Friday, December 18, 2009

ಕಲ್ಲು.... ಬೆಂಚು...



ನನ್ನನ್ನು ನೋಡಿದವರೆಲ್ಲ  ನನ್ನ  ಕಣ್ಣುಗಳು ತುಂಬಾ  ಚೆನ್ನಾಗಿವೆ ಅನ್ನುತ್ತಾರೆ....
ಅದನ್ನು ಕೇಳಲು ನನಗೂ ಇಷ್ಟ..
ನಾನು  ಭಾವ ಜೀವಿ..
ಯಾವಾಗಲೂ ಕಲ್ಪನಾಲೋಕದಲ್ಲೇ ಇರುತ್ತೇನೆ.


ಸಣ್ಣ ಸಣ್ಣ ವಿಷಯಗಳಿಗೆ ಸಂಭ್ರಮಿಸುತ್ತೇನೆ.. ಖುಷಿಪಡುತ್ತೇನೆ..
ಹಾಗೆಯೇ ಕೋಪ ಕೂಡ ಬಲುಬೇಗ ಬರುತ್ತದೆ...
ತೀರಾ  ಸಣ್ಣದೆನಿಸುವ  ವಿಷಯಗಳಿಗೆ ಬೇಸರ ಪಟ್ಟುಕೊಂಡು  ಕಣ್ಣೀರು ಹಾಕುತ್ತೇನೆ..
ಬಹಳ ಭಾವುಕ ವ್ಯಕ್ತಿ ನಾನು..


ಆದರೆ...
ನನ್ನ ಗಂಡ ಹಾಗಲ್ಲ. 
ಬಹಳ ಪ್ರ್ಯಾಕ್ಟಿಕಲ್ ಮನುಷ್ಯ. ಬಹಳ ದೊಡ್ಡ ಬಿಸಿನೆಸ್ ಮನುಷ್ಯ. 
ಬಹಳ ಹಣ ಗಳಿಸಿದ್ದಾನೆ. ಮನೆಯಲ್ಲಿ ನಾಲ್ಕಾರು ಕಾರುಗಳಿವೆ..


ಇನ್ನೇನು..?
ಎಲ್ಲವೂ ಚೆನ್ನಾಗಿದೆಯಲ್ಲ..! ಎಲ್ಲವೂ ಸ್ವರ್ಗ ಅಂತೀರಾ..?


ಹಾಗಲ್ಲ.


ನನ್ನ  ಗಂಡ ನನ್ನ ಬಳಿ ಮಾತನಾಡಿದ್ದೇ ಇಲ್ಲ. 
ಯಾವಾಗಲೂ ಅವರಾಯಿತು.., ಅವರ ವ್ಯವಹಾರವಾಯಿತು..
ನನ್ನ ಬಳಿ ನಕ್ಕು ನಾಲ್ಕು ಮಾತಾಡಿದ್ದಂತೂ ಇಲ್ಲವೇ ಇಲ್ಲ.!


ನಮ್ಮ ಮದುವೆಗಾಗಿ ಅವರು ನನ್ನನ್ನು ನೋಡಲು ಬರಲೇ ಇಲ್ಲ.
ಹಿರಿಯರೆಲ್ಲ ಸೇರಿ ನಿರ್ಧಾರ ಮಾಡಿದ್ದು.


ಆ ದಿನಗಳಲ್ಲಿ ನನಗೆ ಬಹಳ ಕನಸಿತ್ತು..
ನನ್ನವ  ನೋಡಲು  ಚೆನ್ನಾಗಿರ ಬೇಕು. ಸುಂದರನಿರಬೇಕು.
ಸರಸದ ಮಾತುಗಳನ್ನಾಡ ಬೇಕು.


ಹಾಡಲಾಗದಿದ್ದರೂ...
ಒಳ್ಳೋಳ್ಳೆ ಹಾಡುಗಳನ್ನು  ಕೇಳುವವನಾಗಿರ ಬೇಕು.


ನಿಜಕ್ಕೂ ನನ್ನ ಗಂಡ ಸ್ಪುರದ್ರೂಪಿ...!


ಬೆಟ್ಟದಷ್ಟು ಆಸೆ, ಕನಸುಗಳನ್ನು ಹೊತ್ತು ಮದುವೆ ಮಂಟಪಕ್ಕೆ ಬಂದೆ...
ಬಹಳ ಸಂಭ್ರಮದಿಂದ  , ಚಂದವಾಗಿ  ತಯಾರಾಗಿ ಬಂದಿದ್ದೆ...


ನನಗೆ ಗೊತ್ತು  ನಾನು ಚಂದವಾಗಿದ್ದೆನೆಂದು..


ನಾನು ಎಲ್ಲಿ ಹೋದರೂ ಮೆಚ್ಚುವ ನೋಟಗಳು ನನಗೆ ಸಿಗುತ್ತವೆ.


ಆದರೆ ನನ್ನವ  ನನ್ನ ಬಳಿ ಮಾತನಾಡಲೇ ಇಲ್ಲ...
ನನ್ನನ್ನು ಕಣ್ಣೆತ್ತಿ ನೋಡಲೂ ಇಲ್ಲ...!
ನಾನು ಚಂದ ನೋಡಿ ಮೆಚ್ಚಿದ ಗಂಡು ಒಮ್ಮೆಯೂ ನನ್ನ ಅಂದವನ್ನು ನೋಡಲೇ ಇಲ್ಲ...
ನನ್ನವನ ನಲ್ಮೆಯ ಮಾತುಗಳು..
ಮತ್ತೇರಿಸುವ ಇಷ್ಟದ ನೋಟವನ್ನು ನಾನು ಹಂಬಲಿಸಿದ್ದೆ..
ಇಲ್ಲಸಲ್ಲದ ಕನಸು ಕಂಡಿದ್ದೆ...


ಬಹಳ ನಿರಾಸೆ ಆಯಿತು...


ಇದ್ದರೆ ಇರ ಬೇಕು ಸಣ್ಣದಾದ ಕೊರತೆ..
ಹೆಚ್ಚುವದು ಪ್ರೇಮದ ಒರತೆ...


ಎಲ್ಲವೂ ನಾವು ಬಯಸಿದಂತೆ ಸಿಗುವದಿಲ್ಲವಲ್ಲ..


ಹಾಗಾದರೆ ಅರಸಿಕನೋ...?
ಆ ಶಬ್ಧಗಳ ಅರ್ಥ ನನಗೆ ಆಗಲೇ ಇಲ್ಲ...


ಆ ದಿನದ ರಾತ್ರಿಯೂ ಹಾಗೆ ಆಯಿತು...
ಎಲ್ಲವೂ ಯಾಂತ್ರಿಕ...


ರೋಚಕತೆ.. ರೋಮಾಂಚನೆಯ ಕ್ಷಣಗಳು..
ತಣ್ಣಗೆ... 
ಸಂಭ್ರಮವಿಲ್ಲದೆ...
ಉದ್ವೇಗವಿಲ್ಲದೆ ನಡೆದು ಹೋಯಿತು... ಸಹಜವೆಂಬಂತೆ...


ನನ್ನ ಜೀವಜೀವದ ಕನಸಿನ ಕ್ಷಣಗಳಲ್ಲಿ ನಾನಿರಲಿಲ್ಲ...


ಅವರು ವ್ಯವಹಾರಸ್ಥರು..
ತಮಗೆಷ್ಟು ಬೇಕೊ ಅಷ್ಟು ತೆಗೆದು ಕೊಂಡರು..
ಜೀವ ಭಾವಗಳು ಎಂದಿಗೂ ಒಂದಾಗಲೇ ಇಲ್ಲ....


ಇಂದಿಗೂ ನನ್ನವನನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದೇನೆ...


ನಾನು ಮದುವೆಯಾಗಿ ಹೊಸತರದಲ್ಲಿ ಹೊಸ ಮನೆ ಕಟ್ಟಲು ಶುರು ಮಾಡಿದ್ದ  ನನ್ನ  ಗಂಡ.
ಎಲ್ಲವೂ.... ಅವನ ಬೇಕು, ಬೇಡಗಳು...!


ಅವನಿಷ್ಟದಂತೆ ಕಟ್ಟಿಸಿದ..


ನಾನು ಬಹಳ ಸಂಕೋಚದಿಂದ, ಸ್ವಲ್ಪ ಹೆದರಿಕೆಯಿಂದ ನನ್ನದೊಂದು ಆಸೆ ಹೇಳಿದೆ...


"ಮನೆಯ ಮುಂದಿನ ಕೈತೋಟದಲ್ಲಿ ಮರದ ಕೆಳಗೆ..
ಒಂದು ಗ್ರನೈಟ್ ಕಲ್ಲು ಬೇಂಚು ಹಾಕಿಸಿ.. 
ದಯವಿಟ್ಟು..."


ನನ್ನಗಂಡ  ಬಲು ವಿಚಿತ್ರವಾಗಿ ನೋಡಿದ.
ಇದರಿಂದ  ಏನು ಲಾಭ ಅಂತ ವಿಚಾರ ಮಾಡಿರ ಬಹುದಾ?
ಮಾತನಾಡಲಿಲ್ಲ.


ಆದರೆ ..
ಬಹಳ ಸುಂದರ ಕಲ್ಲು ಬೇಂಚು ಹಾಕಿಸಿದ...!
ಅದು ಎಷ್ಟು ಅಂದವಾಗಿತ್ತೆಂದರೆ.. ನನ್ನ ಕಲ್ಪನೆಗಿಂತಲೂ ಚಂದವಾಗಿತ್ತು...


ಅಂದಿನಿಂದ ನನಗೊಂದು ಕನಸಿದೆ...
ಸೂರ್ಯ ಮುಳುಗುವ ಸಮಯದಲ್ಲಿ ನನ್ನ ಗಂಡನ ಸಂಗಡ ಅಲ್ಲಿ ಕುಳಿತು..
ಹಾಡು ಕೇಳುತ್ತ ಒಂದು ಸುಂದರ ಸಂಜೆಯನ್ನು ಕಳೆಯ ಬೇಕು....

ಎಲ್ಲದಕ್ಕೂ ಕಾರಣವಿರುತ್ತದೆ..
ನನ್ನ ಗಂಡನ ಈ ಸ್ವಭಾವಕ್ಕೂ ಕಾರಣವಿದೆ..


ನನ್ನ ಗಂಡ ಒಬ್ಬ ಅನಾಥ.. ಬಹಳ ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬಂದಿದ್ದಾನೆ..
ಶ್ರಮ ಜೀವಿ. ಅವನ ಜೀವನವೇ ಒಂದು ಹೋರಾಟ..
ಒಂದೊಂದು ತುತ್ತಿಗೂ ಕಷ್ಟಪಟ್ಟಿದ್ದಾನೆ. 
ಅವನು ಬೆಲೆ ಕೊಡುವದು ಎರಡಕ್ಕೆ ಮಾತ್ರ...
ಸಮಯ ಮತ್ತು ಹಣ...


ಮದುವೆಯಾಗಿ ಹದಿನೆಂಟು ವರ್ಷಗಳು ಉರುಳಿಹೋಯಿತು...


ಮಗನೊಬ್ಬ ಹುಟ್ಟಿದ...


ಥೇಟ್ ಅಪ್ಪನ ಹಾಗೆಯೇ...!


ನನ್ನ ಜೀವ  ಹಂಚಿಕೊಂಡು ಹುಟ್ಟಿದ ಮಗುವಿಗೆ  ನನ್ನ ಭಾವನೆಗಳು ಹಾಸ್ಯವಾಗಿ ಕಾಣುತ್ತಿದ್ದವು....
ನನ್ನ  ರಕ್ತಮಾಂಸಗಳಲ್ಲಿ ಹರಿಯುವ ಸ್ವಭಾವ ಅವನಿಗೆ ಬರಲಿಲ್ಲ...
ವಾಸ್ತವವಾದಿಗಳ ಜಗತ್ತಿನಲ್ಲಿ ನನಗೆಲ್ಲಿ ಬೆಲೆಯಿದೆ?

ಜಗತ್ತಿನ ಎಲ್ಲ ಸುಖಗಳು ಹಣದ ಥೈಲಿಯಲ್ಲಿರುತ್ತವೆ....


ಮನೆಕೆಲಸಕ್ಕೆ.. ಅಡಿಗೆ ಮಾಡಲಿಕ್ಕೆ...
ನೆನಪಾದಾಗ ಹಾಸಿಗೆಗೆ.. 
ಅಸ್ತಿತ್ವವವೇ ಇಲ್ಲದ  ಸ್ಥಿತಿ ನನ್ನದು...


ಇದ್ದ ಒಬ್ಬ ಮಗನೂ ವಿದ್ಯಾಭ್ಯಾಸಕ್ಕಾಗಿ  ಪಟ್ಟಣಕ್ಕೆ ಹೊರಟು ಹೋದ...


ಈಗ ಮತ್ತೂ ಒಂಟಿಯಾದೆ...


ಯಾರೂ ಇಲ್ಲದಿದ್ದರೂ  ನನಗೊಬ್ಬ ಸ್ನೇಹಿತನಿದ್ದಾನೆ..
ಅದು ನನ್ನ ಏಕಾಂತ...
ನನ್ನ ಒಂಟಿತನ..
ನನ್ನ ಏಕಾಂತವನ್ನು.. 
ನನ್ನ ಒಂಟಿತನವನ್ನು ನಾನು ಬಹಳ ಪ್ರೀತಿಸುತ್ತೇನೆ.


ನನ್ನ ಆಸೆಗಳನ್ನು, ಕನಸುಗಳನ್ನು ಅಲ್ಲಿ ಕಾಣುತ್ತೇನೆ..
ನೋಡುತ್ತೇನೆ... ಅಲ್ಲೇ ಖುಷಿಪಡುತ್ತೇನೆ....
ಬದುಕಿನ ಅನಿವಾರ್ಯತೆಗೆ ಹೊಂದಿಕೊಳ್ಳಲೇ ಬೇಕಿತ್ತು...


ಎಂದಿನಂತೆ ಇಂದೂ ಕೂಡ ಬೆಳಗಾಯಿತು...


ದಿನಾಲೂ ಆರುಗಂಟೆಗೆ ಎದ್ದು ಟಿ ಗಾಗಿ ಕಾಯುವ ಗಂಡ ಏಳಲಿಲ್ಲ..
ನಾನು ರೂಮಿಗೆ ಹೋದೆ...
ಎದ್ದುಕುಳಿತಿದ್ದ..


" ಚಿನ್ನು.... ಯಾಕೋ.. ಬೇಸರ ಕಣೆ...
ನೋಡೆ.. ಇವತ್ತು ನಾನು ಎಲ್ಲಿಗೂ ಹೋಗಲ್ಲ..
ಮನೆಯಲ್ಲೇ ಇರುತ್ತೇನೆ.. ನಿನ್ನ ಜೊತೆಯಲ್ಲೇ..!!"


ನನಗೆ  ಆಶ್ಚರ್ಯವಾಯಿತು...!
ಕಳೆದ ಹದಿನೆಂಟು ವರ್ಷದಲ್ಲಿ ಈ ಥರಹ ಆಗಲೇ ಇಲ್ಲ...!


 ಸಂತೋಷದಿಂದ ಮೂಕಳಾದೆ...
ಸಂಭ್ರಮಕ್ಕೆ ಮೇರೆಯೇ ಇಲ್ಲವಾಯಿತು...
ಸಡಗರದಿಂದ ಟೀ ಕೊಟ್ಟು ಬಂದೆ...


"ಚಿನ್ನು ಪುಟ್ಟಾ...
 ಈ ವ್ಯವಹಾರದ ಒತ್ತಡದಲ್ಲಿ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದು ಕೊಂಡು ಬಿಟ್ಟೆ ಕಣೆ..
ನಿನ್ನನ್ನೂ ಗಮನಿಸಲಿಲ್ಲ ನೋಡು.. ಬೇಸರಪಟ್ಟುಕೊಳ್ಳ ಬೇಡ..."


ಏನಾಯಿತು ನನ್ನ ಗಂಡನಿಗೆ? 
ಇನ್ನು ಯಾವಾಗಲೂ ಹೀಗೆಯೇ ಇರಬಹುದಾ...?
ದಿನಾಲೂ ನಾನು ದೀಪ ಹಚ್ಚುವ ದೇವರಿಗೆ ಮನಸಾರೆ ಕೈಮುಗಿದೆ...!


ಬೆಳಗಿನ ತಿಂಡಿಯೂ ಆಯಿತು...


ನಾನು ಮಧ್ಯಾಹ್ನದ ಊಟದ ತಯಾರಿ ನಡೆಸಿದೆ..
ನನ್ನವ.. ನನ್ನ ಗಂಡ ಮನೆಯಲ್ಲೇ ಇರುತ್ತಾನೆ..!
ಅವನ ಇಷ್ಟದ ಮಜ್ಜಿಗೆ ಹುಳಿ, ಬೆಂಡೆಕಾಯಿ, ದಪ್ಪಮೆಣಸಿನಕಾಯಿಯ ಪಲ್ಯ...
ಶಾವಿಗೆ ಖೀರು  ಮಾಡಿದೆ... 


ಊಟಕ್ಕೆ ಕರೆದೆ.....
ನಾನು ಬಡಿಸಲು ತೊಡಗಿದೆ...
ಈತ ಊಟ ಶುರು ಮಾಡಿದ... 


ನಾನು ಮನದಣಿಯೇ ನೋಡಿದೆ.. ನನ್ನವನನ್ನು..


ಇಳಿವಯಸ್ಸಿನಲ್ಲೂ ಬಹಳ ಸುಂದರ ನನ್ನ ಗಂಡ..!
ಬಿಳಿ ಮೀಸೆ.. ಅರ್ಧ ಉದುರಿದ ತಲೆ...  
ಒಮ್ಮೆ ಆತನ ತಲೆಯನ್ನು ನನ್ನ ಹೊಟ್ಟೆಗೆ ತಬ್ಬಿಕೊಂಡು ಪ್ರೀತಿಸೋಣ ಅನಿಸಿತು...


ಅಪರೂಪಕ್ಕೆ ನಗುವವರ ನಗು ಬಲು ಚಂದ.....!


" ಚಿನ್ನು...ನೀನೂ ಬಾ...
ಕೂತ್ಗೊ.. ಬಾ.." 
        
ಅನ್ನುತ್ತ ನನ್ನ ಕೈ ಹಿಡಿದ... 


ನನಗೆ ಹೇಗೋ .. ಹೇಗೋ ಆಯಿತು...!
ಇದು ನಿಜವಾ...? 
ಒಮ್ಮೆ ಮೈಯನ್ನು ಅಲ್ಲೇ ಚಿಗುಟಿ ನೋಡಿಕೊಂಡೆ...


ಊಟವಾಯಿತು..


" ಚಿನ್ನು ಮರಿ...
ಮತ್ತೆ ಪಾತ್ರೆಗಳನ್ನು ತೊಳೆಯುತ್ತ ಕುಳಿತುಕೊಳ್ಳಬೇಡ.. ಸ್ವಲ್ಪ ಹೊತ್ತು ಮಲಗೋಣ ಬಾ...


ಏನಾಗುತ್ತಿದೆ ಇವತ್ತು...? ಇದೆಲ್ಲ ನಿಜವಾ...? 
ಅಂತೂ ನನ್ನ ದೇವರು ತಡವಾಗಿಯಾದರೂ ಕಣ್ಣುಬಿಟ್ಟಿದ್ದಾನೆ....!


ನನಗೆ ಏನನ್ನೋ ಕೇಳಬೇಕಿತ್ತು ಅವನ ಬಳಿ... 
ಧೈರ್ಯಸಾಲಲಿಲ್ಲ..
ಅದು ಅವನಿಗೆ ಅರ್ಥವಾಯಿತು ಅಂತ ಕಾಣುತ್ತದೆ...


"ಏನಾದರೂ ಮಾತನಾಡ ಬೇಕಿತ್ತಾ...ಚಿನ್ನು..?"


ಬಹಳ ಅಪ್ಯಾಯಮಾನವಾಗಿತ್ತು ಆ ಧ್ವನಿ...!
ನಾನು ಧೈರ್ಯ ಮಾಡಿಯೇ ಬಿಟ್ಟೆ...


"ನನಗೆ ಒಂದು ಆಸೆ ಇದೆ... ನಮ್ಮ ಮದುವೆ ಆಗಿದ್ದಾಗಲಿನಿಂದ.."


"ಏನದು..?"


"ಮತ್ತೇನಿಲ್ಲ.. 
ಮನೆಯ ಮುಂದಿನ ಕಲ್ಲು ಬೇಂಚಿನ ಮೇಲೆ... ಸಂಜೆ ಸೂರ್ಯಾಸ್ತದ ಸಮಯದಲ್ಲಿ..
ನಾವಿಬ್ಬರೂ ಅಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕು.."


"ಇಷ್ಟೇನಾ..?
 ಇದೆಂಥಹ  ಆಸೆ.. ಚಿನ್ನು ಪುಟ್ಟಾ ? ಏನಾಗುತ್ತದೆ ಆಗ..?"


"ಏನೂ ಇಲ್ಲ... 
ಆ  ಸಮಯದಲ್ಲಿ ನಿಮ್ಮೊಡನೆ ನಾನು ಅಲ್ಲಿ ಕುಳಿತುಕೊಳ್ಳ ಬೇಕು...
ಇದು ನನ್ನ ಬಹಳ ದಿನಗಳ ಆಸೆ...."


"ಓಕೆ... ಹಾಗೆಯೇ ಮಾಡೋಣ.. ಅದಕ್ಕೇನು ಹಣ ಕೊಡಬೇಕಾ..?
ನಾನು ಈಗ ಮಲಗುತ್ತೇನೆ.. ಆ  ಸಮಯಕ್ಕೆ ನನ್ನನ್ನು ಎಬ್ಬಿಸಿಬಿಡು"


ನನ್ನ ಸಂತೋಷಕ್ಕೆ.. ಸಂಭ್ರಮಕ್ಕೆ  ಮೇರೆಯೇ ಇಲ್ಲವಾಯಿತು..!!!


ಕೈಕಾಲು ಆಡದಂತಾಯಿತು ..!


ಬೆಡ್ ರೂಮಿಗೆ ಓಡಿದೆ... ಹೊಸ ಸೀರೆ ಉಟ್ಟುಕೊಳ್ಳಬೇಕಿತ್ತು... 
ಮ್ಯಾಚಿಂಗ್ ಬ್ಲೌಸ್...
ಕಿವಿಗೆ ಚಂದದ ಓಲೆ ಹಾಕಿಕೊಳ್ಳ ಬೇಕು...
ಕೈ ಬಳೆಗಳನ್ನು ಬದಲಿಸ ಬೇಕಿತ್ತು..
ಮುಖಕ್ಕೆ ತೆಳುವಾಗಿ ಕ್ರೀಮ್ ಹಚ್ಚಿ ಪೌಡರ್....
ಅಲಂಕಾರ ಮಾಡಿಕೊಳ್ಳಲೇ ಬೇಕಿತ್ತು...


ಅರೆವಸ್ಸಿನಲ್ಲೂ ನನ್ನ ಗಂಡನ ಮೆಚ್ಚುಗೆಯ ನೋಟ ನನಗೆ ಬೇಕಿತ್ತು...
ಈ ಕ್ಷಣಗಳಿಗಾಗಿ ಎಷ್ಟು ದಿನಗಳಿಂದ ಹಂಬಲಿಸಿದ್ದೆ...??
ಇದರಲ್ಲೇ ಬದುಕಿನ ಸಾರ್ಥಕತೆ...


ಐದು ಗಂಟೆಯಾಯಿತು... ಗಂಡ ಹಾಲಿನಲ್ಲಿ ಕುಳಿತು ಪೇಪರ್ ಓದುತ್ತಿದ್ದ...


"ಬನ್ನಿ... ಬನ್ನಿ  ಸೂರ್ಯಾಸ್ತ  ಆಗ್ತಾ  ಇದೆ  .. ಅಲ್ಲಿ ಕುಳಿತುಕೊಳ್ಳೋಣ..."


ನನ್ನ ಸಡಗರ ಅವನಿಗೆ  ಆಶ್ಚರ್ಯ ಉಂಟುಮಾಡಿರಬೇಕು...!
ಎದ್ದು ಬಂದ...
ಕಲ್ಲು ಬೇಂಚಿನ ಒಂದು ಪಕ್ಕದಲ್ಲಿ ಕುಳಿತ.. ನಾನು ಮತ್ತೊಂದು ಪಕ್ಕದಲ್ಲಿ ಕುಳಿತೆ...!


"ಯಾಕೆ ದೂರ ಕುಳಿತಿದ್ದೀಯಾ.. ಚಿನ್ನು.. ಹತ್ತಿರ ಬಾ..."


ಎನ್ನುತ್ತ  ಹತ್ತಿರ ಎಳೆದುಕೊಂಡ... 
ಸಾವಕಾಶವಾಗಿ ನನ್ನ ಹೆಗಲಿನ ಮೇಲೆ ಕೈ ಹಾಕಿದ...
ಎಂಥಹ ಕ್ಷಣಗಳು ಅವು...!!
ಅಬ್ಭಾ...!!
ನನಗೆ ರೋಮಾಂಚನವಾಯಿತು..!!


ಸೂರ್ಯ ಕೆಂಪು ಬಣ್ಣವಾಗುತ್ತಿದ್ದ... 
ಸಣ್ಣ ಸಣ್ಣ ಮೋಡಗಳು ಪಕ್ಕದಲ್ಲಿ ಸರೋವರದಂತೆ ಕಾಣುತ್ತಿದ್ದವು...


ಹದಿನೆಂಟು ವರುಷಗಳ ಆಸೆ ಈಡೇರುತ್ತಿದೆ...!!


ಐದು ನಿಮಿಷ ಆಯಿತು....


"ಕುಳಿತದ್ದು  ಆಯ್ತಲ್ಲ...ಚಿನ್ನು..!  
ಇನ್ನೇನು..?..??  "


"ರೀ.. ನನಗೆ ಇನ್ನೂ ಒಂದು ಆಸೆ ಇದೆ..."


" ಏನದು..?.." 


"ಈ...ಸಂಜೆಯಲ್ಲಿ ನಿಮ್ಮೊಡನೆ ಕುಳಿತು ಒಂದು ಹಾಡು ಕೇಳಬೇಕು....!!."


"ಅದಕ್ಕೇನು..?
 ಟೇಪ್ ರೆಕಾರ್ಡರ್ ತಗೊಂಡು ಬಾ.."


ನಾನು ಸಂಭ್ರಮದಿಂದ  ಒಳಗೆ ಓಡಿದೆ..!!
ಹದಿಹರೆಯದ  ಹುಡುಗಿಯಂತೆ...!!
ನನ್ನ ಮೆಚ್ಚಿನ  ಯೇಸುದಾಸನ ಹಾಡಿನ ಸಿಡಿ ಹಾಕಿ ತೆಗೆದು ಕೊಂಡು ಬಂದೆ...
ಹಾಡು ಹಾಕಿದೆ...


" ಜಬ್.. ದೀಪ್..  ಜಲೆ... ಆನಾ...
ಜಬ್  ಶಾಮ್..  ಢಲೆ ..ಆನಾ......"

ಬಹಳ ಸುಂದರವಾದ ಹಾಡು....

ಹಾಡೂ ಮುಗಿಯಿತು....


"ಇನ್ನೇನು... ಎಲ್ಲ  ಆಯಿತಲ್ಲ..!!..?.."


"ಇಲ್ಲಾರಿ.. 
ಇನ್ನೂ ಸ್ವಲ್ಪ ಹೊತ್ತು ಕುಳಿತು ಕೊಳ್ಳೋಣ.. 
ಹೀಗೆಯೇ ಕುಳಿತು ಕೊಳ್ಳೋಣ...
ಆ ಸೂರ್ಯ ಮುಳುಗುವದನ್ನೇ ನೋಡುತ್ತಿರೋಣ...
ಏನಾದರೂ ಮಾತಾಡೋಣ... 
ನೀವೂ ಮಾತಾಡಿ..!
ನಾವಿಬ್ಬರೂ  ಮಾತನಾಡುತ್ತಲೇ ಇರೋಣ..!!.."


"ಆಯ್ತು.. ಕಣೆ.. ಚಿನ್ನು.."


ನಾನು ಅವನ ಕಣ್ಣುಗಳನ್ನೇ... ದಿಟ್ಟಿಸುವ  ಪ್ರಯತ್ನ ಮಾಡಿದೆ...
ಆ ನೋಟದಿಂದ ಅವನ  ಹೃದಯದ ಆಳಕ್ಕೆ ಹೋಗ ಬಹುದಾ...?


ನನಗೆ ಸಂತೋಷದಿಂದ ಕಣ್ಣೀರು ಬರುವಂತಾಯಿತು..
ಬೇಡ.. ಬೇಡ ವೆಂದರೂ ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರಿದವು....
ನನ್ನ ಗಂಡ.. ನನ್ನವ... ನನ್ನನ್ನು ಪ್ರೀತಿಸುತ್ತಾನೆ...!
ಇದಕ್ಕಿಂತ  ಏನು ಬೇಕು...
ನಿಶ್ಚಿಂತೆಯಿಂದ ಸಾಯಬಹುದಾದ ಕ್ಷಣಗಳು ಅವು...!!


ಸಾವಕಾಶವಾಗಿ ಅವನ ತೋಳುಗಳನ್ನು ಹಿಡಿದು ಕೊಂಡು ಅವನ ಭುಜಕ್ಕೆ ಒರಗಿದೆ...


" ಚಿನ್ನು  ಪುಟ್ಟಾ...
ನನಗೂ ನಿನ್ನ ಬಳಿ ಮಾತನಾಡ ಬೇಕಿತ್ತು ಕಣೆ...
ಬಹಳ ದಿನಗಳಿಂದ ವಿಚಾರ ಮಾಡುತ್ತಿದ್ದೆ...
ಆದರೆ ಹೇಗೆ ಮಾತನಾಡುವದು..?..."


" ನನ್ನ ಬಳಿ ಮಾತನಾಡ ಬೇಕಾ...? 
ಅದಕ್ಕೇನು...?
ಏನು ಬೇಕಾದರೂ ಮಾತನಾಡಿ.."


ನನ್ನ ಸಂತೋಷಕ್ಕೆ ಮಿತಿಯೇ ಇಲ್ಲವಾಯಿತು.. 
ಅವನ ತೋಳುಗಳನ್ನು ಇನ್ನೂ ಗಟ್ಟಿಯಾಗಿ ಹಿಡಿದುಕೊಂಡು ಕಣ್ಣು ಮುಚ್ಚಿಕೊಂಡೆ...
ಕಣ್ಣು ಮುಚ್ಚಿಕೊಂಡರೂ ಕಣ್ಣಿರು ಬರುತ್ತಿತ್ತು.... ಸಂತೋಷದಿಂದ...


"ಏನೂ ಇಲ್ಲ ಕಣೆ..
ನನ್ನ  ಬಿಸಿನೆಸ್ ಸ್ವಲ್ಪ  ನಷ್ಟದಲ್ಲಿದೆ..
ನಿನ್ನ  ತವರಿನಲ್ಲಿ ಕೊಟ್ಟ ಬಂಗಾರದ ಒಡವೆ..
ಹಾಗೂ ನಮ್ಮನೆ ಒಡವೆಗಳನ್ನು  ಕೊಟ್ಟರೆ ಚೆನ್ನಾಗಿತ್ತು..
ಬ್ಯಾಂಕಿನಲ್ಲಿಟ್ಟು ಹಣ ತೆಗೆದು ಕೊಳ್ಳುತ್ತಿದ್ದೆ..."


ಕತ್ತಲೆಯಾಗುತ್ತಿತ್ತು...

ಮುಖಗಳು ಕಾಣುತ್ತಿಲ್ಲವಾಗಿತ್ತು....


( ಇದು ಮೊದಲ ಕಥೆಯಂತೂ  ಅಲ್ಲ...
ಬ್ಲಾಗ್ ಶುರುಮಾಡಿದ ಮೇಲೆ  ಮೊದಲ ಪ್ರಯತ್ನ...
ಇದು  ಹೇಗಿದೆ...? 
ನಿಮ್ಮ  ಅನಿಸಿಕೆ.. ನಿಮ್ಮ ಪ್ರೋತ್ಸಾಹ ಇನ್ನಷ್ಟು ಬರೆಯಲು  ಉತ್ಸಾಹ ಕೊಡುತ್ತದೆ...
ನಿಮ್ಮೆಲ್ಲರ  ಬ್ಲಾಗುಗಳಿಗೆ  ಬರಲಾಗಲಿಲ್ಲ...
ದಯವಿಟ್ಟು  ಕ್ಷಮಿಸಿ... ಇನ್ನು ಬರುತ್ತೇನೆ..)

95 comments:

Unknown said...

khatarnak ganda!

ಓ ಮನಸೇ, ನೀನೇಕೆ ಹೀಗೆ...? said...

ತುಂಬಾ ಚೆನ್ನಾಗಿದೆ ಪ್ರಕಾಶಣ್ಣ..!!.....
Its a reflection of real life. ಇಂಥ ವಾಸ್ತವವಾದಿಗಳು ತುಂಬಾ ಜನ ಸಿಗುತ್ತಾರೆ ಅನ್ನೋದು ನನ್ನ ಅನಿಸಿಕೆ.

Ittigecement said...

ಓದುಗರೆ..
ಹೆಸರು ಹೇಳಲು ಇಚ್ಛಿಸದ ಸಹೋದರಿಯೊಬ್ಬಳ ಅಭಿಪ್ರಾಯ ಇದು...
(ಈಮೇಲ್ ಕಳಿಸಿದ್ದಾರೆ)

ಪ್ರಕಾಶಣ್ಣ ...
ನಿಮ್ಮ ಈ ಕಲ್ಲು ಬೆಂಚು ಎಷ್ಟು ಚೆನ್ನಾಗಿದೆ ಅಂದ್ರೆ ನನ್ನ ಕಣ್ಣಲ್ಲಿ ನೀರು ಬಂತುರೀ, ಆ ಕಲ್ಲು ಬೆಂಚಿನ ಹಾಗಿನ ನನ್ನ ಜೀವನವೂ ಎಲ್ಲ ಇದೆ ಜೀವನದಲ್ಲಿ ಅಂದು ಕೊಂದವಳಿಗೆ ಕಡೆಗೆ ಅವಳು ಬಯಸಿದ ಪ್ರೀತಿ ಸಿಗಲೇ ಇಲ್ಲ ಎಂಥ ವಿಪರ್ಯಾಸ ಅಲ್ವ ಪ್ರಕಾಶಣ್ಣ, ಅಲ್ಲಿಯೂ ಅವಳ ಗಂಡ ವ್ಯವಹಾರವನ್ನೇ ಹೇಳುತ್ತಾನೆ ಎಂಥ ವಿಪರ್ಯಾಸ ಅಲ್ವ ನೀವು ಬರೆದ ಕಲ್ಲು ಬೆಂಚಿನಲ್ಲಿ ಬರುವವಳು ನಾನೇ ಪ್ರಕಾಶಣ್ಣ ನನಗೆ ಅದನ್ನ ಓದುವಾಗ ನನ್ನದೇ ನೀವು ಬರೆದಿದ್ದೀರಿ ಅಂತ ಅನ್ನಿಸಿತು ಜೊತೆಯಲ್ಲಿ ಕಣ್ಣೀರು ಸಹ ಬಂತು ಪ್ರಕಾಶಣ್ಣ

ಮತ್ತೆ ಈ ತಂಗಿಯ ಧನ್ಯವಾದ ಸುಂದರವಾದ ನೋವಿನ ಕಲ್ಲು ಬೆಂಚಿಗೆ

ಮುಸ್ಸ೦ಜೆ said...

ಪ್ರಕಾಶಣ್ಣ,

ತು೦ಬಾ ಚೆನ್ನಾಗಿದೆ, ವಾಸ್ತವವೂ ಇರಬಹುದು. ಆದರೆ ಅವನ ಸ್ವಭಾವ ಬಿಟ್ಟು ನಾಟಕ ಮಾಡಿ ಆಭರಣ ಕೇಳುವ ಅವಶ್ಯಕತೆ ಇತ್ತ?
ಅದೆನೇ ಆದರೂ ಅವನ ಆ ವರ್ತನೆಯಲ್ಲಿ ಅವಳ ಕನಸು ಕ್ಷಣಕ್ಕದರೂ ಫಲಿಸಿತು ಎ೦ಬ ಸತ್ಯ ಒಪ್ಪಲೇ ಬೇಕು.

sunaath said...

ಪ್ರಕಾಶ,
ತುಂಬ ಚೆನ್ನಾಗಿ ಬರೆದಿದ್ದೀರಿ.

Savitha SR said...
This comment has been removed by the author.
Savitha SR said...

ಕಥೆ ಚೆಂದಿದೆ ಪ್ರಕಾಶಣ್ಣ...
ಅಬ್ಬಾ!!ಅದೆಂತಹ ನಿರ್ಭಾವುಕ ಗಂಡ!!ಹೀಗೂ ಕೂಡಾ ಇರ್ತಾರಾ? ಅವಶ್ಯಕತೆಯಿದ್ದರೆ ಮತ್ತೊಬ್ಬರ ಭಾವನೆಗಳನ್ನೂ ಸಹ ಬಿಡರು! ಜೋಕೆಯಿಂದಿರಬೇಕು!
ಇನ್ನಷ್ಟು ಕಥೆಗಳ ನಿರೀಕ್ಷೆಯಲ್ಲಿ :)
-ಸವಿತ

Ittigecement said...

ಸುಮನಾ....

ಸ್ವಭಾವ ಬದಲಾಗುವದು ಕಷ್ಟ....!

ನನಗೆ ಆಶ್ಚಯ್ರವೆನಿಸುವದು..
"ಗಂಡ ಹೆಂಡತಿ" ಜೋಡಿಯಾಗಿ ಬಾಳುವದು..
ಭಿನ್ನ ಅಭಿಪ್ರಾಯವಿದ್ದರೂ..
ಒಂದೇ ಸೂರಿನಡಿಯಲ್ಲಿ ಜೀವನ ಪೂರ್ತಿ..
ದ್ವಂದ್ವ, ವಿರುದ್ಧ ಸ್ವಭಾವಗಳಿದ್ದರೂ...
ಏನೋ ಒಂದು ಅರ್ಥವನ್ನು ಅಲ್ಲಿ ಹುಡುಕಿಕೊಂಡು...
ಬಾಳುವದಿದೆಯಲ್ಲ...
ಅದು ಆಶ್ಚರ್ಯ...!!

ಅದು ಅಷ್ಟು ಅನಿವಾರ್ಯವಾ...?

ಭಾವುಕತೆ...
ವಾಸ್ತವಿಕತೆ... ಇವುಗಳ ಜೋಡಿಯಾಗುವದು ಮತ್ತೊಂದು ಆಶ್ಚರ್ಯ...!

ಧನ್ಯವಾದಗಳು...

Ittigecement said...

ಚೇತನಾರವರೆ....

ವಾಸ್ತವಿಕತೆ, ಮತ್ತು ಭಾವುಕತೆಯ ನಡುವಿನ ಒಂದು ಗೆರೆಯಲ್ಲಿದ್ದರೆ ಒಳ್ಳೆಯದೆಂಬುದು ನನ್ನ ಭಾವನೆ...

ತೀರಾ ಭಾವುಕತೆಯ ಬದುಕು ಬಹಳ ಕಷ್ಟ..
ಭಾವುಕರಿಗೂ ಮತ್ತು ಅವರೊಡನೆ ಬದುಕುವವರಿಗೂ ಸಹ....

ಹೆಚ್ಚಿನ ವಾಸ್ತವಿಕತೆಯವರು ಬಾಳಿನಲ್ಲಿ ಯಶಸ್ವಿಯಾಗಿದ್ದಾರೆಂಬುದು ನಾವು ಗಮನಿಸಬೇಕು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಸುಪ್ತವರ್ಣ said...

Way to go sir! ಚೆನ್ನಾಗಿ ಬರೆದಿದ್ದೀರಿ!

Ittigecement said...

ಪ್ರೀತಿಯ ಸಹೋದರಿ...

ನಾನು ಬರೆದದ್ದು ಕಥೆಯಾದರೂ..
ಕೆಲವಷ್ಟು ನನ್ನ ಪರಿಚಿತರ ಅನುಭವಗಳು.. ಇವು..
ಒಂದು ಹೆಣ್ಣಾಗಿ..
ಅವಳ ಆತ್ಮನಿವೇದನೆ ಮಾಡುವದು...ಕಷ್ಟ...
ನಿಮ್ಮ ಪ್ರತಿಕ್ರಿಯೆ ನನಗೆ ಬಹಳ ಉತ್ಸಾಹ ಕೊಟ್ಟಿದೆ...

ನಿಮ್ಮ ಗಂಡ ನಿಮ್ಮ ಬಳಿ ಮಾತನಾಡಲಿ...
ನಗುತ್ತಿರಲಿ..
ನಿಮ್ಮ ಕಣ್ಣೀರು ದೂರವಾಗಲಿ..

ನಮ್ಮೆಲ್ಲರ ಶುಭ ಹಾರೈಕೆಗಳು ನಿಮಗಿವೆ...

ಪ್ರಕಾಶಣ್ಣ..

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,
ಕತೆಯ ವ್ಯಥೆಯ ಚಿತ್ರಣ ಸೊಗಸಾಗಿದೆ. ನಿಮ್ಮ ಎಂದಿನ ಶೈಲಿಯಿಂದ ಹೊರ ಬಂದು ಈ ಬರಹಕ್ಕೆ ಕೈ ಇಟ್ಟಿದ್ದೀರಿ. ತನ್ನ ಕಣ್ಣೆದುರು ತನ್ನಿಷ್ಟದಂತೆ ಬದುಕಲಾಗದೆ ಬದುಕಿದ ಬದುಕು ಕೈಜಾರಿ ಹೋಗುತ್ತಿರುವುದನ್ನು ನೋಡುವ ಹೆಣ್ಣು ಮಗಳ ನೋವು ಮನ ಮುಟ್ಟುತ್ತದೆ.

***ನಾನು ಬ್ಲಾಗಿನ ಮನೆಯತ್ತ ಬರದೆ ತಿಂಗಳು ಕಳೆದಿದೆ, ಕೆಲಸದ ಒತ್ತಡ ತೀವ್ರವಾಗಿದೆ, ಇದಕ್ಕೆ ದಯವಿಟ್ಟು ಕ್ಷಮೆಯಿರಲಿ.

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ...

ಪ್ರತಿಯೊ೦ದು ಪದಗಳನ್ನೂ ತು೦ಬಾ ಸು೦ದರವಾಗಿ ಬಳಸಿಕೊ೦ಡಿದ್ದೀರಾ... ಪ್ರಕಾಶಣ್ಣ... ನಿಮ್ಮ ಎ೦ದಿನ ಶೈಲಿಗಿ೦ತ ವಿಭಿನ್ನವಾಗಿದೆ ಕೂಡ...

"ಇಷ್ಟು ಕಾಲ ಒಟ್ಟಿಗಿದ್ದೂ ಎಷ್ಟು ಬೆರೆತರೂ... ಅರಿತೆವೇನು ನಾವು ನಮ್ಮ ಅ೦ತರಾಳವ...." ಅನ್ನುವ ಕವಿತೆ ಈ ಕಥೆಗೆ ಸ೦ವಾದಿಯಾಗಿ ನಿಲ್ಲುತ್ತದೆ. ಅದೆಷ್ಟೋ ದಾ೦ಪತ್ಯದಲ್ಲಿ ಸ೦ಗಾತಿಗಳು ಒಬ್ಬರಿಗೊಬ್ಬರು ಅಪರಿಚಿತರಾಗೇ ಉಳಿದುಬಿಡುತ್ತಾರೆ.... ಹೊರಗೆ ಸಾಮಾನ್ಯವಾಗಿ ಕಾಣುವ೦ತೆ ಮುಖವಾಡ ಹಾಕಿಕೊ೦ಡಿರುತ್ತಾರ. ತು೦ಬಾ ಚ೦ದದ ಕಥೆ....

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ತುಂಬಾ ಚೆನ್ನಾಗಿ ಕಥೆ ಬರೆದಿದ್ದಿರಾ,
ಶೈಲಿ ಎಂದಿನಂತೆ ಸೊಗಸಾಗಿದೆ
ಸ್ಪರ್ಧಾತ್ಮಕ ಯುಗದಲ್ಲಿ ಗಂಡ ಹೆಂಡತಿ ಮಾತನಾದಲಾರದಷ್ಟರ ಮಟ್ಟಿಗೆ
ಇಂದು ಹಣದ ವ್ಯಾಮೊಹವಿದೆ
ಕೆಲಸದ ಒತ್ತಡವೂ ಇದಕ್ಕೆ ಕಾರಣ
ಮೊದಲಿನ ಸಂಸಾರದ ಸಂಭಂಧಗಳೂ ಗಳೂ ನಿಧಾನ ನಶಿಸುತ್ತಿವೆ
ಒಳ್ಳೆಯ ಕಥೆ

ಆನಂದ said...

ಹದಿನೆಂಟು ವರ್ಷಕ್ಕೆ ಗಂಡ ಬದಲಾದಾಗಲೇ ಅಂದ್ಕೊಂಡೆ ಏನೋ ಸ್ಕೀಮಿದೆ ಅಂತ, ಕೊನೆಗೆ ಗೊತ್ತಾಯ್ತು... :)
ಚೆನ್ನಾಗಿದೆ

Ittigecement said...

ಮುಸ್ಸಂಜೆ ಇಂಪು...

ನಿಮ್ಮ ಸಂಶಯ ಸರಿಯಾಗಿದೆ...

ಕಳೆದ ಹದಿನೆಂಟು ವರ್ಷದಿಂದ ತನ್ನ ಹೆಂಡತಿಯ ಭಾವುಕತನವನ್ನು...
ತನ್ನ ವ್ಯವಹಾರಿಕ ಬುದ್ಧಿಯಿಂದ ಗಂಡ ನೋಡಿದ್ದಾನೆ.

ಮೊದಮೊದಲು ನಿರ್ಭಾವುಕತೆಯಿಂದ ಮಾತನಾಡಿದರೂ..
ಇಳಿವಯಸ್ಸಿನಲ್ಲಿ ಮುಖ ಮುರಿದ ಹಾಗೆ ಹೇಳುವದು ಕಷ್ಟವಾಗುತ್ತದೆ..

ಹಾಗಾಗಿ ತನ್ನ ದಿನವೆಲ್ಲ ಅವಳೊಡನೆ ಕಳೆದು...
ತಾನೂ ಸಹ ಭಾವುಕನಂತೆ ನಟಿಸಿ..
ಅವಳ ಬಳಿ ಕೇಳಿದ್ದಾನೆ...!

ನಿಮ್ಮ ಪ್ರತಿಕ್ರಿಯೆ ಖುಷಿಯಾಯಿತು...
ಪ್ರೋತ್ಸಾಹ ಹೀಗೆಯೇ ಇರಲಿ....

Ittigecement said...

ಸುನಾಥ ಸರ್....

ಇದು ಕಲ್ಪನೆಯ ಕಥೆಯಾದರೂ..

ನನ್ನ ಬಹಳ ಕ್ಲಾಸ್ ಮೇಟ್ ಒಬ್ಬರ ಗಂಡ ಇದೇ ಥರಹ ಇದ್ದಾರೆ...
ಇದೇ ರೀತಿ ವ್ಯವಹಾರಸ್ಥ...
ಜೀವನದ ಪ್ರತಿ ಘಟನೆಯನ್ನು,
ಆಗು ಹೋಗುಗಳನ್ನು...
ಬಾಂಧವ್ಯವನ್ನೂ ಸಹ ವ್ಯವಹಾರಿಕವಾಗಿ ನೋಡುತ್ತಾರೆ....

ಆದರೆ ಇನ್ನೂ ಹೆಂಡತಿಯೊಡನೆ ನಗುವ ಸಂದರ್ಭ ಬರಲಿಲ್ಲ...

ಅವಳು ಬಹಳ ಭಾವುಕಳು...
ಸಾಹಿತ್ಯ, ಸಂಗೀತ ಅಂದರೆ ಪ್ರಾಣ ಬಿಡುತ್ತಾಳೆ...

ತನ್ನೆಲ್ಲ ಆಸೆಗಳನ್ನ,
ಅಭಿರುಚಿಗಳನ್ನು.. ಹತ್ತಿಕ್ಕಿಕ್ಕೊಂಡು ಬದುಕುತ್ತಿದ್ದಾಳೆ...

ಇಂಥಹ ಬದುಕುಗಳು ಎಷ್ಟಿವೆಯೋ...... ನಮ್ಮ ಸಮಾಜದಲ್ಲಿ...


ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಚಿತ್ರಾ said...

ಪ್ರಕಾಶಣ್ಣ,

ಶೈಲಿ ನಿನ್ನದೇ ಆದರೂ , ಭಾವ ಬೇರೆ !
ಓದುತ್ತಾ ಮನಸಿನಲ್ಲಿ ಒಂಥರಾ ವಿಷಾದ ತುಂಬಿತು. ಯಾವುದೋ ಕನಸಿನ ಹಿಂದೆ, ಕೇವಲ ಅದನ್ನೇ ಗುರಿಯಾಗಿಟ್ಟುಕೊಂಡು ಆಚೀಚೆ ನೋಡದೆ ಹೋಗುವ ಮನುಷ್ಯನಿಗೆ ತನ್ನ ಸಂಗಾತಿಯ ಕನಸುಗಳನ್ನು ಹಿಸುಕುವ ಅಧಿಕಾರ ಇದೆಯೇ? ಪತಿಯೊಡನೆ ಕಲ್ಲುಬೆಂಚಿನ ಮೇಲೆ ಕುಳಿತು ಪ್ರೀತಿಯಿಂದ ಮಾತನಾಡುತ್ತಾ ಕೆಲ ಕ್ಷಣಗಳನ್ನಾದರೂ ಕಳೆಯುವ ಅವಳ ಕನಸು .... ಕೊನೆಗೂ ನನಸಾಗುವ ಕಾಲ ಬಂತೆಂದು ಅವಳು ಸಂಭ್ರಮಿಸಿದ ಪರಿ .... ಕಡೆಗೆ ಇಳಿವಯಸ್ಸಿನಲ್ಲಿ ಪತ್ನಿಯ ಬಹುವರ್ಷಗಳ ಬಯಕೆಯನ್ನು ಆತ ತೀರಿಸಿದ್ದದರೂ ಏಕೆ? ತನ್ನ ಸ್ವಾರ್ಥಕ್ಕೋಸ್ಕರವೇ !! ಎಂದಿಗೂ ಬದಲಾಗದ ಮನುಷ್ಯನ ಸ್ವಾರ್ಥಿ ಕಲ್ಲು ಮನಸ್ಸನ್ನು ಬಿಡಿಸಿಟ್ಟ ಬಗೆ ಚೆನ್ನಾಗಿ ಬಂದಿದೆ . ಇಂಥಾ ಗಂಡನಾದರೆ , ಏಳು ಜನ್ಮದ ಮಾತಿರಲಿ ಏಳು ನಿಮಿಷಗಳೂ ಕೂಡ ಆತನ ಜೊತೆ ಬೇಕಾಗಿಲ್ಲ !
ಓದಿ ಮುಗಿಸಿದಾಗ ಕಣ್ಣಂಚಿನಲ್ಲಿ ಮೂಡಿದ ಹನಿಗಳು , ಇಂಥದೇ ಜೀವನವವನ್ನು ಜೀವಿಸುತ್ತಿರುವ ಅದೆಷ್ಟೋ ಹೆಣ್ಣು ಜೀವಗಳ ನೋವಿಗೆ ಕಾಣಿಕೆ .
ಅಳಿಸಿದ್ದಕ್ಕೆ ಧನ್ಯವಾದಗಳು !

ಶಿವಪ್ರಕಾಶ್ said...

ಪ್ರಕಾಶಣ್ಣ,
ಎಂತ ಸ್ವಾರ್ತಿ ಅಲ್ವಾ... ನಿಜಜೀವನದಲ್ಲಿ ಬಹಳಷ್ಟು ಜನ ಹೀಗೆ ಇರ್ತಾರೆ...
ಕಥೆ ತುಂಬಾ ಚನ್ನಾಗಿ ಮೂಡಿಬಂದಿದೆ..

ರಾಜೀವ said...

ಕಥೆಯ ನಿರೂಪಣೆ ಚೆನ್ನಾಗಿದೆ.
ಗಂಡ-ಹೆಂಡತಿ ಇಬ್ಬರೂ ಭಾವಜೀವಿಗಳಾಗಿಬಿಟ್ಟರೆ ಸಂಸಾರ ಕೆಲವೇ ದಿನಗಳು ಮಾತ್ರ ಚೆನಾಗಿರುತ್ತದೆ ಎಂದು ಅನುಭವಂತರು ಹೇಳುವುದನ್ನು ಕೇಳಿದ್ದೇನೆ.
"ಅನ್‍ಲೈಕ್ ಪೋಲ್ಸ್ ಅಟ್ಟ್ರಾಕ್ಟ್" ಅಂತಾರಲ್ಲ ಹಾಗೆ.
ನೀವೇನಂತೀರ?

ಸವಿಗನಸು said...

ಪ್ರಕಾಶಣ್ಣ,
ಇಂತಹ ಜನ ಇರೋದಕ್ಕೆ ಪ್ರಪಂಚ ಹೀಗಾಗಿರೋದು.....
"ಕಣ್ಣು ಮುಚ್ಚಿಕೊಂಡರೂ ಕಣ್ಣಿರು ಬರುತ್ತಿತ್ತು.... ಸಂತೋಷದಿಂದ..." ಸಾಲುಗಳು ಓದುತ್ತಿದ್ದರೆ ಪಾಪ ಆ ಮನಸು ಎಷ್ಟು ನೊಂದಿರಬಹುದು ಅಂತ ತಿಳಿಯುತ್ತೆ ಅಲ್ವ.....

ಭಾವನಾತ್ಮಕ ಲೇಖನ.....

ನಿಮಗೆ ಈಮೇಲ್ ಕಳುಹಿಸಿದ ಆ ಸಹೋದರಿಗೆ ಗಂಡನ ಪ್ರೀತಿ ಸಿಗಲಿ....
ಕಣ್ಣೀರು ದೂರವಾಗಿ ಸದಾ ನಗುತ್ತಿರಲಿ.....
ಶುಭ ಹಾರೈಕೆಗಳು......

ಮೌನಿ said...

ಪ್ರಕಾಶಣ್ಣಾ.....
ಇದು ವಾಸ್ತವಕ್ಕೆ ಹತ್ತಿರ ಅನ್ನಿಸಿತು.ಇಂತಹವರು ತುಂಬ ಜನ ಸಿಗುತ್ತಾರೆ ಕೂಡ.ಆದರೆ ನನಗೆ ಕಥಾ ನಾಯಕ ಎಲ್ಲೂ ತನ್ನ ವ್ಯವಹಾರ ಬುದ್ಧಿಯಿಂದ ಹೊರಬಂದು ಮಾತನಾಡಿದ ಹಾಗೆ ಕಾಣಲಿಲ್ಲ.ಅವನು ತುಂಬಾ ವ್ಯಾವಹಾರಿಕವಾಗಿಯೇ ಹೊರತು ಭಾವನೆಗಳಿಗೆ ಸಿಗದೆ ಮಾತನಾಡಿದ ಅನ್ನಿಸಿಬಿಟ್ಟಿತು.ಬೇಕಾದದ್ದನ್ನು ಪಡೆಯುವ ಚಾಣಾಕ್ಷ್ಯ ವ್ಯಾಪಾರಿಯ ಹಾಗೆ.
ತುಂಬಾ ಚೆನ್ನಾಗಿದೆ.

PARAANJAPE K.N. said...

ವಾಸ್ತವದ ನೆಲೆಗಟ್ಟಿನಲ್ಲಿ ಮೂಡಿ ಬಂದ ನಿಮ್ಮ ಕಥೆ ಚೆನ್ನಾಗಿದೆ.

ಬಿಸಿಲ ಹನಿ said...

ಪ್ರಕಾಶ್ ಸರ್,
ಕುತೂಹಲದ ಆರಂಭ, ಮಧ್ಯದ ಒಂದು twist, ವಿಷಾದದ ಅದ್ಭುತ climax ಹೊಂದಿರುವ ನಿಮ್ಮ ಕಥೆ ನಿಜಕ್ಕೂ ಗಮನ ಸೆಳೆಯುತ್ತದೆ. ಇನ್ನಷ್ಟು ಇಂಥ ಕಥೆಗಳನ್ನು ಉಣಬಡಿಸಿ.

Shantala Sayimane said...

ಪ್ರಕಾಶಣ್ಣ
ಕಥೆ ತುಂಬಾ ಚೆನ್ನಾಗಿದೆ. ಇದನ್ನು ಕಥೆ ಎನ್ನುವುದಕ್ಕಿಂತ ತುಂಬಾ ಜನರ ಜೀವನದಲ್ಲಿ ನಡೆಯುವಂತಹ ಘಟನೆ ಎನ್ನಬಹುದು. ಇಂತಹುದೇ ಘಟನೆಗಳನ್ನು ಕೆಲವರು ನನ್ನ ಬಳಿ ಹೇಳಿಕೊಂಡು ಅತ್ತಿದ್ದಿದೆ.

ನನ್ನದೂ ಒಂದು ಕನಸಿತ್ತು.....ಕೈ-ಕೈ ಹಿಡಿದುಕೊಂಡು ಸಿರಸಿ ಜಾತ್ರಪೇಟೆ ಸುತ್ತಬೇಕೆಂದು, ಮದುವೆಯಾಗಿ ಆರು ವರ್ಷಗಳು ಕಳೆಯುತ್ತಾ ಬಂದರೂ ಇನ್ನೂ ನೆರವೇರಿಲ್ಲ........:)

Ittigecement said...

ಸವಿತಾ ಆರ್......

ನನ್ನ ಬ್ಲಾಗಿಗೆ ಸ್ವಾಗತ..

ಯಾಕೊ ಈ ನಡುವೆ.. "ನಾಗು, ಪೆಟ್ಟಿಗೆ ಗಪ್ಪತಿಗಳ ಬಗೆಗೆ ಬರೆದು ಬೋರ್ ಆಗಿಬಿಟ್ಟಿತ್ತು.
ಕಥೆ ಬರೆಯೋಣ ಅನಿಸಿತು.
ಬರೆದೆ...
ಬರೆದ ಕಥೆ ಓದುಗರಿಗೆ ಹೇಗನ್ನಿಸುತ್ತದೆ.. ಎನ್ನುವ ಹೆದರಿಕೆ ಇತ್ತು..

ನನ್ನ ಮಿತ್ರರಿಗೆ ಕಳುಹಿಸಿದೆ..
ಕೆಲವು ತಪ್ಪುಗಳನ್ನು ತಿದ್ದಿಸಿದರು..

ಎಲ್ಲರಿಗೂ ನನ್ನ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹ ಇನ್ನಷ್ಟು ಬರೆಯಲು ಉತ್ಸಾಹ ಕೊಟ್ಟಿದೆ...

Naveen ಹಳ್ಳಿ ಹುಡುಗ said...

Prakashanna... Kathe munduvareyali...

ದಿನಕರ ಮೊಗೇರ said...

ಇದ್ದರೆ ಇರ ಬೇಕು ಸಣ್ಣದಾದ ಕೊರತೆ..
ಹೆಚ್ಚುವದು ಪ್ರೇಮದ ಒರತೆ...
ಪ್ರಕಾಶಣ್ಣ,
ಕಥೆ ತುಂಬಾ ಚೆನ್ನಾಗಿದೆ.... ಕಥೆಯ ಅಂತ್ಯವನ್ನ ನಾನು ಏನೇನೋ ಊಹಿಸಿದ್ದೆ, ಆದರೆ ನಾನು ಊಹಿಸಿದಕ್ಕಿಂತ ವಿಭಿನ್ನವಾಗಿ ಬಂದಿದೆ..... ಪ್ರೀತಿ ಇಲ್ಲದ ಜೀವನದ ಮುಖತೋರಿಸಿದ್ದೀರಿ.........

Guruprasad said...

ತುಂಬ ಚೆನ್ನಾಗಿ ಇದೆ ಪ್ರಕಾಶಣ್ಣ .. ವೆರಿ ನೈಸ್.... ಎಂತಹ ಭಾವನೆ, ಕನಸು,,,,,,

geeta bhat said...

Wow nice story!!
Tumba dinada nantara ondu oolle story....taali kattida gandana jotege yantrikavada baduku...jotege karulaballinu appana achhu, abba enta naraka irabahudu aa baduku.....??? adu ontara 'Jeevavadhi'shikshene sari.Hennu thyagamayee annodeno sari,adre istondu SAHANAMAYEE aagirabeka..........

Ittigecement said...

ಸಪ್ತವರ್ಣ...

ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ..
ತುಂಬಾ ಕೆಲಸದ ಒತ್ತಡದಲ್ಲಿದ್ದೇನೆ.
ದಯವಿಟ್ಟು ಬೇಸರಿಸ ಬೇಡಿ.

"ಹೆಸರೇ ಬೇಡ" ಪುಸ್ತಕವನ್ನು ಇನ್ನೂ ಸಹ ಕಳುಹಿಸಲು ಸಾಧ್ಯವಾಗುತ್ತಿಲ್ಲ...

ನಾನು ಬರೆದ ಈ ಪುಸ್ತಕ ನವಕರ್ನಾಟಕದ ಎಲ್ಲ ಮಳಿಗೆಗಳಲ್ಲಿ.. ಎಲ್ಲ ಪಟ್ಟಣದಲ್ಲಿ ಸಿಗುತ್ತದೆ.

ಹಾಗೆಯೇ "ಅಂಕಿತ" ಪುಸ್ತಕದಲ್ಲೂ ಸಹ ಸಿಗುತ್ತದೆ..

ಸಪ್ತವರ್ಣ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Ittigecement said...

ರಾಜೇಶ್...

ಮೊದಲು "ಅನ್ನ"
ಬದುಕಿಗಾಗಿ ಅದನ್ನು ಮಾಡಲೇ ಬೇಕಾಗುತ್ತದೆ.

ನಂತರದ್ದು "ಆನಂದ" ಹವ್ಯಾಸಗಳು ಇತ್ಯಾದಿ...

ಕೆಲಸದ ಒತ್ತಡದ ನಡುವೆಯೂ ಪ್ರತಿಕ್ರಿಯೆ ಕೊಟ್ಟಿದ್ದು ಖುಷಿಯಾಯಿತು.


ಮನುಷ್ಯನ ಭಾವ ಬಣ್ಣಗಳ ಬಗ್ಗೆ ಬರೆಯಬೇಕೆಂದು ಬಹಳ ದಿನಗಳಿಂದ ವಿಚಾರ ಕೊರೆಯುತ್ತಿತ್ತು...
ಇದು ನಿಮಗೆಲ್ಲ ಇಷ್ಟವಾಗಿದ್ದು ನನಗೆ ಖುಷಿಯಾಗಿದೆ.

ನಿಮ್ಮೆಲ್ಲರ ಪ್ರೋತ್ಸಾಹದ ಮಾತುಗಳು ಉತ್ಸಾಹ ಕೊಟ್ಟಿದೆ.
ಹಾಗಾಗಿ ನಾನು ಕಥೆಗಳನ್ನು ಬರೆಯ ಬಹುದಲ್ಲ...?

ರಾಜೇಶ್..
ತುಂಬಾ ತುಂಬಾ ಧನ್ಯವಾದಗಳು...

Ittigecement said...

ಸುಧೇಶ್...

ಹೆಣ್ಣಿನ ತ್ಯಾಗ ಮನೋಭಾವನೆಯನ್ನು ಗಂಡು ಅಪಾರ್ಥ ಭಾವಿಸುತ್ತಾನೆ ಎಂಬುದು ನನ್ನ ಅನಿಸಿಕೆ.
ನಮ್ಮ ದೇಶದ ವಿವಾಹ ಪದ್ಧತಿಯಲ್ಲಿನ ದೋಷಗಳಲ್ಲಿ ಇದೂ ಒಂದು..
ಆದರೆ ನಮ್ಮ ವೈವಾಹಿಕ ರೀತಿ ಹೆಚ್ಚಿನ ಯಶಸ್ಸು ಕಂಡಿದೆ (?) ಅನ್ನುವದು ಸಮಿಕ್ಷೆಯಿಂದ ಧೃಢ ಪಟ್ಟಿದೆ.

ಎರಡು ವಿಭಿನ್ನ ಸ್ವಭಾವದ ವ್ಯಕ್ತಿಗಳು..
ಜೀವನ ಪೂರ್ತಿ ಒಟ್ಟಿಗೆ ಬಾಳುವಾಗ...
ತ್ಯಾಗ ಎಂಬ ಶಬ್ಧ ..
ಹೊಂದಾಣಿಕೆ ಶಬ್ಧದ ಅರ್ಥ
ಕಾರ್ಯಗತವಾಗಲೇ ಬೇಕು...

ಆಗ ವೈವಾಹಿಕ ಜೀವನ ಯಶಸ್ವಿಯಾಗಲು ಸಾಧ್ಯ .. ಅಲ್ಲವಾ?

ನೀವಿನ್ನೂ ಮದುವೆಯಾಗಿಲ್ಲದ ಹುಡುಗ...
ಯಕೆ ಇಷ್ಟೆಲ್ಲ ವಿಚಾರ...?

ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಸುಧೇಶ್....

Ittigecement said...

ಗುರುಮೂರ್ತಿಯವರೆ...

ಈ ಮೊದಲು ನಾನೊಂದು ಕಥೆ ಬರೆದಿದ್ದೆ...
ಇಪ್ಪತ್ತೈದು ವರ್ಷಗಳ ಹಿಂದೆ.

ಅದರ ಬಗೆಗೆ ಎಲ್ಲರೂ ಬೈದಿದ್ದರು. ಹಾಗಾಗಿ ಬರೆಯುವದನ್ನು ಬಿಟ್ಟು ಬಿಟ್ಟಿದ್ದೆ.

ಈ ಬ್ಲಾಗು..
ನಿಮ್ಮೆಲ್ಲರ ಪ್ರೋತ್ಸಾಹ ಮತ್ತೆ ನನಗೆ ಬರೆಯುವ ಉತ್ಸಾಹ
ಪ್ರೇರಣೆ ಕೊಡುತ್ತಿದೆ...

ಬರೆಯುವದು ನನ್ನ ಖುಷಿಗೆ ಆದರೂ..
ನಿಮ್ಮ ಪ್ರೋತ್ಸಾಹ ಇರುವವರೆಗೆ ನಾನು ಬರೆಯುವೆ...

ನಿಮ್ಮೆಲ್ಲರ ಪ್ರೋತ್ಸಾಹ ನನಗೊಂದು ಹೊಸ "ಗುರುತು" ಕೊಟ್ಟಿದೆ..

ನಿಮಗೆಲ್ಲ ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ಧಗಳಿಲ್ಲ.

ತುಂಬಾ... ತುಂಬಾ ಧನ್ಯವಾದಗಳು...

Ittigecement said...

ಆನಂದರವರೆ...

ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ...
ದಯವಿಟ್ಟು ಬೇಸರಿಸದಿರಿ...

ಕಳೆದ ಆರೆಂಟು ತಿಂಗಳಲ್ಲಿ ಬಿಸಿನೆಸ್ಸ್ ಸ್ವಲ್ಪ ಡಲ್ಲಾಗಿತ್ತು...
ಸ್ವಲ್ಪ ಸಮಯವೂ ಸಿಗುತ್ತಿತ್ತು...

ಈಗ ವಿಪರೀತ ಕೆಲಸದ ಒತ್ತಡ..
ಆದರೆ ನನಗೆ ಹೊಸ "ಗುರುತು" ಕೊಟ್ಟ..
ಈ ಬ್ಲಾಗ್...
ಬ್ಲಾಗ್ ಗೆಳೆಯರನ್ನು ಮರೆಯಲಾರೆ...

ಕೇವಲ ನನ್ನ ಬರಹಗಳನ್ನು ಓದುವದಕ್ಕಾಗಿ ಬ್ಲಾಗ್ ಸೃಷ್ಟಿಸಿಕೊಂಡ ನನ್ನ ಮಿತ್ರರಿಗೆ ನನ್ನ ಧನ್ಯವಾದಗಳು...

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನನ್ನಲ್ಲಿ ಮಾತುಗಳಿಲ್ಲ...

ಧನ್ಯವಾದಗಳು ಆನಂದ....

AntharangadaMaathugalu said...

ಪ್ರಕಾಶ್ ಅವರೇ...
ಕಥೆ ಬಹಳ ಭಾವುಕವಾಗಿವೆ. ಹಣ ಬೇಕು ಆದರೆ ಅದೇ ಜೀವನವಾಗಬಾರದು. ಭಾವುಕ ಹೆಂಡತಿಗೆ practical ಗಂಡ... ಹಣದ ವಿಷಯಕ್ಕೆ ಅಮ್ಮ ಒಂದು ಗಾದೆ ಹೇಳ್ತಿದ್ದರು.. "ಹಣವಿದ್ದ ಗಂಡ ಇದ್ದ್ರೇನು ಋಣವಿದ್ದಷ್ಟೇ ಹೆಂಡ್ತಿಗೆ ಸಿಗೋದು" ಅಂತ... ನಾನೀಗ ಆ ಗಾದೆಯನ್ನು ಹಣ ಬಿಟ್ಟು... ಭಾವುಕತೆಗೆ ಸರಿಮಾಡಿಕೊಂಡಿದ್ದೇನೆ. ಪರಸ್ಪರ ವ್ಯತಿರಿಕ್ತ ಸ್ವಭಾವದವರು ಗಂಡ ಹೆಂಡಿರಾದಾಗ, ಹೆಚ್ಚಾಗಿ ನೋವುಣ್ಣುವವಳು ಹೆಂಡತಿಯೇ... ಚಿಕ್ಕ ಚಿಕ್ಕ ಆಸೆಗಳು, ಜೊತೆಗೆ ಕಳೆಯುವ ಕ್ಷಣಗಳೇ successful ದಾಂಪತ್ಯಕ್ಕೆ ಭದ್ರ ಬುನಾದಿ ಹಾಕೋದು. ಅವೇ ಇಲ್ಲವಾದಾಗ, ಬದುಕು ಯಾಂತ್ರಿಕವೇ... ನಿಮ್ಮ way of expression ಚೆನ್ನಾಗಿದೆ.
ನಿಮಗೆ ಮಿಂಚಂಚೆ ಕಳುಹಿಸಿದ ಆ ನಮ್ಮ ಸೋದರಿಗೆ ಇಂತಹ ರಸ ಕ್ಷಣಗಳ ಅನುಭವ ಬೇಗನೇ ಸಿಗಲಿ, ಇಷ್ಟು ದಿನ ಇಲ್ಲದಿದ್ದ ಸಂತೋಷ ಇನ್ನು ಮೇಲಾದರೂ ಬರಲಿ ಎಂದು ಹಾರೈಸುವೆ......

ಮನಸು said...

ತುಂಬಾ ಚೆನ್ನಾಗಿದೆ.. ಈ ತರಹದ ಕಥೆಗಳು ನಿಜ ಜೀವನದಲ್ಲಿ ನಮ್ಮ ಸುತ್ತಮುತ್ತಲೇ ಎಷ್ಟೋ ನೆಡೆಯುತ್ತವೆ ಆದರೆ ಅದನ್ನ ಸರಿಪಡಿಸಲು ಸಾಧ್ಯವಾಗೋದೇ ಇಲ್ಲ. ಕಲ್ಲು ಮನಸಿನವನಿಗಿಂತ ಕಲ್ಲು ಬೆಂಚೇ ಮೇಲೆನಿಸಿರಬೇಕು ಆ ಬೆಂಚು ಕೂರಲಾದರು ಸ್ಥಳ ಕೊಡುತ್ತೆ ಎಂದು ಕಲ್ಲು ಬೆಂಚು ಆಸೆ ಪಟ್ಟು ಹಾಕಿಸಿದ್ದಾಳೆ.
ಹೆಣ್ಣಿನ ಮನದ ತುಮುಲ ಚೆನ್ನಾಗಿ ತಿಳಿಸಿದೀರಿ ನೀವು ಭಾವಜೀವಿಗಳು ಅದಕ್ಕೆ ಎಲ್ಲವನ್ನು ಅರ್ಥಮಾಡಿಕೊಳ್ಳುತ್ತೀರಿ.

Nisha said...

Mana kalakuva kathe. Intha katha nayakiyaru nammagala naduveye bahalastu mandi sigthare.

Ittigecement said...

ಚಿತ್ರಾ...

ನಮ್ಮ ದೇಶದ ದಾಂಪತ್ಯದಲ್ಲಿ ಪತ್ನಿಗೆ ಅರ್ಥಿಕ ಸ್ವಾಲಂಬನೆ ಇಲ್ಲ. (ಈಗಲ್ಲ)
ಈ ಥರಹದ ಗಂಡಿನ ಸ್ವಭಾವಕ್ಕೆ ಇದೇ ಕಾರಣ ಅಂತ ನನ್ನ ಅನಿಸಿಕೆ.

ಏನೇ ಆದರೂ ಒಂದು ವ್ಯಕ್ತಿಯ ಸಂತೋಷವನ್ನು, ಖುಷಿಯನ್ನು ಹೊಸಕಿ ಹಾಕುವ ಸ್ವಭಾವ ಖಂಡನೀಯ..
ತ್ಯಾಗ ಮನೋಭಾವದ ಈ ಮಡದಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಎದೆಗಾರಿಕೆ ಪತಿಮಹಾಷಯನಲ್ಲಿ ಇಲ್ಲ..

ಆ ಹಿಂಜರಿಕೆಯನ್ನು .., ತನ್ನ ದೌರ್ಬಲ್ಯವನ್ನು
ಅವಳನ್ನು ಅಲಕ್ಷಿಸುವ ನೆಪದಿಂದ ಸೇಡುತೀರಿಸಿಕೊಳ್ಳುತ್ತಿರ ಬಹುದಾ...?

ನನ್ನ ಕಥೆಗಿಂತ ಚಂದದ ಪ್ರತಿಕ್ರಿಯೆ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು...

Ittigecement said...

ಶಿವಪ್ರಕಾಶ್...

ಹೃದಯ ವೈಶಾಲ್ಯದ ಗಂಡ ಸಿಗುವದು ಕಡಿಮೆ..
ತನ್ನ ದೌರ್ಬಲ್ಯವನ್ನು..
ಹೆಂಡತಿಗೆ ಬಯ್ಯುವದರಿಂದಲೋ...
ಅಲಕ್ಷಿಸುವದರಿಂದಲೋ ಸೇಡು ತೀರಿಸಿಕೊಳ್ಳುವ ಗಂಡಂದಿರು ಜಾಸ್ತಿ...

ಅಂಥಹ ಒಂದು ಗಂಡನ ಚಿತ್ರಣ ಇದು...
ನಾನು ಬರೆದ ಕಥೆಯನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು...

Ittigecement said...

ರಾಜೀವ...

ನಿಮ್ಮ ಮಾತು ನಿಜ...

ಎರಡು ವಿಭಿನ್ನ ವ್ಯಕ್ತಿಗಳು..
ತಾವು ಬೆಳೆದ ಪರಿಸರ, ಸ್ವಭಾವಗಳ ಬೇರೆ ಬೇರೆ ಯಾಗಿದ್ದರೂ..
ಒಂದಾಗಿ ಬಾಳುವಾಗ..
ಭಿನ್ನಾಭಿಪ್ರಾಯ ಸಹಜ...
ಹೇಗೇ ಇದ್ದರೂ ಹೊಂದಾಣಿಕೆ,ಸಾಮರಸ್ಯ ಇರಲೇ ಬೇಕು..

ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..
ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ.. ಬೇಸರಿಸದಿರಿ...

Ittigecement said...

ಸವಿಗನಸು...

ನನಗೆ ಈ ಮೇಲ್ ಬರೆದ ಸಹೋದರಿ ಬ್ಲಾಗ್ ಮೂಲಕ ಪರಿಚಯ...
ನನ್ನ ಬ್ಲಾಗ್ ಯಾವಾಗಲೂ ಓದಿ ಈ ಮೇಲ್ ಮೂಲಕ ಪ್ರತಿಕ್ರಿಯೆ ತಿಳಿಸುತ್ತಾರೆ..
ನನಗಿನ್ನೂ ಮುಖತಃ ಪರಿಚಯ ಇಲ್ಲ...
ಈ ಮೇಲಿನಲ್ಲಿನಷ್ಟೆ ಪರಿಚಯ..

ನಿಮ್ಮ ಶುಭ ಹಾರೈಕೆಯನ್ನು ಅವರಿಗೆ ತಲುಪಿಸಿದ್ದೇನೆ...

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

ನಿಮ್ಮ ಸಹೃದಯಕ್ಕೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಮೌನಿ...

ಈ ವ್ಯಾಪರಸ್ಥರೇ ಹಾಗೆ...
ಅವರಿಗೆ ಎಲ್ಲೆಲ್ಲೂ ವ್ಯಾಪಾರವೇ ಕಣುತ್ತದೆ..
ಮನೆಯಲ್ಲೂ ಸಹ...!

ತಮ್ಮ ವೃತ್ತಿಯನ್ನು, ಅಲ್ಲಿಯ ಮನೋಧರ್ಮವನ್ನು
ತಮ್ಮ ವ್ಯವಹಾರದ ಬದುಕಿಗಷ್ಟೇ ಸೀಮಿತಗೊಳಿಸಿಟ್ಟುಕೊಳ್ಳುವದಿಲ್ಲ..

ಅದನ್ನೇ ಜೀವನವನ್ನಾಗಿಸಿ.. ಸ್ವಭಾವನ್ನೂ ಬದಲಿಸಿಕೊಂಡುಬಿಡುತ್ತಾರೆ...

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ನಿಮ್ಮ ಬ್ಲಾಗಿಗೂ ಸಹ ಬರಲಾಗಲಿಲ್ಲ..
ಬೇಸರಿಸದಿರಿ...

Ittigecement said...

ಪಾಂಜಪೆಯವರೆ...

ಇಂಥಹ ಬದುಕಿನ ಬಣ್ಣಗಳನ್ನು..
ಸ್ವಭಾವಗಳನ್ನು ಕುರಿತು ಕಥೆ ಬರೆಯ ಬೇಕೆಂದಿದ್ದೇನೆ....

ಬರೆಯಬಹುದಲ್ಲ...

ನನಗೆ ನಿಮ್ಮ ಅಭಿಪ್ರಾಯ ಬಹಳ ಮುಖ್ಯ...
ತಪ್ಪುಒಪ್ಪುಗಳನ್ನು ತಿದ್ದಿ ಓದಿದ್ದಕ್ಕೆ ಧನ್ಯವಾದಗಳು...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ಉದಯ....

ನಿಮ್ಮ "ಅಜ್ಜಿ ಕಥೆ" ತುಂಬಾ ಸೊಗಸಾಗಿದೆ..
ನಾನಗಂತೂ ಬಹಳ ಇಷ್ಟವಾಯಿತು...

ಇಂಥಹ ಗಂಡನ ಬಗೆಗೆ ನನ್ನ ಕ್ಲಾಸ್ ಮೇಟ್ ಹೇಳುತ್ತಿರುವಾಗ ಈ ಕಥೆಯ ಬಗೆಗೆ ವಿಚಾರ ಬಂದಿತು..

ಗೆಳೆಯ ಮಲ್ಲಿಕಾರ್ಜುನ್ ಗೆ ಹೇಳಿದೆ.. ಅವರು ಸಂತೋಷಪಟ್ಟು ಇದನ್ನು ಬರೆಯಿರಿ ಅಂದರು...

ಬರೆದ ಮೇಲೆ ನನ್ನ ಬ್ಲಾಗ್ ಮಿತ್ರರುಗಳಿಗೆ ಕಳುಹಿಸಿದೆ..
ಎಲ್ಲರೂ ತಪ್ಪುಗಳನ್ನು ತಿದ್ದಿದರು...

ಪ್ರೋತ್ಸಾಹಕೊಟ್ಟ ಎಲ್ಲರಿಗೂ ಧನ್ಯವಾದಗಳು...

ಉದಯ್ ನಿಮ್ಮ ಪ್ರೋತ್ಸಾಹಕ್ಕೂ ಧನ್ಯವಾದಗಳು..

Ittigecement said...

ನಮ್ಮ ಮೆಚ್ಚಿನ
ಬಿ. ಸುರೇಶ್ ಅವರು ಕಥೆ ಓದಿ ಈ ಅಭಿಪ್ರಾಯ ಕೊಟ್ಟಿದ್ದಾರೆ...

" ಓದಿದೆ. ಪ್ರಯತ್ನ ಚೆನ್ನಾಗಿದೆ.
ಇನ್ನಷ್ಟು ತೂಕ ಬಂದಾಗ ಕತೆ ಗಟ್ಟಿಯಾಗುತ್ತದೆ.
ಕತೆಗೆ ಮತ್ತಷ್ಟು ಸಿಮೆಂಟು-ಇಟ್ಟಿಗೆ ಹಾಕಿ, ಗೆಳೆಯರೇ...."

ಚುಕ್ಕಿಚಿತ್ತಾರ said...

ಪ್ರಕಾಶಣ್ಣ.
ಜೀವ ಭಾವ ಎರಡೂ ಬೆರೆತಾಗಷ್ಟೆ ಜೀವನ..

ಹದಿನೆ೦ಟು ವರ್ಷಗಳ ಹಿ೦ದಾದ್ದಕ್ಕೆ ಇನ್ನೂ ಒಟ್ಟಿಗೆ ಇದ್ದಾರೆ.
ಈಗಾದರೆ ಕಥೆ ಡೈವೋರ್ಸ್ ನಲ್ಲಿ ಮುಕ್ತಾಯವಾಗ್ತಿತ್ತಾ ಅ೦ತ.
ಚೆನ್ನಾಗಿದೆ...ಕಥೆ, ಬರಹ, ಯಾವಾಗಿನ೦ತೆ.

Ittigecement said...

"ನೆನಪಿನ ಸಂಚಿಯಿಂದ" ಬ್ಲಾಗಿನ ಮಾಲತಿಯವರು ಹೀಗೆ ಹೇಳುತ್ತಾರೆ....

Prakash!!

Read ur latest post just now.

ಕುತೂಹಲ, ಅ ಮೇಲೆ ಸಂತಸ....ಹೀಗೆ ಸಾಗುತ್ತಾ , ಕಂಬನಿ ಇನ್ನೇನು key board ಮೇಲೆ ಧುಮುಕುತ್ತದೆ ಎನ್ನುವಷ್ಟರಲ್ಲಿ ಎಂತ climax ಮಾರಾಯ್ರೆ. ಓದುತ್ತಿದ್ದ ಹಾಗೆ ಎಷ್ಟು ಸಿಟ್ಟು ಬಂತು ಗೊತ್ತಾ? 'ಗೋಸುಂಬೆ ನನ್ನ ಮಗ’ ಎಂದು ಮೊಬೈಲ್ ನ್ನು computer screen ಗೆ ಬಿಸಾಡುಯುವಷ್ಟು. ನನ್ನಲ್ಲಿ ಅಷ್ಟೊಂದು ಸಿಟ್ಟು ಅಡಗಿದೆ ಅಂತ ನನಗೆ ಗೊತ್ತಿರಲಿಲ್ಲ. ಹಾ ಹಾ ಹಾ
ಕಥೆಯಾದ್ರೂ ಇಂತಹವು ಎಷ್ಟೋ ನಡೆಯುತ್ತವೆ ಅಲ್ವಾ?
ತುಂಬಾ ಇಷ್ಟ ಆಯ್ತು.
as usual blog nalli comment hOgtaa illa.
:-)

malathi S

ಸೀತಾರಾಮ. ಕೆ. / SITARAM.K said...

ತಮ್ಮ ಕಥೆಯ ಪ೦ಚಗಳನ್ನ ಊಹಿಸೊಕ್ಕೆ ಆಗೋಲ್ಲ. ಜೊತೆಗೆ ತಮ್ಮ ನಿರೂಪಣಾಶೈಲಿ ಓಡಿಸಿಕೊ೦ಡು ಓದಿಸಿಕೊಳ್ಳುತ್ತದೆ.

Ittigecement said...

ಶಾಂತಲಾ....

ತೀರಾ ಪ್ರ್ಯಾಕ್ಟಿಕಲ್ ಆಗಿರುವವರ ಸಂಗಡ..
ಭಾವುಕರ ಬದುಕು ಬಹಳ ಕಷ್ಟ.
ಪ್ರ್ಯಾಕ್ಟಿಕಲ್ ಆಗಿರುವವರು ಎಲ್ಲವನ್ನೂ ಸಹಜವಾಗಿ ತೆಗೆದು ಕೊಳ್ಳುತ್ತಾರೆ...
ಭಾವುಕರು ಹಾಗಲ್ಲ...

ನನ್ನ ಬಳ ಹಲವರು ಇದೇ ಪ್ರಶ್ನೆ ಕೇಳಿದ್ದಾರೆ.
"ಹದಿನೆಂಟು ವರ್ಷಗಳಲ್ಲಿ ಬದಲಾಗದ ಗಂಡ ಅಂದು ಬದಲಾಗುವ ಅವಶ್ಯಕತೆ ಇತ್ತೆ?"

"ಇತ್ತು " ಅನ್ನುತ್ತೇನೆ...

ಹದಿನೆಂಟು ವರ್ಷಗಳಿಂದ ಹೆಂಡತಿಯ ಭಾವುಕತನ..
ಅವಳ ಸಹನೆ..
ಎದುರು ಮಾತಾಡದೆ ಇವನ ಸೊಕ್ಕನ್ನು ಒಪ್ಪಿಕೊಂಡಿರುವ..
ಹೆಂಡತಿಯ ಸಂಗಡ ಆತ ಬದುಕಿದ್ದಾನೆ...

ಯಾರ ಬಳಿಯಾದರೂ "ಕೇಳುವದು" ಅಂದರೆ ಕಷ್ಟ...
ಹಾಗಾಗಿ ಅಪರೂಪಕ್ಕೆ ನಗುವ ಗಂಡ ನಕ್ಕಿದ್ದಾನೆ...


ಶಾಂತಲಾ...
ನಿಮ್ಮದು ಬಲು ಚಿಕ್ಕ ಆಸೆ...
ಇದು ಈ ವರ್ಷವೇ ನೆರವೇರಲಿ...
ಈ ಸಾರಿ ಸಿರ್ಸಿ ಜಾತ್ರೆ ಇದೆಯಲ್ಲ...!

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ನವೀನ್...

ಮನುಷ್ಯ ಸ್ವಭಾವಗಳ ಬಗೆಗೆ ಕಥೆ ಬರೆಯಬೇಕೆಂದು ಆಸೆ ಇತ್ತು...
ನೀವೆಲ್ಲ ಖುಷಿ ಪಟ್ಟಿದ್ದು ಉತ್ಸಾಹ ಹೆಚ್ಚಿಸಿದೆ...

ಇನ್ನು ಒಂದಷ್ಟು ಕಥೆಗಳನ್ನು ಬರೆಯುವೆ...

ನಮ್ಮ ಪುಸ್ತಕ ಬಿಡುಗಡೆಯ ಸಮಾರಂಭದ ಬಗೆಗೆ ..
ನಮಗಿಂತ ಮೊದಲು ನಿಮ್ಮ ಬ್ಲಾಗಿನಲ್ಲಿ ಫೋಟೊ, ಲೇಖನ ಹಾಕಿ..
ಬ್ಲಾಗಿಗರ ಒಳ್ಳೆಯ ಮನಸ್ಸಿನ ಬಗೆಗೆ ಮಾದರಿಯಾಗಿದ್ದೀರಿ...
ನಿಮ್ಮ ಸಹೃದಯಕ್ಕೆ ಧನ್ಯವಾದಗಳು...

Unknown said...

ಕಥೆ ಮಾರ್ಮಿಕವಾಗಿ ಹಾಗೂ ಸುಂದರವಾಗಿ ಮೂಡಿ ಬಂದಿದ್ದು ಶೀರ್ಷಿಕೆ ಸಾರ್ಥಕವಾಗಿದೆ. ಕಥಾಸಾಹಿತ್ಯದಲ್ಲಿ ಧೃಡವಾದ ಮೊದಲ ಹೆಜ್ಜೆಯನ್ನು ಇಟ್ಟಿದ್ದೀರಿ. ಶುಭಾಶಯಗಳು !

ರೂಪಾ ಶ್ರೀ said...

ನಮಸ್ತೆ! ತುಂಬಾ ದಿನದ ನಂತರ ಬರುತ್ತಿರುವುದಕ್ಕೆ ಕ್ಷಮೆ ಇರಲಿ..
ಜೀವನದಲ್ಲಿ ಅದೃಷ್ಟದ ಪಾಲು ಅಂತ ಏನಾದರು ಇದ್ದಾರೆ ಅದು ಸಂಬಂಧಗಳಲ್ಲಿ ಮಾತ್ರ.. ಬೇರೆಲ್ಲವೂ ನಮ್ಮ ಶ್ರಮದಿಂದ ಪಡೆದರೂ ಈ ಸಂಬಂಧದ ವಿಷಯದಲ್ಲಿ ಅದೃಷ್ಟದ್ದೆ ಆಟ.. ಆದರೆ ಯಾವುದೋ ಅಗತ್ಯ ಅಥವಾ ಅನಿವಾರ್ಯತೆಗಳಿಗಾಗಿ ಜೊತೆಯಲ್ಲಿ ಇರುವುದು ಜೀವನ ಅಲ್ಲ ಅಲ್ಲವಾ.. ಭಾವನೆಗಳೇ ಇಲ್ಲದ ವ್ಯಕ್ತಿ ಇರಲು ಸಾಧ್ಯವೇ ಇಲ್ಲಾ.. ಅವನಿಗೆ ಹಣದೊಂದಿಗೆ ಮಾತ್ರ ಭಾವನೆಗಳು.. ಇವಳಿಗೆ ಕಲ್ಲು ಬೆಂಚಿನಲ್ಲೂ.. ಇಂಥ ಎಷ್ಟೋ ಜೀವವಿಲ್ಲದ ಬಾಳುಗಳು ವರುಷಗಳು ಉರುಳಿದರೂ ಬಿರುಕಾಗದೆ ಸವೆಯುತ್ತಿರುವುದಕ್ಕೆ ನಮ್ಮ marriage system ಅನ್ನು ಅಭಿನಂದಿಸಬೇಕೋ ಅಥವ ದೂಷಿಸಬೇಕೋ??

ಕ್ಷಣ... ಚಿಂತನೆ... said...

ಪ್ರಕಾಶಣ್ಣ,
ಕಲ್ಲು-ಬೆಂಚು ಕಥೆ ಓದಿಸಿಕೊಂಡು ಹೋಗುತ್ತದೆ. ಇದೊಂದು ನೈಜಘಟನೆಯೆಂದೇ ತಿಳಿಯಬಹುದು. ಮುಂದೇನು ಎಂಬ ಕುತೂಹಲವಿದೆ!

ಸ್ನೇಹದಿಂದ,

shivu.k said...

ಸರ್,

ಕತೆ ಭಾವುಕತೆಯಿಂದ ಕೂಡಿದೆ. ಓದಿಸಿಕೊಂಡು ಹೋಗುತ್ತದೆ. ಸ್ವಲ್ಪ ಚಿಕ್ಕದಾಗಿ ಬ್ಲಾಗಿನಲ್ಲಿ ಹಾಕಿದ್ದರೆ ಚೆನ್ನಿತ್ತು.
ನಿತ್ಯ ಪ್ರಪಂಚದಲ್ಲಿ ಇಂಥ ಗಂಡ ಇದ್ದೇ ಇರುತ್ತಾರೆ, ಹಣದ ಹಿಂದೆ ಬಿದ್ದವರಿಗೆ ಬುದ್ಧಿಯಾವಾಗ ಬರುತ್ತೋ....

ಮುಂದುವರಿಯಲಿ...

Ittigecement said...

ಗುರು....

ಪ್ರತಿಯೊಂದು ಜೋಡಿಯಲ್ಲೂ ಈ ಥರಹದ ಭಿನ್ನ ಸ್ವಭಾವ ಇದ್ದೇ ಇರುತ್ತದೆ.
ಆದರೆ...
ಹೊಂದಾಣಿಕೆ.. ತಾಳ್ಮೆ..
ಇದ್ದರೆ ಬಾಳು ಹಸನಾಗಿರುತ್ತದೆ..

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ದೆಹನ್ಯವಾದಗಳು...

Ittigecement said...

ದಿನಕರ...

ಹಿಂದಿಯಲ್ಲಿ ಒಂದು ಸೊಗಸಾದ ಹಾಡಿದೆ..
"ಥೋಡಾ... ಹೈ...
ಥೋಡೇ ಕೀ ಜರೂರತ್ ಹೈ...!"

ಕೊರತೆ ಇಲ್ಲದಿದ್ದರೆ..
ಎಲ್ಲವೂ ಇದ್ದುಬಿಟ್ಟರೆ..
ಸೊಗಸೆಲ್ಲಿ ಇರುತ್ತದೆ ಅಲ್ಲವಾ...?

ಇದ್ದುದೆಲ್ಲವ ಬಿಟ್ಟು..
ಇರದುದಕ್ಕೆ ಹಂಬಲಿಸುವದೇ ಜೀವನಾ... ಅಲ್ಲವಾ...?

ಕಥೆ ಇಷ್ಟ ಪಟ್ಟಿದ್ದಕ್ಕೆ ತುಂಬಾ ಖುಷಿಯಾಗುತ್ತದೆ ..
ಧನ್ಯವಾದಗಳು...

Ittigecement said...

ಗೀತಾ...

ನಿಮ್ಮ ಪ್ರತಿಕ್ರಿಯೆ ತುಂಬಾ ಖುಷಿಕೊಟ್ಟಿದೆ..

ಹೆಚ್ಚಿನ ಹೆಣ್ಣುಮಕ್ಕಳು ಹೀಗೆಯೇ ಇರುತ್ತಾರೆ...
ಸಹನೆ, ತಾಳ್ಮೆ.. ಅಸಾಧ್ಯವಾಗಿರುತ್ತದೆ..
ಗಂಡಿಗೆ ಅಲ್ಲಿ ಕೀಳರಿಮೆಯಿಂದಾಗಿ ಈ ಥರಹದ ವರ್ತನೆ ಮಾಡುತ್ತಾನೆ..

ನೀವು ಹೇಳಿದ ಹಾಗೆ ಅದೊಂಥರಾ "ಜೀವಾವಧಿ ಶಿಕ್ಷೆ.."

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅಂತರಂಗದ ಮಾತುಗಳು...

ಭಾವುಕ ಜಗತ್ತೇ ಬೇರ್‍ಎ...

ತಾನು, ತನ್ನ ಗಂಡ, ಮಕ್ಕಳು ಅಂತ
ದಿನದ ಇಪ್ಪತ್ತುನಾಲ್ಕು ಗಂಟೆ ಮನೆಯೋಳಗೆ ತನ್ನ ಸಂಸಾರದ ಬಗೆಗೆ ವಿಚಾರ ಮಾಡುವ ಹೆಂಡತಿಗೆ..
ತೀರಾ ಪ್ರ್ಯಾಕ್ಟಿಕಲ್ ಗಂಡ...!!

ಬದುಕಿನ ಇಂಥಹ ಬಣ್ಣಗಳ ಬಗೆಗೆ ಬರೆಯ ಬೇಕು...
ಸ್ವಲ್ಪ ದಿನ "ನಾಗು, ಶಾರಿ ಎಲ್ಲರಿಗೆ " ರಜೆ ಕೊಡ ಬೇಕು ಅನ್ನಿಸುತ್ತಿತ್ತು...
ನನ್ನ ಬ್ಲಾಗಿನ ನೂರು ಲೇಖನ ಮುಗಿದ ಮೇಲೆ ಕಥೆ ಬರೆಯಬೇಕು ಅಂತ ಅಂದು ಕೊಂಡಿದ್ದೆ...

ಆಗಲಿಲ್ಲ...

ಇವತ್ತು ಒಂದು ಎಡವಟ್ಟು ವಿಷಯ ಕಥೆಯಾಗಿ ರೂಪುಗೊಳ್ಳುತ್ತಿದೆ..
ಆ ಕಥೆಯನ್ನು ನನ್ನ ಗೆಳತಿಯೊಬ್ಬಳಿಗೆ ಹೇಳಿದೆ..

ಚೆನ್ನಾಗಿದೆ ಬರೆಯಿರಿ ಅನ್ನುತ್ತಿದ್ದಾಳೆ..
ಇನ್ನು ಕೆಲವೇ ದಿನಗಳಲ್ಲಿ ಬರೆದು ಹಾಕುತ್ತೇನೆ..

ಈ ದಿನಗಳಲ್ಲಿ ಕೆಲಸದ ಒತ್ತಡ ಜಾಸ್ತಿ.
ಹಾಗಾಗಿ ಕಥೆ ಹಾಕಲಿಕ್ಕೆ ಸ್ವಲ್ಪ ತಡ ಆಗುತ್ತಿದೆ..
ಬೇಸರಿಸದೆ ಪ್ರೋತ್ಸಾಹ ಕೊಡುತ್ತಿದ್ದೀರಿ..
ತುಂಬಾ.. ತುಂಬಾ ಧನ್ಯವಾದಗಳು...

Ittigecement said...

ಮನಸು...

ಈ ಮೊದಲು ನನ್ನ ಅನುಭವಗಳನ್ನು ಬರೆಯುತ್ತಿದ್ದೆ...
ಇದೇ ಮೊದಲ ಬಾರಿಗೆ "ಹೆಣ್ಣಾಗಿ" ಬರೆಯುವ ಪ್ರಯತ್ನ ಮಾಡಿದೆ...
ನಿಮ್ಮೆಲ್ಲರ ಪ್ರತಿಕ್ರಿಯೆ ಖುಷಿಯಾಗುತ್ತಿದೆ...

ಸ್ವಲ್ಪವೂ ಹೊಂದಾಣಿಕೆ ಇಲ್ಲದ ಸಂಸಾರ ಬಹಳ ಕಷ್ಟ..
ಅದೊಂದು ನರಕವೇ ಸರಿ..

ನನ್ನ ಕ್ಲಾಸ್ ಮೇಟ್ ಬದುಕು,
ಮತ್ತು
ನನಗೆ ಈ ಮೇಲ್ ಹಾಕಿದ ಸಹೋದರಿಯ ಬದುಕು..
ಅಂಥಹ ಎಲ್ಲ ಹೆಣ್ಣುಮಕ್ಕಳ ಬದುಕಲ್ಲಿ ನಗು ಆದಷ್ಟು ಬೇಗ ಬರಲಿ ಎಂದು ಹಾರೈಸೋಣ..

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ನಿಶಾರವರೆ....

ನನ್ನ ಬ್ಲಾಗಿಗೆ ಸ್ವಾಗತ....

ನಿಜ ನಮ್ಮ ನಡುವೆ ಬಹಳ ಮಡಿ ಇದ್ದಾರೆ..

ಅಂಥಹ ಬದುಕು ಗೀತಾರವರು ಹೇಳಿದ ಹಾಗೆ ಅದು "ಜೀವಾವಧಿ ಶಿಕ್ಷೆ"

ಕಥೆಯನ್ನು ಮೆಚ್ಚಿ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಬಿ. ಸುರೇಶ್ ಸರ್...

ಇವತ್ತು ಜಿ. ಶಿವರುದ್ರಪ್ಪನವರ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು...

ನಿಮ್ಮ ಸರಳತನ..
ಸೌಜನ್ಯತೆ ಬಹಳ ಇಷ್ಟವಾಯಿತು..

ನನ್ನ ಕಥೆಗಳಲ್ಲಿ ಇನ್ನಷ್ಟು ಸೊಗಸಾದ ಗೋಡೆ ಕಟ್ಟಿ
ಸುಂದರ ಮನೆಕಟ್ಟಲು ಪ್ರಯತ್ನಿಸುವೆ...

ನಿಮ್ಮ ಪ್ರೋತ್ಸಾಹಕ್ಕಾಗಿ ವಂದನೆಗಳು...

ನಿಮ್ಮ ಮತ್ತು
ಪ್ರಕಾಶ್ ರೈ ರವರ ಸಿನೇಮ ಯಶಸ್ವಿಯಾಗಲಿಯೆಂದು ಹಾರೈಸುವೆ...

Ittigecement said...

ಚುಕ್ಕಿಚಿತ್ತಾರ...

ನಿಜ..
ಜೀವ ಭಾವ ಬೆರೆತಾಗ ಬಾಳು ಮಧುರ..

ಬಹಳ ದಿನಗಳ ನಂತರ ಕಥೆ ಬರೆಯುತ್ತಿರುವೆ.
ಬಹಳ ಅಳುಕಿತ್ತು..

ಆದರೆ ನಿಮ್ಮೆಲ್ಲರ ಪ್ರತಿಕ್ರಿಯೆ ಓದಿ ಸಿಕ್ಕಾಪಟ್ಟೆ ಉತ್ಸಾಹ ಬಂದಿದೆ...
ಇನ್ನು ಕೆಲವು ದಿನ ಕೆಲವು ಕಥೆ ಬರೆಯುವೆ...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ನೆನಪಿನ ಸಂಚಿಯಿಂದ...

ನನ್ನ ಕಥೆಗಿಂತ ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ..

ನಿಮ್ಮ ಸಿಟ್ಟು ಸಹಜ...

ಆದರೆ ಅಂಥಹ ಹೆಣ್ಣುಮಕ್ಕಳ ಬದುಕು ಹೇಗಿರ ಬಹುದು...??

ಈ ಕಥೆ ಓದಿ ಇನ್ನೊಬ್ಬ ಹೆಣ್ಣುಮಗಳು ಪ್ರತಿಕ್ರಿಯೆ ಕೊಟ್ಟಿದ್ದಾರೆ...
ಅವರ ಜೀವನವೂ ಹೀಗೇ ಇದೆಯಂತೆ...

ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು...

ಕಾಮೇಂಟ್ಸ್ ಹಾಕಲು ತಾಂತ್ರಿಕ ತೊಂದರೆಗಾಗಿ ಬೇಸರಿಸದಿರಿ..

ಮತ್ತೊಮ್ಮೆ ಧನ್ಯವಾದಗಳು ಮಾಲತಿಯವರೆ...

Ittigecement said...

ಸೀತಾರಮ್ ಸರ್...

ನಿಮ್ಮ ಬ್ಲಾಗಿಗೆ ಈ ದಿನಗಳಲ್ಲಿ ಆಗಲಿಲ್ಲ
ದಯವಿಟ್ಟು ಕ್ಷಮಿಸಿ...

ಭಾವುಕ
ವಾಸ್ತವಿಕ ಪ್ರಪಂಚಗಳು ಗಂಡ ಹೆಂಡಿರಾದರೆ
ಇಂಥಹ ಕಥೆಗಳೇ ಆಗಿಬಿಡುತ್ತವೆ... ಅಲ್ಲವಾ?

ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು...

Ittigecement said...

ಗಂಗಾರವರೆ...

ಕಥೆಗೆ ಹೆಸರು ಇಡುವದೂ ಬಹಳ ಕಷ್ಟದ ಕೆಲಸ..
ಬಹಳ ತಲೆ ಕೆಡಿಸಿಕೊಂಡಿದ್ದೆ..

ಕಲ್ಪನೆಯ ಬದುಕಿನಲ್ಲಿ ಕಟುವಾಸ್ತವ ಹೇಳುವ ...
ಹೋಲಿಕೆಗೆ "ಕಲ್ಲು.. ಬೇಂಚು" ಎನ್ನುವ ಹೆಸರೇ ಸೂಕ್ತ ಅನಿಸಿತು..

ನೀವು ಪ್ರೋತ್ಸಾಹ ಕೊಟ್ಟಿದ್ದಕ್ಕೇ ನಾನು ಬರೆಯಲು ಶುರು ಮಾಡಿದ್ದು...

ಕೃತಜ್ಞತೆ ಹೇಳಲು ಶಬ್ಧಗಳಿಲ್ಲದೆ...
ಮೌನವಾಗಿಬಿಡುತ್ತವೆ..
ಭಾವಗಳು...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

ಜಲನಯನ said...

ಪ್ರಕಾಶ್, ವಾಸ್ತವಕ್ಕೂ -ಕನಸಿಗೂ- ನಿವೇದನೆಗೂ-ವೇದನೆಗೂ-ಸಂಭ್ರಮಕ್ಕೂ -ಭ್ರಮೆಗೂ-ಜವಾಬ್ದಾರಿಗೂ-ಬೇಜವಾಬರಿಗೂ.....ಹೀಗೇ...ನಿಜ ಜೀವನದ ದ್ವಂದ್ವಗಳ ಮಧ್ಯದ ಬಹು ಸಣ್ಣ ಗೆರೆ ಹೇಗೆ ಎರಡನ್ನೂ ಬೇರ್ಪಡಿಸುತ್ತೆ ಅನ್ನುವುದನ್ನು ಮಾರ್ಮಿಕವಾಗಿ ಬಿಡಿಸಿ ಅದಕ್ಕೆ ಕಥೆಯ ಆವರಣ ನೀಡಿದ್ದೀರಿ....ಹೌದು ಎನಿಸುತ್ತೆ ಒಮ್ಮೊಮ್ಮೆ..ಆದ್ರೆ ಹಿಂದೆಯೇ ..ನಾವು ನಿಜಕ್ಕೂ ಸಣ್ಣ ಕ್ಷಣಗಳ ಸವಿದು ಅಗಾಧ ದೂರಗಳನ್ನು ಸಮೀಪಮಾಡಿಕೊಳ್ಳುವ ಅವಕಾಶಗಳನ್ನು ಕೈಯಾರೆ ದೂರ ಮಾಡಿಕೊಳ್ಲುತ್ತೇವೆ ಎನಿಸುತ್ತೆ....ಒಳ್ಳೆಯ ಲೇಖನ...

Unknown said...

'KalluBenchu' chikkadaagi, aasaktihuttisuva ritiyalli muudibandide.Prakashannanavarige abhinandanegalu.
Ranganath
28-12-09

umesh desai said...

ಹೆಗಡೇಜಿ ಬದುಕು ಅದರ ಬಗೆಗಿನ ನಿರೀಕ್ಷೆಗಳು..ನಮ್ಮ ಕನಸುಗಳು ಇವೆಲ್ಲಕ್ಕಿಂತ ಮಿಗಿಲಾದ
ಕಟುವಾಸ್ತವ ಎಲ್ಲ ಹಾಸುಹೊಕ್ಕಾಗಿದೆ ನಿಮ್ಮ ಕತೆಯಲ್ಲಿ ಅಭಿನಂದನೆಗಳು ಹೀಗೆ ಕತೆ ಬರತಾ ಇರಲಿ....

Unknown said...

ಕತೆಯ ಅಂತ್ಯ ಮೊದಲೇ ಊಹಿಸುವುದು ಕಷ್ಟವಲ್ಲ. ಆದರೆ ಬರೆದ ಶೈಲಿ ಮಾತ್ರಾ ತುಂಬಾ ಹಿಡಿಸ್ತು.

Unknown said...

Super aagide...

minchulli said...

ಪ್ರಕಾಶ್, ಮನ ಒದ್ದೆಯಾಯ್ತು... ಇಷ್ಟು ಮಾತ್ರ ಹೇಳಬಲ್ಲೆ...

Unknown said...

ಪ್ರಕಾಶಣ್ಣ, ಕಲ್ಲು ಬೆಂಚಿನ ಕಥೆ ತುಂಭಾನೆ ಚೆಂದ ಇದ್ದು. ಇದರಂತೆ ಜೀವನದ ಕೆಲವು ಕನಸು ಕನಸಾಗೆ ಉಳಿಲಕ್ಕು ಆದ್ರೆ ಇಂತ ಸಂಭಂದಕ್ಕೆ , ಪ್ರೀತಿ ಪ್ರೇಮಕ್ಕೆ ಬೆಲೆ ಕೊಡದ ಮಂದಿ ಇರ್ತ್ವ? ಬೇಜರಾಕ್ತಿದ್ದು,
ಕಥೆಯ ಅಂತ್ಯಕ್ಕೆ ಕಾಯ್ತ ಇದ್ದಿ.

* ನಮನ * said...

ಕಥೆ ಬಹಳ ಭಾವುಕವಾಗಿವೆ.ಎಲ್ಲರ ಜೀವನದಲ್ಲಿಯೂ ಇದು ಕತೆಯಾಗಿ ಮಾತ್ರ ಬರಲಿ ಅ೦ತ ಅನಿಸ್ತು.

Annapoorna Daithota said...

ಚೆನ್ನಾಗಿದೆ :-)

ವಿನುತ said...

ಇದು ಬರೀ ಕಥೆಯಾ? ಅಬ್ಬಾ! ವಾಸ್ತವವೆನಿಸುವಷ್ಟು ನೈಜವಾಗಿದೆ. ಅಭಿನಂದನೆಗಳು. ಇದು ಕಥೆಯಾಗಿಯೇ ಇರಲಿ ಎಂದೇ ಆಶಿಸುತ್ತೇನೆ.
ಹೊಸ ವರ್ಷದ ಶುಭಾಶಯಗಳು.

Ittigecement said...

ರೂಪಾಶ್ರೀಯವರೆ...

ಬಹಳ ಸತ್ಯವಾದ ಮಾತು ಹೇಳಿದ್ದಿರಿ...
ಸಂಬಂಧ, ಬಾಂಧವ್ಯ ಮಾತ್ರ ನಮ್ಮ ಅದೃಷ್ಟ...

ಉಳಿದ್ದದ್ದೆಲ್ಲ ನಮ್ಮ ಪ್ರಯತ್ನದಿಂದ ಗಳಿಸ ಬಹುದು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಕ್ಷಣ ಚಿಂತನೆ.. (ಚಂದ್ರು)

ನನ್ನ ಕ್ಲಾಸ್ ಮೇಟ್ ಗಂಡ ಅವಳ ಬಳಿ ಮಾತನಾಡುವದೇ ಇಲ್ಲ..
ಎಷ್ಟು ಹಿಂಸೆ ಅನುಭವಿಸುತ್ತಿರ ಬಹುದು ಆಕೆ...?

ತನ್ನ ಜೀವನದ ಕನಸ್ಸನ್ನೆಲ್ಲ ಇವನ ಸಂತೋಷದಲ್ಲಿ ಕಾಣುವ..
ಆ ಬಳ ಗೆಳತಿಯ ಬಗೆಗೆ ಈ ಮನುಷ್ಯನಿಗೆ ಏನೂ ಅನ್ನಿಸುವದಿಲ್ಲವೆ...?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶಿವು ಸರ್....

ಭಾವುಕತನ...
ಮತ್ತು ವಾಸ್ತವಿಕತೆಗಳ ನಡುವಿನ ಅಂತರ ಬಹಳ...

ಬದುಕಿನಲ್ಲಿ ಎಲ್ಲವನ್ನೂ ಹಣದಿಂದಲೇ ಲೆಕ್ಕಾಚಾರ ಹಾಕುವ..
ವ್ಯವಹಾರಸ್ಥನ ಮಡದಿಯ ಕಷ್ಟ ಯಾವ ಜನ್ಮಕ್ಕೂ ಬೇಡ ಅಲ್ಲವಾ...?

ನನ್ನ ಮೊದಲ ಪ್ರಯತ್ನವನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಜಲನಯನ.... (ಆಝಾದ್ ಭಾಯ್)

ಪಕ್ಕಾಆ ವ್ಯವಾಹರಸ್ಥರ ಕಟು ವಾಸ್ತವ್ಯದೊಡನೆ..
ಒಂದು ಭಾವುಕ ಜೀವಿಯ ಬದುಕು ಬಹಳ ಕಷ್ಟ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ರಂಗನಾಥರವರೆ...

ನನ್ನ ಬ್ಲಾಗಿಗೆ ಸ್ವಾಗತ...

ಕಾಲ್ಪನಿಕ ಕಥೆಯನ್ನು ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಬರೆಯುವ ಪ್ರಯತ್ನ ನನ್ನದು...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.. ಬರುತ್ತಾ ಇರಿ...
ಧನ್ಯವಾದಗಳು...

Ittigecement said...

ಉಮೇಶ್ ದೇಸಾಯಿಯವರೆ...

ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ... ಕ್ಷಮಿಸುವಿರಲ್ಲ...?

ಗಂಡ ಹೇಂಡತಿಯರ ನಡುವೆ ಹೊಂದಾಣಿಕೆ ಅನಿವಾರ್ಯ ಅಂತಾದರೂ ಇಂಥಹ ಪರಿಸ್ಥಿತಿ ಆಗಿಬಿಡುತ್ತದೆ...

ನಗುತ್ತ ಬದುಕು ಸಾಗಿಸುವ ಕಲೆ ಇದ್ದರೆ ಬಾಳು ಸೊಗಸು ಅಲ್ಲವೆ...?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅಶೋಕ್ ಸರ್....

ನನ್ನ ಮೊದಲ ಪ್ರಯತ್ನ ಇಷ್ಟವಾಗಿದ್ದಕ್ಕೆ ಖುಷಿಯಾಗುತ್ತಿದೆ...
ಪ್ರೋತ್ಸಾಹಕ್ಕಾಗಿ ತುಂಬಾ.. ತುಂಬಾ ಧನ್ಯವಾದಗಳು...

Ittigecement said...

ಮಿಂಚುಳ್ಳಿ ( ಶಮ ರವರೆ...)

ನನ್ನ ಂಥಹ ಹೊಸಬನಿಗೆ ಇನ್ನೆಂಥಹ ಪ್ರೋತ್ಸಾಹ ಬೇಕು...?

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ
ಹೃದಯ ಪೂರ್ವಕ ಧನ್ಯವಾದಗಳು...

Ittigecement said...

ಸುಮಂಗಲಾರವರೆ...

ನೀವೆನ್ನುವದು ನಿಜ...

ಮದುವೆಯ ಸಂಬಂಧದಲ್ಲಿ ಪ್ರೀತಿ ಬಾಂಧವ್ಯಕ್ಕೆ ಬೆಲೆ ಇಲ್ಲ ಎಂದ ಮೇಲೆ ದಾಂಪತ್ಯ ನರಕವಾಗಿಬಿಡುತ್ತದೆ...
ಆಗ ಅದು ಪ್ರೀತಿ ಅಲ್ಲ...
ಡ್ಯೂಟಿ ಆಗಿಬಿಡುತ್ತದೆ.. ಅಲ್ಲವಾ...?

ಚಂದದ ಪ್ರತಿಕ್ರಿಯೆ ಈ ಅಣ್ಣ ಬರೆದ ಕಥೆಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ನಮನಾ (ಗಣೇಶರವರೆ...)

ನಿಮ್ಮ ಹಾರೈಕೆಯಂತಾಗಲಿ...

ಇಂಥಹ ಬದುಕು ಯಾರಿಗೂ ಬೇಡ ಅಲ್ಲವಾ...?

ಇಂಥಹ ಬದುಕು ಸಾಗಿಸುವದಾದರೆ... ಯಾಕೆ ಮದುವೆಯಾಗ ಬೇಕು ಅಲ್ಲವಾ...?

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ಅನ್ನಪೂರ್ಣ ದೈತೋಟರವರೆ...

ಭಾವುಕ, ವಾಸ್ತವಿಕಗಳ ಸಂಘರ್ಷ ಯಾವಾಗಲೂ ಹೀಗೆಯೇ ಅಲ್ಲವೆ..?

ಭಾರತೀಯರು ಬಹಳ ಭಾವುಕರು..
ಭಾವುಕತೆಯಿಂದಾಗಿ ನಮ್ಮ ವೈವಾಹಿಕಜೀವನ (ಭಾರತೀಯರ) ಯಶಸ್ವಿಯಾಗಿದೆ ಎನ್ನುವದು ನನ್ನ ಭಾವನೆ...

ಆದರೆ ಮಧ್ಯದಲ್ಲಿ ಇಂಥಹ ಕಹಿಗಳೂ ಇದ್ದುಬಿಡುತ್ತವೆ...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ವಿನೂತಾರವರೆ...

ನಿಮಗೂ ಸಹ ಹೊಸವರ್ಷದ ಶುಭಾಶಯಗಳು...

ನನ್ನ ಕ್ಲಾಸ್ ಮೇಟ್ ಒಬ್ಬಳ ಕಥೆ ಇದು...
ವ್ಯತ್ಯಾಸ ಇಷ್ಟೇ... ಅವಳ ಗಂಡ ಇನ್ನೂ ಅವಳ ಹತ್ತಿರ ನಕ್ಕಿಲ್ಲ...!

ಇಂಥಹ ಬದುಕು ಕಥೆಯಲ್ಲೇ ಇರಲಿ ಎಂದರೂ...
ಅಲ್ಲಲ್ಲಿ , ಕಾಣಸಿಗುತ್ತವೆ... ಅಲ್ಲವಾ...?

ನಾನು ನಿಮ್ಮ ಬ್ಲಾಗಿಗೆ ಬರಲಾಗದಿದ್ದರೂ...
ಪ್ರೋತ್ಸಾಹದ ನುಡಿಗಳಿಗೆ...
ಶುಭಾಶಯಗಳಿಗೆ ..

ತುಂಬಾ... ತುಂಬಾ ಧನ್ಯವಾದಗಳು...

Shashwathi said...

fantastic story. manathattuva niroopane. nange bahala ishtavaythu. Nim blog nanu odtha irthene. Chennagide. Keep up the good work.

Ittigecement said...

ಬೇಬಿಯವರೆ...

ನೀವು ನನಗೆ ಹಲವು ಬಾರಿ ಸ್ಪೂರ್ತಿ ಕೊಟ್ಟಿರುವಿರಿ..
ನಿಮಗೆ ಗೊತ್ತಿಲ್ಲದಂತೆ...

ನೀವು ಆಗಾಗ ಕಳೆದು ಹೋಗುತ್ತೀರಿ..
ಕಳೆದು ಹೋಗದೆ.. ಬರುತ್ತಾ ಇರಿ..

ನಿಮ್ಮ ಪ್ರೋತ್ಸಾಹದ ನುಡಿಗಳು ತುಂಬಾ ಖುಷಿ ಕೊಟ್ಟಿದೆ...

ಶಬ್ಧಗಳಿಗೆ ಮೀರಿದ ಭಾವ ನುಡಿ ನಮನಗಳು...

ಬರುತ್ತಾ ಇರಿ... ದಯವಿಟ್ಟು...

ಥ್ಯಾಂಕ್ಸ್.. ಥ್ಯಾಂಕ್ಸ್....ಥ್ಯಾಂಕ್ಸ್.....!!!!!!!!!!

Unknown said...

bhavane mattu vasthavada naduvina jeevana.ello ondu kshanada khushi..
chennagide.

Ittigecement said...

ವಿನೂತಾ..

ಭಾವುಕ ಮನಸು..
ವಾಸ್ತವುಕತೆಯ ಅರಿವಿದ್ದರೂ...
ಅದು ಯಾವಾಗಲೂ ಹೃದಯದಿಂದಲೇ ವಿಚಾರ ಮಾಡುತ್ತದೆ...
ಹೃದಯದಿಂದಲೇ ಮಾತಾಡುತ್ತದೆ...

ಹೃದಯ ಸಾಕ್ಷಿಯಾಗಿ ನಡೆದುಕೊಳ್ಳುತ್ತದೆ...

ತನ್ನ ಭಾವುಕ ಪ್ರಪಂಚದಿಂದ ಹೊರಬರುವದಿಲ್ಲ...
ಹೊರ ಬರಲು ಸಾಧ್ಯವೂ ಆಗುವದಿಲ್ಲ...!

ಬಹಳ ದಿನಗಳ ನಂತರ ಬಂದಿದ್ದೀರಿ...

ಖುಷಿಯಾಯಿತು..
ಧನ್ಯವಾದಗಳು...

ಬರುತ್ತಾ ಇರಿ..

Unknown said...

lEKHANA TUMBA CHENNAGIDE....

vandana shigehalli said...

ಎಲ್ಲೋ ಯಾರದ್ದೋ ನಿಜವಾದ ಕಥೆಯನ್ನ
ಹೇಳುತ್ತಿದ್ದರ ...?
ಸುಂದರ ಅನ್ನಿಸಿತು ವಾಸ್ತವ ...
ವನ್ನ ಕಥೆ ಯಂತೆ ಹೇಳುತ್ತಿರ ...
ಕಥೆಯನ್ನ ವಾಸ್ತವದಂತೆ...

ಬರಹ ಭೂಮಿ said...

ಬರವಣಿಗೆ ಶೈಲಿಗೊಂದು ನಮನ...

ಅದ್ಭುತವಾಗಿ ಪ್ರಸ್ತುತಪಡಿಸಿದ್ದೀರಾ.....!!!