Monday, August 26, 2013

..... ಮಧ್ಯಮ ....

ಇದು ಬಲು ಕಷ್ಟದ ಕೆಲಸ...

ಹೇಗೆ ಹೇಳುವದು...?


ನಾನು ಮತ್ತು ಅವಳು..

ಇಬ್ಬರೇ ಇದ್ದಾಗ ಕರೆದು ಹೇಳಿದೆ...

"ತುಂಬಾ ದಿನ ಆಗೋಯ್ತು.. 

ಇಂದು ರಾತ್ರಿ ನಾವಿಬ್ಬರೂ ಭೇಟಿ ಆಗೋಣ  ಬಾ..."

ಹೊಟ್ಟೆ ತುಂಬಾ ನಕ್ಕುಬಿಟ್ಟಳು..

ಇವಳು ನಗುವಾಗ ಕಣ್ಮುಚ್ಚಿ ನಗುತ್ತಾಳೆ...!

ಕಷ್ಟವನ್ನು ನೋಡಲೇ ಇಲ್ಲ ಎನ್ನುವಂತೆ...


ನಕ್ಕಾಗ ಬಲು ಚಂದ ಇವಳು..!


"ಯಾಕೆ..?

ರಾತ್ರಿ ಭೇಟಿ...?.."

"ಮಾತಾಡೋಣ...

ಪ್ರೀತಿ ಮಾಡೋಣ..
ಮುದ್ದು ಮಾಡೋಣ.. "... 

"ಬೇಡ..

ಯಾರಾದರೂ ನೋಡಿದರೆ ಕಷ್ಟ...

ಮರ್ಯಾದೆ....  ಮಾನ ಹರಾಜು..."


"ಇಲ್ಲವೆನ್ನಬೇಡ..

ತುಂಬಾ ದಿನಗಳಾಯ್ತು ನೀನು ಕೈಗೆ ಸಿಗದೆ..
ಪ್ರೀತಿ ಮಾಡೋಣ...

ಮತ್ತೆ..

ಮತ್ತೆ..."

"ಮತ್ತೆ.. ಏನು ..?


ಏನು ಪ್ರಯೋಜನ..?


ನೀನು ಗಂಡೂ ಅಲ್ಲ..

ಹೆಣ್ಣೂ ಅಲ್ಲ.. ನಪುಂಸಕ..!.."

ನಾನು ತಲೆ ತಗ್ಗಿಸಿದೆ...


ಮತ್ತೆ ಅವಳೇ ಸಮಾಧಾನಪಡಿಸಿದಳು...


"ಬೇಸರ ಬೇಡ..

ನಿನಗೆ ಬೇಸರ ಮಾಡಬೇಕು  ಅಂತ ಹೇಳಿದ್ದಲ್ಲ.... 

ನಮ್ಮಿಬ್ಬರ 

ವರ್ತಮಾನದ ಏಕಾಂತದಲ್ಲಿ ಮತ್ತೇನು ಮಾಡಲು ಸಾಧ್ಯ?

ಪ್ರೀತಿ.. 

ಪ್ರೇಮ.. ಪ್ರಣಯ..?

ಸಲ್ಲಾಪದ ಮಾತುಗಳು... ?


ಏನೂ ಆಗದ ಸ್ಥಿತಿಯಲ್ಲಿ .. 

ಸುಮ್ಮನಿದ್ದುಬಿಡುವದು ಬುದ್ಧಿವಂತಿಕೆ.... "

ಅಷ್ಟರಲ್ಲಿ ಯಾರೋ ಬಂದ ಸದ್ದಾಯಿತು...


ಆಕೆ ಅಲ್ಲಿಂದ ಹೊರಟು ಹೋದಳು...


ನಿಮಗೆ ನನ್ನ ವಿಷಯ ಗೊತ್ತಿರಬಹುದು...


ನಾನು ಮಧ್ಯಮ ಪಾಂಡವ... 

ಅರ್ಜುನ... 

ಹಿಂದೊಮ್ಮೆ...

ಊರ್ವಶಿ ನನ್ನನ್ನು ಬಯಸಿದ್ದಳು..

"ನೀನು .. 

ಇಂದ್ರನ ಲೋಕದ ಅಪ್ಸರೆ..

ಇಂದ್ರ ನನಗೆ ತಂದೆ..


ನನ್ನ ತಾಯಿಯನ್ನು ಪ್ರೀತಿಸುವದೆ..?... 


ನಿನ್ನೊಡನೆ ಪ್ರಣಯ ನನ್ನಿಂದಾಗದು..."


"ಪಾರ್ಥ...

ನನ್ನದು ಯಾವುದೇ ಬಂಧನ ಬಯಸದ ಸಂಬಂಧ...

ಒಂದು ರಾತ್ರಿಯ...

ಒಂದು ಕ್ಷಣದ 
ಒಂದು ಸಮಾಗಮ ಕೇಳುತ್ತಿರುವೆ...

ಅಮೇಲೆ ನೀನ್ಯಾರೋ.. 

ನಾನ್ಯಾರೋ...!

ಇದೆಲ್ಲ ಇಲ್ಲಿ ಸಹಜ...


ಬೇಲಿ..  

ಅವಶ್ಯವಾಗಿ ಇರಬೇಕು...  
ನಮ್ಮ ಸಂತೋಷವನ್ನು 
ನಾವು ಪಡೆದ ಮೇಲೆ ಬೇಲಿಯನ್ನು ಹಾಕಿಕೊಳ್ಳಬೇಕು.. 

ಬೇಲಿ ಸಂತೋಷವನ್ನು ಹಾಳು ಮಾಡಬಾರದು... 


ಬಾ.. ಪಾರ್ಥಾ ಬಾ... "


ಬೇಲಿ ದಾಟಲು ನನ್ನ ಮನಸ್ಸು ಒಪ್ಪಲಿಲ್ಲ...


ಊರ್ವಶಿಗೆ ಕೋಪ ಬಂತು...


" ಬಯಸಿ ಬಂದ ಹೆಣ್ಣನ್ನು ನಿರಾಕರಿಸುವದು ಪೌರುಷವಲ್ಲ ..


ನಪುಂಸಕತೆ !!


ನನ್ನನ್ನು ನಿರಾಕರಿಸಿದ ... 

ನೀನು ಒಂದು ವರುಷ ನಪುಂಸಕನಾಗು ...!!... "

ಮೂರು ಲೋಕದ ಗಂಡ... 

ಮಹಾ ಪರಾಕ್ರಮಿ...

ಶೂರ..ವೀರ ಈ ಅರ್ಜುನ ಈಗ ನಪುಂಸಕ ...!


ಗಂಡು ಅಲ್ಲ.. 

ಹೆಂಗಸೂ ಅಲ್ಲ.... !

ವಿಚಿತ್ರವಾದ ಮನಸ್ಥಿತಿ.... ದೇಹಸ್ಥಿತಿ... !


ಈಗ... 

ವಿರಾಟ ಮಹರಾಜನ ಆಸ್ಥಾನದಲ್ಲಿ ... 
ಅಜ್ಞಾತವಾಸವನ್ನು  .. 
ನಾವು ಪಾಂಡವರು ಪೂರೈಸುತ್ತಿದ್ದೇವೆ...

ವಿರಾಟನ ಮಗಳು ಉತ್ತರೆಗೆ ನಾಟ್ಯವನ್ನು ಹೇಳಿಕೊಡುವ ಕೆಲಸ ನನ್ನದು..


ನಾನು ಬೃಹನ್ನಳೆ ...


ಈ ಜಗತ್ತಿನ ಭಗವಂತ..

ಶಿವನೊಡನೆ ಮಲ್ಲಯುದ್ಧ ಮಾಡಿ "ಭೇಷ್.." ಎನಿಸಿಕೊಂಡವ
ಇಂದು ಷಂಡನಾಗಿದ್ದೇನೆ..

ನಾಗಲೋಕದ ಉಲೂಚಿ...

ಚಿತ್ರಾಂಗದೆ..
ಸುಭದ್ರೆ.. ದ್ರೌಪದಿಯರ ಚಂದವನ್ನು ..
ಸುಖವನ್ನು ಮನಸಾರೆ ಅನುಭವಿಸಿದವ ನಾನು...!

ಅರಮನೆಯ ಸುಂದರ ತರುಣಿಯರ ..

ಚಂದಗಳ ಜೊತೆಯಲ್ಲಿರಬೇಕು...

ಅವರಿಗೋ..

ನಾನೆಂದರೆ ಅಲಕ್ಷ...
ಅಪಹಾಸ್ಯ.. !

ಅರಮನೆಯ ನಾಟ್ಯ ಶಾಲೆಯ ಪಕ್ಕದಲ್ಲಿ ರಾಣಿಯ ಸಹಾಯಕಿ.. 

ಸೈರಂದ್ರಿ..
ನನ್ನ ಮಡದಿ.. ದ್ರೌಪದಿ .. 

ಬಿಚ್ಚು ಕೂದಲಿನ..

ಅಪೂರ್ವ ಸೌಂದರ್ಯ ರಾಶಿ ನನ್ನ ದ್ರೌಪದಿ..!

ನೋಡಿದರೆ... 

ಮತ್ತೆ.. ಮತ್ತೆ ನೋಡಬೇಕೆನ್ನಿಸುವ .. 
ಮತ್ತೇರಿಸುವ.. 
ಮನ ಕೆರಳಿಸುವ ಸೌಂದರ್ಯ ಅವಳದ್ದು... !

ಅಜ್ಞಾತವಾಸದ ಮುನ್ನ ... 

ನಾವು ಪಾಂಡವರು ಹಾಕಿಕೊಂಡ ಕಟ್ಟು ಪಾಡು ನನಗೆ ನೆನಪಿದೆ... 

ಏನು ಮಾಡಲಿ...?


ನಪುಂಸಕನಾದರೂ.. ..

ಉಪ್ಪು ಹುಳಿ ತಿನ್ನುವ ದೇಹವಿದೆಯಲ್ಲ... 

ದೈಹಿಕ .. 

ಕಾಮಾನೆಗಳ ಸುಖ ಅನುಭವಿಸಿದ ನೆನಪು 
ಆಸೆಗಳ ರುಚಿ ಇದೆಯಲ್ಲ... !

ಹಾಗಾದರೆ ... 

ಸುಖ ಅನುಭವಿಸಲಾಗದ.. 
ನಪುಂಸಕನಿಗೆ  ಕಾಮದ ಆಸೆ ಯಾಕೆ ಬರಬೇಕು ?.... 

ಮೊದಲು 

ಇದೇ ದ್ರೌಪದಿಯ ಮೇಲೆ ವಿಜೃಂಭಿಸಿದ್ದೇನೆ. .. !

ಈಗ  ಎಲ್ಲದಕ್ಕೂ ಅಜ್ಞಾತವಾಸ... 

ಆಸೆ.. 
ಬಯಕೆಗಳಿಗೂ ಸಹ... 

ಉದ್ರೇಕವಿಲ್ಲದಿದ್ದರೂ...

ಒಳಗೊಳಗೆ ಕುದಿಯುವ ..
ಬಯಕೆಯ 
ಕಾಮನೆಯ ಕೊಪ್ಪರಿಗೆ ಇದೆಯಲ್ಲ... !

ನಿನ್ನೆಯ ಪೌರುಷವನ್ನು ಕೆಣಕುತ್ತಿರುತ್ತದೆಯಲ್ಲ... 


ಕೆದಕುವ ಆಸೆಗಳಿಗೆ ತೃಪ್ತಿಯನ್ನು ಎಲ್ಲಿ ಹುಡುಕಲಿ ? ?


ಇಲ್ಲದ 

ಸಂವೇದನೆಗಳಿಗೆ ಸಮಾಧಾನ ಎಲ್ಲಿಂದ ತರಲಿ  ?

ಬಲು ಕಷ್ಟ.. ಈ ನಪುಂಸಕ ಬದುಕು... 


ದಿನಕ್ಕೆ ಒಂದೆರಡು ಬಾರಿಯಾದರೂ ನಮ್ಮ ಭೇಟಿ ಆಗುತ್ತಿತ್ತು.... 

ರಾಜ್ಯ.. 

ಅಧಿಕಾರ.. 
ನನ್ನತನವನ್ನೂ  ಕಳೆದುಕೊಂಡ 
ನನಗೆ 
ಇವಳು ನನ್ನ ಮಡದಿಯೆಂಬ ಅಧಿಕಾರದ  ಅಹಂ ಇಣುಕುತ್ತಿತ್ತು.. ಕೆಣಕುತ್ತಿತ್ತು.. ... 

ಆಸೆಗಳೇ ಹಾಗೆ..
ಯಾವಾಗ ..
ಹೇಗೆ ಹೊಂಚು ಹಾಕುತ್ತವೆ ಎನ್ನಲಿಕ್ಕಾಗಲ್ಲ..

ಒಮ್ಮೆ.. ..

ನಾನೊಬ್ಬನೆ ಇರುವಾಗ ದ್ರೌಪದಿ ಸಿಕ್ಕಳು...

"ಇಂದು ರಾತ್ರಿ ಬಾ..."


" ಬರುವದಿಲ್ಲ...."

"ನಮ್ಮಿಬ್ಬರದು... 

ಒಂದು ಅಕ್ರಮ ಸಂಬಂಧವೆಂದು ತಿಳಿದು...
ಸಂತೋಷಕ್ಕಾಗಿ.. .. 
ಒಂದು ಕ್ಷಣದ ರೋಮಾಂಚನೆಗಾದರೂ ...  ಬಾ..."

"ಅಕ್ರಮ ಸಂಬಂಧ ರೋಮಾಂಚನವೆ .. ! ...?.. "


"ಹೌದು...

ಅದಕ್ಕಾಗಿಯೇ ಅಲ್ಲವೆ ಈ ಜಗತ್ತಿನಲ್ಲಿ ಅಕ್ರಮ ಸಂಬಂಧಗಳಿರುವದು...

ಕಾಮದ ರುಚಿ ಎಲ್ಲರಿಗೂ ಸಹಜ... 


ಆದರೆ ಅಕ್ರಮಗಳು ಹಾಗಲ್ಲವಲ್ಲ... "


" ನನಗೇನು ಗೊತ್ತು...?

ನೀವು ರಾಜರು..
ಅಧಿಕಾರದಲ್ಲಿರುವವರು... 

ಬಹಳ ಸಂಬಂಧಗಳನ್ನು ...

ಸಕ್ರಮ ಮಾಡಿಕೊಂಡವರು.."

ಹೆಣ್ಣಿನ  ನಾಲಿಗೆ ಬಾಣಕ್ಕಿಂತಲೂ ಹರಿತ... 


" ನೀನು .. 

ಹೇಗಾದರೂ ಬಾ.. 

ಒಬ್ಬ ಉನ್ಮತ್ತ ಗಂಡಸನ್ನೂ 
ನಪುಂಸಕನನ್ನಾಗಿ ಮಾಡುವ ಶಕ್ತಿ ಹೆಣ್ಣಿಗಿದೆ.. 

ನಪುಂಸಕನನ್ನು 
ಗಂಡಸನ್ನಾಗಿ ಮಾಡುವ ತಾಕತ್ತು ಹೆಣ್ಣಿಗಿದೆ.. 

ನನ್ನನ್ನು 
ನಪುಂಸಕನೆಂದು  ಹೀಯಾಳಿಸ ಬೇಡ...

ನಾನು ಗಂಡಾಗ ಬೇಕು.. 
ನಿನಗೆ ಗಂಡನಾಗಬೇಕು... "

ಸೈರಂದ್ರಿ 

ಮತ್ತೊಮ್ಮೆ ನಕ್ಕಳು...

ಮೋಹಕವಾಗಿ !

ಕಣ್ಮುಚ್ಚಿ... 
ಬಲು ಚಂದದಿಂದ...!

"ಯಾಕೆ ನಗ್ತೀಯಾ...?"


"ಅರಮನೆಯಲ್ಲಿರುವಾಗಲೂ ನಿನ್ನ  ಪರಾಕ್ರಮ ನನಗೆ ಗೊತ್ತಿಲ್ಲವೆ?.."


"ಏನು ಗೊತ್ತಿದೆ...?.."... 


"ಹಾಸಿಗೆಯಲ್ಲಿ  ನೀವಿದ್ದರೂ...


ನೀವು 

ಹೆಚ್ಚಿನ ಬಾರಿ ನನ್ನೊಡನೆ ಇರುತ್ತಿರಲಿಲ್ಲ...

ನಿಮ್ಮ ವೈರಿ... 

 ಕರ್ಣನ ಬಗೆಗೊ..
ಧುರ್ಯೋಧನನ ಬಗೆಗೊ...ಯೋಚಿಸುತ್ತ.. 
ನಿಮ್ಮ ರಾಜಕೀಯದಲ್ಲಿ ನೀವು ಇರುತ್ತಿದ್ದೀರಿ...

ನೀವು ಗಂಡಸರೇ.. ಹೀಗೆ... !.. 

ದಾಂಪತ್ಯದಲ್ಲಿ  ಮಡದಿಯೊಡನೆ ಇರುವದು ಕಡಿಮೆ.. "

ನನಗೆ ಸೋಜಿಗವೆನಿಸಿತು...


" ನಿನ್ನೊಡನೆ .. ಏಕಾಂತದಲ್ಲಿ 

ನಾನಿರುತ್ತಿರಲಿಲ್ಲ..

ಸರಿ..


ನೀನು ಇರುತ್ತಿದ್ದೆಯಾ?..."


ದ್ರೌಪದಿ ಸ್ವಲ್ಪ ಹೊತ್ತು ಸುಮ್ಮನಿದ್ದಳು...


"ಪಾರ್ಥಾ.... 

ಅನಭವಿಸುವಾಗ ತನ್ಮಯತೆ ಇರಬೇಕು....

ತನ್ಮಯತೆ ... 

ತಾದ್ಯಾತ್ಮತೆ... 
ಇಲ್ಲದಿದ್ದರೆ ಅದು ಸುಖವೇ ಅಲ್ಲ..."

"ನಾನು ಕೇಳಿದ್ದು..

ಆಗ ನೀನು ನನ್ನ ಜೊತೆ ಇರುತ್ತಿದ್ದೆಯಾ?.."

"ನಿನಗೆ  ಗೊತ್ತಾಗುತ್ತಿ‌ರಲಿಲ್ಲವೆ..?.."


"ಪಾಂಚಾಲಿ.... 

ನೀನು ಕಣ್ಮುಚ್ಚಿ ಇರುತ್ತಿದ್ದೆ...

ಮುಚ್ಚಿದ ಕಣ್ಣುಗಳ 

ಭಾವನೆಗಳು ಹೇಗೆ ಅರ್ಥವಾಗುತ್ತದೆ ...?...

ಹೇಗೆ ಅರ್ಥ ಮಾಡಿಕೊಳ್ಳಬೇಕು...? 


ನೀನು... 

ನನ್ನೊಡನೆ ಇದ್ದರೂ... 
ಕಣ್ಮುಚ್ಚಿದಾಗ 
ಧರ್ಮಜ.. ಭೀಮರ 
ನೆನಪು ಬಾರದಿರುತ್ತದೆಯೇ ?

ಸುಖ ಸಿಗುವದಲ್ಲ... 

ಸುಖವನ್ನು ಪಟ್ಟುಕೊಳ್ಳಬೇಕು... 

ಸುಖ..

ಹೋಲಿಕೆಯಲ್ಲಿರುತ್ತದೆ ಅಲ್ಲವಾ?..."

ದ್ರೌಪದಿ ಕಿಲ ಕಿಲನೆ ನಕ್ಕಳು...!


ನಗು ... 

ಒಂದು ಉತ್ತರವೆಂದು ನನಗೆ ಗೊತ್ತಿರಲಿಲ್ಲ.....

 ನನ್ನ ಜೊತೆ ಮಿಲನವನ್ನು ಯಾಕೆ ನಿರಾಕರಿಸುತ್ತಾಳೆ ಈ ಸೈರಂದ್ರೀ...?


ನನಗೆ ಅರ್ಥವಾಗಲಿಲ್ಲ...


ಈಗ ನಪುಂಸಕನಾದರೂ ... 

ನಾನು ಗಂಡು...

ಗಂಡಸಿನ .. 

ಪುರುಷನ ಅಹಂಕಾರವನ್ನು ಮನಸಾರೆ ಅನುಭವಿಸಿದವನು...

ಒಂದು ಕಾಲದಲ್ಲಿ ..

ಅನುಭವಿಸಿದ ಭಾವನೆಗಳು.. ..
ಸುಖದ ನೆನಪುಗಳು  ಇನ್ನೂ ಹಸಿರಾಗಿ ಇದೆಯಲ್ಲ....

ಆಗ..

ವಿಜೃಂಭಿಸುವಾಗ   ಹರಿದ ಬೆವರುಗಳ..
ತಂಪು..
ಕಂಪು ಇನ್ನೂ ಕಾಡುತ್ತಿದೆ...!

ಮತ್ತೊಮ್ಮೆ ದ್ರೌಪದಿಯೊಡನೆ ವಿಜೃಂಭಿಸಬೇಕು... ....


ಸುಸ್ತಾದ... 

ಅವಳ ಸಂತೃಪ್ತಿಯ .... 
ತೇಲುಗಣ್ಣಿನ ನೋಟವನ್ನು ಮನಸಾರೆ ನೋಡಿ ಆನಂದಿಸಬೇಕು....

ಮತ್ತೆ....

ಮೂರು ನಾಲ್ಕು ದಿನ ಸೈರಂಧ್ರಿ ನನಗೆ ಕಾಣಲಿಲ್ಲ...

ರಾಜಕುಮಾರಿ ಉತ್ತರೆಗೆ ನಾಟ್ಯ ಹೇಳಿಕೊಡುತ್ತಿದ್ದರೂ..

ಮನಸ್ಸು ಸೈರಂಧ್ರಿಯ ಬಗೆಗೆ ಯೋಚಿಸುತ್ತಿತ್ತು..

ದ್ರೌಪದಿ..

ನನ್ನ ಪೌರುಷದ ಅಪಹಾಸ್ಯ ಮಾಡಿದಳೆ...?

ಸಾವಿರ ಮುಳ್ಳುಗಳಿಂದ ಚುಚ್ಚಿದಂತಾಯಿತು...


ದ್ರೌಪದಿಯ ಮೇಲೆ ಕೋಪ ಉಕ್ಕಿಬಂತು...


ಇಂದು ಬೆಳಿಗ್ಗೆ...

ನಾನು ನಾಟ್ಯ ಶಾಲೆಯಲ್ಲಿ ಒಬ್ಬನೆ ಇದ್ದೆ..

ರಾಜಕುಮಾರಿ ಇನ್ನೂ ಬಂದಿರಲಿಲ್ಲ....

ವೀಣೆಯನ್ನು ಹಿಡಿದುಕೊಂಡು ವಿರಹದ ರಾಗ ನುಡಿಸುತ್ತಿದ್ದೆ...

ನುಡಿಸುತ್ತ..

ನುಡಿಸುತ್ತ ತನ್ಮಯತೆಯಲ್ಲಿ  ಕಳೆದು ಹೋಗಿದ್ದೆ...

ಯಾರೋ ಬಂದಂತೆ... 

ಕಾಲು ಗೆಜ್ಜೆಯ ಸದ್ದು... ನನ್ನನ್ನು ಎಚ್ಚರಿಸಿತು..

ಎದುರಿಗೆ ನನ್ನ ದ್ರೌಪದಿ... !


ಅದೇ ತಾನೆ ಸ್ನಾನ ಮಾಡಿ ಬಂದಂತಿತ್ತು..


ಕಣ್ಣುಗಳು ನಗು ಸೂಸುತ್ತಿದ್ದವು... 


"ಇಂದು ಬರುತ್ತೇನೆ... 

ರಾತ್ರಿ.. ನಿಮ್ಮ ಏಕಾಂತದಲ್ಲಿ...."

ಇನ್ನೊಮ್ಮೆ ದ್ರೌಪದಿಯ ಚಂದದ ಮುಖವನ್ನು ನೋಡಿದೆ..


ಓಹ್...!

ರಜಸ್ವಲೆಯಾಗಿ ಮಿಂದು ಬಂದಿದ್ದಾಳೆ... !

ಬಯಕೆ ತುಂಬಿದ ಕಣ್ಣುಗಳು  .. 

ನನ್ನನ್ನು ಆಸೆಯಿಂದ ಬಯಸಿ.. ಬಯಸಿ ನೋಡುತ್ತಿದ್ದವು...

"ಪಾಂಚಾಲಿ.... 

ನೀನು ರಾತ್ರಿ... 
ಪಾರ್ಥನನ್ನು ಬಯಸಿ ಬಂದರೂ..
ಅಲ್ಲಿ ಸಿಗುವವ  " ಬೃಹನ್ನಳೆ  " ... ಪರವಾಗಿಲ್ಲವೆ ?...."

ದ್ರೌಪದಿ ಮತ್ತೊಮ್ಮೆ ನಕ್ಕಳು..


"ಪಾರ್ಥಾ.. 


ವಾಸ್ತವದ ಮುಳ್ಳು ಚುಚ್ಚುತ್ತಿದ್ದರೂ... 

ಭಾವಲೋಕದ ಗುಲಾಬಿ ಹೂ ಸುಂದರ...!

ಕಲ್ಪನೆಗಳು ಸೊಗಸು....


ಕನಸುಗಳು ಅದಕ್ಕಾಗಿಯೇ ಇಷ್ಟವಾಗುತ್ತವೆ...


ಮನಸ್ಸು..

ದೇಹ..
ಬಯಸುವದು ಮೂರು ಲೋಕದ ಗಂಡನಾದ ಪಾರ್ಥನನ್ನು.. 

ಸಿಗುವದು "ಬೃಹನ್ನಳೆ "...

ಇದೇ ದಾಂಪತ್ಯವಲ್ಲವೆ...?..

ಪಾರ್ಥ..

ಪ್ರತಿಯೊಂದೂ ಹೆಣ್ಣು ಸಹ .. 
"ಪಂಚ ಪಾಂಡವರನ್ನು ಬಯಸುತ್ತಾಳೆ..."

"ಹೌದಾ...!!..?"


"ಹೌದು... ಪಂಚಪಾಂಡವರೆಂದರೆ..

ಪ್ರೀತಿ...
ಭದ್ರತೆ..
ಸುಖ..
ಸಂತಾನ..
ಒಂದು ಮರ್ಯಾದೆಯ ಭರವಸೆಯ ಬದುಕು.."

ನಾನು ಸ್ವಲ್ಪ ಹೊತ್ತು ಸುಮ್ಮನಿದ್ದೆ...


" ಪಾಂಚಾಲಿ...


ಪ್ರತಿಯೊಬ್ಬ ಗಂಡ.. 

ಪತಿ.. 
ಹೆಂಡತಿಯಲ್ಲಿ ಒಬ್ಬ ಪತಿವೃತೆಯನ್ನು ಬಯಸುತ್ತಾನೆ...

ಆದರೆ ಅವನೊಳಗಿನ ಗಂಡಸು ಹಾಗಲ್ಲ..."


"ಏನು...?"


"ಪ್ರತಿಯೊಬ್ಬ ಗಂಡಸು.. ಪಾಂಚಾಲಿಯನ್ನು ಇಷ್ಟಪಡುತ್ತಾನೆ..."


ದ್ರೌಪದಿಯ ಕಣ್ಣುಗಳು ಬಹಳ ಮಾತನಾಡುತ್ತವೆ... 


ಅವಳ ಆಸೆ ತುಂಬಿದ ಕಣ್ಣುಗಳು ನನ್ನನ್ನು ಕೆರಳಿಸುತ್ತಿತ್ತು...


"ಪಾರ್ಥಾ...

ನಾನು ದ್ರೌಪದಿ .. ..

ನಿನ್ನೊಳಗಿನ ಗಂಡಸು  ಬಯಸುವ ಪಾಂಚಾಲಿ..  ...!


ಇಂದು ನಿನ್ನ ಏಕಾಂತದ ರಾತ್ರಿಯಲ್ಲಿ ನಿನ್ನ ಜೊತೆ ಇರುವೆ...."


ನನಗೆ ಸಂತೋಷವಾಯಿತು...


ಕೈಯಲ್ಲಿದ್ದ  ವೀಣೆಯನ್ನು ಪಕ್ಕದಲ್ಲಿಟ್ಟೆ...


ಆಗ ನನ್ನ ಸೆರಗು ಜಾರಿತು..


ಕುಪ್ಪುಸ ಕಾಣುತ್ತಿತ್ತು... 


"ಸೈರಂಧ್ರೀ...

ಇಂದು ಬರುವದು ಬೇಡ... 
ಇನ್ನೊಮ್ಮೆ ಭೇಟಿಯಾಗೋಣ..."

ನನಗೆ..

ನಾನು ಉಟ್ಟಿದ್ದ ಸೀರೆಯನ್ನು ಸರಿಪಡಿಸಿಕೊಳ್ಳಬೇಕಿತ್ತು....

ನನ್ನ ಹೊಕ್ಕಳು ಬೇರೆಯವರಿಗೆ ಕಾಣಿಸದಂತೆ ಮರೆಮಾಚಬೇಕಾಗಿತ್ತು...


"ಪಾರ್ಥಾ... 


ನಪುಂಸಕತೆ.. .. 

ಬದುಕಿನ ಕಾಲಘಟ್ಟದಲ್ಲಿ 
ಕೆಲವರಿಗೆ... 
ಕೆಲವೊಮ್ಮೆ 
ಮನಸ್ಥಿತಿ... ದೇಹಸ್ಥಿತಿ.... 

ನಪುಂಸಕತೆ... .. 

ಪ್ರತಿಯೊಬ್ಬ ಗಂಡಸನ್ನು .. ಹೆಣ್ಣನ್ನೂ ಕಾಡುವ... 

ಜೊತೆಯಾಗಿ ... 

ಬದುಕುವ ದಾಂಪತ್ಯದಲ್ಲಿ  ಅನಿವಾರ್ಯವಾದ ಒಂದು ಸ್ಥಿತಿ... 

ನಿನಗೆ.. 

ಈ ಸ್ಥಿತಿ ಅಸಹನೀಯವಾಗಿರಬಹುದು.... 

ಸಹಿಸಿಕೊಳ್ಳುವದು ನನಗೆ ದೊಡ್ಡ ಸಂಗತಿಯಲ್ಲ...  


ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ... 

"ಬೃಹನ್ನಳೆಗಳೇ.. ... 

ಕೆಲವರು ಮಾನಸಿಕವಾಗಿ... 

ಇನ್ನು ಕೆಲವರು ದೈಹಿಕವಾಗಿ... "

ದ್ರೌಪದಿ ಕಣ್ಮುಚ್ಚಿ ಗಲಗಲನೆ  ನಕ್ಕಳು...


ನಗು ....

ಎಷ್ಟೆಲ್ಲಾ ಮಾತನಾಡುತ್ತದೆ.. . !!




(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ....)


61 comments:

Santosh vaidya said...

ಹೆಣ್ಣು ಒಂದು ಮಾಯೆ ಇದ್ದಂತೆಯೇ...
ಅವಳ ನಗುಲಿನಲ್ಲೇ ಎಲ್ಲವನ್ನು ಹೇಳ ಬಲ್ಲಳು...
ತುಂಬಾ ಚನ್ನಾಗಿದೆ...

Ittigecement said...

ಸಂತೋಷ್...

ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನವಿತ್ತು..
ಹೋಗಿದ್ದೆ..

ಚೌಕಿ ಮನೆಯಲ್ಲಿ ನನ್ನ ಮೆಚ್ಚಿನ ಕಲಾವಿದ ಶ್ರೀ ನಿಲ್ಕೋಡ್ ಶಂಕರಣ್ಣ ಸ್ತ್ರೀ ವೇಷಕ್ಕಾಗಿ ತಯಾರಿ ಮಾಡಿಕೊಳ್ಳುತ್ತಾ ಇದ್ದರು..

ನಾನು ಅವರು ತಯಾರಾಗುವ ಫೋಟೊಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದೆ...

" ಹೆಣ್ಣಾಗುವದು ಬಹಳ ಕಷ್ಟ ಅಲ್ಲವಾ?" ಅಂತ ಕೇಳಿದೆ...

"ಹಾಗೇನಿಲ್ಲ..
ಹೆಣ್ಣಿನ ವೇಷ ಕಷ್ಟವೆನಿಸ್ತಾ ಇಲ್ಲ.."

"ಪುರಾಣದಲ್ಲಿ ..
ಒಮ್ಮೆ ಗಂಡಸಾಗಿದ್ದ.. ಬ್ರಹನ್ನಳೆಯ ಮನಸ್ಥಿತಿ ಏನಿರ ಬಹುದು...?"

ಮೂಗಿಗೆ ನತ್ತು ಸಿಕ್ಕಿಸಿ ಕೊಳ್ಳುತ್ತಿದ್ದ ಅವರು ಅವರು ಒಮ್ಮೆ ನನ್ನನ್ನು ನೋಡಿದರು..

ನಕ್ಕರು..

ಆ ನಗು ಯಾವ ಹೆಣ್ಣಿನ ನಗುವಿಗೂ ಕಡಿಮೆ ಇಲ್ಲವಾಗಿತ್ತು...

ನಾಳೆ ಅವರ ಫೋಟೊ ಇಲ್ಲಿ ಹಾಕುವೆ...

ಆಗ ತಲೆಗೆ ಹೋಳೆದದ್ದು ಈ ಕಥೆ....

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಈಶ್ವರ said...

ಕಲ್ಪನೆಗಳಿಗೆ ರಂಗು ತಂದಿದ್ದೀರಾ ಪ್ರಕಾಶಣ್ಣ.. ಜೈ ಹೋ :) ನಿಮ್ಮದೇ ಶೈಲಿಯಲ್ಲಿ.. ಚೆನ್ನಾಗಿದೆ ಚೆನ್ನಾಗಿದೆ.

mshebbar said...

ಮಿತಿ ಮೀರದ ಕಲ್ಪನೆ !!!

Ittigecement said...

ಪ್ರೀತಿಯ ಈಶ್ವರ್...

ಮಹಾ ಪರಾಕ್ರಮಿ..
ವೀರ..
ಪುರುಷ ಸಿಂಹ ಅರ್ಜುನ ಒಂದು ವರುಷ ನಪಂಸಕನಾಗಿರುತ್ತಾನೆ... !!

ಚಿತ್ರಾಂಗದೆ..
ಸುಭದ್ರೆ..
ಉಲೂಚಿ..
ದ್ರೌಪದಿಯರ ಸೌಂದರ್ಯವನ್ನು ಸೂರೆಗೈದ ಮೂರು ಲೋಕದ ಗಂಡ ನಪಂಸಕನಾಗುತ್ತಾನೆ...

ಪುರುಷತ್ವ..
ಷಂಡತ್ವ ಜೊತೆ ಜೊತೆಯಾಗಿರುವ ಸ್ಥಿತಿ..

ಈ ಮಹಾಭಾರತದಲ್ಲಿ ಏನೆಲ್ಲ ಇದೆ... !!

ಜಗತ್ತಿನ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿ ಏನಾದರೂ ದೊರಕಿರಬೇಕಾದ ಕೃತಿ ಯಾವುದಾದರೂ ಇದ್ದಲ್ಲಿ ಅದು ಮಹಾಭಾರತ.. !

ಓದುಗನ ..
ಓದಿನ.. ತಿಳುವಳಿಕೆಯ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥ ಕೊಡುವ ಕೃತಿ ಇದು !!

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಚುಕ್ಕಿಚಿತ್ತಾರ said...

ಸುಂದರವಾಗಿ ಹೆಣ್ಣಿನ ಮನಸ್ಥಿತಿಯನ್ನು ವರ್ಣಿಸಿದ್ದೀರಿ, ಹೆಣ್ಣು ಪಂಚ ಪಾಂಡವರನ್ನು ಬಯಸುವ ಕ್ರಮ ಹೇಗೆ ಎಂದು. ನಿಜ .. ಹೆಣ್ಣಿಗೆ ಬೇಕಾಗಿರುವುದು ನೀವು ಹೇಳಿದ ಪಂಚಪಾಂಡವರೇ!
ಪ್ರೀತಿ...
ಭದ್ರತೆ..
ಸುಖ..
ಸಂತಾನ..
ಒಂದು ಮರ್ಯಾದೆಯ ಭರವಸೆಯ ಬದುಕು.."

ಅಭಿನಂದನೆಗಳು

ಸುಮ said...

ಪ್ರತೀ ಬಾರಿ ಓದಿದಾಗಲೂ ಒಂದೊಂದು ಸನ್ನಿವೇಶದಲ್ಲೂ ಒಂದೊಂದು ಅರ್ಥ ಹೊಳೆಯಬಲ್ಲ ತಾಕತ್ತು ಇರುವ ಮಹಾಭಾರತ ನಿಜಕ್ಕೂ ವಿಶ್ವದ ಶ್ರೇಷ್ಠ ಸಾಹಿತ್ಯ. ದ್ರೌಪದಿ ಮತ್ತು ಬೃಹನ್ನಳೆಯರನ್ನು ಬಳಸಿಕೊಂಡು ದಾಂಪತ್ಯದ ಸೂಕ್ಷ್ಮಗಳನ್ನು ಕಟ್ಟಿಕೊಡುವ ಸುಂದರವಾದ ಕತೆ ಹೆಣೆದಿದ್ದೀರ ಪ್ರಕಾಶಣ್ಣ ಇಷ್ಟವಾಯ್ತು .

ದಿನಕರ ಮೊಗೇರ said...

ಪ್ರಕಾಶಣ್ಣ,
ಎಷ್ಟು ಅರ್ಥ ಇದೆ ಈ ಕಥೆಯಲ್ಲಿ.... ಹೌದು... ನೀವು ಹೇಳಿದ ಹಾಗೆ ಪ್ರತೀ ಹೆಣ್ಣು ಗಂಡಿನ ನಪುಂಸಕತೆಯ ಜೊತೆಯೆ ಬದುಕುತ್ತಾಳೆ ಮತ್ತು ನಿಭಾಯಿಸುತ್ತಾಳೆ.... ಅರ್ಜುನನ ಬ್ರಹನ್ನಳೆ ಪಾತ್ರದ ಹಿಂದೆ ಈ ಕಥೆ ಇತ್ತೆಂದು ಗೊತ್ತಿರಲಿಲ್ಲ.... ಧನ್ಯವಾದ....
ಹಾಗೆಯೇ ಒಬ್ಬ ಗಂಡಸು ಬಯಸುವುದು ಪಾಂಚಾಲಿಯನ್ನು .... ಆದರೆ ಗಂಡ ಬಯಸುವುದು ಪತಿವ್ರತೆಯನ್ನು.... ಎಷ್ಟು ಭಿನ್ನತೆ ಇದೆಯಲ್ಲವೇ " ಗಂಡನಿಗೂ... ಗಂಡಸಿಗೂ...."...

ತುಂಬಾ ಸೊಗಸಾದ ಕಥೆ.... ನಿಮ್ಮ ಕಲ್ಪನೆಗೆ.... ಜೈ ಹೋ...

ಸೀತಾರಾಮ. ಕೆ. / SITARAM.K said...

ಅದ್ಭುತ ಕಥೆ !

ಚಿನ್ಮಯ ಭಟ್ said...

ಪ್ರಕಾಶಣ್ಣಾ....ಕಥೆ ಏನೋ ಚೆನ್ನಾಗಿದೆ..ಆದರೆ ದೇಹವೇ ಬದಲಾದಮೇಲೆ ಆ ಥರಹದ ಭಾವನೆ ಬರಲು ಸಾಧ್ಯವಾ???
ನನಗೆ ಗೊತ್ತಿರುವ ಪ್ರಕಾರ ನಪುಂಸಕರ ಮನಸ್ಥಿತಿಯೇ ಬೇರೆ,ಷಂಡರ ಮನಸ್ಥಿತಿಯೇ ಬೇರೆ...
ಕಥೆಯ ಮೊದಲೆಲ್ಲ ಪೌರುಷ್ಯವಿಲ್ಲದ ಗಂಡಸರ ರೀತಿಯ ಮಾತುಗಳು,ಕೊನೆಯಲ್ಲಿ ದೈಹಿಕ ಬದಲಾವಣೆಯ ಸಾಲುಗಳು...
ಹಮ್..ನೋಡಿ ನನಗೇಕೋ ಒಂದಿಷ್ಟು ಗೊಂದಲ...

Unknown said...

ಚೆನ್ನಾಗಿ ಹಿಡಿದಿಟ್ಟಿದ್ದೀರಿ ಭಾವನೆಗಳನ್ನ.ಬಟ್ ಏನೋ ಒಂಥರಾ ದುಗುಡವಾಯ್ತು ಓದುವಾಗ...
- ಚೇತನಾ

sunaath said...

ರೋಮಾಂಚಕ ಮನೋವಿಶ್ಲೇಷಣೆ!

shubha hegde said...

This is the best extracts from your skill of story writting...good attempt of perception through diffrent dimension especially plight of Arjuna during his ajnaatvaasa.. it is impossible to supress everything including sex in any condition of life..and hard to accept the loss of capacity in any aspect both physical and mental..u put very meaningful comparision to five needs of things which a woman really have with 'panchapandavaas'.. Absence of mind do not indicates absence of love and affection, it is because of minds nature of restlessness of thinking..Any how very beautiful story u have furnished.. thanx for best story with meaningfull sentences..

ಮಹಿಮಾ said...

nijavE..gaNdinalliruva hentana,henninnalliru gandutana..parimaaNagaLu alpa jasi kammi AdarU loka adanna sahisadu..Adare ondalla ondu sandarbha..yellarannU napuMsakarannagisuttade...nimma nirupaNe adbhuta..

Ittigecement said...

ವಿಜಯಾ.. (ಚುಕ್ಕಿ ಚಿತ್ತಾರ)...........

ಅಜ್ಞಾತವಾಸದಲ್ಲಿದ್ದಾಗ...
ಅರ್ಜುನ ಬ್ರಹನ್ನಳೆಯಾಗಿದ್ದ..
ದ್ರೌಪದಿ ಅವನಿಗೆ ಆಗಾಗ ಭೇಟಿಯಾಗುತ್ತಿದ್ದಳು..

ಆಕೆ ಭೇಟಿಯಾಗಲು ಒಪ್ಪುವದಿಲ್ಲ..

"ಅಕ್ರಮ ಸಂಬಂಧದ ಥ್ರಿಲ್ಲಿಗಾದರೂ ಬಾ..."

ನನಗೆ ಈ "ಥ್ರಿಲ್" ಶಬ್ಧದ ಕನ್ನಡ ಅರ್ಥಕ್ಕಾಗಿ ಎಷ್ಟು ಒದ್ದಾಡಿದೆ ಅಂದರೆ ನಗು ಬರುತ್ತದೆ...
ಸಾಮಾಜಿಕ ಕಥೆಯಾದರೆ ಅದೇ ಶಬ್ಧ ಇಟ್ಟುಬಿಡುತ್ತಿದ್ದೆ..

ದಿನಕರನಿಗೆ (ಮೊಗೆರ) ...
ದಿವಾಕರನಿಗೆ.. ಫೋನ್ ಮಾಡಿ ಕೆದಕಿದೆ...
ಮಡದಿ.. ಮಗನನ್ನೂ ಬಿಡಲಿಲ್ಲ..

ಹಿರಿಯರಾದ "ಶ್ರೀ ಗೋಪಾಲ ವಾಜಪೇಯಿ" ಅವರ ತಲೆ ತಿಂದೆ....

"ಸಂತೋಷ ಮತ್ತು ರೋಚಕತೆ " ಶಬ್ಧ ಬಳಸಿ ವಾಕ್ಯ ಪೂರ್ತಿ ಮಾಡಿದ್ದೆ..

ವಾಜಪೇಯಿಯವರು ಇಂದು ಬೆಳಿಗ್ಗೆ ಫೋನ್ ಮಾಡಿ..

" ಒಂದು ಕ್ಷಣದ ರೋಮಾಂಚನೆಗಾಗಿ ಬಾ.." ಎಂದು ಬರಿರಿ.. ಅರ್ಥ ಪೂರ್ಣವಾಗಿರುತ್ತದೆ.." ಅಂದರು...

ವಾಜಪೇಯಿಯವರು ಸಿನಮಾ ಒಂದಕ್ಕೆ ಸಂಭಾಷಣೆ.. ಮತ್ತು ಹಾಡುಗಳನ್ನು ಬರೆಯುತ್ತಿದ್ದಾರೆ..
ಆದರೂ ಈ ಎಡವಟ್ಟು ಕಥೆಗಾಗಿ ಸಮಯ ಹಾಕಿದರು..
ಫೋನ್ ಮಾಡಿ ಸಲಹೆ ಕೊಟ್ಟರು..

ಎಲರಿಗೂ ಪ್ರೀತಿಯ ಜೈ ಹೋ !!

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ನಿಮಗೂ ಪ್ರೀತಿಯ ಧನ್ಯವಾದಗಳು...

ಚಿತ್ರಾ said...

ದ್ರೌಪದಿ - ಬೃಹನ್ನಳೆ ನಡುವೆಯೂ ಇಂಥಾದ್ದೊಂದು ಕಥೆ ಮೂಡಿ ಬರಬಹುದೆಂಬ ಕಲ್ಪನೆ ನಿಂಗೆ ಮಾತ್ರ ಬರಬಹುದೇನೋ ! ಮೆಚ್ಚಿದೆ ಮಾರಾಯ !

ವಿಭಿನ್ನ ವಸ್ತು , ಆದರೆ ಕಥೆ ಅಪೂರ್ಣ ಅನಿಸ್ತು ನಂಗೆ . ಜೊತೆಗೆ ಕೆಲವು ಪ್ರಶ್ನೆಗಳು ಉಳಿದು ಹೋಗ್ತವೆ . ಮೊದಲಿಗೆ ಬೃಹನ್ನಳೆಯಾ ಆಸೆಯನ್ನು ಬೇಡ ಅಂತ ನಕ್ಕಿದ್ದ ದ್ರೌಪದಿ ಆಮೇಲೆ ತಾನಾಗಿ ಬಂದಿದ್ದು ಯಾಕೆ ? ಮೊದಲು ಆಸೆ ಪಟ್ಟಿದ್ದ ಬೃಹನ್ನಳೆಗೆ ಕೊನೆಯಲ್ಲಿ ಜ್ಞಾನೋದಯವಾಗಿದ್ದು ಹೇಗೆ ?
ಪ್ರತಿ ಗಂಡಸು " ಪಾಂಚಾಲಿಯನ್ನು"ಇಷ್ಟ ಪಡುತ್ತಾನೆ ಅನ್ನೋ ಹೇಳಿಕೆಯ ಭಾವ ಏನು ? ಹೀಗೆ ಕೆಲವು ಪ್ರಶ್ನೆಗಳು ತಲೆಯಲ್ಲಿ .


ಆದರೂ .. ತನ್ನ ಈಗಿನ ಪರಿಸ್ಥಿತಿ ಗೊತ್ತಿದ್ದೂ ಹಳೆಯ ನೆನಪಲ್ಲಿ ಕೊರಗುವ , ಹಿಂದೆ ಮೆರೆದಿದ್ದರೂ , ಇಂದು ಕೈಲಾಗದ್ದಕ್ಕೆ ಮರುಗುವ ಬೃಹನ್ನಳೆಯ ಬಗ್ಗೆ , ನಿಜವೇನೆಂದು ಗೊತ್ತಿದ್ದರೂ , ಒಮ್ಮೆಲೇ ವಾಸ್ತವವನ್ನು ಒಪ್ಪಿಕೊಳ್ಳಲಾರದ ದ್ರೌಪದಿಯ ಅಸಹಾಯಕತೆ ಗೆ ಮರುಕ ಎನಿಸುತ್ತದೆ.
ಇನ್ನು ,ಶಬ್ದಗಳ ಜೊತೆ ಆಟ ಆಡೋದು ನಿಂಗೆ ರಕ್ತಗತ ! Hats off to you !

ಚಿತ್ರಾ said...

ಹೇಳಲು ಮರೆತೇ ಹೋಯ್ತು ನೋಡು !
ಕಥೆಯ ಹೆಸರು ಅತ್ಯಂತ ಸೂಕ್ತ ಆಯ್ಕೆ !

ಪಂಚ ಪಾಂಡವ ರಲ್ಲಿನ " ಮಧ್ಯಮ " ಪಾಂಡವ !
ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಎರಡರ " ಮಧ್ಯ"ದ
ಸ್ಥಿತಿಯಲ್ಲಿ , ತನ್ನದೇ ಪತ್ನಿಯನ್ನು ಸೇರುವ ಬಯಕೆಯಿದ್ದರೂ .. ಬೇಕು - ಬೇಡಗಳ " ಮಧ್ಯ " ದ ತುಮುಲದಲ್ಲಿ ತೊಳಲಾಟದಲ್ಲಿ ಸಿಕ್ಕಿಕೊಂಡ ಪರಿಯನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಕ್ಕೆ ಅಭಿನಂದನೆಗಳು !!

janardhan said...

Adbuta... tumba channagide.. sambashane supr..

Unknown said...

ಪೌರಾಣಿಕ ಕಥೆಯೊಳಗೊಂದು ಕಥೆ ಹೊಸೆಯುವ , ಸಂಭಾಷಣೆ ಯೊಂದಿಗೆ ಭೂತ ಮತ್ತು ಪ್ರಸಕ್ತ ವಿದ್ಯಾಮಾನಗಳನ್ನು ಹೆಣೆಯುವ ತಮ್ಮ ಕೌಶಲ್ಯ ಅಸಾಮಾನ್ಯ ..!

Ittigecement said...

ಹೆಬ್ಬಾರ್ ಸರ್...

ಮಹಾ ಪರಾಕ್ರಮಿ.... ಶಕ್ತಿಶಾಲಿ....
ಕ್ಷತ್ರೀಯ ರಾಜ..
ರಸಿಕ..
ಬಹು ಪತ್ನಿ ವಲ್ಲಭ ಅರ್ಜುನ ಒಂದು ವರ್ಷ "ನಪುಂಸಕನಾಗಿ" ಇರುತ್ತಾನೆ..

ಅವನ ಮನಸ್ಥಿತಿ ಹೇಗೆ ?...

ನಪುಂಸಕತೆ ಶಾಪ ದೇಹಕ್ಕಿದ್ದರೂ..
ಮನಸ್ಸಿಗಿಲ್ಲವಲ್ಲ...

ಚಂದದ ಹೆಣ್ಣುಗಳ ಜೊತೆ ನಾಟ್ಯ ಕಲಿಸುತ್ತ..
ಸುಂದರ ಪತ್ನಿಯ ದರ್ಶನ ಆಗಾಗ ಆಗುತ್ತಿರುವಾಗ ಆತ ಆಸೆಯನ್ನು ಹೇಗೆ ಕಟ್ಟಿಹಾಕಿಡಬಲ್ಲ?

ಇಂಥಹದೊಂದು ಹುಚ್ಚು ಕಲ್ಪನೆ ತಲೆಗೆ ಹೊಕ್ಕಿದಾಗ ಹೇಗೆ ಸುಮ್ಮನಿರಲು ಸಾಧ್ಯ?

ಇದಕ್ಕೆ ಸಂಬಂಧಿಸಿದ ಪುಸ್ತಕ ಓದಿದೆ...

ಕಥೆಯನ್ನು ಆತ್ಮೀಯರೊಬ್ಬರಿಗೆ ಹೇಳಿದೆ...
ಮಡದಿಗೂ ಹೇಳಿದೆ..

"ಕಥೆ ಚೆನ್ನಾಗಿದೆ.. ಬರಿರಿ..
ಆದರೆ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಬೇಡಿ.."

"ಯಾಕೆ..?"

"ಕಥೆಯ ವಿಷಯ ಹಾಗಿದೆ....

ಹಾಗಾಗಿ ಪ್ರತಿಕ್ರಿಯೆಗಳು ಕಡಿಮೆ ಬರ್ತಾವೆ..."


ಆದರೆ ಇಲ್ಲಿ ಹಾಗೆ ಆಗಲಿಲ್ಲ..

ಚಂದದ ಪ್ರತಿಕ್ರಿಯೆ ಬಂದಿದ್ದು ತುಂಬಾ ಸಂತೋಷವಾಯಿತು..

" ಒಂದು ಬದುಕು ಪೂರ ಮೀಸಲಿಟ್ಟರೂ ಈ ಮಹಾಭಾರತದ ಆಳ ಅಳೆಯಲು ಅಸಾಧ್ಯ..."
ಇದು ನನ್ನ ಹಿರಿಯ ಸ್ನೇಹಿತರ ಅಂಬೋಣ...

ಸರ್..
ತುಂಬಾ ತುಂಬಾ ಧನ್ಯವಾದಗಳು...

ಮೌನವೀಣೆ said...

ಮನಸುಗಳ ತುಮುಲ , ಭಾವ ತೀವ್ರತೆ, ಆತ್ಮಾವಲೋಕನ, ಭಯ, ಸ್ವಾರ್ಥ-ಸ್ವಾಭಿಮಾನದ ಭಾವಗಳು ಚೆನ್ನಾಗಿ ಮೂಡಿ ಬಂದಿದೆ.

ಅರ್ಜುನನ ಶೌರ್ಯ- ಪೌರುಷಕ್ಕೆ ಪೆಟ್ಟು ಬಿದ್ದು ಮೂರು ಲೋಕದ ಗಂಡನೂ ಸಣ್ಣಗಾದ ಸಂದರ್ಭ.. ದ್ರೌಪದಿಯ ಮೇಲ್ಗಣ್ಣಿನ ನಗು ಎಲ್ಲ ಮರೆಸಿದ ಗಳಿಗೆಯ ಮನೋಬಲದ ವಿವರಣೆ ಚೆನ್ನಾಗಿದೆ.

ಇತಿಹಾಸ ಉಳಿದವು ಕಾಲಗಟ್ಟದಲ್ಲಿ..

Unknown said...

ಪ್ರಕಾಶಣ್ಣ ,

ಮನುಷ್ಯರ ಸಹಜ ಭಾವನೆಗಳು "ಸರಿ-ತಪ್ಪು" ಎಂಬ ಸಾಮಾಜಿಕ ತಕ್ಕಡಿಯಲ್ಲಿ ಸಿಕ್ಕಿ ಹೇಗೆ ಆಯ್ಕೆ ಹಾಗೂ ವಿವಶಿತ ಭಾವಗಳಾಗಿ ಕಾಲಕ್ಕೆ ತಕ್ಕಂತೆ ಹಾಗೂ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತವೆ ಅನ್ನೋ ಸತ್ಯವನ್ನ ತುಂಬಾ ಚೆನ್ನಾಗಿ ಹಲವು ಮಜಲುಗಳಲ್ಲಿ ವಿವರಿಸಿದ್ದೀರ. ಇನ್ನೊಂದು ಮಾತು ! ನಿಜ. ಹೆಣ್ಣಿನ ನಗುವಿಗೆ ಎಷ್ಟೊಂದು ಆಳ, ಅರ್ಥ ಹಾಗೂ ಕೊಂಕು ಇರುತ್ತದೆ ..... 99 % ಗಂಡಸರಿಗೆ ಅದು ಒಂದು ಬಿಡಿಸಲಾಗದ ಒಗಟು. ಈ ನಗುವಿನಲ್ಲಿ ತನ್ನ ಗಂಡಸುತನದ ಅಹಂಕಾರಕ್ಕೆ ಪೆಟ್ಟಾಗುವ ಏನೋ ಒಂದು ಭಾವ ಇದೆ ಎಂದು ಅನ್ನಿಸಿದರೂ..... ಅದೇನು ಎಂದು ಡಿಕೋಡ್ ಮಾಡಲಾರ. ಹಾಗೆ ಅರ್ಥ ಮಾಡಿಕೊಂಡಿದ್ದೆ ಆದರೂ, ಅದು ನಿಜ ಹಾಗೂ ಅವಳ ಸಹಜ ಪ್ರತಿಕ್ರಿಯೆ ಎಂಬ ಸತ್ಯವನ್ನು ಸಹಿಸಲಾಗದೇ ಕೊರಗುವುದಂತೂ ನಿಜ !!!

ಒಟ್ಟಿನಲ್ಲಿ ನೀವು ಹೇಳಿದ ಹಾಗೆ ಮನುಷ್ಯರ ಪ್ರತೀ ನೀತಿ-ಅನೀತಿ , ಸರಿ-ತಪ್ಪು , ಸಹಾಜ-ಅಸಹಜ , ನವ ರಸ ಭಾವಗಳು, ಅವುಗಳ ನಡುವೆ ಮನಸ್ಸಿನ ತಿಕ್ಕಾಟ ಎಲ್ಲವನ್ನೂ ಅತೀ ಕೂಲಂಕುಶವಾಗಿ ಅಭಿವ್ಯಕ್ತಿಸುವ ಕೃತಿ ಖಂಡಿತಾ "ಮಹಾಭಾರತ " ಒಂದೇ !

ಉತ್ತಮ ಬರವಣಿಗೆ.... ತಾತ್ವಿಕ ಭಾವಗಳ ಅವಿರತ ಮೆರವಣಿಗೆ !

Ashok.V.Shetty, Kodlady said...

ಚಂದದ ನಿರೂಪಣೆ ಪ್ರಕಾಶಣ್ಣ ...

ಹೆಣ್ಣಿಗೆ ಬೇಕಾಗಿರುವ ಪಂಚಪಾಂಡವರೆಂದರೆ
ಪ್ರೀತಿ...
ಭದ್ರತೆ..
ಸುಖ..
ಸಂತಾನ..
ಒಂದು ಮರ್ಯಾದೆಯ ಭರವಸೆಯ ಬದುಕು..ಒಪ್ಪಬೇಕಾದದ್ದು

Krishna Mohan said...

ಇದು ಬರೀ ಪಾರ್ಥನ ಕಥೆ ಮಾತ್ರವಲ್ಲ. ನಮ್ಮಲ್ಲಿರುವ
ಹಲವಾರು ಪುರುಷರಲ್ಲಿರುವ ವಿಚಿತ್ರವಾದ ಮನಸ್ಥಿತಿ, ದೇಹಸ್ಥಿತಿ. ಅದರೊಂದಿಗೆ ಹೆಣ್ಣಿನ ಮನಸ್ಥಿತಿಯನ್ನೂ ಮೇಳೈಸಿ ಸುಂದರವಾದ ದೃಶ್ಯಕಾವ್ಯವನ್ನು ಬರೆದಿದ್ದೀರಾ. ಎಲ್ಲವನ್ನೂ ಕೊನೆಯ ನಗುವಿನಲ್ಲಿ sumಗೊಳಿಸುವಾಗ ರೋಮಾಂಚಕವಾಗಿತ್ತು. :)

umesh desai said...

ಹೆಗಡೇಜಿ ನಿಮಗೊಂದು ಉಘೆ..!!!
ಉಫ್ ಮೊನ್ನೆ ಅವಸರ ಅವಸರವಾಗಿ ಓದಿದ್ದೆ ಕಾಮೆಂಟ ಹಾಕಲಾಗಲಿಲ್ಲ
ಇಂದು ಮತ್ತೊಮ್ಮೆ ಓದಿದೆ ಅನ್ನುವುದಕ್ಕಿಂತ ಮಿಂದೆದ್ದೆ..ಅದೆಲ್ಲಿಂದ ಹುಡುಕುತ್ತಿರಿ ಮಾರಾಯ್ರೆ
ನಾನು ಮಹಾಭಾರತದ ಅಭಿಮಾನಿ ಪರ್ವ ವನ್ನು ರಗಡಸಲ ಓದಿರುವೆ..ದ್ರೌಪದಿಯ ಒಳತೋಟಿ
ಭೈರಪ್ಪ ಬಿಚ್ಚಿಟ್ಟಹಾಗೆ ಯಾರೂ ಬಿಚ್ಚಿಡಲಾರರು ಎಂದುಕೊಂಡಿದ್ದೆ..ನಿಮ್ಮ ಕತೆ ಓದಿ ಅದು ಸ್ವಲ್ಪಬುಡಮೇಲಾಯಿತು.
ಇರಲಿ.ಪಾರ್ಥ ಅವನ ತಂದೆಯಹಾಗೆಯೇ ರಸಿಕ ಹಾಗೂ ವ್ಯಭಿಚಾರಿ..ಅವನಲ್ಲೂ ಹಸಿವಿದೆ..ಕ್ಷಣಿಕವಾದರೇನಂತೆ
ಸುಖ ಅನುಭವಿಸುವ ತುಡಿತವಿದೆ..ಅವನ ಅಂತರಂಗವ ನೀವು ಕಟ್ಟಿಕೊಟ್ಟ ರೀತಿ..ಅದ್ಭುತ..!!

Badarinath Palavalli said...

ಒಂದು ಪೌರಾಣಿಕ ಪಾತ್ರವನ್ನು ಉಲ್ಲೇಖಿಸುತ್ತಾ ನೀವು ಬಿಡಿಸಿಟ್ಟ ಮಾನವ ಸಂಬಂಧಗಳ ಸರಮಾಲೆಗೆ ನಮ್ಮ ಉಘೇ!

ಬ್ರಹನ್ನಳೆ ಮತ್ತು ಅದರ ಪಾತ್ರ ಔಚಿತ್ಯ ಇಲ್ಲಿಯವರೆಗೂ ಹಲವು ವಾದ ವಿವಾದಗಳಿಗೆ ಎಡೆಮಾಡಿಕೊಟ್ಟ ವಸ್ತು. ಆ ಅಜ್ಞಾತವಾಸದ ಒಂದು ವರ್ಷ ನಪುಂಸಕತೆ ಶಾಪದಲಿ ಪಾರ್ಥ ಅನುಭವಿಸಿರಬಹುದಾದ ಮಾನಸಿಕ ಯಾತನೆ, ಅವಹೇಳನ ಮತ್ತು ಅವಜ್ಞೆ ಬಹುಶಃ ಆತನೋಬ್ಬನೇ ವಿವರಿಸಬೇಕೇನೋ!

ಒಂದು ಉತ್ತಮ ಹೂರಣವನ್ನು ಅತ್ಯಮೋಘ ಪದಗಳ ಹಂದರದಲ್ಲಿ ರೂಪಿಸಿಕೊಟ್ಟ ನಿಮಗೆ ವಂದನೆಗಳು.

Swarna said...

ನಪುಂಸಕತೆಯನ್ನು ಒಪ್ಪಿಕೊಳ್ಳದ ಹೆಣ್ಣನ್ನು ಸಮಾಜ ಮಾನ್ಯ ಮಾಡೋಲ್ಲ ಆದರೆ 'ಪಾಂಚಾಲಿ' ಯನ್ನು 'ಗಂಡ' ಒಪ್ಪಿಕೊಳ್ಳ ಬೇಕೆಂಬ ನಿಯಮವಿಲ್ಲ. ಚಂದದ ಕಥೆ

ಪದ್ಮಾ ಭಟ್ said...

ಇಷ್ಟವಾಯಿತು ಪ್ರಕಾಶಣ್ಣ......ಎಲ್ಲಕ್ಕಿಂತವೂ ಹೆಚ್ಚಾಗಿ ನಿಮ್ಮ ಬರಹದ ಸೊಗಡು ಎದ್ದು ಕಾಣುತ್ತಿದೆ...
ಚಂದದ ಬರಹ...

ಪದ್ಮಾ ಭಟ್ said...
This comment has been removed by the author.
Digwas Bellemane said...

(Y) (y) (y)

Digwas Bellemane said...

(Y) (y) (y)

Ittigecement said...

ಸುಮಾ...

ಗಂಡಾಗಿ ಹುಟ್ಟಿ "ಹೆಣ್ಣಿನ" ಮನಸ್ಥಿತಿ ಹೊಂದಿರುವ ಹೊಂದಿರುವವರ ಸಂದರ್ಶನವನ್ನು ಎಲ್ಲೋ ನೋಡಿದ್ದು ನೆನಪಾಯಿತು...

ಅದೆಂಥಹ ವಿಚಿತ್ರ !

ರವಿ ಬೆಳಗೆರೆಯವರು ಚಕ್ಕಾಗಳ ಬಗೆಗೆ..
ನಪುಂಸಕರ ಬಗೆಗೆ ಒಂದು ಲೇಖನ ಬರೆದಿದ್ದರು..
ಹಾಗೆ ಟಿವಿಯಲ್ಲಿ ಅದರ ಬಗೆಗೆ ಒಂದು ಕಾರ್ಯಕ್ರಮವನ್ನೂ ಮಾಡಿದ್ದರು..

ಅದನ್ನು ನೋಡಿದ ದಿನದಿಂದ ಅವರ ಬಗೆಗಿನ ತಪ್ಪು ಕಲ್ಪನೆ ಹೊರಟು ಹೋಯಿತು..

ಬದುಕಿನಲ್ಲಿ ಯಾವ ಸಂಭ್ರಮಕ್ಕಾಗಿ ಅವರು ಬದುಕುತ್ತಾರೆ? ಅಲ್ಲವಾ ?

ಗಂಡ.. ಹೆಂಡತಿ.. ಗೆಳೆಯರು ಮಕ್ಕಳು..
ಯಾವುದೇ ಸಂಬಂಧವಿಲ್ಲದ ಅದೆಂಥಹ ಹೀನ ಬದುಕು !

ಇಂಥಹ ಅನೇಕ ಸೂಕ್ಷಮಗಳು ಸಾವಿರಾರು ವರ್ಷಗಳ ಹಿಂದೆ ಬರೆದ ಮಹಾಭಾರತದಲ್ಲಿದೆ !

ಗಂಡಾಗಿ ಹುಟ್ಟಿ...
ಶೂರ.. ವೀರನೆಂದು ಖ್ಯಾತಿ ಪಡೆದ ಅರ್ಜುನನ ಮನಸ್ಥಿತಿ ಆ ಒಂದು ವರ್ಷ ಹೇಗಿದ್ದಿರ ಬಹುದು ?

ಅದೆಂಥಹ ಕಾವ್ಯ !

ಕಥೆಯನ್ನು ಇಷ್ಟಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು....

Unknown said...

ಕಲ್ಪನೆಯ ಕತೆಗೆ ಬಣ್ಣ ಬಣ್ಣದ ಪದಗಳಿಂದ ರಮಣೀಯವಾದ ಅಲಂಕಾರ . ಬಹಳ ಸೊಗಸಾಗಿ ಮೂಡಿ ಬಂದಿದೆ ಸರ್ . ಯೋಚನೆಗಳಿಗೆ ಆಕಾರಕೊಟ್ಟಾಗ ಮೂಡುವ ಸುಂದರ ಅಯೋಚಿತವಾದ ರೂಪಕವೋ ಎಂಬಂತಿತ್ತು . ತುಂಬ ಧನ್ಯವಾದಗಳು ಸರ್

Unknown said...

Nicely and wisely narrated.After reading the initial one or two sentences only one gets lost into the story n its forced to ponder over the story even after coming out of the reading, that is the beauty of this story. Prakashanna,looking forward to more such thought provoking stories.

drsundeep said...

We all are well aware of the story. But the way in which you got the inspiration for your story (by looking at Sri Shankar Neelkodji) shows your creative bent of mind. A small inconsequential incident inspired you to narrate your version of the famous story was what I found most unique. Kudos to you Prakashanna!

ಮಮತಾ ಬಸಪ್ಪ said...
This comment has been removed by the author.
ಮಮತಾ ಬಸಪ್ಪ said...

ಎಷ್ಟೊಂದು ಗೂಢ ಅರ್ಥಗಳು !! ನಾನಂತು ಕಲ್ಪನೆಯ ಬಾಲ ಹಿಡ್ಕೊಂಡು ಬೇರೆ ಲೋಕಕ್ಕೆ ಹೋಗೇ ಬಿಟ್ಟೆ....:-) ಈ ಬರಹಕ್ಕೆ " ಏ" ಸರ್ಟಿಫಿಕೇಟ್ ಬೇಕೇ ಬೇಕು.... ಮತ್ತು ಬರೆಸುವಂತ, ಕೆರಳಿಸುವಂತಾ ಬರಹ. ಅದೆಷ್ಟು ಚೆನ್ನಾಗಿ ಪಾರ್ಥನ ತೊಳಲಾಟವನ್ನ್ರ ಬಿಡಿಸಿಟ್ಟಿದ್ದೀರಿ. ಓದಿ ಬಹಳ ಖುಷಿ ಆಯ್ತು. ನಿಮ್ಮ ಶೈಲಿ ಅಂತೂ....ಜೈ ಹೋ.

Ittigecement said...

ದಿನಕರ....

ತಾಳ್ಮೆ.. ಸಂಯಮ..
ಜೊತೆಗೆ ವಿವೇಕ ಹೆಣ್ಣಿಗೆ ಪ್ರಕೃತಿ ದತ್ತವಾಗಿ ಬಂದಿದೆ..ಎನ್ನುವದು ನನ್ನ ಅನಿಸಿಕೆ.

ಹೆಣ್ಣಿರಲಿ..
ಗಂಡಿರಲಿ ಬದುಕಿನ ಒಂದು ಕಾಲಘಟ್ಟದಲ್ಲಿ ನಪುಂಸಕತೆಯನ್ನು ಅನುಭವಿಸಲೇಬೇಕು..
ಬ್ರಹನ್ನಳೆಯ ಸೂಕ್ಷ್ಮತೆಯನ್ನು ನಿಭಾಯಿಸುವ ಅನಿವಾರ್ಯತೆ ಇದ್ದೇ ಇರುತ್ತದೆ.

ಕನಕಪುರ ರಸ್ತೆಯ ಸಾರಕ್ಕಿ ವೃತ್ತದಲ್ಲಿ ಒಬ್ಬ ಮಂಗಲಮುಖಿಯನ್ನು ಮಾತನಾಡಿಸಿದೆ..

ನನಗೆ ನಿಜಕ್ಕೂ ಷಾಕ್ !

ಅವನು ಹೇಳಿದ ಕೆಲವು ಮಾತುಗಳನ್ನು ಇಲ್ಲಿ ಬಳಸಿಕೊಂಡಿರುವೆ..

ಆ ಮಾತುಕತೆಯನ್ನು ಇಲ್ಲಿ ಬರೆವ ಹಾಗಿಲ್ಲ...

ಅವನು ಹೇಳಿದಂತೆ..
"ಸುಖವನ್ನು ಕಂಡುಕೊಳ್ಳಬೇಕು...
ಸಿಗುವದಲ್ಲ..."

ಅಂಗಾಂಗ ರಚನೆಯ ಬ್ರಹನ್ನಳೆಯರಿಗಲ್ಲ ಇದು..

ಎಲ್ಲರಿಗೂ ಅನ್ವಯಸಿತ್ತದೆ ಅಲ್ವಾ?


ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..

vandana shigehalli said...

ಪಾಂಚಾಲಿ ಬರೆ ಕಲ್ಪನೆಯಾ ಅರ್ಜುನ ಮಾತ್ರ ಯಾಕೆ ಹಾಗೆ ಬರಹಗಾರ (ಮಹಾಭಾರತ) ಎಷ್ಟು .... ಗೊಂದಲದಲ್ಲಿ ಬರೆದಿರಬಹುದ? ಬರೆ ಗೊಂದಲ .... ಒಮ್ಮೆ ಹೆಣ್ಣಾಗು ವಂತಿದ್ದರೆ ಎಲ್ಲಾ ಗಂಡಸರು ..... ಅನ್ನಿಸಿದ್ದು ಸುಳ್ಳಲ್ಲ......

naasomeswara said...

ಪ್ರಕಾಶ್, ನಿಮ್ಮ ಬರಹದ ಶ್ಲಾಘನೀಯ ಅಂಶಗಳು.
೧. ಪುಟ್ಟ ಪುಟ್ಟ ಅರ್ಥವತ್ತಾದ ವಾಕ್ಯಗಳು.
೨. ಸೊಗಸಾದ ನಿರೂಪಣೆ.
೩. ಮನಸ್ಸಿನ ಒಳಗೆ ಇಣುಕುವ ಸಾಹಸ.
೪. ಎಲ್ಲಿಯೂ ಗೊಂದಲವಿಲ್ಲದೆ ಸರಾಗವಾಗಿ ಓದಿಸಿಕೊಂಡು ಹೋಗುವ ಬರಹ.
೫. ನಾಲಗೆಯ ಮೇಲೆ ಕಲ್ಲು ಸಕ್ಕರೆ ಕರಗುವ ಅನುಭವ.
ಅಷ್ಟು ಶ್ಲಾಘನೀಯವಲ್ಲದ ವಿಚಾರಗಳು:
೧. ದ್ರೌಪದಿ ಒಂದು ವರ್ಷವಿಡೀ ಒಬ್ಬನೇ ಪಾಂಡವನ ಬಳಿ ಲೈಂಗಿಕ ಸಂಪರ್ಕವನ್ನು ಇಟ್ಟುಕೊಳ್ಳುವ ನಿಯಮಕ್ಕೆ ಒಳಗಾಗಿದ್ದವಳು.
೨. ಈ ಹಿನ್ನೆಲೆಯಲ್ಲಿಯೇ, ಯುಧಿಷ್ಟಿರ ಹಾಗೂ ದ್ರೌಪದಿ ಏಕಾಂತದಲ್ಲಿದ್ದಾಗ, ಅರ್ಜುನನು ಆಯುಧಗಳನ್ನು ತೆಗೆದುಕೊಳ್ಳಲು ಅವರ ಏಕಾಂತಕ್ಕ ಭಂಗ ತಂದಾಗ, ಒಂದು ವರ್ಷ ತೀರ್ಥಯಾತ್ರೆಯನ್ನು ಮಾಡಬೇಕಾಗುತ್ತದೆ. ಈ ಅವಧಿಯಲ್ಲಿಯೇ ಅರ್ಜುನ ಪಾಶುಪತಾಸ್ತ್ರವನ್ನು ಶಿವನಿಂದ ಪಡೆಯುತ್ತಾನೆ.
೩. ’ಕ್ಯಾಶುವಲ್ ಸೆಕ್ಸ್’ - ಆಕೆಗೆ ಅನುಮತಿಯಿರಲಿಲ್ಲ. ಇದನ್ನು ಎಲ್ಲರೂ ಬಲ್ಲವರೆ!
೪. ಅಜ್ಞಾತವಾಸದಲ್ಲಿ ಆಕೆ ಅಧಿಕೃತವಾಗಿ ಯಾವ ಪಾಂಡವನೊಡನೆ ವರ್ಷವನ್ನು ಕಳೆಯಬೇಕಾಗಿತ್ತೋ, ಅದು ನನಗೆ ತಿಳಿಯದು. ಬಹುಶಃ ವ್ಯಾಸರು ಇಲ್ಲಿ ತೂಕಡಿಸಿದರೆ?! ಗಣೇಶನಾದರೂ ಈ ಪ್ರಶ್ನೆಯನ್ನು ಕೇಳಿದ್ದರೆ ಚೆನ್ನಾಗಿರುತ್ತಿತ್ತಲ್ಲವೆ? :)
೫. ವಾಸ್ತವದಲ್ಲಿ ಅರ್ಜುನನು ಅಜ್ಞಾತ್ವಾಸದಲ್ಲಿ ಏನಾಗಿದ್ದನು? ನಪುಂಸಕನೆ ಅಥವ ಷಂಡನೆ? ಎರಡೂ ಶಬ್ದಗಳು ಸಂಪೂರ್ಣ ಭಿನ್ನ ಅರ್ಥವನ್ನು ಒಳಗೊಂಡಂತಹವು.
೬. ನಪುಂಸಕ ಎಂದರೆ ಪುರುಷ ಜನನಾಂಗ ಇಲ್ಲದವನು. ಇದೊಂದು ಜನ್ಮದತ್ತ ವೈಕಲ್ಯ. ಪುರುಷ ಲಕ್ಷಣಗಳು ಹಾಗೂ ಲೈಂಗಿಕ ಬಯಕೆ ಮೂಡಲು ವೃಷಣ ಹಾಗೂ ಟೆಸ್ಟೋಸ್ಟೀರೋನ್ ಹಾರ್ಮೋನ್ ಅಗತ್ಯ. ನಪುಂಸಕನಿಗೆ ವೃಷಣ, ಶಿಶ್ನ ಮುಂತಾದ ಅಂಗಗಳು ಪೂರ್ಣ ಬೆಳೆಯದ ಕಾರಣ, ಆತನಲ್ಲಿ ನಿಜವಾದ ಲೈಂಗಿಕ ಭಾವನೆ ಮೂಡಲು ಸಾಧ್ಯವಿಲ್ಲ.
೭. ಷಂಡನೆಂದರೆ, ಪುರುಷ ಜನನಾಂಗಗಳು ಇದ್ದೂ ಸಂಭೋಗವನ್ನು ಮಾಡುವ ಸಾಮರ್ಥ್ಯವಿಲ್ಲದವನು. ಈ ಸ್ಥಿತಿಗೆ ಕಾರಣಗಳು ಅನೇಕ. ಅದರ ಚರ್ಚೆ ಸಧ್ಯಕ್ಕೆ ಅಪ್ರಸ್ತುತ.
೮. ನನ್ನ ಸೀಮಿತ ತಿಳಿವಳಿಕೆಯಲ್ಲಿ ಅರ್ಜುನ ನಪುಂಸಾಗಿದ್ದನು. ಹಾಗಾಗಿ ಅವನ ಮನಸ್ಸಿನಲ್ಲಿ ಓರ್ವ ಪುರುಷನ ಮನಸ್ಸಿನಲ್ಲಿ ಬರಬಹುದಾದಂತಹ ಲೈಂಗಿಕ ಭಾವನೆಗಳು ಬರುವ ಸಾಧ್ಯತೆ ಕಡಿಮೆ. ಬೃಹನ್ನಳೆ ಷಂಡನಲ್ಲ.
೯. ಬ್ರಹನ್ನಳೆ ಅಲ್ಲ; ಬೃಹನ್ನಳೆ ಸರಿಯಾದ ರೂಪ.
೧೦. ವಿಜ್ರಂಭಿಸು ಅಲ್ಲ; ವಿಜೃಂಭಿಸು ಸರಿಯಾದ ರೂಪ.

ನನ್ನ ಅಧಿಕಪ್ರಸಂಗವನ್ನು ಒಮ್ಮೆ ಓದಿ ಮರೆತುಬಿಡಿ.
ನಿಮ್ಮ ಬರಹದ ಕಲೆ ಸಿದ್ಧಿಸಿದೆ. ಮುಂದುವರೆಸಿ. ಶುಭಮಸ್ತು.
-ನಾಸೋ

Ittigecement said...

ಪ್ರೀತಿಯ ಸೀತಣ್ಣ...

ಇದೊಂದು ಕಲ್ಪನೆಯ ಕಥೆ..
ಇದಕ್ಕೆ ಆಧಾರ ಮಹಾಭಾರತ..

ಅಜ್ಞಾತವಾಸದಲ್ಲಿ ದ್ರೌಪದಿ ಪಾಂಡವರಲ್ಲಿ ಯಾರೊಡನೆಯೂ ಕೂಡುವಂತಿಲ್ಲ..

ಯಾಕೆಂದರೆ ಅವಳು ಪಾಂಡವರ ಮಡದಿಯಾಗಿದ್ದಳು..
ಇಲ್ಲಿ ಅವರು ಪಾಂಡವರಾಗಿರಲಿಲ್ಲ..
ಕಂಕಭಟ್ಟ.. ವಲಲ ಬೃಹನ್ನಳೆ ಇತ್ಯಾದಿ ಮಾರುವೇಷದಲ್ಲಿದ್ದರು...

ಇಲ್ಲಿ
ಅರ್ಜುನ ಅವಳನ್ನು ಭೇಟಿಯಾಗಲು ಆಹ್ವಾನಿಸುತ್ತಾನೆ.. ಅಷ್ಟೆ..
ದ್ರೌಪದಿ ಮೊದಲು ಒಪ್ಪದಿದ್ದರೂ ಕೊನೆಗೊಮ್ಮೆ ಒಪ್ಪುತ್ತಾಳೆ..
ಆಗ ಅರ್ಜುನ ತನ್ನ "ಅಸಹಾಯಕತೆಯನ್ನು " ಅರ್ಥ ಮಾಡಿಕೊಂಡು "ಭೇಟಿ ಆಗುವದು ಬೇಡ ಎನ್ನುತ್ತಾನೆ..

ಅರ್ಜುನನ ಅಸಹಾಯಕತೆಯ ತೊಳಲಾಟವನ್ನು ಬಿಂಬಿಸುವ ಪ್ರಯತ್ನ ಇಲ್ಲಿದೆ...

ಅರ್ಜುನ ಷಂಡನಾಗಿರಲಿ.. ನಪುಂಸಕನಾಗಿರಲಿ...
ಮೊದಲು ಆತ ಸಮರ್ಥನಾಗಿದ್ದ.. ಕಾಮದ ರುಚಿಯನ್ನು ನೋಡಿದವನಾಗಿದ್ದ..

ಉದಾಹರಣೆಗೆ...
ಇಲ್ಲೊಬ್ಬರು
ಮುವ್ವತ್ತು ವರ್ಷಗಳ ನಂತರ ತಮ್ಮ ಎರಡೂ ಕಣ್ಣುಗಳನ್ನು ಕಳೆದು ಕೊಂಡವರಿದ್ದಾರೆ..

ಅವರಿಗೆ ಬಣ್ಣದ ಕನಸುಗಳು ಬೀಳುವದಿಲ್ಲವೆ ? ಹಾಗೆ ಇದು...

ನೆನಪುಗಳಿಗೆ ಷಂಡತನವಾಗಲಿ.. ನಪುಂಸಕತೆಯಾಗಲಿ ಇರುವದಿಲ್ಲವಲ್ಲ...

ಆ ತೊಳಲಾಟ ಹೇಗಿರಬಹುದು ? ಇದು ಕಲ್ಪನೆಯಷ್ಟೆ...

ಸೀತಣ್ಣ ಕಥೆಯನ್ನು ಇಷ್ಟಪಟ್ಟಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು...

Ittigecement said...

ಚಿನ್ಮಯ..

ಇಲ್ಲಿ ಅರ್ಜುನ ಸ್ಥಿತಿ.
ಮನಸ್ಥಿತಿ ಬೇರೆ..

ಆತ ಮೊದಲು ಮಹಾಪರಾಕ್ರಮಿ.. ವೀರ..
ಬಹುಪತ್ನಿ ವಲ್ಲಭ...
ಸುಖವನ್ನು ಅನುಭವಿಸಿದವ...

ಹುಟ್ಟು ಕುರುಡನಲ್ಲ ಅರ್ಜುನ...

ಬಣ್ಣಗಳನ್ನು ನೋಡಿದವ.. ಕನಸುಗಳನ್ನು ನನಸು ಮಾಡಿಕೊಂಡವ..

ಆತನ ನೆನಪುಗಳು.. ಆಸೆಗಳನ್ನು ಹುಟ್ಟಿಸುತ್ತವೆ..
ಬಯಕೆಗಳನ್ನು ಕೆರಳಿಸುತ್ತವೆ..

ಆತ ಬೃಹನ್ನಳೆಯಾಗಿ ಅರಮನೆಯ ಸುಂದರ ಹೆಣ್ಣು ಮಕ್ಕಳ ಮಧ್ಯ ಇರುವವ...

ಇನ್ನೊಂದು ಸೂಕ್ಷ್ಮದ ವಿಚಾರ ಏನು ಗೊತ್ತಾ?

ಪಾಂಡವರ ಅಜ್ಞಾತವಾಸ ಮುಗಿದ ಮೇಲೆ ವಿರಾಟ ಮಹರಾಜನಿಗೆ ..
"ಈ ಬೃಹನ್ನಳೆ ಬೇರೆ ಯಾರೂ ಅಲ್ಲ.. ಅರ್ಜುನ.." ಅಂತ ಗೊತ್ತಾಯಿತು..

ಆತ ಮೊದಲು ಅರ್ಜುನನಿಗೆ ವಿನಂತಿಸಿದ್ದು ಏನು ಗೊತ್ತಾ?

" ನನ್ನ ಮಗಳು ಉತ್ತರೆಯನ್ನು ಮದುವೆಯಾಗು" ಅಂತ !!

ಅವನ ವಿನಂತಿಯಲ್ಲಿ ಬಹಳ ಅರ್ಥಗಳಿವೆ...

ಒಂದು ವರ್ಷ ಶಾಪ ಗೃಸ್ಥ "ಬೃಹನ್ನಳೆಯಾಗಿ" ಅರ್ಜುನ ಉತ್ತರೆಗೆ ನಾಟ್ಯ ಕಲಿಸಿದ್ದರೂ..
ಸಮಾಜ ತನ್ನ ಮಗಳ ಬಗೆಗೆ ಏನಾದರೂ ಹೇಳಿದರೆ? ??

ಅರ್ಜುನ ಬಗೆಗೆ ಅನುಮಾನವಿತ್ತಾ? ಗೊತ್ತಿಲ್ಲ..

ಆದರೆ ಅರ್ಜುನ ತನ್ನ ಮಗ ಅಭಿಮನ್ಯುವಿಗೆ ಉತ್ತರೆಯನ್ನು ಆರಿಸಿ..
ವಿರಾಟ ಮಹರಾಜನ ಬೀಗ ಸಂಬಂಧಿಯಾಗುತ್ತಾನೆ..

ಅರ್ಜುನನ ತೊಳಲಾಟದೊಡನೆ...
ಮನುಷ್ಯ ದೇಹದ ಬ್ರಹನ್ನಳೆಯ ಸ್ಥಿತಿಗೆ ಹೋಲಿಸುವ ಪ್ರಯತ್ನ ಈ ಕಥೆಯಲ್ಲಿ ಮಾಡಿರುವೆ..

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು... ಚಿನ್ಮಯ....

Ittigecement said...

ಚೇತನಾ....

ಮೊದಲಿಗೆ ಹೇಳಿಬಿಡುತ್ತೇನೆ.. ನಾನು ನಿಮ್ಮ ಬರಹಗಳ ಅಭಿಮಾನಿ..
ಇಲ್ಲಿ ಪ್ರತಿಕ್ರಿಯಿಸಿರುವದು ನನಗೆ ತುಂಬಾ ಸಂತೋಷ...

ಹೆಣ್ಣು.. ಗಂಡು..
ಮತ್ತು ಕಾಮವಿಲ್ಲದ ಈ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ...

ಈ ಜಗತ್ತಿನ
ಬದುಕಿನ ಆಸಕ್ತಿಗಳಿಗೆ..
ಬಣ್ಣಗಳಿಗೆ.. ಕಾಮವೇ ಕಾರಣ...

ಕಾಮವೇ ಸತ್ಯ.. ಶಿವ .. ಮತ್ತು ಸುಂದರ...

ಮಹಾಭಾರತದಲ್ಲಿ
ಇದರ ಸೂಕ್ಷದ ಮಜಲುಗಳನ್ನು ಬಲು ಸುಂದರವಾಗಿ ವಿಶ್ಲೇಸಿದ್ದಾರೆ...

ಕಥೆಯನ್ನು ಇಷ್ಟಪಟ್ತಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

Ittigecement said...

ಸುನಾಥ ಸರ್....

ಅಂದು ನಾವು ಫೋನಿನಲ್ಲಿ ಮಾತಾಡುವಾಗ ಕಥೆಯ ಬಗೆಗೆ ಮೆಚ್ಚುಗೆ ಹೇಳಿದ್ದು ಬಹಳ ಖುಷಿ ಆಯ್ತು...

ಅರ್ಜುನ ಷಂಡನಾಗಿರಲಿ.. ನಪುಂಸಕನಾಗಿರಲಿ ಮೊದಲು ರುಚಿ ನೋಡಿದವ..

ರುಚಿಯನ್ನು ಬಯಸುವದು ಸಹಜ ..

ಮಹಾಭಾರತದ ಪ್ರತಿ ಪಾತ್ರಗಳನ್ನು ವಿಶ್ಲೇಸಿದಾಗ ಗೊತ್ತಾಗುವದು..
ಪ್ರತಿಯೊಬ್ಬರೂ ಮನುಷ್ಯರು..

ಮನುಷ್ಯ ಸಹಜ ದೌರ್ಬಲ್ಯಗಳು ಅಲ್ಲಿರುತ್ತವೆ...

ವ್ಯಾಸ ಚಿತ್ರಿಸಿದ ಪಾತ್ರಗಳ
ದೌರ್ಬಲ್ಯಗಳು ಸಾಲದು ಅಂತ ಅದರಲ್ಲಿ ಮತ್ತೆ ಮತ್ತೆ ಒಂದಷ್ಟು ದೌರ್ಬಲ್ಯಗಳನ್ನು ಹುಡುಕುತ್ತೇವೆ ...

ಅಲ್ಲಿ ಏನು ಹುಡುಕುತ್ತೀವೋ ಅದು ಅಲ್ಲಿ ಸಿಗುತ್ತವೆ..
ನಮ್ಮ ಓದು..
ಜ್ಞಾನ..
ಸ್ವಭಾವಕ್ಕೆ ಅನುಗುಣವಾಗಿ...

ಸುನಾಥ ಸರ್.. ತುಂಬಾ ತುಂಬಾ ಧನ್ಯವಾದಗಳು....

Ittigecement said...

ಶುಭಾ...

ನನಗೆ ನಿಮ್ಮ ಪ್ರತಿಕ್ರಿಯೆಯನ್ನು ಓದಿ ತುಂಬಾ ಖುಷಿ ಆಯ್ತು..
ಕಥೆಯನ್ನು ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ.. ಬರೆದ ದೃಷ್ಟಿಕೋನಕ್ಕೆ ಬೆನ್ನು ತಟ್ಟಿದ್ದೀರಿ..
ಬರೆದವನಿಗೆ ಇನ್ನೇನು ಬೇಕು ?

ಈ ಕಥೆಗಾಗಿ ವೈದ್ಯರನ್ನು..
ಚಕ್ಕಾಗಳನ್ನು..
ವಯಸ್ಸಾದ ಮಹಿಳೆ ಮತ್ತು ಅಜ್ಜರನ್ನು ಮಾತನಾಡಿಸಿದ್ದೇನೆ..
ಅವರಲ್ಲಿ ನನ್ನ ಹುಚ್ಚು ಪ್ರಶ್ನೆಗಳನ್ನು ಕೇಳಿದ್ದೇನೆ..

ಅವರೆಲ್ಲರ ಒಟ್ಟಾರೆ ಅಭಿಪ್ರಾಯವಿಷ್ಟೆ..

ಸಂತಾನೋತ್ಪತ್ತಿಗಾಗಿ "ಕಾಮವಿದೆ"..
ಕಾಮದಲ್ಲಿ ಆನಂದ .. ಸಂತೋಷ ಇಟ್ಟಿರುವದು "ಸೃಷ್ಟಿಯ" ರಹಸ್ಯವಿರಬಹುದು..

ವೀರ ಅರ್ಜುನ ಬೃಹನ್ನಳೆಯಾದ ಹಾಗೆ..
ಪ್ರತಿಯೊಬ್ಬರೂ ಬೃಹನ್ನಳೆಯ ಸ್ಥಿತಿಯನ್ನು ಅನುಭವಿಸಲೇ ಬೇಕು..

ನಪುಂಸಕರಿರಲಿ.. ಷಂಡರಿರಲಿ..
ಮನಸ್ಸಲ್ಲಿ ಆಸೆ ಇರುತ್ತದಂತೆ.. ಇದು ನಿಜಕ್ಕೂ ವಿಚಿತ್ರ ಎನಿಸಿತು..

ನಮ್ಮ ಬ್ಲಾಗ್ ಸ್ನೇಹಿತ ಬರಹಗಾರ..

ಡಾ. ಡಿಟಿ ಕೃಷ್ಣಮೂರ್ತಿಯವರ ಅಭಿಪ್ರಾಯ ನನಗೆ ಸ್ಪೂರ್ತಿ ಕೊಟ್ಟಿತು...

ಅವರು ವೈದ್ಯಕೀಯ ವೃತ್ತಿ ಜೊತೆಗೆ ಅದ್ಭುತ ಚಿಂತಕ...

ಒಟ್ಟಿನಲ್ಲಿ ಇಲ್ಲಿ ಬಂದಿರುವ ಪ್ರತಿಕ್ರಿಯೆಗಳು ಉತ್ಸಾಹ ಹೆಚ್ಚಿಸಿದೆ...
ಇನ್ನೊಂದು ಎಡವಟ್ಟು ಕಥೆಗೆ ಹೂರಣ ಸಿಕ್ಕಿದೆ,,,

ತುಂಬಾ ತುಂಬಾ ಧನ್ಯವಾದಗಳು ಶುಭಾ..

Ittigecement said...

ಮಹೀ...

ದೇಹದ ಕ್ರೋಮೋಸೋಮುಗಳು
ಗಂಡನಲ್ಲಿ ಹೆಣ್ಣಿನ ಭಾವನೆಗಳನ್ನೂ..
ಹೆಣ್ಣಿನಲ್ಲಿ ಗಂಡಿನ ಭಾವನೆಗಳನ್ನು ಹುಟ್ಟಿಸುತ್ತದಂತೆ.. !

ಕಾಮದ ಆಸೆಗೆ ಹಾರ್ಮೋನು ಕಾರಣವಂತೆ...
ಹಾರ್ಮೋನು (ಈ ಹಾರ್ಮೋನಿನ ಹೆಸರು ಮರೆತು ಹೋಗಿದೆ) ಉತ್ಪಾದನೆ ಇಲ್ಲದಲ್ಲಿ ಕಾಮದಲ್ಲಿ ಆಸಕ್ತಿ ಇರುವದಿಲ್ಲವಂತೆ...

ಇದು ವಿಜ್ಞಾನ.. ವೈದ್ಯಕೀಯ ವಿಜ್ಞಾನದ ಉತ್ತರ...

ಒಂದು ಕಥೆ ಬರೆಯುವಾಗ ಎಷ್ಟೆಲ್ಲ ವಿಷಯಗಳ ಕಡೆ ನೋಡಬೇಕು ಅಲ್ವಾ ?
ಬರವಣಿಗೆ ಖುಷಿ ಕೊಟ್ಟಿದೆ..

ತಪ್ಪಿದ್ದರೂ ತಿದ್ದಿ ಓದುವ ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಹೃದಯ ತುಂಬಿ ಬಂದಿದೆ..

ಮಹೀ..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ
ತುಂಬಾ ತುಂಬಾ ಧನ್ಯವಾದಗಳು...

Santhoshkumar LM said...

ಓದುತ್ತಾ ಓದುತ್ತಾ ಯಾಕೋ "ಯಯಾತಿ" ನೆನಪಿಗೆ ಬಂತು. ಬಹುಶಃ ಕಥೆಯಲ್ಲಿನ ಪ್ರತೀ ಸಾಲುಗಳ ಹಿಂದಿನ ಅರ್ಥ ಮೊಗೆದು ಕೊಟ್ಟಂತಿದೆ. ಈ ರೀತಿಯೂ ಯೋಚಿಸಬಹುದೇ ಎನ್ನುವಷ್ಟರ ಮಟ್ಟಿಗೆ ಅದೆಷ್ಟು ವಿಷಯಗಳನ್ನು ಇಷ್ಟು ಸಣ್ಣ ಕಥೆಯಲ್ಲಿ ಹೇಳಿದ್ದೀರ... ಅಬ್ಬಾ!... ಅದ್ಭುತ!!

ರೇಖಾ ಹೆಗಡೆ ಬಾಳೇಸರ said...

ಪ್ರಕಾಶಣ್ಣ, ಬೋಲ್ಡ್ ಪ್ರಯತ್ನ, ಉತ್ತಮವಾಗಿದೆ. 'ನಪುಂಸಕತೆ ಬದುಕಿನ ಕಾಲಘಟ್ಟದಲ್ಲಿ ಕೆಲವೊಮ್ಮೆ ಮನಸ್ಥಿತಿ, ಕೆಲವೊಮ್ಮೆ ದೇಹಸ್ಹಿತಿ....' ಎಂಬ ವಿಚಾರ ತುಂಬ ಇಷ್ಟವಾಯಿತು. (ನಾ. ಸೋಮೇಶ್ವರ ಅವರ ಕಾಮೆಂಟ್ ಓದಿದ ಮೇಲೆ ಆ ಶಬ್ದವನ್ನು ನಾನಿಲ್ಲಿ ಬಳಸಿದ್ದು ಸರಿಯೋ, ತಪ್ಪೋ ಗೊತ್ತಾಗುತ್ತಿಲ್ಲ :-)) ದ್ರೌಪದಿಯ ಒಲುಮೆಯ ಬಗ್ಗೆ 'ಪರ್ವ'ದಲ್ಲಿ ಓದಿ ಇಷ್ಟಪಟ್ಟಿದ್ದೆ. ಆದರೆ ಬೃಹನ್ನಳೆಯ ಮನಸ್ಥಿತಿಯ ಬಗ್ಗೆ ಎಂದೂ ಹೆಚ್ಚು ವಿಚಾರ ಮಾಡಿರಲಿಲ್ಲ. ಈ ಕಥೆ ಆ ಬಗ್ಗೆ ಯೋಚಿಸುವಂತೆ ಮಾಡಿತು,
ಆದರೆ ಒಂದು ಸಂದೇಹ: ಅಜ್ಜ್ನಾತವಾಸದ ಹೊತ್ತಿಗೆ ಪಾಂಡವರು, ದ್ರೌಪದಿ ಎಲ್ಲರೂ ಮಧ್ಯ ವಯಸ್ಸನ್ನು ಮೀರಿದವರಲ್ಲವೇ... ಆ ಸಮಯದಲ್ಲಿ ದಾಂಪತ್ಯ ಕಾಮಕ್ಕಿಂತ, ವ್ಯಕ್ತ ಪ್ರೇಮಕ್ಕಿಂತ, ಪರಸ್ಪರ ಪ್ರೀತಿ-ವಿಶ್ವಾಸದ ಸಹಜೀವನವನ್ನು ಹೆಚ್ಚು ಬಯಸುವುದಲ್ಲವೇ? ಆಫ್ ಕೋರ್ಸ್, ಈ ಅಭಿಪ್ರಾಯಗಳು, ಅಭಿರುಚಿಗಳೆಲ್ಲ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಅರ್ಜುನ-ಕೃಷ್ಣೆಯರನ್ನೂ ಹಾಗೇ ಅಂದುಕೊಂಡರೆ ಗೊಂದಲ ಉಳಿಯುವುದಿಲ್ಲ.

bilimugilu said...

ಪ್ರಕಾಶ್ ಜೀ,
ನಿಮ್ಮ ಬರವಣಿಗೆಯ ಶೈಲಿ ಎ೦ದಿನ೦ತೆ ಸರಳ - ಸು೦ದರ - ಮನ ಮುಟ್ಟವ೦ತಿದೆ. ಪುಟ್ಟ ಪುಟ್ಟ ವಾಕ್ಯಗಳಲ್ಲಿ ಓದುಗರ ಗಮನ ಸೆಳೆದಿಡುವ ಕಲೆ ನಿಮ್ಮದು.
ಕಥಾವಸ್ತು! ಇದೊ೦ದು ಬೋಲ್ಡ್ ಪ್ರಯತ್ನ - ಚರ್ಚೆ / ಚಿ೦ತನೆಗಳೂ ಸಹ ಇಲ್ಲಿ ಮುಕ್ತವಾಗಿಡಲು ಅಣುವು ಮಾಡಿಕೊಟ್ಟಿದೆ.
ಹೆಣ್ಣು / ಗ೦ಡಿನ ಕಾಮನೆಗಳ ನಡುವೆ, ತನ್ನತನವನ್ನು ಮೆರೆಯುವ ಈಗೋಗಳ ನಡುವೆ ಇಲ್ಲಿನ ಸ೦ಭಾಷಣೆ ಚಿ೦ತನೆಗೆ ದೂಡುವ೦ತಿದೆ.
ನಿಮ್ಮ ಕಥೆ ಇಷ್ಟವಾಗಲು ಕಾರಣ, ನೀವು ಹೆಣ್ಣು ಗ೦ಡಿನ ಭಾವನೆಗಳಿಗೆ ಸಮಾನವಾದ ಪ್ರಾಮುಖ್ಯತೆ ನೀಡಿರುವುದು.
ನಿಮ್ಮ ಬರವಣಿಗೆಗಳಲ್ಲಿ ಅತ್ಯ೦ತ ಮೆಚ್ಚುಗೆಯಾಯಿತು ನಿಮ್ಮ ಈ ಕಥೆ.
ಅಭಿನ೦ದನೆಗಳು .............
ರೂಪ

Niharika said...

Anna, Nimma kathe Bairappa avara Parva novel gu seddu odiyo hage ede.:-)
Uttamavaada prathikriyegalu .
It was nice reading

ಜಲನಯನ said...

ಪುರಾಣ ಕಥೆಗಳಲ್ಲಿ ಅವ್ಯಕ್ತಗಳನ್ನು ವ್ಯಕ್ತಗೊಳಿಸಲು ಛಾತಿ ಬೇಕು ಮತ್ತು ಹುದುಗಿದ ಅಂಶಗಳನ್ನು ತೆರೆದಿಡಲು ಕಲ್ಪನಾ ಶಕ್ತಿ, ಅನಾವರಣ ಚಾಣಾಕ್ಷತೆ ಮತ್ತು ಪಾತ್ರಗಳ ಮನಸನೋದುವ ಸೃಜನಶೀಲ ಲೇಖಕ ಮನಸ್ಸು ಬೇಕು. ಎಲ್ಲವನ್ನೂ ಬಹಳ ಸಮತುಲಿತ ಎಲ್ಲೆಮೀರದ ನಿರೂಪಣೆಯೊಂದಿಗೆ ಹೊರತಂದಿರುವುದು ನಿಜಕ್ಕೂ ಶ್ಲಾಘನೀಯ ಪ್ರಕಾಶೂ... ಇದು ಬಹುಶಃ ನಿನ್ನಲ್ಲಿರುವ ಲೇಖಕನ ಜೊತೆಗೆ ಯಕ್ಷಗಾನದ ಉಪಾಸಕನ ಜುಗಲ್ಬಂದಿಯಿಂದ ಸಾಧ್ಯವಾಗಿದೆ ಎಂದೇ ನನ್ನ ಖಚಿತ ಅಭಿಪ್ರಾಯ. ದ್ರೌಪದಿ ಮತ್ತು ಸೀತೆಯರ ಮನಸಿನ ತಾಕಲಾಟಗಳು ಏಕಪ್ರಕಾರವಾಗಿದ್ದವು..ದ್ರೌಪದಿ ಹೆಚ್ಚು ವ್ಯಕ್ತಗೊಳಿಸುವ ಎದೆಗಾರಿಕೆ (ಬಹುಶಃ ಕಾಲಮಾನದ ಬಿಚ್ಚುಗುಣ ಕಾರಣವಾಗಿರಬಹುದು)ತೋರಿದರೆ ಸೀತೆಯದು ಸುಪ್ತ ಮನೋಗುಣ ಅದಕಾಗಿಯೇ ಹೆಚ್ಚು ಮಾನ್ಯಳು. ಸೀತೆಯೂ ರಾಮಾಯಣದಲ್ಲಿ ಒಮ್ಮೆ ಈ ಎಲ್ಲೆ ದಾಟಿರುವುದು ಉಲ್ಲೇಖವಾಗಿದೆ. ಮಾಯಮೃಗ ಬೆನ್ನಟ್ಟಿದ ರಾಮ ಅದನು ಕೊಂದಾಗ ಮೋಸದ ರಕ್ಕಸ ಕೊನೆಯ ಪ್ರಯತ್ನ ಎಂಬಂತೆ ಹಾ ಸೀತಾ ಹಾ ಲಕ್ಷಣ ಎನ್ನುವುದು... ಅದನ್ನು ಕೇಳಿ ಸೀತೆ..ರಾಮನಿಗೆ ಅಪಾಯ ಬಂದಿದೆ ಹೋಗು ಸಹಾಯಕ್ಕೆ ಎಂದು ಲಕ್ಷ್ಮಣನನ್ನು ಆಗ್ರಹಿಸುವುದು..ಅಣ್ನನ ಸಾಮರ್ಥ್ಯ ಮತ್ತು ರಕ್ಕಸ ಮಾಯೆಯನ್ನು ಬಲ್ಲ ಲಕ್ಷ್ಮಣ ಇದು ಮೋಸ ಮಾಡುವ ಪ್ರಯತ್ನ ಎಂದು ಸಮಾಧಾನ ಹೇಳಲು ಪ್ರಯತ್ನಿಸುವುದು... ಅಧೀರಳಾದ ಸೀತೆ..ನಿನಗೆ ನಿನ್ನಣ್ಣನ ಮೇಲಿನ ಕಾಳಜಿಗಿಂತಾ ನನ್ನ ಮೇಲೆ ಮೋಹ ಹೆಚ್ಚಿದೆ ಅದಕ್ಕೇ ಹೋಗುತ್ತಿಲ್ಲ ಎನ್ನುವುದು...
ದ್ರೌಪದಿ ಕರ್ಣನನ್ನು ಇಷ್ಟಪಟ್ಟಿದ್ದೂ ಹೌದಂತೆ...
ಇದು ನನಗೆ ಗೊತ್ತಿರುವ ಹಾಗೆ (ತಪ್ಪಾಗಿದ್ದರೆ ತಿದ್ದಬೇಕು). ಎರಡೆರಡು ಬಾರಿ ನಿನ್ನ ಲೇಖನ ಓದಿದ್ದು ಇದೇ ಮೊದಲು...ಬಹಳ ಇಷ್ಟ ಆಯ್ತು ಪ್ರಕಾಶೂ..ಅದ್ರಲ್ಲೂ ನಿನ್ನ ಸಂಭಾಷಣೆಯ ಶೈಲಿ... ನಾಟಕ ಒಂದನ್ನು ರಚಿಸು ಮಾರಾಯಾ ಇದೇ ರೀತಿ ಆಧುನಿಕ ವಿದ್ಯಮಾನಗಳ ಆಧಾರ ಪೌರಾಣಿಕ ಪಾತ್ರಗಳ ಮೂಲಕ... ನಾನಂತೂ ಅದರಲ್ಲಿ ಅಭಿನಯಿಸಲೂ ಸಿದ್ಧ...!!!!!!!!!!

Ittigecement said...

ಚಿತ್ರಾ...

ಅಂದು ಮೊದಲಿಗೆ
ನಿನಗೆ ಕಥೆಯನ್ನು ಕಳುಹಿಸಿದಾಗ ಪೂರ್ತಿಯಾಗಿರಲಿಲ್ಲ...
ನಿನ್ನ ಅಭಿಪ್ರಾಯ ನನಗೆ ತುಂಬಾ ಸಹಾಯವಾಯಿತು...

ದ್ರೌಪದಿಗೆ ಬೃಹನ್ನಳೆಯ ಮೇಲೆ ಕನಿಕರ ಬಂದಿರ ಬಹುದು ಅಂತ ಭಾವಿಸಿಕೊಳ್ಳೋಣ...
ಇಷ್ಟೆಲ್ಲ ಒತ್ತಾಯ ಮಾಡುತ್ತಿದ್ದಾನಲ್ಲ..
ಎಷ್ಟೆಂದರೂ ಪತಿ ಅಲ್ಲವಾ.. ಪ್ರೀತಿ.. ಪ್ರೇಮ ಅಂತ ಆಮೇಲೆ ಒಪ್ಪಿಕೊಂಡಿರ ಬಹುದು..

ದ್ರೌಪದಿ ಒಪ್ಪಿಕೊಂಡಿದ್ದಕೆ..
ಇನ್ನೊಂದು ಕಾರಣ ಕಥೆಯಲ್ಲಿಯೇ ಇದೆ...

ಪ್ರತಿ ಗಂಡಸು ಪಾಂಚಾಲಿಯನ್ನು ಇಷ್ಟಪಡುತ್ತಾನೆ..
ಈ ವಿಷಯವನ್ನು ನನಗೆ ಒಬ್ಬ ಮಾನಸಿಕ ಶಾಸ್ತ್ರಜ್ಞರು ಹೇಳಿದ್ದಾರೆ..

ಹೆಚ್ಚಿನ..
ಗಂಡಸರ ಮಾನಸಿಕ ಸ್ಥಿತಿ ಹಾಗೇ ಇರುತ್ತದಂತೆ..

ಈ ವಿಷಯದ ಬಗೆಗೆ ಇನ್ನೊಂದು ಕಥೆಯನ್ನೇ ಬರೆಯುವಷ್ಟು ವಿಷಯಗಳನ್ನು ಅವರು ಕೊಟ್ಟಿದ್ದಾರೆ...
ನಿಜಕ್ಕೂ ಹತ್ತು ಹಲವು ಸೋಜಿಗದ ವಿಷಯಗಳಿವೆ..

ಕಥೆಯನ್ನು ಇನ್ನೊಮ್ಮೆ ದಯವಿಟ್ಟು ಓದು... ಇದು ನನ್ನ ವಿನಂತಿ...
ನಿನಗೆ ಕಳುಹಿಸಿದ ಕಥೆಗೂ ಇದಕ್ಕೂ ಬದಲಾವಣೆ ಇದೆ..

ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ..
ಪ್ರೀತಿಯಿಂದ ಸಲಹೆ ಸೂಚನೆ ಕೊಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...

ಥ್ಯಾಂಕ್ಯೂ...

Ittigecement said...

ಜನಾರ್ಧನ್...

ಖ್ಯಾತ ಹೋಮಿಯೋಪತಿ ವೈದ್ಯರಾದ ಡಾ.ರುದ್ರೇಶ್ ಹೀಗೆ ಹೇಳುತ್ತಾರೆ..
"ಕಾಮ ಎರಡು ಕಾಲುಗಳ ಮಧ್ಯದಲ್ಲಿ ಅಲ್ಲ...
ಎರಡು ಕಿವಿಗಳ ಮಧ್ಯದಲ್ಲಿರುತ್ತದೆ..."

ಇಲ್ಲಿ ಅರ್ಜುನ ಸ್ಥಿತಿಯೂ ಕೂಡ ವಿಚಿತ್ರ...

ಬಹು ಪತ್ನಿ ವಲ್ಲಭ ಬೃಹನ್ನಳೆಯಾಗಿ..
ಸುಂದರ ತರುಣಿಯರ ನಡುವೆ.. ನಾಟ್ಯ ಕಲಿಸುವ ಪರಿಸ್ಥಿತಿ...

ಬೃಹನ್ನಳೆಯ ಸ್ಥಿತಿ ದೇಹಕ್ಕಾದರೂ
ಮನಸ್ಥಿತಿ ಸರಿ ಇದೆಯಲ್ಲವೆ?
ಹಿಂದಿನ ನೆನಪುಗಳು ಕನಸಲ್ಲಿ ಬರುತ್ತಿರ ಬಹುದಲ್ಲವೆ?

ಹಿಂದೆ ಹೀಗಿದ್ದೆ ಎನ್ನುವ ನೆನಪುಗಳು ಪೌರಷವನ್ನು ಆಗಾಗ ಕೆದಕಿ ಕೆಣಕುತ್ತಿರ ಬಹುದಲ್ಲವೆ?

ಅಂಥಹ ಮನಸ್ಥಿತಿಯ ಕಲ್ಪನೆಯಲ್ಲಿ ಈ ಕಥೆಯನ್ನು ಹೆಣೆಯುವ ಪ್ರಯತ್ನ..

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು... ಥ್ಯಾಂಕ್ಯೂ...

Jayalaxmi said...

ನಿಮ್ಮ ಇಡೀ ಕತೆಯದು ಒಂದು ತೂಕವಾದರೆ, ”ನಪುಂಸಕತೆ.. ..
ಬದುಕಿನ ಕಾಲಘಟ್ಟದಲ್ಲಿ
ಕೆಲವರಿಗೆ...
ಕೆಲವೊಮ್ಮೆ
ಮನಸ್ಥಿತಿ... ದೇಹಸ್ಥಿತಿ..” ಈ ಸಾಲಿನದೇ ಒಂದು ತೂಕ.
ಇಷ್ಟವಾಯ್ತು ಕತೆ. ಹಾಗೇ ದ್ರೌಪದಿಯ ನಗು ಸಹ. :)

Srikanth Manjunath said...

ಇದ್ದು ಇರಲಾರದ ಸಂಗತಿ.. ಇರದೇ ಇದ್ದರು ಬೇಕು ಎನ್ನುವ ಮನಸ್ಥಿತಿ... ಆ ಸನ್ನಿವೇಶಗಳೇ ವರ್ಣನಾತೀತ.. ಆ ಬಯಕೆಯ ಸರೋವರದ ಅಗ್ನಿ ಜಾಲದಲ್ಲಿ ಮಿಂದು ಬರುವುದು ನಿಜಕ್ಕೂ ಒಂದು ಸವಾಲಿನ ಪ್ರಸಂಗವೇ.. ಓದುತ್ತಾ ಹೋದ ಹಾಗೆ ಪಾರ್ಥನ ಆ ಪರಕಾಯ ಪ್ರವೇಶದ ಸ್ವಗತ ಮಾತುಗಳು ನಿಜಕ್ಕೂ ಥ್ರಿಲ್ ಅನುಭವ ಕೊಟ್ಟಿತು.. ಆ ಒಂದು ಸಾಲಿಗೆ ಥ್ರಿಲ್ ಅನ್ನುವ ಪದವೇ ಅಥವಾ ಅದಕ್ಕಿಂತಲೂ ಮಿಗಿಲಾದ ಪದ ಬೇಕೇ ಬೇಡವೇ ಎನ್ನುವುದಕ್ಕೆ ಉತ್ತರ ತುಂಬಾ ಕಠಿಣ.. ಪ್ರಣಯದ ಉತ್ತುಂಗದ ಸ್ಥಿತಿಯನ್ನು ವರ್ಣಿಸಲು ಎಷ್ಟು ಕಷ್ಟವೋ ಹಾಗೆಯೇ ಆ ಪದ ಕೂಡ.. ನಿಜಕ್ಕೂ ಒಂದು ವಿಭಿನ್ನ ಪ್ರಪಂಚದಲ್ಲಿ ವಿಹರಿಸಿಬಂದ ಅನುಭವಾಯಿತು. ಎಲ್ಲೋ ಓದಿದ್ದು ಹೆಣ್ಣು ಪ್ರಣಯಕ್ಕೆ ಕರೆದಾಗ ಗಂಡು ಇಲ್ಲವೆನ್ನೋಲ್ಲ.. ಗಂಡು ಪ್ರಣಯಕ್ಕೆ ಹೆಣ್ಣನ್ನು ಕರೆದಾಗ ಅವಳು ನಿರಾಕರಿಸಿದರೆ ಆಗ ಅವಿರ್ಭವಿಸುತ್ತದೆ ಗಂಡಸುತನ ಎಂಬ ನಪುಂಸಕತೆ..

ಪ್ರಕಾಶಣ್ಣ ಒಂದು ವಿಭಿನ್ನ ಮನದಾಳಕ್ಕೆ ಇಳಿದು ಮಂಥನಕ್ಕೆ ಅನು ಮಾಡಿಕೊಡುವ ವಿಷಯವನ್ನು ಎಷ್ಟು ಸುಲಭವಾಗಿ ಕಥಾ ಹಂದರಕ್ಕೆ ತಂದಿದ್ದೀರಿ.. ನಿಮಗೆ ಹಾಟ್ಸ್ ಆಫ್..

ನನ್ನನ್ನು ತುಂಬಾ ಕಾಡಿದ ಸಾಲುಗಳು ಇವು

೧. ಏನೂ ಆಗದ ಸ್ಥಿತಿಯಲ್ಲಿ ..
ಸುಮ್ಮನಿದ್ದುಬಿಡುವದು ಬುದ್ಧಿವಂತಿಕೆ.... "


೨. ಬೇಲಿ..
ಅವಶ್ಯವಾಗಿ ಇರಬೇಕು...
ನಮ್ಮ ಸಂತೋಷವನ್ನು
ನಾವು ಪಡೆದ ಮೇಲೆ ಬೇಲಿಯನ್ನು ಹಾಕಿಕೊಳ್ಳಬೇಕು..
ಬೇಲಿ ಸಂತೋಷವನ್ನು ಹಾಳು ಮಾಡಬಾರದು...

೩. ಈಗ ಎಲ್ಲದಕ್ಕೂ ಅಜ್ಞಾತವಾಸ...
ಆಸೆ..
ಬಯಕೆಗಳಿಗೂ ಸಹ...

೪. ಮುಚ್ಚಿದ ಕಣ್ಣುಗಳ
ಭಾವನೆಗಳು ಹೇಗೆ ಅರ್ಥವಾಗುತ್ತದೆ ...?...

೫. ಸುಖ ಸಿಗುವದಲ್ಲ...
ಸುಖವನ್ನು ಪಟ್ಟುಕೊಳ್ಳಬೇಕು...

೬. ವಾಸ್ತವದ ಮುಳ್ಳು ಚುಚ್ಚುತ್ತಿದ್ದರೂ...
ಭಾವಲೋಕದ ಗುಲಾಬಿ ಹೂ ಸುಂದರ...!

೭. "ಹೌದು... ಪಂಚಪಾಂಡವರೆಂದರೆ..
ಪ್ರೀತಿ...
ಭದ್ರತೆ..
ಸುಖ..
ಸಂತಾನ..
ಒಂದು ಮರ್ಯಾದೆಯ ಭರವಸೆಯ ಬದುಕು.."

ನಿಮಗೆ ಕರೆಮಾಡಿದಾಗ ಮೊಬೈಲ್ ನ ದಯವಿಟ್ಟು ನಿಮ್ಮ ಕಾಲ ಬಳಿ ತೆಗೆದುಕೊಂಡು ಹೋಗಿ.. ಕರೆಯಲ್ಲೆ ಒಮ್ಮೆ ಸಾಷ್ಟ್ರಂಗ ನಮಸ್ಕರಿಸುವ ಪ್ರಯತ್ನ ಮಾಡುವೆ.. ಸೂಪರ್ ಸೂಪರ್ ಅಂಡ್ ಜಸ್ಟ್ ಸೂಪರ್

vprasada said...

ವಾಸ್ತವದ ಮುಳ್ಳು ಚುಚ್ಚುತ್ತಿದ್ದರೂ...
ಭಾವಲೋಕದ ಗುಲಾಬಿ ಹೂ ಸುಂದರ...!

ಕಲ್ಪನೆಗಳು ಸೊಗಸು....

ಕನಸುಗಳು ಅದಕ್ಕಾಗಿಯೇ ಇಷ್ಟವಾಗುತ್ತವೆ...

Nice lines prakashanna

ಸತೀಶ್ ನಾಯ್ಕ್ said...

ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ...
"ಬೃಹನ್ನಳೆಗಳೇ.. ...

ಕೆಲವರು ಮಾನಸಿಕವಾಗಿ...
ಇನ್ನು ಕೆಲವರು ದೈಹಿಕವಾಗಿ...


ಬಹಳ ಅರ್ಥಪೂರ್ಣ ಸಂದೇಶವುಳ್ಳ ಸುಂದರ ಕಥೆ ಪ್ರಕಾಶಣ್ಣ. ನಿಜ ಜಗತ್ತಿನ ಶ್ರೇಷ್ಠ ಕಾವ್ಯವಾಗಬಲ್ಲ ಎಲ್ಲಾ ಅಂಶಗಳೂ ಮಹಾಭಾರತದಲ್ಲಿ ಇವೆ. ಅಷ್ಟು ಸುಲಭಕ್ಕೆ ಆ ಅಂಶಗಳು ಎಲ್ಲರಿಗೂ ಗೋಚರವಾಗುವುದಿಲ್ಲ. ನೀವು ಅದನ್ನ ತಿಳಿಸಿ ಕೊಡುವ ಪರಿಗೆ ಸಾಟಿಯಿಲ್ಲ. :)

KalavathiMadhusudan said...

vishishta vicharadhare.sundara kalpane.

SANTOSH KULKARNI said...

Tumba chennagi kate barediddira prakash....arjunanige bruhannale vesha yake hakida mattu hakalu hindina karanavenu endu e kate odida mele gottaitu....

ಭಾವದ ಕದತಟ್ಟಿ said...

ಹನ್ನೆರೆಡು ಹದಿಮೂರು ವರ್ಷಗಳ ಹಿಂದೆ ಇಟ್ಟಿಗೆಷಸೀಮೆಂಟ್ ಬ್ಲಾಗ್ ಓದ್ತಾ ಇದ್ದೆ.... ಬೃಹತ್ ಎಂಬ ಬ್ಲಾಗ್ ಇತ್ತು ನನಗೆ. ಈಗ ಅಕಾಸ್ಮತ್ತಾಗಿ ಸಿಕ್ಕಿತು.

ಪಾಂಚಾಲಿ, ಬೃಹ್ನಳೆ, ಮೂರು ಲೋಕದ ಗಂಡು, ನಪುಂಸಕತೆ... ಒಟ್ನಲ್ಲಿ.... ಬರಹ ಅದ್ಭುತವಾಗಿತ್ತು

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ said...

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com