Wednesday, June 15, 2011

....ವ್ಯವಹಾರ...


ಮೊದಲಿಗೆ ನನ್ನ ಬಗೆಗೆ ಹೇಳಿಬಿಡಬೇಕು..

ನಾನು ಬಹಳ ಸಂಪ್ರದಾಯಸ್ಥ ಮನೆತನದಿಂದ ಬಂದವನು...
ಹಳ್ಳಿಯಿಂದ..
ಈಗ ನಾನಿರುವದು ಪಟ್ಟಣದಲ್ಲಿ...

ಟಿವಿ.. ಸಿನೇಮಾ.. 
ಇಂಗ್ಲೀಷ್ ಪತ್ರಿಕೆಗಳು... ಅವುಗಳ ವಿಚಾರಧಾರೆಗಳು..
ನನ್ನನ್ನು ಗೊಂದಲಕ್ಕೆ ಈಡು ಮಾಡಿವೆ..

ದೊಡ್ಡ ದೊಡ್ಡ ಮಾಲ್~ಗಳು.. ಪಬ್ ಗಳು..
ಸ್ನೇಹಿತರ ಸಂಗಡ ಬಾರಿಗೆ ಹೋಗುವದು...

ಮನೆಯಲ್ಲಿ ಅರ್ಧಗಂಟೆ ಪೂಜೆ ಮಾಡುವದು..

ಒಟ್ಟಿನಲ್ಲಿ ವಿರೋಧಾಭಾಸದ ನಡುವೆ ನನ್ನ ಬದುಕು ನಡೆಯುತ್ತಿದೆ..

ನಿಜ ಹೇಳಬೇಕೆಂದರೆ...
ಅತ್ತ ಸಂಪ್ರದಾಯಕ್ಕೂ ಒಗ್ಗದೆ.. ಇತ್ತ ಆಧುನಿಕರಣಕ್ಕೂ ಹೊಂದಿಕೊಳ್ಳದೆ...
ಒಂದು ರೀತಿಯ ಎಡಬಿಡಂಗಿಯಾಗಿಬಿಟ್ಟಿದ್ದೇನೆ..

ಹಾಗಂತ ಎಲ್ಲೂ ಸಲ್ಲದವ ನಾನಲ್ಲ..
ನಾನು ಮೊದಲಿಗೆ ಒಂದು ಮಠದಲ್ಲಿ ಕೆಲಸ ಮಾಡುತ್ತಿದ್ದೆ..
ಗುರುಗಳಿಗೆ ಹತ್ತಿರವಾಗಿ ದೊಡ್ಡ ದೊಡ್ಡ ಜನರ ಹತ್ತಿರದ ಪರಿಚಯವೂ ಆಗಿದೆ ಅನ್ನಿ...

ನಾನು ಭಾಷಣವನ್ನು ತುಂಬಾ ಚೆನ್ನಾಗಿ ಮಾಡುತ್ತೇನೆ...

ಎಲುಬಿಲ್ಲದ ನಾಲಿಗೆ ಹೇಳುವ ಮಾತಿಗೇನು..?
ಆತ್ಮಸಾಕ್ಷಿಯ ಚಿಂತೆ ಬೇಕಿಲ್ಲ..

ಯಾಕೋ ಆ ಕೆಲಸ ಬೇಸರವಾಯಿತು... ಬಿಟ್ಟು ಬಂದೆ..

ಸ್ವಂತ ಬಿಸಿನೆಸ್ ಮಾಡೋಣ ಅಂತ ಜೆರಾಕ್ಸ್ ಅಂಗಡಿ ಇಟ್ಟೆ... ಸರಿಯಾಗಿ ನಡೆಯಲಿಲ್ಲ..

ಸ್ಟೇಷನರಿ ಅಂಗಡಿ ಇಟ್ಟೆ... ಮತ್ತೆ ಫೇಲಾದೆ...

ಅಷ್ಟರಲ್ಲಿ ಅಲ್ಲಿಯವರೆಗೆ ಕಟ್ಟಿಟ್ಟ ದುಡ್ಡು ಖರ್ಚಾಯಿತು...

ದಿನನಿತ್ಯ ಅಡಿಗೆ ಮನೆಯಿಂದ ಶಬ್ಧಗಳು ಜೋರಾಗಿ ಬರತೊಡಗಿದವು..

ಮನೆಯಲ್ಲಿ ಗಂಡಿನ ಸಂಪಾದನೆ ಇರದಿದ್ದಲ್ಲಿ ಹಂಗಿನ ಮಾತು ಕೇಳುವದು ಅನಿವಾರ್ಯ..

"ನಾನು ಓದಿದ್ದೇನೆ.. ನಾನೂ ಕೆಲಸ ಮಾಡುತ್ತೇನೆ.."

ಮಡದಿಯ ಮಾತಿಗೆ ಹೂಂ ಹೇಳಬೇಕಾಯಿತು..


ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತು..

ಇತ್ತ ನಾನು ನೌಕರಿಯನ್ನೂ ಮಾಡಲಾಗದೆ..
ಸ್ವಂತ ಬಿಸಿನೆಸ್  ಮಾಡಲು ಹಣವಿಲ್ಲದೆ ಅತಂತ್ರನಾದೆ...

ಹೆಂಡತಿಯ ಎದುರಿಗೆ ಗಟ್ಟಿಯಾಗಿ ನಿಂತು ಮಾತಾನಾಡುವ ಧೈರ್ಯ ಕಳೆದುಕೊಂಡಿದ್ದೆ..
ಪ್ರತಿಯೊಂದಕ್ಕೂ ಹೆಂಡತಿಯ ಹತ್ತಿರ ಬೇಡಬೇಕಾದ ಸ್ಥಿತಿ ..

ಬದುಕು ಬಹಳ ಕಷ್ಟವಾಯಿತು..

ಇನ್ನೊಂದು ವಿಷಯ..

ನಾನು ಖಾಲಿಯಾಗೇನೂ ಇರಲಿಲ್ಲ..

ಆಗಾಗ ಭಾಷಣ  ಮಾಡುವ ಅವಕಾಶ ಸಿಗುತ್ತಿತ್ತು..
ನಾನು ಚೆನ್ನಾಗಿ ಮಾತನಾಡುತ್ತಿದ್ದೆ...
ಗೌರವವೂ ಸಿಗುತ್ತಿತ್ತು..

ಶಾಲುಗಳು.. ಹಣ್ಣಿನ ಬುಟ್ಟಿಯೂ ಯಥೇಚ್ಛವಾಗಿ ಸಿಗುತ್ತಿತ್ತು...


ಇದರಿಂದ ಹೊಟ್ಟೆ ತುಂಬುವದಿಲ್ಲವಲ್ಲ...
ಮನೆಯಲ್ಲಿ ಮರ್ಯಾದಿಯೂ ಹೆಚ್ಚಲಿಲ್ಲ....

ಈ ಪರಾವಲಂಬಿ ಬದುಕು ಸಾಕು ಸಾಕಾಯಿತು..

ಒಂದುದಿನ ನನ್ನಾಕೆ ಸಡಗರದಿಂದ ಬಂದಳು..
ನಾನು ಅನ್ಯಮನಸ್ಕನಾಗಿ ಹಾಲಿನಲ್ಲಿ ಕುಳಿತ್ತಿದ್ದೆ...

"ರೀ...
 ಗುಡ್ ನ್ಯೂಸ್...!!. "

"ಏನು?"...

" ರೀ..
ನಮ್ಮ ಮಾಲೀಕರು ತುಂಬಾ ಒಳ್ಳೆಯವರು..
ಪ್ರಾಮಾಣಿಕರನ್ನು ಬಹಳ ಇಷ್ಟಪಡುತ್ತಾರೆ..
ನನಗೂ  ಸಂಬಳ ಹೆಚ್ಚಿಸಿದ್ದಾರೆ.."

ಬಹಳ ಸಂಭ್ರಮದಿಂದ ಹೇಳುತ್ತಿದ್ದಳು..

ನನ್ನಾಕೆ ನನ್ನನ್ನು ಹಂಗಿಸುತ್ತಿದ್ದಾಳೆ ಅನ್ನಿಸಿತು...
ಖುಷಿಯಾಗಲಿಲ್ಲ... ಸತ್ತುಹೋಗಿಬಿಡಬೇಕು ಅನ್ನುವಷ್ಟು ದುಃಖವಾಯಿತು..

"ರೀ..
ವಿಷಯ ಅದಲ್ಲ..
ನಾನು  ನಿಮ್ಮ ಬಗೆಗೆ ಹೇಳಿದ್ದೆ...
ಅವರಿಗೆ ನಿಮ್ಮ ಪ್ರತಿಭೆಯ ಬಗೆಗೆ ಖುಷಿಯಾಯಿತು..
ನಿಮಗೂ ಒಂದು ಬಿಸಿನೆಸ್ ಕೊಡ್ತಾರಂತೆ...
ನೀವು ಸ್ವತಂತ್ರವಾಗಿ ವ್ಯವಹಾರ ಮಾಡಬಹುದು...
ಇನ್ವೆಸ್ಟ್ ಮೆಂಟ್ ಎಲ್ಲದೂ ಅವರದ್ದು...

ರೀ.. 
ಇನ್ನು ಸ್ವಲ್ಪ ಹೊತ್ತಿನಲ್ಲಿ ಅವರು ನಮ್ಮ ಮನೆಗೆ ಬರ್ತಾರೆ...
ನಿಮ್ಮ ಬಳಿ ಮಾತನಾಡಲಿಕ್ಕೆ..
ನೀವು ಹೂಂ ಅಂದುಬಿಡಿ.. ಬದುಕು ಸುಂದರವಾಗುತ್ತದೆ...

ನಮ್ಮ ಮಾಲಿಕರು ತುಂಬಾ ಒಳ್ಳೆಯವರು...
ಪ್ರಾಮಾಣಿಕರನ್ನು ಕಂಡರೆ ಜೀವಕ್ಕೆ ಜೀವ ಕೊಡುತ್ತಾರೆ.."

ನನಗೆ ಆಶ್ಚರ್ಯವೂ... ಕುತೂಹಲವೂ ಆಯಿತು..

ಇವಳು ಸಂಭ್ರಮದಿಂದ ಅಡಿಗೆ ಮನೆಗೆ ಓಡಿದಳು..

ಅಡಿಗೆ ಮನೆಯಿಂದ ಒಳ್ಳೋಳ್ಳೆ ರುಚಿ ರುಚಿಯಾದ ಸುವಾಸನೆ ಬರತೊಡಗಿತು..
ಬಹುಷಃ ಮಾಲಿಕರು ಒಳ್ಳೆಯವರೇ ಇದ್ದಿರಬೇಕು..

ಹೆಂಗಸರ ಪ್ರೀತಿ ಅಡಿಗೆಯ ಸುವಾಸನೆಯಿಂದ ಗೊತ್ತಾಗುತ್ತದೆ..

ಸ್ವಲ್ಪ ಹೊತ್ತಿನಲ್ಲಿ ಮಾಲಿಕರು ಬಂದರು..
ಅವರ ಸಂಗಡ ಒಬ್ಬ ಹುಡುಗಿಯೂ ಇದ್ದಳು..

ಬಹಳ ಗತ್ತಿನ ಮನುಷ್ಯ...

"ನಿಮ್ಮ ಮಡದಿಯವರ ಕಾರ್ಯ ಕೌಶಲ್ಯತೆ.. 
ಚಾಕಚಕ್ಯತೆಗೆ ಮಾರುಹೋಗಿದ್ದೇನೆ..
ಅವರು ನಮ್ಮ ಕಂಪೆನಿಗೆ ಅನಿವಾರ್ಯ ಆಗಿಬಿಟ್ಟಿದ್ದಾರೆ..

ಅವರು ನಿಮ್ಮ ಬಗ್ಗೆ ಹೇಳಿದ್ದಾರೆ..
ಇಷ್ಟೆಲ್ಲ ಪ್ರತಿಭೆಯಿದ್ದು ಯಾವ ವ್ಯವಹಾರವೂ ಕೈಗೂಡುತ್ತಿಲ್ಲ ಅಂತ.."

ನಾನು ತಲೆ ಹಾಕಿದೆ..

"ನೋಡಿ..
ನಿಮಗೆ ಒಂದು ಆಫೀಸು ಮಾಡಿಕೊಡುತ್ತೇನೆ..
ನಮ್ಮ ಪ್ರಾಡಕ್ಟುಗಳನ್ನು ನಿಮಗೆ ಕೊಡುತ್ತೇನೆ...
ಅದನ್ನು ಖರಿದಿಸುವ ಏಜನ್ಸಿಗಳನ್ನು ನಿಮಗೆ ಪರಿಚಯ ಮಾಡಿಕೊಡುತ್ತೇನೆ..
ಅವರು ನಮ್ಮ ಪ್ರಾಡಕ್ಟುಗಳನ್ನು ನಿಮ್ಮ ಬಳಿಯೇ ಖರಿದಿಸುತ್ತಾರೆ..


ಇದರಲ್ಲಿ ನಿಮಗೆ ಲಾಭದಲ್ಲಿ ಆರು  ಪರ್ಸಂಟೇಜ್ ಕೊಡುತ್ತೇನೆ..

ಇನ್ನೊಂದು ವಿಷಯ..
ಇದರಿಂದ ನನಗೇನು ಲಾಭ ಅಂದುಕೊಳ್ಳ ಬಹುದು...

ಇದರಿಂದ ನನಗೆ ಇನ್~ಕಮ್ ಟ್ಯಾಕ್ಸ್ ಉಳಿಯುತ್ತದೆ..
ಅದು ಬಲುದೊಡ್ಡ ಮೊತ್ತ..
ನನಗೆ ಪ್ರಾಮಾಣಿಕರು ಬೇಕು..

ನಿಮಗೆ ರಿಸ್ಕ್ ಇಲ್ಲದ ಬಿಸಿನೆಸ್..
ಇಬ್ಬರಿಗೂ ಅನುಕೂಲ ಏನಂತೀರಿ..?"

ಅವರು ಕೊಟ್ಟ ಅವಕಾಶ ನನಗೆ ಹಿಡಿಸಿತು..

"ನೋಡಿ..
ನಿಮಗೆ ನಾನು ಕೊಡುವದು ಕಡಿಮೆ ಅಂತ ಅನ್ನಿಸ ಬಹುದು..
ಇದರಲ್ಲಿ ರಿಸ್ಕ್.. ಖರ್ಚು ಎಲ್ಲವೂ ನನ್ನದು.."

ಅವರು ಮಾತು ನನಗೆ ಇಷ್ಟವಾಯಿತು..

ಮುಳುಗುತ್ತಿರುವವನಿಗೆ ನೆಪಕ್ಕೆ ಹುಲುಕಡ್ಡಿ ಸಿಕ್ಕರೂ ಸಾಕು...ಬದುಕಿಕೊಳ್ಳಬಹುದು..

ಮೇಲೇಳಲು ಅವಕಾಶಕ್ಕಾಗಿ ಕಾಯುತ್ತಿದ್ದೆ...
ಒಪ್ಪಿಕೊಂಡೆ..

"ನನ್ನ ಕಂಪನಿಯ ಪ್ರಾಡಕ್ಟುಗಳ ವಿವರ ಕಾರಿನಲ್ಲಿದೆ..
ತರುತ್ತೇನೆ ಇರಿ.."
ಅವರು ಹೊರಗಡೆ ಹೋದರು..

ಅವರ ಸಂಗಡ ಬಂದಿದ್ದ ಹುಡುಗಿ ಮಾತನಾಡತೊಡಗಿದಳು..

"ಸರ್..
ನೀವು ಚೆನ್ನಾಗಿ ಮಾತನಾಡುತ್ತೀರಂತೆ.. ತುಂಬಾ ಓದಿಕೊಡಿದ್ದೀರಂತೆ..
ನನಗೆ ನಿಮ್ಮಿಂದ ಒಂದು ಸಹಾಯವಾಗಬೇಕು.."

ಅವಳ ಮುಖನೋಡಿದೆ...

ಆಕರ್ಷಕ ಮುಗುಳ್ನಗುವ ಕಣ್ಣುಗಳು..
ಕೆನ್ನೆ, ತುಟಿ.. ಎಲ್ಲವೂ ಚಂದ.. ಬಹಳ ಚಂದ..

"ಸರ್..
ನಮ್ಮದೊಂದು ಕ್ಲಬ್ ಇದೆ..
ಅಲ್ಲಿ ನಿಮ್ಮಂಥಹ ಪ್ರತಿಭಾವಂತ ಮಾತುಗಾರರನ್ನು ಕರೆದು ಭಾಷಣ ಮಾಡಿಸುತ್ತೇವೆ..
ನಿಮ್ಮಂಥವರ ಅಗತ್ಯ ನಮ್ಮ ಕ್ಲಬ್ಬಿಗೆ ಬಹಳ ಅಗತ್ಯವಿದೆ..

ನೀವು ಅಲ್ಲಿ ಆಗಾಗ ಭಾಷಣ ಮಾಡಲು ಸಾಧ್ಯವೇ?
ನಿಮ್ಮ ಭಾಷಣ ಕೇಳಿ ನಿಮಗೆ ಏನು ಕೊಡ ಬಹುದು ಅಂತ ನಿರ್ಣಯ ಮಾಡೋಣ..
ಪ್ರತಿಭೆ ನಮ್ಮ ಕ್ಲಬ್ಬಿಗೆ ಬೇಕು..

ಸರ್..
ನಾಳೆ ನಮ್ಮ ಕ್ಲಬ್ಬಿನಲ್ಲಿ ನಿಮ್ಮ ಭಾಷಣ..ಇಟ್ಟುಕೊಳ್ಳೋಣವೆ..?.."

ನನಗೆ ಬಹಳ ಸಂತಸವಾಯಿತು..

"ಧಾರಾಳವಾಗಿ.. ಖಂಡಿತವಾಗಿ ಇಟ್ಟುಕೊಳ್ಳಿ ಬರ್ತೇನೆ..
ಯಾವ ವಿಷಯದ ಬಗೆಗೆ ಮಾತನಾಡಬೇಕು..? "

" ಶೀಲ... 
ಮನಸ್ಸಿಗೆ ಸಂಬಂಧ ಪಟ್ಟಿದ್ದೋ... ದೇಹಕ್ಕೋ..
ಇದರ ಬಗೆಗೆ ಮಾತನಾಡಬೇಕು..."

ವಿಷಯ ನನಗೆ ಹಿಡಿಸಿತು..

" ಖಂಡಿತವಾಗಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ.."

ಬಹಳ ಖುಷಿಯಾಯಿತು...

ಇದೇನಿದು...?
ಬಂದರೆ ಎಲ್ಲಕಡೆಯಿಂದಲೂ ಬರುತ್ತದಲ್ಲಾ?..

ಇದಕ್ಕೂ ನಾನು ಒಪ್ಪಿಗೆ ಸೂಚಿಸಿದೆ..

ಅಷ್ಟರಲ್ಲಿ ಮಾಲಿಕರು ತಮ್ಮ ಕಂಪನಿಯ ಕೆಲವು ಫೈಲುಗಳನ್ನು ಕೊಟ್ಟರು..
ನಾನು ವಿನಮ್ರನಾಗಿ ಸ್ವೀಕರಿಸಿದೆ..

ನನ್ನಾಕೆ ರುಚಿ ರುಚಿಯಾದ ತಿಂಡಿಗಳನ್ನು ಕೊಟ್ಟಳು...
ಅವಳ ಸಂಭ್ರಮ.. ಸಡಗರ ನೋಡಿ ನನಗೂ ಸಂತೋಷವಾಯಿತು..

ನನಗೂ ನನ್ನ ನಿಷ್ಕ್ರಿಯತೆ ಬಗೆಗೆ ಇದ್ದ ಕೀಳರಿಮೆ ದೂರವಾಗತೊಡಗಿತು..

ನನ್ನ ಹೆಂಡತಿಯ ಬಗೆಗೆ ಬಹಳ ಸಂತಸವಾಯಿತು..
ಹೆಮ್ಮೆಯೂ ಉಂಟಾಯಿತು..
ಬಹುದಿನಗಳ ನಂತರ ಮನೆಯಲ್ಲಿ ಸಂಭ್ರಮ.. ಸಂತೋಷ..
ದೊಡ್ಡ ನಗು ಎಲ್ಲವೂ ಇತ್ತು...

ಮನೆಯ ಸಂತೋಷ ...
ಹೆಂಗಸರ 
ನಗುವಿನಲ್ಲಿದೆ...
ಅವರ  ಸಂಭ್ರಮದಲ್ಲಿದೆ ..!

ಅವರು ಹೊರಟರು..

ಮಾಲಿಕರು ಕಾರು ಹತ್ತುವ ಮೊದಲು ನನ್ನನ್ನು ಕರೆದರು..

"ನೋಡಿ ..
ನಾಳೆ ಒಂದು ಕಾರು ನಿಮ್ಮ ಮನೆಗೆ ಬರುತ್ತದೆ...
ನಮ್ಮ ಡ್ರೈವರ್ ನಿಮಗೆ ನಿಮ್ಮ ಆಫೀಸ್ ಇರುವ ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ...
ನಿಮಗೆ ಹೇಗೆ ಬೇಕೋ ಹಾಗೆ ಒಳಗಿನ ಅಲಂಕಾರ ವಿನ್ಯಾಸ ಮಾಡಿಸಿಕೊಳ್ಳಿ..
ಖರ್ಚು ನನ್ನದು.. ಬಿಲ್ ಕಳಿಸಿಕೊಡಿ.."

ನನಗೆ ಒಮ್ಮೆ ಚಿವುಟಿಕೊಳ್ಳೋಣ ಅನ್ನಿಸಿತು..
ಇದೆಲ್ಲ ನಿಜವಾ?

ಮರುದಿನ ಬಹಳ ಖುಷಿಯಿಂದ ನನ್ನ ನೂತನ ಆಫೀಸಿಗೆ ಹೋಗಿ ಬಂದೆ..
ಮಾಲಿಕರು ಒಬ್ಬ ಆರ್ಕಿಟೆಕ್ಟ್ ಕಳಿಸಿಕೊಟ್ಟಿದ್ದರು..
ಒಂದು ಸುಂದರ ವಿನ್ಯಾಸ ಮಾಡಲು ಹೇಳಿದೆ..

ಬದುಕು ಇದ್ದಕ್ಕಿದ್ದಂತೆ ಸುಂದರ ಅನ್ನಿಸಿತು...
ಹಳೆಯದನ್ನು ನೆನಪು ಮಾಡಿಕೊಳ್ಳಲು  ಮನಸ್ಸು ಬಯಸಲಿಲ್ಲ..

ಮಧ್ಯಾಹ್ನದ ಮೇಲೆ ಭಾಷಣಕ್ಕೆ ಹೋದೆ..

ಅಲ್ಲಿಯೂ ಸಂಭ್ರಮದ ಸ್ವಾಗತ..!

ಭಾಷಣ ಮಾಡಲು ವೇದಿಕೆ ಹತ್ತಿದೆ..

ಭಾಷಣವೆಂದರೆ ನನಗೆ ಕರತಲಾಮಲಕ.. ಲೀಲಾಜಾಲ...
ಶುರು ಮಾಡಿದೆ...

"ಶೀಲವೆಂದರೆ ದೇಹಕ್ಕೆ ಸಂಬಂಧಿಸಿದ್ದಲ್ಲ.. 
ಮನಸ್ಸಿಗೆ ಸಂಬಂಧಿಸಿದ್ದು...

ಆಹಾರ, ನಿದ್ರಾ.. ಮೈಥುನ.. ಇವೆಲ್ಲ ದೇಹದ ಅಗತ್ಯಗಳು...
ಹಸಿವೆಯಾಯಿತು.. ತಿನ್ನಬೇಕು.. ತಿನ್ನುತ್ತೇವೆ..

ಆಯಾಸವಾಯಿತು ನಿದ್ರೆ ಮಾಡಬೇಕು..ಮಾಡುತ್ತೇವೆ..

ಮೈಥುನಕ್ಕಾಗಿ ಇಷ್ಟೆಲ್ಲಾ ಕಷ್ಟ ಯಾಕೆ?
ಒಂದು ಸಹಜವಾದ ಕ್ರಿಯೆಗೆ ದೇಹ ಸಹಕರಿಸುತ್ತದೆ..
ಅದು ಯಾವುದಾದರೇನು? 
ದೇಹದ ಪ್ರತಿಸ್ಪಂದನೆಯಾದರೆ ಸಾಕು..

ಮುಖ್ಯವಾಗಿ ಮನಸ್ಸು ಒಪ್ಪಬೇಕು..
ಮನಸ್ಸಿನದೆ... ಗೊಜಲು... ಗೊಂದಲ..

ನಾವು ಖರೀದಿಸುವ ಅಂಗಡಿಯಲ್ಲಿ   ಬಾಕ್ಸ್  ಒಡೆದಿದ್ದರೆ  ನಾವು ಖರಿದಿಸುವದಿಲ್ಲ..
ಸೀಲ್ ಒಡೆಯದ ಬಾಕ್ಸ್.. ಕೇಳುತ್ತೇವೆ...

ಮುಖ್ಯವಾಗಿ ಬಾಕ್ಸ್  ಒಳಗಿರುವ ವಸ್ತು ಬಳಸಿಕೊಳ್ಳಲು ಇಷ್ಟೆಲ್ಲ ತಾನೆ..?

ಬಾಕ್ಸ್ ಒಳಗಿರುವ ವಸ್ತು ಚೆನ್ನಾಗಿದ್ದರೆ ಸಾಕಲ್ಲವೇ?


ಒಡೆದಿರುವ ಬಾಕ್ಸ್  ಮನಸ್ಸು ಬಯಸುವದಿಲ್ಲ..



ಇದೆಲ್ಲ ಮನಸ್ಸಿಗೆ ಸಂಬಂಧಿಸಿದ್ದು...


ಶೀಲ ಮನಸ್ಸಿಗೆ ಸಂಬಂಧಿಸಿದ್ದು.."

ನನ್ನ ಮಾತು ಆ ಚಂದದ ಹುಡುಗಿಗೆ ಬಹಳ ಇಷ್ಟವಾಯಿತು..
ಅವಳ ಕಣ್ಣುಗಳೇ.. ಹೇಳುತ್ತಿದ್ದವು...

"ಸರ್.. 
ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿದ್ದವು..
ನೀವು ನಮ್ಮ ಕ್ಲಬ್ಬಿನ ಆಸ್ತಿ..
ನಮ್ಮ ಕ್ಲಬ್ಬಿನ ಸದಸ್ಯತ್ವ ಬಹಳ ದುಬಾರಿ...
ಆದರೆ.. ನಿಮಗೆ 
ನಿಮ್ಮ ಕುಟುಂಬಕ್ಕೆ ಇದು ಫ್ರೀ..
ಇಲ್ಲಿನ ಊಟ, ತಿಂಡಿ.. ಎಲ್ಲವು ನಿಮಗೆ ಫ್ರೀ.."

ನನಗೆ ಆಶ್ಚರ್ಯವಾಯಿತು...

"ಸರ್...
ಇದು ಫ್ರೀ ಅಂದರೆ  ಪುಕ್ಕಟೆಯಲ್ಲ..
ನೀವು ಆಗಾಗ ಇಲ್ಲಿ ಭಾಷಣ ಮಾಡಬೇಕಾಗುತ್ತದೆ...

ನಿಮ್ಮ ಭಾಷಣದ ಪ್ರತಿಭೆಗೆ ನಾವು ಕೊಡುತ್ತಿರುವ ಬೆಲೆ ಇದು..."

ನಾನು ತಲೆಯಾಡಿಸಿದೆ...
ಮನಸ್ಸು ಸಂತೋಷದಿಂದ ಬೀಗುತ್ತಿತ್ತು...

" ಸರ್...
ಇನ್ನೊಂದು ವಿಷಯ...
ನಿಮಗೆ ಈ ಕ್ಲಬ್ಬಿನ ಸಂಗಡ ನನ್ನ ಪ್ರಿತಿಯನ್ನೂ ಕೊಡುವೆ..
ನಿಮಗಾಗಿ ಪ್ರೀತಿಯಿಂದ ನಾನಿರುವೆ..
ನನ್ನ ಸೇವೆಯನ್ನೂ ನೀವು ಬಳಸಿಕೊಳ್ಳಬಹುದು.."


ಬಹಳ ಗೂಡಾರ್ಥದ ಮಾತುಗಳು.. !!


ಹುಡುಗಿ ಚಂದವಿದ್ದರೂ... ಮನಸ್ಸು ಒಪ್ಪಲಿಲ್ಲ...
ಮಡದಿ.. ಸಂಸಾರ..ಅವಳ ಪ್ರೀತಿ ನೆನಪಾಯಿತು..


ನನಗೆ ಇದು ಇಷ್ಟವಾಗಲಿಲ್ಲ..


"ನೋಡಿ..
ಎಲ್ಲದಕ್ಕೂ ಮನಸ್ಸು ಒಪ್ಪಬೇಕಲ್ಲ...

ಒಂದು ವೇಳೆ ಮನಸ್ಸು ಒಪ್ಪಿದರೂ..
ಸಂದರ್ಭ...
ಸಂಬಂಧಗಳು.. ಒಪ್ಪಬೇಕಲ್ಲ...

ಕೆಲವೊಂದನ್ನು ನಮ್ಮ  ಬಳಿಯಲ್ಲಿಯೇ ಹುಡುಕಿಕೊಳ್ಳಬೇಕು...
ಹೊರಗಡೆ ಎಷ್ಟು ಹುಡುಕಿದರೂ ಸಿಗುವದಿಲ್ಲ..


ಬಳಿಯಲ್ಲಿ ಸಿಗದಿರುವದು ಹೊರಗಡೆಯೂ ಸಿಗುವದಿಲ್ಲ.."

ಅವಳಂತೆಯೇ ನಾನು ಕೂಡ ಮಾರ್ಮಿಕವಾಗಿ ಹೇಳಿದೆ...

ಮನೆಗೆ ಬಂದೆ..
ಕತ್ತಲೆಯಾಗಿಬಿಟ್ಟಿತ್ತು ..


ನನ್ನ ಸಂತೋಷವನ್ನು ಮಡದಿಯೊಡನೆ ಹೇಳಿಕೊಳ್ಳಬೇಕಿತ್ತು . !!

ಸ್ವಲ್ಪ ದೂರದಲ್ಲಿರುವಾಗಲೇ ಮನೆಯ ಮುಂದೊಂದು ಕಾರು ನಿಂತಿರುವದು ಕಾಣಿಸಿತು...

ನನಗೆ ಆಘಾತವಾಯಿತು..

"ಅದು ಮಾಲಿಕರ ಕಾರು..!!"

ಹಾಲಿನಲ್ಲಿ ಲೈಟ್ ಇರಲಿಲ್ಲವಾಗಿತ್ತು...
ಇಣುಕಿನೊಡಿದೆ.. 
ಬೆಡ್ ರೂಮಿನ ಬೆಳಕಿತ್ತು...!!

ಮನೆಯಲ್ಲಿ ಬೇರೆ ಎಲ್ಲೂ ಬೆಳಕಿರಲಿಲ್ಲ...

ಇದು ನಿಜವಾ..? 
ಸತ್ಯವಾ?
ಕೋಪದಿಂದ ಮೈಯೆಲ್ಲ ಉರಿಯತೊಡಗಿತು...

ಏನು ಮಾಡಲಿ...? 
ಏನು ಮಾಡಲಿ..? ಛೇ...!

ಅಷ್ಟರಲ್ಲಿ ಆ ಹುಡುಗಿಯ ಫೋನ್.. !

"ಸರ್...
ನಾನು ಮಾತಾಡಿದ್ದರ ಬಗೆಗೆ ಬೇಸರಗೊಳ್ಳಬೇಡಿ..
ಮಾಲಿಕರು ...
ನಿಮಗೆ ಎಲ್ಲರೀತಿಯ ಸಹಕಾರ ಕೊಡಲಿಕ್ಕೆ.. ಹೇಳಿದ್ದರು..
ಹಾಗಾಗಿ ಹೇಳಿದೆ..
ನೀವು ಹೇಳಿದ್ದು ನಿಜ.. 
ಶೀಲ ಮನಸ್ಸಿಗೆ ಸಂಬಂಧಿಸಿದ್ದು...

ಬೇಸರ ಮಾಡ್ಕೋಬೇಡಿ ನನ್ನ ಬಗ್ಗೆ.."

ನನಗೆ ಮೈಯೆಲ್ಲಾ ಉರಿಯುತ್ತಿತ್ತು...

"ಖಂಡಿತ ಬೇಸರ ಇಲ್ಲಮ್ಮ...
ನಾಳೆ ಬೆಳಿಗ್ಗೆ ನಮ್ಮ ಮನೆಗೆ ಬರ್ತೀರಾ..?
ನನ್ನಾಕೆ ಆಫೀಸಿಗೆ ಹೋಗಿರ್ತಾರೆ.."

"ಏನ್ ಸರ್ ಇದು.. ?
ನಿಜವಾ?
ನಾನು ಬರಬಹುದಾ?"


ಬದುಕಲು ಹೊಸ ಆಸೆ..
ಕನಸುಗಳನ್ನು ಹುಡುಕಬೇಕಿತ್ತು....


"ದಯವಿಟ್ಟು ಬನ್ನಿ..
ಶೀಲ ಅನ್ನೋದು ಮನಸ್ಸಿಗೂ.. ದೇಹಕ್ಕೂ ಸಂಬಂಧಿಸಿದ್ದು ಅನ್ನೋದಕ್ಕಿಂತ..

ಶೀಲ ಅನ್ನೋದು ಸಂದರ್ಭಕ್ಕೆ.. ವ್ಯವಹಾರಕ್ಕೆ..ಸಂಬಂಧಿಸಿದ್ದು.. "


...........


(ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ...)

55 comments:

ಮನಸು said...

ಅಬ್ಬಾ ಎಂಥಾ ಕಥೆ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ.... ಎಲ್ಲವೂ ವ್ಯವಹಾರಿಕವಾಗುತ್ತ ಬರುತ್ತಲಿರುವ ಲೋಕದ ಉದಾಹರಣೆಯನ್ನು ತಿಳಿಸಿದ್ದೀರಿ.

ವನಿತಾ / Vanitha said...

good, For the first time a different ending in Prakashanna's story!
swartha & vyavahara everywhere!!

ಸವಿಗನಸು said...

ಪ್ರಕಾಶಣ್ಣ,
ಒಂದು ಹೊಸ ತರಹ ಲೇಖನ ಈ ಸರಿ ನಿಮ್ಮಿಂದ....
ಚೆನ್ನಾಗಿದೆ...ನನಗೇನೊ ಮನಸ್ಸಿಗೆ ಸಂಬಂಧಿಸಿದ್ದು.. ಅನ್ನಿಸಿತು....

Ittigecement said...

ಮನಸು....

ಪ್ರತಿಯೊಂದು ಕಾಲಘಟ್ಟದಲ್ಲಿ ಮೌಲ್ಯಗಳು ಬದಲಾಗುತ್ತವೆ...
ಬದಲಾವಣೆ ಅನಿವಾರ್ಯವೂ ಕೂಡ...

ಶ್ರೀಮಂತಿಕೆಗಾಗಿ ಹಂಬಲಿಸುವ... ಮಧ್ಯಮ ವರ್ಗದ
ವಿರೋಧಾಭಾಸದ ನಡುವೆ ಬದುಕುವ ..ಬದುಕು ಇದು ಅಲ್ಲವಾ?

ಬೇಕು ಬೇಡಗಳನಡುವೆ... ಹೊಂದಾಣಿಕೆ... ಕಾಂಪ್ರಮೈಸ್...
ಎಲ್ಲಿಯವರೆಗೆ ಹೋಗಬಹುದು...?

ನನಗೆ ಈ ಕಥೆ ಬರೆದು ಮುಗಿಸಿದಾಗ ಬಹಳ ಅಳುಕಿತ್ತು....
ಬ್ಲಾಗಿಗೆ ಹಾಕಬೇಕೊ ಬೇಡವೋ ಅಂತ..

ಗೆಳೆಯರ ಸಲಹೆ ಕೇಳಿ ಹಾಕಿದೆ..

ಪ್ರತಿಕ್ರಿಯೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...

ಪ್ರತಿಕ್ರಿಯೆಗಳು ಟಾನಿಕ್.. ಇನ್ನಷ್ಟು ಬರೆಯಲು ಉತ್ಸಾಹಕೊಡುತ್ತವೆ...

ಸವಿಗನಸು said...

ಎಲ್ಲ ಕಡೆ ಸ್ವಾರ್ಥ ...ಎಲ್ಲವೂ ವ್ಯವಹಾರಿಕ.....ಒಳ್ಳೆ ವಿಷಯ ಅಯ್ಕೆ ಮಾಡಿದ್ದೀರ.....

ಚಿತ್ರಾ said...

ಪ್ರಕಾಶಣ್ಣ ,
ಕಥೆಯ ವಿಷಯ , ಮನಸ್ಸಿನ ಗೊಂದಲ , ಗೋಜಲು .. ಈ ಮುಂಚೆಯೂ ನಿನ್ನ ಬರಹಗಳಲ್ಲಿ ಕಾಣಿಸಿದೆ . ಆದರೆ ಇಲ್ಲಿ ಸ್ವಲ್ಪಮಟ್ಟಿಗೆ ಗೊಂದಲ ತಿಳಿಯಾದಂತೆ ಎನಿಸಿತು . ಬಹುಶಃ ಇಂದಿನ ಪರಿಸ್ಥಿತಿಯಲ್ಲಿ , ವಾಸ್ತವಿಕತೆಗೆ ಅತೀ ಹತ್ತಿರವಾಗಿದ್ದರಿಂದ ಇರಬಹುದು ! ಸುತ್ತಮುತ್ತಲೂ ಗಮನಿಸಿದರೆ , ಜೀವನದಲ್ಲಿ ಯಶಸ್ಸನ್ನು ಕಾಣ ಬೇಕೆಂದರೆ , ಹೆಸರು -ಹಣ , ಐಶಾರಾಮಿ ಜೀವನ ಬೇಕೆಂದಾದರೆ ಪ್ರತಿಭೆ ಮಾತ್ರವಲ್ಲ .. ವ್ಯವಹಾರವೂ ಪ್ರಭಾವ ಬೀರುತ್ತದೆ ! ಇದು ಈಗ ಸಹಜವಾಗಿ ಬಿಟ್ಟಿದೆ . ಹೀಗಾಗಿ .. ಶೀಲ ಎಂಬುದು ದೇಹಕ್ಕೂ ಮನಸ್ಸಿಗೂ ಸಂಬಂಧಿಸಿದ್ದು ಎನ್ನುವುದಕ್ಕಿಂತ ಸಂದರ್ಭಕ್ಕೂ , ವ್ಯವಹಾರಕ್ಕೂ ಸಂಬಂಧಿಸಿದ್ದು ಎನ್ನುವುದು ಇಂದಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದರಲ್ಲಿ ಏನೂ ಆಶ್ಚರ್ಯವಿಲ್ಲ !
ಎಲ್ಲರೂ ಒಂಥರಾ ವಿರೋಧಾಭಾಸದಲ್ಲೇ ಬದುಕುತ್ತಾರೆನೋ !
ಶೀಲ ಎನ್ನುವುದು ಬಹು ಚರ್ಚಿತ ವಿಷಯ . ಶೀಲದ ಬಗ್ಗೆ ಬಹಳ ಚರ್ಚೆ ಮಾಡುವವರೂ ಕೆಲ ಸಂದರ್ಭದಲ್ಲಿ ಅಶ್ಲೀಲವಾಗಿ ನಡೆದು ಕೊಂಡದ್ದಿದೆ !
ಒಂದರ್ಥದಲ್ಲಿ ನೋಡಿದಾಗ , ಶೀಲದ ವ್ಯಾಖ್ಯಾನ ಒಬ್ಬರಿಂದೊಬ್ಬರಿಗೆ ಬದಲಾಗಬಹುದೇನೋ! ಒಬ್ಬರಿಗೆ ಅಶ್ಲೀಲ ಎನಿಸಿದ್ದು .. ಇನ್ನೊಬ್ಬರಿಗೆ ಜೀವನವಾಗಬಹುದಲ್ಲವೇ?

ಕಥೆಯ ಕೊನೆ .. ಎಂದಿನಂತಿಲ್ಲದೆ ಭಿನ್ನವಾಗಿದೆ ! ಆದರೆ , ಅದು ಅವನ .. ಹತಾಶೆಯೋ , ಪ್ರತೀಕಾರವೋ .. ಅಥವಾ.. ಕೇವಲ ಸಂದರ್ಭವನ್ನು ಸಂದರ್ಭಕ್ಕೆ ತಕ್ಕಂತೆ ಒಪ್ಪಿಕೊಂಡಿದ್ದೋ ?

ಮನು ಪ್ರೀತಿ said...

hi sir., ee writing oodovaga nannanne naanu maretu bitte tumba tumbane chanaagide. construction industry li iro engineers work tension madyanu ee reeti baraha nodi tumba kushi aagta ide.
feeling happy after reading this.

than u so much.
Regards
- Manu Preethi

ಚುಕ್ಕಿಚಿತ್ತಾರ said...

''ಹೆಂಗಸರ ಪ್ರೀತಿ ಅಡಿಗೆಯ ಸುವಾಸನೆಯಿಂದ ಗೊತ್ತಾಗುತ್ತದೆ..''

:):)

http://jyothibelgibarali.blogspot.com said...

ಸರ್,
ಆದುನಿಕತೆಯ ಜೀವನದ ಪರಿಯನ್ನು ಚೆನ್ನಾಗಿ ಬರೆದಿದ್ದಿರಿ ....ಎಲ್ಲವೂ ವ್ಯವಹಾರವೆ..

ರಾಜೇಶ ಎನ್. said...

# ದಿನನಿತ್ಯ ಅಡಿಗೆ ಮನೆಯಿಂದ ಶಬ್ಧಗಳು ಜೋರಾಗಿ ಬರತೊಡಗಿದವು..

# ಹೆಂಗಸರ ಪ್ರೀತಿ ಅಡಿಗೆಯ ಸುವಾಸನೆಯಿಂದ ಗೊತ್ತಾಗುತ್ತದೆ..

ವಾವ್! ಎಂಥಾ ಸಹಜ ಸಾಲುಗಳು....

ಶೀಲವೂ ಒಂದು ಅಹಂನ ಭಾಗ.. ಮನಸ್ಸಿಗೆಷ್ಟು ಸಂಬಂಧಿತವೋ, ತನ್ನನ್ನ ತಾನು ತಣಿಸಿಕೊಳ್ಳಲ್ಲು ವ್ಯವಹಾರಕ್ಕೂ ಅದು ಸೈ... ಸತ್ಯದ ಹೊಸ ಆಯಾಮ..

Digwas Bellemane said...

ಪ್ರಕಾಶ್ ಹೆಗ್ದೆಯವರೆ...ಕತೆ ತು೦ಬಾ ಚೆನ್ನಾಗಿದೆ

ಕನಸು ಕಂಗಳ ಹುಡುಗ said...

ಪ್ರಕಾಶಣ್ಣಾ...............
ನಾವು ಎಷ್ಟು ಒಳ್ಳೆಯವರು ಅನ್ನೋದು ಅಂಥ ಸಂದರ್ಭ ಬಂದಾಗ ಮಾತ್ರ ಗೊತ್ತಾಗತ್ತಲ್ವಾ....
ಕಥೆಯಲ್ಲಿ ಹೆಂಡತಿ ಕೆಟ್ಟವಳಾ......????
ಅವಳು ಕೆಟ್ಟವಳಾದರೆ ಗಂಡ ಎಷ್ಟು ಪ್ರಾಮಾಣಿಕ ಅನ್ನೋ ಪ್ರಶ್ನೆ ಬಂದೇ ಬರುತ್ತೆ....
ಶೀಲ ಅನ್ನೋದು ಮನಸ್ಸಿಗೆ ಸಂಬಂಧಿಸಿದ್ದು ನಿಜ...ಆದ್ರೆ ಮನಸ್ಸಿಗೆ ಮಾತ್ರವೇ ಸಂಬಂಧಿಸಿದ್ದೇ...?ಮನಸ್ಸಿಗೆ ಮಾತ್ರವೇ ಸಂಬಂಧಿಸಿದ್ದಾದರೆ ಕಥೆಯಲ್ಲಿ ಗಂಡ ಉದಾಹರಿಸಿದ ಸಿಲ್ ಓಪನ್ ಮಾಡದ ಬಾಕ್ಸಿಗೆ ಏನರ್ಥ?...ಇಂಥಹ ವಿಷಯಗಳೇ ಹಾಗೆ.... ವಿಚಾರ ಮಾಡಿದಷ್ಟು ಸಿಕ್ಕು ಸಿಕ್ಕು... ಆವಾಗ ವ್ಯಾಖ್ಯಾನ ಬದಲಿಸಲೇ ಬೇಕಾಗುತ್ತೆ.... ಇದು ಮನಸ್ಸಿಗೂ ಸಂಬಂಧಿಸಿದ್ದಲ್ಲಾ... ಘಟನೆಗಳಿಗೆ.. ಸಂದರ್ಭಕ್ಕೆ ಸಂಬಂಧಿಸಿದ್ದು ... ಅಂತಾ....

ಎಂಥಾ ಚಂದಾ ಬರದ್ಯೋ..... supppper ಹಾಂ...

sunaath said...

ಮನಸ್ಸು ಮುರುಟಿದಾಗ, ಶೀಲವೂ ಮುರುಟಿ ಹೋಗುತ್ತದೆ!

Ittigecement said...

ವನಿತಾ...

ವ್ಯವಹಾರವನ್ನು ಎಲ್ಲೆಲ್ಲಿ ಮಾಡಬಹುದು...
ಅದಕ್ಕೊಂದು ಗಡಿ.. ಮಿತಿ ಇಲ್ಲವೆ?

ಒಟ್ಟಿನಲ್ಲಿ ಹಣ.. ಸುಖ.. ಐಶ್ವೈರ್ಯ ... ಬೇಕು..

ಮೌಲ್ಯಗಳು ಬದಲಾಗಬೇಕು... ಬದಲಾಗುತ್ತಿರುತ್ತವೆ..

ಪ್ರತಿಕ್ರಿಯೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ಸವಿಗನಸು ಮಹೇಶ...

ನಾನು ಇದುವರೆಗೆ ಬರೆದ ಕಥೆಗಳಲ್ಲಿ ಧನಾತ್ಮಕವಾಗಿ ಮುಕ್ತಾಯವಾಗಿರುತ್ತಿತ್ತು..
ಅನೇಕ ಬ್ಲಾಗ್ ಗೆಳೆಯರ ಆಶಯ ಅದು...
ಹಾಗೆಯೇ ಬರೆಯುತ್ತಿದ್ದೆ..

ಎಲ್ಲವನ್ನೂ ಪಾಸಿಟಿವ್ ಆಗಿ ಮಾಡಲಾಗುವದಿಲ್ಲವಲ್ಲ..

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

ನಿಜ ಶೀಲ ಮನಸ್ಸಿಗೆ ಸಂಬಂಧಿಸಿದ್ದು ಅಂತ.. ಹೆಚ್ಚಿನ ಜನರ ಅಭಿಪ್ರಾಯ..

Ittigecement said...

ಚಿತ್ರಾ...

ಶೀಲದ ಬಗೆಗೆ ನನ್ನ ಮನಸ್ಸಲ್ಲೇನೂ ಗೊಂದಲ ಇಲ್ಲ..

ಕಥೆಗೆ ಸಂಬಂಧಿಸಿದ ಹಾಗೆ ಬರೆದಿರುವೆ..
ಇಲ್ಲಿ ಬರುವ ಮುಖಗಳು ನಮ್ಮ ಇಂದಿನ ಸಮಾಜದಲ್ಲಿ ಕಾಣ ಸಿಗುತ್ತವೆ...

ಶೀಲ ಅವರವರ ಭಾವಕ್ಕೆ ತಕ್ಕಂತೆ...
ನಮ್ಮ ಸಮಾಜದಲ್ಲಿ ಎಲ್ಲರೀತಿಯ ಭಾವಗಳು ಇವೆ...

ಬದುಕಲು ಸೋತು ಸುಣ್ಣವಾದ ಕಥಾನಾಯಕನಿಗೆ ಇಲ್ಲಿ ಹೊಂದಿಕೊಳ್ಳುವದರ ಬಿಟ್ಟು ಮತ್ತೇನೂ ದಾರಿ ಉಳಿದಿಲ್ಲ..

ಮುಖ್ಯವಾಗಿ ಕಾಂಪ್ರಮೈಸ್...!

ಇನ್ನು ಆ ಹುಡುಗಿಯನ್ನು ಒಪ್ಪಿಕೊಳ್ಳುವ ಸಂದರ್ಭ...
ಅದು ಹೆಂಡತಿಯ ಮೇಲಿನ ಸೇಡಾ..?
ಹೊಸ ಕನಸು ಕಾಣುವ ರೀತಿಯಾ?

ಎರಡೂ ಇದ್ದಿರ ಬಹುದು....

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೇ ಇರಲಿ... ಜೈ ಹೋ !!

Dr.D.T.Krishna Murthy. said...

ಶೀಲವೂ ವ್ಯಾವಹಾರಿಕವೇ!!?ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ ಪ್ರಕಾಶಣ್ಣ.

umesh desai said...

ಹೆಗಡೇಜಿ,ನಿಮಗೆ ಮೊದಲಿಗೆ ಅಭಿನಂದನೆಗಳು,ಇಂತಹ ಒಳ್ಳೆಯ ಕತೆ ಕೊಟ್ಟಿದ್ದಕ್ಕೆ.ನಿಮ್ಮ ಹಿಂದಿನ ಕತೆಗಳಲ್ಲಿ
ನಾ ಹಾಕಿದ ಕಾಮೆಂತು ಉಲಟಾ ಹೊಡದವು.ಇರಲಿ.ಸೀಮಿತ ಚೌಕಟ್ಟಿನಲ್ಲಿಯೂ ಒಳ್ಳೆಯ ಕತೆ ಹೇಳಬಹುದು
ಇದು ಈ ಕತೆಯಿಂದ ನಿರೂಪವಾಗುತ್ತದೆ. ಇಲ್ಲಿ ನಾನು ಕತೆ,ಪಾತ್ರ ಅವುಗಳ ನಿಲುವು ಶೀಲ ಅಶ್ಲೀಲದ
ಉಸಾಬರಿಗೆ ಹೋಗುವುದಿಲ್ಲ. ಸದ್ಯ ಹೀಗೆ ನಡೆದಿದೆ ನಮ್ಮ ಸುತ್ತಮುತ್ತ ಆದರೆ ಅದು ಮುಸುಕಿನಲ್ಲಿ ನಡೆದಿದೆ
ಇಲ್ಲಿ ನಿಮ್ಮ ನಾಯಕಿದು ತಪ್ಪೋ ಅಥವಾ ನಾಯಕನದೋ ಈ ದ್ವಂದ್ವ ಬೇಡ. ಈಗಿನ ದಿನಮಾನ, ಹಪಾಪಿತನ
ಮತ್ತು ಕೊಳ್ಳುಬಾಕತನ ನೇರವಾಗಿ ನಮ್ಮ ಮನೆಬಾಗಿಲಿಗೆ ಬಂದಿವೆ. ಗೊತ್ತಿದ್ದೋ ಅರಿವು ಇದ್ದೂ ನಾವು ಅದಕ್ಕೆ ದಾಸರಾ
ಗಿದ್ದೇವೆ. ಹಾಗೂ ಹೊರಬರಲಾರದೇ ಒದ್ದಾಡುತ್ತಿದ್ದೇವೆ.
ನಿಮ್ಮ ಕತೆ ಓದಿದಾಗ ನಾ ನೋಡಿದ "ಆಸ್ಥಾ" ಚಿತ್ರ ನೆನಪಾತು. ನಿಮ್ಮ ಕತೆ ಅದಕ್ಕೆ ಹೋಲಿಕೆಯದಲ್ಲ ಆದರೆ ಮಗಳಿಗೆ
ಶೂಸ್ ಕೊಡಿಸುವ ಭರದಲ್ಲಿ ನಾಯಕಿ ಪ್ರಲೋಭನೆಗೆ ಒಳಗಾಗಿ ಬೇರೆ ಹಾದಿ ಹಿಡಿಯುತ್ತಾಳೆ.ಅವಳ ಗಂಡ ಅಮಾಯಕ
ಪ್ರೊಫೆಸರ್ ಶಿಷ್ಯರಿಗೆ ಜಾಗತೀಕರಣದ ಅನಾಹುತ ಹೇಳುತ್ತಿರುತ್ತಾನೆ. ಆದರೆ ಹೆಮ್ಮಾರಿ ಆಗಲೇ ಅವನ ಮನೆಗೆ ಬಂದಾಗಿರುತ್ತದೆ.
ನಿಮಗೆ ಮತ್ತೊಮ್ಮೆ ಅಭಿನಂದನೆ ಹೇಳುತ್ತಿರುವೆ

Prabhakar. H.R said...

manushyana vyaavaharika buddiya jote jotege swaarthada paramavadhi eddu kanuttade...adbhutavaada kathe...abhinnandanegalu

Anonymous said...

ಕತೆ ಚೆನ್ನಾಗಿದೆ. ಓದಿ ಬೇಜಾರಾಯ್ತು.

Ittigecement said...

Veens..:) ....

ತಮ್ಮ ಪ್ರೀತಿಯನ್ನು ರುಚಿ ರುಚಿಯಾದ ತಿಂಡಿ ಮಾಡಿ..
ಹೊಟ್ಟೆ ತುಂಬಾ ಊಟಮಾಡಿಸಿ ತಮ್ಮ ಸಂತೋಷವನ್ನು ಹೆಣ್ಣುಮಕ್ಕಳು ವ್ಯಕ್ತ ಪಡಿಸುತ್ತಾರೆ..
ಇದು ವಿಶೇಷವೇ ಹೌದು..
ಅದು ಬಹುಷಃ ಹೆಣ್ಣಿಗಿರುವ "ತಾಯಿ" ಗುಣ...

ನೆಂಟರಿಷ್ಟರು ಮನೆಗೆ ಬಂದಾಗ ಮನೆಯೊಡತಿಗೆ ಅವರು ಎಷ್ಟು ಇಷ್ಟರು ಅನ್ನುವದು ಅಡಿಗೆ ರುಚಿ ನೋಡಿಗೊತ್ತಾಗುತ್ತದೆ..

"ಎಲ್ಲ ದಿನವೂ ರುಚಿ ರುಚಿಯಾಗಿ ಮಾಡಲು ಪ್ರಯತ್ನಿಸುತ್ತೇವೆ..
ರುಚಿ ಎನ್ನುವದು ತಿನ್ನುವವರ ಭಾಗ್ಯವನ್ನು ಅವಲಂಬಿಸಿರುತ್ತದೆ"
ಎನ್ನುವ ವೇದಾಂತದ ಮಾತನ್ನೂ ಕೇಳಿದ್ದೇನೆ.

ಪ್ರತಿಕ್ರಿಯೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು..
ಬರುತ್ತಾ ಇರಿ..

Ittigecement said...

ಮನು ಪ್ರೀತಿಯವರೆ..

ಈಗ ಸ್ವಲ್ಪ ಕೆಲಸ ಕಡಿಮೆ ಇದೆ...
ಹೊಸ ಕೆಲಸ ಶುರು ಮಾಡಬೇಕಾಗಿದೆ..

ನಮ್ಮ ಬ್ಲಾಗ್ ಲೋಕದ "ಸುನಾಥ ಕಾಕ" ಒಬ್ಬ ಸಿವಿಲ್ ಇಂಜನೀಯರ್..
ಅವರ ಬ್ಲಾಗಿಗೊಮ್ಮೆ ಹೋಗಿ ಬನ್ನಿ...

ಅವರ ವೃತ್ತಿಗೂ.. ಪ್ರವೃತ್ತಿಗೂ ಅಜಗಜಾಂತರ ವ್ಯತ್ಯಾಸವಿದೆ..

ಬೇಂದ್ರೆಯವರ ಕವನಗಳಿಗೆ ಲೀಲಾಜಾಲವಾಗಿ ಅದರ ಗೂಢಾರ್ಥ ಬರೆಯುತ್ತಾರೆ..
ಸಂತ ಶಿಶುನಳ ಷರೀಫರ ಗೀತೆಗಳನ್ನು ಸುಲಭದಲ್ಲಿ ಅರ್ಥೈಸುತ್ತಾರೆ...

ಅಸಾಧ್ಯ ಪ್ರತಿಭೆ ಅವರು...

ಕಥೆಯನ್ನು ಇಷ್ಟಪಟ್ಟು..
ಪ್ರೋತ್ಸಾಹಿಸಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು..
ಬರುತ್ತಾ ಇರಿ..

Ittigecement said...

ಚುಕ್ಕಿ ಚಿತ್ತಾರ.. ವಿಜಯಾ..

ದೈನಂದಿನ ಮಡದಿಯ ಪ್ರೀತಿ ಪ್ರೇಮದ "ಹವಾಮಾನ". ..ಹೇಗಿದೆಯೆಂದು...

ಬಹುಷಃ ಅಡಿಗೆ ರುಚಿಯಿಂದ ಅಳೆಯ ಬಹುದೇನೋ...!

ಅಲ್ಲವೆ? ಹ್ಹಾ..ಹ್ಹಾ.. !!

ಧನ್ಯವಾದಗಳು..

Ittigecement said...

ಜ್ಯೋತಿಬೆಳಗಿಬರಲಿ...

ಪ್ರೀತಿ.. ಪ್ರೇಮದ ಬಾಂಧವ್ಯಗಳೂ ಕೂಡ ಇತ್ತೀಚೆಗೆ ವ್ಯವಹಾರವಾಗಿ ಬಿಟ್ಟಿದೆ...
ಸುಖ ಭೋಗಕ್ಕಾಗಿ ಅಡ್ಜಸ್ಟಮೆಂಟುಗಳು... ಹೊಂದಾಣಿಕೆಗಳು..

ಮೌಲ್ಯಗಳು ಬದಲಾಗುತ್ತಿರುತ್ತವೆ...

ಪ್ರತಿಕ್ರಿಯೆ.. ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

Ittigecement said...

ರಾಜಿಯವರೆ...

ಶೀಲ ಅಹಂ ನ ಒಂದು ಭಾಗ...
ನಿಜ..
ಸಮಾಜದಲ್ಲಿ ಶೀಲ ಎನ್ನುವದು ಕೇವಲ "ಹೆಣ್ಣಿಗೋಸ್ಕರವೇ" ಯಾಕೆ?

ಈ ಕಥೆ ಓದಿದ ಬ್ಲಾಗ್ ಸಹೋದರಿಯೊಬ್ಬಳು.. ಶೀಲ" ಎನ್ನುವದು ಒಂದು ಕಲ್ಪನೆ ಅಂತ ನನ್ನ ಬಳಿ ಚರ್ಚಿಸಿದರು...

ಅದೂ ಕೂಡ ನಿಜ ಅಂತ ನನ್ನ ಅಭಿಪ್ರಾಯ...

ಶೀಲ ಗಂಡಿನ ಅಹಂಭಾವಕ್ಕೊಂದು ಇಂಬು.. ಕೊಂಬು..
ಅಷ್ಟೆ ಅಲ್ಲವೆ?

ಚಂದದ ಪ್ರತಿಕ್ರಿಯೆಗೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು..

ಬರುತ್ತಾ ಇರಿ...

Ittigecement said...

ಪ್ರೀತಿಯ ದಿಗ್ವಾಸು...

ನನಗೆ ಈ ಕಥೆ ಬರೆಯುವಾಗ ಡಾಕ್ಟರ್ ಕೃಷ್ಣಮೂರ್ತಿಯವರು ಕೆಲವು ಸಲಹೆ ಸೂಚನೆ ಕೊಟ್ಟಿದ್ದಾರೆ...
ಅವರನ್ನು ನೆನಪಿಸಿಕೊಳ್ಳಬೇಕು..

ಕಥೆಯನ್ನು ಸ್ವಲ್ಪ ತಿದ್ದಲು ಕೆಲವು ಮಿತ್ರರು ಸೂಚಿಸಿದ್ದರು..

ಸಲಹೆ ಸೂಚನೆ ಕೊಟ್ಟು...
ಬ್ಲಾಗಿನಲ್ಲಿ ಹಾಕಿ ಎಂದು "ಜೈ" ಹೇಳಿದ ಎಲ್ಲ ಸಹೋದರ ಸಹೋದರಿಯರಿಗೆ ನನ್ನದೂ "ಜೈ ಹೋ"...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಕನಸುಕಂಗಳ ಹುಡುಗ.....

ಇಂಥಹ ವಿಷಯಗಳು ವಿಚಾರ ಮಾಡಿದಷ್ಟು.. ಗೊಜಲುಗಳು.. ಗೊಂದಲಗಳು..
ನಿಜ..

ಸಮಾಜದಲ್ಲಿ "ಶೀಲ" ಎನ್ನುವದು ಹೆಣ್ಣಿಗೋಸ್ಕರವೇ ಮಾತ್ರ.. ಯಾಕೆ?
ಗಂಡಿಗೇಕೆ ಇಲ್ಲ..?

ಎಲ್ಲವೂ ಅನೂಕೂಲ ಸಿಂಧು...
ತಮಗೆ ಅನುಕೂಲವಾಗುತ್ತದೋ.. ಅದು ಸರಿ..
ಇಲ್ಲವಾದಲ್ಲಿ "ಅದು ಸರಿ ಇಲ್ಲ"

ಇಲ್ಲಿ ಹೆಂಡತಿ ತನ್ನ ಕುಟುಂಬ ಸರಿ ಇರಲಿ ಎಂದು ತನ್ನ "ಶೀಲ" ತ್ಯಾಗ ಮಾಡಿದ್ದಾಳೋ...?
ಗಂಡ ಮಹಾಷಯ ಅದನ್ನು ಒಪ್ಪಿ ಹೊಂದಾಣಿಕೆ ಮಾಡಿಕೊಂಡಿದ್ದಾನೊ..?

ಎಲ್ಲವೂ ವ್ಯವಹಾರ...
ಇವೆಲ್ಲ ನಮ್ಮ ಸುತ್ತಮುತ್ತ ನಡೆಯುತ್ತಲಿದೆ... ನಡೆಯುತ್ತದೆ..

ಚಂದದ ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸೀತಾರಾಮ. ಕೆ. / SITARAM.K said...

vibhinnate beku... sadaaa sampradaayada neralalli onde tara antya padeyuttidda tamma kathegalalli idu nijavaada tiruvu...
kathe vastavada kannadi
moulyagala vyakhyana badalaaguttiruvadanna maarmikavaagi hommiside kate.

ಸೀತಾರಾಮ. ಕೆ. / SITARAM.K said...

sheela - gandu hennu ibbarigu ide aadare purushA PRradhaana bandu kevala hennige maadiddu maanaveeya duranta.

ಸುಮ said...

ವಾಸ್ತವಕ್ಕೆ ಹತ್ತಿರವಾಗಿದ್ದು ಕಥೆ ಪ್ರಕಾಶಣ್ಣ ...ಈಗಿನ ವ್ಯವಹಾರಿಕ ಜಗತ್ತಿನಲ್ಲಿ ಶೀಲ , ತ್ಯಾಗ , ಸಹನೆಗಳಿಗೆ ಬೆಲೆಯೆಲ್ಲಿ? ಏನಿದ್ದರೂ ಅನುಕೂಲಸಿಂಧು ನಿಯಮಗಳಷ್ಟೇ.
ಈ ಕಥೆಯ ನಾಯಕಿ ಎಷ್ಟು ಅನೈತಿಕಳೋ ಅದನ್ನು ಒಪ್ಪಿಕೊಳ್ಳುವುದಲ್ಲದೇ ತಾನೂ ಅದೇ ಹಾದಿ ತುಳಿಯುವುದರ ಮೂಲಕ ತಾನೂ ಅಷ್ಟೇ ಅನೈತಿಕನೆಂದು ತೋರಿಸಿಕೊಳ್ಳುತ್ತಾನೆ ನಾಯಕ.

satya mitra said...

ಪ್ರಕಾಶ್ ಸಾರ್, ಕಥೆಯಾದರೂ ವಾಸ್ತಾವಿಕ ಆಧುನಿಕತೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದೀರಿ. ಒಂದಾಣಿಗೆ, ಸಂಧರ್ಭ, ಅಸಹಾಯಕತೆ, ಆಸೆ, ಅಪೇಕ್ಷೆ , ನೀವೇ ಹೇಳಿದಂತೆ ಒಂದು ದೇಹಕ್ಕೆ ಸಂಬಂಧಿಸಿದ್ದು ಮತ್ತೊಂದು ವ್ಯವಹಾರಕ್ಕೆ ಸಂಬಂಧಿಸಿದ್ದು. ಇಲ್ಲಿ ಬದುಕು ಅನಿವಾರ್ಯವೋ, ಆತ್ಮಸಾಕ್ಷಿಯ ಅಸಹಾಯಕತೆಯೋ ಬಲಿಯಾಗುವುದು ಮಾತ್ರ ನೀತಿ ಹಾಗೂ ನಿಜಾಯಿತ್ತು.. ವಂದನೆಗಳು ಸಾರ್

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಎಲ್ಲವೂ ವ್ಯವಹಾರ
ಬದುಕು ಯಾಂತ್ರಿಕ ಆಗುತ್ತಿದೆ
ನಿಮ್ಮ ಕಥೆ, ಅದರೊಳಗಿನ ತಿರುವುಗಳು, ಅದು ಓದಿಸಿಕೊಂಡು
ಹೋಗುವ ಪರಿ, ಎಲ್ಲವೂ ಅದ್ಭುತ

Ittigecement said...

ಸುನಾಥ ಸರ್...

ಭೋಗದ ಕನಸು ಜಾಸ್ತಿಯಾದಾಗ "ಕಾಂಪ್ರಮೈಸ್" ಜಾಸ್ತಿಯಾಗುತ್ತದೆಯೆ?
ಹೆಂಡತಿಯ ಅಂಥಹ ನಡತೆ ಕಂಡಾಗ ತಾನು ಬೇರೆ ದಾರಿ ಹುಡುಕಿಕೊಳ್ಳುವದು ಪಲಾಯನವಾದವೆ?

ಮೌಲ್ಯಗಳು ಬದಲಾಗುತ್ತಿರುತ್ತವೆ..

ಸರ್..
ಪ್ರತಿಕ್ರಿಯೆಗಳು.. ಪ್ರೋತ್ಸಾಹಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ..
ಧನ್ಯವಾದಗಳು..

Ittigecement said...

ಶಿವಶಂಕರ್ ಯಳವತ್ತಿ...

ಇದು ಕಾಲ್ಪನಿಕ ಕಥೆ...
ವಾಸ್ತವದ ಘಟನೆಗೆ ಕಥೆಯ ಲೇಪ ಹಚ್ಚುವ ಪ್ರಯತ್ನ...

ನನಗೂ ಇದನ್ನು ಬ್ಲಾಗಿಗೆ ಹಾಕಬೇಕೊ.. ಬೇಡವೋ ಅಂತ ಅಳುಕು ಇತ್ತು....

ಇಲ್ಲಿ ಬಂದ ಪ್ರತಿಕ್ರಿಯೆಗಳು ಉತ್ಸಾಹ ಕೊಟ್ಟಿದೆ..

ಇದು ಇಂದಿನ ವಾಸ್ತವಿಕ ಜಗತ್ತು...

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಕೃಷ್ಣಮೂರ್ತಿಯವರೆ...

ಮಧ್ಯಮವರ್ಗದವರು ಈ ಶೀಲ.. ಚಾರಿತ್ರ .. ಇತ್ಯಾದಿಗಳ ಬಗೆಗೆ ತಲೆಕೆಡಿಸಿಕೊಳ್ಳುತ್ತಾರೆ..
ತೀರಾ ಬಡವರು... ತುಂಬಾ ಶ್ರೀಮಂತರಿಗೆ ಇದೆಲ್ಲ ಏನೂ ಅಲ್ಲ..

ಇತಿಹಾಸದಲ್ಲಿ.. ಪುರಾಣದಲ್ಲೂ ಇದನ್ನು ನಾವು ನೋಡುತ್ತೇವೆ..

ನಿಜ ಸ್ವಾಮಿ... ಶೀಲವೂ ವ್ಯವಹಾರಿಕವಾಗುತ್ತದೆ..
ಸಂದರ್ಭಗಳಿಗನುಸಾರವಾಗಿ...

ನಿವು ಕೊಟ್ಟ ಸಲಹೆಗಳು..ಸೂಚನೆಗಳು ತುಂಬಾ ಉಪಯುಕ್ತವಾಗಿದ್ದವು..

ಪ್ರೀತಿ.. ಸ್ನೇಹ ಹೀಗೆಯೇ ಇರಲಿ.. ಜೈ ಹೋ !!

Srikanth Manjunath said...

ಶೀಲ..ಜವಾನಿ ಯಲ್ಲಿ ಮಾತ್ರ ಅಲ್ಲ..ಸದಾಕಾಲ ಇರುವ, ಇರಬೇಕಾದ ಒಂದು ಸರಕು. ಅದರ ಅರ್ಥ, ತಾತ್ಪರ್ಯ..ಅನುಕೂಲಕ್ಕೆ ತಕ್ಕಂತೆ ಬಳಕೆ ಆಗುತ್ತದೆ.. ಚಿತೆಗೂ ಚಿಂತೆ ಇರುತ್ತದೆ ಅದರದೇ ಕಾರಣಕ್ಕೆ.....ಒಂದು ತಿರುವುನಲ್ಲಿ ಇದ್ದೀರಿ ಅಂತ ಅನ್ನಿಸುತ್ತೆ ಈ ಲೇಖನ ಬರೆಯುವಾಗ...ಎಲ್ಲಿಯೂ ಎಲ್ಲೇ ಮೀರದೆ..ಆದ್ರೆ ಮನಸಿನ ಎಲ್ಲೇ ಮೀರಿ ತಿರುವು ಕೊಡುವ ಈ ಲೇಖನ ಫಾರ್ ಅ ಚೇಂಜ್...ಆದ್ರೆ ಸುಂದರ

Badarinath Palavalli said...

ಭಾಗ - ೧

" ಸರ್...
ಇನ್ನೊಂದು ವಿಷಯ...
ನಿಮಗೆ ಈ ಕ್ಲಬ್ಬಿನ ಸಂಗಡ ನನ್ನ ಪ್ರಿತಿಯನ್ನೂ ಕೊಡುವೆ..
ನಿಮಗಾಗಿ ಪ್ರೀತಿಯಿಂದ ನಾನಿರುವೆ..
ನನ್ನ ಸೇವೆಯನ್ನೂ ನೀವು ಬಳಸಿಕೊಳ್ಳಬಹುದು.."

( ಹೀಗೂ ಉಂಟೆ? ಎಲ್ಲ ದೇವರ ಇಚ್ಛೆ ಮಹಾ ಸ್ವಾಮಿ!
ಆದದ್ದು ಆಗಲೀ, ಎಲ್ಲ ಗೋವಿಂದನ ಕೃಪೆ ಅಂತ
ಮುನ್ನುಗ್ಗಿ ಬಿಡಬೇಕಿತ್ತು,
ಸಿಟ್ಟಾಗ ಬೇಡಿ ಸರ್, ಎಲ್ಲಾ ಅವನಿಚ್ಛೆ)

Badarinath Palavalli said...

ಭಾಗ - ೨

ಶೀಲ, ಆದರ್ಶ, ಸ್ವಸ್ಥ ಮನಸ್ಥಿತಿ ಪ್ರಕಾಶಣ್ಣ ಎಲ್ಲಾ ’ಕಿತಾಬ್ ಕಿ ಬಾತೇಂ’ ಅಂತ ಆಗಿ ಹೋಗಿವೆ ಅಲ್ವಾ!

ಇಂತಹ ಪರಿಸರದಲ್ಲಿ ಈ ರೀತಿಯ ನೀತಿಯುಕ್ತ ಬರಹಗಳಿಂದ ನಮಗೆ ಚೈತನ್ಯ ತುಂಬುತ್ತಿದ್ದೀರಿ. ಧನ್ಯವಾದಗಳು.

Pradeep Rao said...

ಪ್ರಕಾಶಣ್ಣಾವ್ರೇ,

ಕಥೆಯು ತುಂಬಾ ಕುತೂಹಲಕಾರಿಯಾಗಿದೆ ಆದರೆ ಅಂತ್ಯ ಯಾಕೋ ಬಹಳ ಕಳವಳ ಮೂಡಿಸಿತು.. ಆದರೂ ಕಾಮೆಂಟುಗಳನ್ನು ಓದಿದಾಗ ಒಪ್ಪಿಕೊಳ್ಳಬೇಕಾದದ್ದೇ ಎನ್ನಿಸಿತು!

ragat paradise said...

wow wattaa climax at the end pk
i liked it....superb story

sandesh said...

nice story with different ending.
story presentation is wonderfull..!!

Ittigecement said...

ದೇಸಾಯಿಯವರೆ...

ನಿಮ್ಮ ಪ್ರತಿಕ್ರಿಯೆಗಳಿಗೆ ನಾನು ಕಾಯ್ತ ಇರುತ್ತೇನೆ..

ಬುದ್ಧಿವಂತ ಮನಸ್ಸು ತಪ್ಪಿಗೆ ಕಾರಣ ಕೊಟ್ಟು ...
ಮಾಡಿದ್ದು ಸರಿ ಅಂತ ಸಮರ್ಥನೆ ಮಾಡುತ್ತದೆ..

ಬುದ್ಧಿವಂತರಾಗ್ತಾ ಇದ್ದಂತೆ ತಮ್ಮ ತಪ್ಪುಗಳಿಗೆ ಸಮರ್ಥನೆ.. ಕಾರಣಗಳನ್ನು ಹುಡುಕ್ಕುತ್ತದಂತೆ.. ಒಳಗಿನ ಕಳ್ಳ ಮನಸ್ಸು..
ತಪ್ಪುಗಳನ್ನು ಸಮರ್ಥನೆ ಮಾಡುವ ಮನಸ್ಥಿತಿ ಬುದ್ಧಿವಂತರಿಗೆ ಮಾತ್ರ ಸಾಧ್ಯ..

ನೀವು ಹೇಳಿದ "ಆಸ್ಥಾ" ಸಿನೇಮ ತುಂಬಾ ಚೆನ್ನಾಗಿದೆ..

ಪ್ರತಿಕ್ರಿಯೆಗೆ ಹಾಗೂ ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು...

Anonymous said...
This comment has been removed by the author.
Anonymous said...

sheela shareera kke sambandisiddu....
(swami vivekananda ru helthaare shareera shudhi illade mana shudhi saadhya illa antha)

Jyoti Hebbar said...

superb prakashanna.... sikkapate cholo aydu...

Deep said...

@prakash: ವಾಸ್ತವತೆಯ ನವಿರಾದ ನಿರೂಪಣೆ ..
ಪ್ರೀತಿಯ ಅನುಭೂತಿಯನ್ನು ಅಡಿಗೆ ಮನೆಯಿಂದ ಬರುವ ಶಬ್ದಗಳು ಹಾಗು ಅಡಿಗೆಯ ಸುವಾಸನೆಗೆ ಹೋಲಿಕೆ..
wah..
ಬಾಳ ಇಷ್ಟ ಆಯಿತು..

Raghu said...

ಕಥೆ ಚೆನ್ನಾಗಿದೆ ಪ್ರಕಾಶಣ್ಣ..
ಜೈ ಹೋ...
ನಿಮ್ಮವ,
ರಾಘು.

ಶಿವಪ್ರಕಾಶ್ said...

time sariyilla andre ee tara edavattu aago sambhava jaastine anna... :)
nice writeup...

ರಾಘವೇಂದ್ರ ಜೋಶಿ said...

ಮೊದಲಬಾರಿಗೆ ನಿಮ್ಮ ಬರಹ ಓದಿ ಕಮೆಂಟಿಸುತ್ತಿದ್ದೇನೆ.
ಜೊತೆಗೆ ನಿಮ್ಮ ಇಚ್ಚೆಯಂತೆ ಇನ್ನಿತರ ಕಾಮೆಂಟುಗಳನ್ನು ಓದದೇ!
ಬರಹ ಸರಳವಾಗಿ,ಪತ್ತೇದಾರಿ ಕತೆಯಂತೆ ಮೂಡಿಬಂದಿದೆ.
Usually ನೀವು ಬದುಕಿನ ಪಾಸಿಟಿವ್ ಮುಖಗಳನ್ನು ಚಿತ್ರಿಸುವವರು.
ಇದ್ಯಾಕೆ ಹೀಗೆ ಮಾಡಿದಿರೋ ಗೊತ್ತಾಗಲಿಲ್ಲ.. :-)
ofcourse, ಅದು ಕತೆಗಾರನ ಇಷ್ಟ.
ಪಾತ್ರಗಳು ಅವನ ಮುಲಾಜಿಗೆ ಕಟ್ಟು ಬೀಳುತ್ತವೆ.
ಕತೆಯಲ್ಲಿ-
ನೀವು ಮನೆಗೆ ಬಂದಾಗ ಮನೆ ಮುಂದೆ ಮಾಲೀಕರ ಕಾರು ನಿಂತಿತ್ತು.
ಕಚೇರಿಯಲ್ಲಿ ಜಾಸ್ತಿ ಹೊತ್ತು ಕೆಲಸ ಮಾಡಿದ್ದರಿಂದ ಆಯಾಸಗೊಂಡ ಹೆಂಡತಿಗೆ
ಮನೆಯವರೆಗೂ drop ಕೊಡಲು ಡ್ರೈವರ್ ಗೆ ಹೇಳಿ ಮಾಲೀಕರು ಕಾರು ಕಳಿಸಿದ್ದರು.
ಅದನ್ನು ಗಮನಿಸದೇ ತಪ್ಪಾಗಿ ಅರ್ಥೈಸಿಕೊಂಡ ನೀವು ಕ್ಲಬ್ಬಿನ ಸುಂದರಿಯ ಆಹ್ವಾನಕ್ಕೆ
ಒಪ್ಪಿಕೊಂಡಿರುವ ನಿಮ್ಮ ಪರಿಸ್ಥಿತಿಯನ್ನು ವಿವರಿಸಿದ್ದರೆ-
ಕತೆಗೆ ಎಂಥ ತಿರುವು ಸಿಕ್ಕಿರೋದು!
:-)
still, ನಿಮ್ಮ ಕತೆ ಹೇಳುವ ಶೈಲಿ ಪಕ್ಕಾ ಇದೆ..good work.

-ರಾಘವೇಂದ್ರ ಜೋಶಿ

malathi said...

ಪ್ರಕಾಶ್, ಕಥೆ ತುಂಬಾ ಚೆನ್ನಾಗಿ ಮೊಡಿ ಬಂದಿದೆ.....ಆದರು ಪರಿಸ್ಥಿತಿಗೆ ಕಟ್ಟು ಬಿದ್ದು ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಡೆಯುವುದು ಎಷ್ಟರ ಮಟ್ಟಿಗೆ ಸರಿ ಅಂತ..ಅನಿವಾರ್ಯ ಕಾರಣಗಳಿಂದ ಜೀವನ ಹಾಳುಮಾಡಿಕೊಂದವರ ಬಗ್ಗೆ ಕೇಳಿದ್ದೇವೆ ಆಗೆಲ್ಲ ಮನಸ್ಸಿಗೆ ಬೇಸರವಾಗುತ್ತದೆ.ಪ್ರಶ್ನೆಗಳು ಹಲವಾರು ಮೊಡುತ್ತವೆ.????????

malathi said...

ಪ್ರಕಾಶ್, ಕಥೆ ತುಂಬಾ ಚೆನ್ನಾಗಿ ಮೊಡಿ ಬಂದಿದೆ.....ಆದರು ಪರಿಸ್ಥಿತಿಗೆ ಕಟ್ಟು ಬಿದ್ದು ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಡೆಯುವುದು ಎಷ್ಟರ ಮಟ್ಟಿಗೆ ಸರಿ ಅಂತ..ಅನಿವಾರ್ಯ ಕಾರಣಗಳಿಂದ ಜೀವನ ಹಾಳುಮಾಡಿಕೊಂದವರ ಬಗ್ಗೆ ಕೇಳಿದ್ದೇವೆ ಆಗೆಲ್ಲ ಮನಸ್ಸಿಗೆ ಬೇಸರವಾಗುತ್ತದೆ.ಪ್ರಶ್ನೆಗಳು ಹಲವಾರು ಮೊಡುತ್ತವೆ.????????

ಕಾವ್ಯಾ ಕಾಶ್ಯಪ್ said...

ಪ್ರಕಾಶಣ್ಣ ಒಳ್ಳೆಯ ವರ್ಣನೆ ಒಳ್ಳೆಯ ಬರಹ...
ಶೀಲ ಮನಸ್ಸಿಗೂ ದೇಹಕ್ಕೂ ಸಂಬಂಧಿಸಿದ್ದು ಹೇಳುವುದಕ್ಕಿಂತ ಅವರವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು ಎನ್ನಬಹುದೇನೋ...?! ಒಂದು ಮನಸ್ಸಿಗೆ ಸಂಭಂದಿಸಿದ ಶೀಲ ಇನ್ನೊಂದು ಮನಸ್ಸನ್ನು ಘಾಸಿ ಮಾಡಬಾರದಲ್ಲವೇ...?! ನಿಮ್ಮ ಕಥೆಯಲ್ಲಿನ ಗಂಡನ ತಿಳಿಯಾದ ಮನಸ್ಸಿನ ಕೊಳಕ್ಕೆ ಕಲ್ಲು ಬಿದ್ದಿದ್ದು, ಕವಲು ದಾರಿಗೆ ಎಳೆದಿದ್ದು ಹೆಂಡತಿಯ ಶೀಲ (ವ್ಯಕ್ತಿತ್ವ) ದಿಂದಲೇ ಅಲ್ಲವೇ...!
ಹಮ್.. ರಾಘವ ಹೇಳಿದಂತೆ ಇಂತ ವಿಷಯಗಳು ಯೋಚಿಸಿದಷ್ಟು ಗೋಜಲು...!!

Rajottara said...

ಉತ್ತಮವಾದ ಬರವಣಿಗೆ, ಯೋಚಿಸಿದರೆ ದಿಗಿಲು ಹುಟ್ಟಿಸೋ ಕಥಾ ಹಂದರ. ನನಗೆ ಅನಿಸಿದ್ದು ಏನೆಂದರೆ "ಶೀಲ ಅನ್ನೋದು ಸಂದರ್ಭಕ್ಕೆ ಸಂಬಂಧ ಪಟ್ಟಿದ್ದಲ್ಲಾ, ಅದು ವ್ಯಕ್ತಿ ಬೆಳೆದ ವಾತಾವರಣ, ಕಲಿತ ಸಂಸ್ಕಾರ ಮತ್ತು ನಿಗ್ರಹಣಾಶಕ್ತಿಯ ಮೇಲೆ ನಿರ್ಧಾರವಾಗಿರುತ್ತೆ". ಎಲ್ಲರೂ ಅವಕಾಶವದಿಗಳೇ.. ದೇಶ, ಭಾಷೆ, ಸಂಪ್ರಾದಾಯಗಳ ಚೌಕಟ್ಟುಗಳು ಅವರನ್ನು ಬಂದಿಸಿರುತ್ತವಷ್ಟೇ.

ತೇಜಸ್ ಜೈನ್ Tejas jain said...

ನಾಯಕನ ವ್ಯಕ್ತಿತ್ವದ ಬಗ್ಗೆ ಕಡೆಯ ಘಟ್ಟವನ್ನು ಓದಿದಾಗ ಅನ್ನಿಸಿದ್ದು...
"ಸಂದರ್ಭಕ್ಕೆ.. ವ್ಯವಹಾರಕ್ಕೆ..ಸಂಬಂಧಿಸಿದ್ದು.." ಅಂತ ಸಮರ್ಥನೆ ಕೊಟ್ಟು ಸೇಡಿನ ಮನೋಧರ್ಮಕ್ಕೆ ಸೋತು ಮುಖವಾಡದ ತೆಗೆಯಲು ನಾಚಿಕೆ ಪಡದ ಸ್ಥಿತಿಗೆ ತಲುಪಿದ ವ್ಯಕ್ತಿತ್ವ...

ಭಾವನಾತ್ಮಕ ತುಮುಲವನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದೀರಿ...

Sandeep K B said...

Good one.. Twisted story