Thursday, October 20, 2011

ನೀವು ...ನಾ ಖರೆ ಹೇಳಿದ್ರೂ ಹೂಂ ಅಂತಿರಿ..! ಸುಳ್ಳು ಹೇಳಿದ್ರೂ ಹೂಂ ಅಂತಿರ್ರಿ.!!."


ಕುಷ್ಟ ಬೆಂಗಳೂರಿಗೆ ಬಂದಿದ್ದ..
ಒಂದು ವಾರ ಆಗಿತ್ತು...


ಅವನ ಸಂಬಂಧಿಕರೊಬ್ಬರ ಹೊಟೆಲ್ ಮಾಗಡಿ ರೋಡಿನಲ್ಲಿದೆ..
ಅಲ್ಲಿಗೆ ಬಂದ ಕುಷ್ಟನನ್ನು ಅವರು ನಮ್ಮನೆಗೆ ಕರೆತಂದಿದ್ದರು..


ಯಾಕೋ ಕುಷ್ಟನ ಮುಖ ಬಾಡಿತ್ತು..


"ಏನಾಯ್ತು ಕುಷ್ಟ..?
ಬೆಂಗಳೂರು ಇಷ್ಟ ಆಗ್ಲಿಲ್ವಾ?"


"ಇಲ್ರ... 
ಇದು ಎಂಥಾ ಪಟ್ಟಣವ್ರಾ?...
ಗಲೀಜು..
ರೋಗ ಹಿಡಿಸ್ಕಳ್ಳಿಕ್ಕೆ..!


ನಮ್ಮೂರಲ್ಲೂ ಗಲೀಜು ಇದೇರ್ರಾ.. 


ಆದ್ರೆ ಅದರಿಂದ..ಗೊಬ್ಬರ ಆಗ್ತದೆ ..!
ಇಲ್ಲಿನ ಗಲೀಜಿಂದ ರೋಗ ಹಿಡಿತದೆ...!


ಇಲ್ಲಿ ಹ್ಯಾಂಗೆ ಇರ್ತೀರಿ ಪಕ್ಕೇಶ್ ಹೆಗ್ಡೇರ್ರೇ..?


"ಹೋಗ್ಲಿ ಬಿಡು ಮಾರಾಯಾ..
ನಮಗೆ ಇದು ರೂಢಿ ಆಗಿಬಿಟ್ಟಿದೆ..
ಇವತ್ತು ರಾಜಕುಮಾರನ ಸಣ್ಣ ಮಗನ ಸಿನೇಮಾ ನೋಡೋಣ.."


" ದೊಡ್ಡ ನಮಸ್ಕಾರ ಪಕ್ಕೇಶಣ್ಣಾ...!!


ಅದು ಎಂಥಾ ಸಿನೇಮಾರ್ರಾ...?


ಬರಿ ಬುರ್ನಾಸು ಪಿಲ್ಮು..."


ನನಗೆ ಆಶ್ಚರ್ಯವಾಯ್ತು.. !


"ನಾನು ಆ ಸಿನೇಮಾ ನೋಡಿದೇರ್ರಾ...


ಅರ್ಧ ಸಿನೇಮಾ ನೋಡುವ ಹೊತ್ತಿಗೆ..
ನಾನು ದಡ್ಡ ..
ನನ್ನ ತಲಿ ಒಳಗೆ ಬರಿ  ಆಲೂ ಗಡ್ಡೆ ಇದೆ ..
ಬೇರೆ ಏನೂ ಇಲ್ಲ ಅಂತ  ಅನ್ನಿಸ್ಲಿಕ್ಕೆ ಶುರುವಾಗಿ ಬಿಡ್ತು.....


ನನ್ನ ಬಗ್ಗೆ ನನಗೆ ಪಾಪ ಅನ್ನಿಸಲಿಕ್ಕೆ ಶುರುವಾತ್ರ...


ಪೂರ್ತಿ ನೋಡಿದ್ರೂ ತಲೆ ಬುಡ ಗೊತ್ತಾಗ್ಲಿಲ್ರ...


ನಿಮಗೆ ಇನ್ನೊಂದು ವಿಷ್ಯ ಗೊತ್ತಾ?"


"ಏನು?"


"ರಾಜಕುಮಾರನ  ದೊಡ್ಡ ಮಗನ ಸಿನೇಮಾನೂ ನೋಡಿದೇರ್ರಾ...
ಜೋಗಯ್ಯ..."


"ಹೇಗಿದೆ...?"


"ತಲಿ ಕೆಟ್ಟು ಹೋತ್ರಾ..!!


ಈಗಿನ ಸಿನೇಮಾದಾಗೆ  "ಕಥಿನೇ.." ಇರೋದಿಲ್ರಾ.....
ಆದ್ರೆ..
" ಶ್ಟೋರಿ ".. ಇರ್ತದೆ...
ಅದು ನಮಗೆ ಅರ್ಥ ಆಗೂದಲ್ರ...!!.."


"ಹೀಗಂದ್ರೆ ಏನು ಮಾರಾಯಾ.."


"ಅವರಿಗೆ ಪಿಲ್ಮು  ಮಾಡಿ.. 
ದುಡ್ಡು ಹಾಳು ಮಾಡ್ಲಿಕ್ಕೆ ಶ್ಟೋರಿ ಇರ್ತದೆ...!


ನಮಗೆ ಸಿನೆಮಾ  ನೋಡ್ಲಿಕ್ಕೆ "ಕಥಿ" ಇರೋದಿಲ್ರಾ...!


ಅಲ್ರಾ.. ಪಕ್ಕೆಶ್  ಹೆಗ್ದೆರ್ರೆ..


ಈ ರಾಜಕುಮಾರನ ಮಕ್ಕಳಿಗೆ ...
ಹೊಡೆದಾಟ ಮಾಡ್ಲಿಕ್ಕೂ ಬರೂದಿಲ್ರಾ...!


ಅವ್ರು ಅಂತ ಅಲ್ರಾ...
ಈಗಿನ ಸಿನೆಮಾದವ್ರಿಗೆ ಹೊಡೆದಾಟ ಮಾಡ್ಲಿಕ್ಕೆ ಬರೂದಿಲ್ರಾ..!!..."


"ಹಾಗೆಲ್ಲ ಅನ್ನಬೇಡ ಕುಷ್ಟಾ..
ನಾನು ಪುನೀತ್ ಅಭಿಮಾನಿ...
ಅವರ ಬಾಡಿ ನೋಡಿದಿಯಾ... ಮಸ್ತ್ ಫೈಟ್ ಮಾಡ್ತಾರೆ ಮಾರಾಯಾ.."


"ಎಂಥಾ ಅಭಿಮಾನೀರ್ರಾ...?


ನೋಡಿ..
ನೀವು...
ನಾ ಖರೆ ಹೇಳಿದ್ರೂ ಹೂಂ ಅಂತಿರಿ..!
ಸುಳ್ಳು ಹೇಳಿದ್ರೂ ಹೂಂ ಅಂತಿರ್ರಿ..!.."


"ಏನು ಹಾಗಂದ್ರೆ?.."


"ಇವ್ರು..
ಒಬ್ಬಂವಂಗೆ ಹೊಡಿಬೇಕಾದ್ರೆ ..
ಮೈತುಂಬಾ ಮೈ ತುಂಬಾ ಗಾಯ ಮಾಡ್ಕೋತಾರ್ರೆ..!!
ಸುಸ್ತಾಗಿ ಬಿಡ್ತಾರ್ರೆ..


ನೋಡ್ಲಿಕ್ಕೆ ಆಗೂದಿಲ್ರಾ.. !
ಮುಖದ ತುಂಬಾ ರಕ್ತ...ಗಾಯ...!!


ಪಾಪ ಅನ್ನಿಸ್ತದರ್ರಾ...!


" ಮಾರಾಯಾ...
ನಿನಗೆ ಅದೆಲ್ಲಾ ಅರ್ಥ ಆಗೋದಿಲ್ಲಾ ಬಿಡು...
ಮೊದಲಿಗಿಂತ ಈಗ ಫೈಟಿಂಗು ಚೆನ್ನಾಗಿ ತೋರಸ್ತಾರೆ.."


"ನೀವ್...  ಏನೇ ಹೇಳ್ರ...
ಅದೇ.. ನಮ್ಮ ರಾಜ್ಕುಮಾರ ಇದ್ದ..


ಸಿನೇಮಾದಲ್ಲಿ  ಹೊಡೆದಾಟದಾಗೆ ಹೆಂಗೆ ಪೈಟಿಂಗು ಮಾಡ್ತಿದ್ದಾ ಅಂತೀರ್ರೀ...?..


"ಹೇಗೆ...? "


ನಮ್ಮ ರಾಜಕುಮಾರ ಕೈ ಎತ್ತೋದ್ರೊಳಗೆ...
ಅಲ್ಲಿ  ನಾಲ್ಕು ಜನ ಬಿದ್ದು ಹೋಗ್ತಿದ್ರು...!


ಶಂಕರ ಗುರು ಪಿಲ್ಮು ನೋಡ್ರಾ...!!


ಹತ್ತು ಹದಿನೈದು ಜನಕ್ಕೆ ಒಬ್ನೆ ರಾಜಕುಮಾರ ಹೊಡಿತಿದ್ದಾನ್ರಾ...!


ಹದಿನೈದು ಜನಕ್ಕೆ ಹೊಡೆದ್ರೂ.. 
ಒಂದು ಕೂದಲೂ ಅಲುಗಾಡ್ತಿಲಿಲ್ರ..


ಹಾಕ್ಕೊಂಡಿದ್ದ ಅಂಗಿ ಮಣ್ಣು ಆಗ್ತಿರಿಲಿಲ್ರ..


ಆ ಥರ ಪೈಟು ಇವರ ಹತ್ರ ಬರೂದಿಲ್ರ.."


" ನೀನು ರಾಜಕುಮಾರ ಅಭಿಮಾನಿ ಅನ್ನು.."


"ಹೌದ್ರಾ..
ಮಯೂರ ಪಿಲ್ಮು ನೋಡ್ರಾ...


ಎಲ್ಲಾದ್ರೂ ಅಪರೂಪಕ್ಕೆ ರಾಜಕುಮಾರ್ಗೆ ರಕ್ತ ಬಂದು ಬಿಟ್ರೆ...
ಹೊಡೆದವನ ಸಾಯಿಸುವ ಹಾಗೆ ಹೊಡೆದು ಬಿಡ್ತಿದ್ದಾ...


ನಮ್ಮ ರಾಜಕುಮಾರ..
ಅಂತಾವ್ರು ಈಗ ಯಾರಿದ್ದಾರ್ರಾ..?..


ಅವನ ಮಕ್ಕಳು ಇನ್ನೂ ಹೊಸಬ್ರು..
 ರೂಢಿ ಇಲ್ರ..
ಮುಂದೆ ಹೊಡೆದಾಟ ಕಲ್ತುಕೋತಾರೆ ಬಿಡಿ.."


"ಕುಷ್ಟ..
ಮೆಜೆಷ್ಟಿಕ್ ಕಡೆ ಹೋಗುವಾ..
ಅಲ್ಲಿ ರಾಜಕುಮಾರನ ಸಿನೇಮಾ ಇರಬಹುದು..."


"ಪಕ್ಕೆಶ್  ಹೆಗ್ದೆರ್ರೆ..
ಈ ಟ್ರಾಫಿಕ್ ಕಾಟ ಬಾಳ ಮಾರಾಯ್ರೆ..


ಯಾವ ನಮೂನಿ ಗಾಡಿ.. ?
ಅದೆಷ್ಟು ಜನರ್ರಾ...?


ಜಗತ್ತಿನ ಜನ ಎಲ್ಲ ಬೆಂಗಳೂರು ಸೇರ್ಕೋಬಿಟ್ಟಿದಾರ್ರಾ ..!!


ಇವತ್ತು ಹೊರಟ್ರೆ ನಾಳೆ ಮುಟ್ತೀವಿ ಅಷ್ಟೆ..."


"ಕುಷ್ಟಾ ನಿನಗೆ ಗೊತ್ತೇನೊ.. ?
ಮೆಟ್ರೋ ಟ್ರೇನ್ ಆಗ್ತ ಇದೆ... ಬೆಂಗಳೂರಿನಲ್ಲಿ  !!
ಆಗ ಟ್ರಾಫಿಕ್ ಕಡ್ಮೆ ಆಗ್ತದೆ.."


"ನಾನು ಬಂದು ಒಂದು ವಾರ ಆತ್ರಾ..
ಎಲ್ಲ ಓದಿ.. 
ನೋಡಿ ತಿಳ್ಕೊಂಡೆ.. ಈ ಬೆಂಗಳೂರು ಎಂಥದ್ದು ಅಂತ..."


ಅಲ್ರಾ...
ಅದು ಯಾವ ಪುಣ್ಯಾತ್ಮ ಈ ಹೆಸರು ಈಟ್ಟಿದ್ದಾನೊ ಗೊತ್ತಿಲ್ರ..!


"ನಮ್ಮ ಮೆಟ್ರೊ" ಅಂತ...!!.."


ನನಗೆ ಸ್ವಲ್ಪ ಖುಷಿ ಆಯ್ತು...


"ಚೆನ್ನಾಗಿದೆ ಅಲ್ವಾ.. ಹೆಸರು...?
ನಮ್ಮ ಮೆಟ್ರೋ...!!"


"ಪಕ್ಕೇಶ್ ಹೆಗ್ಡೆರ್ರೇ.. 
ನಿಮಗೊಂದು ವಿಷ್ಯಾ ಹೇಳ್ತೀನ್ರ.....


ಬೆಂಗಳೂರ್ಗೆ ತೆಲಗಿನವರು ಬಂದ್ರು...
ಹಿಂದಿ ಜನ  ಬಂದ್ರು...


ತಮಿಳ್ರು ಬಂದ್ರು...


ಬಂದ್ರು.. ಸರಿ..


ಬಂದವ್ರು ಸುಮ್ನೆ ಇದ್ದಾರ್ರಾ...?..


"ಏನು  ಮಾಡಿದ್ರು ?.."


"ಅಲ್ಲಿಂದ ಬಂದವರು  ನಮ್ಮವರನ್ನ ತುಳಿದ್ರು.. !
ಮೆಟ್ಟಿದ್ರು...!!


ಇಲ್ಲಿನ  ಕನ್ನಡಿಗ್ರು...
ಕನ್ನಡ ಭಾಷೆನಾ ತುಳಿದ್ರು...!


ಇನ್ನು " ಮೆಟ್ರೊ "  ಬರ್ಲಿ...


ಇನ್ನಷ್ಟು  ಹೊರಗಿನ ಜನ ಬರ್ತಾರೆ...
ನಮ್ಮವರನ್ನ ತುಳಿತ್ತಾರ್ರೆ...
ಮೆಟ್ಟುತ್ತಾರೆ...

ನಮ್ಮವರು ಆಗ್ಲೂ  ಸುಮ್ನೆ ಇದ್ರು..
ಈಗ್ಲೂ ಸುಮ್ನೆ ಇದ್ದಾರೆ..


ಹಾಗಾಗಿ   ನಾವು ಕನ್ನಡಿಗರು ...
"ನಮ್ಮನ್ನು ಮೆಟ್ರೊ...!!.."
ನಮ್ಮನ್ನು ತುಳಿರ್ರೋ.. !!.." 
ಅಂತ ಹೇಳ್ತಾ ಇದ್ದೇವ್ರಾ...


"ನಮ್ಮ ಮೆಟ್ರೊ" ಅಂತ ಚೆನ್ನಾಗಿ ಹೆಸರು ಇಟ್ಟಿದಾರೆ ಬಿಡಿ...!!


" ಬನ್ನಿ.. ಎಲ್ರೂ ಬನ್ನಿ..ನಮ್ಮನ್ನು ಮೆಟ್ಟಿ ಬಿಡಿ.."


 ಅಂತ ನಾವೆ ಅವರನ್ನ ಕರಿತಾ ಇದ್ದಿವಿ...!!.."


ನನಗೆ ಏನು ಹೇಳ ಬೇಕು ಅಂತ ಗೊತ್ತಾಗಲಿಲ್ಲ....


 ಪಕ್ಕನೆ ನಗು ಬಂತು...... 
ಜೋರಾಗಿ ನಕ್ಕುಬಿಟ್ಟೆ...


"ನಮ್ಮ ಮೆಟ್ರೋ.. 
ನಮ್ಮನ್ನು ಮೆಟ್ರೋ..ನಮ್ಮನ್ನು ಇನ್ನೂ ಮೆಟ್ರೋ..!! .."



(ಕುಷ್ಟನ ಮಾತು ವಿಚಿತ್ರ ..
ಅರ್ಥ ಆಗುತ್ತದೆ ಆಲ್ವಾ?..)

51 comments:

ವಾಣಿಶ್ರೀ ಭಟ್ said...

:):)ನಮ್ಮ ಮೆಟ್ರೊ chennagide!!

shriram bhat said...

ವಾವ್ ಸೂಪರ್ ಪ್ರಕಾಶಣ್ಣ ............ ನಮ್ಮನ್ನು "ಮೆಟ್ರೋ" ಅಂದಹಾಗೆ ಆಗಿದೆ ಈಗ .

Ittigecement said...

ವಾಣಿಶ್ರೀ...

ನಿಜ ಅಲ್ವಾ?

ಈ ಮೆಟ್ರೊ ಕೆಲಸದಲ್ಲೂ ಕೂಡ ನಮ್ಮವರು ಕಡಿಮೆ...
ಅಲ್ಲಿನ ಅಧಿಕಾರ ವರ್ಗದವರು ನಮ್ಮವರಿಲ್ಲ..

ನಮ್ಮ ನಾಡಿನಲ್ಲೇ ನಾವು ಪರದೇಶಿಗಳು...

ಹಾಗಾಗಿ ಇದು "ನಮ್ಮ ಮೆಟ್ರೊ"

ಪ್ರತಿಕ್ರಿಯೆಗೆ ಧನ್ಯವಾದಗಳು..

Badarinath Palavalli said...

ಬಹಳ ಖುಷಿಕೊಟ್ಟ ಬರಹ. ಗ್ರಾಮೀಣ ಭಾಷೆಯ ಸೊಗಡು ಮತ್ತು ಕುಷ್ಟ ವಿಚಾರವನ್ನು ಮಂಡಿಸುವ ಪರಿ, ಎರಡೂ ಬೊಂಬಾಟ್!

ಸಿನಿಮಾ, ಬೆಂಗ್ಳೂರು ಮತ್ತು ಮೆಟ್ರೋ ಪುರಾಣ ಅವನ ಬಾಯಲ್ಲೇ ಚೆನ್ನ!

ಮನಸು said...

ನಮ್ಮ ಮೆಟ್ರೋ ಕತೆ ಚೆನ್ನಾಗಿದೆ...

Prabhakar. H.R said...

ಪರ್ಕಾಶ್ ಹೆಗ್ಡೆ ರೆ ಕುಷ್ಟ ಹೆಸರೇ ಸೂಪರ್ ಅದ್ರೆಲ್ಲು ''ನಮ್ಮುನ್ನ ಮೆಟ್ರೋ ನುಮ್ಮನ್ನ ಮೆಟ್ರೋ ಇನ್ನು ಸೂಪರ್...''

ಎಂತ ಕಲ್ಪನೆ..ಎಂತ ಕಥೆ...ತುಂಬಾ ಅರ್ಥಪೂರ್ಣವಾಗಿ, ಮಾರ್ಮಿಕವಾಗಿ ಬರೆದಿದ್ದೆರಿ...ಅಭಿನಂದನೆಗಳು..

Ittigecement said...

ಶ್ರೀರಾಮ್...

ಮೆಟ್ರೊ ಟ್ರೇನಿನ ಕೆಲಸದಲ್ಲಿ ಎಲ್ಲರೂ ಹಿಂದಿ ಜನ..
ನಮಗೆ ಅವರ ಮೇಲೆ ದ್ವೇಶವಿಲ್ಲ...

ಬಿಹಾರಿಗಳ ಹೇರಿಕೆ ಯಾಕೆ?

ಆಯಾ ಪ್ರದೇಶದಲ್ಲಿ ಅಲ್ಲಿಯ ಜನರನ್ನೇ ನೇಮಕ ಮಾಡಬೇಕಲ್ವಾ?

ನಮ್ಮವರೂ ರೇಲ್ವೆ ಮಂತ್ರಿಗಳಾಗಿದ್ದಾರೆ..

ಆದರೆ ಹಿಂದಿ ಜನರ ಹೇರಿಕೆ ಮಾತ್ರ ನಿಂತಿಲ್ಲ...

ಪ್ರತಿಕ್ರಿಯೆಗೆ ಧನ್ಯವಾದಗಳು..

ವನಿತಾ / Vanitha said...

Nice Re-entry of Kushta :) haange gappati, ....team na elroo barli :)

Ittigecement said...

ಬದರಿ ಸರ್...

ಕುಷ್ಟನ ಅಮ್ಮ ನಮ್ಮೂರಿನವಳು..
ಅಪ್ಪ ಕುಂದಾಪುರದವ..

ಹಾಗಾಗಿ ಅವನ ಭಾಷೆ ವಿಚಿತ್ರ..

"ರಾಜಕುಮಾರ ಇಲ್ಲಿ ಕೈ ಎತ್ತೋದ್ರೊಳಗೆ ..
ಅಲ್ಲಿ ನಾಲ್ಕು ಜನ ಬಿದ್ದೋಗ್ತಿದ್ರು... !!"

ಕುಷ್ಟನ ಮಾತುಗಳು ನನಗೂ ಇಷ್ಟ...

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಮನಸು...

" ನಮ್ಮ ಮೆಟ್ರೊ...
ನಮ್ಮ ಮೆಟ್ರೋ...!

ನಮ್ಮನ್ನು ಮೆಟ್ರೋ...

ನಮ್ಮನ್ನು ತುಳಿರ್ರೋ..."

ನಾವು ಆಗ್ಲೂ ಸುಮ್ಮನಿದ್ವಿ..

ಈಗ್ಲೂ ಸುಮ್ಮನಿರ್ತೇವೆ...

ನಮಗೆ ಅಭಿಮಾನ ಕಡಿಮೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Unknown said...

ನಾ ಖರೇ.... ಹೇಳ್ಳ ಪ್ರಕಾಶಣ್ಣ?... ಸುಳ್ ಹೇಳ್ಳ??
ನೀ ಎಲ್ಲದಕ್ಕೂ ನ್ಹೂ.. ನೇ ಹಾಕ್ತಿ ಹೇಳಿ ಗೊತ್ತಿದ್ದು.. :)ಖರೇ ಹೇಳ್ಬಿಡ್ತಿ.. " ಹೆಡ್ರೆ ಮಸ್ತ್.. ಆಗೇದ್ರಾ.." :)

ಜಲನಯನ said...

ಕುಷ್ಟ...ಅರೆರೆ..ಏನಿದು...ಮೊದ್ಲಿಗೆ ...ಹೋಗ್ಲಿ...ಬಿಡು..
ಆದ್ರೆ ಬನ್ರೂ..ನಾವು ಕನ್ನಡಿಗರು..ನೀವೂ ಮೆಟ್ರೋ...
ನಾವು ಯಾವಾಗ್ಲಿಂದ ಹೇಳ್ತಿದ್ದೀವಿ...ಮೆಟ್ರೋ ..ಮೆಟ್ರೋ..ಮೆಟ್ರೋ...
ಈಗ ನೋಡ್ರೀ ನಮಗೆ ಆ "ಮೆಟ್ರೋ" ಅನ್ನೋದ್ರ ಅನುಭವ ಸರಿಯಾಗಿ ಅದದ್ದು...!!! ಹಹಹಹ
ಕುಷ್ಟನ್ನ ಒಂದ್ ರೌಂಡ್ ವಿಕ್ಟೋರಿಯಾ ಆಸ್ಪತ್ರೆಗೆ ಕರ್ಕೊಂಡ್ ಹೋಗು ಪ್ರಕಾಶಾ,,,

Gubbachchi Sathish said...

Dear Prakashanna.

Illu topi (cap) kathene ide. FB nalli nimma maganige hakkiddu nodidde. illu ade kathe ide.

Wonderful narration. I like, love this type of Prakshanna's writing.

Jai Ho...Chiv Chiv.

Asha said...

no comments..:)

Ittigecement said...

ಪ್ರೀತಿಯ ಪ್ರಭಾಕರ್...

ನನಗೆ ನನ್ನ ಹೆಸರನ್ನು ಆಥರ ಕರೆಯುವವನು "ಕುಷ್ಟ"ನೊಬ್ಬನೇ..

ಅದನ್ನು "ಪರಕಾಸ" ತಿದ್ದಿ ಕೊಟ್ರೂ..

ಪ್ರೀತಿ ಜಾಸ್ತಿ ಆದಾಗ ಪಕ್ಕೇಷ್ ಅಂತ ಅಂದು ಬಿಡುತ್ತಾನೆ..

ಅವನ ಹಳೆಯ ಕಥೆಗಳನ್ನು ಓದಿ..
ಮಜವಾಗಿದೆ..

ಇವನ ಸಂಗಡ ಬೀಡಿ ಸೇದಿದ ಕಥೆ..
ಕುಷ್ಟ ನಿಭಂದ ಬರೆದ ಕಥೆ...
ಯಕ್ಷಗಾನ ಕುಣಿದ ಕಥೆ ಬರೆಯುವದಿದೆ...

ಮುಂದೆ ಬರೆಯುವೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು.. ಜೈ ಹೋ !!

Ittigecement said...

ವನಿತಾ...

ನಾಗೂ..
ಶಾರೀ.. ಪೆಟ್ಟಿಗೆ ಗಪ್ಪತಿ...

ಶಾರೀ ಗಂಡ "ಗಣಪ್ತಿ" ಬಾವನ ಕಥೆ ಬರೆಯುವದಿದೆ..

ಈ ಗಣಪ್ತಿ ಬಾವ ಮದುವೆಗೂ ಮುನ್ನ
ಐದು ಹೆಣ್ಣುಮಕ್ಕಳನ್ನು ನೋಡಿದ್ದನಂತೆ..( ಮದುವೆಯಾಗ ಬೇಕು ಅಂತ.. ಕೊನೆಗೆ ಮದುವೆಯಾದದ್ದು ಶಾರೀಯನ್ನ..)

ಆ ಕಥೆಗಳು ಒಂದಕ್ಕಿಂತ ಒಂದು ಮಜವಾಗಿದೆ..

ನಿಮ್ಮೆಲ್ಲರ ಪ್ರೀತಿ.. ಪ್ರೋತ್ಸಾಹ ಹೀಗೆಯೇ ಇರಲಿ.. ಬರೆಯಲು ಉತ್ಸಾಹ ಕೊಡುತ್ತದೆ..

ಜೈ ಹೋ !!

Dr.D.T.Krishna Murthy. said...

ಪಕ್ಕೆಶ್ ಹೆಗ್ಡೇರ;ನೀವು ನಿಜ ಹೇಳಿದ್ರೂ ನಂಬ್ತೀರಾ......,ಸುಳ್ಳು ಹೇಳಿದ್ರೂ ನಂಬ್ತೀರಾ ...!ನಿಜಾನೆ ಹೇಳ್ತೀನಿ ಬಿಡಿ.ಕುಷ್ಟ ಅಂದ್ರೆ ನಂಗೆ ತುಬಾ ಇಷ್ಟ!ಬರಹ ಚೆಂದ ಇದೆ ಮಾರಾಯ್ರೇ.'ಮೆಟ್ರೋ' ರೈಲನ್ನು 'ಮೆಟ್ಬೇಡ್ರೋ'ರೈಲು ಅಂತ ಹೆಸರು ಬದಲಿಸಲು ಶಿಫಾರಸ್ಸು ಮಾಡುವಾ.

Ittigecement said...

ಗೋಪಾಲಕೃಷ್ಣ...

ನಾನು ತಮಿಳುನಾಡಿಗೆ ಹೋದಾಗ ಅನ್ನಿಸಿತ್ತು..
ಈ ಥರಹ ಕನ್ನಡಿಗರು ಇಲ್ವಲ್ಲಾ... ಹಾಗಂತ ಖುಷಿಯೂ ಆಗಿತ್ತು..
ಹೆಮ್ಮೆಯೂ ಮೂಡಿತ್ತು..

ಮುಂಬೈನಲ್ಲಿದ್ದೆ...

ಅಲ್ಲಿ ಮರಾಠಿಗರು ಮುಂಬೈನಲ್ಲಿ ಅಲ್ಪಸಂಖ್ಯಾತರಾಗಿಬಿಟ್ಟಿದ್ದರು..

ಮರಾಠಿ ಭಾಷೆ ಅಲ್ಲಿ ಕೇಳುವದೂ ಕಷ್ಟ...

ಮರಾಠಿಗರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವಾಗಿತ್ತು...

ನಮ್ಮ ಬೆಂಗಳೂರು ಮುಂಬೈ ಥರಹ ಆಗಲಿಕ್ಕೆ ಹೊರಟಿದೆಯಾ?

ಹಾಗೆ ಆಗಬಾರದು...

ಪ್ರತಿಕ್ರಿಯೆಗೆ ಧನ್ಯವಾದಗಳು..

ಚುಕ್ಕಿಚಿತ್ತಾರ said...

ಕರೆಕ್ಟು ಪ್ರಕಾಶಣ್ಣ..
ಕುಷ್ಟ ಬ೦ದ್ ಒ೦ದ್ ವಾರದಲ್ಲೇ ಬೆ೦ಗಳೂರನ್ನ ಎಷ್ಟು ಚನ್ನಾಗಿ ಅರ್ಥ ಮಾಡಿಕೊ೦ಡಿದ್ದಾನೆ.. ನಮ್ಮ ಮೆಟ್ರೊ ಸರಿ ಇದೆ..
ಒಳ್ಳೆ ಬರಹ..:))

Srikanth Manjunath said...

ಪರಮಾತ್ಮನ ಪುರಾಣ...ಜೋಗಯ್ಯನ ಬಿಕ್ಷೆ..ಅಣ್ಣಾವ್ರ ಹೊಡೆದಾಟದ ಪರಾಕ್ರಮ....ಎಲ್ಲ ಸೊಗಸು..
ಕಥೆ ಇಲ್ಲದ ಕಥೆಯನ್ನು ಹೇಳಲು ಹೊರಟರೆ..ಜೋಗಯ್ಯನ ಪರಮಾತ್ಮನೇ ಕಾಪಾಡಬೇಕು..
ದೇವರಿಗೂ ಕಥೆಯನ್ನು ಹೇಳಿ ಕಳಿಸುವ "ಕಲಿ" ಯುಗ ಇದು...
ಅಂಧಾಭಿಮಾನ ಒಳ್ಳೆಯದಲ್ಲ...ನಮ್ಮ ಭಾಷೆ ಬೆಳಸುವ ನಿಟ್ಟಿನಲ್ಲಿ ಯಾವಾಗಲು ತಕರಾರು ಇದ್ದೆ ಇದೆ...
ಆದ್ರೆ ನಮ್ಮ ತಾಯಿ ನೆಲ ಕಲಿಸಿ, ಗಳಿಸಿ, ಉಳಿಸಿದ ಪರಂಪರೆ ಅಷ್ಟು ಸುಲಭದಲ್ಲಿ ನಶಿಸುವುದಿಲ್ಲ...
ಕನ್ನಡದಲ್ಲಿ ಇರುವ ಅನೇಕ ಬರವಣಿಗೆಗಳೇ ಸಾಕ್ಷಿ...ನಮ್ಮ ಭಾಷೆ, ನಮ್ಮ ಸಂಸ್ಕೃತಿ, ಅಳಿಯದು..ಸದಾ ಉಳಿಯುತ್ತದೆ...
ಕುಷ್ಟನ ಮನದಲ್ಲಿ ಇರುವ ಗೊಂದಲದ ಮಾತುಗಳು ಅಕ್ಷರಶಃ ನಿಜ...ಎರಡು ಮಾತಿಲ್ಲ..
ಆದ್ರೆ ಗೊಂದಲಗಳೇ ನಮ್ಮ ಜೀವನ ಮುಟ್ಟಲು ಸಹಕಾರಿಯಾಗುವ ದಾರಿ ದೀಪಗಳು...
ಕನ್ನಡ ಎಲ್ಲೋ ಹೋಗೋಲ್ಲ..ಅಳಿದು ಹೋಗೋಲ್ಲ.....
ಒಳ್ಳೆಯ ಲೇಖನ...ಕಣ್ಣನ್ನು ಒಮ್ಮೆ ಮಿಟುಕಿಸುವ ಹಾಗೆ ಮಾಡುತ್ತೆ...ನಿಮ್ಮ ಲೇಖನ..ಧನ್ಯವಾದಗಳು

Keshav.Kulkarni said...

ಚೆನ್ನಗಿದೆ! ಚೆನ್ನಾಗಿ ನಗಿಸಿದಿರಿ

anitha said...

ತುಂಬ ಚೆನ್ನಾಗಿದೆ ನಮ್ಮ ಮೆಟ್ರೋ....

Ittigecement said...

ಆಜಾದೂ..

ಕೊನೆಗೂ ಹೇಳಿಲ್ಲ "ಕುಷ್ಟ" ಅಂದರೆ ಏನು ಅಂತ..!

ಕುಷ್ಟನ ಮಾತಿನ ತರ್ಕ "ನಮ್ಮ ಮೆಟ್ರೋ" ಸರಿಯಾಗಿದೆ ಅಲ್ವಾ?

ಮಾರಾಯಾ..
ವಿಕ್ಟೋರಿಯ ಆಸ್ಪತ್ರೆಗೆ ಯಾಕೆ ಕರೆದುಕೊಂಡು ಹೋಗಬೇಕು..?
ನಾನು ಸಹ ನೋಡಿಲ್ಲ..

ಈಗ ರಾಜಕೀಯದವರ ಅಡಗು ತಾಣ ಅದು.. ಹ್ಹಾ..ಹ್ಹಾ!!

ಕುಷ್ಟ ಇಷ್ಟ ಆಗಿದ್ದಕ್ಕೆ ಧನ್ಯವಾದಗಳು.. ಜೈ ಹೋ !!

Ittigecement said...

ಪ್ರೀತಿಯ ಗುಬ್ಬಚ್ಚಿ ಸತೀಶು..

ಕನ್ನಡ ಸಿನೇಮಾಕ್ಕೆ ಹೊಸತನ ಬೇಕು ನಿಜ..
ಆದರೆ ಈ ಥರಹದ್ದಾ?

ತರ್ಕವೇ ಇಲ್ಲದ ಸನ್ನಿವೇಶಗಳು... ಪಾತ್ರಗಳು... !

ಪುನೀತರಂತ ಪ್ರತಿಭೆ, ಭಟ್ಟರಂಥಹ ನಿರ್ದೇಶಕ ಎಡವಿದ್ದೆಲ್ಲಿ...?

ಬಹಳ ನಿರಾಸೆ ಮೂಡಿಸಿದ್ದು ಬೇಸರದ ಸಂಗತಿ...

ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಆಶಾರವರೆ..

ನೀವು ಇರುವದು ಬೆಳಗಾವಿಯಲ್ಲಿ..
ನಮ್ಮ ಕನ್ನಡಿಗರ ಸ್ಥಿತಿ ಮುಂಬೈ ಮರಾಠಿಗರ ಸ್ಥಿತಿಯಂತೆ ಇದೆ ಅಲ್ವಾ?

ನಮ್ಮ ಮೆಟ್ರೊ ನಮ್ಮನ್ನು ಮೆಟ್ರೊ... !!

ನೋ ಕಾಮೆಂಟ್ಸ್ ಅನ್ನುವದೂ ಕೂಡ ಒಂದು ಪ್ರತಿಕ್ರಿಯೆ... ಹ್ಹಾ..ಹ್ಹಾ.. !

ಈ ಪ್ರತಿಕ್ರಿಯೆ ಬಹುಷಃ ಭಟ್ಟರ ಸಿನೇಮಾ ನೋಡಿ ಹೇಳಿದ್ದೀರಾ?

Ittigecement said...

ಪ್ರೀತಿಯ ಡಾಕ್ಟ್ರೆ...

"ನಮ್ಮನ್ನು ಮೆಟ್ಬೇಡ್ರೋ" ರೈಲು ಎನ್ನುವ ಹೆಸರು ಬಹಳ ಸೂಕ್ತ....

ಮೆಟ್ರೊ ಕಾಮಗಾರಿ ನಡೆಯುವ ಸ್ಥಳವನ್ನು ಒಮ್ಮೆ ನೋಡಬೇಕು...
ಅಲ್ಲಿ ಸಂಚರಿಸ ಬೇಕು...

ಅಲ್ಲಿನ ಅಂಗಡಿ ಮಾಲಿಕರನ್ನು ಮಾತನಾಡಿಸಬೇಕು..

ಆಗ ಎಷ್ಟು ಮೆಟ್ಟಿದ್ದಾರೆ... ಅನ್ನುವದು ಗೊತ್ತಾಗುತ್ತದೆ..

ಮೆಟ್ರೊ ಶುರುವಾಗುವ ಮೊದಲೂ "ಮೆಟ್ಟಿದರು...

ನಂತರವೂ ಮೆಟ್ಟುತ್ತಾರೆ..

"ನಮ್ಮ ಮೆಟ್ರೊ ...
ನಮ್ಮನ್ನು ಮೆಟ್ರೊ... ನಮ್ಮನ್ನು ಇನ್ನೂ ಮೆಟ್ರೊ... !!"

ಪ್ರೀತಿಯ ಪ್ರೋತ್ಸಾಹಕ್ಕೆ ಜೈ ಹೋ ಡಾಕ್ಟ್ರೆ....

Sunanda hegde said...

Arthagarbitavagide kustana maatu.. naavu nammannu kaledukolluva dina doorilla.. danyavadagalu prakashanna..

Niharika said...

Bereyavrellaru namma kannidigaranna mettode -"METRO".
Manasalli sankata agutte Anna.

Ambika said...

Superr :)
Kushta,Shaari,Gappati n Naagu !
Maja idda ellaruva...sakattagiddu..

ಕಾವ್ಯಾ ಕಾಶ್ಯಪ್ said...
This comment has been removed by the author.
ಕಾವ್ಯಾ ಕಾಶ್ಯಪ್ said...

ಮೆಟ್ರೋ ಅಂದ್ರೆ ಮೆಟ್ಟಿ ಹೇಳು ಆಗ್ತು ಹೇಳದು ನೀ ಹೇಳ್ದ ಮೇಲೆ ಹೊಳದಿದ್ದು ಪ್ರಕಾಶಣ್ಣ....!! ಸೂಪರ್ creativity....ಕುಷ್ಟನ ಗ್ರಾಮೀಣ ಸೊಗಡಿನ ಭಾಷೆನು ಇಷ್ಟ ಆತು.... ಬೆಂದ ಕಾಳನ್ನು (ಬೆಂದಕಾಳೂರು) ಮೆಟ್ರೋ... ಇನ್ನು ನಜ್ಜು ಗುಜ್ಜಾಗಿ ಕಾಳುಗಳೆಲ್ಲ ಹಿಟ್ಟಾಗಬೇಕು.. ಮೆಟ್ರೋsssss.....!!

Bhairav Kodi said...

ಇಲ್ಲಿನ ಕನ್ನಡಿಗ್ರು...ಕನ್ನಡ ಭಾಷೆನಾ ತುಳಿದ್ರು...! ಹೌದು ಕುಷ್ಟ ನಿಮ್ಮ ಮಾತು ಸತ್ಯ, ತಮಿಳರಾಗಲಿ, ತೆಲುಗರಾಗಲಿ, ಮಲಯಾಳಿಗಳಾಗಲಿ, ಹಿಂದಿಯವರಾಗಲಿ ಕನ್ನಡ ಮಾತನಾಡದಿದ್ದರೆ ಬೆಂಗಳೂರಿಗೆ ಸಮಸ್ಯೆಯಿರುತ್ತಿರಲಿಲ್ಲ. ಸಮಸ್ಯೆಯಿರುವುದು ಕನ್ನಡವೇ ಮಾತನಾಡದ ಹುಟ್ಟು ಕನ್ನಡಿಗರಿಂದ. ಒಂದು ಕನ್ನಡ ಪತ್ರಿಕೆ ತರಿಸಲು ಮುಜುಗರಪಟ್ಟುಕೊಳ್ಳುವ ಶ್ರೀಮಂತ ಕನ್ನಡಿಗರಿಂದ, ನೆಲದ ಭಾಷೆ ಮರೆತು ಬೇರೆಲ್ಲಾ ಭಾಷೆ ಕಲಿತು ಬೆಂಗಳೂರಿನಲ್ಲಿ ಬದುಕಲು ಕಲಿತ ಹುಟ್ಟು ಕನ್ನಡಿಗರಿಂದ. ನಿಮ್ಮೂರಲ್ಲಿ ಗಲೀಜು ಗೊಬ್ಬರವಾಗುತ್ತೆ, ಬೆಂಗಳೂರಿನ ಗಲೀಜು ರೋಗ ಹಿಡಿಸುತ್ತೆ ಬೆಂಗಳೂರನ್ನ ಚೆನ್ನಾಗಿ ಅರ್ಥೈಸಿಕೊಂಡಿದ್ದೀರ, ಮುಂದಿನ ಸಾರಿ ಬೆಂಗಳೂರಿಗೆ ಬಂದಾಗ ಒಂದು ವಾರ ಹೆಚ್ಚು ಇದ್ದು ಹೋಗಿ ಬಹುಷಃ ನಿಮಗೂ ಗಾಂಧಿನಗರದವರ ಸಿನಿಮಾ ಮಾಡೋ, ದುಡ್ಡು ಮಾಡೋ ಎಲ್ಲಾ ಗಿಮಿಕ್ಕು ಅರ್ಥವಾಗುತ್ತೆ, ಪಕ್ಕೆಶಣ್ಣ ಸಾದ್ಯವಾದ್ರೆ ಕುಷ್ಟಣ್ಣ೦ಗೆ ಮತ್ತೊಮ್ಮೆ ಪರಮಾತ್ಮ ತೋರಿಸಿ ಅಗ್ಲಾದ್ರು ತಲೆ-ಬುಡ ಅರ್ಥವಾಗಬಹುದು.

Shruthi B S said...

ಪ್ರಕಾಶಣ್ಣ ಸೂಪರ್ ಲೈಕ್......."ನಮ್ಮ ಮೆಟ್ರೋ ಹಾಗು ರಾಜಕುಮಾರ ಫೈಟಿ೦ಗ್" ಎರಡು ಮಜಾ ಇದ್ದು. ತುಂಬಾ ಇಷ್ಟ ಆತು.

ಮೌನರಾಗ said...

ತುಂಬಾ ಚೆನ್ನಾಗಿದೆ ಸಿನೆಮಾ, ಮೆಟ್ರೋ ಪುರಾಣ....ನಗುವಿನ ಜೊತೆ ಜೊತೆಗೆ ಯೋಚಿಸತಕ್ಕಂತಹ ವಿಚಾರವನ್ನು ಓದುಗನಲ್ಲಿ ಮೂಡಿಸಿದ್ದು ಇಷ್ಟ ಆಯಿತು..

Ittigecement said...

ಚುಕ್ಕಿಚಿತ್ತಾರಾ ವಿಜಯಾ...

ವಿಜಯನಗರ/ ನಂದಿನಿ ಲೇಔಟ್ ಕಡೆ ಹೋಗುವ ಹಾಗೇ ಇಲ್ಲ..
ಮೆಟ್ರೋ ಕಾಮಗಾರಿಯಿಂದಾಗಿ ಎಲ್ಲವೂ ಅವ್ಯವಸ್ಥೆಯ ಆಗರ..

ಅದೊಂಥರ ದ್ವೀಪದ ಥರಹ ಆಗಿಬಿಟ್ಟಿದೆ..

ನಾವಿರುವ ಕನಕಪುರ ರಸ್ತೆಯೂ ಹಾಗೆಯೇ ಇದೆ...

ಅಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದಿ ಜನ...
ಕಾಮಗಾರಿ ಮಾಡುತ್ತಿರುವ ಕಂಪನಿಗಳೂ ನಮ್ಮವಲ್ಲ..

ಹಾಗಾಗಿ " ನಮ್ಮ ಮೆಟ್ರೋ" ಅಂತ ಹೆಸರಿಟ್ಟಿದ್ದು ಸರಿಯಾಗಿದೆ..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಪ್ರೀತಿಯ ಶ್ರೀಕಾಂತ್ ಮಂಜುನಾಥ್...

ಕೋರಮಂಗಲ, ಮಹಾತ್ಮಗಾಂಧಿರಸ್ತೆ.. ಬ್ರಿಗೇಡ್ ರಸ್ತೆ ಕಡೆ ಹೋದರೆ..
ನಾವು ನಮ್ಮ ಭಾಷೆಯ ಬಗೆಗೆ ಕನಿಕರ ಪಡಬೇಕು..
ಭೈರವ್ ಕೋಡಿಯವರು ಹೇಳಿದ ಹಾಗೆ..
ಬೆಂಗಳೂರಿನ ಕನ್ನಡಿಗರಿಗೆ ಕನ್ನಡ ಪತ್ರಿಕೆ ಓದುವದರಿಂದ ಮರ್ಯಾದೆ ಕಡಿಮೆ..

ಕನ್ನಡ ಹೋರಾಟಗಾರರಲ್ಲಿ ಒಗ್ಗಟ್ಟಿಲ್ಲ..
ಅಲ್ಲೂ ಸಹ ಜಾತಿ, ಧರ್ಮ, ಪ್ರದೇಶದ ವಿಭಜನೆಗಳು...

ನಮ್ಮ ರಾಜಕೀಯದವರಿಗೆ ಬದ್ಧತೆ ಕಡಿಮೆ.. ಭಾಷಾಭಿಮಾನ ಕಡಿಮೆ...

ಯಾಕೆಂದರೆ ಕನ್ನಡಿಗರಿಂದರೆ ವೋಟ್ ಬ್ಯಾಂಕ್ ಇನ್ನೂ ಆಗಿಲ್ಲ..

ಹಾಗಾಗಿ ನಾವು ಮುಂಬೈ ಮರಾಠಿಗರಂತೆ ಆಗಲು ಹೊರಟಿದ್ದೇವೆ.. ಅನ್ನಿಸಿಬಿಡುತ್ತದೆ...

ಕುಷ್ಟ ಇಷ್ಟ ಆಗಿದ್ದಕ್ಕೆ..
ಅರ್ಥಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು..

ದಿನಕರ ಮೊಗೇರ said...

tumbaa dinada nantara kushTana kathe bantu....

tumba chennaagide....

Ittigecement said...

ಪ್ರೀತಿಯ ಕೇಶವ್ ಸರ್ ಜಿ...

ನಮ್ಮ ಊರಿನ ಕಡೆ ಒಂದು ಗಾದೆ ಮಾತಿದೆ..
"ನಾಯಿ "ಅಗುಳು" ಬರುತ್ತೆ ಅಂತ ತಿಳಿ ಕುಡಿದಿತ್ತಂತೆ...

ಅಂದರೆ..
ಮನೆಯಲ್ಲಿ ಬೀದಿನಾಯಿ ಸಾಕಿರುತ್ತಾರೆ..
ಅನ್ನದ ತಿಳಿ ಸಂಗಡ ಒಂದು ಮುಷ್ಟಿ ಅನ್ನ ಅದಕ್ಕೆ ಹಾಕಿ ಕೊಡುತ್ತಾರೆ..
ತಿಳಿ ಕುಡಿದ ನಂತರ ಅನ್ನ ಸಿಗುತ್ತದೆ ಅಂತ ತಿಳಿ ಪೂರ ಕುಡಿದಿರುತ್ತದೆ ಆ ನಾಯಿ..
ತಿಳಿ ಖಾಲಿ ಆಗುವಷ್ಟರಲ್ಲಿ ಹೊಟ್ಟೆ ತುಂಬಿರುತ್ತದೆ..

ಇನ್ನು ಮುಂದೆ ಸಿನೇಮಾ ಚೆನ್ನಾಗಿರ ಬಹುದು ಅಂತ ನೋಡುತ್ತ ಮಧ್ಯಂತರ ಬಂದಿರುತ್ತದೆ..
ಮಧ್ಯಂತರದ ನಂತರ ಚೆನ್ನಾಗಿರ ಬಹುದು ಅಂತ ಪೂರ್ತಿ ನೋಡಿರುತ್ತೇವೆ..

ನಾಯಿ ಪಾಡು ಪ್ರೇಕ್ಷಕರದ್ದು... !!

ಪ್ರೋತ್ಸಾಹಕ್ಕೆ ವಂದನೆಗಳು...

Anonymous said...

ಪ್ರಕಾಶ್, ನೀನು ಕವನ ಚೊಲೊ ಬರೀತ್ಯ , ಅಥವಾ ಲೇಖನ ಗಳನ್ನಾ ಹೇಳೊದೇ ಕಷ್ಟ... ಒಳ್ಳೆ ಓದುಗ ಓಳ್ಳೆ ಬರಹಗಾರ ಇಬ್ಬರೂ ಒಂದೇ ಕಡೆ ಸಿಗೋದು ಕಷ್ಟ.....ನಿನ್ನಲ್ಲಿ ಆ ಇಬ್ಬರೂ ಇದ್ದ.... ..

Ittigecement said...

ಅನಿಸಿದ್ಧು.. (ಸಿದ್ದು ಸರ್)...

ಮುಂಬೈನಲ್ಲೂ ಹೀಗೇ ಆಗಿತ್ತು..
ಮರಾಠಿಗರು ಮೊದ ಮೊದಲು ಅಲಕ್ಷಿಸಿದರು..

ಈಗ ಅಲ್ಲಿ ಮರಾಠಿ ಮಾತನಾಡುವವರೇ ಕಡಿಮೆ..
ಮುಂಬೈ ಪೂರ್ತಿ ಹಿಂದಿ ಮಯ.. !!

ತಮ್ಮ ನಾಡಿನಲ್ಲಿ ತಾವು ಉಪೇಕ್ಷೆಗೆ ಒಳಗಾಗುವ ಭಾವನೆಯನ್ನು ಅಲ್ಲಿನ ಪ್ರಾದೇಶಿಕ ಪಕ್ಷಗಳಾದ
ಶಿವಸೇನೆ ಮತ್ತು ಎಮ್ಮೆನ್ನೆಸ್ ದುರುಪಯೋಗ ಪಡಿಸಿಕೊಂಡಿದ್ದೂ ಇದೆ..

ಅಂಥಹ ಸ್ಥಿತಿ ನಮಗೆ ಬಾರದಿರಲಿ..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಸುನಂದಾ...

ನಮಗಿಂತ ನೀವಿರುವ ಬೆಳಗಾವಿಯಲ್ಲಿ ಈ ಸಮಸ್ಯೆ ಶುರುವಾಗಿ ಬಿಟ್ಟಿದೆ ಅಲ್ಲವೆ?

ನಮ್ಮನಾಡಿನಲ್ಲಿದ್ದುಕೊಂಡು ಬೇರೆ ಮಾತನಾಡುವ ಪರಿಸ್ಥಿತಿ ಬೆಳಗಾವಿಯಲ್ಲಿದೆ..

ಅಲ್ಲಿ " ನಮ್ಮ ಮೆಟ್ರೋ" ಶುರುವಾಗಿದೆ..

ಕುಷ್ಟನ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

Ittigecement said...

ನಿಹಾರಿಕಾ...

ಕನ್ನಡ ರಕ್ಷಣಾ ವೇದಿಕೆಯವರು ಕಳೆದ ವರ್ಷ "ರೇಲ್ವೆ ನೇಮಕಾತಿ" ನಡೆಯುವಾಗ ಅಲ್ಲಿ ಅಕ್ರಮವಾಗಿ ಬಂದ ಬಿಹಾರಿಗಳನ್ನು ಒದ್ದೋಡಿಸಿದ್ದರು..

ಹಿಂಸೆ ಅಂತ ಅನ್ನಿಸಿದರೂ..
ಅವರು ಮಾಡಿದ ಕೆಲಸ ಶ್ಲಾಘನೀಯ..

ಬೆಂಗಳೂರಿನಲ್ಲಿ ನಡೆಯುವ ರೇಲ್ವೆ ನೇಮಕಾತಿಗೆ ಬಿಹಾರದಿಂದ ಅಭ್ಯರ್ಥಿಗಳು ಬರುತ್ತಾರೆ..
ಅವರು ಆಯ್ಕೆ ಆಅಗುತ್ತಾರೆ..

ನಮ್ಮ ಕನ್ನಡಿಗ ರೇಲ್ವೆ ಮಂತ್ರಿಗಳು ಬೆಣ್ಣೆ ಹೊಸೆಯುತ್ತ ..
ಅಸಹಾಯಕರಾಗಿ ಕುಳಿತಿರುತ್ತಾರೆ.. !!

ನಿಜಕ್ಕೂ ಬೇಸರವಾಗುತ್ತದೆ..

ಪ್ರತಿಕ್ರಿಯೆಗೆ ಧನ್ಯವಾದಗಳು...

balasubramanya said...

"ನೀವು ...ನಾ ಖರೆ ಹೇಳಿದ್ರೂ ಹೂಂ ಅಂತಿರಿ..! ಸುಳ್ಳು ಹೇಳಿದ್ರೂ ಹೂಂ ಅಂತಿರ್ರಿ.!!."" ಕುಷ್ಟ ಯಾಕೋ ಕತ್ಲಲ್ಲಿ ಭಟ್ರಿಗೆ ಜಾಮೂನು ತಿನಿಸೋಕೆ ಹೊರಟ ಅನ್ನಿಸುತ್ತೆ. ಅದಕ್ಕೆ ಕನ್ನಡಿಗರು ಹೀಗೆ ಹಾಡಬಹುದು , ಕತ್ಲಲ್ಲಿ ಭಟ್ರೀಗೆ ಜಾಮೂನು ತಿನ್ನಿಸ್ಬಿಟ್ಟು ನಮ್ಮನ್ನು ಮೆಟ್ ಬನ್ನಿರಿ ................ಆಆಹಾ !!! ಅತ್ಲಾಗೆ ಆ ಭಾಷೆ ಇತ್ಲಾಗೆ ಈ ಭಾಷೆ ನಮ್ ಭಾಷೆ ಹುಡುಕ್ ಬನ್ನಿರೋ .......!!!! ಕಥೆಯಲ್ಲೈತೆ ಒಸಿ ತೋರ್ಸಿ ಚಂಬೇಶ್ವರ..........!!!!!ಪ್ರಕಾಶ್ ಜಿ ನಮೋ ನಮಃ

balasubramanya said...
This comment has been removed by the author.
ಹಳ್ಳಿ ಹುಡುಗ ತರುಣ್ said...

tumba chenagide sir....

bangalore alli kanandigaru ene maadidru nammane tuli antode madkotivi ansutte.. .

very nice one.. kustanige jai ...

ಅಘನಾಶಿನಿ said...
This comment has been removed by the author.
ಅಘನಾಶಿನಿ said...

ಸಿ೦ಬ್ಲಿ ಸೊಲ್ಲದಾದ್ರೆ....'ಹ ಹ ಹ'''ನಲ್ಲ ಪೇಸಿರ್ಕಿ೦ಗಾ...ಪರಕಾಸಾ...-ಗ೦ಗಣ್ಣ

Prashanth Arasikere said...

TUMBA JANA TUMBA CHENNAGI COMMENT MADIDARE...NIVU HELIDDU...SARI IDE...

ಈಶ್ವರ said...

ಒಂದು ವರ್ಷದ ಹಿಂದೆ ಅಲ್ಲೇ ಎಂ ಜಿ ರೋಡಿನಲ್ಲಿ ಮೆಟ್ರೋ ಕೆಲಸ ನಡೆಯುತ್ತಿದ್ದ ಸಂದರ್ಭ! ಬೋರ್ಡಿನಲ್ಲಿದ್ದ ನಮ್ಮ ಮೆಟ್ರೋವನ್ನ ಕಿಡಿಗೇಡಿಗಳು ನಮ್ಮನ್ ಮೆಟ್ರೋ ಮಾಡಿಟ್ಟಿದ್ರು .. ಮರುದಿನ ಇನ್ನೊಬ್ಬ ಮಹಾನ್ ಕಿಡಿಗೇಡಿ "ಅವನಮ್ಮನ್ ಮೆಟ್ರೋ ಮಾಡಿದ್ದು ಇನ್ನೂ ಅಪಹಾಸ್ಯವಾಗೇ ಉಳಿದಿದೆ ಮನಸ್ಸಲ್ಲಿ..

ನಿಮ್ಮ ಬರಹ ಅಂದವಾಗೈತಿ !

SpoorthyMurali said...

LOL!!!! i will laugh every time is hear 'Metro' now on :D

ಸೀತಾರಾಮ. ಕೆ. / SITARAM.K said...

ಉತ್ತಮ ಹಾಸ್ಯಭರಿತ ಲೇಖನ ಜೊತೆಗೆ ಮೆಟ್ರೋ ಬಗ್ಗೆ ಉತ್ತಮ ವಿವರಣೆ... ಕುಷ್ಟ ಎಲ್ಲರಿಗು ಇಷ್ಟ ಆಗಿಬಿಡುತ್ತಾನೆ..