Sunday, May 15, 2011

...ತಿರುವು...


ಈ ಗಂಡಸರು... ಮಹಾ ಬುದ್ಧಿವಂತರು....

ಹೆಣ್ಣನ್ನು  ಯಾಕೆ ಅಷ್ಟೆಲ್ಲ ಹೊಗಳಿ ಅಟ್ಟಕ್ಕೆ ಏರಿಸಿದರು ಅಂತ ಗೊತ್ತಾಗಿದ್ದು ...


ನಾನು ತಾಯಿಯಾದ ಮೇಲೆ...


ಮುಟ್ಟಲೂ  ಆಗದ ಮಾಂಸದ ಮುದ್ದೆಯಂತಿರುವ..
ಯಾವಾಗಲೂ ಅಳುವ ಮಕ್ಕಳ ...
ಬೇಕು ಬೇಡಗಳನ್ನು ನೋಡಲು ಈ ಗಂಡಸರಿಂದ ಆದೀತೆ?


ಅದಕ್ಕಾಗಿ  ಬಹಳ ಚಂದವಾಗಿ  " ಮಾತೃದೇವೋ ಭವ" ಅಂತ ಹೇಳಿ...
ಒಂದೆರಡು ಚಂದದ ಶ್ಲೋಕದ ಅರ್ಥವಿವರಣೆ ಕೊಟ್ಟು..
ತಾವು ಹಾಯಾಗಿ ಆರಾಮಾಗಿ  ಕುಳಿತು ಬಿಟ್ಟರು..


ನನಗೆ ಈ ಗಂಡಸರನ್ನು..
ಅದರಲ್ಲೂ  ಆಲಸ್ಯದ  ಅವತಾರವಾಗಿರುವ ....
ನನ್ನ ಗಂಡನನ್ನು ನೋಡಿದರೆ  ಎಲ್ಲಿಲ್ಲದ ಕೋಪ..


ನನ್ನ ಗಂಡ ಅಲ್ಪತೃಪ್ತ...
"ಇಷ್ಟಿದೆಯಲ್ಲ  ಸಾಕು" ಅನ್ನುವಂಥಹ ಪ್ರಾಣಿ..


ನಾನು  ಬಹಳ ಬಹಳ ಮಹತ್ವಾಕಾಂಕ್ಷಿ...


ಇನ್ನೂ ಸಾಧನೆ ಮಾಡಬೇಕು.. ! ಇನ್ನೂ ಸಾಧಿಸಬೇಕು...!


ಏನು ಮಾಡಲಿ  ?  ಈ ಹಾಳು ಹೆಣ್ಣು ಜನ್ಮ..!


ಮದುವೆಯಾಗ ಬೇಕು... 
ತಾಳಿ ಕಟ್ಟಿಸಿಕೊಳ್ಳ ಬೇಕು...
ಮಕ್ಕಳನ್ನು ಹಡೆಯ ಬೇಕು...
ಹಾಲುಣಿಸಿ ದೊಡ್ಡ ಮಾಡಬೇಕು...


 ಎಲ್ಲ ತೊಡರುಗಳನ್ನು  ಹೆಣ್ಣಿನ  ಕಾಲಿಗೆ ಕಟ್ಟಲಾಗಿದೆ...


ಪ್ರಕೃತಿಯೂ  ಸಹ.. ಹೆಣ್ಣಿಗೆ  ಅನ್ಯಾಯ ಮಾಡಿದೆ..


ಹೊರಗೆ ದುಡಿಯ ಬೇಕು... ಅಡಿಗೆ ಮನೆಯಲ್ಲಿ ಅಡುಗೆ ಮಾಡಬೇಕು...
ಪಾತ್ರೆ ತೊಳೆಯ ಬೇಕು.. ನೆಲ ಒರೆಸಬೇಕು..


"ಸ್ವಲ್ಪ ಸಹಾಯ ಮಾಡಿ" ಅಂತ  ನನ್ನ ಗಂಡನನ್ನು ಕೇಳಿದರೆ...


"ಯಾಕೆ ನೀನು ದುಡಿಯ ಬೇಕು..?
ಮನೆಯಲ್ಲೇ ಹಾಯಾಗಿರು..
ನಾನು ದುಡಿದು ತರುತ್ತೇನಲ್ಲ ಸಾಕು ಬಿಡು"


ನನ್ನವರ  ಸಂಪಾದನೆ ನನಗೆ ಗೊತ್ತಿಲ್ಲವೆ..?


ವಾರಕ್ಕೊಂದು ಸಿನೇಮಾ ನೋಡಲೂ ಆಗದಂಥಹ ಸಂಪಾದನೆ..


ಪಾನಿಪುರಿ... 
ಕೊನೆ ಪಕ್ಷ ವಾರಕ್ಕೊಂದು ಹೋಟೆಲ್ ಊಟ....


ನನ್ನ ಅಲಂಕಾರಿಕ ಪ್ರಸಾಧನಗಳು...!
ಬ್ಯೂಟಿ ಪಾರ್ಲರ್...
ಓಲೆ ಕ್ರೀಮ್... ಎಲ್ಲವನ್ನೂ  ಮರೆತು ಬಿಡಬೇಕಷ್ಟೇ...


ಮನೆಯ ಕೆಲಸದಲ್ಲೂ  ಸಹಾಯ ಮಾಡುವದಿಲ್ಲ..


ಮನೆಗೆ ಬಂದವನೇ... 
ಟಿವಿ ಮುಂದೆ  ಪ್ರತಿಷ್ಥಾಪನೆಯಾದರೆ  
ಅಲ್ಲಿಯೇ ಊಟ..
ಏಳುವದು ರಾತ್ರಿ ಮಲಗುವೇಳೆ... ಬೆಡ್ ರೂಮಿಗೆ ಹೋಗುವಾಗ...


ಸರಿ....
ಇವೆಲ್ಲವನ್ನೂ ಸಹಿಸಿಕೊಳ್ಳೋಣ...


ಹೋಗಲಿ ಈತ ..ರಸಿಕನೋ...?


ಪಿಸು ಮಾತು.... 
ರಸಿಕ ನಗು...!
ಸಿನೆಮಾ ಹಾಡುಗಳು...!
ತುಂಟತನ...


ನನ್ನ ಅಲಂಕಾರವನ್ನು ಮೆಚ್ಚಿ ಸೂಸುವ  ಆಸೆ ಕಣ್ಣುಗಳು..!


ಯಾವುದೂ ಇಲ್ಲ... !
ಏನೂ... ಇಲ್ಲ....!!


ನನ್ನ ಕಷ್ಟ..ನಿಮಗೆ ಅರ್ಥ ಆಗೋ ವಿಷಯ ಅಲ್ಲ ಬಿಡಿ..


ಕೆಲವು ಸಾರಿ ನನ್ನ ಅಪ್ಪ, ಅಮ್ಮನ ಬಗೆಗೆ ಎಲ್ಲಿಲ್ಲದ  ಕೋಪ ಬರುತ್ತದೆ...


ನಾನು ಒಬ್ಬಳೇ ಮಗಳು ಅಂತ  ಮುದ್ದಿನಿಂದ ..
ಕೆಳಿದ್ದೆಲ್ಲವನ್ನೂ  ಕೊಟ್ಟು.. ಬೆಳೆಸಿದರು..


ನಾನು  ನನ್ನ  ಕೆಲಸವನ್ನು ಬಹಳ ಶೃದ್ಧೆಯಿಂದ ಮಾಡುತ್ತೇನೆ..
ನನ್ನ ಕೆಲಸದ ಬಗೆಗೆ  ಯಾರೂ  ಎದುರು ಮಾತನಾಡುವದಿಲ್ಲ...


ನನ್ನ ತಪ್ಪುಗಳನ್ನು ಬೇರೆಯವರು ಹೇಳಿದರೆ ನನಗೆ  ಆಗುವದೇ ಇಲ್ಲ..


ಹಾಗಾಗಿ ಬಹಳ ಮುತುವರ್ಜಿಯಿಂದ ಮಾಡುತ್ತೇನೆ...


ತಪ್ಪೇ ಇಲ್ಲದೆ ಕೆಲಸ ಮಾಡುವ ನನ್ನನ್ನು ಕಂಡರೆ.. 
ಬಹಳ ಜನರಿಗೆ ಅಸೂಯೆ..
ಇನ್ನು ಕೆಲವರು ನನಗೆ  ಸೊಕ್ಕು..
ಜಂಬ.. ಅನ್ನುತ್ತಾರೆ..ಹೇಳಲಿ ಬಿಡಿ... ನಾನು ತಲೆ ಕೊಳ್ಳುವದಿಲ್ಲ..


ನನಗೆ ಬೇಕಿತ್ತೋ ಬೇಡಿತ್ತೋ ....
ನನ್ನಪ್ಪ ನನಗೊಂದು ಮದುವೆ ಮಾಡಿದರು...


ಇದೆ.. ಈ...ಗಂಡನ ಸಂಗಡ..


ನನ್ನ ಮಹತ್ವಾಕಾಂಕ್ಷೆ ಬಗೆಗೆ ಹೇಳಿದ್ದೆ.....
ಮದುವೆಯ ಸಂದರ್ಭದಲ್ಲಿ  ಕೋಲೆ ಬಸವನ ಹಾಗೆ ತಲೆ ಆಡಿಸಿದ...
ಬಹುಷಃ ನನ್ನ ಚಂದಕ್ಕೆ ಮರುಳಾಗಿರಬೇಕು..


ಮದುವೆಯಾದ ಮೇಲೆ ಇವನ ಅಸಲಿ ಬಣ್ಣ ಗೊತ್ತಾಗಿದ್ದು...


ನನ್ನ ಬದುಕು ನಿಂತ ನೀರಾಗುವದು ನನಗೆ ಬೇಕಿರಲಿಲ್ಲ...


ಮಗುವನ್ನು ಎತ್ತಿಕೊಂಡು..
ಗಂಡನ ಮನೆಯನ್ನು ಬಿಟ್ಟು ಬಂದೆ...


ಎಲ್ಲ ಅಪ್ಪ ಅಮ್ಮಂದಿರು ಹೇಳುವ  ಹಾಗೆ  ನನಗೂ ಬಹಳ ಉಪದೇಶ ಸಿಕ್ಕಿತು..


"ಹೊಂದಿಕೊಂಡು ಹೋಗು ಮಗಳೇ... " ಅಂತ


ನನ್ನಿಂದ ಅದು ಸಾಧ್ಯವಾಗದ ಮಾತು...


ಇಲ್ಲಿ ಅಪ್ಪನ ಮನೆಯಲ್ಲಿ ಮಗುವಿನೊಂದಿಗೆ ಬದುಕುವದು ಕಷ್ಟವಾದರೂ..
ಬೇಸರವಿರಲಿಲ್ಲ....


ನನ್ನ ಗಂಡನೂ ಆಗಾಗ ಫೋನ್ ಮಾಡುತ್ತಿರುತ್ತಾನೆ..
ಅವನ ಫೋನ್ ಎಂದರೆ  ನನಗೆ ಮೈಯೆಲ್ಲ  ಉರಿದು ಹೋಗುತ್ತದೆ...
ಕೋಪದಿಂದ  ಪರಚಿಕೊಳ್ಳುವಂತಾಗುತ್ತದೆ..


ಅವನ  ಬಗೆಗೆ  ನನಗೆ  ತಿರಸ್ಕಾರ  , ಅಸಹ್ಯವಿದೆ...


ಈ ಗಂಡಸರ ಸಹವಾಸವೇ ಸಾಕು ಅನಿಸಿಬಿಟ್ಟಿದೆ...


ಅಭಿಪ್ರಾಯಗಳು ಬದಲಾಗುತ್ತಿರುತ್ತವೆ..


ಕೆಲವೊಮ್ಮೆ ನಮ್ಮನ್ನೇ ಅಣಕಿಸುವಂತಿರುತ್ತದೆ...


ಒಂದು ದಿನ  ನನ್ನ ಕಾರ್ ರಸ್ತೆಯಲ್ಲಿ ಹಾಳಾಗಿತ್ತು.. 
ಅಪ್ಪನಿಗೆ ಫೋನ್ ಮಾಡಿ ಹೇಳಿದೆ...
ಅವರು ಒಬ್ಬ  ಮೆಕ್ಯಾನಿಕ್ ಕಳುಹಿಸಿದರು..
ಅವನೇ ಗ್ಯಾರೇಜ್  ಮಾಲಿಕನಂತೆ... ನಮಗೆ ದೂರದ ಸಂಬಂಧಿಯಂತೆ..


ಬಹಳ ಡೀಸೆಂಟ್ ವ್ಯಕ್ತಿ...


ಮಧ್ಯ ವಯಸ್ಕ.. ಕೂದಲು ಅಲ್ಲಲ್ಲಿ ಹಣ್ಣಾಗಿದೆ..


ಪರಿಚಯ ಸ್ನೇಹವಾಯಿತು..
ಆಗಾಗ ಟೀ, ಕಾಫಿಗೆ ಅಂತ ಅವನ ಜೊತೆ ಹೋಗುತ್ತಿದ್ದೆ...


ಆತನ ಮಾತು, ಕತೆಯಲ್ಲಿ  ಹೊಸತನವಿರುತ್ತಿತ್ತು...
ನನ್ನ  ಸ್ವಭಾವಕ್ಕೆ ಹೊಂದಿಕೊಳ್ಳುವಂಥಹ ಮನುಷ್ಯ ಅನ್ನಿಸುತ್ತಿತ್ತು...


ಕೆಲವೊಬ್ಬರು ನಮಗೆ ಏನೂ ಆಗಿರುವದಿಲ್ಲ... 
ಆದರೂ  ನಮ್ಮ ಮನಸ್ಸು  ಅವರ ಸಾಂಗತ್ಯವನ್ನು ಬಯಸುತ್ತದೆ.. 
ಅವರೊಡನೆ  ನಮಗೆ ಗೊತ್ತಿಲ್ಲದಂತೆ ನಮ್ಮ  ಮನಸ್ಸು ಹಗುರವಾಗುತ್ತದೆ..
ಅವರೊಡನೆ ಮಾತನಾಡ ಬೇಕೆನ್ನಿಸುತ್ತದೆ...


ನನಗೂ ಹಾಗಾಗುತ್ತಿತ್ತು...


ಒಮ್ಮೆ  ಆತನನ್ನು ಕೇಳಿದ್ದೆ.. 


"ನೀವು ನಿಮ್ಮ  ಬಗೆಗೆ ಹೇಳಲೇ.. ಇಲ್ಲ.. ನಿಮ್ಮ ಹೆಂಡತಿ ಮಕ್ಕಳ ಬಗೆಗೆ"


"ನನ್ನ  ಕೌಟುಂಬಿಕ ಬದುಕಿನ ಬಗೆಗೆ ಹೇಳುವಂಥಾದ್ದು  ಏನೂ ಇಲ್ಲ..
ಹೆಂಡತಿ ಇದ್ದಳು..
ಈಗಲೂ ಇದ್ದಾಳೆ.. 
ಅವಳ ತವರು ಮನೆಯಲ್ಲಿ ನನ್ನ ಮಗನ ಸಂಗಡ...
ಇದಕ್ಕಿಂತ  ಇನ್ನೇನೂ  ಹೇಳಲು ಆಗುವದಿಲ್ಲ... ಕ್ಷಮಿಸಿ"


ನನಗೆ ಅರ್ಥವಾಗಿತ್ತು...


ಹಾಲಿನ ರುಚಿನೋಡಿದ ಬೆಕ್ಕು...


ಒಂಟಿ  ಬದುಕು ಸಂಗಾತಿ ಬಯಸುತ್ತದೆ...
ನನ್ನ ಮನಸ್ಸೂ ಮತ್ತೂ ಅವನನ್ನು ಬಯಸಿತು... 

ದಾರಿ ಸುಗಮವಾಗಿದೆಯಲ್ಲ...


ನನಗೆ  ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳಲು ಆಗುವದಿಲ್ಲ....
ನನ್ನೊಳಗಿನ ಮಾತನ್ನು  ಇವನಿಗೆ ಹೇಳಬೇಕಿತ್ತು...

ಅದಕ್ಕೊಂದು  ಸಮಯ ಸಂದರ್ಭ ಬೇಕಿತ್ತು....


ಮೊನ್ನೆ ನನ್ನ  ಕಾರು  ಕೈಕೊಟ್ಟಿತ್ತು... ಆತ ನಮ್ಮನೆಗೆ ಬಂದು  ಕಾರು  ಗ್ಯಾರೇಜಿಗೆ  ಒಯ್ದಿದ್ದ...


ನಿನ್ನೆಯೂ ರಿಪೇರಿ ಆಗಿರಲಿಲ್ಲ...


"ಬೇಸರ ಮಾಡ್ಕೋಬೇಡಿ...
ನಿಮ್ಮ ಕಾರಿನ ಒಂದು  ನಟ್ಟು ಸಿಗುತ್ತಿಲ್ಲ...
ಹುಡುಕುತ್ತಾ ಇದ್ದೇನೆ.. 
ನಾಳೆ ಖಂಡಿತ  ರೆಡಿ ಮಾಡಿರುತ್ತೇನೆ.."


ನಾನು ಇದೇ ಸಮಯಕ್ಕೆ ಕಾಯುತ್ತಿದ್ದೆ...


" ನಾಳೆ ಹೇಗಿದ್ದರೂ  ಭಾನುವಾರ.. 
ಬರುತ್ತೇನೆ.. 
ನನಗೆ  ನಿಮ್ಮ  ಬಳಿ ಸ್ವಲ್ಪ ಮಾತನಾಡ ಬೇಕಿದೆ.."


ಮಧ್ಯ ವಯಸ್ಕನಿಗೆ ಆಶ್ಚರ್ಯ.. !


"ನನ್ನ ಬಳಿ ಮಾತನಾಡಬೇಕಾ?  
ಈಗಲೇ ಮಾತನಾಡಿ.. 
ಹೇಳಿ  ಏನು ವಿಷಯ ?.."


"ಹೀಗೆಲ್ಲ ಹೇಳಲು ಆಗುವದಿಲ್ಲ..
ನಾಳೆ ಬರುತ್ತೇನಲ್ಲ ಹೇಳುತ್ತೇನೆ"


"ಸುಂದರವಾಗಿದ್ದವರು  ಇಷ್ಟೆಲ್ಲ  ಕುತೂಹಲದ ಮಾತನಾಡ ಬಾರದು..
ಅಪಾರ್ಥವಾಗಿಬಿಡುತ್ತದೆ... 
ನನ್ನಂಥವರಿಗೆ  ಟೆನ್ಷನ್ ಶುರುವಾಗಿಬಿಡುತ್ತದೆ...
ದಯವಿಟ್ಟು ಹೇಳಿ..."


ನಾನು ಪೂರ್ವ ತಯಾರಿ  ಇಲ್ಲದೆ ಏನು ಮಾಡುವದಿಲ್ಲ...


"ನೀವು ಧಾರಾಳವಾಗಿ  ಟೆನ್ಷನ್ ಮಾಡಿಕೊಳ್ಳಿ... 
ನಾಳೆ ಸಿಗುತ್ತೇನೆ.."


ನನಗೆ ಒಳಗೊಳಗೇ  ಖುಷಿಯಾಗುತ್ತಿತ್ತು... 
ಆತನೂ  ನನ್ನಂತೇ  ಯೋಚಿಸುತ್ತಿರ ಬಹುದಾ...?


ಈತನೊಡನೆ ಫೋನ್ ಕಟ್ ಮಾಡುತ್ತಿದ್ದಂತೆಯೇ.. 
ನನ್ನ ಗಂಡನ   ಫೋನ್  ಬಂತು  !!


ಛೇ...


ಮುಖ ಗಂಟು ಹಾಕಿ ಕೇಳಿದೆ.. "ಏನು?"


"ನೋಡು ... 
ನಿನ್ನ  ಬದುಕಿನಲ್ಲಿ   ನಾನು ಬಹಳ ನಿಧಾನ ..
ಒಪ್ಪುತ್ತೇನೆ.. ಆದರೆ  ನಿನ್ನ ಸ್ಪೀಡಿಗೆ ನಾನೆಂದೂ ಅಡ್ಡಿ ಬರುವದಿಲ್ಲ..
ನಿನಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ..
ಈಗ ಅಡುಗೆಯನ್ನೂ ಕಲಿತುಕೊಂಡಿದ್ದೇನೆ..
ನೋಡು.. ನಮ್ಮಿಬ್ಬರ ಜಗಳದಿಂದನಮ್ಮ ಮಗುವಿಗೆ ಅನ್ಯಾಯವಾಗ ಬಾರದು...ಅಲ್ವಾ?
ಆ ಪಾಪು  ಏನು ತಪ್ಪು ಮಾಡಿದೆ?
ಅದಕ್ಕೆ ಅಪ್ಪ, ಅಮ್ಮನ ಪ್ರೀತಿ ಬೇಕು ಅಲ್ವಾ?"


ನನಗೆ ಮೈಯೆಲ್ಲ ಉರಿದು ಹೋಯಿತು...


ಒಂದು ಮಗುವಿನ ತಾಯಿಯಾದ ಮೇಲೆ ನನ್ನ ಆಕರ್ಷಣೆಗಳು ಕಡಿಮೆಯಾಗಿವೆ...
ಈತ ಇದ್ದ ಹಾಗೆಯೇ ಇದ್ದಾನೆ... ಹೊಸ ಮದುಮಗನ ತರಹ....!


ಈಗ ಹೊಂದಿಕೊಳ್ಳುತ್ತಾನಂತೆ...!!


'ಮಗುವಿನ  ಹೆಸರು ಹೇಳಿ.. 
ಇಮೋಷನಲ್ ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ..
ಈ.. ಕೆಟ್ಟ.. ಆಳಸಿ ಗಂಡಸು"


"ನಿಮಗೆ  ಮಗು ಬೇಕಿದ್ದರೆ ತೆಗೆದು ಕೊಂಡು ಹೋಗಿ...
ಎಲ್ಲ ಮುಗಿದ ವಿಷಯದ  ಬಗೆಗೆ ಮತ್ತೆ ಮಾತನಾಡುವದು  ನನಗೆ ಇಷ್ಟವಿಲ್ಲ.."


"ನೋಡು ಚಿನ್ನಾ.. ಇನ್ನೊಮ್ಮೆ ವಿಚಾರ ಮಾಡು .. 
ನೀನು ದೂರವಾದ ಮೇಲೆ ನನ್ನ ತಪ್ಪುಗಳು ಗೊತ್ತಾಗ ತೊಡಗಿವೆ...
ನಾಳೆ ಫೋನ್ ಮಾಡುತ್ತೇನೆ.."


ನಾನು ಫೊನ್ ಕಟ್ ಮಾಡಿದೆ...


ನಾಳೆ ...ಇಂದಾಯಿತು...


ಚಂದವಾಗಿ  ತಯಾರಾಗಿ ..  ಆತನ ಗ್ಯಾರೇಜಿಗೆ ಬಂದಿದ್ದೆ..


ಮಧ್ಯ ವಯಸ್ಕನ ಕಣ್ಣಲ್ಲಿ ಹೊಳಪಿತ್ತು....


"ಬನ್ನಿ.. ಬನ್ನಿ... 
ಸರಿಯಾದ ಸಮಯಕ್ಕೇ.. ಬಂದಿದ್ದೀರಿ...
ಕೆಲಸಗಾರರೂ ಇಲ್ಲ..ನೀವು  ಒಂದು ಸಣ್ಣ ಸಹಾಯ ಮಾಡಿ.. ಪ್ಲೀಸ್"


"ಓಹೋ.. 
ಅದಕ್ಕೇನಂತೆ.. ಏನು ಸಹಾಯ..?"


"ನೋಡಿ.. 
ಈ ಸ್ಪ್ಯಾನರ್  ಹಿಡಿದುಕೊಳ್ಳಿ.. 
ನಾನು ಈಕಡೆಯಿಂದ ಈ ನಟ್ಟು  ಬಿಗಿ ಮಾಡುತ್ತೇನೆ."....


ನಾನು ಬಗ್ಗಿ  ನಟ್ಟಿಗೆ   ಸರಿಯಾಗಿ  ಸ್ಪ್ಯಾನರ್ ಹಿಡಿದುಕೊಂಡೆ..


ಆತನೂ ಬಗ್ಗಿದ... !


ಆತನ ಬಿಸಿಯುಸಿರು  ನನ್ನ ಕಿವಿಗೆ  ತಾಗುತ್ತಿತ್ತು...


ಮನದ ಭಾವಗಳೆಲ್ಲ ಗರಿಗೆದರತೊಡಗಿತು...


ಮೈಯೆಲ್ಲ ಬಿಸಿಯಾಗ ತೊಡಗಿತು...


ಎಷ್ಟು ಆಕರ್ಷಕ ಈ ಭಾವಗಳು.... ಆಕರ್ಷಣೆಗಳು....!


ಅತನ ಬೆವರಿನ ವಾಸನೆ ಒಂಥರಾ ಮಾದಕವಾಗಿತ್ತು...


ಮಾತು ಬೇಕಿರದ ಸಮದಲ್ಲಿ.. ಆತ ಮಾತು ಶುರು ಮಾಡಿದ....


"ನೋಡಿ  ..
ಈ ಒಂದು ನಟ್ಟಿಗಾಗಿ  ಎಷ್ಟೆಲ್ಲ  ಕಷ್ಟಪಟ್ಟೆ ಗೊತ್ತಾ?
ನಿನ್ನೆ ಪೂರ್ತಿ  ಮಾರ್ಕೆಟ್ಟ್ ಹುಡುಕಿದೆ..
ಅಲ್ಲಿ ಎಲ್ಲೂ ಸಿಗಲಿಲ್ಲ...
ನನ್ನ ಬಳಿ ಇರುವ  ಎಲ್ಲ ನಮೂನೆಯ  ನಟ್ಟುಗಳಲ್ಲಿ ಹುಡುಕಿದೆ..
ಇಲ್ಲಿ ನೋಡಿ.."


ಅಂತ ನಟ್ಟಿನ ರಾಶಿಯನ್ನೇ ತೋರಿಸಿದ..


ಇಷ್ಟೆಲ್ಲಾ ನಟ್ಟಿನಲ್ಲಿ ಒಂದೂ ಸರಿ ಹೊಂದಲಿಲ್ಲವಾ....? ...!!


ಅತ ಮತ್ತೆ ಶುರು ಮಾಡಿದ..


"ನೋಡಿ  ...


ಈ.. ಬೋಲ್ಟಿಗೆ  ಇದೇ ನಟ್ಟು ಬೇಕಿತ್ತು...!


ಬೇರೆ ಯಾವುದೂ ಸೆಟ್ಟ್ ಆಗುವದಿಲ್ಲ..


ಒಂದು ವೇಳೆ  ಪ್ರಯತ್ನಿಸಿದರೂ.. ಬೋಲ್ಟ್ ಹಾಳಾಗುತ್ತದೆ...


ಥ್ರೆಡ್ ಹಾಳಾಗಿ ಹೋಗುತ್ತದೆ ...


ಒಮ್ಮೆ ಹಾಳಾದರೆ ಮತ್ತೆ ರಿಪೇರಿಯಾಗುವದಿಲ್ಲ..!


ನಿಮ್ಮ  ಈ ಒಂದು ನಟ್ಟಿಗಾಗಿ  ಬಹಳ ಕಷ್ಟಪಟ್ಟೆ... .."


ನನಗೆ ಒಂಥರಾ ಅನಿಸಿತು....


ನನ್ನ ಮೈ ಬೆವರಿತ್ತು... 
ಪಾತಾಳಕ್ಕೆ ಇಳಿದು ಹೋಗಿದ್ದೆ...!!


ನಟ್ಟು ಟೈಟ್ ಆಯಿತು.. 


ಗಾಡಿಯೂ ರೆಡಿಯಾಯಿತು.. ನಾನು ಲಗುಬಗೆಯಿಂದ ಕಾರಿನಲ್ಲಿ ಕುಳಿತೆ..


ಆದಷ್ಟು ಬೇಗ  ಅಲ್ಲಿಂದ ಹೊರಡ ಬೇಕಿತ್ತು...


"ಇವತ್ತು ಏನೋ ಮಾತನಾಡ ಬೇಕೆಂದು  ಹೇಳಿದಿದ್ರಿ...
ನಾನು  ನಿನ್ನೆ ರಾತ್ರಿಯಿಂದ  ನಿದ್ದೆ ಮಾಡದೆ ಕಾಯುತ್ತಿದ್ದೆ.."


ನಾನು  ಆ ಮಾತು ಕೇಳದವಳಂತೆ  ಗಾಡಿ ಸ್ಟಾರ್ಟ್ ಮಾಡಿದೆ... 
ಗಾಡಿ ಮುಂದಕ್ಕೆ ಚಲಿಸಿತು...


ಆತ ಪೆಚ್ಚು ಮೋರೆ ಹಾಕಿಕೊಂಡಿದ್ದ...


ಅಷ್ಟರಲ್ಲಿ ಫೋನ್ ರಿಂಗಾಯಿತು... 
ನನ್ನ ಗಂಡನ ಫೋನ್..!
ನಾನು ಫೋನ್ ತೆಗೆದು ಕೊಳ್ಳಲಿಲ್ಲ...


ಸ್ವಾಭಿಮಾನ ಅಡ್ಡ ಬಂತು....


ಕಾಲ್ ಕಟ್ ಮಾಡಿ..
ಅಪ್ಪನಿಗೆ ಫೋನ್ ಮಾಡಿ ಹೇಳಿದೆ...


"ಅಪ್ಪಾ... 
ನನ್ನ ಗಂಡನಿಗೆ ಫೋನ್ ಮಾಡಿ ಬರಲಿಕ್ಕೆ ಹೇಳಿ..
ನಾನು ಅವರ ಜೊತೆ ಇರ್ತೇನೆ..."


ಅಪ್ಪ ಸ್ವಲ್ಪ ಹೊತ್ತು ಏನೂ ಮಾತನಾಡಲಿಲ್ಲ...





54 comments:

Deep said...

ತಿರುವು/ಗಳು ಚನ್ನಾಗಿತ್ತು ಸಾರ್ ..
ಆಗುಂಬೆ ಘಾಟಿ ಡ್ರೈವ್ ಮಾಡಿದ ಹಾಗಿತ್ತು ...

balasubramanya said...

ವಾಹ್ ಬೋಲ್ಟ್ ನಟ್ಟಿನ ಮಹಿಮೆ!!!! ಒಂದು ನಟ್ಟು ಬೋಲ್ಟು ಒಂದು ಸಂಸಾರವನ್ನು ಉಳಿಸಿದ್ದು ಖುಷಿ ಕೊಟ್ಟಿತು. "ಯಾವ ಹೂವು ಯಾರ ಮುಡಿಗೋ ಅನ್ನುವ ಹಾಗೆ ಯಾವ ನಟ್ಟು ಯಾವ ಬೋಲ್ಟ್ ಗೋ" ಅನ್ನಬಹುದು.ಜೀವನದಲ್ಲಿಯೂ ಹಾಗೆ ಗಂಡಾ ಹೆಂಡಿರು ನಟ್ಟು ಬೋಲ್ಟಿನ ತರಹ ಹೊಂದಾಣಿಕೆ ಇದ್ದಾರೆ ಜೀವನ ಬಿಗಿಯಾಗಿರುತ್ತದೆ.ಇಲ್ಲದಿದ್ದರೆ ಕಥಾ ನಾಯಕಿ ತರಹ ಒದ್ದಾಟ ತಪ್ಪಿದ್ದಲ್ಲಾ .ಪುಣ್ಯ ಕ್ಕೆ ನಟ್ಟು ಬೋಲ್ಟಿನ ಅನುಭವದಿಂದ ಬುದ್ದಿ ಬಂತಲ್ಲಾ ಅವಳಿಗೆ !!! ನಿರೂಪಣೆ ಹೋಲಿಕೆ ಚೆನ್ನಾಗಿದೆ.ಜೈ ಹೋ.

Ittigecement said...

ದೀಪ್ ಅವರೆ...

ದಾರಿಯಲ್ಲಿ ತಿರುವುಗಳು ಸಹಜ...
ತಿರುವುಗಳಲ್ಲಿ ನಮ್ಮ ಚಾಲನೆ ನಮ್ಮ ಹಿಡಿತಲ್ಲಿದ್ದರೆ ಇನ್ನೂ ಸೊಗಸು...
ಸ್ವಲ್ಪ ಎಚ್ಚರ ತಪ್ಪಿದರೂ.. ಪಕ್ಕಕ್ಕೆ ಬೀಳುವದು ನಾವೇ....!

ಘ್ಹಾಟ್ ರಸ್ತೆಯ ಡ್ರೈವ್ ಅಂದರೆ ನನಗೆ ಬಹಳ ಖುಷಿ..

ಕಥೆಯನ್ನು ಇಷ್ಟಪಟ್ಟು..
ಆಗುಂಬೆ ರಸ್ತೆಯ ಡ್ರೈವ್ ನೆನಪಿಸಿದ್ದಕ್ಕೆ .. ಧನ್ಯವಾದಗಳು...

Dr.D.T.Krishna Murthy. said...

ಆಕಸ್ಮಿಕ ತಿರುವುಗಳುಳ್ಳ ಚಂದದ ಕತೆ.ಅಭಿನಂದನೆಗಳು.ಜೈ ಹೋ.

HegdeG said...

ಕಥೆ ಚೊಲೋ ಇದ್ದು ಪ್ರಕಾಶಣ್ಣ, ಒಳ್ಳೆ ತಿರುವು......

Ittigecement said...

ಬಾಲೂ ಸರ್...

" ಈ ನಟ್ಟಿಗೆ.. ಈದೇ.. ಬೋಲ್ಟ್.."...
ನಮ್ಮ ಬದುಕಿಗೂ ಹೊಂದಿಸಿದರೆ ಹೇಗೆ...?

ತೀರಾ ಸಾಂಪ್ರದಾಯಕ ಅಗಿಬಿಡುತ್ತದೆ..
ಎಂದೆಲ್ಲ ಮನಸ್ಸಲ್ಲಿ ಕೊರೆಯುತ್ತಿತ್ತು...

ಆದರೂ..

ಮನಸ್ಸಲ್ಲಿ ಗೊಂದಲ ಇರುವಾಗ...
ಇಂಥಹ ಒಂದು ಸಣ್ಣ ಘಟನೆ.. ಚಿಕ್ಕ ಎಳೆ.. ಮತ್ತೆ ಸರಿದಾರಿಗೆ ಹೋಗಲು ಸಾಕಾಗುತ್ತದೆ ಅಲ್ಲವೆ?

ಕಥೆಯನ್ನು ಇಷ್ಟಪಟ್ಟು..
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು... ಜೈ ಹೋ !!

Indushree Gurukar said...

ಪ್ರಕಾಶಣ್ಣ
ನಿಮ್ almost ಎಲ್ಲಾ ಕತೆಗಳಲ್ಲಿ ಇನ್ನೇನು ತಪ್ಪು ಹಾದಿ ಹಿಡೀತಾರೆ ಅನ್ನೋವಾಗ ಎಚ್ಚೆತ್ತು ಸರಿ ಹೋಗಿ ಬಿಡ್ತಾರೆ.
ನಿಜ ಜೀವನದಲ್ಲೂ ಅಷ್ಟೇ ಅಲ್ವಾ... ಮನಸಲ್ಲಿ ಏನೇನೋ ಆಸೆ ಹುಟ್ಟಿ ಕನಸಲ್ಲೇ ಎಲ್ಲೆಲ್ಲೋ‌ ಹೋದ್ರು ಸಂಸ್ಕಾರದ ಗಂಟೆ ಬಾರಿಸಿದಾಗ ನಾವು ಎಚ್ಚೆತ್ತುಕೊಂಡು ಬಿಡ್ತೀವಲ್ಲಾ ಹಾಗೆ...

Ittigecement said...

ಕೃಷ್ಣಮೂರ್ತಿಯವರೆ..

ಮದುವೆ.. ದಾಂಪತ್ಯಗಳೇ ಹಾಗಲ್ಲವೆ...?

ನಟ್ಟು ಬೋಲ್ಟುಗಳ ಹಾಗೆ...
ಒಮ್ಮೆ ಥ್ರೆಡ್ ಹಾಳಾದರೆ ಸರಿ ಮಾಡುವದು ಬಹಳ ಕಷ್ಟ...

ಹಾಳಾಗುವ ಮುನ್ನ "ವಿವೇಕ" ಎಚ್ಚರಿಸಿ..
ಅದರಂತೆ ನಡೆದು ಕೊಂಡರೆ ಸರಿದಾರಿಗೆ ಹೋಗಬಹುದು...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಮನಸು said...

ಪ್ರಕಾಶಣ್ಣ,
ಕಥೆ ಚೆನ್ನಾಗಿ ಮೂಡಿಬಂದಿದೆ. ಆಸೆ ಆಮಿಷಗಳು ಹೇಗೆ ಹುಟ್ಟುತ್ತವೋ ಅದಕ್ಕೆ ಕಡಿವಾಣವೂ ಯಾವುದಾದರೊಂದು ಮೂಲೆಯಿಂದ ಬಂದು ಬಿಡುತ್ತದೆ....

ಜಲನಯನ said...

ಸಂಬಂಧಗಳ ನಡುವೆ ಬಿರುಕುಬಿಟ್ಟಾಗ ಅಸಹಾಯಕ ಸ್ಥಿತಿಯಂತೆ ಏರ್ಪಡೋದು ಸಹಜ ಅದ್ರಲ್ಲೂ ಹೆಣ್ಣಿನ ಜೀವನದಲ್ಲಿ...(ಆಕೆ ಯಾವ್ವುದೇಸಹಾಯದ ಅಕಾಂಕ್ಷಿಯಲ್ಲದಿದ್ದರೆ)ಇವು ನಾಜೂಕು ಸ್ಥಿತಿಯನ್ನು ತಲುಪಿದಾಗ ತಪ್ಪುಹೆಜ್ಜೆ ಸಾಮಾನ್ಯವಾಗುತ್ತದೆ.
ಚನ್ನಗಿದೆ ಪ್ರಕಾಶ ಕಥೆ

umesh desai said...

ಹೆಗಡೇಜಿ ಕತೆ ಚೆನ್ನಾಗಿದೆ. ಪೂರ್ವನಿರ್ಧಾರಿತ ಸೂತ್ರ ಇದೆ. ನಾ ನಿಮ್ಮ ಹಿಂದಿನ ಕತೆಯಲ್ಲೂ ಹೇಳಿದ್ದೆ. ಕತೆಗಾರ ರೂಪಿಸಿಕೊಂಡ
ನೀತಿ ನಿಯಮಗಳು ಪಾತ್ರದಲ್ಲೂ ಹೊಮ್ಮುತ್ತವೆ.

Ittigecement said...

ಗಣಪತಿ....

ಮದುವೆ ಹೊಸತರಲ್ಲಿ ಸಣ್ಣ ಪುಟ್ಟ ಜಗಳ..
ಹೊಂದಾಣಿಕೆ ಇಲ್ಲದಿರುವದು ಸಹಜ...
ಇಬ್ಬರಲ್ಲೂ ಪರಸ್ಪರ ತಿಳುವಳಿಕೆ.. ಸಹಕಾರ ಇದ್ದರೇನೆ ಅದೊಂದು ಯಶಸ್ವಿ ದಾಂಪತ್ಯ ಅನ್ನಿಸಿಕೊಳ್ಳುವದು...

ತಿರುವಿನಲ್ಲಿ ಚಾಲನೆ ದಿಕ್ಕುತಪ್ಪಿದಾಗ..
ಮತ್ತೆ ಸರಿದಾರಿಗೆ ಬರುವದು..ಇಂಥಹ ಸಣ್ಣ ಎಳೆಗಳಿಂದ...

ಕಥೆಯನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು.. ಜೈ ಹೋ !

Ittigecement said...

ಇಂದೂಶ್ರೀ...

ನಾನು ಕಥೆ ಬರೆಯುತ್ತೇನೆ ಅಂದಾಗ ನನ್ನ ಹಿತೈಷಿಯೊಬ್ಬರು ಒಂದು ಮಾತು ಹೇಳಿದ್ದರು..

"ಕಥೆಯಲ್ಲಿ ಆದಷ್ಟು.. ಧನಾತ್ಮಕ ಅಂಶವಿರಲಿ...
ವಾಸ್ತವಿಕತೆ ಇರಲಿ...
ನಾಗುವಿನ ಪ್ರಭಾವ ಕಡಿಮೆ ಇರಲಿ" ಅಂತ ಹರಸಿದ್ದರು...

ಆದಷ್ಟು ಆ ಹಿರಿಯರ ಮಾತಿಗೆ ಬೆಲೆ ಕೊಟ್ಟು ಬರೆಯುತ್ತಿರುವೆ...

"ಜಾರಿಬಿದ್ದು ಪೆಟ್ಟುಮಾಡಿಕೊಳ್ಳುವ ಮೊದಲು...
ಎದ್ದು ಸಾವರಿಸಿಕೊಳ್ಳುವದು ಬಹಳ ಮಹತ್ವ"

ಕಥೆಯನ್ನು ಇಷ್ಟಪಟ್ಟು..
ಚಂದದ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು...

ದಿನಕರ ಮೊಗೇರ said...

ಹೌದು.. ಒಬ್ಬನಿಗೆ ಇನ್ನೊಬ್ಬಳು ಅಂತ ದೇವರು ಮಾಡಿಟ್ಟಿರುತ್ತಾನೆ..... ಅದನ್ನು ಬಿಟ್ಟು ಇನ್ನೊಂದು ಟೈಟ್ ಮಾಡಲು ಹೋದರೆ ತ್ರೆಡ್ ಕೆಟ್ಟುಹೋಗತ್ತೆ.... ತುಂಬಾ ಕ್ಲಿಷ್ಟ ವಿಶಯವನ್ನು ತುಂಬಾ ಸರಳವಾಗಿ ಹೇಳಿದ್ದೀರಾ... ನಿರೂಪಣೆ ಚೆನ್ನಾಗಿದೆ ಪ್ರಕಾಶಣ್ಣ....

Ashwini Dasare said...

ಕಥೆ ತುಂಬಾ ಚೆನ್ನಾಗಿ U turn ತೆಗೆದು ಕೊಂಡಿದೆ, ಆದರೆ ಪ್ರಕಾಶಣ್ಣ, ಅದೇ ನಟ್ಟಿಗೆ ಅದೇ ಬೋಲ್ಟು ಅಂತ ಇದ್ದಾಗ, ನಟ್ಟು ಮತ್ತು ಬೋಲ್ಟು ಯಾವಾಗಲು ಸರಿಯಾಗಿ ಹೊಂದಿಕೊಂಡೇ ಇರಬೇಕಿತ್ತಲ್ವ? ಕೆಲೊವೊಮ್ಮೆ ಬೇರೆ ಬೋಲ್ಟ್ ಹುಡುಕುವಂತಾಗುವ ಮನಸ್ಥಿತಿಯನ್ನ ಮಾರ್ಮಿಕವಾಗಿ ವಿಮರ್ಶಿಸಿದ್ದಿರಿ.

Ittigecement said...

ಮನಸು....

ಇದು ಸರಿ...
ಇದು ತಪ್ಪು ಎಂದು ನಮ್ಮೊಳಗಿನ ಮನಸ್ಸು ಹೇಳುತ್ತಿರುತ್ತದೆ...

ನಾವು ಯಾವುದನ್ನು ಕೇಳುತ್ತೆವೆಯೋ ಅನ್ನುವದು ಮಹತ್ವ...

ದುರ್ಬಲ ಘಳಿಗೆಯಲ್ಲಿ ಆಸೆಗಳಿಗೆ ಜಾರಿದರೂ..
ಸರಿದಾರಿಗೆ ಬರಲೂ ಅವಕಾಶ ಇದ್ದೇ ಇರುತ್ತದೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Digwas Bellemane said...
This comment has been removed by the author.
Digwas Bellemane said...

ಕತೆ ಸಕತಿದ್ದೋ ಪ್ರಕಾಶಣ್ಣ

Ittigecement said...

ಜಲನಯನ.. ಆಜಾದು...

ಮಗು ಹುಟ್ಟುವದೊರಳಗೆ ವಿಚ್ಛೇಧನ ಆಗಿದ್ದರೆ ಪರವಾಗಿಲ್ಲ..
ಮಗು ಹುಟ್ಟಿದ ಮೇಲೆ ಬೇರೆ ಬೇರೆ ಆಗುವದು ಮಹಾ ಅಪರಾಧ..

ಜೀವನ ಪೂರ್ತಿ ಆ ಮಗು ಅನಾಥ ಭಾವದಿಂದ ಬಳಲಬೇಕಾಗುತ್ತದೆ..

ಇವರಿಬ್ಬರ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಮಗುವಿನ ಬದುಕು ಹಾಳಾಗುತ್ತದೆ..

ಅಂಥಹ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಬಹಳ ಹೆಚ್ಚು...

ಹಾಗಾಗಿ ಮಗು ಹುಟ್ಟಿದ ಮೇಲೆ ಗಂಡಿರಲಿ..
ಹೆಣ್ಣಿರಲಿ .. ಅವರ ಜವಾಬ್ದಾರಿ ಹೆಚ್ಚಾಗುತ್ತದೆ..

ಮಗುವಿಗಾದರೂ ಒಟ್ಟಿಗೆ ಬಾಳಬೇಕು...

ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.. ಜೈ ಹೋ !

Gubbachchi Sathish said...

ಪ್ರೀತಿಯ ಪ್ರಕಾಶಣ್ಣ,
ಈ ಕಥೆ ಚೆನ್ನಾಗಿಯೇ ಇದೆ.
ಆದರೆ, ನಿಮ್ಮ ಅನೇಕ ಕಥೆಗಳಲ್ಲಿರುವ ಹೊಳಹು ಈ ಕಥೆಯಲ್ಲಿಯೂ ಇದೆ. "ಎಲ್ಲಾ ಇದ್ದವರು ಏನನ್ನೋ ಬಯಸುತ್ತಾ ಮತ್ತೆ ಇದ್ದದರಲ್ಲೇ ತೃಪ್ತಿ ಪಡೆಯುತ್ತಾರಲ್ಲ" ಅದು ಎನ್ನುವುದು ನನ್ನ ಅನಿಸಿಕೆ.

Ambika said...

Superr Kathe :) Mast iddu..

Ittigecement said...

ಉಮೇಶ ದೇಸಾಯಿಯವರೆ...

ನಿಮ್ಮ ಪ್ರತಿಕ್ರಿಯೆ ಖುಶಿಯಾಯಿತು...
ನಾನು ನಿಜವಾಗಿಯೂ ಒಂದು ಚೌಕಟ್ಟಿಲ್ಲದೆ ಬರೆಯುತ್ತೇನೆ..

ಕಥೆಯ ಸಣ್ಣ ಎಳೆ ಇಟ್ಟುಕೊಂಡು ಇದನ್ನು ಬರೆದಿದ್ದೇನೆ...

ಇಲ್ಲಿ ಆ ಹುಡುಗಿಯ ಸ್ವಭಾವ ಹೀಗೆಯೇ ಇರಬೇಕು ಅಂತ ಮೊದಲೇ ನಿರ್ಧರಿಸಿಲ್ಲ...
ಬರೆದಾದ ಮೇಲೆ.. ಮತ್ತೊಮ್ಮೆ ಓದಿ...
ಸ್ವಲ್ಪ ತಿದ್ದಿದ್ದೇನೆ.. "ಹೀಗಿದ್ದರೆ ಚೆನ್ನ" ಎಂದು...

ಆದರೆ ಒಂದು ಮಾತು ಸತ್ಯ..
ಕಥೆ ಧನಾತ್ಮಕವಾಗಿರ ಬೇಕು ಅಂತ ನಿರ್ಧಾರವಾಗಿತ್ತು...

ನನ್ನಿಂದ ಇಂಥಹ ವಿಚಾರಗಳನ್ನು ಮಾಡಲು ಪ್ರೇರೇಪಿಸಿದ ನಿಮ್ಮ ಪ್ರತಿಕ್ರಿಯೆಗೆ ಅನಂತ ಅನಂತ ವಂದನೆಗಳು...

ಒಂದು ವೇಳೆ ಕಥೆಗಾರ ಪೂರ್ವ ನಿರ್ಧಾರಿತವಾಗಿ ಬರೆದಿದ್ದರೆ ತಪ್ಪೇನಿಲ್ಲ ಅಲ್ಲವೆ?
"ನನ್ನಜ್ಜಿ ಅಂದ್ರೆ ನಂಗಿಷ್ಟ" ಕಥೆಯನ್ನು ನಾನು ಹಾಗೆ ಬರೆದಿದ್ದೇನೆ...

ಆ ಕಥೆ ಮೊದಲೇ ಗೊತ್ತಿತ್ತು...

ಚಂದದ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು...

Ittigecement said...

ಪ್ರೀತಿಯ ವಸಂತ...

ಎರಡು ವಿಭಿನ್ನ ಸ್ವಭಾವಗಳು ಜೊತೆಯಾಗಿ ಬದುಕುವಾಗ ಭಿನಾಭಿಪ್ರಾಯ ಸಹಜ...
ಅದನ್ನು ಸರಿದೂಗಿಸಿಕೊಂಡು ಬದುಕುವದೇ.. ಯಶಸ್ವಿ ದಾಂಪತ್ಯದ ಸೊಗಸು...
ಅದು ಕಷ್ಟವಲ್ಲ...
ಸ್ವಾರಸ್ಯಕರವಾಗಿರುತ್ತದೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು .. ಜೈ ಹೋ !!

Deep said...

ಸಾರ್ ಮತ್ತೆ ಓದುತ್ತ ಇದ್ದೆ.. ಹಂಗೆ ನಾಲ್ಕು ಲೈನ್ ತಲೆಗೆ ಬಂತು...... ತಕ್ಕಳಿ!!!

"ಬಾಳೆಂಬ ಪಯಣದಲಿ
ಜೊತೆಯಾಗಿ ಗಂಡ ಹೆಂಡಿರು
ಸಾಗಬೇಕು ಬಲು ದೂರ
ಇರುವವು ದೌರ್ಬಲ್ಯಗಳು ಹತ್ತು ಹಲವಾರು
ಸಿಗುವವು ಅನಿರೀಕ್ಷಿತ ತಿರುವುಗಳು ಅಪಾರ
ಇದ್ದರೆ ವಿವೇಕ ಜೊತೆಗೆ
ಹಸನಾಗಿ ನಡೆಯುವುದು ಸಂಸಾರ "

ಸವಿಗನಸು said...

ಪ್ರಕಾಶಣ್ಣ,
ಒಳ್ಳೆ ತಿರುವಿನ ಕಥೆ....
ಬ್ರಹ್ಮ ಹಾಕಿದ ಗಂಟು ಬಿಡಿಸಲು ಸಾಧ್ಯನಾ....?

Ittigecement said...

ಪ್ರೀತಿಯ ದಿನಕರ..

ಒಮ್ಮೆ ಪಕ್ಕಾ ಆದ ಬೋಲ್ಟ್ ನಟ್..
ಮತ್ತೆ ಮತ್ತೆ ಬದಲಿಸ ಹೋದರೆ ಥ್ರೆಡ್ ಹಾಳಾಗುತ್ತದೆ...

ಒಮ್ಮೆ ಹಾಳಾದ ಥ್ರೆಡ್ಡಿನಿಂದ ಸರಿಯಾಗಿ ಬೋಲ್ಟ್ ನಟ್ ಫಿಕ್ಸ್ ಆಗುವದು ಕಷ್ಟ...

ಹಾಗಾಗಿ ಥ್ರೆಡ್ ಹಾಳಾಗದ ಹಾಗೆ ನೋಡಿಕೊಳ್ಳುವದು ಒಳ್ಳೆಯದು ಅಲ್ಲವೆ?

ಚಂದದ ಪ್ರತಿಕ್ರಿಗೆ ಧನ್ಯವಾದಗಳು..

ನಿಮ್ಮ ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ..

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

ಅಮಿತಾ ರವಿಕಿರಣ್ said...

ಕಥೆ ಹೀಗೂ ಸಾಗಬಹುದು ಅಂತ ಈಗಲೇ ತಿಳಿದಿದ್ದು..ಪದ್ಯದ ಥರ .ಬದುಕನ್ನು ಅಕ್ಷರದಲ್ಲಿ ಬಂಧಿಸಿಡುವುದು ಎಷ್ಟು ಸುಲಭ ..ಅಷ್ಟೇ ಕಷ್ಟ...ಆ ಕೆಲಸ ನೀವು ಸಮರ್ಥವಾಗಿ ಮಾಡಿದೀರಿ..ತುಂಬಾ ಇಷ್ಟಾ ಆಯ್ತು...ಜೈ ಹೋ

ಸಾಗರದಾಚೆಯ ಇಂಚರ said...

Prakashanna,

sundara kathe
olleya tiruvu iddu

olle saddeshanu iddu

Ittigecement said...

ಪ್ರೀತಿಯ ಆಶು....

ಹಿರಿಯರು ಹಾಕಿದ "ಬಂಧ"ಕ್ಕೆ ಹೊಂದಿಕೊಂಡು ಬಾಂಧವ್ಯ ಬೆಳೆಸಿಕೊಂಡರೆ ನಟ್ಟು ಬೋಲ್ಟು ಕಳಚುವ ಸಂದರ್ಭ ಬರುವದಿಲ್ಲ...
ಆದರೆ..
ಈಗ ಹೊರಗಿನ ಆಕರ್ಷಣೆಗಳು ಜಾಸ್ತಿ...
ಥಳುಕು.. ಬೆಡಗುಗಳು ಜಾಸ್ತಿ..
ಅದೇ.. ಜೀವನ ಅಂದುಕೊಂಡು ಮನಸ್ಸು ಚಂಚಲ ಕೆಲವೊಮ್ಮೆ ಆಗುವ ಸಾಧ್ಯತೆ ಇರುತ್ತದೆ...

ಒಮ್ಮೆ ಹೊಂದಿಸಿದ ನಟ್ಟು ಬೋಲ್ಟ್ ಬಂಧ ಯಾವಾಗಲೂ ಸರಿ ಇದ್ದರೆ ಒಳ್ಳೆಯದು..
ಬೇರೆ ನಟ್ಟು ಬೋಲ್ಟ್ ಹುಡುಕಲು ಹೋದರೆ ಬದುಕು ಮೂರಾ ಬಟ್ಟೆಯಾಗುತ್ತದೆ..


ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

ಪ್ರೀತಿಯಿಂದ
ಪ್ರಕಾಶಣ್ಣ..

Ranjita said...

kathe chalo iddu..

Ittigecement said...

ಪ್ರೀತಿಯ ದಿಗ್ವಾಸು...

ತಲೆಯಲ್ಲಿ ಏನೇನೋ ವಿಚಾರಗಳು.. ಒತ್ತಡಗಳಿರುತ್ತವೆ..
ನಿರ್ಣಯ ತೆಗೆದುಕೊಳ್ಳಬೇಕಾದ ಅನಿವಾರ್ಯತೆ.. ಗೊಂದಲಗಳಿರುತ್ತದೆ ಅಂದುಕೊಳ್ಳಿ...

ಇಂಥಹ ನಟ್ಟು ಬೋಲ್ಟಿನಂಥಹ ಸಂದರ್ಭ ನಮ್ಮನ್ನು ಒಂದು ಧ್ರಢ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ...

ಕೆಲವೊಮ್ಮೆ ನಮ್ಮ ಬದುಕನ್ನೇ ಬದಲಿಸ ಬಹುದಾದ ಮಹತ್ವದ ನಿರ್ಣಯ ಅದಾಗಿರುತ್ತದೆ..

ನನಗೆ ಇಂಥಹ ಅನುಭವ ಆಗಿದೆ...

ಇದು ಕಾಲ್ಪನಿಕ ಕಥೆ..

ಕಥೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...

ಪ್ರತಿಕ್ರಿಯೆಗಳು ಟಾನಿಕ್ ಥರಹ.. ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ... ಧನ್ಯವಾದಗಳು..

Ittigecement said...

ಗುಬ್ಬಚ್ಚಿ ಸತೀಶು...

ದಿನಾ ನೋಡುತ್ತಿರುವ ಸಂಬಂಧಗಳಲ್ಲಿ ಹೊಸತೇನೂ ಕಾಣುವದಿಲ್ಲ..
ಆ ಬಾಂಧವ್ಯಗಳನ್ನು ನಿತ್ಯ ಹೊಸತಾಗಿಸುವ...
ಉತ್ಸಾಹ ತುಂಬುವ ಚೈತನ್ಯ ನಮ್ಮ ಕೈಯಲ್ಲಿದೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಪ್ರತಿಕ್ರಿಯೆಗಳು ಬೆಳಗಿನ ಬಿಸಿ ಬಿಸಿ ಕಾಫಿ ಗುಟುಕಿನ ಥರಹ..
ಬರೆಯಲು ಉತ್ತೇಜನ ಕೊಡುತ್ತವೆ..

ಜೈ ಹೋ.. !

ಗಿರೀಶ್.ಎಸ್ said...
This comment has been removed by the author.
ಗಿರೀಶ್.ಎಸ್ said...

ಚಾರ್ಮುಡಿ ಘಾಟ್ ತಿರುವಿನ ಹಾಗಿದೆ ಕಥೆ ...ಆಕೆಯ ಜೀವನದಲ್ಲಿ ಅಂತ ತಿರುವು ಬಂದಿದ್ದು ನಿಜವಾಗಲು ಸಮಾಧಾನದ ಸಂಗತಿ....ಜೀವನದಲ್ಲಿ ದಂಪತಿಗಳ ನಡುವೆ ಸಹಬಾಳ್ವೆ ಎಷ್ಟು ಮುಖ್ಯ ಎಂಬುದು ಈ ಕಥಯಿಂದ ತಿಳಿಯುತ್ತದೆ..

Pradeep Rao said...

ಪ್ರಕಾಶ್ ಸಾರ್.. ನಿಮ್ಮ "ನಟ್ಟು-ಬೋಲ್ಟು" ಕಥೆ ಸೂಪರಾಗಿದೆ! ಕಥೆಯ ಸಾಲುಗಳು ತುಂಬಾ ಒಳಾರ್ಥಗಳನ್ನು ಹೊಂದಿರುವಂತಿದೆ.. ಓದುತ್ತಾ ಹೋದಂತೆಲ್ಲ ಹೊಸ ಹೊಸ ಅರ್ಥಗಳು ಮೂಡಿ ಸ್ವಾರಸ್ಯಕರವೆನಿಸಿತು! ನಿಮ್ಮ ಕಥೆ ಹೇಳುವ ಶೈಲಿ ಅದ್ಭುತವಾದದ್ದು ಸಾರ್..

Bhairav Kodi said...

ತಿರುವು ಕಥಾನಕ ಇಷ್ಟ ಆಯ್ತು

Unknown said...

Prakasha,ganda-hendati sambandhakke nattu-boltiginta sooktavada holike bere yavudoo ilyana!,kathe bahaLa chndaagi moodibanju,oDi khushi aatu.

RANJITH said...

ಸ್ವಾಮಿ ದೊಡ್ಡ ನಮಸ್ಕಾರ ನಿಮಗೆ...... ಯಾಕೆ ಇಷ್ಟು ದೊಡ್ಡ ನಮಸ್ಕಾರ ಅಂತ ಅನಿಸಿದರೆ , ಹೇಳ್ತಿನಿ ಕೇಳಿ.....

ನಾನು ಕಥೆ ಬರೆಯಬೇಕು ಅಂತ ಅಂದು ಕೊಲ್ಲುತೇನೆ ನಿಜ..... ಬರೆಯುತ್ತಿಲ್ಲ..... ನನಗೆ ನಿಮ್ಮಂತೆ ವಾಕ್ಯ ಜೋಡಣೆ ಬರುವುದಿಲ್ಲ ಮರ್ರೆ......

ಹಾಗೇನೆ ಕಥೆ ಓದುವುದರಲ್ಲೂ ಹಿಂದೆ, ಆದ್ರೂನು ನಿಮ್ಮ ಕಥೆ ಪೂರ್ತಿ ಓದಿದ್ದೀನಿ ಗೊತ್ತಾ...???

ಅದಕ್ಕೆ ನಿಮ್ಮ ಕಥೆಯ ಸ್ವಾರಸ್ಯನೆ ಕಾರಣ.... ನೇರ ವಿಷಯಕ್ಕೆ ಬರ್ತೇನೆ..... ನಿಮ್ಮ ಬರವಣಿಗೆ ತುಂಬಾ ಇಷ್ಟ ಆಯಿತು ಸರ್....

ಒಂದು ಹೆಣ್ಣಿನ ಜೀವನದಲ್ಲಿ ಬರುವ ಹೇಳಲು ಆಗದೆ , ಸಹಿಸಲು ಆಗದೆ ಒದ್ದಾಟದ ಬದುಕಿನ ನಿರೂಪಣೆ..... ಧನ್ಯವಾದಗಳು ನಿಮಗೆ......(.ರಂಜಿತ್ ).....

Ittigecement said...

ಕವಿತಾ...

ಎಷ್ಟೋ ನಿರ್ಧಾರಗಳನ್ನು "ನಟ್ಟು ಬೋಲ್ಟಿನಂಥಹ" ಸಾಂದರ್ಭಿಕ ಘಟನೆಗಳಿಂದ ಸ್ಪೂರ್ತಿ ಪಡೆಯುತ್ತೇವೆ...
ಅಂಥಹ ಘಟನೆಗಳು ಬದುಕಿನ ಮಹತ್ವದ "ತಿರುವು" ಕೊಡಬಲ್ಲದು...

ಈ ಕಥೆಯೂ ಕೂಡ ಇಂಥಹದೊಂದು ತಿರುವು...

ತಿರುವು ಅಂದರೆ...
ಹಿಂತಿರುಗು..
ಮಡಚಿ ಹಾಕು...

ಇಲ್ಲಿ ಈ ಎರಡೂ ಅರ್ಥಗಳು ಹೊಂದುತ್ತವೆ ಅಲ್ಲವೆ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ "ದೀಪ್"

ಬಹಳ ಸುಂದರ ಸಾಲುಗಳು...!!

"ವಿವೇಕವಿದ್ದರೆ ಹಸನಾಗಿ ನಡೆಯುವದು ಸಂಸಾರ"
ಬಹಳ ಅರ್ಥಪೂರ್ಣ ಸಾಲು... !!

ಮತ್ತೊಮ್ಮೆ ಪ್ರತಿಕ್ರಿಯಿಸಿದ್ದೀರಿ..
ಮತ್ತೊಮ್ಮೆ
ಮಗದೊಮ್ಮೆ...
ತುಂಬಾ... ತುಂಬಾ ಧನ್ಯವಾದಗಳು..

ಪ್ರೀತಿ.. ಸ್ನೇಹ ಹೀಗೆಯೇ ಇರಲಿ... ಜೈ ಹೋ !

Ittigecement said...

ಸವಿಗನಸು "ಮಹೇಶ".......................

ತಿರುವು ಅಂದರೆ "ಕರ್ವಿಂಗ್" ಅಂತ ಅರ್ಥಾನೂ ಇದೆಯಲ್ಲವೆ?

ವಾಹ್.. ಈ ಅರ್ಥ ನನಗೆ ಹೊಳೆದಿರಲಿಲ್ಲ... ಆ ಅರ್ಥವೂ ಕೂಡ ಈ ಕಥೆಗೆ ಹೊಂದುತ್ತದೆ...

ನಿಜ.. "ಪ್ರೀತಿ,ಪ್ರೇಮದ ಬಾಂಧವ್ಯದ ಬಂಧನ "ಬ್ರಹ್ಮ ಗಂಟಾಗಿಯೇ" ಇರಲಿ ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Sandeep K B said...

ಕಥೆ ಸೊಗಸಾಗಿದೆ ಪ್ರಕಾಶಣ್ಣ ..
ನಮ್ಮ ಜೀವನಕ್ಕೆ ಸುಖ - ದುಖಗಲೇ , ಬೋಲ್ಟ್ - ನಟ ಇದ್ದಂಗೆ .
ಯಾವ ಕಾಲಕ್ಕೂ ಬರಿ ಒಂದರಿಂದ , ಜೀವನ ಹಿಡಿತದಲ್ಲಿ ಇರೋಲ್ಲ ಮತ್ತು ಸಂಪೂರ್ಣ ಆಗೋಲ್ಲ.
ಎರಡು ಬೇಕು ...
ಕಳಚೋ ಸ್ತಿತಿಯಲ್ಲಿ ಇರಬೇಕಾದ್ರೆ .. ಟೈಟ್ ಮಾಡೋಕೆ ತಿರುವು ಕಂಡಿತ ಬೇಕು ...

ಸುಧೇಶ್ ಶೆಟ್ಟಿ said...

thumba chennagidhe kathe prakashanna,,, :)

Roopa said...

ನಿಜ ಸಾರ್
ತುಂಬಾ ಚೆನ್ನಾಗಿದೆ
ಆದರೆ ಎಲ್ಲರೂ ಆ ಮಧ್ಯವಯಸ್ಕನ ಹಾಗೆ ಇದ್ದಿದ್ದಲ್ಲಿ ಇಷ್ಟೊಂದು ನಟ್ಟು ಬೋಲ್ಟುಗಳು ತುಕ್ಕು ಹಿಡಿಯುತ್ತಿರಲಿಲ್ಲ

sunaath said...

ಪ್ರಕಾಶ,
ದಾಂಪತ್ಯಸಮಸ್ಯೆಯನ್ನು ನಿಮ್ಮ ವಿನೋದಶೈಲಿಯಲ್ಲಿ ಸರಸವಾಗಿ, ಸುರಸವಾಗಿ ಬರೆದಿದ್ದೀರಿ. ಅಭಿನಂದನೆಗಳು.

Ittigecement said...

ಅಮಿತಾರವರೆ...

ನಿಮ್ಮ ಪ್ರೋತ್ಸಾಹದ ನುಡಿಗಳು ಉತ್ಸಾಹ ಕೊಡುತ್ತದೆ...

ಏನು ಮಾಡೋಣ ಹೇಳಿ...?
ನಾನು ನನ್ನ ವಿಧ್ಯಾರ್ಥಿ ಜೀವನದ ಪರೀಕ್ಷೆಗಳಲ್ಲಿಯೂ ಕೂಡ ಹೀಗೇಯೇ ಬರೆದಿದ್ದೇನೆ...

ಎಸ್ಸೆಸೆಲ್ಸಿಯಲ್ಲಿ, ಪಿಯೂಸಿಯಲ್ಲಿಯೂ ಹೀಗೇಯೇ ಬರೆದಿರುವೆ..

ನನ್ನ ಶೈಲಿಯನ್ನು ತಿದ್ದಲು..ನನ್ನಿಂದ ಆಗಲಿಲ್ಲ..

ಶಿಕ್ಷಕರಿಂದ ಚೆನ್ನಾಗಿ ಬಯ್ಯಿಸಿಕೊಂಡ ನನಗೆ ನಿಮ್ಮಂಥಹ ಪ್ರತಿಕ್ರಿಯೆಗಳು ಉತ್ಸಾಹ ಕೊಟ್ಟಿದ್ದಂತೂ ನಿಜ..
ಹಾಗಾಗಿ ನನಗೆ ಪ್ರತಿಕ್ರಿಯೆಗಳೆಂದರೆ ತುಂಬಾ ಖುಷಿ...

ಪ್ರೋತ್ಸಾಹ ಹೀಗೆಯೇ ಇರಲಿ...

ಪ್ರೀತಿಯಿಂದ
ಪ್ರಕಾಶಣ್ಣ..

viju said...

ಕಥೆ ಲೈಕ್ ಇದ್ದೊ ಪ್ರಕಾಶಣ್ಣ...

Ittigecement said...

ಗುರುಮೂರ್ತಿ... ಸಾಗರದಾಚೆಯ ಇಂಚರ..

ಈ ಕಥೆಗೆ "ನಟ್ಟು ಬೋಲ್ಟು" ಅಂತ ಹೆಸರಿಡಲು ಸಲಹೆ ಇತ್ತು..
ಹಾಗೆ ಇಟ್ಟಿದ್ದರೆ ಮಧ್ಯ ವಯಸ್ಕ "ನಟ್ಟಿಗಾಗಿ ಹುಡುಕುತ್ತಿದ್ದೇನೆ" ಅಂದಾಗಲೆ ಕಥೆಯ ಸುಳಿವು ಗೊತ್ತಾಗಿಬಿಡುತ್ತಿತ್ತು ಎನ್ನುವದು ನನ್ನ ಅನುಮಾನ.
ಹಾಗಾಗಿ "ನಟ್ಟು ಬೋಲ್ಟು" ಅಂತ ಹೆಸರಿಟ್ಟಿಲ್ಲ...

ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
ಜೈ ಹೋ !

Ittigecement said...

ರಂಜಿತಾರವರೆ...

ಬದುಕಿನ ತಿರುವುಗಳಲ್ಲಿ ನಮ್ಮ ನಿರ್ಧಾರ..
ಚಾಲನೆ ಚೆನ್ನಾಗಿದ್ದರೆ ಸಮರ್ಥವಾಗಿ ಗುರಿ ಮುಟ್ಟಬಹುದು ಎನ್ನುವದು ನನ್ನ ಅನಿಸಿಕೆ...

ಕಥೆಯನ್ನು ಓದಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..

ಪ್ರತಿಕ್ರಿಯೆಗಳು ಟಾನಿಕ್ ಥರಹ.. ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ.. ಧನ್ಯವಾದಗಳು..

Ittigecement said...

ಪ್ರೀತಿಯ ಗಿರೀಶು..

ಬಹಳ ನಿರೀಕ್ಷೆ ಇಟ್ಟುಕೊಂಡು..
ಎರಡು ವಿಭಿನ್ನ ಸ್ವಭಾವಗಳು ಜೊತೆಯಾಗಿ ಬಾಳುವದು ಸುಲಭವೇನಲ್ಲ...

ಬೇಕು ಬೇಡಗಳಲ್ಲಿ ತಮ್ಮ ವೈಯಕ್ತಿಕ ಸಣ್ಣ ತ್ಯಾಗವನ್ನು ಮಾಡದಿದ್ದಲ್ಲಿ ಹೊಂದಾಣಿಕೆ ಕಷ್ಟವಾಗಿಬಿಡುತ್ತದೆ...

ಇಲ್ಲಿ ಅತೀ ಆತ್ಮವಿಶ್ವಾಸದ ಹುಡುಗಿ ವಿರುದ್ಧ ಸ್ವಭಾವದ ಗಂಡನೊಂದಿಗೆ ಬಾಳುವಾಗ ಕಷ್ಟವಾದರೂ ಹೊಂದಾಣಿಕೆ ಅಗತ್ಯವಾಗಿತ್ತು...

ಹುಟ್ಟಿದ ಮಗುವಿಗಾದರೂ ಅನಿವಾರ್ಯವಾಗಿ ಬಾಳಬೇಕಿತ್ತು...

ಕಥೆಯನ್ನು ಇಷ್ಟಪಟ್ಟು ಪ್ರೀತಿಯಿಂದ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಜೈ ಹೋ !!

shivu.k said...

ಸರ್,
ತುಂಬಾ ಕೆಲ್ಸಗಳಿಂದಾಗಿ ಬ್ಲಾಗುಗಳಿಗೆ ಬರಲಾಗುತ್ತಿರಲಿಲ್ಲ. ಈಗ ಸ್ವಲ್ಪ ಬಿಡುವುಮಾಡಿಕೊಂಡು ನಿಮ್ಮ ತಿರುವು ಕತೆ ಓದಿದೆ. ನಟ್ಟು, ಬೋಲ್ಟ್ ವಿವರಣೆ ತುಂಬಾ ಇಷ್ಟವಾಯಿತು. ನೀವು ಹೇಳಿದ ಹಾಗೆ ಹೊಂದಾಣಿಕೆಯನ್ನು ಮಾಡಿಕೊಂಡರೆ ಬದುಕು ಎಷ್ಟು ಚೆನ್ನ ಅಲ್ವಾ...
ಕತೆ ಇಷ್ಟವಾಯಿತು.

ಸುಷ್ಮಾ ಮೂಡುಬಿದಿರೆ said...

ಕಥೆ ಬಹಳ ಚೆನ್ನಾಗಿದೆ ಪ್ರಕಾಶಣ್ಣ.....ಎಡವಿ ಬೀಳಲಿದ್ದ ನಾಯಕಿಗೆ ಸರಿಯಾದ ಸಮಯದಲ್ಲಿ ನತ್ತು ಬೋಲ್ಟು ಪರಿಚಯ ಮಾಡಿಸಿ, ಅವರ ಸಂಸಾರ ಉಳಿಸಿ ಪುಣ್ಯ ಕಟ್ಟಿಕ್ಕೊಂಡಿದ್ದಿರಿ..

ಸೀತಾರಾಮ. ಕೆ. / SITARAM.K said...

adbhuta kathegaarike prakaashanna!

Srikanth Manjunath said...

ಒಂದು ಸುಂದರ ಪ್ರವಾಸ ಮಾಡಿದ ಅನುಭವ...ಅನ್ನನುಭಾವ..ಅನುಭಾವ..ಅನುಭವ..ಇವೆಲ್ಲ..ಸಂಧರ್ಭದಲ್ಲೇ ಹೊಳೆಯುವುದು..ಮತ್ತು ಬಾಳನ್ನು ಬೆಳಗಿಸುವುದು..
ಅರ್ಥಪೂರ್ಣ ಲೇಖನ..ಧನ್ಯವಾದಗಳು