Thursday, May 23, 2013

ನಿಮ್ಮದು ಇನ್ನೂ ...ಸಕ್ರೆ ಮೂಟೆ ಆಗಿಲ್ಲ ಬಿಡ್ರಿ.... !


ಈ ತಣ್ಣನೆಯ ಯಲ್ಲಾಪುರದಲ್ಲಿ ಉಳಿಯುವದೆಲ್ಲಿ ?...... 

ಛಳಿಗಾಲ....  
ಸಾಯಂಕಾಲ ಬೇರೆ  ಆಗಿತ್ತು... 

ಮರುದಿನ ..

ಮುಂಜಾನೆ ಇಬ್ಬನಿ ಬೀಳುವ ಹೊತ್ತು..
ನಾಡಿನ ಅತ್ಯಂತ ಸುಂದರ  .. 
"ಸಾತೊಡ್ಡಿ ಜಲಪಾತವನ್ನು" ನೋಡುವ ಕಾತುರ...!

ಗೆಳೆಯ ದಿಗ್ವಾಸ ಮತ್ತು ನಾನು ಇಬ್ಬರೇ ಇದ್ದಿದ್ದೆವು... 


ಗೆಳೆಯರೊಬ್ಬರಿಗೆ ಫೋನ್ ಮಾಡಿ ... 

" ಒಳ್ಳೆಯ ಹೊಟೆಲ್" ಬಗೆಗೆ ವಿಚಾರಿಸಿದೆವು..

ಅವರು ಹೇಳಿದ ಹೊಟೆಲ್ ಒಳಗೆ ಬಂದೆವು..


"ಒಂದು ... 

ಡಬಲ್ ಬೆಡ್ ರೂಮ್ ಬೇಕಾಗಿತ್ತು... ಇದೆಯಾ ?"

ದಿಗ್ವಾಸ್ ಕೇಳಿದ...


ಹೊಟೆಲ್ ಮ್ಯಾನೇಜರ್ ನಮ್ಮತ್ತ ಕಣ್ಣೆತ್ತಿ ನೋಡಲೂ ಇಲ್ಲ.. 


ಹೆಂಡತಿ ಹತ್ತಿರ ... 

ಮುಖ.. ಮುಸುಡಿ ಇಲ್ಲದೆ ಬಯ್ಯಿಸಿಕೊಂಡ... 
ಹರಳೆಣ್ಣೆ ಕುಡಿದವನ ಮುಖ ಮಾಡಿಕೊಂಡು ಹೇಳಿದ..

"ಇದೆ..."


"ಎಷ್ಟು...?"


" ನಾನೂರಾ...  ಐವತ್ತು..."


ನಾನು ಕಿಸೆಗೆ  ಕೈ ಹಾಕುವಷ್ಟರಲ್ಲಿ ದಿಗ್ವಾಸನಿಗೆ ಹಣ ಕೊಟ್ಟಾಗಿತ್ತು..


" ಬೆಳಿಗ್ಗೆ ಐದು ಗಂಟೆಗೆ ಬಿಸಿನೀರು ಸಿಗುತ್ತದಾ ?.. ."


ಹರಳೆಣ್ಣೆಯವ ನನ್ನ ಹೊಟ್ಟೆಯನ್ನೇ ದಿಟ್ಟಿಸಿ ನೋಡತೊಡಗಿದ... 


ಈ ಹೊಟ್ಟೆ ಹೊತ್ತುಕೊಂಡು ... 

ಬೆಳಿಗ್ಗೆ ಐದು ಗಂಟೆಯ ವಿಷಯ ಮಾತಾಡ್ತಾ ಇದ್ದಾನಲ್ಲಾ... 
ಅಂತ ಆಶ್ಚರ್ಯ ಆಗಿರಬಹುದು... 

 "ನೋಡೋಣ... ಬಿಡಿ... 

ಬೆಳಗಾಗಲಿ..."

ಆತ ಅತ್ಯಂತ ನಿರ್ವಿಕಾರ ಭಾವನೆಯಿಂದ ಉತ್ತರಿಸಿದ... 


ರಿಜಿಸ್ಟರ್ ಬುಕ್ಕಿನಲ್ಲಿ ... 

ನಮ್ಮ ವಿಳಾಸ ಬರೆದುಕೊಂಡದ್ದೂ ಆಯ್ತು...

ಮ್ಯಾನೇಜರ್ ಸುಮ್ಮನೇ ಇದ್ದ.. ಏನನ್ನೂ ಹೇಳ್ತಾನೇ.. ಇಲ್ಲ... !


"ಸ್ವಾಮಿ ರೂಮ್ ಎಲ್ಲಿದೆ  ?"


ದಿಗ್ವಾಸ ಎಚ್ಚರಿಸಿದ...


" ಲೆ  .. ಲೇ..... 
ಎಲ್ಲಿ ಹೋದ್ಯೋ... 
ಹರಕ್ ಚಡ್ಡಿ...   ಬಾರಲೇ.. ಇಲ್ಲಿ..."

ಒಬ್ಬ ಹುಡುಗ ಓಡೋಡಿ...  ಬಂದ..


ಅವನ ಚಡ್ಡಿ ಸರಿ ಇತ್ತು..


"ಇವರಿಗೆ .... 

ಅಲ್ಲಿ  ಲಾಸ್ಟ್ ರೂಮ್ ತೋರಿಸೊ....."

ಹರಕು ಚಡ್ಡಿ ಮುಂದೆ ಸಾಗಿದ.. 

ನಾವು ಹಿಂಬಾಲಿಸಿದೆವು...

ಸ್ವಲ್ಪ ದೂರ ಹೋದ ಮೇಲೆ ... 

ಹರಕು ಚಡ್ಡಿ ತಿರುಗಿ ನಿಂತು .... 
ಒಂಥರಾ ಮಾಡಿ ನನ್ನನ್ನೇ ನೋಡತೊಡಗಿದ.. .

ಕಣ್ಣಲ್ಲಿ ಏನೋ ಅನುಮಾನ.... !


ನನಗೆ ಕಸಿವಿಸಿ ಆಯ್ತು...


" ನಿಮಗೆ "ಗುರಿ" ಇದೆಯಾ...?..." 


ಹರಕು ಚಡ್ಡಿ ಗುಂಡು ಹೊಡೆದ ಹಾಗೆ ಪ್ರಶ್ನೆ ಕೇಳಿದ...


ನನಗೆ ಆಶ್ಚರ್ಯ.. !


"ಯಾಕೋ...? .."


"ನಿಮ್ಮನ್ನು ನೋಡಿದ್ರೆ  ... 

"ಗುರಿ"  ಇದ್ದವರ ಹಾಗೆ ಕಾಣಿಸೋದಿಲ್ಲ..." 

"ಏನು ಗುರಿ ಮಾರಾಯಾ ?


ಹೊಟೆಲ್ಲಿನಲ್ಲಿ ಉಳಿಯಲಿಕ್ಕೆ ಯಾವ ಗುರಿ ಬೇಕು ..?"

"ಅಲ್ಲಾ... 

ಬೇಜಾರು ಮಾಡ್ಕೋ ಬೇಡೀ... 
ಮೊದಲೇ ಹೇಳಿಬಿಡ್ತೇನೆ... 
ಗುರಿ ಇದ್ದರೆ ಮಾತ್ರ ಆ ರೂಮಿನಲ್ಲಿರಿ...

ಇಲ್ಲಾ  ಅಂದ್ರೆ ಬೇರೆ ರೂಮ್ ಮಾಡಿ.. !!... "


ದಿಗ್ವಾಸ ತಲೆ ಕೆರೆದು ಕೊಂಡ..!


ಹರಕು ಚಡ್ಡಿ...

ರೂಮಿನ ಬಾಗಿಲು ತೆಗೆದು ... 
ನನ್ನನ್ನು ಟಾಯ್ಲೆಟ್ಟಿನ ಬಳಿ ಕರೆದುಕೊಂಡು ಹೋದ...

ಟಾಯ್ಲೆಟ್ಟಿನ ಬಾಗಿಲಿಗೆ ಭುಜ ಕೊಟ್ಟು ... 

ಕೈ ಹಾಕಿ  ... 
ಬಾಗಿಲನ್ನು ಕಷ್ಟಪಟ್ಟು ಮೇಲೆ ಎತ್ತಿದ..
ಪಕ್ಕಕ್ಕೆ  ಸರಿಸಿದ ... 

ಸೀತಾ ಕಲ್ಯಾಣದಲ್ಲಿ  ಶ್ರೀರಾಮಚಂದ್ರ ಶಿವಧನಸ್ಸು ಎತ್ತಿದ ಹಾಗೆ... 


"ಈ ಬಾಗಿಲು ... 

ಸ್ವಲ್ಪ ಹೀಗೆ ಇದೇರ್ರೀ... !

ಪೇಟೆ ಹೆಣ್ಣು ಮಕ್ಕಳ ಬ್ಲೌಸ್ ಇದ್ದ ಹಾಗೆ... 


ಕೆಳಗೆ ಬಿದ್ದು ಹೋಗಿರ್ತದೆ... 

ಆಗಾಗ ಮೇಲೆ ಎತ್ತುತ್ತಾ ಇರಬೇಕು.. "


"ಇಲ್ಲಿ ನೋಡ್ರಿ... 

ಇದು ನಮ್ ಹೊಟೆಲ್ ಸಂಡಾಸು...."

ಅದು ತುಂಬಾ ಹಳೆಯ ಕಾಲದ ಭಾರತೀಯ ಮಾದರಿ ಪ್ಯಾನ್....

ನೆಲಕ್ಕೆ ಕುಳಿತು .. 
ಉಪಯೋಗಿಸುವಂಥಾದ್ದು... 

ಬಹಳ ಸಣ್ಣದಿತ್ತು...


ಉದ್ದ.. 

ಅಗಲ.. 
ಎತ್ತರ.. ಎಲ್ಲ ರೀತಿಯ ಅಳತೆಗಳಲ್ಲೂ ಚಿಕ್ಕದಾಗಿತ್ತು... 

"ವಿಷಯ ಏನು ಗೊತ್ತುಂಟಾ ?


ದೊಡ್ಡ ... 

ದೊಡ್ಡ ಸಕ್ರೆ ಮೂಟೆಯಂಥಹ ..
ಹೊಟ್ಟೆಯವರು ಬಂದು ಬಿಡ್ತಾರೆ....

ದೇವರಾಣೆ ಮಾಡಿ ಹೇಳ್ತೇನೆ.. !


ಅವರಿಗೆ ಗುರಿ ಇರೋದಿಲ್ಲ....

ಮಾಡುವದನ್ನು 

ಸರಿಯಾದ ಜಾಗದಲ್ಲಿ ಮಾಡುವದಿಲ್ಲ....!

ಏನೇನು ತಿಂದಿರ್ತಾರೋ... !


ಯಾರ್ಯಾರದ್ದೋ ... ಹೊಲಸುಗಳು... !


ಮರುದಿನ ... 

ನಾನು ಕ್ಲೀನ್ ಮಾಡಿ ತೊಳೆಯ ಬೇಕು...

ನನ್ನ ಹಣೆ ಬರಹ ನೋಡಿ ಮಾರಾಯ್ರೆ... ! "


ನನಗೆ ಗಾಭರಿ ಆಯ್ತು..!


ಹೊಟ್ಟೆ ನೋಡಿಕೊಂಡೆ..!


"ನಿಮ್ಮದು ... 

ಇನ್ನೂ ಸಕ್ರೆ ಮೂಟೆ  ಆಗಿಲ್ಲ ಬಿಡಿ...

ಯಾವುದಕ್ಕೂ  ಗುರಿ ಇದೆಯಾ ಅಂತ ... 

ಒಂದುಸಾರಿ... 
ಕೂತ್ಕೊಂಡು ನೋಡ್ಕೋ  ಬಿಡಿ... !...

ಬಾಗಿಲು ಹಾಕ್ಕೋತಿರಾ ?..  "

ಯಾರೋ ಕಿಸಕ್ಕನೆ ನಕ್ಕಾಂತಾಯಿತು...


ಹಿಂದೆ ತಿರುಗಿ  ನೋಡಿದೆ.. !


ದಿಗ್ವಾಸ ಬಿದ್ದೂ.. ಬಿದ್ದೂ ನಗುತ್ತಿದ್ದ...


Friday, May 3, 2013

ಎಲ್ಲ ಕಾಲದಲ್ಲೂ.. ಯುಗ ಯುಗಳಲ್ಲೂ .. ಸಲ್ಲುವವರು.. !!


ದ್ವಾಪರಯುಗ ಮುಗಿಯಿತು..
ಜಗತ್ ಪ್ರಳಯವಾಯಿತು....

ಇನ್ನು ಹೊಸದಾಗಿ ಸೃಷ್ಟಿ ಆಗಬೇಕಿತ್ತು...

ಇತ್ತ ನರಕದಲ್ಲಿ ...
ಯಮಧರ್ಮರಾಜನಿಗೆ ಬಹಳ ದೊಡ್ಡ ಸಮಸ್ಯೆ ಎದುರಾಯಿತು...

ಎಲ್ಲ ಯುಗದ ಕೆಟ್ಟ ರಾಕ್ಷಸರು ... 
ಸಿಕ್ಕಾಪಟ್ಟೆ ತೊಂದರೆ ಕೊಡತೊಡಗಿದರು...!
ರಾಕ್ಷಸರ ಉಪಟಳ ಯಮನಿಗೆ ಸಹಿಸುವದು ಕಷ್ಟವಾಗತೊಡಗಿತು....

ಯಮ ಬ್ರಹ್ಮನ ಬಳಿ ಹೋಗಿ ತನ್ನ ತೊಂದರೆ ಹೇಳಿಕೊಂಡ...

"ರಾಕ್ಷಸರೇ . ಹಾಗೆ...
ಅವರು  ಎಲ್ಲಿಯೇ  ಇದ್ದರೂ ತೊಂದರೆ ಕೊಡುತ್ತಾರೆ.. ..

ರಾಕ್ಷಸರ  ಸೃಷ್ಟಿಯೇ ಹಾಗಿದೆ...!

ಕಲಿಯುಗ ಶುರುವಾಗುತ್ತಿದೆಯಲ್ಲ.. 
ಅವರನ್ನು ಅಲ್ಲಿಗೆ ಕಳುಹಿಸಿಬಿಡು...
ಅಲ್ಲಿಯವರೆಗೆ ಸ್ವಲ್ಪ ತಾಳ್ಮೆಯಿಂದ ಇರು..."

ಯಮ ತನ್ನ ಲೋಕಕ್ಕೆ ಬಂದ..

ಇಲ್ಲಿ ... 
ರಾಕ್ಷಸರ ಕಾಟ ತಡೆಯಲಾಗದೆ ಯಮಕಿಂಕರುಗಳು .. 
"ನಾವು ಕೆಲಸಬಿಟ್ಟು ಬಿಡುತ್ತೇವೆ" ಅಂತ ಅಳಲು ತೋಡಿಕೊಂಡರು..

ಯಮನಿಗೆ ಕೋಪ ಬಂತು..

"ದುರುಳ ರಾಕ್ಷಸರೇ...
ಯಮಲೋಕದ ಶಿಕ್ಷೆ ಮುಗಿಸಿ ನಿಮಗೆ ಸ್ವರ್ಗಕ್ಕೆ ಕಳುಹಿಸಬೇಕಾಗಿತ್ತು..
ನಿಮ್ಮ ಉಪಟಳ ಜಾಸ್ತಿಯಾಗಿ ಹೋಯ್ತು...!

ನೀವೆಲ್ಲ ಇನ್ನೊಂದು ಜನ್ಮ ತಳೆದು ಭೂಲೋಕಕ್ಕೆ ಹೋಗಿ ಬನ್ನಿ....!! 

ಸ್ವರ್ಗಕ್ಕಾಗಿ ನೀವು ಇನ್ನೊಂದು ಯುಗ ಕಾಯಬೇಕು.. "

ಅಂತ ಕಣ್ಣು ಕೆಂಪಗೆ ಮಾಡಿ ಶಾಪ ಕೊಟ್ಟು ಬಿಟ್ಟನು...!

ರಾಕ್ಷಸರೆಲ್ಲ ಯಮನ ಕಾಲಿಗೆ ಬಿದ್ದರು..
ಅತ್ತು..ಕರೆದು ಗೋಳಾಡಿದರು...

" ಅಯ್ಯಾ..ಯಮ ದೇವರೆ...
ಇಷ್ಟು ದಿನ ನರಕದ ಘನಘೋರ ಶಿಕ್ಷೆಗಳನ್ನು ಅನುಭವಿಸಿದ್ದೇವೆ...

ಇದಕ್ಕೆ ರಿಯಾಯತಿ ಇಲ್ಲವೆ ?..
ನಮ್ಮ ಮೇಲೆ ಸ್ವಲ್ಪ ಕರುಣೇ ತೋರಿಸು...

ಯುಗ..
ಯುಗಗಳಲ್ಲಿ ನಮಗೆ ಯಾವಾಗಲೂ ಅನ್ಯಾಯವಾಗಿದೆ..!.. ."

"ಅದು ಹೇಗೆ ?"

"ನಮ್ಮನ್ನು .. 
ದೊಡ್ಡ ಹೊಟ್ಟೆ..ದೊಡ್ಡ ಕಣ್ಣು.. ಬಾಯಿ..!
ಕೆಟ್ಟದಾದ ಕೋರೆ ಹಲ್ಲು...!

ನಮ್ಮನ್ನು ಅತ್ಯಂತ ಕ್ರೂರವಾಗಿ... 
ಭಯಂಕರವಾಗಿ ಹುಟ್ಟಿಸಿ... ನಮಗೆ ಅನ್ಯಾಯವಾಗಿದೆ..."

ಯಮನಿಗೂ ರಾಕ್ಷಸರ ಮಾತು ಹೌದೆನಿಸಿತು...

"ಇದಕ್ಕೆ ಏನು ಮಾಡೋಣ.. ?
ನಾನು ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಳ್ಳಲಾಗುವದಿಲ್ಲ..."

ರಾಕ್ಷಸರು..
ಮತ್ತೆ ಯಮನ ಕಾಲಿಗೆ ಬಿದ್ದು ಹೊರಳಾಡಿದರು...

"ಯಮರಾಜ...
ಭೂಲೋಕಕ್ಕೆ ಹೋಗಲು ನಮ್ಮ ಅಭ್ಯಂತರವೇನಿಲ್ಲ...

ಆದರೆ ನಮಗೆ ಸ್ವಲ್ಪ .. 
ಅಂದ.. ಚಂದದ ರೂಪವನ್ನು ಕೊಡು.

ಭೂಲೋಕದ  ಜನರ ಪ್ರೀತಿಯನ್ನೂ ಅನುಗ್ರಹಿಸು..."

ಯಮ .. 
ಬಹಳಷ್ಟು ವಿಚಾರ ಮಾಡಿ .. 
ಅತ್ಯಂತ ಪ್ರಸನ್ನ ವದನದಿಂದ ಹೇಳಿದ..

" ತಥಾಸ್ತು....ರಾಕ್ಷಸರೇ...
ನೀವು... 
ಎಲ್ಲ ಕಾಲ... ಯುಗ.. ಯುಗಗಳಲ್ಲಿಯೂ ಸಲ್ಲುವವರು..... !

ಭೂಲೋಕದಲ್ಲಿ..
ಭರತ ಖಂಡವನ್ನು ನಿಮಗಾಗಿ ಸೃಷ್ಟಿಸಲಾಗಿದೆ...

ಅಲ್ಲಿ ಪ್ರಜಾ ಪ್ರಭುತ್ವವೆಂಬ ರಾಜ್ಯಾಡಳಿತ ಪದ್ಧತಿಯನ್ನು ಅನುಸರಿಸಲಾಗುತ್ತದೆ...

ಅಲ್ಲಿ..
ನೀವು " ಕೆಟ್ಟ ರಾಜಕಾರಣಿಗಳಾಗಿ " ಹುಟ್ಟಿರಿ...!

ಇದುವರೆಗೆ .. 
ಯಾವ ಜನ್ಮದಲ್ಲೂ ಮಾಡಲಾಗದ
ಅತ್ಯಾಚಾರ.. ಅನಾಚಾರಗಳನ್ನು ಮಾಡಿರಿ... !

ಮಾನ..
ಮರ್ಯಾದೆ ಎಲ್ಲವನ್ನೂ ಬಿಟ್ಟು..ದೇಶ... 
ರಾಜ್ಯಗಳನ್ನೂ ಲೂಟಿ ಹೊಡೆಯಿರಿ.. "

ರಾಕ್ಷಸರಿಗೆ ಪರಮಾನಂದವಾಯಿತು..

"ಯಾಮದೇವಾ..
ಅಲ್ಲಿನ ಜನಸಾಮನ್ಯರು ಏನನ್ನೂ ಮಾಡುವದಿಲ್ಲವೆ ?...

ಅಲ್ಲಿನ ಕಾನೂನು... ಆಡಳಿತ..
ಶಿಕ್ಷೆಗಳು ನಮಗೆ ತೊಂದರೆ ಕೊಡುವದಿಲ್ಲವೆ ? "... 

"ಖಂಡಿತ ಇಲ್ಲ.. !
ಅಲ್ಲಿನ ಅಧಿಕಾರ.. ಆಡಳಿತ..
ಕಾನೂನು ನಿಮ್ಮ ಕೈಯಲ್ಲೇ ಇರುತ್ತವೆ...

ಜನ ಸಾಮಾನ್ಯರಿಗೆ ಬಲು ಬೇಗ ಮರೆತು ಹೋಗುವ ಗುಣ ಸ್ವಭಾವವನ್ನು ದಯಾಪಾಲಿಸಿರುವೆ..
ಅಲ್ಲಿ ಯಾರೂ ಸಹ ನಿಮ್ಮನ್ನು ಏನನ್ನೂ ಮಾಡಲಾಗುವದಿಲ್ಲ...

ನಿಮ್ಮ ಹಿಂದೆ "ಎಷ್ಟೇ.. ಬಯ್ದು..
ಕ್ಯಾಕರಿಸಿ ಉಗುಳಿ..
ಲದ್ದಿ..
ಸಗಣಿಗಳಿಂದ ನಿಮ್ಮ ಭಾವಚಿತ್ರಕ್ಕೆ ಅವಮಾನ ಮಾಡಿದರೂ...

ನೀವು ಎದುರಿಗೆ ಬಂದಾಗ .. 
ನಿಮಗೆ ಬಹಳ ಮಾರ್ಯೆದೆಯಿಂದ ಗೌರವಿಸುವರು... !!

ನೀವು ಅಲ್ಲಿನ ಪ್ರಜೆಗಳಿಗೆ ಅನಿವಾರ್ಯ ಶಾಪ... 

ನೀವು ಪಕ್ಷಬೇಧವಿಲ್ಲದೇ.. ಜನಿಸಿ...
ದೇಶದ..
ನಾಡಿನ ಮರ್ಯಾದೆಯನ್ನು ಮೂರುಕಾಸಿಗೆ ಮಾರಾಟ ಮಾಡಿರಿ...!

ನೀವೂ..
ಕೆಟ್ಟು .. ಕೊಳೆತು... ಕೆರವಾಗಿ..
ಅಲ್ಲಿನ ಜನರನ್ನೂ ಬ್ರಷ್ಟರನ್ನಾಗಿ ಮಾಡಿರಿ...!! "

ರಾಕ್ಷಸರೆಲ್ಲ ... 
ಅತ್ಯಂತ ಸಂತೋಷದಿಂದ ಕುಣಿದಾಡಿದರು...!
ನಲಿದು ನರ್ತಿಸಿದರು...!

............... ................. .............. ............

ಆತ್ಮೀಯ.... 
ಭರತ ಖಂಡದ.. 
ಕರ್ನಾಟಕದ ಜನಸಾಮಾನ್ಯರೆ...

ಚುನಾವಣೆ ಹತ್ತಿರ ಬರುತ್ತಾ ಇದೆ...

ಭಸ್ಮಾಸುರ...
ರಕ್ತ ಬೀಜಾಸುರ.. !
ಅಹಿರಾವಣ.. ಮಹಿರಾವಣ.. !

ಬಕಾಸುರ...ನರಕಾಸುರ.. !!

ಎಲ್ಲರೂ ನಮ್ಮ ಎದುರಿಗೆ ಬರುತ್ತಾ ಇದ್ದಾರೆ...!

ಅವರನ್ನು .. 
ಅತ್ಯಂತ ಪ್ರೀತಿಯಿಂದ ಗುರುತಿಸಿ..

ತಮ್ಮ ಅಮೂಲ್ಯವಾದ ಮತವನ್ನು .. 
ಒಳ್ಳೆಯವರಿಗೆ ಚಲಾಯಿಸಿ....


(ಎಲ್ಲ ರಾಜಕಾರಣಿಗಳು  ಕೆಟ್ಟವರಲ್ಲ...
ಒಳ್ಳೆಯ ರಾಜಕೀಯದವರ  ಬಗೆಗೆ ಗೌರವದ ಸಲಾಮ್....)