Saturday, October 25, 2014

ಆ ಚರ ...

ನಮ್ಮ
ಇಷ್ಟ..
ಕಷ್ಟಗಳು ಯಾವಾಗಲೂ ಒಂಟಿ...

ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ ನೋಡಿ.... 


ಹಸಿರು ಚಿಗುರುತ್ತದೆ...

ಮೊಗ್ಗು ಹೂವಾಗಿ ಅರಳುತ್ತದೆ...

ಈ ಹೂವಿಗೆ ಅಷ್ಟು ಸಾಕಾ ?...


ದುಂಬಿ

ತನ್ನೆಡೆಗೆ ಬರಬೇಕು...

ತನ್ನ ಚಂದ ನೋಡಿ ಹಾಡಬೇಕು...


ಮಕರಂದ ಹೀರಬೇಕು...


ಮಕರಂದ ಹೀರಿದ ಮೇಲೆ 

ತನ್ನ ಅಂದ .... 
ಹಾಳಾಗುತ್ತದೆ ಅಂತ ಗೊತ್ತಿದ್ದರೂ..
ಕೊಡುವದರಲ್ಲೇ ತೃಪ್ತಿ ಕಾಣುತ್ತದೆ ಆ ಹೂವು..

ತೃಪ್ತಿ .... 

ಅನ್ನೋದಕ್ಕೆ ವಿಶ್ರಾಂತಿ  ಅನ್ನೋದೆ ಇಲ್ಲ... 

ತನ್ನ ಚಂದವನ್ನು ... 

ಯಾರಾದರೂ ನೋಡಲಿ..

ಹೂ ಮಾಲೆ ಕಟ್ಟಿ 

ಯಾವ ಮೂರ್ತಿಗಾದರೂ ಅಲಂಕರಿಸಲಿ..

ಚಂದದ ಹೆಣ್ಣಿನ ಮುಡಿಸೇರಲಿ..


ಅರಳಿದ 

ಹೂವಿನ ಚಂದ ಕೆಲವೇ ಕ್ಷಣ 
ಅಂತಿದ್ದರೂ
ಚಂದವನ್ನು ಹಾಳುಮಾಡಿಕೊಳ್ಳುವದರಲ್ಲೇ ಸಾರ್ಥಕತೆಯನ್ನು ಕಾಣುತ್ತದೆ...

ಏನು ಮಾಡಲಿ ?


ಹೆಣ್ಣಿಗೆ 

ಈ ಗಂಡಸರು 
ಹೂವು 
ಪ್ರಕೃತಿ ಎನ್ನುತ್ತಾರೆ...

ಪ್ರಕೃತಿಯ 

ಆಗುಹೋಗುಗಳ ಬಗೆಗೆ ಪುರುಷನಿಗೆ ಲಕ್ಷ್ಯವೇ ಇರುವದಿಲ್ಲ...

ರಜಸ್ವಲೆಯಾಗಿ 

ಇಂದು ಮಿಂದಿದ್ದೇನೆ...
ನನ್ನವನಿಗೆ ನನ್ನ ಬಗೆಗೆ ಲಕ್ಷವೇ ಇಲ್ಲ...

ನನ್ನವ ...... 

ನಿಮಗೆ ಗೊತ್ತಿರಬೇಕು...

ದೇವಗುರು "ಬೃಹಸ್ಪತಿ..." !


ನಾನವನ ಮಡದಿ "ತಾರೆ..."


ನನ್ನ ಬದುಕೇನು ಚಂದವೆ ?


ನಿಮಗೇನು ಗೊತ್ತು

ಸನ್ಯಾಸಿಯ 
ಆಶ್ರಮದ ಬೇಲಿಯೊಳಗಿನ ಬದುಕು.... ?

ನನ್ನವ 

ಬದುಕಿನ ಪಾರಮಾರ್ಥಿಕತೆಯನ್ನು ಹುಡುಕುವವ...

ನನ್ನವ 

ನನಗೂ ಮಾತನಾಡುವ ಸ್ವಾತಂತ್ರ್ಯ ಕೊಟ್ಟಿದ್ದಾನೆ...

ನಮ್ಮ ಒಳಗಿನ ಆಸೆಯ ಅಭಿವ್ಯಕ್ತಿ ಬಲು ಕಷ್ಟ...

ನನ್ನವನಿಗೆ
ನನ್ನಾಸೆಯನ್ನು ಹೇಳಲೇ ಬೇಕಲ್ಲ...

ನನ್ನ 

ಮೌನ ಮಾತಾಡುತ್ತದೆ .. 
ಆ ಮೌನವನ್ನು ಕೇಳುವ ಮನಸ್ಥಿತಿ ಪುರುಷನಿಗಿರಬೇಕಲ್ಲ.... 

ಅವನ ಬಳಿ ಸುತ್ತಾಡಿದೆ...


"ಏನು " ಎನ್ನುವಂತೆ ನೋಡಿದ...


ನನಗೆ 

ನಗು ಬಂದರೂ ಪ್ರಶ್ನೆ ಕೇಳಿದೆ...

"ನಮ್ಮ 

ಅಂಗಳಕ್ಕೆ..
ಈ ಆಶ್ರಮಕ್ಕೆ ..... 
ಯಾಕೆ ಬೇಲಿ ಹಾಕಿದ್ದೀರಿ..? ..... 

ಪಕೃತಿ ಸಹಜ ಅಲ್ಲವಾ ?


ಪ್ರಕೃತಿಯ ಮೇಲೇಕೆ 

ಬೇಲಿ ಹಾಕಿ..
ಪ್ರಭುತ್ವ ಸ್ಥಾಪಿಸುವ  ಆಸೆ.. ? ... 

ಯಾವ ಪುರುಷನಿಗೇ ಆಗಲಿ 

ಪ್ರಕೃತಿಯ ಮೇಲೆ ಪ್ರಭುತ್ವ ಸಾಧ್ಯವೆ ?.."

ನನ್ನ ಗಂಡ 

ಗಡ್ಡವನ್ನು ತೀಡುತ್ತಾ ...... 
ನನ್ನನ್ನೊಮ್ಮೆ ವಿಚಿತ್ರವಾಗಿ ನೋಡಿದ...

"ಬೇಲಿ ಹಾಕಿದ್ದು .... 

"ಪ್ರಭುತ್ವ" ಸಾಧಿಸಲಿಕ್ಕೆ ಅಂತ ಯಾಕೆ ತಿಳಿದು ಕೊಳ್ತೀಯಾ ?

ಇದು    "ನಮ್ಮದು"

ನನ್ನದು ಮಾತ್ರ ...
ಅಂತಿದ್ರೆ ಬದುಕು ಕಟ್ಟಿಕೊಳ್ಳುವದು ಸುಲಭ.. 

ಅದು 

ಪ್ರೀತಿಗೆ ... 
ದಾಂಪತ್ಯಕ್ಕೆ ಸಹಾಯಕ ಮತ್ತು ಸಹಜ... "

"ಪ್ರೀತಿ ಅಂದರೆ ಬೇಲಿಯೊಳಗಿನ ಸ್ವಾರ್ಥವಾ ? "


"ಹೌದು ... 


ಈ 

ಪ್ರೀತಿ  ತನ್ನ ಬೇಲಿಯೊಳಗೆ ಇರಬೇಕೆಂದು ಮನಸ್ಸು ಬಯಸುತ್ತದೆ... 

ಬೇಲಿ ಒಳಗಿನ "ಪ್ರಕೃತಿ" ನನ್ನದು ಅಂತಿದ್ದಾಗ  

ಪ್ರೀತಿ ಮಾಡಬಹುದು..

ನಮ್ಮಲ್ಲಿ  "ಬೇಲಿ" ಇಲ್ಲ ಅಂದುಕೊ...


ಇಲ್ಲಿ ಯಾರು ಬೇಕಾದರೂ ಬರಬಹುದು... 

ಹೂ ಕೀಳಬಹುದು... 

ಇದು ತಮ್ಮದಲ್ಲ 

ಅಂತಿದ್ದಾಗ "ಕಾಳಜಿಯೂ" ಇರುವದಿಲ್ಲ... 

ಬೇಲಿ ಇಲ್ಲದ "ಅಂಗಳ" ನಿನಗೆ ಬೇಕಿತ್ತಾ ? "


ಗಂಡಸರೇ ಹೀಗೆ...

ಪ್ರಶ್ನೆಗೆ ಉತ್ತರವಿಲ್ಲವಾದಾಗ "ಪ್ರಶ್ನೆಗೆ" ಪ್ರಶ್ನೆಯನ್ನೇ ಕೇಳುತ್ತಾರೆ..

ಅವನ ಪ್ರಶ್ನೆಗೆ ನಾನೂ ಸಹ ಪ್ರಶ್ನೆಯನ್ನೇ ಕೇಳಿದೆ...


"ಪ್ರಕೃತಿಯ ಸಹಜ ಗುಣವೇನು ? "


"ಏನು ?"


"ಸೃಷ್ಟಿ...!


ಸೃಷ್ಟಿಸುವದು 

ತಾಯಿಯಾಗುವದು ಅವಳ ಬದುಕಿನ ಸಾರ್ಥಕತೆ...

ಬೇಲಿ ಹಾಕಿದವರಿಗೆ 

ಗಿಡಕ್ಕೆ ಗೊಬ್ಬರ ಕೊಡುವದು  ತಿಳಿದಿರಬೇಕು... "

ನನ್ನವ ದುರುಗುಟ್ಟಿದ...


"ಓಹ್ಹೋ ... !

ಇದಕ್ಕೆ ಇಷ್ಟೆಲ್ಲ ಪೀಠಿಕೆಯೇ ?..

ನನಗೆ ಕಾರ್ಯ ನಿಮಿತ್ತ ದೇವಲೋಕ ಹೋಗಬೇಕಾಗಿದೆ...


ಹದಿನೈದು ದಿನ ಬಿಟ್ಟು ಬರುವೆ

ಅಲ್ಲಿಂದ ಬಂದವ ನಿನ್ನಿಷ್ಟವನ್ನು ಪೂರೈಸುವೆ..."

ಆಸೆಯನ್ನು  ಹೇಳಿದ್ದು  ಅಪರಾಧವಾಯಿತೇನೋ ಎನ್ನುವಂತಿತ್ತು..

ನನ್ನವನ ನಡೆ ನುಡಿ...

ಇಷ್ಟಾದರೂ ಅರ್ಥವಾಯಿತಲ್ಲ..

ನನ್ನ ಪುಣ್ಯ..

ಆಸೆ 

"ಹೂವಾಗಿ"  ಅರಳಿದ ಮೇಲೆ  ಎಲ್ಲವೂ ಚಂದವೆ ...

ಆದರೆ ... 

ಇಂದು 
ಈ ಆಸೆಯೇಕೊ ಬೆಂಕಿಯಾಗಿ ಸುಡುತ್ತಿದೆ...
ನನ್ನನ್ನು ದಹಿಸುತ್ತಿದೆ...

ಬಾಯಾರಿದವರಿಗೆ ಗೊತ್ತು 

ಹನಿ 
ಹನಿ ನೀರಿನ ಹಂಬಲ.... 

ಹನಿ

ಹನಿ ಬಿದ್ದು
ತಂಪಾಗಬೇಕಲ್ಲ...

ಯಾರೋ ಕದ ತಟ್ಟುತ್ತಿದ್ದಾರೆ...


ಕದ ತೆರೆದೆ...


ದಿಘ್ಮೂಢಳಾಗಿ ನಿಂತುಬಿಟ್ಟೆ... !


ಬಂದವ ಚಂದದ ಚಂದಿರ... !!


ನಗು ನಗುತ್ತಾ ನಿಂತಿದ್ದಾನೆ !


ಒಳಗಿನ 

ಒತ್ತಾಸೆಗೆ ದೃವಿಸಿಹೋದೆ... !

ಉಟ್ಟ ಸೀರೆ ಜಾರುತ್ತಿದೆಯೇ... ?

ಬಟ್ಟೆ ಭಾರವಾಗುತ್ತಿದೆಯೆ ?

ಚಂದ್ರಮನನ್ನು ಒಳಗೆ ಕರೆದೆ...

ಕುಳ್ಳಿರಿಸಿದೆ... 
ಆದರಿಸಿದೆ...

ಪ್ರೀತಿ ತೋರಿದೆ...


ನಕ್ಕೆ...


ಗಡಿಬಿಡಿಯಲ್ಲಿ 

ಸರಿದ 
ಸೆರಗನ್ನು ಸರಿಪಡಿಸಿಕೊಂಡೆ...

ಕಣ್ ತೆರೆದು ಮುಚ್ಚುತ್ತ ಮಾತನಾಡಿದೆ....


ಚಂದಿರ ಬೆಪ್ಪನಂತೆ ನೋಡುತ್ತಿದ್ದ...  !


ಛೇ...

ಈ ಗಂಡಸು ಜಾತಿಯೇ ಇಷ್ಟು !

ಹೆಣ್ಣಿನ ಮಾತು... 

ಮೌನ 
ನೋಟಗಳ ಭಾಷೆಗಳನ್ನು  ಅರ್ಥ ಮಾಡಿಕೊಳ್ಳುವುದೇ ಇಲ್ಲ.. 

ನಾಚಿಕೆ ಬಿಟ್ಟು..

ನನ್ನನ್ನು ದಹಿಸುವ ಆಸೆಯನ್ನು ಹೇಳಿದೆ...

ಚಂದಿರ ಹೆದರಿದ...


"ನೀನು ನನ್ನ ಗುರು ಪತ್ನಿ...


ತಾಯಿಯನ್ನು ಬಯಸುವದೆ ?


ತಪ್ಪು ತಪ್ಪು...


ಇದು ಅನಾಚಾರ.. ಅತ್ಯಾಚಾರ...! "


ಉತ್ತರ ಕೊಡಲು ಕಂಪಿಸಿದ .. 

ಬಡಬಡಸಿದ ... 

ಅವನನ್ನೇ ದಿಟ್ಟಿಸಿದೆ ... 


 ಬಲು ಮುದ್ದು ಈ ಚಂದಿರ  !


"ಚಂದಿರಾ...

ಅನಾಚಾರ ಎನ್ನುತ್ತೀಯಲ್ಲ... 

"ಆಚಾರ" ಎನ್ನುವ ಶಬ್ಧ "ಚರ"ದಿಂದ ಬಂದಿದ್ದು..

ಚರ ಎಂದರೆ ನಡೆ... 

ನಮ್ಮ ನಡೆ ... 


ನಮಗೆ ಬೇಕಾದದ್ದು ಆಚಾರ..

ಬೇಡವಾದದ್ದು ಅನಾಚಾರ.. 
ಅತ್ಯಾಚಾರ ...

ಇಷ್ಟಕ್ಕೂ

ಅನಾಚಾರ..
ಅತ್ಯಾಚಾರ ನಿರ್ಣಯಿಸುವವರು ಯಾರು ?..."

"ಯಾರು ?"


" ನಾನು...

ಪ್ರಕೃತಿ ತಾನೆ ?

ನೀನು ಮಾಡುವ  ಆ" ಚರ"  ನನಗೆ ಅನಾಚಾರ ಅಲ್ಲ..


ಅದು ನನ್ನ ಪಾಲಿಗೆ ಆಚಾರ..


ಬಾರೋ.. ಬಾ.. 

ಆ ಚರವನ್ನು ಆಚರಿಸುವಾ.. ಬಾ.. "

ಚಂದಿರ ಚಲಿಸಲಿಲ್ಲ... 


"ನೀನು 

ಈ ತೋಟದ ಬೇಲಿಯೊಳಗಿನ ಹೂವು .. 

ಈ ಕ್ಷೇತ್ರ ನನ್ನದಲ್ಲ...


ನನ್ನದಲ್ಲದ್ದನ್ನು  ಬಯಸುವದು ತಪ್ಪು..


ಇದು ನಿಜ ಅರ್ಥದಲ್ಲೂ ಅತ್ಯಾಚಾರವೇ  ಸರಿ..."


ನನಗೆ ನಗು ಬಂತು...


ಪುಕ್ಕಲು ಗಂಡಸಿನ ಬಾಯಲ್ಲಿ  

ನೀತಿ
ನಿಯತ್ತಿನ ಮಾತು..!

"ಚಂದಿರಾ...


ಬಿಸಿಯಾದ ಭೂಮಿಗೆ

ಹನಿ ಬಿದ್ದು ತಂಪಾಗುತ್ತದೆ...

ಅಲ್ಲೇ ಇದ್ದ ಬೀಜ 

ಮೊಳಕೆಯೊಡೆದು ಹಸಿರಾಗುತ್ತದೆ..

ಈ 

ಜಗತ್ತಿನ ಈ ಕಾಡನ್ನೆಲ್ಲ ನೀನು ಬೆಳೆಸಿದ್ದಾ ?

" ಸೃಷ್ಟಿ" ಪ್ರಕೃತಿಯ ಸಹಜ ಗುಣ...


ಇದರಲ್ಲಿ ನಿನ್ನ ಪುರುಷಾರ್ಥವೇನೂ ಇಲ್ಲ...


ಕ್ಷೇತ್ರವೇ ಬೀಜ ಬಿತ್ತಲು ಕರೆಯುವಾಗ

ನಿರಾಕರಿಸುವದು  ... 
ಇಂದಿನ ಕಾಲ ಧರ್ಮದಲ್ಲಿ ತಪ್ಪಾಗುತ್ತದೆ...

ಬಾ.. ಚಂದಿರಾ.."


ಚಂದಿರ ಬರಲಿಲ್ಲ...

ಮೊಂಡು ಹಟ ಮಾಡುತ್ತ ದೂರವೇ ಇದ್ದ...

"ಈ ಅತ್ಯಾಚಾರಕ್ಕೆ..

ಅನಾಚಾರಕ್ಕೆ 
ಮನಸ್ಸು ಒಪ್ಪುತ್ತಿಲ್ಲ..."

ನನ್ನ ದಹಿಸುವ ಆಸೆ ಹೆಚ್ಚಾಯಿತು...


ಸೃಷ್ಟಿ ಕರ್ತ ಬ್ರಹ್ಮ ನನ್ನ ಅಜ್ಜ..

ಅಜ್ಜ ಸಿಕ್ಕಾಗ ಇದನ್ನೊಮ್ಮೆ ಕೇಳಿಬಿಡಬೇಕು...

ಪ್ರಕೃತಿಗೂ

ಪುರುಷನ ಮೇಲೆ ... 
ಅತ್ಯಾಚಾರ ಎಸಗುವ ಅವಕಾಶ ಇರಬೇಕು.. 

ಹಾಗಿದ್ದಲ್ಲಿ 

ನಾನೇ ಮೊದಲ ಅತ್ಯಾಚಾರಿಣಿಯಾಗುತ್ತಿದ್ದೆ .. 

ಚಂದವಿದ್ದವರು 

ಯಾಕಾದರೂ ಹೆದರುತ್ತಾರೊ.. ಗೊತ್ತಿಲ್ಲ...!

ಈ ಹೇಡಿ ಚಂದಿರನಿಗೆ ಉತ್ತರ ಕೊಡಬೇಕಿತ್ತು...


"ಚಂದ್ರಮಾ...

ಎಂಥಹ ಅತ್ಯಾಚಾರ..
ಎಲ್ಲಿಯ ಅನಾಚಾರ ?

ದಿನಾಲೂ

ಊಟ ಮಾಡುವಾಗ 
ನನ್ನ 
ಸರಿದ ಸೆರಗಿನ ಅಂಚನ್ನು ನೀನು ಆಸ್ವಾದಿಸುವದು ನನಗೆ ಗೊತ್ತಿಲ್ಲ ಅಂದುಕೊಂಡೆಯಾ ?

ನಿನಗೆ ನೀನೇ 

ನಿನ್ನ ಮೇಲೆ 
ಎಷ್ಟು ಬಾರಿ ಅತ್ಯಾಚಾರ ಮಾಡಿಕೊಳ್ಳುತ್ತಿದ್ದೀಯಾ ಗೊತ್ತಾ ?

ಅಸಹಜದ 

ನೀತಿಯ ಗೋಡೆಯನ್ನು  ಕಟ್ಟಿಕೊಳ್ಳುತ್ತೀಯಾ...

ನೀನೆ ಒಡೆದುಕೊಳ್ಳುತ್ತೀಯಾ...


ನೀನು ಮಾಡುತ್ತಿರುವದು  

ಅನಾಚಾರ..
ಇದು ಅತ್ಯಾಚಾರ..."

ಚಂದಿರ ತಗ್ಗಿಸಿದ ತಲೆ ಎತ್ತಲಿಲ್ಲ... 


"ಚಂದಿರಾ... 

ಅತ್ಯಾಚಾರವೆಂದರೆ ಮಾನಸಿಕವೂ ಹೌದು...

ಗಂಡಸು 

ಹೆಣ್ಣಿನ ಮೇಲೆ ದೈಹಿಕ ಅತ್ಯಾಚಾರ ನಡೆಸಿದರೆ ... .

ಗಂಡು ತನ್ನ ಮೇಲೆ 

ತಾನೇ ಮಾನಸಿಕ ಅತ್ಯಾಚಾರ ಮಾಡಿಕೊಳ್ಳುತ್ತಿರುತ್ತಾನೆ...

ಎಲವೊ ಪುರುಷಾ...  !


ಮೊದಲಿಗೆ 

ನೀನು 
ನಿನ್ನ ಮೇಲೆ ಮಾಡಿಕೊಳ್ಳುತ್ತಿರುವ 
ಅತ್ಯಾಚಾರವನ್ನು ನಿಲ್ಲಿಸಿಕೊ.. 

ಚಂದಿರಾ.. 

ಅನ್ನ ಬೆಳೆಯಲು.. 
ಭತ್ತ  
ಬೆಳೆಯಲು ಹೊಲವನ್ನು ಊಳುತ್ತೀಯಲ್ಲ... 

ಅದು ಅತ್ಯಾಚಾರವಲ್ಲವಾ ?"


ಚಂದಿರ 

ಇನ್ನೂ ದೂರವೇ ನಿಂತಿದ್ದ...
ಕಂಪಿಸುವ ಧ್ವನಿಯಲ್ಲಿ ಮಾತನಾಡಿದ...

" ಬೇಡ.. ಬೇಡ..

ನಿನ್ನ ಪತಿ ಸಪ್ತ ಋಷಿಗಳಲ್ಲಿ ಒಬ್ಬ...

ಬದುಕಿನಲ್ಲಿ  ಪಾರಮಾರ್ಥಿಕತೆಯನ್ನು ಕಾಣುವವರು..."


ನನಗೆ ಕೋಪ ತಡೆಯಲಾಗಲಿಲ್ಲ..


ದಹಿಸುವ ಆಸೆ...! 


ಕಂಪಿಸ ತೊಡಗಿದೆ...


"ಚಂದಿರಾ...

ನಾನು ಹೆಣ್ಣು...

ಸಿಕ್ಕಿದ 

ಬದುಕನ್ನು 
ಬದುಕುವದಷ್ಟೇ ನನಗೆ ಗೊತ್ತು...

ಸಾವು..

ಸಾವಿನಾಚೆಯ ಪಾರಮಾರ್ಥಿಕತೆ ನನಗೆ ಬೇಕಿಲ್ಲ...

ಬದುಕಿನ .. 

ಸಾವಿನಾಚೆಯ ತತ್ವ ಬೋಧಿಸುವ 
ಈ ಸಪ್ತ ಋಷಿಗಳಲ್ಲಿ ... 
ಸನ್ಯಾಸಿಗಳಲ್ಲಿ 
ಒಬ್ಬರಾದರೂ ಹೆಣ್ಣು ಇದ್ದಾಳೆಯೇ ?

ಬದುಕಿನ ಸ್ವಾರಸ್ಯ ಬಿಟ್ಟು 

ಸನ್ಯಾಸಿಯಾದ 
ಒಬ್ಬಳಾದರೂ ಹೆಣ್ಣನ್ನು ತೋರಿಸು...

ಜಗತ್ತಿನ ಎಲ್ಲ ತತ್ವ ಶಾಸ್ತ್ರ..

ನೀತಿ 
ಧರ್ಮವನ್ನು ಬೋಧಿಸಿದವ ಪುರುಷ,...

ಪುರುಷ ಜಾತಿಗೆ ಬೇಕಾದಂತೆ  ಜಾತಿ 

ಮತಗಳನ್ನು ಸ್ಥಾಪಿಸಿದವ ಪುರುಷ.. !

ಸಿಕ್ಕಿದ 

ಬದುಕನ್ನು ಬಿಟ್ಟು
ಸಾವಿನಾಚೆಯ ಸುಖವನ್ನು ಹುಡುಕುವದು ಗಂಡು..

ಪುರುಷನ ಪುರುಷಾರ್ಥ ಇಷ್ಟೇ...


ಇದು ಸಹಜ ಅಲ್ಲ..."


ಚಂದಿರ ಮುಖ ಬಾಡಿಸಿದ..


"ತಾರೆ...

ಇದು ನಿಜ...

ನನಗೆ ನಿನ್ನ ಮೇಲೆ ಆಸೆ ಇದೆ...


ಆದರೆ ..... 

ಬೃಹಸ್ಪತಿ ಶಕ್ತಿ ಶಾಲಿ...

ದೇವತೆಗಳ ಗುರು... !


ಶಾಪ ಕೊಟ್ಟರೆ ನಾನೆಲ್ಲಿ ಹೋಗಲಿ ?.. ".. 


ಅಂತೂ 

ಈ ಚಂದಿರ ತನ್ನ ನಿಜವಾದ ಬಣ್ಣವನ್ನು ತೋರಿಸಿದ.. ...

ಅವನನ್ನು ಹಿಡಿದು ಬಿಗಿದಪ್ಪಿದೆ... 

ಮುದ್ದಿಸಿದೆ.. 

ಅವನ ಎದೆಗೊರಗಿ ಉಸುರಿದೆ... 


" ಚಂದಿರಾ

ನಿನಗೆ ಹೇಗಿದ್ದರೂ ಶಾಪ ತಪ್ಪಿದ್ದಲ್ಲ....

ನನ್ನನ್ನು ಅನುಭವಿಸಿದರೆ 

ನನ್ನ ಗಂಡ ನಿನ್ನನ್ನು ಶಪಿಸದೆ ಬಿಡುವದಿಲ್ಲ... 

ನನ್ನನ್ನು

ನಿರಾಕರಿಸಿದರೆ ನಾನು ಶಾಪ ಕೊಡುವೆ...!

ಪ್ರಕೃತಿ ಅಬಲೆಯಲ್ಲ... 


ಚಂದ್ರಮಾ..


ಪುರುಷ ಹೇಗಿದ್ದರೂ ಶಾಪಗ್ರಸ್ಥ... !


ಪುರುಷ... 

ಪ್ರಕೃತಿ ನಾಶದ ಮೂಲ ..

ಏನೂ ಮಾಡದೆ ... 

ವಿನಾಕಾರಣ 
ಯಾಕೆ ಶಾಪ ತೆಗೆದುಕೊಳ್ಳುತ್ತೀಯಾ?

ನನ್ನನ್ನು  ಅನುಭವಿಸಿ ..

ಸುಖಿಸಿ... 
ಶಾಪ ತೆಗೆದು ಕೊ.."

ನನ್ನ ಅಪ್ಪುಗೆಯನ್ನು ಬಿಗಿಗೊಳಿಸಿದೆ...


ನನಗೆ ಗೊತ್ತು 

ಚಂದಿರನಿಗೆ ಬೇರೆ ದಾರಿ ಇಲ್ಲ... 

ಚಂದಿರನೂ  ಅಪ್ಪಿದ.. 


ಇದು

ಪ್ರೀತಿಯೋ...
ಕಾಮವೋ...!

ಎಲ್ಲವೂ ಅಪ್ಪುಗೆಯಲ್ಲಿ ಗೊತ್ತಾಗಿಬಿಡುತ್ತದೆ...


ಒಪ್ಪಿದ ಮೇಲೆ  ಪ್ರೇಮವೇನು ..  ?

ಕಾಮವೂ ಚಂದ..... !




(ಚಂದದ  ಪ್ರತಿಕ್ರಿಯೆಗಳಿವೆ... 
ದಯವಿಟ್ಟು ನೋಡಿ ...)

28 comments:

Srikanth Manjunath said...

ಪರ್ವತ ತುತ್ತ ತುದಿಯನ್ನು ಹತ್ತಿ ನಿಂತಾಗ.. ಸಂತೋಷ, ಸುಖಃ, ಸುಸ್ತು, ಆಯಾಸ, ನಿಡಿದಾದ ಉಸಿರು.. ಎಲ್ಲವೂ ಒಮ್ಮೆಲೇ ಬಂದು ಪರ್ವಾತಗ್ರದಲ್ಲಿ ಕೂತು ಸುತ್ತಲು ಒಮ್ಮೆ ನೋಡುತ್ತಾ, ನಾವು ಹತ್ತಿ ಬಂದ ಹಾದಿಯನ್ನು ಒಮ್ಮೆ ಅವಲೋಕಿಸಿ, ಸುತ್ತ ಮುತ್ತಲ ಪ್ರಕೃತಿ ಸೌಂದರ್ಯವನ್ನು ನೋಡಿ ತಣಿದು.. ಹಾಗೆ ಕಣ್ಣು ಮುಚ್ಚಿ ಮಲಗಿದಾಗ ಸಿಗುವ ಆ ಸೌಖ್ಯ ತುಂಬಿದ ಮನಸ್ಸು ಆಯಿತು ನಿಮ್ಮ ಭಿನ್ನ ಆಯಾಮದ ಲೇಖನ ಓದಿ.

ಬೇಲಿ ಇರಬೇಕೆ ಬೇಡವೇ ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾದ ಹಾಗೆ, ಇಲ್ಲಿ ಪುರುಷ ಹೇಳಿದ ಮಾತೆಲ್ಲವೂ ಸತ್ಯ. ಪ್ರಕೃತಿಯ ಮೇಲಿನ ಆಚಾರವೋ, ಅನಾಚಾರವೋ, ಅತ್ಯಾಚಾರವೋ ಅರಿವಾಗುವುದು ಪ್ರಕೃತಿ ಅರ್ಥಾತ್ ಹೆಣ್ಣಿನ ಮನದ ತಳಪಾಯದ ಮೇಲೆ.

ಆ ಕ್ಷಣಕ್ಕೆ ಬೇಕಾಗಿದ್ದು ಸರಸ ಎಂಬ ಮಾತು ಮಾತ್ರ ನಿಜ ಅದಾಗ ಕಾಮವೋ ಪ್ರೇಮವೋ ಯೋಚನೆಗಳಿಗೆ ಸ್ಥಳವಿಲ್ಲ. ಚಂದ್ರನ ಭಯ ಆಸೆ ಇದ್ದೂ ಶಾಪಕ್ಕೆ ಹೆದರಿದ ಮನಸ್ಸು.

"ಮಠ" ಚಿತ್ರದ ಸಂಭಾಷಣೆ ನೆನಪಿಗೆ ಬಂತು "ನಾನು ನೋಡೋಲ್ಲ ಅನ್ನುವುದು ಬೇರೆ.. ಇಷ್ಟವಿಲ್ಲ ಅನ್ನೋದು ಬೇರೆ" ಅಂತ.. ಚಂದ್ರ ಹುಯ್ದಾಟ ಕೂಡ ಇದೆ.

ತಾರೆ ಹೇಳಿದ ಮಾತುಗಳು ಮನಸ್ಸಿಗೆ ಒಪ್ಪುತ್ತವೆ. ಬೇಕಾದ ಸುಖ ಸಿಗಲಿಲ್ಲ ಅಂದರೆ, ಹೂವು ಮಕರಂದ ಇಟ್ಟಿಕೊಂಡದ್ದು, ಅದನ್ನು ಅನುಭವಿಸಲು ಬಂದ ಧುಂಬಿಯನ್ನು ಆದರಿಸದೇ ಇರುವುದು ಅಥವಾ ಅರಸಿ ಹೋಗುವುದು ಸರಿ ಎನ್ನುವ ತರ್ಕ ಒಪ್ಪಬೇಕಾದ್ದು ಅನ್ನಿಸುತ್ತದೆ.

ಎರಡು ಮೂರು ನಾಲ್ಕು ಆಯಾಮದ ಲೇಖನ ಇದು.. ಪ್ರತಿ ಬಾರಿ ಓದಿದಾಗಲೂ ವಿಭಿನ್ನ ಅರ್ಥಕ್ಕೆ ಹೊರಳುವ ಲೇಖನ ಮಾಲಿಕೆ. ನಿಮಗೊಬ್ಬರಿಗೆ ಈ ರೀತಿಯಲ್ಲಿ ಬರೆಯಲು ಸಾಧ್ಯ. ಗೋಜಲು ಗೋಜಲು ಅನ್ನಿಸುವ ಸಮಸ್ಯೆಯನ್ನು ಪದಗಳ ಮೂಲಕ ಉಪಮೆಗಳ ಮೂಲಕ ಸರಿಯಾಗಿ ದಾಟಿಸುವ ನಿಮ್ಮ ಕಲೆ ಸೂಪರ್ ಪ್ರಕಾಶಣ್ಣ

umesh desai said...

ಹೆಗಡೇಜಿ..ಪುರಾಣಕತೆಗಳ ಹಿಂದೆ ಬಿದ್ದಹಾಗಿದೆ..
ಹಿಂದೆ ಅದಾವುದೋ ಕತೆ ಕಸ್ತೂರಿಯಲ್ಲಿ ಬಂದಿತ್ತು..ಅದರಲ್ಲೊಂದು ವಾಕ್ಯ
" ಗುರುಪತ್ನಿಯ ರುಚಿಉಂಡ ಚಂದ್ರ ಆಯಾಸ ಬಗೆಹರಿಸಿಕೊಳ್ಳಲು ಮೋಡಗಳಲ್ಲಿ ಮರೆಯಾದ.."
ಇರಲಿ ಈ ಕತೆ ಪ್ರಶ್ನೆ ಕೇಳುತ್ತದೆ ಸರಿ ತಪ್ಪು ಅಂತವಿಂಗಡಿಸುತ್ತ ನೀವು ಕೂತಿಲ್ಲ ಅದು ನಿಮ್ಮ ಜಾಣ್ಮೆ..
ಕತೆಗೆ ನೂರಾರು ಕವಲಿವೆ ಇಷ್ಟು ಮಾತ್ರ ಅನಿಸಿದ್ದು ಬೃಹಸ್ಪತಿ ಮಾಡಿದ್ದು ಸರಿಯೇ ಅಥವಾ ಆಶ್ರಮದಲ್ಲಿದ್ದರೂ
ಕಾಮನೆ ಹತ್ತಿಕ್ಕಿಕೊಳ್ಳದ ತಾರೆ ಸರಿಯೇ,,ನೋಡುವಾಗ ನೋಡಿ ಅನುಭವಿಸುವಾಗ ತಾಯಿಸಮಾನ ಇತ್ಯಾದಿ ಬಡಬಡಿಸೋ ಚಂದ್ರ
ಸರಿಯೇ..ಉತ್ತರ ನಾನೂ ಹುಡುಕುವುದಿಲ್ಲ. ಇಂದೇ ನನ್ನ "ದೇಸಾಯರ ಅಂಬೋಣ" ವೂ ಅಪಡೇಟ್ ಆಗಿದೆ.."ಚೌಕಟ್ಟಿನಾಚೆ" ಎಂಬ ಕತೆಯಿದೆ
ಬಿಡುವು ಮಾಡಿಕೊಂಡು ಓದಿ..ಹೇಗನ್ನಿಸಿತು ಹೇಳಿ..

shubha hegde said...

ಆಚಾರ,ವಿಚಾರ ,ನಡತೆ ಎಲ್ಲವೂ ಅವರವರ ಮೂಗಿನ ನೇರಕ್ಕೆ. ಆದರೂ ಸರಿ ತಪ್ಪುಗಳ ಶಾಸ್ತ್ರ ಬರೆದಿದ್ದಾರೆ. ಆದರೆ ಬರೆದದ್ದು ಪುರುಷ ಸಮಾಜ. ಹೆಣ್ಣು ಬದುಕಿನಲ್ಲಿ ಕುಶಿಪಡುತ್ತಾಳೆ. ಗಂಡು ಸಾವಿನಾಚೆ ಕಾಣದ ಬದುಕಿನ ಸುಖದಲ್ಲಿ ತೊಳಲಾಡುತ್ತಾನೆ. ಒಂದು ಕಥೆಯ ಎಳೆಯನ್ನು ಹಿಡಿದು ಬೆಳೆಸಿದ ರೀತಿ ಇಷ್ಟವಾಯ್ತು. ಧನ್ಯವಾದಗಳು.

ಸಪ್ತ ಋಷಿಗಳಲ್ಲಿ ಹೆಣ್ಣುಗಳಿಲ್ಲ. ಇದು ಸೋಜಿಗ !

Unknown said...

Very nice Prakashanna

Badarinath Palavalli said...

"ಸಾವು..
ಸಾವಿನಾಚೆಯ ಪಾರಮಾರ್ಥಿಕತೆ ನನಗೆ ಬೇಕಿಲ್ಲ.."

ಒಂದು ಹಂತದಲ್ಲಿ ಇದೇ ಸರಿಯಾದ ವಾದವಾ?
I don't know, ಏಕೋ ಈ ನಡುವೆ ಸಣ್ಣ ಆರೋಗ್ಯ ಸಮಸ್ಯೆ ನನ್ನ ಬದುಕಿನ ಉತ್ಸಾಹವನ್ನೇ ಅಳಿಸಿ ಹಾಕಿಬಿಟ್ಟಿದೆ. ಸಾವು ಇದ್ದೀತದೂ ಸನಿಹ ಸನಿಹ!

ಕಥೆಯಾಂತರಾಳದ ಆ 'ಚರ' ಮತ್ತು 'ಆಚಾರ'ಗಳ ನಡುವಿನ ಅರ್ಥಗ್ರಹಿಕೆ ಅವರವರ ಮೂಗಿನ ಮಟ್ಟಕ್ಕೆ ಒಗ್ಗಿಸಿಕೊಂಡದ್ದೇನೋ?
ಇದ್ದೀತು ಹಾಗೆಯೇ?

ಒಟ್ಟಾರೆ ಮಾರ್ಮಿಕ ಕಥನ.

ಮನಸಿನಮನೆಯವನು said...

ಹೆಣ್ಣಿನ ಮಾತು...
ಮೌನ
ನೋಟಗಳ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದೇ ? ಅದು ಹೇಗೆ ?
ಅರ್ಥವಾದಲ್ಲಿ ಕ್ಷೇತ್ರವೇ ಬೀಜ ಬಿತ್ತಲು ಕರೆಯುವಾಗ
ನಿರಾಕರಿಸಿ ...
ಇಂದಿನ ಕಾಲ ಧರ್ಮದಲ್ಲಿ ತಪ್ಪಾಗಲು ಅವಕಾಶವಿರುವುದಿಲ್ಲ.. .
"ಅಸಹಜದ
ನೀತಿಯ ಗೋಡೆ"-ಯಿಂದಲೇ ಮಾನವ ತನ್ನ ಬಹುಪಾಲು ಸುಖಗಳನ್ನು ನಾಶ ಮಾಡಿಕೊಂಡ ಎನಿಸುತ್ತದೆ.
"ಸಿಕ್ಕಿದ
ಬದುಕನ್ನು
ಬದುಕುವದಷ್ಟೇ ನನಗೆ ಗೊತ್ತು..."- ಇದೆ ಸತ್ಯಾತಿಸತ್ಯ, ಬದುಕು ಎಂದರೆ ಏನು ಎಂದು ಪ್ರಶ್ನೆ ಹಾಕಿಕೊಳ್ಳುವುದಲ್ಲ.. ಬದುಕುವುದು ಅಷ್ಟೇ.

ಸಾವು..
ಸಾವಿನಾಚೆಯ ಪಾರಮಾರ್ಥಿಕತೆಯಲ್ಲಿ ಅರ್ಥವೇ ಇಲ್ಲವೆನಿಸುತ್ತದೆ...- ಕಾರಂತರ ಬರಹಗಳು ಇಂತಹ ಮನಸ್ಸಿಗೆ ಖುಷಿ ತರಬಲ್ಲವು.


ಮತ್ತೊಂದು ದೇಸಾಯಿ ಅವರು ಹೇಳಿದ್ದಾರೆ- ಆಶ್ರಮದಲ್ಲಿದ್ದು ಕಾಮ ಹತ್ತಿಕ್ಕಿಕೊಲ್ಲದವಳು ಸರಿಯೇ ಎಂದು.
ನಾನು ಹೇಳಬಯಸುತ್ತೇನೆ- ಮನಸ್ಸಿನ ಯಾವುದೇ ಭಾವನೆಯನ್ನು ಹತ್ತಿಕ್ಕುವುದು ಸರಿಯಲ್ಲವೆಂದು, ಆಶ್ರಮದಲ್ಲಿದ್ದು ಪತ್ನಿಯೇಕೆ ಆತನಿಗೆ.. ಪರಮಾರ್ಥ ಹುಡುಕುವವನು ಪತ್ನಿಯಲ್ಲಿ ಏನು ಹುಡುಕಲು ಇರಿಸಿಕೊಂಡ.

sunaath said...

ಸಂತಾನಕ್ಕಾಗಿ ಕಾಮ; ಕಾಮಕ್ಕೆ ಪುರುಷಪ್ರಧಾನ ಸಮಾಜದ ಕಟ್ಟಳೆಗಳು. ಈ ಕಟ್ಟಳೆಗೆ ಪ್ರಕೃತಿಯ ಉತ್ತರವನ್ನು ಸಮರ್ಪಕವಾಗಿ ತೋರಿಸಿದ್ದೀರಿ!

Ittigecement said...

ಶ್ರೀಕಾಂತ್...

ಪುರಾಣದಲ್ಲಿ ಬರುವ ಈ ಕಥಾ ಸಂದರ್ಭ ತುಂಬಾ ಕುತೂಹಲಕಾರಿಯಾಗಿದೆ...
ಈ ಕಥೆಯ ಬಗೆಗೆ ನಾನು ನನ್ನ ಗೆಳೆಯ ಅಕಾಶವಾಣಿ ಧಾರವಾಡದ ದಿವಾಕರ ಮತ್ತು ಧಾರವಾಡದ ದೀಕ್ಷಾ ಕಾಲೇಜಿನ ಸುಬ್ರಮಣ್ಯ ಭಟ್ ಇವರ ಬಳಿ ವಿವರವಾಗಿ ಚರ್ಚಿಸಿದ್ದೇನೆ... ಹಾಗೂ ಹಿರಿಯರಾದ ಶ್ರೀ ಎಮ್,ಎಸ್.ಹೆಬ್ಬಾರ್ ಸರ್ ಬಳಿ... ಶ್ರೀ ಗೋಪಾಲ ವಾಜಪೇಯಿಯವರ ಬಳಿ ಮಾಹಿತಿಗಳನ್ನು ಕಲೆ ಹಾಕಿದೆ..ಗುರುವಿನ ಪತ್ನಿ ತಾರೆಯ ಬಗೆಗೆ ವಿವರಗಳ ಬಗೆಗೆ ಎರಡು ಪುಸ್ತಕಗಳನ್ನು ಓದಿದೆ.. ನನ್ನ ಹುಚ್ಚನ್ನು ತಾಳ್ಮೆಯಿಂದ ಪ್ರೋತ್ಸಾಹಿಸಿದ ಇವರೆಲ್ಲರಿಗೂ ಹೃದಯ ಪೂರ್ವಕ ನಮನಗಳು..

ತಾರೆ.. ಮತ್ತು ಚಂದ್ರ ಇಬ್ಬರಿಗೂಆ ಕ್ಷಣಕ್ಕೆ ಬೇಕಾದದ್ದು ಕಾಮ... ಸುಖ...
ಆ ಸಂದರ್ಭದಲ್ಲಿ ಮನಸ್ಥಿತಿಗಳ ವಿಶ್ಲೇಷಣೆ..

ತಾರೆಯ ಆಹ್ವಾನವಿದ್ದರೂ.. ಗುರುವಿಗೆ ಹೆದರುವ ಚಂದ್ರ...
ಕಾಮ ಮತ್ತು ನೀತಿ ವಿಷಯಗಳ ತೊಳಲಾಟದ ಬಗೆಗೆ ಇದೊಂದು ಉತ್ತಮ ಸಂದರ್ಭ...

ಕಾಮ ಪ್ರಕೃತಿಯಂತೆ ಸಹಜ..

ಬದುಕನ್ನು ಪ್ರೀತಿಸಿ ಬದುಕುವ ಹೆಣ್ಣು...
ಚೌಕಟ್ಟು ಇಲ್ಲದೆ ಕಾಮದ ಸಂದರ್ಭವನ್ನು ಬಯಸುವ ಗಂಡಿನ ಮನೋಸ್ಥಿತಿ...
ಇವುಗಳನ್ನು ಎಷ್ಟು ಬೇಕಾದರೂ ವಿಶ್ಲೇಷಣೆ ಮಾಡಬಹುದು...

ಅಂಥಹ ಒಂದು ಸಂದರ್ಭದ ಪ್ರಯತ್ನ ಇದು...

ಹೆಣ್ಣೆಂದರೆ ಪ್ರಕೃತಿ..
ಹೆಣ್ಣೆಂದರೆ ಹೂವು...

ಗಂಡು ಹೆಣ್ಣಿನ ಸಂಬಂಧ ಎನ್ನುವ ಹೂದೋಟಕ್ಕೊಂದು ಬೇಲಿಯ ಅಗತ್ಯ..
ಹೆಣ್ಣಿನ ಮೇಲಿನ ಪ್ರಭುತ್ವ ಸಾಧಿಸಲು ಈ ಬೇಲಿ.. ಕಟ್ಟು ಪಾಡುಗಳೇ ?

ಉತ್ತರ ಕೊಟ್ಟಿಲ್ಲ..

ನಿಮಗೆ ಏನನ್ನಿಸಿತು ಅದು ಬಹಳ ಮುಖ್ಯ...

ತುಂಬಾ ಪ್ರೀತಿಯಿಂದ ನೀಡಿರುವ ನಿಮ್ಮ ಪ್ರತಿಕ್ರಿಯೆಗೆ ಪ್ರೀತಿಯ ನಮನಗಳು ಶ್ರೀಕಾಂತೂ...

REYANA said...

ok10
super!ಕೆಲವೇ ಶಬ್ದಗಳಲ್ಲಿ ತುಂಬಾ ಚೆನ್ನಾಗಿ ಬರೆದಿದ್ದೀರಾ. ಸಂಬಂಧಗಳು ತೀರಾ ಸೂಕ್ಷ್ಮ. ಇವತ್ತು ಬೆಳಿಗ್ಗೆ ಪ್ರೇಮಲತಾ ಮತ್ತು ರಾಘವೇಶ್ವರ ಸ್ವಾಮೀಜಿ ಬಗ್ಗೆ ಓದುತ್ತಾ ಇದ್ದೇ........
ಉಳಿದದ್ದು ಏನೇ ಇರಲಿ ಆ ಹೆಣ್ಣು ಮಗಳು ತನ್ನ ಆತ್ಮಸಾಕ್ಷಿ ಜೊತೆ ಹೇಗೆ ಕಾಂಪ್ರಮೈಸ್ ಮಾಡಿಕೊಂಡಿರಬಹುದು ಎಂಬುದು ನನಗೆ ಸಮಸ್ಯೆಯಾಗಿಯೇ ಉಳಿಯಿತು

GAJANAN S HEGDE said...

VERY NICE----SUPER THINKING AND EXPRESSING IN WORDS
ESTONDU COMMENTGALU ----WHAAAAAA

Dr. Ravikiran said...

Onde aayamadallina dwandwakke uttara etukade soluva namage ee bahu-aayaamada bahuroopi dwandwa bahuvaagi kaaduvudu sahaja. Idistu saaladembanthe PANCHA MAHAAPATHIVRATHEyaralli THAARAA hesaru baruvudu innastu jijnaasege kaaraana. Mikka 4 janaralli mathhibbara bagegoo halavaaru vaadagalu barutthave... AHALYAA, DRAUPADEE.. Kelavu vishayagalannu hecchu aalochisade iruvude olleyadeno annisuvudide..... Idu, vishayada bagge nanna abhipraaya.

Innu nimma baraha-baravanige bagge heludaadare, hecchina jijnaase agatyave illa. Sippe sulida baale hanninanthe sarala, sulabha, saviyalu baluruchi.....

Unknown said...

Nice prakashanna.........preeti mathhu swartha....sari matthu thappu...aachara matthu annachara....yella dwandwagale...avugalannu chennagi varnisiddeeri...namma jeevanada prati hanthadallu intahude dwandwagalu kaduthiruthave alwa anna...e lekhana estavaythu

Unknown said...

ವಾಹ್........... ವಾಹ್ ........ ನನ್ನ ಕಡೆಯಿಂದ ನೂರೊಂದು ಲೈಕ್ ಗಳು.

ಬೆಳಿಗ್ಗೆ ಬೆಳಿಗ್ಗೆ ಮನಸ್ಸು ಮುದದಿಂದ ಕುಣಿಯಿತು.

ಈ ಅವಕಾಶ ನೀಡಿದ ಪ್ರಕಾಶ ಹೆಗಡೆಯವರಿಗೆ ನನ್ನ ಮನಸ್ಸಿನಿಂದ ಧನ್ಯವಾದಗಳು.

ಅಂದ ಹಾಗೆ ಇಟ್ಟಿಗೆ , ಸಿಮೆಂಟ್ ಕೇವಲ ನಿರ್ಜೀವ ವಸ್ತುಗಳಲ್ಲ, ಸದಾ ಕಾಲ ಸಜೀವವಾಗಿರಿಸುವ ಪ್ರಕಾಶ ಬೀರುವ ಪ್ರಕಾಶ ಹೆಗಡೆಯವರ ಸೃಜನಶೀಲತೆ ಅಲ್ಲಿ ಮಿಂಚುತ್ತಿದೆ.

Ittigecement said...

ಉಮೇಶ ದೇಸಾಯಿಯವರೆ....
ಈ ಕಥೆ ಬರೆದು ತುಂಬಾ ದಿನಗಳಾಗಿತ್ತು...
ಮುಕ್ತಾಯ ನನಗೆ ಇಷ್ಟವಾಗಿರಲಿಲ್ಲ.. ಹಾಗೆ ಇಟ್ಟುಬಿಟ್ಟಿದ್ದೆ..
ಇಲ್ಲಿಗೆ ಈ ಕಥೆ ಪೂರ್ತಿಯಾಗಿಲ್ಲ...

ಬ್ರಹಸ್ಪತಿಗೆ...
ತನ್ನ ಹೆಂಡತಿ ಮತ್ತು ಚಂದ್ರನ ಈ ಸಂಬಂಧದ ವಿಷಯ ಗೊತ್ತಾದ ಮೇಲೆ ಏನಾಯ್ತು ?

ಈ ಅಕ್ರಮ ಸಂಬಂಧದ ಪ್ರಕರಣವನ್ನು ಹೇಗೆ ಬಗೆಹರಿಸಲಾಯ್ತು ?

ನಿಜಕ್ಕೂ ಬಹಳ ಕುತೂಹಲಕಾರಿಯಾದ ವಿಷಯ ಅದು...

ಸಾವಿರಾರು ವರ್ಷಗಳ ಹಿಂದಿನ ಸಮಾಜದಲ್ಲಿ ಕಾಮ ಎಷ್ಟು ಮುಕ್ತವಾಗಿತ್ತು ಎನ್ನುವದನ್ನು ಇವುಗಳು ಬಿಂಬಿಸುತ್ತವೆಯಾ ?

ಅದನ್ನೂ ಬರೆಯುವ ಆಸೆ ಇದೆ...

ಕೆಲಸದ ಒತ್ತಡಗಳ ಮಧ್ಯೆ ಬರೆಯುವದು ಸ್ವಲ್ಪ ಕಡಿಮೆಯಾಗಿದೆ...

ಫೇಸ್ ಬುಕ್ಕಿಗೆ ಹೋಗುವದು...
ಅಲ್ಲಿ ಒಂದು ಫೋಟೊವನ್ನೊ...
ಒಂದು ಸ್ಟೇಟಸ್ಸನ್ನೋ ಹಾಕುವದರಲ್ಲಿ ನಮ್ಮ ಬರವಣಿಗೆ ನಿಂತು ಹೋಗಿದೆಯಾ ?

ಹೌದು...
ಹಾಗಾಗಿದೆ...

ಇಲ್ಲಿ ಬರೆದರೂ..
ಓದುಗರು ಕಡಿಮೆಯಾಗಿದ್ದಾರೆ..
ಇದೂ ಒಂದು ಕಾರಣ ಇದ್ದಿರ ಬಹುದು...

ಆದರೂ ಬ್ಲಾಗಿನಲ್ಲಿ ಬರೆಯುವ ಖುಷಿ ಬೇರೆಲ್ಲೂ ಸಿಗುತ್ತಿಲ್ಲ... ಇದು ನಿಜ.

ನಿಮ್ಮ ಬ್ಲಾಗಿಗೆ ಬರದೆ ತುಂಬಾ ದಿನಗಳಾದವು.. ಕ್ಷಮೆ ಇರಲಿ...

ಪ್ರೀತಿಯ ನಮನಗಳು ದೇಸಾಯಿಯವರೆ...

ಕಾವ್ಯಾ ಕಾಶ್ಯಪ್ said...

"ಮಕರಂದ ಹೀರಿದ ಮೇಲೆ
ತನ್ನ ಅಂದ ....
ಹಾಳಾಗುತ್ತದೆ ಅಂತ ಗೊತ್ತಿದ್ದರೂ..
ಕೊಡುವದರಲ್ಲೇ ತೃಪ್ತಿ ಕಾಣುತ್ತದೆ ಆ ಹೂವು.."
ನಿಜವಾದ ಮಾತು....!
ಜೊತೆಗೆ 'ತಪ್ಪು ಸರಿ' ಇವುಗಳ ವಿಶ್ಲೇಷಣೆ ಇಷ್ಟವಾಯ್ತು...
ಸರಿ ತಪ್ಪುಗಳು ಅವರವರ ಭಾವನೆ / ಜೀವನ ಕ್ರಮಕ್ಕೆ ತಕ್ಕುದಾಗಿ ಬೇರೆ ಬೇರೆಯೇ ಆಗಿರುತ್ತವೆ ಎನ್ನುವುದೂ ಅಷ್ಟೇ ಸತ್ಯ...
ಪ್ರಶ್ನೆಗಳನ್ನು ಪ್ರಶ್ನೆಯಾಗಿಯೇ ಉಳಿಸಿ ಓದುಗರ ತರ್ಕಕ್ಕೆ ಬಿಟ್ಟು ಬಿಡುವ ಜಾಣರು ನೀವು...! ;)
ಹೆಣ್ಣಿನ ಭಾವನೆಗಳ ವಿಶ್ಲೇಷಣೆ ಮಾಡುವಲ್ಲಿ ನಿಸ್ಸೀಮ ಪ್ರಕಾಶಣ್ಣ ... :)

Raghunandan K Hegde said...

ಬೇಲಿ ಹಾಕಿದಾಗಲೇ ಅದನ್ನು ಮೀರುವ ಆಸೆಯೂ ಮೂಡುತ್ತದಾ, ಪೃಕೃತಿಯನ್ನು ಗೆಲ್ಲಲಾಗದ ಪುರುಷ ಕಟ್ಟಳೆಗಳ ಬೇಲಿ ಹುಡುಕಿದನಾ...

ಪುರಾಣದ ಕಥಾ ಸಂಗ್ರಹದಲ್ಲಿ ಇಂತಹ ಅದೆಷ್ಟು ಭಾವಗಳಿವೆಯೋ, ಸರಿ ತಪ್ಪುಗಳ ಬೇಲಿಯಾಚೆ ನಿಂತು ಮತ್ತೆ ಮತ್ತೆ ಓದಿಸಿಕೊಳ್ಳುವ ಕಥೆ ಕಟ್ಟಿಕೊಟ್ಟದ್ದಕ್ಕೆ ಧನ್ಯವಾದ..

ಚಿನ್ಮಯ ಭಟ್ said...

ಪ್ರಕಾಶಣ್ಣಾ,
ಅದೇನೋ ಒಂದು ಸಣ್ಣ ಹುಳಬಿಟ್ಟೇ ಹೊರಡುತ್ತೀರಿ ಕಥೆಯಲ್ಲಿ ಯಾವಾಗಲೂ..ಜ಼ೊತೆಗೆ 'ನಾನು' ಎನ್ನುತ್ತಾ ಕಥೆ ಹೇಳಲು ಹೊರಡುವ ಶೈಲಿ,ಅದನ್ನು ಒಪ್ಪವಾಗಿ ತಲುಪಿಸುವ ರೀತಿ.....
ಇಷ್ಟವಾಯಿತು :) :).
ಮೊನ್ನೆ ಸಹ ಎಲ್ಲೋ ಅಶ್ವತ್ಥಾಮನ ಬಗ್ಗೆ ಓದುತ್ತಾ ಇದ್ದೆ :).ಓದುತ್ತಾ ಅನ್ನಿಸಿದ್ದು,ಎಲ್ಲಾ ರಾಮಾಯಣ,ಮಹಾಭಾರತವು ದಿನನಿತ್ಯ ನಮ್ಮೆದುರು ಆಗುತ್ತಲೇ ಇರುತ್ತದೆಯಾ ಅಂತಾ ? ...ನಮ್ಮ ನಡುವಳಿಕೆ,ಯೋಚನೆ ಎಲ್ಲದಕ್ಕೂ ಒಂದಿಲ್ಲೊಂದು ಪಾತ್ರದ ಜೊತೆ ತಾಳೆಯಾಗುತ್ತಲೇ ಇರುತ್ತದೆಯೇನೋ ಅನ್ನಿಸ್ತಾ ಇದೆ ....
ಇನ್ನು ಕಾಮದ ಬಗೆಗಿನ ಪಾತ್ರಗಳಲ್ಲಿ ಆದರ್ಶವನ್ನು ತೀರಾ ಸರಿಯೆನ್ನುವಂತೆ ತೋರಿಸಲು ಹೋಗುವುದೂ ಅಥವಾ ಸ್ವೇಚ್ಛಾಚಾರವನ್ನು ಹೆಚ್ಚಾಗಿ ಸಮರ್ಥಿಸಿಕೊಳ್ಳುವುದೋ ಮಾಡದೆ,ಸಹಜ ತುಮುಲಗಳನ್ನು,ಆಸೆಯನ್ನು ಹೇಳಿದ್ದು ಇಷ್ಟವಾಯಿತು..ಜ಼ೊತೆಗೆ ಚಂದಿರನ ಭಯ ಕೂಡಾ ಕಥೆಗೊಂದು ವಾಸ್ತವಿಕತೆಯ ನೆಲಗಟ್ಟನ್ನು ಹಾಕಿಕೊಟ್ಟಿದೆ ಅನ್ನಿಸಿತು..
ಚೆಂದದ ಕಥೆ..
ಬರೆಯುತ್ತಿರಿ ಪ್ರಕಾಶಣ್ಣಾ..
ನಮಸ್ತೆ

ಭಾಶೇ said...

Brilliant.

Will look forward for the continued episode.

Ittigecement said...

ಶುಭಾರವರೆ...

ಹೆಣ್ಣು ಬದುಕುವದರಲ್ಲಿ..
ಬದುಕು ಕಟ್ಟುವದರಲ್ಲಿ ಖುಷಿ ಕಾಣುತ್ತಾಳೆ.. ಇದು ನಿಜ..

ನಮ್ಮ ಕಟ್ಟುಪಾಡುಗಳು..
ತತ್ವ.. ಜಾತಿ ಮತಗಳನ್ನೆಲ್ಲ ಮಾಡಿದವರು ಗಂಡು ಜಾತಿ...
(ಅಲ್ಲೊ ಇಲ್ಲೊ ಒಂದೆರಡು ಅಪವಾದ ಇದ್ದಿರಬಹುದು)

ಜಾತಿಮತಗಳನ್ನು ಹೆಣ್ಣು ಹುಟ್ಟಿಸಿದ್ದರೆ
ಗಂಡು ಜಾತಿಗೆ ಸೀರೆ..
ಬುರ್ಕಾ ಬರುತ್ತಿತ್ತೇನೊ !

ಗಂಡಿಗೇಕೆ ಚಂದದ ಬದುಕನ್ನು ಬಿಟ್ಟು ಪಾರಮಾರ್ಥಿಕತೆಯ ಬಗೆಗೆ ವ್ಯಾನೋಹ ?

ಪ್ರಕೃತಿಯನ್ನು ಹಾಳುಮಾಡಿಯೇ ಬದುಕಬೇಕು...
ಬದುಕಬೇಕೆಂದರೆ ಪ್ರಕೃತಿ ನಾಶವಾಗಲೇಬೇಕು...

ನಿಜಕ್ಕೂ ಶಾಪಗೃಸ್ಥ ಈ ಗಂಡು !

ಚಂದದ ಪ್ರತಿಕ್ರಿಯೆಗೆ ನಮನಗಳು...

Ittigecement said...

ಸುಮಂಗಲಾ...

"ಪ್ರೀತಿ ಒಳಗಿನ ಬೇಲಿ ಸ್ವಾರ್ಥವಾ ?"

ಗಂಡಾಗಲಿ..
ಹೆಣ್ಣಾಗಲಿ...
ಬೇಲಿ ಕಟ್ಟಿಕೊಳ್ಳುವದು ಪ್ರೀತಿಗಾಗಿಯೇ ಅಲ್ಲವೆ ?

ಪ್ರೀತಿ
ಪ್ರೆಮ.. ಸ್ವಾರ್ಥಿ...

ಕಾಮವೂ ಸ್ವಾರ್ಥಿ...

ರಘುನಂದನ ಹೇಳಿದ ಹಾಗೆ "ಬೇಲಿ ಹಾಕಿದಾಗಲೇ ಅದನ್ನು ದಾಟುವ ಆಸೆಯೂ ಹುಟ್ಟುತ್ತದೆ"

ಹಾಗಾದರೆ ಕೇವಲ ಆಸೆಗಳಿಗೆಗಾಗಿ.. ಕಾಮನೆಗಳಿಗಾಗಿಯೇ ಈ ಬದುಕೆ ?

ದ್ವಂದ್ವಗಳಿಗೆ ಕೊನೆಯಿಲ್ಲ...

ಆಸೆಗಳೋ..
ಕಾಮಾನೆಗಳೊ ?
ಮೌಲ್ಯಗಳೋ ?
ಹೇಗೆ ಅಂತ ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳಬೇಕು..

ಪ್ರೀತಿಯ ಪ್ರತಿಕ್ರಿಯೆಗೆ ಪ್ರೀತಿಯ ನಮನಗಳು...

ಕನಸು ಕಂಗಳ ಹುಡುಗ said...

"ನಿನಗೆ ನೀನೇ ನಿನ್ನ ಮೇಲೆ ಎಷ್ಟು ಸಾರಿ ಅತ್ಯಾಚಾರ ಮಾಡಿಕೊಳ್ಳುತ್ತೀಯಾ..."

ನಮ್ಮ ಮೇಲೆ ನಾವೇ ಅತ್ಯಾಚಾರ ಮಾಡಿಕೊಳ್ಳುವುದು ಈಗಿನ ಕಾಲಮಾನದಲ್ಲಿ ಲೆಕ್ಕ ಹಾಕಿದರೆ ಇದು ಸಹಜತೆಯೇ ಆಗಿಬಿಟ್ಟಿದೆ ಅನ್ನಿಸುತ್ತದೆ...
'ಮನಸ್ಸಿನಲ್ಲಿ ಮಂಡಿಗೆ ಕರಿಯುವುದು' ಅಂತ ಒಂದು ಮಾತಿದೆ.. ಆ ಗುಂಪಿನವರೇ ಜಾಸ್ತಿಯೇನೋ.....

ಇನ್ನು ನಾವು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನೇ ಮಾಡಿದರೆ
ಅದು ನಮಗೆ ಸಹಜತೆಯಾದರೂ ಪ್ರಪಂಚಕ್ಕೆ ಅಸಹಜವಾಗಿ ಕಾಣುತ್ತದೆ.....

ವಿಚಿತ್ರವಾದರೂ ಸತ್ಯ...

ಪ್ರಕಾಶಣ್ಣಾ ನನಗೆ ಈ ಬರಹ ತುಂಬಾ
ಖುಷಿಕೊಟ್ಟತ್ತು....
ಮೂರು ಬಾರಿ ಓದಿದೆ.....
ಶೈಲಿಯೋ ವಿಷಯವೋ ನಂಗೇ ತಿಳಿದಿಲ್ಲ.....

ನಾನು ತುಂಬಾ ಇಷ್ಟಪಟ್ಟೆ.....

ಸಂಧ್ಯಾ ಶ್ರೀಧರ್ ಭಟ್ said...

ಹೂವಿನ ಕಥೆ .. ಹೂ ಮನದ ಕಥೆ... ತಾರೆಯ ಮನಸ್ಸು .. ಚಂದ್ರನ ತುಮುಲ... ಪುರುಷನೆಡೆಗಿನ ಪ್ರಕೃತಿಯ ಅಸಮಾಧಾನ... ಚಂದದ ಕಥೆ..

prashasti said...

nice :-)

Ittigecement said...

ಬದರಿ ಭಾಯ್...

ನಾವು ಬದುಕುವ ಬದುಕು ನಮ್ಮ ಕಣ್ಣೆದುರಿಗೆ ಇರುವಾಗ..
ಸಾವಿನಾಚೆಯ ಸಂಗತಿ ಯಾಕೆ ?

ಹೆಣ್ಣು ಮಕ್ಕಳು "ಬದುಕುವ" ಬದುಕನ್ನೇ ಇಷ್ಟಪಡುತ್ತಾರೆ..

ಸಾವಿನಾಚೆಯ ಪಾರಮಾರ್ಥಿಕತೆ ಅವರಿಗೆ ಬೇಕಿಲ್ಲ...

"ತನ್ನಪ್ಪ.. ತನ್ನಮ್ಮ..
ತನ್ನ ಗಂಡ..
ತನ್ನ ಮಕ್ಕಳು " ಬದುಕಿನ ಪ್ರೀತಿಗೆ ಹೆಣ್ಣುಮಕ್ಕಳಿಗೆ ಇಷ್ಟು ಸಾಕು...
ದಿನದ ಇಪ್ಪತ್ತು ನಾಲ್ಕುಗಂಟೆ ಇವರಿಗಾಗಿ ಮೀಸಲಿಟ್ಟಿರುತ್ತಾರೆ.

ತಾನು ಸಾವಿನ ಅಂಚಿನಲ್ಲಿ ನಿಂತಿದ್ದರೂ...
"ತನ್ನ ಮಕ್ಕಳ ..
ತನ್ನ ಪತಿಯ ಅಗತ್ಯಗಳ ಬಗೆಗೆ ಯೋಚಿಸುತ್ತಿರುತ್ತಾರೆ.."

ಪರಿಚಯದ ಹಿರಿರೊಬ್ಬರ ಪತ್ನಿಗೆ ಕಾನ್ಸರ್..
ನಮಗೆ ತುಂಬಾ ಆತ್ಮೀಯರಲ್ಲಿ ಆತ್ಮೀಯರು...

ಸಾವಿನಂಚಿನಲ್ಲಿರುವವರನ್ನು ಹಾಗೆಲ್ಲ ಭೇಟಿ ಮಾಡಲು ನಾನು ಹೋಗುವದಿಲ್ಲ..
ಅವರು ನಮ್ಮನ್ನು ನೋಡಲು ಬಯಸುತ್ತಿದ್ದಾರೆ ಎನ್ನುವ ವಿಷಯ ತಿಳಿದು ಅಲ್ಲಿಗೆ ಹೋಗಿದ್ದೆವು...

ನಮಗೆಲ್ಲರಿಗೂ ಗೊತ್ತಿತ್ತು
ಅವರ ಬದುಕು ಕೆಲವೇ ಗಂಟೆಗಳು ಮಾತ್ರ ಅಂತ..

ಅಸಾಧ್ಯ ನೋವಿನಲ್ಲೂ
ನಮ್ಮೆದುರಿಗೆ ತಮ್ಮ ಸೊಸೆಯನ್ನು ಕರೆದು

"ನಾಳೆ ಬೆಳಗಿನ ತಿಂಡಿಗೆ ದೋಸೆಗೆ ಅಕ್ಕಿ ರುಬ್ಬಿ ಇಡು..
ಅದಕ್ಕೆ ಉದ್ದು ಜಾಸ್ತಿ ಹಾಕು...
ನನ್ನ ಮಗನಿಗೆ ಉದ್ದಿನ ದೋಸೆ ತುಂಬಾ ಇಷ್ಟ..."

ಅದಕ್ಕೆ ಶೇಂಗಾ ಚಟ್ನಿ ಮಾಡು.. ಕಾಯಿ ಈವತ್ತೇ ತುರಿದು ಇಟ್ಕೊ..."

ಮಾತನಾಡಿಸಲು ಹೋದ ನಮಗೆ ಮಾತು ಹೊರಗೆ ಬರಲಿಲ್ಲ...

ನಮ್ಮ ಕಣ್ಣಂಚಲ್ಲಿ ನೀರು ತುಂಬಿತ್ತು...

ಬಹುಷಃ
ಗಂಡು ಆ ಸನ್ನಿವೇಶದಲ್ಲಿದ್ದಿದ್ದರೆ
ತನ್ನ ನೋವಿನ ಬಗೆಗಷ್ಟೇ ವಿಚಾರ ಮಾಡುತ್ತಿದ್ದನೇನೊ....

ಪ್ರೀತಿಯ ಬದರಿ ಅಣ್ಣಾ..
ನಿಮ್ಮ ಆರೋಗ್ಯ ಬಲು ಬೇಗ ಸುಧಾರಿಸಲಿ..
ಇದು ನಮ್ಮೆಲ್ಲರ ಪ್ರಾರ್ಥನೆ..

ಪ್ರೀತಿಯ ನಮನಗಳು...






Unknown said...

ಪ್ರಕಾಶಣ್ಣ.. ಸೂಪರ್. ಭಾವನೆಗಳ ವರ್ಣನೆ..ಸೂಪರ್..

ಹ೦ಗೆ ಸುಮ್ನೆ ಒ೦ದು ಪ್ರಶ್ನೆ. ಪುರುಷ ಧೂರ್ತನೇ ಆದರೂ..

"ಬೇಲಿಯ ಅಗತ್ಯ". ಇದು ನಾವು ಅರ್ತ ಮಾಡಿಕೊ೦ಡ ಹಾಗೆ ಅಲ್ಲವೆ. ನೀವು ಹೇಳಿದ ಸತ್ಯ ಬಿಟ್ಟು.. ನಮ್ಮದೆ೦ಬ ಸಮಾಧಾನ, ಧೈರ್ಯ, ನೆಮ್ಮದಿಯೂ ಸಿಗಬಹುದಲ್ಲವೆ.
ಚ೦ದಿರನೇನೋ ಚ೦ದದವ. ತಾರೆಗೂ ಇಸ್ಟದವ.. ಆದೇ ಚ೦ದಿರನ ಬದಲು ಸೈತಾನ ಬ೦ದಿದ್ದರೆ. ಅಥವಾ ಸೈತಾನರು ಬ೦ದಿದ್ದರೆ.

ಮಳೆಯಾದಲ್ಲಿ ಪ್ರಕ್ರತಿ ಹಸನಾಗುತ್ತದೆ..ಅದೇ ಮಳೆಯು ರೌದ್ರವಾದಲ್ಲಿ ಪ್ರಳಯವಾಗುತ್ತದೆ.. ಆಚಾರ ಮತ್ತೆ ಅನಾಚಾರವೂ ಹೀಗೇ ಅಲ್ಲವೇ?

Subrahmanya Bhat said...

ಪ್ರೇಮವೋ ಕಾಮವೋ ಅಪ್ಪುಗೆಯಲ್ಲಿ ಎಲ್ಲವು ಅರ್ಥವಾಗುತ್ತದೆ .......... ಅದ್ಭುತ ಪ್ರಕಾಶಣ್ಣ..ಮನಸ್ಸಿಸಿನ ವಿವಿಧ ಮಝಲುಗಳ ಅನಾವರಣ ನಿಯಮ ನಿಯತಿಗಳನ್ನು ಮೀರಿನಿಲ್ಲುವ ಮನದ ಬಯಕೆಗಳ. ವರ್ಣನೆ ನಿಜವಾಗಿಯೂ ವರ್ಣನಾತೀತ. ನಮ್ಮ ಕತೆಗೆ ಅದ್ಭುತ ಸುಣ್ಣ ಬಣ್ಣ ಎರೆದ ಪ್ರಕಾಷಣ್ಣ ಧನ್ಯವಾದಗಳು

Radha Hegde said...

ಪ್ರಕಾಶಣ್ಣ,
ನಿಮ್ಮ ಎಷ್ಟೋ ಎಷ್ಟೋ ಕಥೆಗಳನ್ನ ನಿದ್ದ ಬರದ ರಾತ್ರಿ ಗಳಲ್ಲಿ ಹುಚ್ಚಿಯಂತೆ ಓದುತ್ತಿದ್ದೆ ನಾನು...... ಪ್ರತೀ ಸಾರಿ ಓದಿದಾಗಲೂ ಹಸಿದ ಜ್ಞಾನದುದರಕ್ಕ ಒಂದೊಳ್ಳೆ "ಊಟ" ಸಿಕ್ಕಷ್ಟು ತೃಪ್ತಿಯಾಗ್ತಿತ್ತು... ಯಾವಾಗಿನಂತೆ ಚೆಂದದ ಕಥೆ :) ತೀರಾ ವೈಚಾರಿಕವಾಗಿ ಮಾತನಾಡುವಷ್ಟು ದೊಡ್ಡವಳಲ್ಲ ನಾನು. ಇಂಥದ್ದೊಂದು ಕಥೆಯನ್ನು ಓದಿಯೂ appreciate ಮಾಡದಿದ್ದರೆ ತಪ್ಪಾಗುತ್ತದೆ. ಆದರೆ ನನ್ನದೊಂದು ಬ್ಲಾಗ್ ಇಲ್ಲವಲ್ಲಾ ಎಂದೊಂದು ಬೇಜಾರು ಇವತ್ತಿಗೆ ಮುಗಿದಿದೆ. ಒಮ್ಮೆ ನೋಡಿ ಬನ್ನಿ :)
"I Too Have a Blog" ಎನ್ನುವ ಸೊಕ್ಕನೊಂದಿಗೆ.....! ;)

ಬರೀ ನೆನಪು..... said...

ನಿಜವಾದ ಪಾತ್ರ ಶೋಧನೆ ಮತ್ತು ವಾಸ್ತವತೆಯ ವ್ಯಕ್ತಿ ಚಿತ್ರಣ , ಇಂಥ ಸನ್ನಿವೇಶಗಳನ್ನು ಬೈರಪ್ಪರವರ ಪರ್ವ ಕಾದಂಬರಿಯಲ್ಲೂ ಸಹ ನೋಡಬಹುದು.
ಇಂದಿಗೆ ಇದನ್ನು ಮೂರುಬಾರಿ ಒದಿದೆ. ಸಾಹಿತ್ಯದ ರಸವನ್ನು ಸವಿದು ಸಂತ್ರುಪ್ತನಾದೆ.
ಧನ್ಯವಾದಗಳು.