ಈಗ ನಡೆಯುತ್ತಿದೆಯಲ್ಲ...
ಇಂತಹುದೇ ಒಂದು ಕಾಲದಲ್ಲಿ ಒಬ್ಬ ಕಳ್ಳನಿದ್ದ...
ಆತ ಒಂದು ಶಾಲೆಯನ್ನು ನಡೆಸುತ್ತಿದ್ದ...
"ಕಳ್ಳತನ ಹೇಗೆ ಮಾಡಬೇಕು...?
ಅದಕ್ಕೆ ಬೇಕಾದಂಥಹ ಪೂರ್ವ ತಯಾರಿಗಳು...
ಕಳ್ಳತನದ ಇತಿಹಾಸ...
ಇತಿಹಾಸ ಪ್ರಸಿದ್ಧ ಕಳ್ಳರು..
ಅವರೆಲ್ಲ ಹೇಗೆ ಪ್ರಸಿದ್ಧರಾದರು.." ಇತ್ಯಾದಿ ವಿಷಯಗಳನ್ನು ಹೇಳಿಕೊಡುತ್ತಿದ್ದ...
ಅವನ ಶಾಲೆ ಬಹಳ ಪ್ರಸಿದ್ಧಿ ಪಡೆದಿತ್ತು...
ಒಬ್ಬ ಮರಿ ಕಳ್ಳ ..
ಆತನ ಬಳಿ ಕಳ್ಳತನ ಓದುತ್ತಿದ್ದ...
ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕಗಳನ್ನು ತೆಗೆದುಕೊಂಡು ತರಗತಿಗೆ ಮೊದಲಿಗನಾಗಿ ಬರುತ್ತಿದ್ದ...
ಅಂತಿಮ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು ಹೆಮ್ಮೆಯಿಂದ ಬೀಗಿದ..
ಆಗ
ಗುರು ಕಳ್ಳ ಆತನಿಗೆ ತನ್ನ ಅನುಭವಾಮೃತವನ್ನು ಹೇಳಿದ...
"ಎಲೈ ಮರಿ ಕಳ್ಳನೆ..
ಪರೀಕ್ಷೆಯಲ್ಲಿ ಅಂಕಗಳನ್ನು ಜಾಸ್ತಿ ತೆಗೆದುಕೊಂಡಿರುವೆಯೆಂದು ..
ಗರ್ವ ಪಡಬೇಡ..
ಮುಂದೆ...
ಬದುಕಿನ ಕಳ್ಳತನದಲ್ಲಿ ..
ಈ ಅಂಕಗಳು ಯಾವ ಕೆಲಸಕ್ಕೂ ಬರುವದಿಲ್ಲ...
ಅಲ್ಲಿ ..
ನಿನ್ನ ಪ್ರಯತ್ನ ಮತ್ತು ಸ್ವಂತಿಕೆ ಮಾತ್ರ ಉಪಯೋಗಕ್ಕೆ ಬರುತ್ತವೆ.."
ಗುರು ಕಳ್ಳನ ಮಾತು ಮರಿ ಕಳ್ಳನ ಕಿವಿ ಒಳಗೆ ಹೋಗಲಿಲ್ಲ...
ಮುಂದೆ....
ಮರಿಕಳ್ಳ ತನ್ನ ಸ್ವಂತ ಉದ್ಯೋಗವಾಗಿ "ಕಳ್ಳತನ" ಶುರು ಮಾಡಿದ...
ಮರಿ ಕಳ್ಳ ತಂತ್ರಿಕವಾಗಿ ಬಹಳ ಪರಿಣತಿ ಹೊಂದಿದ್ದ...
ಚೆನ್ನಾಗಿ ಉಪಾಯ ಮಾಡಿ..
ಗೋಡೆಗಳನ್ನು ಕೊರೆದು.. ಮನೆಯ ಒಳಗೆ ಹೋಗುತ್ತಿದ್ದ..
ಆದರೆ ....
ಮನೆಯ ಒಳಗಡೆ ಏನಾದರೂ ಎಡವಟ್ಟುಗಳನ್ನು ಮಾಡಿಕೊಂಡು ...
ಚೆನ್ನಾಗಿ ಒದೆ ತಿಂದು ಆಸ್ಪತ್ರೆಗೆ ಸೇರುತ್ತಿದ್ದ...
ಪ್ರತಿ ಬಾರಿಯೂ ಹೀಗೆ ಆಗತೊಡಗಿತು...
ಮರಿಕಳ್ಳನಿಗೆ ಬಹಳ ಬೇಸರವಾಯಿತು..
ಮತ್ತೆ ಗುರು ಕಳ್ಳನ ಬಳಿ ಹ್ಯಾಪು ಮೋರೆ ಹಾಕಿಕೊಂಡು ಬಂದ...
"ಎಲೈ ಮರಿಕಳ್ಳನೇ..
ನೀನು ಚಿಂತಿಸ ಬೇಡ..
ನನ್ನ "ವಿಶೇಷ ತರಬೇತಿ ಕಾರ್ಯಗಾರವನ್ನು ಸೇರಿಕೋ...
ಕೇವಲ ಎರಡು ವರ್ಷ..
ನಿನಗೆ ನನ್ನ ವೃತ್ತಿ ಕುಶಲತೆಯನ್ನೆಲ್ಲ ಧಾರೆ ಎರೆಯುತ್ತೇನೆ..."
ಮರಿ ಕಳ್ಳ ಮನದಲ್ಲೇ ಲೆಕ್ಕಾಚಾರ ಹಾಕಿದ..
"ಎರಡು ವರ್ಷ ಶಿಷ್ಯ ವೃತ್ತಿ ಅಂದರೆ ..
ಕಡಿಮೆ ವೇತನದಲ್ಲಿ ಆತನ ಲಾಭಕ್ಕಾಗಿ ಕೆಲಸ ಮಾಡುವದು..."
ಮರಿ ಕಳ್ಳನ ಬಳಿ ಬೇರೆ ದಾರಿ ಇರಲಿಲ್ಲ..
ಗುರು ಕಳ್ಳನ ಮಾತಿಗೆ ಒಪ್ಪಿದ..
ಅಂದು ರಾತ್ರಿ ..
ಗುರು ಕಳ್ಳ ಒಬ್ಬ ಶ್ರೀಮಂತನ ಮನೆಯನ್ನು ತನ್ನ ಶಿಷ್ಯರಿಗಾಗಿ ಆಯ್ದು ಕೊಂಡಿದ್ದ...
ರಾತ್ರಿ..
ಮನೆಯ ಗೋಡೆಯನ್ನು ಕೊರೆದು ಒಳಗೆ ಹೋಗಿ...
ತಿಜೋರಿಯ ಬೀಗವನ್ನು ಶಬ್ಧ ಮಾಡದೆ ಒಡೆದು...
ಅಲ್ಲಿರುವ "ನಗ.. ನಾಣ್ಯಗಳನ್ನು" ಒಂದು ಚೀಲದಲ್ಲಿ ತುಂಬಿ ಕೊಂಡರು...
ಶಿಷ್ಯರೆಲ್ಲ ಗುರುವಿನ ಚಾಕಚಕ್ಯತೆಯನ್ನು ಗಮನಿಸುತ್ತಿದ್ದರು..
ಹಾಗೆ ಕೋಣೆಯ ಹೊರಗೆ ಬರುವಾಗ ಅಜಾಗರುಕತೆಯಿಂದಾಗಿ..
ಗುರು ಕಳ್ಳ ಮಲಗಿದ್ದವರ ಕಾಲನ್ನು ತಾಗಿಸಿಕೊಂಡು ಬಿಟ್ಟ... !
ಶಿಷ್ಯರೆಲ್ಲ ಉಸಿರು ಬಿಗಿ ಹಿಡಿದು ಗಮನಿಸುತ್ತಿದ್ದರು.... !
ಮಲಗಿದ್ದವ ..
ಮುಸುಕು ತೆಗಿಯದೆ..
"ಯಾರದು...? ".. ಎಂದು ಕೇಳಿದ ...!
ಗುರು ಕಳ್ಳ ಮೆಲ್ಲನೆ ....
"ಮೀಯಾಂವ್...
ಮೀಯಾಂವ್..." ಅಂದ... !
"ಛೇ...
ಧರಿದ್ರ.. ಬೆಕ್ಕು...
ಮಲಗಲಿಕ್ಕೂ ಬಿಡೋದಿಲ್ಲ."
ಎಂದು ಮಲಗಿದ್ದವ ಮತ್ತೂ ಮುಸುಕು ಎಳೆದು ಮಲಗಿ ಬಿಟ್ಟ...!
ಹೊರಗೆ ಬಂದ ಶಿಷ್ಯ ಕಳ್ಳರೆಲ್ಲ ಗುರುವಿಗೆ ಅಭಿನಂದನೆ ಸಲ್ಲಿಸಿದರು...
ಮರಿಕಳ್ಳ ಮತ್ತೆ ಲೆಕ್ಕಾಚಾರ ಹಾಕಿದ...
"ಗುರು ಕಳ್ಳ ಮಾಡಿದ ಇಂಥಹ ಉಪಾಯಗಳು ತನ್ನ ಬಳಿಯೂ ಇದೆ..
ಮತ್ಯಾಕೆ ..
ಇವನ ಬಳಿ ಬಿಟ್ಟಿಯಾಗಿ ಕೆಲಸ ಮಾಡಬೇಕು...?..."
ಮರಿ ಕಳ್ಳ ...
ಗುರು ಕಳ್ಳನ ಬಳಿ ತರಬೇತಿ ಕಾರ್ಯಾಗಾರವನ್ನು ಬಿಟ್ಟು ..
ಮತ್ತೆ ಸ್ವತಂತ್ರವಾಗಿ ದಂಧೆ ಶುರು ಮಾಡಲು ನಿರ್ಧರಿಸಿದ...
ಅಂದು ರಾತ್ರಿ...
ಒಂದು ಮನೆಯ ಗೋಡೆ ಕೊರೆದು...
ನಿಧಾನವಾಗಿ ಒಳಗೆ ಹೋಗಿ...
ತಿಜೋರಿಯ ಬೀಗ ಒಡೆದು ಅಲ್ಲಿನ ಸಂಪತ್ತುಗಳನ್ನು ಮೂಟೆ ಕಟ್ಟಿಕೊಂಡ..
ಬಹಳ ಹೆಮ್ಮೆಯಾಯಿತು ತನ್ನ ಚಾಕಚಕ್ಯತೆ ಬಗೆಗೆ..
ಸಾವಾಕಾಶವಾಗಿ ಹೊರಗೆ ಬರುವಾಗ ಮಲಗಿದ್ದವರೊಬ್ಬರನ್ನು ತುಳಿದು ಬಿಟ್ಟ...
ಮಲಗಿದ್ದವ ..
ಮುಸುಕು ತೆಗಿಯದೆ "ಯಾರದು...?" ಅಂತ ಕೇಳಿದ...
ಮರಿ ಕಳ್ಳನಿಗೆ ಖುಷಿಯಾಯಿತು...
ಎಲ್ಲವೂ ನಿನ್ನೆಯ ತರಹವೇ ಆಗುತ್ತಿದೆ... !
ಸಂತೋಷದಿಂದ ಜೋರಾಗಿ ಹೇಳಿದ...
" ಬೆಕ್ಕು.... .............. !!
ಇದು ....ಬೆಕ್ಕು... !!
... .... .......... ........
ಮುಂದೆ ಏನಾಯ್ತು ಅಂತಿರಾ ...?
ಮತ್ತೆ ಏನಿಲ್ಲ ..
ಚೆನ್ನಾಗಿ ಒದೆ ತಿಂದು ..
ಹಿಗ್ಗಾ ಮುಗ್ಗ ಥಳಿಸಿಕೊಂಡು ಆಸ್ಪತ್ರೆ ಸೇರಿದ...
............. ............... ............. ..............................
ಪುಸ್ತಕದ ಓದು ಎಷ್ಟೇ ಇದ್ದರೂ...
ನಮ್ಮ ಬಳಿ..
ನಮ್ಮದಾಗಿ ಕೊನೆಯತನಕ ಇರುವದು ....
"ನಮ್ಮ ..
ಪ್ರಯತ್ನ ... ಅನುಭವ..
ಸ್ವಂತಿಕೆ ಮಾತ್ರ..."
