ಮಳೆಯಲ್ಲಿ
ನಾನು
ಅಳುತ್ತ ನಿಂತಿರುತ್ತಿದ್ದೆ..

ಮಳೆಯ 
ಹನಿಗಳ ಜೊತೆ
ಕಣ್ಣ ಹನಿಗಳು ಇಳಿದು ಹೋಗುವಾಗ
ಕೆನ್ನೆಗೆ ಮಾತ್ರ ತುಸು ಬಿಸಿಯ ಅನುಭವ

ಸಣ್ಣಕೆ ಬಿಕ್ಕಳಿಕೆಯ ಸದ್ಧು...

ಅಳುತ್ತಿರುವಂತೆಯೇ ಎಚ್ಚರವಾಗುತ್ತಿತ್ತು.. !

ಕನಸುಗಳಿಗೆ ಅರ್ಥವಿಲ್ಲ...
ಹುಚ್ಚು ಬಣ್ಣಗಳು ಅವು ಅಂತ ಸಮಾಧಾನ ಪಟ್ಟುಕೊಳ್ಳುತ್ತಿದ್ದೆ...

ಅಂದಿನ ದಿನಗಳು
ಇನ್ನೂ
ನೆನಪಿದೆ..

ನೆನಪುಗಳಿಗೇನು  ?
ಹೊತ್ತುಗೊತ್ತು ಒಂದೂ ಇಲ್ಲ...

ಸುಮ್ಮನೆ ಬಂದು ಕದಡುತ್ತವೆ...

ಹಸ್ತಿನಾವತಿ ಪುರದ 
ವೃದ್ಧ ಯೋಧ 
ಭೀಷ್ಮ 
ನನ್ನಪ್ಪನಿಗೆ 
ಪತ್ರವೊಂದನ್ನು ಬರೆದು ಕಳುಹಿಸಿದ್ದ....

"ನಿನ್ನ ಮಗಳು ಗಾಂಧಾರಿಯನ್ನು
ನಮ್ಮ
ರಾಜಕುವರ "ಧೃತರಾಷ್ಟ್ರನಿಗೆ" ಮದುವೆ ಮಾಡಿಕೊಡಿ...

ಇಲ್ಲವಾದಲ್ಲಿ
ನಿಮ್ಮ ಗಾಂಧಾರ ದೇಶವನ್ನು ಸರ್ವ ನಾಶ ಮಾಡಿಬಿಡುವೆ..."

ಶಕ್ತಿವಂತರ..
ಬಲಶಾಲಿಗಳ ಸೊಕ್ಕಿಗೆ 

ಜಗತ್ತು ತಲೆಬಾಗುತ್ತದೆ...

ಹುಟ್ಟು ಕುರುಡ "ಧೃತರಾಷ್ಟ್ರ"  ... 
ತನ್ನ
ಬದುಕಿನಲ್ಲಿ ಎಂದೂ ಬಣ್ಣಗಳನ್ನು ನೋಡದವ...
ರಂಗು ರಂಗಿನ ಕನಸುಗಳನ್ನು ಕಾಣದವನ ಮಡದಿಯಾದೆ...

ಕುರುಡ
ನನ್ನ  ಪತಿಗಿರದ
ಬಣ್ಣಗಳ..
ಬೆಳಕಿನ ಭಾಗ್ಯ ನನಗೇಕೆ ಬೇಕು ?

ಘನ ಘೋರ ಪ್ರತಿಜ್ಞೆ ಮಾಡಿದೆ...

"ನಾನೂ ಕೂಡ 
"ಆಜೀವ ಪರ್ಯಂತ" ಕುರುಡಿಯಾಗಿಯೇ ಬದುಕುವೆ.. !
ನನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಅವನ ಬಾಳ ಸಂಗಾತಿಯಾಗುವೆ.."

ಲೋಕವೆಲ್ಲ ನನ್ನನ್ನು ಕೊಂಡಾಡಿತು...
ಹರ್ಷೋಧ್ಗಾರ  ಮಾಡಿತು..

ಆಕಾಶದಿಂದ ಪುಷ್ಪ ವೃಷ್ಠಿಯಾಯಿತು....

ನನ್ನ ಪತಿಯೂ ನನ್ನ ಬಗೆಗೆ ಹೆಮ್ಮೆ ಪಟ್ಟ..

ಲೋಕವೇ ಹೀಗೆ ..
ಏನಾದರೂ ಹೇಳುತ್ತದೆ..

ನಮ್ಮ ಕಾರ್ಯವನ್ನು ಮಾತ್ರ ನೋಡುತ್ತದೆ.. 
ನಮ್ಮ ಕ್ರಿಯೆಯ ಹಿಂದಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವದಿಲ್ಲ... 

ಯಾರೆಲ್ಲ ಯಾಕೆ ?
ನನ್ನ ತಮ್ಮ "ಶಕುನಿ" ಗೊತ್ತಲ್ಲ...
ಆತ ಹೇಳಿದ್ದು ಏನು ಗೊತ್ತಾ ?

"ಅಕ್ಕಾ...
ನೀನು ಬುದ್ಧಿವಂತೆ... ಚಾಣಾಕ್ಷೆ...

ಹುಟ್ಟುಕುರುಡನ ಮಡದಿಯಾಗಿ...

ಜೀವನ ಪರ್ಯಂತ
ಕುರುಡನ 
ಅಘೋಷಿತ ದಾಸಿಯಾಗಿ 
ಗುಲಾಮಗಿರಿ
ಬಾಳುವದಕ್ಕಿಂತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ರಾಣಿ ಸುಖವನ್ನಾದರೂ ಅನುಭವಿಸುವ ಕುತಂತ್ರ ಇದಲ್ಲವೆ ?

ಅಕ್ಕಾ...

ಕುರುಡನ ಪತ್ನಿಯಾಗಿ 
ಕಣ್ಣಿಗೆ ಬಟ್ಟೆ ಕಟ್ಟಿಕೊಂಡರೂ
ಬದುಕು ಪೂರ್ತಿಯಾಗಿ ಕುರುಡಾಗಲಿಲ್ಲ ನೋಡು..

ರಾಣಿಯಾಗಿ 
ಸೇವೆ ಮಾಡಿಸಿಕೊಳ್ಳುವ ಭಾಗ್ಯವಾದರೂ ಸಿಕ್ಕಿತಲ್ಲ..." !.... 

ಮದುವೆಯ 
ಶಾಸ್ತ್ರವೆಲ್ಲ ಮುಗಿದು
ಹಸ್ತಿನಾವತಿಗೆ ಹೋಗುವ ಮುನ್ನ
ಅಮ್ಮ
ನನ್ನನ್ನು ಬಿಗಿದಪ್ಪಿ ಅತ್ತಿದ್ದಳು...

"ಮಗಳೆ...
ನೀನು ದಿಟ್ಟಿಸುವ ನೋಟಗಳಿಗೆ ಹೆದರುತ್ತಿದ್ದೆಯಲ್ಲ...

ಆ ತೊಂದರೆ ಇನ್ನಿಲ್ಲ... 

ಕಣ್ಣಿನಲ್ಲಿ 
ಸಂವೇದನೆ ಸಿಗದಿದ್ದರೂ...
ಸ್ಪರ್ಷದಲ್ಲಾದರೂ ಸಿಗುತ್ತದೆ...

ಕುರುಡರಿಗೆ ಸ್ಪರ್ಷದಲ್ಲೇ ಕಣ್ಣಿರುತ್ತದಂತೆ....

ಪ್ರೀತಿಗೆ 
ನೋಟವೂ ಬೇಕಿಲ್ಲ ಮಗಳೆ.... 

ಪ್ರೀತಿ ಕುರುಡು ಅನ್ನುತ್ತಾರೆ ಹಿರಿಯರು... 

ಪ್ರತಿಯೊಂದೂ ದಾಂಪತ್ಯವೂ ಕೂಡ ಕುರುಡು... 
ಮಗಳೆ 
ಧೈರ್ಯವಾಗಿರು...

ದಂಪತಿಗಳ 
ಏಕಾಂತದ 
ರಾತ್ರಿಗಳ ಕೋಣೆಯಲ್ಲಿ ಬೆಳಕಿರುವದಿಲ್ಲ ಮಗಳೆ..."... 

ಆಗ  
ಅಮ್ಮನ ಮಾತು ನನಗೆ ಅರ್ಥವಾಗಿರಲಿಲ್ಲ...

ಮದುವೆಯಾದ
ಶುರುವಿನಲ್ಲಿ
ನನ್ನ ಸಖಿಯರಿಗೆ 
ಮೊದಲಿನ ಹಾಗೆ ಶೃಂಗಾರ ಮಾಡಿಕೊಡಲು ಹೇಳುತ್ತಿದ್ದೆ..

ಶೃಂಗರಿಸಿಕೊಳ್ಳುವದೆಂದರೆ ನನಗೆಲ್ಲಿಲ್ಲದ ಸಂಭ್ರಮ  !

ಅದರಲ್ಲೂ
ಹಸಿರು ಬಣ್ಣದ ಸೀರೆಗೆ..
ಗುಲಾಬಿ ಬಣ್ಣದ ಅಂಚು...
ಗುಲಾಬಿ ಬಣ್ಣದ ಕುಪ್ಪುಸ...

ಕುತ್ತಿಗೆಗೆ ಮುತ್ತಿನ ಹಾರ...
ಮೂಗಿಗೆ ದೊಡ್ಡದಾದ ನತ್ತು...! 

ಒಹ್  ..... !

ನನ್ನ
ಚಂದವನ್ನು ನಾನೂ ಸಹ ನೋಡಿಕೊಳ್ಳಲಾಗದ ಬದುಕು ನನ್ನದು !

ನನ್ನ ಪತಿಯೂ 
ನನ್ನಂದವನ್ನು ಅನುಭವಿಸಲಾರ...

ಇನ್ಯಾರಿಗೆ ಶೃಂಗರಿಸಿಕೊಳ್ಳಲಿ  ?...

ನನ್ನ
ಚಂದವನ್ನು ಹಗಲೆಲ್ಲ 
ನೋಡಿ
ನೋಡಿ ರಾತ್ರಿ ನನ್ನನ್ನು 
ನನ್ನಂದವನ್ನು ಅನುಭವಿಸುವ ಪರಿ ನನ್ನ ಪತಿಯದಾಗಿರಲಿಲ್ಲ...

ಅವನ ದೇಹಕ್ಕೆ
ಸುಖ 
ಬೇಕಾದಾಗ
ನನ್ನನ್ನು ಕರೆಯುತ್ತಿದ್ದ..

ಅವನ ಕಣ್ಣುಗಳಷ್ಟೇ ಅಲ್ಲ...
ಅವನಾಸೆಯಲ್ಲೂ ಕುರುಡುತನ ಕಾಣುತ್ತಿತ್ತು...

ಇಬ್ಬರ
ಕುರುಡು .... 
ಕತ್ತಲಲ್ಲಿ ನಡೆವ ಸುಖದ ಹುಡುಕಾಟ ಮಕ್ಕಳಾಟದಂತಿತ್ತು... 

ಚಂದದ
ರಮಿಸುವ..
ಶೃಂಗಾರದ ಮಾತುಗಳು...
ನನ್ನಂದದ ಕುರಿತು ಹೊಗಳುವ ಸಲ್ಲಾಪಗಳು 
ನನಗೆ ಮರಿಚಿಕೆಯಾಗಿತ್ತು...

ಮಕ್ಕಳಾದರು...
ಮಕ್ಕಳೂ  ದೊಡ್ಡವರಾದರು...

ಕುರುಡನ ಮಕ್ಕಳು
ಸ್ವಭಾವದಲ್ಲೂ  ಕುರುಡಾಗಿಬಿಟ್ಟರು.. !

ಹಿಡಿದು
ದಂಡಿಸುವ ಅಪ್ಪನಿಲ್ಲದಿದ್ದರೆ ಏನಾಗುತ್ತದೆ ಎನ್ನುವದಕ್ಕೆ
ನಮ್ಮ ಮಕ್ಕಳು ಸಾಕ್ಷಿಯಾಗಿಬಿಟ್ಟರು..

ಅಧಿಕಾರಕ್ಕಾಗಿ
ನಡೆದ ಕುರುಕ್ಷೇತ್ರ ಯುದ್ಧದಲ್ಲಿ
ಶ್ರೀಕೃಷ್ಣ
ತನ್ನ ಎಣಿಕೆಯಂತೆ ನನ್ನ ಮಕ್ಕಳನ್ನೆಲ್ಲ ಸಂಹರಿಸಿಬಿಟ್ಟ...

ಇದೀಗ
ಪಾಂಡವರು ರಾಜರಾಗಿದ್ದಾರೆ..

ನಮಗೆ ಗೌರವ ಕೊಟ್ಟು 
ಮರ್ಯಾದೆಯಿಂದ ನಡೆಸಿಕೊಳ್ಳುತ್ತಿದ್ದಾರೆ...

ನಾನಂತೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೆ..

ಬದುಕು
ಕತ್ತಲಾಗಿತ್ತು..

ಕತ್ತಲಿಗೆ 
ಯಾವಾಗಲೂ ತಬ್ಬಿಕೊಳ್ಳುವ ಆಸೆ...

ಬೆಳಕಿಗೆ ಓಡಿಸುವ ಹಂಬಲ... !

ಅತ್ತಿತ್ತ
ತಡಕಾಡುತ್ತಲೆ 
ಕತ್ತಲಲ್ಲಿ  ಬದುಕೆಲ್ಲ ಕಳೆದು ಹೋಗಿತ್ತು....

ಇದ್ದಕ್ಕಿದ್ದಂತೆ ಧೃತರಾಷ್ಟ್ರ... 

"ಗಾಂಧಾರಿ....
ನಮ್ಮ ಮಕ್ಕಳೂ ಇಲ್ಲಿಲ್ಲ...
ನಮ್ಮದಲ್ಲದ ಈ ರಾಜ್ಯದಲ್ಲಿ ನಾವಿರಬಾರದು..

ವಾನಪ್ರಸ್ಥ ಹೋಗೋಣ....

ನಮ್ಮ ಉಳಿದ ಬದುಕನ್ನು ಅಲ್ಲಿ ಕಳೆಯೋಣ.."... 

ಎಲ್ಲವನ್ನೂ ಕಳೆದುಕೊಂಡ
ಕುರುಡು 
ಬದುಕಿಗೆ ವನವಾದರೇನು ?
ನಾಡಾದರೇನು ?

ನಮ್ಮೊಡನೆ ಕುಂತಿಯೂ ಹೊರಟಳು..
ವಿಧುರನೂ ಜೊತೆಯಾದ...

ದಟ್ಟ 
ಕಾನನದಲ್ಲೊಂದು ಪುಟ್ಟ ಕುಟೀರದಲ್ಲಿ  ನಾವಿರತೊಡಗಿದೆವು...

ಅದೊಂದು ದಿನ...

ನಾನು 
ಸ್ನಾನ ಮಾಡಿ ಬಂದು ಕೂದಲು ಒಣಗಿಸಿಕೊಳ್ಳುತ್ತಿದ್ದೆ...

ಕುಂತಿ 
ನನ್ನ ತಲೆ ಬಾಚಲು ಬಂದಳು..

"ಕುಂತಿ..
ನಿನ್ನನ್ನು ಕಂಡರೆ 
ನನಗೆ ಮೊದಲೆಲ್ಲ ಎಷ್ಟೆಲ್ಲ ಅಸೂಯೆ ಇತ್ತು ...!

ಅದೆಲ್ಲ ನೆನಪಾದರೆ ಈಗ ನಗು ಬರುತ್ತದೆ...

ಸಾಧ್ಯವಾದಲ್ಲಿ ನನ್ನನ್ನು ಕ್ಷಮಿಸು..."

ಕುಂತಿ
ನಕ್ಕಳು...

" ಗಾಂಧಾರಿ...
ಏನು ಆಗಬೇಕಿತ್ತೋ ಅದೆಲ್ಲ ಆಗಿ ಹೋಯಿತು.. !
ಈಗೆಲ್ಲ ಅದರ ಬಗೆಗೆ ಮಾತನಾಡುವದು ವ್ಯರ್ಥವಲ್ಲವೆ ? "

"ಕುಂತಿ..
ಏನೇ ಹೇಳು...
ನೀನು ನನಗಿಂತ ಭಾಗ್ಯವಂತೆ...

ಬದುಕಿನಲ್ಲಿ ಹೆಚ್ಚು ಸುಖ ನೋಡಿದ್ದೀಯಾ..."

ಕುಂತಿ ಮತ್ತೊಮ್ಮೆ ನಕ್ಕ ಸದ್ಧು ನನಗೆ ಕೇಳಿಸಿತು...

"ಅದು ಹೇಗೆ ಹೇಳುತ್ತೀಯಾ ?"

"ನೋಡು...
ನಿನ್ನ ಗಂಡನಿಗೆ ಕಣ್ಣಿತ್ತು...

ನಿನ್ನಂದವನ್ನು ನೋಡಿ ಸುಖಿಸುತ್ತಿದ್ದ..

ಅವನ ಆಸೆಯ 
ನೋಟವನ್ನು
ಸುಖಿಸುವ ಭಾಗ್ಯ ನಿನಗಿತ್ತು..

ಹೆಣ್ಣಿನ ಜನ್ಮಕ್ಕೆ
ಗಂಡಿನ ಎದುರಲ್ಲಿ ... 
ಬೆತ್ತಲೆಯಾಗುವದೂ ಕೂಡ ಒಂದು ಸುಖ....!

ಬೆತ್ತಲೆಯಾಗುವ ಖುಷಿ..  
ಆ ನಾಚಿಕೆಯ ಸುಖ ನಿನಗೆ ಸಿಗುತ್ತಿತ್ತು...

ನಿನ್ನ 
ಬೆತ್ತಲೆಯ  ಅಂದವನ್ನು 
ಆತ 
ನೋಡಿ ಭೋರ್ಗರೆಯುತ್ತಿದ್ದನಲ್ಲ... 
ಅದನ್ನು
ನೋಡುವ ಸುಖ ನಿನಗಿತ್ತು..."... 

"ಗಾಂಧಾರಿ...
ಎಷ್ಟು 
ಬೆತ್ತಲೆಯಾದರೇನು ?... 

ನೋಡಿದರೆ ಸುಖ ಸಿಗುವದಿಲ್ಲ...

ನಾನು
ನಾಚಿದರೆ ದೇಹದ ಆಸೆ ತಣಿಯುವುದೆ ?... 

ಪ್ರೀತಿಯ
ಕತ್ತಲ ದಾಂಪತ್ಯದಲ್ಲಿ
ಬೆವರು ಹರಿಯಬೇಕು....

ನನ್ನಲ್ಲೂ ಬೆವರಿನ ಹನಿ ಹುಟ್ಟಿಸಬೇಕಿತ್ತು..

ಅದು ಅವನಿಂದ ಆಗಲಿಲ್ಲ..

ಅವನ ಆರೋಗ್ಯದ ಸ್ಥಿತಿ..
ಅವನ ಶಾಪದ ವಿಷಯ ಗೊತ್ತಲ್ಲವೆ ?

ಆತ ಪ್ರಣಯಕ್ಕೆ ಅಣಿಯಾದರೆ
ಅವನ ಮೃತ್ಯು ಅವನಿಗಾಗಿ ಕಾಯುತ್ತಿತ್ತು...

ಅಬಲಿಷ್ಠ ಗಂಡಸರ ಒಂದು ದೌರ್ಬಲ್ಯ ಏನು ಗೊತ್ತಾ ?

ಅವರಿಗೆ 
ದೈಹಿಕ ಅಶಕ್ತತೆ ಒಂದೇ ಅಲ್ಲ...
ಮಾನಸಿಕ ಅಶಕ್ತತೆಯೂ ಇರುತ್ತದೆ...

ಬದುಕಿನುದ್ದಕ್ಕೂ ಕೀಳರಿಮೆ ಅವರಿಗೆ ಕಾಡುತ್ತದೆ...

ನಾನು 
ಮಾನಸಿಕವಾಗಿಯಾದರೂ ಬೆತ್ತಲೆಯಾಗೋಣ ಅಂದರೆ..
ಅವರ ಕೀಳರಮೆಯಿಂದಾಗಿ..
ಅದಕ್ಕೂ ಅವಕಾಶವಿಲ್ಲವಾಗಿತ್ತು... 

ಮುಕ್ತವಾಗಿ 
ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶವೂ ಇಲ್ಲದೇ ಹೋಯ್ತು....!

ನೀನು 
ಮಾನಸಿಕವಾಗಿಯಾದರೂ ಬೆತ್ತಲೆಯಾಗುತ್ತಿದ್ದೆ ಅಲ್ಲವೆ ?

ನನಗೆ ಆದ ಹಾಗಲ್ಲ ನಿನಗೆ.. ... 
ಧೃತರಾಷ್ಟ್ರ ಬಲಿಷ್ಠನಾಗಿದ್ದ ಅಲ್ಲವೆ ?"... 

ನನಗೂ ನಗು ಬಂತು....

"ದಾಂಪತ್ಯಕ್ಕೊಂದು
ಮಾತಿನ..
ಅಂದದ ವರ್ಣನೆಯ 
ಪ್ರಣಯದ ಸೊಗಸು ಬೇಕು...ಸರಸ .. ಸಲ್ಲಾಪ ಬೇಕು.. 

ನಮ್ಮ 
ಪ್ರಣಯಕ್ಕೆ ಸಂವೇದನೆ ಎಲ್ಲಿತ್ತು ?... 

ಮಲಗುವ ಮಂಚದ 
ಮರದ ಕೊರಡಿನ ಜೊತೆ ಪ್ರಣಯ ಹೇಗಿರಲು ಸಾಧ್ಯ ?

ಕುರುಡನಿಗೂ ಮಾನಸಿಕ ವ್ಯಥೆ ಇತ್ತು..
ಕೀಳರಮೆ ಇತ್ತು...

ಅಂಗವಿಕಲತೆ 
ಮಾನಸಿಕವಾಗಿ ಇದ್ದಲ್ಲಿ ಬದುಕು ಬಹಳ ಕಷ್ಟ..."... 

ಕುಂತಿ ಈಗ ಜೋರಾಗಿ ನಕ್ಕಳು...

"ನೋಡು
ಗಾಂಧಾರಿ...

ಇಲ್ಲಿನ ಗಂಡಸರೆಲ್ಲ  ದಾಂಪತ್ಯದಲ್ಲಿ ಬಹುಷಃ ಎರಡು ಜಾತಿ..

ಒಬ್ಬ 
ಕಣ್ಣಿಲ್ಲದೆ
ಅಂದವನ್ನು ಭೋಗಿಸಲಾಗದ  ಕುರುಡು ಧೃತರಾಷ್ಟ್ರ .... 

ಇನ್ನೊಬ್ಬ 
ಕಣ್ಣಿದ್ದೂ 
ಅಂದವನ್ನು ನೋಡಿಯೂ 
ಅನುಭವಿಸಲಾಗದ... 
ಭೋಗಿಸಲಾಗದ ಅಸಹಾಯಕ ಪಾಂಡು ಮಹರಾಜ... "... 

ನನಗೂ ನಗು ಬಂತು...

"ಅದು ಹಾಗಲ್ಲ... 

ದಾಂಪತ್ಯದಲ್ಲಿ 
ದೌರ್ಬಲ್ಯದ ಜೊತೆ  ಬದುಕುವಾಗ 
ನಿನ್ನ ಹಾಗೆ 
ಕಣ್ಣಿದ್ದು ... 
ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು.. 

ಅಥವಾ 

ನನ್ನ ಹಾಗೆ 
ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕತ್ತಲಲ್ಲಿ ಇರಬೇಕು..."... 

"ಗಾಂಧಾರಿ...
ನೀನು 
ಪತಿವೃತಾ ಶಿರೋಮಣಿಗಳಲ್ಲಿ ಒಬ್ಬಳು ... ಅಲ್ಲವೆ ?"... 

ನಾನು 
ಸ್ವಲ್ಪ ಹೊತ್ತು ಸುಮ್ಮನಿದ್ದೆ...

"ಕುಂತಿ...
ಸಮಾಜದಲ್ಲಿ 
ದಾಂಪತ್ಯದ ಕುರಿತು 
ಶಿಷ್ಠಾಚಾರ ... ನೀತಿ ನಿಯಮಗಳು... 
ವ್ರತಗಳೆಲ್ಲ ಹೆಂಗಸರಿಗೆ ಮಾತ್ರ ...

ಈ ಜಗತ್ತಿನಲ್ಲಿ
ಒಬ್ಬನೇ 
ಒಬ್ಬ ಏಕ ಪತ್ನಿ ವ್ರತಸ್ಥನಿದ್ದ...

ಅವನು ಶ್ರೀರಾಮಚಂದ್ರ...!

ಆತ
ತುಂಬು ಬಸುರಿ 
ಮಡದಿಯನ್ನು
ಅನಾಥವಾಗಿ ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಬಂದ...

ಪತ್ನಿಯಾಗಿ
ಪತಿಯ ದೌರ್ಬಲ್ಯಗಳ ಜೊತೆ 
ಮೌನವಾಗಿ ಬದುಕಿದವರೆಲ್ಲ ಪತಿವ್ರತಾ  ಶಿರೋಮಣಿಗಳು...!

ಇವೆಲ್ಲ ಗಂಡು ಸಮಾಜದ ಪ್ರಶಸ್ತಿಗಳು... ಅಲ್ಲವಾ ?"

ಕುಂತಿ
ಮಾತನಾಡಲಿಲ್ಲ....

ಅಷ್ಟರಲ್ಲಿ ಏನೋ ಸದ್ಧು  .... 
ವಿಧುರ ಮತ್ತು  ಧೃತರಾಷ್ಟ್ರ ಬಂದರು ಅಂತ ಕಾಣುತ್ತದೆ...

ಧೃತರಾಷ್ಟ್ರ
ಒಳಗೆ ಬರುತ್ತಲೆ ಕೇಳಿದ...

"ಹಗಲು 
ಮುಗಿಯಿತಾ ?...... 

ರಾತ್ರಿ ಶುರುವಾಯಿತಾ ?"

ನನ್ನ ನಿಟ್ಟುಸಿರು ಅವನಿಗೂ ಕೇಳಿಸಿರಬೇಕು...

ಧೃತರಾಷ್ಟ್ರ...
ಕುರುಡು
ಕತ್ತಲೆಯ ಬದುಕಿಗೆ ಹಗಲಾದರೇನು  ?
ರಾತ್ರಿಯಾದರೇನು...?

ಎಲ್ಲ ಒಂದೇ ಅಲ್ಲವೆ  ?...."... 

ಧೃತರಾಷ್ಟ್ರ ಮತ್ತೆ ಹೇಳಿದ..

"ನಾನು 
ಕೇಳಿದ್ದು 
ಬೆಳಕು.. ಕತ್ತಲೆಗಳ ಬಗೆಗಲ್ಲ...

ನನಗೆ
ಹಸಿವೆಯಾಗುತ್ತಿದೆ...

ಅಸಾಧ್ಯ ಹಸಿವೆ....ತಡೆಯಲಾಗುತ್ತಿಲ್ಲ...

ಹಸಿವೆಗೆ ಮಾತ್ರ 
ಕತ್ತಲೆ... 
ಬೆಳಕು ... ಎನ್ನುವದಿಲ್ಲ ನೋಡು...." ............ 

ನಾನು
ಅಲ್ಲಿಂದ ಎದ್ದು ತಡಕಾಡುತ್ತ ಒಳಗೆ ಹೊರಟೆ....


(ಇದು ಕಾಲ್ಪನಿಕ.. 
ತಪ್ಪಿದ್ದಲ್ಲಿ ಬೇಸರಬೇಡ.. ಕ್ಷಮೆ ಇರಲಿ... )  
  ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....  

36 comments:

usha chandru said...

If its day or night.... if you dont know to respect other soul, love it with what it is meant for, and forget to treat as human... what ever it be... it will be always darkness. It applies to all relations, although husband and wife stands on the top.

Unknown said...

ಗಾಂಧಾರಿಯ ಆಂತರ್ಯದ ಈ ವಿಭಿನ್ನ ದೃಷ್ಟಿಕೋನ ಆಲೋಚನೆಗೆ ಪ್ರಚೋದನೆಯನ್ನು ನೀಡುತ್ತದೆ. ಓದುತ್ತಾ ನನಗೆ ಗಿರೀಶ್ ಕಾರ್ನಾಡರ 'ಹಯವದನ' ನೆನಪಿಗೆ ಬಂತು. ಅದರ ವಸ್ತುವೂ ಪರಿಪೂರ್ಣತೆಯೆಡೆಗಿನ ತುಡಿತವಾದ್ದರಿಂದ ಇರಬೇಕು.

Ittigecement said...

ಉಷಾರವರೆ...

ಅರ್ಥ ಮಾಡಿಕೊಂಡು ಬಾಳಿದರೆ ಸ್ವರ್ಗ.. ಇಲ್ಲವಾದಲ್ಲಿ ನರಕ...

ತನ್ನ ಚಂದದ ಬಗೆಗೆ ..
ಭವಿಷ್ಯದ ಬದುಕಿನ ಬಗೆಗೆ ಸ್ವರ್ಗವನ್ನೇ ಹೆಣೆದಿದ್ದ
ಗಾಂಧಾರಿಗೆ..
ಸಿಕ್ಕಿದವ ಹುಟ್ಟು ಕುರುಡ...

ಬಣ್ಣಗಳ..
ರಂಗುಗಳ.. ಚಂದದ ಕಲ್ಪನೆಯೇ ಇಲ್ಲದವ.. !

ಎಂಥಹ ವಿಪರ್ಯಾಸ ಇದು !

ಪ್ರೀತಿಸಿ ಮದುವೆಯಾಗಿರಲಿ...
ಅಥವಾ ಹಿರಿಯರು ನೋಡಿ ಮಾಡಿದ ಮದುವೆಯಾಗಿರಲಿ..
ಕುರುಡ ಸಿಕ್ಕಿದರೆ ಗತಿಯೇನು ?

ಕುರುಡ ಅಂದರೆ ಇಲ್ಲಿ ಸಾಂಕೇತಿಕ...

ಬದುಕಿನ ಬಗೆಗಿನ ಕುರುಡೂ ಆಗಿರಬಹುದು...

ಇಲ್ಲಿ ಹೆಣ್ಣು ಕೂಡ ಕುರುಡಿ ಆಗಿರಬಹುದು... ಗಾಂಧಾರಿ, ಧೃಥರಾಷ್ಟ್ರರು ಸಾಂಕೇತಿಕವಷ್ಟೆ..

ಇಬ್ಬರೂ
ಕಣ್ಣಿಗೆ ಬಟ್ಟೆಕಟ್ಟಿಕೊಂಡರೆ
ಮಕ್ಕಳು ಧುರ್ಯೋಧನರು ಆದಾರು...

ಗಾಂಧಾರಿಗೆ ಕುಂತಿಯ ಬಾಳು ತನಗಿಂತ ಸುಖವಾಗಿತ್ತು ಎನ್ನುವ ಅನಿಸಿಕೆ...

ಕುಂತಿಗೆ ಗಾಂಧಾರಿಯ ಬಾಳು ಚೆನ್ನಾಗಿತ್ತು ಎನ್ನುವ ಅನಿಸಿಕೆ..

ವಾಸ್ತವದಲ್ಲಿ ?

ಈ ಕಥಾ ವಸ್ತು ಸಂಗ್ರಹಿಸುವಾಗ ಇನ್ನೂ ವಿಷಯಗಳು ಸಿಕ್ಕಿದವು..

ಅವೆಲ್ಲವನ್ನೂ ಇಲ್ಲಿ ಬರೆಯಲಾಗಲಿಲ್ಲ...

ಈಗಲೇ ಕಥೆ ಉದ್ದವಾಗಿ ಹೋಯ್ತು...

ತಾಳ್ಮೆಯಿಂದ ಓದಿ
ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು...




shubha hegde said...

Nice story u have written here..indeed a tragic story of both Gandhari and kunthi..Good comparison of their life with 'light and darkness'..Gandhari might been succeed as blind partner to her husband where as failed to cover her inner wants and desires..u did attempt to open her inner eyes very strongly with good imaginations by meaningful narrations..Life is a turn of light and darkness...have to take whatever comes first!

Ittigecement said...

ಅಪರ್ಣಾರವರೆ
ಬ್ಲಾಗಿಗೆ ಸ್ವಾಗತ....

ಮಹಾಭಾರತದ ಕಥೆಗಳಲ್ಲಿ ಅದೆಷ್ಟು ಜನ ಏನೇನು ಹುಡುಕಿದ್ದಾರೋ...
ಇನ್ನೂ ಏನೇನು ಹುಡುಕುವದಿದೆಯೋ....

ಹುಡುಕಿದಷ್ಟು ಸಿಗುವಂಥಹ ವಿಷಯಗಳು ಅಲ್ಲಿವೆ.. ~!

ಯೌವ್ವನದ ದಿನಗಳಲ್ಲಿ ಸಾವಿರಾರು ಕನಸುಗಳನ್ನು ಹೊತ್ತು...
ಅದರಲ್ಲೂ ಅರಮನೆಯಲ್ಲಿ
ಸಖಿಯರೊಡನೆ ಬೆಳೆದ ರಾಜಕುಮಾರಿಗೆ ಅದೆಷ್ಟು ಕನಸುಗಳಿರಬೇಡ... !

ಬಲಶಾಲಿ ಭೀಷ್ಮ ಗಾಂಧಾರ ರಾಜನಿಗೆ ಬೆದರಿಸಿದ..
ಗಾಂಧಾರಿ ಮದುವೆ ಕುರುಡನೊಂದಿಗೆ ಆಯಿತು...

ಪತಿವೃತಾ ಶಿರೋಮಣಿ ಅಂತ ಹೆಸರುವಾಸಿಯಾದಳು...

ನಿನ್ನೆ
ಈ ಕಥೆ ಬರೆದು ಸಹೋದರಿಯೊಬ್ಬಳಿಗೆ ಕಳುಹಿಸಿದ್ದೆ..

"ಪ್ರಕಾಶಣ್ಣಾ.. ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಏನು ಸಾಧಿಸಿದಳು ?

ಕಣ್ಣಿದ್ದರೆ ಕೊನೆ ಪಕ್ಷ ಮಕ್ಕಳ ಮೇಲಾದರೂ ನಿಗಾ ವಹಿಸಿ..
ಅವರನ್ನು ಕೆಟ್ಟ ದಾರಿಗೆ ಹೋಗದಂತೆ ತಡೆಯಬಹುತ್ತಿಅಲ್ವಾ ?"

ಹೌದಲ್ವಾ ?

ಈ ಕಥೆ ಬರೆಯಲು ಒಂದಷ್ಟು ಪುಸ್ತಕ ಓದಬೇಕಾಯಿತು...

ಆಗ ಇನ್ನೂ ಒಂದಷ್ಟು ವಿಷಯಗಳು ಸಿಕ್ಕವು..

ಅವುಗಳನ್ನೂ ಇಲ್ಲಿ ಸೇರಿಸಬೇಕೆಂದಿದ್ದೆ..

ಆದರೆ ಆಗಲಿಲ್ಲ...

ಧೃಥರಾಷ್ಟ್ರ.. ಮತ್ತು ವಿದುರರ ಬದುಕಿನ ಕೊನೆಯ ಕ್ಷಣಗಳ ಬಗೆಗೆ ಇನ್ನೊಂದು ಕಥೆಯಲ್ಲಿ ನೋಡೋಣ..

ಇಷ್ಟಪಟ್ಟು ಓದಿ
ಪ್ರತಿಕ್ರಿಯಿಸಿದ್ದಕ್ಕೆ ಪ್ರೀತಿಯ ನಮನಗಳು...

Unknown said...

ದ್ವೇಷ, ಅಸೂಯೆ, ಸ್ವಾರ್ಥಗಳೊಡನೆಯೇ... ಬದುಕಿದ ರಾಜಮಾತೇ ಗಾಂಧಾರಿ...!!
ಕುರುಡನನ್ನು ಕೈ ಹಿಡಿದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಳು..
ಹಾಗೆ ತನ್ನ ಪುತ್ರವ್ಯಾಮೊಹಕ್ಕೂ.. ಕುರುಡು ತಂದು
ಕೊಂಡಳು... !
ಮೌನದೊಳಗಿನ..ಮಾತಿಗೆ ಎಷ್ಟೊಂದು.. ಭಾವನೆಗಳ ಬಣ್ಣ ಕೊಟ್ಟಿದ್ದಿರಿ..!! ಗಾಂಧಾರಿ ರಾಜಮಾತೆ ಆದರೂ ಅಸಾಯಕ
ಹೆಣ್ಣು !! ಆಕೆಯ ವ್ಯಥೆಯನ್ನ ಚಂದದ ಕಥೆಯಾಗಿಸಿದ್ದಿರಿ..
Super.. :)

Badarinath Palavalli said...

ಒಂದು ಪಾತ್ರದ ಮುಖೇನ ಬದುಕಿನ ಸಾರಸಮಸ್ತವನ್ನೂ ತೆರೆದಿಟ್ಟ ನಿಮ್ಮ ಈ ಬರಹಕ್ಕೆ ಶರಣು.

ಪತಿಗಾಗಿ ಪತ್ನಿ ತಾನೂ ಕುರುಡಾದಳು ಎಂಬುದು ನಮ್ಮ ಸಾಮಾನ್ಯ ಕಣ್ಣಿಗೆ ಕಂಡ ಸರಳ ವಿಚಾರ. ಅದನ್ನೇ ಶಕುನಿಯು ಗಮನಿಸಿದ ರೀತಿ ಮತ್ತು ವಿಶ್ಲೇಷಿಸಿದ ಪರಿ 'ಸರಿಯಾಗಿಯೂ' ಇರಬಹುದು.

Ittigecement said...

ಶುಭಾರವರೆ

ಚಂದದ ಪ್ರತಿಕ್ರಿಯೆಗೆ ಪ್ರೀತಿಯ ನಮಗಳು...

ಹಿರಿಯರೊಬ್ಬರಿಗೆ ಈ ಕಥೆಯನ್ನು ನಿನ್ನೆ ಕಳುಹಿಸಿದ್ದೆ...

"ಕಥೆ ನಿಜಕ್ಕೂ ಚೆನ್ನಾಗಿದೆ..

ಒಂದು ವಿಷಯ ನೆನಪಿಟ್ಟುಕೊ..

ಗಂಡು ಮಕ್ಕಳು ನಿನ್ನ ಕಥೆಯನ್ನು ಓದಬಹುದು.. ಲೈಕಿಸಬಹುದು..
ಆದರೆ
ನಿನ್ನ ಕಥೆಗೆ ಪ್ರತಿಕ್ರಿಯೆ ಕೊಡುವ ಸಾಧ್ಯತೆ ಕಡಿಮೆ...".

ಅವರ ಮಾತು ನಿಜವೆನ್ನಿಸುತ್ತಿದೆ !

ಕಥೆಗಳು ಜಸ್ಟ್ ಕಥೆಗಳಪ್ಪ...
ಅವುಗಳನ್ನು ಕಥೆಗಳಾಗಿಯೇ ಓದಬೇಕು...

ಪ್ರಕೃತಿ... ಹೆಣ್ಣು .. ಅಬಲೆ..ಅಸಹಾಯಕತೆಗಳ ಬಗೆಗೂ ಕಥೆ ಬರೆದಿದ್ದೆ..

ಅಬಲೆಯಾಗಿಯೇ ಹುಟ್ಟಿದ್ದಾಳೆ.. ಅದು ಸಹಜ ಅಂತನೂ ಬರೆದಿದ್ದೆ..

ಅದಕ್ಕೆ ತುಂಬಾ ಹೆಣ್ಣುಮಕ್ಕಳು ಉತ್ತಮ ಪ್ರತಿಕ್ರಿಯೆನೂ ಕೊಟ್ಟಿದ್ದರು..

ಮುಂದೆ ಏನಾಗುತ್ತದೆ ಅಂತ ನೋಡೊಣ..

ಗಾಂಧಾರಿಯ ಸಹಜ ನಾಚಿಕೆಯ ಬಗೆಗೆ ಬರೆದ ಘಟನೆ ಇದೆಯಲ್ಲ..

ಜಿಂಕೆಮರಿ ದಿಟ್ಟಿಸಿ ನೋಡಿದಾಗ ನಾಚಿಕೆಯಾಗಿದ್ದು...
ಅದು ಸತ್ಯ..

ಪರಿಚಯದ
ಒಬ್ಬಳು ಹೆಣ್ಣು ಮಗಳ ಅನುಭವ ಅದು ..

ಈ ಹೆಣ್ಣುಮಕ್ಕಳು ದೇವರು ಸೃಷ್ಟಿಸಿದ ಆಶ್ಚರ್ಯಗಳಲ್ಲಿ ಒಂದು !
ಮುಗ್ಧ ಪ್ರಾಣಿಗಳು ನೋಡಿದಾಗ ನಾಚಿಕೆಯಾಗುತ್ತದಾ !!!!!
ಅಬ್ಬಾ..
ನನಗಂತೂ ಇನ್ನೂ ಸಹ ಜೀರ್ಣವಾಗಿಲ್ಲ....

ಗಾಂಧಾರಿ ಅಪ್ರತಿಮ ಚೆಲುವೆ...

ತನ್ನ ಪತಿ ಒಮ್ಮೆಯೂ ತನ್ನ ಚಂದವನ್ನು ನೋಡಲಿಲ್ಲ ಎನ್ನುವ ಕೊರಗು ಅವಳನ್ನು ಅದೆಷ್ಟು ಕಾಡಿರಬಹುದು ?

ತನ್ನ
ಪತಿ ತನ್ನ ಚಂದವನ್ನು...
ಅಲಂಕಾರವನ್ನು ನೋಡಬೇಕೆನ್ನುವದು ಹೆಣ್ಣಿನ ಸಹಜ ಆಸೆ...

ಗಾಂಧಾರಿಯ ಮನಸ್ಸಿನ ಆಳಕ್ಕಿಳಿಯುವದು ಬಹಳ ಕಷ್ಟ..

ಸಣ್ನ ಪ್ರಯತ್ನ ಇದು ಅಷ್ಟೆ...

ಕಥೆಯನ್ನು ಇಷ್ಟಪಟ್ಟು
ಪ್ರತಿಕ್ರಿಯೆ ಕೊಟ್ಟಿದ್ದಕ್ಕಾಗಿ
ಪ್ರೀತಿಯ ನಮನಗಳು...







Jayalaxmi said...

ಕತೆಯನ್ನ ಬೆಳಿಸಿ ಪ್ಲೀಸ್ ಪ್ರಕಾಶ್. ಅರ್ಧಕ್ಕೇ ನಿಲ್ಲಿಸಿದಂತೆ ತೋರ್ತಿದೆ. ಖಂಡಿತ ಕತೆ ದೊಡ್ಡದಾಗಿಲ್ಲ. ಫ್ಲೊ ಸಹ ಚೆನ್ನ್ನಾಗಿದೆ.

sunaath said...

ಇಬ್ಬರು ಸ್ತ್ರೀಯರ ಮುಖಾಂತರ ಹೆಣ್ಣಿನ ಅಂತರಂಗವನ್ನು ಶೋಧಿಸುವ, ಕೆಲವು ಸಾರ್ವಕಾಲಿಕ ಸತ್ಯಗಳನ್ನು ತೋರಿಸುವ ಈ ಕಥೆ ತುಂಬ ಚೆನ್ನಾಗಿದೆ. ಅಭಿನಂದನೆಗಳು.

Anihani said...

ಇರುವುದೆಲ್ಲವ ಬಿಟ್ಟು....ಇರದುದರೆಡೆಗೆ ಹಾತೊರೆವುದೇ ಜೀವನ .....ಇದಕ್ಕೆ ಯಾರೂ ಹೊರತಲ್ಲ!

ಶಿವಪ್ರಕಾಶ್ said...

ಹಲ್ಲಿದ್ದವರಿಗೆ ಕಡಲೆ ಇಲ್ಲ... ಕಡಲೆ ಇದ್ದವರಿಗೆ ಹಲ್ಲಿಲ್ಲ...
Nice Article Prakashanna... :)

Unknown said...

ಕಥೆ ಒಂದೇ ಬಾರಿಗೆ ಓದಿಸಿಕೊಂಡು ಹೋಯ್ತು...ಸೊಗಸಾದ ನಿರೂಪಣೆ..ವಿಭಿನ್ನ ದೃಷ್ಟಿಕೋನ...ಹೆಣ್ಣಿನ ಅಂತರಾಳ, ತಲ್ಲಣಗಳ ಸುಂದರ ಚಿತ್ರಣ...ರಾಣೀವಾಸದ ಬಂಧನಗಳ, ಅಸಹಾಯಕತೆಗಳ ಅನಾವರಣ...ಗಾಂಧಾರಿಯ ಬಗೆಗೆ, ಕುಂತಿಯ ಬಗೆಗೂ ಅನುಕಂಪ ಮೂಡಿತು..ಸೂಪರ್ ಪ್ರಕಾಶಣ್ಣ..

Srikanth Manjunath said...

ಪಕ್ಕದ ಮನೆಯವರ ಹುಲ್ಲಿನಂಗಣ ಎಂದಿಗೂ ಹಸಿರೆ ಹಸಿರು..
ನಾನಿನ್ನ ಮರೆಯಲಾರೆ ಚಿತ್ರದಲ್ಲಿ ಅಣ್ಣಾವ್ರು ಲಕ್ಷ್ಮಿಗೆ ಚಿತ್ರದ ಅಂತ್ಯದಲ್ಲಿ ಒಂದು ಮಾತನ್ನು ಹೇಳುತ್ತಾರೆ.. ಇಬ್ಬರೂ ಕುರುಡರು ಒಬ್ಬರಿಗೆ ಒಬ್ಬರು ಚೆನ್ನಾಗಿರಲಿ ಎಂದು ಆಶಿಸಿದಂತೆ ಆಯಿತು ಎನ್ನುವ ಅರ್ಥ ಬರುವ ಮಾತನ್ನು ಹೇಳುತ್ತಾರೆ.

ಹಾಗೆಯೇ ಮಹಾಭಾರತದ ಸಂಕೀರ್ಣ ಪಾತ್ರಗಳಲ್ಲಿ ಗಾಂಧಾರಿ ಮತ್ತು ಕುಂತಿ ಪಾತ್ರಗಳ ಪಾತ್ರ ಹಿರಿದು. ಇಬ್ಬರೂ ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ತಮ್ಮ ವಂಶವನ್ನು ಬೆಳೆಸುತ್ತಾರೆ.

ಕಥೆ ಕಾಲ್ಪನಿಕವಾಗಿರಬಹುದು ಆದರೆ ಬರೆದಿರುವ ವಸ್ತು, ಅದನ್ನು ಪಸರಿಸಿರುವ ಪರಿ ಸೊಗಸಾಗಿದೆ. ಎಲ್ಲೆಯನ್ನು ಮೀರದೆ, ಹೆಣ್ಣಿನ ಮನದ ತೊಳಲಾಟವನ್ನು ಹೇಳಿರುವ ರೀತಿ ಸುಂದರವಾಗಿದೆ.

ಗಾಂಧಾರಿ ತನ್ನ ಆಸೆಗಳನ್ನು ಕೊಂಡುಕೊಂಡು ಕುರುಡನ ಪತ್ನಿಯಾದರೆ, ಕುಂತಿ ಪಾಂಡುವಿನ ಅಜಾಗರುಕತೆಗೆ ಬಲಿಯಾಗಿ ಕೊರಗುತ್ತಾ ಜೀವನ ಸಾಗಿಸುತ್ತಾಳೆ.. ಆದರೆ ಇಬ್ಬರ ಬದುಕು ಕತ್ತಲೆಯಿಂದ ಶುರುವಾಗಿ ಕತ್ತಲೆಯಲ್ಲಿ ಕೊನೆಯಾಗುತ್ತದೆ.. ಅದೇ ಇವರಿಬ್ಬರ ಪಾತ್ರದ ವಿಶೇಷ.. ಸಹಜವಾಗಿಯೇ ಸಾಗುವ ಬರಹ ಸೊಗಸಾಗಿದೆ.. ಕಣ್ಣ ಮುಂದೆ ನಿಂತು ಮಾತಾಡುತ್ತಿದ್ದಾರೆ ಎನ್ನಿಸುತ್ತದೆ. ಕಡೆಯಲ್ಲಿ ದೃತರಾಷ್ಟ್ರ ಹೇಳುವ ಮಾತು ಇಡಿ ಕಥೆಗೆ ಅದ್ಭುತ ಚೌಕಟ್ಟು ಒದಗಿಸಿದೆ

ಸೂಪರ್ ಪ್ರಕಾಶಣ್ಣ

Naveen & Medini said...

ಗಾಂದಾರಿ ಮತ್ತು ಕುಂತಿಯ ಮನಸ್ಸಿನ ಭಾವನೆಯನ್ನತುಂಬಾ ಸೊಗಸಾಗಿ ಮತ್ತು ತುಂಬಾ ವಿಭಿನ್ನವಾಗಿ ಪದಗಳಲ್ಲಿ ಚಿತ್ರಿಸಿದ್ದೀರ.

Harini Narayan said...

ಆರಂಭವಾದಾಗ ಕೂಸಿನ ಅಳಲು ಎಂದುಕೊಂಡೆ, ಬಂತೊಂದು ತಿರುವು . ಅಮ್ಮನ ಬಳಿ ವಿಷಯ ತಿಳಿಯುತ್ತಾ ಹೋದಾಗ ಮತ್ತೊಂದು ತಿರುವು. ಸುಖವಾಗಿ ನಿಂತದ್ದು ಮಹಾಭಾರತದಲ್ಲಿ. ಚೆಂದದ ಬರೆಹ. ನೀವೆ ಬೇರೆ, ನಿಂ ಸ್ಟೈಲೇ ಬೇರೆ..

Reshma Ayesha Sarika said...

ಹೆಣ್ಣಿನ ಅಸೆ ಆಕಾಂಕ್ಷೆಗಳ ದಮನವನ್ನು ತ್ಯಾಗವನ್ನಾಗಿಸಿ ವೈಭವೀಕರಿಸಿ ಅದಕ್ಕೆ ಕಾರಣವಾಗುವ ಗಂಡುಗಳ ದೌರ್ಬಲ್ಯವನ್ನು ಮುಚ್ಚಿಹಾಕಿಬಿಡುವ ಹುನ್ನಾರ ಇಂದು ನಿನ್ನೆಯದಲ್ಲ,ಇಂದಿಗೆ ಮುಗಿಯುವುದೂ ಅಲ್ಲ.ಮಹಾಕಾವ್ಯಗಳಲ್ಲಿ ನಿರ್ಲಕ್ಷಿತ ಸ್ತ್ರೀ ಪಾತ್ರಗಳು ಎಂಬ ಶೀರ್ಷಿಕೆಯಲ್ಲಿ ೭೦ ರ ದಶಕದಲ್ಲಿ ನಾನೊಂದು ಸುದೀರ್ಘ ಪ್ರಬಂಧ ರಚಿಸಿದ್ದುದು ನೆನಪಾಯ್ತು.ಹೆಮ್ಮಕ್ಕಳ ಒಳತೋಟಿಯನ್ನು , ಸೂಕ್ಷ್ಮತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಹೆಂಗರುಳಿನ ಲೇಖಕರು ನೀವು ಎಂಬುದನ್ನು ನಿಮ್ಮೀ ಸುಂದರ ಕಥೆ ನಿರೂಪಿಸಿದೆ,ಇಷ್ಟವಾಯ್ತು-

ಸೀತಾರಾಮ. ಕೆ. / SITARAM.K said...

Adbhuta kathe mattu kathegaarike

ಮನಸು said...

ಗಾಂಧಾರಿ ಮತ್ತು ಕುಂತಿ ಮನಸ್ಥಿತಿ ಹೀಗೆ ಇದ್ದಿರಬಹುದೇನೋ ಎನ್ನುವಷ್ಟು ನೈಜತೆಯಲ್ಲಿ ಕಥೆ ಬರೆದಿದ್ದೀರಿ. ಚೆಂದದ ಕಥೆ ಅಣ್ಣಾ

Unknown said...

Gandhari is really great..but she tried to take revenge by covering her eyes...BUT....she should have thought over the other face of life...how can she fulfill her duty as a wife by covering her eyes? Not possible know...we say "Karthavya Pragne" is very important in whatever we do, whatever we get. If she had followed this "Karthavya Pragne", and guided her husband and children then she could have justified both as wife and mother. She might be called "Pathivratha Shiromani"...whats the use ...when no son remains on earth to say "oh.... what a good son/husband/person....his mother is Gandhari....", where as for Kunthi...though she is individually not happy, she struggled for goodness of her children....gave them all good thoughts....good human beings.....

Unknown said...

ಓದಲು ಪ್ರಾರಂಭಿಸಿದಾಗ ಸಾಮಾನ್ಯ ಒಂದು ಹೆಣ್ಣಿನ ಸಹಜ ನಾಚಿಕೆಯನ್ನು ಬಿಂಬಿಸಲು ಹೊರಟಿದ್ದಾರೆ ಅನ್ನಿಸಿತು. ಆದರೆ 'ಹಸ್ತಿನಾಪುರದ ಒಬ್ಬ ವೃದ್ಧ ಯೋಧ ಭೀಷ್ಮ ' ಸಾಲನ್ನು ನೋಡಿದಾಗ ಆಶ್ಚರ್ಯ ಸಹಿತ ರೋಮಾಂಚನವಾಯಿತು. ಕಥೆ ಮಹಾಭಾರತದತ್ತ ಸಾಗಿತು ...ಇಂತಹ ಬರಹಗಳನ್ನು ಓದುವಾಗ ಮನಸಿಗೆ ತುಂಬಾ ಸಂತೋಷವೆನಿಸುತ್ತದೆ. ಓದುವ ದಾಹ ಹೆಚ್ಚುತ್ತದೆ. ವಿಭಿನ್ನ ಶೈಲಿಯಲ್ಲಿ ಹೊಸ ಆಲೋಚನೆಯೊಂದಿಗೆ ಕಾವ್ಯಾತ್ಮಕವಾಗಿ ಬರೆಯುವವರೆಷ್ಟು ಮಂದಿ?? ತುಂಬಾ ಸುಂದರವಾಗಿ ಕಥೆ ಮೂಡಿಬಂದಿದೆ....

viju said...

kathe rashi cholo ajo prakashanna....kushi atu odi....

Unknown said...

ಪ್ರಕಾಶಣ್ಣ..ಸುಪರ್..ಭಾವನೆಗಳನ್ನು ತು೦ಬಾ ಚನ್ನಾಗಿ ಬರೆದಿದ್ದೀರಿ. :)

venki said...

wow, prakash sir !! simply amazing !!!!!! you have magic in your hands, brilliant !!!

Unknown said...

ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂಧಾರಿಗೆ ಸಿಕ್ಕಿದ್ದುನಿರಾಸೆ,ಹತಾಶೆ, ಹಾಗೂಅಸಹಾಯಕ ಪರಿಸ್ಥಿತಿ ಯ ಹೊಂದಾಣಿಕೆ.ಇಲ್ಲಿ ಕುಂತಿಗೂ ಅಷ್ಟೇ ಸಿಕ್ಕೂ ಸಿಗದ,ಇದ್ದೂ ಇಲ್ಲದ ಭಾಗ್ಯ!ಅವಳಿಗೆ ಸಿಕ್ಕಿದ್ದು ನನಗಿಲ್ಲವಲ್ಲ ಎಂಬ ಅಸೂಯೆಯ ಭಾವವೂ ಅಸಹಾಯಕ ಅಂತರಂಗದ ಭಾವನೆಗಳು ಈ ಕಥೆಯಲ್ಲಿ ಅನಾವರಣಗೊಂಡಿದೆ,,ಬಣ್ಣದಕನಸುಗಳಿಗೆ ಬಟ್ಟೆಕಟ್ಟಿಕೊಂಡ ಅದೆಷ್ಟೋ ನಿರ್ಲಕ್ಷಿತ ಮನದ ಮಾತುಗಳನ್ನಿಲ್ಲಿ ತೆರೆದಿಟ್ಟಿದ್ದೀರಿ,,ಕಥೆ ಚೆನ್ನಾಗಿದೆ

Unknown said...

ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂಧಾರಿಗೆ ಸಿಕ್ಕಿದ್ದುನಿರಾಸೆ,ಹತಾಶೆ, ಹಾಗೂಅಸಹಾಯಕ ಪರಿಸ್ಥಿತಿ ಯ ಹೊಂದಾಣಿಕೆ.ಇಲ್ಲಿ ಕುಂತಿಗೂ ಅಷ್ಟೇ ಸಿಕ್ಕೂ ಸಿಗದ,ಇದ್ದೂ ಇಲ್ಲದ ಭಾಗ್ಯ!ಅವಳಿಗೆ ಸಿಕ್ಕಿದ್ದು ನನಗಿಲ್ಲವಲ್ಲ ಎಂಬ ಅಸೂಯೆಯ ಭಾವವೂ ಅಸಹಾಯಕ ಅಂತರಂಗದ ಭಾವನೆಗಳು ಈ ಕಥೆಯಲ್ಲಿ ಅನಾವರಣಗೊಂಡಿದೆ,,ಬಣ್ಣದಕನಸುಗಳಿಗೆ ಬಟ್ಟೆಕಟ್ಟಿಕೊಂಡ ಅದೆಷ್ಟೋ ನಿರ್ಲಕ್ಷಿತ ಮನದ ಮಾತುಗಳನ್ನಿಲ್ಲಿ ತೆರೆದಿಟ್ಟಿದ್ದೀರಿ,,ಕಥೆ ಚೆನ್ನಾಗಿದೆ

Unknown said...

ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂಧಾರಿಗೆ ಸಿಕ್ಕಿದ್ದುನಿರಾಸೆ,ಹತಾಶೆ, ಹಾಗೂಅಸಹಾಯಕ ಪರಿಸ್ಥಿತಿ ಯ ಹೊಂದಾಣಿಕೆ.ಇಲ್ಲಿ ಕುಂತಿಗೂ ಅಷ್ಟೇ ಸಿಕ್ಕೂ ಸಿಗದ,ಇದ್ದೂ ಇಲ್ಲದ ಭಾಗ್ಯ!ಅವಳಿಗೆ ಸಿಕ್ಕಿದ್ದು ನನಗಿಲ್ಲವಲ್ಲ ಎಂಬ ಅಸೂಯೆಯ ಭಾವವೂ ಅಸಹಾಯಕ ಅಂತರಂಗದ ಭಾವನೆಗಳು ಈ ಕಥೆಯಲ್ಲಿ ಅನಾವರಣಗೊಂಡಿದೆ,,ಬಣ್ಣದಕನಸುಗಳಿಗೆ ಬಟ್ಟೆಕಟ್ಟಿಕೊಂಡ ಅದೆಷ್ಟೋ ನಿರ್ಲಕ್ಷಿತ ಮನದ ಮಾತುಗಳನ್ನಿಲ್ಲಿ ತೆರೆದಿಟ್ಟಿದ್ದೀರಿ,,ಕಥೆ ಚೆನ್ನಾಗಿದೆ

Unknown said...

Kathe thumba chennagi barediddiri uncle.. U r amazing

Unknown said...

ಹೆಣ್ಣಿನ ಅಂತರಂಗವನ್ನು ಅದೆಷ್ಟು ಸೊಗಸಾಗಿ ವಣಿ೯ಸಿದ್ದೀರಾ. ಹಾಗೆ ಹೆಣ್ಣಿನ ತಾಳ್ಮೆ ಇಲ್ಲಿ ಎದ್ದು ಕಾಣುತ್ತದೆ. ಸೊಗಸಾಗಿದೆ ಬರಹ.

Unknown said...

ಹೆಣ್ಣಿನ ಅಂತರಂಗವನ್ನು ಅದೆಷ್ಟು ಸೊಗಸಾಗಿ ವಣಿ೯ಸಿದ್ದೀರಾ. ಹಾಗೆ ಹೆಣ್ಣಿನ ತಾಳ್ಮೆ ಇಲ್ಲಿ ಎದ್ದು ಕಾಣುತ್ತದೆ. ಸೊಗಸಾಗಿದೆ ಬರಹ.

Ravi said...

ಅದ್ಭುತ ಬರವಣಿಗೆ, ಸುಂದರ ಕಲ್ಪನೆ

Ravi said...

ಅದ್ಭುತ ಬರವಣಿಗೆ, ಸುಂದರ ಕಲ್ಪನೆ

Unknown said...

Nimma kalpane tumba chennagide.nimmalli obba kathegar iddane.continue it.

Unknown said...

Nimma kalpane tumba chennagide.nimmalli obba kathegar iddane.continue it.

Pallavi Kabbinahithlu said...

Nimma parichayavilladiddaru, nimma baraha nimma bagge vishesha gouravavannu tandittide... Ide shailige kathana kavana ennuvudirabekalla??

kantha said...

THUMBA CHENNAGIDE:)