Wednesday, July 31, 2013

ಕನ್ನಡಿ ...

ಬಹಳ ಲೆಕ್ಕಾಚಾರ ಹಾಕಿ..
ಬುದ್ಧಿವಂತಿಕೆಯಿಂದ ಈ ಕೆಲಸ ಮಾಡಿದ್ದೆ...

ಸಿಕ್ಕಿಕೊಳ್ಳುವದಿಲ್ಲ ಎನ್ನುವ ಭರವಸೆ ನನಗಿತ್ತು..


ನನ್ನಪ್ಪ ನನಗಿಂತ ಬುದ್ಧಿವಂತ..


ನಾನು ಬರೆದ ಪತ್ರ ಅವನಿಗೆ ಸಿಕ್ಕಿಬಿಟ್ಟಿತು...


" ಮಗನೆ..

ಈ ಜಗತ್ತಿನಲ್ಲಿ..
ಆಸೆ... ಬಯಕೆ ಸಹಜ...

ಬಯಸಿದ್ದನ್ನು  ಪಡೆಯುವದು..

ಪಡೆದದ್ದನ್ನು
ಸಂಭಾಳಿಸಿಕೊಂಡು  ಬದುಕಿನುದ್ದಕ್ಕೂ ನಡೆಸಿಕೊಂಡು ಹೋಗುವದಕ್ಕೆ..
ಒಂದು ಯೋಗ್ಯತೆ...
ಅರ್ಹತೆ ಅಂತ ಇರುತ್ತದೆ...

ಅದು ನಮಗೆ ಇದೆಯಾ ?..


ನಮಗೆ ಯೋಗ್ಯತೆ.. 

ಅರ್ಹತೆ ಇದೆ ಅಂತ ನಾವು ಅಂದುಕೊಳ್ಳುತ್ತೇವೆ..
ಈ ಜಗತ್ತು.. 
ನಮ್ಮ ಯೋಗ್ಯತೆಯನ್ನು ಅಳೆಯುವ ಮಾನದಂಡವೇ ಬೇರೆ... 

ನಾವು ಎಲ್ಲಿ ನಿಂತಿದ್ದೇವೆ ಎನ್ನುವದು ಬಹಳ ಮುಖ್ಯ.. 


ಸೂಕ್ಷ್ಮವಾಗಿ ನಿನಗೆ ಹೇಳಿದ್ದೇನೆ...


ಅರ್ಥ ಮಾಡಿಕೊ...


ನಮ್ಮ ಯೋಗ್ಯತೆಯನ್ನು ...

ನಾವು ತಿಳಿದುಕೊಂಡರೆ ..
ಮುಂದೆ ದುಃಖ ಪಡುವ ಸಂದರ್ಭ ಬರುವದಿಲ್ಲ..."

ಅಪ್ಪ..

ಎಂದಿನಂತೆ ತನ್ನ ಅನುಭವದ ವೇದಾಂತವನ್ನು ಕೊರೆದ..

ಮತ್ತೇನಿಲ್ಲ..


ನನ್ನ ಕ್ಲಾಸಿನ ಹುಡುಗಿಯೊಬ್ಬಳನ್ನು ನನ್ನಷ್ಟಕ್ಕೆ ನಾನು ಪ್ರೀತಿಸತೊಡಗಿದ್ದೆ...


ಚೂಪು ಮೂಗಿನ..

ಬಟ್ಟಲುಗಣ್ಣಿನ...
ಆ ಹುಡುಗಿಯ ಗಲ್ಲ ನನಗೆ ಬಲು ಇಷ್ಟ...

ಅವಳು ಮಾತನಾಡುವಾಗ ಅವಳ ತುಟಿಗಳನ್ನೇ ಗಮನಿಸುತ್ತಿದ್ದೆ...


ಮೊದಲೆ ಮುದ್ದು ಮುದ್ದಾಗಿದ್ದಳು..

ಮಾತನಾಡುವಾಗ ಮತ್ತಷ್ಟು ಚಂದ ಕಾಣುತ್ತಿದ್ದಳು...

ನಾನು ಅವಳಿಗೆ ತುಂಬಾ ಸಹಾಯ ಮಾಡುತ್ತಿದ್ದೆ..


ಅವಳ ಪ್ರಾಕ್ಟಿಕಲ್ ಜರ್ನಲ್ಲುಗಳನ್ನು..

ಅದರ ರೇಖಾಚಿತ್ರಗಳನ್ನು ನಾನೆ ಬರೆದುಕೊಡುತ್ತಿದ್ದೆ...

ನನ್ನ ಮುದ್ದಾದ ಅಕ್ಷರಗಳನ್ನು ಯಾವಾಗಲೂ ಹೊಗಳುತ್ತಿದ್ದಳು...


ನನ್ನಮ್ಮ ಮಾಡಿದ ತಿಂಡಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದಳು...


ಕಾಲೇಜು ಬಿಟ್ಟು ಮನೆಗೆ ಬಂದರೂ..

ಅವಳ ಫೋನ್ ಬರುತ್ತಿತ್ತು..
ಕಾಲೇಜಿನ ಅವಳ ಅಭ್ಯಾಸದಲ್ಲಿ ನಾನು ಇರಬೇಕಾಗಿತ್ತು.... 
ನನ್ನನ್ನು ಬಹಳ ಅವಲಂಬಿಸಿದ್ದಳು... .

ಅವಳ ಮನೆಯವರೂ ಸಹ ನಮ್ಮಿಬ್ಬರ ಸ್ನೇಹಕ್ಕೆ ಏನೂ ಹೇಳುತ್ತಿರಲಿಲ್ಲ...


ನನ್ನ ..

ಪ್ರೀತಿಯನ್ನು ಅವಳಿಗೆ ಹೇಗೆ ಹೇಳುವದು ?

ಅಂದು ..

ನಮ್ಮ ಕಾಲೇಜಿನ ಕೊನೆಯ ದಿನ...

ನಾವಿಬ್ಬರೇ ಬರುತ್ತಿದ್ದೆವು...


ಎದೆಯಲ್ಲಿ ಢವ... ಢವ... ನಗಾರಿಯ ಶಬ್ಧ... !


"ಹುಡುಗಿ...


ಒಂದು ಮಾತು ಹೇಳ್ತೀನಿ...

ಬೇಸರ ಮಾಡ್ಕೊ ಬಾರದು.. ಕೋಪ ಮಾಡ್ಕೊ ಬಾರದು..."

"ಹೇಳು ಹುಡುಗಾ...

ನಿನ್ನನ್ನು ದೇವರಷ್ಟು ನಂಬುತ್ತೇನೆ.. ಹೇಳು.."

"ಏನಿಲ್ಲ.. 

ಏನಿಲ್ಲ..."... 

ಈ ಹೃದಯವೇ ಹೀಗೆ..

ಆಸೆಗಳನ್ನು  ಹುಟ್ಟಿಸಿ.. 
ಅವುಗಳನ್ನು  ಹೇಳಿಕೊಳ್ಳುವಾಗ ಕೈ ಕೊಡುತ್ತದೆ...

ಅದರೂ ಧೈರ್ಯ ಮಾಡಿದೆ.. .


"ಹುಡುಗಿ..

ನಿನ್ನನ್ನು ನಾನು ತುಂಬಾ.. ತುಂಬಾ ಪ್ರೀತಿಸ್ತಾ ಇದ್ದೀನಿ...
ನೀನು ಶ್ರೀಮಂತೆ..
ನಾನು ಮಧ್ಯಮವರ್ಗದವ...

ಅಂತರ.. 

ಅಂತಸ್ತು..
ಆಂತರ್ಯದ ಪ್ರೀತಿಗೆ ಆಗತ್ಯವಿಲ್ಲ ಅಂತ ನನ್ನ ಭಾವನೆ..."

ಹುಡುಗಿ ಅಪ್ರತಿಭಳಾದಳು...


ಸ್ವಲ್ಪ ಹೊತ್ತು ಸುಮ್ಮನಿದ್ದಳು...


"ಹುಡುಗಾ...

ನಾನು.. ನೀನು ಇಬ್ಬರೂ ಒಳ್ಳೆಯ ಸ್ನೇಹಿತರು..
ಹಾಗಾಗಿ ನೇರವಾಗಿ ಹೇಳುತ್ತೇನೆ...
ಬೇಸರ ಮಾಡ್ಕೋಬೇಡ...

ನಿನ್ನ ಮುಖವನ್ನು 

ನೀನು  ಯಾವತ್ತಾದರೂ ನೋಡಿಕೊಂಡಿದ್ದೀಯಾ...?

ನಿನ್ನ ಕನ್ನಡಿ .. 

ನಿನಗೆ ಸತ್ಯ ಹೇಳುವದಿಲ್ಲವಾ ?

ನಿನ್ನ 

ದೊಡ್ಡ ಮೂಗು..
ದೊಡ್ಡದಾದ ಹೊಳ್ಳೆಗಳು...
ದಪ್ಪ ತುಟಿಗಳು.. 
ಮುಖದ ಮೇಲಿನ ಕಪ್ಪು ಕಲೆಗಳು.. 
ಎಷ್ಟು ಅಸಹ್ಯವಾಗಿದೆ ಗೊತ್ತಾ ?.. 

ನಾನು ಚಂದ ಇದ್ದೇನೆ... 

ಅಂತ ಅಲ್ವಾ  ನೀನು ನನ್ನನ್ನು ಇಷ್ಟ ಪಡ್ತಿರೋದು ?

ನನಗೂ ಒಂದು ಮನಸ್ಸಿದೆ..

ಆ ಮನಸ್ಸು ಚಂದ ಬಯಸುತ್ತದೆ .. 
ಎನ್ನುವ ಸಾಮಾನ್ಯ  ಜ್ಞಾನ ಬೇಡವಾ ನಿನಗೆ ?

ಹೋಗಲಿ ಬಿಡು...


ನನ್ನ ಶ್ರೀಮಂತಿಕೆ ನಿನಗೆ ಗೊತ್ತಲ್ವಾ?

ನಾನು ಬಳಸುವ ಕ್ರೀಮುಗಳ ಬೆಲೆಯಲ್ಲಿ ... 
ನಿಮ್ಮ ಮನೆಯವರ ತಿಂಗಳ ಜೀವನ ನಡೆಯುತ್ತದೆ..."

ನನಗೆ ಬಹಳ ದುಃಖವಾಯಿತು...

ತಲೆ ತಗ್ಗಿಸಿದ್ದೆ..

" ನನ್ನ ಮನೆಯವರು ..

ನನ್ನನ್ನು ನಿನ್ನೊಡನೆ ... 
ಯಾಕೆ ಹೀಗೆ ಸಲುಗೆಯಿಂದ ಇರಲಿಕ್ಕೆ ಬಿಟ್ಟಿದ್ದಾರೆ ಗೊತ್ತಾ ?

ನಿನ್ನ ಕುರೂಪ... !


ನಿನ್ನ ಕುರೂಪವನ್ನು .. 

ನಾನು ಇಷ್ಟಪಡಲಾರೆ ಎನ್ನುವ ಭರವಸೆ ಅವರಿಗೆ ಇದೆ...

ಹುಡುಗಾ...

ಕುರೂಪದಷ್ಟು ಅಸಹ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ..."

ನಾನು ಕುಸಿದು ಹೋದೆ...


ಈ ಜಗತ್ತಿನ ... 

ಕರಾಳ ಸ್ವರೂಪ ನನ್ನ ಕಣ್ಣೆದುರಿಗೆ ಅಸಹ್ಯವಾಗಿ ಅಣಕಿಸುತ್ತಿತ್ತು....

ಕುರೂಪ ನನ್ನ ತಪ್ಪಾ?


ಸೌಂದರ್ಯ 

ಇಲ್ಲದ ಮೇಲೆ... 
ಪ್ರೀತಿಸುವ ಹೃದಯ ಯಾಕೆ ?... 

ಜೋರಾಗಿ ರೋಧಿಸಿದೆ...

ಅತ್ತೆ...

ಆ ಹುಡುಗಿಯ ..

ಬಟ್ಟಲುಗಣ್ಣು..
ಮುದ್ದಾದ ಗಲ್ಲ ನಾನು ಮರೆಯಲಾರದೆ ಹೋದೆ...

" ಹುಡುಗಾ..

ನನ್ನ ಬಗೆಗೆ ಬೇಸರ ಬೇಡ..
ನಿನ್ನನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ..

ಇಂದಲ್ಲ..

ನಾಳೆ.. 
ನಿನಗೆ ಈ  ಕಹಿ ಸತ್ಯವನ್ನು ಯಾರಾದರೂ ಹೇಳಲೇ ಬೇಕಿತ್ತು.. 
ನಾನು ಹೇಳಿದೆ..
ದಯವಿಟ್ಟು ಬೇಸರ ಬೇಡ.."

ಈ ಪ್ರೀತಿ..

ಪ್ರೇಮ... ಕಾಮಕ್ಕೆಲ್ಲ ಯಾಕೆ ..
ಅಂದ 
ಚಂದ ಬೇಕು... ?

ನನ್ನಂಥಹ ಕುರೂಪದ  ..

ಅಗತ್ಯ ..
ಈ ಜಗತ್ತಿಗೆ  ಇಲ್ಲ ಎಂದ ಮೇಲೆ ...
ನನ್ನಂಥವನ ಹುಟ್ಟು ಇಲ್ಲಿ ಯಾಕೆ?..

ನನಗೆ ಅವಳ ಮೇಲೆ ಕೋಪ ಬರಲಿಲ್ಲ...


ಕನ್ನಡಿಯಲ್ಲಿ ಮುಖ ನೋಡಿಕೊಂಡೆ..


ನನ್ನ ಮೂಗಿನ ಆಕಾರ..

ಹೊಳ್ಳೆಗಳು .. 
ಮುಖದ ಮೇಲಿನ ಕಪ್ಪನೆಯ ಕಲೆಗಳು... 
ತುಟಿಗಳ ಗಾತ್ರ ಚಂದ ಇಲ್ಲವಾ?

ಜಗತ್ತಿನ ದೃಷ್ಟಿಯಲ್ಲಿ ... 

ಅಂದ.. ಚಂದ ಎಂದರೆ ಏನು ?

ಅಂದ 

ಚಂದ ಇಲ್ಲದವರಿಗೆ .. 
ಆಸೆಗಳೂ ಇರಬಾರದು..
ಪ್ರೀತಿ..
ಪ್ರೇಮಗಳ ಬಯಕೆಯೂ ಸುಟ್ಟು ಹೋಗಿಬಿಡಬೇಕು..

ನಾನು ಅಸಹ್ಯವಾಗಿದ್ದರೂ...

ಈ ದೇಹಕ್ಕೆ ..
ಈ ದೇಹದ ಕಾಮಕ್ಕೆ .. 
ಅಂದ.. ಚಂದಗಳೇ.. ಬೇಕಲ್ಲ.. !..

ಕಾಲೇಜು ಮುಗಿದ ಮೇಲೆಯೂ ...

ಆ ಹುಡುಗಿ ಸ್ನೇಹ ಇಟ್ಟುಕೊಂಡಿದ್ದಳು...

ಒಂದು ದಿನ ಸಡಗರದಿಂದ ಓಡೋಡಿ ಬಂದಳು..!


ಸಂಭ್ರಮ ಪಡುವ ... 

ಹುಡುಗಿಯ ಚಂದದ ಸೊಬಗೇ ಬೇರೆ....

ಕಣ್ ತುಂಬ ... 

ಮನದಣಿಯೇ ಅವಳನ್ನು ನೋಡಿದೆ..

" ಹುಡುಗಾ...


ನನ್ನ ಮದುವೆ  ನಿಶ್ಚಯ ಆಗಿದೆ... 

 ಮದುವೆಗೆ ಬಾ...
ಹಳೆಯದನ್ನೆಲ್ಲ ಮರೆತು ಬಿಡು..."

"ಹುಡುಗ ಹೇಗಿದ್ದಾನೆ..?.."


"ತುಂಬಾ ತುಂಟ..

ಅಂದವಿದ್ದಾನೆ... 
ಶ್ರೀಮಂತ...

ನನ್ನ ಚಂದವನ್ನು ಇಷ್ಟಪಟ್ಟು ಬಂದಿದ್ದಾನೆ...

ನಾನೂ ಇಷ್ಟ ಪಟ್ಟಿದ್ದೇನೆ.. "

ನನ್ನ ಹೃದಯವನ್ನು ... 

ಹಿಂಡಿ .... 
ಎಲ್ಲೋ ಕಸದ ತಿಪ್ಪೆಗೆ ಬೀಸಾಕಿ ಒಗೆದ ಅನುಭವಾಯ್ತು...

ನಾನು ಅವಳ ಮದುವೆಗೆ ಹೋಗಲಿಲ್ಲ...


ಮದುವೆಯಾದಮೇಲೂ ಆಹುಡುಗಿ 

ಆಗ ಈಗ ಫೋನ್ ಮಾಡುತ್ತಿದ್ದಳು...

ಬಹುಷಃ ... 

ಅವಳ  ಮದುವೆಯಾಗಿ ನಾಲ್ಕೈದು ವರ್ಷಗಳಾಗಿರಬಹುದು...

"ಹುಡುಗಾ..

ತುರ್ತಾಗಿ ನಿನ್ನ ಬಳಿ ಮಾತನಾಡಬೇಕು... 
ಭೇಟಿ ಆಗ್ತೀಯಾ...?"

ಹೆಚ್ಚಿನ ನಿರೀಕ್ಷೆಗಳಿಲ್ಲದಿರುವಾಗ ಉತ್ಸಾಹವೂ ಕಡಿಮೆ...

ಹೃದಯದ ಬಡಿತವೂ ಕಡಿಮೆ...

ತಿಳಿ ನೀಲಿ ಸಾರಿಯಲ್ಲಿ ಹುಡುಗಿ ಮುದ್ದಾಗಿ ಕಾಣುತ್ತಿದ್ದಳು..

ಮುಖ ಬಾಡಿತ್ತು..

ಅವಳನ್ನು.. 

ಬಾಚಿ ತಬ್ಬಿ ಎದೆಗೆ ಆನಿಸಿಕೊಳ್ಳುವ ಆಸೆ ಆಯ್ತು... 

"ಹುಡುಗಾ...

ಒಂದು ವಂಚನೆಯ ಪ್ರಕರಣದಲ್ಲಿ ನನ್ನ ಗಂಡ ಜೈಲು ಸೇರಿದ್ದಾನೆ...
ಮರ್ಯಾದೆ ಮೂರು ಪಾಲಾಯಿತು...

ಸತ್ತು ಹೋಗೋಣ ಅನ್ನಿಸುತ್ತದೆ..."


"ಸಾಯುವದಕ್ಕಲ್ಲ .. 

ಹುಟ್ಟಿರುವದು..
ಬದುಕಿ ಸಾಧಿಸುವದಕ್ಕೆ...

ನನ್ನಂಥಹ ಹತಭಾಗ್ಯ ಕುರೂಪಿ ಇನ್ನೂ ಬದುಕಿ ಇದ್ದಿನಿ ನೋಡು...


ಧೈರ್ಯವಾಗಿರು.. 

ನಾನಿದ್ದೇನೆ... 
ಸಹಾಯ ಮಾಡುವೆ... "

ಅವಳಿಗೊಂದು ಕೆಲಸದ ಅಗತ್ಯವಿತ್ತು..


ನನ್ನ ಕಂಪನಿಯಲ್ಲೆ ಕೆಲಸ ಕೊಡಿಸಿದೆ...


ಕೆಲಸ..

ದುಡಿಮೆ ದುಃಖವನ್ನು ಮರೆಸಬಲ್ಲದು...

ಹುಡುಗಿ ಕೆಲಸದಲ್ಲಿ ಮಗ್ನಳಾಗಿ ... 

ದುಃಖವನ್ನು ಮರೆಯುತ್ತ ಬಂದಳು...

ಅವಳಿಗೆ ತನ್ನ ಗಂಡನ ಕೇಸನ್ನು ನಡೆಸಲು ... 

ಹಣದ ಸಹಾಯ ಬೇಕಿತ್ತು..
ನಾನು ಮಾಡಿದೆ..

ಅವಳ ಕೃತಜ್ಞತಾ ಭಾವದ ನೋಟದಲ್ಲಿ ಪ್ರೀತಿ ಇತ್ತಾ ?


ನನ್ನೊಳಗೆ ಹುದುಗಿರುವ .. 

ಹುಚ್ಚು ಪ್ರೀತಿ ಯಾವಾಗಲೂ ಹೀಗೆ..
ಏನೆಲ್ಲ ಯೋಚಿಸಿಬಿಡುತ್ತದೆ..

ನಿತ್ಯ ಅವಳನ್ನು 

ಮನೆಯವರೆಗೆ ನಾನು ನನ್ನ ಕಾರಿನಲ್ಲಿ ಬಿಟ್ಟು ಬರುತ್ತಿದ್ದೆ...

ಅವಳು ಮಾತನಾಡುತ್ತಿದ್ದಳು..
ನಾನು ಅವಳನ್ನು ನೋಡುತ್ತಿದ್ದೆ...

ಕಣ್ ತುಂಬಾ.. 

ಹೃದಯದ ತುಂಬಾ ನೋಡುತ್ತಿದ್ದೆ...

" ಹುಡುಗಾ... 

ನೀನು ಇನ್ನೂ ಯಾಕೆ ಮದುವೆ  ಆಗಲಿಲ್ಲ....?.."

ನಾನು ಸ್ವಲ್ಪ ಹೊತ್ತು ಸುಮ್ಮನಿದ್ದೆ... 


"ಹುಡುಗಿ... 

ನನ್ನ ಬದುಕಿನ ಕುರೂಪವನ್ನು  
ನನ್ನ ಮಡದಿ ನರಕ ಅನುಭವಿಸದೆ ಇರಲಿ ಅಂತ.. 

ನನ್ನ ಅಸಹ್ಯದ ಭಾಗ್ಯ ... 

ನನ್ನ ಮಕ್ಕಳಿಗೆ ಬಾರದಿರಲಿ ಅಂತ... "

ಹುಡುಗಿ ...

ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನು ದಿಟ್ಟಿಸಿದಳು.. 

ಬದುಕಿನುದ್ದಕ್ಕೂ .... 

ಕಾಡಿದ ನೋವು 
ನನ್ನ ಕಣ್ಣಿನಲ್ಲೂ ನೀರಾಡಿತು.. 

ಜಗತ್ತಿನಲ್ಲಿ 

ಕ್ಯಾನ್ಸರಿಗಿಂತ... 
ಏಡ್ಸಿಗಿಂತ ದೊಡ್ಡದಾದ ರೋಗವಿದ್ದರೆ .. 
ಅದು ಕುರೂಪ... 

ಈ ಔಷಧವಿಲ್ಲದ 

ರೋಗದ ಬಗೆಗೆ... 
ನಿತ್ಯ 
ಅಸಹ್ಯ ಭಾವನೆಯ ನರಕವನ್ನು ... 
ಅನುಭವಿಸುವ ನನಗೆ ಗೊತ್ತು... 

ಹೀಗೆ ..

ಒಂದು ದಿನ ಆಫೀಸಿನಲ್ಲಿರುವಾಗ ಹುಡುಗಿ ... 
ಕಣ್ಣಿನಲ್ಲಿ ನಗುತ್ತಾ ಕೇಳಿದಳು...

"ಹುಡುಗಾ..

ನೀನು ನನ್ನನ್ನು ಬಯಸಿದ್ದೆಯಾ?.."

" ಅದೆಲ್ಲ ಯಾಕೆ ಈಗ..?"


"ನಿಜ ಹೇಳು...

ನೀನು ನನ್ನನ್ನು ಬಯಸಿದ್ದೆಯಾ..?"

ನನಗೆ ಅವಳ ಮುಖವನ್ನು ನೋಡಬೇಕೆಂದರೂ... 

ನೋಡಲಾಗಲಿಲ್ಲ... 

"ಹೌದು..."


"ಈಗ...?"


ನಾನು ಅವಳ ಕಣ್ಣುಗಳನ್ನು ನೋಡುವ ಧೈರ್ಯ ಮಾಡಿದೆ...


ಕಣ್ಣಿನಲ್ಲಿ ಆಹ್ವಾನ ಇತ್ತಾ..?


ನನ್ನ ಕುರೂಪ ನೆನಪಾಯಿತು..


"ಹುಡುಗಿ..

ಆಸೆಗಳಿಗೂ..
ಬಯಕೆಗಳಿಗೂ ಅರ್ಹತೆ.. ಯೋಗ್ಯತೆ ಇರಬೇಕಲ್ಲವೆ ?.
ನನಗೆ ಅದು ಇಲ್ಲ..."

"ಹುಡುಗಾ...

ಇವತ್ತು ಯಾವುದಾದರೂ ಒಂದು ಹೊಟೆಲ್ಲಿನಲ್ಲಿ ... 
ರೂಮ್ ಮಾಡು..
ಇಂದು ರಾತ್ರಿ ನಿನ್ನೊಡನೆ ಕಳೆಯುತ್ತೇನೆ.."

ನಾನು ಅವಕ್ಕಾದೆ... 

ಗಾಭರಿಬಿದ್ದೆ...!

"ಹುಡುಗಾ..

ತಮಾಶೆ ಮಾಡುತ್ತಿಲ್ಲ... 
ನನ್ನನ್ನು ನಂಬು... 
ಅನುಕಂಪದಿಂದಲ್ಲ..  ಕರುಣೆಯಿಂದಲೂ ಅಲ್ಲ... 
ಮನಸಾರೆ  ಬಯಸುತ್ತಿರುವೆ... 
ನಿಜವಾಗಿಯೂ ಹೇಳುತ್ತಿರುವೆ..."

ನಾನು ಖುರ್ಚಿಯಿಂದೆದ್ದು ... 

ಹೊರಗೆ ಟಾಯ್ಲೆಟ್ಟಿಗೆ ಹೋಗಿ ಬಂದೆ...

"ಎಲ್ಲಿಗೆ ಹೋಗಿದ್ದೆ..?.."


"ಕನ್ನಡಿಯಲ್ಲಿ ... 

ನನ್ನ ಮುಖ ನೋಡಿಕೊಳ್ಳುವದಕ್ಕೆ..."

ಹುಡುಗಿ ಸುಮ್ಮನಿದ್ದಳು...


"ಹುಡುಗಿ...

ನನ್ನದು ಅದೇ ಮೂಗು..
ಅದೇ .. 
ದೊಡ್ಡದಾದ ಹೊಳ್ಳೆಗಳು...
ದಪ್ಪ ತುಟಿಗಳು.. 
ಮುಖದ ಮೇಲೆ ಅದೇ.. ಕಪ್ಪು ಕಲೆಗಳು.. !

ಅಗಲೂ .. 

ಅರ್ಹತೆ .. 
ಯೋಗ್ಯತೆ ಇರಲಿಲ್ಲ...

ಈಗಲೂ ಇಲ್ಲ..


ಅಂದಿಗೂ..

ಇಂದಿಗೂ ಏನು ವ್ಯತ್ಯಾಸ ಗೊತ್ತಾ ಹುಡುಗಿ...?"

"ಏನು...?"


" ಸಮಯ..... !!


ಸಮಯ...ಟೈಮ್  ..
ಅರ್ಹತೆ.. ಯೋಗ್ಯತೆಯನ್ನು ತಂದುಕೊಡುತ್ತದೆ..!. "    




(ಚಂದದ ಪ್ರತಿಕ್ರಿಯೆಗಳಿವೆ.. ದಯವಿಟ್ಟು ಓದಿ...)

36 comments:

ವೆಂಕಟೇಶ್ ಹೆಗಡೆ said...

ನೈಸ್ ಪ್ರಕಾಶಣ್ಣ ... ತುಂಬಾ ಚೆನ್ನಾಗಿದೆ .. ಆದರೆ ಪ್ರೀತಿ ಕುರುಡು ಅಂತಾರಲ್ಲ ... ನಾವೇ ನೋಡಿದ್ದೇವೆ ಅರೆ ಇಷ್ಟು ಚಂದ ಹುಡುಗಿ / ಹುಡುಗ ಅಂತ ಕುರೂಪ/ಕುರೂಪಿ ನನ್ನು ಮದ್ವೆ ಆದಳಲ್ಲ ಅಂತ ಇದಕ್ಕೆ ಏನು ಹೇಳೋದು ? ಅಲ್ವ?

Ittigecement said...

ಪ್ರೀತಿಯ ವೆಂಕಟೆಶು...

ಆದರೂ..
ಈ ಚಂದ ಎಂದರೇನು.. ?
ನಾವು
ನಮ್ಮ ಮನಸ್ಸು ಬಯಸುವ ಅಂದ ಅಂದರೆ ಏನು ?

ಅಸಹ್ಯ ಕುರೂಪ ಎಂದರೇನು ?
ಕುರೂಪದ ಜೊತೆ ಪ್ರೇಮ.. ಪ್ರೀತಿ.. ಕಾಮ ಯಾಕೆ ಸಾಧ್ಯವಿಲ್ಲ.. ?

ನನ್ನ ಕ್ಲಾಸ್ ಮೇಟ್ ಒಬ್ಬಳಿದ್ದಳು..

ಒಮ್ಮೆ ಅವಳು ತನ್ನ ಅಂತರಂಗದ ನೋವನ್ನು ಹೇಳಿಕೊಂಡಿದ್ದಳು...
ಅವಳು ಅತ್ತಿದ್ದು...ಅವಳ ನೋವನ್ನು ಯಾವತ್ತೂ ಮರೆಯಲಾರೆ...

ಇನ್ನೊಂದು ಆಶ್ಚರ್ಯ ಗೊತ್ತಾ?

ಪ್ರತಿಯೊಬ್ಬರಿಗೂ ತಾವು ಚಂದವಿಲ್ಲ ಎನ್ನುವ ಭಾವನೆ ಕಾಡುತ್ತದೆಯಂತೆ...

ಐಶ್ವರ್ಯ ರೈ ಬಚ್ಚನ್ ಗೂ ಕೂಡ.. !!

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬು ಪ್ರೀತಿಯ ಜೈ ಹೋ.. !!

Srikanth Manjunath said...

ಹೊಟ್ಟೆ ಹಸಿದಿರಬೇಕು ಹಿಟ್ಟು ಹಳಸಿರಬೇಕು ಗಾದೆ ಮಾತು ಎಷ್ಟು ಸೊಗಸಾಗಿದೆ. ರೂಪವಿದ್ದಾಗ ಕಾಮಕ್ಕೆ ವಿರಾಮವಿರೋಲ್ಲ.. ವಿರಾಮವಿದ್ದಾಗ ಕಾಮ ಪೂರ್ಣವಿರಾಮ ಹಾಕಿರುತ್ತೆ. ಅಗತ್ಯತೆ ಅನ್ವೇಷಣೆಗೆ ದಾರಿ ಎನ್ನುತ್ತಾರೆ ಹಿರಿಯರು. ಯೌವನದ ಬಿಸಿ ಮೈಗೆ ಅಡರಿದ್ದಾಗ ಅಂದ ಚಂದ ಬ್ರಹ್ಮಾಂಡ ಅನ್ನಿಸುವ ವಯಸ್ಸು, ಅಗತ್ಯತೆ ಅತಿಯಾಗಿ, ನಿಂತ ನೆಲ ಬಾಯಿ ಬಿಟ್ಟಾಗ, ಸಿಕ್ಕಿದ್ದೇ ಅಗತ್ಯತೆ ಎನ್ನುವ ಮಟ್ಟಕ್ಕೆ ಮನಸ್ಸು ಇಳಿಯಬಾರದು. ನಾಯಕಿ ತನ್ನ ಯಾವುದೋ ಅಗತ್ಯಕ್ಕೆ, ಅಥವಾ ಸಹಾಯ ಮಾಡಿದ ಎನ್ನುವ ಕಾರಣಕ್ಕೆ ಅಥವಾ ದಾಕ್ಷಿಣ್ಯಕ್ಕೆ ಮನಸೋತರೂ, ನಾಯಕ ತನ್ನ ಯೋಗ್ಯತೆ, ತನ್ನ ಮಿತಿಯನ್ನು ಸರಿಯಾಗಿ ಅರಿತಿದ್ದಾನೆ ಹಾಗೆಯೇ ನಾಯಕಿಯದು ಬರಿಯ ದೈಹಿಕ ವಾಂಚಲ್ಯವೇ ಹೊರತು ಹೃದಯದ್ದಲ್ಲ ಅನ್ನುವ ಅವನ ನಿಲುವು ಸರಿಯಾಗಿದೆ. ಪ್ರಕಾಶಣ್ಣ ಇಷ್ಟವಾಯಿತು.

ನನಗೆ ತುಂಬಾ ಇಷ್ಟವಾದ ಸಾಲುಗಳು :

ಹೆಚ್ಚಿನ ನಿರೀಕ್ಷೆಗಳಿಲ್ಲದಿರುವಾಗ ಉತ್ಸಾಹವೂ ಕಡಿಮೆ...
ಹೃದಯದ ಬಡಿತವೂ ಕಡಿಮೆ...

ಆಸೆಗಳಿಗೂ..
ಬಯಕೆಗಳಿಗೂ ಅರ್ಹತೆ.. ಯೋಗ್ಯತೆ ಇರಬೇಕಲ್ಲವೆ ?.

ಸಮಯ...
ಟೈಮ್ ಅರ್ಹತೆ..
ಯೋಗ್ಯತೆಯನ್ನು ತಂದುಕೊಡುತ್ತದೆ..!. "

ದಿನಕರ ಮೊಗೇರ said...

Oh... wonderful... super narration Prakashanna. Katheya vastu tumbaa chennaagide.. bareda reetiyantu soopar....
Kathavastu soopar..

Ittigecement said...

ಶ್ರೀಕಾಂತು..

ಅಂದ ಚಂದಗಳ ವಿಷಯ ಬಹಳ ವಿಚಿತ್ರ...

ದಿನದಲ್ಲಿ ಎಷ್ಟೆಲ್ಲ ಬಾರಿ ಕನ್ನಡಿ ನೋಡಿದರೂ..
ಅದು ನಮ್ಮ ಚಂದವನ್ನೇ ಹೇಳುತ್ತದೆ.. ತೋರಿಸುತ್ತದೆ...

ಇಲ್ಲಿ ನಾಯಕನಿಗೂ ಸಹ ಹಾಗೆಯೆ...

ಚಂದದ ಹುಡುಗಿಯನ್ನು ಇಷ್ಟಪಡಲು ತನಗಿರುವ ಯೋಗ್ಯತೆ ಏನು ? ಅಂತ ಯೋಚಿಸದೆ ಪ್ರೇಮ ನಿವೇದನೆ ಮಾಡುತ್ತಾನೆ..

ಅವಳು ತಿರಸ್ಕರಿಸುತ್ತಾಳೆ..

ಆದರೆ ಕೊನೆಗೆ "ಸಮಯ" ಅವಳನ್ನು ತಾನು ಮಾಡಿದ ತಪ್ಪನ್ನು
ತನ್ನ ಕನ್ನಡಿಯಲ್ಲಿ ತೋರಿಸಿದಾಗ ಅರಿವಾಗುತ್ತದೆ..

ನಿಮ್ಮ ಪ್ರತಿಕ್ರಿಯೆ ನಮ್ಮ ಮನೆಯವರಿಗೆಲ್ಲ ಇಷ್ಟ ಆಯಿತು...

ಕಥೆ ಬರೆದದ್ದು ಸಾರ್ಥಕ ಎನ್ನುವಂಥಹ ಪ್ರತಿಕ್ರಿಯೆ.. ತುಂಬಾ ತುಂಬಾ ಧನ್ಯವಾದಗಳು ಶ್ರೀಕಾಂತು..

samanvaya bhat said...

soooper aaju prakashanna... eegina kalakke takka nidarshana...

Sudeepa ಸುದೀಪ said...

ತುಂಬಾ ಇಷ್ಟ ಆಯ್ತು ಪ್ರಕಾಶಣ್ಣ....

ಜಲನಯನ said...

ಪ್ರಕಾಶೂ...
ರೂಪ ಯೌವನದಲ್ಲಿ ಆಕರ್ಷನೆಗೆ ಒಂದು ಪ್ರಮುಖ ಕಾರಣ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಪ್ರಿತಿಯೇ ಬೇರೆ ಕಾಮ ಪೀಪಾಸುತನವೇ ಬೇರೆ...ಇದಕ್ಕೆ ವಯಸು, ರೂಪ ಯಾವುದೂ ಅಡ್ಡವಲ್ಲ ಎನ್ನುವುದು ಆಗಾಗ್ಗೇ ಕೇಳಿಬರುವ ಅತ್ಯಾಚಾರ ಪ್ರಕರಣಗಳು ಸಾಕ್ಷಿ, ಆದರೆ ಒಂದು ಹಂತದಲ್ಲಿ ಬಯಕೆಗಳು ಮರೀಚಿಕೆಯಾದಾಗ ರೂಪ ಬಹುಶಃ ಗೌಣವಾಗುತ್ತದೆ..ಅಥವಾ ಕಡೆಗಣಿಸುತ್ತೇವೆ..
ಇಲ್ಲಿಯೂ ಅದೇ ಆಗಿದೆ ಎನಿಸುತ್ತೆ.
ಸುಂದರ ಸಂಭಾಷಣೆ-ಮಿಶ್ರಿತ ಕಥಾ ನಿರೂಪಣೆ ಎಂದಿನಂತೆ ನಿನ್ನ ಶೈಲಿ...ಇಷ್ಟ ಆಯ್ತು.

Ittigecement said...

ಪ್ರೀತಿಯ ದಿನಕರ..

ಮೊದಲು ಈ ಕಥೆಯನ್ನು ನನ್ನ ಮಡದಿಗೆ ಹೇಳಿದೆ..

ಚೆನ್ನಾಗಿ ಬಯ್ಯಿಸಿಕೊಂಡೆ..

ಕಥೆಯಲ್ಲಿ ನಾಯಕನ ಬದಲು ನಾಯಕಿ ತನ್ನ ಕಥೆಯನ್ನು ಹೇಳುವ ಹಾಗೆ ಮಾಡಿದ್ದೆ...

ಆಮೇಲೆ ನನ್ನ ತುಂಬಾ ಆತ್ಮಿಯ ಸಹೋದರಿ ಹೆಣ್ಣು ಮಗಳೊಬ್ಬಳಿಗೆ ಹೇಳಿದೆ..
ಆಗ
ಇಲ್ಲಿ ಇರುವ ಹಾಗೆ ನಾಯಕನ ಕಥೆಯಂತೆ ಹೇಳಿದೆ..

ಅವರಿಗೆ ಇದು ಇಷ್ಟವಾಯ್ತು..

"ಹೆಣ್ಣು ಮಕ್ಕಳು ರೂಪದ ಬಗೆಗೆ ತಲೆ ಕೆಡಿಸಿಕೊಳ್ಳುವದು.. ಸಹಜ..
ಹಾಗೆ ಕೊನೆಯಲ್ಲಿ ನಾಯಕ ಹೆಣ್ಣನ್ನು ರೂಮಿಗೆ ಆಹ್ವಾನಿಸುವದು ಮತ್ತೂ ಸಹಜ,...

ಈಗ ಸ್ವಲ್ಪ ಬದಲಾವಣೆ ಇದೆ..
ಹೆಣ್ಣು ರೂಮಿಗೆ ಆಹ್ವಾನಿಸುವದು ಸ್ವಲ್ಪ ಅಸಹಜ ಎನಿಸಿದರೂ..
ಇತ್ತೀಚೆಗೆ ತೀರಾ ಸಹಜ..

ಅತ್ತಿಗೆ ಹಾಗಾಗಿಯೆ ಬಯ್ದದ್ದು...."

ಈಗ ಬರೆದ ಕಥೆಯನ್ನು ಮತ್ತೊಮ್ಮೆ ನನ್ನಾಕೆಗೆ ಹೇಳಿದೆ...

"ಕಥಾವಸ್ತು ತೀರಾ ಎಡವಟ್ಟು ಇದೆ.. ಆದರೂ ಓಕೆ.."

ಸೆನ್ಸಾರ್ ಮಂಡಳಿ ಓಕೆ ಎಂದಿದ್ದರಿಂದ ಇಲ್ಲಿ ಹಾಕಿದೆ... :)

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

Mahesh Gowda said...
This comment has been removed by the author.
Mahesh Gowda said...

ನಮ್ಮ ಯೋಗ್ಯತೆಯನ್ನು ...
ನಾವು ತಿಳಿದುಕೊಂಡರೆ ..
ಮುಂದೆ ದುಃಖ ಪಡುವ ಸಂದರ್ಭ ಬರುವದಿಲ್ಲ...


tumba idisitu annaya

Badarinath Palavalli said...

ನಿಜ ಹೇಳಲಾ ಪ್ರಕಾಶಣ್ಣ, ಮೊದಲಿನಿಂದಲೂ ನನ್ನ ಕುರೂಪತೆ ನನಗೆ ಶಾಪವೇ! ಒಪ್ಪವಿಲ್ಲದ ಹಲ್ಲುಗಳು, ತೊದಲು ಮಾತು ಮತ್ತು ಡೊಳ್ಳು ಹೊಟ್ಟೆ ನನ್ನನ್ನು ಅದೆಷ್ಟು ಕುಬ್ಜವಾಗಿಸಿದ್ದಾವೋ ನನಗೊಬ್ಬನಿಗೇ ಗೊತ್ತು. ಒಂದು ಕಡೆ ನಾನು ಚೆನ್ನಾಗಿಲ್ಲ, ಮಾತನಾಡುವ ಕಲೆ ಗೊತ್ತಿಲ್ಲ ಎನ್ನುವುದರ ಜೊತೆಗೆ ನನ್ನ ಕವಿತೆ ಯಾರು ಓದುತ್ತಾರೆ ಎನ್ನುತ ಅಳಲು ನನ್ನನ್ನು ಮತ್ತಷ್ಟು ಝರ್ಜರಿತ ಮಾಡಿಹಾಕಿದ್ದವು. ಭಾಗವಂತ ಅದಕ್ಕೆ ಉತ್ತರವೆನ್ನುವಂತೆ ನನಗೆ ಬಂಗಾರದಂತ ಬಾಳಾ ಸಂಗಾತಿ ಕೊಟ್ಟ.

ದೇವರಷ್ಟು ನಂಬುವ ಹುಡುಗಿ ಯಾವ ಕಾರಣಕ್ಕೆ ಮನೆಗೆ ಕರೆದುಕೊಂಡು ಹೋಗುತ್ತೋಯಿದ್ದಳು ಮತ್ತು ಅದೇ ಹುಡುಗಿ ಕಾಲನ ಹೊಡೆತಕ್ಕೆ ಸಿಕ್ಕು ಮೈ ಒಪ್ಪಿಸಲು ನಿಂತಳು ಇವೆಲ್ಲಕ್ಕೂ ಉತ್ತರ ನಿಮ್ಮ ಕಡೆಯ ಸಾಲುಗಳೇ.

ಹೊರ ರೂಪಿಗೆ ಇರುವ ಮರ್ಯಾದೆ, ಅಂತರಂಗದ ಸೌಂದರ್ಯಕ್ಕೆ ಯಾವಾಗ ಸಲ್ಲುವಂತಾಗುತ್ತದೋ ಈ ದರಿಧ್ರ ಜಗದಲ್ಲಿ!

bilimugilu said...

Prakash Ji,

Antarangada "Soundarya" tiLiyalu khanditvaagiyu samayavE bEkaayitu.
Baahya Soundaryakke maaru hOguva guNa gandu / hennu ibbarigoo idhe. Ibbaroo saha nimma ee mana miDiyuva katheyinda kaliyuvudu idhe.

Obba hudugi / huduga ee-reethi comment maaDi avara self-confidence kuggisi bittirtaare. Sookshmaathi sookshma manasugaLu ghaasiyaagi koneyavaregoo heege uLidubiDuttave.

Nimma message ee article moolaka tumbaa chennaagi reach aagide.

Thank you for sharing :)

shubha hegde said...

'Beauty is strengh'no doubt especially for women.in yester years many times i have personally confronted 'un forgettable' treat from the society. I felt inferior my self got nervous from poverty and unfairness, obiviously these two qualities became obstacle to reach my destination it became curse. even today have i noticed even so called 'educated' group diffentiate the person fot 'what is has not for he is'. but, mere beauty is not evrything in life but evry thing is beautiful when u have best quality of mind.
In this particular story also she craved for beauty and luxuious life, rejected her love,...instead of trying to make her life beatifully.u have put very good message here 'time and opportunity' prooves what we are..some situations solves themselves..nice story.

shubha hegde said...

'Beauty is strength'no doubt especially for women.in yester years many times i have personally confronted 'un forgettable' treat from the society. I felt inferior my self got nervous from poverty and unfairness, obiviously these two qualities became obstacle to reach my destination it became curse. even today have i noticed even so called 'educated' group diffentiate the person fot 'what is has not for he is'. but, mere beauty is not evrything in life but evry thing is beautiful when u have best quality of mind.
In this particular story also she craved for beauty and luxuious life, rejected her love,...instead of trying to make her life beatifully.u have put very good message here 'time and opportunity' prooves what we are..some situations solves themselves..nice story.

ಸಂಧ್ಯಾ ಶ್ರೀಧರ್ ಭಟ್ said...

"ಕನ್ನಡಿ " ನಮ್ಮ ಬಿಂಬಕ್ಕೆ ಪ್ರತಿಬಿಂಬ ... ನಮ್ಮ ರೂಪಕ್ಕೆ ಪ್ರತಿರೂಪ ...

ಇಲ್ಲಿ ಅವನ ಕುರೂಪವನ್ನು ತೋರಿದ್ದು ಕನ್ನಡಿ ...

ಅವಳಿಗೆ ಅವನ ಅಗತ್ಯತೆಯನ್ನು ತೋರಿದ್ದು ಬದುಕಿನ ಕನ್ನಡಿ ...

ರೂಪ ಕುರೂಪವಾದರೆನಂತೆ ಪ್ರೀತಿ ನಿಸ್ವಾರ್ಥ ಎಂದು ತೋರಿದ್ದು ಹುಡುಗನ ಮನಸ್ಸೆಂಬ ಕನ್ನಡಿ ...

ಅವಳ ಮನಸ್ಸಿನ ಕುರೂಪವನ್ನು ಅವಳಿಗೇ ತೋರಿದ್ದು "ಸಮಯ"ವೆಂಬ ಕನ್ನಡಿ...

ಒಮ್ಮೆ ಒಡೆದ ಕನ್ನಡಿ ಮತ್ತೆಂದೂ ಪ್ರತಿಬಿಂಬ ಮೂಡಿಸಲಾರದು ಎಂದು ತೋರಿಸಿಕೊಟ್ಟಿದ್ದು ಕೊನೆಯಲ್ಲಿನ ನಾಯಕನ ನಿರ್ಧಾರ ... !!!

ಕಣ್ಕಟ್ಟುವ ಅಪ"ರೂಪ"ದ ಕಥೆ ...

ಮೌನರಾಗ said...

ಸೂಪರ್ ಅಣ್ಣಯ್ಯ...
ಯೋಗ್ಯತೆಗಳನ್ನೂ ಕಾಲವೇ ನಿರ್ಧರಿಸುವುದು ಕಾಲದ ಮಹಿಮೆಯೇ ಸರಿ..

balasubramanya said...

ಈ ಕಥೆಗೆ ಹೇಗೆ ಪ್ರತಿಕ್ರಿಯೇ ನೀಡಬೇಕೆಂದು ತಿಳಿಯುತ್ತಿಲ್ಲ, ಇದು ಒಂದು ವಾಸ್ತವ ನೆಲೆಗಟ್ಟಿನ ಚೌಕಟ್ಟು ಹೊಂದಿದ ಕಥೆ . ಹೌದು ಮೊದಲು ಹುಡುಗ ತಾನು ಹುಡುಗಿಯ ಮನಸನ್ನು ಅರ್ಥ ಮಾಡಿಕೊಳ್ಳದೆ ಪ್ರೀತಿ ಎಂಬ ಭ್ರಮೆಯಲ್ಲಿ ತೇಲಿದ್ದು , ಆ ಹುಡುಗಿ ಹುಡುಗನ ಒಳ್ಳೆಯ ಮನಸಿನ ಸೌಂದರ್ಯ ನೋಡದೆ ಬಾಹ್ಯ ಸೌಂದರ್ಯಕ್ಕೆ ಬೆಲೆಕಟ್ಟಿದ್ದು , ಕಡೆಗೆ ಅದಕ್ಕೆ ತೆತ್ತ ಬೆಲೆ , ಕೊನೆಗೆ ಜೀವನ ಅನಿವಾರ್ಯತೆಗೆ ಸಂಧರ್ಬಕ್ಕೆ ತಕ್ಕ ಬಣ್ಣ ಬದಲಿಸಿದ ಹುಡುಗಿ ಇವೆಲ್ಲಾ ಕೃತಕ ಅನ್ನಿಸಿದರು ವಾಸ್ತವತೆಗೆ ಹತ್ತಿರವಾಗಿವೆ. ಯುವ ಜನರಿಗೆ ಒಂದು ಒಳ್ಳೆಯ ಬುದ್ದಿ ಹೇಳುವ ಬರಹ ನಿಮ್ಮದು

ಮನಸು said...

ಸಮಯ ಮನುಷ್ಯನಲ್ಲಿ ವಿವೇಚನೆಯನ್ನು ಕಲಿಸುತ್ತೆ... ಕಥೆ ತುಂಬಾ ಚೆನ್ನಾಗಿದೆ.

ಕಾವ್ಯಾ ಕಾಶ್ಯಪ್ said...

ವಾಂಛೆಗಳು ಕುರೂಪಕ್ಕೂ ರೂಪ ಕೊಡುವಂತ ಪ್ರಸಂಗವನ್ನ ಚೆನ್ನಾಗಿ ವಿವರಿಸಿದ್ದೀರಿ ಪ್ರಕಾಶಣ್ಣ .... ಈ ಕಥೆಯ ಜೊತೆ ಶ್ರೀಕಾಂತ್ ಅವರ ಕಾಮೆಂಟ್ ಕೂಡ ಇಷ್ಟ ಆಯ್ತು....

ವಾಸ್ತವಕ್ಕೆ ಹತ್ತಿರವಾದ ಕಥೆ... ಈಗಿನ ಹೆಣ್ಣುಮಕ್ಕಳು ಆಂತರ್ಯಕ್ಕೆ ಕನ್ನಡಿ ಹಿಡಿಯಲು ವಿಫಲರಾಗುತ್ತಿರುವುದು ವಿಷಾದನೀಯ....:(

ಸತೀಶ್ ನಾಯ್ಕ್ said...

ರಸ್ತೆ ತುಂಬಾ ಹರಿದ ನೀರು ರಸ್ತೆಯ ಹೋಂಡಾ ಗುಂಡಿಗಳನ್ನೆಲ್ಲಾ ಮುಚ್ಚಿ ಹರಿದಿರುತ್ತದೆ.. ಒಂದು ಸಮಾನತೆಯನ್ನ ಮೆರೆಸಿ ಹರಿದಿರುತ್ತದೆ.. ಎಲ್ಲಿಯ ತನಕ ಹೊಂಡದೊಳಗಣ ಆ ನೀರು ಬತ್ತುವುದಿಲ್ಲವೋ ಅಲ್ಲಿಯ ತನಕ ಆ ಗುಂಡಿಗಳ ಆಳ ಕಾಣುವುದೇ ಇಲ್ಲ.. ಒಂದು ಘನತೆ.. ಒಂದು ಗೌರವ.. ಒಂದು ಪ್ರತಿಷ್ಠೆ.. ಒಂದು ಸ್ಥಾನ.. ಒಂದು ವಿಶಿಷ್ಟತೆ.. ಒಂದು ಯಶಸ್ಸು.. ಆ ನೀರಿನ ಹಾಗೆ. ಎಲ್ಲಿಯವರೆಗೂ ನಮ್ಮಲ್ಲಿನ ಹೊಂಡಗಳನ್ನ ಅವು ತುಂಬಿಕೊಂಡಿರುತ್ತವೋ ಅಲ್ಲಿಯವರೆಗೂ ನಮ್ಮ ಕುರೂಪತೆ ಅಷ್ಟು ಆಳವಾಗಿ ಯಾರಿಗೂ ಕಾಣುವುದಿಲ್ಲ.. ಬಹಳ ಸುಂದರ ಕಥಾವಸ್ತು.. ಮತ್ತು ಅಷ್ಟೇ ಸುಂದರ ನಿರೂಪಣೆ ಪ್ರಕಾಶಣ್ಣ.. ಕಣ್ಣುಗಳು ಎಲ್ಲವನ್ನೂ ಯಾವುದೇ ಬೇಧ ಭಾವ ಇಲ್ಲದೆ ನೋಡುತ್ತವೆ.. ಮನಸ್ಸು ಮತ್ತು ಬುದ್ಧಿಯದ್ದೇ ಭಿನ್ನಾಭಿಪ್ರಾಯ..

Subrahmanya said...

ಚೆನ್ನಾಗಿದೆ ಕಥೆ, ಇಷ್ಟ ಆಯ್ತು . ಯಾಕೋ ಹುಡುಗ ಇನ್ನೂ ಖಾರವಾಗಿ ಪ್ರತಿಕ್ರೀಯಿಸುತ್ತಾನೆ ಎಂದು ಎದುರು ನೋಡುತ್ತಿದ್ದೆ
, ಬಹಳೇ ಸೌಮ್ಯವಾಗಿದೆ ಅವನ ಪ್ರತಿಕ್ರೀಯೆ :)

sunaath said...

ದೊಡ್ಡ ಸತ್ಯವನ್ನು ಸರಳವಾಗಿ ಹೇಳಿದ್ದೀರಿ!

asha hegde said...

"ಸಮಯ ಅರ್ಹತೆ ಹಾಗು ಯೋಗ್ಯತೆ ತಂದುಕೊಡ್ತು"....ಒಳ್ಳೆ ಕತೆ...ಈಸಾಲು ಇಸ್ಟಾಆತು ಪ್ರಕಾಶಣ್ಣ..:-)

Ittigecement said...

ಸಮನ್ವಯಾ...

ಈ ಅಂದ ಚಂದಗಳ ಬಗೆಗೆ ಬರೆಯುವಾಗ ನನಗೆ ನೆನಪಾಗುವದು ನಾನು ಕತಾರ್ ದೇಶದಲ್ಲಿದ್ದಾಗಿನ ಒಂದು ಪ್ರಸಂಗ...

ಅಲ್ಲಿ ನಿಗ್ರೊ ದಂಪತಿಗಳ ಪರಿಚಯವಾಗಿತ್ತು..

ನನಗೆ ಕೆಟ್ಟ ಕುತೂಹಲ..
ಅವರ ಬಗೆಗೆ ತಿಳಿದುಕೊಳ್ಳುವ ಹಂಬಲ..

ಅವರೊಡನೆ ಸ್ನೇಹವೂ ಆಯಿತು..

ನಿಗ್ರೊ ದಂಪತಿಗಳು ಒಬ್ಬರೊನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು..

ಹೀಗೆ ಮಾತನಾಡುವಾಗ ಗೊತ್ತಾಯಿತು.. ಅವರಿಬ್ಬರದ್ದು ಪ್ರೇಮ ವಿವಾಹ ಅಂತ..

"ಇಬ್ಬರಲ್ಲಿ ಯಾರು ಮೊದಲು ಪ್ರೊಪೊಸಲ್ ಮಾಡಿದ್ದು..?"

"ನಾನು" ಅಂತ ಗಂಡ ಹೇಳಿದ..

"ಯಾವ ಕಾರಣಕ್ಕಾಗಿ ಅವರನ್ನು ಇಷ್ಟ ಪಟ್ಟಿದ್ದೀರಿ..?
ನಿಮಗೆ ಮಡದಿಯಲ್ಲಿ ಆಕರ್ಷಕವಾಗಿ ಕಂಡಿದ್ದು ಏನು ?.."

"ನನ್ನಾಕೆಯ ಮೂಗು....
ಹಾಗು ಅವಳ ಕೆನ್ನೆ...

ಅವಳ ಕಿರು ನಗು...!!"

ಆ ಹೆಂಗಸು ಪಕ್ಕಾ ಗೋರಿಲ್ಲಾ ಥರಹ ಇದ್ದಳು..!!

ಕಪ್ಪಗೆ..
ದೊಡ್ಡ ಮೂಗು... !

ನಾನು ಎಚ್ಚರ ತಪ್ಪಿ ಬೀಳುವದೊಂದು ಬಾಕಿ ಇತ್ತು...!!

ನನ್ನ ನಾಗು ಹೇಳುತ್ತಾ ಇರ್ತಾನೆ...

"ಎಮ್ಮೆಗೆ ಎಮ್ಮೆ ಚಂದ ಕಾಣಲ್ವೇನೊ...

ಒಂಟೆಗೆ ಒಂಟೆ ಅಂದ ಕಾಣುತ್ತದೆ...

ಹಾಗೆ ನನ್ನಾಕೆ ನನಗೆ ಸುಂದರಿಯಾಗಿ ಕಾಣುತ್ತಾಳೆ ಕಣೊ..."

ಅತ್ತಿಗೆ ಪಕ್ಕದಲ್ಲಿ ಇಲ್ಲದಿರುವಾಗ ಹೇಳ್ತಾನೆ...

ಯಾಕೊ ..
ಈ ಅಂದ.. ಚಂದಗಳ ಪರಿಕಲ್ಪನೆ ಕೆಲವೊಮ್ಮೆ ಅರ್ಥ ಆಗುವದಿಲ್ಲ .. ಅಲ್ಲವಾ ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...




ushodaya said...

ಕಥೆ ತು೦ಬಾ ಚೆನ್ನಾಗಿದೆ...ಪ್ರಕಾಶಣ್ಣ..ಚ೦ದ,ಕುರೂಪ ಎನ್ನುವುದು ಅವರವರ ಮನಸ್ಸಿಗೆ ಸ೦ಭದ್ದಿಸಿದ್ದು ಅಲ್ವಾ?

vprasada said...

Nice one prakashanna

umesh desai said...

ಆನಂದ ಬಕ್ಷಿ ಬರೆದ ಹಾಡಿನ ಸಾಲು ಹೀಗಿದೆ ಹೆಗಡೇಜಿ..
"ಆಯಿನಾ ವಹಿ ರೆಹತಾ ಹೈ ಚೆಹರೆ ಬದಲಜಾತೆ ಹೈ..."
ನಿಮ್ಮ ಕತೆ ಎಂದಿನಂತೆ ಸರಳ ಮತ್ತು ಸುಂದರ..

ಸೀತಾರಾಮ. ಕೆ. / SITARAM.K said...

chendada kathe

The Black Tulips..! said...

ರೂಪ ಶಾಶ್ವತವಲ್ಲ ಎಂಬ ಸತ್ಯ ಎಲ್ಲಿಯವರೆಗೆ ಗೊತ್ತಾಗುವುದಿಲ್ಲವೋ, ಅಲ್ಲಿಯವರೆಗೆ ಈ ರೀತಿಯ ಭೇದಭಾವ ಇದ್ದೇ ಇರುತ್ತದೆ. ಈ ಕಥೆ ಬಹಳ ಚೆನ್ನಾಗಿದೆ. ಸೌಂದರ್ಯಕ್ಕೆ ಬೆಲೆ ಕೊಟ್ಟ ಹುಡುಗಿಗೆ ಸಿಕ್ಕ ಪಾಟ ಹೆಚ್ಚು ಇಶ್ಟವಾಯಿತು.

Stfner Schuen

ಬರೀ ನೆನಪು..... said...

ಅಣ್ಣ ತುಂಬಾ ಚೆನ್ನಾಗಿ ಬರೆದಿದ್ದಿರ, ಸಮಯನ ಇಲ್ಲಿ hero ಮಾಡುವ ನಿಮ್ಮ ಸಮಯಪ್ರಜ್ಞೆ ತುಂಬಾ ಮೆಚ್ಚುವಂತದ್ದು .

ನಿಮ್ಮ ಸಮಯಪ್ರಜ್ಞೆಯಾ ಬರಹದಿಂದ ಎಸ್ಟೋ ಜನ ತಮ್ಮನ್ನು ತಾವು ಎಚ್ಚರಿಸಿ ಕೊಳ್ಳಬೇಕಾಗಿದೆ.

ನಿಮ್ಮಿಂದ ಇನ್ನು ಒಳ್ಳೆಯ ಸಮಯಪ್ರಜ್ಞೆಯಾ ಬರಹಗಳನ್ನು ನಿರಿಕ್ಷಿಸುವವ

ಇಂತಿ ನಿಮ್ಮ ಬರಹ ಓದುಗ
ಮ ಚಂ ಹೇ

ಕನಸು said...

ಹಾಯ್ ಪ್ರಕಾಶ ಸರ್,
ಸಮಯದ ಅಂದ ಚಂದದ ಮುಂದೆ ನಮ್ಮ ಅಂದ ಚೆಂದಗಳೆಲ್ಲ ತೃಣಕ್ಕೆ ಸಮಾನ , ಸಮಯವೆ ಸದಾ ಸೌಂದರ್ಯವುಳ್ಳದ್ದು ಅಲ್ವಾ ಸರ್, ನಿಮ್ಮ ಕಥೆಯಲ್ಲಿ ಒಂದು ಮುದ್ದಾದ ಸಂದೇಶ ವಿದೆ. ಒಂದು ಪಕ್ವ ಮತ್ತು ಅರ್ಥಗರ್ಬಿತ ಕಥೇ ಅದರ ಅಂತರಾತ್ಮ ಚೆನ್ನಾಗಿದೆ. ನಮ್ಮನ್ನು ನಾವು ಎನೂ ಅಂತ ತಿಳಕೊಳ್ಳಲಿಕ್ಕೆ ತುಂಭಾ ಸಹಾಯಕವಾದ ಕಥೆ. ಸೂಪರ್ ಸರ ,ಥ್ಯಾಂಕ್ಯೂ. ನಿಮ್ಮ ಓದುಗ ಅಭಿಮಾನಿ
ಕನಸು

ಪದ್ಮಾ ಭಟ್ said...

ಪ್ರಕಾಶಣ್ಣ ... ಕತೆ ತುಂಬಾ ಇಷ್ಟವಾಯಿತು.. ಸುಂದರವಾಗಿರುವುದೆಲ್ಲಾ ಒಳ್ಳೆಯದ್ದಾಗಿರುತ್ತದೆಯೆಂದು ಹೇಳಲು ಸಾಧ್ಯವಿಲ್ಲ...ಆದರೆ ಒಳ್ಳೆಯ ಯೋಚನೆಯಿಂದ ಕೂಡಿದ ವ್ಯಕ್ತಿಯ ಮನಸ್ಸು ನಿಜವಾಗಿಯೂ ಸುಂದರವಾಗಿ ಇರುತ್ತದೆ..ಕೆಲವೇ ವರುಷಗಳಲ್ಲಿ ಬಾಹ್ಯ ಸೌಂದರ್ಯ ಮರೆಯಾಗಿಬಿಡುತ್ತದೆ..ಆದರೆ ಒಳ್ಳೆಯ ಮನಸ್ಸು ಮಾತ್ರ ಜೀವನದ ಕೊನೆಯವರೆಗೂ ಹೊಳೆಯುತ್ತಿರುತ್ತದೆ...

SANTOSH KULKARNI said...

Kadege enaguttade prakash?

SANTOSH KULKARNI said...

Kadege enaguttade prakash?

Unknown said...

antaranga da soundarya kke bele illa ennuvudu arthavaagide.. aadare baahya soundaryakkoo ella sala bele siguvudilla... ellavoo adrushtadaata irabeku endu samadhaana maadikondaddoo ide... nimma kathe manassu kalakiddantoo nija...